ಬೆಂಬಲಿಗರು

ಶನಿವಾರ, ಅಕ್ಟೋಬರ್ 15, 2022

ಧರ್ಮಕ್ಕೆ ಸಿಗುವ ಹೊಗಳಿಕೆ ಮತ್ತು ತೆಗಳಿಕೆ

  ಕೆಲವೊಮ್ಮೆ ನಮಗೆ ಯಾವುದೇ ಶ್ರಮ ಇಲ್ಲದೆ ಹೊಗಳಿಕೆ ಸಿಗುತ್ತದೆ .ಉದಾಹರಣೆಗೆ ಒಬ್ಬ ವ್ಯಕ್ತಿ ಜ್ವರ ಬಂದು ಸಮೀಪದ ವೈದ್ಯರ ಬಳಿ ಹೋಗುತ್ತಾನೆ .ಅವರು ಪರೀಕ್ಷೆ ಮಾಡಿ ಔಷಧಿ ಕೊಡುತ್ತಾರೆ .ಮೂರು ನಾಲ್ಕು ದಿನ ಕಳೆದರೂ ಜ್ವರ ಬಿಡುವದಿಲ್ಲ . ಸರಿ ,ನಮ್ಮ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗುತ್ತಾನೆ .ನಾನು ಪರೀಕ್ಷೆ ಮಾಡುವಾಗಲೂ ದೊಡ್ಡ ಕಾಯಿಲೆ ಏನೂ ಕಾಣುವುದಿಲ್ಲ . ರೋಗಿಯ ಬಯಕೆಯಂತೆ ಒಂದು ಡ್ರಿಪ್ ಹಾಕಿ ಸಾಧಾರಣ ಜ್ವರದ ಮಾತ್ರೆ ಕೊಡುತ್ತೇನೆ . ಬಂಡ ಮರುದಿನ ಜ್ವರ ಬಿಡುತ್ತದೆ . ನನಗೆ ಎಲ್ಲಾ ಕ್ರೆಡಿಟ್ ಸಿಗುತ್ತದೆ .ಹಲವು ಜ್ವರಗಳು ವೈರಸ್ ಮೂಲದವು ಆಗಿದ್ದು  ಶಮನ ಆಗಲು ವಾರ ತೆಗೆದು ಕೊಳ್ಳ ಬಹುದು . ಕೆಲವರು  ಅಂದಾಜಿಗೆ ಆಂಟಿ ಬಯೋಟಿಕ್ ಕೊಡುವರು .ಉದ್ದೇಶ ಒಳ್ಳೆಯದೇ . ಇದೇ ರೀತಿ ಭೇದಿ ಗೆ  ಮುಖ್ಯ ಕಾರಣ ವೈರಸ್ .ಇದಕ್ಕೆ ಜಲ ಪುರಾಣ ಸಾಕು . ಹೊರಗಡೆ ಎಷ್ಟೋ ಮದ್ದು ತಿಂದು ಬಂದವರು ಆಸ್ಪತ್ರೆಗೆ ಬಂದು ಒಂದೇ ದಿನದಲ್ಲಿ ಯಾವುದೇ ಹೊಸ ಔಷಧಿ ಇಲ್ಲದೆ ಗುಣ ಮುಖರಾಗುವರು . ರೋಗಿಯು ನಮ್ಮನ್ನು ಹೊಗಳುವರು . ಪ್ರಸಿದ್ಧ ಉಷ್ಣ ಪ್ರದೇಶ ರೋಗ ಶಾಸ್ತ್ರದ  ಪಠ್ಯ ಪುಸ್ತಕ ಮ್ಯಾನ್ಸನ್ ಬಾರ್ ನಲ್ಲಿ ಈ ಪ್ರದೇಶಗಳಲ್ಲಿ ಟೈಫಾಯಿಡ್ ಎಂದು ಅಂದಾಜಿಗೆ ಚಿಕಿತ್ಸಲಾಗುವ   ಹಲವು ಕೇಸ್ ಗಳು  ಮುಂದುವರಿದ ವೈರಲ್ ಕಾಯಿಲೆಗಳು ಎಂದು ಉಲ್ಲೇಖಿಸಿದ್ದನ್ನು ಓದಿದ ನೆನಪು . ಇದೇ ರೀತಿ ಡೆಂಗೂ ಜ್ವರ ದವರು ಪ್ಲಾಟೇಲೆಟ್ ಕಡಿಮೆ ಎಂದು ಬೆಂಗಳೂರು ಮಂಗಳೂರು ಇತ್ಯಾದಿ ಊರುಗಳಿಂದಲೂ ,ಸುತ್ತು ಮುತ್ತಲ ಹಳ್ಳಿಗಳಿಂದಲೂ ಬರುತ್ತಾರೆ .ನಾನು ಅದಕ್ಕೆಂದು ಏನೂ ಕೊಡುವುದಿಲ್ಲ . ತನ್ನಿಂದ ತಾನೇ ಅದು ಸರಿ ಆಗುವುದು . ಕೆಲವರು ಅದು ನಮ್ಮ ಕೈ ಗುಣದಿಂದ ಎನ್ನುವರು .ಉಳಿದವರು ತಾವು ತಿಂದ ಕಿವಿ ಮತ್ತು ಪಪ್ಪಾಯಿ ಕಾರಣ ಎನ್ನುವರು . 

ಅಯಾಚಿತ ಅನರ್ಹ ಹೊಗಳಿಕೆ ಬಂದಾಗ ತೆಗಳಿಕೆ  ಬರದೇ ಇರುತ್ತದೆಯೇ .? ಸ್ತ್ರೀ ರೋಗ ತಜ್ಞೆಯರಿಗೆ ಇದು ಬರುವದು ಹೆಚ್ಚು .ಆಸ್ಪತ್ರೆಯಲ್ಲಿ ಇಂದು ಡಿಸ್ಚಾರ್ಜ್ ಆಗುವಾಗ ಸಿಹಿ ತಿಂಡಿ ಸಿಗುವುದು ಅವರಿಗೆ ಮಾತ್ರ. ಅದರಂತೆ ಅನೀರಿಕ್ಷಿತ  ರಕ್ತಸ್ರಾವ ,ಶಿಶು ವಿನ  ಅನಾರೋಗ್ಯ ಆದಾಗ ಅವರು ತೆಗೆಳಿಕೆ ಕೇಳ ಬೇಕಾಗುತ್ತದೆ . ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದು . ಇಲ್ಲಿಯ ವರೆಗೆ ಇಂದ್ರ ಚಂದ್ರ ,ಧನ್ವನ್ತರಿ ಎಂದು ಹೊಗಳುತ್ತಿದ್ದವರಿಗೆ ಇದ್ದಕ್ಕಿದ್ದಂತೆ  ವೈದ್ಯರು ರಾಕ್ಷಸರಂತೆ ಕಾಣುತ್ತಾರೆ . ಉಳಿದ ಸ್ಪೆಸಿಯಾಲಿಟಿ ಗಳಲ್ಲಿಯೂ ಇಂತಹ ಪ್ರಕರಣ ನಡೆಯುತ್ತಲಿರುತ್ತವೆ . ಕೆಲವೊಮ್ಮೆ ವೈದ್ಯರ ಕಡೆಯಿಂದ ಲೋಪ ಆಗಿರ ಬಹುದಾದರೂ , ಬಹಳ ಕಡೆ  ಅವರು ಧರ್ಮಕ್ಕೆ ಬೈಗಳು ತಿನ್ನುವರು . ವೈದ್ಯರೂ ಮನುಷ್ಯರೇ . ತಾವು ಚಿಕೆತ್ಸೆ ಮಾಡುವ ರೋಗಿಯು ನಿರೀಕ್ಷಿತ ಸ್ಪಂದನೆ ಕೊಡದಿದ್ದರೆ ಅವರ ಸ್ಟ್ರೆಸ್ ಕೂಡಾ ಹೆಚ್ಚುವದು ,ಮನಶಾಂತಿ ಕಡಿಮೆ ಆಗುವದು . 

ಕೆಲವೊಮ್ಮೆ ನಾನು ಕೆಲಸ ಮುಗಿಸಿ ಮನೆಗೆ ಹೋದಾಗ ಮುಖ ಮ್ಲಾನ ವಾಗಿ ಇರುವುದು .ಆಗ ಮನೆಯವರು  ಸಂಜೆ ಯ  ತಿಂಡಿ ಕಾಪಿ ಸರಿಯಾಗಿಲ್ಲ ಎಂದು ತಿಳಿದು ಕೊಂಡು ನಿಮಗೆ ಹೇಗೆ ಮಾಡಿ ಹಾಕಿದರೂ ಸರಿ ಆಗುವುದಿಲ್ಲ ಎನ್ನುವರು .ವಾಸ್ತವದಲ್ಲಿ ನಾನು ಆಸ್ಪತ್ರೆಯ ರೋಗಿಯ ಬಗ್ಗೆ ಚಿಂತಿಸುತ್ತ ಇರುವೆನು .ಆಸ್ಪತ್ರೆಯ ರೋಗಿಗಳ ಮಾಹಿತಿ ಮನೆಯಲ್ಲಿ ಹೇಳುವುದಿಲ್ಲ .. ಅದು ವೈದ್ಯ ನೀತಿಗೆ ವಿರುದ್ಧ

 

ಶುಕ್ರವಾರ, ಅಕ್ಟೋಬರ್ 14, 2022

ದಾನ ವಿಧಾನಗಳು

ದಾನಿಗಳಲ್ಲಿ ಹಲವು ವಿಧ .ಕೆಲವರು ತಾವು ಕೊಡುವುದು  ಕಿಂಚಿತ್ ಆದರೂ ಊರೆಲ್ಲಾ ಜಾಹೀರು ಮಾಡಿ ಜನ ತಿಳಿಯ ಬೇಕು ಎಂದು ಬಯಸುವರು . ಈಗಂತೂ ಫೋಟೋ ,ವೀಡಿಯೋ ಮತ್ತು ಪ್ಲೆಕ್ಸ್ ಗಳು ಇದಕ್ಕೆ ಸುಲಭ ಸಹಾಯ ದಾರಿಗಳು . ಇವರಲ್ಲಿ ಕೆಲವರು ದಾನ ಪುಣ್ಯವನ್ನು ಬೇರೆ ರೀತಿ ನಗದೀ ಕರಿಸುವ ಆಸೆ ಉಳ್ಳವರು . 

ಇನ್ನು ಕೆಲವರು ದೊಡ್ಡ ಮೊತ್ತದ ಸಹಾಯ ಮಾಡಿ ಪ್ರಚಾರ ಮಾಡುವರು .ತಮ್ಮಂತೆ ಉಳಿದವರೂ ಮಾಡಲಿ ಎಂಬ ಉದ್ದೇಶ ಇರಬಹುದು . ಸಾರ್ವಜನಿಕ ಹಣ ಒಂದು ಕಡೆ ಲೂಟಿ ಮಾಡಿ ಇನ್ನೊಂದು ಕಡೆ ಬಹಿರಂಗವಾಗಿ ದಾನ ಶೂರ ಎನಿಸಿ ಕೊಂದವರು ಕೂಡಾ ಸಮಾಜದಲ್ಲಿ ಸಲ್ಲುವರು .

ಇನ್ನು ಹಲವರು ತಾವು ಒಂದು ಕೈಯ್ಯಿಂದ ಕೊಟ್ಟುದು ಇನ್ನೊಂದು ಕೈಗೆ ತಿಳಿಯ ಬಾರದು ಎಂಬ ಸಿದ್ದಾಂತ ಪಾಲಿಸುವವರು . ಇಲ್ಲಿ ದಾನ ಕೊಳ್ಳುವವನ ವೈಯುಕ್ತಿಕ ಪ್ರತಿಷ್ಠೆ ಗೆ ಕುಂದು ಬರ ಬಾರದು ಎಂದ ಸದುದ್ದೇಶ ಇದೆ .

ಪ್ರೊ ಹಿರಿಯಣ್ಣ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಇದ್ದವರು .ಇವರು ತತ್ವ ಶಾಸ್ತ್ರ ತರಗತಿಗಳನ್ನೂ ತೆಗೆದು ಕೊಳ್ಳುತ್ತಿದ್ದು ಬಹಳ ಪ್ರಸಿದ್ದ ,ಅವರ ನೋಟ್ಸ್ ಗಳು ಪುಸ್ತಕ ರೂಪದಲ್ಲಿ ಬಂದಿವೆ .ಎಸ್ ರಾಧಾಕೃಷ್ಣನ್ ಅವರ ಸಮಕಾಲೀನ ರಾಗಿದ್ದವರು.

ಡಿ ವಿ ಜಿ ಯವರು  ಜ್ನಾಪಕ ಚಿತ್ರ ಶಾಲೆಯಲ್ಲಿ ಅವರ ಬಗ್ಗೆ ಹೀಗೆ ಬರೆಯುತ್ತಾರೆ .

ಹತ್ತಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ.ಅದು ಸಂತೋಷ ಪೂರ್ವಕವಾದ ಸಹಾಯ .ಆದರೆ ಒಂದು ವಿಶೇಷ .ಸಹಾಯ ತೆಗೆದು ಕೊಂಡ ಯಾರೂ ಅದನ್ನು ಮತ್ತೊಬ್ಬರಿಗೆ ಉಸುರ ಕೂಡದು .ಇದು ಕಟ್ಟಾಜ್ನೆ .ನನಗೆ ತಿಳಿದ ಒಬ್ಬ ಸಂಸ್ಕೃತ ವಿದ್ಯಾರ್ಥಿ ಎಂ ಎ ಸಂಸ್ಕೃತ ಓದುತ್ತಿದ್ದ .ಆತನ ಹೆಸರು ಹರಿ ಎಂದು ಇಟ್ಟು ಕೊಳ್ಳೋಣ .ಆತನಿಗೆ ಹಿರಿಯಣ್ಣನವರು ಗುಪ್ತವಾಗಿ ಮಾಸಾಶನ ಕೊಡುತ್ತಿದರು .ಅವನ ಸಹಪಾಠಿ ಯೊಬ್ಬ ಕಷ್ಟದಲ್ಲಿ ಇದ್ದಾಗ ಅದನ್ನು ಹರಿಯೊಡನೆ ಹೇಳಿಕೊಂಡನು .ಹರಿ ತಾನು ಹಿರಿಯಣ್ಣ ನವರಿಂದ ಪಡೆಯುತ್ತಿದ್ದ ಸಹಾಯವನ್ನು ಹೇಳಿ ಆ ಉದಾರಿಗಳನ್ನು ಆಶ್ರಯಿಸುವಂತೆ ಸಲಹೆ ಕೊಟ್ಟ .ಈ ಎರಡನೆಯ ವಿದ್ಯಾರ್ಥಿ ಹಿರಿಯಣ್ಣನವರಲ್ಲಿಗೆ ಹೋಗಿ ತನ್ನ ಕತೆಯನ್ನು ಹೇಳಿಕೊಂಡ .ಹಿರಿಯಣ್ಣನವರು ಆತನಿಗೂ ಸಹಾಯ ಕೊಡುವುದಾಗಿ ಭರವಸೆ ಕೊಟ್ಟು ಹಾಗೆಯೇ ನಡೆಸಿ ಕೊಂಡರು.

ಹರಿಗಾದರೋ ಅಂದಿನಿಂದ ಮೂರು ತಿಂಗಳ ಮಾಸಾಶನ ಕೊಡಬೇಕಾದದ್ದು ಉಳಿದಿತ್ತು .ಇನ್ನು ಮುಂದಿನ ಮೂರು ತಿಂಗಳ ಮೊಬಲಗನ್ನು ಒಟ್ಟಿಗೆ ಪೊಟ್ಟಣ ಕಟ್ಟಿ ಹರಿ ಬಂದಾಗ ಆತನ ಕೈಗೆ ಇತ್ತರು.ಆತ ಅದನ್ನು ಬಿಚ್ಚಿ ನೋಡಿ ಆಶ್ಚರ್ಯ ಸೂಚಿಸಲು ಹಿರಿಯಣ್ಣ 'ನೀವು ಈ ಸಂಗತಿಯನ್ನು ಯಾರಿಗೂ ತಿಳಿಸಬಾರದು ಎಂದು ಹೇಳಿದ್ದೆ .ನೀವು ಹೇಳಿ ಬಿಟ್ಟಿರಿ .ಒಳ್ಳೆಯದು ,ಇಲ್ಲಿಗೆ ನಾನು ಕೊಟ್ಟ ಮಾತು ನಡೆದಿದೆಯಲ್ಲಾ "ಎಂದರು .

 M. Hiriyanna.jpgBuy Outlines Of Indian Philosophy Book Online at Low Prices in India |  Outlines Of Indian Philosophy Reviews & Ratings - Amazon.in

ಗುರುವಾರ, ಅಕ್ಟೋಬರ್ 13, 2022

ಹೀರೇ ಕಾಯಿ

 Ridge gourd (Turai) - Greenoyardಮೊನ್ನೆಪೇಟೆಯಿಂದ  ಊರ ಹೀರೇ ಕಾಯಿ ತಂದಿದ್ದು ನಿನ್ನೆ ಪಲ್ಯ ಮಾಡಿದ್ದರು . ಬಹಳ ದಶಕಗಳ ನಂತರ  ಒರಿಜಿನಲ್ ಹೀರೇ ಕಾಯಿ ರುಚಿ ;ಇತ್ತೀಚೆಗೆ ಗಟ್ಟದ ಮೇಲಿನ ಮತ್ತು ಊರಿನ ಹೀರೇ ಕಾಯಿಗೆ ಕೂಡಾ ಆ ರುಚಿ ಇರಲಿಲ್ಲ . ಸಂತೋಷ ದಿಂದ  ಮನಸು ಹಿಗ್ಗಿ ಹೀರೇ ಕಾಯಿ ಆಯಿತು .ನಿಜಕ್ಕೂ ಹೀರೇ ಕಾಯಿ ಹಿಗ್ಗುವುದಿಲ್ಲ ,ಅದು ಸುಗ್ಗುವುದು (ಗಾತ್ರದಲ್ಲಿ ಕಡಿಮೆ ಆಗುವುದು ).ಒಂದು ಕಿಲೋ ಹೀರೇ ಕಾಯಿ ಗೆ ಒಂದು ಮೂರು ಮಂದಿಗೆ ಹೊತ್ತಿನ ಪಲ್ಯ ಆಗ ಬಹುದು . ಅದಕ್ಕೇ ಇರ ಬೇಕು ಮದುವೆ ಸಮಾರಂಭ ಗಳಿಗೆ ಇದರ ಪಲ್ಯ ಮಾಡುವುದು ಕಂಡಿಲ್ಲ .

ಹೀರೇ ಪದಾರ್ಥ ಮಾಡುವಾಗ ತೆಗೆದ ಸಿಪ್ಪೆಯನ್ನು ಚಟ್ನಿ ಮಾಡುತ್ತಿದ್ದರು. ನಾರಿನಿಂದ ಕೂಡಿದ ಸಿಪ್ಪೆ ಕರುಳಿನ ಆರೋಗ್ಯಕ್ಕೆ ಒಳ್ಳೆಯದು .

ಇತ್ತೀಚೆಗೆ ಊರ ಬೆಂಡೆ ಎಂದು ಮರುಕಟ್ಟೆಯಲ್ಲಿ ದುಪ್ಪಟ್ಟು ಬೆಲೆಗೆ ಸಿಗುವ ತರಕಾರಿ ನೋಡಲು ಮಾತ್ರ ದೊಡ್ಡ ದಿದ್ದು ಬಾಲ್ಯದಲ್ಲಿ ಸವಿದ ಬೆಂಡೆ ಪರಿಮಳ ಕಾಣೆ .

ಲಕ್ಷ್ಮೀಶ ತೊಲ್ಪಾಡಿ ಮೆಚ್ಚಿಗೆ ಪತ್ರ


 

ಮಂಗಳವಾರ, ಅಕ್ಟೋಬರ್ 11, 2022

ಹೀಗೊಬ್ಬ ಓದುಗ ನ ಅಭಿಪ್ರಾಯ ಇಂದ್ರ ಭವನದ ಚೌ ಚೌ ಬಾತ್ ನಂತೆ

MANGALORE : Indra Bhavan at balmatta Karnataka , Mangaluru : 21/02/2018 : Hotel Indra Bhavan in Mangaluru. Photo: H_S_ Manjunath

 

ಇಂದು  ಸಂಜೆ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂತು . ನನ್ನ ಕೃತಿ ವೈದ್ಯರ ಚೌ ಚೌ ಬಾತ್ ಓದಿ ಮುಗಿಸಿದ್ದು ,ತುಂಬಾ ಮೆಚ್ಚಿ ಕೊಂಡೆ ಎಂಬ ತಾತ್ಪರ್ಯ . ಅದರಲ್ಲಿ ಹೆಸರು ಇರದ ಕಾರಣ ಧನ್ಯವಾದ ಸಮರ್ಪಿಸಿ ಅವರ ಪರಿಚಯ ಕೇಳಿದೆ .ಕೂಡಲೇ ಫೋನ್ ಬಂದು ತಾವು ಮಂಗಳೂರು ಇಂದ್ರ ಭವನದ ಮಾಲೀಕ ಪ್ರಕಾಶ ಉಡುಪ ,ನಿಮ್ಮ ಮೊದಲ ಪುಸ್ತಕ ಕೂಡಾ ಕೊಂಡು ಓದಿ ಮೆಚ್ಚಿ ಕೊಂಡಿದ್ದೇನೆ ಎಂದರು . ನನಗೆ ಆಶ್ಚರ್ಯ ಮತ್ತು ಸಂತೋಷ ಏಕ ಕಾಲಕ್ಕೆ ಆಯಿತು . ಆಶ್ಚರ್ಯ ,ಸ್ವಯಂ ಇಂಜಿನಿಯರ್ ಆಗಿದ್ದು ತಂದೆಯವರು ಸ್ಥಾಪಿಸಿದ ಜನಪ್ರಿಯ ಹೋಟೆಲ್ ನಡೆಸುತ್ತಿರುವ ವ್ಯಕ್ತಿಗೆ ನನ್ನಂತಹ ಅಜ್ಞಾತ ನ  ಪುಸ್ತಕ ಓದಲು ಸಮಯ,ವ್ಯವಧಾನ ಮತ್ತು ಆಸಕ್ತಿ ಹೇಗೆ ಬಂತು ?ಸಂತೋಷ ನನ್ನ ಮೆಚ್ಚಿನ ಹೋಟೆಲ್ ಇಂದ್ರ ಭವನ ವರು ಎಂದು . 

ಇಂದ್ರ ಭವನ ,ವಿಶ್ವ ಭವನ ಎಲ್ಲಾ ಮಂಗಳೂರಿನ ಐಕಾನ್ ಗಳು . ವಿಶ್ವ ಭವನ ಕೂಡಾ ಅವರೇ ನಡೆಸುತ್ತಿದ್ದರು . ಅಲ್ಲಿನ ಸಜ್ಜಿಗೆ ಬಜಿಲು ,ಬನ್ಸ್ ,ತುಪ್ಪಾ ದೋಸೆ ಪ್ರಸಿದ್ಧ . ನಮ್ಮ ಕಿಸೆಗೂ ಭಾರವಾಗದ ದರ ಪಟ್ಟಿ . ಹಿಂದೆ ಕಲೆಕ್ಟರ್ ಗೇಟ್  ಜಂಕ್ಷನ್ ನಿಂದ ಸ್ವಲ್ಪ ಮುಂದೆ ರಾಜ ರಸ್ತೆ ಬದಿಯಲ್ಲಿ ಇದ್ದು , ಈಗ ಅಲ್ಲೇ ಮುಂದೆ ಆರ್ಯ ಸಮಾಜ ರಸ್ತೆ ಆರಂಭ ಆಗುವಲ್ಲಿ ಎಡ ಬದಿಯಲ್ಲಿ ಇದೆ . ಸ್ವಚ್ಛತೆ ಮತ್ತು ಸ್ವಾದ  ಎರಡು ಸಮ್ಮಿಳಿತ .  

  ನನ್ನ ಬರಹಗಳು ಸಾಹಿತ್ಯಿಕವಾಗಿ ಗುಣ ಮಟ್ಟ ದವು ಎಂಬ ನಂಬಿಕೆ ನನಗೆ ಇಲ್ಲ . ಅವು ನನ್ನ ಮನಸಿನಲ್ಲಿ ಹರಿದಾಡುವ ಯೋಚನೆಗಳ ಮೂರ್ತ ರೂಪ .ಹಿಂದೆ ನಮ್ಮ ಅಕ್ಕ ಪಕ್ಕದ ,ಗೆಳೆಯರ ,ಮತ್ತು ಕುಟುಂಬದ ಹಿರಿ ಕಿರಿಯರ ಬಳಿ ಹಂಚಿ ಕೊಳ್ಳುತ್ತಿದ್ದಂತಹ  ,ಮೆಲುಕು ಹಾಕಿ ಕೊಳ್ಳುತ್ತಿದ್ದಂತ ವಿಷಯಗಳು  .ಈಗ ಅದನ್ನು ಯಾರಲ್ಲಿ ಹೇಳಲಿ ?ಅದಕ್ಕೆ ಬರೆಯುತ್ತಿದ್ದೇನೆ .  ಅಪರಿಚಿತ ಮತ್ತು ಪರಿಚಿತರು ಮೆಚ್ಚುಗೆ ಸೂಚಿಸಿದಾಗ ಸಂತೋಷ ಆಗುತ್ತದೆ . ಮೊನ್ನೆ ಶನಿವಾರ ಬೆಂಗಳೂರಿಗೆ ರೈಲು ಹಿಡಿಯಲು ಪುತ್ತೂರು ರೈಲ್ವೆ ನಿಲ್ದಾಣ ದಲ್ಲಿ ಕಾಯುತ್ತಿದ್ದಾಗ ಪ್ರಗತಿ ಪರ ಕೃಷಿಕ ಮುಳಿಯ ವೆಂಕಟ ಕೃಷ್ಣ ಶರ್ಮ ಬಹಳ ಹೊತ್ತು ಕೃತಿಯಲ್ಲಿ ತಾನು ಮೆಚ್ಚಿದ ಅಂಶಗಳನ್ನು ಫೋನ್ ಮಾಡಿ ತಿಳಿಸಿ ಸಂತಸ ವ್ಯಕ್ತ ಪಡಿಸಿದರು . ನನ್ನ ಮಗ ಸೊಸೆ ಬೆಂಗಳೂರಿಗೆ ತಲುಪಿದ್ದು ,ಅವರನ್ನು ಮತ್ತು ನಮ್ಮ ಪುಟ್ಟ ಮೊಮ್ಮಗನನ್ನು ಮಾತನಾಡಿಸಿ ಸೋಮವಾರ ಪುನಃ ಆಸ್ಪತ್ರೆ ಕೆಲಸಕ್ಕೆ ಹಾಜರ್ ಆಗಿದ್ದೇನೆ
 

ಶನಿವಾರ, ಅಕ್ಟೋಬರ್ 8, 2022

ಡಾ ಒ ಪಿ ಕಪೂರ್

 Dr. Om Prakash Kapoor (Dr. O P Kapoor's Clinic) - General Physician Doctors  - Book Appointment Online - General Physician Doctors in Fort, Mumbai -  JustDial

ಹುಟ್ಟು ಅಧ್ಯಾಪಕರು ಎಂಬ ಮಾತಿದೆ .  Born teacher ಅನ್ನುತ್ತಾರೆ . ಇವರು born to be teachers ಕೂಡಾ ಆಗಿರುತ್ತಾರೆ .ಕೆ ಎಂ ಸಿ ಹುಬ್ಬಳ್ಳಿಯಲ್ಲಿ  ಡಾ ನಾರಾಯಣ ಶೆಟ್ಟಿ ,ಕೌಲ್ಗುಡ್ ಸಹೋದರರು ,ಡಾ ಕೆ ಜಿ ನಾಯಕ್ ,ಡಾ ಗಿರಿ ಗೌಡ   ,ಮುಂದೆ ಚೆನ್ನೈ ಯಲ್ಲಿ ಡಾ ಕೆ ವಿ ತಿರುವೆಂಗಡಂ ,ಡಾ ಎಂ ಕೆ ಮಣಿ ,ಡಾ ಸೇತುರಾಮನ್ ಮುಂತಾದ ನನ್ನ ಗುರುಗಳು ಈ ಸಾಲಿಗೆ ಸೇರಿದವರು  . ಕೊನೆಯ ಮೂವರು  ಮೆಡಿಕಲ್ ಕಾಲೇಜು ನಿಂದ ನಿವೃತ್ತಿ ಬಳಿಕವೂ  ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪಾಠ ಮಾಡುತ್ತಿದ್ದು  ನಗರದ ಯಾವುದೇ ವಿದ್ಯಾರ್ಥಿ ಅವರ ತರಗತಿಗಳಿಗೆ ಹಾಜರಾಗ ಬಹುದಿತ್ತು . ಇವರ  ಇಂತಹ ತರಗತಿಗಳಿಗೆ ಹಾಜರಾಗುವ ಭಾಗ್ಯ ನನಗೆ ದೊರೆತಿತ್ತು . 

ಇಂತದೇ ಒಬ್ಬ ವೈದ್ಯ ಗುರು ಮೊನ್ನೆ ನಿಧನರಾದ ಡಾ ಓ ಪಿ ಕಪೂರ್ ಅವರು . ಮುಂಬೈಯ ಗ್ರಾಂಟ್ ಮೆಡಿಕಲ್ ಕಾಲೇಜ ನಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ,ಬಾಂಬೆ ಆಸ್ಪತ್ತೆಯ ಬಿರ್ಲಾ ಮಾತೋಶ್ರೀ ಸಭಾಗೃಹದಲ್ಲಿ ನಿಯತವಾಗಿ ಆಸಕ್ತ ವೈದ್ಯರಿಗಾಗಿ ಉಚಿತ ಉಪನ್ಯಾಸ ನಡೆಸುತ್ತಿದ್ದು ಯಾವಾಗಲೂ ಕಿಕ್ಕಿರಿದು ತುಂಬಿರುತ್ತಿತ್ತು . ಯಾವುದೇ ಕ್ಲಿಷ್ಟ ವಿಷಯವನ್ನು ಸರಳವಾಗಿ ತಿಳಿ ಹೇಳುವುದು ಅವರಿಗೆ ಕರತಾ ಮಲಕ ಆಗಿತ್ತು .ಮುಂಬೈಯಲ್ಲಿ ಬೇರೊಂದು ತರಬೇತಿಗೆ ಎರಡು ತಿಂಗಳಿಗೆ ಹೋಗಿದ್ದ ನಾನು ಇವರ ಕ್ಲಾಸ್ ಗಳಿಗೆ ಹೋಗಿ ಬಹಳ  ಕಲಿತಿರುವೆನು . 

 ಕೊರೊನ  ಸಮಯದಲ್ಲಿ ಯು ಟ್ಯೂಬ್ ಮೂಲಕ ತಮ್ಮ ಪ್ರವಚನ ಮುಂದುವರಿಸಿದ್ದ ಇವರ ವಿಡಿಯೋ ಗಳನ್ನೂ ಸಾವಿರಾರು ಮಂದಿ ವೀಕ್ಷಿಸಿದ್ದಾರೆ .ಇವರ ಓ ಪಿ ಕಪೂರ್ ಗೈಡ್ ಫಾರ್ ಜನರಲ್ ಪ್ರಾಕ್ಟಿಷನೆರ್ ಬಹು ಉಪಯುಕ್ತ ಮತ್ತು ಜನಪ್ರಿಯ . 

ಮಂಗಳೂರಿನಲ್ಲಿ ಸರ್ಜರಿ ಪ್ರಾಧ್ಯಾಪಕ ರಾಗಿದ್ದ  ಡಾ ಸಿ ಆರ್ ಬಲ್ಲಾಳ್ ಕೂಡಾ ಈ ವರ್ಗಕ್ಕೆ ಸೇರಿದ ಒಬ್ಬ ವೈದ್ಯ ಗುರು . ವಿದ್ಯಾರ್ಥಿ ಗಳು ಇದ್ದಲ್ಲಿ ಪಾಠ ಮಾಡಲು ಎವರ್ ರೆಡಿ . 

 Kapoor's Guide for General Practitioners (12 Volume Set) By Kapoor

ಮಂಗಳವಾರ, ಅಕ್ಟೋಬರ್ 4, 2022

ಪುತ್ತೂರಿನ ರೋಟರಿ ಭೀಷ್ಮ ಪಿತಾಮಹ

 ಪುತ್ತೂರಿನಲ್ಲಿ ಒಬ್ಬರು ಹಿರಿಯರು ಇದ್ದಾರೆ . ಪೇಟೆಯ ರಸ್ತೆಯ ಬದಿಯ ಉದ್ದಕ್ಕೂ ಒಂದು ದೊಡ್ಡ ಕೊಡೆ ಹಿಡಿದು ಕೊಂಡು ಸ್ವಲ್ಪ ಮುಂದಕ್ಕೆ ಬಾಗಿ ನಡೆಯುತ್ತಿರುವ ದೃಶ್ಯ ಸಾಮಾನ್ಯ . ಅಕ್ಕ ಪಕ್ಕದ ಅಂಗಡಿಯವರು ಎಲ್ಲರೂ ಇವರಿಗೆ ಪರಿಚಿತರು . ಎಲ್ಲರ ವಂದನೆಗೂ ಒಂದು ಪ್ರತಿ ವಂದನೆ . 

ಇವರು ಸಾಮಾನ್ಯ ವ್ಯಕ್ತಿಯಲ್ಲ .ಪುತ್ತೂರಿನ ಅಡ್ಯ ವರ್ತಕ ಕುಟುಂಬಕ್ಕೆ ಸೇರಿದವರು ,ಪುಣ್ಯವಂತರು . ಮೊದಲ ನೋಡುಗರಿಗೆ ಅದು ಅಚ್ಚರಿ ಉಂಟು ಮಾಡ ಬಹುದಾದಷ್ಟು ಸರಳತೆ ಮತ್ತು ಆತ್ಮೀಯತೆ . ಇವರೇ ಶ್ರೀ ಕೆ ಆರ್ ಶೆಣಾಯ್ ಅಥವಾ ಕೆ ರತ್ನಾಕರ ಶೆಣಾಯ್ .  ಮೊದಲ ಸಾಲಿನ ವಾಣಿಜ್ಯೋದ್ಯಮಿ ಆಗಿದ್ದವರು . ಈಗ ಮಕ್ಕಳಿಗೆ ಬಿಟ್ಟಿರುವ ಇವರು ಪೂರ್ಣಕಾಲಿಕ ಸಮಾಜ ಕೈಂಕರ್ಯ ದಲ್ಲಿ ತೊಡಗಿರುವರು . ವಾಣಿಜ್ಯ ಸಂಘದ ಸಕ್ರಿಯ ಪದಾಧಿಕಾರಿ ಆಗಿದ್ದ ಇವರು ಈಗಲೂ ಸಣ್ಣ ದೊಡ್ಡ ಎಂದು ಭೇದ ಇಲ್ಲದೆ ಯಾರಾದರೂ ವರ್ತಕರು ,ಉದ್ದಿಮೆದಾರರು ಅನಾರೋಗ್ಯ ಇತ್ಯಾದಿ ಸಂಕಷ್ಟಕ್ಕೆ ಒಳಗಾದಾಗ ಕರೆಯದೇ ಹೋಗಿ ಅವರಿಗೆ ಸ್ಥೈರ್ಯ ತುಂಬಿ ತಮ್ಮಿಂದ ಆದ ಸಹಾಯ ಮಾಡುವರು . ನನ್ನ ಬಳಿ ಇಂತಹ ಮಿತ್ರರ ರೋಗ ಸ್ಥಿತಿಯ ಬಗ್ಗೆ ಮಾಹಿತಿ ತಿಳಿದು ಕೊಂಡದ್ದು ಇದೆ . 

         ಇನ್ನು ಇವರು ಬಹಳ ಪ್ರಸಿದ್ಧರಾಗಿರುವುದು ರೋಟರಿ ಚಳುವಳಿಯಲ್ಲಿ . ಪುತ್ತೂರಿನ ಆದ್ಯ ರೋಟರಿ ಕ್ಲಬ್ಬಿನ ಪ್ರವರ್ತಕರು ಆಗಿರುವ ಇವರ ಕಾರ್ಯಕ್ಷಮತೆ ಮತ್ತು ಸಂಘಟಕ ಶಕ್ತಿ ಒಂದು ವಿಸ್ಮಯ .ಇಂದು ಪುತ್ತೂರಿನಲ್ಲಿ ಏಳು ರೋಟರಿ ಕ್ಲಬ್ ಗಳು ಇವೆಯಂತೆ . ಎಲ್ಲಾ ರಂಗದ ಯುವಕರನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಇವರ ವಿಶೇಷ ಗುಣ . ತಮ್ಮ ತರುಣದಲ್ಲಿ ಜೇಸಿಸ್ ಸಂಘಟನೆಯಲ್ಲಿಯೂ ಇದೇ ಛಾಪು ಮೂಡಿಸಿದ್ದರಂತೆ ..ತಮ್ಮ ಮಾತೃ ಕ್ಲಬ್ ಅಲ್ಲದೆ ಪುತ್ತೂರು ಮತ್ತು ಅಕ್ಕ ಪಕ್ಕದ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಇವರು ಹಾಜರು .ಪುತ್ತೂರಿನ ಮಟ್ಟಿಗೆ ಇವರು ರೋಟರಿ ಪಿತಾಮಹ . 

ನಾನು ಇವರಿಗೆ ವಿಶೇಷ ಉಪಚಾರ ಏನೂ ಮಾಡಿದವನಲ್ಲ.ರೋಟರಿಯನ್ ಕೂಡಾ ಅಲ್ಲ .ಆದರೂ ಮೊನ್ನೆ ನಾನು ಸ್ವಲ್ಪ ಅಸೌಖ್ಯದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಬಂದು ಯೋಗ ಕ್ಷೇಮ ವಿಚಾರಿದ್ದು ಅವರ ಹೃದಯ ವೈಶಾಲ್ಯ ದ ಸೂಚಕ . ವಸುದೈವ ಕುಟುಂಬಕಂ ಮತ್ತು ಸರ್ವೇ ಜನಾಃ ಸುಖಿನೊನೋಭವಂತು ಅಕ್ಶರಶಃ ಇವರ ವೇದ ವಾಕ್ಯ . 

ಇವರ ಪತ್ನಿ  ಶ್ರೀಮತಿ ರತಿ  ಶೆಣಾಯ್ ಅವರು ಪತಿಗೆ ಅನುರೂಪ .ಸದಾ ಮುಖದಲ್ಲಿ ಮಾಸದ ನಗು . ಮನೆಗೆ ಬಂದ ಅತಿಥಿಗಳಿಗೆ ಆದರದ ಆತಿಥ್ಯ . ಈ ದಂಪತಿ ಹೀಗೇ ಒಳ್ಳೆಯ ಅರೋಗ್ಯ  ಮತ್ತು ಶಾಂತಿಯಿಂದ ಬಾಳಿ ನಮಗೆಲ್ಲಾ ಮಾರ್ಗ ದರ್ಶನ ಮಾಡುತ್ತಲಿರಲಿ . 



 

ಸೋಮವಾರ, ಅಕ್ಟೋಬರ್ 3, 2022

ರಕ್ಷಣಾತ್ಮಕ ವೈದ್ಯಕೀಯ ಸೇವೆ

 ವೈದ್ಯಕೀಯ ಸೇವೆ ಸಂಧಿಕಾಲದಲ್ಲಿ ಇದೆ . ವೈದ್ಯ ರೋಗಿ ಸಂಬಂಧ ಶಿಥಿಲ ಗೊಂಡಿದೆ . ವೈದ್ಯರೂ ಕೂಡಾ ಹಲವು ಸ್ಪೆಷ್ಯಾಲಿಟಿ ,ಸೂಪರ್ ಸ್ಪೆಷ್ಯಾಲಿಟಿ ಗಳಲ್ಲಿ ಹಂಚಿ ಹೋಗಿ ,ಒಬ್ಬ ವ್ಯಕ್ತಿ ಒಬ್ಬ ಮನುಷ್ಯನಾಗಿ ಕಾಣದೆ ಹಲವು ಅಂಗಗಳ ಒಕ್ಕೂಟ ವಾಗಿ ಬಿಟ್ಟಿದ್ದಾನೆ . ನಮ್ಮ ಕುಟುಂಬದ ,ಅರೋಗ್ಯ ಮತ್ತು ಆರ್ಥಿಕ ಸಾಮಾಜಿಕ ಹಿನ್ನಲೆ ಬಲ್ಲ ಕುಟುಂಬ ವೈದ್ಯರು ಅಪರೂಪ ಆಗಿದ್ದರೆ ,ಇದ್ದರೂ ನೇರವಾಗಿ ಎಲ್ಲರೂ ಸ್ಪೆಷಲಿಸ್ಟ್ ಬಳಿ ಓಡುವರು . ಹೋಗುವುದಕ್ಕೂ ಮೊದಲೇ ತಾವೇ ಸ್ವಯಂ ವೈದ್ಯ ಮಾಡಿರುವರು . 

ವೈದ್ಯರ ಸೇವೆ ಕೂಡಾ ಒಂದು ವಾಣಿಜ್ಯ ಸೇವೆ ಆಗಿದ್ದು ಗ್ರಾಹಕ ಕಾನೂನುಗಳಿಗೆ ಒಳಪಡುವದು . ಚಿಕಿತ್ಸೆಯ ಪರಿಣಾಮದಲ್ಲಿ ಸಣ್ಣ ಪುಟ್ಟ ಏರು ಪೇರು  ಆದರೂ ನ್ಯಾಯಾಲಯದ ಕಟಕಟೆ ಏರುವ ಅಭ್ಯಾಸ ಆರಂಭ ಆಗಿದೆ .ಅದನ್ನು ವಿರೋಧಿಸುತ್ತಿಲ್ಲ ,ಅವರ ಹಕ್ಕು . ಇದರ ನಾರಾಯಣ ಹರಿ ಎಂದು ಕರೆಯುತ್ತಿದ್ದ ವೈದ್ಯರು ಹಠಾತ್  ವೈರಿಗಳಾಗಿ ,ದನುಜರಂತೆ ಕಾಣುವರು .ಅವರ ಮೇಲೆ ದೈಹಿಕ ಹಲ್ಲೆ ಕೂಡಾ ನಡೆಯುವುದು . 

ಇವುಗಳ ಅಡ್ಡ ಪರಿಣಾಮ ರಕ್ಷಣಾತ್ಮಕ ವೈದ್ಯಕೀಯ ಸೇವೆ .ಮೊದಲು ರೋಗಿ ಕಾಯಿಲೆಯಿಂದ ಬಂದೊಡನೆ ವೈದ್ಯರು ಅವನನ್ನು ಎಷ್ಟು ಬೇಗ ಗುಣ ಪಡಿಸುವುದು ಅಥವಾ ಬದುಕಿಸುವುದು ಎಂಬ ಚಿಂತನೆ ಮಾತ್ರ ಮಾಡುತ್ತಿದ್ದರು .ಬೇರೆಲ್ಲಾ ಗೌಣ . ಈಗ ಹಾಗಲ್ಲ ; ಮುಂದೆ ತನ್ನ ಮೇಲೆ ಬರ ಬಹುದಾದ ಸಂಭಾವಿತ ಅರೋಪಗಳನ್ನು ಹೇಗೆ ತಡೆಗಟ್ಟುವುದು ಎಂಬ ಯೋಚನೆ ,ರೋಗಿಯ ಪರೀಕ್ಷೆ ಮಾಡುವಾಗ ಸಮಾನಾಂತರ ವಾಗಿ ಬರುತ್ತದೆ . ಇದರಿಂದ ಸಣ್ಣ ವೈರಲ್ ಕಾಯಿಲೆಗೂ ಹಲವು ರಕ್ತ ಪರೀಕ್ಷೆ ,ಎಕ್ಷ ರೇ ಸ್ಕ್ಯಾನ್ ಇತ್ಯಾದಿ ಮಾಡುವರು . ಗರ್ಭಿಣಿಯರಲ್ಲಿ ಸಾಮಾನ್ಯ ಹೆರಿಗೆ ಆಗಲಿ ಎಂದು ಕಾದು ಏನಾದರೂ ತೊಂದರೆ ಆದರೆ ಎಂದು ಸಣ್ಣ ಏರು ಪೇರು ಇದ್ದರೂ  ಸಿಸೇರಿಯನ್ ಮಾಡುವರು .  ವೈದ್ಯರು ಎಲ್ಲರಿಗೂ ಸಿಸೇರಿಯನ್ ಮಾಡುವರು ಎಂದು ಆರೋಪಿಸುವರು ಅದನ್ನು ತಡಮಾಡಿ ತಾಯಿ ಮಗುವಿಗೆ ತೊಂದರೆ ಆದರೆ ತಾವೇ ಮೊದಲಾಗಿ ವೈದ್ಯರನ್ನು ದೂಷಿಸುವರು . 

ಈ ವಿಶ್ವಾಸ ಕೊರತೆಯ ಪರಿಣಾಮ . 

ವೈದ್ಯರು ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ .ಒತ್ತಡ ದಲ್ಲಿ ಕೆಲಸ ಮಾಡುವಾಗ ನಮ್ಮ ಕಾರ್ಯ ಕ್ಷಮತೆ ಕಡಿಮೆ ಆಗುವುದು . ವೈದ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುವುದು . 

ಪುತ್ತೂರಿನಂತಹ ಊರಿನಲ್ಲಿ ಚಿಕಿತ್ಸೆ ಮಾಡ ಬಹುದಾದಂತಹ ಕಾಯಿಲೆಗಳ ರೋಗಿಗಳನ್ನು ಮಂಗಳೂರಿಗೆ ಕಳುಹಿಸ ಬೇಕಾಗುತ್ತ್ತದೆ . ಇಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೆ ಮೊದಲೇ ಕಳುಹಿಸಲಿಲ್ಲ ಏಕೆ ಎಂಬ ಪ್ರಶ್ನೆ ಬರುತ್ತದೆ .ಈ ಹೆಚ್ಚು ಕಮ್ಮಿ ಮಂಗಳೂರಿನಲ್ಲೂ ಆಗಬಹುದು . ಇದರಿಂದ ಸಂಬಂಧಿಕರಿಗೆ ಕಷ್ಟ ,ವೆಚ್ಚ ಅಧಿಕ ವಾಗುವದು . 

ರೋಗ ಪತ್ತೆಗೆ ನೇರವಾಗಿ ಬೇಕಾದ ಪರೀಕ್ಷಣಗಳಲ್ಲದೆ ಇನ್ನೂ ಹಲವು ಮಾಡ ಬೇಕಾಗಿ ಬಂದು ರೋಗಿಯ ಬಿಲ್ಲಿಗೆ ಇದು ಸೇರುವದು .ಇನ್ನು ಜಾಲ ತಾಣಗಳನ್ನು ನೋಡಿ ರೋಗಿಗಳೇ ಕೆಲವು ಪರೀಕ್ಷೆಗಳನ್ನು ಮಾಡುವಂತೆ ಹೇಳುವರು .  ಬಿಲ್ ಹೆಚ್ಚಾದಂತೆ ರೋಗಿ ಮತ್ತು ಸಂಬಂದಿಕರ ಅಸಮಾಧಾನ ಇನ್ನೂ ಹೆಚ್ಚುವುದು . 

ಈ ಪರಿಸ್ಥಿತಿ ನಿರ್ಮಾಣವಾಗಲು ರೋಗಿ ,ವೈದ್ಯ ,ಸಮಾಜ ಮತ್ತು ಸರಕಾರ ಎಲ್ಲರೂ ತಮ್ಮ ತಮ್ಮ ಕೊಡುಗೆ ನೀಡಿದ್ದಾರೆ .ಇದನ್ನು ಸರಿಪಡಿಸುವದು ಹೇಗೆ ಎಂಬುದೇ ಚಿಂತೆ

ಬಯಲಾಟ

 ಹಿಂದೆ ಯಕ್ಷಗಾನ ಬಯಲಾಟವೇ ಹಳ್ಳಿಯವರಿಗೆ ಮನೋರಂಜನೆ . ವಿಟ್ಲ ಪುತ್ತೂರು ಜಾತ್ರೆಗೆ ಹೋದಾಗ ಟಿಕೆಟ್ ಸಿಕ್ಕಿದರೆ ಆಟ ನೋಡುವುದು ಇತ್ತು . ವಿಟ್ಲ ಜಾತ್ರೆಗೆ ಶಾಲೆಗೆ ರಜೆ ಇದ್ದು ಪುತ್ತೂರು ಜಾತ್ರೆ ದೊಡ್ಡ ರಜೆಯಲ್ಲಿಯೇ ಬರುವುದರಿಂದ ಶಾಲೆ ಹಾಜರಿಗೆ ತೊಂದರೆ ಆಗುತ್ತಿರಲಿಲ್ಲ . ಪುತ್ತೂರು ಜಾತ್ರೆಗೆ ಆರೇಳು ಮೇಳಗಳ ಆಟಗಳು ಬರುತ್ತಿದ್ದವು . ಸಂಜೆ ಜಾತ್ರೆಗೆ ಬಂದವರಿಗೆ ವಾಪಸು ಹೋಗಲು ಬಸ್ ಮರುದಿನವೇ ಆದುದರಿಂದ ರಾತ್ರಿ ಕಳೆಯಲು ಒಳ್ಳೆಯ ಮಾರ್ಗ .ಈಗಿನಂತೆ ಸ್ವಂತ ವಾಹನಗಲ್ಲಿ ಬಂದು ಹೋಗುವವವರು ಬೆರಳೆಣಿಕೆ ಯಲ್ಲಿ ಇದ್ದರು . 

     ಇನ್ನು ನಮ್ಮ ಮನೆ ಪಕ್ಕ ಬೈರಿಕಟ್ಟೆ ಯಲ್ಲಿ ವರ್ಷಕ್ಕೆ ಒಂದೋ ಎರಡೋ ಆಟಗಳು ಬರುತ್ತಿದ್ದವು . ಕನ್ಯಾನದಲ್ಲಿ ಹೆಚ್ಚು ಬರುತ್ತಿದ್ದರೂ ಹೋದದ್ದು ಕಡಿಮೆ .  

ಪುರಾಣದ ಕತೆಗಳನ್ನು  ನಮ್ಮ ಅಜ್ಜ ರಂಜಿಸಿ ಹೇಳುತ್ತಿದ್ದರಿಂದ ಮಹಾಭಾರತ ದ ಕತೆ ಚೆನ್ನಾಗಿ ತಿಳಿದಿತ್ತು ,ರಾಮಾಯಣ ಕತೆ ಯಾಕೋ ಅಜ್ಜ ಹೇಳುತ್ತಿದುದು ಕಡಿಮೆ .ಆದರೆ ಶಾಲೆಯಲ್ಲಿ ಅಧ್ಯಾಪಕರಿಂದ ಮತ್ತು ಚಂದಮಾಮ ಇತ್ಯಾದಿ ಓದಿ ಅದರ ಜ್ಞಾನವೂ ಇತ್ತು . ಪುರಾಣ ಪಾತ್ರಗಳು ಮೈವೆತ್ತು ಬರುವ   ಯಕ್ಷಗಾನ ನಮಗೆಲ್ಲಾ ವಿಶೇಷ ಆನಂದಾನುಭವ . 

ಸರಿ ಆಟ ಇರುವ ದಿನ ಸಂಜೆ ಆರೇಳು ಗಂಟೆಗೆಲ್ಲಾ ಚೆಂಡೆ ಶಬ್ದ ಕೇಳ ತೊಡಗಿ ,ನಮ್ಮ ರಕ್ತದಲ್ಲಿ ಎಡ್ರಿನಾಲಿನ್ ಹರಿವು ಏರುವುದು ,ಮನಸ್ಸಿನಲ್ಲಿಯೇ ರಿಂಗಣ ಕುಣಿಯುವುದು . ಚಿಕ್ಕಪ್ಪ ಹಣ ಸ್ಯಾಂಕ್ಷನ್ ಮಾಡುವರು .ನಮಗೆಲ್ಲಾ ತಲೆಗೆ ತಲಾ ಒಂದು ರೂಪಾಯಿ . ಅದರಲ್ಲಿ ನೆಲ ಟಿಕೆಟ್ ಗೆ ಎಂಟಾಣೆ ,ಉಳಿದದ್ದು  ನೆಲಕಡಲೆ ,ಕಟ್ಲಿಸ್ ಇತ್ಯಾದಿ ಕೊಂಡು ತಿನ್ನಲು .ಎಲ್ಲರ ಮೊತ್ತದ ಹಣ ಅಣ್ಣ ಗಣಪತಿ ಬಳಿ ,ಅವನು ಕೊಟ್ಟ ಮೇಲೆ ನಮಗೆ . ರಾತ್ರಿ ಬೇಗ ಊಟ ಮಾಡಿ ಸೂಟೆ ಬೆಳಕಿನಲ್ಲಿ ಗುಡ್ಡದ ದಾರಿಯಲ್ಲಿ ಬೈರಿಕಟ್ಟೆಗೆ .(ಒಂದು ಮೈಲು ದಾರಿ )  ದಾರಿಯುದ್ದಕ್ಕೂ ಎಂಟಾಣೆಯಲ್ಲಿ ಏನೆಲ್ಲಾ ಕೊಳ್ಳಬಹುದು ಎಂಬ ಲೆಕ್ಕಾಚಾರ .ಆಟದ ಟೆಂಟಿನ ಹೊರಗೆ ಕಡಲೆ ,ಚಿಕ್ಕಿ ,ಚಹಾ ಸೋಜಿ ,ನೀರುಳ್ಳಿ ಬಜೆ ಅಂಗಡಿಗಳು ಸಾಮಾನ್ಯವಾಗಿ ಇರುವವು . 

ಟೆಂಟಿನ ಒಳಗೆ  ಈಸಿ ಚೇರ್ ಎಕ್ಸಿ ಕ್ಯುಟಿವ್ ಕ್ಲಾಸ್ ,ಪುಣ್ಯವಂತರಿಗೆ . ನಮಗೆ ಅವರಲ್ಲಿ ಅಸೂಯೆ ಇರಲಿಲ್ಲ ,ಅದರ ಹಿಂದೆ ಪ್ಲಾಸ್ಟಿಕ್ ಕುರ್ಚಿ ಮತ್ತು ಕೊನೆಯಲ್ಲಿ ಬೆಂಚ್ . ರಂಗಸ್ಥಳದ ಇಕ್ಕಡೆಯಲ್ಲಿ" ನೆಲ  "ಕ್ಲಾಸ್ . ಬಲಬದಿಯಲ್ಲಿ ಸ್ತ್ರೀಯರು ,ಎಡಬದಿ ಪುರುಷರು .ನಾವು ಮಕ್ಕಳು ಎಲ್ಲಿ ಬೇಕಾದರೂ ಹೋಗ ಬಹುದು . ನೆಲ ಕ್ಲಾಸ್ ರಂಗಸ್ಥಳಕ್ಕೆ ಹತ್ತಿರ ಇದ್ದುದರಿಂದ ವೇಷಗಳನ್ನು  ಸಮೀಪದಿಂದ ನೋಡ ಬಹುದು . ಹಾಸ್ಯಗಾರರು ನಮ್ಮನ್ನು ಸಂದರ್ಭ ಬಂದಾಗ ಮಾತನಾಡಿಸುವರು .ಕಿಷ್ಕಿಂದಾ ಕಾಂಡದ ಕತೆ ಇದ್ದರೆ ನಮ್ಮನ್ನು ತೋರಿಸಿ ನೋಡಲ್ಲಿ ಕೆಲವು ಮರಿ ಕಪಿಗಳು ನಿದ್ದಿಸುತ್ತಿವೆ ,ಇನ್ನು ಕೆಲವು ಬಾಯಲ್ಲಿ ಏನೋ ಜಗಿಯುತ್ತಿವೆ ಎನ್ನುವರು .ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ತ್ಯಾಂಪ ಪೂಜಾರಿ  ,ಅಣ್ಣು ಮೂಲ್ಯ ಎಲ್ಲಾ ನಮ್ಮ ಪಕ್ಕದಲ್ಲಿಯೇ ಇದ್ದು ಕುಣಿತದ ವೇಷ ಬಂದಾಗ ನಿದ್ದೆಗೆ ಜಾರಿದ್ದ ನಮ್ಮನ್ನು ಅಣ್ಣೆರೆ ಲಕ್ಲೇ ಎಂದು ಏಳಿಸುವರು . ಯುದ್ಧದ ಸೀನು ,ಹಾಸ್ಯಗಾರರ ಕುಣಿತ ನಮಗೆ ಅಪ್ಯಾಯಮಾನ .ಶೃಂಗಾರ ರಸದ ರುಚಿ ಬರುವ ಪ್ರಾಯ ಅಲ್ಲ . ನಮ್ಮ ಅಕ್ಕ ಪಕ್ಕದ ಹಿರಿಯರು ಅದನ್ನು ಆಸ್ವಾದಿಸುತ್ತಿರುವಾಗ ನಾವು ನಿದ್ದೆಗೆ ಜಾರುತ್ತಿದ್ದೆವು . ನೆಲ ಕ್ಲಾಸ್ ಜಾತಿ ,ಅಂತಸ್ತು ಗಳನ್ನು  ಸಮಾನ ಮಾಡುವ ಸ್ಟಳ ..ಇಲ್ಲಿಯ ಪ್ರೇಕ್ಷಕರೇ ನಿಜ ಕಲೆಯ ಆಸ್ವಾದಕರು . ನಮ್ಮ ಹಳ್ಳಿಯ ನಿರಕ್ಷರಕುಕ್ಷಿಗಳು ಕೂಡಾ ಪುರಾಣ ಕತೆಗಳನ್ನು ಅರಿತವರಾಗಿ ಸಮಯೋಚಿತವಾಗಿ ಅದನ್ನು ಮಾತಿನಲ್ಲಿ ಉಪಯೋಗಿಸುವರು . "ರಾಮ ದೇವೇರೆ ಕಾಡುಗು ಪೋವೊ ಡಾಂಡು ,ನಮ್ಮವು ಎಂಚಿನ ಲೆಕ್ಕ 'ಇತ್ಯಾದಿ . 

ಹೀಗೆ  ಬೇರೆಯೇ ಲೋಕದಲ್ಲಿ ವಿವಾಹಿರಿಸುತ್ತಿದ್ದ ನಾವು ಬೆಳಗು ಹರಿದು ಮಂಗಳ ಹಾಡಿದ ಮೇಲೆ ಹೊರ ಬಂದಾಗ ವಾಸ್ತವ ಲೋಕಕ್ಕೆ ಬರುತ್ತಿದ್ದೆವು . ಬೀಡಿ ಪರಿಮಳವನ್ನು ನಮ್ಮ ಉಡುಪುಗಳಲ್ಲಿ ಸೇರಿಸಿ ,ಪಾತ್ರ ವಿಮರ್ಶೆ ಮಾಡಿಕೊಂಡು ಮನೆಯ ಕಡೆಗೆ . 

ನಡೆ ನುಡಿ ನಿದ್ದೆ ಕೆಟ್ಟವರ ಹಾಗೆ ಇದ್ದೆರೆ 'ನೀನೇನು ಆಟಕ್ಕೆ ಹೋದವರ ಹಾಗೆ ಮಾಡುತ್ತಿ 'ಎಂದು ಕೇಳುವ ಕ್ರಮ ಇದೆ .

File:Yakshagana1.jpg - Wikimedia Commons

 

ಭಾನುವಾರ, ಅಕ್ಟೋಬರ್ 2, 2022

ಎರಡು ಮಡಿಗಳು (ಇಮ್ಮಡಿ )

ನಮ್ಮ ಆಪರೇಷನ್ ಥೇಟರ್ ಗಳಲ್ಲಿ ಮಡಿವಂತಿಕೆ ಕಟ್ಟು ನಿಟ್ಟು . ಕೈಯನ್ನು ತೋಳಿನ ವರೆಗೆ ಹಲವು ಬಾರಿ ಸೋಪ್ ಹಾಕಿ ತೊಳೆದು ಪ್ರೆಷರ್ ಕುಕ್ಕರ್ ನಂತಹ ಆಟೋಕ್ಲೇವ್ ನಲ್ಲಿ ಶುದ್ದೀಕರಿಸಿದ  ಓ ಟಿ ಡ್ರೆಸ್  ಗೌನ್ ಹಾಕಿ ,ಕೈಗೆ ಗ್ಲೋವ್ ಹಾಕಿದ ಮೇಲೆ ಆಕಡೆ ಈ ಕಡೆ ಮುಟ್ಟುವಂತೆ ಇಲ್ಲ . ಬೆನ್ನು ತುರಿಸಲು ಅಥವಾ ಹಣೆ ಬೆವರು ಒರೆಸಲು ಸಹಾಯಕರ ಸಹಾಯ ಬೇಕು . ವಿದ್ಯಾರ್ಥಿ ಜೀವನದಲ್ಲಿ ಮೊದಲ ಬಾರಿ ನಿರೀಕ್ಷಕರಾಗಿ ಓ ಟಿ ಗೆ ಹೋದಾಗ ಸರ್ಜನ್ ನ ಕೈ ತಪ್ಪಿ ಕೆಳಗೆ ಬಿದ್ದ  ಉಪಕರಣ ಹೆಕ್ಕಿ ಕೊಡಲು ಹೋಗಿ ಬೈಗಳು ತಿಂದದ್ದು ಇದೆ . ಓ ಟಿ ಸಿಸ್ಟೆರ್ ಉಪಯೋಗಿಸಿದ ಉಪಕರಣ ಮತ್ತು  ಗಾಸ್ ಪೀಸ್ ಎಂದು ಕರೆಯಲ್ಪಡುವ ಬಟ್ಟೆಯ ತುಂಡುಗಳ ಲೆಕ್ಕ ಶಸ್ತ್ರ ಚಿಕಿತ್ಸೆಯ ಮೊದಲು ಮತ್ತು ನಂತರ ಮಾಡುವುದು ಕಡ್ಡಾಯ . ರೋಗಿಯ ಒಳಗೆ ಉಳಿದು ಹೋಗ ಬಾರದು ಎಂಬ ಉದ್ದೇಶ . 

ಮೇಲೆ ಹೇಳಿದ್ದು ಒಂದು ರೀತಿಯ ವೈಜ್ಞಾನಿಕ ಮಡಿ .ಹಿಂದೆ ನಮ್ಮ ಮನೆಯಲ್ಲಿ ಮಡಿ ಆಚರಣೆ ಕಟ್ಟು ನಿಟ್ಟು . ಅನ್ನ ಮುಟ್ಟಿ ಸಾಂಬಾರು ಪಾತ್ರೆ ಮುಟ್ಟುವ ಮೊದಲು ನೀರಿನಲ್ಲಿ ಸ್ಯಾನಿಟೈಸ್ ಮಾಡಿ ಕೊಳ್ಳ ಬೇಕು . ಎಮ್ಮೆ ಹಾಲು ಮುಟ್ಟಿ ದನದ ಹಾಲು ಮುಟ್ಟಲು ಕೈ ನಾಂದ ಬೇಕಿತ್ತು .ಬೇಯಿಸಿದ ಅಕ್ಕಿ ಕೊಳೆಯಾದರೆ ಗೋದಿ ಸಜ್ಜಿಗೆ ಅಲ್ಲ . ಊಟ ಮಾಡಿದ ನೆಲ ಸೆಗಣಿ ಸಾಂಕೇತಿಕವಾಗಿ ಆದರೂ ಸಾರಿಸಿ ಸ್ವಚ್ಛ ಮಾಡಿದ ಮೇಲೆಯೇ ಇನ್ನೊಂದು ಪಂಕ್ತಿ ಹಾಕ ಬಹುದಿತ್ತು .  ಮುಟ್ಟಾದ ಸ್ತ್ರೀಯರನ್ನು ಯಾರೂ ಮುಟ್ಟುವಂತಿಲ್ಲ ,ಅವರು ಮನೆಯ ಒಳಗಿನ ಕೆಲಸಗಳಲ್ಲಿ ಸೇರುವಂತಿಲ್ಲ . ಹಿಡಿ ಸೂಡಿ ಮಾಡುವುದು ,ಅಡಿಕೆ ಕೆಲಸ ಇತ್ಯಾದಿ ಮಾಡಿ ಅವರು ಮೂರು ದಿನ ಕಾಲ ಯಾಪನೆ ಮಾಡುತ್ತಿದ್ದರು . 

ಕಾಲ ಕ್ರಮೇಣ ಇವು ಮಾಯವಾಗಿವೆ .ಕೆಲವರು ವಾದಿಸುವುದಕ್ಕೋಸ್ಕರ ಇವುಗಳನ್ನು ಸಮರ್ಥಿಸಿ ಕೊಳ್ಳುತ್ತಾರೆ .ಇನ್ನು ಕೆಲವರು ಹಿಂದಿನಿಂದ ಬಂದ ನಂಬಿಕೆ ,ಇದಕ್ಕೆ ಶಾಸ್ತ್ರ ಅಥವಾ ವಿಜ್ಞಾನ ದ  ಸಮರ್ಥನೆ ಇಲ್ಲ ಎಂದು ಹೇಳುತ್ತಾರೆ .