ಬೆಂಬಲಿಗರು

ಶನಿವಾರ, ಡಿಸೆಂಬರ್ 31, 2022

 


 ಹಿರಿಯ ರಂಗಕರ್ಮಿ ,ಕೃಷಿಕ ಮತ್ತು ಸಾಹಿತಿ ಶ್ರೀ ಪ್ರಸಾದ್ ರಕ್ಷಿದಿ ಅವರ ಕಳೆದು ಹೋದ ದಿನಗಳು ಫೇಸ್ ಬುಕ್ ನಲ್ಲಿ ಧಾರವಾಹಿ ಆಗಿ ಬರುತ್ತಿದ್ದಾಗ ಓದಿ ಆನಂದಿಸಿ ದವರಲ್ಲಿ ನಾನೂ ಒಬ್ಬ . ಈಗ ಅದು ಪುಸ್ತಕ ರೂಪದಲ್ಲಿ ಬಂದಿದ್ದು ಪುನಃ ಓದುತ್ತಿದ್ದೇನೆ . ಅವರ ಕುಟುಂಬ ಚರಿತ್ರೆಯೊಡನೆ ಭಾರತೀಯರಲ್ಲಿ ಕಾಫಿ ಕೃಷಿ ಬೆಳೆದು ಬಂದ ವಿವರ ಕೂಡಾ ಹಾಸು ಹೊಕ್ಕಾಗಿ ಬಂದಿರುವ ಈ ಕೃತಿಯ ಲ್ಲಿ  ಕೊಡಗು ಮತ್ತು ಸಕಲೇಶಪುರ ಮುಖ್ಯ ಕರ್ಮಭೂಮಿ . ಎರಡೂ ಕಡೆ ಕೆಲಸ ಮಾಡಿದವನಾದ ನನಗೆ ಈ ವಿವರ ಗಳು ಅಪ್ಯಾಯಮಾನ . ಕಾಫಿ ಕೃಷಿಕ, ಉದ್ದಿಮೆ ದಾರರಾಗಿ ದಂತ ಕತೆ ಯಾಗಿರುವ ಸಾಕಮ್ಮ ಅವರ ಸಾಧನೆ ದಾಖಲೀಕರಣ ದಿಂದ ಆರಂಭ . ಗುಂಡು ಕುಟ್ಟಿ ಮಂಜುನಾಥಯ್ಯ ಅವರ ಉಲ್ಲೇಖ ಮಾಸ್ತಿ ವೆಂಕಟೇಶ ಐಯ್ಯಂಗಾರ್ ಮತ್ತು ಶಿವರಾಮ ಕಾರಂತ ರಂಥವರ ಕೃತಿಗಳಲ್ಲಿ ಬರುತ್ತದೆ . ಕಾರಂತರು ತಮ್ಮ ಒಂದು ಕಾದಂಬರಿ ಇವರ ಮನೆಯಲ್ಲಿ ಕುಳಿತೇ ಬರೆದವರು . ಈ ಕೃತಿಯಲ್ಲಿ ಯೂ ಅವರ ಬಹುಮುಖ ಸಾಧನೆಯ ಕಿರು ಪರಿಚಯ ಇದೆ . 

ಸಾಕಮ್ಮ ನವರ ತೋಟದಲ್ಲಿ ಮ್ಯಾನೇಜರ್ ಆಗಿದ್ದ ಗಣಪಯ್ಯ ಹಾರ್ಲೆ ಗಣಪಯ್ಯ ಆದ ಕತೆ ಮುಂದಿನದು . ಸಕಲೇಶ ಪುರದ ಹಾರ್ಲೆ ಎಸ್ಟೇಟ್ ಮತ್ತು ದಶಕಗಳ ಕಾಲ ಅದರ ಒಡೆಯರಾಗಿದ್ದ ಗಣಪಯ್ಯ ಒಂದು ದಂತ ಕತೆ . ಅವರ ಸರಳತೆ,ಶ್ರೀಮಂತಿಕೆ  ,ಸಮಾಜ ಸೇವೆ  ಮತ್ತು ಅತಿಥ್ಯ ಕೇಳಿ ದ್ದ ನನಗೂ ಅವರನ್ನು ಕಾಣುವ ಭಾಗ್ಯ ಒದಗಿತ್ತು . ನಾನು ಸಕಲೇಶ ಪುರದಲ್ಲಿ ರೈಲ್ವೆ ವೈದ್ಯಾಧಿಕಾರಿ ಆಗಿದ್ದಾಗ ಅವರ ಎಸ್ಟೇಟ್ ಡೇ ಗೆ ಕರೆಸಿದ್ದರು .ಅಲ್ಲಿ ಸಿ ಎಂ ಪೂಣಚ್ಚ ಅವರು ,ಮತ್ತು ಗಣಪಯ್ಯ ಅವರ ಪುತ್ರ ಡಾ ರವೀಂದ್ರನಾಥ ಅವರು ತಮ್ಮ ಕಾರ್ಮಿಕ ರೊಂದಿಗೆ ಬೆರೆತು ಸಂತೋಷಿಸುವುದನ್ನು ಕಣ್ಣಾರೆ ನೋಡಿದ ನನಗೆ ರಕ್ಷಿದಿ ಅವರ ಕೃತಿ ಓದುವಾಗ ಹಳೆಯ ನೆನಪುಗಳು ಕಣ್ಣೆದುರು ಬಂತು . ಬಹುಶಃ ಪ್ರಸಾದ್ ಅವರ ನಾಟಕ ಹುಚ್ಚಿಗೂ ಈ ವಾತಾವರಣ ವೇ ಹಾಲು ಎರೆದು ಪೋಷಿಸಿ ರ ಬೇಕು . 

ಈ ಕೃತಿಯಲ್ಲಿ ಸಕಲೇಶಪುರದ ಮತ್ತು ಸುತ್ತಲಿನ  ಪ್ರಸಿದ್ಧ ಎಸ್ಟೇಟ್ ಗಳ  ಕತೆ ಇದೆ . ಕ್ರೌಫೋರ್ಡ್ ,ಅವರ ಹೆಸರಿನ ಆಸ್ಪತ್ರೆ ,ಹಾಲ್ ,ಎತ್ತಿನ ಹಳ್ಳ ,ಹಾಸನ ಮಂಗಳೂರು ರೈಲ್ವೆ ,ಶಾಪ್ ಸಿದ್ದೇಗೌಡ ,ಸಕಲೇಶಪುರ ಹಾಲಿನ ಡೇರಿ ,ಚಳ್ಳೇಕೆರೆ ಸಹಕಾರ ಸಂಘ ,ಅದೇ ಹೆಸರಿನ ಥೀಯೇಟರ್ ಇತ್ಯಾದಿ ಗಳ  ಆಪ್ತ ವಿವರಣೆ ಇವೆ . ಪೂರ್ಣ ಚಂದ್ರ ತೇಜಸ್ವಿ ಅವರ ಒಡನಾಟ ಮತ್ತು ಕಾಫಿ ಡೇ ಸಿದ್ದಾರ್ಥ ನವರ ಕೊಡುಗೆ ಚಿತ್ರಣ ಅಪ್ಯಾಯ ಮಾನ ವಾಗಿವೆ . ಇವುಗಳೆಲ್ಲದರ ಜತೆಗೆ ಲೇಖಕರು ತಮ್ಮ ವೃತ್ತಿ ಮತ್ತು ಪ್ರವೃತ್ತಿ ಬೆಳೆದು ಬಂದ ಬಗೆ ಯ ಬಗ್ಗೆ ಬರೆದಿದ್ದಾರೆ . 

ಡಾ ರವೀಂದ್ರನಾಥ್ ಅವರ ವೈಜ್ಞಾನಿಕ ಮನೋಧರ್ಮ ದ  ಬಗ್ಗೆ ವಿವರ ನನಗೆ ಬಹಳ ಇಷ್ಟ ವಾಯಿತು . ಕೊಂಡು ಓದ ಬೇಕಾದ ಕೃತಿ 

ಶನಿವಾರ, ಡಿಸೆಂಬರ್ 17, 2022

 

ನನ್ನ ಅತ್ತೆ ಅಂದರೆ ಪತ್ನಿಯ ತಾಯಿ  ಮೊನ್ನೆ ಸಂಜೆ ನಿಧನರಾದರು . ಅವರ ಹೆಸರು ಗುಲಾಬಿ . ದೊಡ್ಡ ಕುಟುಂಬ ,ಅವರಿಗೆ ಎಂಟು ಅಕ್ಕ ತಂಗಿ ಯಂದಿರು ,ಒಬ್ಬ ತಮ್ಮ . ನನ್ನ ಮಾವನವರಿಗೆ ಐದು ಮಂದಿ ಸಹೋದರಿಯರು ಮತ್ತು ಇಬ್ಬರು ಸಹೋದರರರು . ಆಗೆಲ್ಲಾ ರಜೆಯಲ್ಲಿ ,ಹಬ್ಬ ಹರಿದಿನಗಳಲ್ಲಿ ಮನೆಗಳು ನೆಂಟರಿಷ್ಟರಿಂದ ತುಂಬಿ ತುಳುಕುತ್ತಿದ್ದ ದಿನಗಳು .ಮನೆಯವರನ್ನು ಮತ್ತು ಅವರೆಲ್ಲರನ್ನೂ ಚಾಕರಿ ಮಾಡಬೇಕು .ಮಿಕ್ಸಿ ಗ್ರೈಂಡರ್ ವಾಷಿಂಗ್ ಮೆಷಿನ್  ಇತ್ಯಾದಿ ಇಲ್ಲದ ದಿನಗಳು . ಇದನೆಲ್ಲಾ ನಗು ನಗುತಾ ಮಾಡಿದವರು ,ಅಂದಿನ ಎಲ್ಲಾ ತಾಯಂದಿರಂತೆ . 

             ಹೀಗೆ ವಯಸ್ಸಾಗಿ ದೇವರ ಪಾದ ಸೇರುವುದು ವಿಶೇಷ ಎಂದು ಬರೆಯುತ್ತಿಲ್ಲ . ಆದರೆ ನಾಲ್ಕೈದು ವರ್ಷಗಳಿಂದ ಅಸೌಖ್ಯದಿಂದ ನೆನಪು ಶಕ್ತಿ ಕಳೆದು ಕೊಂಡು ,ಹೆಚ್ಚು ಕಡಿಮೆ ಹಾಸಿಗೆ ಹಿಡಿದಿದ್ದ ಅವರನ್ನು ಅವರ ಮಗ ರಮೇಶ್ ,ಸೊಸೆ ಹೇಮಾ ಮತ್ತು.ಮೊಮ್ಮಕ್ಕಳು ಮೋನಿಷಾ ,ಮೋಹನ(ಇಬ್ಬರೂ ಇಂಜಿನಿಯರ್ ಗಳು ) ಶ್ರದ್ಧೆ ಯಿಂದ ನೋಡಿಕೊಂಡದ್ದು ಈಗಿನ ಕಾಲದಲ್ಲಿ  ವಿದ್ಯಾವಂತರಲ್ಲಿ ಅಪರೂಪ  . ಹೋಂ ನರ್ಸ್  ,ವೃದ್ದಾಶ್ರಮ ಇತ್ಯಾದಿಗಳ ಆಲೋಚನೆಯೇ ಅವರಿಗೆ ಬರಲಿಲ್ಲ ಎಂಬುದು ವಿಶೇಷ. ಅವರನ್ನು ಎಷ್ಟು ಕೊಂಡಾಡಿದರೂ ಕಡಿಮೆ (ನನ್ನ ನೆಂಟರು ಎಂದು ಬರೆಯುತ್ತಿಲ್ಲ ) . ಮೊಮ್ಮಗಳು ಮೋನಿಷಾ ಳ ಮದುವೆ ೧೮. ೧೨.. ೨೨ ಕ್ಕೆ ನಿಶ್ಚಯ ಆಗಿದ್ದು ,ಕಿರಿಯ ಮಗ ಆಸ್ಟ್ರೇಲಿಯಾ ದಲ್ಲಿ ವೈದ್ಯ ವೃತ್ತಿಯಲ್ಲಿ ಇರುವ ಡಾ ಕಿಶೋರ ಮತ್ತು ಅವರ ಮಕ್ಕಳು ಮೊನ್ನೆ ತಾನೇ ಆಗಮಿಸಿದ್ದು ಅವರನ್ನು ಕಂಡು ,ಜತೆಗೆ ಆಹಾರ ಸೇವಿಸಿದವರು ಅಲ್ಲಿಗೇ ಕಣ್ಣು ಮುಚ್ಚಿದರು .ಹಿಂದಿನ  ಕುಟುಂಬ ಪರಂಪರೆಯ ಒಂದು ಕೊಂಡಿ ಕಳಚಿತು

ಗುರುವಾರ, ಡಿಸೆಂಬರ್ 15, 2022

ಕದನ ಕುತೂಹಲ

 ನಿನ್ನೆ ಹಿರಿಯ ಮಿತ್ರರಾದ ಉಡುಪಿಯ ಶ್ರೀ ಗೋಪಾಲ ಕೃಷ್ಣ ಪ್ರಭು ಅವರು ಚೌಡಯ್ಯ ಮತ್ತು ದೊರೆ ಸ್ವಾಮಿ ಐಯ್ಯಂಗಾರ ಅವರ ಜಂಟಿ ಪ್ರಸ್ತುತಿ 'ರಘುವಂಶ ಸುಧಾ 'ವನ್ನು ಫೇಸ್ ಬುಕ್ ನಲ್ಲಿ ಹಂಚಿ ಕೊಂಡಿದ್ದರು . ನಾನು ಸಂಗೀತ ಪ್ರಿಯನಾದರೂ ಅದರ ಶಾಸ್ತ್ರ ದಲ್ಲಿ ಪಾಮರನು  .( ತಪ್ಪಿದ್ದರೆ ಹೊಟ್ಟೆಗೆ ಹಾಕಿ ಕೊಳ್ಳಿ ),ಈ ಕೃತಿ ಪಟ್ನಮ್ ಸುಬ್ರಹ್ಮಣ್ಯ ಐಯ್ಯರ್ ಅವರ ರಚನೆ .ರಾಗದ ಹೆಸರು ಕದನ ಕುತೂಹಲ . ಶ್ರೀರಾಮನನ್ನು ವರ್ಣಿಸುವ ಕೃತಿ

ರಘುವಂಶ ಸುದಾಂಬುಧಿ ಚಂದ್ರ ಶ್ರೀ ರಾಮ ರಾಮ ರಾಜೇಶ್ವರ

ಅನುಪಲ್ಲವಿ:
ಅಘ ಮೇಘ ಮಾರುತಶ್ರೀಕರ ಅಸುರೇಶ ಮರಿಗಂದ್ರ ವಾರ ಜಗನ್ನಾಥ 
 
ಚರಣ:
ಜಮಾದಗ್ನಿಚ  ಗರ್ವಕಂದನ 
ಜಯರುದ್ರಾದಿ ವಿಸ್ಮಿತಬಂಧನಾ
 
ಕಮಲಾಪ್ತಾ ನ್ವಯಮಂಡನ 
ಅಗಣಿತ ಅದ್ಭುತಶೌರ್ಯ ಶ್ರೀ ವೆಂಕಟೇಶ. 

 ಈ ರಾಗಕ್ಕೆ ಕದನ ಕುತೂಹಲ ಎಂದು ಏಕೆ ಬಂತು ಎಂಬುದು ನನಗೆ ಕುತೂಹಲ . ತಮಿಳರು ಥ ಮತ್ತು ದ ವನ್ನು ಪರಸ್ಪರ ವಿನಿಯೋಗಿಸಿವುದು ಉಂಟು .ಹಾಗೆ ಇದು ಕಥನ ಕುತೂಹಲವೋ ?

ಏನೇ ಇರಲಿ ಈ ಕೃತಿಯನ್ನು ವೇಗ ಗತಿಯಲ್ಲಿ ಪ್ರಸ್ತುತ ಪಡಿಸುವುದು ಸಾಮಾನ್ಯ ,ಕಿವಿಗೆ ಬಿದ್ದೊಡನೆ ಕಚೇರಿಯಲ್ಲಿ ಮಲಗಿದ್ದವರೂ ಎದ್ದು ಕೂರುವರು .ಪಕ್ಕ ವಾದ್ಯದವರು ಕದನ ಕುತೂಹಲಿಗಳಾಗಿ ಕಾದಾಡುವರಂತೆ ನುಡಿಸುವರು .. 
 ಮನೆಯಲ್ಲಿ ಮಡದಿ ಇರುವಾಗ ಈ ರಾಗ ದ ಕೃತಿ ಹಾಕುವುದಿಲ್ಲ ,ಸಾಮವೋ ,ಮಧ್ಯಮಾವತಿಯೂ ಲೇಸು .ಇಲ್ಲದದಿದ್ದರೆ ಕಲಹ ಏರ್ಪಟ್ಟು ಮನೆ ಶಾಂತಿ ಮತ್ತು ಮನಃ ಶಾಂತಿ ಹಾಳಾಗುವ ಅಪಾಯ ಇದೆ . 
 
ಕೆಲವು ಕದನ ಕುತೂಹಲಿ ಗಳು ಇದ್ದಾರೆ . ಅವರ ಬಳಿ ನೀವು ಹ್ಯಾಗಿದ್ದೀರಿ ಎಂದು ಕೇಳಿದರೆ "ಕಣ್ಣು ಕಾಣುವುದಿಲ್ಲವೇ ,ಕೇಳುವುದಕ್ಕೆ ಏನುಂಟು ?',ಅಥವಾ ಏನು ಒಬ್ಬರೇ ,ಮನೆಯವರು ಎಲ್ಲಿ ?ಎಂದು ಕೇಳಿದರೆ "ನಾನು ಬಂದರೆ ಸಾಲದೇ ?ಹಾಗಾದರೆ ನಾನು ವಾಪಸು ಹೋಗುತ್ತೇನೆ "ಎಂದು ಕದನ ಕಾಯಲು ಬರುವವರು .ಇವರಿಗೆ ಕದನ ಕುತೂಹಲಿ ಎನ್ನ ಬಹುದೇನೋ ?
 
ಮಂಡೋಲಿನ್ ಮಾಂತ್ರಿಕ  ಯು ಶ್ರೀನಿವಾಸ್ ನುಡಿಸಿದ ಈ ಕೃತಿ ಕೇಳಲು ಕೆಳಗಿನ ಲಿಂಕ್ ಬಳಸಿರಿ

https://youtu.be/v7q1XbrCSTw

ಗುರುವಾರ, ಡಿಸೆಂಬರ್ 8, 2022

ಒಂದು ಜಿಜ್ನಾಸೆ

 ನನಗೆ ಒಂದನೇ ತರಗತಿಯಿಂದ ಪಿ ಯು ಸಿ ಮುಗಿಯುವ ತನಕ ಅಧ್ಯಾಪಕರು ಮಾತ್ರ ಇದ್ದರು.ಅಧ್ಯಾಪಕಿ ಯರನ್ನು ಕಂಡದ್ದು ಮೊದಲ ಬಾರಿಗೆ ಎಂ ಬಿ ಬಿ ಎಸ್ ಕಲಿಯವಾಗ .ಈ ನಿಟ್ಟಿನಲ್ಲಿ ನಾನು ನತದೃಷ್ಟ .ಅಗೆಲ್ಲಾ ಮಹಿಳೆಯರು ಅಧ್ಯಾಪಕ ವೃತ್ತಿಗೆ ಬರುತ್ತಿದ್ದುದು ಕಡಿಮೆ . ಮುಖ್ಯವಾಗಿ ಪ್ರಾಥಮಿಕ ತರಗತಿಗಳಿಗೆ ಮಹಿಳಾ ಅಧ್ಯಾಪಕರೇ ಹೆಚ್ಚು ಸೂಕ್ತ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ .

ಇರಲಿ,ಇಲ್ಲಿ ವಿಷಯ ಅದಲ್ಲ .ಪುರುಷ ಅಧ್ಯಾಪಕರನ್ನು ಮಾಸ್ಟ್ರು ಎಂದು ಮತ್ತು ಅಧ್ಯಾಪಕಿಯರನ್ನು ಟೀಚರ್ ಎಂದು ಕರೆಯಲು ಕಾರಣವೇನು ಎಂದು ನನಗೆ ಇನ್ನೂ ತಿಳಿದಿಲ್ಲ .ಟೀಚರ್ ಎಂಬುದು ಸ್ತ್ರೀ ಲಿಂಗ ಅಲ್ಲ .ಇದು ನಮ್ಮಲ್ಲಿ ಮಾತ್ರ ಅಲ್ಲ  ಪಕ್ಕದ ರಾಜ್ಯ ಕೇರಳದಲ್ಲಿಯೂ ವ್ಯಾಪಕ ಬಳಕೆಯಲ್ಲಿ ಇದೆ .ಇಲ್ಲಿಯ ವಿಶೇಷ ಎಂದರೆ ಅಧ್ಯಾಪಕರಾಗಿ ಕೆಲವು ವರ್ಷಗಳಲ್ಲಿ ಮಾಸ್ಟರ್ ಮತ್ತು ಟೀಚರ್ ಎಂಬ ಉಪಾಧಿ ಹೆಸರಿಗೆ ಅಧಿಕೃತವಾಗಿ ಸೇರುವುದು . ಉದಾಹರಣೆಗೆ ಜನಪ್ರಿಯ ಆರೋಗ್ಯ ಮಂತ್ರಿ ಆಗಿದ್ದ ಶೈಲಜಾ ಟೀಚರ್ ,ಎಂ ಎಲ್ ಎ ಆಗಿದ್ದ ರಾಮಪ್ಪ ಮಾಸ್ಟರ್ ಇತ್ಯಾದಿ . ಇದಲ್ಲದೆ ಹಿರಿಯ ಮಿತ್ರರನ್ನು ಪ್ರೀತಿಯಿಂದ ಮಾಸ್ಟ್ರೆ ಅಥವಾ ಅದರ ಅಪಭ್ರಂಶ ಮಾಷೇ ಎಂದು ಕರೆಯುವುದುಂಟು .ಮಲೆಯಾಳದ ಪ್ರಸಿದ್ದ ಸಂಗೀತ ನಿರ್ದೇಶಕ ರಾಗಿದ್ದ ಹಲವರು ತಮ್ಮ ಹೆಸರಿನೊಡನೆ ಮಾಸ್ಟ್ರು ಪಟ್ಟ ಗಳಿಸಿದವರು .ಉದಾ ಜಾನ್ಸನ್ ಮಾಸ್ಟ್ರು ,ರವೀಂದ್ರನ್ ಮಾಷ್ಟ್ರು.ಅದೇ ದಕ್ಷಿಣಾ ಮೂರ್ತಿ ಯವರು ದಕ್ಷಿಣಾ ಮೂರ್ತಿ ಸಾರ್ ಎಂದು ಕರೆಯಲ್ಪಡುವರು .ಯಕ್ಷಗಾನ ನೃತ್ಯ ಅಧ್ಯಾಪಕರಾಗಿ ಹೆಸರು ಗಳಿಸಿದ ಉಪ್ಪಳ ಕೃಷ್ಣ ಮಾಸ್ಟರ್ ಮತ್ತು ಕನ್ಯಾನ ಕೇಶವ ಮಾಸ್ಟೆರ್ ಅವರನ್ನೂ ಇಲ್ಲಿ ಸೇರಿಸ ಬಹುದು .

ಬುಧವಾರ, ಡಿಸೆಂಬರ್ 7, 2022

ಎರಡು ಮಾರಣಾಂತಿಕ ಹೃದಯ ಕಂಪನಗಳು

 ನಿಮಗೆ ತಿಳಿದಿರುವಂತೆ ಹೃದಯಾಘಾತ ಎಂದರೆ  ಹೃದಯಕ್ಕೆ ರಕ್ತ ಸರಬರಾಜು ಮಾಡುವ ರಕ್ತ ನಾಳಗಳು ಕೊಲೆಸ್ಟರಾಲ್ ಮತ್ತು ರಕ್ತ ದ  ಹೆಪ್ಪು ಗಳಿಂದ ಬಂದ್ ಆಗಿ ಹೃದಯದ ಮಾಂಸ ಖಂಡಗಳ ಸಾವು . ಇದರಲ್ಲಿ ಎರಡು ರೀತಿಯ ಸಾವು ಸಂಭವಿಸ ಬಹುದು .ಒಂದು ಭಾರೀ ಹೃದಯಾಘಾತ ಅಂದರೆ ಮುಖ್ಯ ರಕ್ತ ನಾಳ ಬಂದ್ ಆಗಿ ಹೃದಯದ ಬಹುತೇಕ ಮಾಂಸ ಖಂಡಗಳು ನಿಷ್ಕ್ರಿಯ ಗೊಂಡು ಮೆದುಳಿಗೆ ರಕ್ತ ಪಂಪ್ ಆಗದೆ ಸಾವು ಸಂಭವಿಸುವುದು . ಇನ್ನೊಂದು ಹೃದಯದ ಯದ್ವಾ ತದ್ವಾ ಕಂಪನ . ಇಲ್ಲಿ ಹೃದಯ ಕ್ರಮ ಪ್ರಕಾರ ಸಂಕುಚನ ಮತ್ತು ವಿಕಸನ ಆಗದೆ ಬರೀ ಕಂಪಿಸುವುದರಿಂದ ರಕ್ತ ಪಂಪ್ ಆಗದೆ ಅಪಾಯ ಆಗುವುದು ,

                       ಎರಡನೇ ಕಾರಣ ವನ್ನು ವೆಂಟ್ರಿಕ್ಯುಲರ್ ಫೈಬ್ರಿಲ್ಲೇಶನ್ ಎನ್ನುತ್ತ್ತಾರೆ . ಇದು ಹೃದಯಾಘಾತ ದಲ್ಲಿ ಎರಡು ಬಾರಿ ಉಂಟಾಗ ಬಹುದು . ಮೊದಲನೆಯದಾಗಿ ಹೃದಯದ ರಕ್ತ ನಾಳ ಅಥವಾ ಕೊರೋನರಿ ಆರ್ಟರಿ  ಬ್ಲಾಕ್ ಆದಾಗ ರಕ್ತ ಸರಬರಾಜು ಹಠಾತ್ ನಿಂತ ಕಾರಣ ನೋವು ಉಂಟಾಗುವುದಲ್ಲದೆ , ಹೃದಯದ ಮಾಂಸ ಖಂಡಗಳು ಬಹಳ ಸಂಕಟದಿಂದ  ಯದ್ವಾ ತದ್ವಾ ಕುಣಿಯುವುದು . ಇನ್ನೊಂದು ಆಸ್ಪತ್ರೆಯಲ್ಲಿ  ಹೃದಯಾಘಾತಕ್ಕೆ ಚುಚ್ಚು ಮದ್ದು ಅಥವಾ  ಆಂಜಿಯೋಪ್ಲಾಸ್ಟಿ ಮೂಲಕ ಚಿಕಿತ್ಸೆ ಮಾಡಿದಾಗ ಬಂದ್ ಅದ ರಕ್ತ ಸರಬರಾಜು ಪುನಃ ಸ್ಥಾಪನೆ ಗೊಂಡಿತು ಎಂದು ಸಂತಸದಿಂದ ಮಾಂಸ ಖಂಡಗಳು ಹುಚ್ಚೆ ದ್ದು  ಕುಣಿದು ಕಂಪಿಸುವುದು .ಇದನ್ನು ರಿ ಪರ್ಫ್ಯುಷನ್ ಎರಿತ್ಮಿಯಾ ಎನ್ನುವರು .ಎರಡು ಕಂಪನದ ಪರಿಣಾಮವೂ ಒಂದೇ ಮತ್ತು ಪ್ರಾಣಾಂತಿಕ .  ಹೃದಯಕ್ಕೆ  ನೇರ ವಿದ್ಯುತ್ ಶಾಕ್(ಡಿ ಸಿ ಶಾಕ್ ) ಕೊಟ್ಟು ಕಂಪನವನ್ನು ಅಕಂಪನ ಅಥವಾ ಡಿಫೈಬ್ರಿಲ್ಲೇಶನ್ ಮಾಡುವರು . ಕೆಲವು ಬಾರಿ ಇದೂ ವಿಫಲ ಆಗುವದು ಇದೆ

ಮಂಗಳವಾರ, ಡಿಸೆಂಬರ್ 6, 2022

ಒಳ್ಳೆಯ ಚಹಾ ದ ಬೆನ್ನು ಹತ್ತಿ

ಬಾಲ್ಯದಲ್ಲಿ  ನಮಗೆ ಕುಡಿಯಲು ಚಾ ಕಾಫಿ  ಕೊಡುತ್ತಿರಲಿಲ್ಲ .ಆರೋಗ್ಯಕ್ಕೆ ಹಾನಿಕಾರಕ ,ಉಷ್ಣ ಎಂದು . ತಿಂಡಿಯೊಡನೆ ಕುಡಿಯಲು ಕೊತ್ತಂಬರಿ ಕಷಾಯ .ಬೆಲ್ಲ ಹಾಕಿದ್ದು . ನಾವು ಮನಸಿಲ್ಲದ ಮನಸಿನಲ್ಲಿ ಅದನ್ನು ಕುಡಿಯುತ್ತಿದ್ದು ಯಾವಾಗ ಕಾಫಿಗೆ ಪ್ರಮೋಷನ್ ಸಿಗುವುದೋ ಎಂದು ಕನಸು ಕಾಣುತ್ತಿದ್ದೆವು . ಬೆಳಿಗ್ಗೆ ಬಿಸಿ ಕಷಾಯ ಸಿಗುತ್ತಿದ್ದರೂ ಸಾಯಂಕಾಲ ಶಾಲೆಯಿಂದ ಬರುವಾಗ ಅದು ತಣಿದು ಕೋಡಿರುತ್ತಿತ್ತು . ಅದರ ಮೇಲ್ಪದರದಲ್ಲಿ ಹಾಲಿನ ಕೆನೆ ,ಕೆಲವೊಮ್ಮೆ ಅರೆ ಜೀವಂತ ನೊಣ. ಶಾಲೆಯಿಂದ ಬಂದೊಡನೆ ಏನಾದರೂ ತಿಂದು ಕುಡಿದು ಆಟಕ್ಕೆ ಹೋಗುವ ಧಾವಂತದಲ್ಲಿ ನಮಗೆ ಅವುಗಳ ಬಗ್ಗೆ ಗಮನ ಕಡಿಮೆ ಇದ್ದುದರಿಂದ ಹೇಗೋ ನಡೆಯುತ್ತಿತ್ತು . 

ಮುಂದೆ ಹೈ ಸ್ಕೂಲ್ ಗೆ ಬಂದಾಗ ನಮಗೆ ಕಾಪಿ ಸೇವಿಸುವ ಅನುಮತಿ ಸಿಕ್ಕಿತು .ಬೆಲ್ಲದ ಕಾಫಿ .ಆಗೆಲ್ಲಾ   ವೇಯಿಟರ್ ಕಾಪಿ ಎಂಬ ಬ್ರಾಂಡ್ ಜನಪ್ರಿಯ ಆಗಿತ್ತು . ಹೇಗೆ ಕಾಪಿ ಪ್ರಿಯನಾದ ನಾನು ಎಂ ಬಿ ಬಿ ಎಸ ಕಲಿಯಲು ಹುಬ್ಬಳ್ಳಿಗೆ ಹೋದಾಗ ತಾಪತ್ರಯ ಉಂಟಾಯಿತು .ಅಲ್ಲಿ ಹಾಸ್ಟೆಲ್ ನಲ್ಲಿ ಚಹಾ ಮಾತ್ರ ,ಕಾಪಿ ಇಲ್ಲ .ಇನ್ನು ಹೊರಗೆ ಹೋಟೆಲ್ ಗಳಲ್ಲಿ ಕೂಡಾ ಒಳ್ಳೆಯ ಕಾಫಿ ಸಿಗುತ್ತಿರಲಿಲ್ಲ . ಹೀಗೆ ನಾನು ಚಹಾ ಪಕ್ಷಕ್ಕೆ ಪಕ್ಷಾಂತರ ಮಾಡ ಬೇಕಾಯಿತು . ಬೇಂದ್ರೆಯವರು ಕೂಡಾ ಚಹಾದ ಕೂಡಾ ಚೂಡಾ ದಾಂಗ ಎಂದು ಹುಬ್ಬಳ್ಳಿಯವನನ್ನು ಕರೆದಿದ್ದಾರೆ . ನಮ್ಮಲ್ಲಿ ಅದನ್ನು ಸಜ್ಜಿಗೆ ಬಜಿಲಿನೊಡನೆ ಕಾಫಿ ಯಾಂಗೆ ಎಂದು ಮಾರ್ಪಡಿಸಿ ಕೊಳ್ಳ ಬಹುದು . 

ಚಹಾ ದ  ಬ್ರಾಂಡ್ ಮಾತ್ರ ಬದಲಿಸುತ್ತಲೇ ಇದ್ದ ನನಗೆ  ೧೯೮೯ ರಲ್ಲಿ ಮಂಗಳೂರಿಗೆ ವರ್ಗವಾಗಿ ಬಂದಾಗ ನಮ್ಮ ಬಿಡಾರಕ್ಕೆ ಸಮೀಪ ಮೈದಾನ್ ರಸ್ತೆಯಲ್ಲಿ  ಇದ್ದ ಎಂ  ಪಾಯ್ಸ್ ವೈನ್ ಸ್ಟೋರ್  ನಲ್ಲಿ ಒಳ್ಳೆಯ ಚಹಾ ಪುಡಿ ಮಿತ ದರದಲ್ಲಿ ಸಿಗುವ ಸುದ್ದಿ ತಿಳಿದು ಬಂತು . ಅಲ್ಲಿ ಆಗ ಅದು ಎಸ್ಟೇಟ್ ನಿಂದ ಫ್ರೆಶ್ ಆಗಿ ಬರುತ್ತಿತ್ತು ,ಬಂದ ದಿನ  ವೈನ್ ಸ್ಟೋರ್ ನ  ಎದುರು  ಚಹಾ ಪುಡಿ ಲಭ್ಯ ಎಂದು ಬೋರ್ಡ್ ಹಾಕುತ್ತಿದ್ದರು . ಲೂಸ್ ಚಹಾ ಪುಡಿ ,ಅದನ್ನು ಅರ್ಧ ,ಒಂದು ಕಿಲೋ ಕಟ್ಟು ಮಾಡಿ ಇಡುತ್ತಿದ್ದು ,ಒಂದೆರಡು ದಿನದಲ್ಲಿ ಖಾಲಿ ಆಗುತ್ತಿತ್ತು . ಎಷ್ಟೋ ಬಾರಿ ನಿರಾಸೆಯಿಂದ ಬರಿ ಗೈಲಿ ಬಂದದ್ದು ಇದೆ .ಕೆಲವೊಮ್ಮೆ ಪಕ್ಕದ Campco ದಲ್ಲಿ ಉದ್ಯೋಗಿ ಯಾಗಿದ್ದ ನನ್ನ ಅಣ್ಣ ನನಗೆ ತಂದು ಕೊಟ್ಟದ್ದು ಇದೆ.ಈ ಚಹಾ ಎಲೆ ಕುಡಿಸುವಾಗಲೇ ಒಳ್ಳೆಯ ಪರಿಮಳ  .(ಇದೇ ರೀತಿ ಆಗ ಪೇಟೆಯಲ್ಲಿ ದುರ್ಲಭವಾಗಿದ್ದ ಹಾಲು ಕೂಡಾ ತಂದು ಕೊಡುತ್ತಿದ್ದ ). ಈಚಲು ಮರದ ಕೆಳಗೆ ಮಜ್ಜಿಗೆ ಕುಡಿದರೂ ------ಎಂಬ ಗಾದೆ ನೀವು ಕೇಳಿರ ಬಹುದು . ಹಾಗೆ ವೈನ್ ಸ್ಟೋರ್ ನಿಂದ ಚಹಾ ಪುಡಿ ಎಂದು ನೀವು ಯೋಚಿಸುತ್ತಿರ ಬಹು ದು . ಫಾಯ್ಸ್ ಟ್ರೇಡರ್ಸ್ ಅವರು ಗುಣ ಮಟ್ಟಕ್ಕೆ ಪ್ರಸಿದ್ಧ ರಾದವರು ,ಈಗಲೂ ಕೂಡಾ ಅಲ್ಲಿ ಚಹಾ ಪುಡಿ ಸಿಗುತ್ತಿರ ಬೇಕು . ಬ್ರಾಂಡೆಡ್ ಪ್ಯಾಕೆಟ್ ನಲ್ಲಿ .ಪಕ್ಕದಲ್ಲಿ ಅವರ ಜನರಲ್ ಸ್ಟೋರ್ ಕೂಡಾ ಇದೆ .

ಮುಂದೆ ಒಮ್ಮೆ ಊಟಿ ಪ್ರವಾಸಕ್ಕೆ ಹೋದಾಗ ಅಲ್ಲಿ ನೋನ್ ಸಚ್  ಟೀ ಪರಿಚಯ ಆಯಿತು . ರೈಲ್ವೆ ಯಲ್ಲಿ ಊಟಿ ಕಡೆಯ ನೌಕರರ ಮೂಲಕ ಅದನ್ನು ತರಿಸುತ್ತಿದ್ದೆ . ಮುಂದೆ ಚೆನ್ನೈ ಗೆ ಹೋದಾಗ ಒಂದು ದಿನ  ವಸ್ತು ಪ್ರದರ್ಶನ ಮೈದಾನದಲ್ಲಿ  ತಮಿಳುನಾಡು ಟೀ ಪ್ಲಾಂಟೇಶನ್ ನವರ ಸ್ಟಾಲ್ ನಲ್ಲಿ  ಟೈಗರ್ ಬ್ರಾಂಡ್ ನ ಟ್ಯಾನ್ ಟೀ ರುಚಿ ನೋಡಿ ಕಡಿಮೆ ಬೆಲೆ ಮತ್ತು ಒಳ್ಳೆಯ ಸ್ವಾದದ ಅದಕ್ಕೆ ಮಾರು ಹೋದೆವು .ಆದರೆ ಅದು ಅಂಗಡಿಗಳಲ್ಲಿ ಸಿಗುತ್ತಿರಲಿಲ್ಲ . ಸೆಕ್ರೆಟೇರಿಯಟ್  ಬಳಿ ಅವರ ಸಣ್ಣ ಔಟ್ಲೆಟ್ ಇತ್ತು ಅಲ್ಲಿ ಹೋಗಿ ತರುವುದು . ಪುನಃ ಮಂಗಳೂರಿಗೆ ಬಂದಾಗ ಫಾಯ್ಸ್ ಅಂಗಡಿಯ ಸಿಲ್ವರ್ ಕ್ಲೌಡ್ ಚಹಾ . 

 ಈಗ ದೇವಗಿರಿ ಅವರ ಲೀಫ್ ಚಹಾ ಉಪಯೋಗಿಸುತ್ತಿದ್ದು ಅದು ಪುತ್ತೂರಿನ ಒಂದೆರಡು ಅಂಗಡಿಗಳಲ್ಲಿ ಲಭ್ಯವಿದ್ದು ಸ್ವಾದ ಚೆನ್ನಾಗಿದೆ .

ಶುಕ್ರವಾರ, ಡಿಸೆಂಬರ್ 2, 2022

ಸೆಪ್ಟಿಕ್ ಇಂಜೆಕ್ಷನ್

 ಇವತ್ತು ಒಬ್ಬರು ತಮ್ಮ ತಾಯಿಯನ್ನು ಕರೆದುಕೊಂಡು ಬಂದಿದ್ದರು.ಅವರ ಕೈಗೆ ಮುಳ್ಳು ಚುಚ್ಚಿ ಸೆಪ್ಟಿಕ್ ಆಗಿತ್ತು . ಮುಳ್ಳು ಚುಚ್ಚಿದ ದಿನವೇ ತಾವು ಸೆಪ್ಟಿಕ್ ಚುಚ್ಚು ಮದ್ದು ಕೊಡಿಸಿದ್ದರೂ ಗಾಯ ಹೇಗೆ ಸೋಂಕು ನಂಜು ಆಯಿತು ಎಂದು ಅವರಿಗೆ ಆಶ್ಚರ್ಯ . ಗಾಯವಾದಾಗ ಸಾಮಾನ್ಯವಾಗಿ ಕೊಡುವುದು ಟಿಟಿ ಇಂಜೆಕ್ಷನ್ ಅಥವಾ ಧನುರ್ವಾಯು ನಿರೋಧಕ ಚುಚ್ಚು ಮದ್ದು .ಧನುರ್ವಾತ ಒಂದು ಪ್ರಾಣಾಂತಿಕ ರೋಗವಾಗಿದ್ದು ಕ್ಲಾಸ್ಟ್ರಿಡಿಯಂ ಟೆಟನಿ ಎಂಬ ಬ್ಯಾಕ್ಟೀರಿಯಾ ದಿಂದ ಉಂಟು ಆಗುವುದು .ಅದನ್ನು ತಡೆಗಟ್ಟಲು ಮಾತ್ರ ಈ ಲಸಿಕೆಗೆ ಸಾಧ್ಯ .ಅಗ್ನಿ  ಅಸ್ತ್ರಕ್ಕೆ ಮಾತ್ರ ವರುಣಾಸ್ತ್ರ ಕೆಲಸ ಮಾಡುವಂತೆ .ಉಳಿದ ಹಲವಾರು ಸುಪ್ರಸಿದ್ಧ ಮತ್ತು ಕುಪ್ರಸಿದ್ಧ ಬ್ಯಾಕ್ಟೀರಿಯಾ ಗಳೂ ಇವೆಯಷ್ಟೆ .ಗಾಯ ಆದೊಡನೆ ಅವು ಅದರ ಮೂಲಕ ತಮ್ಮ ಕಾರ್ಯಾಚರಣೆ ಆರಂಭಿಸುತ್ತವೆ .ಕೂಡಲೇ ಬಿಳಿ ರಕ್ತ ಕಣಗಳು ಧಾವಿಸಿ ಅವುಗಳೊಡನೆ  ಹೋರಾಡುತ್ತವೆ .ಹುತಾತ್ಮ  ರಕ್ತ ಕಣಗಳು ,ಸತ್ತ ರೋಗಾಣು ,ಇವುಗಳ ಹೋರಾಟದಲ್ಲಿ ಸಿಕ್ಕಿ ಹತವಾದ ಜೀವಕೋಶಗಳು ಸೇರಿ ಕೀವು ಆಗುತ್ತದೆ . ಅಲ್ಲಿ ಉತ್ಪತ್ತಿ ಆದ ರಾಸಾಯನಿಕಗಳು ನರತಂತು ಗಳನ್ನು ಎಚ್ಚರಿಸಿ ನೋವು ಎಂಬ ಸಾಮಾನ್ಯ ಎಸ ಎಮ್ ಎಸ್ ಮೆದುಳಿಗೆ ರವಾನಿಸಿ ನಾವು ಕಾರ್ಯ ತತ್ಪರ ಆಗುವಂತೆ ಮಾಡುತ್ತವೆ . ಸಕ್ಕರೆ ಕಾಯಿಲೆ ರೋಗಿಗಳಲ್ಲಿ ಕೆಲವರಿಗೆ ಸ್ಪರ್ಶ ಜ್ಞಾನ ಇರುವುದಿಲ್ಲ ,ಆಗ ನಮ್ಮ ಅರಿವಿಗೆ ಬಾರದೆ ಸೋಂಕು ಏರುತ್ತದೆ . ಸಕ್ಕರೆ ಕಾಯಿಲೆ ಹತೋಟಿಯಲ್ಲಿ ಇಲ್ಲದದಿದ್ದರೂ ರೋಗಾಣುಗಳಿಗೆ ಸಂತಸ .ಕಾದಾಟದಲ್ಲಿ ಅವುಗಳ ಕೈ ಮೇಲಾಗುವುದು . ಇಂತಹ ಸಂದರ್ಭದಲ್ಲಿ ನಾವು ಯೋಗ್ಯ ಆಂಟಿಬಯೋಟಿಕ್ ಕೊಟ್ಟು ಸೋಂಕು ನಂಜನ್ನು ಹತೋಟಿಗೆ ತರಲು ಯತ್ನಿಸುತ್ತೇವೆ .

ಮಂಗಳವಾರ, ನವೆಂಬರ್ 29, 2022

ಡಾ ಜಿ ಕೆ ಸುಬ್ರಹ್ಮಣ್ಯ ಭಟ್


 ಸಂಪಾಜೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶ . ಇಲ್ಲಿಯ ಗೇಟ್ ಇತಿಹಾಸ ಪ್ರಸಿದ್ದ .ಮಳೆಗಾಲದಲ್ಲಿ ವಿಪರೀತ ಮಳೆ .ಹಿಂದೆ ನಾಗರಿಕ ಸೌಲಭ್ಯ ಗಳು ಬಹಳ ಕಡಿಮೆ ಇತ್ತು . ಮಡಿಕೇರಿ ಪುತ್ತುರಿನಂತಹ ಪೇಟೆಗಳಲ್ಲಿ ಕೂಡಾ ಆಧುನಿಕ ಪದ್ದತಿಯ ವೈದ್ಯರು ಬೆರಳೆಣಿಕೆಯಲ್ಲಿ ಇದ್ದರು. ಆ ಕಾಲದಲ್ಲಿ ಎಂ ಬಿ ಬಿ ಎಸ್ ಪದವಿ ಪೂರೈಸಿ  ಸಂಪಾಜೆಯಲ್ಲಿ ವೈದ್ಯಕೀಯ ಸೇವೆ ಆರಂಬಿಸಿದವರು ಡಾ ಜಿ ಕೆ ಸುಬ್ರಹ್ಮಣ್ಯ ಭಟ್ ಅವರು.ಹಲವು ವರ್ಷ ತಮ್ಮದೇ ಚಿಕಿತ್ಸಾಲಯ ,ನಂತರ  ಕೆ ವಿ ಜಿ ವೈದ್ಯಕೀಯ ಕಾಲೇಜ್ ನ ಸಂಯೋಗ ದಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ . 

ಇವರು ಪ್ರಸಿದ್ದ ಕೋಣೆತೋಟ ಮನೆತನದವರು . ಮೃದು ಭಾಷಿ .ಸದಾ ಅಧ್ಯಯನ ಕುತೂಹಲಿ .ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಪರಿಚಯ ಮಾಡಿಕೊಂಡು ,ಅವನ್ನು ತಮ್ಮ ವೃತ್ತಿ ಸೇವೆಯಲ್ಲಿ ಅಳವಡಿಸುವ ಉದ್ದೇಶ  ಹೊಂದಿದ್ದವರು . ಸಂಪಾಜೆ ಕಲ್ಲುಗುಂಡಿ ಪರಿಸರದಲ್ಲಿ ಇವರ ಸೇವೆ ,ಸಜ್ಜನಿಕೆ ಪರಿಚಯ ಇಲ್ಲದವರು ಅಪರೂಪ .

ಸದ್ಯ ಸಂಪಾಜೆಯಲ್ಲಿ ನೆಲೆಸಿರುವ ಇವರು ವೃದ್ದಾಪ್ಯ ದ ಆರೋಗ್ಯ ಸಮಸ್ಯೆಗಳ ಕಾರಣ ವೃತ್ತಿಗೆ ವಿದಾಯ ಹೇರಿರುವರು. ಇಂತಹವರ ಸೇವೆ ಸಮಾಜ ಸದಾ ನೆನಪಿನಲ್ಲಿ ಇಟ್ಟು ಕೊಂಡಿರ ಬೇಕು.


ಶನಿವಾರ, ಅಕ್ಟೋಬರ್ 15, 2022

ಧರ್ಮಕ್ಕೆ ಸಿಗುವ ಹೊಗಳಿಕೆ ಮತ್ತು ತೆಗಳಿಕೆ

  ಕೆಲವೊಮ್ಮೆ ನಮಗೆ ಯಾವುದೇ ಶ್ರಮ ಇಲ್ಲದೆ ಹೊಗಳಿಕೆ ಸಿಗುತ್ತದೆ .ಉದಾಹರಣೆಗೆ ಒಬ್ಬ ವ್ಯಕ್ತಿ ಜ್ವರ ಬಂದು ಸಮೀಪದ ವೈದ್ಯರ ಬಳಿ ಹೋಗುತ್ತಾನೆ .ಅವರು ಪರೀಕ್ಷೆ ಮಾಡಿ ಔಷಧಿ ಕೊಡುತ್ತಾರೆ .ಮೂರು ನಾಲ್ಕು ದಿನ ಕಳೆದರೂ ಜ್ವರ ಬಿಡುವದಿಲ್ಲ . ಸರಿ ,ನಮ್ಮ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗುತ್ತಾನೆ .ನಾನು ಪರೀಕ್ಷೆ ಮಾಡುವಾಗಲೂ ದೊಡ್ಡ ಕಾಯಿಲೆ ಏನೂ ಕಾಣುವುದಿಲ್ಲ . ರೋಗಿಯ ಬಯಕೆಯಂತೆ ಒಂದು ಡ್ರಿಪ್ ಹಾಕಿ ಸಾಧಾರಣ ಜ್ವರದ ಮಾತ್ರೆ ಕೊಡುತ್ತೇನೆ . ಬಂಡ ಮರುದಿನ ಜ್ವರ ಬಿಡುತ್ತದೆ . ನನಗೆ ಎಲ್ಲಾ ಕ್ರೆಡಿಟ್ ಸಿಗುತ್ತದೆ .ಹಲವು ಜ್ವರಗಳು ವೈರಸ್ ಮೂಲದವು ಆಗಿದ್ದು  ಶಮನ ಆಗಲು ವಾರ ತೆಗೆದು ಕೊಳ್ಳ ಬಹುದು . ಕೆಲವರು  ಅಂದಾಜಿಗೆ ಆಂಟಿ ಬಯೋಟಿಕ್ ಕೊಡುವರು .ಉದ್ದೇಶ ಒಳ್ಳೆಯದೇ . ಇದೇ ರೀತಿ ಭೇದಿ ಗೆ  ಮುಖ್ಯ ಕಾರಣ ವೈರಸ್ .ಇದಕ್ಕೆ ಜಲ ಪುರಾಣ ಸಾಕು . ಹೊರಗಡೆ ಎಷ್ಟೋ ಮದ್ದು ತಿಂದು ಬಂದವರು ಆಸ್ಪತ್ರೆಗೆ ಬಂದು ಒಂದೇ ದಿನದಲ್ಲಿ ಯಾವುದೇ ಹೊಸ ಔಷಧಿ ಇಲ್ಲದೆ ಗುಣ ಮುಖರಾಗುವರು . ರೋಗಿಯು ನಮ್ಮನ್ನು ಹೊಗಳುವರು . ಪ್ರಸಿದ್ಧ ಉಷ್ಣ ಪ್ರದೇಶ ರೋಗ ಶಾಸ್ತ್ರದ  ಪಠ್ಯ ಪುಸ್ತಕ ಮ್ಯಾನ್ಸನ್ ಬಾರ್ ನಲ್ಲಿ ಈ ಪ್ರದೇಶಗಳಲ್ಲಿ ಟೈಫಾಯಿಡ್ ಎಂದು ಅಂದಾಜಿಗೆ ಚಿಕಿತ್ಸಲಾಗುವ   ಹಲವು ಕೇಸ್ ಗಳು  ಮುಂದುವರಿದ ವೈರಲ್ ಕಾಯಿಲೆಗಳು ಎಂದು ಉಲ್ಲೇಖಿಸಿದ್ದನ್ನು ಓದಿದ ನೆನಪು . ಇದೇ ರೀತಿ ಡೆಂಗೂ ಜ್ವರ ದವರು ಪ್ಲಾಟೇಲೆಟ್ ಕಡಿಮೆ ಎಂದು ಬೆಂಗಳೂರು ಮಂಗಳೂರು ಇತ್ಯಾದಿ ಊರುಗಳಿಂದಲೂ ,ಸುತ್ತು ಮುತ್ತಲ ಹಳ್ಳಿಗಳಿಂದಲೂ ಬರುತ್ತಾರೆ .ನಾನು ಅದಕ್ಕೆಂದು ಏನೂ ಕೊಡುವುದಿಲ್ಲ . ತನ್ನಿಂದ ತಾನೇ ಅದು ಸರಿ ಆಗುವುದು . ಕೆಲವರು ಅದು ನಮ್ಮ ಕೈ ಗುಣದಿಂದ ಎನ್ನುವರು .ಉಳಿದವರು ತಾವು ತಿಂದ ಕಿವಿ ಮತ್ತು ಪಪ್ಪಾಯಿ ಕಾರಣ ಎನ್ನುವರು . 

ಅಯಾಚಿತ ಅನರ್ಹ ಹೊಗಳಿಕೆ ಬಂದಾಗ ತೆಗಳಿಕೆ  ಬರದೇ ಇರುತ್ತದೆಯೇ .? ಸ್ತ್ರೀ ರೋಗ ತಜ್ಞೆಯರಿಗೆ ಇದು ಬರುವದು ಹೆಚ್ಚು .ಆಸ್ಪತ್ರೆಯಲ್ಲಿ ಇಂದು ಡಿಸ್ಚಾರ್ಜ್ ಆಗುವಾಗ ಸಿಹಿ ತಿಂಡಿ ಸಿಗುವುದು ಅವರಿಗೆ ಮಾತ್ರ. ಅದರಂತೆ ಅನೀರಿಕ್ಷಿತ  ರಕ್ತಸ್ರಾವ ,ಶಿಶು ವಿನ  ಅನಾರೋಗ್ಯ ಆದಾಗ ಅವರು ತೆಗೆಳಿಕೆ ಕೇಳ ಬೇಕಾಗುತ್ತದೆ . ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದು . ಇಲ್ಲಿಯ ವರೆಗೆ ಇಂದ್ರ ಚಂದ್ರ ,ಧನ್ವನ್ತರಿ ಎಂದು ಹೊಗಳುತ್ತಿದ್ದವರಿಗೆ ಇದ್ದಕ್ಕಿದ್ದಂತೆ  ವೈದ್ಯರು ರಾಕ್ಷಸರಂತೆ ಕಾಣುತ್ತಾರೆ . ಉಳಿದ ಸ್ಪೆಸಿಯಾಲಿಟಿ ಗಳಲ್ಲಿಯೂ ಇಂತಹ ಪ್ರಕರಣ ನಡೆಯುತ್ತಲಿರುತ್ತವೆ . ಕೆಲವೊಮ್ಮೆ ವೈದ್ಯರ ಕಡೆಯಿಂದ ಲೋಪ ಆಗಿರ ಬಹುದಾದರೂ , ಬಹಳ ಕಡೆ  ಅವರು ಧರ್ಮಕ್ಕೆ ಬೈಗಳು ತಿನ್ನುವರು . ವೈದ್ಯರೂ ಮನುಷ್ಯರೇ . ತಾವು ಚಿಕೆತ್ಸೆ ಮಾಡುವ ರೋಗಿಯು ನಿರೀಕ್ಷಿತ ಸ್ಪಂದನೆ ಕೊಡದಿದ್ದರೆ ಅವರ ಸ್ಟ್ರೆಸ್ ಕೂಡಾ ಹೆಚ್ಚುವದು ,ಮನಶಾಂತಿ ಕಡಿಮೆ ಆಗುವದು . 

ಕೆಲವೊಮ್ಮೆ ನಾನು ಕೆಲಸ ಮುಗಿಸಿ ಮನೆಗೆ ಹೋದಾಗ ಮುಖ ಮ್ಲಾನ ವಾಗಿ ಇರುವುದು .ಆಗ ಮನೆಯವರು  ಸಂಜೆ ಯ  ತಿಂಡಿ ಕಾಪಿ ಸರಿಯಾಗಿಲ್ಲ ಎಂದು ತಿಳಿದು ಕೊಂಡು ನಿಮಗೆ ಹೇಗೆ ಮಾಡಿ ಹಾಕಿದರೂ ಸರಿ ಆಗುವುದಿಲ್ಲ ಎನ್ನುವರು .ವಾಸ್ತವದಲ್ಲಿ ನಾನು ಆಸ್ಪತ್ರೆಯ ರೋಗಿಯ ಬಗ್ಗೆ ಚಿಂತಿಸುತ್ತ ಇರುವೆನು .ಆಸ್ಪತ್ರೆಯ ರೋಗಿಗಳ ಮಾಹಿತಿ ಮನೆಯಲ್ಲಿ ಹೇಳುವುದಿಲ್ಲ .. ಅದು ವೈದ್ಯ ನೀತಿಗೆ ವಿರುದ್ಧ

 

ಶುಕ್ರವಾರ, ಅಕ್ಟೋಬರ್ 14, 2022

ದಾನ ವಿಧಾನಗಳು

ದಾನಿಗಳಲ್ಲಿ ಹಲವು ವಿಧ .ಕೆಲವರು ತಾವು ಕೊಡುವುದು  ಕಿಂಚಿತ್ ಆದರೂ ಊರೆಲ್ಲಾ ಜಾಹೀರು ಮಾಡಿ ಜನ ತಿಳಿಯ ಬೇಕು ಎಂದು ಬಯಸುವರು . ಈಗಂತೂ ಫೋಟೋ ,ವೀಡಿಯೋ ಮತ್ತು ಪ್ಲೆಕ್ಸ್ ಗಳು ಇದಕ್ಕೆ ಸುಲಭ ಸಹಾಯ ದಾರಿಗಳು . ಇವರಲ್ಲಿ ಕೆಲವರು ದಾನ ಪುಣ್ಯವನ್ನು ಬೇರೆ ರೀತಿ ನಗದೀ ಕರಿಸುವ ಆಸೆ ಉಳ್ಳವರು . 

ಇನ್ನು ಕೆಲವರು ದೊಡ್ಡ ಮೊತ್ತದ ಸಹಾಯ ಮಾಡಿ ಪ್ರಚಾರ ಮಾಡುವರು .ತಮ್ಮಂತೆ ಉಳಿದವರೂ ಮಾಡಲಿ ಎಂಬ ಉದ್ದೇಶ ಇರಬಹುದು . ಸಾರ್ವಜನಿಕ ಹಣ ಒಂದು ಕಡೆ ಲೂಟಿ ಮಾಡಿ ಇನ್ನೊಂದು ಕಡೆ ಬಹಿರಂಗವಾಗಿ ದಾನ ಶೂರ ಎನಿಸಿ ಕೊಂದವರು ಕೂಡಾ ಸಮಾಜದಲ್ಲಿ ಸಲ್ಲುವರು .

ಇನ್ನು ಹಲವರು ತಾವು ಒಂದು ಕೈಯ್ಯಿಂದ ಕೊಟ್ಟುದು ಇನ್ನೊಂದು ಕೈಗೆ ತಿಳಿಯ ಬಾರದು ಎಂಬ ಸಿದ್ದಾಂತ ಪಾಲಿಸುವವರು . ಇಲ್ಲಿ ದಾನ ಕೊಳ್ಳುವವನ ವೈಯುಕ್ತಿಕ ಪ್ರತಿಷ್ಠೆ ಗೆ ಕುಂದು ಬರ ಬಾರದು ಎಂದ ಸದುದ್ದೇಶ ಇದೆ .

ಪ್ರೊ ಹಿರಿಯಣ್ಣ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಇದ್ದವರು .ಇವರು ತತ್ವ ಶಾಸ್ತ್ರ ತರಗತಿಗಳನ್ನೂ ತೆಗೆದು ಕೊಳ್ಳುತ್ತಿದ್ದು ಬಹಳ ಪ್ರಸಿದ್ದ ,ಅವರ ನೋಟ್ಸ್ ಗಳು ಪುಸ್ತಕ ರೂಪದಲ್ಲಿ ಬಂದಿವೆ .ಎಸ್ ರಾಧಾಕೃಷ್ಣನ್ ಅವರ ಸಮಕಾಲೀನ ರಾಗಿದ್ದವರು.

ಡಿ ವಿ ಜಿ ಯವರು  ಜ್ನಾಪಕ ಚಿತ್ರ ಶಾಲೆಯಲ್ಲಿ ಅವರ ಬಗ್ಗೆ ಹೀಗೆ ಬರೆಯುತ್ತಾರೆ .

ಹತ್ತಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ.ಅದು ಸಂತೋಷ ಪೂರ್ವಕವಾದ ಸಹಾಯ .ಆದರೆ ಒಂದು ವಿಶೇಷ .ಸಹಾಯ ತೆಗೆದು ಕೊಂಡ ಯಾರೂ ಅದನ್ನು ಮತ್ತೊಬ್ಬರಿಗೆ ಉಸುರ ಕೂಡದು .ಇದು ಕಟ್ಟಾಜ್ನೆ .ನನಗೆ ತಿಳಿದ ಒಬ್ಬ ಸಂಸ್ಕೃತ ವಿದ್ಯಾರ್ಥಿ ಎಂ ಎ ಸಂಸ್ಕೃತ ಓದುತ್ತಿದ್ದ .ಆತನ ಹೆಸರು ಹರಿ ಎಂದು ಇಟ್ಟು ಕೊಳ್ಳೋಣ .ಆತನಿಗೆ ಹಿರಿಯಣ್ಣನವರು ಗುಪ್ತವಾಗಿ ಮಾಸಾಶನ ಕೊಡುತ್ತಿದರು .ಅವನ ಸಹಪಾಠಿ ಯೊಬ್ಬ ಕಷ್ಟದಲ್ಲಿ ಇದ್ದಾಗ ಅದನ್ನು ಹರಿಯೊಡನೆ ಹೇಳಿಕೊಂಡನು .ಹರಿ ತಾನು ಹಿರಿಯಣ್ಣ ನವರಿಂದ ಪಡೆಯುತ್ತಿದ್ದ ಸಹಾಯವನ್ನು ಹೇಳಿ ಆ ಉದಾರಿಗಳನ್ನು ಆಶ್ರಯಿಸುವಂತೆ ಸಲಹೆ ಕೊಟ್ಟ .ಈ ಎರಡನೆಯ ವಿದ್ಯಾರ್ಥಿ ಹಿರಿಯಣ್ಣನವರಲ್ಲಿಗೆ ಹೋಗಿ ತನ್ನ ಕತೆಯನ್ನು ಹೇಳಿಕೊಂಡ .ಹಿರಿಯಣ್ಣನವರು ಆತನಿಗೂ ಸಹಾಯ ಕೊಡುವುದಾಗಿ ಭರವಸೆ ಕೊಟ್ಟು ಹಾಗೆಯೇ ನಡೆಸಿ ಕೊಂಡರು.

ಹರಿಗಾದರೋ ಅಂದಿನಿಂದ ಮೂರು ತಿಂಗಳ ಮಾಸಾಶನ ಕೊಡಬೇಕಾದದ್ದು ಉಳಿದಿತ್ತು .ಇನ್ನು ಮುಂದಿನ ಮೂರು ತಿಂಗಳ ಮೊಬಲಗನ್ನು ಒಟ್ಟಿಗೆ ಪೊಟ್ಟಣ ಕಟ್ಟಿ ಹರಿ ಬಂದಾಗ ಆತನ ಕೈಗೆ ಇತ್ತರು.ಆತ ಅದನ್ನು ಬಿಚ್ಚಿ ನೋಡಿ ಆಶ್ಚರ್ಯ ಸೂಚಿಸಲು ಹಿರಿಯಣ್ಣ 'ನೀವು ಈ ಸಂಗತಿಯನ್ನು ಯಾರಿಗೂ ತಿಳಿಸಬಾರದು ಎಂದು ಹೇಳಿದ್ದೆ .ನೀವು ಹೇಳಿ ಬಿಟ್ಟಿರಿ .ಒಳ್ಳೆಯದು ,ಇಲ್ಲಿಗೆ ನಾನು ಕೊಟ್ಟ ಮಾತು ನಡೆದಿದೆಯಲ್ಲಾ "ಎಂದರು .

 M. Hiriyanna.jpgBuy Outlines Of Indian Philosophy Book Online at Low Prices in India |  Outlines Of Indian Philosophy Reviews & Ratings - Amazon.in

ಗುರುವಾರ, ಅಕ್ಟೋಬರ್ 13, 2022

ಹೀರೇ ಕಾಯಿ

 Ridge gourd (Turai) - Greenoyardಮೊನ್ನೆಪೇಟೆಯಿಂದ  ಊರ ಹೀರೇ ಕಾಯಿ ತಂದಿದ್ದು ನಿನ್ನೆ ಪಲ್ಯ ಮಾಡಿದ್ದರು . ಬಹಳ ದಶಕಗಳ ನಂತರ  ಒರಿಜಿನಲ್ ಹೀರೇ ಕಾಯಿ ರುಚಿ ;ಇತ್ತೀಚೆಗೆ ಗಟ್ಟದ ಮೇಲಿನ ಮತ್ತು ಊರಿನ ಹೀರೇ ಕಾಯಿಗೆ ಕೂಡಾ ಆ ರುಚಿ ಇರಲಿಲ್ಲ . ಸಂತೋಷ ದಿಂದ  ಮನಸು ಹಿಗ್ಗಿ ಹೀರೇ ಕಾಯಿ ಆಯಿತು .ನಿಜಕ್ಕೂ ಹೀರೇ ಕಾಯಿ ಹಿಗ್ಗುವುದಿಲ್ಲ ,ಅದು ಸುಗ್ಗುವುದು (ಗಾತ್ರದಲ್ಲಿ ಕಡಿಮೆ ಆಗುವುದು ).ಒಂದು ಕಿಲೋ ಹೀರೇ ಕಾಯಿ ಗೆ ಒಂದು ಮೂರು ಮಂದಿಗೆ ಹೊತ್ತಿನ ಪಲ್ಯ ಆಗ ಬಹುದು . ಅದಕ್ಕೇ ಇರ ಬೇಕು ಮದುವೆ ಸಮಾರಂಭ ಗಳಿಗೆ ಇದರ ಪಲ್ಯ ಮಾಡುವುದು ಕಂಡಿಲ್ಲ .

ಹೀರೇ ಪದಾರ್ಥ ಮಾಡುವಾಗ ತೆಗೆದ ಸಿಪ್ಪೆಯನ್ನು ಚಟ್ನಿ ಮಾಡುತ್ತಿದ್ದರು. ನಾರಿನಿಂದ ಕೂಡಿದ ಸಿಪ್ಪೆ ಕರುಳಿನ ಆರೋಗ್ಯಕ್ಕೆ ಒಳ್ಳೆಯದು .

ಇತ್ತೀಚೆಗೆ ಊರ ಬೆಂಡೆ ಎಂದು ಮರುಕಟ್ಟೆಯಲ್ಲಿ ದುಪ್ಪಟ್ಟು ಬೆಲೆಗೆ ಸಿಗುವ ತರಕಾರಿ ನೋಡಲು ಮಾತ್ರ ದೊಡ್ಡ ದಿದ್ದು ಬಾಲ್ಯದಲ್ಲಿ ಸವಿದ ಬೆಂಡೆ ಪರಿಮಳ ಕಾಣೆ .

ಲಕ್ಷ್ಮೀಶ ತೊಲ್ಪಾಡಿ ಮೆಚ್ಚಿಗೆ ಪತ್ರ


 

ಮಂಗಳವಾರ, ಅಕ್ಟೋಬರ್ 11, 2022

ಹೀಗೊಬ್ಬ ಓದುಗ ನ ಅಭಿಪ್ರಾಯ ಇಂದ್ರ ಭವನದ ಚೌ ಚೌ ಬಾತ್ ನಂತೆ

MANGALORE : Indra Bhavan at balmatta Karnataka , Mangaluru : 21/02/2018 : Hotel Indra Bhavan in Mangaluru. Photo: H_S_ Manjunath

 

ಇಂದು  ಸಂಜೆ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂತು . ನನ್ನ ಕೃತಿ ವೈದ್ಯರ ಚೌ ಚೌ ಬಾತ್ ಓದಿ ಮುಗಿಸಿದ್ದು ,ತುಂಬಾ ಮೆಚ್ಚಿ ಕೊಂಡೆ ಎಂಬ ತಾತ್ಪರ್ಯ . ಅದರಲ್ಲಿ ಹೆಸರು ಇರದ ಕಾರಣ ಧನ್ಯವಾದ ಸಮರ್ಪಿಸಿ ಅವರ ಪರಿಚಯ ಕೇಳಿದೆ .ಕೂಡಲೇ ಫೋನ್ ಬಂದು ತಾವು ಮಂಗಳೂರು ಇಂದ್ರ ಭವನದ ಮಾಲೀಕ ಪ್ರಕಾಶ ಉಡುಪ ,ನಿಮ್ಮ ಮೊದಲ ಪುಸ್ತಕ ಕೂಡಾ ಕೊಂಡು ಓದಿ ಮೆಚ್ಚಿ ಕೊಂಡಿದ್ದೇನೆ ಎಂದರು . ನನಗೆ ಆಶ್ಚರ್ಯ ಮತ್ತು ಸಂತೋಷ ಏಕ ಕಾಲಕ್ಕೆ ಆಯಿತು . ಆಶ್ಚರ್ಯ ,ಸ್ವಯಂ ಇಂಜಿನಿಯರ್ ಆಗಿದ್ದು ತಂದೆಯವರು ಸ್ಥಾಪಿಸಿದ ಜನಪ್ರಿಯ ಹೋಟೆಲ್ ನಡೆಸುತ್ತಿರುವ ವ್ಯಕ್ತಿಗೆ ನನ್ನಂತಹ ಅಜ್ಞಾತ ನ  ಪುಸ್ತಕ ಓದಲು ಸಮಯ,ವ್ಯವಧಾನ ಮತ್ತು ಆಸಕ್ತಿ ಹೇಗೆ ಬಂತು ?ಸಂತೋಷ ನನ್ನ ಮೆಚ್ಚಿನ ಹೋಟೆಲ್ ಇಂದ್ರ ಭವನ ವರು ಎಂದು . 

ಇಂದ್ರ ಭವನ ,ವಿಶ್ವ ಭವನ ಎಲ್ಲಾ ಮಂಗಳೂರಿನ ಐಕಾನ್ ಗಳು . ವಿಶ್ವ ಭವನ ಕೂಡಾ ಅವರೇ ನಡೆಸುತ್ತಿದ್ದರು . ಅಲ್ಲಿನ ಸಜ್ಜಿಗೆ ಬಜಿಲು ,ಬನ್ಸ್ ,ತುಪ್ಪಾ ದೋಸೆ ಪ್ರಸಿದ್ಧ . ನಮ್ಮ ಕಿಸೆಗೂ ಭಾರವಾಗದ ದರ ಪಟ್ಟಿ . ಹಿಂದೆ ಕಲೆಕ್ಟರ್ ಗೇಟ್  ಜಂಕ್ಷನ್ ನಿಂದ ಸ್ವಲ್ಪ ಮುಂದೆ ರಾಜ ರಸ್ತೆ ಬದಿಯಲ್ಲಿ ಇದ್ದು , ಈಗ ಅಲ್ಲೇ ಮುಂದೆ ಆರ್ಯ ಸಮಾಜ ರಸ್ತೆ ಆರಂಭ ಆಗುವಲ್ಲಿ ಎಡ ಬದಿಯಲ್ಲಿ ಇದೆ . ಸ್ವಚ್ಛತೆ ಮತ್ತು ಸ್ವಾದ  ಎರಡು ಸಮ್ಮಿಳಿತ .  

  ನನ್ನ ಬರಹಗಳು ಸಾಹಿತ್ಯಿಕವಾಗಿ ಗುಣ ಮಟ್ಟ ದವು ಎಂಬ ನಂಬಿಕೆ ನನಗೆ ಇಲ್ಲ . ಅವು ನನ್ನ ಮನಸಿನಲ್ಲಿ ಹರಿದಾಡುವ ಯೋಚನೆಗಳ ಮೂರ್ತ ರೂಪ .ಹಿಂದೆ ನಮ್ಮ ಅಕ್ಕ ಪಕ್ಕದ ,ಗೆಳೆಯರ ,ಮತ್ತು ಕುಟುಂಬದ ಹಿರಿ ಕಿರಿಯರ ಬಳಿ ಹಂಚಿ ಕೊಳ್ಳುತ್ತಿದ್ದಂತಹ  ,ಮೆಲುಕು ಹಾಕಿ ಕೊಳ್ಳುತ್ತಿದ್ದಂತ ವಿಷಯಗಳು  .ಈಗ ಅದನ್ನು ಯಾರಲ್ಲಿ ಹೇಳಲಿ ?ಅದಕ್ಕೆ ಬರೆಯುತ್ತಿದ್ದೇನೆ .  ಅಪರಿಚಿತ ಮತ್ತು ಪರಿಚಿತರು ಮೆಚ್ಚುಗೆ ಸೂಚಿಸಿದಾಗ ಸಂತೋಷ ಆಗುತ್ತದೆ . ಮೊನ್ನೆ ಶನಿವಾರ ಬೆಂಗಳೂರಿಗೆ ರೈಲು ಹಿಡಿಯಲು ಪುತ್ತೂರು ರೈಲ್ವೆ ನಿಲ್ದಾಣ ದಲ್ಲಿ ಕಾಯುತ್ತಿದ್ದಾಗ ಪ್ರಗತಿ ಪರ ಕೃಷಿಕ ಮುಳಿಯ ವೆಂಕಟ ಕೃಷ್ಣ ಶರ್ಮ ಬಹಳ ಹೊತ್ತು ಕೃತಿಯಲ್ಲಿ ತಾನು ಮೆಚ್ಚಿದ ಅಂಶಗಳನ್ನು ಫೋನ್ ಮಾಡಿ ತಿಳಿಸಿ ಸಂತಸ ವ್ಯಕ್ತ ಪಡಿಸಿದರು . ನನ್ನ ಮಗ ಸೊಸೆ ಬೆಂಗಳೂರಿಗೆ ತಲುಪಿದ್ದು ,ಅವರನ್ನು ಮತ್ತು ನಮ್ಮ ಪುಟ್ಟ ಮೊಮ್ಮಗನನ್ನು ಮಾತನಾಡಿಸಿ ಸೋಮವಾರ ಪುನಃ ಆಸ್ಪತ್ರೆ ಕೆಲಸಕ್ಕೆ ಹಾಜರ್ ಆಗಿದ್ದೇನೆ
 

ಶನಿವಾರ, ಅಕ್ಟೋಬರ್ 8, 2022

ಡಾ ಒ ಪಿ ಕಪೂರ್

 Dr. Om Prakash Kapoor (Dr. O P Kapoor's Clinic) - General Physician Doctors  - Book Appointment Online - General Physician Doctors in Fort, Mumbai -  JustDial

ಹುಟ್ಟು ಅಧ್ಯಾಪಕರು ಎಂಬ ಮಾತಿದೆ .  Born teacher ಅನ್ನುತ್ತಾರೆ . ಇವರು born to be teachers ಕೂಡಾ ಆಗಿರುತ್ತಾರೆ .ಕೆ ಎಂ ಸಿ ಹುಬ್ಬಳ್ಳಿಯಲ್ಲಿ  ಡಾ ನಾರಾಯಣ ಶೆಟ್ಟಿ ,ಕೌಲ್ಗುಡ್ ಸಹೋದರರು ,ಡಾ ಕೆ ಜಿ ನಾಯಕ್ ,ಡಾ ಗಿರಿ ಗೌಡ   ,ಮುಂದೆ ಚೆನ್ನೈ ಯಲ್ಲಿ ಡಾ ಕೆ ವಿ ತಿರುವೆಂಗಡಂ ,ಡಾ ಎಂ ಕೆ ಮಣಿ ,ಡಾ ಸೇತುರಾಮನ್ ಮುಂತಾದ ನನ್ನ ಗುರುಗಳು ಈ ಸಾಲಿಗೆ ಸೇರಿದವರು  . ಕೊನೆಯ ಮೂವರು  ಮೆಡಿಕಲ್ ಕಾಲೇಜು ನಿಂದ ನಿವೃತ್ತಿ ಬಳಿಕವೂ  ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪಾಠ ಮಾಡುತ್ತಿದ್ದು  ನಗರದ ಯಾವುದೇ ವಿದ್ಯಾರ್ಥಿ ಅವರ ತರಗತಿಗಳಿಗೆ ಹಾಜರಾಗ ಬಹುದಿತ್ತು . ಇವರ  ಇಂತಹ ತರಗತಿಗಳಿಗೆ ಹಾಜರಾಗುವ ಭಾಗ್ಯ ನನಗೆ ದೊರೆತಿತ್ತು . 

ಇಂತದೇ ಒಬ್ಬ ವೈದ್ಯ ಗುರು ಮೊನ್ನೆ ನಿಧನರಾದ ಡಾ ಓ ಪಿ ಕಪೂರ್ ಅವರು . ಮುಂಬೈಯ ಗ್ರಾಂಟ್ ಮೆಡಿಕಲ್ ಕಾಲೇಜ ನಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ,ಬಾಂಬೆ ಆಸ್ಪತ್ತೆಯ ಬಿರ್ಲಾ ಮಾತೋಶ್ರೀ ಸಭಾಗೃಹದಲ್ಲಿ ನಿಯತವಾಗಿ ಆಸಕ್ತ ವೈದ್ಯರಿಗಾಗಿ ಉಚಿತ ಉಪನ್ಯಾಸ ನಡೆಸುತ್ತಿದ್ದು ಯಾವಾಗಲೂ ಕಿಕ್ಕಿರಿದು ತುಂಬಿರುತ್ತಿತ್ತು . ಯಾವುದೇ ಕ್ಲಿಷ್ಟ ವಿಷಯವನ್ನು ಸರಳವಾಗಿ ತಿಳಿ ಹೇಳುವುದು ಅವರಿಗೆ ಕರತಾ ಮಲಕ ಆಗಿತ್ತು .ಮುಂಬೈಯಲ್ಲಿ ಬೇರೊಂದು ತರಬೇತಿಗೆ ಎರಡು ತಿಂಗಳಿಗೆ ಹೋಗಿದ್ದ ನಾನು ಇವರ ಕ್ಲಾಸ್ ಗಳಿಗೆ ಹೋಗಿ ಬಹಳ  ಕಲಿತಿರುವೆನು . 

 ಕೊರೊನ  ಸಮಯದಲ್ಲಿ ಯು ಟ್ಯೂಬ್ ಮೂಲಕ ತಮ್ಮ ಪ್ರವಚನ ಮುಂದುವರಿಸಿದ್ದ ಇವರ ವಿಡಿಯೋ ಗಳನ್ನೂ ಸಾವಿರಾರು ಮಂದಿ ವೀಕ್ಷಿಸಿದ್ದಾರೆ .ಇವರ ಓ ಪಿ ಕಪೂರ್ ಗೈಡ್ ಫಾರ್ ಜನರಲ್ ಪ್ರಾಕ್ಟಿಷನೆರ್ ಬಹು ಉಪಯುಕ್ತ ಮತ್ತು ಜನಪ್ರಿಯ . 

ಮಂಗಳೂರಿನಲ್ಲಿ ಸರ್ಜರಿ ಪ್ರಾಧ್ಯಾಪಕ ರಾಗಿದ್ದ  ಡಾ ಸಿ ಆರ್ ಬಲ್ಲಾಳ್ ಕೂಡಾ ಈ ವರ್ಗಕ್ಕೆ ಸೇರಿದ ಒಬ್ಬ ವೈದ್ಯ ಗುರು . ವಿದ್ಯಾರ್ಥಿ ಗಳು ಇದ್ದಲ್ಲಿ ಪಾಠ ಮಾಡಲು ಎವರ್ ರೆಡಿ . 

 Kapoor's Guide for General Practitioners (12 Volume Set) By Kapoor

ಮಂಗಳವಾರ, ಅಕ್ಟೋಬರ್ 4, 2022

ಪುತ್ತೂರಿನ ರೋಟರಿ ಭೀಷ್ಮ ಪಿತಾಮಹ

 ಪುತ್ತೂರಿನಲ್ಲಿ ಒಬ್ಬರು ಹಿರಿಯರು ಇದ್ದಾರೆ . ಪೇಟೆಯ ರಸ್ತೆಯ ಬದಿಯ ಉದ್ದಕ್ಕೂ ಒಂದು ದೊಡ್ಡ ಕೊಡೆ ಹಿಡಿದು ಕೊಂಡು ಸ್ವಲ್ಪ ಮುಂದಕ್ಕೆ ಬಾಗಿ ನಡೆಯುತ್ತಿರುವ ದೃಶ್ಯ ಸಾಮಾನ್ಯ . ಅಕ್ಕ ಪಕ್ಕದ ಅಂಗಡಿಯವರು ಎಲ್ಲರೂ ಇವರಿಗೆ ಪರಿಚಿತರು . ಎಲ್ಲರ ವಂದನೆಗೂ ಒಂದು ಪ್ರತಿ ವಂದನೆ . 

ಇವರು ಸಾಮಾನ್ಯ ವ್ಯಕ್ತಿಯಲ್ಲ .ಪುತ್ತೂರಿನ ಅಡ್ಯ ವರ್ತಕ ಕುಟುಂಬಕ್ಕೆ ಸೇರಿದವರು ,ಪುಣ್ಯವಂತರು . ಮೊದಲ ನೋಡುಗರಿಗೆ ಅದು ಅಚ್ಚರಿ ಉಂಟು ಮಾಡ ಬಹುದಾದಷ್ಟು ಸರಳತೆ ಮತ್ತು ಆತ್ಮೀಯತೆ . ಇವರೇ ಶ್ರೀ ಕೆ ಆರ್ ಶೆಣಾಯ್ ಅಥವಾ ಕೆ ರತ್ನಾಕರ ಶೆಣಾಯ್ .  ಮೊದಲ ಸಾಲಿನ ವಾಣಿಜ್ಯೋದ್ಯಮಿ ಆಗಿದ್ದವರು . ಈಗ ಮಕ್ಕಳಿಗೆ ಬಿಟ್ಟಿರುವ ಇವರು ಪೂರ್ಣಕಾಲಿಕ ಸಮಾಜ ಕೈಂಕರ್ಯ ದಲ್ಲಿ ತೊಡಗಿರುವರು . ವಾಣಿಜ್ಯ ಸಂಘದ ಸಕ್ರಿಯ ಪದಾಧಿಕಾರಿ ಆಗಿದ್ದ ಇವರು ಈಗಲೂ ಸಣ್ಣ ದೊಡ್ಡ ಎಂದು ಭೇದ ಇಲ್ಲದೆ ಯಾರಾದರೂ ವರ್ತಕರು ,ಉದ್ದಿಮೆದಾರರು ಅನಾರೋಗ್ಯ ಇತ್ಯಾದಿ ಸಂಕಷ್ಟಕ್ಕೆ ಒಳಗಾದಾಗ ಕರೆಯದೇ ಹೋಗಿ ಅವರಿಗೆ ಸ್ಥೈರ್ಯ ತುಂಬಿ ತಮ್ಮಿಂದ ಆದ ಸಹಾಯ ಮಾಡುವರು . ನನ್ನ ಬಳಿ ಇಂತಹ ಮಿತ್ರರ ರೋಗ ಸ್ಥಿತಿಯ ಬಗ್ಗೆ ಮಾಹಿತಿ ತಿಳಿದು ಕೊಂಡದ್ದು ಇದೆ . 

         ಇನ್ನು ಇವರು ಬಹಳ ಪ್ರಸಿದ್ಧರಾಗಿರುವುದು ರೋಟರಿ ಚಳುವಳಿಯಲ್ಲಿ . ಪುತ್ತೂರಿನ ಆದ್ಯ ರೋಟರಿ ಕ್ಲಬ್ಬಿನ ಪ್ರವರ್ತಕರು ಆಗಿರುವ ಇವರ ಕಾರ್ಯಕ್ಷಮತೆ ಮತ್ತು ಸಂಘಟಕ ಶಕ್ತಿ ಒಂದು ವಿಸ್ಮಯ .ಇಂದು ಪುತ್ತೂರಿನಲ್ಲಿ ಏಳು ರೋಟರಿ ಕ್ಲಬ್ ಗಳು ಇವೆಯಂತೆ . ಎಲ್ಲಾ ರಂಗದ ಯುವಕರನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಇವರ ವಿಶೇಷ ಗುಣ . ತಮ್ಮ ತರುಣದಲ್ಲಿ ಜೇಸಿಸ್ ಸಂಘಟನೆಯಲ್ಲಿಯೂ ಇದೇ ಛಾಪು ಮೂಡಿಸಿದ್ದರಂತೆ ..ತಮ್ಮ ಮಾತೃ ಕ್ಲಬ್ ಅಲ್ಲದೆ ಪುತ್ತೂರು ಮತ್ತು ಅಕ್ಕ ಪಕ್ಕದ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಇವರು ಹಾಜರು .ಪುತ್ತೂರಿನ ಮಟ್ಟಿಗೆ ಇವರು ರೋಟರಿ ಪಿತಾಮಹ . 

ನಾನು ಇವರಿಗೆ ವಿಶೇಷ ಉಪಚಾರ ಏನೂ ಮಾಡಿದವನಲ್ಲ.ರೋಟರಿಯನ್ ಕೂಡಾ ಅಲ್ಲ .ಆದರೂ ಮೊನ್ನೆ ನಾನು ಸ್ವಲ್ಪ ಅಸೌಖ್ಯದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಬಂದು ಯೋಗ ಕ್ಷೇಮ ವಿಚಾರಿದ್ದು ಅವರ ಹೃದಯ ವೈಶಾಲ್ಯ ದ ಸೂಚಕ . ವಸುದೈವ ಕುಟುಂಬಕಂ ಮತ್ತು ಸರ್ವೇ ಜನಾಃ ಸುಖಿನೊನೋಭವಂತು ಅಕ್ಶರಶಃ ಇವರ ವೇದ ವಾಕ್ಯ . 

ಇವರ ಪತ್ನಿ  ಶ್ರೀಮತಿ ರತಿ  ಶೆಣಾಯ್ ಅವರು ಪತಿಗೆ ಅನುರೂಪ .ಸದಾ ಮುಖದಲ್ಲಿ ಮಾಸದ ನಗು . ಮನೆಗೆ ಬಂದ ಅತಿಥಿಗಳಿಗೆ ಆದರದ ಆತಿಥ್ಯ . ಈ ದಂಪತಿ ಹೀಗೇ ಒಳ್ಳೆಯ ಅರೋಗ್ಯ  ಮತ್ತು ಶಾಂತಿಯಿಂದ ಬಾಳಿ ನಮಗೆಲ್ಲಾ ಮಾರ್ಗ ದರ್ಶನ ಮಾಡುತ್ತಲಿರಲಿ . 



 

ಸೋಮವಾರ, ಅಕ್ಟೋಬರ್ 3, 2022

ರಕ್ಷಣಾತ್ಮಕ ವೈದ್ಯಕೀಯ ಸೇವೆ

 ವೈದ್ಯಕೀಯ ಸೇವೆ ಸಂಧಿಕಾಲದಲ್ಲಿ ಇದೆ . ವೈದ್ಯ ರೋಗಿ ಸಂಬಂಧ ಶಿಥಿಲ ಗೊಂಡಿದೆ . ವೈದ್ಯರೂ ಕೂಡಾ ಹಲವು ಸ್ಪೆಷ್ಯಾಲಿಟಿ ,ಸೂಪರ್ ಸ್ಪೆಷ್ಯಾಲಿಟಿ ಗಳಲ್ಲಿ ಹಂಚಿ ಹೋಗಿ ,ಒಬ್ಬ ವ್ಯಕ್ತಿ ಒಬ್ಬ ಮನುಷ್ಯನಾಗಿ ಕಾಣದೆ ಹಲವು ಅಂಗಗಳ ಒಕ್ಕೂಟ ವಾಗಿ ಬಿಟ್ಟಿದ್ದಾನೆ . ನಮ್ಮ ಕುಟುಂಬದ ,ಅರೋಗ್ಯ ಮತ್ತು ಆರ್ಥಿಕ ಸಾಮಾಜಿಕ ಹಿನ್ನಲೆ ಬಲ್ಲ ಕುಟುಂಬ ವೈದ್ಯರು ಅಪರೂಪ ಆಗಿದ್ದರೆ ,ಇದ್ದರೂ ನೇರವಾಗಿ ಎಲ್ಲರೂ ಸ್ಪೆಷಲಿಸ್ಟ್ ಬಳಿ ಓಡುವರು . ಹೋಗುವುದಕ್ಕೂ ಮೊದಲೇ ತಾವೇ ಸ್ವಯಂ ವೈದ್ಯ ಮಾಡಿರುವರು . 

ವೈದ್ಯರ ಸೇವೆ ಕೂಡಾ ಒಂದು ವಾಣಿಜ್ಯ ಸೇವೆ ಆಗಿದ್ದು ಗ್ರಾಹಕ ಕಾನೂನುಗಳಿಗೆ ಒಳಪಡುವದು . ಚಿಕಿತ್ಸೆಯ ಪರಿಣಾಮದಲ್ಲಿ ಸಣ್ಣ ಪುಟ್ಟ ಏರು ಪೇರು  ಆದರೂ ನ್ಯಾಯಾಲಯದ ಕಟಕಟೆ ಏರುವ ಅಭ್ಯಾಸ ಆರಂಭ ಆಗಿದೆ .ಅದನ್ನು ವಿರೋಧಿಸುತ್ತಿಲ್ಲ ,ಅವರ ಹಕ್ಕು . ಇದರ ನಾರಾಯಣ ಹರಿ ಎಂದು ಕರೆಯುತ್ತಿದ್ದ ವೈದ್ಯರು ಹಠಾತ್  ವೈರಿಗಳಾಗಿ ,ದನುಜರಂತೆ ಕಾಣುವರು .ಅವರ ಮೇಲೆ ದೈಹಿಕ ಹಲ್ಲೆ ಕೂಡಾ ನಡೆಯುವುದು . 

ಇವುಗಳ ಅಡ್ಡ ಪರಿಣಾಮ ರಕ್ಷಣಾತ್ಮಕ ವೈದ್ಯಕೀಯ ಸೇವೆ .ಮೊದಲು ರೋಗಿ ಕಾಯಿಲೆಯಿಂದ ಬಂದೊಡನೆ ವೈದ್ಯರು ಅವನನ್ನು ಎಷ್ಟು ಬೇಗ ಗುಣ ಪಡಿಸುವುದು ಅಥವಾ ಬದುಕಿಸುವುದು ಎಂಬ ಚಿಂತನೆ ಮಾತ್ರ ಮಾಡುತ್ತಿದ್ದರು .ಬೇರೆಲ್ಲಾ ಗೌಣ . ಈಗ ಹಾಗಲ್ಲ ; ಮುಂದೆ ತನ್ನ ಮೇಲೆ ಬರ ಬಹುದಾದ ಸಂಭಾವಿತ ಅರೋಪಗಳನ್ನು ಹೇಗೆ ತಡೆಗಟ್ಟುವುದು ಎಂಬ ಯೋಚನೆ ,ರೋಗಿಯ ಪರೀಕ್ಷೆ ಮಾಡುವಾಗ ಸಮಾನಾಂತರ ವಾಗಿ ಬರುತ್ತದೆ . ಇದರಿಂದ ಸಣ್ಣ ವೈರಲ್ ಕಾಯಿಲೆಗೂ ಹಲವು ರಕ್ತ ಪರೀಕ್ಷೆ ,ಎಕ್ಷ ರೇ ಸ್ಕ್ಯಾನ್ ಇತ್ಯಾದಿ ಮಾಡುವರು . ಗರ್ಭಿಣಿಯರಲ್ಲಿ ಸಾಮಾನ್ಯ ಹೆರಿಗೆ ಆಗಲಿ ಎಂದು ಕಾದು ಏನಾದರೂ ತೊಂದರೆ ಆದರೆ ಎಂದು ಸಣ್ಣ ಏರು ಪೇರು ಇದ್ದರೂ  ಸಿಸೇರಿಯನ್ ಮಾಡುವರು .  ವೈದ್ಯರು ಎಲ್ಲರಿಗೂ ಸಿಸೇರಿಯನ್ ಮಾಡುವರು ಎಂದು ಆರೋಪಿಸುವರು ಅದನ್ನು ತಡಮಾಡಿ ತಾಯಿ ಮಗುವಿಗೆ ತೊಂದರೆ ಆದರೆ ತಾವೇ ಮೊದಲಾಗಿ ವೈದ್ಯರನ್ನು ದೂಷಿಸುವರು . 

ಈ ವಿಶ್ವಾಸ ಕೊರತೆಯ ಪರಿಣಾಮ . 

ವೈದ್ಯರು ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ .ಒತ್ತಡ ದಲ್ಲಿ ಕೆಲಸ ಮಾಡುವಾಗ ನಮ್ಮ ಕಾರ್ಯ ಕ್ಷಮತೆ ಕಡಿಮೆ ಆಗುವುದು . ವೈದ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುವುದು . 

ಪುತ್ತೂರಿನಂತಹ ಊರಿನಲ್ಲಿ ಚಿಕಿತ್ಸೆ ಮಾಡ ಬಹುದಾದಂತಹ ಕಾಯಿಲೆಗಳ ರೋಗಿಗಳನ್ನು ಮಂಗಳೂರಿಗೆ ಕಳುಹಿಸ ಬೇಕಾಗುತ್ತ್ತದೆ . ಇಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೆ ಮೊದಲೇ ಕಳುಹಿಸಲಿಲ್ಲ ಏಕೆ ಎಂಬ ಪ್ರಶ್ನೆ ಬರುತ್ತದೆ .ಈ ಹೆಚ್ಚು ಕಮ್ಮಿ ಮಂಗಳೂರಿನಲ್ಲೂ ಆಗಬಹುದು . ಇದರಿಂದ ಸಂಬಂಧಿಕರಿಗೆ ಕಷ್ಟ ,ವೆಚ್ಚ ಅಧಿಕ ವಾಗುವದು . 

ರೋಗ ಪತ್ತೆಗೆ ನೇರವಾಗಿ ಬೇಕಾದ ಪರೀಕ್ಷಣಗಳಲ್ಲದೆ ಇನ್ನೂ ಹಲವು ಮಾಡ ಬೇಕಾಗಿ ಬಂದು ರೋಗಿಯ ಬಿಲ್ಲಿಗೆ ಇದು ಸೇರುವದು .ಇನ್ನು ಜಾಲ ತಾಣಗಳನ್ನು ನೋಡಿ ರೋಗಿಗಳೇ ಕೆಲವು ಪರೀಕ್ಷೆಗಳನ್ನು ಮಾಡುವಂತೆ ಹೇಳುವರು .  ಬಿಲ್ ಹೆಚ್ಚಾದಂತೆ ರೋಗಿ ಮತ್ತು ಸಂಬಂದಿಕರ ಅಸಮಾಧಾನ ಇನ್ನೂ ಹೆಚ್ಚುವುದು . 

ಈ ಪರಿಸ್ಥಿತಿ ನಿರ್ಮಾಣವಾಗಲು ರೋಗಿ ,ವೈದ್ಯ ,ಸಮಾಜ ಮತ್ತು ಸರಕಾರ ಎಲ್ಲರೂ ತಮ್ಮ ತಮ್ಮ ಕೊಡುಗೆ ನೀಡಿದ್ದಾರೆ .ಇದನ್ನು ಸರಿಪಡಿಸುವದು ಹೇಗೆ ಎಂಬುದೇ ಚಿಂತೆ

ಬಯಲಾಟ

 ಹಿಂದೆ ಯಕ್ಷಗಾನ ಬಯಲಾಟವೇ ಹಳ್ಳಿಯವರಿಗೆ ಮನೋರಂಜನೆ . ವಿಟ್ಲ ಪುತ್ತೂರು ಜಾತ್ರೆಗೆ ಹೋದಾಗ ಟಿಕೆಟ್ ಸಿಕ್ಕಿದರೆ ಆಟ ನೋಡುವುದು ಇತ್ತು . ವಿಟ್ಲ ಜಾತ್ರೆಗೆ ಶಾಲೆಗೆ ರಜೆ ಇದ್ದು ಪುತ್ತೂರು ಜಾತ್ರೆ ದೊಡ್ಡ ರಜೆಯಲ್ಲಿಯೇ ಬರುವುದರಿಂದ ಶಾಲೆ ಹಾಜರಿಗೆ ತೊಂದರೆ ಆಗುತ್ತಿರಲಿಲ್ಲ . ಪುತ್ತೂರು ಜಾತ್ರೆಗೆ ಆರೇಳು ಮೇಳಗಳ ಆಟಗಳು ಬರುತ್ತಿದ್ದವು . ಸಂಜೆ ಜಾತ್ರೆಗೆ ಬಂದವರಿಗೆ ವಾಪಸು ಹೋಗಲು ಬಸ್ ಮರುದಿನವೇ ಆದುದರಿಂದ ರಾತ್ರಿ ಕಳೆಯಲು ಒಳ್ಳೆಯ ಮಾರ್ಗ .ಈಗಿನಂತೆ ಸ್ವಂತ ವಾಹನಗಲ್ಲಿ ಬಂದು ಹೋಗುವವವರು ಬೆರಳೆಣಿಕೆ ಯಲ್ಲಿ ಇದ್ದರು . 

     ಇನ್ನು ನಮ್ಮ ಮನೆ ಪಕ್ಕ ಬೈರಿಕಟ್ಟೆ ಯಲ್ಲಿ ವರ್ಷಕ್ಕೆ ಒಂದೋ ಎರಡೋ ಆಟಗಳು ಬರುತ್ತಿದ್ದವು . ಕನ್ಯಾನದಲ್ಲಿ ಹೆಚ್ಚು ಬರುತ್ತಿದ್ದರೂ ಹೋದದ್ದು ಕಡಿಮೆ .  

ಪುರಾಣದ ಕತೆಗಳನ್ನು  ನಮ್ಮ ಅಜ್ಜ ರಂಜಿಸಿ ಹೇಳುತ್ತಿದ್ದರಿಂದ ಮಹಾಭಾರತ ದ ಕತೆ ಚೆನ್ನಾಗಿ ತಿಳಿದಿತ್ತು ,ರಾಮಾಯಣ ಕತೆ ಯಾಕೋ ಅಜ್ಜ ಹೇಳುತ್ತಿದುದು ಕಡಿಮೆ .ಆದರೆ ಶಾಲೆಯಲ್ಲಿ ಅಧ್ಯಾಪಕರಿಂದ ಮತ್ತು ಚಂದಮಾಮ ಇತ್ಯಾದಿ ಓದಿ ಅದರ ಜ್ಞಾನವೂ ಇತ್ತು . ಪುರಾಣ ಪಾತ್ರಗಳು ಮೈವೆತ್ತು ಬರುವ   ಯಕ್ಷಗಾನ ನಮಗೆಲ್ಲಾ ವಿಶೇಷ ಆನಂದಾನುಭವ . 

ಸರಿ ಆಟ ಇರುವ ದಿನ ಸಂಜೆ ಆರೇಳು ಗಂಟೆಗೆಲ್ಲಾ ಚೆಂಡೆ ಶಬ್ದ ಕೇಳ ತೊಡಗಿ ,ನಮ್ಮ ರಕ್ತದಲ್ಲಿ ಎಡ್ರಿನಾಲಿನ್ ಹರಿವು ಏರುವುದು ,ಮನಸ್ಸಿನಲ್ಲಿಯೇ ರಿಂಗಣ ಕುಣಿಯುವುದು . ಚಿಕ್ಕಪ್ಪ ಹಣ ಸ್ಯಾಂಕ್ಷನ್ ಮಾಡುವರು .ನಮಗೆಲ್ಲಾ ತಲೆಗೆ ತಲಾ ಒಂದು ರೂಪಾಯಿ . ಅದರಲ್ಲಿ ನೆಲ ಟಿಕೆಟ್ ಗೆ ಎಂಟಾಣೆ ,ಉಳಿದದ್ದು  ನೆಲಕಡಲೆ ,ಕಟ್ಲಿಸ್ ಇತ್ಯಾದಿ ಕೊಂಡು ತಿನ್ನಲು .ಎಲ್ಲರ ಮೊತ್ತದ ಹಣ ಅಣ್ಣ ಗಣಪತಿ ಬಳಿ ,ಅವನು ಕೊಟ್ಟ ಮೇಲೆ ನಮಗೆ . ರಾತ್ರಿ ಬೇಗ ಊಟ ಮಾಡಿ ಸೂಟೆ ಬೆಳಕಿನಲ್ಲಿ ಗುಡ್ಡದ ದಾರಿಯಲ್ಲಿ ಬೈರಿಕಟ್ಟೆಗೆ .(ಒಂದು ಮೈಲು ದಾರಿ )  ದಾರಿಯುದ್ದಕ್ಕೂ ಎಂಟಾಣೆಯಲ್ಲಿ ಏನೆಲ್ಲಾ ಕೊಳ್ಳಬಹುದು ಎಂಬ ಲೆಕ್ಕಾಚಾರ .ಆಟದ ಟೆಂಟಿನ ಹೊರಗೆ ಕಡಲೆ ,ಚಿಕ್ಕಿ ,ಚಹಾ ಸೋಜಿ ,ನೀರುಳ್ಳಿ ಬಜೆ ಅಂಗಡಿಗಳು ಸಾಮಾನ್ಯವಾಗಿ ಇರುವವು . 

ಟೆಂಟಿನ ಒಳಗೆ  ಈಸಿ ಚೇರ್ ಎಕ್ಸಿ ಕ್ಯುಟಿವ್ ಕ್ಲಾಸ್ ,ಪುಣ್ಯವಂತರಿಗೆ . ನಮಗೆ ಅವರಲ್ಲಿ ಅಸೂಯೆ ಇರಲಿಲ್ಲ ,ಅದರ ಹಿಂದೆ ಪ್ಲಾಸ್ಟಿಕ್ ಕುರ್ಚಿ ಮತ್ತು ಕೊನೆಯಲ್ಲಿ ಬೆಂಚ್ . ರಂಗಸ್ಥಳದ ಇಕ್ಕಡೆಯಲ್ಲಿ" ನೆಲ  "ಕ್ಲಾಸ್ . ಬಲಬದಿಯಲ್ಲಿ ಸ್ತ್ರೀಯರು ,ಎಡಬದಿ ಪುರುಷರು .ನಾವು ಮಕ್ಕಳು ಎಲ್ಲಿ ಬೇಕಾದರೂ ಹೋಗ ಬಹುದು . ನೆಲ ಕ್ಲಾಸ್ ರಂಗಸ್ಥಳಕ್ಕೆ ಹತ್ತಿರ ಇದ್ದುದರಿಂದ ವೇಷಗಳನ್ನು  ಸಮೀಪದಿಂದ ನೋಡ ಬಹುದು . ಹಾಸ್ಯಗಾರರು ನಮ್ಮನ್ನು ಸಂದರ್ಭ ಬಂದಾಗ ಮಾತನಾಡಿಸುವರು .ಕಿಷ್ಕಿಂದಾ ಕಾಂಡದ ಕತೆ ಇದ್ದರೆ ನಮ್ಮನ್ನು ತೋರಿಸಿ ನೋಡಲ್ಲಿ ಕೆಲವು ಮರಿ ಕಪಿಗಳು ನಿದ್ದಿಸುತ್ತಿವೆ ,ಇನ್ನು ಕೆಲವು ಬಾಯಲ್ಲಿ ಏನೋ ಜಗಿಯುತ್ತಿವೆ ಎನ್ನುವರು .ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ತ್ಯಾಂಪ ಪೂಜಾರಿ  ,ಅಣ್ಣು ಮೂಲ್ಯ ಎಲ್ಲಾ ನಮ್ಮ ಪಕ್ಕದಲ್ಲಿಯೇ ಇದ್ದು ಕುಣಿತದ ವೇಷ ಬಂದಾಗ ನಿದ್ದೆಗೆ ಜಾರಿದ್ದ ನಮ್ಮನ್ನು ಅಣ್ಣೆರೆ ಲಕ್ಲೇ ಎಂದು ಏಳಿಸುವರು . ಯುದ್ಧದ ಸೀನು ,ಹಾಸ್ಯಗಾರರ ಕುಣಿತ ನಮಗೆ ಅಪ್ಯಾಯಮಾನ .ಶೃಂಗಾರ ರಸದ ರುಚಿ ಬರುವ ಪ್ರಾಯ ಅಲ್ಲ . ನಮ್ಮ ಅಕ್ಕ ಪಕ್ಕದ ಹಿರಿಯರು ಅದನ್ನು ಆಸ್ವಾದಿಸುತ್ತಿರುವಾಗ ನಾವು ನಿದ್ದೆಗೆ ಜಾರುತ್ತಿದ್ದೆವು . ನೆಲ ಕ್ಲಾಸ್ ಜಾತಿ ,ಅಂತಸ್ತು ಗಳನ್ನು  ಸಮಾನ ಮಾಡುವ ಸ್ಟಳ ..ಇಲ್ಲಿಯ ಪ್ರೇಕ್ಷಕರೇ ನಿಜ ಕಲೆಯ ಆಸ್ವಾದಕರು . ನಮ್ಮ ಹಳ್ಳಿಯ ನಿರಕ್ಷರಕುಕ್ಷಿಗಳು ಕೂಡಾ ಪುರಾಣ ಕತೆಗಳನ್ನು ಅರಿತವರಾಗಿ ಸಮಯೋಚಿತವಾಗಿ ಅದನ್ನು ಮಾತಿನಲ್ಲಿ ಉಪಯೋಗಿಸುವರು . "ರಾಮ ದೇವೇರೆ ಕಾಡುಗು ಪೋವೊ ಡಾಂಡು ,ನಮ್ಮವು ಎಂಚಿನ ಲೆಕ್ಕ 'ಇತ್ಯಾದಿ . 

ಹೀಗೆ  ಬೇರೆಯೇ ಲೋಕದಲ್ಲಿ ವಿವಾಹಿರಿಸುತ್ತಿದ್ದ ನಾವು ಬೆಳಗು ಹರಿದು ಮಂಗಳ ಹಾಡಿದ ಮೇಲೆ ಹೊರ ಬಂದಾಗ ವಾಸ್ತವ ಲೋಕಕ್ಕೆ ಬರುತ್ತಿದ್ದೆವು . ಬೀಡಿ ಪರಿಮಳವನ್ನು ನಮ್ಮ ಉಡುಪುಗಳಲ್ಲಿ ಸೇರಿಸಿ ,ಪಾತ್ರ ವಿಮರ್ಶೆ ಮಾಡಿಕೊಂಡು ಮನೆಯ ಕಡೆಗೆ . 

ನಡೆ ನುಡಿ ನಿದ್ದೆ ಕೆಟ್ಟವರ ಹಾಗೆ ಇದ್ದೆರೆ 'ನೀನೇನು ಆಟಕ್ಕೆ ಹೋದವರ ಹಾಗೆ ಮಾಡುತ್ತಿ 'ಎಂದು ಕೇಳುವ ಕ್ರಮ ಇದೆ .

File:Yakshagana1.jpg - Wikimedia Commons

 

ಭಾನುವಾರ, ಅಕ್ಟೋಬರ್ 2, 2022

ಎರಡು ಮಡಿಗಳು (ಇಮ್ಮಡಿ )

ನಮ್ಮ ಆಪರೇಷನ್ ಥೇಟರ್ ಗಳಲ್ಲಿ ಮಡಿವಂತಿಕೆ ಕಟ್ಟು ನಿಟ್ಟು . ಕೈಯನ್ನು ತೋಳಿನ ವರೆಗೆ ಹಲವು ಬಾರಿ ಸೋಪ್ ಹಾಕಿ ತೊಳೆದು ಪ್ರೆಷರ್ ಕುಕ್ಕರ್ ನಂತಹ ಆಟೋಕ್ಲೇವ್ ನಲ್ಲಿ ಶುದ್ದೀಕರಿಸಿದ  ಓ ಟಿ ಡ್ರೆಸ್  ಗೌನ್ ಹಾಕಿ ,ಕೈಗೆ ಗ್ಲೋವ್ ಹಾಕಿದ ಮೇಲೆ ಆಕಡೆ ಈ ಕಡೆ ಮುಟ್ಟುವಂತೆ ಇಲ್ಲ . ಬೆನ್ನು ತುರಿಸಲು ಅಥವಾ ಹಣೆ ಬೆವರು ಒರೆಸಲು ಸಹಾಯಕರ ಸಹಾಯ ಬೇಕು . ವಿದ್ಯಾರ್ಥಿ ಜೀವನದಲ್ಲಿ ಮೊದಲ ಬಾರಿ ನಿರೀಕ್ಷಕರಾಗಿ ಓ ಟಿ ಗೆ ಹೋದಾಗ ಸರ್ಜನ್ ನ ಕೈ ತಪ್ಪಿ ಕೆಳಗೆ ಬಿದ್ದ  ಉಪಕರಣ ಹೆಕ್ಕಿ ಕೊಡಲು ಹೋಗಿ ಬೈಗಳು ತಿಂದದ್ದು ಇದೆ . ಓ ಟಿ ಸಿಸ್ಟೆರ್ ಉಪಯೋಗಿಸಿದ ಉಪಕರಣ ಮತ್ತು  ಗಾಸ್ ಪೀಸ್ ಎಂದು ಕರೆಯಲ್ಪಡುವ ಬಟ್ಟೆಯ ತುಂಡುಗಳ ಲೆಕ್ಕ ಶಸ್ತ್ರ ಚಿಕಿತ್ಸೆಯ ಮೊದಲು ಮತ್ತು ನಂತರ ಮಾಡುವುದು ಕಡ್ಡಾಯ . ರೋಗಿಯ ಒಳಗೆ ಉಳಿದು ಹೋಗ ಬಾರದು ಎಂಬ ಉದ್ದೇಶ . 

ಮೇಲೆ ಹೇಳಿದ್ದು ಒಂದು ರೀತಿಯ ವೈಜ್ಞಾನಿಕ ಮಡಿ .ಹಿಂದೆ ನಮ್ಮ ಮನೆಯಲ್ಲಿ ಮಡಿ ಆಚರಣೆ ಕಟ್ಟು ನಿಟ್ಟು . ಅನ್ನ ಮುಟ್ಟಿ ಸಾಂಬಾರು ಪಾತ್ರೆ ಮುಟ್ಟುವ ಮೊದಲು ನೀರಿನಲ್ಲಿ ಸ್ಯಾನಿಟೈಸ್ ಮಾಡಿ ಕೊಳ್ಳ ಬೇಕು . ಎಮ್ಮೆ ಹಾಲು ಮುಟ್ಟಿ ದನದ ಹಾಲು ಮುಟ್ಟಲು ಕೈ ನಾಂದ ಬೇಕಿತ್ತು .ಬೇಯಿಸಿದ ಅಕ್ಕಿ ಕೊಳೆಯಾದರೆ ಗೋದಿ ಸಜ್ಜಿಗೆ ಅಲ್ಲ . ಊಟ ಮಾಡಿದ ನೆಲ ಸೆಗಣಿ ಸಾಂಕೇತಿಕವಾಗಿ ಆದರೂ ಸಾರಿಸಿ ಸ್ವಚ್ಛ ಮಾಡಿದ ಮೇಲೆಯೇ ಇನ್ನೊಂದು ಪಂಕ್ತಿ ಹಾಕ ಬಹುದಿತ್ತು .  ಮುಟ್ಟಾದ ಸ್ತ್ರೀಯರನ್ನು ಯಾರೂ ಮುಟ್ಟುವಂತಿಲ್ಲ ,ಅವರು ಮನೆಯ ಒಳಗಿನ ಕೆಲಸಗಳಲ್ಲಿ ಸೇರುವಂತಿಲ್ಲ . ಹಿಡಿ ಸೂಡಿ ಮಾಡುವುದು ,ಅಡಿಕೆ ಕೆಲಸ ಇತ್ಯಾದಿ ಮಾಡಿ ಅವರು ಮೂರು ದಿನ ಕಾಲ ಯಾಪನೆ ಮಾಡುತ್ತಿದ್ದರು . 

ಕಾಲ ಕ್ರಮೇಣ ಇವು ಮಾಯವಾಗಿವೆ .ಕೆಲವರು ವಾದಿಸುವುದಕ್ಕೋಸ್ಕರ ಇವುಗಳನ್ನು ಸಮರ್ಥಿಸಿ ಕೊಳ್ಳುತ್ತಾರೆ .ಇನ್ನು ಕೆಲವರು ಹಿಂದಿನಿಂದ ಬಂದ ನಂಬಿಕೆ ,ಇದಕ್ಕೆ ಶಾಸ್ತ್ರ ಅಥವಾ ವಿಜ್ಞಾನ ದ  ಸಮರ್ಥನೆ ಇಲ್ಲ ಎಂದು ಹೇಳುತ್ತಾರೆ . 

ಶುಕ್ರವಾರ, ಸೆಪ್ಟೆಂಬರ್ 30, 2022

ಒಂದು ಹಾಡಿನ ನೆನಪು

ಹಿಂದೊಮ್ಮೆ ಮಲಯಾಳಂ ಚಿತ್ರ ಗೀತೆ ಕಾವ್ಯ ಪುಸ್ತಕಮಲ್ಲೋ ಜೀವಿತಮ್ ಎಂಬ ನನ್ನ ಇಷ್ಟದ ಹಾಡು ನಿಮ್ಮೊಡನೆ ಹಂಚಿ ಕೊಂಡಿದ್ದೆ . ಇದರ ಭಾವಾರ್ಥ 

ಜೀವನ ಒಂದು ಕಾವ್ಯ ಪುಸ್ತಕ ,ಇದರಲ್ಲಿ ಲೆಕ್ಕ ಬರೆಯಲು ಹಾಳೆಗಳು ಇಲ್ಲ ,ಇದರ ಒಂದೊಂದು ರಸನಿಮಿಷ ಆಸ್ವಾದಿಸಬೇಕು , ಮೂರ್ಖರು ಮಾತ್ರ ಇದರಲ್ಲಿ ಕೂಡಿ ಕಳೆಯುವ ಲೆಕ್ಕ ಬರೆಯುವರು . ಜೀವವೆಂಬ ಬೆಳಕಿನಲ್ಲಿ ಇದರ ರಸಾಸ್ವಾದ ಮಾಡಬೇಕು ,ಒಮ್ಮೆ ಆ ಬೆಳಕು ಆರಿದರೆ ಎಲ್ಲಾ ಶೂನ್ಯ ಅಂಧಕಾರ .

ಇಂದು ಜಿ ಎಸ್ ಶಿವರುದ್ರಪ್ಪ ಅವರ ಹಣತೆ ಕವಿತೆ ಮತ್ತೆ ಓದುವಾಗ ಯಾಕೋ ಈ ಗೀತೆ ಮತ್ತೆ ನೆನಪಾಯಿತು .ಅದರ ಸಾಲುಗಳು ಹೀಗೆ ಇವೆ .

 

ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.
 

ಬುಧವಾರ, ಸೆಪ್ಟೆಂಬರ್ 28, 2022

ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ

               ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ 

            



ನನ್ನಲ್ಲಿ ಬಹಳ ಮಂದಿ ನಿಮಗೆ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಹೇಗೆ ಬಂತು ?ಎಂದು ಪ್ರಶ್ನಿಸುತ್ತಾರೆ . 

ನಮ್ಮ ಅಜ್ಜನ ಮನೆ ಉಕ್ಕಿನಡ್ಕ ಸಮೀಪ ಗುರುವಾರೆ . ಅಜ್ಜನ ಮನೆ ದಾಟಿ ಮುಂದೆ ಹೋದರೆ ನೆಲ್ಲಿಕುಂಜೆ ಗುತ್ತು .ಗುತ್ತು ಗೋವಿಂದ ಭಟ್ ಎಂಬವರು ತಮಿಳು ನಾಡಿಗೆ ಹೋಗಿ ಸಂಗೀತ ಕಲಿತು ಬಂದು ಪ್ರಸಿದ್ಧ ವಯಲಿನ್ ವಾದಕ ಎಂದು ಹೆಸರು ಪಡೆದಿದ್ದು ಆಸಕ್ತರಿಗೆ ಕಲಿಸುತ್ತಿದ್ದರು . ಅವರ ಮಗಳನ್ನು ನನ್ನ ದೊಡ್ಡಪ್ಪ ಸಿನೆಮಾ ನಟ ಗಣಪತಿ ಭಟ್ ಅವರಿಗೆ ಮದುವೆ ಮಾಡಿ ಕೊಟ್ಟುದರಿಂದ ನಮ್ಮ ಬಂಧುವೂ ಆಗಿದ್ದರು . ಮಗ  ವಿಘ್ನೇಶ್ವರ ಭಟ್ ಮೃದಂಗ ದಲ್ಲಿ ,ಸದಾಶಿವ ಭಟ್ ಕೊಳಲು ಮತ್ತು ಪಿಟೀಲು ,ಬಾಲಸುಬ್ರಹ್ಮಣ್ಯಂ ಮೋರ್ಸಿಂಗ್ ವಾದನದಲ್ಲಿ ನುರಿತವರಾಗಿ ಇದ್ದು ನಮ್ಮ ಮನೆಯಲ್ಲಿ ಕೂಡಾ ಕೆಲವು ಕಚೇರಿ ನಡೆಸಿದ್ದರು .ನನ್ನ ದೊಡ್ಡಪ್ಪನ ಮಗಳು ಪುಷ್ಪಲತಾ ಅಕ್ಕ ಮದ್ರಾಸ್ ನಲ್ಲಿ ಸಂಗೀತ ಕಲಿಯುತ್ತಿದ್ದು ಊರಿಗೆ ಬಂದಾಗ ಸಣ್ಣ ಸಣ್ಣ ಕಚೇರಿ ನಡೆಯುವುದು . 

ನನ್ನ ದೊಡ್ಡ ಅಕ್ಕ ಪರಮೇಶ್ವರಿ ನನಗಿಂತ ಎಂಟು ವರ್ಷ ದೊಡ್ಡವಳು . ಅವಳ ಬಾಲ್ಯ ,ಶಿಕ್ಷಣ ನನ್ನ ಅಜ್ಜನ ಮನೆಯಲ್ಲಿ . ಅವಳು ಕೂಡಾ ಗುತ್ತು  ಗೋವಿಂದ ಅಜ್ಜನವರ ಬಳಿ ಹಾಡುಗಾರಿಕೆ ಮತ್ತು ಪಿಟೀಲು ಕಲಿಯುತ್ತಿದ್ದ್ದು ರಜೆಯಲ್ಲಿ  ಮನೆಗೆ ಬಂದಾಗ ' ರಾ ರಾ ವೇಣು  ಗೋಪಾ ಬಾ ಲಾ , ಲಂಬೋದರ ಲಕುಮಿಕರಾ ನುಡಿಸುತ್ತಿದ್ದ ನೆನಪು ಇದೆ . ನನಗೆ ಸರಿ ಅರಿವು ಮೂಡುವಾಗ ಅವಳ ಮದುವೆ ಆಗಿ ಗಂಡನ ಮನೆಗೆ ಹೋಗಿ ಆಗಿತ್ತು . 

ಮದುವೆ ಆದ ಬಳಿಕ ಸಂಗೀತ ಕ್ಕೆ ವಿರಾಮ ಬಿದ್ದು ,ಪಿಟೀಲು ಅಟ್ಟ ವೇರಿತ್ತು .ಮತ್ತೆ ನಾಲ್ಕು ಮಕ್ಕಳು ಆದ ಮೇಲೆ ಅವಳಿಗೆ ಸಂಗೀತ ಕಲಿಕೆ ಮುಂದುವರಿಸುವ ಹುಕ್ಕಿ ಬಂದು ,ಅಟ್ಟದಿಂದ ಪಿಟೀಲು ಕೆಳಗಿರಿಸಲು ವಾತಾಪಿ ಗಣಪತಿಯ ವಾಹನ ದ ಮರಿಗಳು ಅದರ ಹೊರಗಿಂದ ಒಂದೊಂದೇ ಬಂದವು .ಅದನ್ನೆಲ್ಲ ಸರಿ ಪಡಿಸಿ ,ತನ್ನ ದೊಡ್ಡ ಮಗಳು ಉಷಾ ಳನ್ನು ಕರೆದು ಕೊಂಡು ಕಾಂಚನ ಐಯ್ಯರ್ ಬಳಿಗೆ ಹೋಗಿ ತಾಯಿ ಮಗಳು ಇಬ್ಬರೂ ಶಿಷ್ಯ ವೃತ್ತಿ ಸ್ವೀಕರಿಸಿದರು .ಆಗ ಅಕ್ಕನ ಮನೆಯಿಂದ ಆರು ಮೈಲು ಉಪ್ಪಿನಂಗಡಿಗೆ ನಡೆದು ಹೋಗ ಬೇಕು .ಅಲ್ಲಿಂದ ಕಾಂಚನಕ್ಕೆ . ಹೀಗೆ ಮಧ್ಯ ವಯಸ್ಸಿನಲ್ಲಿ ಸಂಗೀತ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಮಾಡಿದಳು .ಆಗೆಲ್ಲಾ ಈ ಪರೀಕ್ಷೆ ಮಂಗಳೂರಿನಲ್ಲಿ ನಡೆಯುತ್ತಿದ್ದು ಒಂದು ಪರೀಕ್ಷೆಗೆ ನಾನೇ ಕರೆದು ಕೊಂಡು ಹೋಗಿದ್ದೆ . 

ಪರಿಸರದವರು ಸಂಗೀತ ಕಲಿಯಲು ಕಷ್ಟ ಆಗುವುದನ್ನು ಕಂಡು ಮುಂದೆ ಇಳಂತಿಲ ಮತ್ತು ಉರುವಾಲು ಪದವಿನಲ್ಲಿ ಕಾಂಚನ ಶಿಷ್ಯೆಯರಿಂದ  (ಶ್ರೀಮತಿ ಮೀನಾಕ್ಷಿ ಟೀಚರ್ ಎಂಬುವರು ಚೆನ್ನಾಗಿ ಕಲಿಸುತ್ತಿದ್ದರು ) ಸಂಗೀತ ತರಗತಿಗಳನ್ನು ಆರಂಭಿಸುವಲ್ಲಿ ನನ್ನ ಸಹೋದರಿಯ ಪ್ರಯತ್ನ ಗಮನಾರ್ಹ . ಅಕ್ಕನ ಮಗಳು ಉಷಾ ಮುಂದೆ ಎಂ ಎಸ ಶೀಲಾ ಅವರಲ್ಲಿ ಅಭ್ಯಾಸ ಮುಂದುವರಿಸಿ ವಿದುಷಿ ಆದರೆ ಅವಳ ಮಗಳು ಶಿಖಾ ಇಂಜಿನಿಯರ್ ಪದವೀಧರೆ ಕೂಡಾ ತಾಯಿಯ ಪರಂಪರೆ ಮುಂದುವರಿದ್ದಾಳೆ . 

ನನ್ನ ಎರಡನೇ ಅಣ್ಣ ಕೃಷ್ಣ ಭಟ್ ಸುರತ್ಕಲ್ ನಲ್ಲಿ ಇಂಜಿನಿಯರಿಂಗ್ ಕಲಿಯುವಾಗ ಅಲ್ಲಿ ವೇಣು ವಾದನ ಕಲಿಯುತ್ತಿದ್ದು ,ಈಗ ಇಳಿ ವಯಸ್ಸಿನಲ್ಲಿಯೂ ಅದನ್ನು ಮುಂದು ವರಿಸಿರುವನು . 

ನನ್ನ ಚಿಕ್ಕಮ್ಮ ಸಾವಿತ್ರಿ ಅಮ್ಮ ,ಹಿಂದೂಸ್ತಾನಿ ಹಾಡುಗಾರಿಕೆ ಕಲಿತಿದ್ದು ,ವಾರಕ್ಕೊಮ್ಮೆ ಹಾರ್ಮೋನಿಯಂ ಹಿಡಿದು ಸುಶ್ರಾವ್ಯ ವಾಗಿ ಹಾಡುವಾಗ ನಾವು ಮಕ್ಕಳು ಸುತ್ತಲೂ ಕುಳಿತು ಕೇಳುತ್ತ್ತಿದೆವು . 

ಮೊನ್ನೆ ಬಹುವಚನಮ್ ನಲ್ಲಿ  ಶ್ರೀಶ ಕುಮಾರ್ ಅವರ ಸಹೋದರಿಯರು ನನ್ನ ಅಕ್ಕ ಮತ್ತು ಸೊಸೆಯ ಸಂಗೀತ ಸಾಂಗತ್ಯ ಪುನಃ ಪುನಃ ನೆನೆಸಿ ಕೊಂಡಾಗ ಇದೆಲ್ಲಾ ಜ್ಞಾಪಕಕ್ಕೆ ಬಂತು  .

 Violin - Wikipedia

ಭಾನುವಾರ, ಸೆಪ್ಟೆಂಬರ್ 25, 2022

ಇಂದು ಬರುವರು ನನ್ನ ಗುರುಗಳು

 ಇಂದಿನ ಕಾರ್ಯಕ್ರಮಕ್ಕೆ ನನ್ನ ಮೂವರು ಗುರುಗಳು ಬರುವುದು ನನ್ನ ಭಾಗ್ಯ. 

ಒಬ್ಬರು ಶ್ರೀ ರಾಮ ರಾವ್ .ಪ್ರಾಥಮಿಕ ಶಾಲೆಯಲ್ಲಿ ನನ್ನ ಪಿ  ಟಿ ಟೀಚರ್ . ಕಬಡಿ ,ಕುಟ್ಟಿ ದೊಣ್ಣೆ ,ತಲೆಮು ಮತ್ತು ಕೊಟ್ಟಣಿಕೆ ಕ್ರಿಕೆಟ್ (ಹುಡುಗಿಯರಿಗೆ ಜಿಬಿಲಿ )ಮಾತ್ರ ಸ್ಪೋರ್ಟ್ಸ್ ಅಂಡ್ ಗೇಮ್ಸ್ ಆಗಿದ್ದ ನಮಗೆ ನಿಜವಾದ ಕ್ರಿಕೆಟ್ ,ವಾಲಿ ಬಾಲ್ ,ಖೋಖೋ ,ಶಾಸ್ತ್ರೀಯ ಕಬಡಿ ಇತ್ಯಾದಿ ಪರಿಚಯಿಸಿದವರು ;; ಶಾಲೆಯಲ್ಲಿ ಭಾರತ ಸೇವಾದಳ ಆರಂಭಿಸಿದವರು .ಶಿಸ್ತಿನ ಸಿಪಾಯಿ .ಈಗಲೂ ಅವರ ಸ್ವರ ಕೇಳಿದೊಡನೆ ಅಟೆನ್ಷನ್ ಆಗುವೆನು . 

ಎರಡನೆಯವರು ಶ್ರೀ ಶ್ರೀಪತಿ ರಾವ್ ಅವರು.ಇವರು ಮಾಧ್ಯಮಿಕ ಶಾಲೆಯಲ್ಲಿ ಗುರುಗಳು  . ಮಾದರಿ ವಿಜ್ಞಾನ ಶಿಕ್ಷಕ ಹೇಗೆ ಇರಬೇಕು ಎಂದು ತೋರಿಸಿ ಕೊಟ್ಟವರು . ಜೋಪಾನವಾಗಿ ಕೂಡಿಟ್ಟ ಪ್ರಯೋಗಾಲಯದ ಉಪಕರಣಗಳನ್ನು ಹೊರ ತೆಗೆದು ಪ್ರಾತ್ಯಕ್ಷಿಕೆ ನಡೆಸಿ ತೋರಿಸಿ ವಿಜ್ಞಾನ ದ ಹೊಸ ಲೋಕ ತೆರೆದು ತೋರಿಸಿದವರು .ತರಗತಿ ಆರಂಭಕ್ಕೆ ಮುನ್ನ ಬಂದು ಕರಿಹಲಗೆಯಲ್ಲಿ ಅಂದವಾದ ಡಯಾಗ್ರಾಮ್ ಮಾಡುವರು ,ಅಷ್ಟು ಸಮಯ ಉಳಿಯಲಿ ಎಂದು .ಶಾಲೆಯಲ್ಲಿ ವಿಜ್ಞಾನ ಸಂಘ ಆರಂಭಿಸದವರು . ಮುಂದೆ ಇವರು ಕಲಾ ವಿಷಯದಲ್ಲಿ ಎಂ  ಎ ಮಾಡಿ ಜೂನಿಯರ್ ಕಾಲೇಜು ಗೆ ಹೋದದ್ದು ವಿಜ್ಞಾನ ಶಿಕ್ಷಣಕ್ಕೆ ಆದ ನಷ್ಟ ಎಂದು ದೃಢವಾಗಿ ನಂಬಿದ್ದೇನೆ . ಇವರ ತಂದೆ ಶ್ರೀನಿವಾಸ ರಾವ್ ಪ್ರಾಥಮಿಕ ಶಾಲೆಯಲ್ಲಿ ನಮಗೆ ಮಾಸ್ಟ್ರು .ಆ ಕಾಲದಲ್ಲಿಯೇ 'ನಲಿ ಕಲಿ 'ಆಚರಣೆಗೆ ತಂದವರು .ಶಿಸ್ತಿನ ಸಿಪಾಯಿ

ಮೂರನೆಯವರು ಶ್ರೀ ಕಮ್ಮಜೆ ಸುಬ್ಬಣ್ಣ ಭಟ್ ಅವರು . ಆಗಷ್ಟೇ ಆರಂಭವಾಗಿದ್ದ ಪಿ ಯು ಸಿ ಗೆ ಅರ್ಥ ಶಾಸ್ತ್ರದ ಅಧ್ಯಾಪಕರಾಗಿ ಬಂದವರು .ನಗು ಮುಖ . ಸ್ಪುರದ್ರೂಪ . ಇವರಿಗೆ ಹೈ ಸ್ಕೂಲ್ ತರಗತಿಗಳಿಗೆ ಕೂಡಾ ಕೆಲವು ಕ್ಲಾಸ್ ಕೊಡುತ್ತಿದ್ದು ,ನಮಗೆ ಇಂಗ್ಲಿಷ್ ಹೇಳಿ ಕೊಡಲು ಬರುತ್ತಿದ್ದರು . ಮಕ್ಕಳಲ್ಲಿ ಭಾಷೆಯ ಮತ್ತು ಸಾಹಿತ್ಯದ ಅಭಿರುಚಿ ಹೆಚ್ಚಿಸಲು ಪ್ರಯತ್ನ ಮಾಡುವರು .ಜೊನಾಥನ್ ಸ್ವಿಫ್ಟ್ ,ಜಾನ್ಸನ್ ಮತ್ತು ಬಾಸ್ವೇಲ್ ,ಅಲೆಕ್ಸಾಂಡರ್ ಪೋಪ್ ಇತ್ಯಾದಿ ಬಹರಹಗಾರ ಪಾಠ ಮನ ತಟ್ಟುವಂತೆ ಮಾಡುತ್ತಿದ್ದ ನೆನಪು .ನನ್ನ ಇಂಗ್ಲಿಷ್ ಸಾಹಿತ್ಯ ಓದಿಗೆ ಇವರ ಪ್ರವಚನಗಳೇ ಸ್ಫೂರ್ತಿ .ಇನ್ನು ಇವರ ಎಕನಾಮಿಕ್ಸ್ ತರಗತಿಗಳೂ ವಿದ್ಯಾರ್ಥಿ ಪ್ರಿಯ ಆಗಿದ್ದವು .ಅವರ ನೋಟ್ಸ್ ಗಟ್ಟಿಯಾಗಿ ನನ್ನ ಅಕ್ಕ ಊರು ಹೊಡೆಯುತ್ತಿದ್ದಾಗ ಕೇಳಿದ ."India is a rich county inhabited by poor people".Todays luxury is tomorrows need "ಇತ್ಯಾದಿ ನುಡಿಗಟ್ಟುಗಳು ನನಗೂ ಕೇಳಿ ಬಾಯಿಪಾಠ ಆಗಿದ್ದವು

ಶನಿವಾರ, ಸೆಪ್ಟೆಂಬರ್ 24, 2022

ಇಷ್ಟು ದಿನ ಈ ವೈಕುಂಠ

            ಐ ಸಿ ಯು ವೈರಾಗ್ಯ 

ವಾರಗಳ ಹಿಂದೆ  ಕುತ್ತಿಗೆ ಬಳಿ ಸಂಕಟ ಬಂದು ಮಂಗಳೂರಿನ ಆಸ್ಪತ್ರೆಗೆ ಕೂಡಲೇ ಹೋಗಿ ನೋಡಿದಾಗ ಹೃದಯದ ಒಂದು ರಕ್ತ ನಾಳದಲ್ಲಿ ಬ್ಲಾಕ್ ಕಂಡು ಬಂದು ಅದನ್ನು ತಗೆದರು . ಆಮೇಲೆ ನನ್ನನ್ನು ತೀವ್ರ ನಿಗಾ ಕ್ಕೆಂದು ಐ ಸಿ ಯು ಗೆ ದಾಖಲಿಸಿದರು . ಆಸ್ಪತ್ರೆಯಲ್ಲಿ  ರೋಗಿಯಾಗಿ ನನ್ನ ಮೊದಲ ಅನುಭವ . ತೀವ್ರ ನಿಗಾ ವಿಭಾಗದಲ್ಲಿ  ದಾಖಲಾಗುವರಿಗೆ ಎಲ್ಲರಿಗೂ ಒಂದೇ ಸಮವಸ್ತ್ರ . ಶ್ರೀಮಂತ ಬಡವ  ಹೆಚ್ಚು ಏಕೆ ಗಂಡು ಹೆಣ್ಣು ಎಂಬ ಭೇದ ವೂ ಐ ಸಿ ಯು ವಿನಲ್ಲಿ ಇಲ್ಲಾ . 

ನನ್ನ ಎರಡು  ಎರಡು ಕೈಗಳಿಗೂ ಡ್ರಿಪ್ ಹಾಕಿದ್ದರು .ಒಂದರಲ್ಲಿ ರಕ್ತದ ಒತ್ತಡ ಕಡಿಮೆ ಆಗದಂತೆ ,ಇನ್ನೊಂದರಲ್ಲಿ ರಕ್ತ ಹೆಪ್ಪುಗಟ್ಟದಂತೆ .;ಇನ್ಫ್ಯೂಶನ್ ಪಂಪ್ ಎಂದು ಇದೆ .ಅದು ನಾವು ಆಜ್ಞಾಪಿಸಿದ್ದಷ್ಟು ಡ್ರಿಪ್ ಪೂರೈಕೆ ಮಾಡುತ್ತದಲ್ಲದೆ ,ಮುಗಿದಾಗ ಅಥವಾ ಡ್ರಿಪ್ ಕೊಳವೆಯಲ್ಲಿ ಏನಾದರೂ ಅಡ್ಡಿ ಅಲಾರಾಂ ಮಾಡುವ ವ್ಯವಸ್ಥೆ ಇದೆ . ನನ್ನ ಎದೆಗೆ ಈ ಸಿ ಜಿ ಲೀಡ್ಸ್ ಹಾಕಿ ಮಾನಿಟರ್ ಗೆ ಕನೆಕ್ಟ್ ಮಾಡಿದ್ದು ಅದು ಬೀಪ್ ಮಾಡುತ್ತಿತ್ತು .ನನ್ನ ಮಾನಿಟರ್ ಗೆ ದೇವಸ್ಥಾನದ ಗಂಟೆಯ ಶಬ್ದ ಇದ್ದು ಕಿವಿಗೆ ಹಿತವಾಗಿ ಇತ್ತು . ಕೈಯ ಬೆರಳಿಗೆ ಪಲ್ಸ್ ಒಕ್ಸಿ ಮೀಟರ್ ಸಿಕ್ಕಿಸಿದ್ದರು . ಇವುಗಳೆಲ್ಲದರ ಬೀಪ್ /ಅಲಾರಾಂ ಸೇರಿ ಒಂದು ಫ್ಯೂಷನ್ ಮ್ಯೂಸಿಕ್ ನಂತೆ ಕೇಳುತ್ತಿತ್ತು . ನಾನು ಸಂಪೂರ್ಣ ಎಚ್ಚರ ಇರುವ ವೈದ್ಯ ರೋಗಿ ಆದುದರಿಂದ ಅಕ್ಕ ಪಕ್ಕದಲ್ಲಿ ಬೀಪ್ /ಅಲಾರಾಂ ವ್ಯತ್ಯಾಸ ಆದಾಗ ಕೂಡಲೇ ತಿಳಿಯುತ್ತಿತ್ತು . ಅದಲ್ಲದೆ ನನ್ನ ಮಾನಿಟರ್ ಕೂಡಾ ತಿರುಗಿ ಆಗಾಗ ನೋಡುವ ಕುತೂಹಲ . 

ದೊಡ್ಡ ಆಸ್ಪತ್ರೆಗಳ ಲ್ಲಿ  ಹಲವು ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಗಳು ಇದ್ದು ಐ ಸಿ ಯು ವಿನಲ್ಲಿ ಇರುವ ಒಬ್ಬ ರೋಗಿಯನ್ನು ಕನಿಷ್ಠ ಮೂರು ನಾಲ್ಕು ಸಬ್ ಸ್ಪೆಷಾಲಿಟಿ ವೈದ್ಯರು ನೋಡ ಬರುವರು .ಮೊದಲು ಅಸಿಸ್ಟೆಂಟ್ ವೈದ್ಯರು ,ಆಮೇಲೆ ಮುಖ್ಯಸ್ಥರು ಜತೆ ಗೂಡಿ 'ಪ್ರತಿ ಸಾರಿಯೂ  ಸಿಸ್ಟರ್ಸ್ ಗಳು ಬಂದು ಮಾಹಿತಿ ನೀಡಿ ಆರ್ಡರ್ ತೆಗೆದು ಕೊಳ್ಳ ಬೇಕು . ಅವರ ಕೆಲಸ ತುಂಬಾ ಕಷ್ಟ .ಯಾವುದನ್ನೂ ಒಂದೇ ಬಾರಿಗೆ ಪೂರ್ಣವಾಗಿ ಮಾಡಿ ಮುಗಿಯಿತು ಎಂದು ಕೊಳ್ಳುವ ಹಾಗೆ ಇಲ್ಲ . ನಡುವೆ ಹೊಸ ರೋಗಿಗಳ ಚಾರ್ಜ್ ತೆಗೆದು ಕೊಳ್ಳುವುದು ,ಉತ್ತಮ ವಾದ ವರನ್ನು ವಾರ್ಡ್ಗೆ ಕಳಿಸುವುದು ;ಎಲ್ಲಾ ಮಾಡಬೇಕು .ಔಷಧಿ ಇಂಡೆಂಟ್ ಮಾಡಬೇಕು .ನಡುವೆ ಕಂಡೀಶನ್ ಸೀರಿಯಸ್ ಆದರೆ ಅಲ್ಲಿಗೆ ಓಡ ಬೇಕು . ನಾನಿದ್ದ ತೀವ್ರ ನಿಗಾ ದಲ್ಲಿ ಕೊಂಕಣಿ ಮತ್ತು ತುಳು ಮಾತನಾಡುವ ಸಿಸ್ಟೆರ್ ಗಳು ಮತ್ತು ಆಯಾ ಗಳು ಇದ್ದು ರೋಗಿಗಳನ್ನು ಚೆನ್ನಾಗಿ ನೋಡಿ ಕೊಳ್ಳುತ್ತಿದ್ದರು . 

ರಾತ್ರಿ ಹೊತ್ತು ನನ್ನ ಎದುರು ಅಕ್ಕ ಪಕ್ಕದ ಬೆಡ್ ಗಳಲ್ಲಿ ಇದ್ದ ಓರ್ವ ಹಿರಿಯರು ತನ್ನಷ್ಟಕ್ಕೆ ತಾವೇ ಮಾತನಾಡುವುದು ,ಪಕ್ಕದ ಬೆಡ್ ನಲ್ಲಿ ಅರೆ ನಿದ್ದೆಯಲ್ಲಿ ಇದ್ದವರು ಅದಕ್ಕೆ ಉತ್ತರ ನೀಡುವದು ನಡೆದಿತ್ತು . 

ಐ ಸಿ ಯು ವಿನಲ್ಲಿ ಇರುವಾಗ ಸಾವಿನ ಭಯ ದೂರ ಹೋಗುತ್ತದೆ .ಗಂಭೀರ ಅತಿ ಗಂಭೀರ ರೋಗಿಗಳ ನಡುವೆ ಇರುವಾಗ  ನಾವು ಆ ಕಡೆ ಅಥವಾ ಈ ಕಡೆ ಹೋಗಲು ಯಾವುದೇ ಸಂಕಟ ಇಲ್ಲದೆ ತಯಾರಾಗುತ್ತೇವೆ .ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ ಎನ್ನುವ ವಿದ್ಯಾ ಭೂಷಣ ರ ದೇವರ ನಾಮ ನೆನಪಿಗೆ ಬರುತ್ತಿತ್ತು . 

ನಮ್ಮ ಶರೀರದಲ್ಲಿ ಮೆದುಳು ಕೆಲಸ ಮಾಡುತ್ತಿದ್ದರೆ ಮಾತ್ರ ನಾವು ಇರುವುದು ಮತ್ತು  ಹೆಂಡತಿ ಮಕ್ಕಳು ,ಬಂಧುಗಳು ,ಮನೆ ,ಆಸ್ತಿ ,ಬ್ಯಾಂಕ್ ಡೆಪಾಸಿಟ್ ,ಫೇಸ್ ಬುಕ್ ,ವಾಟ್ಸ್ ಆಪ್  , ಹರಿಪ್ರಸಾದ್ ಹೋಟೆಲ್ ಮಸಾಲೆ ದೋಸೆ ಗಡ್ಬಡ್ ಇತ್ಯಾದಿ ಗಳಿಗೆ ಅಸ್ತಿತ್ವ . ಮೆದುಳು ಕಾರ್ಯ ನಿರ್ವಹಿಸಲು ಹೃದಯ ರಕ್ತ ಪಂಪ್ ಮಾಡಿ ಆಮ್ಲ ಜನಕ ಮತ್ತು ಆಹಾರ ಸರಬರಾಜು ಮಾಡಬೇಕು . ಯಾವುದು ಕೆಟ್ಟರೂ ಅಸ್ತಿತ್ವಕ್ಕೆ ಅಪಾಯ ಇತ್ಯಾದಿ ಸತ್ಯ ಆಗಾಗ ಮನ ಪಟಲದ ಮುಂದೆ ಬರುವದು . 

ಹೀಗೆಯೇ  ೨೪ ಗಂಟೆ ತೀವ್ರ ನಿಗಾದಲ್ಲಿ ಕಳೆದು ರಾತ್ರಿ ಒಂದಿಷ್ಟು ನಿದ್ದೆ ಮಾಡದೇ ನಾನು ಮರುದಿನ ವಾರ್ಡ್ ಗೆ ರವಾನಿಸ ಲ್ಪಟ್ಟೆ . ತೀವ್ರ ನಿಗಾದಲ್ಲಿ ಇದ್ದ ಅತ್ಯಂತ ಆರೋಗ್ಯವಂತ ನಾನೇ ಆಗಿದ್ದು ,ಸ್ಟಾಫ್ ನವರಿಗೆ ಹೆಚ್ಚು ತೊಂದರೆ ಕೊಡದೇ ಬಂದ ಸಮಾಧಾನ .

ಆಸ್ಪತ್ರೆಯ ವಾರ್ಡ್ಗಳಲ್ಲಿ  ಚಲಿಸುವ ಸಿಸ್ಟರ್ಸ್ ಗಳು ಸ್ಥಾವರ  ;ವೈದ್ಯರು ಜಂಗಮರು .

ಮಂಗಳವಾರ, ಸೆಪ್ಟೆಂಬರ್ 20, 2022

ಮೊಳಹಳ್ಳಿ ಶಿವರಾಯರು


Shiv Aroor on Twitter: "Old photo! ♥️ Coimbatore in newly independent  India. The little one is my mum. The man in the middle is mum's maternal  grandpa Molahalli Shiva Rao, after whom

Not a day passes over the earth, but men and women of no note do great deeds, speak great words and suffer noble sorrows. -Charles Reade

ವಿ ಸೀ ಅವರ ವ್ಯಕ್ತಿ ಚಿತ್ರ ಸಂಪುಟ ೧ ಓದುತ್ತಿದ್ದೆ .ಅದರಲ್ಲಿ ಮೊಳಹಳ್ಳಿ ಶಿವರಾವ್ ಬಗ್ಗೆ ಒಂದು ಲೇಖನ ಇದೆ . ಚಾರ್ಲ್ಸ್ ರೀಡ್ ನ ಮೇಲಿನ ವಾಖ್ಯ ಉಲ್ಲೇಖ ಮಾಡಿ ಆರಂಭಿಸುತ್ತಾರೆ . ವಿ ಸೀ ಅವರ ಶಬ್ದಗಳಲ್ಲಿ "Of no note 'ಎಂಬ ಮಾತಿನಲ್ಲಿ ಲೋಕ ಪ್ರಖ್ಯಾತಿ ಬೇಕಿಲ್ಲ .ಈಗ್ಗೆ ೩೦-೪೦ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಖ್ಯಾತಿ ಇಂದಿನಂತೆ ದಾಂಧಲೆ ಮಾಡುತ್ತಿರಲಿಲ್ಲ .ವ್ಯಕ್ತಿಗಳು ತಮ್ಮ ತಮ್ಮ ಸ್ಥಾನ ದಲ್ಲಿ ತಮಗೆ ತೋರಿದಂತೆ ದೊಡ್ಡ ಬಾಳು ಬಾಳಿ ,ದೊಡ್ಡ ಕೆಲಸಗಳನ್ನು ಮಾಡಿ ,ಸುತ್ತಲ ಪ್ರದೇಶವನ್ನು ತಮ್ಮ ಕಾರ್ಯಗಳಿಂದ ಸಂಪನ್ನ ಗೊಳಿಸಿದ್ದಾರೆ .ಅಂತಹ ಮಹನೀಯರು ಒಬ್ಬರು ಮೊಳಹಳ್ಳಿ ಶಿವರಾಯರು .ನಾನು ಕಂಡ ಸಾರ್ವಜನಿಕ ಹಿತಸಾಧಕರಲ್ಲಿ ಸದ್ದು ಮಾಡದೇ ದುಡಿದ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಹಿರಿಯರು ಅವರು .ಅವರು ರಾಜಕೀಯಕ್ಕೆ ಕೈ ಹಾಕಲಿಲ್ಲ .ಪುತ್ತೂರು ತಾಲೂಕಿನಲ್ಲಿ ಅವರು ಮಾಡಿದ ಕೆಲಸ ವಿದ್ಯಾಭ್ಯಾಸದ ವಿಸ್ತರಣೆಗೂ ಜನದ ಆರ್ಥಿಕ ಹಿತಕ್ಕೂ ಮೀಸಲಾಯಿತು ."

 ತಂದೆ ರಂಗಪ್ಪಯ್ಯ ಪೊಲೀಸ್ ಅಧಿಕಾರಿ ಯಾಗಿದ್ದು ,ಅವರು ಪುತ್ತೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮೊಳಹಳ್ಳಿ ಶಿವರಾಯರ ಜನನ ೧೮೮೦ ರಲ್ಲಿ ಆಯಿತು .ಶಿವರಾಯರು ವಕೀಲರಾಗಿ ಇಲ್ಲಿಯೇ ವೃತ್ತಿ ಜೀವನ ಆರಂಭಿಸುವುದಾಯಿತು . ಅದು ಪುತ್ತೂರಿನ ಭಾಗ್ಯ . ಇಲ್ಲಿನ ವಿದ್ಯಾಭ್ಯಾಸ ಸಾಂಸ್ಕೃತಿಕ ರಂಗದಲ್ಲಿ ಹೊಸ ಗಾಳಿ ಬೀಸುವಂತೆ ಆಯಿತು . ಶಿವರಾಮ ಕಾರಂತರ ಸರ್ವ ಚಟುವಟಿಕೆಗಳಿಗೂ ಇವರೇ ಬೆನ್ನೆಲುಬು . ನಮ್ಮ ಜಿಲ್ಲೆಯ ಸಹಕಾರಿ ಚಳುವಳಿಯ ಆರಂಭದ ಹರಿಕಾರ ,ಈಗಿನ ಜಿಲ್ಲಾ ಸಹಕಾರ ಬ್ಯಾಂಕ್ ಸ್ಥಾಪನೆಗೆ ಅಡಿಗಲ್ಲು ಆಯಿತು . ಏಷ್ಯದಲ್ಲಿಯೇ ಮೊದಲ ಬಾರಿಗೆ ಪ್ರಥಮ ಎನ್ನಲಾದ ಸರಕಾರಿ ಮುದ್ರಣಾಲಯ ಶಿವರಾಯರು ಮಂಗಳೂರಿನಲ್ಲಿ ತೆರೆದರು . 

ಶಿವರಾಯರು ಪ್ರಸಿದ್ಧ ವಕೀಲರಾಗಿದ್ದರೂ ತಿಂಗಳ ಖರ್ಚಿಗೆ ಆಗುವಷ್ಟೇ ಕೇಸ್ ಕೈಗೆತ್ತಿ ಕೊಂಡು ,ಹೆಚ್ಚಿನ ಸಮಯ ಸಾರ್ವಜನಿಕ ಕೆಲಸಗಳಲ್ಲಿ ವಿನಿಯೋಗಿಸುತ್ತಿದ್ದರು . ವೈಯುಕ್ತಿಕ ಕಾರ್ಯಕ್ಕೆ ಧನ ಶೇಖರಣೆ ಇಲ್ಲ .ಇವರ ಮಗಳ ಮದುವೆಗೆ ಊರವರೇ ಹೊರೆ ಕಾಣಿಕೆ ಮಾಡಿ ವಿಜೃಂಭಣೆಯಿಂದ ಊರವರು ಮನೆ ಸಮಾರಂಭ ಎಂಬಂತೆ ಆಚರಿಸಿದರು ಎಂದು ವಿ ಸೀ ಬರೆದಿದ್ದಾರೆ . ಮದುವೆಗೆ ಎಂದು ಊರವರು ಸಂಗ್ರಹಿದ ಜೀನಸು ತರಕಾರಿ ಇತ್ಯಾದಿ ಉಳಿದಿದ್ದನ್ನು ಇಟ್ಟುಕೊಳ್ಳದೆ ಊರವರಲ್ಲಿ ಹಂಚಿದರು . ಅದೇ ಲೇಖನದಲ್ಲಿ ವಿ ಸೀ ಪುತ್ತೂರಿನ ಪ್ರಸಿದ್ಧ ವಕೀಲರಾಗಿದ್ದ ಶ್ರೀ ಸಿ ಎಸ  ಶಾಸ್ತ್ರೀ ಯವರ ಒಂದು ಮಾತು ಉಲ್ಲೇಖ ಇದೆ .'ನಾನು ಗೆಲ್ಲಬಹುದು ಎಂದು ವಿಶ್ವಾಸ ಇರುವ ಮತ್ತು ಸಾವಿರ ರೂಪಾಯಿ ಫೀಸ್ ಸಿಗುವ ಕೇಸ್ ಬಂದರೂ ಶಿವರಾಯರು ಬೇಡ ಎಂದರೆ ತೆಗೆದು ಕೊಳ್ಳುವುದಿಲ್ಲ "

"ತಾಲೂಕಿನ ಯಾವ ಶಾಲೆಯಲ್ಲಿ ಏನು ಉತ್ಸವ ನಡೆಯಲಿ ಅವರು ಹೋಗ ಬೇಕು .ಒಂದು ದುಂಡು ತೋಳಿನ ಖಾದಿ ಬನಿಯನ್ .ಒಂದು ತುಂಡು ಪಂಚೆ ,ಒಂದು ಟವೆಲ್ ಅಷ್ಟೇ ಅವರ ಸಜ್ಜು .ಕರೆದು ಕೊಂಡು ಹೋಗಲು ಗಾಡಿ ಬರದಿದ್ದರೆ ನಡೆದು ಕೊಂಡೇ ಹೋಗುವರು . ಶಾಲೆಯ ಎರಡು ಬೆಂಚ್ ಜೋಡಿಸಿ ,ತೋಳನ್ನು ತಲೆ ತಿಂಬು ಮಾಡಿ ರಾತ್ರಿ ಮಲಗಿದ್ದು ಬರುವುದು ವಾಡಿಕೆ . ಸಭೆಗಲ್ಲಿ ಹೆಚ್ಚು ಮಾತಾಡುವ ಅಭ್ಯಾಸ ಇಲ್ಲ .ಊರಿನ ಮುಂದಾಳುಗಳನ್ನು ಹುರಿ ಗೊಳಿಸುವದು ,ಕೆಲಸದಲ್ಲಿ ತೊಡಗಿಸುವುದು ,ಹಣ ಮುಂತಾದ ಸಹಾಯ ಬೇಕಿದ್ದರೆ ಏರ್ಪಡಿಸುವುದು ಅವರ ಕೆಲಸ . 

 ಶಿವರಾಯರ  ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಮೈಸೂರು ರಾಜರ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ವಿಶೇಷ ಆಹ್ವಾನಿತರಾಗಿ ಕರೆದು ಸನ್ಮಾನಿಸಿದ್ದಾರಂತೆ .

ಪುತ್ತೂರಿನಲ್ಲಿ ಸ್ವಾತಂತ್ಯ ಹೋರಾಟ ಕಾಲದಲ್ಲಿ ಸಕ್ರಿಯ ವಾಗಿದ್ದು ದಲ್ಲದೆ ತಮ್ಮ ತಮ್ಮ ವೃತಿಯಲ್ಲೂ ಹೆಸರು ಮಾಡಿದ್ದ ವಕೀಲ ಸದಾಶಿವ ರಾವ್ ,ಡಾ ಸುಂದರ ರಾವ್ ಮತ್ತು ಶಿವರಾಮ ಕಾರಂತ ಇವರೆಲ್ಲಾ ಮೊಳಹಳ್ಳಿಯವರಂತೆ ಕುಂದಾಪುರ ಮೂಲದವರು .ಇಲ್ಲಿಯೇ ನೆಲೆಸಿ ಪುತ್ತೂರು ಪರಿಸರದ ಮತ್ತು ಜತೆಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣ ರಾದರು ಎಂಬುದು ಒಂದು ವಿಶೇಷ .