ಬೆಂಬಲಿಗರು

ಮಂಗಳವಾರ, ಫೆಬ್ರವರಿ 28, 2023

ಮೆಚ್ಚಿದ ಒಂದು ಪುಸ್ತಕ

 


ಹೋದ ವಾರ ಎರಡು ಪುಸ್ತಕ ಗಳನ್ನು  ಒಂದೇ ಉಸಿರಿಗೆ ಎಂಬಂತೆ ಓದಿ ಮುಗಿಸಿದೆ .  ಹಿರಿಯಯರಾದ ಶ್ರೀ ಪ್ರಮೋದ್ ಕುಮಾರ್ ರೈ  ಅವರು ಕೊಟ್ಟ ನಿವೃತ್ತ ಐಎಎಸ್ ಅಧಿಕಾರಿ ವಿ ಬಾಲಸುಬ್ರಹ್ಮಣ್ಯಂ ಅವರ ವೃತ್ತಿ ಜೀವನ ಕತೆ "ಫಾಲ್ ಫ್ರಮ್  ಗ್ರೇಸ್ '  ಮತ್ತು ಸಹೋದರಿ ಶೋಭಿತಾ ಸತೀಷ್ ಪ್ರೀತಿಯಿಂದ ನೀಡಿದ ಅವರ ತಂದೆ ಶ್ರೀ ಮುರಳೀಧರ ಕಾಸರ ಗೋಡು ಅವರ  ಆತ್ಮ ಚರಿತ್ರೆ ಎನ್ನ ಬಹುದಾದ ಕೃತಿ "ಸ್ವಯಂ ಗತಂ ". 

ಸ್ವಯಂ ಗತಂ ಬಗ್ಗೆ  ನನ್ನ ಮೆಚ್ಚುಗೆ ನಿಮ್ಮಲ್ಲಿ ಹಂಚಿಕೊಳ್ಳ ಬಯಸುತ್ತೇನೆ . ಇದು ಲೇಖಕರ ಆತ್ಮ ಚರಿತ್ರೆ ಆದರೂ ಬಾಲ್ಯದ ನೆನಪುಗಳೇ ಸಿಂಹ ಪಾಲು ಪಡೆದಿವೆ . ಕಾಸರಗೋಡು (ಲೇಖಕರ ಭಾಷೆಯಲ್ಲಿ ಕಾಸ್ರೋಡು ),ಪೆರಡಾಲ ,ಬದಿಯಡ್ಕ ಮತ್ತು ಪೆರ್ಲ ಸುತ್ತಮುತ್ತಲಿನ ಅಂದಿನ ಚಿತ್ರಣ ಮುದನೀಡುವುದಲ್ಲದೆ ,ಅಪ್ಯಾಯ ಮಾನವಾಗಿ ಇವೆ . ಈ ಪರಿಸರದೊಡನೆ ನನ್ನ ಬಾಲ್ಯದ ನೆಂಟೂ  ಇರುವದು ಇದಕ್ಕೆ ಕಾರಣ ಇರ ಬಹುದು .  ನವಿರು ಹಾಸ್ಯ ,ಆಪ್ತವಾದ ಪ್ರಸ್ತುತಿ . 

ಆರಂಭವಾಗುವದು ಮಾವನವರೊಂದಿಗೆ(ಇವರೇ ನಡೆಸುತ್ತಿದ್ದ )  ಕೃಷ್ಣಾ ಟಾಕೀಸ್ ಗೆ ಹೋಗುತ್ತಿದ್ದ ನೆಪುಗಳ ಒಂದಿಗೆ . ಇವರ ಮಾವ  ಶ್ಯಾನುಭೋಗ ರು . ' ಟಾಕೀಸ್ ನಲ್ಲಿಯೂ ಸೇನೇರೆ ಮರ್ಮಾಯೆ ಎಂದು ಸ್ವಲ್ಪ ಹೆಚ್ಚಿನ ಮರ್ಯಾದೆ ಕೊಡುತ್ತಿದ್ದುದರಿಂದ ಟಾಕೀಸ್ ನನ್ನದೇ ಎನ್ನುವಷ್ಟು ಗಮೆ ತಲೆಗೆ ಅಡರಿತ್ತು ."

'ರೀಲು ಮುಗಿದು ಸ್ಫೂಲನ್ನು  ಬದಲಾಯಿಸುವ ವೇಳೆ 'ಚಿತ್ರ ಮಂದಿರದ ಒಳಗೆ ಧೂಮ ಪಾನ ನಿಷೇಧಿಸಲಾಗಿದೆ' ಎನ್ನುವ  ಒಕ್ಕಣೆಯಿದ್ದು ಉರಿಯುವ ಸಿಗರೇಟಿನ ಮೇಲೆ ಗುಣಿಸು ಚಿಹ್ನೆಯ ಸ್ಲೈಡ್ ಹಾಕುತ್ತಿದ್ದರು .ಈ ಸ್ಲೈಡ್ ಪರದೆಯ ಮೇಲೆ ಮೂಡಿದೊಡನೆ ಹೆಚ್ಚಿನ ಧೂಮ ಪಾನಿಗಳು ನೆನಪಿಸಿದುದಕ್ಕೆ ಧನ್ಯವಾದ ಎನ್ನುವಂತೆ ಕಿಸೆಗೆ ಕೈ ಹಾಕಿ ಪ್ರಕಾಶ ಬೀಡಿಯೋ ,ಬರ್ಕಲೀ  ಸಿಗರೇಟೋ  ಹೊರ ತೆಗೆದು ಸೇದಲು ಆರಂಭಿಸುತ್ತಿದ್ದರು .'

ಸಣ್ಣ ಹುಡುಗನಾಗಿ ತಮ್ಮ ವೆಂಕಟೇಶ  ಮದುವೆ ಹೋದ ನೆನಪುಗಳ ವರ್ಣನೆ ಓದಿದಾಗ ನಮ್ಮ ತಲೆಮಾರಿನ ಮದುವೆಯ ಚಿತ್ರಣ ಕಣ್ಣ ಮುಂದೆ ಬಂದು ನಿಲ್ಲುತ್ತವೆ . ಸಾಕ್ಷಾತ್ ವಿಡಿಯೋ ದ  ವೀಕ್ಷಕ ವಿವರಣೆಯಂತೆ ಇದೆ . ಉದಾ ವಾಲಗದ ವರ್ಣನೆ ಹೀಗಿದೆ . 

'ಹಿರಿಯರು ಯಾರೋ 'ವಾಲಗ ವಾಲಗ 'ಎಂದ ಕೂಡಲೇ ,ಯಾವಾಗ ಉದಲು  ಹೇಳುತ್ತಾರೋ ಎನ್ನುವಂತೆ ಕಾದಿದ್ದ ವಾಲಗದ ವ  ಪೆ ..   ಪ್ಪೇ..  ಪ್ಪೇ ಎಂದು ಪೀಠಿಕೆ ಹಾಕಿದಂತೆ ಊದಿ ,ನಿದ್ದೆ ಕೂರುತ್ತಾ ಕುಳಿತಿದ್ದ ಸಹಚರರಾದ 'ಡಗ್ಗ ಡಕ್ಕೆ 'ಕೊಟ್ಟುವವನಿಗೂ ,ಶ್ರುತಿ ಊದುವವನಿಗೂ ,ಚೈಮ್ ಚಕ್ಕ ಚೈಮ್ ಎನ್ನುತ್ತಾ ತಾಳ ಹಾಕುವವನಿಗೂ ಕಣ್ಣಿನಲ್ಲೇ ಸುರು ಮಾಡುವಂತೆ ಸೂಚನೆ ನೀಡಿದಾಗ ವಾದ್ಯ ಮೇಳ ಆರಂಭ .ಇದೆಲ್ಲವನ್ನೂ ಹತ್ತಿರದಿಂದ ನಿಂತು ನೋಡುತ್ತಿದ್ದ ನನ್ನ ನೋಟ ಪೂರ್ತಿಯಾಗಿ ಇದ್ದುದು ಮಾತ್ರ ,ಎಲ್ಲರಿಗಿಂತಲೂ ಭಿನ್ನವಾಗಿ ,ಕೆನ್ನೆ ಉಬ್ಬಿಸಿ ,ಮೂಗಿನ ಹೊರಳೆಯನ್ನು ಅರಳಿಸಿ ,ಕಣ್ಣು ಕೆಕ್ಕರಿಸುತ್ತಾ ಒಂದೇ ರಾಗದಲ್ಲಿ ಪೂ ಊ ಊ .. ಎಂದು ಊದುವವನ ಮೇಲೆಯೇ ಇತ್ತು .ಊದುವಾಗಿನ ಅವನ ಹಾವಭಾವ ,ನಿರಂತರವಾಗಿ ಉಬ್ಬಿ ತಗ್ಗುವ ಕೆಪ್ಪಟೆ ,ಏಕಪ್ರಕಾರವಾಗಿ ಅಡೆತಡೆಯಿಲ್ಲದೆ ಊದುವ ಅವನ ಸಾಮರ್ಥ್ಯ ,ಇವೆಲ್ಲವನ್ನೂ ನೋಡಿದಾಗ ವಾಲಗದವರ ಮುಖ್ಯ 'ಊದಕ 'ಇವನೇ ಆಗಿರಬೇಕು ಎಂದು ತೋರಿತ್ತು .'

ದಿಬ್ಬಣದ ಎದುರಿನಲ್ಲಿ ಗತ್ತಿನಿಂದ ನಡೆಯುತ್ತಿದ್ದ ಮನೆಯ ಗಂಡಸರು ,ಹಿಂದೆಯೇ ಕಲಪಿಲ ಮಾತಾಡುತ್ತಾ ನಡೆಯುವ ಹೆಂಗಸರು ,ಇವರೆಲ್ಲರ ನಡುವೆ ಏನು ಮಾಡ ಬೇಕೆಂದು ತಿಳಿಯದ ಮಕ್ಕಳು .ನಾನಂತೂ ಎಲ್ಲರಿಗಿಂತಲೂ ಸ್ವಲ್ಪ ಎದುರಾದ ಎದೂರಿನಲ್ಲಿ ದ್ದೆ .( ಈಗಲೂ ನಾನು ಎದೂರು ಎಂದು ಹೇಳುವುದಿದೆ )ವಾಲಗದವರ ಹಿಂದೆ ಮುಂದೆಯಾಗಿ ,ಜಾತ್ರೆಯ ವೇಳೆಯಲ್ಲಿ ಚೆಂಡೆ ವಾದ್ಯ ಮೇಳಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ,ಓಲಾಡುತ್ತಾ ಸಾಗುವ ಬೇತಾಳನಂತೆ ,ವಾಲಗದವರ ತಾಳಕ್ಕೆ ನಾನೂ ಮೆಲ್ಲ ಮೆಲ್ಲನೆ ಹಾರಿ ಕುಣಿಯುತ್ತಾ ,ಬಜಕೂಡ್ಲಿನ ಬಗ್ಗೆ ಎಲ್ಲ ಬಲ್ಲವ ಎನ್ನುವ ಹಮ್ಮು ಬಿಮ್ಮಿನೊಡನೆ ,ದಿಬ್ಬಣಿಗರ ದಾರಿ ತೋರುಗನಾಗಿ ಮುಂದೆ ಹೋಗುತ್ತಿದ್ದೆ .'

 ದೊಡ್ಡ ಶುಭಕಾರ್ಯಗಳ ಮುನ್ನಾ  ದಿನದ ವರ್ಣನೆ ನೋಡಿ .'ಅಧ್ಯಕ್ಷರಿಲ್ಲದ ಉದ್ಘಾಟಕರಿಲ್ಲದ ,ಮುಖ್ಯ ಅತಿಥಿ ಗಳಿಲ್ಲದ ,ಭಾಷಣ ಕಾರರಿಲ್ಲದ ,ಆದರೆ ಎಲ್ಲರೂ ಇರುವ ,ಎಲ್ಲರೂ ಎಲ್ಲವೂ ಆಗಿರುವ ಎಲ್ಲರೂ ಉತ್ಸಾಹದಿಂದ ಭಾಗವಹಿಸುವ ಅತ್ತಾಳ ಕೂಟ ಸಂಭ್ರಮದ ತಾಣವಾಗಿ ಬಿಡುತ್ತಿತ್ತು .ತರಕಾರಿಗಳು ಉದ್ದಕ್ಕೆ ಅಡ್ಡಕ್ಕೆ ಎಂದು ತುಂಡಾಗಿ ಬೀಳುತ್ತಿದ್ದಂತೆ ,ಮೂರುವವರ ಬಾಯಿಗಳೂ ಸುಮ್ಮನಿರದೆ ಪುಂಖಾನುಪುಂಖವಾಗಿ ರೋಚಕ ವಿಷಯಗಳು ಹೊರ ಬೀಳುತ್ತಿದ್ದವು .ಪತ್ರಿಕೆಗಳಲ್ಲಿ ಓದದ ಕಿವಿಯಾರೆ ಕೇಳಿ ಬಾಯಾರೆ ಹರಡುವ ಸುದ್ದಿಗಳ  ಮಹಾಪೂರವೇ ಹರಿದು ಬರುತ್ತಿತ್ತು .'

 ತನ್ನ ಬಾಲ್ಯ ,ಅಜ್ಜಿಮನೆ ,ನೆಂಟರ ಮನೆಯಲ್ಲಿ ಕಳೆದ ಸಂತಸದ ದಿನಗಳು ,ಅಂದಿನ ಹೋಟೆಲ್,ಜೀನಸು ಅಂಗಡಿ ,ಕ್ಷೌರಿಕ ,ಚಿನಿವಾರ ,ಟೈಲರ್ ಗಳು ,ಡ್ರೈವರ್ ಕಂಡಕ್ಟರ್ ,ಬಸ್ಸುಗಳು ,ತನ್ನ ಊರಿನ ಜಾತ್ರೆ ,ತನ್ನ ಮದುವೆ ಇತ್ಯಾದಿಗಳ ಚಿತ್ರಣ ಬಹಳ ಚೆನ್ನಾಗಿ ಮೂಡಿ ಬಂದಿದೆ . ನಡು ನಡುವೆ ತುಳು ,ಮಲಯಾಳ ,ಕೊಂಕಣಿ ಮತ್ತು ಹವ್ಯಕ ಭಾಷೆ ಸಮಯೋಚಿತವಾಗಿ ಬಂದಿದೆ . ತಮ್ಮದೇ ಕೆಲವು ನುಡಿಗಟ್ಟುಗಳನ್ನು ರಚಿಸಿ ಬಳಸಿರುವುದು ವಿಶೇಷ . 

ಪುಸ್ತಕ ದ  ವಿವರಗಳು  ಕ್ರೊನೊಲೊಜಿಕಲ್ ಆರ್ಡರ್ ನಲ್ಲಿ ಇಲ್ಲದಿದ್ದರೂ ಸುಲಭವಾಗಿ ಓದಿಸಿ ಕೊಂಡು ಹೋಗುತ್ತದೆ . ಶ್ರೀ ಮುರಳೀಧರ ಅವರಿಗೆ ನನ್ನ ಅಭಿನಂದನೆಗಳು . ಇದನ್ನು ನನಗೆ ತಲುಪಿಸಿ ಅವರ ಮಗಳು ಶ್ರೀಮತಿ ಶೋಭಿತಾ ದೊಡ್ಡ ಉಪಕಾರ ಮಾಡಿದ್ದಾರೆ . ಅವರಿಗೆ ಅಭಾರಿ

ಈ ಕೃತಿಯನ್ನುಲೇಖಕರ  ತಂದೆ ಕೆಲಸ ಮಾಡುತ್ತಿದ್ದ  ಮತ್ತು  ಕಾಸರಗೋಡಿನಲ್ಲಿ ಕನ್ನಡ ಉಳಿಸಿ  ಬೆಳೆಸುವಲ್ಲಿ  ಮಹತ್ತರ ಪಾತ್ರ ನಿರ್ವಹಿಸಿದ  ಸಿರಿಗನ್ನಡ ಪ್ರೆಸ್ ನಲ್ಲಿ ಮುದ್ರಿಸಿರುವುದು ಒಂದು ವಿಶೇಷ .

 

 



ಶನಿವಾರ, ಫೆಬ್ರವರಿ 25, 2023

ಗೇರು ಹಣ್ಣು ಮೇರು ಸಂಸ್ಕೃತಿ

      Cashews, Not Really a Nut • AnswerLine • Iowa State University Extension  and OutreachCashew - Wikipedia                                               

ನಿನ್ನೆ ಬಂಧುಗಳ  ಮದುವೆ ಸಮಾರಂಭಕ್ಕೆ ಬದಿಯಡ್ಕ ಸಮೀಪ ನಾರಂಪಾಡಿ ಗೆ ಹೋಗಿದ್ದೆ . ದಾರಿಯಲ್ಲಿ ಒಂದು ಕಡೆ ವರ್ಣ ವರ್ಣದ ಬಲಿತ ಹಣ್ಣುಗಳ  ಗೇರು ಮರಗಳ ತೋಟ . ನನ್ನ ಶ್ರೀಮತಿಯವರಿಗೆ ಗೇರು ಹಣ್ಣು ತಿನ್ನುವ ಆಸೆಯಾಯಿತು . ಬಾಲ್ಯದಲ್ಲಿ ಗೇರು ಹಣ್ಣು ಕೊಯ್ಯುವುದು ತಿನ್ನುವುದು  .ಸಾಕ್ಷಿಯಾಗಿ ಉಟ್ಟ ಬಟ್ಟೆಯಲ್ಲಿ ಕಲೆಗಳು .ಗೇರು ಬೀಜ ಸಂಗ್ರಹಿಸಿ ,ಅದರಲ್ಲಿ ಒಡ್ಡಿ ಲೆಕ್ಕ ಆಟ ಇತ್ಯಾದಿ ನೆನಪಿಸಿ ಕೊಂಡರು .,

ಸರಿ ಯಾರೂ ಇಲ್ಲದ ಕಡೆ ವಾಹನ ನಿಲ್ಲಿಸಿ ಕೊಯ್ದರೆ ಅದು ಕಳ್ಳತನ ವಾದೀತು . ಒಂದು ಕತೆ ವೃದ್ಧ ರೈತರೊಬ್ಬರು ಒಂದು ದೋಟಿ ಹಿಡಿದು ರಾಶಿ ಹಾಕಿದ ಕೊಯ್ದ ಹಣ್ಣುಗಳಿಂದ ಬೀಜ ಬೇರ್ಪಡಿಸುತ್ತಿದ್ದರು . ನಾವು ಕಾರ್ ನಿಲ್ಲಿಸಿದೆವು .ನನ್ನ ಪತ್ನಿ ಇಳಿದು ಅವರೊಡನೆ ತುಳಿವಿನಲ್ಲಿ ನಾಲ್ಕು ಹಣ್ಣು ತೆಗೊಳ್ಳಲೇ ? ಎಂದಾದ ಧಾರಾಳ ತೆಗೆದು ಕೊಳ್ಳಿ .ನಿಮಗೆ ನಾನು ಒಳ್ಳೆಯ ಹಣ್ಣು ಕೊಯ್ದೇ ಕೊಡುತ್ತೇನೆ ಎಂದು ಕೊಟ್ಟಾಗ ಮನೆಯವರು ಬೀಜ ತೆಗೆದು ಕೊಡ ಹೋದರು .ಅದಕ್ಕೆ ಆತ "ಅಮ್ಮ ಬೀಜ ಸಹಿತ ಕೊಂಡು ಹೋಗಿ ,ಇಲ್ಲದಿದ್ದರೆ ಹಣ್ಣು ಬಾಡುವುದು ,ಎಂದು ಕೈತುಂಬಾ ಹಣ್ಣುಗಳನ್ನು ಕೊಟ್ಟಾಗ ಅವರ ಮೊಗದಲ್ಲಿ ಒಂದು ಸಂತೃಪ್ತ ಭಾವ  .ಅವರು ಬೀಜ ಕೊಯ್ದು ಮಾರಾಟ ಮಾಡುವವರು .ಆದರೂ ಹಳ್ಳಿಯ ದೊಡ್ಡ ಮನಸು ;ಇನ್ನೊಬ್ಗರೊಂದಿಗೆ ಹಂಚಿ ಕೊಂಡು ಸಂತಹ ಪಡುವ  ಮರೆಯಾಗುತ್ತಿರುವ ಹಳೆಯ ಸಂಸ್ಕೃತಿ ಅವರ ನಡೆ ನುಡಿ ಮೊಗದಲ್ಲಿ ಕಂಡೆವು

ಬುಧವಾರ, ಫೆಬ್ರವರಿ 22, 2023

ಒಂದು ಕನಸು

ಇಂದು ಮುಂಜಾನೆ ನಿದ್ದೆಯಲ್ಲಿ   ಅಪರೂಪಕ್ಕೆ ಒಂದು ಒಳ್ಳೆಯ ಕನಸು ಬಿತ್ತು . ದಿನ ಪತ್ರಿಕೆ ಮುಖ ಪುಟದಲ್ಲಿ ನನ್ನ ಚಿತ್ರ . ಪತ್ರಿಕೆಯೇನೋ ಅಂತಿಂತಹುದಲ್ಲ ,ಜನರ ಆತ್ಮ ಸಾಕ್ಷಿಯ ಪ್ರತೀಕ ಎಂದು ಕರೆಯಲ್ಪಡುವ ,ಜಾಹಿರಾತು ಕೊಡದೇ ಅಥವಾ ಕೊಡಿಸುವ ಪ್ರಭಾವ ಇಲ್ಲದೆ ಯಾವುದೇ ಸುದ್ದಿಯನ್ನು ಎಷ್ಟೇ ಮಹತ್ವ ಇದ್ದರೂ ಪ್ರಕಟಿಸದ ರಾಜ್ಯ ವ್ಯಾಪಿ ಪ್ರಸಾರದ ಪತ್ರಿಕೆ . ನರೇಂದ್ರ ಮೋದಿ ,ಬೊಮ್ಮಾಯಿ ,ಸಿದ್ದರಾಮಯ್ಯ ನಂತಹವರು ಮಾತ್ರ ಕಾಣಿಸಿಕೊಳ್ಳುವ ಮೊದಲ ಪುಟ . ಈಗಿನ ಫ್ಯಾಷನ್ ನಂತೆ ಆಪರೇಷನ್ ಥೀಯೇಟರ್ ಡ್ರೆಸ್ ಮತ್ತು ಟೋಪಿ ಹಾಕಿಕೊಂಡ ನನ್ನ ಚಿತ್ರ (ಸರ್ಜನ್ ಅಲ್ಲದಿದ್ದರೂ ) ,ಮುಖದಲ್ಲಿ ಒಂದು ಮಂದಹಾಸ . ಡಾ ಎ ಪಿ ಭಟ್ ಅವರಿಗೆ 'ವೈದ್ಯ ರಾಜ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸುದ್ದಿ . ಇವರಿಗೆ ಈ ಮೊದಲೇ  ರಾಷ್ಟೀಯ ವೈದ್ಯ ಪರಿಷತ್ ನಿಂದ ' ರೋಗ ಪ್ರತಿ ಭಯಂಕರ ' , ಕಂಪಿ ವಿಶ್ವ ವಿದ್ಯಾಲಯದಿಂದ "ನೋಡೋಜ "(ರೋಗಿ ಗುಣಮುಖನಾಗುವನೋ ಎಂದು ಕೇಳಿದರೆ ನೋಡೋಣ ದೇವರಿದ್ದಾನೆ ಎಂದು ಯಾವಾಗಲೂ ಹೇಳುವರು )., ಲಾಟ್ ಪೋಟ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗಿದೆ  ಎಂಬ ಒಗ್ಗರಣೆ ಕೂಡಾ . 

ಕೆಳಗಡೆ ನನ್ನ ಬಂಧು ಮಿತ್ರರು ,ಹಿತೈಷಿಗಳು ತಮ್ಮ  ಬಣ್ಣ ಬಣ್ಣದ ಭಾವಚಿತ್ರ  ಹಾಕಿಕೊಂಡು ವೈದ್ಯ ರಾಜರಿಗೆ ಅಭಿನಂದನೆಗಳು ಎಂಬ ಜಾಹಿರಾತು . ಅಂತೂ ಹೂವಿನೊಡನೆ ದಾರವೂ ದೇವರ ಪಾದ ಸೇರಿದ ಹಾಗೆ ಆಯಿತು . 

ಬಹಳ ಆನಂದ ತುಂದಿಲ  ನಾಗಿ ಸಂತೋಷ ತಾಳಲಾರದೆ ನೋಡೇ ನೋಡೇ ಎಂದು ಪತ್ನಿಯನ್ನು ಕೂಗಿದೆ (ಕನಸಿನಲ್ಲಿಯೇ -ನಾನು ವೃತ್ತಿಯಲ್ಲಿ ಪ್ರವೃತ್ತಿಯಲ್ಲಿ ಏನು ಸಾಧನೆ ಮಾಡಿದರೂ ಅವಳಿಗೆ ಕ್ಯಾರೇ ಇಲ್ಲ .ಇದೇನು ಮಹಾ ಇದೇನು ಮಹಾ ಎಂದು ಟ್ರಿವಿಯಲೈಸ್ ಮಾಡುವಳು ,ಈಗಲಾದರೂ ಅವಳಿಗೆ ಜ್ಞಾನೋದಯ ಆಗಲಿ ಎಂಬ ಉದ್ದೇಶ . ) ಏನ್ರೀ ನಿಮ್ಮ ಗಲಾಟೆ ?ಇನ್ನೂ ಗಂಟೆ ಆರು ಆಗಿಲ್ಲ ,ಸ್ವಲ್ಪ ನಿದ್ದೆ ಮಾಡಲು ಬಿಡಿ ಎಂದು ನನ್ನನ್ನು ಅಲುಗಾಡಿಸಿದಾಗ ಎಚ್ಚರ ಆಗಿ  ರಸ ಭಂಗ ಮತ್ತು ಭ್ರಮ ನಿರಸನ ಆಯಿತು .ಲಕ್ಷ್ಮೀಶ ತೋಲ್ಪಾಡಿ ಮೊನ್ನೆ ಒಂದು ಕಡೆ ಹೇಳಿದ್ದಾರೆ 'ಭ್ರಮೆ ನಿರಸನ 'ಆದರೇ ಒಳ್ಳೆಯದು ಎಂದು .ಆದರೂ ಒಳ್ಳೆಯ ಕನಸು ಕಾಣಿರಿ ಎಂದು ಕಲಾಂ ಹೇಳಿದ ಹಾಗೆ ನಾನು ಕಂಡು ಆನಂದಿಸುತ್ತಿದ್ದುದು ಅಲ್ಪಾಯು ಆಯಿತಲ್ಲಾ ಎಂದು ಬೇಸರ ಆಯಿತು . 

ಈ ಕನಸು ಬೀಳಲು ಕಾರಣ ಆಮೇಲೆ ತಿಳಿಯಿತು .ಹಿಂದಿನ ದಿನದ ಪೇಪರ್ ನಲ್ಲಿ ಹತ್ತು ಹದಿನೈದು ಇಂತಹ ಪ್ರಶಸ್ತಿ ವಿಜೇತರ ಸುದ್ದಿ ಓದಿ ನಾನು ವಿಚಲಿತ ನಾಗಿದ್ದೆ . ಓದುಗರ ಬಳಗದಿಂದ ಸಾಹಿತ್ಯ ಚಿಂತಾಮಣಿ ,ಭಜನಾ ಮಂಡಳಿಯಿಂದ ಧರ್ಮ ದುಂಧರ ,ಗಡಿನಾಡ ಬಳಗದಿಂದ ಬೆಲ್ಟ್ ಏರಿಯಾ ಪ್ರಶಸ್ತಿ ,ಕೃಷಿ ಕೂಟದಿಂದ ಕಲ್ಪ ವೃಕ್ಷ ಪ್ರಶಸ್ತಿ ,ಅಡಿಕೆ ಬೆಳೆಗಾರರಿಂದ ಸಿಪ್ಪೆ ಛೇಧನ ಪರಿಣಿತ ಪ್ರಶಸ್ತಿ ,ರಬ್ಬರ್ ಕೂಟದಿಂದ ರಬ್ಬರ್ ಕ್ಷೀರ ಸಂಗ್ರಹ ನಿಪುಟ ಪ್ರಶಸ್ತಿ ಇತ್ಯಾದಿ .ಇವುಗಳಿಗೆ ಎಲ್ಲಾ ಕಳಶವಿಟ್ಟಂತೆ ವಿಶ್ವ ಶಾಂತಿ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ (ಕೋನ್ ವೊಕೇಷನ್ ಟೊಪ್ಪಿ ಹಾಕಿಸಿ ಕೊಂಡ ಚಿತ್ರ ಸಹಿತ ),ಇತ್ಯಾದಿ . 

ಇದನ್ನು ಓದಿ ನನಗೆ ಕೀಳರಿಮೆ ಬಂದಿತು . ನಾನು ಖ್ಯಾತ ವೈದ್ಯ ,ಪ್ರೊಫೆಸ್ಸರ್ ಒಫ್ ಮೆಡಿಸಿನ್ ಮತ್ತು ಸಾಲದ್ದಕ್ಕೆ ಲೇಖಕ .ಒಂದು ನಾಡೋಜ ವಾದರೂ ನನಗೆ ಸಿಗಲಿಲ್ಲವಲ್ಲಾ ,ಯಾರೂ ನನಗೆ ಸನ್ಮಾನ ಮಾಡಲಿಲ್ಲವಲ್ಲಾ ಎಂಬ ಚಿಂತೆ ಕಾಡ ತೊಡಗಿತು .ಅದರ ಪರಿಣಾಮವೇ ಈ ಕನಸು ಎಂದು ಕೊಂಡು ,ನನ್ನ ಕನಸು ಭಂಗ ಮಾಡಿದುದಕ್ಕೆ ಮನಸ್ಸಿನಲ್ಲಿಯೇ ಪರಂಚಿ ಕೊಂಡು ನಿತ್ಯ ವ್ಯಾಪಾರದಲ್ಲಿ ಲೀನನಾದೆ  .

ಬಾಲಂಗೋಚಿ : ಈಗ ಖಾಸಗಿ ಶಾಲೆಗಳಲ್ಲಿ ಹಾಜರಿ, ,ಅಕ್ಷರ,ವಿಧೇಯತೆ ,ಎಕ್ಸ್ಟ್ರಾ ಕರಿಕುಲರ್ ,ಸ್ಟಡಿ ಎಂದು ಪ್ರಶಸ್ತಿ ,ಬಹುಮಾನ ಕೊಟ್ಟು ಯಾವ ಹೆತ್ತವರಿಗೂ ಬೇಸರ ಆಗದಂತೆ ನೋಡಿ ಕೊಳ್ಳುತ್ತಾರೆ . ಇಲಾಖೆಯಲ್ಲಿ ವಾರ್ಷಿಕ ಪ್ರಶಸ್ತಿ ಬಿರುದುಗಳು ಕೋಟಲೆ ಧಡಾರ ದಂತೆ ಎಲ್ಲರಿಗೂ ಬರುವುದು ಎಂದು ತಮ್ಮ ಮೇಲಧಿಕಾರಿ ಹೇಳುತ್ತಿದ್ದರು ಎಂದು ರಾಜ್ಯದ ಮಾಜಿ ಪೊಲೀಸ್ ನಿರ್ದೇಶಕ ದಿ . ಎ   ಪಿ ದುರೈ ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ . 

ಇನ್ನು ಕೆಲವು ಅನುಕರಣೆ ಪ್ರಶಸ್ತಿಗಳು ಆರಂಭವಾಗಿವೆ .ಪದ್ಮಶ್ರೀ ,ಭೂಷಣ ,ವಿಭೂಷಣ ,ಭಾರತ ರತ್ನ ಇರುವ ಹಾಗೆ   ಉದಾ ಕವಿ ಶ್ರೀ ,ಕವಿ ಭೂಷಣ ,ಕವಿ ವಿಭೂಷಣ ,ಕವಿ ರತ್ನ ಇತ್ಯಾದಿ

 

ಮಿತ್ರ ಭೇಟಿ

 ಸಮಾರಂಭಗಳಿಗೆ ಬಂಧು ಮಿತ್ರರೊಡಗೂಡಿ ಬನ್ನಿರಿ ಎಂದು ಆಮಂತ್ರಿಸುವ ಹಳೇ ಒಕ್ಕಣೆ ಈಗಲೂ ಚಾಲ್ತಿಯಲ್ಲಿ ಇದೆ .ಇಂದು  ಕರೆಸಿಕೊಂಡ ಬಂಧುಗಳನ್ನೇ ವಿಚಾರಿಸುವವವರು ಇಲ್ಲದಿರುವಾಗ ಮಿತ್ರರನ್ನು ಕರೆದು ಕೊಂಡು ಹೋಗುವುದು ಅರ್ಥಹೀನ . 

ಬಂಧುಗಳಿಗಿಂತಲೂ ಒಂದು ಅಳತೆ  ಮೇಲು ಒಳ್ಳೆಯ ಮಿತ್ರರ  ಸಹವಾಸ ಎಂಬುದು ಬಲ್ಲವರ ಅಭಿಪ್ರಾಯ . ಮೊನ್ನೆ ನಾನು ಮಾತೃಭೂಮಿ ಅಕ್ಷರ ಜಾತ್ರೆಯಲ್ಲಿ ಭಾಗವಾಸಿಸಲು  ತಿರುವನಂತಪುರ ಕ್ಕೆ ಹೋಗಿದ್ದೆನಷ್ಟೆ . ಅದರ ವಾಸನೆ ನನ್ನ ಮಿತ್ರ ಡಾ ಜೋಸ್ ಚೆರಿಯನ್ ಅವರಿಗೆ ಸಿಕ್ಕಿತು . ಅವರು ತಿರುವನಂತಪುರದಿಂದ ೧೨೦ ಕಿ ಮೀ ದೂರದ ತಿರುವೆಲ್ಲಾ ನಗರದ ವಾಸಿ .ಅಲ್ಲಿ ತಜ್ಞ ವೈದ್ಯ .ಅವರ ಪತ್ನಿ ಸೆಲ್ವಿ ಮತ್ತು ಮಗಳು  ಕೂಡಾ ವೈದ್ಯರು . 

೫ನೇ ತಾರೀಕು ಭಾನುವಾರ ಇದ್ದಕ್ಕಿದ್ದಂತೆ ಸಮ್ಮೇಳನ ಮಂಟಪಕ್ಕೆ ಆಗಮಿಸಿ ನಮಗೆ ಸಂತೋಷ ಮತ್ತು  ಆಶ್ಚರ್ಯ  ಉಂಟು ಮಾಡಿದರು . ಬರುವಾಗ ಮಿತ್ರನಿಗಾಗಿ  ತಮ್ಮ ಊರಿಂದ ವಿಶೇಷ ತಿಂಡಿ ತಿನಸು ಕೂಡಾ . 

ಜೋಸ್ ಚೆರಿಯನ್ ನನ್ನ ಎಂ ಬಿ ಬಿ ಎಸ  ಸಹಪಾಠಿ ,ಅಲ್ಲದೆ ಸುಮಾರು ಎರಡು ವರ್ಷ ರೂಮ್ ಮೇಟ್ ಕೂಡಾ .ಅವರ ತಂದೆ ಅಂಡಮಾನ್ ನಿಕೋಬಾರ್ ,ಅರಣ್ಯ ಇಲಾಖೆ ಅಧಿಕಾರಿ ಆಗಿದ್ದು ಅಖಿಲ ಭಾರತ ಸೇವಾ ಕೋಟ ದಲ್ಲಿ ಅವರಿಗೆ ಸೀಟ್ ಲಭಿಸಿತ್ತು . ಜೋಸ್ ಅತೀ ಸೌಮ್ಯ ಸ್ವಭಾವದ ವ್ಯಕ್ತಿ .ರಜೆಗೆ ಊರಿಗೆ ಹೋಗಿ ಬರುವಾಗ ಬೆಲ್ಲ ಹಾಕಿ ಹುರಿದ ಅಕ್ಕಿ ಪುಡಿ ತರುತ್ತಿದ್ದು ನಾವು ಅದನ್ನು ಸವಿಯುತ್ತಿದ್ದೆವು . ನನ್ನ ಮಲಯಾಳ ಅಭಿರುಚಿ ಮತ್ತು ಜ್ಞಾನ ವೃದ್ಧಿಸಲು ಅವರ ಒಡನಾಟ ಮುಖ್ಯ ಕಾರಣ ಎಂದು ತಿಳಿದು ಕೊಂಡಿದ್ದೇನೆ .ಹುಬ್ಬಳ್ಳಿ ಸಂಗೀತ ಹೊಟೇಲ್ ,ಪೈ ಹೊಟೇಲ್ ನಲ್ಲಿ ಬ್ರೆಡ್ ಬೋಂಡ ,ಚಿವುಡ,ಚಹಾ ಜತೆಗೆ ಸವಿದ ದಿನಗಳು ಎಷ್ಟೋ ?ಉಣಕಲ್ ಬೆಟ್ಟದಲ್ಲಿ ,ಬಂಡಿ ವಾಡ ಅಗಸಿಯಲ್ಲಿ ಅಡ್ಡಾಡಿದ ನೆನಪುಗಳು ಎಷ್ಟೋ ?ಕಂಡ ಸೆಕಂಡ್ ಶೋ ಸಿನೆಮಾ ಗಳು ಎಷ್ಟೋ ?

ನಮ್ಮೊಡನೆ ಸಮಯ ಕಳೆದು ಸಂತೋಷ ಪಡಿಸಿ  ,ಶರವಣ ಭವನ ದಲ್ಲಿ ಪುಷ್ಕಳ ಊಟ ಕೂಡಾ ಹಾಕಿ ಸಂಜೆ ತಿರುವೆಲ್ಲಾ ಕ್ಕೆ ಮರಳಿದರು . 

 May be an image of 2 people and people standing

May be an image of 2 people

ಮಂಗಳವಾರ, ಫೆಬ್ರವರಿ 21, 2023

ಹಲ್ಲು ಇರುವಾಗ ಸಿಗಲಿಲ್ಲ ಕಡಲೆ

 ಹಲ್ಲು ಇರುವಾಗ ಸಿಗಲಿಲ್ಲ ಕಡಲೆ 

ಈಗಿನ ತರುಣ ತರುಣಿಯರು ವಾಟ್ಸ್ ಅಪ್ ,ಇನ್ಸ್ಟಾಗ್ರಾಮ್ ಇತ್ಯಾದಿ ಮೂಲಕ ಬೇಕೆಂದಾಗ ,ನಡೆಯುತ್ತಿರಲಿ ,ಕುಳಿತಿರಲಿ ,ಮಲಗಿರಲಿ ಬಿಂದಾಸ್ ಆಗಿ  ಸಂಹವನ ಮಾಡುವದು ಕಂಡಾಗ  ನಮ್ಮ ತಲೆಮಾರಿನವರು "ಛೆ ನಮ್ಮ ಕಾಲದಲ್ಲಿ ಇವು ಇರಲಿಲ್ಲದೇ ಎಷ್ಟೆಲ್ಲಾ ಕಳೆದು ಕೊಂಡೆವು "ಎಂದು ಮನಸಿನಲ್ಲಿಯೇ ಶಪಿಸಿ ಕೊಳ್ಳುತ್ತಿರುತ್ತಾರೆ . ನಮಗೆ ಇಲ್ಲದ ಎಷ್ಟೋ ಸೌಲಭ್ಯ ಇಂದಿನವರಿಗೆ ಇದೆ . ನಾವು ಮನೆಯಲ್ಲಿ  ಅಜ್ಜ ಅಜ್ಜಿ  ತಂದೆ ತಾಯಿ  ದೊಡ್ಡಪ್ಪ ,ಚಿಕ್ಕಪ್ಪ ,ಅಣ್ಣ ,ಅಕ್ಕ ,ಶಾಲೆಯಲ್ಲಿ ಅಧ್ಯಾಪಕರಿಗೆ ಅಂಜಿ ನಡೆಯ ಬೇಕಿತ್ತು.ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ಎಂದು ಅಲ್ಲಮನೇ ಹೇಳಿದ್ದಾನೆ . . ಈಗ ಹೆತ್ತವರು ,ಗುರುಗಳು ಮಕ್ಕಳಿಗೆ ಅಂಜಿ ನಡೆಯ ಬೇಕಾದ ಪರಿಸ್ಥಿತಿ . ಅವರು ಏನನ್ನು ಬಯಸ ಬಹುದು ಎಂದು ಮೊದಲೇ ಆಲೋಚಿಸಿ  ಒದಗಿಸ ಬೇಕು .

ಇಷ್ಟೆಲ್ಲಾ ನೆನಪು ಆಗಲು ಕಾರಣ ,ದಿನ ನಿತ್ಯ ಎಂಬಂತೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ದಿನವೂ ಮಧ್ಯಾಹ್ನ ಊಟ ಮಾಡಿ ವಿರಮಿಸುತ್ತಿರುವ ಹೊತ್ತಿಗೆ ಸರಿಯಾಗಿ ಮೊಬೈಲ್ ಗೆ ಬರುವ ಕರೆ .(ಕರಕರೆ ). ಆ ಕಡೆಯಿಂದ ತರುಣಿಯರು ತಮ್ಮ ಇಂಪಾದ ಸ್ವರದಲ್ಲಿ ಕನ್ನಡ ,ಇಂಗ್ಲಿಷ್ ಮತ್ತು ಕೆಲವೊಮ್ಮೆ ಇಂಗ್ಲಿಷ್ ಭಾಷೆಯಲ್ಲಿ "ಸಾರ್ ನಿಮಗೆ ಸಾಲ ಕೊಡಲು ನಮಗೆ ತುಂಬಾ ಸಂತೋಷ ಆಗುತ್ತಿದೆ . ಅವಶ್ಯಕತೆ ಇದೆಯೇ ?"ಎಂದು ಕೇಳುವರು . ಅವರ ಕೆಲಸ ಅವರು ಮಾಡುವರು ,ಎಂದು ವಿನಯವಾಗಿ ನಿರಾಕರಿಸಿ ,ಆ ನುಂಬರ್ ಬ್ಲಾಕ್ ಮಾಡುವೆನು .ಮರುದಿನ ಅದೇ ಬ್ಯಾಂಕ್   ಇನ್ನೊಂದು ನಂಬರ್ ನಿಂದ ಅದೇ ಆಮಿಷ ಒಡ್ಡುವುದು. ನಾನು ಕೆಲವೊಮ್ಮೆ ತಮಾಷೆಗೆ ನನ್ನ ವಯಸು ತಿಳಿಸಿ ನನಗೆ ಸಾಲ ಕೊಟ್ಟರೆ ತೀರಿಸುವವರು ಯಾರು ?ಎಂದು ತಮಾಷೆಯಾಗಿ ಕೇಳುವುದು ಇದೆ .

  ನನಗೆ ಎಂ ಬಿ ಬಿ ಎಸ್  ಪ್ರವೇಶ ಸಿಕ್ಕಿದಾಗ ಹಣಕಾಸಿನ ತೊಂದರೆ ಇದ್ದು ಬ್ಯಾಂಕ್ ಗಳ  ಬಾಗಿಲು ತಟ್ಟಿದ್ದೆ . ಆಗ ಎಲ್ಲರೂ ಸಹಾನುಭೂತಿ ತೋರಿಸುವವರೇ ಹೊರತು ಸಹಾಯಕ್ಕೆ ಒದಗಲಿಲ್ಲ . ಜನಾರ್ಧನ ಪೂಜಾರಿಯವರ ಕಾಲಕ್ಕೆ  ವಿದ್ಯಾಭ್ಯಾಸಕ್ಕೆ ಸುಲಭ ಬಡ್ಡಿಯಲ್ಲಿ  ಸಾಲ ಕೊಡುವ ಯೋಜನೆ ಬಂತಾದರೂ ಅದು ಸಾಂಕ್ಷನ್ ಆಗಿ ಕೈಗೆ ಸಿಗಲು ಓಡಾಡಿಸಿದ್ದಕ್ಕೆ ಲೆಕ್ಕ ಇಲ್ಲ .ಈ ಬಗ್ಗೆ ನನ್ನ ಪುಸ್ತಕ ದಲ್ಲಿ ಬರೆದಿದ್ದೇನೆ . ಈ ಗ ಈ ಇಳಿ ವಯಸ್ಸಿನಲ್ಲಿ ಹಿಂದಿನ ಜನ್ಮದ ಸಾಲ ತೀರಿಸಿಯೇ ಆಗದಿರುವಾಗ ಹೊಸ ಸಾಲ ದ  ಮೋಹ ಜಾಲದಲ್ಲಿ ಏಕೆ ಬೀಳಲಿ ?

ಮಂಗಳವಾರ, ಫೆಬ್ರವರಿ 14, 2023

ನಿಜವಾದ ಪೂಜೆ

ನಿಜವಾದ ಪೂಜೆ

 ಸ್ವಾಮಿ ವಿವೇಕಾನಂದ ರು ರಾಮೇಶ್ವರದಲ್ಲಿ ಮಾಡಿದ ಭಾಷಣದಿಂದ ಆಯ್ದ ಭಾಗ

ಧರ್ಮ ಇರುವುದು ಪ್ರೀತಿಯಲ್ಲಿ,ಬಾಹ್ಯಾಚಾರ ದಲ್ಲಿ ಅಲ್ಲ .ಧರ್ಮಕ್ಕೆ ಶುದ್ಧ ನಿಷ್ಕಪಟ ಹೃದಯವೇ ಮುಖ್ಯ .ಒಬ್ಬನ ದೇಹ ಮತ್ತು ಮನಸ್ಸು ಪರಿಶುದ್ದವಿಲ್ಲದೇ ಇದ್ದರೆ ಅವನು ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಿದರೆ ಪ್ರಯೋಜನ ಇಲ್ಲ .ಬಾಹ್ಯ ಪೂಜೆ ಆಂತರಿಕ ಪೂಜೆಯ ಸಂಕೇತ ಮಾತ್ರ .ಆಂತರಿಕ ಪೂಜೆಗೆ ಅಂತರಂಗ ಶುದ್ದಿಯೇ ಮುಖ್ಯ .ಇದಿಲ್ಲದೆ ಬರಿಯ ಬಾಹ್ಯ ಪೂಜೆಯಿಂದ ಪ್ರಯೋಜನ ಇಲ್ಲ .

ಕಲಿಯುಗದಲ್ಲಿ ಜನರು ಬಹಳ ಕುಲಗೆಟ್ಟು ಹೋಗಿರುವರು .ಎಂತಹ ಮಹಾಪಾತಕ ಮಾಡಿದರೂ ಪುಣ್ಯ ಕ್ಷೇತ್ರಕ್ಕೆ ಹೋದರೆ ದೇವರು ತಮ್ಮ ಪಾತಕವನ್ನು ಕ್ಷಮಿಸುವನು ಎಂದು ಭಾವಿಸುವರು  .ಅಶುದ್ಧ ಮನಸಿನಿಂದ ದೇವಸ್ಥಾನಕ್ಕೆ ಹೋದರೆ ,ತನ್ನಲ್ಲಿರುವ ಪಾಪದ ಮೊತ್ತಕ್ಕೆ ಮತ್ತಷ್ಟನ್ನು ಸೇರಿಸಿಕೊಳ್ಳುವನು .ಮನೆಗೆ ಹೋಗುವಾಗ ಹಿಂದೆ ಇದ್ದುದಕ್ಕಿಂತ ಹೆಚ್ಚು ಹೀನನಾಗಿರುತ್ತಾನೆ .ಅಪವಿತ್ರರು ಇರುವಲ್ಲಿ ನೂರು ದೇವಸ್ಥಾನ ಗಳು ಇದ್ದರೂ ,ತೀರ್ಥವು ಮಾಯವಾಗಿ ಹೋಗುತ್ತದೆ .ತೀರ್ಥ ಕ್ಷೇತ್ರದಶ್ಲ್ಲಿ ವಾಸಿಸುವುದು ಕಷ್ಟ ,ಸಾಧಾರಣ ಸ್ಥಳಗಳಲ್ಲಿ ಮಾಡಿದ ಪಾಪವನ್ನು ಸುಲಭವಾಗಿ ಕಳೆದು ಕೊಳ್ಳ ಬಹುದು .ತೀರ್ಥ ಕ್ಷೇತ್ರದಲ್ಲಿ ಮಾಡಿದ ಪಾಪದಿಂದ ಪಾರಾಗಲು ಆಗುವುದಿಲ್ಲ .ನಾವು ಪರಿಶುದ್ಧ ರಾಗುವುದು ,ಇತರರಿಗೆ ಒಳ್ಳೆಯದನ್ನು ಮಾಡುವುದು ಎಲ್ಲ ಪೂಜೆಯ ಸಾರ.ಯಾರು ದೀನರಲ್ಲಿ ,ರೋಗಿಗಳಲ್ಲಿ ಶಿವನನ್ನು ನೋಡುವರೋ ಅವರೇ ನಿಜವಾಗಿ ಶಿವನನ್ನು ಪೂಜಿಸುವವರು .ಒಬ್ಬನು ಕೇವಲ ವಿಗ್ರಹದಲ್ಲಿ  ಮಾತ್ರ ಶಿವನನ್ನು ನೋಡಿದರೆ ಅವನ ಪೂಜೆ ಗೌಣ .ಜಾತಿ -ಕುಲ-ಗೋತ್ರಗಳನ್ನು ಲೆಕ್ಕಿಸದೆ ಯಾರು ಬಡವನಲ್ಲಿ ಶಿವನನ್ನು ನೋಡಿ ಅವನಿಗೆ ಸೇವೆ ಸಲ್ಲಿಸುವರೋ ,ಅವನಿಗೆ ಸಹಾಯ ಮಾಡುವರೋ ,ಅವರ ಮೇಲೆ ಶಿವನಿಗೆ ತನ್ನನ್ನು ಕೇವಲ ವಿಗ್ರಹದಲ್ಲಿ ನೋಡುವವರಿಗಿಂತ  ಹೆಚ್ಚು ಪ್ರೀತಿ .

ಪುರಂಧರ ದಾಸರು ಹಾಡಿದ್ದು 

 ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು

ತನು ಶುದ್ಧಿಯಿಲ್ಲದವಗೆ ತೀರ್ಥದ ಫಲವೇನು
ಮಿಂದಲ್ಲಿ ಫಲವೇನು ಮೀನುಮೊಸಳೆಯಂತೆ
ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ
ಹೊರಗೆ ಮಿಂದು ಒಳಗೆ ಮೀಯದವರ ಕಂಡು
ಬೆರಗಾಗಿ ನಗುತಿದ್ದ ಪುರಂದರವಿಠಲ.
ಅಕ್ಕಮಹಾದೇವಿ ವಚನ 
   ತನು ಕರಗದವರಲ್ಲಿ

ಮಜ್ಜನವನೊಲ್ಲೆಯಯ್ಯಾ ನೀನು.

ಮನ ಕರಗದವರಲ್ಲಿ

ಪುಷ್ಪವನೊಲ್ಲೆಯಯ್ಯಾ ನೀನು.

ಹದುಳಿಗರಲ್ಲದವರಲ್ಲಿ

ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.

ಅರಿವು ಕಣ್ದೆರೆಯದವರಲ್ಲಿ

ಆರತಿಯನೊಲ್ಲೆಯಯ್ಯಾ ನೀನು.

ಭಾವ ಶುದ್ಭವಿಲ್ಲದವರಲ್ಲಿ

ಧೂಪನೊಲ್ಲೆಯಯ್ಯಾ ನೀನು.

ಪರಿಣಾಮಿಗಳಲ್ಲದವರಲ್ಲಿ

ನೈವೇದ್ಯವನೊಲ್ಲೆಯಯ್ಯಾ ನೀನು.

ತ್ರಿಕರಣ ಶುದ್ಧವಿಲ್ಲದವರಲ್ಲಿ

ತಾಂಬೂಲವನೊಲ್ಲೆಯಯ್ಯಾನೀನು.

ಹೃದಯಕಮಲ ಅರಳದವರಲ್ಲಿ

ಇರಲೊಲ್ಲೆಯಯ್ಯಾ ನೀನು.

ಎನ್ನಲ್ಲಿ ಏನುಂಟೆಂದು

ಕರಸ್ಥಲವನಿಂಬುಗೊಂಡೆ ಹೇಳಾ

ಚೆನ್ನಮಲ್ಲಿಕಾರ್ಜುನಯ್ಯಾ .
 

ಸೋಮವಾರ, ಫೆಬ್ರವರಿ 13, 2023

ಮಾತೃಭೂಮಿ ಅಕ್ಷರ ಜಾತ್ರೆಯಲ್ಲಿ ಮಿಂಚಿದ ಕನ್ನಡಿಗರು


 ಶ್ರೀಮತಿ ಸುಧಾ ಮೂರ್ತಿ ದೇಶದ ಎಲ್ಲಾ ಸಾಹಿತ್ಯ ಕೂಟಗಳಲ್ಲಿ ಬೇಡಿಕೆ ಉಳ್ಳ ಲೇಖಕಿ ಮತ್ತು ಸಮಾಜ ಸೇವಕಿ . ಅವರ ಪುಸ್ತಕಗಳು ಜಗತ್ತಿನ ಹಲವು ಭಾಷೆಗಳಿಗೆ ಅನುವಾದ ಗೊಂಡಿವೆ .ಮಕ್ಕಳಿಗಾಗಿ ಸಚಿತ್ರ ಕತೆ ಪುಸ್ತಕಗಳನ್ನೂ ಬರೆದಿರುವರು . ಪ್ರವಾಸ ಪ್ರಿಯರಾದ ಅವರು ಜಗತ್ತಿನ ವಿವಿಧ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಆಚಾರ ವಿಚಾರಗಳನ್ನು ಕುತೂಹಲದಿಂದ ನೋಡಿರುವರು . 

ಮೊನ್ನೆ ತಿರುವನಂತ ಪುರದ ಲ್ಲಿ ನಡೆದ ಮಾತೃಭೂಮೀ ಅಕ್ಷರ ಜಾತ್ರೆಯಲ್ಲಿ ಕೂಡಾ ಅವರು ಒಂದು ಸ್ಟಾರ್ ಅತಿಥಿ .ಅವರ ಟ್ರೇಡ್ ಮಾರ್ಕ್ ನಗೆ ಮತ್ತು ಸರಳ ಸೀರೆಯ ಉಡುಗೆ ,ಅಂತೆಯೇ ಅವರ ಭಾಷೆ ,ಅಲ್ಲಿ ಸರಳ ಇಂಗ್ಲಿಷ್ ನಲ್ಲಿ ಮಾತು . ಅವರದು ಎರಡು ಮೂರು ಸೆಷನ್ ಇತ್ತು . ಪ್ರೇಕ್ಷಕರ ಪ್ರಶ್ನೆಗೆ ಸರಳ ಉತ್ತರ .

ಅವರು ಹೆತ್ತವರಿಗೆ ಒಂದು ಸಲಹೆ ಕೊಟ್ಟರು .ಮಕ್ಕಳಿಗೆ ಧಾರಳವಾಗಿ ಪಾಕೆಟ್ ಮನೀ ಕೊಡ ಬೇಡಿ. ಆಗಾಗ ಉಡುಗೊರೆ ಬಹುಮಾನ,ಸಿಹಿತಿಂಡಿ ಇತ್ಯಾದಿ ಕೊಡುವ ಪ್ರವೃತ್ತಿ ಸಲ್ಲ . ಮಕ್ಕಳು ಹಬ್ಬ ಹರಿದಿನಗಳಿಗಾಗಿ ಕಾಯ ಬೇಕು . ದೀಪಾವಳಿಗೋ ಯುಗಾದಿಗೋ ಸಿಹಿತಿಂಡಿ ಮಾಡಿ ಕೊಡಿರಿ .ತಮ್ಮ ಮಕ್ಕಳನ್ನು ಇತರರ ಸಾಧನೆಗೆ ಹೋಲಿಸಿ ಅವರ ಮೇಲೆ ಒತ್ತಡ ಹೇರ ಬೇಡಿ . 

ಅಕ್ಷರ ಜಾತ್ರೆಯಲ್ಲಿ ಇನ್ನಿಬ್ಬರು ಕನ್ನಡಿಗರು ಜನಾಕರ್ಷಣೆಯ ಕೇಂದ್ರ ಆಗಿದ್ದರು . ಕ್ಯಾಪ್ಟನ್ ಗೋಪಿನಾಥ್ ಅವರೊಡನೆ ಎರಡು ಸೆಷನ್ ಇತ್ತು .ತಮ್ಮ ಮಾತಿನಲ್ಲಿ ಹಲವು ಕನ್ನಡ ಕವಿತೆಗಳನ್ನು ಗಾದೆಗಳನ್ನು ಉಲ್ಲೇಖಿಸಿದ್ದು ವಿಶೇಷ .ಅವರ ಆತ್ಮ ಚರಿತ್ರೆಯನ್ನು ಆಧರಿಸಿ ತಯಾರಾದ ಚಿತ್ರ ಸೂರೈ ಪೊಟ್ರು (ಶೂರನ ಪೊಗಳು )ದ ನಾಯಕ ನಟಿ ಅಪರ್ಣಾ ಬಾಲಮುರಳಿ ಅವರ ಜತೆಗೆ ಒಂದು ಕಾರ್ಯಕ್ರಮ . ಮಲಯಾಳಂ ನಟ ನಟಿಯರು ಬಹುಶ್ರುತರು ಮತ್ತು ಸಾಹಿತ್ಯ ಸಂಗೀತ ರಾಜಕೀಯ ಇತ್ಯಾದಿ ಜ್ಞಾನ ಉಳ್ಳವರು . 



ಮತ್ತೊಬ್ಬಬ್ಬರು ನಟ ಪ್ರಕಾಶ್ ರಾಜ್ . ಇವರ ಕಾರ್ಯಕ್ರಮ ದಲ್ಲಿಯೂ ಹಾಲ್ ತುಂಬಿ ತುಳುಕುತ್ತಿತ್ತು . ಪ್ರಕಾಶ್ ರಾಜ್ ದಕ್ಷಿಣದ ಎಲ್ಲಾ ಭಾಷೆಗಳನ್ನೂ ಚೆನ್ನಾಗಿ ಬಲ್ಲವರು . ಪ್ರೇಕ್ಷಕರ ಪ್ರಶ್ನೆಗಳಿಗೆ  ನೇರ ದಿಟ್ಟ ಉತ್ತರ . 

                             

                 ಲೇಖಕ ವಸುದೇಂದ್ರ ಅವರು ಒಮ್ಮೆ ಕಾಣ ಸಿಕ್ಕಿದರು . ಅವರ ಕತೆಗಳ ಇಂಗ್ಲಿಷ್ ಆವೃತ್ತಿ ಮಾರಾಟಕ್ಕೆ ಇಟ್ಟಿದ್ದರು .ಕನ್ನಡದ ಪ್ರಸಿದ್ಧ ಲೇಖಕರಾದ  ಶಿವರಾಮ ಕಾರಂತ ,ಭೈರಪ್ಪ ,ಜಯಂತ ಕಾಯ್ಕಿಣಿ ಮುಂತಾದವರ ಕೃತಿಗಳ ಇಂಗ್ಲಿಷ್ ಆವೃತ್ತಿ ,ಸುಧಾ ಮೂರ್ತಿ ಮತ್ತು ಕ್ಯಾಪ್ಟನ್ ಗೋಪಿನಾಥ್ ಅವರ ಪುಸ್ತಕಗಳು ಗಮನ ಸೆಳೆದವು . ಮಲಯಾಳಂ ಭಾಷೆಗೆ ಅನುವಾದ ಆದ ಕನ್ನಡ ಕೃತಿಗಳೂ ಇದ್ದವು . ಮಲಯಾಳಿಗಳ ಪುಸ್ತಕ ಪ್ರೇಮ ಕಂಡು ಸಂತೋಷ ಮತ್ತು ಅಸೂಯೆ ಆಯಿತು . ಎಲ್ಲರ ಕೈಯಲ್ಲೂ ಖರೀದಿಸಿದ ಪುಸ್ತಕ ಗಂಟುಗಳು . 

ಬಾಲಂಗೋಚಿ :  ಹೆತ್ತವರು ಮಕ್ಕಳಿಗೆ (ಅಥವಾ ಗಂಡ ಹೆಂಡತಿಗೆ ,ವೈಸ್ ವೆರ್ಸಾ ) ಎಷ್ಟು ಮತ್ತು ಹೇಗೆ ಪ್ರೀತಿ ತೋರಿಸ ಬೇಕು ಎಂಬುದು ಚರ್ಚಾರ್ಹ ವಿಷಯ . ಹಿಂದೆ ನಮ್ಮ ಬಾಲ್ಯದಲ್ಲಿ ಹೆಚ್ಚಿನ ಪ್ರೀತಿ ಮನಸಿನಲ್ಲಿ ಇದ್ದು ಅದರ ಒಂದು ಅಂಶ ಮಾತ್ರ ಆಗೊಮ್ಮೆ ಈಗೊಮ್ಮೆ ಪ್ರಕಟ ಆಗುತ್ತಿತ್ತು . ಕಂಡ ಕಂಡಲ್ಲಿ ಅಪ್ಪಿ ಕೊಳ್ಳುವುದು ,ಚುಂಬಿಸುವದು ,ಕೇಳಿದ್ದನ್ನೆಲ್ಲಾ ಕೊಡುವುದು ಇರಲಿಲ್ಲ . ಕೂಡು ಕುಟುಂಬದ ಮನೆಗಳಲ್ಲಿ ಎಲ್ಲರ ಅಲ್ಪ ಸ್ವಲ್ಪ ಪ್ರೀತಿ ಸೇರಿ ಮೊತ್ತ ದೊಡ್ಡ ದು ಆಗುತ್ತಿತ್ತು . ಸಿನಿಮಾ ಮತ್ತು ಧಾರವಾಹಿ ಗಳಲ್ಲಿ ಪ್ರೀತಿ ನಟಿಸಲು ಸಂಭಾವನೆ ಕೊಡುತ್ತಾರೆ .ಈಗಿನ ಮಕ್ಕಳು ಮತ್ತು ಯುವಕ ಯುವತಿಯರು ಅದನ್ನು ತಮ್ಮ ಜೀವನದಲ್ಲಿ ಕೂಡಾ ಕಾಣ ಬಯಸುವುದು ವಿಪರ್ಯಾಸ . ನನ್ನ ತಿಳುವಳಿಕೆ ಪ್ರಕಾರ ಬಹಿರಂಗ ಪ್ರೀತಿ  ಅತಿ ಪ್ರಕಟಿಸುವ ವರ ಹೃದಯ ಮತ್ತು ಮನದಲ್ಲಿ ಅದು ವಿಲೋಮ ಅನುಪಾತದಲ್ಲಿ (inverse proportion)ನಲ್ಲಿ ಇರುವುದು

ಶನಿವಾರ, ಫೆಬ್ರವರಿ 11, 2023

ಅಕ್ಷರ ಜಾತ್ರೆಯಲ್ಲಿ ಕಂಡ ಇಬ್ಬರು ಅಪರೂಪದ ರಾಜಕಾರಿಣಿಗಳು

 ಮಾತೃಭೂಮಿ ಅಕ್ಷರ ಜಾತ್ರೆ ೨೩ ರಲ್ಲಿ ನಾವು ಹಾಜರಾದ ಒಂದು ಒಳ್ಳೆಯ ಕಾರ್ಯಕ್ರಮ ಶಶಿ ತರೂರ್ ಮತ್ತು ಪಳನಿವೇಲ್ ತ್ಯಾಗರಾಜನ್ ಭಾಗವಹಿಸಿದ "ಭಾರತ -ಒಕ್ಕೂಟ ವ್ಯವಸ್ಥೆಯ ಪುನರಾವಲೋಕನ " ಎಂಬ ವಿಷಯದ ಮೇಲಿನ ಸಂವಾದ . ಪಳನಿವೇಲು ತ್ಯಾಗರಾಜನ್ ತಿರುಚಿ ಏನ್ ಐ ಟಿಕೆ ಪದವೀಧರ ,ಅಮೇರಿಕಾದ ಬಫೆಲೋ ವಿಶ್ವ ವಿದ್ಯಾಲಯದಿಂದ  (ಇಲ್ಲಿ ನಮ್ಮವರೇ ಆದ ಶಂಭು ಉಪಾಧ್ಯಾಯರು  ಪ್ರಾಧ್ಯಾಪಕರು )ಪಿ ಎಚ್ ಡಿ ಪದವಿ ಪಡೆದವರು . ಅಲ್ಲದೆ ಹಣಕಾಸು ವಿಷಯದಲ್ಲಿಯೂ ತಜ್ಞ . ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿಯೂ ಸೇವೆ ಮಾಡಿದ ಅನುಭವ .ಪ್ರಸ್ತುತ ತಮಿಳುನಾಡು ರಾಜ್ಯದ ಹಣಕಾಸು ಸಚಿವ .

ಶಶಿ ತರೂರು ತಿರುವನಂತಪುರದ ಸಂಸದ .ಇವರು ತಮ್ಮ ೨೨ ನೇ ವಯಸ್ಸಿನಲ್ಲಿಯೇ ಪಿ ಎಚ್ ಡಿ ಗಳಿಸಿದವರು .ಅನೇಕ ವರ್ಷ ವಿಶ್ವ ಸಂಸ್ಥೆಯಲ್ಲಿ ಸೇವೆ . ಒಳ್ಳೆಯ ಲೇಖಕ ,ಚಿಂತಕ ಮತ್ತು ಭಾಷಣ ಕಾರ . 

ಸಂಶೋಧನೆ ಮಾಡಿ ಪ್ರಸಿದ್ಧ ವಿಶ್ವ ವಿದ್ಯಾಲಯ ಗಳಿಂದ ಡಾಕ್ಟರೇಟ್ ಪಡೆದರೂ ಇವರುಗಳು ಡಾಕ್ಟರ್ ಎಂಬ ಉಪಾಧಿ ತಮ್ಮ ಹೆಸರಿನೊಡನೆ ಸೇರಿಸಿಕೊಳ್ಳುವುದು ಕಡಿಮೆ ಎಂಬುದನ್ನು ಗಮನಿಸಿ . 

ಇಬ್ಬರೂ ಬೇರೆ ಬೇರೆ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವವರು .ಆದರೂ ರಾಜಕೀಯವನ್ನು ಮೀರಿ ಹೇಗೆ ಒಂದು ಜ್ವಲಂತ ವಿಷಯವನ್ನು ಗಂಭೀರವಾಗಿ ಚರ್ಚಿಸ ಬಹುದು ಎಂದು ತೋರಿಸಿ ಕೊಟ್ಟಿದ್ದಾರೆ . ಇಲ್ಲಿ ಆವೇಶ ವಿಲ್ಲಾ ,ಆಕ್ರೋಶವಿಲ್ಲ ,ತಾನೇ ಎಲ್ಲಾ ತಿಳಿದವನು ಎಂಬ ಜಂಬವಿಲ್ಲ .ನಿಶಾಗಂಧಿ ಸಭಾಗೃಹದಲ್ಲಿ  ತುಂಬಿದ ಸಂಭಾಂಗಣ . ಚರ್ಚೆ ಇಂಗ್ಲಿಷ್ ಭಾಷೆಯಲ್ಲಿ ಇದೆ . . 

https://youtu.be/WU0WALEzDFk

ಪಯಣಿಗರ ಗಮನಕ್ಕೆ ,(ಯಾತ್ರಾಕ್ಕಾರ್ ಶ್ರದ್ಧಿಕ್ಕುಗ )



 

ತಿರುವನಂತಪುರ ಕ್ಕೆ ನಮ್ಮ ಮೋದನಲೇ ಭೇಟಿ ಆದುದರಿಂದ ನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುವ ಅಭಿಲಾಷೆ ಇದ್ದಿತು . ಇಂಟರ್ನೆಟ್ ಜಾಲಾಡಿದಾಗ ಕೇರಳ ರಾಜ್ಯ ಪ್ರವಾಸ ನಿಗಮದ ನಗರ ವೀಕ್ಷಣೆ ಬಸ್ ಇದೆ ಎಂದು ತಿಳಿದು ಅವರು ನಡೆಸುವ ಹೋಟೆಲ್ ಚೈತ್ರಂ ನಲ್ಲಿ ವಿಚಾರಿಸಲು ಕೋವಿಡ್ ಕಾಲದಲ್ಲಿ ಅದನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂತು . ಅಲ್ಲೇ ಎದುರುಗಡೆ ಟ್ಯಾಕ್ಸಿ ಯವರು ತಾವು ಕರೆದು ಕೊಂಡು ಹೋಗುತ್ತೇವೆ ಎಂದು ದುಂಬಾಲು ಬಿದ್ದರು . ಇಲ್ಲಿಯ ಟ್ಯಾಕ್ಸಿ ಮತ್ತು ಆಟೋ ಚಾಲಕರಲ್ಲಿ ತಮಿಳು ಭಾಷಿಗರು ಅಧಿಕ ಕಾಣ ಸಿಗುತ್ತಾರೆ . ಪ್ರವಾಸಿಗರನ್ನು ದೋಚುವ ಮನೋಭಾವದವರು ಕಡಿಮೆ . ಅವರ ಸೇವಾ ದರಗಳೂ ನಮ್ಮ ರಾಜ್ಯದ ನಗರಗಳಿಗೆ ಹೋಲಿಸಿದರೆ ಕಡಿಮೆ . 

ಎರಡನೇ ದಿನ ಮುಂಜಾನೆ ಆರುಗಂಟೆಗೆಲ್ಲಾ ಧೋತಿ ಸೀರೆ ಉಟ್ಟು ರೆಡಿ ಆಗಿ  ಹೋಟೆಲ್  ನಿಂದ  ಆಟೋ ಹಿಡಿದು ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ . ಇಲ್ಲಿ  ಡ್ರೆಸ್ ಕೋಡ್ ಇದೆ . ದಕ್ಷಿಣ ಮತ್ತು ಪೂರ್ವ ದಿಕ್ಕಿನಿಂದ ಪ್ರವೇಶ ಸಾಲುಗಳು ಇದ್ದು ತುಂಬಾ ಜನಸಂದಣಿ ಇರಲಿಲ್ಲ .ದೇವಳದ ಕೆರೆ ದೊಡ್ಡದಾಗಿ ಇದ್ದು ನೀರು ನಿರ್ಮಲವಾಗಿದೆ . ಎತ್ತರದ ಸ್ವಾಗತ ಗೋಪುರ ಗಾಂಭೀರ್ಯ ಮೆರಿದಿದೆ.ಒಳಗಡೆ ಪ್ರಾಂಗಣ ವಿಶಾಲವಾಗಿದ್ದು ಗಾಳಿ ಬೆಳಕು ಚೆನ್ನಾಗಿ ಇದೆ . ಗರ್ಭ ಗುಡಿಯ ಆವರಣ ಮಾತ್ರ ಇಕ್ಕಟ್ಟಾಗಿದ್ದು ಅಲ್ಲಿ ದೊಡ್ಡ ಸೇವೆ ಸಲ್ಲಿಸುವವರು ತುಂಬಿ ಸಾಮಾನ್ಯ ಭಕ್ತರ ನೂಕು ನುಗ್ಗಲು ಭಾಸ ವಾಯಿತು .

ನಮ್ಮನ್ನು ಒಯ್ದ ಆಟೋ ಚಾಲಕ ನಗರ ವೀಕ್ಷಣೆ ತಾನೇ ಮಾಡಿಸುವೆನು ,ಮೀಟರ್ ಚಾರ್ಜ್ ಕೊಡಿ ಎಂದು ವಿನಂತಿ ಮಾಡಿದ . ಒಳ್ಳೆಯವನಂತೆ ಕಂಡುದರಿಂದ ಒಪ್ಪಿ ಅವನ ರಿಕ್ಷಾ ದಲ್ಲಿಯೇ ಅರ್ಧ ದಿನದ  ನಗರ ಪ್ರದಕ್ಷಿಣೆ ಮಾಡಿದೆವು .ಮೊದಲಿಗೆ ಅಟ್ಟುಕಳ್ ಭಗವತಿ  ಕ್ಷೇತ್ರ .ಇದು ಬಹಳ ಪ್ರಸಿದ್ದ ಕ್ಷೇತ್ರ . ವೈದಿಕೇತರ ಆರಾಧನೆ ;ವಿಶಾಲವಾಗಿ,ನಿರ್ಮಲವಾಗಿಯೂ ಇದೆ .ಪೊಂಗಲ್ ದಿನ ಇಲ್ಲಿ ಮಹಿಳೆಯರು ಮೈಲು ಗಟ್ಟಲೆ ಸಾಲಿನಲ್ಲಿ ಕುಳಿತು ಸಾಮೂಹಿಕವಾಗಿ ಹಬ್ಬ ಅಚ್ಚರಿಸುವುದು ವಿಶೇಷ .ಇಲ್ಲಿ ಬೆಡಿ ಸೇವೆ ಎಂದು ಇದ್ದು ಅದಕ್ಕೆ ಕಾಣಿಕೆ ಹಾಕ ಬಹುದು .

ಮುಂದೆ ಶ್ರೀ ಪರಶುರಾಮ ಕ್ಷೇತ್ರ . ಇಲ್ಲಿ ಪಿತೃಗಳಿಗೆ ಸಾಮೂಹಿಕ ತರ್ಪಣ ಬಿಡುವ ವ್ಯವಸ್ಥೆ ಇದ್ದು ಪಿಂಡ ಅನ್ನ ತಿನ್ನಲು ಬರುವ ಪರಿವಾಳಗಳು ಗುಂಪು ಗುಂಪಾಗಿ ಕಾಣಿಸುತ್ತವೆ .

ಆಮೇಲೆ  ಪೂವಾರ್ ದ್ವೀಪದ ಬಳಿ ಹಿನ್ನೀರಿನಲ್ಲಿ  ಒಂದು ಗಂಟೆ ಹೊತ್ತು ಬೋಟಿಂಗ್ . ನೀರಿಗೆ ಬಾಗಿದ ಮತ್ತು ನೀರಿನಲ್ಲೇ ಬೇರೂರಿದ ವೃಕ್ಷ ರಾಜಿಗಳ ನಯನ ಮನೋಹರ ದೃಶ್ಯ ,ಅವುಗಳ ನೆರಳಿನ ತಂಪು ಆಪ್ಯಾಯಮಾನ. ಬೋಟ್ ನಡೆಸುವ ವ್ಯಕ್ತಿ ಗೆ ಸ್ಥಳ ದ ಇತಿಹಾಸ ಮತ್ತು ಭೂಗೋಳ ಜ್ನಾನ ಚೆನ್ನಾಗಿ ಇದ್ದು ,ಒಳ್ಳೆಯ ವೀಕ್ಷಕ ವಿವರಣೆ . ಹಿನ್ನೀರಿಗೆ ತಾಗಿ ಹಲವು ರಿಸಾರ್ಟ್ ಗಳು ಮತ್ತು ಸುಂದರ ಹೌಸ್ ಬೋಟ್ ಗಳು ಇವೆ .ಬೋಟ್ ಸಂಚಾರಕ್ಕೆ ಸಾವಿರದ ಐದು ನೂರು ರೂಪಾಯಿ ತೆತ್ತರೂ ಬೇಸರ ಆಗಲಿಲ್ಲ .

ಅಲ್ಲಿಂದ ಕೊವಲಮ್ ಬೀಚ್ ;ಇಲ್ಲಿ ನಮ್ಮೂರಿನ ಬೀಚ್ ನಂತೆಯೇ ಇದ್ದು ,ತಾಗಿ ಕೊಂಡು ಕೆಲವು ಐಷಾರಾಮಿ ಹೊಟೇಲ್ ಗಳು ಇವೆ .ಮರಳುವಾಗ ಪಕ್ಕದಲ್ಲಿಯೇ ಇರುವ ಕಸವು ಕೈಮಗ್ಗದ  ಬಟ್ಟೆ ಅಂಗಡಿ ಭೇಟಿ . ಶ್ರೀಮತಿಯವರು ಕೇರಳ ಸೀರೆ ಕೊಂಡು ಕೊಂಡರು. ಈ ಅಂಗಡಿ ಚೆನ್ನಾಗಿದೆ ಮತ್ತು ನಗರದ ಗಜಿಬಿಜಿಯಿಂದ ದೂರ ಇದೆ .

 ಮರಳಿ ಹೊಟೇಲ್ ಸೇರಿದಾಗ ಒಂದು ಗಂಟೆ , ಆಟೋ ಮೀಟರ್ ಒಂದು ಸಾವಿರ  ತೋರಿಸುತ್ತಿತ್ತು . ಅದಕ್ಕೆ ನಮ್ಮ ಪ್ರೀತಿಯ ಮೊತ್ತವೂ ಸೇರಿಸಿ ಕೊಟ್ಟೆವು . ಒಳ್ಳೆಯ ವ್ಯಕ್ತಿ .ಅವನ ಹೆಸರು ಅನಿಲ್ ಕುಮಾರ್ ,ಅರುವತ್ತರ ಆಸು ಪಾಸಿನವ, ಹೊರಗಿನಿಂದ ಬಂದವರಿಗೆ ಸೇವೆ ಒದಗಿಸುವ ಮನೋಭಾವ ಹೆಚ್ಚು ಇದ್ದಂತೆ ತೋರಿತು . ತಮಿಳ್  ಮಿಶ್ರಿತ ಮಲಯಾಳಂ ಮಾತು . ನಮ್ಮ ಸಂಚಾರದಲ್ಲಿ ಚೆನ್ನಾಗಿ ವಿವರಣೆ ನೀಡುವ ಗೈಡ್ ಕೂಡಾ .

ನಾವು ತಂಗಿದ್ದ ಹೊಟೇಲ್ ಆರ್ಯ ನಿವಾಸ್ ನಲ್ಲಿ ಪುಷ್ಕಳ ಕೇರಳ ಊಟ (ಆವಿಯಲ್ ,ಅಡೆ ಪಾಯಸಂ ,ರಸಂ ,ಸಾಂಬಾರ್ ,ಕುಚ್ಚಲು ಅಕ್ಕಿ ಅನ್ನ )ಮಾಡಿ ಮಧ್ಯಾಹ್ನ ಕನಕ ಕುನ್ನು ಅರಮನೆಗೆ ಮಾತೃ ಭೂಮಿ ಅಕ್ಷರ ಜಾತ್ರೆಗೆ .

 






Attukal Bhagavathy Temple Guide | Timings, Dress Code, Phone Number