ಬೆಂಬಲಿಗರು

ಶುಕ್ರವಾರ, ಮಾರ್ಚ್ 27, 2015

ವಾಸನೆ ಮತ್ತು ನೆನಪಿನ ಸರಮಾಲೆ


           




ನಮ್ಮ ಘ್ರಾಣ ಶಕ್ತಿ ಶ್ವಾನ  ಗಳಿಗಿಂತ  ಕಮ್ಮಿ ಇದ್ದರೂ  ಸಹ ಕೆಲವೊಮ್ಮೆ  ಕೆಲವು 

ವಾಸನೆಗಳು ನೆನಪಿನ ಸರಮಾಲೆ ಯನ್ನು ಉಂಟು ಮಾಡುತ್ತವೆ .ನಮ್ಮ 

ಮೂಗಿನಿಂದ ವಾಸನೆಯ ನರಗಳು ಪರಿಮಳವನ್ನು  ಮೆದುಳಿಗೆ ರವಾನಿಸಿ ಅಲ್ಲಿ  

ಕಂಪ್ಯೂಟರ್ ಮೆಮೊರಿ ಯ ಹಾಗೆ ದಾಸ್ತಾನು ಇಡಲಾಗುವುದು .ನೀವು ಕೆಲವೊಮ್ಮೆ 

ಒಂದು ವಿಷಯವನ್ನು ಗೂಗಲ್ ನಲ್ಲಿ  ಸರ್ಚ್ ಗೆ  ಹಾಕುವಾಗ ಅದಕ್ಕೆ ಹೊಂದಿ 

ಕೊಂಡಿರುವ ಎಲ್ಲಾ ವಿಷಯಗಳು ಪುಂಖಾನುಪುಂಖವಾಗಿ ಬರುವಂತೆ ಯಾವುದೇ 

ವಾಸನೆ ಬಂದೊಡನೆ  ಅದರ ಹಿಂದಿನ ವಾತಾವರಣ ,ಕತೆ ಜ್ಞಾಪಕಕ್ಕೆ ಬರುತ್ತದೆ .

ಉದಾಹರಣೆಗೆ  ಬೇಸಿಗೆಯಲ್ಲಿ ಬೆವರು ,ಪಟ್ಟು ಸೀರೆ ,ಪೌಡರ್ ಗಳ ಮಿಶ್ರಣ  

ವಾಸನೆ ನಮಗೆ ನಮ್ಮ ಅಥವಾ ಹಿಂದಿನ ಅನೇಕ ಮದುವೆ ಸಮಾರಂಭಗಳ 

ನೆನಪು ಬರುವುದು .ಅದೇ ರೀತಿ ಬೇಸಿಗೆಯಲ್ಲಿ ಬೆಳಗಾತ ಅಡಿಗೆ ಮನೆಯಿಂದ 

ಬಾಳೆ ಎಲೆ ,ಹಲಸಿನ ಹಣ್ಣು ,ಬೆಲ್ಲ ಮತ್ತು ಹಬೆಯ ಮಿಶ್ರಣ ಕಡುಬಿನ ಜ್ಞಾಪಕ 

ದೊಡನೆ ನಾವು ಜೀವ ಮಾನ ದಲ್ಲಿ ತಿಂದ ಹಲಸಿನ ಹಣ್ಣುಗಳು ,ನಮ್ಮ ಅಜ್ಜ 

ಅಜ್ಜಿಯರು ಇನ್ನೇನೋ ನೆನಪಿಗೆ ಬರುತ್ತವೆ .

                 

ಹಳ್ಳಿಯಲ್ಲಿ ನಡೆಯುವಾಗ  ಬಿದ್ದ  ಕಾಟು ಮಾವಿನ ಹಣ್ಣಿನ ಪರಿಮಳ ಹೊತ್ತ ಗಾಳಿ 

ಕೊಯಿಲಿಗೆ ಸಿದ್ದವಾದ ಪೈರು ,ಹೋಟೆಲ್ ನಿಂದ ಬರುವ ನೀರುಳ್ಳಿ ಬಜ್ಜಿ ಇನ್ನು 

ಹಲವು ಟ್ರೇಡ್ ಮಾರ್ಕ್ ಪರಿಮಳಗಳು ಈ  ವಸ್ತುಗಳಲ್ಲದೆ ಅದಕ್ಕೆ ಜೋಡಣೆಯಾದ 

ಹಲವು  ಸಂಗತಿಗಳು ಜ್ಞಾಪಕಕ್ಕೆ ಬರುತ್ತವೆ .

            



ನಮ್ಮ ಹಳ್ಳಿಗಳ  ಜೀನಸು ಅಂಗಡಿಗಳನ್ನು ನೆನೆಸಿದರೆ  ಧಾನ್ಯ,ಸೆಣಬಿನ ಗೋಣಿ 

ಚೀಲ ,ಸೀಮೆ ಎಣ್ಣೆ ,ತಂಬಾಕು ,ಕಾಫಿ ಮತ್ತು ಚಹಾ ಹುಡಿ ಇವೆಲ್ಲವುಗಳ  ಮಿಶ್ರಣ 

ವಾಸನೆ  ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತದೆ .ಅಂಗಡಿಯಲ್ಲಿ  ಮನೆಯ 

ಹೆಸರು ಹೇಳಿ ಸಾಲಕ್ಕೆ ಸಾಮಗ್ರಿ ಖರೀದಿಸಿದ್ದು ,ಹಳ್ಳಿಯ ಜನರು ನಾಲ್ಕಾಣೆ ಬೆಲ್ಲ 

ಎಂಟಾಣೆ ಸಕ್ಕರೆ ,ಚಾ ಪುಡಿ ಹೀಗೆ  ಮಾಡುತಿದ್ದ  ಅತೀ ಚಿಲ್ಲರೆ ವ್ಯಾಪಾರ .ಅಂಗಡಿ 

ಯವನ ತಾಳ್ಮೆ ಎಲ್ಲ ಕಣ್ಣು ಮುಂದೆ ಬರುತ್ತವೆ .ದೀಪಾವಳಿಗೆ  ಅಂಗಡಿ ಪೂಜೆಗೆ 

ಹೊಸ ಲೆಕ್ಕ ಪ್ರಾರಂಭ ಎಂಬ ಆಹ್ವಾನ ಪತ್ರಿಕೆ ಬರುವುದು .ಅಂಗಡಿಯಲ್ಲಿ  ಉಪ್ಪು 

ಮಾತ್ರ  ಅಸ್ಪೃಶ್ಯ .ಅದಕ್ಕೆ ಹೊರಗೇ ಜಾಗ .ಕೆಲವೊಮ್ಮೆ ಶ್ವಾನ ಸಂಕುಲ 

ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದೂ ಇರ ಬಹುದು .ಅಂಗಡಿ ಯವರಿಗೂ 

ಗ್ರಾಹಕರಿಗೂ  ಭಾವನಾತ್ಮಕ  ಭಾಂಧವ್ಯ ಇತ್ತು .ನಾವು ಮಕ್ಕಳು  ಅಂಗಡಿಗೆ 

ಹೋದರೆ  ಸಣ್ಣ  ನಿಂಬೆ  ಮಿಟಾಯಿ ಕೊಟ್ಟು  ಯೋಗ ಕ್ಷೇಮ ವಿಚಾರ ಮಾಡುತ್ತಿದ್ದರು .
ಈಗ  ಮಾಲ್ ಸೂಪರ್ ಮಾರ್ಕೆಟ್ ಗಳು ಬಂದ ಮೇಲೆ ಇಂತಹ  ಸಂಬಂಧ ಗಳು 

 ಅವುಗಳ  ನೆನಪುಗಳು ಇನ್ನೆಲ್ಲಿ ?


ಸಾಹಿತ್ಯದಲ್ಲಿ  ಮಣ್ಣಿನ ವಾಸನೆ ಎಂಬ ಪದ ಇದೆ .ಮೊದಲ ಮಳೆಗೆ ಬಿದ್ದ   ನೀರು 

ಮಣ್ಣಿನೊಡನೆ ಸೇರಿ ಹಿತವಾದ ಕಂಪು ಉಂಟು ಮಾಡುತ್ತದೆ .ಅದರೊಡನೆ  

ಮೊದಲ ಮಳೆಯ ಸಮಯದಲ್ಲಿ ನಡೆದ  ಸನ್ನಿವೇಶಗಳೂ ಸಿನೆಮಾ ಪರದೆಯಲ್ಲಿ 

ಮೂಡಿದಂತೆ ಕಣ್ಮುಂದೆ ಬರುತ್ತವೆ .

ಕುವೆಂಪು ತಮ್ಮ ಕಾದಂಬರಿ ಒಂದರಲ್ಲಿ  ಮಲೆನಾಡಿನ ಮನೆಯ ಹಿತ್ತಿಲ  ಭಾಗದಲ್ಲಿ 

ಕೋಳಿ ಹಿಕ್ಕೆ , ಮನುಷ್ಯರ ಮೂತ್ರ ಮತ್ತು ಮಳೆ ನೀರಿನ ಮಿಶ್ರಿತ  ವಾಸನೆ ಬಗ್ಗೆ 

ಬರೆದಿದಿದ್ದಾರೆ .ಇದೇ ತರಹ  ಕೂವಂ ನದಿಯ ದುರ್ವಾಸನೆ ಮೂಗಿಗೆ ಬಿದ್ದ 

ಕೂಡಲೇ  ಚೆನ್ನೈ ನಲ್ಲಿ ಕಳೆದ ದಿನಗಳು ,ಜಯಲಲಿತಾ ,ರಜನಿಕಾಂತ್  ,ಮಾರ್ಗಳಿ

ಕಛೇರಿಗಳು ಎಲ್ಲಾ ಜ್ಞಾಪಕಕ್ಕೆ ಬರುತ್ತವೆ .ಫಿನಾಯಿಲ್ ,ಮೂತ್ರ  ಮತ್ತು  ಚಹಾ ದ 

ಮಿಶ್ರಣ  ರೈಲ್ವೆ ಪ್ರಯಾಣ ನೆನಪುಗಳನ್ನು  ಪುನಃ ತರುವುದು .                             
  
 ಮೂಗಿನಿಂದ ನೀರು ಸುರಿಸುತ್ತ ಸಿಗರೇಟ್  ಬೀಡಿ ಮತ್ತು ಬೆವರು  ಮಿಶ್ರಿತ  

ವಾಸನೆ ನಮಗೆ   ಸಿನೆಮಾ ಥಿಯೇಟರ್ ,ಚಲನ ಚಿತ್ರಗಳನ್ನು ನೆನಪಿಗೆ 

ಜಾರಿಸುವುದು .

ನಮ್ಮ ಮೆದುಳಿನ ವಾಸನಾ ಘ್ರಾಹಕ ಕೇಂದ್ರದಲ್ಲಿ  ಕಾಯಿಲೆ ಇದ್ದರೆ  ಇಲ್ಲದ ವಾಸನೆ 

ಬೇಡದ  ವೇಳೆ ಬರ ಬಹುದು .ಅದು ಒಂದು ತರಹದ ಅಪಸ್ಮಾರ . ಇನ್ನು 

ಕೆಲವೊಮ್ಮೆ ಮೆದುಳಿನ ಗಡ್ಡೆಗಳು   ಮೂಗಿನಿಂದ ಮೆದುಳಿನ ಕೇಂದ್ರಕ್ಕೆ ಹೋಗುವ 

ಘ್ರಾಣ ತಂತುಗಳ ಮೇಲೆ  ಒತ್ತಡ ಹೇರಿದಾಗ ವಾಸನಾ ಶಕ್ತಿ  ಕಳೆದು ಹೋಗ 

ಬಹುದು .
(ಚಿತ್ರಗಳ ಮೂಲಗಳಿಗೆ ಅಭಾರಿ )



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ