ಬೆಂಬಲಿಗರು

ಶುಕ್ರವಾರ, ಏಪ್ರಿಲ್ 29, 2022

ಆಸ್ಪತ್ರೆಯ ಇತರ ಕೆಲವು ಉಪಯೋಗಗಳು

 ನಾನು ಹಿಂದೆ ಕೆಲಸ ಮಾಡಿದ  ಆಸ್ಪತ್ರೆಯಲ್ಲಿ ಆದ  ಅನುಭವ . ಆಸ್ಪತ್ರೆಯ ಮ್ಯಾನೇಜರ್ ಬಳಿ ಒಬ್ಬರು ಏನೋ ಗುಸು  ಗುಸು ಮಾತನಾಡುತ್ತಿದ್ದರು . ಅವರು ಹೋದ ಮೇಲೆ ಏನು ಕತೆ ? ಎಂದು ಮ್ಯಾನೇಜರ್ ಅವರಲ್ಲಿ ಕೇಳಿದೆ . ಸಾರ್  ಅವರ ಮಗಳಿಗೆ ವರಾನ್ವೇಷಣೆ ಮಾಡುತ್ತಿದ್ದಾರೆ . ಅವರಲ್ಲಿ ಹುಡುಗ ಹುಡುಗಿಯ ಮನೆಗೆ ಬಂದು ನೋಡುವ ಪದ್ದತಿ ಇಲ್ಲ .ಅದಕ್ಕೆ  ಆಸ್ಪತ್ರೆಯ ವೈಟಿಂಗ್ ರೂಮ್ ನಲ್ಲಿ ಕೂರಿಸಿ ವರನನ್ನು ಅಲ್ಲಿಗೆ ಕರೆಸ ಬಹುದಾ ಎಂದು ಕೇಳುತ್ತಿದ್ದರು .ಇಲ್ಲಿ ಹಲವು ಮಂದಿ ಹೀಗೆ ಬರುತ್ತಾರೆ ,ನಾವೂ ಒಳ್ಳೆಯ ಕಾರ್ಯ ಎಂದು ಸುಮ್ಮನೆ ಇರುತ್ತೇವೆ ' ಎಂದರು . 

ನನ್ನ ಅಜ್ಜ ಆಗಾಗ  ಪುತ್ತೂರಿನಲ್ಲಿ ಸುಂದರ ರಾಯರು ಮತ್ತು ಮಂಗಳೂರಿನಲ್ಲಿ ಡಾ ಚಾರಿ ಬಳಿಗೆ ಸುಮ್ಮನೇ ಅನಾರೋಗ್ಯ ಆರೋಪಿಸಿಕೊಂಡು ಹೋಗುತ್ತಿದ್ದರು . ಈ ಹಿರಿಯರೊಂದಿಗೆ ಮಾತನಾಡುವುದೇ  ಅಜ್ಜನಿಗೆ ಒಂದು ಟಾನಿಕ್ ಆಗಿತ್ತು . ಹಿಂದೆ  ದೊಡ್ಡ ಪಟ್ಟಣಗಳಲ್ಲಿ ರೋಗಿಗಳು ಅಡ್ಮಿಟ್ ಆದರೆ ಬಹಳ ಮಂದಿ ಅವರನ್ನು ನೋಡಿ ಕೊಂಡ ಹಾಗೂ ಆಯಿತು ಪೇಟೆ ನೋಡಿದ ಹಾಗೂ ಆಯಿತು ಎಂದು ಬರುತ್ತಿದ್ದರು .  ಈಗ ಅದಕ್ಕೆ ರೋಗಿಯ ಜತೆಗೆ ಇರುವವರ ಸಂಖ್ಯೆ ನಿರ್ಬಂಧಿಸಲು ಪಾಸ್ ವ್ಯವಸ್ಥೆ ಮಾಡಿದ್ದಾರೆ . 

ಇನ್ನು ಕೆಲವರು ಕೋರ್ಟ್ ಕೇಸ್ ಹಾಜರಾತಿ  ,ಕ್ರಿಮಿನಲ್ ಕೇಸ್ ಇರುವವರು ಬಂಧನ ತಪ್ಪಿಸಲು  ಇಲ್ಲದ ಮತ್ತು ಇರುವ ರೋಗಗಳ ನೆಪದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವುದು ನಿಮಗೆ ತಿಳಿದಿದೆ . 

ಒಂದು ಊರಿನಲ್ಲಿ ಹೋಟೆಲ್ ರೂಮ್ ಸಿಗಲಿಲ್ಲ ಎಂದು ಆಸ್ಪತ್ರೆಯಲ್ಲಿ ಬಂದು ಅಡ್ಮಿಟ್ ಆದುದನ್ನು  ಕಂಡಿದ್ದೇನೆ .ಎದೆ ನೋವು ಇತ್ಯಾದಿ ಹೇಳುವಾಗ ನೂರು ಶತ ಅನಾರೋಗ್ಯ ಇಲ್ಲ ಎಂದು ಹೇಳುವುದು ವೈದ್ಯರಿಗೂ ಕಷ್ಟೆ . 

ಹಲವು ಕಂಪನಿಗಳು ಆರೋಗ್ಯ ವಿಮೆ ಮಾಡಿದವರು ಒಳ ರೋಗಿಗಳಾಗಿ ಇದ್ದರೆ ಮಾತ್ರ ಚಿಕಿತ್ಸಾ ತಪಾಸಣಾ ಹಣ ಪಾವತಿ ಮಾಡುವುದು ಎಂಬ ಕಂಡಿಷನ್ ಇರುವ ಕಾರಣ ಅದಕ್ಕೆಂದೇ ಅಡ್ಮಿಟ್ ಆಗುವವರು ಇದ್ದಾರೆ.

ನಾನು ಪೆರಂಬೂರು ರೈಲ್ವೇ ಆಸ್ಪತ್ತ್ರೆಯಲ್ಲಿ ಇದ್ದಾಗ ನಡೆದ ಘಟನೆ .ರೈಲ್ವೇ ಮಂತ್ರಿ ತಮ್ಮ ಹೃದಯ ತಪಾಸಣೆಗೆ ಆಸ್ಪತ್ರೆಗೆ ಬರುವವರು ಇದ್ದರು.ಆಯಕಟ್ಟಿನ  ಸ್ಥಾನದಲ್ಲಿ ಇದ್ದು ಸಚಿವರಿಗೆ ಮೊದಲು ಆಪ್ತರಾಗಿದ್ದ ಓರ್ವ ಹಿರಿಯ ಅಧಿಕಾರಿ ನಮ್ಮ ಮುಖ್ಯಸ್ಥರಲ್ಲಿ ಅಂಗಲಾಚಿ ಐ ಸಿ ಯು ನಲ್ಲಿ ದಾಖಲಾತಿ ಪಡೆದರು . ಆಮೇಲೆ ಮಂತ್ರಿಗಳ ಪಿ ಎ ಮೂಲಕ ಅವರಿಗೂ ತಿಳಿಸಿರ ಬೇಕು .ಮಂತ್ರಿಗಳು ತಮ್ಮ ಪರೀಕ್ಷೆ ಎಲ್ಲಾ ಮುಗಿದ ಮೇಲೆ ಐ ಸಿ ಯು ಗೆ ಬಂದು ಇವರನ್ನೂ ವಿಚಾರಿಸಿದರು ಅನ್ನಿ .ಮಂತ್ರಿ ಅತ್ತ ಹೋದೊಡನೆ ಈ ಆಸಾಮಿಯೂ ಡಿಶ್ಚಾರ್ಜ್ ಮಾಡಿಸಿ ಕೊಂಡು ಹೋದರು.

ಇಯೋಸಿನೋಪಿಲ್ ಕಾಯಿಲೆ

                   Difference Between Neutrophils Eosinophils and Basophils | Structure,  Function, Comparison

 

ನಮ್ಮ ರಕ್ತದಲ್ಲಿ ಬಿಳಿ ರಕ್ತ ಕಣಗಳು ಎಂದು ಇವೆಯಷ್ಟೇ .ಅವುಗಳಲ್ಲಿ ಕೆಲವನ್ನು ಇಯೋಸಿನೋಫಿಲ್ ಎಂದು ಕರೆಯುತ್ತಾರೆ . ಬಿಳಿ ರಕ್ತ ಕಣಗಳ ೧ ರಿಂದ ೪ ಶತ ಇವುಗಳ ಸಂಖ್ಯೆ ಇರುತ್ತವೆ . 

ಇವುಗಳು ನಿಗದಿದ ಪ್ರಮಾಣಕ್ಕಿಂತ ಅಧಿಕ ಇದ್ದರೆ ಇಯೋಸಿನೋಫಿಲಿಯಾ ಎಂದು ಕರೆಯುತ್ತಾರೆ . ಇಯೋಸಿನೋಫಿಲಿಯಾ ಒಂದು ಕಾಯಿಲೆ ಅಲ್ಲ .ಬೇರೆ ಬೇರೆ ಕಾಯಿಲೆಗಳಲ್ಲಿ ಪ್ರಕಟವಾಗುವ ಒಂದು ಲಕ್ಷಣ ಅಷ್ಟೇ . 

ಇಯೋಸಿನೋಫಿಲ್  ಕಣಗಳು ಅಲರ್ಜಿ ಅಸ್ತಮಾ ಇರುವವರಲ್ಲಿ ಅಧಿಕ ಇರುತ್ತದೆ . ಇವರಲ್ಲಿ ಅವರ ಅಲರ್ಜಿ ಮತ್ತು ಅಸ್ತಮಾ ಕ್ಕೆ ಚಿಕಿತ್ಸೆ ಮಾಡುತ್ತೇವೆ . ಇಂತಹವರಲ್ಲಿ ಬಹಳ ಮಂದಿ ತಮ್ಮ ರಕ್ತ ಪರೀಕ್ಷೆ ಆಗಾಗ ಮಾಡಿಕೊಂಡು ಇಯೋಸಿನೋಫಿಲ್ ಜಾಸ್ತಿ ಇದೆಯಲ್ಲಾ ಎಂದು ಕೊರಗಿಕೊಂಡು ಅದಕ್ಕಾಗಿ  ಆಯುರ್ವೇದ ಹೋಮಿಯೋಪತಿ ಅಲೋಪಥಿ ಎಂದು ಬದಲಾಯಿಸಿ ಬದಲಾಯಿಸಿ ಚಿಕಿತ್ಸೆ ಮಾಡಿಸುತ್ತಿರುತ್ತಾರೆ . ಇದರಿಂದ ಪ್ರಯೋಜನ ಇಲ್ಲ . 

ಕರುಳ ಜಂತು ಗಳು ಕೂಡಾ ಈ ಕಣಗಳು ಜಾಸ್ತಿ ಆಗಲು ಕಾರಣ . ಟ್ರೋಪಿಕಲ್ ಇಯೋಸಿನೋಫಿಲಿಯಾ ಎಂಬ ಕಾಯಿಲೆ ಇದೆ .ಫೈಲೇರಿಯಾ ರೋಗಾಣು ಗಳಿಂದ ಉಂಟಾಗುವದು ಎಂದು ಪ್ರತೀತಿ .ಇಲ್ಲಿ ಇಯೋಸಿನೋಫಿಲ್ ೩೦ ಶೇಕಡಾ ಕ್ಕಿಂತಲೂ ಅಧಿಕ ಇರುವದು . ಇದು ಈಗ ಅಷ್ಟು ಸಾಮಾನ್ಯ ವಾಗಿ ಕಾಣಿಸಿ ಕೊಳ್ಳುತ್ತಿಲ್ಲ . ಇಲ್ಲಿ ಫೈಲೇರಿಯಾ ದ ಔಷಧಿ ಕೊಡುವರು . 

ಮೊನ್ನೆ ಒಬ್ಬ ಯುವಕ ಬಂದಿದ್ದರು .ಅವರ ಇಯೋಸಿನೋಫಿಲ್ ಪ್ರಮಾಣ ೭ ಶತ ಇದ್ದದ್ದು ಕಡಿಮೆ ಆಗಿಲ್ಲಾ ಎಂದು ಹಲವು ಕಡೆ ಹೋಗಿ ಬಂದಿದ್ದರು .ಅವರಿಗೆ ಯಾವಾಗಲೂ ನೆಗಡಿ ,ಅಕ್ಷಿ ಇತ್ಯಾದಿ ಇರುತ್ತದೆ ಎಂದರು .ನಾನು ಅವರಿಗೆ 'ನಿಮಗೆ ಅಲರ್ಜಿ ಇದೆ .ಅದರಿಂದ ಇಯೋಸಿನೋಫಿಲ್ ಸ್ವಲ್ಪ ಜಾಸ್ತಿ . ಅದಕ್ಕೆ ಅಲರ್ಜಿ ಚಿಕಿತ್ಸೆ ಮಾಡಿದರೆ ಸಾಕು ಎಂದು ಸಮಾಧಾನ ಮಾಡಿದೆ . 

ಬಾಲಂಗೋಚಿ : ಆಗಾಗ ಶೀತ ಆಗುವರ ಹೆಸರು ಕೇಳುತ್ತೇನೆ .ಅವರು ಮೀನಾಕ್ಷಿ ,ನಳಿನಾಕ್ಷಿ ಇತ್ಯಾದಿ ನಾಮಧೇಯ ಇದ್ದವರಾದರೆ ನಿಮ್ಮ ಹೆಸರಿನಲ್ಲಿಯೇ ಅಕ್ಷೀ ಇದೆ ಅದಕ್ಕೆ ನಿಮಗೆ ಅಕ್ಷೀ ಬರುವುದು ಎನ್ನುತ್ತೇನೆ

ಬುಧವಾರ, ಏಪ್ರಿಲ್ 27, 2022

ಡಾ ವೈ ಆರ್ ಮೋಹನ್

 

 

                                     


 ಮಲೆನಾಡಿನ ಒಂದು ಕುಗ್ರಾಮದಲ್ಲಿ ಜನಿಸಿ ಎಲ್ಲಾ ಅಡೆ ತೊಡೆಗಳನ್ನು ಎದುರಿಸಿ ತತ್ವ ಶಾಸ್ತ್ರದಲ್ಲಿ ಉನ್ನತ ಅಧ್ಯಯನ ಮಾಡಿ ಅಮೆರಿಕಾ ದೇಶದಲ್ಲಿ ಅಧ್ಯಾಪನ ಮಾಡಿದವರು ಡಾ ವೈ ಆರ್ ಮೋಹನ್ .ಅವರ ಆತ್ಮ ಚರಿತ್ರೆ "ನೆನೆವುದೆನ್ನ ಮನ ಮಲೆನಾಡ ಮೈತ್ರಿಯನು "ಮತ್ತು "ನೆನಪುಗಳು " ಎಂಬ ಎರಡು ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದು ,ಯು ಆರ್ ಅನಂತ ಮೂರ್ತಿ ಮುನ್ನುಡಿ ಬರೆದಿದ್ದಾರೆ .ಇತಿಹಾಸದ ಸಂಧಿ ಕಾಲದಲ್ಲಿ ಕಳೆದ ಅವರ ಬಾಲ್ಯ ಮತ್ತು ಯೌವನ ದಿನಗಳು ರೋಚಕವಾಗಿವೆ .ಅವರ ಮೈಸೂರು ದಿನಗಳು ,ಒಳ್ಳೆಯ ಅಧ್ಯಾಪಕರು ಮುಖ್ಯವಾಗಿ ಅವರ ಮೇಲೆ ಬಹಳ ಪ್ರಭಾವ ಬೀರಿದ ಪ್ರೊಫ್ .ಯಮುನಾಚಾರ್ಯ ಬಗ್ಗೆ ಆಪ್ತವಾದ ವಿವರಗಳು ಇವೆ . 

ಇವರು ಪಾರ್ಕಿನ್ಸನ್ ಕಾಯಿಲೆಗೆ ಗುರಿಯಾಗಿ ಬಹಳ ಕಷ್ಟ ಪಡಬೇಕಾಯಿತು .ಈ ಕಾಯಿಲೆಯ ಬಗ್ಗೆಯೇ ಒಂದು ಕೃತಿ ರಚಿಸಿದ್ದಾರೆ . 

 ತಮ್ಮ ಮಾಧ್ಯಮಿಕ ಶಾಲೆಯ ಪ್ರವಚನ ಬಗ್ಗೆ ಇವರು ವಿವರವಾಗಿ ಒಂದು ಅಧ್ಯಾಯ ಬರೆದಿದ್ದಾರೆ . 

ತಮ್ಮ ಕನ್ನಡ ಅಧ್ಯಾಪಕರು ಕೋಳೂರ ಕೊಡಗೂಸು ಪದ್ಯ ಕಲಿಸಿದ ಮೇಲೆ ಗಂಟೆ ಬಾರಿಸಿದಾಗ ಹುಡುಗರು ಜೈಲಿನಿಂದ ತಪ್ಪಿಸಿ ಕೊಳ್ಳುವವರಂತೆ  ಹೊರಗೆ ಧಾವಿಸಿ ನುಗ್ಗುತ್ತಿದ್ದರು . ಆ ಒಂದು ಪದ್ಯ ಕಲಿಸಲು ಅವರಿಗೆ ಎಷ್ಟೋ ಕಾಲ ಹಿಡಿಯಿತು .ಅದನ್ನು ಮುಗಿಸುವ ಹೊತ್ತಿಗೆ ನಮ್ಮ ಕನ್ನಡ ಆಸಕ್ತಿ ಕಮರಿ ಹೋಗಿತ್ತು .ಕತೆಯಲ್ಲಿ  ಕೊಡಗೂಸು ಮಲತಾಯಿಯ ಶಿಕ್ಷೆಗೆ ಹೆದರಿ ಶಿವನನ್ನು ಪ್ರಾರ್ಥಿಸುತ್ತಾ ಪ್ರಾಣ ಬಿಡುತ್ತಾಳೆ .ಆಗ ಶಿವ ಪ್ರತ್ಯಕ್ಷನಾಗಿ ಎಲ್ಲಾ ಮಂಗಳ ಕರವಾಗಿ ಮುಕ್ತಾಯವಾಗುತ್ತದೆ .ನನ್ನ ಸಹಪಾಠಿ ಶಿವ ಮೂರ್ತಿ ಕೊಡಗೂಸು ಪ್ರಾಣ ಕಳೆದು ಕೊಳ್ಳಲಿಲ್ಲ .ನಮ್ಮ ಮೇಷ್ಟ್ರು ಕೊಡಗೂಸನ್ನು ಕೊಂದು ಹಾಕಿದರು ಎಂದ .ನನಗನಿಸಿದ್ದು ಈ ಮೇಷ್ಟ್ರು ಕೊಡಗೂಸಿನ ಜತೆ ಕನ್ನಡವನ್ನೂ ಕೊಂದು ಹಾಕಿದರು ಎಂದು . 

ಕನ್ನಡ ಮೇಷ್ಟ್ರ ಕತೆ ಈ ರೀತಿ ಆದರೆ ಇಂಗ್ಲಿಷ್ ಮೇಷ್ಟರದು ಇನ್ನೊಂದು ವೈಪರೀತ್ಯದ ಪರಮಾವಧಿ ಆಗಿತ್ತು .

ಅವರ ಪಾಠ ಕ್ರಮದ ಉದಾಹರಣೆ ಹೀಗಿತ್ತು

 I say silence ,silence. you see this is class room ;not fish market,i say,do you understand?

'You see ,English is very important.In today's society .you see .If you don't know English ,your bean doesn't get baked(ನಿಮ್ಮ ಬೇಳೆ ಬೇಯದು) ,you understand?  .

You see ,English is very very difficult !You see ,don't think learning English is as easy as peeling plantain and putting in mouth I say'(ಬಾಳೆಹಣ್ಣು ಸುಲಿದು ತಿಂದಂತೆ ಅಲ್ಲ )

ಇನ್ನೂ ಕೆಲವು ಸಾಲುಗಳು 

I say you are a village simpleton!You see you listen to Ramayana all night and in the morning ask what is Rama's relation to Sita!

I see that's why you look like one who took castor oil (ಹರಳೆಣ್ಣೆ ಕುಡಿದವನ ಮುಖ ).

Teacher:I say ,I simply asked whether you saw anything .You see ,if someone shouts pumpkin-thief ,you touch and feel your shoulders!(ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದನಂತೆ )

Now say what is the plural form of sheep?Student:Sheeps saar !

Teacher :That includes you also !Useless fellow.I feel like warming your palm.(ಕೈ ಬಿಸಿ ಮಾಡಬೇಕು )

ಮಕ್ಕಳಲ್ಲಿ ಕುತೂಹಲ ಹುಟ್ಟಿಸಿ ಚೆನ್ನಾಗಿ ಪಾಠ ಮಾಡುತ್ತಿದ್ದವರು ಭೂಗೋಳ ಅಧ್ಯಾಪಕರು ಮಾತ್ರ ಎಂದು ನೆನಪಿಸಿ ಕೊಳ್ಳುತ್ತಾರೆ

ಮಂಗಳವಾರ, ಏಪ್ರಿಲ್ 26, 2022


 ಜಿ ಪಿ ರಾಜರತ್ನಂ ಅವರ ದಾರಿಯಲ್ಲಿಯೇ ನಡೆದ ಕನ್ನಡದ ಪರಿಚಾರಕ ಚಿ ಶ್ರೀನಿವಾಸ ರಾಜು ಅವರ ಪತ್ನಿ ಸರಸ್ವತಿ ಅವರ ಆತ್ಮ ಕಥನ ಎಂ ಆರ್ ಭಗವತಿ ಅವರ ನಿರೂಪಣೆ . ಯಾವ ಸೋಗೂ ಬೀಗೂ ಇಲ್ಲದ ಯಥಾ ಪಸ್ತುತಿ .ಬೆನ್ನುಡಿಯಲ್ಲಿ ಶ್ರೀ ಬಿ ಪಿ ಬಸವರಾಜು ಹೇಳಿರುವಂತೆ ಪ್ರಾಮಾಣಿಕತೆಯೇ ಈ ಕೃತಿಯ ಜೀವಾಳ . ಎಂ ಆರ್ ಭಗವತಿ ಆರಂಭದಲ್ಲಿ ಸರಸ್ವತಿ ಶ್ರೀನಿವಾಸರಾಜು ಎಂಬ ತುಂಬು ಜೀವನಕ್ಕೆ ಜೀವ ನೀಡಿದ ಅವರ ನೆನಪುಗಳು ನಿಮ್ಮ ಜೀವನನದ ಮತ್ತಾವುದೋ ಬಾಲ್ಯದ ನೆನಪಿಗೆ ಮಿಳಿತವಾದರೆ ತನ್ನ ಶ್ರಮ ಸಾರ್ಥಕ ಎಂದು ಕೊಂಡದ್ದು ಕೃತಿ ಓದಿದ ಬಳಿಕ ಸರಿ ಎಂಬ ಭಾವನೆ ಬರುತ್ತದೆ .

ಶ್ರೀನಿವಾಸ ರಾಜು ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ ಸ್ಥಾಪಿಸಿ ,ಹಲವು ಚಟುವಟಿಕೆಗಳ ರೂವಾರಿ ,ಇವರು ಪ್ರಕಟಿಸಿದ ಮೌಲಿಕ ಕೃತಿಗಳೆಷ್ಟು ,ಬೆಳಕಿಗೆ ತಂದ ಲೇಖಕರು ಎಷ್ಟು . ಇವರಿಗೆ ಇಬ್ಬರು ಸರಸ್ವತಿಯರು . ಮದುವೆ ಸಮಯದಲ್ಲಿ ರಾಜರತ್ನಂ  ಈ ಸರಸ್ವತಿ ಬಂದಾಗ ಆ ಸರಸ್ವತಿಯನ್ನು ಮರೆಯ ಬೇಡ ಎಂದರಂತೆ .

ಶ್ರೀನಿವಾಸ ರಾಜು ಜತೆ ಮದುವೆಯ ಮುಂಚಿನ ದಿನಗಳ ನೆನಪು ಮೊದಲ ಭಾಗದಲ್ಲಿ ಇದ್ದು ,ಹಳೆಯ ಬೆಂಗಳೂರಿನ ಚಿತ್ರಣ ಇದೆ . ಮುಂದೆ ವಿವಾಹಾನಂತರ  ರಾಜು ಮತ್ತು ತಮ್ಮ ಜೀವನದ ಬಗ್ಗೆ ವಿವರಣೆ . ರಾಜು ಎಲ್ಲರೊಡನೆ ಮೆದುವಾಗಿ ಇದ್ದು ಕೋಪವನ್ನು ಮಾತ್ರ ತನ್ನಲ್ಲಿ ತೋರಿಸಿ ಕೊಳ್ಳುತ್ತಿದ್ದುದು ,ಸ್ಕೂಟರ್ ನಲ್ಲಿ ಕುಳಿತಾಗ ಮೈ ಮೇಲೆ ಕೈಯಿಟ್ಟು ಬಹಿರಂಗ ಪ್ರೀತಿ ಪ್ರದರ್ಶನ ಇಷ್ಟ ಪಡದಿದ್ದುದು ಮತ್ತು ಹಣ ಕಾಸಿನ ವಿಚಾರದಲ್ಲಿ ಭಾರೀ ಕಟ್ಟು ನಿಟ್ಟಾಗಿ ಇದ್ದುದನ್ನು ಹಾಗೇ ಹೇಳಿ ಕೊಂಡಿದ್ದಾರೆ . ಮದುವೆಯ ನಂತರ ಗಂಡನ ಒತ್ತಾಸೆಯಿಂದಲೇ ತಾವು ವಿದ್ಯಾಭ್ಯಾಸ ಮುಂದು ವರಿಸುವಂತೆ  ಆಯಿತು ಎಂಬ ಕೃತಜ್ನತಾ ಭಾವ ಉದ್ದಕ್ಕೂ ಇದೆ . ಅವರ ಗೆಳೆಯರ ಬಳಗ . ಒಂದು ಬಾರಿ ಸ್ಕೂಟರ್ ನಲ್ಲಿ  ಪತ್ನಿಯನ್ನು ಕೂರಿಸಿ ಕೊಂಡು ಹೋಗುತ್ತಿದ್ದವರು ದಾರಿಯಲ್ಲಿ ಶ್ರೀ ಎಚ್ ಎಸ್ ರಾಘವೇಂದ್ರ ರಾಯರನ್ನು ಕಂಡು ಹೆಂಡತಿಗೆ ನೀನು ಬಸ್ಸಿನಲ್ಲಿ ಹೋಗು ಎಂದು ಮಿತ್ರನನ್ನು ಏರಿಸಿ ಕೊಂಡ ವಿಚಾರ ಹೇಳುತ್ತಾ ಅವರಿಗೆ  ತಮ್ಮ ಸ್ಕೂಟರ್ ,ಮಿತ್ರರು ಆಮೇಲೆ ನಾನು ಎಂದು ಹೇಳುತ್ತಾರೆ . 

ಚಿನ್ನದ ಸೀರೆ ಕೊಳ್ಳಲು ತನ್ನ ಜತೆ ಬಾರದಿದ್ದರೂ ಕನ್ನಡ ಸಂಘದ ಕೆಲಸಗಳಿಗೆ ಅಡವು ಇಡಲು ತನ್ನ ಚಿನ್ನವೇ ಬೇಕಾಗಿತ್ತು ಎನ್ನುತ್ತಾರೆ .  ರಾಜು ಎತ್ತರದ ವ್ಯಕ್ತಿ .ಸರಸ್ವತಿ ಅವರು ಕುಳ್ಳಿ . ಅಮಿತಾಭ್ ಜಯಾ ತರಹ .ರಾಜು ತೀರಿಕೊಂಡ  ಮೇಲೆ  ಸಿಕ್ಕ ಪತ್ನಿಯ ಬಗ್ಗೆ ಬರೆದ ಕೆಲವು ಸಾಲುಗಳು ,

  ಗಿಡ್ಡ ಹೆಂಡತಿ ಲೇಸು 

"ಗಿಡ್ಡ ಹೆಂಡತಿಯ ಗಂಡ ನಾನು 

ಸಾವಿರ ಕಣ್ಣಿಗೆ ಅಚ್ಚರಿ ನಾನು 

ಪದವಿ ಪರೀಕ್ಷೆ ಕೈ ಹತ್ತಲಿಲ್ಲ 

ಟಸ್ ಪುಸ್ ಇಂಗ್ಲಿಷ್ ಬಾಯೊಳಗಿಲ್ಲ 

ಮಾರುದ್ದ ಜಡೆಯ ನಿಲುವಿನ ಹೆಣ್ಣಲ್ಲ

ಬಯೋ ಸ್ಕೋಪ್ ಬೆಡಗಿನ ಸುಂದರಿಯಲ್ಲ 

ಆದರೂ ಇವಳೇ ನನ್ನ ಅಚ್ಚು ಮೆಚ್ಚಿನ ಬೆಲ್ಲ ದಚ್ಚು .

ಅಂದಿನ ಜೀವನ ಬಹಳ ಕಷ್ಟಕರ ಎನಿಸಿದರೂ ,ಈಗ ವಿದ್ಯಾವಂತ ಮಕ್ಕಳು ಇದ್ದಾರೆ ,ಸಾಕಷ್ಟು ಸೌಲಭ್ಯಗಳೂ ಇವೆ .ಪೆನ್ಷನ್ ಬರುತ್ತೆ .ಸ್ವಂತ ಮನೆ ಇದೆ .ಆದರೂ ಸುಖ ಇಲ್ಲ ಎನಿಸುತ್ತದೆ ಎಂದು ಬೇಸರಿಸುತ್ತಾರೆ .

ಶ್ರೀನಿವಾಸರಾಜು ಅವರ ನೆನಪುಗಳು ದಿನ ನಿತ್ಯ ನನ್ನ ಬದುಕಿನಲ್ಲಿ ಪ್ರಿಂಟ್ ಆಗುತ್ತಲೇ ಇವೆ !!ಮೂಲ ಪ್ರತಿ ಹಿಂತಿರುಗುವುದು ಯಾವಾಗ ?ಎಂಬ ಪ್ರಶ್ನೆಯೊಡನೆ ಅಂತ್ಯ ಗೊಳಿಸುತ್ತಾರೆ .

ಸರಾಗವಾಗಿ ಓದಿಸಿ ಕೊಂಡು ಹೋಗುತ್ತದೆ

ಬಾಲಂಗೋಚಿ : ನಿರೂಪಕಿಯವರ ಆಶಯ ಸಾಕಾರ ವಾಗಿದೆ . ನನ್ನ ವೈವಾಹಿಕ ಜೀವನದಲ್ಲಿ ಹಲವು ಸಾಮ್ಯತೆಗಳು ಇವೆ . (ಶ್ರೀನಿವಾಸ ರಾಜು ಮೇರು ಸಾಹಿತ್ಯ ಸೇವೆ ಯನ್ನು ಬಿಟ್ಟು ಮನೆಯಲ್ಲಿನನಡವಳಿಕೆ ಯಲ್ಲಿ ಮಾತ್ರ ) .ಇದನ್ನು ಓದಿ ನನ್ನ ಮನೆಯವರೂ ನೀವೆಲ್ಲಾ ಗಂಡಸರು ಹೀಗೆ ಎನ್ನುವುದು ಬೇಡ ಎಂದು ಪುಸ್ತಕವನ್ನು ಅಡಗಿಸಿ ಇಟ್ಟಿದ್ದೇನೆ.

ಸೋಮವಾರ, ಏಪ್ರಿಲ್ 25, 2022

ಅದ್ವಿತೀಯ

                        



ನರೇಂದ್ರ ರೈ ದೇರ್ಲ ಅವರ ಅದ್ವಿತೀಯ ಪುಸ್ತಕ ಓದಿ ಮುಗಿಸಿದೆ .ನನಗೆ ನಾಚಿಕೆ ಮತ್ತು ಸಂತೋಷ ಏಕ ಕಾಲಕ್ಕೆ ಆಯಿತು .ಪಕ್ಕದ ಕೆದಿಲ ಮತ್ತು ಪದ್ಮುಂಜದ ಈ ಸಾಧಕರ ಬಗ್ಗೆ ಇದುವರೆಗೆ ತಿಳಿಯದಿದ್ದ ಬಗ್ಗೆ ನಾಚಿಕೆ ,ಸಂತೋಷ ಈಗಲೂ ನಮ್ಮ ನಡುವೆ ಇಂತಹವರು ಇದ್ದಾರಲ್ಲ ಎಂದು . ದೇರ್ಲರು ಇಂತಹ ಅನೇಕ ತೆರೆ ಮರೆಯ ಸಾಧಕರನ್ನು ಸಮಾಜಕ್ಕೆ ಪರಿಚಯ ಮಾಡುವ ಕೆಲಸ ಮಾಡಿದ್ದಾರೆ . 

ಕಡು ಬಡ ತನದಲ್ಲಿ ಹುಟ್ಟಿ ಬೆಳೆದು ,ಧರ್ಮಸ್ಥಳ ರತ್ನ ಮಾನಸದಲ್ಲಿ ಒಂದಾದ ಈ ಜೋಡಿ ಮುಂದೆ ಜತೆ ಜತೆಯಾಗಿಯೇ ಇದ್ದು ನಿಜ ಅರ್ಥದಲ್ಲಿ ತಮ್ಮ ಜೀವನವನ್ನು ಸಮಾಜಕ್ಕೆ ಮುಡಿಪಾಗಿ ಇಟ್ಟವರು . ಕುಗ್ರಾಮ ವೆಂದು ಗುರುತಿಸಲ್ಪಟ್ಟ ದಿಡುಪೆಯಲ್ಲಿ ಇವರ ಅಪ್ಪ್ರೆಂಟಿಸ್ ಶಿಪ್ .ಆಮೇಲೆ ರೋಶಿನಿ ನಿಲಯದಿಂದ ಸಮಾಜ ಸೇವೆಯಲ್ಲಿ ಪದವಿ .ಈ ಸಂಸ್ಥೆಯಲ್ಲಿ ಪದವಿ ಪಡೆದ ನನ್ನ ಪರಿಚಯದ ಹಲವರು ದೇಶದ ಸರಕಾರಿ ಮತ್ತು ಖಾಸಗಿ ಸಂಸ್ಥೆ ಗಳಲ್ಲಿ ಉನ್ನತ ಹುದ್ದೆಗೆ ತಲುಪಿದವರು ಇದ್ದಾರೆ . 

ಆದರೆ ಇವರು ಆಯ್ದು ಕೊಂಡದ್ದು ಕೊಳ್ಳೇಗಾಲ ಪರಿಸರದ ಸೋಲಿಗರ ನಡುವಿನ ಬದುಕು . ಹಲ ವರ್ಷ ಅಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಮರಳಿ ಮಣ್ಣಿಗೆ . ಇಲ್ಲಿ ಅವರು ಮಾಡದ ಸಮಾಜ ಮುಖಿ ಕೆಲಸಗಳು ಇಲ್ಲ . ವಯಸ್ಕರ ಶಿಕ್ಷಣ ,ಪಂಚಾಯತ್ ರಾಜ್ ಬಲ ವರ್ಧನೆ ,ಸ್ವಚ್ಛತಾ ಅಭಿಯಾನ ,ಮದ್ಯ ವರ್ಜನ ಪ್ರಚಾರ ಒಂದೇ ಎರಡೇ . ಇವರಿಗೆ ಇವರ ಕಾರ್ಯದಲ್ಲಿ ಹಲವು ಪ್ರಾಮಾಣಿಕ ಅಧಿಕಾರಿಗಳ ಸಾಥ್ . 

ಇಬ್ಬರೂ ಅವಿವಾಹಿತರಾಗಿಯೇ ಉಳಿದು ,೨೪ x ೭ ಸಾರ್ವಜನಿಕ ಕಾರ್ಯ ಗಳಲ್ಲಿಯೇ ಮಗ್ನ . ಇವರ ಸೇವೆಗೆ ಜಾತಿ ಮತ ಪಂಥಗಳ ಬೇಧ ಇಲ್ಲ .ಯಾರು ಅಶಕ್ತರು ಇದ್ದಾರೆ ಅವರಿಗೆ ಇವರು ಊರುಗೋಲು ಮತ್ತು ಅವರನ್ನು ಮುಂದೆ ತಮ್ಮ ಕಾಲ ಮೇಲೆ ನಿಲ್ಲಿಸುವ ಪ್ರಯತ್ನ . 

ನಾವೆಲ್ಲಾ ಜೀವನದಲ್ಲಿ ಒಂದಲ್ಲ ಒಂದು ದಿನ ಇಂತಹ ಕೆಲಸ ಮಾಡ ಬೇಕು ಎಂದು ಕನಸು ಕಂಡಿರುತ್ತೇವೆ .ಆದರೆ ಇವರು ಕನಸಿನಲಿ ಕಂಡುದನ್ನು ಹಾಗೇ ಬಿಡದೆ ಬೆನ್ನು ಹತ್ತಿದವರು . ಇಂತವರ ಸಂಖ್ಯೆ ಸಾವಿರವಾಗಲಿ .  

ಇಂತಹ ಕೃತಿಗಳನ್ನು ನಾವು ಕೊಂಡು ಓದಿ ಪ್ರೋತ್ಸಾಹಿಸ ಬೇಕು . ಭಾವನಾತ್ಮಕ ಮತ್ತು ಕಪೋಲ ಕಲ್ಪಿತ ವಿಚಾರಗಳು ಮತ್ತು ಉತ್ಪ್ರೇಕ್ಷೆ ಇಲ್ಲದ ಸರಳ ಗಾಂಧಿ ಮಾರ್ಗದ ಕತೆ.

ಭಾನುವಾರ, ಏಪ್ರಿಲ್ 24, 2022

ಕೆಲ್ಲು ಗೆಲ್ಲುವುದು ಕಷ್ಟ

 ಕೆಲ್ಲು ಗೆಲ್ಲುವುದು ಕಷ್ಟ

Composite image. Onychomycosis due to Trichophyton rubrum, right and left great toe. Tinea unguium. 

ನಮ್ಮ ಹಳ್ಳಿಗಳಲ್ಲಿ ವಾಸಿಸುವರು ಮತ್ತು ಉಗುರಿನ ಫಂಗಸ್ ಸೋಂಕು ಅನ್ಯೋನ್ಯವಾಗಿ ಪ್ರಾಕಿನಿಂದ ಇದ್ದಾರೆ . ಬರಿಗಾಲಿನಲ್ಲಿ ತೋಟಕ್ಕೆ ,ಗುಡ್ಡೆಗೆ ಮತ್ತು ಶಾಲೆಗೆ  ನಡೆದು ಹೋಗುವಾಗ ಈ  ಶಿಲೀಂದ್ರ (ಫಂಗಸ್ )ಕಾಲಿನ ಉಗುರಿಗೆ ಪ್ರವೇಶಿಸಿ ಖಾಯಂ ನಿವಾಸಿಯಾಗಿ ಕೆಲ ಸಮಯ ನಂತರ ಅಕ್ರಮ ಸಕ್ರಮ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತದೆ . ಅದಕ್ಕೆ ಆಂಗ್ಲ ಭಾಷೆಯಲ್ಲಿ ಓನಿಕೋ (ಉಗುರಿನ )ಮೈಕೋಸಿಸ್ (ಶಿಲೀಂದ್ರ )ಸೋಂಕು ಎಂಬ ದೊಡ್ಡ ಹೆಸರು ಇದೆ .ನಾವು ಇದನ್ನು ಒಂದು ಕಾಯಿಲೆ ಎಂದು ಯಾವತ್ತೂ ಪರಿಗಣಿಸಿದ್ದೇ ಇಲ್ಲ .ನೆಲದಲ್ಲಿ ಕೆಲಸ ಮಾಡುವವರ ಕೈಯ ಉಗುರಿನಲ್ಲಿಯೂ ಇವು ಕಂಡು ಬರುತ್ತವೆ .

.ನೋಡಲು ಸ್ವಲ್ಪ ಚೆನ್ನಾಗಿರದು ಬಿಟ್ಟರೆ ಇದು ಯಾವ ತೊಂದರೆಯನ್ನೂ ಸಾಮಾನ್ಯವಾಗಿ ಕೊಡದು . ಈಗ ಎಲ್ಲರಿಗೂ ಸೌಂದರ್ಯ ಪ್ರಜ್ಞೆ ಬಂದ ಮೇಲೆ ಇದು ದೊಡ್ಡ ಕಾಯಿಲೆಯಾಗಿ ಪರಿಗಣಿಸಲ್ಪಟ್ಟಿದೆ .ಇದರ ಪರಿಹಾರಕ್ಕೆ ಔಷಧಿಗಳು ಬಂದಿದ್ದರೂ ಹಲವು ವಾರಗಳ ಉಪಚಾರ ಬೇಕು ,ಅಲ್ಲದೆ ನೆಲ ಮತ್ತು ಪರಿಸರದಿಂದ ಪುನಃ ಬರುವ ಸಾಧ್ಯತೆ ಕೂಡಾ ಸಾಮಾನ್ಯ .

ದೇಹದ ಪ್ರತಿರೋಧ ಶಕ್ತಿ ಕುಗ್ಗಿದವರಲ್ಲಿ ಅಪರೂಪಕ್ಕೆ ಈ ಶಿಲೀಂಧ್ರಗಳು ತಮ್ಮ ಪ್ರಚ್ಛನ್ನ ರೋಗ ಶಕ್ತಿ  ಪ್ರಕಟಿಸ ಬಹುದು . ಹಾನಿ ಗೊಂಡ ಉಗುರಿನ ಸುತ್ತು  ಬ್ಯಾಕ್ಟೀರಿಯಾ ಗಳು ಧಾಳಿ ಮಾಡಿ ನೋವು ಇರುವ ಉಗುರು ಸುತ್ತು ಉಂಟು ಮಾಡ ಬಹುದು . 

ಬಾಲಂಗೋಚಿ:  ಈಗ ಸೌಂದರ್ಯದ  ವ್ಯಾಖ್ಯೆಯನ್ನು  ಸೌಂದರ್ಯ ವರ್ಧಕ ತಯಾರಿಕಾ ಬಹು ರಾಷ್ಟ್ರೀಯ ಕಂಪನಿ ಗಳು ಮಾಡಿ ತಮ್ಮ ಜಾಹೀರಾತುಗಳ  ಮೂಲಕ  ಮನೆ ಮನೆಗಳನ್ನು ಹೊಕ್ಕು ಅವು ಹೇಳಿದ್ದೇ ಸತ್ಯ ಆಗಿದೆ . ಒಂದೊಂದು ಅಂಗಕ್ಕೆ ಒಂದೊಂದು ರಾಸಾಯನಿಕ ಲೇಪ . ಅದೇ ರೀತಿ ಉಡುಗೆ ತೊಡುಗೆ ಕೂಡಾ . ನಾನು ಹಿಂದೆ ಬರೆದಂತೆ , ಮಳೆಗೆ ಒದ್ದೆಯಾದ ನಮ್ಮ ತಲೆಯನ್ನು ಸೆರಗಿನಿಂದ  ಒರಸುವ ಅಮ್ಮನ ಮೈ ಯಿಂದ  ಅಕ್ಕಿ ಹಿಟ್ಟು ,ಬೆವರು ,ಹಟ್ಟಿಯಿಂದ ಬಂದ ಗಂಜಳ ಮತ್ತು ಮುಡಿದ ಹೂವುಗಳ ಮಿಶ್ರಿತ ಪರಿಮಳ ನಮಗೆ ಅಪ್ಯಾಯ ಮಾನವಾಗಿತ್ತು .  ಮೈ ಮುರಿದು ದುಡಿಯುವವರ  ಕೈಗಳು ದಪ್ಪ (ದಡ್ಡು)ವಾಗಿರುತ್ತವೆ (vs ಕೋಮಲ ), ಉಗುರುಗಳಲ್ಲಿ ಕೆಲ್ಲು  ಇರುತ್ತದೆ ,ಬೆವರ ವಾಸನೆ ಇರುತ್ತದೆ ,ಆದರೆ ಮನಸು ಕೋಮಲ ಇರಬಹುದು .   ಸೌಂದರ್ಯ ಕಂಪನಿ ಗಳು  ಹೇಳುವ   ಈಗಿನ ವ್ಯಾಖ್ಯೆಯನ್ನೇ ಒಪ್ಪಿದರೂ ಒಬ್ಬರ ಸೌಂದರ್ಯ ಕಾಪಾಡಲು ಹಲವರು ಅದನ್ನು ತ್ಯಜಿಸ ಬೇಕಾಗುವುದು ಎಂಬುದನ್ನು ಅರಿಯಬೇಕು .

 

ಶನಿವಾರ, ಏಪ್ರಿಲ್ 23, 2022

ಮಾತ್ರಾ ಗಣ

 ಮಾತ್ರಾ ಗಣ (ಕ )ಈಗ ಹಲವರು ಮಧ್ಯ ವಯಸ್ಸು ಸಮೀಪಿಸಿದ ಕೂಡಲೇ  ಅನಾರೋಗ್ಯಕ್ಕೆ ತುತ್ತಾಗಿ  ದಿನ ನಿತ್ಯ ಹಲವು ಔಷಧಿಗಳನ್ನು ಸೇವಿಸ ಬೇಕಾಗುತ್ತದೆ . ನನ್ನ ಒಬ್ಬ ಮಿತ್ರ ಸಕ್ಕರೆ ಕಾಯಿಲೆಗೆ ಎರಡು ತರದ ಮಾತ್ರೆ ದಿನಕ್ಕೆ ಎರಡು ಬಾರಿ ,ಬಿ ಪಿ ಗೆ ಎರಡು ಮಾತ್ರೆ ದಿನಕ್ಕೆ ಒಂದು ಬಾರಿ ,ಹೃದ್ರೋಗ ತಡೆಗಟ್ಟಲು ಎರಡು ಮಾತ್ರೆ ,ಸಕ್ಕರೆ ಕಾಯಿಲೆ ಜನ್ಯ ನರ ನೋವಿಗೆ ಒಂದು , ನಿತ್ರಾಣಕ್ಕೆ ಒಂದು ಬಿ ಕಾಂಪ್ಲೆಕ್ಸ್ ,ಪ್ರೊಸ್ಟ್ರೇಟ್ ತೊಂದರೆಗೆ ಒಂದು ಮತ್ತು ಇವುಗಳಿಗೆಲ್ಲಾ ಕಳಶ ವಿಟ್ಟಂತೆ ಒಂದು ಗ್ಯಾಸ್ಟ್ರಿಕ್ ಮಾತ್ರೆ ಇದೆ .ಇವನ  ಪ್ರಿಸ್ಕ್ರಿಪ್ಷನ್ ಕುಡುಮಿ ವಿದ್ಯಾರ್ಥಿಯ ಪರೀಕ್ಷಾ ಉತ್ತರ ಪತ್ರಿಕೆಯಂತೆ ಒಂದು ಪುಟ ಮೀರಿ ಅಡಿಷನಲ್ ಶೀಟ್ ಗೆ ವಿಸ್ತರಿಸಿದೆ .  

ನಾನು ಇಂತಹ ಪ್ರಿಸ್ಕ್ರ್ರಿಪ್ಷನ್ ಗಳನ್ನು ನೋಡಿದಾಗ ಹೇಗಾದರೂ ಇವುಗಳನ್ನು ನೆನಪು ಇಟ್ಟು ಕೊಂಡು ತಿನ್ನುವರು ಎಂದು ಚಿಂತಿಸುತ್ತೇನೆ . ಇಷ್ಟು ಮದ್ದುಗಳು ಸಾಲದೆಂದು ಜಾಹಿರಾತು ಗಳಲ್ಲಿ ಬರುವ (ಹೆಸರು ಬೇಡ )ಹಲವು ಔಷಧಿಗಳು ಅನಧಿಕೃತವಾಗಿ  ಸೇರಿಕೊಂಡಿರುತ್ತವೆ . 

ರೋಗಗಳ ಉಪಚಾರದಲ್ಲಿ ಬಹಳ ಕಟ್ಟು ನಿಟ್ಟು ಬೇಕಾದುದು ಅಪಸ್ಮಾರದ ಚಿಕಿತ್ಸೆಯಲ್ಲಿ .ಇಲ್ಲಿ ಒಂದು ಹೊತ್ತಿನ ಮಾತ್ರೆ ತಪ್ಪಿದರೂ ಫಿಟ್ಸ್ ಬರ ಬಹುದು ಅಲ್ಲದೆ ಫಿಟ್ಸ್ ಬರುವಾಗ ನೀರು ,ಬೆಂಕಿ ಯ ಬಳಿ ಇದ್ದರೆ ಅನಾಹುತ ಆದೀತು . ಹೆಚ್ಚಾಗಿ ಅಪಸ್ಮಾರ ರೋಗಿಗಳು ಚಿಕಿತ್ಸೆಯಲ್ಲಿ ಇರುವಾಗ ಫಿಟ್ಸ್ ಬರುವುದು ಮಾತ್ರೆ ತೆಗೆದು ಕೊಳ್ಳುವುದು ಮರೆತು . ತಾನು ತಿಂದು ಆಗಿದೆ ಎಂದು ಅವರು ಭಾವಿಸಿರುತ್ತಾರೆ ,ವಾಸ್ತವದಲ್ಲಿ ತಿಂದಿರುವುದಿಲ್ಲ . ದಿನಾಲೂ ಮಾತ್ರೆ ತಿಂದ ಕೂಡಲೇ ಕ್ಯಾಲೆಂಡರ್ ನಲ್ಲಿ ಮಾರ್ಕ್ ಮಾಡಿಕೊಳ್ಳ ಹೇಳುವೆನು . ಮಹಾಭಾರತದಲ್ಲಿ ಬರುವ ಅಜ್ಞಾತ ವೇಷ ಕಾಲದಲ್ಲಿ ಕಂಡು ಹಿಡಿಯಲ್ಪಟ್ಟರೆ ಪುನಃ ಹನ್ನೆರಡುವರ್ಷ ವನವಾಸ ಮಾಡ ಬೇಕಾದಂತೆ ಅಪಸ್ಮಾರ ಚಿಕಿತ್ಸೆಯಲ್ಲಿ ಫಿಟ್ಸ್ ಬಂದರೆ ಪುನಃ ಹೊಸ ಲೆಕ್ಕದ ಅವಧಿಗೆ ಔಷಧೋಪಚಾರ ಮಾಡ ಬೇಕಾಗುತ್ತದೆ . 

  ಇನ್ನು ಕೆಲವರು ತಮ್ಮ ಪ್ರತಿಯೊಂದು ಅಂಗಕ್ಕೂ ಸ್ಪೆಷಲಿಸ್ಟ್ ಬಳಿ ಹೋಗುವ ಅಭ್ಯಾಸ ಇಟ್ಟುಕೊಂಡು ,ತತ್ಪರಿಣಾಮ ಅವರ ಬಳಿ ಹಲವು ಪ್ರಿಸ್ಕ್ರಿಪ್ಷನ್ ಗಳು ಏಕ ಕಾಲಕ್ಕೆ ಇರುತ್ತವೆ . ಅವುಗಳಲ್ಲಿ ಒಂದೇ ಔಷಧಿ (ಉದಾ ವಿಟಮಿನ್ ಗಳು , ಗ್ಯಾಸ್ಟ್ರಿಕ್ ಔಷಧಿ ಗಳು )ಗಳು ಬೇರೆ ಬೇರೆ (ಕಂಪನಿ ಹೆಸರು ಬೇರೆ ಇರುವುದು )ಪಟ್ಟಿಗಳಲ್ಲಿ ಏಕ ಕಾಲಕ್ಕೆ ಇರುವುದು . ಸಾಮಾನ್ಯ ಕುಟುಂಬ ವೈದ್ಯರಲ್ಲಿ ಹೋಗುವುದು  ಮರ್ಯಾದೆಗೆ ಕಮ್ಮಿ ಎಂದು ಕೆಲವರು ಭಾವಿಸುತ್ತಾರೆ .ಇದರಿಂದ ತಮ್ಮ ವಿವಿಧ ಪದ್ದತಿಯ ಬೇರೆ ಬೇರೆ  ವೈದ್ಯರ ಔಷಧಿ ಸಲಹೆಗಳನ್ನು  ವಿಶ್ಲೇಷಿಸಿ         ಪ್ರಾ ಯೋಗಿಕ ಮತ್ತು ವೈಜ್ಞಾನಿಕ ನಿರ್ಧಾರಕ್ಕೆ ಬರುವುದು ಕಷ್ಟ .  

ತಿನ್ನುವ ಮಾತ್ರೆಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಾದಲ್ಲಿ  ಎರಡು ಮೂರು ಔಷಧಿಗಳನ್ನು ಸೇರಿಸಿ ಒಂದೇ ಮಾತ್ರೆಯ ರೂಪದಲ್ಲಿ ತಯಾರು ಮಾಡಿ ಕೊಡುವ ಪ್ರಯತ್ನ ಮಾಡುತ್ತಾರೆ .ಉದಾಹರಣೆಗೆ ಪಾಲಿ ಕ್ಯಾಪ್ ಎಂಬ ಕ್ಯಾಪ್ಸುಲ್ ನಲ್ಲಿ  ಬಿ ಪಿ ಹೃದ್ರೋಗ ಸಂಬಂಧಿ ಐದು ಬೇರೆ ಬೇರೆ ಔಷಧಿಗಳು ಇವೆ . 

ಹಲವು ಮಾತ್ರೆಗಳನ್ನು ,ಅದೂ ವಯೋ ವೃದ್ಧರಿಗೆ ಕೊಡುವುದನ್ನು ಪಾಲಿ ಫಾರ್ಮಸಿ ಎಂದು ಕರೆಯುತ್ತಾರೆ ಮತ್ತು ಅದರ ಸಾಧಕ ಬಾಧಕಗಳ ಬಗ್ಗೆ  ವೈದ್ಯಕೀಯ ಕ್ಷೇತ್ರದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ

ಮಂಗಳವಾರ, ಏಪ್ರಿಲ್ 19, 2022

ಪುಂಡಿಕಾಯಿ ಒಪ್ಪಣ್ಣ ಮಹಾತ್ಮೆ

                                  


 ನಾನು ಮೊನ್ನೆ ನನ್ನ ಅಕ್ಕಯ್ಯ ಅತ್ತಿಗೆ ಬಗ್ಗೆ ಬರೆದಿದ್ದೆ .ಅವರ ಎರಡನೇ ಮಗ  ಪಿ ಕೆ ವೆಂಕಟ ರಮಣ ಭಟ್ .ನಾವು ಎಲ್ಲಾ ಪ್ರೀತಿಯಿಂದ ಒಪ್ಪಣ್ಣ  ಎಂದು ಕರೆಯುವುದು . 

ಇವರ ಒಂದು ವಿಶೇಷ ಇದೆ .ತನಗೆ ಏನಾದರೂ ಅನಾರೋಗ್ಯ ಆದರೆ ಅನಾದರ  ಮಾಡುಯವರು .ಆದರೆ ತಮ್ಮ ಮನೆಯ ಕಾರ್ಮಿಕರಿಗೆ  ,ನೆರೆಕರೆಯವರಿಗೆ ಮತ್ತು ಬಂಧು ಮಿತ್ರರಿಗೆ ಕಾಯಿಲೆ ಬಂದರೆ  ಕೂಡಲೇ ನನಗೆ ಫೋನ್ ಮಾಡಿ ತಿಳಿಸಿ ಸಾಧ್ಯವಾದರೆ ತಾವೇ ಆಸ್ಪತ್ರೆಗೆ ಕರೆದು ತರುವರು . ಇವರ ಸಹಾಯಹಸ್ತಕ್ಕೆ  ಜಾತಿ ಮತ ಭೇದ ಇಲ್ಲ .

ಇವರು ಒಬ್ಬ ಪ್ರಗತಿಪರ ಕೃಷಿಕರು ,ಕೃಷಿ ಉತ್ಪನ್ನ  ವ್ಯಾಪಾರಿ ,ಎಲ್ಲಕ್ಕೂ ಮಿಗಿಲಾಗಿ  ಜನಪ್ರಿಯವಾದದ್ದು  ಇವರ ಕಲಾ ಪೋಷಕ ರಾಗಿ . ಸ್ವಯಂ ಹವ್ಯಾಸಿ ಯಕ್ಷಗಾನ  ಕಲಾವಿದರಾದ ಇವರು  ಕೋಡಪದವು ಯಕ್ಷೋತ್ಸವ ದ ರೂವಾರಿ . ಹನುಮ ಲೈವ್ ಕಾಸೆಟ್ ಎಂಬ ಹೆಸರಿನಲ್ಲಿ   ಶೇಣಿ ,ಸಾಮಗ ರಂತಹ ಘಟಾನುಘಟಿ ಗಳೂ ಸೇರಿ ಹಲವು ತೆಂಕು ಮತ್ತು ಬಡಗು ತಿಟ್ಟು ಕಲಾವಿದರ ತಾಳ ಮದ್ದಳೆ ಮತ್ತು ಯಕ್ಷಗಾನಗಳ ಸಿ ಡಿ ಗಳನ್ನು ಹೊರತಂದು   ,ರಸಿಕರಿಗೆ ಕೊಡಮಾಡಿದ್ದು ,ಕಲಾವಿದರಿಗೆ  ಆರ್ಥಿಕ ಮೂಲ ಅದುವಲ್ಲದೆ ಒಂದು ವಿದ್ಯುನ್ಮಾನ ಆಕರ ಆಗಿವೆ .ಈಗ ಜನಪ್ರಿಯ ಆಗಿರುವ  ಯಕ್ಷ ಗಾನ ನಾಟ್ಯ ವೈಭವ ಪ್ರಾಕಾರವನ್ನು  ಆರಂಭಿಸಿದ ಶ್ರೇಯ ಇವರಿಗೆ ಕೂಡಾ  ಸೇರ ಬೇಕು ಎಂದು ಅಭಿಮಾನಿಗಳು ಹೇಳುತ್ತಾರೆ . 

ಭಕ್ತಿ ಗೀತೆ,ನಾಟಕಗಳ ಧ್ವನಿ ಮುದ್ರಿಕೆ ಗಳೂ ಇವರ ತಯಾರಿಯಲ್ಲಿ ಹೊರ ಬಂದಿವೆ . ಇವರ ಕಲಾ ಪ್ರೇಮ ಹಿರಿಯರಿಂದ (ತಾಯಿ ತಂದೆಯವರ  ಮೂಲದಿಂದ )ಬಳುವಳಿಯಾಗಿ ಬಂದುದು .ಹಲವು ಯಕ್ಷ ವೇದಿಕೆಗಳಲ್ಲಿ ಇವರಿಗೆ ಪ್ರೀತಿಯಿಂದ ಸನ್ಮಾನ ಮಾಡಿದ್ದಾರೆ . 

ಅಮ್ಮನ ಅಗಲುವಿಕೆಯಿಂದ ಮತ್ತು  ಕಾರ್ಯ ಬಾಹುಳ್ಯ ಯದಿಂದ ಕೊಂಚ ಕುಗ್ಗಿದ್ದಾರೆ . ಇವರು ಆರೋಗ್ಯದಿಂದ ಇದ್ದು ,ಹಿಂದಿನಂತೆ ತಮ್ಮ ಕಲಾ  ಮತ್ತು ಸಮಾಜ ಸೇವೆ ಮುಂದು ವರಿಸಲಿ . 

ಬಾಲಂಗೋಚಿ : ಒಪ್ಪಣ್ಣನ   ಸಹೋದರರೂ  ಹವ್ಯಾಸಿ ಯಕ್ಷಗಾನ ಕಲಾವಿದರು . ಇತ್ತೀಚಿಗೆ ಬಿಡುಗಡೆ ಆದ ಸೂರಿ ಕುಮೇರು ಗೋವಿಂದ ಭಟ್ ಅವರ ಎಪ್ಪತ್ತು ತಿರುಗಾಟಗಳು ಪುಸ್ತಕದಲ್ಲಿ ತಾವು ಕಾಸೆಟ್ ಮಾರಾಟ ಮಾಡಿ ಕಿಂಚಿತ್ ಸಂಪಾದನೆ ಮಾಡಿದ ಬಗ್ಗೆ  ಮತ್ತು ಕೋಡಪದವು ಯಕ್ಷೋತ್ಸವ ಬಗ್ಗೆ ಉಲ್ಲೇಖಿಸಿದ್ದಾರೆ.




 


ಅಧ್ಯಾಪಕನಾಗಿ ಕೆಲವು ಅನುಭವಗಳು

ನಾನು ವೈದ್ಯಕೀಯ ಕಾಲೇಜ್ ಗಳಲ್ಲಿ ಅಧ್ಯಾಪನ ಮಾಡಿದ್ದೇನೆ . 

ನನ್ನ ಥಿಯರೀ ತರಗತಿಗಳಿಂದ ವಿದ್ಯಾರ್ಥಿಗಳು ಬಹಳ ಕಲಿತಿರಲಿಕ್ಕಿಲ್ಲ .ಆದರೆ ಪಾಠ ಮಾಡುತ್ತಲೇ ನಾನು ವಿಷಯದ ಹಲವು ಹೊಸ ಹೊಳವುಗಳನ್ನು ಕಂಡಿದ್ದೇನೆ . ನಮ್ಮ ಗುರುಗಳು ಯು ಲರ್ನ್ ವಯ್ಲ್ ಯು ಟೀಚ್ ಎಂದು ಆಗಾಗ ಹೇಳುವರು . ವೈದ್ಯಕೀಯ ಶಾಸ್ತ್ರ ಕಲಿಸುವಿಕೆಯಲ್ಲಿ ಥಿಯರಿ ತರಗತಿ ಗಳಿಗಿಂತಲೂ  ರೋಗಿಯ ಬೆಡ್ ಸೈಡ್ ಕಲಿಸುವಿಕೆ ಬಹಳ ಮುಖ್ಯ .ವಿದ್ಯಾರ್ಥಿಗಳು ಕೇಳುವ ಕೆಲವು ಸರಳ ಪ್ರಶ್ನೆಗಳು ನಮ್ಮನ್ನೂ ಅಧ್ಯಯನ ಶೀಲರನ್ನಾಗಿ ಮಾಡುತ್ತಿದ್ದವು ,

ಇನ್ನು ನಾವು ಎಷ್ಟು ಚೆನ್ನಾಗಿ ತಯಾರು ಮಾಡಿಕೊಂಡು ಹೋದರೂ ಕೆಲವು ದಿನ ಕ್ಲಾಸ್ ಮುಗಿಯುವಾಗ ನಮ್ಮ ಅಂದಿನ ಪರ್ಫಾರ್ಮೆನ್ಸ್ ನಮಗೇ ತೃಪ್ತಿ ಕೊಡುವುದಿಲ್ಲ .ಇದು ಎಲ್ಲಾ ವೃತ್ತಿಯವರಲ್ಲಿ ಕೂಡಾ ಇರುವುದು ಉದಾ ಸಂಗೀತ ,ನಾಟಕ ಇತ್ಯಾದಿ . 

ಕೆಲವೊಮ್ಮೆ ನಮಗರಿವಿಲ್ಲದೆಯೇ ಕೆಲವು ಆಕರ್ಷಕ ನುಡಿಗಟ್ಟುಗಳು ಅನಾಯಾಸವಾಗಿ ಬರುವವು . ಒಂದು ದಿನ ನಾನು ಕಾಲರಾ ಬಗ್ಗೆ ಪಾಠ ಮಾಡುವುದಿತ್ತು .ಅದು ಕಾಮಾ (,)ಆಕಾರದ  ಬ್ಯಾಕ್ಟೀರಿಯಾ . ನಾನು ಅದನ್ನು ವಿವರಿಸುವಾಗ  ವಿಬ್ರಿಯೋ ಕಾಲರಾ ಈಸ್ ಎ ಕಾಮಾ ಶೇಪ್ಡ್ ಒರ್ಗ್ಯಾನಿಸಂ ವಿಚ್ ಹ್ಯಾಸ್ ಪುಟ್ ಪ್ರಿಮೆಚ್ಯುರ್ ಫುಲ್ ಸ್ಟಾಪ್ ಟು ಮೆನಿ ಇನ್ ಅವರ್ ಕಂಟ್ರಿ ಎಂದು ತನ್ನಿಂದ ತಾನೇ ಬಂತು .ವಿದ್ಯಾರ್ಥಿಗಳು ಅದನ್ನು ಇಷ್ಟ ಪಟ್ಟರು . 

ಅಧ್ಯಾಪಕರು ಕೂಡಾ ವಿದ್ಯಾರ್ಥಿ ಗಳಾಗಿದ್ದವರು . ಹೆಚ್ಚಿನ ಥಿಯರಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಮನಸು ಮರ್ಕಟನಂತೆ  ಎಲ್ಲೆಲ್ಲೂ ಓಡುತ್ತಿರುವುದು .ಹಿಂದೆ ಆಗಾಗ ಗುರುಗಳು ಯು  ಅಂಡರ್ ಸ್ಟ್ಯಾಂಡ್ ಯು ಅಂಡರ್ ಸ್ಟಾಂಡ್ ಎನ್ನುವಾಗ ವಿದ್ಯಾರ್ಥಿಗಳು ತಲೆ ಅಲ್ಲಾಡಿಸುವರು . ಮಕ್ಕಳು ಗಂಭೀರವಾಗಿ ಕೇಳುತ್ತಿರುವಂತೆ ನಟಿಸಿದರೆ ಸಾಕು ,ಆ ಕಡೆ ಈ ಕಡೆ ನೋಡುವುದು ,ಪಿಸು ಗುಟ್ಟುವದು ಇತ್ಯಾದಿಗಳಿಂದ ಪಾಠ ಮಾಡುತ್ತಿರುವವರ ಏಕಾಗ್ರತೆ ತಪ್ಪಿ ಅವರ ಕೆಲಸವೂ ಹಳ್ಳ ಹಿಡಿಯುವುದು . 

ಗಲಾಟೆ ಮಾಡ ಬೇಡಿ ಇಷ್ಟ ಇಲ್ಲದವರು ಹೊರಗೆ ಹೋಗಿ ,ಹಾಜರಿ ಕೊಡುತ್ತೇನೆ ಎಂದು ಕೆಲವು ಉದಾರಿ ಅಧ್ಯಾಪಕರು ಹೇಳುತ್ತಿದ್ದ ದಿನಗಳು ಇದ್ದವು .ಈಗ ಅದಕ್ಕೂ ಭಯ ;ಇಲ್ಲಿ ಹಾಜರಿ ತೋರಿಸಿ ಹೊರಗಡೆ ಹೋಗಿ ಯಾವುದಾದರೂ ಸಮಾಜ ವಿರೋಧಿ ಕೆಲಸಗಳಲ್ಲಿ ಸಿಕ್ಕಿ ಹಾಕಿ ಕೊಂಡರೆ ? 

ಬಾಲಂಗೋಚಿ :ನನ್ನ ಸಹೋದ್ಯೋಗಿ ಡಾ ಪ್ರಕಾಶ್ ಒಳ್ಳೆಯ ಅಧ್ಯಾಪಕರು .ರೌಂಡ್ಸ್ ಮಾಡುವಾಗ ಇಂಟರ್ನ್ ಅಥವಾ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸರಿ ಉತ್ತರ ಹೇಳದಿದ್ದರೆ ವಿಚ್ ಇಡಿಯಟ್ ಹ್ಯಾಸ್ ಟಾಟ್ ದಿಸ್ ಟಾಪಿಕ್ ಟು ಯು ಇನ್ ಥಿಯರೀ ?ಎಂದು ಕೇಳುವರು (ತಾವೇ ಆ ವಿಷಯ ದ ಕ್ಲಾಸ್ ತೆಗೆದು ಕೊಂಡಿರುವುದು ತಿಳಿದಿದ್ದೂ).ಮಕ್ಕಳಿಗೆ ಉಭಯ ಸಂಕಟ ,ನೀವೇ ಅನ್ನುವಂತಿಲ್ಲ .

ಸೋಮವಾರ, ಏಪ್ರಿಲ್ 18, 2022

ಗ್ರಾಮೀಣ ಭಾಗದ ಅಶ್ವಿನಿ ದೇವತೆಗಳು ಡಾ ಕೆ ಪಿ ಹೊಳ್ಳ ಮತ್ತು ಸುಮತಿ ಹೊಳ್ಳ

ಡಾ

 




                                      

ವೈದ್ಯಕೀಯ ಕ್ಷೇತ್ರದಲ್ಲಿ ಒಂದು ವಿಪರ್ಯಾಸ ಇದೆ . ಹಿಂದೆ ಅನೇಕ ಆಧುನಿಕ ಪದ್ದತಿಯ ವೈದ್ಯರು ವ್ಯಾಸಂಗ ಮುಗಿಸಿ ತಮ್ಮ ಊರ ಸುತ್ತ ಮುತ್ತಲಿನ ಜನರ ಸೇವೆ ಸಲ್ಲಿಸಲು ಕಾತರಿಸುತ್ತಿದ್ದರು . ಆದರೂ ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದೆ ಬರುವುದಿಲ್ಲ ಎಂಬ ಆರೋಪ ಇತ್ತು . ಇಂದು ಕೂಡ ಎಷ್ಟೆಲ್ಲಾ ಮೆಡಿಕಲ್ ಕಾಲೇಜು ಗಳು ಬಂದರೂ ಪರಿಸ್ಥಿತಿ ಅಂದಿಗಿಂತಲೂ ಕೆಟ್ಟಿದೆ ಎಂದೇ ಹೇಳ ಬಹುದು . 

ಕುರ್ಚಿಪಳ್ಳ ಅಥವಾ ಉಪ್ಪಳ ಒಂದು ಸಣ್ಣ ಪಟ್ಟಣ ವಾಗಿತ್ತು ..ರೈಲು ನಿಲ್ದಾಣ ಇದ್ದ ಕಾರಣ ಅಕ್ಕ ಪಕ್ಕದ ಊರಿನವರು ಮಂಗಳೂರು ರೈಲು ಹಿಡಿಯಲು ಇಲ್ಲಿಗೆ ಬರುತ್ತಿದ್ದು ರೈಲು ನಿಲ್ದಾಣ ರಸ್ತೆಯಲ್ಲಿ ಮಾತ್ರ ಕೆಲವು ಅಂಗಡಿಗಳು ಇದ್ದವು . ಮಂಗಳೂರಿಗೆ ಈಗಿನಂತೆ ಒಳ್ಳೆಯ ರಸ್ತೆ ಮತ್ತು ವಾಹನ ಸೌಲಭ್ಯ ಇರಲಿಲ್ಲ . ಆ ಕಾಲದಲ್ಲಿ  ಇಲ್ಲಿ ಪಕ್ಕದ ಕಯ್ಯಾರಿನ ಪ್ರತಿಷ್ಠಿತ ಮನೆತನದ ಡಾ ಕೆ ಪ್ರಭಾಕರ ಹೊಳ್ಳ ,ಎಂ ಬಿ ಬಿ ಎಸ  ಆಗಿ ಸರ್ಜರಿ ಯಲ್ಲಿ ಎಂ ಎಸ ಮಾಡಿದ್ದವರು  ಐದು ವರ್ಷ ಭಾರತೀಯ ವಾಯು ಸೇನೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿ ಉಪ್ಪಳದಲ್ಲಿ ತಮ್ಮ ವೈದ್ಯಕೀಯ ಸೇವೆ ಆರಂಭಿಸಿದರು . ಹೆಸರಾಂತ  ಶಸ್ತ್ರ ಚಿಕಿತ್ಸಾ ತಜ್ಞ ,ಪ್ರಾಧ್ಯಾಪಕ ಮತ್ತು ಸಮಾಜ ಸೇವಕ ರಾಗಿದ್ದ ಡಾ ಎಂ ಪಿ ಪೈ  ೩೦.  ೩ . ೧೯೭೨ ರಲ್ಲಿ ಆಸ್ಪತ್ರೆಗೆ ಶಿಲಾನ್ಯಾಸ ಮಾಡಿದರು .  ಆದರೆ ಆಸ್ಪತ್ರೆ ಸುಸಜ್ಜಿತವಾಗಿ  ಕಟ್ಟಲು ಹಣ ಬೇಕಲ್ಲಾ ? ಅದಕ್ಕಾಗಿ  ಇರಾನ್ ದೇಶಕ್ಕೆ ತೆರಳಿ ಎರಡು ವರ್ಷ ಅಲ್ಲಿ ಸೇವೆ ಸಲ್ಲಸಿ ಸಂಪಾದನೆಯ ಹಣವನ್ನು ಆಸ್ಪತ್ರೆಗೆ ಹಾಕಿದರು . 

ಹೀಗೆ ಈ ಹಿಂದುಳಿದ ಪ್ರದೇಶದಲ್ಲಿ ಒಂದು ಆಸ್ಪತ್ರೆ ಆರಂಭವಾಯಿತು . ಅದಕ್ಕೆ ತಮ್ಮ ತಂದೆ ನರಸಿಂಹ ಹೊಳ್ಳರ ಹೆಸರು ಇಟ್ಟರು . ಅವರ ಪತ್ನಿ ಡಾ ಸುಮತಿ ಹೊಳ್ಳರು ಸ್ತ್ರೀ ರೋಗ ತಜ್ಞೆ . ಅರಿವಳಿಕೆ  ತಜ್ಞರು ಈಗಿನಂತೆ ಲಭ್ಯವಿರದ ಆ ದಿನಗಳಲ್ಲಿ   ಹಲವು ಕಠಿಣ ತಮ ಕೇಸ್ ಗಳನ್ನು ತಾವೇ ನಿಭಾಯಿಸಿದರು .ಇಲ್ಲವಾದರೆ ಮಂಗಳೂರಿಗೆ ಹೋಗ ಬೇಕಿತ್ತು . ಕನ್ಯಾನ ,ಆನೆಕಲ್ಲು ,ಪೈವಳಿಕೆ ಬಾಯಾರು ,ಬೆರಿಪದವು ,ಕುಂಬ್ಳೆ ,ಪೆರ್ಮುದೆ ,ಮಂಜೇಶ್ವರ ,ಉಪ್ಪಳ ಮತ್ತು ಸುತ್ತ ಮುತ್ತಲಿನ ಅನೇಕ ಪ್ರದೇಶಗಳಿಂದ ಹಗಲು ರಾತ್ರಿಯೆನ್ನದೆ ರೋಗಿಗಳು ಬರುತ್ತಿದ್ದರು . ಡಾ ಕೆ ಪಿ ಹೊಳ್ಳ ಶಸ್ತ್ರ ಕ್ರಿಯಾ ತಜ್ಞರಲ್ಲದೆ , ಹಾವಿನ ವಿಷ ಚಿಕಿತ್ಸೆಯಲ್ಲಿ ಕೂಡಾ ವಿಶೇಷ ಪರಿಣತಿ ಸಂಪಾದಿಸಿ ಸಾವಿರಾರು ಪ್ರಾಣಗಳನ್ನು ಉಳಿಸಿದ್ದಾರೆ .ಇವರ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಒಳಗಾದವರು ಹಿಡಿದು ತಂಡ ಉರಗಗಳ ಒಂದು  ಸಂಗ್ರಹಾಲಯವೇ ಇದೆ . 

ಇವರ ಆಸ್ಪತ್ರೆಯಲ್ಲಿ ದಾದಿಯರ ತರಬೇತಿ ಕೇಂದ್ರ ಇದ್ದು ,ಅಲ್ಲಿ ತರಬೇತಿ ಹೊಂದಿದ ನರ್ಸ್ ಗಳು ತಮ್ಮ ಪರಿಣತಿ ಯಿಂದ ಒಳ್ಳೆಯ ಹೆಸರು ಹೊಂದಿದ್ದರು . 

ನಾನು ಕೂಡಾ ಈ ಆಸ್ಪತ್ರೆಗೆ ಸುಮಾರು  ಹತ್ತು ವರ್ಷ ಸಂದರ್ಶಕ ತಜ್ಞನಾಗಿ ಹೋಗುತ್ತಿದ್ದು , ಇಲ್ಲಿ ತುರ್ತು ನಿಗಾ ವಿಭಾಗ ಆರಂಭಿಸಿ  ಹೃದಯಾಘಾತ ದಂತಹ ಹಲವು ರೋಗಗಳನ್ನು ನಿಭಾಯಿಸಿದ್ದೇವೆ . 

ಇವರ ಒಬ್ಬ ಮಗ ಮತ್ತು ಇಬ್ಬರು ಮಗಳಂದಿರು ವೈದ್ಯರು .  ಅಸೌಖ್ಯದಿಂದ ಮಗನನ್ನು ಕಳೆದು ಕೊಂಡ ಇವರು  ವೃದ್ದಾಪ್ಯದ  ಕಾರಣ  ಆಸ್ಪತ್ರೆಯಲ್ಲಿ ನಡೆಸಲು ಒಂದು ಟ್ರಸ್ಟ್ ಮಾಡಿ ಅದಕ್ಕೆ ಹಸ್ತಾಂತರಿಸಿರುವರು . ಹುಟ್ಟೂರು ಕಯ್ಯಾರ್ ನಲ್ಲಿ ನೆಲೆಸಿರುವ ಇವರ ವೃತ್ತಿ ಜೀವನ ದ  ಬಗ್ಗೆ ಬರೆದ ಕೃತಿ ದಿನಾಂಕ 1.5.2022 ರಂದು ಕಯ್ಯಾರಿನಲ್ಲಿ ಬಿಡುಗಡೆ ಆಗಲಿದೆ . 

ಬಾಲಂಗೋಚಿ : ಇವರ ಕಿರಿಯ ಸಹೋದರ ರಾಧಾಕೃಷ್ಣ ಹೊಳ್ಳ ಬಿ ಸಿ ರೋಡ್ ನಲ್ಲಿ ವಕೀಲ ವೃತ್ತಿ ಆರಂಭಿಸಿ ಮುಂದೆ ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದರು . ಬಿ ಸಿ  ರೋಡ್ ನ ಪ್ರಸಿದ್ಧ ನ್ಯಾಯವಾದಿ ಆಗಿದ್ದ ಶ್ರೀ ಅನಂತ ಸೋಮಯಾಜಿ ಇವರ ಭಾವ .ಡಾ ಹೊಳ್ಳರು ಹಲವು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತಮ್ಮನ್ನು ತೊಡಗಿಸಿ ಕೊಂಡವರು . ಕೂಟ ಮಹಾ ಜಗತ್ತಿನ ಮುಖ್ಯಸ್ಥರಾಗಿಯೂ ಇದ್ದ ನೆನಪು .ಅವರ ಮುಂದಿನ ದಿನಗಳು ಸುಖ ಶಾಂತಿ ಯಿಂದ ಇರಲಿ ಎಂದು ಹಾರೈಕೆ

ಶುಕ್ರವಾರ, ಏಪ್ರಿಲ್ 15, 2022

ವೈದ್ಯನ ಸಂವಹನ ಶಕ್ತಿಯ ಇತಿಮಿತಿ

ವಿಜ್ಞಾನ ಮುಂದುವರಿದ ವೇಗದಲ್ಲಿ ನಮ್ಮ ಸಂವಹನ ಸಾಮರ್ಥ್ಯ ಬೆಳೆದಿಲ್ಲ .ಆಳವಾಗಿ ಬೇರೂರಿರುವ ಅವೈಜ್ಞಾನಿಕ ನಂಬಿಕೆಗಳು ಮತ್ತು  ಹಲವರು  ಹಬ್ಬುವ ಆಧಾರ ರಹಿತ ಮತ್ತು ಕಪೋಲ ಕಲ್ಪಿತ ವಿಚಾರಗಳು ನಿಜವನ್ನು  ಜನರಿಂದ ದೂರ ಇಟ್ಟಿವೆ . 

ಕಳೆದ ವಾರ ಒಂದು ದೂರದ ಹಳ್ಳಿಯಿಂದ ಒಬ್ಬ ಯುವಕ ಜಾಂಡಿಸ್ ಎಂದು ಬಂದಿದ್ದ . ಅಲೋಪತಿಯ ಮೂರು ,ಆಯುರ್ವೇದದ ಇಬ್ಬರು ,ಸಾಲದ್ದಕ್ಕೆ ಹಳ್ಳಿ ಮದ್ದು ಇಷ್ಟೆಲ್ಲಾ ಮಾಡಿ ವಾಸಿ ಆಗಿಲ್ಲ ಎಂದು ನನ್ನ ಕೈ ಗುಣ ನೋಡುವಾ ಎಂದು ಬಂದಿದ್ದನು .ಅವನ ಹಿಂದಿನ ರೆಕಾರ್ಡ್ ಎಲ್ಲಾ ಪರಿಶೀಲಿಸಲಾಗಿ , ಶರೀರದಲ್ಲಿ ಕೆಂಪು ರಕ್ತ ಕಣಗಳು ಅವಧಿ ಪೂರ್ವ ನಶಿಸುವ ಲಘು ರೋಗ ಇತ್ತು . ನಾನು ಹಿಂದೆಯೇ ಬರೆದಂತೆ ನಶಿಶಿದ ಕೆಂಪು ರಕ್ತ ಕಣಗಳ ನಿರ್ವಹಣೆಯಲ್ಲಿ ಆಗುವ ಅಡಚಣೆಯಿಂದ ಜಾಂಡಿಸ್ ಬರುವುದು .ವಾಡಿಕೆಯಲ್ಲಿ ಇದು ಲಿವರ್ ನ ವೈರಸ್ ಸೋಂಕಿನಿಂದ ಆಗುವುದಾದರೂ ,ಮಲೇರಿಯ ,ಇಲಿ ಜ್ವರ ,ಪಿತ್ತ ನಾಳದಲ್ಲಿ ಕಲ್ಲು ,ಗಡ್ಡೆ ಇತ್ಯಾದಿಯಿಂದ ಬರ ಬಹುದು . ಕೆಂಪು ರಕ್ತ ಕಣಗಳು ಅಧಿಕ ನಶಿಸುವುದರಿಂದಲೂ ಹಳದಿ ಬರ ಬಹುದು . ನನ್ನ ಬಳಿ ಬಂದವನ ಹಿಮೋಗ್ಲೋಬಿನ್ ಪ್ರಮಾಣ ನಾರ್ಮಲ್ ಇದ್ದು ಕಣ್ಣು ಸ್ವಲ್ಪ ಹಳದಿ ಬಿಟ್ಟರೆ ಅವನಿಗೆ ಹಸಿವು ಕಮ್ಮಿ ,ವಾಕರಿಕೆ ಅಥವಾ ಹೊಟ್ಟೆ ನೋವು ಇತ್ಯಾದಿ ಇರಲಿಲ್ಲ . ಅವನೇ ಅವರಿವರು ಹೇಳಿದರೆಂದು ಕಠಿಣ ಪಥ್ಯ ಮಾಡುತ್ತಿದ್ದನು .ನಾನು ಸಮಾಧಾನ ದಿಂದ ಎಲ್ಲವನ್ನೂ ಅವನಿಗೆ ವಿವರಿಸಿ ,'ಏನೂ ಚಿಂತೆ ಮಾಡುವುದು ಬೇಡ ,ಔಷಧಿ ಅಥವಾ ಪಥ್ಯ ಎಲ್ಲಾ ನಿಲ್ಲಸಿ "ಎಂದು ಹೇಳಿ ಕಳುಹಿಸಿದೆನು .ಅವನಿಗೆ ಎಷ್ಟು ಸಮಾಧಾನ ಆಯಿತೋ ಗೊತ್ತಿಲ್ಲ . ನಾನು ಇಂತಹ ವಿಷಯಗಳನ್ನು ರೋಗಿಗೆ ವಿವರಿಸುವಾಗ ಸಾಧ್ಯವಾದರೆ ಕಂಪ್ಯೂಟರ್ ಸಹಾಯದಿಂದ ಸಚಿತ್ರವಾಗಿ ವಿವರಿಸುವೆನು .ಮತ್ತು ಗಟ್ಟಿಯಾಗಿ ನಮ್ಮ ಸ್ಟಾಫ್ ಕೂಡಾ ಕೇಳುವಂತೆ ಹೇಳುವೆನು .ಜ್ಞಾನ ಎಲ್ಲರಿಂದ ಎಲ್ಲರಿಗೆ ಪ್ರಸಾರ ಆಗಲಿ ಎಂಬ ಉದ್ದೇಶ .ಆದರೆ ಮಿಥ್ಯೆ ಹರಡುವ ವೇಗದಲ್ಲಿ ಸತ್ಯ ಹರಡುವುದಿಲ್ಲ . 

ನಿನ್ನೆ ಉತ್ತರ ಭಾರತದ ಒಬ್ಬ ಯುವಕ ಬಲ ಬದಿಯಲ್ಲಿ ಮೇಲು ಹೊಟ್ಟೆ ಮತ್ತು ಸೊಂಟ ನೋವು ಎಂದು ಬಂದಿದ್ದನು .ಅವನಿಗೆ ಯಾರೋ ಅದು ಮೂತ್ರದ ಕಲ್ಲು ಇರಬೇಕು ,ಸ್ಕ್ಯಾನ್ ಮಾಡಿಸಿಕೊ ಎಂದು ಸಲಹೆ ಮಾಡಿದ್ದರು . ನಾನು ಅವನ ಅಂಗಿ ,ಬನಿಯನ್ ತೆಗೆಸಿ ಬೆಳಕಿನಲ್ಲಿ ನೋಡಲಾಗಿ  ಮೇಲು ಹೊಟ್ಟೆ ಸುತ್ತಲೂ ಬೆನ್ನಿನಿಂದ ಸಣ್ಣ ಸಣ್ಣ ಕೆಂಪು rash ಬೀಳ ತೊಡಗಿದ್ದು ಅದು ವಾಡಿಕೆಯಲ್ಲಿ ಸರ್ಪ ಸುತ್ತು ಎಂದು ಕರೆಯಲ್ಪಡುವ ನರ ಕೋಟಲೆ ಎಂದು ಅರಿವಾಯಿತು .ಅವನ ಜತೆ ಬಂದವನಿಗೆ ಅದನ್ನು ತೋರಿಸಿ ಅದರದ್ದೇ ನೋವು ಎಂದೆನು .ಹಿಂದಿಯಲ್ಲಿ ಅದಕ್ಕೆ ಏನು ಹೇಳುವರು ಎಂದು ನನಗೆ ತಿಳಿದಿಲ್ಲ . ಇನ್ನು ಸರ್ಪ ಸುತ್ತು ಎಂದು ಸಾಂಪ್ ಸಾಂಪ್ ಎಂದರೆ ಅವನು ಹೌ ಹೌಹಾರಿಯಾನು . ಅವನಿಗೆ ನನ್ನ ವಿವರಣೆ ಸಮಾಧಾನ ತರದೇ ಪತ್ತರ್ ಪತ್ತರ್ (ಕಲ್ಲು )ಎಂದು ಪುನಃ ಪುನಃ ಹೇಳುತ್ತಿದ್ದನು .ಕೊನೆಗೆ ಅವನ ಸಮಾಧಾನಕ್ಕೆ ಸ್ಕ್ಯಾನ್ ಮಾಡಿಸಲು ನಾರ್ಮಲ್ ಎಂದು ರಿಪೋರ್ಟ್ ಬಂತು . ಅವನಿಗೆ ನರ ಕೋಟಲೆಗೆ ಇರುವ ಔಷಧಿ ಕೊಟ್ಟು ಕಳುಹಿಸಿದೆನು . ಇಲ್ಲಿ ನಾನು ಅವನ ಬಟ್ಟೆ ತೆಗೆಸಿ ,ಒಳ್ಳೆಯ ಬೆಳಕಿನಲ್ಲಿ ನೋಡಿದ ಕಾರಣ ನಿಜ ಕಾಯಿಲೆ ಸುಲಭದಲ್ಲಿ ಪತ್ತೆಯಾದುದಲ್ಲದೇ ಅನಾವಶ್ಯಕ ಟೆಸ್ಟ್ ಗಳನ್ನು ಮಾಡ ಬೇಕಾಗಿ ಬರಲಿಲ್ಲ .ಮತ್ತು ಹರ್ಪಿಸ್ ಜೊಸ್ಟರ್ (ಸರ್ಪ ಸುತ್ತು ಎಂದು ಕರೆಯಲ್ಪಡುವ ನರ ಕೋಟಲೆ )ಗೆ ಆರಂಭದ ಹಂತದಲ್ಲಿಯೇ  ಔಷಧಿ ಆರಂಭಿಸಿದರೆ ಹೆಚ್ಚು ಪರಿಣಾಮಕಾರಿ ,ಮತ್ತು ನೋವು ಉಳಿಯುವುದು ಕಡಿಮೆ . ನರದ ನೋವಿಗೆ ಕೊಡುವ ವೇದನಾ ಹರ ಔಷಧಿಗಳೂ ಬೇರೆ ಇರುತ್ತವೆ . 

ಈ ಇಬ್ಬರು ರೋಗಿಗಳಿಗೂ ಸರಿಯಾದ ಸಲಹೆ ನಾನು ನೀಡಿದ್ದರೂ ಅವರು ಅದನ್ನು ಪೂರ್ಣ ನಂಬುವಂತೆ ಮಾಡಲು ನಾನು ಪೂರ್ಣ ಶಕ್ತ ನಾದೆನು ಎಂದು ನಂಬುವುದಿಲ್ಲ . ಮೊದಲನೇ ರೋಗಿಗೆ ಹಳೆಯ ರೆಕಾರ್ಡ್ ನೋಡಿ ,ಪರೀಕ್ಷೆ ಮಾಡಿ ಯಾವುದೇ ಔಷಧಿ ನೀಡದೆ ಕಳುಹಿಸಿದ್ದರಿಂದ ನನಗಾಗಲಿ ಆಸ್ಪತ್ರೆಗಾಗಲಿ ಯಾವುದೇ ಲಾಭ ಆಗಲಿಲ್ಲ 

ಗುರುವಾರ, ಏಪ್ರಿಲ್ 14, 2022

ರೈತ ಬಂಧು ಪೂವಣಿ ನಾಯ್ಕ್ ಅಂಡ್ ಸನ್ಸ್

 

                                              



ಪುತ್ತೂರು ಸುಳ್ಯ ಬಂಟ್ವಾಳ ,ಕಾಸರಗೋಡು ತಾಲೂಕಿನ ರೈತರಿಗೆ ಅಪತ್ಬಾಂಧವ  ಆಗಿದ್ದವರು ಪೂವಣಿ ನಾಯ್ಕ್ .

ಪುತ್ತೂರು ಪರ್ಲಡ್ಕ ನಿವಾಸಿಯಾದ ಇವರು ಸ್ವಯಂ  ಕೃಷಿ ಯಂತ್ರಗಳ ದುರಸ್ತಿ ಕಲಿತು ತನ್ಮೂಲಕ ಅದರ ಪ್ರಯೋಜನ ಸಮಾಜಕ್ಕೆ ತಲುಪಿಸಿದವರು . ಹಿಂದೆ ಎಲ್ಲಿ ಪಂಪ್ ಕೆಟ್ಟರೂ ಪೂವಣಿಯವರ ಅಂಗಡಿ . ಇವರು ನೀಲಿ ಬಟ್ಟೆ ; ಬಟ್ಟೆ ಮೈಗೆ ಎಲ್ಲಾ ಆಯಿಲ್ ಗ್ರೀಸ್ ಲೇಪನ .ಬಿಡುವಿರದ ಕೆಲಸ .ಎಲ್ಲರಿಗೂ ಕೂಡಲೇ ಆಗಬೇಕು .ದೂರ ದೂರದ ಹಳ್ಳಿಯಿಂದ ಬರುವ ಗಿರಾಕಿಗಳು . ಕೆಲವೊಮ್ಮೆ ಮಧ್ಯ ರಾತ್ರಿಯ  ವರೆಗೂ ಕೆಲಸ . 

ಪೂವಣಿಯವರ ಸಹೋದರ ನಾರಾಯಣ ನಾಯ್ಕ್ ಕೂಡಾ ಸಾಥ್ .ಈಗ ಎರಡನೇ ತಲೆಮಾರಿನ ವೇಣುಗೋಪಾಲ್ ಇದ್ದಾರೆ. ಕಾರ್ಯ ವ್ಯಾಪ್ತಿ ಹಿಗ್ಗಿದಂತೆ  ವಿವಿಧ ಕೃಷಿ ಯಂತ್ರಗಳೂ ಬರಲು ಆರಂಭಿಸಿದವು . ಆದ್ದರಿಂದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಕಾರ್ಯಾಗಾರ ಆರಂಭಿಸಿದ್ದಾರೆ .

ಹಿಂದೆ ಡಾ ಸುಂದರ ರಾಯರು ಮುಟ್ಟಿದರೆ ಸಾಕು ಯಾವ ಕಾಯಿಲೆ ಇದ್ದರೂ ಪರಿಹಾರ ಆಗುವುದು ಎಂಬ ಭರವಸೆ ಇತ್ತು . ಅದೇ ತರಹ ಪೂವಣಿ ಯವರ ಬಳಿ ಹೋದರೆ ಯಾವುದೇ ಪಂಪ್ ಶೀಘ್ರ ಜೀವಕ್ಕೆ ಬರುವುದು ಎಂದು ರೈತರಲ್ಲಿ ನಂಬಿಕೆ .

ಇವರು ಯಾವಾಗಲೂ ಬೇಡಿಕೆಯಲ್ಲಿ ಇದ್ದವರು ಆದರೂ ದಿಢೀರ್ ಅದರ ಆರ್ಥಿಕ ರೂಪ ಗಳಿಸಿದಂತೆ ಇಲ್ಲ . ಸಮಾಜಕ್ಕೆ  ಆವಶ್ಯಕ ಸೇವೆಯನ್ನು ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಇವರ ಕುಟುಂಬವನ್ನು ನೆನೆಸಿಕೊಳ್ಳುವುದು ನಮ್ಮ ಕರ್ತವ್ಯ

ಅಕ್ಕಯ್ಯ ಅತ್ತಿಗೆ


 ಮೊನ್ನೆ ಆರಕ್ಕೆ ನಮ್ಮ ಪ್ರೀತಿಯ ಅಕ್ಕಯ್ಯ ಅತ್ತಿಗೆ ವಯೋ ಸಹಜ ಸಮಸ್ಯೆಗಳಿಂದ ತೀರಿ ಕೊಂಡರು. ಅವರ ಹೆಸರು ಲಕ್ಷ್ಮಿ ಅಮ್ಮ .ನಾವೆಲ್ಲಾ ಕರೆಯುತ್ತಿದ್ದುದು ಅಕ್ಕಯ್ಯ ಎಂದು . ನಮ್ಮ ಶಿರಂಕಲ್ಲು  ಸೋದರ ಅತ್ತೆಯ ಮಗಳು . ಅವರ ತಂದೆ ಮೂಲತಃ ನೀರ್ಕಜೆ ಯವರು . ಅಕ್ಕಯ್ಯ ಅತ್ತಿಗೆ ಎಳವೆಯಲ್ಲಿಯೇ ಪುಂಡಿಕಾಯಿ ಕೃಷ್ಣ ಭಟ್ ಅವರನ್ನು ಮದುವೆ ಆಗಿ  ಬಂದವರು . ಒಂದು ಹೆಣ್ಣು ಮಗು ದುರ್ಗಾ ಪರಮೇಶ್ವರಿ ,ಮೂರು ಗಂಡು ಮಕ್ಕಳು ,ಈಶ್ವರ ಭಟ್ ,ವೆಂಕಟ್ರಮಣ ,ರಾಮ ಮೋಹನ -(ಕ್ರಮವಾಗಿ ಒಪ್ಪಕ್ಕ ,ಬಂಗಾರು ,ಒಪ್ಪಣ್ಣ ಮತ್ತ್ತು ಒಪ್ಪಿ )

ಅಕ್ಕಯ್ಯ ಅತ್ತಿಗೆಯ ಗಂಡ  ಬೇಗನೇ ತೀರಿ ಕೊಂಡು ಮನೆಯ ಉಸ್ತುವಾರಿ ,ಮಕ್ಕಳನ್ನು ಒಂದು ಹಂತಕ್ಕೆ ತರುವ ಜವಾಬ್ದಾರಿ ಯಶಸ್ವಿಯಾಗಿ ಹೊತ್ತವರು .ಮೃದು ಭಾಷಿಯಾಯದ ಅವರಿಗೆ ಬಂಧು ಬಳಗ ದವರಲ್ಲಿ ಅತೀವ ಪ್ರೀತಿ .ನಾವು ಅವರ ಸೋದರ ಮಾವಂದಿರ ಮಕ್ಕಳು ಎಂದು ಹೆಮ್ಮೆ ,ಅಜ್ಜನ ಮನೆಯ ಮೇಲೆ ಕುಂದದ ಪ್ರೀತಿ . 

ಅವರ ತಮ್ಮ ಈಗ ಅಧ್ಯಾಪನ ಮತ್ತು ಯಕ್ಷ ಲೋಕದಲ್ಲಿ ಹೆಸರು ಮಾಡಿರುವ ಪಶುಪತಿ ಶಾಸ್ತ್ರೀ .ಇವರ ಏಳಿಗೆಯಲ್ಲಿ ಈ ಅಕ್ಕನ ಪಾತ್ರ ಬಹಳ ಮುಖ್ಯ . 

ಮಕ್ಕಳು ಯಕ್ಷಗಾನ ಕಲಾ ಪೋಷಕರಾಗಿದ್ದು ,ಕೋಡಪದವಿನ  ಯಕ್ಷೋತ್ಸವ ದ  ರೂವಾರಿಗಳು .ವೆಂಕಟ್ರಮಣ ಭಟ್ ಹನುಮ ಲೈವ್ ಕ್ಯಾಸ್ಸೆಟ್ಸ್ ಎಂಬ ಹೆಸರಿನಲ್ಲಿ ಹಲವು ತಾಳಮದ್ದಳೆ ,ಮತ್ತು ಯಕ್ಷಗಾನ  ಮತ್ತು ಭಕ್ತಿ ಗೀತೆಗಳ ಸಿ ಡಿ ಗಳನ್ನು ಹೊರ ತಂದಿದ್ದು ಜನಪ್ರಿಯವಾಗಿದ್ದವು . ಕಲಾವಿದರಿಗೂ ಆರ್ಥಿಕ ವಾಗಿ ಒಂದು ಸಹಾಯ ಆಗುತ್ತಿತ್ತು . ಸೂರಿ ಕುಮೇರು ಗೋವಿಂದ ಭಟ್ಟರ ೭೦ ತಿರುಗಾಟಗಳು ಪುಸ್ತಕದಲ್ಲಿ ಇವರ ಉಲ್ಲೇಖ ಇದೆ . 

ನಾನು ವೈದ್ಯ ಬಂಧುವಾದ್ದರಿಂದ ನನ್ನ ಮೇಲೆ ವಿಶೇಷ ಅಕ್ಕರೆ ,ಅವರಿಗೆ ಮತ್ತು ಅವರ ಮನೆಯವರಿಗೆ ಕಿಂಚಿತ್ ಸೇವೆ ಸಲ್ಲಿಸಲು ಸಿಕ್ಕಿದ್ದು ನನ್ನ ಭಾಗ್ಯ . 

ಅವರ ನೆನಪಿಗೆ ನೂರು ಪ್ರಣಾಮಗಳು

 

ಬುಧವಾರ, ಏಪ್ರಿಲ್ 13, 2022

ನರದ ಬಗ್ಗೆ ನರರಲ್ಲಿ ಒಂದು ಗೊಂದಲ

 

ಈ ನರ ಜನ್ಮವೇ ಒಂದು ಗೊಂದಲದ ಗೂಡು .ಇದನ್ನು ಇನ್ನಷ್ಟು ಗೋಜಲು ಮಾಡಲು ನರರಲ್ಲಿ ಹಲವು ನರಗಳು.ಇವುಗಳ ಮತ್ತು ಇವುಗಳ ರೋಗಗಳ ಬಗ್ಗೆ ಸ್ಪಷ್ಟತೆ ಇರಬೇಕು .ಇಲ್ಲವಾದರೆ ಪೇಚಿಗೆ ಒಳಗಾಗುವುದು ಅಲ್ಲದೇ ಸುಮ್ಮನೇ ಹಣ ಮತ್ತು ಸಮಯ ಕಳೆದು ಕೊಳ್ಳ ಬೇಕಾಗುವುದು .

ನಮ್ಮಲ್ಲಿ  ನರಾಂಗ ವ್ಯೂಹ ಇದ್ದು ,ಮೆದುಳಿನಲ್ಲಿ ಮುಖ್ಯ  ಕಚೇರಿ ,ಅದರ ಸಂದೇಶ ವಾಹಕ  ಮತ್ತು  ಸಂಗ್ರಾಹಕ  ನರಗಳು  ನಖ ಶಿಖಾಂತ ಇವೆ .ಇನ್ನೂ ಕೆಲವು ನರಗಳು ಮೆದುಳಿನಿಂದ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವವು ಇವೆ . ಮೆದುಳಿನ ಕಾಯಿಲೆಗಳಾದ ಮೆದುಳಿನ ಆಘಾತ (ಸ್ಟ್ರೋಕ್ ,ಪಕ್ಷವಾತ ಉಂಟು ಮಾಡುವಂತಹವು ),ಮೆದುಳಿನ ಗಡ್ಡೆ ,ಅಪಸ್ಮಾರ ಇತ್ಯಾದಿ ಗಳಿಂದ ಹಿಡಿದು ,ನರಕೋಟಲೆ (ಸರ್ಪ ಸುತ್ತು ), ಇತ್ಯಾದಿ ಗಳು  ನರ ರೋಗ ಶಾಸ್ತ್ರದಲ್ಲಿ ಒಳಗೊಂಡಿವೆ . ಇವುಗಳ  ತಜ್ನರಿಗೆ ನ್ಯೂರೋಲೋಜಿಸ್ಟ್ ಎಂದು ಕರೆಯುವರು .

ವಾಡಿಕೆಯಲ್ಲಿ ರಕ್ತ ನಾಳಕ್ಕೂ ನರ ಎಂದು ಕರೆಯುವರು. ಕಾಲಿನಲ್ಲಿ ಅಭಿದಮನಿ ರಕ್ತ ನಾಳಗಳು  ಉಬ್ಬಿದ ರೋಗಕ್ಕೆ  ವೇರಿಕೊಸ್ ವೆಯಿನ್ ಎನ್ನುವರು .ಇವುಗಳ ಚಿಕಿತ್ಸೆ ಮಾಡುವುದು  ಶಸ್ತ್ರ ಚಿಕಿತ್ಸಾ ತಜ್ನರು ಅಥವಾ ಸರ್ಜನ್ . ಅದೇ ರೀತಿ ಇತರ ರಕ್ತ ನಾಳಗಳ ಚಿಕಿತ್ಸೆ  ಕೂಡಾ. ಈ ತರಹ  ರೋಗ ಇರುವವರು  ಆಸ್ಪತ್ರೆಗೆ ಫೋನ್  ಮಾಡಿ ನರ ರೋಗ ತಜ್ನರ  ಅಪಾಯಿಂಟ್ ಮೆಂಟ್ ಬುಕ್ ಮಾಡುವರು .ದೊಡ್ಡ ಆಸ್ಪತ್ರೆಗಳಲ್ಲಿ  ಮೊದಲೇ ಸಲಹಾ ಫೀಸ್ ಪಾವತಿ  ಮಾಡಿ ಕಾಯ ಬೇಕು .ಕಡೆಗೆ ತಮ್ಮ  ಸರದಿ ಬಂದಾಗ  ವೈದ್ಯರು  ನರ ರೋಗ ಏನೂ ಇಲ್ಲ ,ಸರ್ಜನ್ ಗೆ ತೋರಿಸಿ ಎಂದು ಚೀಟಿ ಕೊಡುವರು .ಅಲ್ಲಿ ಪುನಃ ಕಾದು ಹಣ ಕಟ್ಟಿ  ತೋರಿಸಬೇಕು . ಇದೇ ತರಹ  ಗಂಟು ನೋವು , ಉಳುಕು ಇತ್ಯಾದಿಗಳಿಗೂ ನರ ಡಾಕ್ಟ್ರು ಇದ್ದರಾ ಎಂದು ಕೇಳಿ ಕೊಂಡು ಬರುತ್ತಾರೆ .ವಾಸ್ತವದಲ್ಲಿ  ಒರ್ಥೋ ಪೇಡಿಶಿಯನ್ ಅಥವಾ ಮೂಳೆ ತಜ್ಜ್ನರನ್ನು ನೋಡ ಬೇಕು .

ಈ ಎಲ್ಲಾ ಗೊಂದಲ  ತಡೆಗಟ್ಟಲು ಒಳ್ಳೆಯ  ವಿಶ್ವಾಷಾರ್ಹ ಕುಟುಂಬ ವೈದ್ಯರ ಲ್ಲಿ ತೋರಿಸಿ ಅವರು ಸಲಹೆ ಮಾಡಿದ ತಜ್ನರಲ್ಲಿ ಹೋಗುವುದು ಉತ್ತಮ .ತುರ್ತು ಸಂದರ್ಭಗಳಲ್ಲಿ  ಆಸ್ಪತ್ರೆಯ ತುರ್ತು ವಿಭಾಗಕ್ಕೆ ಹೋದರೆ ಅವರೇ  ಯೋಗ್ಯ ವೈದ್ಯರನ್ನು ಕರೆಸುವರು .

ಇನ್ನು ಕೊಳ್ಪು (ಹೃದಯಾಘಾತ ,ಉಳುಕು ,ಮೂತ್ರ ಕಲ್ಲು ಎಲ್ಲವಕ್ಕೂ ಅನ್ವಯ ),ವಾತ  ಎಂಬ ಅಸ್ಪಷ್ಟ ರೋಗ ಲಕ್ಷಣ ಇರುವವರು ಕೂಡಾ ಫ್ಯಾಮಿಲಿ ದಾಕ್ಟ್ರ ಸಲಹೆ ಮೇರೆಗೆ ಮುಂದುವರಿಯುವುದು ಒಳ್ಳೆಯದು .

ಮಂಗಳವಾರ, ಏಪ್ರಿಲ್ 12, 2022

ನಿಮಗೆ ಹಣ ಮಾಡಲು ಬರುವುದಿಲ್ಲ

 ನಿಮಗೆ ಹಣ ಮಾಡಲು ಬರದು 

 

ನನ್ನ ಅಣ್ಣನ ಮಗ ಮುರಳಿ ಬಾಲ್ಯದಲ್ಲಿ ಕೆಲವೊಮ್ಮೆ ನನ್ನೊಡನೆ ಆಸ್ಪತ್ರೆಗೆ ಬರುತ್ತಿದ್ದ .(ಆಗ ನಾನು ರೈಲ್ವೆ ಸೇವೆಯಲ್ಲಿ ಇದ್ದೆ .) ಅವನು ಒಂದು ಮೂಲೆಯಲ್ಲಿ ಕುಳಿತು ಎಲ್ಲಾ ಗಮನಿಸುತ್ತಿದ್ದು ಮರಳಿ ಮನೆಗೆ ಹೋಗುವಾಗ "ಅಪ್ಪಚ್ಚಿ ನೀವು ಪೇಷಂಟ್ ಗಳಿಂದ ಹಣ ತೆಗೆದು ಕೊಳ್ಳುವುದಿಲ್ಲ ಯಾಕೆ ?ಎಲ್ಲರಿಂದಲೂ ಪೇಪರ್ ಪೈಸೆ (ನೋಟ್ )ತೆಗೊಳ್ಳ ಬೇಕು .ನನ್ನ ಅಪ್ಪನಂತೆ ನಿಮ್ಮಲ್ಲಿ ಹಣ ಆಗ ಬೇಡವೇ ?ಎಂದು  ಆತಂಕ ಮತ್ತು ಮುಗ್ಧತೆ ಯಿಂದ ಪ್ರಶ್ನಿಸುತ್ತಿದ್ದನು . 

ಸರ್ವಿಸ್ ನಲ್ಲಿ ಇರುವಾಗ ನಿಗದಿತ ಸಂಬಳ . ಅದು ಕಾಲಿಗೆ ಎಳೆದರೆ ತಲೆಗೆ ಇಲ್ಲ ,ತಲೆಗೆ ಎಳೆದರೆ ಕಾಲಿಗೆ ಇಲ್ಲ . ಅದರ ಮೇಲಿಂದ ಒಂದು ಗಮನಾರ್ಹ ಮೊತ್ತ ನನ್ನ ಪುಸ್ತಕ ಮತ್ತು ಪತ್ರಿಕಾ ಖರೀದಿಗೆ ಹೋಗುತ್ತಿತ್ತು .ಮುಂದೆ ನಾನು ಸರಕಾರಿ ಸೇವೆಗೆ ರಾಜೀನಾಮೆ ಕೊಟ್ಟ ಮೇಲೆ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಇಲ್ಲ . ನನ್ನ ಹೆಂಡತಿ ,ಅಕ್ಕ ಮುಂತಾದ ಹಿತೈಷಿಗಳು ಒಂದು ನಿರ್ಧಾರಕ್ಕೆ ಬಂದಿದ್ದರು ."ಇವನಿ(ರಿ )ಗೆ ಹಣ ಮಾಡಲು ಬರುವುದಿಲ್ಲ " 

ಹೆಂಡತಿ ಹೇಳಲು ಕಾರಣ ಇದೆ .ನಾನು ಅವಳು ಏನು ಬೇಡಿಕೆ ಸಲ್ಲಿಸಿದರೂ ಅಕೌಂಟ್ಸ್ ಆಫೀಸರ್ ನಂತೆ ಕಡಿತ ಮಾಡಿಯೇ ಮಂಜೂರು ಮಾಡುತ್ತಿದ್ದೆ . ಉದಾ ಒಂದೂವರೆ ಸಾವಿರ ರೂಪಾಯಿಯ ಹೊಸ ಸೀರೆ ಕೊಳ್ಳಬೇಕು ಎಂದರೆ 'ನೀನು ಮೊನ್ನೆ ಮೊನ್ನೆ ಕೊಂಡದ್ದಲ್ಲವೇ ,ಈಗ ಯಾಕೆ ,ಬೇಕಾದರೆ  ಸಾವಿರದ ಒಳಗಿಂದು ಒಂದು ತೆಗೋ "ಎಂದು ಹೇಳುವೆನು . ಅವಳು ಇಂತಹ ಒರೆಂಜಾಟದಿಂದ "ಮಡುತ್ತು " ಹೋಗಿ ಆಗಾಗ ಮೇಲಿನ ಉದ್ಘಾರ ಮಾಡುವರು . 

ವೈದ್ಯರು ರೋಗಿಗಳಿಂದ ಮತ್ತು ವಕೀಲರು ಕಕ್ಷಿಗಳಿಂದ ಫೀಸು ವಸೂಲು ಮಾಡುವುದು ಒಂದು ಕಲೆ .ನನಗೆ ಅದು ಸಿದ್ಧಿಸಿಯೇ ಇಲ್ಲ ಎನ್ನ ಬಹುದು .ಕುರುಕ್ಷೇತ್ರದಲ್ಲಿ ಅರ್ಜುನನಿಗೆ 'ಎಲ್ಲರೂ ಬಂಧು ಬಾಂಧವರು ಯಾರೊಡನೆ ಹೋರಾಡುವುದು "ಎಂಬ ವೈರಾಗ್ಯ ಭರಿತ ಜಿಜ್ಞಾಸೆ ಬಂದಂತೆ ನಮಗೂ ಎಲ್ಲರೂ ಬಂಧು ಮಿತ್ರರು ,ಇನ್ನು ಕೆಲವರು ಬರೀ ಬಡವರು ಯಾರೊಡನೆ ಎಷ್ಟು ಫೀಸು ತೆಗೆದು ಕೊಳ್ಳುವುದು ?ಎಂಬ  ಗೊಂದಲ .

ಇನ್ನು ಬಂದ ಹಣದ  ಖರ್ಚಿಗೆ ನೂರಾರು ದಾರಿಗಳು ತನ್ನಿಂದ ತಾನೇ ಹುಟ್ಟಿ ಕೊಳ್ಳುತ್ತವೆ . ಬಹಳ ಮಂದಿ ಇವನು ಡಾಕ್ಟ್ರು ಭಾರೀ ಸಂಪತ್ತು ಇರಬೇಕು ಎಂದು ನಾನಾ ಕಾರಣಕ್ಕೆ ಡೊನೇಷನ್ ಗೆ ಬರುವರು .ಹಲವರಿಗೆ ನಾನು ನಯವಾಗಿ ನಿರಾಕರಿಸಿದಾಗ ಕೋಪ ಬರುವುದು. ಆದರೂ ಹಲವು ಸಂತ್ರಸ್ತರನ್ನು ಹುಡುಕಿ ಕೊಂಡು ಹೋಗಿ ಸಹಾಯ ಮಾಡಿದ ತೃಪ್ತಿ ಇದೆ . ಅದನ್ನು ದುರುಪಯೋಗ ಪಡಿಸಿಕೊಂಡವರು ಇದ್ದರೂ ಅವರ ಸಂಖ್ಯೆ ಕಡಿಮೆ .ನಾನು ಕೆಲಸ ಮಾಡಿ ಕೊಂಡಿದ್ದ ಆಸ್ಪತ್ರೆಯ  ಉದ್ಯೋಗಿ ಒಬ್ಬರು ಒಂದು ದಿನ ಬಂದು 'ಸಾರ್ ನಮ್ಮ ಹೊಸ ಮನೆಯ ಕೆಲಸ ಸ್ವಲ್ಪ ಬಾಕಿ ಇದ್ದು ಹಣದ ಕೊರತೆ .ಸ್ವಲ್ಪ ಸಾಲ ಬೇಕಿತ್ತು 'ಎಂದರು .ನಾನು ಪಾಪ ಎಂದು ಪರ್ಸ್ ನಲ್ಲಿ ಇದ್ದ ಹಣವನ್ನು ಎಲ್ಲಾ  ಕೈಗಿತ್ತು ಸಾವಕಾಶ ಹಿಂತಿರುಗಿಸಿ "ಎಂದೆ .ಕೆಲವು ದಿನಗಳ ನಂತರ ವ್ಯಕ್ತಿ  ಕಾಣೆ ;ಕೆಲಸ ಬಿಟ್ಟು ಹೋದ ಸುದ್ದಿ ಸಿಕ್ಕಿತು .ಹೋಗುತ್ತೇನೆ ಎಂದು ಹೇಳಲೂ ಇಲ್ಲ ,ವಿಚಾರಿಸಲು ಹೀಗೆ ಹಲವರಿಂದ ಸುಮ್ಮ ಸುಮ್ಮನೆ ಹಣ ತೆಗೆದು ಕೊಂಡ ವಿಚಾರ ತಿಳಿಯಿತು . ಇಲ್ಲಿ ನನಗೆ ಹಣ ಹೋದ ಬೇಸರ ಸ್ವಲ್ಪವೂ ಇಲ್ಲ .,ಆದರೆ ವಿಶ್ವಾಸ ದ್ರೋಹ ಮಾಡಿಸಿ ಕೊಂಡ ಅನೇಕರು ಮತ್ತೆ ಯಾರನ್ನೂ ನಂಬದ ಸ್ಥಿತಿ ಬರುವದು . 

ನಾನು ಸಮಾಜದ ದೃಷ್ಟಿಯಲ್ಲಿ ಧನವಂತ ಆಗದಿದ್ದರೂ ಸಂತುಷ್ಟ . ಆದರೂ ಹಿತೈಷಿಯಗಳು ನೀವು ಡಾಕ್ಟರ್ ಆಗಿಯೂ ಏನೂ ಮಾಡಲಾಗಲಿಲ್ಲ ಎಂದು  ಹಿತೈಷಿಗಳು  ಪುನಃ ಪುನಃ ಹೇಳುವಾಗ ನಿಜ ಇರ ಬಹುದು ಎನಿಸುವುದು . ಪರೀಕ್ಷಾರ್ಥಿಗಳಿಗೆ ಹೆದರ ಬೇಡಿ ಹೆದರ ಬೇಡಿ ಎಂದು ಎಲ್ಲರೂ ಹೇಳುವಾಗ ಧೈರ್ಯ ಇದ್ದವರೂ ಹೆದರುವಂತೆ .

ಬಾಲಂಗೋಚಿ : ವರ್ಷಗಳ ಹಿಂದೆ ನಾನು ಪಾಪ ಪುಣ್ಯ ನೋಡಿ ಬಹಳ ಕಡಿಮೆ ಚಾರ್ಜ್ (ಕೆಲವೊಮ್ಮೆ ಫ್ರೀ )ಮಾಡುತ್ತಿದ್ದೆ .ಹಾಗೆ ಉಪಕೃತರು ಹಲವರು ಇವನು ನಿಜವಾಗಿಯೂ ಕ್ವಾಲಿಫೈಡ್ ಸ್ಪೆಷಲಿಷ್ಟು ಇರಲಿಕ್ಕಿಲ್ಲ ,ಸಾಧಾರಣ ಡಾಕ್ಟರರು ಇರಬೇಕು ಎಂದು ಕೊಂಡಿದ್ದರು . ಒಂದು ಗಂಭೀರ ಕೇಸ್ ನಾನು ಮುತುವರ್ಜಿಯಿಂದ ಚಿಕಿತ್ಸಿಸುತ್ತಿರುವಾಗ , ಡಾಕ್ಟ್ರೇ ಸ್ಪೆಷಲಿಸ್ಟ್ ಹತ್ರ ತೋರಿಸಿದರೆ ಹೇಗೆ ?ಎಂದು ಕೇಳಿದ ವಿದ್ಯಾವಂತ ಸಂಪನ್ನರು ಇದ್ದಾರೆ .

ಸೋಮವಾರ, ಏಪ್ರಿಲ್ 11, 2022

                                                              



 

 ನಮ್ಮ  ಮನೆಯ ಅಮೂಲ್ಯ ತೂಕದ  ಅಸ್ತಿ ಕಡೆಯುವ (ಅರೆಯುವ ,ಕಡೆಪ್ಪಿ )ಕಲ್ಲು . ಇದನ್ನು ನಾವು  ಪ್ರಸಿದ್ಧ ವಾದ  ಸಂಟ್ಯಾರಿನ ಕಲ್ಲು ಶಿಲ್ಪಿಗಳಿಂದ ೧೯೮೭ ರಲ್ಲಿ ಕೊಂಡೆವು . ಇದು ನಮ್ಮೊಡನೆ ಪುತ್ತೂರು ,ಮಂಗಳೂರು ,ಚೆನ್ನೈ .ಪಾಲಕ್ಕಾಡ್ ,ಕೊಜ್ಹಿಕೋಡ್ ,ಉಪ್ಪಳ ,ಮಂಗಳೂರು  ಸಂಚರಿಸಿ ಮರಳಿ ಪುತ್ತೂರಿಗೆ ಬಂದು ಕುಳಿತಿದೆ . ನನ್ನ ಭಾರದ ಲಗೇಜ್ ಗಳಲ್ಲಿ ಪುಸ್ತಕಗಳ ಜತೆ ಇದು . 

ಅರೆಯುವ ಕಲ್ಲು ನಮ್ಮ ಹಲ್ಲಿನ ಕೆಲಸ ಹಗುರ ಮಾಡುವುದು , ಉಪ್ಪು ಮಸಾಲೆಗಳ ಸಮ ಮಿಶ್ರಣ ಮಾಡಿ ನಾಲಿಗೆಗೂ ಆಹಾರ ಹಿತಮಾಡುವದು . ಹಿಂದೆ ನಮ್ಮ ಮನೆಯಲ್ಲಿ ಇದರ ಮೂರು ಪಟ್ಟು ದೊಡ್ಡ ಕಲ್ಲು ಇದ್ದು  ದಿನವಿಡೀ ಸಕ್ರಿಯವಾಗಿ ಇರುತ್ತಿತ್ತು . ಬೆಳಗಿನ ತಿಂಡಿಗೆ ಚಟ್ನಿ ,ಮಧ್ಯಾಹ್ನ ಸಾಂಬಾರು ಮತ್ತು ಸಾರಿಗೆ ತೆಂಗಿನ ಕಾಯಿ ಮತ್ತು ಮಸಾಲೆ ಅರೆಯುವುದು .ಇದಕ್ಕೆ ಸಾಮಾನ್ಯವಾಗಿ ಏಕ ಪಾತ್ರಾಭಿನಯ .ಸಂಜೆ ಮರುದಿನದ  ತಿಂಡಿಗೆ ಸಾಮಾನ್ಯವಾಗಿ ಇಬ್ಬರು ಜತೆಯಾಗಿ ಮಾತನಾಡುತ್ತಾ ಕಡೆಯುವುದು .ನೆಂಟರಿಷ್ಟರು ಬಂದರೆ ಅಕ್ಕಿ ನೀರಿಗೆ ದುಪ್ಪಟ್ಟು ಬಿದ್ದು ಅರೆಯುವ ಸಮಯ ಹಿಗ್ಗುವುದು ;ಆದರೆ ಅತಿಥಿ ಸತ್ಕಾರ ಸಂಭ್ರಮ ದಲ್ಲಿ ಅದು ಬಹಳ ಹಗುರವಾಗುವದು . ಈ ಕೆಲಸದ ನಡುವೆ ಅಮ್ಮ ಹಾಲು ಕರೆಯಲೋ ,ಬೇರೆ ಯಾವುದೊ ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಕರೆದು 'ಈಗ ಬರುತ್ತೇನೆ ನಾಕು ಸುತ್ತು ತಿರುಗಿಸು 'ಎಂದು ನಮಗೆ ನಿರ್ದೇಶಿಸುವರು . ಹಾಗೆ ನಮಗೆ ಅರೆಯುವ ಕೆಲಸದಲ್ಲಿಯೂ ಅಪ್ಪ್ರಯ್ನಟಿಸ್ ಶಿಪ್ ಆಗಿದೆ . ಒಂದು ಕೈಯ್ಯಲ್ಲಿ ಕಂಜಿ ತಿರುಗಿಸುವುದು ,ಇನ್ನೊಂದರಲ್ಲಿ ಕೂಡುವುದುದು ;ಹಿಟ್ಟು ಗಟ್ಟಿಯಾದಾಗ ನೀರು ಸೇರಿಸಿಕೊಳ್ಳುವದು ಒಂದು ಕಲೆ .ತಪ್ಪಿದರೆ ಕೈಯಲ್ಲಿ ಕಲೆ ಆದೀತು . 

ಈಗ ಮಿಕ್ಸಿ ಗ್ರೈಂಡರ್ ಬಂದು ಇದು ಮೂಲೆಗೆ ಬಿದ್ದಿದೆ .ಇದನ್ನು ಯಾರಿಗಾದರೂ ಕೊಡುವಾ ಎಂದರೆ ನಮ್ಮ ಮನೆಯವರು ಒಪ್ಪುವುದಿಲ್ಲ .ಅದು ಒಂದು ಐಶ್ವರ್ಯ ಎಂದು ಅವರ ನಂಬಿಕೆ  . ನಮ್ಮ ಮನೆ ಸಾಮಗ್ರಿಗಳ ನೋನ್ ಪ್ಲೇಯಿಂಗ್ ಕ್ಯಾಪ್ಟನ್ ಆಗಿದೆ . 

ಹಿಂದೆ ಬಾವಿಯಿಂದ ನೀರು ಸೇದಿ ,ದಿನಾಲೂ ಭಾರೀ ಕಲ್ಲು ಅರೆದು ನಮ್ಮ ಅಮ್ಮಂದಿರಿಗೆ ಕಷ್ಟ ಇತ್ತಾದರೂ ,ಅವರ ಅರಿವಿಲ್ಲದೇ ಒಳ್ಳೆಯ ಮತ್ತು ನಿಯತ ವ್ಯಾಯಾಮ ದಿಂದ ಅವರ ಆರೋಗ್ಯಕ್ಕೆ ಸಹಾಯಕಾರಿ ಆಗಿತ್ತು ಎಂದು ನನ್ನ ಭಾವನೆ . ಮನಸು ದೊಡ್ಡದಾಗಿದ್ದ ಕಾರಣ  ಕೆಲಸ  ಹಗುರ ಎನಿಸುತ್ತಿದ್ದಿರ ಬೇಕು 



ಶುಕ್ರವಾರ, ಏಪ್ರಿಲ್ 8, 2022

ನಂದರ ಬೆಟ್ಟು ದಾಸರ ನೆನಪು

 ನಂದರ ಬೆಟ್ಟು ದಾಸರ ನೆನಪು 

 

ಅಂಗ್ರಿ (ನನ್ನ ಹುಟ್ಟೂರು )ಗೆ ನೈಋತ್ಯ  ದಿಕ್ಕಿನಲ್ಲಿ ನಂದರ ಬೆಟ್ಟು  ಬೈಲು ಇದೆ . ಇಲ್ಲಿ ದಾಸ ಕುಟುಂಬಗಳು ಇದ್ದವು . ಇವರಲ್ಲಿ ಹಿರಿಯರು ಹಳ್ಳಿಯ  ಮನೆ ಮನೆ ಅಂಗಳಕ್ಕೆ' ಗೋವಿಂದಾ ಗೋವಿಂದಾ ' ಎಂದು   ಶಂಖ ಜಾಗಟೆ ಯೊಡನೆ ಬರುವರು . ಹಣೆಯಲ್ಲಿ ದೊಡ್ಡ ನಾಮ . ಒಂದು ಕೈಯಲ್ಲಿ ಜಾಗಟೆ ಮತ್ತು ಅದನ್ನು ಬಡಿಯುವ ಕೋಲು ,ಇನ್ನೊಂದು ಕೈಯ್ಯಲ್ಲಿ ಶಂಖ . ಒಂದೇ ಕೈಯಲ್ಲಿ ಜಾಗಟೆ ಮತ್ತು ಕೋಲು ಹಿಡಿದು ಲಯ ಬದ್ಧ ವಾಗಿ ಬಾರಿಸುವದು ಕಷ್ಟದ ಕೆಲಸ . ಮನೆಗಳಲ್ಲಿ ಅವರಿಗೆ ಬಾಯಾರಿಕೆ ಕೊಟ್ಟು , ಸೇರು ಭತ್ತ ಅಥವಾ ಅಕ್ಕಿ ಹಾಕುವರು . 

ಇವರ ಮನೆಯ ಇತರರು ಹಳ್ಳಿಯ ಮೊಬೈಲ್ ಫ್ಯಾನ್ಸಿ ಸ್ಟೋರ್ ಆಗಿದ್ದು ,ಪೆಟ್ಟಿಗೆಯಲ್ಲಿ ಬಳೆ ಮಣಿಸರಕು ಹೇರಿಕೊಂಡು ಮನೆ ಮನೆಗೆ ಬರುವರು . ಮನೆಯ ಹೆಂಗಸರು ಮಕ್ಕಳು ( ಮುಖ್ಯವಾಗಿ ಹುಡುಗಿಯರು )ಅವರ ಸುತ್ತ  ಸೇರುವರು . ಬಣ್ಣ ಬಣ್ಣದ ಬಳೆಗಳು ತಮಗೆ ಇಷ್ಟ ಪಟ್ಟದ್ದು ಹಾಕಿ ನೋಡುವರು .ಆಗೆಲ್ಲಾ ಗಾಜಿನ ಬಳೆಗಳೇ ಜಾಸ್ತಿ . ಎಳೆಯ ಶಿಶುಗಳಿಗೆ ಕರಿಮಣಿ ಬಳೆ 

ಇನ್ನು ಒಂದು ಮುಖ್ಯ ಐಟಂ ಪಟ್ಟೆ ನೂಲು . ಇದು ಬಹು ಉಪಯೋಗಿ ಸಾಧನ. ಮುಖ್ಯವಾಗಿ ಉಡಿದಾರಕ್ಕೆ(ದಪ್ಪಡ ಪತ್ತೆ ನೂಲು ) . ಉಳ್ಳವರು ಬೆಳ್ಳಿ ಬಂಗಾರದ ಉಡಿದಾರ  ಧರಿಸಿದರೆ ನಮಗೆಲ್ಲಾ ಇದುವೇ ಆಧಾರ (. ಉಡಿದಾರಕ್ಕೆ ಕೌಪೀನ . ). ಇನ್ನು ವಿವಾಹಿತ ಮಹಿಳೆಯರು ತಾಳಿ ಧಾರಣೆಗೆ ಇದನ್ನೇ ಉಪಯೋಗಿಸುತ್ತಿದ್ದರು . ಮದುವೆ ಮಂಗಳ ಕಾರ್ಯದಲ್ಲಿ ಕಂಕಣ ಕಟ್ಟಲು ,ಮಂತ್ರವಾದಿಗಳಿಗೆ ಮಂತ್ರಿಸಿ ಕೊಡಲು ಇದುವೇ ಬೇಕು .ಮೊನ್ನೆ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಡ್ರಿಪ್ ಹಾಕಲು ಮೊಣಕೈಯಿಂದ ಮಂತರಿಸಿದ  ನೂಲು ತೆಗೆಯಲು ಸುತಾರಂ ಒಪ್ಪಲಿಲ್ಲ . 

ಇವರ ಪೆಟ್ಟಿಗೆಯ ಇನ್ನೊಂದು ಅಮೂಲ್ಯ ವಸ್ತು ಕುಂಕುಮ .ಆಗೆಲ್ಲಾ ಈಗಿನಂತೆ ಬಿಂದಿ ಸ್ಟಿಕ್ಕರ್ ಅಂಟಿಸುವ ಪದ್ಧತಿ ಇರಲಿಲ್ಲ . ಹಣೆಗೆ ಜೇನು ಮಯಣ  ದ  ಪ್ರೈಮರ್ ಹಚ್ಚಿ ಅದರ ಮೇಲೆ  ಕುಂಕುಮದ ಬೊಟ್ಟು.ಉರುಟು ಬೊಟ್ಟು ಇಡಲು ಕೆಲವರು ಒಟ್ಟೆಮುಕ್ಕಾಲು ಉಪಯೋಗಿಸುತ್ತಿದ್ದರು .ನಮ್ಮ ಅಜ್ಜಿ ಹಣೆ ತುಂಬಾ ಕುಂಕುಮದ ಅಡ್ಡ ಪಟ್ಟಿ ಬೊಟ್ಟು ಇಡುತ್ತಿದ್ದರು .ಈಗ ನಮ್ಮಲ್ಲಿ  ಇಂತಹ ಸಿಂಧೂರ ತಿಲಕ ಇಲ್ಲ .  ಮಕ್ಕಳಿಗೆ ಲಾಲ್ ಗಂಧಾ ಎಂಬ ಕೆಂಪು ದ್ರವ ರೂಪದ ಬಣ್ಣ ಬರಲು ಆರಂಭವಾಗಿತ್ತು . 

ಹುಡುಗಿಯರ ಜಡೆಗೆ ಬಣ್ಣ ಬಣ್ಣದ ರಿಬ್ಬನ್ (ಇದನ್ನು ಟೇಪು ಎನ್ನುತ್ತಿದ್ದರು ),ಕ್ಲಿಪ್ ,ಬಾಚಣಿಕೆ ಎಲ್ಲಾ ಇವರ ಪೆಟ್ಟಿಗೆಯಲ್ಲಿ ಲಭ್ಯ . 

ನಾನು ಹಿಂದೆ ಬರೆದಿದ್ದ ಹಾಗೆ' ಲವ್ ಇನ್ ಟೋಕಿಯೋ 'ಎಂಬ ಹಿಂದಿ ಚಿತ್ರದಲ್ಲಿ ನಾಯಕಿ ತನ್ನ ಜಡೆಗೆ ಮೂರು ಬಣ್ಣದ ಪ್ಲಾಸ್ಟಿಕ್ ಗೋಲಿಗಳಿಗೆ ಎಲಾಸ್ಟಿಕ್ ದಾರ  ಕಟ್ಟಿ ಅದನ್ನು ಜಡೆ ಕೂದಲು ಬಂಧಿಸಿದ್ದು ,ಅದಕ್ಕೆ ಲವ್ ಇನ್ ಟೋಕಿಯೋ ಎಂದೇ ಹೆಸರು ಆಯಿತು .ನಮ್ಮ ಹಳ್ಳಿಯ ಹುಡುಗಿಯರು ಅದನ್ನು ಲವಿನ್ ಟಕಿ ಎಂದು ಕರೆಯುತ್ತಿದ್ದು ಬಳೆಗಾರನಲ್ಲಿ ಅದು ಇಲ್ಲವೇ ಎಂದು ವಿಚಾರಿಸುತ್ತಿದ್ದರು .

ಬುಧವಾರ, ಏಪ್ರಿಲ್ 6, 2022

ಬದಲಾವಣೆಯ ಹರಿಕಾರ ಶ್ರೀ ಶ್ರೀನಿವಾಸ್

             ಬದಲಾವಣೆಯ ಹರಿಕಾರ ಶ್ರೀ ಶ್ರೀನಿವಾಸ್ 


                       


ನನಗೆ  ಮುಂಜಾನೆ ವಾಕಿಂಗ್ ಮಾಡುವದುದರಿಂದ ಶರೀರಕ್ಕೆ ವ್ಯಾಯಾಮ ಮಾತ್ರವಲ್ಲ  ಮನಸಿಗೆ  ಉಲ್ಲಾಸ ಉಂಟಾಗುತ್ತದೆ .ವಿವಿಧ  ಪಕ್ಷಿಗಳು ,ಅವುಗಳ ಸಂಗೀತ ಮತ್ತು ಬಗೆ ಬಗೆಯ ಪ್ರಾಣಿಗಳು ,ಪ್ರಕೃತಿಯಲ್ಲಿ ಕಾಣುವ ಹೊಸತು ಇವೆಲ್ಲಾ ಚೇತೋಹಾರಿ  ಅಂಶಗಳು ಆದರೆ ಅಲ್ಲದೆ  ವಾಕಿಂಗ್ ಸಮಯದಲ್ಲಿ ಬೇರೆ ವಾಕ್ಸ್ ಆ ಲೈಫ್ (walk of  life )ನ  ಜನರು ಸಿಗುತ್ತಾರೆ . ಅವರೊಡನೆ ಉಭಯ ಕುಶಲೋಪರಿ ವಿನಿಮಯ ಕೂಡಾ ನನಗೆ ಇಷ್ಟ . 

                  ಅವರಲ್ಲಿ ಒಬ್ಬರು ಶ್ರೀನಿವಾಸ್ .ಇವರು ವಿವೇಕಾನಂದ ಕಾಲೇಜು ರೋಡ್ ನಲ್ಲಿ ಸ್ವಸ್ತಿಕ್ ಟೈಲರ್ ಎಂಬ  ಅಂಗಡಿ ಇಟ್ಟಿದ್ದಾರೆ .ಮುಂಜಾನೆ ಆರು ಗಂಟೆಗೆಲ್ಲಾ ಹಾಜರ್ . ಅಂಗಡಿ ತೆರೆದು ದೇವರ ಪಟಕ್ಕೆ  ನಮಸ್ಕರಿಸಿ ಕೆಲಸದಲ್ಲಿ ನಿರತರಾಗಿರುತ್ತಾರೆ . ನಮಗೆ ಸ್ಪೋಂಟೆನಿಯಸ್ ಮೈತ್ರಿ.ನನ್ನ ನೆರಳು ಹಾಯ್ದೊಡನೆ ಓಡಿ ಹೊರ ಬಂದು ನಮಸ್ಕಾರ ಮಾಡುವರು.

ಶ್ರೀನಿವಾಸ್  ಮೂರು ದಶಕ  ಬೆಂಗಳೂರಿನಲ್ಲಿ ಟೈಲರ್ ವೃತ್ತಿ ನಡೆಸಿ ಈಗ ಪುತ್ತೂರಿಗೆ ಬಂದು ನೆಲೆಸಿರುವ ಇವರ ಹುಟ್ಟೂರು  ಅನಂತಾಡಿ. ಇವರ  ಸ್ಪೆಷಾಲಿಟಿ ಎಂದರೆ  ಆಲ್ಟರೇಷನ್ ಅಥವಾ ಬದಲಾವಣೆ .ಸಾಮಾನ್ಯವಾಗಿ  ಸಿಂಪಿಗರು  ಈ ಕೆಲಸ ಇಷ್ಟ ಪಡುವುದಿಲ್ಲ . ಇವರ ಮುಖ್ಯ ವೃತಿಯೇ ಅದು . 

ಬಾಲಂಗೋಚಿ : ಇವರು ಬಟ್ಟೆ ಮಾತ್ರ ಅಲ್ಟ ರೇಷನ್ ಮಾಡುವರು .ಲೇಡಿ ಯನ್ನು ಜೆಂಟ್ಸ್ ಮತ್ತು ವೈಸ್ ವೆರ್ಸ ಅಲ್ಲ . ಹಿಂದೆ ಮನೆ ತುಂಬಾ ಮಕ್ಕಳು ಇದ್ದಾಗ ಅಣ್ಣನ ಹಳೆ ಅಂಗಿ ತಮ್ಮ ,ಅಕ್ಕನ ಲಂಗ ರವಿಕೆ ತಂಗಿ ಸಣ್ಣ ದೊಡ್ಡ ಮಾಡಿಸಿ ಹಾಕುವುದು ಇತ್ತು . ಬೆಳೆಯುವ ಮಕ್ಕಳಿಗೆ ವರ್ಷಕ್ಕೇ ಹೊಲಿಸಿದ ಉಡುಪು ಟೈಟ್ ಆಗುವುದು ಸಹಜ .



ಮಂಗಳವಾರ, ಏಪ್ರಿಲ್ 5, 2022

ಶೀತದ ಔಷಧಿಗಳು ಮತ್ತು ಅಮಲು

    ಶೀತದ ಔಷಧಿಗಳು ಮತ್ತು ಅಮಲು 

 

ಇಂದು ಬಿಡುಗಡೆಯಾದ ಹಿರಿಯರು ಬಡೆಕ್ಕಿಲ ಡಾ ಶ್ರೀಧರ ಭಟ್ ಅವರ 'ಸಾರಂಗ ನಿನ್ನ ನೆನಪಿನಲ್ಲಿಯೇ 'ಓದುತ್ತಿದ್ದೆ .ಅದರಲ್ಲಿ ಒಂದು ದಿನ ಡಾ ಭಟ್ ಅವರು ಮುಖ್ಯವಾದ ಒಂದು ವಿಷಯ ಚೆನ್ನಾಗಿ ತಯಾರು ಮಾಡಿ ಪಾಠ ಮಾಡುತ್ತಿರುವಾಗ ಓರ್ವ ವಿದ್ಯಾರ್ಥಿನಿ ನಿದ್ದೆ ತೋಗುತ್ತಿರುವದು ಕಂಡು ಬೇಸರ ಪಟ್ಟರು . ಬುದ್ದಿವಂತ ಹುಡುಗಿ . ಕಾರಣ ವಿಚಾರಿಸಲು ಆಕೆಗೆ  ಫ್ಲೂ ಜ್ವರ ,ಡಾಕ್ಟರರು ಆಂಟಿಬಯೋಟಿಕ್ ಕೊಟ್ಟಿದ್ದಾರೆ ;ಸ್ವಲ್ಪ ನಿದ್ದೆ ತೂಗ ಬಹುದು ಎಂದು ಹೇಳಿದ್ದಾರೆ .ಇದೇ ವಿಷಯದ ನಿಮ್ಮ ಹಿಂದಿನ ಪಾಠ ಕೇಳಿ ಇದನ್ನು ತಪ್ಪಿಸ ಬಾರದು ಎಂದು ಹಠ ದಿಂದ ತರಗತಿಗೆ ಬಂದುದು ಎಂದು ತಿಳಿದು ಬಂತು . 

ಇಲ್ಲಿ ಒಂದು ವಿಚಾರ .ಫ್ಲೂ ವೈರಸ್ ಜನ್ಯ .ಅದಕ್ಕೆ ಆಂಟಿಬಯೋಟಿಕ್ ಬೇಡ .ಒಂದು ವೇಳೆ ಸೇವಿಸಿದರೂ ಅದರಿಂದ ಅಮಲು ಬರದು .ಆದರೆ ಶೀತ ಕೆಮ್ಮಿಗೆ ಸಿರಪ್ ಮತ್ತು ಮಾತ್ರೆ ರೂಪದಲ್ಲಿ ಕೊಡುವ ಆಂಟಿ ಹಿಸ್ಟಮಿನ್ ಎಂಬ ಔಷಧಿ ನಿದ್ದೆ ತೂಗಿಸುವುದು ,ಏಕಾಗ್ರತೆ ತಪ್ಪಿಸುವುದು ಮಾಡ ಬಹುದು . ಕ್ಲೋರ್ ಫೆನಿರಮಿನ್ ಮಾಲಿಯೇಟ್ ,ಫೆನಿರಮಿನ್ ಮಾಲಿಯೇಟ್ ,ಡೈ ಫೆನ್ ಹೈಡ್ರಾಮಿನ್  ಇತ್ಯಾದಿ ಮೊದಲನೇ ಪೀಳಿಗೆ ಯ ಮತ್ತು   ಸೆಟ್ರಿ ಜಿನ್ ,ಲೊರಟಿದಿನ್  ನಂತಹ ಎರಡೇ ಪೀಳಿಗೆಯ ಆಂಟಿ ಹಿಸ್ಟಮಿನ್ ಔಷಧಿಗಳು ಅಮಲು ಉಂಟು ಮಾಡ ಬಲ್ಲವು .ಅದರಲ್ಲೂ ಒಂದನೇ ಪೀಳಿಗೆಯ ಔಷಧಿಗಳು ಮದ್ಯ ಪಾನಕ್ಕಿಂತಲೂ ಹೆಚ್ಚು ಇದ್ದು ಇವುಗಳನ್ನು ಸೇವಿಸಿದವರು ವಾಹನ ಚಲಾವಣೆ ಮಾಡ ಬಾರದು . ಪ್ರಿಸ್ಕ್ರಿಪ್ಷನ್ ಇಲ್ಲದೆ ಓವರ್ ದಿ ಕೌಂಟರ್ ಸಿಗುವ ಕೆಮ್ಮು ಶೀತದ ಔಷಧಿ ಗಳಲ್ಲಿ ಇಂತಹ ರಾಸಾಯನಿಕಗಳು ಇರುತ್ತವೆ . 

ಈಗ ಪರೀಕ್ಷಾ ಸೀಸನ್ . ಅದರ ಜೊತೆ ಶೀತ ಜ್ವರಗಳೂ ಇವೆ . ಪರೀಕ್ಷಾರ್ಥಿಗಳು ಇಂತಹ ಔಷಧಿ ಸೇವಿಸಿ ಹೋದರೆ ಓದಿದ್ದು ನೆನಪಿಗೆ ಬಾರದೇ ಹೊಂದಿತು . 

(ಎಲ್ಲರಲ್ಲೂ ಒಂದೇ ತರಹ ಅಮಲು ಉಂಟಾಗುವದಿಲ್ಲ ,ಕೆಲವರಲ್ಲಿ ಹೆಚ್ಚು ,ಕೆಲವರಲ್ಲಿ ಕಮ್ಮಿ ಇರ ಬಹುದು .ಆದರೂ ರಿಸ್ಕ್ ಯಾಕೆ ?)

ಕಣ್ಮರೆಯಾದ ಗೋಡೆ ಫೋಟೋ ಗಳು

 

ಲೇಖಕ ವಸುದೇಂದ್ರ ಅವರ' ರಕ್ಷಕ ಅನಾಥ ' ಎಂಬ ಪುಸ್ತಕದಲ್ಲಿ ಅದೇ ತಲೆ ಬರಹದ ಲೇಖನ ಇದೆ . ಬಳ್ಳಾರಿ ಯ ತಮ್ಮ ಮನೆಯನ್ನು ಬೆಂಗಳೂರಿಗೆ ಬದಲಿಸುವಾಗ ಎದುರಿಸಿದ ಒಂದು ಸಮಸ್ಯೆ .ಬಳ್ಳಾರಿ ಯ ಅವರ ಮನೆಯಲ್ಲಿ ,ಹಿಂದಿನ ಮನೆಗಳಂತೆ ,ಫ್ರೇಮ್ ಹಾಕಿ  ಗೋಡೆಗೆ ನೇತು ಹಾಕಿದ್ದ ಹಲವು ದೇವರ ಫೋಟೋ ಗಳನ್ನು ಬೆಂಗಳೂರಿನ ಆಧುನಿಕ ಮನೆಯಲ್ಲಿ ಎಲ್ಲಿ ಪುನರ್ವಸತಿ ಕಲ್ಪಿಸುವದು ?ಈಗಿನ ಮನೆಗಳಲ್ಲಿ ಗೋಡೆಗೆ ಮೊಳೆ ಹೊಡೆಯುವಂತಿಲ್ಲ . 

ಹಿಂದೆ ಮನೆಯ ಮುಖ್ಯವಾಗಿ ಚಾವಡಿಯ ಗೋಡೆಯಲ್ಲಿ ಲಕ್ಷ್ಮಿ ,ಸರಸ್ವತಿ ,ತಿರುಪತಿ ತಿಮ್ಮಪ್ಪ ಮತ್ತು ಮನೆ ದೇವರು ಹೀಗೆ ಹಲವು ಚಿತ್ರಗಳು ಫ್ರೇಮ್ ಹಾಕಿಸಿ ನೇತಾಡುತ್ತಿದ್ದವು . ಕೆಲವು   ಕ್ಯಾಲೆಂಡರ್ ಕಟ್ ಮಾಡಿ ಫ್ರೇಮ್ ಹಾಕಿದಂತಹವು . ಈ ಚಿತ್ರಗಳ ಆಕಡೆ ಈ ಕಡೆ ಮನೆಯ ಯಜಮಾನ ,ಅವನ ಮಕ್ಕಳು ಇವರ ಮದುವೆ ಯಾದಾಗ ಸ್ಟುಡಿಯೋ ದಲ್ಲಿ ತೆಗೆಸಿದ ಬ್ಲಾಕ್ ಅಂಡ್ ವೈಟ್ ಫೋಟೋ ಗಳು . ಶಾಲೆಯ ಸೆಂಡ್ ಆಫ್ ಗ್ರೂಪ್ ಫೋಟೋ ಗಳು (ಇವುಗಳಲ್ಲಿ ಮೊದಲ ಸಾಲಿನಲ್ಲಿ ಕೈಯ್ಯಲ್ಲಿ  ವಾಚ್ ತೋರಿಸಿ ಕೊಂಡು ನಿಂತ ಹುಡುಗಿಯರು ),ಎಳೆಯ ಮಕ್ಕಳ ಭಾವ ಚಿತ್ರ ಇತ್ಯಾದಿ . ಇವುಗಳು ಧೂಳು ಮಯವಾಗಿ ಇರುತ್ತಿದ್ದಲ್ಲದೆ ಹಿಂದುಗಡೆ ಚೇಡರ ಬಲೆ ಹುಳ ಹುಪ್ಪಟೆ ಹಲ್ಲಿ ಮರಿಗಳು ದೇವರ ಆಶ್ರಯ ದಲ್ಲಿ ನಿಶ್ಚಿಂತೆ ಯಾಗಿ ಇರುತ್ತಿದ್ದವು . ಫ್ರೇಮ್ ನಿಂದ ಕುಟ್ಟೆ ಹುಡಿ ಉದುರುದು . ದೊಡ್ಡಚಿತ್ರಗಳ ಮೇಲ್ಬಾಗ ಎದುರಿಗೆ  ಬಗ್ಗಿಸಿ  ಕಟ್ಟುತ್ತಿದ್ದರು ;ಅದರ ಹಿಂದೆ ಕನ್ನಡಕ ,ಊದು ಬತ್ತಿ ಕಟ್ಟು ಇತ್ಯಾದಿ ಇಡುವರು .

ಮನೆಗೆ ನೆಂಟರು ಬಂದರೆ ಬೆಲ್ಲ ನೀರು ಕುಡಿದು ಡ್ರೈವರ್ ಮನಸಿದ್ದರೆ ಈ ಪಟಗಳನ್ನು  ನೋಡುವರು . ಈಗಿನ ಹಾಗೆ ಟೈಮ್ ಪಾಸ್ ಆಲ್ಬಮ್ ನೋಡುವ ಪದ್ಧತಿ ಇರಲಿಲ್ಲ . 

ಇನ್ನು ಉಳಿದ ಜಾಗಗಳಲ್ಲಿ ಕ್ಯಾಲೆಂಡರ್ ಗಳು .ಡಿಸೆಂಬರ್ ತಿಂಗಳಿನಿಂದ ಅವುಗಳ ಭೇಟೆ ಆರಂಭ . ಜವುಳಿ ಶೆಟ್ಟರ ಬಳಿ ಜಯಂತಿಲಾಲ ಬ್ರದರ್ಸ್ ,ಸಾಹೇಬರ ಅಂಗಡಿಯಿಂದ ಅಗರಬತ್ತಿ ಕಂಪನಿಯ ,ಮತ್ತು ಮಂಗಳೂರಿನಿಂದ ದಕ ಕೃಷಿಕರ ಸಹಕಾರಿ ಮಾರಾಟ ಸಂಘದ ಕ್ಯಾಲೆಂಡರ್(ಹಾಗೆ ಹತ್ತು ಹಲವು ) . ದೇವರ ಪಟ ಇದ್ದರೆ ಆದ್ಯತೆ . 

ಇದರ ಜತೆ  ಕೊಡೆಯ ಕಡ್ಡಿಯನ್ನು ಬಗ್ಗಿಸಿ  ,ಅದರಲ್ಲಿ ಬಂದ ಮದುವೆ ,ಮುಂಜಿ ಮತ್ತು  ಶ್ರಾದ್ದ ಇತ್ಯಾದಿಗಳ ಆಮಂತ್ರಣ ಗಳನ್ನು ನೇತು ಹಾಕುವರು .ಪಂಚಾಂಗ ಕೂಡಾ . ಹಿಂದೆ ಹಳ್ಳಿಗಳಲ್ಲಿ (ಕರೆಂಟ್ ,ಫೋನ್ ಇತ್ಯಾದಿ ) ಬಿಲ್ಲು ಗಳ ಕಾಟ ಇರಲಿಲ್ಲ .

ಇಂತಹ ಫೋಟೋ  ಗಳು ಎಲ್ಲಾ ಧರ್ಮದವರ ಮನೆಯ್ಲಲೂ ಅವರವರ ಭಾವ ಭಕುತಿಗೆ ತಕ್ಕಂತೆ  ಇರುತ್ತಿದ್ದವು . ಬಸ್ ಗಳಲ್ಲಿ  ಮಾತ್ರ ಸರ್ವ ಧರ್ಮ ಸಮನ್ವಯತೆ ಸಾರುವಂತೆ ಡ್ರೈವರ್ ಹಿಂದೆ  ಮಧೂರು ಗಣಪತಿ ,ಜೀಸಸ್ ಮತ್ತು ಕಾಬಾದ  ಚಿತ್ರಗಳನ್ನು ಹಾಕಿ ದಿನಾಲೂ ಅದಕ್ಕೆ ಮಾಲೆ ಹಾಕಿ ಸಿಬ್ಬಂದಿ ನಮಸ್ಕರಿಸುತ್ತಿದ್ದರು . 

ಸೋಮವಾರ, ಏಪ್ರಿಲ್ 4, 2022

ಯುಗಾದಿ

 

                                           



ಮೊನ್ನೆ ಚಂದ್ರಮಾನ ಯುಗಾದಿ ;ನಮ್ಮಲ್ಲಿ ಸಾಮಾನ್ಯವಾಗಿ  ಸೌರಮಾನ ಯುಗಾದಿ ಅಥವಾ ವಿಷು ಹಬ್ಬ ಹೆಚ್ಚು ಆಚರಣೆಯಲ್ಲಿ ಇದ್ದರೂ ಒಂದು ಪಾಯಸ ಮಾಡುವುದು ಉಂಟು . ಎಲ್ಲಕ್ಕಿಂತ ಮುಖ್ಯ ಹೊಸ ಪಂಚಾಂಗ .ನಮ್ಮಲ್ಲಿ ದಶಕಗಳಿಂದ ವೈಜಯಂತಿ ಪಂಚಾಂಗ .ಅದರ ಮುಖ ಪುಟದಲ್ಲಿ ಮೀಸೆ ಹೊತ್ತ ಬಾಲಗಂಗಾಧರ ತಿಲಕರ ಮತ್ತು ವೈ ವೆಂಕಟೇಶ ಕೇತಕರ ಪಟ . 

ಬಂದ ಕೂಡಲೇ ಓದುವುದು ಸಂವತ್ಸರ ಭವಿಷ್ಯ .ಈ ವರ್ಷ ಎಷ್ಟು ಕೊಳಗ ಮಳೆ ಬೀಳುವುದು ,ಅದರಲ್ಲಿ ಸಮುದ್ರಕ್ಕೆ ಎಷ್ಟು ,ಭೂಮಿಗೆ ಎಷ್ಟು ಇತ್ಯಾದಿ .ಆ ಮೇಲೆ ನಮ್ಮ ರಾಶಿ ಭವಿಷ್ಯ . ಅದು ಆಶಾಜನಕ ಇದ್ದರೆ ಓಕೆ .ಇಲ್ಲದಿದ್ದರೆ ಪತ್ರಿಕೆಗಳ ಯುಗಾದಿ ಸಂಚಿಕೆಯನ್ನು ನೋಡುವುದು .ಹೆಚ್ಚಾಗಿ ಅವು ಒಳ್ಳೆಯದನ್ನೇ ಬರೆಯುವವು .ಬೆಸ್ಟ್ ಆಫ್ ಆಲ್ ನಮಗೇ ಎಂದು ತಿಳಿದು ಸಂತೋಷ ಪಡುವುದು .

ಪಂಚಾಂಗದಲ್ಲಿ ಗೌಳೀ ಪತನ ಫಲಂ ಎಂದು ಒಂದು ಕಾಲಂ ಇದೆ .ಹಳ್ಳಿ ಬಿದ್ದುದರ ಬಗ್ಗೆ .ನಮ್ಮ ಶರೀರದ ಯಾವ ಭಾಗದಲ್ಲಿ ಬಿದ್ದರೆ (ನಮಗೆ ,ಹಲ್ಲಿಗೆ ಅಲ್ಲ )ಏನು ಸೂಚನೆ ?ನಡು ತಲೆಗೆ ಬಿದ್ದರೆ ಮೃತ್ಯು ,ಬಲ ಭುಜಕ್ಕೆ ಬಿದ್ದರೆ ಜಯ ಮತ್ತು ಸುಖ ಇದೆ .ಗಂಡಸರಿಗೆ ಬೇರೆ ಹೆಂಗಸರಿಗೆ ಬೇರೆ . ಒಂದು ವೇಳೆ ತಲೆಗೆ ಬಿದ್ದು ಭುಜಕ್ಕೆ ತಾಗಿ ಕೆಳಗೆ ಬಿದ್ದರೆ?ಬಾಲ್ಯದಲ್ಲಿ ಹಾವು ಬಾರಿ ಹಲ್ಲಿ ಮೈಮೇಲೆ ಬಿದ್ದಾಗ ಹೆದರಿ ಪಂಚಾಂಗ ಓದಿ ಸಮಾಧಾನ ಪಟ್ಟುದೋ ಅಥವಾ ಭಯ ಪಟ್ಟು ದೇವರಿಗೆ ನಮಸ್ಕಾರ ಮಾಡಿದ್ದೂ ಇದೆ .

ವೈಜಯಂತಿ ಪಂಚಾಂಗ ದಲ್ಲಿ ನಾನು ಮೆಚ್ಚಿದ್ದು ಇತ್ತೀಚೆಗಿನ ವಾಸ್ತು ಗೀಳನ್ನು ಅವರು ವಿಮರ್ಶಿದ್ದು .

 

ಶನಿವಾರ, ಏಪ್ರಿಲ್ 2, 2022

ಸೇಮೆದ ಅಡ್ಯೆ

                        ಅರ್ಥ ಶಾಸ್ತ್ರದಲ್ಲಿ  ಇನ್ಕ್ಲ್ಯೂಸಿವ್ ಗ್ರೋಥ್ ,ಈಕ್ವಾಲೈಸರ್ ಇತ್ಯಾದಿ ಶಬ್ದಗಳು ಇವೆ . ಸಂದರ್ಭಕ್ಕೆ ಅನುಗುಣವಾಗಿ ಅವುಗಳಿಗೆ ಮಹತ್ವ ಇದೆ . ಅಡಿಗೆಯಲ್ಲಿ ಎಲ್ಲರನ್ನೂ ಒಳ ಗೊಳ್ಳ್ಳುವ ತಿಂಡಿ ಶ್ಯಾವಿಗೆ (ಸೇಮಗೆ ,ಸೇಮೆದ ಅಡ್ಯೆ). ಇನ್ಕ್ಲ್ಯೂಸಿವ್ ಇನ್ ಕುಕಿಂಗ್ .  ಯಾಕೆಂದರೆ ಒಬ್ಬರಿಂದ ಇದನ್ನು ಮಾಡುವುದು ಕಷ್ಟ . ಒಬ್ಬರು ಉಂಡೆ ಹಾಕಿ  ಶ್ಯಾವಿಗೆ ತೆಗೆದರೆ ಇನ್ನೊಬ್ಬರು ಒತ್ತುವುದು . ಹಿಂದೆ ಇದ್ದ ಕುದುರೆ ಮುಟ್ಟು ಒತ್ತಲು ಎರಡು ಮೂರು ಮಂದಿ ಸೇರುತ್ತಲಿದ್ದರು . ಹಿಂದೆ ನಮ್ಮಲ್ಲಿ ಅಂತಹ ಮರದ ಮುಟ್ಟು (ಮಣೆ )ಇದ್ದು  ಅದರ ಮೇಲೆ ಕಬ್ಬಿಣದ ರಾಡ್  ಒಂದು  ಕಡೆ ಕಿಟಿಕಿಯ ಅಡ್ಡ (ಅಥವಾ ಸರಳು )ಗೆ ಸಿಕ್ಕಿಸಿ ಕುದುರೆ ಮೇಲಿಂದ ಹಾದ ಇನ್ನೊಂದು ಬದಿಯನ್ನು ನಾವು ಮಕ್ಕಳು ಹಿಡಿದು ನೇಲುತ್ತಿದ್ದೆವು ;ಅಥವಾ ಹಿರಿಯ ಗಂಡಸರು ಒತ್ತುವರು . ಸಾಮೂಹಿಕ ಒಳಗೊಳ್ಳುವಿಕೆ .ಇನ್ನು ಗಂಡು ಹೆಣ್ಣು ಮಕ್ಕಳು ಎಲ್ಲರೂ ಸಮಾನವಾಗಿ ಸೇರಿ ಮಾಡುತ್ತಿದ್ದರಿಂದ ,ಸಮಾನತೆ ಯ ಸಂದೇಶ ಕೂಡಾ ಇರುತ್ತಿತ್ತು . ಬೇರೆ ತಿಂಡಿಗಳ ತಯಾರಿಯತ್ತ ಗಂಡಸರು ಸುಳಿಯುವುದು ಕಡಿಮೆ . 

ನಾನು ಅಂದು ಕೊಳ್ಳುತ್ತಿದ್ದೆ ,ಇಷ್ಟು ಕಷ್ಟ ಪಟ್ಟು ಅಕ್ಕಿ ಉಂಡೆಯನ್ನು ಉದುರು ಉದುರು ಮಾಡಿ ತಿನ್ನುವುದು ಯಾಕೆ ?ಹಾಗೇ ತಿನ್ನ ಬಹುದಲ್ಲಾ ಎಂದು . ಏಕತಾನತೆ ತಪ್ಪಿಸುವುದು ಒಂದು ಉದ್ದೇಶ ಆದರೆ ಎಲ್ಲರೂ ಸೇರಿ ಒಂದು ತಿಂಡಿ ಹಬ್ಬ ಮಾಡುವುದು ಕೂಡಾ ಇನ್ನೊಂದು ಇರಬೇಕು . 

ಶ್ಯಾವಿಗೆ ಗೆ  ಯಾವಾಗಲೂ ಬಾಳೆಹಣ್ಣು ರಸಾಯನ ಇರುತ್ತಿದ್ದು ನಮಗೆ ಆಕರ್ಷಣೆ .  ನಮ್ಮಲ್ಲಿ ಕೊಡಗಾಸನ ಹೂವಿನ ಸಾಂಬಾರು ಕೂಡಾ ಅದರೊಡನೆ ಇರುತ್ತಿತ್ತು . ಶ್ಯಾವಿಗೆಗೆ ನೂಕಡ್ಯೆ ಎಂದೂ ಕರೆಯುವರು .ನೆಂಟರು ಬಂದು ಬಹಳ ದಿನ ಠಿಕಾಣಿ ಮಾಡಿದರೆ  ಈ ತಿಂಡಿ ಮಾಡಿದರೆ ಅವರು ಹೊರಡ ಬಹುದು ಎಂಬ ಸೂಚನೆ . 

ಶ್ಯಾವಿಗೆ ಮಣೆ ಅದರಲ್ಲೂ ಅದರ ಕೊಂಡೆ ತೊಳೆಯುವುದು ಕಿರಿ ಕಿರಿ ಕೆಲಸ .ನನ್ನ ತಮ್ಮ  ನಾರಾಯಣ ಸೇಮಿಗೆ  ಮಣೆ ಕೊಂಡೆ ಕೂಡಾ ಸರಿಯಾಗಿ ತೊಳೆಯುವ ಡಿಶ್ ವಾಷರ್(ಪಾತ್ರೆ ತೊಳೆಯುವ ಯಂತ್ರ ) ಬಂದರೆ ಮಾತ್ರ ತೆಗೆದು ಕೊಳ್ಳ ಬಹುದು ಎಂದು ಆಗಾಗ ಹೇಳುವುದುಂಟು . 

ಇಂದು ಮುಂಜಾನೆ ಸೋಫಾದಲ್ಲಿ ಕುಳಿತು ಯುಕ್ರೈನ್ ,ಶ್ರೀಲಂಕಾ ಮತ್ತು ನಮ್ಮದೇ ಹಿಜಾಬ್ ಪೆಟ್ರೋಲ್ ಧಾರಣೆ ಇತ್ಯಾದಿಗಳ  ಪರಿಹಾರ ಬಗ್ಗೆ ಗಹನವಾಗಿ ಆಲೋಚಿಸುತ್ತಿರುವಾಗ ನನ್ನ ಹೆಂಡತಿ ಶಾವಿಗೆ ಒಟ್ಟಲು ಬನ್ನಿರಿ ಎಂದು ನನ್ನನ್ನು ಈ ಯಕಃಶ್ಚಿತ್ ಕಾರ್ಯಕ್ಕೆ ಕರೆದಾಗ ನಿಂತ ನೆಲಕ್ಕೆ ಇಳಿದು ಅಡಿಗೆ ಮನೆಗೆ ಹೋಗ ಬೇಕಾಯಿತು . ಆಗ ಬಂದ ಕೋಪ ತಿಂದು ಪರಿಹಾರ ಆಯಿತು ಅನ್ನಿ .

                                           Buy Online Mangalore Store - Akki Shavige Mane

                                      


Malnad - ಮಲೆನಾಡ ವಿಶೇಷ ಒತ್ತು ಶಾವಿಗೆ : ನಮ್ಮ ಹಳ್ಳಿಮನೆಯಲ್ಲಿ... 

ಕೊನೆ ಚಿತ್ರದ ಮೂಲಕ್ಕೆ ಆಭಾರಿ

ಶುಕ್ರವಾರ, ಏಪ್ರಿಲ್ 1, 2022

ರಕ್ತ ದಾನ

                                   Blood components separated after spin-down in a collection tube. Blood... |  Download Scientific Diagram

 

ಅನ್ನದಾನಂ ಪರಂ ದಾನಂ ವಿದ್ಯಾದಾನಮತಃ ಪರಮ್| ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂ ವಿದ್ಯಯಾ|| - ದಾನಗಳಲ್ಲಿ ಅನ್ನದಾನವು ಶ್ರೇಷ್ಠವಾದ ದಾನವಾಗಿದೆ. ಆದರೆ ವಿದ್ಯಾದಾನವು ಅನ್ನದಾನಕ್ಕಿಂತಲೂ ಮಿಗಿಲಾಗಿದೆ. ಏಕೆಂದರೆ ಅನ್ನದಿಂತ ಸಿಗುವ ತೃಪ್ತಿಯು ಕ್ಷಣಿಕವಾದುದಾದರೆ, ವಿದ್ಯೆಯಿಂದ ಜೀವನವಿಡೀ  ದೊರೆಯುತ್ತದೆ. 

ಎಂಬ  ಸುಭಾಷಿತ ನಮಗೆ ಶಾಲೆಯಲ್ಲಿ ಹೇಳಿ ಕೊಡುತ್ತಿದ್ದರು .ಭಹುಶಃ  ಈ ಶ್ಲೋಕ  ರಚನೆ ಆದಾಗ  ರಕ್ತ ದಾನ ಇದ್ದಿರಲಿಕ್ಕಿಲ್ಲ .ಇದ್ದರೆ ಅದಕ್ಕೆ  ಪ್ರಾಶಸ್ತ್ಯ ಕೊಡುತ್ತಿದ್ದರು .

ಮನುಷ್ಯ ಮನುಷ್ಯರೊಳಗೆ  ಜಾತಿ ಮತ ದ್ವೇಷ  ಹುಟ್ಟು ಹಾಕಿ ಸಂತೋಷ ಪಡುವವರಿಗೆ ಆಸ್ಪತ್ರೆಯಲ್ಲಿ ರಕ್ತ ತೆಗೆದು ಕೊಳ್ಳುವಾಗ ಜಾತಿ ನೋಡುತ್ತೇವೆಯೇ ಎಂಬ  ವೇದಾಂತ ನಿಜಕ್ಕೂ ಸರಿ . ಆದರೆ ರಕ್ತದಲ್ಲಿಯೇ ಗುಂಪುಗಾರಿಕೆ ಮತ್ತು ಜಾತಿ ಇದೆಯೆಂದು ಕಾರ್ಲ್  ಲ್ಯಾಂಡ್  ಸ್ಟೀನರ್ ಎಂಬ ವಿಜ್ಞಾನಿ  ೧೯೦೦ ರಲ್ಲಿ  ಕಂಡು ಹಿಡಿದನು . ಇದರಿಂದ ರಕ್ತದಾನ ದ ಕ್ರಾಂತಿಯೇ ಆಗಿ  ರಕ್ತಸ್ರಾವ ಇತ್ಯಾದಿ ಕಾರಣಗಳಿಂದ ಮೃತ್ಯು ದವಡೆಗೆ ಹೋಗಿದ್ದ ಹಲವು ಜೀವಗಳು ಉಳಿದವು . ರಕ್ತ ಕೊಡುವಾಗ ರಕ್ತ  ಜಾತಿ ಹೊಂದಾಣಿಕೆ ನೋಡಿಯೇ ಕೊಡುವರು . ಇದನ್ನು ಗ್ರೂಪಿಂಗ್ ಮತ್ತು ಕ್ರಾಸ್ ಮ್ಯಾಚಿಂಗ್ ಎನ್ನುವರು . 

ರಕ್ತದಲ್ಲಿ ಕೆಂಪು ರಕ್ತ  ಕಣ  ಬಿಳಿ ರಕ್ತ ಕಣ ,ಪ್ಲಾಟಿಲೆಟ್ ಎಂಬ ಮುಖ್ಯ ಕಣಗಳೂ ಪ್ಲಾಸ್ಮಾ ಎಂಬ ದ್ರವವೂ ಸೇರಿದೆ . 

ಮುಖ್ಯ ರಕ್ತ ಗುಂಪುಗಳ ಹಣೆಪಟ್ಟಿ ಕೆಂಪು ರಕ್ತ ಕಣಗಳಲ್ಲಿ  ಇರುವುದು .  ಸಾಮಾನ್ಯವಾಗಿ ರಕ್ತ ಕೊಡುವುದು ಕೆಂಪು ರಕ್ತ ಕಣಗಳ  ಮರು ಪೂರಣೆಗೆ . ನಖ ಶಿಖಾಂತ್ಯ  ಪ್ರಾಣ ವಾಯು ಸಾಗಿಸುವುದು ಅವು ತಾನೇ . 

 

ಹಿಂದೆ  ಇಡೀ ರಕ್ತ ಕೊಡುತ್ತಿದ್ದೆವು .ಈಗ ಅದರಿಂದ  ಕೆಂಪು ರಕ್ತ ಕಣಗಳನ್ನು ಬೇರ್ಪಡಿಸಿ ಕೊಡುವರು ,ಇದನ್ನು ಪ್ಯಾಕ್ಡ್ ಸೆಲ್ಸ್ ಎಂದು ಕರೆಯುತ್ತಾರೆ .ಇದರಿಂದ ಕಡಿಮೆ ವಾಲ್ಯೂಮ್ ನಲ್ಲಿ ಹೆಚ್ಚು ರಕ್ತ ಕಣ ಪೂರಣ ಆಗುವುದು ,ದ್ರವ ದ  ಓವರ್ ಲೋಡ್ ಆಗದು .ಮತ್ತು ರಕ್ತ ದ್ರವ ಅಥವಾ ಪ್ಲಾಸ್ಮಾ ದಲ್ಲಿ ರಕ್ತ ಹೆಪ್ಪು ಗಟ್ಟಿಸುವ ರಾಸಾಯನಿಕಗಳು ಇರುವುದರಿಂದ  ಅದನ್ನು ಶೀತಲೀಕರಿಸಿ ರಕ್ತ ಸ್ರಾವದ ಸಂದರ್ಭ ಫ್ರೆಶ್ ಫ್ರೋಜನ್ ಪ್ಲಾಸ್ಮಾ ಎಂಬ ಹೆಸರಿನಿಂದ ಬಳಸುವರು . ಕೆಂಪು ರಕ್ತ ಕಣದ ಆಯುಸ್ ೧೨೦ ದಿನಗಳು , ಒಂದು ಯೂನಿಟ್ ನಲ್ಲಿ ಶೇಖರಿಸಿದ ಕಣಗಳ  ಸರಾಸರಿ ಆಯು ಕಮ್ಮಿ ಇರುವುದರಿಂದ  ೪೨ ದಿನಗಳ ವರೆಗೆ ಉಪಯೋಗಿಸುವರು . 

 ಇನ್ನು ಬಿಳಿ ರಕ್ತ ಕಣಗಳ ಆಯು ಕೆಲವೇ ಗಂಟೆಗಳು ಇರುವುದರಿಂದ ಅವುಗಳ  ಪೂರಣ ಮಾಡುವದು ಅಪರೂಪ .ಬದಲಿಗೆ  ಅವಶ್ಯ ಬಿದ್ದಾಗ ಅವಗಳ ಉತ್ಪಾದನೆ ಪ್ರಚೋದಿಸುವ ಔಷಧಿಗಳನ್ನು ಕೊಡುವರು . (ಕಾಲೋನಿ ಸ್ಟಿಮ್ಯುಲೇಟಿಂಗ್ ಫ್ಯಾಕ್ಟರ್ ). 

ಇನ್ನು ಪ್ಲಾಟಿಲೆಟ್ ಗಳು . ಇವು ರಕ್ತ ಸ್ರಾವ ತಡೆಗಟ್ಟುವ ಪ್ರಾಥಮಿಕ ಸಾಧನಗಳು . ಸರಾಸರಿ ಆಯುಸ್ಸು ಒಂದು ವಾರ . ಇದನ್ನು ಬೇರೆ ದಾನಿಗಳ ರಕ್ತ ದಿಂದ ಬೇರ್ಪಡಿಸಿ ಅಥವಾ ಒಬ್ಬನೇ ದಾನಿಯ ರಕ್ತವನ್ನು  ಪ್ಲೇಟೆಲೆಟ್ ಮಾತ್ರ  ಬೇರ್ಪಡಿಸುವ ಯಂತ್ರಕ್ಕೆ ಹಾಯಿಸಿ ಉಳಿದ ರಕ್ತವನ್ನು ಅವನ ಶರೀರಕ್ಕೇ  ಸೇರಿಸುವ ವಿಧಾನದಿಂದ ಸಂಗ್ರಹಿಸುವರು . ಡೆಂಗೂ  ಕಾಯಿಲೆಯಿಂದ ಈ ಕಣಗಳು  ಪ್ರಸಿದ್ದಿ ಹೊಂದಿದವು .ಪ್ಲಾಟಿಲೆಟ್ ಕಣಗಳು ೫೦೦೦ ದಿಂದ ಕಡಿಮೆ ಆದಾಗ ಅಥವಾ  ಕಣಗಳ ಕೊರತೆಯಿಂದ ರಕ್ತ ಸ್ರಾವ ಇದ್ದರೆ ಮಾತ್ರ ಕೊಡುವರು . ಜಾಗತಿಕ ಅರೋಗ್ಯ ಸಂಸ್ಥೆ ಕೂಡಾ ಡೆಂಗೂ  ಜ್ವರದಲ್ಲಿ ೧೦೦೦೦ ಕ್ಕಿಂತ ಕಡಿಮೆ ಆದರೆ ಅಥವಾ ರಕ್ತ ಸ್ರಾವ ಇದ್ದರೆ ಪ್ಲಾಟಿಲೆಟ್ ಕೊಡಿರಿ ,ಸುಮ್ಮ ಸುಮ್ಮನೆ ಕೊಟ್ಟರೆ ತೊಂದರೆಯೇ ಜಾಸ್ತಿ ಎಂದು ಎಚ್ಚರಿಕೆ ನೀಡಿದೆ . ಮೇಲಾಗಿ ಈ ಕಾಯಿಲೆಯಲ್ಲಿ ಪ್ಲಾಟೇಲೆಟ್ ಕೊರತೆಯಿಂದ ಮರಣ ಸಂಭವಿಸುವುದು ಕಡಿಮೆ . 

     ಹಿಂದೆ ದಾನಿಯ ರಕ್ತ ವನ್ನು ಕ್ರಾಸ್ ಮ್ಯಾಚ್ ಮಾಡಿ ಕೂಡಲೇ ಕೊಡುತ್ತಿದ್ದರು .ಆದರೆ ಈಗ  ದಾನಿಯ ರಕ್ತದಲ್ಲಿ ಎಚ್ ಐ ವಿ ,ಹೆಪಟೈಟಿಸ್ ಬಿ ಮತ್ತು ಸಿ ,ಸಿಫಿಲಿಸ್ ರೋಗ ಇಲ್ಲವೆಂದು  ಪರೀಕ್ಷೆಯ ಮೂಲಕ ಖಾತರಿ ಪಡಿಸಿ ಕೊಡುವರು . ಇದರಿಂದಲೇ ರಕ್ತ ಉಚಿತ ಆದರೂ ಬ್ಲಡ್ ಬ್ಯಾಂಕ್ ನವರು  ಸ್ವಲ್ಪ ದರ ನಿಗದಿ ಪಡಿಸಿರುವರು . 

                    ರಕ್ತ ಪೂರಣ ಮಾಡುವಾಗ ಸಣ್ಣ ಜ್ವರ ,ತುರಿಕೆಯಿಂದ ಹಿಡಿದು ಅಪರೂಪಕ್ಕೆ ಅಪಾಯಕಾರಿ ರಿಯಾಕ್ಷನ್ ಆಗುವುದು ಉಂಟು . ಅದನ್ನು ಚಿಕಿತ್ಸೆ ಮಾಡುವುದಲ್ಲದೆ ,ಬ್ಲಡ್ ಬ್ಯಾಂಕ ಗೆ ವಿವರಗಳನ್ನು ಕೂಡಲೇ ಕಳುಹಿಸುವರು . 

 ತೆಗೆದು ಕೊಳ್ಳುವಾಗ  ರಕ್ತ ಸಂಬಂಧಿಗಳ  ರಕ್ತ ವೈಜಾನಿಕವಾಗಿ ಒಳ್ಳೆಯದಲ್ಲ .ಸಂಬಂಧಿಗಳಲ್ಲದವರ  ರಕ್ತವನ್ನು ಕೊಟ್ಟರೆ ಒಳ್ಳೆಯದು .