ಬೆಂಬಲಿಗರು

ಶನಿವಾರ, ಜನವರಿ 11, 2014

ಕನ್ಯಾನ ಬಾಲ್ಯದ ನೆನಪುಗಳು

ನಮ್ಮ ಶಾಲೆಯಲ್ಲಿ ಹೆಸರಿಗೆ ಒಂದು ವಾಚನಾಲಯ ಇತ್ತು.ಸ್ಟಾಫ್ ರೂಂ ನ ಒಂದು ಕಪಾಟಿನಲ್ಲಿ ಪುಸ್ತಕಗಳು ಭದ್ರವಾಗಿ

ಇದ್ದವು .ಮಕ್ಕಳಿಗೆ ಅದನ್ನು ಓದಲು ಕೊಡುತ್ತಿರಲಿಲ್ಲ.ಓದುವ ಗೀಳು ಹಚ್ಚಿಕೊಂಡಿದ್ದ ನಾನು ಪಂಚಾಯತ್ ಲೈಬ್ರರಿ ಯ ಆಶ್ರಯ

ಪಡೆಯ ಬೇಕಾಯಿತು .ಪಂಚಾಯತ್ ಕಾರ್ಯದರ್ಶಿಯವರೇ ಲೈಬ್ರರಿಯನ್ .ಅವರು ಫೀಲ್ಡ್ ಕೆಲಸಕ್ಕೂ ಹೋಗುತ್ತಿದ್ದುದರಿಂದ

ನಾವು ಹೋದಾಗಲೆಲ್ಲ ಸಿಗುತಿರಲಿಲ್ಲ .ಹಲವು ಭಾರಿ ನಿರಾಶೆಯಿಂದ ಮರಳಿದ್ದು ಉಂಟು.ಈ ವಾಚನಾಲಯದಿಂದ ನಾನು

ಏನ್ ನರಸಿಂಹಯ್ಯ ನವರ ಪತ್ತೇದಾರಿ ಕಾದಂಬರಿ ಗಳಿಂದ ತೊಡಗಿ ಕಾರಂತ ,ಅ ನ ಕೃ,ಬೀಚಿ ,ಭೈರಪ್ಪ ,ರಾವ್ ಬಹಾದ್ದೂರ್

ಕುವೆಂಪು ,ಮಾಸ್ತಿ ಯವರ ಬರವಣಿಗೆಗಳನ್ನು ಓದುವ ಅವಕಾಶ ಸಿಕ್ಕಿತು.ಮುಂದೆ ಪುತ್ತೂರು ನಗರ ಗ್ರಂಥಾಲಯ ,ಹುಬ್ಬಳ್ಳಿ

ನಗರ ಗ್ರಂಥಾಲಯ ,ಮೈಸೂರ್ ,ಹಾಸನ ,ಸಕಲೇಶಪುರ ,ಮಡಿಕೇರಿ ನಗರ ಗ್ರಂಥಾಲಯ ಗಳು  ,ಮದ್ರಾಸ್ ಅಯನಾವರಂ ಕನ್ನಡ ಸಂಘ

ವಾಚನಾಲಯ ,ಮದ್ರಾಸ್ ಡಿಸ್ಟ್ರಿಕ್ಟ್ ಲೈಬ್ರರಿ ,ಕೋನ್ನೆಮಾರ ಕೇಂದ್ರ ಗ್ರಂಥಾಲಯ ,ಮದ್ರಾಸ್ ಬ್ರಿಟಿಶ್ ಕೌನ್ಸಿಲ್ ಲೈಬ್ರರಿ


ಪಾಲ್ಘಾಟ್,ಕಲ್ಲಿಕೋಟೆ ನಗರ ವಾಚನಾಲಯಗಳ ಸದಸ್ಯ ನಾಗಿ ಓದುವುದನ್ನು ಮುಂದುವರೆಸಲು ನಮ್ಮ ಪಂಚಾಯತ್

ಲೈಬ್ರರಿ ಓನಾಮ ಹಾಕಿತು .

                   ಕನ್ಯಾನ ಶಾಲೆಯ ಹಿಂದೆ ಒಂದು ಬೋರ್ಡಿಂಗ್ ಇತ್ತು ,ರಾಮ ಭಟ್ ಎಂಬುವರು ಅದನ್ನು ನಡೆಸಿಕೊಂಡು


ಬರುತ್ತಿದ್ದರು .ಅವರೂ ಅವರ ಕುಟುಂಬದ ಸದಸ್ಯರೂ ದುಡಿದು ಈ ಊಟದ ಮನೆ ನಡೆಸುತ್ತಿದ್ದರು.ದೂರದಿಂದ ಬರುತ್ತಿದ್ದ

ಮಕ್ಕಳು ಮಧ್ಯಾಹ್ನದ  ಊಟಕ್ಕೆ ಇಲ್ಲಿ ಬರುತ್ತಿದ್ದರು .ರಾಮ ಭಟ್ಟರು ಒಳ್ಳೆಯ ಜ್ಞಾನಿಯೂ ಆಗಿದ್ದರು .ಊಟ ಬಡಿಸುವ ಸಮಯ

ಅಧ್ಯಾಪಕರುಮತ್ತು ಅವರ ಮಧ್ಯೆ ಸರಸ ಸಂಭಾಷಣೆ ನಡೆಯುತ್ತಿದ್ದ್ದು ನಾವು ಎಳೆಯರು ಅದನ್ನು ಆಸ್ವಾದಿಸುತ್ತಿದ್ದೆವು .ವಾರ

ಎರಡು ವಾರಗಳಿಗೊಮ್ಮೆ ನಮ್ಮ ಮನೆಗೂ ಬಾಳೆ ಎಲೆ ಕೊಂಡು ಹೋಗಲು ಬರುತ್ತಿದ್ದರು.ಅವರ ಬೋರ್ಡಿಂಗ್ ಗೆ ಪ್ರತ್ಯೇಕ

ಬಾವಿ ಇರಲಿಲ್ಲ .ಊರ ಬಾವಿಯೋ ಫಾರ್ಲಾಂಗ್ ದೂರ .ಸರದಿಯಲ್ಲಿ ಅಲ್ಲಿಂದ ನೀರು ಸೇದಿ ತಂದು ಅಡಿಗೆ,ಸ್ನಾನ ,ಕೈ

 ತೊಳೆಯುವ ನೀರು ಶೇಖರಿಸುತ್ತಿದ್ದರು .ಈಗ ಬೋರ್ಡಿಂಗ್ ಕಟ್ಟಡ ಇಲ್ಲ.ರಾಮ ಭಟ್ಟರ ಕುಟುಂಬ ವೂ ಊರು ಬಿಟ್ಟು

ಹೋಗಿದೆ .ಆ ಜಾಗದಲ್ಲಿ ಬಿಸಿ ಊಟದ ಕಟ್ಟಡ ಎದ್ದಿದೆ .

ಭಾರತ ಸೇವಾಶ್ರಮ

   ನಾವು ಪ್ರೈಮರಿ ಶಾಲೆಯಲ್ಲಿ ಇದ್ದಾಗ ಧೀರೇಂದ್ರನಾಥ ಭಟ್ಟಾಚಾರ್ಯ ಎಂಬುವರ ಆಗಮನ ಕನ್ಯಾನ ಕ್ಕೆ ಆಯಿತು .ಅವರು


ಕಲಂಜಿಮಲೆಯಲ್ಲಿ ಅದಿರು ಶೋಧನೆಗಾಗಿ ಕಾರ್ಯ ನಿಮಿತ್ತ ಬಂದವರು ,ಕನ್ಯಾನದಲ್ಲಿ ನೆಲೆಸಿ ಭಾರತ ಸೇವಾಶ್ರಮ

ಆರಂಬಿಸಿದರು.ಅನಾಥ .ಬಡ ಮಕ್ಕಳಿಗೆ ಆಸರೆಯಾದರು.ಇವರಿಗೆ ಉದ್ದನೆಯ ಗದ್ದವಿದ್ದು ರವೀಂದ್ರನಾಥ ಟಾಗೂರ್ರನ್ನು

ಹೋಲುತ್ತಿದರು . ಕೈಯಲ್ಲಿ ಯಾವಾಗಲು ಒಂದು ಬೀಡಿ.ಊರು ಪರವೂರಲ್ಲಿ ಬೇಡಿ ಸಂಸ್ಥೆ ಕಟ್ಟಿದರು .ಈಗ

ಇದು ಬೆಳೆದು ಬೈರಿಕಟ್ಟೆ ಸಮೀಪ ಇನ್ನೊಂದು ವಿಶಾಲವಾದ ಇನ್ನೊಂದು ಕ್ಯಾಂಪಸ್ ಹೊಂದಿದೆ ,ಅನಾಥಾಶ್ರ ಮ  ದೊಡನೆ

ವೃದ್ಧಾಶ್ರಮ ನಡೆಸಿಕೊಂಡು ಬರುತ್ತಿದೆ .ಆಶ್ರಮ ವಾಸಿ ಗಳು  ಅಗರ ಬತ್ತಿ ತಯಾರಿಸಿ ಮಾರಿ ಆಶ್ರಮದ ಆರ್ಥಿಕ ಕತೆಗೆ

ತಮ್ಮ ಕೊಡುಗೆ ನೀಡುತ್ತಿದ್ದರು .ಕೇವಲ ಬೀಡಿ ಕಟ್ಟುವುದನ್ನು ಮಾತ್ರ ಕಂಡಿದ್ದ ನಮ್ಮ ಹಳ್ಳಿಗರಿಗೆ ಇದೊಂದು ಸೋಜಿಗ.

ಈ ಆಶ್ರಮ ದಿಂದ ನಮ್ಮ ಶಾಲೆಗೆ ಮಕ್ಕಳು ಬರುತ್ತಿದ್ದರು.ಇವರ ಪೈಕಿ ಒಬ್ಬರಾದ ಶ್ರೀ ಈಶ್ವರ ಭಟ್ ಭಟ್ಟಾಚಾರ್ಯರ

ಮಗಳನ್ನು ವಿವಾಹವಾಗಿ ಈಗ ಸಂಸ್ತೆಯನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ.ಜಾತಿ ಭೇಧ ವಿಲ್ಲದೆ

ಒಂದಾಗಿ ಬಾಳ ಬಹುದು ಎಂದು ತೋರಿಸಿ ಕೊಟ್ಟ ಆಶ್ರಮ.
.(ಮುಂದುವರಿಯುವುದು)


ಶುಕ್ರವಾರ, ಜನವರಿ 10, 2014

ಕನ್ಯಾನ ಪೇಟೆ

  ಕಳ೦ಜಿ ಮಲೆಯ ದಕ್ಷಿಣ ತಟಕ್ಕೆ ಸುತ್ತು ಹಾಕಿ ಕೊಂಡು ಪಶ್ಚಿಮಕ್ಕೆ ಬಂದ ರಸ್ತೆ ಕನ್ಯಾನದಲ್ಲಿ ಕವಲೊಡೆದು  ಒಂದು ಉಪ್ಪಳಕ್ಕೂ

ಇನ್ನೊಂದು ಮಂಜೆಶ್ವರಕ್ಕೂ ಹೋಗುತ್ತವೆ.ಉಪ್ಪಳ ರೋಡಿನ ಎಡ ಬದಿ ಎತ್ತರದಲ್ಲಿ  ಪ್ರಾಥಮಿಕ ಶಾಲೆ .ಮಾರ್ಗಕ್ಕೆ

ಹೊಂದಿಕೊಂಡು  ಸಾರ್ವಜನಿಕ ಬಾವಿ .ಶಾಲೆಗೂ ಅದುವೇ ನೀರು  ಪೂರೈಸುವುದು. ಶಾಲಾ ಕಟ್ಟಡ ದ ನಂತರ ಬರುವುದು

ಆಟದ ಮೈದಾನ . ಮುಂದೆ  ಎತ್ತರದಲ್ಲಿ ಹೈ ಸ್ಕೂಲ್ . ಉಪ್ಪಳ ರಸ್ತೆಯ ಬಲ ಬದಿಗೆ ಶೇಕಬ್ಬನವರ ಜೀನಸು ಅಂಗಡಿ

,ಅದಕ್ಕೆ ತಾಗಿಕೊಂಡು ರೇಶನ್ ಅಂಗಡಿ .ಮುಂದೆ ಮಹಾದೇವ ಶಾಸ್ತ್ರಿಗಳ ಮೆಡಿಕಲ್ ಶಾಪ್. ಜವುಳಿ ಶೆಟ್ಟರ ಅಂಗಡಿ .

ಜವುಳಿ ಅಂಗಡಿ ಎದುರು ಒಬ್ಬರು ಸಾಹಿ ಬ್ಬರು ಮತ್ತು ಶಾಸ್ತ್ರಿಗಳ ಹೊಲಿಗೆ  ಮಣೆ.ಇನ್ನೂ ಮುಂದುವರಿದರೆ ಕೋಡಿ ಭಟ್ರ

ಹೋಟೆಲ್ ,ಬಾಳೆಕೊಡಿ ಭಟ್ರ  ಗೂಡ೦ಗಡಿ. ಮಮ್ಮುನ್ಹಿ ಬ್ಯಾರಿಯ ಮನೆ .

             ಎರಡು ರಸ್ತೆ ಕೂಡುವಲ್ಲಿ ಪಶ್ಚಿಮಕ್ಕೆ  ಸಾಹಿಬರ ಅಂಗಡಿ ,ಮಮ್ಮುನ್ಹಿ ಅಂಗಡಿ. ಮುಂದೆ ಮಂಜೇಶ್ವರ ರಸ್ತೆಯಲ್ಲಿ

ಕೆಲವು ಸಣ್ಣ ಅಂಗಡಿಗಳು ,ಪಂಚಾಯತ್ ಆಫೀಸ್ .

ಶಾಲೆಯ ಅಂಗಳದಲ್ಲಿ ನಿಂತರೆ ಉತ್ತರಕ್ಕೆ ತಲೆಯೆತ್ತಿ ನಿಂತ ಕಳಂಜಿ ಮಲೆ.ದಕ್ಷಿಣಕ್ಕೆ ಹೈ ಸ್ಕೂಲ್ ಗುಡ್ಡೆ ,ಪಿಲಿಂಗುಲಿ ಗುಡ್ಡೆ

ಕಾಣುವವು .ಬ್ರಹ್ಮಗಿರಿಯಿಂ ಪುಷ್ಪಗಿರಿ ವರೆ ಇರುವ ಕೊಡಗಿನಂತೆ.

  ದೈಯೇಂದ್ರೆ ಪಕೀರಪ್ಪ ಶೆಟ್ಟರನ್ನು  ಜವುಳಿ ಶೆಟ್ತರೆಂದೆ ಕರೆಯುತ್ತಿದ್ದರು .ಅವರದ್ದು ಒಂದೇ ಬಟ್ಟೆ ಅಂಗಡಿ .ಇದಲ್ಲದೆ

ಶಾಲಾ ಮಕ್ಕಳಿಗೆ ಬೇಕಾದ ನೋಟ್ ಪುಸ್ತಕಗಳು ,ಸ್ಲೇಟು ,ಕಡ್ಡಿ ,ಪೆನ್ಸಿಲ್ ,ಶ್ಯಾಯಿ ಅಲ್ಲಿ ಸಿಗುತ್ತಿದ್ದವು . ನಾವು ಫೌಂಟನ್

ಪೆನ್ನನ್ನು ಒಯ್ದು ಒಂದು ಪೈಸೆಯ ಶಾಯಿ ಹಾಕಿಸಿ ಕೊಳ್ಳುತ್ತಿದ್ದೆವು.ಶೆಟ್ಟರು ಸುಸಂಸ್ಕೃತ ವ್ಯಕ್ತಿ , ಕಲಾ ಸಾಹಿತ್ಯ ಪ್ರೇಮಿ

ಗುಣ ಪಕ್ಷಪಾತಿ. ಅವರ ಮಗ ರಘುರಾಮ ನನ್ನ ಸಹಪಾಟಿ ,ಈಗ ಪಂಚಾಯತ್ ಅಧ್ಯಕ್ಷ .

ಅವರ ಅಂಗಡಿ ಮೇಲೆ ಕೊಟಡಿಯಲ್ಲಿ ನಮ್ಮ ಹೆಡ್ ಮಾಸ್ಟರ್  ಕೃಷ್ಣ ಭಟ್ಟರ ವಾಸ .

ಮಹಾದೇವ ಶಾಸ್ತ್ರಿಗಳು ಊರಿನ ಡಾಕ್ಟರ್,ಮೃದು ಭಾಷಿ ,ಅವರ ಮಕ್ಕಳೂ ನಮ್ಮ ಶಾಲೆಯಲ್ಲಿ ಓದುತ್ತಿದ್ದರು .

ಸಿರಿಂಜ್ ಕುದಿಸಿ ಸೂಜಿ ಜೋಡಿಸಿ ಇಂಜೆಕ್ಷನ್ ಕೊಡುತ್ತಿದ್ದ ದೃಶ್ಯ ಇನ್ನೂ ಕಣ್ಣ ಮುಂದೆ ಇದೆ .ಅವರಿಗೆ ಕಂಪನಿ ಯವರು

ಕೊಡಿತ್ತಿದ್ದ blotting ಪೇಪರ್ ಕೇಳಿ ಕೊಂಡು ಉಪಯೋಗಿಸುತ್ತಿದ್ದೆವು .

 ಟೇಲರ್ ಸಾಹೇಬರು ನಮ್ಮ ಅಧಿಕೃತ ಟೇಲರ್ .ನಮಗೆ ಅಣ್ಣ ತಮ್ಮಂದಿರಿಗೆ ಒಂದು ರೀಮು ಬಟ್ಟೆ ಕೊಂಡು ಕೊಂಡು

ಹೋಲಿಯ ಹಾಕುತ್ತಿದ್ದೆವು.ಹಾಗೆ ನಾವೆಲ್ಲಾ ಅಂಗ್ರಿ ಮನೆಯ ಯುನಿಫಾರ್ಮ್ ಹಾಕಿದವರಂತೆ ಇರುತ್ತಿದ್ದೆವು .ಶಾಲೆಯಲ್ಲಿ

ಸಮವಸ್ತ್ರ ಇರಲಿಲ್ಲ .

ಸಾಯಂಕಾಲ    ಕೋಡಿ ಭಟ್ಟರ ಹೋಟೆಲ್ ನಿಂದ ನೀರುಳ್ಳಿ ಬಜೆಯ ಪರಿಮಳ ಆಟದ ಮೈದಾನದ ವರೆಗೆ ಬಂದು

ನಮ್ಮ ಬಾಯಲ್ಲಿ ನೀರೂರಿರಿಸುತ್ತಿತ್ತು .ಅವರ ಮೊಮ್ಮ್ಮಗ ಕೇಶವ ನನ್ನ  ಕ್ಲಾಸ್ .ಕೆಲವೊಮ್ಮೆ ತಿಂಡಿ ತಂದು ನಮ್ಮೊಡನೆ

ಹಂಚಿ ಕೊಳ್ಳುತ್ತಿದ್ದನು ,
(ಮುಂದುವರಿಯುವುದು)


ಗುರುವಾರ, ಜನವರಿ 9, 2014

ಸಕ್ಕರೆ ಸೂಚ್ಯಂಕ

                ಸೇವನೆಯ ಬಳಿಕ   ಆಹಾರ ವಸ್ತುವೊಂದು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವ ಶಕ್ತಿಗೆ  ಸಕ್ಕರೆ ಸೂಚ್ಯಂಕ

(Glycemic index) ಎನ್ನುವರು.ಹೆಚ್ಚು ಸೂಚ್ಯಂಕ  ಇರುವ ಆಹಾರ ವಸ್ತುಗಳನ್ನು ಕಡಿಮೆ ಸೇವಿಸಿದಸ್ಟು ಸಕ್ಕರೆ

ಕಾಯಿಲೆಯವರಿಗೆ ಕ್ಷೇಮ

     ಹಣ್ಣುಗಳು 

  1.              ಸೇಬು          ೩೮
  2.               ಕಿತ್ತಳೆ           ೪೪
  3.               ದ್ರಾಕ್ಷಿ            ೪೬
  4.              ಬಾಳೆಹಣ್ಣು      ೫೫
  5.              ಪಪ್ಪಾಯಿ        ೫೮
  6.             ಅನನಾಸ್        ೬೬
  7.             ಕಲ್ಲಂಗಡಿ         ೭೨
  8.              ಖರ್ಜೂರ         ೭೮-೧೦೨
      ಧಾನ್ಯಗಳು 
       0.       ಮೆಂತೆ                       ೫
  1.           ಕಡಲೆ ಬೇಳೆ          ೧೧ 
  2.            ಹೆಸರು ಬೇಳೆ         ೩೮
  3.            ಉದ್ದು                   ೪೩
  4.           ಇಡಿ ಗೋಧಿ            ೪೦
  5.             ಹುರುಳಿ                ೫೧
  6.            ಮೈದಾ                 ೫೫-೬೦
  7.            ಕುಚ್ಚಲಕ್ಕಿ               ೫೫
  8.            ಬೆಳ್ತಿಗೆ ಅಕ್ಕಿ             ೬೦-೬೪
  9.            ಜೋಳ                   ೭೭
     10         ರಾಗಿ                     ೮೮
   

        ನಾರು ಇರುವ ಖಾದ್ಯ ವಸ್ತುಗಳು ರಕ್ತದ ಸಕ್ಕರೆ ಸೇರುವಿಕೆಯ ವೇಗ ಮತ್ತು ಪ್ರಮಾಣ ತಗ್ಗಿಸುತ್ತವೆ.ಹಾಗಲ ಕಾಯಿ .ಬೇವಿನ ಎಲೆಗಳನ್ನುಕಷ್ಟಪಟ್ಟು ತಿನ್ನುವುದರ ಬದಲು ಯಾವುದೇ ಸಹ್ಯ ಎಲೆ ತಿನ್ನ ಬಹುದು. .ನಮ್ಮ ಆಹಾರ ಮಿಶ್ರ ಮೂಲಗಳಿಂದ ಕೂಡಿದ ಕಾರಣ ಲೆಕ್ಕಾಚಾರ  ಸ್ವಲ್ಪ ಸಂಕೀರ್ಣ ಆಗಿರುತ್ತದೆ .


          

ಬುಧವಾರ, ಜನವರಿ 8, 2014

ನಮ್ಮ ಶಾಲೆ ಯಲ್ಲಿ ಶತ ಸಂಭ್ರಮ

ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಕನ್ಯಾನ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಆಯಿತು.ಈಗ ಅದರ ಹೆಸರು


ದ ಕ ಜಿಲ್ಲಾ ಪರಿಷದ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ. ನಮ್ಮ ಮನೆಯಿಂದ ಎರಡುವರೆ ಮೈಲು ದೂರ . ಆಗ ಶಾಲೆಯಲ್ಲಿ


ವಿದ್ಯುತ್ ಸಂಪರ್ಕ ,ನಳ್ಳಿ ನೀರು ಮತ್ತು ಶೌಚಾಲಯ ಇರಲಿಲ್ಲ .ಅದು ದೊಡ್ಡ ಕೊರತೆಯೆಂದು ಆಗ ಅನಿಸುತ್ತಿರಲಿಲ್ಲ.


ತಮ್ಮ ವೃತ್ತಿಯನ್ನು ಪ್ರೀತಿಸುತ್ತಿದ್ದ ಅಧ್ಯಾಪಕ ಗಣ ಇತ್ತು.


ಈ ವರ್ಷ ಶಾಲೆ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ .ಅದರ ಉದ್ಘಾಟನಾ ಕಾರ್ಯಕ್ರಮ  ೬.೧.೨೦೧೪ ರಂದು

ನೆರವೇರಿತು.ಮಕ್ಕಳು ಉತ್ಸಾಹದಲ್ಲಿದ್ದರು. ಮೊದಲಾಗಿ ಬ್ಯಾಂಡ್ ವಾದ್ಯಗಳೊಡನೆ ಊರ ಬೀದಿಗಳಲ್ಲಿ  ಮೆರವಣಿಗೆ ,ಪುಟಾಣಿ

ಮಕ್ಕಳೊಡನೆ ಹೆಜ್ಜೆ ಹಾಕುವಾಗ ನಮ್ಮ ಬಾಲ್ಯದ ನೆನಪುಗಳು ಬಂದುವು..

                                             


                                                                        
                                                                   

                                                      
          ನನ್ನ ಪುಣ್ಯ .ನನ್ನ ಇಬ್ಬರು ಅಧ್ಯಾಪಕರು ಕಾರ್ಯಕ್ರಮಕ್ಕೆ ಬಂದಿದ್ದರು .ಶ್ರೀ ಜನಾರ್ಧನ ಶೆಟ್ಟಿ ಮತ್ತು  ಅರ್ಪಿಣಿ

ಕೊರಗಪ್ಪ ರೈ.ರಾಷ್ಟ್ರಕವಿ  ದಿ ಶಿವರುದ್ರಪ್ಪನವರು ತಮ್ಮ ಗುರು ಕುವೆಂಪು ಬಗ್ಗೆ ಬರೆದ ಕವನ ನೆನಪಾಯಿತು

                          
ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ, ಗುಟ್ಟುಗಳ!
ಎಷ್ಟೊಂದು ಕೀಲಿ ಕೈಗಳನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ,
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ
ನನ್ನ ಸುತ್ತ
ಪಟ ಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸಹುಟ್ಟುಗಳ ಹಾಕುತ್ತ.



                 ಹಾಗೆಯೇ ಕುವೆಂಪು ಪಂಜೆ ಮಂಗೇಶರಾಯರ ಬಗ್ಗೆ  'ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ ಕಚ್ಚಿದರೆ

 ಕಬ್ಬಾಗಿ ಹಿಂಡಿದರೆ ಜೇನಾಗಿ  ನಿಮ್ಮುತ್ತಮಿಕೆಯ   ಮೆರೆದಿರಯ್ಯ ' ಎಂದು ಬರೆದ ಸಾಲುಗಳು ನೆನಪಾದುವು