ಬೆಂಬಲಿಗರು

ಗುರುವಾರ, ಸೆಪ್ಟೆಂಬರ್ 30, 2021

ಸರಕಾರಿ ಕಚೇರಿಯ ಒಂದು ಅಪರೂಪದ ಅನುಭವ

 ನನ್ನ ಮತ್ತು ಶ್ರೀಮತಿಯವರ ಪಾಸ್ ಪೋರ್ಟ್  ಕೆಲವೇ ತಿಂಗಳುಗಳಲ್ಲಿ ಅವಧಿ ಮುಗಿಯುವುದರಲ್ಲಿ ಇತ್ತು . ಪಾಸ್ ಪೋರ್ಟ್ ಒಂದು ವರ್ಷಕ್ಕೆ ಮೊದಲೇ ನವೀಕರಿಸ ಬಹುದು . ನನಗೆ ಸ್ವಲ್ಪ ಬಿಡುವು ಜಾಸ್ತಿ ಇದ್ದ ಕಾರಣ  ಈಗಲೇ ನವೀಕರಿಸುವ ಯೋಚನೆ ಮಾಡಿ ಅದಕ್ಕೆ ಅರ್ಜಿ  ಹಾಕಲು ಮಿತ್ರ ಸುಬ್ಬಣ್ಣ ಶಾಸ್ತ್ರಿಗಳನ್ನು ಕೇಳಿಕೊಂಡೆ . ಮೊದಲು ನಾನೇ ಆನ್ಲೈನ್ ಅಪ್ಲಿಕೇಶನ್ ಮಾಡುತ್ತಿದ್ದು ;ಈಗೀಗ ವಯಸ್ಸಾದ ಕಾರಣ ತಪ್ಪು ಆಗುವುದು ಬೇಡ ಎಂದು ಅವರ ಸಹಾಯ . ೨೩ ನೇ ತಾರೀಕು ಸಾಯಂಕಾಲ ೩. ೪೫ ಕ್ಕೆ ಅಪ್ಪೋಯಿಂಟ್ಮೆಂಟ್ . 

ಸಂಜೆ ಮೂರಕ್ಕೆ ಕೊಡಿಯಾಲ ಬೈಲಿನಲ್ಲಿ ಇರುವ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ತಲುಪಿದೆ .. ಇನ್ನೂ ಅರ್ಧ ಗಂಟೆ ಏನು ಮಾಡುವುದು ಎಂದು ಯೋಚಿಸುತ್ತಿರುವಾಗ  ಸೆಕ್ಯೂರಿಟಿ ನನ್ನ ಅರ್ಜಿ ಕಾಪಿ ನೋಡಿ ಈಗಲೇ ಒಳ ಹೋಗಿ ಸರ್ ಎಂದ . ಅಲ್ಲಿ ಸ್ವಾಗತಕಾರಿಣಿ ಯವರು ನಮ್ಮ ಅರ್ಜಿ ಪರಿಶೀಲಿಸಿ ಟೋಕನ್ ಕೊಟ್ಟರು .ನನಗೆ ಸೀನಿಯರ್ ಸಿಟಿಝೆನ್ ಎಂದು ಬೇರೆ ನಂಬರ್ . ನಂಬರ್ ಬಿದ್ದ ಒಡೆನೇ  ಓರ್ವ ಹುಡುಗಿ ಬನ್ನಿ ಸಾರ್ ಎಂದು ಪ್ರಾಥಮಿಕ ಪರಿಶೀಲನಾ ಕೌಂಟರ್ ತೋರಿಸಿದಳು . ಮೇಲೆ  ವಿದ್ಯುನ್ಮಾನ ಸೂಚಕ ಗಳಲ್ಲಿ ನಮ್ಮ ನಂಬರ್ ಯಾವ ಕೌಂಟರ್ ಎಂದು ಬರುತ್ತದೆ .ಆದರೆ ಯಾವುದೇ ಗಲಿಬಿಲಿ ಅಸೌಕರ್ಯ ಆಗದಂತೆ ಸಹಾಯ ಮಾಡಲು ತುದಿ ಗಾಲಿನಲ್ಲಿ ನಿಂತ ಸಹಾಯಕಿಯರು . ಹತ್ತು ನಿಮಿಷದಲ್ಲಿ ನನ್ನ ಕೆಲಸ ಆಯಿತು .(ಸೀನಿಯರ್ ಆದ ಕಾರಣ ).ಇನ್ನು ಒಂದು ಕಾಲು ಗಂಟೆಯಲ್ಲಿ ನನ್ನ ಪತ್ನಿಯ ಕೆಲಸವೂ ಆಯಿತು .ಹೊರಗೆ ಕಾಯುತ್ತಿದ್ದ ನನ್ನ ಬಳಿಗೆ ಒಬ್ಬಳು ಹುಡುಗಿ ಅವಳನ್ನು ಕರೆದು ಕೊಂಡು ಬಂದಳು . 

ವಾಪಾಸು ಪುತ್ತೂರಿಗೆ ಬರುವಷ್ಟರಲ್ಲಿ ಬೆಂಗಳೂರು ಪಾಸ್ ಪೋರ್ಟ್ ಆಫೀಸ್ ನಿಂದ ನಿಮ್ಮ ಪಾಸ್ ಪೋರ್ಟ್ ಮುದ್ರಣ ಕಾರ್ಯ ಮುಗಿದಿದೆ ಎಂಬ ಸಂದೇಶ . ಗುರುವಾರ ಸಂಜೆ ನಾವು ಈ ಕೆಲಸಕ್ಕೆ ಮಂಗಳೂರಿಗೆ ಹೋಗಿದ್ದು ,ಶನಿವಾರ ಪಾಸ್ ಪೋರ್ಟ್ ಬಂದೂ ಆಯಿತು . 

ನಿಮಗೆ ತಿಳಿದಿರುವಂತೆ ಪಾಸ್ಪೋರ್ಟ್ ಸೇವಾ ಕೇಂದ್ರ ಗಳನ್ನು  ಟಿ ಸಿ ಎಸ ಕಂಪನಿ ಯವರಿಗೆ ಹೊರ ಗುತ್ತಿಗೆ ನೀಡಿದ್ದು ,ಕಾರ್ಯ ಕ್ಷಮತೆ ಒಳ್ಳೆಯ ಮಟ್ಟದಲ್ಲಿ ಇದೆ . ಅಲ್ಲಿ ಹಿರಿಯ ನಾಗರಿಕರಿಗೆ , ಅವಿದ್ಯಾವಂತರಿಗೆ ಸಹಾಯ ಹಸ್ತ ಇದೆ . ಕಚೇರಿಯಲ್ಲಿ ನಾಗರಿಕ ಸೌಲಭ್ಯ  ಚೆನ್ನಾಗಿ ಇದೆ . ನಮಗೆ ಅನಿಸುವದು ಒಂದೇ , ನಮ್ಮ ಮುಖ್ಯವಾಗಿ  ರಾಜ್ಯ ಸರಕಾರದ ಕಚೇರಿಗಳು ಎಂದು ಹೀಗೆ ಸೇವೆ ನೀಡಿಯಾವು ?

ಬಾಲಂಗೋಚಿ :ಕೋವಿಡ್  ಕಾರಣ ರಶ್ ಕಮ್ಮಿ ಇರುವುದು ಒಂದು ಕಾರಣ ಇರ ಬಹುದು .ಕಳೆದ ಸಾರಿ ಹತ್ತು ವರ್ಷ ಮೊದಲೂ ಜನ ಜಂಗುಳಿ ಇದ್ದರೂ ಸೇವೆ ಉತ್ತಮ ಇತ್ತು .

ಬುಧವಾರ, ಸೆಪ್ಟೆಂಬರ್ 29, 2021

ಒಂದೇ ಔಷಧಿ ಬಹು ಮುಖ ಉಪಯೋಗ

 ಒಂದೇ ಔಷಧಿ ಬಹು ಮುಖ ಉಪಯೋಗ 

ಆಧುನಿಕ ವೈದ್ಯ ಶಾಸ್ತ್ರದಲ್ಲಿ ಒಂದೇ ಔಷಧಿಯನ್ನು ಬೇರೆ ಬೇರೆ ಕಾಯಿಲೆಗೆ ಉಪಯೋಗಿಸುವುದು ಇದೆ . ಉದಾಹರಣೆಗೆ  Propranalol ಎಂಬ ಔಷಧಿ ಇದೆ .ಇದು ರಕ್ತದ ಒತ್ತಡಕ್ಕೆ ಕಂಡು ಹಿಡಿದ ಮಾತ್ರೆ .ಇದನ್ನು ಮೈಗ್ರೇನ್ ತಲೆ ನೋವು ,ಕೈ ನಡುಗುವಿಕೆ ಮತ್ತು ಮಾನಸಿಕ ಉದ್ವೇಗ , ಲಿವರ್ ಕಾಯಿಲೆಯಲ್ಲಿ ಅನ್ನನಾಳ ದಿಂದ ರಕ್ತ ಸ್ರಾವ ಆಗದಂತೆ ಕೂಡಾ ಉಪಯೋಗಿಸುವರು . ಇನ್ನು ಮಾನಸಿಕ ಖಿನ್ನತೆಗೆ ಉಪಯೋಗಿಸುವ  Amitryptiline  ಔಷಧಿ  ಸಕ್ಕರೆ ಕಾಯಿಲೆಯಲ್ಲಿ ನರ ಬೆಂಕಿ ಬರುವುದಕ್ಕೆ ,ಮೈಗ್ರೇನ್ ಮತ್ತು ಉದ್ವೇಗದ ತಲೆನೋವು ತಡೆಗಟ್ಟಲು ಉಪಯೋಗಿಸುವರು . ಅಪಸ್ಮಾರದ  ಔಷಧಿ Tegtretol ಮತ್ತು  Pregabalin ನರದ ಉರಿ ಶಮನಕ್ಕೆ ಉಪಯೋಗಿಸುವರು . 

 ಮಿನೊಕ್ಸಿಡೈಲ್ ಎಂಬ ಔಷಧವನ್ನು ಅಧಿಕ ರಕ್ತದ ಒತ್ತಡದ ಚಿಕಿತ್ಸೆಗೆ ಅಭಿವೃದ್ಧಿ ಪಡಿಸುವಾಗ ಅದರ ಅಡ್ಡ ಪರಿಣಾಮ ಕೂದಲು ಅಧಿಕ ಬೆಳೆಯುವುದು ಕಂಡು ಬಂತು .ಮುಂದೆ ಈ ಔಷಧಿ ಬೋಳು ತನ  ನಿವಾರಿಸಲು ಬಳಕೆಗೆ ಬಂದು ಮೂಲ  ಉದ್ದೇಶ ಮರೆಯಾಯಿಯಿತು . 

ಇದನ್ನೆಲ್ಲಾ ಬರೆಯಲು ಕಾರಣ  ಎಂದರೆ ,ಕೆಲವೊಮ್ಮೆ  ಔಷಧಿ ಕೊಳ್ಳುವಾಗ ರೋಗಿಗಳು ಈ ಔಷಧಿ  ಯಾಕೆ ಇರುವುದು ಎಂದು ಅಂಗಡಿಯವನ ಬಳಿ ಕೇಳುವ ಕ್ರಮ ಇದೆ .ಆಗ ಅವನು  ಇದು ಫಿಟ್ಸ್ ಗೆ ಇರುವದು ಎಂದಾಗ ನನಗೆ ಅಪಸ್ಮಾರ ಇಲ್ಲ ,ಆ ಡಾಕ್ಟ್ರಿಗೆ  ಮಂಡೆ ಸಮ ಇಲ್ಲ  ,ಏನಾದರೂ ಮದ್ದು ಬರೆಯುತ್ತಾರೆ ಎಂದು ಕೆಲವರು ಆಡಿಕೊಳ್ಳುವುದು ನಾನು ಕೇಳಿಸಿ ಕೊಂಡಿದ್ದೇನೆ

ಸತ್ಯ ಸಾಯಿ ಬಾಬಾ

             ಸತ್ಯ ಸಾಯಿ ಬಾಬಾ  ದರ್ಶನ

          His Life and Legacy | Sri Sathya Sai International Organization    

 

೨೦ ವರ್ಷಗಳ ಹಿಂದೆ ನಾನು ಕೆ ಎಸ ಹೆಗ್ಡೆ ಮೆಡಿಕಲ್ ಕಾಲೇಜು ಅಧ್ಯಾಪಕ ನಾಗಿ ಇದ್ದ ಸಮಯ . ಶ್ರೀ ಸತ್ಯ ಸಾಯಿ ಬಾಬಾ ಅಳಿಕೆಗೆ ಭೇಟಿ ಇಟ್ಟು ,ಅಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಅಲ್ಲ ಸುಪೀರಿಯರ್ ಆಸ್ಪತ್ರೆ(ಇದು ಅವರ ನುಡಿಗಟ್ಟು ) ನಿರ್ಮಿಸುವ ಆಶ್ವಾಸನೆ ಕೊಟ್ಟರು ..ಅಳಿಕೆ  ನನ್ನ ಜನ್ಮ ಸ್ಥಳವಾದ ಅಂಗ್ರಿಗೆ ಅರ್ಧ ಮೈಲು ದೂರ . ನಾನು ಶಾಲೆಗೆ ಕನ್ಯಾನಕ್ಕೆ ಹೋದರೂ .   ಗ್ರಾಮೀಣ ಪ್ರದೇಶವಾದ ನಮ್ಮ ಊರಲ್ಲಿ ದೊಡ್ಡ ಆಸ್ಪತ್ರೆ ಬರುವದು ಕೇಳಿ ಸಂತೋಷ ಆಯಿತು . ಅಲ್ಲದೆ ಸಾಯಿ ಬಾಬಾ  ನಡೆಸುವ ಆಸ್ಪತೆಗಳಲ್ಲಿ ಬಿಲ್  ಕೌಂಟರ್ ಇಲ್ಲಾ .ಎಲ್ಲಾ ಉಚಿತ . 

ಸಂಬಳ ಕಡಿಮೆ ಇದ್ದರೂ (ಎಷ್ಟು ಎಂದು ಗೊತ್ತಿರಲಿಲ್ಲ )ಊರಿನ ಜನರ ಸೇವೆ ಮಾಡುವ  ಅವಕಾಶ ಎಂದು ಅಲ್ಲಿ ಕೆಲಸ ಮಾಡುವ ಇಚ್ಛೆ ಯನ್ನು  ಉಳುವಾನ  ಗಂಗಾಧರ ಭಟ್ ಅವರಲ್ಲಿ ಅರುಹಿದೆ . ತಾವು ಈ ಬಗ್ಗೆ  ಶ್ರೀ ಸತ್ಯ ಸಾಯಿ ಬಾಬಾ ಅವರನ್ನು ಭೇಟಿ ಮಾಡಲು ಬೆಂಗಳೂರು ವೈಟ್ ಫೀಲ್ಡ್ ನಲ್ಲಿರುವ ಅವರ ಆಶ್ರಮಕ್ಕೆ  ಹೋಗುವುದಾಗಿಯೂ ,ತಾವೂ ಜತೆ ಗೂಡಿ ಎಂದು ತಿಳಿಸಿದರು .

ಗಂಗಾಧರ ಭಟ್ ,ನಾನು ಮತ್ತು ಇನ್ನಿತರ ವೈದ್ಯರು (ಅವರು ಈರ್ವರೂ ಸಾಯಿ ಬಾಬಾ ಅವರ ಕಟ್ಟಾ ಭಕ್ತರು ),ಅಳಿಕೆ ಶಾಲೆಯ  ಇನ್ನಿಬ್ಬರು ಜತೆ ಗೂಡಿ ಬೆಂಗಳೂರಿಗೆ ಗೊತ್ತು ಪಡಿಸಿದ ದಿನ ತೆರಳಿದೆವು .ಮುದ್ದೇನ ಹಳ್ಳಿಯಿಂದ ಶ್ರೀ ನಾರಾಯಣ ರಾಯರು ನಮ್ಮನ್ನು ಸೇರಿ ಕೊಂಡರು . ವೈಟ್ ಫೀಲ್ಡ್ ಆಶ್ರಮದಲ್ಲಿ ನಮಗೆ ವಸತಿ ವ್ಯವಸ್ಥೆ ಆಗಿತ್ತು . ಮುಂಜಾನೆ ಉಪಹಾರ ಸೇವನೆ ,ಎಲ್ಲೆಲ್ಲ್ಲೂ ಶ್ವೇತ ವಸ್ತ್ರ ಧಾರಿ ಹಸನ್ಮುಖಿ  ಸ್ವಯಂ ಸೇವಕರು . ದೇಶ ವಿದೇಶದವರು . ಜಗತ್ತಿನ ಎಲ್ಲಾ ಖಂಡದವರೂ ಭಕ್ತರಾಗಿ  ಸ್ವಯಂ ಸೇವಕರಾಗಿ ಓಡಾಡುತ್ತಿದ್ದರು .. ಸೇವೆ ಮಾಡುವ ಕೈಗಳು ಪೂಜಿಸುವ ಕೈಗಳಿಗಿಂತ ಮೇಲು ಎಂಬ ಗೋಡೆ ಬರಹ ನನ್ನ ಗಮನ ಸೆಳೆಯಿತು 

ಸಾಮೂಹಿಕ ದರ್ಶನಕ್ಕೆ ದೊಡ್ಡ  ಹಾಲ್ ಇದೆ .ಎಲ್ಲರೂ  ಜಾತಿ ಅಂತಸ್ತು  ಭೇದ ಇಲ್ಲದೆ ಕುಳಿತಿದ್ದು  ಬಾಬಾ ಅವರಿಗೆ ಕಾಯುವರು  . ಸ್ವಲ್ಪ ಹೊತ್ತಿನಲ್ಲಿ ದೀಪಗಳು  ಬೆಳಗಿದವು ,ಸಣ್ಣ ದನಿಯಲ್ಲಿ ವಾದ್ಯ ಸಂಗೀತ ಆರಂಭವಾಯಿತು .ಬಾಬಾ ತಮ್ಮ ಕೊಠಡಿ ಯಿಂದ ಮೆಲ್ಲ ಮೆಲ್ಲನೆ ಭಕ್ತ ಸಮೂಹದ ಮಧ್ಯೆ ಬಂದರು . ಅವರ ಹಿಂದೆ ,ಅಕ್ಕ ಪಕ್ಕದಲ್ಲಿ ಸಹಾಯಕರು . ಬಾಬಾ ಅವರನ್ನು ಮಾತನಾಡಿಸಲು ,ತಾವು ಬರೆದು ತಂದ ನಿವೇದನೆಗಳನ್ನು ಅವರಿಗೆ ಕೊಡಲು ಎಲ್ಲರಿಗೂ ಕಾತರ . ಬಾಬಾ ಅದರಲ್ಲಿ ಕೆಲವರತ್ತ ಮಾತ್ರ ದೃಷ್ಟಿ ಬೀರುವರು ,ಕೆಲವರ ಪತ್ರಗಳನ್ನು ಕೈಯಲ್ಲಿ ಸ್ವೀಕರಿಸಿ ಸಹಾಯಕರಿಗೆ ಕೊಡುವರು . ನಮ್ಮ ಬಳಿಗೆ ಬಂದೊಡನೆ ಅಳಿಕೆಯವರನ್ನು ಗುರುತಿಸಿ ಕ್ಷೇಮವೇ ಎಂದು ಕೇಳಿ ಆಮೇಲೆ ಬಂದು ಕಾಣಿರಿ ಎಂದು ಸೂಚಿಸಿದರು . 

ಅಂತೆಯೇ ಸಮೂಹ ದರ್ಶನವಾದ ಕೂಡಲೇ ನಾವು ಅವರ ದರ್ಶನ ಕೊಠಡಿಗೆ ತೆರಳಿದೆವು . ಅಲ್ಲಿ ಅವರು ಆಸ್ಪತ್ರೆ ಬಗ್ಗೆ ತಮ್ಮ ಆಶಯವನ್ನು ವಿವರಿಸಿದರು . ಒಂದು ವಿಚಾರ ಸ್ಪಷ್ಟ ;ಅವರು ತಾವು ನಡೆಸುವ ಶಿಕ್ಷಣ ಮತ್ತು ಅರೋಗ್ಯ ಸಂಸ್ಥೆ ಗಳು  ವಾಣಿಜ್ಯ  ಕರಣ ಆಗುವದು ಬಯಸುವುದಿಲ್ಲ .ತಮ್ಮ  ವೈಟ್ ಫೀಲ್ಡ್ ಆಸ್ಪತ್ರೆಯನ್ನು ಭಕ್ತರೇ ಆದ ಉದ್ಯಮಿಗಳು  ಮೆಡಿಕಲ್ ಕಾಲೇಜು ನಡೆಸಲು ಅಟ್ಯಾಚ್ಮೆಂಟ್ ಕೋರಿದಾಗ ಇದೇ ಕಾರಣಕ್ಕೆ ನಿರಾಕರಿಸಿದ ವಿಷಯ ತಿಳಿಸಿದರು .ಬಾಬಾ ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದರು . ಅರ್ಧ ಗಂಟೆ ಸಂದರ್ಶನ ಮುಗಿದ ಮೇಲೆ ಕಯ್ಯಿಂದ ಭಸ್ಮ ಎಲ್ಲರಿಗೂ ಕೊಟ್ಟುದಲ್ಲದೆ ಅದನ್ನು ಕಟ್ಟಿಕೊಳ್ಳಲು ಪೇಪರ್ ತುಂಡು ಕೂಡಾ . ಆಮೇಲೆ ಬಾಗಿಲಿನ ವರೆಗೆ ಬಂದು ನಮ್ಮನ್ನು ಬೀಳ್ಕೊಟ್ಟರು . ತಮ್ಮ ಕಾಲಿಗೆ ಬೀಳುವುದು ,ಅತೀವ ಭಕ್ತಿ ಪ್ರದರ್ಶನ ಮಾಡುವುದು ಇತ್ಯಾದಿ ಕಡೆಗೆ ಅವರು ಹೆಚ್ಚು ಗಮನ ಕೊಟ್ಟಂತೆ ಕಾಣುವುದಿಲ್ಲ . 

ಸಂದರ್ಶನ ಮುಗಿಸಿ ನಾವು ಊರಿಗೆ ಮರಳಿದೆವು .ನನ್ನ ಬಂಧು ಮತ್ತು ಗೆಳೆಯ ಸಾಯಿ ಭಕ್ತರು ನಾನು ಅದೃಷ್ಟ ಶಾಲಿ ;ಸಾಯಿ ದರ್ಶನ ಮೊದಲ ದಿನವೇ ಆಯಿತು ಎಂದು ಸಂತೋಷ ಪಟ್ಟರು .ಮುಂದೆ ಸಮೀಪದಲ್ಲಿ ಬಾಬಾ ಅರೋಗ್ಯ ಕೈಕೊಟ್ಟುದರಿಂದ ದೊಡ್ಡ ಮಟ್ಟದ ಆಸ್ಪತ್ರೆ ಆಗಲಿಲ್ಲ ..ಹೊರ ರೋಗ ವಿಭಾಗ ಮಾತ್ರ ಆರಂಭವಾಗಿ ಈಗಲೂ ನಡೆಯುತ್ತಿದೆ . ನನ್ನೊಡನೆ ಬಂದಿದ್ದ ಡಾ ಆನಂದ ಬೆಟ್ಟದೂರ್ ಕಿಮ್ಸ್ ಹುಬ್ಬಳ್ಳಿಯ ತಮ್ಮ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ಕೊಟ್ಟು ಅಳಿಕೆ ಆಸ್ಪತ್ರೆಗೆ ಬಂದರು ,ಸಜ್ಜನ .ವಿ . ಕೆ .ಗೋಕಾಕ ಅವರ ಬಂಧು . ನಾನು ಕೆ ಎಸ ಹೆಗ್ಡೆ ಆಸ್ಪತ್ರೆಯಲ್ಲಿ ಮುಂದುವರಿದೆನು . 

ನಾನು ಸಾಯಿ ಬಾಬಾ ಅವರ ಕಟ್ಟಾ ಭಕ್ತ ಅಲ್ಲ . ಅವರನ್ನೂ ಅವರ ಪವಾಡಗಳನ್ನು ಪ್ರಶ್ನಿಸಿಸಿದ ಡಾ ಎಚ್ ನರಸಿಂಹಯ್ಯ ಅವರನ್ನೂ ಬೇರೆ ಬೇರೆ ಕಾರಣಗಳಿಗೆ ಏಕ ಕಾಲಕ್ಕೆ ಮೆಚ್ಚಿ ಗೌರವಿಸಿದವನು . ಬಾಬಾ ಅವರನ್ನು ದೇವ ಮಾನವ ಎಂಬುದಕ್ಕಿಂತಲೂ ಸಕಲರಿಗೆ ಉಳಿತನ್ನು ಬಯಸುವ ಹೃದಯ ವಂತ ನಾಗಿ ಕಂಡೆ . 

ಮನುಜ ಕುಲಮ್  ತಾನೊಂದೆ ವಲಮ್ ಎಂಬ ಧ್ಯೇಯದೊಂದಿಗೆ ಎಲ್ಲ ಜಾತಿ ಮತದವರಿಗೂ ಭೇದವಿಲ್ಲದೆ ,  ಯಾವುದೇ  ಧನಾರ್ಜನೆಯ ಉದ್ದೇಶ ಹೊರತಾಗಿ ಆಸ್ಪತ್ರೆ ಮತ್ತು ವಿದ್ಯಾ ಸಂಸ್ಥೆ ಗಳನ್ನು ಸ್ಥಾಪಿಸಿ ನಡೆಸಿಕೊಂಡು ಬಂದುದಲ್ಲದೆ ತಮ್ಮ ನಂತರವೂ ಅವು ಮುಂದುವರಿಯುವಂತೆ ಮಾಡಿದುದೇ ದೊಡ್ಡ ಪವಾಡ .

ಮಂಗಳವಾರ, ಸೆಪ್ಟೆಂಬರ್ 28, 2021

ಸಮೂಹ ಸಾರಿಗೆ

      ಸಮೂಹ ಸಾರಿಗೆ 


ಸಮೂಹ ಸಾರಿಗೆಯ ಪ್ರಯಾಣ ನಮ್ಮನ್ನು ಸಮಾಜ ಜೀವಿಯನ್ನಾಗಿ ಮಾಡುವುದರಲ್ಲಿ ಪ್ರಾಮುಖ್ಯ ಪಾತ್ರ ನಿರ್ವಹಿಸುತ್ತದೆ . ಹಿಂದೆ ಬಸ್ಸಿನಲ್ಲಿ ನೀವು ಹತ್ತಿ ಕುಳಿತೊಡನೆ ಪಕ್ಕದವರು 'ನಿಕ್ಕ್ ಓಳಾಂಡು ಮಗ "ಎಂದು ಮಾತಿಗೆ ತೊಡಗುವುದು ಸಾಮಾನ್ಯ ಆಗಿತ್ತು . ನಾವು ಇಳಿಯುವ ವರೆಗೆ ಸುಖ ದುಖ ಮಾತನಾಡುವರು . ಸಣ್ಣ ಮಕ್ಕಳು ನಿಂತಿದ್ದರೆ' ಬಲೇ ಬಾಲೆ ಜಕ್ಕೆಲ್ಡು ಕುಳ್ಳು ಎಂದು ಕುಳಿತು ಕೊಳ್ಳಿಸುವರು.ಕಂಡಕ್ಟರ್  ಹಿಂದಿನ ಬಾಗಿಲಿನ ಬಳಿ ಇರುವಾಗ ನಿಂತವರನ್ನು ಮುಂದೆ ಹೋಗಿ ಎನ್ನುವನು ,ಮುಂದಿನ ಬಾಗಿಲಿಗೆ ಬಂದಾಗ ಹಿಂದೆ ಹೋಗಿ ಎಂದು ಗದರುವನು .ಮುಂದೆ ಬಂದವರು ಹಿಂದೆ ಹೋಗಲು ಮತ್ತು ವೈಸ್ ವೆರ್ಸಾ ನಮ್ಮ ಜೀವನದ್ಲಲೂ ತಯಾರಿರಬೇಕು ಎಂಬ ಸಾಂಕೇತಿಕ ಪಾಠ . ಪ್ರಯಾಣ ಎಷ್ಟು ಸುಖಕರ ಆಗಿದ್ದರೂ ನಮ್ಮ ನಿಲ್ದಾಣ ಬರುವಾಗ ಇಳಿಯ ಬೇಕು 

ಈಗ ಯಾರೂ ಬಸ್ ಪ್ರಯಾಣ ಇಷ್ಟ ಪಡುವುದಿಲ್ಲ .ಇದು ನಾವು ಸಮಾಜ ವಿಮುಖ ಆಗುತ್ತಿರುವುದರ ಲಕ್ಷಣ . ಒಂದು ವೇಳೆ ಬಸ್ ಹತ್ತಿದರೂ ಅಕ್ಕ ಪಕ್ಕದವರ ಗೊಡವೆ ಇಲ್ಲದೆ ಮೊಬೈಲ್ ನೋಟ ಮಾತ್ರ . ವೈದ್ಯರು ,ವಕೀಲರು ,ಗಣ್ಯರು ಬಸ್ ಪ್ರಯಾಣ ಮಾಡುವುದು ಮರ್ಯಾದೆಗೆ ಕಮ್ಮಿ ಎಂಬ ಭಾವನೆ ಬಂದಿದೆ . ನಾನು ಬಸ್ಸಿನಲ್ಲಿ ಯಾತ್ರೆ ಮಾಡುವುದನ್ನು ಕಂಡು ಬಹಳ ಮಂದಿ ಕನಿಕರಿಸುತ್ತಾರೆ ."ಪಾಪ ಡಾಕ್ಟರಾಗಿ ಬಸ್ ನಲ್ಲಿ ಬರುತ್ತಾರೆ .ಪ್ರಾಕ್ಟೀಸ್ ಏನೂ ಇಲ್ಲ ಎಂದು ಕಾಣುತ್ತದೆ "ಇದೇ ಮಾತನ್ನು ನಾನು ಪೇಟೆಯಲ್ಲಿ ಚೀಲ ಹಿಡಿದು ತರಕಾರಿ  ಮನೆ ಸಾಮಾನು ನೇಲಿಸಿ ಕೊಂಡು ಹೋಗುವುದನ್ನು ಕಂಡು ಹೇಳುತ್ತಾರೆ . ಬೇಸರ ಎಂದರೆ ಮಕ್ಕಳಿಗೆ ಎಳವೆಯಲ್ಲಿಯೇ ನಡೆಯುವುದು .ನಾಲ್ಕು ಚಕ್ರಕ್ಕಿಂತ ಕಡಿಮೆ ಇರುವ ವಾಹನದಲ್ಲಿ ಹೋಗುವುದು ಅಂತಸ್ತಿಗೆ ಹೇಳಿದ್ದಲ್ಲ ಎಂಬ ನಂಬಿಕೆ ಹುಟ್ಟಿಸಿ ಬಿಡುತ್ತಾರೆ .

ನೀವು ಮುಂಬೈಗೆ ಹೋಗಿದ್ದರೆ ,ಅಲ್ಲಿಯ ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಸಿರುವಿರಿ . ಅದಕ್ಕೆ ಹತ್ತುವಾಗ ನೂಕು ನುಗ್ಗಲು ಇರುತ್ತದೆ .ಆದರೆ ಎಲ್ಲರೂ ಚಲೋ ಭಾಯಿ ಎಂದು ನಿಮ್ಮನ್ನು ಒಳಗೆ ನುಗ್ಗಿಸಿಯೇ ತಾವೂ ಒಳಕ್ಕೆ ಬರುವರು . ನಾವು ಇಲ್ಲಿ ಮಾಡುವ ಹಾಗೆ ಮುಂದಿನವನನ್ನು ಹಿಂದೆ ತಳ್ಳಿ ಹತ್ತುವುದಿಲ್ಲ .ಇದು ಅಲ್ಲಿಯ ಜೀವನ ತತ್ವ .ತಾನೂ ಬದುಕಿ ಇತರರನ್ನೂ ಬದುಕ ಬಿಡುವುದು . ಮುಂಬೈ ಯಲ್ಲಿ ಶ್ರೀಮಂತ ಇರಲಿ ಬಡವ ಇರಲಿ ನೆಲಕ್ಕೆ ಹತ್ತಿರ ಇರುವರು . 

ಇದೇ ಮನೋಭಾವ ಈಗ ವರ್ಕಿಂಗ್ ಫ್ರಮ್ ಹೋಮ್ ಮತ್ತು ವರ್ಚುವಲ್  ಕ್ಲಾಸ್  ಮತ್ತು  ಮೀಟಿಂಗ್  ಗಳೂ ಉಂಟು ಮಾಡುವವು ಎಂದು  ನನ್ನ ಭಾವನೆ .


ಸೋಮವಾರ, ಸೆಪ್ಟೆಂಬರ್ 27, 2021

ಹೀಗೆ ಒಂದು ಕತೆ

 ಹೀಗೆ ಒಂದು ಕತೆ

ಹಿಂದೆ ಕರಾವಳಿ ಪ್ರದೇಶದಿಂದ ಘಟ್ಟಕ್ಕೆ ಕೆಲಸ ಹುಡುಕಿ ಹೋಗುತ್ತಿದ್ದರು . ಇಲ್ಲಿ ಭತ್ತ ಜಾಸ್ತಿ ಬೆಳೆಯುತ್ತಿದ್ದ ಸಮಯ . ಕಾರ್ಮಿಕರ ಅವಶ್ಯಕತೆ ಸೀಸನ್ ಮೇಲೆ ಹೊಂದಿ ಕೊಂಡು . ಮಲೆನಾಡಿನಲ್ಲಿ ಮಲೇರಿಯಾ ಹಾವಳಿ ಕರಾವಳಿಗಿಂತ ಜಾಸ್ತಿ ಇತ್ತು .ವಾಣಿಜ್ಯ ಬೆಳೆಗಳು ಅಧಿಕ .ಜತೆಗೆ ಬ್ರಿಟಿಷರು ಆರಂಭಿಸಿದ ಪ್ಲಾಂಟೇಶನ್ ಗಳ ಆಕರ್ಷಣೆ . ಕುವೆಂಪು ಅವರ ಕಾದಂಬರಿಗಳಲ್ಲಿ ಕನ್ನಡ ಜಿಲ್ಲೆಯ ಆಳುಗಳು ಮತ್ತು ಸೇರೆಗಾರರ ಚಿತ್ರಣ ಯಥೇಚ್ಚ ಬರುತ್ತದೆ .ಇಲ್ಲಿಂದ ವಲಸೆ ಹೋದ ಕಾರ್ಮಿಕರು ತಮ್ಮ ಜತೆಗೆ ಇಲ್ಲಿಯ ಭೂತಗಳನ್ನು ,ಆಚರಣೆಗಳನ್ನು ಮತ್ತು ಯಕ್ಷಗಾನ ಪ್ರೇಮವನ್ನು ತಮ್ಮೊಡನೆ ಒಯ್ದರು .ಈಗ ರಿವರ್ಸ್ ಮೈಗ್ರೇಶನ್ ಅಥವಾ ಹಿಮ್ಮುಖ ವಲಸೆ ನಡೆಯುತ್ತಿದೆ .ನಮ್ಮಲ್ಲಿ ಕೂಲಿ ಕಾರ್ಮಿಕರು ಸಿಗುವುದಿಲ್ಲ . ಘಟ್ಟದ ಮೇಲಿಂದ ,ಉತ್ತರ ಕರ್ನಾಟಕದಿಂದ  ಅದೃಷ್ಟ ಅರಸಿ ಬರುವ ಜನರನ್ನು ಮತ್ತು ಇತ್ತೀಚಿನ ವರ್ಷಗಳಲ್ಲಿ ಉತ್ತರ ಮತ್ತು ಈಶಾನ್ಯ ಭಾರತ ದ ಕೆಲಸಗಾರರು ಎಲ್ಲೆಲ್ಲೂ . ಸಾರ್ವಜನಿಕವಾಗಿ ಇಂತಹ ಕೆಲಸ ಗಾರರನ್ನು  ಅತಿಯಾಗಿ ಟೀಕಿಸುವವರೂ ತಮ್ಮಲ್ಲಿ  ಇವರನ್ನು ಇಟ್ಟು ಕೊಂಡಿರುವರು . ಕಾರ್ಮಿಕ ವ್ಯವಸ್ಥೆ ಶತ  ಶತಮಾನಗಳಿಂದ ಹೀಗೆಯೇ ನಡೆದಿದೆ .ನೀರು ಮಟ್ಟವನ್ನು ನೋಡಿ ಹರಿದಂತೆ ;ಯಾರು ಎಷ್ಟೇ ಬೊಬ್ಬೆ ಹಾಕಿದರೂ ಇದನ್ನು ನಿಲ್ಲಿಸುವುದು ಕಷ್ಟ. 

ಒಂದು ಕಾಲದಲ್ಲಿ ಕುಟುಂಬಗಳು ದೊಡ್ಡದು ಇದ್ದವು . ಹುಡುಗಿಯರಿಗೆ ಗಂಡು ಹುಡುಕಿ ಮದುವೆ ಮಾಡುವುದು ಹೆಚ್ಚಿನವರಿಗೆ ಹರ ಸಾಹಸ .ಅದರಲ್ಲೂ ಹೆಣ್ಣು ಮಕ್ಕಳೇ ಜಾಸ್ತಿ ಇದ್ದರೆ ಮುಗಿಯಿತು . ಹುಡುಗಿ ವಯಸ್ಸಿಗೆ ಬಂದಂತೆಲ್ಲಾ ಹೆತ್ತವರ ಕೊರಳಿಗೆ ಕಟ್ಟಿದ ಭಾರ .  ಹವ್ಯಕರಲ್ಲಿ ಕುಂಬಳೆ ,ವಿಟ್ಲ ಮತ್ತು ಪುತ್ತೂರು ಸೀಮೆಯ ಹಲವು ಹುಡುಗಿಯರನ್ನು ಘಟ್ಟದ ಮೇಲೆ ಶಿರಸಿ ಸಿದ್ದಾಪುರ ,ಸಾಗರ ಕಡೆಗೆ ಮದುವೆ ಮಾಡಿ ಕೊಡುತ್ತಿದ್ದರು .ಆಗ  ಸಾರಿಗೆ ಸಂಪರ್ಕ ದುರ್ಗಮ . ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬುದು ಅಕ್ಷರಶಃ ಸತ್ಯ ವಾಗುತ್ತಿತ್ತು . ತಾಯಿ ಮಗಳನ್ನು ಪುನಃ ನೋಡುವುದು ಮತ್ತು ವೈಸ್ ವರ್ಸಾ ಅಪರೂಪ . 

ಇನ್ನು ಕೆಲವು ತಂದೆ ತಾಯಿ ಎರಡನೇ ಸಂಬಂಧ ಕ್ಕೆ ಅಥವಾ ವಯಸ್ಸಾದ ವರನಿಗೆ ಮಗಳನ್ನು ಕೊಡ ಬೇಕಿತ್ತು .ಹೀಗೆ ಮದುವೆ ಆದವರೂ ಹಲವರು ಮೇಲ್ನೋಟಕ್ಕೆ  ಸುಖವಾಗಿ ಇದ್ದರೆನ್ನಿ . ಹಲವು ಗಂಡಸರು ಮಕ್ಕಳಾಗಲಿಲ್ಲ ,ಇನ್ನು ಕೆಲವರು ಗಂಡು ಮಕ್ಕಳು ಇಲ್ಲ ಎಂದು ಎರಡು ಮೂರು ಮದುವೆ ಆಗುತ್ತಿದ್ದರು . 

ಮಾಸ್ತಿ ಯವರ ಜೀವನ ಚರಿತ್ರೆ 'ಭಾವ 'ದಲ್ಲಿ ಒಂದು ಪ್ರಸಂಗ ಬರುತ್ತದೆ . ಬಾಲ್ಯದಲ್ಲಿ ಕೆ ಆರ್  ಪೇಟೆಯ ಅವರ  ಶಾಲೆಯ ಹೆಡ್ ಮಾಸ್ಟರ್ ಆಗಿದ್ದ ವರದ ರಾಜಯ್ಯ ನವರು ಒಂದು ದಿನ ಬೆಂಗಳೂರಿನಲ್ಲಿ ಇವರ ಮನೆಗೆ ಮಗಳ ಜತೆ (ಮಂಗಳಾ ಅವಳ ಹೆಸರು ) ಬಂದು ತಮ್ಮಿಂದ ಒಂದು ಸಹಾಯ ಆಗ ಬೇಕಿತ್ತು  ಎಂದು ಒಬ್ಬ ಹಿರಿಯ ವಕೀಲರ ಹೆಸರು ಹೇಳಿ ,ಅವರ ಹೆಂಡತಿ ತೀರಿ ಹೋಗಿದ್ದ ಸಮಾಚಾರ ತಿಳಿಯಿತು .;ನಿಮ್ಮ ಮಿತ್ರರಾದ ಅವರಿಗೆ ಹೇಳಿ ನನ್ನ ಮಗಳನ್ನು ಮದುವೆಗೆ ಪರಿಗಣಿಸುವಂತೆ ಶಿಫಾರಸು ಮಾಡ ಬಹುದೇ ?ಎಂಬುದು ಗುರುವಿನ ಬೇಡಿಕೆ .  ಹುಡುಗಿ ಇನ್ನೂ ಹದಿನಾರು ವರ್ಷದವಳು ಆ ವಕೀಲರಾದರೋ ಅವಳ ತಂದೆಯ ಪ್ರಾಯದವಳು . ಮಾಸ್ತಿಯವರು ಒಲ್ಲದ ಮನಸಿನಿಂದ ನೋಡುವಾ ಎಂದು ಸಾಗ ಹಾಕುವರು . ಗೇಟಿನ ವರಗೆ ಆ ನಡೆಯುತ್ತಾ ಗುಟ್ಟಾಗಿ ಹುಡುಗಿಗೆ ಈ ವಯಸ್ಸಿನ  ಅಂತರ ದ  ಬಗ್ಗೆ ಆಕ್ಷೇಪ ಇಲ್ಲವೇ ಎಂದು ಕೇಳುವರು . ಇಲ್ಲ ಎಲ್ಲಾ ಸೆಟ್ಲ್ ಮಾಡಿದ್ದೇನೆ ಎನ್ನುವರು ಅತಿಥಿ . ಮೆಟ್ಟಲು ಇಳಿಯುವಾಗ ಹುಡುಗಿ ತಂದೆಯೊಡನೆ ಗುಟ್ಟಾಗಿ ಏನೋ ಕೇಳುವಳು .ಅವರು ಪ್ರತಿಯಾಗಿ ಬೇಡ ಬೇಡ ಈಗ ಅದೆಲ್ಲ ಎನ್ನುವರು .ಮಾಸ್ತಿಯವರು ಈ ಹುಡುಗಿ ಸಂಬಂಧ ಬೇಡ ಎಂದು ಹೇಳುತ್ತಿರಬೇಕು ಎಂದು ಕೊಂಡು ಕುತೂಹಲದಿಂದ ಏನಂತೆ ಅವಳಿಗೆ ಎಂದು ಕೇಳುತ್ತಾರೆ . "ಇಲ್ಲಾ ನಿಮ್ಮ ಮರದಿಂದ ಸ್ವಲ್ಪ ಸಂಪಿಗೆ ಹೂ ತೆಗೆದು ಕೊಳ್ಳಲೇ ಎಂದು ಕೇಳುತ್ತಿರುವಳು 'ಎಂದರು .ಮುಂದಿನ ಮಾತುಗಳನ್ನು ಮಾಸ್ತಿಯವರ ಶಬ್ದ ಗಳಲ್ಲಿಯೇ ಓದಿರಿ . 

 

ನನ್ನ ಯೋಚನೆಯೆಲ್ಲಿ ?ಈ ಎಳೆ ಉಸಿರಿನ ಯೋಚನೆ ಎಲ್ಲಿ ?ಈ ಸಣ್ಣ ಹುಡುಗಿ ಅಷ್ಟು ವಯಸ್ಸಾದವನನ್ನು ಮದುವೆ ಆಗುವುದೇ ಎಂದು ನನ್ನ ಚಿಂತೆ .ಇಷ್ಟ ರಾದವರ ಮನೆಗೆ ಬಂದಿದ್ದೇವೆ ,ಆ ಮನೆಯ ಸಂಪಿಗೆ ಮರದ ತುಂಬಾ ಹೂ ಇದೆ ,ನಾಲ್ಕು ಹೂ ತೆಗೆದು ಕೊಳ್ಳೋಣ ಎಂದು ಅವಳ ಯೋಚನೆ .ಆ  ಹುಡುಗಿಯನ್ನು ನೋಡಿ ನನಗೆ ತುಂಬಾ ಮರುಕ ಆಯಿತು .''ಪಾಪ ಸಣ್ಣ ಹುಡುಗಿ ಹೂ ಬೇಕು ಅಂದರೆ ಬೇಡ ಅಂತ ಯಾಕಂತೀರಿ ?ಇರು ತಾಯಿ  ಎಂದು ಅಳನ್ನು ಕರೆದು ಅವಳ ಕೈ ತುಂಬಾ ಹೂ ತುಂಬಿ ಕಳುಹಿಸಿದೆನು "

ಬಾಲಂಗೋಚಿ :ಇದರಲ್ಲಿ ನಾನು ಯಾರನ್ನೂ ಉದ್ದೇಶ ಪೂರ್ವಕ ತಪ್ಪು ಮಾಡಿದವರು ಎಂದು ಹೇಳಲಾರೆ ,ಆಗಿನ ಕಾಲ ,ಸಾಮಾಜಿಕ ವ್ಯವಸ್ಥೆಯಲ್ಲಿ  ಎಲ್ಲರೂ ದಾಳಗಳು .

ಶನಿವಾರ, ಸೆಪ್ಟೆಂಬರ್ 25, 2021

ದೃಷ್ಟಿ ತಾಗುವುದು (ಕಣ್ಣು ಮುಟ್ಟುವುದು)

                       ದೃಷ್ಟಿ ತಾಗುವುದು (ಕಣ್ಣು ಮುಟ್ಟುವುದು)

 Grandma Organic Baby Products Infant Dhrishti Bottu/Chukka/Bindi Black  Color Made from Sabudana/Saggu Biyyam : Amazon.in: Beauty

 ಎಂಥಾ ಪಾಪಿ ದೃಷ್ಟಿ ತಾಗಿತು, ಗೋಪಾಲಕೃಷ್ಣಗೆ
ಕೆಟ್ಟ ಪಾಪಿ ದೃಷ್ಟಿ ತಾಗಿತು ||

ಶಿಶು ಹಸಿದನೆಂದು ಗೋಪಿ
ಮೊಸರು ಕುಡಿಸುತ್ತಿರಲು ನೋಡಿ
ಹಸಿದ ಬಾಲರ ದೃಷ್ಟಿ ತಾಗಿ
ಮೊಸರು ಕುಡಿಯಲೊಲ್ಲನೆ ||

ಕೃಷ್ಣ ಹಸಿದನೆಂದು ಗೋಪಿ
ಬಟ್ಟಲೊಳಗೆ ಕ್ಷೀರ ಕೊಡಲು
ಕೆಟ್ಟ ಬಾಲರ ದೃಷ್ಟಿ ತಾಗಿ
ಕೊಟ್ಟ ಹಾಲು ಮುಟ್ಟನೆ ||

ಚಿಣ್ಣ ಹಸಿದನೆಂದು ಗೋಪಿ
ಬೆಣ್ಣೆ ಕೈಯಲಿ ಕೊಡಲು ನೋಡಿ
ಸಣ್ಣ ಬಾಲರ ದೃಷ್ಟಿ ತಾಗಿ
ಬೆಣ್ಣೆ ವಿಷಮವಾಯಿತೆ ||

ಅಂಗಿ ಹಾಕಿ ಉಂಗುರವಿಟ್ಟು
ಕಂಗಳಿಗೆ ಕಪ್ಪನಿಟ್ಟು
ಅಂಗಳದೊಳು ಆಡೊ ಕೃಷ್ಣಗೆ
ಹೆಂಗಳಾ ದೃಷ್ಟಿ ಇದೇನೋ ||

ಶಲ್ಲೆ ಉಡಿಸಿ ಮಲ್ಲೆ ಮುಡಿಸಿ
ಚೆಲ್ವ ಫಣೆಗೆ ತಿಲಕನಿಟ್ಟು
ವಲ್ಲಭ ಪುರಂದರವಿಠಲನ
ಫುಲ್ಲನೇತ್ರರು ನೋಡಿದರೇನೋ ||

ದೃಷ್ಟಿ ತಾಗುವುದು ಮತ್ತು  ದೃಷ್ಟಿ ತೆಗೆಯುವುದು  ಎಂಬ ನಂಬಿಕೆ ಜನರಲ್ಲಿ ತಲೆ ತಲಾಂತರಗಳಿಂದ  ನೆಲೆಯೂರಿದೆ. ಹೆಚ್ಚಾಗಿ ಪುಟ್ಟ ಕಂದಮ್ಮಗಳಿಗೆ  ದೃಷ್ಟಿ ತಾಗುವುದು ಎಂಬ ಭಯ . ವೈಜ್ನಾನಿಕವಾಗಿ ಯೋಚಿಸಿದರೆ ಮಕ್ಕಳ ನಾಮಕರಣ ,ಅನ್ನ ಪ್ರಾಶನ ಇತ್ಯಾದಿ ಕಾರ್ಯಕ್ರಮಗಳಿಗೆ  ಬಂದ ಅತಿಥಿಗಳಲ್ಲಿ ಯಾರಿಗಾದರೂ ವೈರಸ್ ಕಾಯಿಲೆ ,ಕೆಮ್ಮು ಇತ್ಯಾದಿ ಯಾರಿಗಾದರೂ ಇರುವುದು ,ಮಗುವಿಗೆ ಗಾಳಿ ಮೂಲಕ ಹರಡಿ ಜ್ವರ ಶೀತ ಇತ್ಯಾದಿ ಉಂಟಾಗುವುದು .ಮಗುವಿಗೆ ಅನ್ನ ಉಣ್ಣಿಸುವವರ ಮತ್ತು ಜೇನು ನಕ್ಕಿಸುವವರ ಕೈಯಲ್ಲಿ ರೋಗಾಣು ಇರ ಬಹುದು ; ಜತೆಗೆ ಮಕ್ಕಳ ಕೈಯಲ್ಲಿ ನೋಟು ಉಡುಗೊರೆಯಾಗಿ ಇಡುವರು .ನೋಟುಗಳ ನೈರ್ಮಲ್ಯ ನೀವು ಕಂಡೇ ಇರುವಿರಿ .ಅವುಗಳಿಂದ ಮಗುವಿಗೆ ಭೇದಿ ಆಗ ಬಹುದು .ಇದನ್ನೆಲ್ಲಾ ' ದೃಷ್ಟಿ' ಎಂದು ವೈಜ್ಣಾನಿಕ ದೃಷ್ಟಿ ಇಲ್ಲದವರು ಕರೆವರು .

ಇದೇ ಸಮಸ್ಯೆ ಗರ್ಭಿಣಿ ಯ  ಸೀಮಂತ ಕಾರ್ಯಕ್ರಮದಲ್ಲಿಯೂ  ಆಗ ಬಹುದು .

ನಾಳಿಗೆಯಲ್ಲಿ ಮಚ್ಚೆ ಇರುವವರು ಏನಾದರೂ ಕಾಮೆಂಟ್ ಮಾಡಿದರೆ ದುಷ್ಪರಿಣಾಮ ಜಾಸ್ತಿ ಎನ್ನುವರು . ಇಂತಹ ಕೆಲವರನ್ನು ಕುಖ್ಯಾತ ದೃಷ್ಟಿ ತಾಗಿಸುವವರ ಪಟ್ಟಿಗೆ ಸೇರಿಸಿ ಜನರು ಅವರನ್ನು ದೂರ ಇಡುವರು . ನಾಗವೇಣಿ ಸುಂದರಿಯನ್ನು ಎಷ್ಟು ಉದ್ದ ಮಾರಾಯತಿ ನಿನ್ನ ಜಡೆ ಎಂದು ಅವರು ಅಂದರೆ ಸಾಕು ಚಳಿಕಾಲದಲ್ಲಿ ಉದುರುವ ಮರದ ಎಲೆಗಳಂತೆ ಉದುರಿ ಅವಳ ತಲೆ ಬೋಳಾಗಿ ಉದುರಿ ಉಪಯೋಗಿಸ ಬೇಕಾಗುವುದು . 

ನಂಬುವವರ ಪ್ರಕಾರ ಬೆಳೆದ ಬೆಳೆ ,ವ್ಯಾಪಾರ ವ್ಯವಹಾರ ಇತ್ಯಾದಿ ಎಲ್ಲದಕ್ಕೂ ಕಣ್ಣು ಮುಟ್ಟ ಬಹುದು .

ದೃಷ್ಟಿ ತಾಗದಂತೆ ಮಕ್ಕಳಿಗೆ ಕಾಡಿಗೆ ಹಚ್ಚುವರು ,ಕೈಗೆ ಕರಿಮಣಿ ತೊಡಿಸುವರು .  ಮಗುವಿಗೆ ಸುತ್ತಿ ಸಾಸಿವೆ ಉಪ್ಪು ಬೆಂಕಿಗೆ ಹಾಕುವರು . ನನ್ನ ಚಿಕ್ಕಂದಿನಲ್ಲಿ ಬಳ್ಳಿ ಬ್ಯಾರಿ ಎಂಬವರು  ಮಂತರಿಸಿ ನಮ್ಮ ತಲೆಗೆ ಸೊಪ್ಪಿನಿಂದ ತಟ್ಟಿ ದೃಷ್ಟಿ ತೆಗೆಯುತ್ತಿದ್ದರು . 

ಕೆಲವು ದೃಷ್ಟಿಯ ಕಟ್ಟು ಕತೆಗಳೂ ಇವೆ . ಒಂದು ದೊಡ್ಡ ಬಂಡೆಗಲ್ಲು ಒಡೆಯಲು ಯಾರಿಗೂ ಸಾಧ್ಯವಾಗಲಿಲ್ಲವಂತೆ .ಆಗ ಊರಿನ ದೊರೆ ಕುಖ್ಯಾತ ನಾಲಿಗೆಯ ಒಬ್ಬನ ಸಹಾಯ ಕೇಳುತ್ತಾನೆ .ಆತ ರಾತ್ರಿ ಒಂದು ದೊಡ್ಡ ವಸ್ತ್ರವನ್ನು ಬಂಡೆಗೆ ಹೊಡಿಸಿ ,ಮುಂಜಾನೆ ಬಂದು ದಾನೆ ಮಾರಾಯ ನಣಲಾ ನಿಕ್ಕು ಬೋಲ್ಪು ಅತೀಜ್ಯ ,ಲಕ್ಕುದಿಜ್ಯ ,ದಾನೆ "ಎಂದೊಡನೆ ಬಂಡೆ ತಾನೇ ಒಡೆದು ಚೂರು ಚೂರು ಆಯಿತಂತೆ .

ಫೇಸ್ ಬುಕ್ ನಲ್ಲಿ ನನ್ನನ್ನು ಮತ್ತು ನನ್ನ ಬರವಣಿಗೆ ನೋಡಿ ನಿಮ್ಮ ಕಣ್ಣು ಮುಟ್ಟೀತು ಎಂದು ನನ್ನ ಹೆಂಡತಿ ದಿನಾಲೂ  ಸಾಂಭ್ರಾಣಿ ಸೊಪ್ಪಿನ ಹೊಗೆ ಹಾಕಿ ನನ್ನನ್ನು ಸೇನಿಟೈಸ್ ಮಾಡುವಳು .

ಶುಕ್ರವಾರ, ಸೆಪ್ಟೆಂಬರ್ 24, 2021

ಇನ್ನೊಂದು ಸೌಜನ್ಯದ ವಿಚಾರ

              ಇನ್ನೊಂದು ಸೌಜನ್ಯದ ವಿಚಾರ

 Kengal Hanumanthaiah.jpg  ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ನವರು ವಿಧಾನ ಸೌಧ ನಿರ್ಮಾತೃ ಮಾತ್ರ ಅಲ್ಲ .ಒಳ್ಳೆಯ ಆಡಳಿತ ಕೌಶಲ್ಯಕ್ಕ್ಕೆ ಹೆಸರಾದವರು .ಎಲ್ಲಕ್ಕೂ ಮಿಗಿಲಾಗಲಿ ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಲು ಇಲಾಖೆಯ ಹುಟ್ಟಿಗೆ ಕಾರಣರಾದವರು . ಸಂಸ್ಕೃತಿ ಪ್ರಸಾರ ಭಾಷಣ ,ಕುಮಾರ ವ್ಯಾಸ ಮತ್ತು ಜೈಮಿನಿ ಭಾರತ ಪುಸ್ತಕಗಳನ್ನು  ಮುದ್ರಿಸಿ ಕಡಿಮೆ ದರದಲ್ಲಿ ಜನಸಾಮನ್ಯರಿಗೆ ತಲುಪಿಸಿದವರು ಅವರು . 

ಈ ಏನ್ ಮೂರ್ತಿರಾಯರ ಚಿತ್ರಗಳು ಪತ್ರಗಳು ಕೃತಿಯಲ್ಲಿ "ಶ್ರೀ ಕೆ ಹನುಮಂತಯ್ಯನವರು ಮತ್ತು ಸಂಸ್ಕೃತಿ ಪ್ರಸಾರ "ಎಂಬ ಅಧ್ಯಾಯ ಇದೆ ..ಅವರು ಒಂದು ಎಪಿಸೋಡ್ ಉಲ್ಲೇಖಿಸಿದ್ದಾರೆ . 

ಒಂದು ದಿನ ಅವರು (ಕೆಂಗಲ್ )ನನ್ನನ್ನು  ಬರ ಹೇಳಿದ್ದರು .ನಾನು ಹೋದಾಗ ಅವರು ಎಲ್ಲಿಗೋ ಆತುರದಲ್ಲಿ ಹೊರಡಲು ಸಿದ್ದ ರಾಗಿದ್ದಂತೆ ತೋರಿತು ."ಈಗ ಬಹಳ ಜರೂರಾದ ಕೆಲಸವಿದೆ ,ನನ್ನೊಡನೆ ಬನ್ನಿ .ನನ್ನ ಕೆಲಸ ಮುಗಿದ ಮೇಲೆ ಕುಮಾರ ಕೃಪಕ್ಕೆ ಹೋಗಿ ಅಲ್ಲೇ ಮಾತನಾಡೋಣ .."ಎಂದರು .ಇಬ್ಬರೂ ಹೊರಟೆವು .ಗಾಡಿ ಸರ್ ಎಂ ವಿಶ್ವೇಶ್ವರಯ್ಯನವರ ಮನೆ ಮುಂದೆ ನಿಂತಿತು .ಹನುಮಂತಯ್ಯ ನವರು ೧೦-೧೫ ನಿಮಿಷವಾದ ಮೇಲೆ ಬಂದರು .ಅವರನ್ನು ಕಳಿಸಲು ವಿಶ್ವೇಶ್ವರಯ್ಯನವರೂ ಬಂದರು .ನಾವು ಅಲ್ಲಿಂದ ಹೊರಟ ಮೇಲೆ ಸಂದರ್ಭವೇನೆಂದು ಹೇಳಿದರು .ಅವರು ಯಾವುದೋ  ವಿಷಯದಲ್ಲಿ ವಿಶ್ವೇಶ್ವರಯ್ಯನವರ ಸಲಹೆಯನ್ನು ಬೇಡ ಬೇಕಾಗಿತ್ತು . 'ತಮ್ಮನ್ನು ನೋಡ ಬೇಕು ಯಾವಾಗ ಬರಲಿ 'ಎಂದು ಟೆಲಿಫೋನ್ ನಲ್ಲಿ ಕೇಳಿದರು. 

"ಈಗ ಸಮಯವೇನೋ ಇದೆ ,ಆದರೆ ನೀವು ಇಲ್ಲಿಗೆ ಬರುವುದು ಸರಿಯಲ್ಲ .ನೀವು ಚರ್ಚಿಸ ಬೇಕೆಂದು ಇರುವುದು ರಾಜ್ಯದ ಯೋಗ ಕ್ಷೇಮಕ್ಕೆ ಸಂಬಂಧ ಪಟ್ಟ ವಿಚಾರ ,ನೀವು ಈಗ  ರಾಜ್ಯದ ಪ್ರತಿನಿಧಿಗಳು ,ಆದ್ದರಿಂದ ನಾನು ನಿಮ್ಮಲ್ಲಿಗೆ ಬರುವುದೇ ಕರ್ತವ್ಯ "ಎಂದರಂತೆ .ಹನುಮಂತಯ್ಯನವರು ನನಗೆ ಹೇಳಿದರು "ಇಂತಹ ವಿಷಯಗಳಲ್ಲಿ ಪಟ್ಟು ಹಿಡಿಯುತ್ತಾರೆ ,ಬಂದೇ  ಬಿಡುತ್ತಾರೆ ,ಆದ್ದರಿಂದ ಅವರು ಹೊರಡುವುದರೊಳಗೆ ನಾನು ಅವರ ಮನೆಯಲ್ಲಿರಬೇಕೆಂದು ನಿಶ್ಚಯಿಸಿದೆ .ಅದೇ ನಾನು ಹೇಳಿದ 'ಅರ್ಜೆನ್ಸಿ "ಅಂತ ಮಹಾತ್ಮರಿಗೆ  ಇಲ್ಲಿಗೆ ಬರುವ ತೊಂದರೆ ಕೊಟ್ಟರೆ ಅದು ನಮಗೆ ಶ್ರೇಯಸ್ಸಲ್ಲ ." 

ಇಬ್ಬರು ಮಹಾತ್ಮರ ನಡಾವಳಿ ಹೇಗಿದೆ ? 

 ಇಂಜಿನಿಯರ್ ದಿನ : ವಿಶ್ವೇಶ್ವರಯ್ಯನವರ ಸಾಧನೆಗಳು | Sir M Vishweshwaraiah life and  achievements - Kannada Oneindia

ಬುಧವಾರ, ಸೆಪ್ಟೆಂಬರ್ 22, 2021

ಯುರೇಕಾ

                                 ಯುರೇಕಾ 

                   

ನನಗೆ ಒಂದು ರೋಗ ಇದೆ ;ಯಾವುದಾದರೂ ವಿಷಯ ಓದುವಾಗ ,ಬರೆಯುವಾಗ ಮತ್ತು ಆಲೋಚಿಸುವಾಗ  ಹಿಂದೆ ನನ್ನ ಜ್ಞಾನದ ಪರಿಧಿಗೆ ಬಂದ  ವಿಷಯ ಜ್ಞಾಪಕಕ್ಕೆ ಬರದಿದ್ದರೆ ಅದರ ಬಗ್ಗೆಯೇ ಮೆಲುಕು ಹಾಕಿ ಕಂಡು ಹಿಡಿಯಲು ಯತ್ನಿಸುವುದು .ಕೆಲವೊಮ್ಮೆ ನಡು  ರಾತ್ರಿ ಎದ್ದು ಪುಸ್ತಕಗಳಲ್ಲಿ ಹುಡುಕಿದ್ದು ಇದೆ . ಇದು ಜೀವ ಹೋಗುವ ವಿಚಾರ ಅಲ್ಲದಿದ್ದರೂ ಮರೆವು ನನ್ನನ್ನು ಗೆಲ್ಲಲು ಬಿಡಬಾರದು ಎಂಬ ಹಠ . 

 ಕೆಲವು ದಿನಗಳ ಹಿಂದೆ ಜಿ ಪಿ  ರಾಜರತ್ನಂ ಬಗ್ಗೆ ಬರೆದಿದ್ದೆನಷ್ಟೆ . ಆಗ ಅವರ ಬಗ್ಗೆ ಅವರ ಶಿಷ್ಯರೊಬ್ಬರು ಬರೆದ ಸಂಭವ ನೆನಪಿಗೆ ಬಂತು .ಆದರೆ ಅದು ಯಾವ ಪುಸ್ತಕ ;ಬರೆದ ಶಿಷ್ಯ ಯಾರು ಎಂದು ಎಷ್ಟು ತಲೆಕೆರೆದು ಕೊಂಡರೂ ನೆನಪಿಗೆ ಬರದು .ಶಿವರುದ್ರಪ್ಪ ಇರ ಬಹುದು ಎಂದು ಕೊಂಡೆ .ಆದರೆ ಪುರಾವೆ ಇಲ್ಲದ ಕಾರಣ ನನ್ನ ಬರಹದಲ್ಲಿ ಅದನ್ನು ಉಲ್ಲೇಖ ಮಾಡಲಿಲ್ಲ . 

ಈವತ್ತು ಅದು ಪರಿಹರಿಯಿತು .ಅವರು ಬೇರೆ ಯಾರೂ ಅಲ್ಲ .ಕನ್ನಡಿಗರು ಎಲ್ಲರೂ ನೆನೆಪಿನಲ್ಲಿ ಇಟ್ಟು ಕೊಳ್ಳ ಬೇಕಾದ ರಸಾಯನ ಶಾಸ್ತ್ರ ಪ್ರಾಧ್ಯಾಪಕ ಮತ್ತು ಕನ್ನಡದಲ್ಲಿ ವಿಜ್ಞಾನ ಶಿಕ್ಷಣ ಪ್ರಸಾರಕ್ಕೆ ದೊಡ್ಡ ಕೊಡುಗೆ ನೀಡಿದ ದಿ .ಜೆ ಆರ್ ಲಕ್ಷ್ಮಣ ರಾವ್ . ಅವರು ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ವಿದ್ಯಾರ್ಥಿಯಾಗಿ ಎರಡು ವರ್ಷ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಡಿಗ್ರಿ ತರಗತಿಯಲ್ಲಿ ಎರಡು ವರ್ಷ ಜಿ ಪಿ ರಾಜರತ್ನಂ ಅವರ ವಿದ್ಯಾರ್ಥಿ .ತಮ್ಮ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದ ರಾಜರತ್ನಂ  ಜೆ ಆರ್ ಲಕ್ಷ್ಮಣ ರಾಯರನ್ನು ಲೇಖಕ ಮಾಡುವುದರಲ್ಲಿಯೂ ಪಾತ್ರ ವಹಿಸಿದವರು . 

ನಾನು ನೆನಪಿಸಿ ಕೊಂಡ ಪ್ರಸಂಗ ಹೀಗಿದೆ .ತುಮಕೂರು ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಲೆಕ್ಚರರ್ ಆಗಿ ಲಕ್ಷಣ ರಾಯರು ಸೇರಿಕೊಂಡಾಗ ರಾಜರತ್ನಂ ಕೂಡಾ ಅಲ್ಲಿ ಪ್ರಾಧ್ಯಾಪಕರು ..ಲಕ್ಷ್ಮಣ ರಾಯರು ತಿಂಗಳ ಮೊದಲ ದಿನ ಸಂಬಳ ತೆಗೆದು ಕೊಳ್ಳಲು ಆಫೀಸ್ ಗೆ ಹೋದಾಗ ಸಂಬಳ ರಿಜಿಸ್ಟರ್ ನಲ್ಲಿ ರಾಜ ರತ್ನಮ್ ಆಗಲೇ ಸಹಿ ಮಾಡಿ ಹಣ ಪಡೆದು ಹೋಗಿದ್ದರು .ಆದರೆ ಅವರ ಸಂಬಳ ರೂಪಾಯಿ ಅರುವತ್ತು ,ಅವರ ಶಿಷ್ಯ ಈಗ ತಾನೇ ಸೇರಿಕೊಂಡ ತನಗೆ ಎಪ್ಪತ್ತೈದು . ರಾಜರತ್ನಂ ಪ್ರಕಾಂಡ ಪಂಡಿತರೂ ,ಲೇಖಕರೂ ಆಗಿದ್ದರೂ ಅವರಿಗೆ ಎಂ ಎ   ಪದವಿ ಇರದೇ ಪಂಡಿತ ಮಾತ್ರ ಆಗಿದ್ದುದು ಕಾರಣ .ಶಿಷ್ಯನಿಗೆ ಬೇಸರ ಮತ್ತು ಮುಜುಗರ .ಗುಮಾಸ್ತೆಯ ಬಳಿ "ಇನ್ನು ಮುಂದೆ ನಾನು ಮೊದಲ ದಿನ ಸಂಬಳ ತೆಗೆದು ಕೊಳ್ಳದೆ ಎರಡನೇ ಇಲ್ಲ ಮತ್ತೆ ತೆಗೆದು ಕೊಳ್ಳುವೆ .ಗುರುಗಳ ಎದುರು ನಾನು ಹೆಚ್ಚು ಸಂಬಳ ಎಣಿಸುವುದು ಸರಿಯಲ್ಲ . "ಎಂದರಂತೆ .ಹ್ಯಾಗೋ ಇದು ರಾಜರತ್ನಂ ಅವರಿಗೆ ಗೊತ್ತಾಗಿ ಇವರನ್ನು ಹಾಗೆ ಮಾಡ ಬೇಡ ಎನ್ನುವರು .ಕೆಲ ತಿಂಗಳುಗಳ ತರುವಾಯ  ಉಪಕುಲಪತಿಯಾಗಿ ಬಂದ ಸಿಂಗಾರ ವೇಲು ಮೊದಲಿಯಾರ್ ಈ ತಾರತಮ್ಯ ಸರಿ ಪಡಿಸಿ ರಾಜರತ್ನಂ ಅವರನ್ನೂ ಲೆಕ್ಚರರ್ ಆಗಿ ಪರಿಗಣಿಸಿ ಸಂಬಳವನ್ನು ೯೦ ರುಪಾಯಿಗೆ ನಿಗದಿ ಪಡಿಸಿತು .ಹಿಂದಿನ ಬಾಕಿ ಕೂಡಾ ಸಿಕ್ಕಿರಬೇಕು .ರಾಜರತ್ನಂ ಲಕ್ಷ್ಮಣ ರಾಯರನ್ನು ಕರೆದು ನೀನು ಇನ್ನು ಅಡಗ ಬೇಕಿಲ್ಲ ,ಎಂದು ಹೋಟೆಲ್ ಗೆ ಕರೆದು ಕೊಂಡು ಹೋಗಿ ಜಿಲೇಬಿ ತಿನಿಸಿದರು . ಸಣ್ಣ ಸಣ್ಣ ಸೂಕ್ಷ್ಮ ವಿಚಾರಗಳು .ದೊಡ್ಡ ಮನಸು . 

ಜೆ ಆರ್ ಎಲ್ ಅವರ ಆತ್ಮ ಚರಿತ್ರೆ " ನೆನಪಿನ ಅಲೆಗಳು ' ನಾನು ಮೆಚ್ಚಿದ ಕೃತಿಗಳಲ್ಲಿ ಒಂದು .ನೀವೂ ಓದಿರಿ

ಭಾನುವಾರ, ಸೆಪ್ಟೆಂಬರ್ 19, 2021

 ಕೆಲವು ಕ್ಲೀಶೆಗಳು 

ಕೆಲವು ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಪರಿಚಯಿಸುವಾಗ ಮತ್ತು ವಂದನಾರ್ಪಣೆ ಮಾಡುವಾಗ ಇವರು ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಎಂದು ಹೇಳುವದು ಸಾಮಾನ್ಯ . ನಾನು ಕೆಲವುಕಡೆ ಭಾಷಣ ಮಾಡಲು ಹೋದಾಗಲೂ ಹೀಗೆ ಹೇಳಿಸಿಕೊಂಡದ್ದು ಇದೆ .ಇನ್ನು ಕೆಲವರು ಖ್ಯಾತ ವೈದ್ಯರಾದ ಎ ಪಿ ಭಟ್ಟರು ಎನ್ನುವರು .ನನ್ನ ಬಿಡುವು ಮತ್ತು ಖ್ಯಾತಿ ನನಗೆ ಗೊತ್ತಿದ್ದೇ ಇದೆ . ನನ್ನ ಈ ವರೆಗಿನ ಜೀವನದಲ್ಲಿ ಯಾವುದೇ ಜಾಗದಲ್ಲಿ ಭಾರೀ ಖ್ಯಾತಿ ಗಳಿಸುವ ಮೊದಲು ಜಾಗ ಬದಲಿಸಿದ್ದೇನೆ . 

ಇಂತಹ ವಿಶೇಷಣ ನನ್ನ ಬಗ್ಗೆ ಕೇಳುವಾಗ ನನಗೆ ತಮಾಷೆ ಮತ್ತು ಮುಜುಗರ ಏಕ ಕಾಲಕ್ಕೆ ಆಗುವುದು . ಯಾಕೆಂದರೆ ನಾನು ಅಂತಹ ಕಡೆ ಭಾಗವಹಿಸುವುದು ಕೂಡಾ ನನ್ನ ಕರ್ತವ್ಯ ಎಂದು ತಿಳಿದು ಕೊಂಡವನು .ಇನ್ನು ಇತರ ಅತಿಥಿಗಳು ಹಾಗೆಯೇ ಇರಬೇಕು ಎಂದು ಇಲ್ಲ .ಇಂದು ಮುಂಜಾನೆ ನನ್ನ ಪತ್ನಿ ತನ್ನೆಲ್ಲಾ ಕೆಲಸಗಳನ್ನು ಬದಿಗಿಟ್ಟು ತಿಂಡಿ ಚಹಾ ಮಾಡಿಕೊಟ್ಟರು . ಅಧ್ಯಾಪಕರು ತಮ್ಮೆಲ್ಲಾ ಕೆಲಸಗಳನ್ನು ಬದಿಗಿಟ್ಟು ಪಾಠ ಮಾಡಿದರು .ನಗರ ಸಭೆಯ ಸಿಬ್ಬಂದಿ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಜನರ ಸಮಸ್ಯೆ ಆಲಿಸಿದರು ಇತ್ಯಾದಿ ಹೇಗಿರುತ್ತದೆ ?

                   ಇನ್ನು ಖ್ಯಾತ  ಎಂದರೆ ಏನು ? ಕೆಲಸ ಕಾರ್ಯಗಳು ತಾವೇ ಮಾತನಾಡುವ ದಿನಗಳು ಹೋಯಿತು .ಈಗ ಖ್ಯಾತಿಯನ್ನು ಖರೀದಿಸುವ ದಿನಗಳು . ಮಾಧ್ಯಮಗಳಲ್ಲಿ ಸುದ್ದಿ  ಹೆಸರು ಚಿತ್ರ  ಬರಿಸುವುದು ಅರ್ಥ ಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರದ ಅಡಿಯಲ್ಲಿ ಬರುವವು .

ಶನಿವಾರ, ಸೆಪ್ಟೆಂಬರ್ 18, 2021

ಓದಿನ ಹುಚ್ಚು

                                   ಓದಿನ ಹುಚ್ಚು 

ಬಾಲ್ಯದಲ್ಲಿ ಹುಚ್ಚು ಇತ್ತು .ಸಿಕ್ಕಿದ ಚಂದಮಾಮ ,ಅಟ್ಟದಲ್ಲಿ ಸಿಕ್ಕಿದ ಹಳೇ ಕತೆ ಪುಸ್ತಕ ಎಲ್ಲಾ ಒಂದೇ ಉಸಿರಿನಲ್ಲಿ ಮುಗಿಯುವುವು . ಪ್ರೈಮರಿ ಶಾಲೆಯಲ್ಲಿ ವಾಚನಾಲಯ ಕ್ಕೆ  ಪ್ರವೇಶ ಇರಲಿಲ್ಲ .ಹೈ ಸ್ಕೂಲ್ ನಲ್ಲಿ ಡ್ರಾಯಿಂಗ್ ಮಾಸ್ಟ್ರು ಲೈಬ್ರರಿ ಹೆಚ್ಚುವರಿ ಕರ್ತವ್ಯದಲ್ಲಿ .ಅವರಿಗೆ ಮನಸು ಬಂದರೆ ,ಸಮಯ ಸಿಕ್ಕಿದರೆ ನಮಗೆ ಪುಸ್ತಕ . 

ಅದಕ್ಕೆಂದೇ ನಾನು ಕನ್ಯಾನ ಪಂಚಾಯತ್ ಲೈಬ್ರರಿ ಗೆ ಪ್ರಾಥಮಿಕ ಶಾಲೆಯಲ್ಲಿ ಇರುವಾಗಲೇ ಸದಸ್ಯ ಆಗಿದ್ದೆ .ಅಲ್ಲಿ ಒಳ್ಳೆ ಒಳ್ಳೆಯ ಪುಸ್ತಕಗಳು ಇದ್ದವು .ಗ್ರಾಮ ಕರಣಿಕರು ಲೈಬ್ರರಿಯನ್ . ವಾರಕ್ಕೊಮ್ಮ್ಮೆ ಪುಸ್ತಕ ಕೊಡುತ್ತಿದ್ದರು . ಕಾರಂತ ,ರಾವ್ ಬಹಾದ್ದೂರ್ ,ಕುವೆಂಪು ಮತ್ತು ಅನಕೃ ಕಾದಂಬರಿಗಳ ಮೊದಲ ಓದು ಇಲ್ಲಿಯೇ ಆದುದು . 

ಮುಂದೆ ಹೈ ಸ್ಕೂಲ್ ಗೆ ಬಂದಾಗ ಪುತ್ತೂರು ನಗರ ಗ್ರಂಥಾಲಯ ಕ್ಕೆ ಸದಸ್ಯನಾದೆ . ಅದು ಟೌನ್ ಬ್ಯಾಂಕ್ ಕಾಂಪೌಂಡ್ ನಲ್ಲಿ ಇದ್ದು ವಿಸ್ತಾರವಾಗಿ ಗಾಳಿ ಬೆಳಕು ಇತ್ತು . ಅಲ್ಲಿ ಒಬ್ಬರು ಒಳ್ಳೆಯ ಗ್ರಂಥ ಪಾಲಕ (ಹೆಸರು ಲಾರೆನ್ಸ್ ?)ಇದ್ದರು .ಉತ್ಸಾಹಿ ಮತ್ತು ತಮ್ಮ ಕೆಲಸದಲ್ಲಿ  ಅಭಿಮಾನ ಪ್ರಾಮಾಣಿಕತೆ ಇದ್ದವರು .ಇಲ್ಲಿ ನನ್ನ ಇಂಗ್ಲಿಷ್ ಪುಸ್ತಕಗಳ ಓದು ಆರಂಭ .ಪರ್ಲ್ ಎಸ ಬಕ್ ,ಟಾಲ್ ಸ್ಟಾಯ್ ,ಕೆ ಪಿ  ಎಸ ಮೆನನ್ ಅವರ ಪುಸ್ತಕಗಳನ್ನು ಇಲ್ಲಿಂದ ಕೊಂಡು ಹೋಗಿ ಓದಿದ ನೆನಪು ಇದೆ . ಒಳ್ಳೆಯ ಕನ್ನಡ ಗ್ರಂಥಗಳೂ ಇದ್ದವು . ಈಗಿನ ಸಾರ್ವಜನಿಕ ಗ್ರಂಥಾಲಯ ದಲ್ಲಿ ಗಾಳಿ ,ಬೆಳಕು ಮತ್ತು ಸ್ಥಳಾವಕಾಶ ಕಡಿಮೆ .ನನ್ನ ಸಂಗ್ರಹದಿಂದ ಹಲವು ಅಮೂಲ್ಯ ಗ್ರಂಥಗಳನ್ನು ಅದಕ್ಕೆ ಕೊಟ್ಟಿದ್ದೇನೆ . 

ಮುಂದೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ಗ್ರಂಥಾಲಯ ,ಹೊಸೂರಿನ ಸಾರ್ವಜನಿಕ ಗ್ರಂಥಾಲಯ (ಅದರ ಶಾಖೆ ಒಂದು ಕೆ ಎಂ ಸಿ ಆಸ್ಪತ್ರೆಯಲ್ಲಿ ಕೂಡಾ ಇತ್ತು )ನನ್ನ ಓದಿನ ಹಸಿವು ನೀಗಿದವುರಜೆಯಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಕಾರಣ ಅಲ್ಲಿ ಕಬ್ಬನ್ ಪಾರ್ಕ್ ಸ್ಟೇಟ್ ಲೈಬ್ರರಿ ಮತ್ತು ಸೌತ್ ಎಂಡ್ ಸರ್ಕಲ್ ಲೈಬ್ರರಿಗಳಲ್ಲಿಯೂ ಪುಸ್ತಕ ಬೇಟೆ . ಉದ್ಯೋಗಿ ಯಾದ ಮೇಲೆ ಮಡಿಕೇರಿ ಜಿಲ್ಲಾ ಗ್ರಂಥಾಲಯ (ಇದು ಹಳೆ ಅರಮನೆ ಆವರಣದ ಒಳಗೆ ಇತ್ತು ),ಮೈಸೂರು ನಗರ ಗ್ರಂಥಾಲಯ ,ಸಕಲೇಶಪುರ ನಗರ ಲೈಬ್ರರಿ ಮತ್ತು ಹಾಸನ ಜಿಲ್ಲಾ ಗ್ರಂಥಾಲಯ ,ಮಂಗಳೂರು ನಗರ ಗ್ರಂಥಾಲಯ ,ಚೆನ್ನೈ ಅಯ್ಯನಾವರಂ ಕನ್ನಡ ಸಂಘ ಲೈಬ್ರರಿ ..ಮೌಂಟ್ ರೋಡಿನಲ್ಲಿ ಇದ್ದ ಜಿಲ್ಲಾ ವಾಚನಾಲಯ ,ಕನ್ನೆಮರ ರಾಷ್ಟ್ರೀಯ ಲೈಬ್ರರಿ ,ಪಾಲಕ್ಕಾಡ್ ಮತ್ತು ಕಲ್ಲಿಕೋಟೆ ನಗರ ಗ್ರಂಥಾಲಯ ಇವುಗಳ ಸದಸ್ಯತ್ವ .ಪಾಲಕ್ಕಾಡ್ ನಲ್ಲಿ ಒಬ್ಬರು ಸಂಚಾರಿ ಎರವಲು ಲೈಬ್ರರೀ ನಡೆಸುತ್ತಿದ್ದು ಚೀಲಗಳ ತುಂಬಾ ಪುಸ್ತಕ ಮನೆ ಮನೆಗೆ ತಂದುನಮಗೆ ಆಯ್ಕೆ ಮಾಡಲು ಕೊಡುವರು  ಮತ್ತು ನಿಗದಿತ ದಿನ ಅವರೇ ಬಂದು ಒಯ್ಯುತ್ತಿದ್ದರು .

ಇವಲ್ಲಿ ಯಾವ ಲೈಬ್ರರಿಯಲ್ಲಿಯೂ ನಾನು ಸದಸ್ಯತ್ವ ವನ್ನು ರದ್ದು ಮಾಡಿಸಿಲ್ಲ .ನಾನು ಈ ಬಾರಿ ಪುತ್ತೂರಿಗೆ ಬಂದಾಗ ಕಲ್ಲಿಕೋಟೆ ಲೈಬ್ರರಿಯಿಂದ ನನಗೆ ಒಂದು ನೋಟೀಸ್ ಬಂತು .ನನ್ನ ಮಂಗಳೂರು ವಿಳಾಸಕ್ಕೆ ಬಂದ ಪತ್ರವನ್ನು ರೀಡೈರೆಕ್ಟ್ ಮಾಡಿದ್ದರು .ಅಲ್ಲಿಯ ನನ್ನ ಕಾರ್ಡ್ ನಲ್ಲಿ ನನ್ನ ಮಿತ್ರರು ಪುಸ್ತಕ ಎರವಲು ಪಡೆದು ಹಿಂತಿರುಗಿಸಿರಲಿಲ್ಲ . ಅಲ್ಲಿಯ ಯುವ ಜಿಲ್ಲಾಧಿಕಾರಿ ವಾಚಾಲಯದಲ್ಲಿ ಅತೀವ ಆಸಕ್ತಿ ಹೊಂದಿದ್ದು ಪುಸ್ತಕ ಹಿಂತಿರುಗಿಸದಿರುವವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರು . ನನಗೆ ಬೇಸರ ಬದಲು ಸಂತೋಷ ಆಯಿತು .ಕೂಡಲೇ ನನ್ನ ಹೆಸರಿನಲ್ಲಿ ಕೊಂಡ ಪುಸ್ತಕಗಳ ಹೊಸಾ ಆವೃತ್ತಿ ಖರೀದಿಸಿ ಅದರೊಡನೆ ದಂಡ ಮೊತ್ತ ಕಳುಹಿಸಿ ನನ್ನ ಮೆಂಬರ್ ಶಿಪ್ ಕ್ಲೋಸ್ ಮಾಡಲು ಅರ್ಜಿ ಹಾಕಿದೆ . 

 ಈಗ ನಾನು ಲೈಬ್ರರಿ ಗೆ ಹೋಗುವದು ಕಡಿಮೆ .ಪುಸ್ತಕ ಖರೀದಿಸಿ ಓದುವುದೇ ಹೆಚ್ಚು .ಆದರೂ ಪುತ್ತೂರಿಗೆ ಒಂದು ಒಳ್ಳೆಯ ಲೈಬ್ರರಿ ಬೇಕು . ಗಾಳಿ ಬೆಳಕು ಚೆನ್ನಾಗಿರುವ , ಹೋಗಿ ಬರುವುದಕ್ಕೆ (ವಾಹನ ಇಲ್ಲದವರಿಗೆ )ಅನುಕೂಲ ಇರುವ ಜಾಗದಲ್ಲಿ ಇದ್ದರೆ ಉತ್ತಮ . ಹಲವಾರು ಸರಕಾರಿ ಕಚೇರಿಗಳು ,ಕೋರ್ಟ್ ಇತ್ಯಾದಿ ಸ್ಥಳಾಂತರ ಆಗುವಾಗ ಅವುಗಳಲ್ಲಿ ಯಾವುದಾದರೂ ಒಳ್ಳೆಯ  ಜಾಗ ಸಿಕ್ಕಿದರೂ ಆದೀತು .

 ಬಾಲಂಗೋಚಿ :ನನ್ನ ಅಜ್ಜನ ಮನೆಯ ಶಾಖೆ ಒಂದು ಈಶ್ವರ ಮಂಗಳ ಬಳಿ ಸಾರು ಕೂಟೆಲ್ ನಲ್ಲಿ ಇದ್ದು ಅಲ್ಲಿ ನನ್ನ ಪುಟ್ಟು ಮಾವ ಶಂಕರ ಜೋಷಿ ಅವರು ಒಂದು ಗೃಹ ಪುಸ್ತಕ ಭಂಡಾರ ಅಭಿವೃದ್ದಿ ಪಡಿಸಿದ್ದು ನಮಗೆ ರಜೆಯಲ್ಲಿ ಅಲ್ಲಿಗೆ ಹೋಗಲು ಆಕರ್ಷಣೆ . ಮುಂದೆ ನನ್ನ ಅಕ್ಕನ ಮನೆಯಲ್ಲಿ ನಾನೇ ಒಂದು ಲೈಬ್ರರಿ ಮಾಡಿಕೊಟ್ಟೆ .ನನ್ನ ಎರಡನೇ ಅಕ್ಕನ ಗಂಡ ವಿ ಬಿ ಅರ್ತಿಕಜೆ ಅವರು ಪುಸ್ತಕಗಳ ನಡುವೆ ಇರುವವರು

ಗುರುವಾರ, ಸೆಪ್ಟೆಂಬರ್ 16, 2021

ದೊಡ್ಡಪ್ಪ ಗಣಪತಿ ಭಟ್

                             ದೊಡ್ಡಪ್ಪ ಗಣಪತಿ ಭಟ್ 

                           

                                     

Ganapathi Bhat M.A. | Antru Kanda Mugam

MA.Ganapathi Patt-White Subbaiah-Savithri-Aayiram Rupai 1964-2                                         

 ನನ್ನ ದೊಡ್ಡಪ್ಪನ ಹೆಸರು ಗಣಪತಿ ಭಟ್ ಎಂ ಎ . ಎಂ ಎ  ಪದವಿ  ವಿಶ್ವ ವಿದ್ಯಾಲಯದಲ್ಲಿ ಕಲಿಯದೇ (ಜಗವೆಂಬ ವಿದ್ಯಾಲಯದಲ್ಲಿ ಕಲಿತವರು )ಬಂದುದು . ಎಂ ಎಂದರೆ ಮಹಾಬಲ (ತಂದೆ )ಎ  ಎಂದರೆ ಅಂಗ್ರಿ . 

ಅಜ್ಜನ ಮಕ್ಕಳಲ್ಲಿ ದೊಡ್ಡವರು .ಹಿರಿಯರು  ಮಾಡಿದ ಸಾಲಕ್ಕೆ  ಅಂಗ್ರಿ ಅಸ್ತಿ ಏಲಂ ಆಗಿ ಹೋಯಿತು . ಅಜ್ಜ ಅಜ್ಜಿ ಮಕ್ಕಳು ಅಜ್ಜಿಯ ತವರು ಮನೆ ಚೆಕ್ಕೆಮನೆಗೆ ಆಶ್ರಯ ಬೇಡಿ ಹೋದರು . ದೊಡ್ಡಪ್ಪ ಜೀವನಕ್ಕೆ ಏನಾದರೂ ಬೇಕೆಂದು ಸ್ವಲ್ಪ ಕಾಲ ಬಸ್ ಏಜೆಂಟ್ ಆಗಿ ಕೆಲಸ  ಮಾಡಿದರು .ಆಮೇಲೆ  ಜೀವನ ಅರಸಿ ಮದ್ರಾಸ್ ನಗರಕ್ಕೆ ಹೋದರು .ಅಲ್ಲಿ ಅದೂ  ಇದೂ ಮಾಡಿ ಹೊಟ್ಟೆ ಹೊರೆಯುತ್ತಿದ್ದಾಗ ಇವರ ಸುಂದರ ಮುಖವನ್ನು ಕಂಡು ನಾಟಕದಲ್ಲಿ  ಸ್ತ್ರೀ ವೇಷಕ್ಕೆ ಹೊಂದುತ್ತಾರೆ ಎಂದು ಆಯ್ಕೆ ಮಾಡಿದರು ಎಂದು ಕಾಣುತ್ತದೆ .  ಆಗಿನ ಹೆಚ್ಚಿನ ಸಿನಿಮಾ ನಟರಂತೆ ಅಲ್ಲಿಂದ ಸಿನಿಮಾ ನಟನೆಗೆ ಕಾಲಿಟ್ಟು ,ಪೋಷಕ ಮತ್ತು  ಹಾಸ್ಯ ನಟರಾಗಿ ಕನ್ನಡ ,ತಮಿಳು ,ತೆಲುಗು ಮತ್ತು ಹಿಂದಿಯ ನೂರಾರು ಚಿತ್ರಗಳಲ್ಲಿ  ಅಭಿನಯಿಸಿದರು .೧೯೪೩ ರಲ್ಲಿ ಬಂದ  ಸತ್ಯ ಹರಿಶ್ಚಂದ್ರ ಇವರ ಮೊದಲ ಕನ್ನಡ ಚಿತ್ರ ಇರಬೇಕು .೧೯೭೨ ರ ಬಂಗಾರದ ಮನುಷ್ಯ ಕೊನೇ  ಚಿತ್ರ ..ನಡುವೆ ಗುಣಸುಂದರಿ ,ಗೌರಿ ,ಚಂದವಳ್ಳಿಯ ತೋಟ ,ಬೆಟ್ಟದ ಹುಲಿ ,ಬೆಳ್ಳಿಮೋಡ ,ಅನ್ನಪೂರ್ಣ ,ಹಸಿರು ತೋರಣ ,ಭಲೇ ಜೋಡಿ ,ಸಿಗ್ನಲ್ ಮ್ಯಾನ್ ಸಿದ್ದಪ್ಪ ,ಶರ ಪಂಜರ ,ಹೃದಯ ಸಂಗಮ ಮುಂತಾದ  ಯಶಸ್ವೀ ಚಿತ್ರಗಳಲ್ಲಿ ಅಭಿನಯ . ವಾತ್ಸಲ್ಯ ಚಿತ್ರದಲ್ಲಿ ಅವರ ಜತೆ  ,ಅವರ ಮಗ ಅಣ್ಣ ಸದಾಶಿವ ಕೂಡಾ ನಟಿಸಿದ್ದರು . ನವಭಾರತ ಪೇಪರ್ ನ ಸಿನೆಮಾ  ವಾರ್ತೆಯಲ್ಲಿ ಅವರ ಫೋಟೋ ,ವಾರ್ತೆ ಮತ್ತು ವಿಟ್ಲ ,ಪುತ್ತೂರು ಟಾಕೀಸ್ ಗಳ ನೋಟಿಸ್ ಗಳಲ್ಲಿ ಅವರ ಹೆಸರು ನೋಡಿದಾಗ ನಮಗೆ ಭಾರೀ ಹೆಮ್ಮೆ .

ತಮ್ಮ ದುಡಿಮೆಯಿಂದ ದೊಡ್ಡಪ್ಪ ಕುಟುಂಬಕ್ಕೆ ಕಷ್ಟ ಕಾಲದಲ್ಲಿ ಊರು ಗೋಲಾಗಿ ನಿಂತರು .ಮುಂದೆ ಅವರ ಮೈನರ್ ಹಕ್ಕಿನ ಸಹಾಯದಿಂದ  ಆಸ್ತಿಯೂ ವಾಪಸು ಸಿಕ್ಕಿತು .

   ಖ್ಯಾತ ಸಂಡೀತ ವಿದ್ವಾನ್ ಗುತ್ತು  ಗೋವಿಂದ ಭಟ್ ಅವರ ಮಗಳು ನನ್ನ ದೊಡ್ಡಮ್ಮ .          ದೊಡ್ಡಪ್ಪ ಅಂಗ್ರಿಗೆ ವರ್ಷಕ್ಕೊಮ್ಮೆ ಏನಾದರೂ ಕಾರ್ಯಕ್ರಮ ಇದ್ದರೆ ಬರುವರು . ತುಂಬಾ ಸೌಮ್ಯ ಸ್ವಭಾವ ,ಮೃದು ಮಾತು ಮತ್ತು ಮಕ್ಕಳೆಂದರೆ ಪ್ರೀತಿ .ತಮ್ಮನ ಮಕ್ಕಳಾದ ನಾವು  ಚೆನ್ನಾಗಿ ಓದಿ ಉಷಾರು ಎಂದು ಯಾವಾಗಲೂ ಬೆನ್ನು ತಟ್ಟಿ  ಆಶೀರ್ವದಿಸುವರು . ಮದ್ರಾಸ್ ನಲ್ಲಿ  ಮೈಲಾಪುರ ದಲ್ಲಿ ಮನೆ ಮಾಡಿದ್ದರು .ಊರಿನಿಂದ ಅಲ್ಲಿಗೆ ಹೋದವರನ್ನು ಚೆನ್ನಾಗಿ ಉಪಚರಿಸುವರು .ಸಿನೆಮಾ ಶೂಟಿಂಗ್ ಇದ್ದರೆ  ಕರೆದು ಕೊಂಡು ಹೋಗಿ ತೋರಿಸುವರು . ಮೊನ್ನೆ ನಾನು ಓದಿದ  ಶಿಂಗಣ್ಣ  ಶ್ರೀ ಕನ್ನೆ ಪ್ಪಾಡಿ ರಾಮಕೃಷ್ಣ  (ದೊಡ್ಡಮ್ಮನ ಭಾವ )ತನಗೆ  ಕಲ್ಕಿ ಪತ್ರಿಕೆ ಸೇರಲು ಗಣಪತಿ ಭಟ್ ಪ್ರೋತ್ಸಾಹಿಸಿದ ಬಗ್ಗೆ ಹೇಳಿಕೊಂಡಿದ್ದಾರೆ . 

ಅವರಿಗೆ  ಇಬ್ಬರು ಮಕ್ಕಳು ..ಪುಷ್ಪ ಲತಾ ಮತ್ತು ಮಹಾಬಲ (ಸದಾಶಿವ -ಬಂಗಾರು ). ಪುಷ್ಪಕ್ಕ ಒಳ್ಳೆಯ ಹಾಡುಗಾರ್ತಿ . ಉಡುಪಿಯಲ್ಲಿ ನೆಲೆಸಿದ್ದಾರೆ . ನಮ್ಮ ಅಜ್ಜನ ಹೆಸರು ಮಹಾಬಲ ಎಂದು .ಅವರ ಮೂವರು ಮಕ್ಕಳ ಮೊದಲ ಮಗನಿಗೆ ಅದೇ ಹೆಸರು .ಅಜ್ಜನ ಹೆಸರು ಅಜ್ಜಿ ,ಸೊಸೆಯಂದಿರು ಹೇಳಬಾರದುದಕ್ಕೆ ಬಂಗಾರು(ಸದಾಶಿವ ) ,ಮಾಣಿ ,ಶಿವ ಎಂದು ಕ್ರಮವಾಗಿ ಕರೆಯುತ್ತಿದ್ದರು . 

ದೊಡ್ಡಪ್ಪ ಸಿನೆಮಾ ಕ್ಕೆ  ಬಿಡುವು ಇದ್ದಾಗ ನಾಟಕದಲ್ಲಿಯೂ ಅಭಿನಯಿಸುತ್ತಿದ್ದು ಕಲ್ಯಾಣ ಕುಮಾರ್ (ಚಿತ್ರನಟ )ಅವರ ತಂಡದ "ಚಿಕ್ಕಮ್ಮ "ನಾಟಕ ತಂಡ ಮಂಗಳೂರಿನ ಪುರಭವನದಲ್ಲಿ ಹಲವು ಪ್ರದರ್ಶನ ನೀಡಿತು .ಆಗ ನಟ ನಟಿಯರು ಅಂಗ್ರಿಗೆ ಬಂದು ನಮ್ಮ ಆತಿಥ್ಯ ಸವಿದು ಸಂತೋಷ ಪಟ್ಟರು .ನಾವು ಮನೆಯವರೂ ಒಂದು ದಿನ ಜೊತೆಯಾಗಿ ನಾಟಕ ನೋಡಿ ಬಂದೆವು . 

ದೊಡ್ಡಪ್ಪನಿಗೆ ಡಾ ರಾಜ್ ಕುಮಾರ್ ಮೇಲೆ ಭಾರೀ ಪ್ರೀತಿ ಮತ್ತು ಗೌರವ. ಕೊನೆ ಕೊನೆಗೆ ಗಣಪತಿ ಭಟ್ ಅವರ ಅರೋಗ್ಯ ಕೈಕೊಟ್ಟಾಗ ತಮ್ಮ ಚಿತ್ರಗಳಲ್ಲಿ ಒಂದು ಸಣ್ಣ ಪಾತ್ರವಾದರೂ ದೊಡ್ಡಪ್ಪನವರಿಗೆ ಸಿಗುವಂತೆ ಮಾಡಿದ ಹೃದಯವಂತ ಮೇರು ನಟ ಅಣ್ಣಾವರು . 

ಬಂಗಾರದ ಮನುಷ್ಯ ದೊಡ್ಡಪ್ಪನ ಕೊನೆ ಚಿತ್ರ . ಹೃದಯಾಘಾತ ದಿಂದ ತೀರಿ ಕೊಂಡ ಅವರ ಅಂತ್ಯ ಕ್ರಿಯೆ ಅಂಗ್ರಿಯಲ್ಲಿಯೇ ನಡೆಯಿತು . ರಾಜಕುಮಾರ್ ,ಎಂ ಜಿ ಆರ್ ಆದಿಯಾಗಿ ಸಹನಟರು ಕಂಬನಿ ಮಿಡಿದರು .ಅನೇಕ ಸಾಂತ್ವನ  ಪತ್ರಗಳು ಅಂಗ್ರಿಗೆ  ಬರುತ್ತಿದ್ದವು . ರಾಜಕುಮಾರ್ ನಾಯಕರಾಗಿ ನಟಿಸಿದ ಹೃದಯ ಸಂಗಮ ಚಿತ್ರ ಅವರ ನಿಧನದ ನಂತರ ತೆರೆಗೆ ಬಂದಿದ್ದು ಅದರ ಆರಂಭದಲ್ಲಿ  ಎಂ ಎ ಗಣಪತಿ ಭಟ್ ಅವರಿಗೆ  ಶ್ರದ್ದಾಂಜಲಿ ಅರ್ಪಿಸಿಸಿದ್ದರು .

 (ಚಿತ್ರಗಳ ಮೂಲಗಳಿಗೆ ಆಭಾರಿ )

 

 

 

ನನ್ನ ಅಪ್ಪಚ್ಚಿ

               ನನ್ನ ಅಪ್ಪಚ್ಚಿ (ಚಿಕ್ಕಪ್ಪ )

                        

 ಹಿಂದೆ ಬರೆದಂತೆ ನನ್ನ ಮನೆ ಅಜ್ಜನಿಗೆ ಮೂವರು ಗಂಡು ಮಕ್ಕಳು . ನನ್ನ ತಂದೆ ನಡುವಿನವರು . ನಾಲ್ಕು ಹೆಣ್ಣು ಮಕ್ಕಳು .ದೊಡ್ಡಪ್ಪ ಸಿನೆಮಾ ನಟರಾಗಿ ಮದ್ರಾಸ್ ನಲ್ಲಿ ಇದ್ದರು . 

ಚಿಕ್ಕಪ್ಪ ಪೆರ್ಲ ಶಾಲೆಯಲ್ಲಿ ಎಸ ಎಸ ಎಲ್ ಸಿ ವರೆಗೆ ಕಲಿತಿದ್ದರು .ಅವರು ಶಾಲೆಗೆ ಹೋದ ಕಾರಣ ಸೋದರ ಅಳಿಯಂದಿರು ಶಾಲೆ ಮಾವ ಎಂದು ಕರೆಯುತ್ತಿದ್ದರು . ನನ್ನ ಅಪ್ಪ ಮೂರೋ ನಾಲ್ಕೋ ಕ್ಲಾಸ್ ಓದಿರ ಬಹುದು . ಅಜ್ಜ ಮನೆಯ ವ್ಯವಹಾರ ದಿಂದ  ಸ್ವಯಂ ನಿವೃತ್ತಿ ಘೋಷಿಸಿದಾಗ  ಮನೆ ವಾರ್ತೆ ಚಿಕ್ಕಪ್ಪ ವಹಿಸಿದರು . ನನ್ನ ತಂದೆ ಸಲಹೆ ಸೂಚನೆ  ಕೊಡುವರು . ಚಿಕ್ಕಪ್ಪ ಮತ್ತು ಅಪ್ಪ ಪ್ರಧಾನಿ ಮತ್ತು ರಾಷ್ಟಪತಿ ಇದ್ದಂತೆ ಇದ್ದರು . 

ಚಿಕ್ಕಪ್ಪನ ಹೆಸರು ಶಂಕರ ನಾರಾಯಣ ಭಟ್ .ಅವರ ಕೋಣೆ ಮನೆಯ ಪಶ್ಚಿಮ ಭಾಗದಲ್ಲಿ ಇದ್ದು ಬೆಳಿಗ್ಗೆ ಎದ್ದು ಪಕ್ಕದಲ್ಲಿಯೇ  ಚಾವಡಿಯಲ್ಲಿ ಉತ್ತರಕ್ಕೆ ಮುಖ್ಯ ಬಾಗಿಲು ಇದ್ದರೂ ಪೂರ್ವದ ಬಾಗಿಲಿನಿಂದಲೇಹೊರ ಬಂದು   ಸೂರ್ಯನಿಗೆ ನಮಸ್ಕಾರ ಮಾಡಿ  ವಿಶಾಲವಾಗಿ ಹರಡಿದ್ದ ತೋಟಕ್ಕೆ ಒಂದು ಪ್ರದಕ್ಷಿಣೆ ಹಾಕಿ ಬಂದು ತಿಂಡಿ ಕಾಪಿ ಸೇವಿಸುವರು .ಅವರು ಕುಳಿತು ಕೊಳ್ಳುತ್ತಿದ್ದ ಮಣೆ  ಸ್ವಲ್ಪ ಎತ್ತರದ್ದು . ಅವರು ಕುಳಿತೊಡನೆ ಎರಡು ಬೆಕ್ಕುಗಳು ಮಿಯಾಂ ಎಂದು ಬಂದು ಪಕ್ಕದಲ್ಲಿ ಕುಳಿತು ಕೊಳ್ಳುವವು .ಸ್ವಲ್ಪ ತಿಂಡಿ ಅವಕ್ಕೆ ಹಾಕಿಯೇ ಇವರು ತಿನ್ನುವರು .ಊಟದ ಸಮಯವೂ ಹಾಗೆಯೇ . ಚಿಕ್ಕಪ್ಪನದ್ದು ನೀರು ಕುಡಿಯುವ ಒಂದು ಸ್ಟಯಿಲ್ ಇದ್ದಿತು . ಬಾಯಿಯ ಒಂದು ಮೂಲೆಯಿಂದ ಹೀರುವುದು . ಮಕ್ಕಳು ಒಂದು ಸಾಲು ,ಹಿರಿಯರು ಒಂದು ಸಾಲು ;ನಮಗೆ ಬಟ್ಟಲು ,ಅವರಿಗೆ ಬಾಳೆ ಎಲೆ ;ಜತೆಯಾಗಿ ತುಂಬಿ ತುಳುಕುವ ಭೋಜನ ಶಾಲೆ ,ನೆನೆಸಿಕೊಳ್ಳುವಾಗ ಮನಸು ಮುದವಾಗುವುದು.

ಮಧ್ಯಾಹ್ನ ದ ವರೆಗೆ  ಕೃಷಿ ಚಟುವಟಿಕೆ ಯಲ್ಲಿ ಭಾಗವಹಿಸಿ ಮಧ್ಯಾಹ್ನ ಕೆಲವೊಮ್ಮೆ ಪೂಜೆ (ಅಜ್ಜ,ಅಪ್ಪ ಇಲ್ಲದಿದ್ದರೆ ),ಆಮೇಲೆ ಊಟ ಮತ್ತು ಸ್ವಲ್ಪ ವಿಶ್ರಾಂತಿ .ಬಳಿಕ ಎದ್ದು ಕೊಟ್ಯ (ಕೊಟ್ಟಿಗೆ )ಯಲ್ಲಿ  ವಿಶ್ರಮಿಸುತ್ತಿರುವ ಕೆಲಸಗಾರರನ್ನು' ಲಕ್ಕಿ ಲಕ್ಕಿ 'ಎಂದು ಎಬ್ಬಿಸುವರು .ಮತ್ತೆ ಸಂಜೆ ತನಕ ತೋಟ ಗದ್ದೆ .

ಅಪ್ಪ ಚಿಕ್ಕಪ್ಪ ಅನ್ಯೋನ್ಯ ವಾಗಿದ್ದರು . ಚಿಕ್ಕಪ್ಪನಿಗೆ ಅಜ್ಜನೊಡನೆ ಮಾತು ಕಡಿಮೆ .ಆದುದರಿಂದ ಅವರ ನಡುವೆ ಸಂದೇಶ ವಾಹಕರಾಗಿ ಮನೆಯ ಇತರರು ಕಾರ್ಯ ನಿರ್ವಹಿಸುತ್ತಿದ್ದರು . ಚಿಕ್ಕಪ್ಪ ಮನೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಕಾರಣ ನಮಗೆ ಏನಾದರೂ ಹಣ ಬೇಕಾದರೆ ಅವರನ್ನು ಕೇಳ ಬೇಕಿತ್ತು  . ಅವರು ಕೇಳಿದ ಕೂಡಲೇ ಕೊಡರು .ಎರಡು ಮೂರು ಸಲ ನೆನೆಪಿಸಿದಾಗ ಕೊಡುವರು . ಈ ಅಭ್ಯಾಸ ನನಗೂ ಇದೆ ಎಂದು ನನ್ನ ಹೆಂಡತಿ ಹೇಳುವಳು .ನಾಲ್ಕೈದು ಸಾರಿ ಒರಂಜಿ ದ  ಮೇಲೆ ಹಣ ಸ್ಯಾಂಕ್ಷನ್ ಮಾಡುತ್ತೇನೆ ಎಂದು ಅವಳ ಆರೋಪ . 

ಬೆಳೆದ ಅಡಿಕೆಯನ್ನು ಮಂಗಳೂರು ಭಂಡಸಾಲೆ ಗೆ ಕಳುಹಿಸಿ ,ಬಂದರಿನಿಂದ ಮನೆಗೆ ಮುಖ್ಯ ಸಾಮಾನುಗಳು ಬರುತ್ತಿದ್ದವು . ಮಂಗಳೂರಿಗೆ ಚಿಕ್ಕಪ್ಪ ಹೋಗುವ ಮುನ್ನಾ ದಿನ  ಅನೌನ್ಸ್ಮೆಂಟ್ ಮಾಡುವರು .ನಾವು ಏನಾದರೂ ಬೇಕಾದರೆ (ಪುಸ್ತಕ ,ಕೊಡೆ ಇತ್ಯಾದಿ )ಪಟ್ಟಿ ಕೊಡಬೇಕು .ಬೆಳಿಗ್ಗೆ ಅವಲಕ್ಕಿ ಮೊಸರು ತಿಂದು ರಾಂಪನ ಸಿ ಪಿ ಸಿ ಬಸ್ಸಿನಲ್ಲಿ ಮಂಗಳೂರಿಗೆ ಹೋಗಿ ರಾತ್ರಿ ಬರುವರು .ನಾವು ಚಾತಕ ಪಕ್ಷಿಗಳಂತೆ ಅವರ ಬರುವಿಕೆ ಗೆ ಕಾಯುವೆವೆವು . ಒಂದು ನಾವು ಕೊಟ್ಟ ಪಟ್ಟಿಯ ವಸ್ತು ಸ್ವೀಕರಿಸಲು ,ಇನ್ನೊಂದು ಅವರು ಯಾವಾಗಲೂ ಮಕ್ಕಳಿಗೆ ತರುತ್ತಿದ್ದ ಪೆಪ್ಪರ್ ಮೆಂಟ್ (ಹೆಚ್ಚಾಗಿ  ಅರ್ಧ ಚಂದ್ರಾಕಾರದ ನಿಂಬೆ ಹುಳಿ ಮಿಠಾಯಿ )ಅಥವಾ ಚಾಕಲೇಟ್ ಗಾಗಿ .ನನ್ನ ಅಪ್ಪ ಮತ್ತು ಚಿಕ್ಕಪ್ಪ ಕನ್ಯಾನ ಪೇಟೆಗೆ ಬರುತ್ತಿದ್ದುದು ಅಪರೂಪ . 

ಶನಿವಾರ ಕೆಲಸದವರಿಗೆ ಸಂಬಳ ಬಟವಾಡೆ . ತಂದೆ ಲೆಕ್ಕ ಮಾಡಿ ಹೇಳುವರು .ಚಿಕ್ಕಪ್ಪ ಅದಕ್ಕನುಗುಣ ವಾಗಿ ಹಣ ಎಣಿಸಿ ಕೊಡುವರು .

ಮನೆಯವರನ್ನು ಮಕ್ಕಳು ಸಹಿತ ತೀರ್ಥ ಸ್ಥಳ ಗಳಿಗೆ ಕರೆದೊಯ್ಯುವುದು ಅವರಿಗೆ ಪ್ರೀತಿ .ಅವರೊಡನೆ ನಾನು ಮಧೂರು ದೇವಸ್ಥಾನ ದ ಉತ್ಸವ ,ಬಜ್ಪೆ ವಿಮಾನ ನಿಲ್ದಾಣ ನೋಡಲು ಹೋದ ನೆನಪು . ನೆಂಟರ ಮನೆಯ ಕಾರ್ಯಕ್ರಮಗಳಿಗೂ  ಅಪ್ಪನಿಗಿಂತ ಹೆಚ್ಚು ಚಿಕ್ಕಪ್ಪನೇ ಹೋಗುವರು . 

 ಚಿಕ್ಕಪ್ಪ ಬುಕ್ ಮಾಡಿ ಬಹಳ ವರ್ಷ ಕಾದು ಒಂದು ಲ್ಯಾಂಬ್ರೇಟ್ಟಾ ಸ್ಕೂಟರ್ ಕೊಂಡರು.ಸೈಕಲ್ ಕೂಡಾ ಇಲ್ಲದ ನಮ್ಮ ಮನೆಯಲ್ಲಿ ಭಾರೀ ಸಂಭ್ರಮ .ಅದನ್ನು ಕಲಿಯುವಾಗ ಅವರ ಹಿಂದೆ ಧೈರ್ಯಕ್ಕೆ ನಾನು .ಅವರು ಕುಳಿತರು ;ನಾನು ಹಿಂದೆ ,ಹೋಗುವನಾ ,ನಾನು ರೈಟ್ ಎಂದೆ.ಆಕ್ಸಲರೇಟರ್ ಕೊಟ್ಟರು ,ಕ್ಲಚ್ ಬಿಟ್ಟರು ,ಚರಳು ಕಲ್ಲಿನ ಮೇಲೆ .ಹ್ಯಾಂಡಿಲ್ ಅತ್ತ,ಸ್ಕೂಟರ್ ಇತ್ತ. ನಾವು ಇಬ್ಬರೂ ಧರಾಶಾಯಿ .ಪುಣ್ಯಕ್ಕೆ ದೊಡ್ಡ ಗಾಯ ಆಗಿರಲಿಲ್ಲ .ನನ್ನ ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯ ಬೇರೆ .

ಚಿಕ್ಕಮ್ಮನ ಹೆಸರು ಸಾವಿತ್ರಿ .ಅವರ ತಂದೆ ಮನೆ ಈಶ್ವರ ಮಂಗಲ ಸಮೀಪ ಹೊಸಂಗಡಿ . ಚಿಕ್ಕಮ್ಮನ ಬಳಿ ಒಂದು ಹಾರ್ಮೋನಿಯಂ ಪೆಟ್ಟಿಗೆ ಇತ್ತು .ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿದ್ದರು .ಅವರು ವಾರಕ್ಕೊಮ್ಮೆ ಸಂಜೆ ಹಾಡುವರು ,ನಾವೆಲ್ಲಾ ಅವರ ಸುತ್ತ ಕುಳಿತು ಕೇಳುವೆವು .. ನಮ್ಮ ಅಮ್ಮ ಮತ್ತು ಚಿಕ್ಕಮ್ಮ ಸಂಜೆ ಹೊತ್ತು ಒಂದು ಭಾರೀ ಅರೆಯುವ ಕಲ್ಲಿನಲ್ಲಿ  ಜತೆಯಾಗಿ ಮರುದಿನದ ತಿಂಡಿಗೆ ಅಕ್ಕಿ ಉದ್ದು ಇತ್ಯಾದಿ ಅರೆಯುವರು .  

ಚಿಕ್ಕಮ್ಮನ ತಮ್ಮಂದಿರು ನಮ್ಮ ಮನೆಗೆ ಆಗಾಗ ಬರುತ್ತಿದ್ದು ನನ್ನ ಅಣ್ಣಂದಿರ ಸರೀಕರು . ಅವರು ಎಲ್ಲರೂ ಸೇರಿ ಕೇರಂ ಆಡುತ್ತಿದ್ದರು .ದೀಪಾವಳಿ ಸಮಯ ಪಟಾಕಿ ತರುವರು .  ಚಿಕ್ಕಪ್ಪನಿಗೆ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಕ್ಕಳು . ಚಿಕ್ಕಮ್ಮ ಬೇಗನೇ ತೀರಿ ಕೊಂಡರು . ಆ  ಕಾಲಕ್ಕೆ ನಮಗೆ ಪಾಲು ಆಗಿತ್ತು . ಮಕ್ಕಳೆಲ್ಲಾ ಈಗ ಒಂದು ನೆಲೆಗೆ ಬಂದಿದ್ದಾರೆ .ಅವರ  ಅಜ್ಜನ ಮನೆಯವರು ಸಹಾಯಕ್ಕೆ ನಿಂತರು .

ನನ್ನ ದೊಡ್ಡಪ್ಪ ತೀರಿ ಕೊಂಡಾಗ ದೊಡ್ಡಮ್ಮನ ಅಪೇಕ್ಷೆ ಮೇರೆಗೆ  ಅಸ್ತಿ ವಿಭಜನೆ ಆಯಿತು .ಒಟ್ಟಿಗಿದ್ದ ನಮಗೆ ಮನಸಿಗೆ ಭಾರೀ ಬೇಸರ . ಚಿಕ್ಕಪ್ಪ ಒಳ್ಳೆಯ ಮನಸ್ಸಿನವರು .ಆದರೆ ಅವರ ಆರ್ಥಿಕ ವ್ಯವಹಾರಗಳಲ್ಲಿ ಶಿಸ್ತು ಇರಲಿಲ್ಲ . ಸ್ವಲ್ಪ ಹಣ ಕೈಯಲ್ಲಿ ಬಂದೊಡನೆ  ದೊಡ್ಡ ದೊಡ್ಡ ಯೋಜನೆ ಕೈಗೆತ್ತಿ ಕೊಳ್ಳುವರು ;ಹಣ ಸಾಕಾಗದೆ ಸಾಲ  ಮಾಡುವರು .ಸಾಲ ಇದ್ದರೂ ಸಾರ್ವಜನಿಕ ಕೆಲಸಕ್ಕೆ ಇತ್ಯಾದಿ ಕೇಳಿದೊಡನೆ ಕೊಡುವರು .ಇವರ ಈ  ದೌರ್ಬಲ್ಯ ವನ್ನು ಅನೇಕರು ಉಪಯೋಗ ಪಡಿಸಿ ಕೊಂಡರು .. ತಮ್ಮ ಜೀವನದ ಕೊನೆ ದಿನಗಳಲ್ಲಿ ತುಂಬಾ ಕಷ್ಟ ಪಟ್ಟರು . ಅವರು ತೀರಿಕೊಂಡ ದಿನ ನಾನು ಊರಿನಲ್ಲಿ ಇದ್ದೆ . ನನ್ನ ತಂದೆಯವರು ಸಾಮನ್ಯವಾಗಿ  ಯಾವುದೇ ದುಃಖ ಅಥವಾ ಸಂತೋಷ ಹೆಚ್ಚು ತೋರಿಸಿ ಕೊಳ್ಳುವವರು ಅಲ್ಲ .ಆ ದಿನ ತಮ್ಮನನ್ನು  ಕಳೆದು ಕೊಂಡ ಅವರ ಮುಖ ಮ್ಲಾನವಾಗಿತ್ತು . 

ಚಿಕ್ಕಪ್ಪನ ಮಕ್ಕಳೂ ನಾವೂ    ಈಗಲೂ ಅನ್ಯೋನ್ಯವಾಗಿ  ಇರುವೆವು .

ಬುಧವಾರ, ಸೆಪ್ಟೆಂಬರ್ 15, 2021

ಮಟ್ಟು ಗುಳ್ಳದ ಹೊಸ ರೂಪ

                                ಮಟ್ಟು ಗುಳ್ಳದ ಹೊಸ ರೂಪ


                                 

GI tag and branding boost demand for Mattu Gulla brinjal - The Hindu  BusinessLine                                                                                                                             ಮಟ್ಟು ಗುಳ್ಳ ಸವಿ ಬಲ್ಲವನೇ ಬಲ್ಲ .ನಮ್ಮ ಜಿಲ್ಲೆಯಲ್ಲಿ  ಬಹಳ ಜನಪ್ರಿಯ . ಇತ್ತೀಚೆಗೆ  ನಮ್ಮ ಪುತ್ತೂರು ಕಡೆ ಹೆಚ್ಚು ಕಾಣಿಸಿ ಕೊಳ್ಳುತ್ತಿಲ್ಲ . 

ಉಡುಪಿ ಜಿಲ್ಲೆಯ  ಮಟ್ಟು ,ಕೈಪುಂಜಲ್ ಮತ್ತು ಉಳಿಯಾರ ಗೋಳಿ ಪ್ರದೇಶದ ಸುಮಾರು 200 ಎಕ್ರೆ ಪ್ರದೇಶದಲ್ಲಿ  ಬೆಳೆಯುವ ಈ ಬದನೆಗೆ  2011 ರಲ್ಲಿ  ಬೌಗೋಳಿಕ ಸೂಚಕ ಗುರುತು ಪಟ್ಟಿ (Geographical indication tag )ಸಿಕ್ಕಿತು .ಇದನ್ನು  ವಾಣಿಜ್ಯ ಮಂತ್ರಾಲಯದ  GI ರಿಜಿಸ್ಟ್ರಾರ್ ನೀಡುವರು . ಒಂದು ಬೌಗೋಳಿಕ ಪ್ರದೇಶದ  ವಿಶಿಷ್ಟ ಗುಣದ ಕೃಷಿ ,ಕೈಗಾರಿಕಾ  ಉತ್ಪನ್ನಗಳಿಗೆ ಇದನ್ನು ನೀಡಲಾಗುವುದು .ಉಡುಪಿ ಜಿಲ್ಲೆಯ  ಮಲ್ಲಿಗೆ ಮತ್ತು  ಸೀರೆ ಕೂಡಾ ಇದನ್ನು ಪಡೆದುಕೊಂಡಿವೆ .

ಮಟ್ಟು ಗುಳ್ಳದ ಸ್ಟಿಕರ್ ನಲ್ಲಿ ಶ್ರೀ ವಾದಿರಾಜ ಸ್ವಾಮಿ  ಚಿತ್ರ ಮತ್ತು ಮತ್ತು ಗುಳ್ಳ ಬೆಳೆಗಾರರ ಸಂಘದ ಲೋಗೋ ಇದೆ .ಸೋದೆ ಮಠದ ಶ್ರೀ ವಾದಿರಾಜ ಸ್ವಾಮಿ ಶ್ರೀ ಹಯಗ್ರೀವರ ಆಶೀರ್ವಾದದೊಂದಿಗೆ ಮಟ್ಟು ಗುಳ್ಳದ ಬೀಜಗಳನ್ನು ಇಲ್ಲಿಯ ಕೃಷಿಕರಿಗೆ ನೀಡಿದರು ಎಂಬ ನಂಬಿಕೆ ಇದೆ 

                                    
ಮಟ್ಟು ಗುಳ್ಳಕ್ಕೆ ಬ್ರ್ಯಾಂಡ್ ನೇಮ್

ನೀವು  ಸೇಬು ,ಆಮದು ಕಿತ್ತೆಲೆ ಇತ್ಯಾದಿಗಳ ಮೇಲೆ  GI ಸ್ಟಿಕ್ಕರ್ ಗಳನ್ನು ನೋಡಿರ ಬಹುದು .ಅದೇ ತರಹದ ಸ್ಟಿಕ್ಕರ್  ಈಗ  ಮಟ್ಟು ಗುಳ್ಳ ಕ್ಕೂ ಹಾಕಿ ಮಾರುತ್ತಾರೆ . ಇದರಿಂದ ವಿದೇಶಗಳಿಗೆ ಇದನ್ನು ರಫ್ತು ಮಾಡಲು ಅನುಕೂಲ ಆಗಿದೆ . 

ಸ್ಥಳೀಯವಾಗಿ  ಇದರ ಬೆಲೆ ಸ್ವಲ್ಪ ಹೆಚ್ಚಾದರೂ ನಮ್ಮ ಊರ ಬೆಳೆ ಹೆಸರು ಪಡೆಯುವುದು ನಮಗೆ ಹೆಮ್ಮೆ .

                 

ಸೋಮವಾರ, ಸೆಪ್ಟೆಂಬರ್ 13, 2021

ಹೊಟೇಲ್ ತಿಂಡಿ

                      ಹೋಟೆಲ್ ತಿಂಡಿ 

                  
Potato Bun Mix - Manufacturer & Exporter of Potato Bun Premixನಮ್ಮ ಹಳ್ಳಿ ಹೋಟೆಲ್ ಗಳಲ್ಲಿ ದಿನವಿಡೀ ಸಿಗುತ್ತಿದ್ದ ತಿಂಡಿ ಬ್ರೆಡ್.ಹಿಂದೆ ಬ್ರೆಡ್ ಉಳಿದ ಅಂಗಡಿಗಳಲ್ಲಿ ಸಿಗುತ್ತಿರಲಿಲ್ಲ. ವಿಟ್ಲ ಪುತ್ತೂರಿನಂತಹ ಪೇಟೆಯಲ್ಲಿ ಒಂದು ಬೇಕರಿ ಇದ್ದು ಅಲ್ಲಿ ಸಿಗುತ್ತಿತ್ತು . ಹಳ್ಳಿಯ ಹೋಟೆಲ್ ಗಳಿಗೆ ಸೈಕಲ್   ಮೇಲೆ ಮರದ ಪೆಟ್ಟಿಗೆಯಲ್ಲಿ ಎಲ್ಲಿಂದಲೋ ತಂದು ಕೊಡುತ್ತಿದ್ದರು . ಬ್ರೆಡ್ ಮಾಡುವವರು ಮೈದಾ ಹಿಟ್ಟನ್ನು ಕಾಲಿನಲ್ಲಿ ಕಲಸುತ್ತಿದ್ದರು ಎಂಬ ನಂಬಿಕೆ ವ್ಯಾಪಕ ಆಗಿತ್ತು . ಬನ್ ಆಕಾರದ ಬ್ರೆಡ್ ಮಾತ್ರ ಸಿಗುತ್ತಿದ್ದು ಈಗಿನ ಲೋಫ್ ಇರಲಿಲ್ಲ . ಆ ಬ್ರೆಡ್ಡೋ  ನಾರು ನಾರಾಗಿ ಇರುತ್ತಿದ್ದು ಹಾಗೆಯೇ ತಿನ್ನಲು ಸಾಧ್ಯವೇ ಇರಲಿಲ್ಲ .ದೊಡ್ಡ ಲೋಟದಲ್ಲಿ ಚಹಾ ತರಿಸಿ ಅದ್ದಿ ಅದ್ದಿ ತಿನ್ನುವದು . 

                  ಕನ್ಯಾನದಲ್ಲಿ  ಆಗ ಇದ್ದ ಹೋಟೆಲ್ ಒಂದೇ .ಅದು ಕೋಡಿ  ಭಟ್ಟರ  ಹೋಟೆಲ್ .ನಮ್ಮ  ಶಾಲೆಯ ಎದುರು ಗಡೆಯೇ ಇದ್ದು ನಮಗೆ ಒಂದು ಕೈಗೆ ಸಿಗದ ಆಕರ್ಷಣೆ ಆಗಿತ್ತು . ನಾವು ಮಕ್ಕಳು  ಹಿರಿಯರ ಅನುಮತಿ ಯಿಲ್ಲದೆ  ಹೋಟೆಲ್ ಗೆ ಹೋಗುವುದಕ್ಕೆ  ಅನುಮತಿ ಇರಲಿಲ್ಲ .ನಮ್ಮ  ಕಿಸೆಯಲ್ಲಿ  ಸ್ವಲ್ಪ  ಉಳಿತಾಯದ  ಹಣ ಇದ್ದರೂ ಕೃಷಿಕರ  ಸ್ವಂತ  ಜಮೀನಿನ ಒಳಗೆ ಇದ್ದರೂ  ತೇಗ,ಬೀಟಿ ಇತ್ಯಾದಿ ಮರ ಕಡಿಯಲು ಸರ್ಕಾರದ ಅನುಮತಿ ಇಲ್ಲದೆ ಕಡಿಯುವಂತೆ ಇಲ್ಲದ ಹಾಗೆ ಅದನ್ನು ಸ್ವತಂತ್ರವಾಗಿ  ವಿನಿಯೋಗಿಸುವ ಹಕ್ಕು ನಮಗೆ ಇರಲಿಲ್ಲ .ಇನ್ನು  ಗುಟ್ಟಾಗಿ  ಹೋಗುವಾ ಎಂದರೆ  ಅಣ್ಣ ತಮ್ಮಂದಿರು ,ಅಕ್ಕ ತಂಗಿಯರ  ಕಣ್ಣು ತಪ್ಪಿಸಿ ಸಾಧ್ಯವೇ  ಇರಲಿಲ್ಲ .ಮನೆಯಲ್ಲಿ  ಹೇಳದೇ ಇರಲು  ಲಂಚದ ಆಮಿಷ ತೋರಿಸುವಾ ಎಂದರೆ ಬಹಳ ಮಂದಿ ಇದ್ದಾರೆ . 

ನಮ್ಮ ತಂದೆ ಕನ್ಯಾನ ಪೇಟೆಗೆ ಬರುತ್ತಿದ್ದುದು  ಕಡಿಮೆ .ಅಪರೂಪಕ್ಕೆ ಬಂದಾಗ ಹೋಟೆಲ್ ನಲ್ಲಿ ತಿಂಡಿ ಕೊಡಿಸುತ್ತಿದ್ದರು . ಇಡ್ಲಿ ಸಾಂಭಾರ್  ಆಗ ತುಂಬಾ ಇಷ್ಟ .ಅದನ್ನು ಚಮಚದಲ್ಲಿ  ತುಂಡು ಮಾಡಿ  ಸಾಂಭಾರ್ ನಲ್ಲಿ  ಅದ್ದಿ ತಿಂದು ಸಂತೋಷ ಪಡುತ್ತಿದ್ದೆವು .ಇಲ್ಲಿ ತಿಂಡಿ ಗಿಂತಲೂ  ಚಮಚದಲ್ಲಿ ತಿನ್ನುವುದು ಆಕರ್ಷಣೆ ಇದ್ದಂತೆ ತೋರುತ್ತದೆ . 

ಸಂಜೆ ಹೊತ್ತು  ನೀರುಳ್ಳಿ ಬಜೆ ಮಾಡುತ್ತಿದ್ದು ನಮ್ಮ ಆಟದ ಮೈದಾನಕ್ಕೆ ಅದರ ಪರಿಮಳ ಬಂದು ನಮ್ಮ ಬಾಯಿಯಲ್ಲಿ ನೀರು ಬರುತ್ತಿತ್ತು .ಮುಂದೆ ದೊಡ್ಡವನಾಗಿ ದೊಡ್ಡ  ಕೆಲಸಕ್ಕೆ ಸೇರಿ ಬೇಕಾದಷ್ಟು  ನೀರುಳ್ಳಿ ಬಜೆ ತಿನ್ನ ಬೇಕು ಎಂದು ಕನಸು ಕಾಣುತ್ತಿದ್ದೆವು. ಇನ್ನು ಹೋಟೆಲ್ ನಲ್ಲಿ ಲಭ್ಯವಿದ್ದ ಇತರ ತಿಂಡಿಗಳು ಗೋಳಿ ಬಜೆ ,ಬನ್ಸ್ ,ಕಡಲೆ ,ಸಜ್ಜಿಗೆ ಮತ್ತು ಅವಲಕ್ಕಿ .ಆಗ  ಮನೆಗಳಲ್ಲಿ  ಗೋಳಿಬಜೆ ,ಬನ್ಸ್ ಇತ್ಯಾದಿ ಮಾಡುತ್ತಿರಲಿಲ್ಲವಾಗಿ ಅವನ್ನು ಸವಿಯಲು ಹೋಟೆಲ್ಲನ್ನೇ ಆಶ್ರಯಿಸ ಬೇಕಿತ್ತು .ಆದರೆ ಈಗ ಎಲ್ಲಾ ಮನೆಗಳಲ್ಲಿಯೂ ಮಾಡದ ತಿಂಡಿಗಳಿಲ್ಲ . 

ಹೋಟೆಲ್ ನಲ್ಲಿ  ಅಡುಗೆ ಕಟ್ಟಿಗೆ ಒಲೆಯಲ್ಲಿಯೇ ಮಾಡುತ್ತಿದ್ದರು .ಗ್ಯಾಸ್ ಇರಲಿಲ್ಲ . ಕೆಂಡದ ಅಡ್ಯೆ ಅಪರೂಪಕ್ಕೆ ಮಾಡುತ್ತಿದ್ದರು.ಈಗಅದು ಗ್ಯಾಸ್ಅಡ್ಯೆ ಆಗಿದೆ.

ಆಗ  ಹೊಟೇಲ್ ನ  ಚಹಾ ಗ್ಲಾಸ್ ದೊಡ್ಡದು ಇರುತ್ತಿತ್ತು .ಹೊಟೇಲ್  ಭಟ್ಟರು  ಎರಡು  ಕೈಪಾಟೆಯಲ್ಲಿ ಎತ್ತರದಿಂದ ಚಹಾ  ಮಗುಚುವುದು  ಒಂದು ಸರ್ಕಸ್ ನಂತೆ ತೋರುತ್ತಿತ್ತು . ನನ್ನ ತಂದೆಯವರು  ಆ ಕಾಲದಲ್ಲಿಯೇ  ತಿಂಡಿ  ಆರ್ಡರ್ ಮಾಡುವಾಗ  ಎರಡು ಲೋಟ ಚಹಾ ಕ್ಕೆ ಹೇಳುವರು  .ಹೊಟೇಲ್   ಲೋಟ ಸಣ್ಣದೆಂದು,ಗಂಟಲು  ಇಳಿಯುವಷ್ಟರಲ್ಲಿ ಮುಗಿದು ಹೋಗುವುದು ಎಂದು .ಈಗಿನ ಬೆಂಗಳೂರಿನ  ಹೊಟೇಲ್ ಗಳಲ್ಲಿ ಆದರೆ ನಾಲ್ಕು ಕಪ್ ಹೇಳುತ್ತಿದ್ದರೋ ಏನೋ ?

ನನ್ನ  ಮಗ ನಾಲ್ಕು ವರ್ಷದವನು ಇದ್ದಾಗ ಕದ್ರಿ ಪಾರ್ಕ್ ಗೆ ಕರೆದು ಕೊಂಡು ಹೋಗಿದ್ದೆ .ಅಪ್ಪಾ ಹಸಿವೆ ಆಗುತ್ತಿದೆ ದೋಸೆ ಬೇಕು ಎಂದ .ಮನೆಗೆ ಹೋಗೋಣ ತಡಿ ಅಮ್ಮ ಮಾಡಿಕೊಡುವರು ಎಂದೆ.ಅಮ್ಮನ ದೋಸೆ ರುಚಿಯೇ ಇಲ್ಲ ,ಹೊಟೇಲ್ ನದ್ದು ಒಳ್ಳೆದಾಗುತ್ತದೆ ಎಂದ.ಮುಂದೆ  ನಾವು ಚೆನ್ನೈ ನಲ್ಲಿ  ಇದ್ದಾಗಲೂ  ಪುರುಶ್ವಾಕಮ್ ಗೆ ಸಾಮಾನು ಕೊಳ್ಳಲು ಹೋದಾಗ  ಶರವಣ  ಭವನ ಸಮೀಪಿಸಿದೊಡನೆ  ಅವನಿಗೆ  ಜೋರು ಹಸಿವೆ ಮತ್ತು ಬಾಯಾರಿಕೆ ಆಗುವುದು .

 
ಮಂಗಳೂರು ಸ್ಪೆಷಲ್ ನೀರುಳ್ಳಿ ಬಜೆ ❤॥Mangalore special neerulli baje/eerulli  bajji/onion pakoda recipe॥ - YouTubeMangalore bonda | Goli baje recipe | Udupi recipe — Crunchy Kitchen