ಬೆಂಬಲಿಗರು

ಗುರುವಾರ, ನವೆಂಬರ್ 26, 2020

ಮೂತ್ರದ ಕಲ್ಲುಗಳು

                     ಮೂತ್ರ ಅಂಗ ಸಂಬಂದಿ ಕಲ್ಲುಗಳು 

                    

ಕಲ್ಲರಳಿ ಹೂವಾಗಿ, ಎಲ್ಲರಿಗೆ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ ಇದು ಒಂದು ಒಗಟು .ಉತ್ತರ ಹೇಳಿ .ಅದರಂತೆ ಕಲ್ಲು ಅಲ್ಲ ಸಲ್ಲದಲಿ ಅರಳಿ ಮನುಜನ ಆರೋಗ್ಯಕ್ಕೆ ಮಗ್ಗುಲ ಮುಳ್ಳಾಗಿ ಬರುವುದುಂಟು .


ಇತ್ತೀಚೆಗೆ ಮೂತ್ರ ಅಂಗ ಗಳಿಗೆ  ಸಂಬಂದಿಸಿದ  ಕಲ್ಲು ಗಳ  ಹಾವಳಿ ಹೆಚ್ಚಾಗಿದೆ .ಇವು ಮೂತ್ರ ಪಿಂಡಗಳ ಲ್ಲಿ ಹುಟ್ಟಿ ಅಲ್ಲೇ ಬೆಳೆದು ನಮಗೆ ಅರಿವಿಲ್ಲದಂತೆ ಮೂತ್ರ ಪಿಂಡಕ್ಕೆ ಹಾನಿ ಉಂಟು ಮಾಡ ಬಲ್ಲವು .ಅಥವಾ ಸ್ವಲ್ಪ ಸಣ್ಣ ಕಲ್ಲುಗಳು ಒಳ  ಮೂತ್ರನಾಳಕ್ಕೆ(ureter ) ಜಾರಿ ಅಲ್ಲಿಂದ ಮೂತ್ರಕೋಶ (bladder ) ನಂತರ  ಹೊರ ಮೂತ್ರ ನಾಳ (urethra )ಮೂಲಕ ಹೊರ ಹಾಕಲ್ಪಡುವವು .ಕೆಳಕ್ಕೆ ಜಾರುವ ವೇಳೆ ಅತೀವ ನೋವು ವಾಂತಿ ಉಂಟಾಗಬಹುದು .ಈ ನೋವು ಬೆನ್ನಿನಿಂದ ಹೊಟ್ಟೆ ಕೆಳಗೆ ತೊಡೆ ಬುಡ ಮತ್ತು ಗಂಡಸರಲ್ಲಿ ವೃಷಣಕ್ಕೂ ಹರಡಿ ರೋಗಿಗೆ ಕಾಯಿಲೆ ಮೂಲ ಎಲ್ಲಿ ಎಂದು ಗಲಿ ಬಿಲಿ  ಆಗುವುದು .ಕೆಲವೊಮ್ಮೆ ಈ ಕಲ್ಲುಗಳು ಮೂತ್ರ ನಾಳದಲ್ಲಿ (ಒಳ ಮತ್ತು ಹೊರ )ಅತೀವ ತೊಂದರೆ ಕೊಡುವವು .ಒಳ ಮೂತ್ರ ನಾಳದಲ್ಲಿ ಸಿಲುಕಿದರೆ ಮೂತ್ರ ನಾಳಕ್ಕೆ ಕಟ್ಟೆ  ಕಟ್ಟಿದಂತೆ ಆಗಿ ಮೂತ್ರ ಶೇಖರಣೆ ಗೊಂಡು ಸೋಂಕು ಆಗಬಹುದು .ಆದರೆ ಮೂತ್ರ ಬಂದ್ ಆಗುವುದಿಲ್ಲ ಏಕೆಂದರೆ ಇನ್ನೊಂದು ಕಿಡ್ನಿ ಮತ್ತು ಒಳ ಮೂತ್ರ ನಾಳ ಇದೆಯಲ್ಲ .ಮೂತ್ರಾಶಯ ಅಥವಾ ಬ್ಲಾಡರ್ ದ  ಬಾಯಿಯಲ್ಲಿ ಅಥವಾ ಅಲ್ಲಿಂದ ಹೊರ ಹೋಗುವ ನಾಳದಲ್ಲಿ ಸಿಲುಕಿದರೆ ಮೂತ್ರ ಬಂದ್  ಆಗುವುದು . 

ಮೂತ್ರದ ಕಲ್ಲುಗಳಲ್ಲಿ ಅವುಗಳಲ್ಲಿ ಇರುವ ರಾಸಾಯನಿಕ ವಸ್ತುಗಳ ಮೇಲೆ ಹೊಂದಿ ಕೊಂಡು ಬೇರೆ ಬೇರೆ ತರಾವಳಿ ಇವೆ . 

೧. ಕ್ಯಾಲ್ಸಿಯಂ ಕಲ್ಲುಗಳು (ಕ್ಯಾಲ್ಸಿಯಂ ಆಕ್ಸಲೇಟ್ ಮತ್ತು ಫಾಸ್ಫೇಟ್ )ಇವು ೭೫% ಕಲ್ಲುಗಳಿಗೆ ಕಾರಣ ಇದರಲ್ಲೂ ಬಹುಪಾಲು ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು .ಧಾರಾಳ ನೀರು ಕುಡಿಯುವುದರೊಂದಿಗೆ ಉಪ್ಪು ಮತ್ತು ಸಸಾರ ಜನಕ ಆಹಾರದಲ್ಲಿ ಕಡಿಮೆ ಮಾಡುವುದು ಇವುಗಳ ತಡೆಗಟ್ಟುವಿಕೆಗೆ ಮುಖ್ಯ .ಜನರು ತಿಳಿದು ಕೊಂಡಂತೆ ಕ್ಯಾಲ್ಸಿಯಂ ಆಹಾರದಲ್ಲಿ ಕಡಿಮೆ ಮಾಡ ಬಾರದು .ಆಹಾರದಲ್ಲಿ ಕಡಿಮೆ ಕ್ಯಾಲ್ಸಿಯಂ ಹೆಚ್ಚು ಮೂತ್ರ ಕಲ್ಲಿಗೆ ದಾರಿ .ಆಕ್ಸಲೇಟ್ ಕಲ್ಲಿಗೆ ಬೀನ್ಸ್ ಬಿಯರ್ ಬೀಟ್ರೂಟ್ ,ಬಸಳೆ ,ಗೆಣಸು ,ಪುನರ್ಪುಳಿ ,ಟೊಮೇಟೊ ,ವಿಟಮಿನ್  ಸಿ ಮತ್ತು ಅದು ಜಾಸ್ತಿ ಇರುವ ನೆಲ್ಲಿಕಾಯಿ ,ಕಿತ್ತಳೆ ಇತ್ಯಾದಿ ಕಮ್ಮಿ ಮಾಡಬೇಕು .ಆಕ್ಸಲೇಟ್ ಹೆಚ್ಚು ಇರುವ ಆಹಾರ ಸೇವಿಸುವಾಗ ಕ್ಯಾಲ್ಸಿಯಂ ಅಧಿಕ ಇರುವ ವಸ್ತುಗಳನ್ನು ಸೇವಿಸುವುದು ಒಳ್ಳೆಯದು (ಉದಾ ಮೊಸರು ಮಜ್ಜಿಗೆ ಮೀನು ,ಕ್ಯಾಲ್ಸಿಯಂ ಯುಕ್ತ ಬ್ರೆಡ್ ಇತ್ಯಾದಿ )ಕಲ್ಲುಗಳಲ್ಲಿ ಕ್ಯಾಲ್ಸಿಯಂ ಇರುತ್ತಾ ಅದು  ಹೆಚ್ಚು ಅಧಿಕ ಇರುವ ಆಹಾರ ತೆಗೆಕೊಳ್ಳ ಹೇಳುತ್ತೀರಲ್ಲಾ ಎಂದು ಕೇಳ  ಬಹುದು .ಈ ಕ್ಯಾಲ್ಸಿಯಂ ಕರುಳಿನಿಂದ ಹೀರಲ್ಪಡುವುದು ಮತ್ತು ಮೂತ್ರ ಪಿಂಡದಲ್ಲಿ ಸ್ರವಿಸಲ್ಪಡುವುದು ಸಂಕೀರ್ಣ ಕ್ರಿಯೆ .ಹೆಚ್ಚು ವಿವಿರ ಬೇಕಿದ್ದಲ್ಲಿ  ಕೆಳಗೆ ಕೊಟ್ಟ ಲಿಂಕ್ ಗೆ ಲಾಗ್ ಮಾಡಿ ಓದಿರಿ

https://www.ncbi.nlm.nih.gov/pmc/articles/PMC1455427/

ಹಾಗೆಂದು ಕ್ಯಾಲ್ಸಿಯಂ ಅಧಿಕ ಇರುವ ಆಹಾರ ಸಾಕು .ವಯಸ್ಸಾದ ಮಹಿಳೆಯರು ಮೂಳೆ ಸವೆತಕ್ಕೆ ತಿನ್ನುವ  ಕ್ಯಾಲ್ಸಿಯಂ ಮುಂದುವರಿಸ ಬಹುದು

೨.ಮೆಗ್ನೀಷಿಯಂ ಅಲ್ಯೂಮಿನಿಯಂ ಫಾಸ್ಫೇಟ್ ಕಲ್ಲುಗಳು . ೧೫ % ಕಲ್ಲುಗಳಿಗೆ ಕಾರಣ .ಆಗಾಗ ಆಗುವ ಮೂತ್ರ ಇನ್ಫೆಕ್ಷನ್ (ಸೋಂಕು )ಇದಕ್ಕೆ ಮೂಲ .ಪುನರಪಿ ಮೂತ್ರ ಸೋಂಕು ಯಾಕೆ ಎಂದು ಕಂಡು ಹಿಡಿದು ಚಿಕಿತ್ಸೆ ಮಾಡಬೇಕು . 

೩.ಯೂರಿಕ್ ಆಸಿಡ್ ಕಲ್ಲುಗಳು ೬% ಕಲ್ಲುಗಳಿಗೆ ಹೇತು .ಮೀನು ,ಮಾಂಸ ,ಬೀನ್ಸ್ ,ಸೋಯಾ ,ಬಟಾಣಿ ,ನೆಲಗಡಲೆ ಇತ್ಯಾದಿ ಆಹಾರದಲ್ಲಿ ಕಡಿಮೆ ಮಾಡಬೇಕು 

೪. ಸಿಸ್ಟಿನ್ ಕಲ್ಲುಗಳು .ಶೇಕಡಾ ಎರಡಕ್ಕಿಂತ ಕಡಿಮೆ ಕಲ್ಲುಗಳಿಗೆ ಕಾರಣ . 

  ಇಷ್ಟೆಲ್ಲಾ ಬರೆದರೂ ಕಲ್ಲು ಹೊರ ಬಂದರೆ ತಾನೇ ಅದರ ರಾಸಾಯನಿಕ ಮೂಲ ಕಂಡು ಹಿಡಿಯ ಬಹುದು .ಕೆಲವು ಕಲ್ಲುಗಳ ಆಕಾರ ಸ್ಕ್ಯಾನ್ ಮತ್ತು ಎಕ್ಷ ರೇ ಮೂಲಕ ಅಂದಾಜು ಮಾಡ ಬಹುದು .ಅಲ್ಲದೆ ಮುಕ್ಕಾಲು ಪ್ರಮಾಣಕ್ಕಿಂತಲೂ ಹೆಚ್ಚು ಕ್ಯಾಲ್ಸಿಯಂ ಕಲ್ಲುಗಳೇ ಇರುವುದರಿಂದ ಅವೇ ಕಾರಣ  ಎಂದು ಬೇರೆ ಸುಳಿವು ಸಿಗುವ ವರೆಗೆ ತಿಳಿದು ಕೊಳ್ಳ ಬಹುದು . 

ಕಲ್ಲು ಕಿಡ್ನಿ ಯಿಂದ  ಒಳ ಮೂತ್ರ ನಾಳಕ್ಕೆ ಜಾರಿದೊಡನೆ ನೋವು ಬರುವುದು .ಇದು ಮಗುವನ್ನು ಹೊರ ಹಾಕುವ ಹೆರಿಗೆ ನೋವಿನಂತೆ .ಈ ನೋವು ಇರುವಾಗ ಕೆಲವರಿಗೆ ಮೂತ್ರ ಶಂಕೆ ಆಗುವುದು ಆದರೆ ಮಾಡಲು ಬರುವುದಿಲ್ಲ ,ಮಲ ಶಂಕೆ ಯೂ ಆಗ ಬಹುದು .ನೋವಿಗೆ ಔಷಧಿ ಕೊಟ್ಟಾಗ ನೋವಿನೊಡನೆ ಅವೂ ಪರಿಹಾರ ಕಾಣುವುವು . 

ಕಲ್ಲು ಇದೆಯೇ ಎಂದು ಕಂಡು ಕೊಳ್ಳಲು ಅಲ್ಟ್ರಾ ಸೌಂಡ್ ಸ್ಕ್ಯಾನ್ ಸರಳ ಮತ್ತು ಉತ್ತಮ ಸ್ಕ್ಯಾನ್ ಮಾಡುವಾಗ ಮೂತ್ರ ಕೋಶದಲ್ಲಿ (bladder )ತುಂಬಾ ಮೂತ್ರ ಇದ್ದರೆ  ಕಲ್ಲು ಚೆನ್ನಾಗಿ ಕಾಣುವುದು . ಇಲ್ಲದಿದ್ದಲ್ಲಿ ಕೆಲವು ಸಣ್ಣ ಕಲ್ಲುಗಳು ಕಣ್ತಪ್ಪಿ ಹೋದಾವು 

           ಸಾಮಾನ್ಯ ೮ ಮಿ ಮಿ ಒಳಗಿನ ಕಲ್ಲುಗಳು ಔಷಧಿ ಮತ್ತು ನೀರು ಸೇವನೆಯಿಂದ ಹೊರ ಹೋಗುವವು .ಇವುಗಳ ನಿರ್ಗಮನದ ವೇಗೋತ್ಕರ್ಷಕ್ಕೆ ಒಳ್ಳೆಯ ಔಷಧಿ ಇವೆ .ಇದರೊಂದಿಗೆ ಕಡಿಮೆ ಉಪ್ಪು ಮತ್ತು ಎಲ್ಲಕ್ಕಿಂತ ಹೆಚ್ಚು ನೀರು ಸೇವಿಸ ಬೇಕು .ಮತ್ತೊಮ್ಮೆ ಹೇಳುತ್ತೇನೆ ಬರೀ ನೀರು .ಬಾರ್ಲಿ ನೀರು ,ಎಳನೀರು ,ಬಾಳೆ ದಂಡು ನೀರು ಎಲ್ಲಕ್ಕಿಂತಲೂ ಬರೀ ನೀರು ಉತ್ತಮ. ಯಾಕೆಂದರೆ ಕಡಿಮೆ ಸಾಂದ್ರತೆ ಇರುವ ದ್ರವ ಅದು ತಾನೇ. ಖರ್ಚು ಉಳಿಯಿತು . 

ದೊಡ್ಡ ಕಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮತ್ತು ಹುಡಿ ಮಾಡಿ ತೆಗೆಯುವ ವಿಧಾನ ಇವೆ . 

ಬಾಲಂಗೋಚಿ :  ಹಿಂದೆ ನಾವು ಊಟದ  ಅಕ್ಕಿಯಲ್ಲಿ ಎಷ್ಷ್ಟು ಆರಿಸಿದರೂ ಕಲ್ಲುಗಳು ಇರುತ್ತಿದ್ದವು .ನಾವು ಬಟ್ಟಲಲ್ಲಿ ಅನ್ನವನ್ನು ತೀಡಿ ತೀಡಿ ಕಲ್ಲಿನ ಶಬ್ದ ದಿಂದ ಅದನ್ನು ಹಿಡಿದು ಬೇರ್ಪಡಿಸಿ ಉಣ್ಣುತ್ತಿದ್ದೆವು ,ಈಗಿನ ಹಾಗೆ ಡಿ ಸ್ಟೊನ್ಡ್ ಅಕ್ಕಿ ಸಿಗುತ್ತಿರಲಿಲ್ಲ ,ರೇಷನ್ ಅಕ್ಕಿಯಲ್ಲಿ ಅಂತೂ ಅಕ್ಕಿಗಿಂತ ಕಲ್ಲೇ ಜಾಸ್ತಿ .ಅಷ್ಟೆಲ್ಲ ಕಲ್ಲು ತಿಂದರೂ ಮೂತ್ರ ಕಲ್ಲು ಪಿತ್ತ ಕೋಶ ಕಲ್ಲು ಇಷ್ಷ್ಟು ಜಾಸ್ತಿ ಇರಲಿಲ್ಲ .(ಇದು ತಮಾಷೆಗೆ ಬರೆದದ್ದು ಆ ಕಲ್ಲಿಗೂ ಈ ಕಲ್ಲಿಗೂ ಸಂಬಂಧ ಇಲ್ಲ . )

ಒಂದು ರೀತಿಯಲ್ಲಿ ಇದು ಶಿಲಾಯುಗ .ಆಗಾಗ ಕಲ್ಲು ಆಗುವ ಹುಡುಗಿ ಶಿಲ ಬಾಲಿಕೆ ಎಂದು ಕರೆಯ ಬಹುದೇನೋ .ಕೆಲವು ಪಾಸಿಟಿವ್ ಥಿಂಕಿಂಗ್ ರೋಗಿಗಳು ಕೂಟದಲ್ಲಿ ತಮಗೆ ಮೂತ್ರದ ಕಲ್ಲು ನಾಲ್ಕು ಬಾರಿ ,ಪಿತ್ತ ಕೋಶದ ಕಲ್ಲು ಎರಡು ಬಾರಿ ಆಗಿದೆ ಎಂದು ಏನೋ ಮುತ್ತು ಹವಳದ ಕಲ್ಲು ಸಂಪಾದಿಸಿದಂತೆ ಮಾತನಾಡುವರು . 


 

ಕಿಡ್ನಿ ನಮ್ಮ ಎದೆಯಿಂದ ಸ್ವಲ್ಪ ಕೆಳಗೆ ಬೆನ್ನಿಗೆ ತಾಗಿ ಹೊಟ್ಟೆಯಲ್ಲಿ ಇರುವವು  .ಬಹಳ ಮಂದಿ ಇವು ಅಡಿ ಹೊಟ್ಟೆಯಲ್ಲಿ ,ಇನ್ನು ಕೆಲವರು ಇದು ವೃಷಣದಲ್ಲಿ ಇವೆ  ಎಂದು ತಪ್ಪು ತಿಳಿದರುತ್ತಾರೆ .ಮತ್ತು ನಮಗೆ ಎರಡು ಮೂತ್ರ ಪಿಂಡ (ಕಿಡ್ನಿ )ಇವೆ .ಆದ ಕಾರಣ ಒಂದು ಒಳ ಮೂತ್ರ ನಾಳ ಕಲ್ಲಿನಿಂದ ಬಂದ್ ಆದರೂ ಮೂತ್ರ ವಿಸರ್ಜನೆ ಆಗುವುದು .ಹೊರ ಮೂತ್ರ ನಾಳ ಒಂದೇ ಇರುವುದರಿಂದ ಅಲ್ಲಿ ಕಲ್ಲು ಬ್ಲಾಕ್ ಆದರೆ ಮೂತ್ರ ಹೋಗದೆ ಮೂತ್ರಾಶದಲ್ಲಿ ಶೇಖರಣೆ ಆಗಿ ಸಂಕಟ ಆಗುವುದು . 

(ಇನ್ನೊಂದು ಕತೆ .ಕಲ್ಲಿಕೋಟೆ ಮೆಡಿಕಲ್ ಕಾಲೇಜು ನಲ್ಲಿ ಇಬ್ಬರು ನಮ್ಮ ಊರಿನ ಭಟ್ ಡಾಕ್ಟರು ಇದ್ದರು ,ಒಬ್ಬರು ಕಣ್ಣಿನ ಡಾಕ್ಟರ್ ,ಇನ್ನೊಬ್ಬರು ಮೂತ್ರ ಅಂಗ ಸರ್ಜನ್ ..ಇಬ್ಬರೂ ಪ್ರಸಿದ್ದರು .ಅಲ್ಲಿ ಭಟ್ ಡಾಕ್ಟರು ಬೇಕು ಎಂದರೆ ನಿಮಗೆ ನೇತ್ರ ಡಾಕ್ಟ್ರು ಬೇಕೇ ಮೂತ್ರ ಡಾಕ್ಟ್ರು ಬೇಕೇ ಎಂದು ಕೇಳುತ್ತಿದ್ದರಂತೆ .)



 

   

ಮಂಗಳವಾರ, ನವೆಂಬರ್ 24, 2020

ನೆನಪು ಸಹ ನೆನಪು ಸರ ಮಾಲೆ

ನೀವು ಅಮಜೋನ್ ನಲ್ಲೋ ಫ್ಲಿಪ್ ಕಾರ್ಟ್ ನಲ್ಲೋ ಒಂದು ವಸ್ತು ಖರೀದಿಸ ಹೋಗುತ್ತೀರಿ .ಆಗ ಕಂಪ್ಯೂಟರ್ ಇನ್ನೂ ಕೆಲವು ವಸ್ತು ತೋರಿಸಿ ನೀವು ಇದನ್ನೂ ಇಷ್ಟ ಪದಬಹುದು ಅಥವಾ ಇದನ್ನು ಖರೀದಿಸಿದವರು ಇಂತಹದೇ ಇನ್ನೂ ಕೆಲವು ವಸ್ತು ಇಷ್ಟ ಪಟ್ಟಿರುವರು ಎಂದು ಸೂಚಿಸುವುದು .ನೀವು ಒಂದು ಕಾರ್ಯಕ್ರಮ ಯು ಟ್ಯೂಬು ನಲ್ಲಿ ನೋಡಿದರೆ ಅಂತಹದೇ ಇನ್ನೂ ಅನೇಕ ವೀಡಿಯೋ ಗಳ ಸೂಚನೆ ಕೊಡುವುದು .ಇದು ಪ್ರೋಗ್ರಾಮ್ ನ ಮೆಮೋರಿ ಅಥವಾ ಜ್ನಾಪಕ ಶಕ್ತಿಯಿಂದ ಬರುವುದು .

ನಮ್ಮ ಮೆದುಳು ಅಗಣಿತ ಮೆಮೋರಿ ಶಕ್ತಿಯ ಒಂದು ಕಂಪ್ಯೂಟರ್,ಇದರಲ್ಲಿ ನೆನಪು ರೆಕಾರ್ಡ್ ಮಾಡಲು ಮತ್ತು ಸಂಗ್ರಹಿಸಲು ಕೆಲವು ವಿಶೇಷ ಕೋಶಗಳಿವೆ .ಕೆಳಗೆ ತೋರಿಸಿದ ಚಿತ್ರದಲ್ಲಿ ಇದನ್ನು ಕಾಣ  ಬಹುದು 

                    

ಉದಾಹಣೆಗೆ ಮೊದಲ ಮಳೆ ಬಿದ್ದಾಗ ,ಮಣ್ಣಿನ ವಾಸನೆ ಬರುವುದು ,ಅದರೊಂದಿಗೆ ನಿಮಗೆ ಗತ ಮಳೆಗಾಲಗಳ ನೆನಪಿನ ಸರಮಾಲೆ . 

ಮನೆಯಲ್ಲಿ  ಹಲಸಿನ ಹಣ್ಣಿನ ಕಡುಬು ಬೇಯಿಸುವಾಗ ಪರಿಮಳ ಮೂಗಿಗೆ ಬಂದಾಗ ಬಾಯಲ್ಲಿ ನೀರು ಮಾತ್ರ ಅಲ್ಲ ನೀವು ಚಿಕ್ಕಂದಿನಲ್ಲಿ ಅಜ್ಜ ಅಜ್ಜಿಯರೊಡನೆ ಬಾಳೆ  ಎಳೆಯಲ್ಲಿ ಕಡುಬು ಮಡಿಸಿದ್ದು ,ನೀರಿನಲ್ಲಿ ಹಾಕಿದ ಮಾವಿನ ಕಾಯಿ ಚಟ್ನಿ ಅದರ ರುಚಿ ಎಲ್ಲಾ ಜ್ಞಾಪಕಕ್ಕೆ ಬರುವುದು . 

 ನಾನು ಹುಬ್ಬಳ್ಳಿ ಕೆ ಎಂ ಸಿ ಯಲ್ಲಿ ಮೆಡಿಕಲ್ ಓದಿದ್ದು .ಅಲ್ಲಿ ರೊಟ್ಟಿ ಚಟ್ನಿ ಇತ್ಯಾದಿ ತಿಂದು ಅಭ್ಯಾಸ ..ಹಾಗೆ ನಾನು ನನ್ನ ಡೈನಿಂಗ್ ಟೇಬಲ್ ನಲ್ಲಿ ಶೇಂಗಾ ಚಟ್ನಿ ,ಗುರೆಳ್ಳು  ಹಿಂಡಿ  ಇಟ್ಟಿರುತ್ತೇನೆ .ಅದನ್ನು ನೋಡುವಾಗ ಮತ್ತು ತಿನ್ನುವಾಗ ನನಗೆ ಆನಂದ ಹಾಸ್ಟೆಲ್ ನ ಮೆಸ್ಸ್ ,ಅಲ್ಲಿ ಟೇಬಲ್ ನಲ್ಲಿ ಇಟ್ಟಿದ್ದ ರಂಜಕ (ಮೆಣಸಿನ ಚಟ್ನಿ ),ಮಲ್ಲಿಕಾರ್ಜುನ ಮೆಸ್ಸ್ ,ಅಲ್ಲಿಯ ರೊಟ್ಟಿ ತಟ್ಟುವ ಲಯ ಬದ್ದ ಶಬ್ದ ಎಲ್ಲಾ  ಸರ ಮಾಲೆಯಂತೆ ನೆನಪು ಆಗುವುದು . 

ಇನ್ನು ಹಾಡುಗಳೂ .ವಿರಹಾ ನೂರು ನೂರು ತರಹಾ ಹಾಡು ಈಗ ಕೇಳಿದಾಗ ನಮ್ಮ ಎಳವೆಯ ಕನಸು ಕಂಡ ಪ್ರಣಯ ,ಕಲ್ಪಿತ ವಿರಹ ಜ್ಞಾಪಕ ಬರುವುದು .ನಗು  ನಗುತಾ ನೀ ನಲಿವೆ ಹಾಡು ಕೇಳಿದಾಗ ಕಾಲೇಜು ಕ್ಯಾಂಪಸ್ ,ಈ ಹಾಡು ಅರ್ಕೆಷ್ಟಾ ದಲ್ಲಿ ಹಾಡಿದ ಸಹಪಾಠಿ ಕಣ್ಣ ಮುಂದೆ ಬರುವುದು .ಪಾಂಡಿಯನಾ ಕೊಕ್ಕ ಕೊಕ್ಕ ಕೇಳಿದಾಗ ಪೆರಂಬೂರ್ ರೈಲ್ವೆ ಕಾಲೋನಿ ,ಅಲ್ಲಿಯ ಹಾಲಿನ ಅಜ್ಜಿಯರು ಕಣ್ಣ ಮುಂದೆ 

     ಕೆಲವೊಮ್ಮೆ ಪುಸ್ತಕ ಓದುವಾಗ ಕೆಲವು ಘಟನೆಗಳು ನಮ್ಮ ಜೀವನದ ಸಹ ನೆನಪುಗಳನ್ನು ಮೆಲುಕು ಹಾಕುವವು .ಉದಾಹರಣೆಗೆ ಮಾಸ್ತಿ ಯವರ ಜೀವನ ಚರಿತ್ರೆ 'ಭಾವ'ದಲ್ಲಿ  ಅವರು ತನ್ನ ತಾತನ ಜತೆ ಎಲ್ಲೋ ಹೋಗುವಾಗ ದಾರಿಯಲ್ಲಿ ಆಲೆಮನೆ ಯವನು ಮಗುವಿಗೆ ಆಯಿತು ಎಂದು ಚೂರು ಬೆಲ್ಲ ಕೊಟ್ಟಿರುತ್ತಾನೆ .ಮುಂದೆ ಒಂದು ಕಡೆ ತಾತ  ಕೈಕಾಲು ತೊಳೆಯಲು ಎಂದು ನೀರಿನ ಬಳಿ ಹೋಗುವಾಗ ಮಗು ಮಾಸ್ತಿಯವರ ಬಳಿ ಬೆಲ್ಲದ ಚೂರು ಕೊಟ್ಟು ಈಗ ಬರುವೆನು ಎಂದು ಹೋಗುವರು .ಹುಡುಗ ಮಾಸ್ತಿ ಅಸೆ ತಡೆಯಲಾರದೆ ಬೆಲ್ಲ ಚೂರು ಎಲ್ಲಾ ತಿಂದು ಬಿಡುತ್ತಾರೆ .ಮರಳಿ ಬಂದ  ಅಜ್ಜ ಎಲ್ಲಾ ತಿಂದು ಬಿಟ್ಟಿಯೇನೋ  ಎಂದು ಬೇಸರದಿಂದ ಕೇಳುತ್ತಾರೆ .ಮಾಸ್ತಿ ಜೀವನ ಚರಿತ್ರೆ ಬರೆಯುವಾಗ ಈ ಘಟನೆ ನೆನಪಿಸಿ ಕೊಂಡು' ಛೇ ತಾನು ಇಂತಹ ಪ್ರಮಾದ ಮಾಡಿ ಬಿಟ್ಟೆ ,ತಾತನಿಗೆ ಮೊಮ್ಮಗನಿಗೆ ಕೊಟ್ಟ ಚೂರು ಬೆಲ್ಲದ ರುಚಿ ತಾನೂ ನೋಡುವ ಅಸೆ ಇದ್ದಿರಬಹುದು .ಮುಂದೆ ತಾನೂ ಎಷ್ಟೋ ದೊಡ್ಡ ಹುದ್ದೆ ಅಲಂಕರಿಸಿ  ಕೈತುಂಬಾ ಸಂಬಳ ಬರುವಾಗ ಬೆಲ್ಲ ಕೊಡುವಾ ಎಂದರೆ ತಾತ  ಸಿಗುತ್ತಾರೆಯೇ ಎಂದು ವ್ಯಾಕುಲಿತ  ಗುವರು .ಇದನ್ನು ಓದಿದಾಗ ನಮ್ಮ ನಿಮ್ಮ ಜೀವನದಲ್ಲಿ ಆದ ಇಂತಹ ಘಟನೆ ಒಂದೊಂದೇ ಬರುವುದು .ಹಿರಿಯರ ನಂಬಿಕೆಗೆ ಎರವಾದೆನೇ  ಎಂಬ ಅಪರಾಧ ಪ್ರಜ್ಞೆ ಕೂಡ .ನನಗೆ ನನ್ನ ಫಿಸಿಯೋಲಾಜಿ ಫೈನಲ್ ಪರೀಕ್ಷೆಯಲ್ಲಿ ಮೆಚ್ಚಿನ ಪ್ರೊಫೆಸ್ಸರ್ ಡಾ ನಾರಾಯಣ ಶೆಟ್ಟಿ ಅವರು ವೈವಾ ದಲ್ಲಿ ನಾನು ಕುಳಿತಾಗ ಎಕ್ಸ್ಟರ್ನಲ್ ಪರೀಕ್ಷಕರೊಡನೆ ಏನು ಬೇಕಾದರೂ ಕೇಳಿ (ಇವನು ಜಾಣ ಉತ್ತರಿರುತ್ತಾನೆ ಎಂಬ ನಂಬಿಕೆ )ಎಂದರು .ಅವರು ನನಗೆ ಒಂದು ಸರಳ ಪ್ರಶ್ನೆ ಕೇಳಿದರು ,ಆದರೆ ದುರದೃಷ್ಟವಶಾತ್  ಅದಕ್ಕೆ ತಪ್ಪು ಉತ್ತರ ಹೇಳಿದೆನು .ಉಳಿದ ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟು ಒಳ್ಳೆಯ ಅಂಕ ಬಂದರೂ ನನಗೆ ನನ್ನ ಅಧ್ಯಾಪಕರ ನಂಬಿಕೆ ಹುಸಿ ಮಾಡಿದೆನಲ್ಲಾ ಎಂಬ ಬೇಸರ ಇವತ್ತಿಗೂ ಇದೆ .ಪ್ರೊಫೆಸ್ಸರ್ ಇದನ್ನು ಗಂಭೀರ ತೆಗೆದು ಕೊಂಡು ಇರುವಿದಿಲ್ಲ ,ಆಗಲೇ ಮರೆತಿರುತ್ತಾರೆ .ನಾನು ಮುಂದೆ ವೈದ್ಯಕೀಯ ಕಾಲೇಜು ಅಧ್ಯಾಪಕ ನಾಗಿ ಎಷ್ಟೂ ಪರೀಕ್ಷೆ ಮಾಡಿದ್ದೇನೆ ,ಒಂದೂ ನನಗೆ ನೆನಪಿಲ್ಲ .ಆದರೂ ಹಿರಿಯರು ಇಟ್ಟ  ನಂಬಿಕೆಗೆ ಆ ಕ್ಷಣ ಮಾಸ್ತಿಯವರಂತೆ ನನಗೂ ಈ ಘಟನೆ ನೆನಪಿಗೆ ಬರುವುದು . 

ಮಳೆಗಾಲದಲ್ಲಿ ಮಳೆಯ ಶಬ್ದ ,ಚಳಿಗಾಲದ ಮಂಜು ,ನೀರ ಹನಿ ,ಬೇಸಿಗೆಯಲ್ಲಿ ಮಾವು ಹಲಸು ಇವುಗಳ ಪರಿಮಳ ಮತ್ತು ರುಚಿಯೊಡನೆ ಹಲವು ಜ್ಞಾಪಕಗಳು ಬರುತ್ತವೆ ಅಲ್ಲವೇ .ಮೊನ್ನೆ ಒಬ್ಬರು ನನ್ನ ಬಾಲ್ಯದಲ್ಲಿ ಖಾಸಗಿ ಬಸ್ ನ ಟಿಕೆಟ್ ಪರಿವೇಕ್ಷಕರಾಗಿ ಇದ್ದವರು ವೈದ್ಯಕೀಯ ಸಲಹೆ ಗೆ ಬಂದಿದ್ದರು ,ಅವರನ್ನು ಕಂಡಾಗ ಹಳೆಯ ಶಂಕರ ವಿಠ್ಠಲ್ ಬಸ್ ,ಅದರ ಡ್ರೈವರ್ ಪೀರ್ ಸಾಹೇಬರು ,ಅವರು ಉಪ್ಪಳದಿಂದ ತಂದು ಕೊಟ್ಟ ನಾಯಿ ಮರಿಗಳು ,ಬಸ್ಸಿನ ಹಾರ್ನ್ ,ಬಸ್ ಸ್ಟಾಂಡ್ ಗಳು ಎಲ್ಲಾ ಕಣ್ಣ ಮುಂದೆ ಬಂದವು .ಎಲ್ಲಿಯಾದರೂ ಮಲ್ಲಿಗೆ ಹೂವು ಮತ್ತು ಬೆವರು ವಾಸನೆಯ ಮಿಶ್ರಣ ಮೂಗಿಗೆ ಬಿದ್ದಾಗ ರೇಷ್ಮೆ ಸೀರೆ ,ಮದುವೆ ,ಮುಂಜಿಗಳು ಜ್ಞಾಪಕಕ್ಕೆ ಬರುವವು .

ಹಾಗಾದರೆ ಮೆದುಳಿನ ಮೆಮೊರಿ ಎಷ್ಟು ರಾಮ್ ?

 

ಸೋಮವಾರ, ನವೆಂಬರ್ 23, 2020

ವಾಲಿ ಸುಗ್ರೀವರ ಕಾಳಗ ಮತ್ತು ಕಾನ್ಸರ್ ಮುಂತಾದ ರೋಗ ಚಿಕಿತ್ಸೆ

ರಾಮಾಯಣದಲ್ಲಿ ವಾಲಿ ಸುಗ್ರೀವರ ಕತೆ ಬರುತ್ತದೆ .ಸೀತಾನ್ವೇಶಿ ರಾಮ ಲಕ್ಸ್ಮಣ 

ರಿಗೆ  ಕಿಷ್ಕಿಂಧೆಯಲ್ಲಿ ಸುಗ್ರೀವ ನ ಪರಿಚಯ ಆಗುತ್ತದೆ .ಅಣ್ಣ ವಾಲಿ 

ಬಲಾತ್ಕಾರವಾಗಿ ತನ್ನನ್ನು ರಾಜ್ಯಬಾಹಿರ ಮಾಡಿದ ವಿಚಾರ ರಾಮನಿಗೆ ತಿಳಿಸಿ 

ತನ್ನ  ಸಹಾಯಕ್ಕೆ ಬರುವಂತೆ ಇದಕ್ಕೆ ಪ್ರತಿಯಾಗಿ ಸೀತೆಯನ್ನು ಹುಡುಕುವ 

ಕಾರ್ಯದಲ್ಲಿ  ತಾನೂ ತನ್ನ ಸಹಚರ ಕಪಿಗಳು  ಸಹಕರಿಸುವುದಾಗಿ ಒಪ್ಪಂದ 

 ಸುಗ್ರೀವ  ಮಾಡಿಕೊಂಡನು.ಅದರ ಪ್ರಕಾರ  ಸುಗ್ರೀವ ಕಾಲು ಕೆರೆದು ಅಣ್ಣನನ್ನು 

ಯುದ್ದಕ್ಕೆ ಕರೆಯುತ್ತಾನೆ .ರಾಮ ಮರೆಯಲ್ಲಿ ನಿಂತು  ವಾಲಿ ಮೇಲೆ  ಬಾಣ 

ಪ್ರಯೋಗ ಮಾಡಬೇಕೆನ್ನುವಾಗ  ಅಣ್ಣ ತಮ್ಮಂದಿರು ಒಂದೇ ತರಹ ಇದ್ದಾರೆ .

ಇದರಲ್ಲಿ ಯಾರು ವಾಲಿ ಯಾರು ಸುಗ್ರೀವ ಎಂದು ಸಂಶಯದಿಂದ ಎಂದು 

ಸುಮ್ಮನಿದ್ದು ಸುಗ್ರೀವ ಪೆಟ್ಟು ತಿಂದು ಕೋಪದಿಂದ ಹಿಂದೆ ಬರುತ್ತಾನೆ .ಅದಕ್ಕೆ 

ಉಪಾಯವಾಗಿ  ಇನ್ನೊಂದು ಸಾರಿ ಯುದ್ದಕ್ಕೆ ಹೋಗುವಾಗ  ಸುಗ್ರೀವನ ಕೊರಳಿಗೆ 

ತುಳಸಿ ಮಾಲೆ ಹಾಕಿ ಕಳುಹಿಸುವನು .ಈ ಬಾರಿ  ಮಾಲಾರಹಿತ ವಾಲಿ 

ರಾಮಬಾಣಕ್ಕೆ ಗುರಿಯಾಗುವನು .

               ಕ್ಯಾನ್ಸರ್ ರೋಗಕ್ಕೆ  ಉಪಯೋಗಿಸುವ ಔಷಧಿಗಳಿಗೂ ಇದೇ ಸಮಸ್ಯೆ .

ಯಾವುದು ಅರ್ಭುಧ ರೋಗ ಪೀಡಿತ ಜೀವಕೋಶ ,ಯಾವುದು ಆರೋಗ್ಯವಂತ 

ಕೋಶ ಎಂಬ ಜಿಜ್ಞಾಸೆ ಕನ್ಫ್ಯೂಷನ್ .ಅದಕ್ಕೆ ಈಗ ವೈಜ್ಞಾನಿಕವಾಗಿ ಈ 

ಜೀವಕೋಶಗಳಿಗೆ ಗುರುತಿನ  ಮಾರ್ಕರ್ ಗಳನ್ನು ಕೊಟ್ಟು ಅದಕ್ಕೆ ಅನುಗುಣ

ವಾದ ಔಷಧಿ ಗಳನ್ನು ಸಿದ್ದ್ದ ಪಡಿಸಿದ್ದಾರೆ .ಇವನ್ನು ಮಾನೋಕ್ಲೋನಲ್ ಆಂಟಿ

ಬಾಡಿಸ್ (ಪ್ರತಿವಿಷ)ಎನ್ನುವರು .ಹಲವು ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯಲ್ಲಿ 

ಇವು ಕ್ರಾಂತಿಯನ್ನೇ ಉಂಟು ಮಾಡಿವೆ .ಇದನ್ನು ಈಗ ಕೋರೋನಾ ಚಿಕಿತ್ಸೆಗೂ ಉಪಯೋಗ ಆಗುವುದೊ ಎಂದು ಪ್ರತ್ನಿಸುತ್ತಿದ್ದಾರೆ .ಇಲ್ಲಿ ವೈರಸ್ ನ ಶರೀರದ ಒಂದು ಗುರುತಿನ ಪ್ರೊಟೀನ್ ನ ನ್ನು  ಗುರಿಯಿಟ್ಟು ಪತಿವಿಷ ನೀಡಿ ನೋಡುವರು .ರುಮಟೋಯಿಡ್ ಅರ್ಥೃಟೀಸ್ ನಂತಹ ವಾತ ಕಾಯಿಲೆಗೂ ಉಪಯೋಗದಲ್ಲಿ ಇದೆ

 

ರಕ್ತದ ಒತ್ತಡ

                           ರಕ್ತದ ಒತ್ತಡ 

ರಕ್ತಕ್ಕೆ ಒತ್ತಡ ಯಾಕೆ ಬೇಕು?ಯಾಕೆಂದರೆ ಇದು ರಕ್ತನಾಳದೊಳಗೆ ರಕ್ತ ಹರಿವಿನ ಒತ್ತಡ .ಒತ್ತಡ ಇದ್ದರೇನೆ ನಾಳದಿಂದ ರಕ್ತ ಅಂಗಗಳಿಗೆ ಜೀವ ಕೋಶಗಳಿಗೆ ಹರಿವುದು .,ಅವುಗಳಿಗೆ ಆಹಾರ ಮತ್ತು ಪ್ರಾಣ ವಾಯು ಸಿಗುವುದು .ನೀರು ಹರಿಸುವ ಪೈಪ್ ನಲ್ಲಿ  ಪ್ರೆಷರ್ ಇದ್ದರೆ ಮಾತ್ರ ಅದು ಸಸಿಗಳಿಗೆ ತಲುಪಿಸುವುದು .ಈ ಒತ್ತಡ ಪಂಪ್ ನ  ಅಶ್ವ ಶಕ್ತಿ  ಮತ್ತು  ಯಾವ ಪೈಪ್ ಎಂಬುದರ ಮೇಲೆ ನಿರ್ಧಾರ ಆಗುವುದು .ಹೆಚ್ಚು ಎಚ್ ಪಿ ,ಹೆಚ್ಚು ಪ್ರೆಷರ್ .ಅದೇ ರೀತಿ ರಬ್ಬರ್ ಪೈಪ್ ಗಿಂತ ಕಬ್ಬಿಣ ಪೈಪ್ ನಲ್ಲಿ ಜಾಸ್ತಿ .

ನಮ್ಮ ಶರೀರದಲ್ಲಿ ಹೃದಯ ಮುಖ್ಯ ಪಂಪ್ ,ಅಪದಮನಿ ರಕ್ತನಾಳಗಳು ರಕ್ತ ಸರಬರಾಜಿನ ಪೈಪ್ ಗಳು .ಅಭಿ ದಮನಿ ವಾಪಸು ಆಶುದ್ದ ರಕ್ತ ತರುವುದು .   ಹೃದಯಕ್ಕೆಬಲ ಬದಿಯ ಶೇಖರಣಾ ತೊಟ್ಟಿಗೆ ಬಂದು ಅಲ್ಲಿಂದ ಶ್ವಾಶ ಕೋಶಕ್ಕೆ ,ಅಲ್ಲಿ ಪ್ರಾಣವಾಯು ತುಂಬಿಸಿಕೊಂಡು ಎಡದ ತೊಟ್ಟಿಗೆ ಬಂದು ಅಪಧಮನಿ ಗಳೆಂಬ ಪೈಪ್ ಮೂಲಕ ನಖ ಶಿಖಾಂತ ಸರಬರಾಜು ಆಗುವುದು .ಇದರಲ್ಲಿ ಹೃದಯ ಹೆಚ್ಚು ಶಕ್ತಿಯಿಂದ ಪಂಪ್ ಮಾಡಿದರೆ ಅಥವಾ ಪೈಪ್ ನ  ಇಲಾಸ್ಟಿಸಿಟಿ ಕಡಿಮೆಯಾಗಿ ಗಡುಸು ಆದರೆ ರಕ್ತದ ಒತ್ತಡ ಹೆಚ್ಚು ಆಗುವುದು .

 ರಕ್ತದ ಒತ್ತಡವನ್ನು 120/80 ,150/90 ಮಿಲಿ ಮೀಟರ್ ಎಂದೆಲ್ಲಾ ಬರೆಯುವರಷ್ಟೇ.ಇದರಲ್ಲಿ ಮೇಲಿನ ಸಂಖ್ಯೆ  ಹೃದಯ ಸಂಕುಚನ (contract)ಆಗುವಾಗಿನ ಒತ್ತಡ(systolic ಬಿ ಪಿ ) ,ಕೆಳಗಿನದು ಹೃದಯ ವಿಕಸಿತವಾಗುವಾಗಿನ ಒತ್ತಡ(ಡಯಾಸ್ಟೊಲಿಕ್ ಬಿ ಪಿ ) .ನಮ್ಮ ಬಾವಿಯ ಪಂಪ್ ನಿರಂತರ ಪಂಪ್ ಮಾಡುತ್ತಿದ್ದರೆ ,ಹೃದಯ ಒಮ್ಮೆ ಪಂಪ್ ಮಾಡುವುದು ,ಒಮ್ಮೆ ಮರು ಪೂರಣ ಮಾಡಿಕೊಳ್ಳುವುದಕ್ಕೆ ವಿಕಸನ ಗೊಳ್ಳುವುದು .ಹಾಗೆ ನಾಲದಲ್ಲಿ ಎರಡು ಒತ್ತಡ ಗಳು .

ರಕ್ತದ ಒತ್ತಡ ಸರಿಯಾದ ಪ್ರಮಾಣದಲ್ಲಿ ಇದೆಯೋ ಎಂದು ಅಪಧಮನಿ ಮತ್ತು ಅಭಿದಮನಿ ಗಳಲ್ಲಿ ಕೆಲವು ಕಡೆ ಸೆನ್ಸಾರ್ ಗಳು ಇವೆ .ಅಪಧಮನಿಯ ಸೆನ್ಸಾರ್ ಕಡಿಮೆ ಒತ್ತಡ ತೋರಿಸಿದರೆ ಹೃದಯದ ಪಂಪಿಂಗ್ ಜಾಸ್ತಿ ಆಗಿ ರಕ್ತನಾಳಗಳು ಗಡುಸಾಗುತ್ತವೆ ,ಅಭಿದಮನಿ ಯ ಸೆನ್ಸಾರ್ ಸಂದೇಶದಿಂದ ಕೆಲವು ಹಾರ್ಮೋನ್ ಗಳು ಸ್ರವಿಸಿ ಕಡಿಮೆ ಮೂತ್ರ ಉತ್ಪತ್ತಿ (ನೀರು ಉಳಿಸುವುಕೆ )ಮತ್ತು ಹೆಚ್ಚು ಪಂಪಿಂಗ್ ಮತ್ತು ರಕ್ತ ನಾಲಗಳ ಗಡುಸು ತನ ಹೆಚ್ಚುವುದು .ಇದರಿಂದ ರಕ್ತದ ಒತ್ತಡ ಜಾಸ್ತಿ ಆಗುವುದು .

ನಾರ್ಮಲ್ ಬಿ ಪಿ 120/80 ರ ಒಳಗೆ ಇರಬೇಕು .ಅಮೆರಿಕಾದ ಹೃದ್ರೋಗ ಸಂಸ್ಥೆಯ ಪ್ರಕಾರ ೧೩೦/೮೦ ಕ್ಕಿಂತ ಜಾಸ್ತಿ ಇದ್ದರೆ ಅಧಿಕ ರಕ್ತದ ಒತ್ತಡ ಎಂದು ಹೇಳುವರು .ಜಾಗತಿಕ ಅರೋಗ್ಯ ಸಂಸ್ಥೆಯ ಪ್ರಕಾರ ೧೪೦/೯೦ ಮಿ ಮೀ ಗಿಂತ ಜಾಸ್ತಿ ಇದ್ದಾರೆ ಹೈ ಬಿ ಪಿ ಇದೆ ಎನ್ನುವರು .  

                                             



 

 

                                                                  ..ರಕ್ತದ ಒತ್ತಡ ಬಹಳ ಕಾಲ ಜಾಸ್ತಿ ಇದ್ದರೆ ಹೃದಯ ,ಮೆದುಳು ಮತ್ತು ಮೂತ್ರ ಪಿಂಡಗಳ ಮೇಲೆ ದುಷ್ಪರಿಣಾಮ ಬೀರುವುದು .

ಅಧಿಕ ರಕ್ತದ ಒತ್ತಡ ಸಾಮಾನ್ಯ ವೈದ್ಯಕೀಯ ಪರೀಕ್ಷೆಯಲ್ಲಿ ಕಂಡು ಹಿಡಿಯಲ್ಪಡುವ ಕಾಯಿಲೆ .ಸಾಮಾನ್ಯವಾಗಿ ಅವರಲ್ಲಿ ರೋಗ ಲಕ್ಷಣಗಳು ಇರುವುದಿಲ್ಲ .ತಲೆ ನೋವು ಮತ್ತೆ ತಲೆ ತಿರುಗುವಿಕೆಗೆ ರಕ್ತದ ಒತ್ತಡ ಸಾಮಾನ್ಯವಾದ ಕಾರಣ ಅಲ್ಲ .ತಲೆ ನೋವಿನ ಮುಖ್ಯ ಕಾರಣಗಳನ್ನು ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ .ಇದರಲ್ಲಿ ದೃಷ್ಟಿ ದೋಷವೂ ಇಲ್ಲ ಎಂಬುದನ್ನು ಗಮನಿಸಿ

                  

 ಆಸ್ಪತ್ರೆಗೆ ಮೊದಲು ಬರುವಾಗ ಹೆಚ್ಕಿನವರ ಬಿ ಪಿ ಸ್ವಲ್ಪ ಹೆಚ್ಚು ತೋರಿಸುವುದು .ಕೂಡಲೇ ನಾವು ಅಧಿಕ ಒತ್ತಡ ಎಂದು ಹೇಳುವುದಿಲ್ಲ .ಸ್ವಲ್ಪ ಹೊತ್ತು ಬಿಟ್ಟು ಪುನಃ ಪರೀಕ್ಷೆ ಮಾಡಿ ನೋಡುವೆವು .ಆಗಲೂ ಸ್ವಲ್ಪ ಹೆಚ್ಚು ಇದ್ದರೆ ಇನ್ನೊಂದು ದಿನ ಬರ ಹೇಳುವೆವು .ಮುಂದುವರಿದ ದೇಶಗಳಲ್ಲಿ ಮನೆಯಲ್ಲಿಯೇ ಬಿ ಪಿ ರೆಕಾರ್ಡ್ ಸ್ವಯಂ ಮಾಡ ಹೇಳಿ ಕೆಲ ದಿನಗಳ ನಂತರ ಬರ ಹೇಳುವರು .ಆಗಲೂ ಜಾಸ್ತಿ ಇದ್ದರೆ ಚಿಕಿತ್ಸೆ .

ಅಧಿಕ ಬಿ ಪಿ ಇರುವವರು ಉಪ್ಪು ಸೇವನೆ ಕಡಿಮೆ ಮಾಡಬೇಕು ,ಹಣ್ಣು ತರಕಾರಿ ಹೆಚ್ಚ್ಕು ,ಮದ್ಯಪಾನ ನಿಲ್ಲಿಸ ಬೇಕು .ನಿಯಮಿತ ವ್ಯಾಯಾಮ ಅವಶ್ಯ .ಇದರ ಮೇಲೆ ವೈದ್ಯರು ಕೊಡುವ ಔಷಧಿ ನಿಯಮಿತ ವಾಗಿ ಸೇವಿಸ ಬೇಕು .ತಲೆ ತಿರುಗಿದರೆ ಮತ್ತು ತಲೆನೋವು ಇದ್ದರೆ ಮಾತ್ರ ಗುಳಿಗೆ ಸೇವಿಸುವರು .ಇದು ಅಪಾಯಕಾರಿ .

 ಇನ್ನು ರಕ್ತದ ಒತ್ತಡ ಕಡಿಮೆ ಆಗುವುದು ಯಾವಾಗ ಎಂದು ನೋಡುವಾ ?

ಪಂಪ್ ಮಾಡಲು ರಕ್ತ ಕಮ್ಮಿ ಆದರೆ .ಉದಾ ತೀವ್ರ ರಕ್ತ ಸ್ರಾವ ,ವಾಂತಿ ಭೇದಿ .ಇನ್ನು ಪಂಪ್ ಹಾಳಾದರೆ ಉದಾ ಹೃದಯಾಘಾತ .ಕೆಲವೊಮ್ಮೆ ಸೋಂಕು ರೋಗಗಳಲ್ಲಿ ರಕ್ತ ನಾಲದ ಗಡುಸು ತನ ಕಮ್ಮಿ ಆಗಿ  ಮತ್ತು ಹೃದಯ ದ ಮೇಲೆ ಕೆಲವು ಕೆಟ್ಟ ರಾಸಾಯನಿಕ ಗಳು ಪರಿಣಾಮ ಪಂಪಿಂಗ್ ಶಕ್ತಿ ಕುಂದಿ ಬಿ ಪಿ ಕಮ್ಮಿ ಆಗ ಬಹುದು .ಬಿ ಪಿ ಕಮ್ಮಿಯಾಗಿ ಅಂಗ ಜೀವ ಕೋಶಗಳ ಕಾರ್ಯ ವ್ಯತ್ಯಯ ಆಗುವುದಕ್ಕೆ ಷಾಕ್ ಎಂದು ವೈದ್ಯ ಶಾಸ್ತ್ರ ದಲ್ಲಿ ಕರೆಯುವರು .

 ಹೆಚ್ಚಿದ ಬಿ ಪಿ ಗೆ ಹೈಪರ್ ಟೆಂಷನ್ ಎಂದರೆ ಕಡಿಮೆ ಆದರೆ ಹೈಪೋ ಟೆಂಷನ್ ಎನ್ನುವರು.ಮೇಲ್ಕಾಣಿಸಿದ ಕಾರಣಗಳಿಂದ  ರಕ್ತದ ಒತ್ತಡ ತುಂಬಾ ಕಮ್ಮ್ಮಿ ಆದರೆ ಮೆದುಳು ,ಮೂತ್ರ ಪಿಂಡ ಮತ್ತು ಸ್ವಯಂ ಹೃದಯ ಆಮ್ಲಜನಕ ಮತ್ತು ಆಹಾರಾಂಶಗಳಿಂದ ವಂಚಿತ ವಾಗಿ ಪರಿಸ್ಥಿತಿ ಗಂಭೀರ ಆಗುವುದು .ಹೃದಯದ ಒಳಗೆ ರಕ್ತ ಇದ್ದರೂ ಅದರ ಮಾಂಸ ಖಂಡ ಗಳಿಗೆ  ಕೊರೋನರಿ ಆರ್ಟರಿ ಎಂಬ ಅಪಧಮನಿ ಯಿಂದ ರಕ್ತ ಸರಬರಾಜು ಆಗುವುದು .ಡೀಸೆಲ್ ಟ್ಯಾಂಕರ್ ತಾನು  ಹೊತ್ತು ನಡೆವ ಟ್ಯಾಂಕರ್ ನಿಂದ ಇಂಧನ ಪಡೆಯದೇ ಬೇರೆ ಟ್ಯಾಂಕ್ ನಿಂದ ಪಡೆಯುವದಲ್ಲವೇ 

ಇನ್ನು ಕೆಲವರ ಬಿ ಪಿ 100/70 ಇತ್ಯಾದಿ ಇರಬಹುದು .ಇದೂ ನಾರ್ಮಲ್ ಬಿ ಪಿ ಯೇ .ಮೇಲೆ ಬಿ ಪಿ ಕಮ್ಮಿಯಾಗಲು ಹೇಳಿದ ಕಾರಣಗಳನ್ನು ಹೊರತು ಪಡಿಸಿ ಲೋ ಬಿ ಪಿ ಎಂಬ ಕಾಯಿಲೆ ಇಲ್ಲ .ವಯಸ್ಸಾದವರಲ್ಲಿ ಮತ್ತು ಸಕ್ಕರೆ ಕಾಯಿಲೆ ಯವರಲ್ಲಿ ಕೆಲವರಿಗೆ ನಿಂತಾಗ ಮಾತ್ರ ಬಿ ಪಿ ಕಮ್ಮಿ ಆಗಬಹುದು .ಇದನ್ನು ಪೋಶ್ಚುರಲ್ ಹೈಪೋ ಟೆಂಷನ್ ಎನ್ನುವರು .

ಆಸ್ತಮಾ ಕಾಯಿಲೆ ಯವರಿಗೆ ಜೋರಾಗಿ ದಮ್ಮು ಕಟ್ಟುತ್ತಿರುವಾಗ ,ಮೈಗ್ರೈನ್ ನಂತಹ ಕಾಯಿಲೆ ಯಿಂದ ಬಳಲುತ್ತಿರುವವರಿಗೆ ತಲೆ ನೋವು ಇರುವಾಗ ,ಮೂತ್ರದ ಕಲ್ಲಿನಿಂದ ತೀವ್ರ ನೋವು ಇರುವಾಗ ನೋಡಿದರೆ ಬಿ ಪಿ ಸ್ವಲ್ಪ ಜಾಸ್ತಿ ಇರ ಬಹುದು .ಮೂಲ ಕಾಯಿಲೆಗೆ ಚಿಕಿತ್ಸೆ ಮಾಡಿದರೆ ಬಿ ಪಿ ಸರಿ ಆಗುವುದು .ಮೆದುಳಿನ ಆಘಾತ (ಸ್ಟ್ರೋಕ್)ಆದಾಗ ಗಾಯಗೊಂಡ ಮೆದುಳಿನ ಸುತ್ತ ಮುತ್ತ ರಕ್ತ ಸಂಚಾರ ಹೆಚ್ಚಿಸಿ  ಮೆದುಳಿನ ಕಾರ್ಯ ಕ್ಷಮತೆಯು ಹೆಚ್ಚು ನಷ್ಟ ಆಗದಂತೆ ರಕ್ತದ ಒತ್ತಡ ತತ್ಕಾಲ ಜಾಸ್ತಿ ಆಗುವುದು .ಮೆದುಳಿನ ರಕ್ತ ಹೆಪ್ಪು ಗಟ್ಟುವಿಕೆ ಯಿಂದ ಆಗುವ ಈ ಸಮಯ ರಕ್ತದ ಒತ್ತಡ ಕಡಿಮೆ ಮಾಡಿದರೆ ಹಾನಿ ಜಾಸ್ತಿ ಆಗುವುದು .ಮೆದುಳಿನ ಆಘಾತ ದಿಂದ ಪಾರ್ಶ್ವ ವಾಯು ಇತ್ಯಾದಿ ಉಂಟಾಗುವುದು ತಾನೇ .

ಭಾನುವಾರ, ನವೆಂಬರ್ 22, 2020

ಹಲಗೆ ಬಳಪ

 ಮುಂಜಾನೆ ವಾಕಿಂಗ್ ಹೋಗುವಾಗ ಸ್ಲೇಟು ನ ಒಂದು ತುಂಡು ಸಿಕ್ಕಿತು.ಒಡನೆ ನೆನಪಿಗೆ ಬಂದುದು ಕುಮಾರ ವ್ಯಾಸನ ಪದ್ಯ

  ಹಲಗೆ ಬಳಪವ ಪಿಡಿಯದೊಂದ

ಗ್ಗಳಿಕೆ ಪದವಿಟ್ಟಳುಪದೊಂದ

ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ ||
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ || ೧೫ ||
 ಹಲಗೆಮತ್ತು ಬಳಪಗಳನ್ನು ಬಳಸಿಕೊಂಡು ಬರೆದು ಪುನಃ ಪುನಃ ತಿದ್ದಿ ಬರೆಯದೆ ಒಂದೇ ಸಾರಿಗೆ ಬರೆದ ಹಿರಿಮೆ!  ಒಂದು ಪದವನ್ನು ಬರೆದು ಅದನ್ನು ಅಳಿಸಿ ಮತ್ತೆ ಬರೆಯದ ಹಿರಿಮೆ! ಬೇರೆಯವರ ಕಾವ್ಯರಚನೆಯನ್ನು ಬಳಸಿಕೊಳ್ಳದೆ ಇರುವ ಹಿರಿಮೆ; ತಾಳೆಗರಿಯ ಓಲೆಯ ಮೇಲೆ ಕಂಠವೆಂಬ ಲೆಕ್ಕಣಿಕೆಕೆಯಿಂದ ಬರೆಯುವಾಗ, ಆಗುವ ಸದ್ದು ನಿಲ್ಲದಂತೆ ಓತಪ್ರೋತವಾಗಿ ಬರೆದ  ಹಿರಿಮೆಯೆಂಬ ಈ ಸಾಮರ್ಥ್ಯ- ಗದುಗಿನ ವೀರನಾರಾಯಣನ ಕಿಂಕರಗೆ= ವೀರನಾರಯಣನ ಸೇವಕನಾದ ತನಗೆ ಇದೆ, ಎಂದು ನಾರಣಪ್ಪ ಹೇಳಿಕೊಂಡಿದ್ದಾನೆ. (ಈ ಸಾಮರ್ಥ್ಯ ವ್ಯಾಸರ ನಂತರ ಇವನದೇ - ಹಾಗಾಗಿ ಅನ್ವರ್ಥವಾಗಿ ಕುಮಾರವ್ಯಾಸ))

 

.ಸ್ಲೇಟು ಕಡ್ಡಿ ,ಪುಸ್ತಕ ಇಲ್ಲದೆ  ಮಹಾ ಕಾವ್ಯ ರಚಿಸಿದ  ಆತನನ್ನು ಮೆಚ್ಚಿದೆ.ಅವನ ಹೆಮ್ಮೆ  ಸಕಾರಣ

ವಾದುದು. ನಾವು ಚಿಕ್ಕಂದಿನಲ್ಲಿ ಒಯ್ಯುತ್ತಿದ್ದ ಸ್ಲೇಟು ನೆನಪಿಗೆ ಬಂತು. ಮೊದಲ ಎರಡು ತರಗತಿಗಳಲ್ಲಿ ಅದುವೇ ನಮ್ಮ ಬರಹದ

ಅಂಗಣ.ವರ್ಷದ ಕೊನೆಯಲ್ಲಿ ಬಳಪದ ಚೌಕಟ್ಟು ಹೋಗಿ ರೊಟ್ಟಿಯಾಕಾರ ತಳೆಯುತ್ತಿತ್ತು.

ಸ್ಲೇಟು ಇದ್ದಾರೆ ಆಯಿತೆ? ಅದನ್ನು ಒರಸಲು ಬಟ್ಟೆ ನೀರು ಬೇಕು. ಶ್ರೀನಿವಾಸ ಮೂರ್ತಿಯವರ ರಂಗಣ್ಣನ ಕನಸಿನ ದಿನಗಳ ಬೋರ್ಡ್

ಒರಸುವ ಬಟ್ಟೆ ನೆನಪಿಗೆ ಬಂತು. ನಾವು ಹಳೆ ಬಟ್ಟೆಯ ತುಂಡನ್ನು ಬಳಪ ಒರಸಲು ಒಯ್ಯುತ್ತಿದ್ದೆವು.ಹಲವೊಮ್ಮೆ ಅಂಗಿ ಚಡ್ಡಿಗೆ

ಒರಸುತ್ತಿದ್ದೆವು .ಹುಡುಗಿಯರು ಲಂಗದ ಬಟ್ಟೆಗೆ .

                                          

ಬಟ್ಟೆ ಒದ್ದೆ ಮಾಡಲು ನೀರು ಬೇಕಲ್ಲ. ತಮ್ಮ ತಮ್ಮ ಲಾಲಾರಸವೆ ದ್ರವ.ಮಳೆಗಾಲದಲ್ಲಿ ಚಾವಣಿಯಿಂದ ಬೀಳುತ್ತಿದ್ದ ನೀರು.ಶಾಲೆಗೆ

ಹೋಗುವ ದಾರಿಯಲ್ಲಿ ನೀರು ಕಡ್ಡಿ ಎಂಬ ಸಣ್ಣ ಸಣ್ಣ ಸಸಿಗಳು ಸಿಗುತ್ತಿದ್ದವು. ಇವುಗಳ ಕಾಂಡದಿಂದ ಶುಧ್ಧವಾದ ನೀರು ಒಸರುತ್ತಿತ್ತು.

ಇವುಗಳನ್ನು ಕಟ್ಟು ಮಾಡಿ  ಒಯ್ಯುತ್ತಿದ್ದೆವು. ಉಕ್ತ ಲೇಖನ ,ಕಾಪಿ   ತಪ್ಪು ಬರೆದಾಗ ಅಧ್ಯಾಪಕರ  ಬೆತ್ತದಿಂದ  ಎರಡು ಬಿದ್ದಾಗ

ಬಂದ   ಕಣ್ಣೀರೇ   ಬಳಪವನ್ನು ಒದ್ದೆ ಮಾಡಿ ಕೊಡುತ್ತಿತ್ತು.

ಬಳಪ ದ ಕಡ್ಡಿ  ,ಅಂದರ ತುಂಡುಗಳು ,ಕೆಲವೊಮ್ಮೆ ಕೊಳ್ಳುತ್ತಿದ್ದ ಬಣ್ಣದ ಕಡ್ಡಿಗಳೂ ನೆನಪಾದವು .ಬಳಪ ಚೀಲ ಗಳನ್ನ ಹೆಗಲಿಗೆ

ಹಾಕಿ  ಅಕ್ಕನ ಕೈ ಹಿಡಿದು ನಡೆಯುತ್ತಿದ್ದ  ದಿನಗಳು.

ಈಗ  ಕಾಲ  ಒಂದು  ಪೂರ್ಣ ಸುತ್ತು ಹಾಕಿದೆ.ಈಗಿನ ಮಕ್ಕಳಿಗೂ ಹಲಗೆ ಬಳಪವ ಹಿಡಿಯದೆ ಕಲಿಯುವ ಅಗ್ಗಳಿಕೆ.

ಹಲಗೆ ಬಳಪ ತಾಳೆ  ಓಲೆ ಹೋಗಿ ಪುಸ್ತಕ ಪೆನ್ಸಿಲ್ ಪೆನ್ ಬಂದು ಹೋಗಿದೆ .ಈಗ  ಪೇಪರ್ ಲೆಸ್ ಆಫೀಸ್ ಇದ್ದ ಹಾಗೆ ಪೇಪರ್ ಲೆಸ್  ಶಾಲೆ .ಕಂಪ್ಯೂಟರ್ ,ಮೊಬೈಲ್ ಟಚ್ ಸ್ಕ್ರೀನ್ ನಲ್ಲಿ  ಮಕ್ಕಳು ಬರೆಯುವರು ,ಕವಿಗಳು ಕವನ ರಚನೆ ಮಾಡುವರು ..ಪದಗಳನ್ನು  ಗೂಗಲ್ ತಿದ್ದುವುದು . ಈಗ ಕೋವಿಡ್ ಬಂದ ಮೇಲೆ ನೇರ ಅಧ್ಯಾಪನ ವೂ ಇಲ್ಲ ,ವರ್ಚುಯಲ್ ಟೀಚಿಂಗ್ ,ವರ್ಚುಯಲ್ ಹೋಂ ವರ್ಕ್ ..ಪೆಟ್ಟು ಬೀಳುವ ಭಯ ಇಲ್ಲ .(ಈಗ ಮಕ್ಕಳನ್ನು ಶಿಕ್ಷಿಸುವುದು ಅಪರಾಧ ಅನ್ನಿ ).ಈಗ ಎಲ್ಲರೂ ಕುಮಾರ ವ್ಯಾಸರೇ .ಕಡಿಮೆ ಪಕ್ಷ ಕುಮಾರ ತ್ರಿಜ್ಯರು

ಇಷ್ಟೆಲ್ಲಾ ಯೋಚನಾ ಲಹರಿ ಮನೆಯಲ್ಲಿ  ಹಾಲು ತರಲಿಲ್ಲವೇ ಎಂದು ಮಡದಿ ಕೇಳಿದಾಗ ತುಂಡಾಯಿತು

ಶನಿವಾರ, ನವೆಂಬರ್ 21, 2020

ವಾಯುವಿನ ತೊಂದರೆಗೆ ಅಗ್ನಿಗೆ ಚಿಕಿತ್ಸೆಯೇ?

 ವಾಯುವಿನ  ತೊಂದರೆಗೆ ಅಗ್ನಿಗೆ ಚಿಕಿತ್ಸೆಯೇ ?

          ಜಠರ  ಹೊರಗಿಂದ                                                                    ಜಠರ  ಒಳ ಬದಿ 

 

 ನಾವು ತಿಂದ ಆಹಾರ ಬಾಯಿ ಅನ್ನ ನಾಳ ದಾಟಿ ಜಠರ ಸೇರುವುದು .ನೀವು ಗಮನಿಸ ಬೇಕು ಬಾಯಲ್ಲಿ ನುಂಗಿದ ಆಹಾರ ಮುಂದೆ ಹೋಗುವಾಗ ಎರಡು ಮಾರ್ಗ ಎದುರಾಗುತ್ತದೆ .ಒಂದು ಶ್ವಾಶ ನಾಳ ಎದುರಿನಲ್ಲಿ ಅದರ ಹಿಂದೆ ಅನ್ನ ನಾಳ .ಆಹಾರ ಶ್ವಾಶ ನಾಳಕ್ಕೆ ಹೋಗದಂತೆ ಕಾಯುವುದು ಎಪಿಗ್ಲೋಟ್ಟಿಸ್ .ಇದು ಗೇಟ್ ಮ್ಯಾನ್ .ಆಹಾರ ನೀರು ಬಂದಾಗ ಶ್ವಾಸ ನಾಳ ಮುಚ್ಚುವುದು ..ಒಂದು ವೇಳೆ ಗೇಟ್ ಹಾಕುವುದಕ್ಕೆ ಮೊದಲೇ ಅಣ್ಣ ನೀರು ಬಂದರೆ ಶ್ವಾಸ ನಾಳಕ್ಕೆ ಸ್ವಲ್ಪ ಹೋಗಿ ಇನ್ನಿಲ್ಲದ ಕೆಮ್ಮ್ಮ ಬರುವುದು .ಆಗ ಅಮ್ಮ ನಿಮ್ಮ ತಲೆಗೆ ತಟ್ಟಿ  ಮೆಲ್ಲಗೆ ಮಗಾ ಎನ್ನುವಳು .ಇದೇ ಅವಸ್ಥೆ ಪ್ರಜ್ಞೆ ಇಲ್ಲದವರಿಗೆ ನೀವು ನೀರು ಕುಡಿಸಿದರೆ ಆಗುವುದು .ಆಗ ಶರೀರ ಸಂರಕ್ಷಣಾ ಕ್ರಿಯೆಯಾದ ಕೆಮ್ಮು ಬರದು ,ಬದಲಿಗೆ ಉಸಿರಾಡುವಾಗ ಗರ ಗರ ಶಬ್ದ ಆಗುವುದು .ಉಸಿರು ಕಟ್ಟುವುದು ,ಹಾಗೇ ಮುಂದುವರಿದು ನ್ಯುಮೋನಿಯಾ ಆಗಬಹುದು .ಪ್ರಜ್ಞಾ ಹೀನರಿಗೆ ನೀರು ಕುಡಿಸಲು ಪ್ರಯತ್ನಿಸ ಬೇಡಿ ..ಅಂತಹ ಸಂದರ್ಭ  ನಾವು ನಾಸೋದರ ನಾಳ ಹಾಕಿ ಆಹಾರ ಕೊಡುವೆವು . 

      ಆಯಿತು .ಇನ್ನು ಹೊಟ್ಟೆಗೆ ಬರೋಣ .ಹೊಟ್ಟೆಯಲ್ಲಿ ಜೀರ್ಣ ಕ್ರಿಯೆಗೆ ಬೇಕಾದ ರಸ ವಿಶೇಷ (enzyme ) ಪೆಪ್ಸಿನ್ ನೊಂದಿಗೆ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿ ಆಗುತ್ತದೆ .ಈ ಆಮ್ಲವೇ ಜಠರಾಗ್ನಿ .ಅಥವಾ ಹೊಟ್ಟೆ ಕಿಚ್ಚು .ಜಠರ ಎಂದರೆ ಶಂಕರಾಚಾರ್ಯರ  ಪುನರಪಿ ಶಯನ ಮಾಡುವ ಜನನಿಯ ಜಠರ ಅಲ್ಲ ,ಅದು ಉದರ .ಇದು ಇಂಗ್ಲಿಷ್ ಭಾಷೆಯಲ್ಲಿ ಸ್ಟೊಮಕ್ ಎಂದು ಕರೆಯಲ್ಪಡುವ ಅಂಗ .ತಾನು ಉತ್ಪತ್ತಿ ಮಾಡಿದ  ಆಮ್ಲ ತನ್ನನ್ನೇ ದಹಿಸಿದರೆ ಎಂದು ಜಠರ ತನ್ನ ಒಳ ಪೊರೆ ರಕ್ಷಣೆಗೆ ಲೋಳೆ ಯಂತಹ ವಸ್ತು ವನ್ನು ಉತ್ಪಾದಿಸಿಸಿ ಕೋಟಿಂಗ್ ಮಾಡಿರುತ್ತದೆ .ಆಮ್ಲ ಮತ್ತು ಈ ಲೋಳೆ ಕದನ ವಿರಾಮ ಘೋಷಿಸಿರುವುದರಿಂದ  ಯಾವುದೇ ಆಕ್ರಮಣ ನಡೆಯುವುದಿಲ್ಲ .ಕೆಲವೊಮ್ಮೆ ನೋವಿನ ಮಾತ್ರೆ ಸೇವನೆಯಿಂದ ,ಮದ್ಯಪಾನ ,ಉದ್ವೇಗ ಇತ್ಯಾದಿ ಕಾರಣಗಳಿಂದ ಆಮ್ಲದ ಕೈ ಮೇಲಾಗಿ ಜಠರ ಒಳ ಮೈಯಲ್ಲಿ ಮೊದಲು ಗಾಯ ಮತ್ತೆ ಹುಣ್ಣು ಆಗ ಬಹುದು .ಆಗ ಹೊಟ್ಟೆ ಉರಿ ,ನೋವು ,ಮುಂದುವರಿದರೆ ರಕ್ತ ವಾಂತಿ ,ಜಠರ ವೇ  ತೂತು ಬಿದ್ದು ಜೀವಾಪಾಯ ಬರ ಬಹುದು .ನೋವು ನಮಗೆ ವರ  ,ಇಲ್ಲವಾದಲ್ಲಿ ಅರಿವಿಲ್ಲದೇ  ಮಹಾ ಅಪಾಯ ಬರುವುದು ..ಉರಿ ಸ್ವಲ್ಪ ನೋವು ಬಂದಾಗ ನಾವು ಚಿಕಿತ್ಸೆ ಪಡೆಯುವೆವು .ಇದು ವರೆಗೆ ವಿವರಿದ್ದು ನಿಜವಾದ ಗ್ಯಾಸ್ಟ್ರಿಕ್ . ಅದಕ್ಕೆ ನಾವು ಆಮ್ಲ ನಿರೋಧಕ ಔಷಧಿ ತೆಗೆದು ಕೊಳ್ಳ ಬೇಕು .ವೈದ್ಯರೂ ನೀವು ಗ್ಯಾಸ್ಟ್ರಿಕ್ ಎಂದರೆ ಅವನ್ನು ಬರೆದು ಕೊಡುವರು. 

          ಅಗ್ನಿ ಆಯಿತು ಇನ್ನು ವಾಯುವಿಗೆ ಬರೋಣ .ಈ ಮಾರುತಿ ಪಿತ  ಜಠರದಲ್ಲಿ ಉತ್ಪತ್ತಿ ಆಗುವುದು ಕಮ್ಮಿ .ಜಠರಕ್ಕೆ ವಾಯು ನಮ್ಮ ಬಾಯಿ ಮೂಗಿನಿಂದಲೇ ಬರುವುದು .ನಾವು  ತಿನ್ನುವಾಗ ಕುಡಿಯುವಾಗ ಮತ್ತು ಯಾವುದಾದರು ಆಲೋಚನೆಯಲ್ಲಿ ಇರುವಾಗ ಅರಿವಿಲ್ಲದೆ ಉದರಕ್ಕೆ ವಾಯು ಸೇವನೆ ಮಾಡುತ್ತೇವೆ .ಅನ್ನ  ನಾಳಕ್ಕೆ ಗೇಟ್ ಮ್ಯಾನ್ ಇಲ್ಲ .ಆ ಗಾಳಿ  ನಾವು ನೀರು ಕುಡಿದಾಗ ,ಉಂಡಾಗ ತೇಗಿನ ರೂಪದಲ್ಲಿ ಜಾಗ ಮಾಡಿಕೊಡಲು ಹೊರ ಬರುತ್ತದೆ .ಉಳಿದ ಸಮಯ ಅನ್ನ ನಾಳ ಮತ್ತು ಜಠರದ ನಡುವಿನ ಸಣ್ಣ ಕವಾಟ (sphincter)ಗಾಳಿಯನ್ನು ಮೇಲೆ ಹೋಗ ಬಿಡದಿದ್ದರೆ ಅದು ಕೆಳಗೆ ಕರುಳಿನ ಕಡೆಗೆ ಹೋಗ ಬೇಕು .ಅಲ್ಲಿಯೂ ಒಂದು ಸಣ್ಣ ತಡೆ ಇದೆ .ಇದೆರಡರ ನಡುವೆ ಅದು ಜಠರದಲ್ಲಿಯೇ ಗುಡು ಗುಡು ಮಾಡುವುದು .ಹೊಟ್ಟೆ ಉಬ್ಬರಿಸಿದಂತೆ ಆಗುವುದು .ಇನ್ನು ಕೆಲವರಿಗೆ ಅಸ್ತಮಾ ದಮ್ಮು ಕಾಯಿಲೆ ಇರುತ್ತದೆ .ಆಗ ಶ್ವಾಸ ನಾಳಗಳು  ಸಪೂರ ಗೊಂಡು ಗಾಳಿ ಶ್ವಾಸ ಕೋಶಕ್ಕೆ ಹೋಗಲು ಕಷ್ಟ ಇರುದರಿಂದ ಇನ್ನೊಂದು ಸುಲಭ ಮಾರ್ಗ ಅನ್ನ ನಾಳದ ಮೂಲಕ ಜಠರ ಪ್ರವೇಶ ಮಾಡುವುದು .ಇದೂ ವಾಯು ಉಪದ್ರ ,ಅಗ್ನಿಯದು ಅಲ್ಲ .ಆದರೆ ವಾಡಿಕೆಯಲ್ಲಿ  ಎಲ್ಲವನ್ನೂ ಗ್ಯಾಸ್ರ್ರೀಕ್ ಎಂದು ಹೇಳುವುದರಿಂದ ಈ ತೊಂದರೆಗೂ ಆಮ್ಲ (ಅಗ್ನಿ )ನಿರೋಧಕ ಔಷಧಿ ಸೇವನೆ ಮಾಡಿ ಪ್ರಯೋಜನ ಇಲ್ಲ .ಹಾನಿ ಇದೆ .ಯಾಕೆಂದರೆ ಸಾಮಾನ್ಯ ಜೀರ್ಣ ಕ್ರಿಯೆಗೆ ,ಮತ್ತು ರಕ್ತ ಉಂಟುಮಾಡಲು ಬೇಕಾದ ಕಬ್ಬಿಣದ ರಕ್ತ ಸೇರುವಿಕೆಗೆ ಆಮ್ಲೀಯ  ಪರಿಸರ ಬೇಕು .ಅಲ್ಲದೆ ಆಮ್ಲ ಹೊಟ್ಟೆ  ಸೇರಿದ ರೋಗಾಣುಗಳನ್ನು ಕೊಲ್ಲು ವುದು . 

ಇನ್ನು ಬಟಾಟೆ ಯಂತಹ ಪದಾರ್ಥ ತಿಂದಾಗ ವಾಯು ಉತ್ಪತ್ತಿ ಆಗುವುದು ದೊಡ್ಡ ಕರುಳಿನಲ್ಲಿ .ಅಲ್ಲಿ ಪಿಷ್ಟ ಭೇದಿ ಸುವ ಅಪಾಯ ರಹಿತ ಬ್ಯಾಕ್ಟೀರಿಯಾ ಗಳು ತಮ್ಮ ಕ್ರಿಯೆಯಲ್ಲಿ ಕಾರ್ಬನ್ ಡೈ ಆಕ್ಸೈಡ್ ,ಮೀಥೇನ್ ,ಹೈಡ್ರೋಜನ್ ಇತ್ಯಾದಿ ಅನಿಲ ಉತ್ಪಾದನೆ ಮಾಡುವವು ,ಅವು ಅಪಾನ ವಾಯು ರೂಪದಲ್ಲಿ ಹೊರ ಹೋಗುವವು .ಮೀಥೇನ್ ಮತ್ತು ಹೈಡ್ರೋಜನ್ ಸಲ್ಪಾಯಿಡ್ ಜಾಸ್ತಿ ಇದ್ದರೆ ದುರ್ವಾಸನೆ ಇರುವುದು .ಇದೂ ಗ್ಯಾಸ್ಟ್ರಿಕ್ ಅಲ್ಲ . ಇಲ್ಲಿ ಒಂದು ವಿಷಯ .ನಮ್ಮ ಅಡಿಗೆ ಎಲ್ ಪಿ ಜಿ ಗ್ಯಾಸ್ ಗೆ ಯಾವುದೇ ವಾಸನೆ ಇಲ್ಲ .ಅದು ಸೋರಿದರೆ ಕೂಡಲೇ ತಿಳಿಯಲಿ ಎಂದು ಈಥೈಲ್ ಮರ್ಕ್ಯಾಪ್ಟನ್ ಅನಿಲ ಸೇರಿಸುವರು 

 ಗ್ಯಾಸ್ಟ್ರಿಕ್ ಎಂದರೆ ಜಠರಕ್ಕೆ ಸಂಬಂದಿಸಿದ ಎಂದು ಅರ್ಥ .ಜಠರ ಅಗ್ನಿ ಜಾಸ್ತಿ ಆದರೆ ಮಾತ್ರ ಸಾಮಾನ್ಯವಾಗಿ ನಾವು ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಔಷಧಿ ಎಂದು ಕರೆಯುವ ಆಮ್ಲ ನಿರೋಧಕ ತಿನ್ನ ಬೇಕು .ಉಳಿದ ಎಲ್ಲಾ ವಾಯು ಪ್ರಕೋಪಕ್ಕೆ ಅದು ಸಲ್ಲ . 

 ಅದಕ್ಕೆ ಅದರದೇ ಕಾರಣ ಹುಡುಕಿ ಚಿಕಿತ್ಸೆ ಮಾಡಬೇಕು .ಉದಾಹರಣೆಗೆ ದಮ್ಮು ಕಾಯಿಲೆ ಇದ್ದರೆ ಅದಕ್ಕೆ ಸರಿಯಾದ ಚಿಕಿತ್ಸೆ ,ಮನೋ ಉದ್ವೇಗ ಇದ್ದರೆ ಅದರ ಉಪಶಮನ ಇತ್ಯಾದಿ 


ನಮ್ಮ ರೋಗಿಗಳು ಸಾಮಾನ್ಯ ತಲೆ ನೋವಿನಿಂದ ಹಿಡಿದು ಮೂತ್ರದ ಕಲ್ಲಿನ ನೋವಿನ ವರೆಗೆ ಎಲ್ಲದಕ್ಕೂ ಗ್ಯಾಸ್ತ್ರಿಕ್ ಎಂದು ಹೇಳಿಕೊಳ್ಳುವರು .ಕೆಲವು ಗ್ಯಾಸ್ತ್ರಿಕ್ ಎಂದು ಬಂದ ವರು ಗರ್ಭಿಣಿ ಯಾಗಿ ಇದ್ದವರೂ.ಇದು ಬಹಳ ಮುಖ್ಯ ಯಾಕೆಂದರೆ ಗರ್ಭಿಣಿಯರಿಗೆ ಸುಮ್ಮನೇ ಗ್ಯಾಸ್ತ್ರಿಕ್ ಮಾತ್ರೆ ಕೊಟ್ಟರೆ ಹಾನಿಕರಕ .ನಿಮಗೆ ಏನು ಆಗುವುದು ಎಂದು ವೈದ್ಯರಿಗೆ ಹೇಳಿ ಗ್ಯಾಸ್ತ್ರಿಕ್ ಹೌದಾ ಅಲ್ಲವಾ ಎಂದು ಅವರೇ ನಿರ್ಧರಿಸಲಿ .ಇನ್ನೂ ಅನುಭವ ಆಗ ಬೇಕಾದ ವೈದ್ಯರು ನೀವು ಗ್ಯಾಸ್ತ್ರಿಕ್ ಎಂದ ಒಡನೆ ರಾಣಿತಿದಿನ್,ಒಮೆಪ್ರಜೋಲ್ ,ಪಾಂಟಪ್ರಜೋಲ್ ಅಂತಹ ಔಷಧಿ ಬರೆದು ಬಿಡುವ ಸಾಧ್ಯತೆ ಇದೆ

                     

ಶುಕ್ರವಾರ, ನವೆಂಬರ್ 20, 2020

ರಕ್ತದಲ್ಲಿ ಒಬ್ಬ ಆರುಣಿ(ಉದ್ದಾಲಕ)

                               ರಕ್ತದಲ್ಲಿ ಒಬ್ಬ ಉದ್ದಾಲಕ

ನೀವು ಆರುಣಿ (ಉದ್ದಾಲಕ )ನ ಕತೆ ಕೇಳಿರ ಬಹುದು .ದೌಮ ಮುನಿಯ ಶಿಷ್ಯ .ಒಮ್ಮೆ ಬಯಲಿಗೆ ಕಟ್ಟಿಗೆ ತರಲು ಹೋಗಿದ್ದಾಗ ಹೊಲದ ಕಾಲುವೆ ದಡ  ಬಿರಿದು ನೀರು ಪೋಲಾಗುತ್ತಿತ್ತು .ಪಾಪ ಅವನ ಬಳಿ ಹಾರೆ ಪಿಕ್ಕಾಸು ಇರಲಿಲ್ಲ ,ಇದ್ದರೂ ಅವನು ಸಣ್ಣವನು .ಕೂಡಲೇ ಬಿರುಕು ಬಿಟ್ಟ ಕಡೆ ತಾನೇ ಮಲಗಿದ . ಇತ್ತ ಬಹಳ ಹೊತ್ತು ಶಿಷ್ಯನನ್ನು ಕಾಣದೆ ಹುಡುಕಿ ಬರುವಾಗ ನೀರಲ್ಲಿ ಮಲಗಿದ್ದ ಇವನನ್ನು ಎಬ್ಬಿಸಿ ಇತರ ಶಿಷ್ಯರು  ಸಲಕರಣೆ ಗಳೊಡನೆ ಬಂದು ಬದುವನ್ನು ಸರಿ ಮಾಡಿದ  ಕತೆ . 

 ನಮ್ಮ ರಕ್ತದಲ್ಲಿ  ಪ್ಲಾಟಿಲೆಟ್ ಎಂಬ ಕಣ  ಇದೆ .ನಮಗೆ ಗಾಯವಾಗಿ ರಕ್ತನಾಳ ಭೇದಿಸಿದರೆ  ಕೂಡಲೇ ಅಲ್ಲಿ ತನ್ನ ಸಂಗಡಿಗರೊಂದಿಗೆ ತೆರಳಿ ಅಡ್ಡ ಮಲಗಿ ರಕ್ತ ಸ್ರಾವ ಕಡಿಮೆ ಮಾಡುವ ಪ್ರಯತ್ನ ಮಾಡುವುದು . ಸ್ವಲ್ಪ ಹೊತ್ತಿನಲ್ಲಿ ಅವುಗಳ ಸಂದೇಶ ಹೋಗಿ  ರಕ್ತ ಹೆಪ್ಪು ಗಟ್ಟಿಸುವ ಸಾಮಗ್ರಿಗಳು (clotting  factors )ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಳ್ಳುವವು . 

                           



       ಈ ಕಣಗಳು  ಬಹಳ ಕಡಿಮೆ ಆದರೆ ರಕ್ತ ಸ್ರಾವ ಆಗ ಬಹುದು .ನಿಮಗೆ ತಿಳಿದಂತೆ  ಡೆಂಗು  ಜ್ವರದಲ್ಲಿ ಇವುಗಳ ಸಂಖ್ಯೆ ಕಡಿಮೆ ಆಗುವುದು .ಪ್ಲಾಟಿಲೆಟ್ ಗಳನ್ನು  ಜನಪ್ರಿಯ ಗೊಳಿಸಿದ ಶ್ರೇಯ ಡೆಂಗೂ  ಜ್ವರಕ್ಕೆ ಸಲ್ಲ ಬೇಕು .ಈ ಕಣಗಳು ಮೊದಲೇ ನಮ್ಮ ಶರೀರದಲ್ಲಿ ಸದ್ದು  ಗದ್ದಲ ಇಲ್ಲದೆ ಕೆಲಸ ಮಾಡುತ್ತಿದ್ದವು ,ಯಾರೂ ಗಮನಿಸಲಿಲ್ಲ .ಡೆಂಗು  ಜ್ವರದ ರೋಗಿಯ ಸಾಮಾನ್ಯ ರಕ್ತ ಪರೀಕ್ಷೆಯಲ್ಲಿ ಇವುಗಳ ಸಂಖ್ಯೆ ಕಡಿಮೆ ಆಗುವುದು ಕಂಡು ಸುದ್ದಿ ಆಯಿತು .ನಮ್ಮಲ್ಲಿಯೂ ಹಾಗೆ ಗಂಡನೊಡನೆ ಜಗಳ ಮಾಡುವಾಗ ಹೆಂಡತಿ 'ನಾನು ನಾಲ್ಕು ದಿನ ಎಲ್ಲಾದರೂ ಹೋಗಿ ಇರುತ್ತೇನೆ ,ಆಗ ನಿಮಗೆ ನನ್ನ ಪ್ರಾಮುಖ್ಯತೆ ಗೊತ್ತಾಗುವುದು .ಸುಮ್ಮನೇ  ಮನೆಯಲ್ಲಿ ಬಿಟ್ಟಿ  ದುಡಿಯುವಾಗ ನಿಮಗೆ ನಾನು ನನ್ನ ಕೆಲಸ ಲೆಕ್ಕವೇ ಇಲ್ಲ "ಎನ್ನುತ್ತಾರಲ್ಲ ಹಾಗೆ .ಅಂದ ಹಾಗೆ ಡೆಂಗು  ಜ್ವರದಲ್ಲಿ ಜನರು ತಿಳಿದುಕೊಂಡಂತೆ  ಈ ಕಾರಣದಿಂದ ಅಪಾಯ ಕಡಿಮೆ .ಡೆಂಗೂ ಶಾಕ್ ಎಂಬುದು ಒಂದು ಇದೆ .ಅದು ಅಪಾಯ ತರುವುದು .ಪ್ಲಾಟೆಲೆಟ್  ಹೆಚ್ಚಿಸಲು ಕಿವಿ  ಹಣ್ಣು ,ಪಪ್ಪಾಯಿ ಹಣ್ಣು ಮತ್ತು ಎಲೆ ತಿನ್ನ ಬೇಕಿಲ್ಲ .ಡೆಂಗೂ  ಕಾಯಿಲೆಯಲ್ಲಿ ತನ್ನಿಂದ ತಾನೇ ಅದು ಸರಿ ಆಗುವುದು . 

  ಪ್ಲಾಟೆಲೆಟ್  ಕಡಿಮೆ ಆಗಲು ಇತರ ಸಾಮಾನ್ಯ ವೈರಲ್ ಜ್ವರ , ಮಲೇರಿಯ ಮದ್ಯಪಾನ ,ವಿಟಮಿನ್ ಬಿ ೧೨ ಕೊರತೆ , ಕಾರಣ ಇರಬಹುದು .ಇವು ಎಲ್ಲಾ ಸುಲಭ ಚಿಕಿತ್ಸೆ ಯುಳ್ಳ ಕಾಯಿಲೆಗಳು .ಇನ್ನು ಅಪರೂಪಕ್ಕೆ ಐಟಿಪಿ ಎಂಬ ಕಾಯಿಲೆ ,ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯಿಂದಲೂ ಪ್ಲಾಟೆಲೆಟ್  ಕಡಿಮೆ ಆಗ ಬಹುದು 

                ಆದರೆ ಯಾವಾಗಲೂ ಇವು ಒಳ್ಳೆಯದನ್ನೇ ಮಾಡುತ್ತವೆ ಎಂದು ಇಲ್ಲ .ಅಧಿಕ ಪ್ರಸಂಗ ಮಾಡುವುದೂ ಇದೆ .ಹೃದಯ ಮೆದುಳಿನ ರಕ್ತ ನಾಳದಲ್ಲಿ ಕೊಬ್ಬಿನ ಅಣುಗಳು ಶೇಖರಣೆ ಆದಾಗ ಸುಮ್ಮನೇ  ತನ್ನ ಸಂಗಾತಿಗಳನ್ನು  ಅಲ್ಲಿ ಆಟವಾಡಲು ಕರೆಯುತ್ತವೆ .ಅವುಗಳ ಗಲಾಟೆ ಕೇಳಿ ರಕ್ತ ಹೆಪ್ಪು ಕಣಗಳು ಸ್ಥ ಳಕ್ಕೆ ಧಾವಿಸಿ  ನಾಳದ ಒಳಗೇ ರಕ್ತ ಹೆಪ್ಪು ಗಟ್ಟಿಸಿ ಹೃದಯಾಘಾತ ಅಥವಾ ಮೆದುಳಿನಲ್ಲಿ ಮೆದುಳಿನ ಆಘಾತ (ಸ್ಟ್ರೋಕ್ )ಉಂಟು ಮಾಡುತ್ತವೆ .ಇಂತಹ ಸಂದರ್ಭದಲ್ಲಿ ಆಸ್ಪಿರಿನ್ ನಂತಹ ಪ್ಲಾಟೆಲೆಟ್  ನಿರೋಧಕ ಔಷಧಿಗಳನ್ನು ವೈದ್ಯರು ಕೊಡುವರು 

                          

 Stemi  ಎಂದರೆ ಹೃದಯಾಘಾತ ,thrombus  ಎಂದರೆ ಹೆಪ್ಪು ಗಟ್ಟಿದ ರಕ್ತ
             

ಗುರುವಾರ, ನವೆಂಬರ್ 19, 2020

ಇಂಗ್ಲಿಷ್ ಮೀಡಿಯಂ ,ಕನ್ನಡ ಎ ವನ್

ನಾನು ಕನ್ನಡದಲ್ಲಿ ಬರೆಯುವುದು ಅಲ್ಪ ಸ್ವಲ್ಪ ಬರುವ ಭಾಷೆ ಅದೆಂದು ,ಇಂಗ್ಲಿಷ್ ಸರಿ ಬರುವುದಿಲ್ಲ ಎಂದು ಒಪ್ಪಿ ಕೊಳ್ಳುವೆನು .ಆದರೂ ದ್ರಾಕ್ಷಿ ಹುಳಿ ಎಂದು ನರಿ ಹೇಳಿದಂತೆ ಆಂಗ್ಲ ಪರಕೀಯ ಭಾಷೆ ,ಅದು ಸಲ್ಲ ಎನ್ನುವೆನು .ನನ್ನ ಬಾಲ್ಯದಲ್ಲಿ ಅಮ್ಮನೂ ,ಶಾಲೆಯ ಅಧ್ಯಾಪಕರೂ ನಿನಗೆ ಹೇಳಿದರೆ ಭಾಷೆ ಇಲ್ಲ ಎಂದು ಹಲವು ಬಾರಿ ಆಶೀರ್ವಾದ ಮಾಡಿದ ಪರಿಣಾಮ ಇರಬೇಕು .

ನಮಗೆ ಇಂಗ್ಲಿಷ್ ಶಿಕ್ಷಣ ಮೂರನೇ ತರಗತಿಯಲ್ಲಿ ಆರಂಭ .ಪತ್ರ ಲೇಖನದಲ್ಲಿ ರಜಾ ಅರ್ಜಿ ಬರೆಯಲು ಒಂದು ಫಾರ್ಮಾಟ್ ಹೇಳಿ ಕೊಟ್ಟಿದ್ದರು .As i am suffering from fever sanction me three days fever ,Yours obediently ,ಇತ್ಯಾದಿ .ಅದು ಕಲಿಸಿ ಕೊಟ್ಟ ಕೆಲವೇ ದಿವಸಗಳಲ್ಲಿ ನನ್ನ ಅಕ್ಕನ ಮದುವೆಗೆ ರಜೆ ಬೇಕಿತ್ತು .ಕನ್ನಡ ದಲ್ಲೇ ಬರೆದರೆ ಸಾಕಿತ್ತು .ಆದರೆ ಅಧ್ಯಾಪಕರನ್ನು ಇಂಪ್ರೆಸ್ ಮಾಡಲು ಇಂಗ್ಲಿಷ್ ನಲ್ಲಿಯೇ ಬರೆದೆ.As i am suffering from sister's marriage kindly sanction me ಇತ್ಯಾದಿ .ತಂದೆಯವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ .ಆದುದರಿಂದ ಮಗ ಇಷ್ಟು ಸಣ್ಣವನು ಇಂಗ್ಲಿಷ್ ಕಾಗದ ಬರೆದಿದ್ದಾನೆ ಎಂದು ಸಹಿ ಮಾಡಿ ಕೊಟ್ಟರು .ಅಧ್ಯಾಪಕರಿಗೆ ಕೊಟ್ಟಾಗ ,ಮುಂದಿನ ಕತೆ ಬೇಡ .ನಮ್ಮ ಅಧ್ಯಾಪಕರಿಗೂ ಇಂಗ್ಲಿಷ್ ಚೆನ್ನಾಗಿ ಬರುತ್ತಿರಲಿಲ್ಲ .ಹೆಚ್ಚ್ಚಿನ ಹಳ್ಳಿ ಶಾಲೆಗಳಲ್ಲಿ ಇದೇ ಪರಿಸ್ತಿತಿ.ನಾವು ಪರಸ್ಪರ ತುಳು ಮತ್ತು ಕನ್ನಡದಲ್ಲಿ  ಮಾತನಾಡುತ್ತಿದ್ದೆವು .

 ಕೆಲವು ಪೇಟೆ ಶಾಲೆಗಳಲ್ಲಿ ಮಕ್ಕಳು ಇಂಗ್ಲಿಷ್ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡ ಬಾರದು ಎಂಬ ಕಟ್ಟಳೆ ಇದೆ.ಶಿವರಾಮ ಕಾರಂತರು ತಮ್ಮ ಹೈ ಸ್ಕೂಲ್ ನಲ್ಲಿ ಅಂತಹ ಒಬ್ಬ ಮುಖ್ಯೋಪಾಧ್ಯಾಯ ಇದ್ದರು ,ಒಂದು ದಿನ ಅವರು ಜಗಲಿಯಲ್ಲಿ ನಡೆಯುತ್ತಿರುವಾಗ ಅವರಿಗೆ ಕೇಳಿಸುವಂತೆ ತನ್ನ ಮಿತ್ರನಿಗೆ "Fool laugh in english why are you laughing in Kannada ?"ಹೇಳಿದರಂತೆ .ಕೈಲಾಸಮ್ ಅವರ ಸಂಸ್ಕೃತ ಅಧ್ಯಾಪಕರು ಎಲ್ಲಾ ವಿದ್ಯಾರ್ಥಿಗಳೂ ತಮ್ಮ  ತರಗತಿಯಲ್ಲಿ ಸಂಸ್ಕೃತ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡ  ಬಾರದು ,ತಪ್ಪಿದರೆ ಶಿಕ್ಷೆ ಎಂದು  ಆದೇಶ ನೀಡಿದ್ದರಂತೆ .ಒಂದು ದಿನ ಕೈಲಾಸಂ ಎದ್ದು ನಿಂತು ಒಂದು ಬೆರಳು ತೋರಿಸಿ "ಮೂತ್ರ ವಿಸರ್ಜನಾರ್ಥಾಯ  ಬಹಿರ್ದೆಶಮ್  ಗಚ್ಚಾಮಿ "(ಮೂತ್ರ ಮಾಡಲು ಹೊರಹೋಗಬೇಕಿತ್ತು )ಎಂದರಂತೆ .ಕೋಪ ಗೊಂಡ ಶಿಕ್ಷಕರು ದೇವ ಭಾಷೆಯನ್ನು ಇದಕ್ಕೆಲ್ಲ ಉಪಯೋಗಿಸಿ ಮೈಲಿಗೆ ಮಾಡಬಾರದು ಹುಚ್ಚು ಮುಂಡೇದೆ "ಎಂದು ಬೈದರಂತೆ . 

ಈಗಿನ ಮಾತೆಯರು (ತಂದೆಯೂ )ಮಕ್ಕಳಿಗೆ ಅತಿ ಬಾಲ್ಯದಲ್ಲಿ ಕಮ್ ಗೋ ಸಿಟ್  ಸ್ಟಾಂಡ್ ಇತ್ಯಾದಿ ತರಬೇತಿ ಮಾಡುತ್ತಾರೆ .ಕನ್ನಡ ಬಾಯಲ್ಲಿ ಬಂದರೆ ಮೈಲಿಗೆ ಆಗುತ್ತದೆ ಎಂಬಂತೆ .ತಮ್ಮ ನಾಯಿ ಬೆಕ್ಕುಗಳ ಕೂಡ ಇಂಗ್ಲಿಷ್ ಸಂವಹನ .ಎಚ್ ನರಸಿಂಹಯ್ಯ ತಮ್ಮ ಆತ್ಮ ಚರಿತ್ರೆಯಲ್ಲಿ ,ಬೆಂಗಳೂರು ಲಾಲ್ ಭಾಗ್ ನಲ್ಲಿ ಮುಂಜಾನೆ ವಾಕಿಂಗ್ ಮಾಡುವಾಗ ,ಅಲ್ಲಿ ಬಂದವರ ನಾಯಿಗಳಲ್ಲಿ ಬಹುತೇಕ ಇಂಗ್ಲಿಷ್ ಮೀಡಿಯಂ  ,ಒಂದು ಮಾತ್ರ ತೆಲುಗು ಮಾಧ್ಯಮ ದ್ದು  ,ಕನ್ನಡ ಮಾಧ್ಯಮದ ನಾಯಿಗಳೇ ಕಾಣಲಿಲ್ಲ ಎಂದು ದುಃಖಿಸಿದ್ದಾರೆ .. 

ನಾನು ಮಂಗಳೂರಿನಲ್ಲಿ ಫ್ಲಾಟ್ ವಾಸವಿದ್ದ ಸಮಯ ,ಎದುರು ಮನೆಯಲ್ಲಿ ನೇಹಾ ಎಂಬ ಹುಡುಗಿ ,ತುಂಬಾ ಚೂಟಿ .ನನ್ನ ಫ್ರೆಂಡ್ .ನಾನು ಅವಳನ್ನು ಹೊಗಳಿ  ಯು ಆರ್ ಎ  ಗುಡ್ ಗರ್ಲ್ ಎಂದುದಕ್ಕೆ ಎಲ್ ಕೆ ಜಿ ಯ ಆ ಪೋರಿ "ಈ ಮಾಮನಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ .ಅದು ಗರ್ಲು  ಅಲ್ಲ ಗಲ್ .(R  ಸೈಲೆಂಟ್ ಎಂಬಂತೆ ),ಎಂದು ಸರಿ ಪಡಿಸಿದಾಗ ನಾನು ಹೌದಮ್ಮಾ  ಇಂಗ್ಲಿಷ್ ಐಸ್ ನಾಟ್ ಕಮಿಂಗ್ ಟು ಮೀ ಎಂದೆ .ಕೂಡಲೇ ಅವಳು ತಲೆ ಮೇಲೆ ಕೈ ಇಟ್ಟು  ವಾಟ್ ಇಂಗ್ಲಿಷ್ ಕಮಿಂಗ್ ಗೋಯಿಂಗ್ ,ಐ ಡೋಂಟ್ ನೊ  ಇಂಗ್ಲಿಷ್ ಎಂದು ತಿದ್ದಿದಳು .ಪ್ರೈಮರಿ ಶಾಲೆಯಲ್ಲಿ ನಾನು ಕಿವಿ ಕೇಳುವುದಿಲ್ಲ ಎಂಬುದಕ್ಕೆ ಇಯರ್ ನಾಟ್  asking ,ಹಣ್ಣು ಹಣ್ಣು ಮುದುಕ ಎಂಬುದಕ್ಕೆ ಫ್ರೂಟ್ ಫ್ರೂಟ್ ಗ್ರಾಂಡ್ ಫಾದರ್ ,ಬಿದ್ದು ಬಿದ್ದು ನಕ್ಕನು ಎಂಬುದಕ್ಕೆ ಫೆಲ್  ಫೆಲ್  ಅಂಡ್ ಲಾಫ್ಡ್ ಎಂದೆಲ್ಲಾ ಬರೆಯುತ್ತಿದ್ದೆ ,

-------------------------------------------------------------------

ಪ್ರೊ ವೈ ಅರ ಮೋಹನ್ ಅವರ ನೆನಪುಗಳು ಪುಸ್ತಕದಲ್ಲಿ ತಮ್ಮ ಪ್ರೈಮರಿ ಶಾಲೆಯ ಇಂಗ್ಲಿಷ್ ಅಧ್ಯಾಪಕರ ಬಗ್ಗೆ ಬರೆದಿದ್ದಾರೆ  ,ಅದರಿಂದ ಕೆಲವು ಸಾಲುಗಳು . 

;I say silence ,silence. you see this is class room ;not fish market,i say,do you understand?

'You see ,English is very important.In today's society .you see .If you don't know English ,your bean doesn't get baked(ನಿಮ್ಮ ಬೇಳೆ ಬೇಯದು) ,you understand?  .

You see ,English is very very difficult !You see ,don't think learning English is as easy as peeling plantain and putting in mouth I say'(ಬಾಳೆಹಣ್ಣು ಸುಲಿದು ತಿಂದಂತೆ ಅಲ್ಲ )

ಇನ್ನೂ ಕೆಲವು ಸಾಲುಗಳು 

I say you are a village simpleton!You see you listen to Ramayana all night and in the morning ask what is Rama's relation to Sita!

I see that's why you look like one who took castor oil (ಹರಳೆಣ್ಣೆ ಕುಡಿದವನ ಮುಖ ).

Teacher:I say ,I simply asked whether you saw anything .You see ,if someone shouts pumpkin-thief ,you touch and feel your shoulders!(ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದನಂತೆ )

Now say what is the plural form of sheep?Stuent:Sheeps saar !

Teacher :That includes you also !Useless fellow.I feel like warming your palm.(ಕೈ ಬಿಸಿ ಮಾಡಬೇಕು )

------------------------------------------------------------------------

ನನಗೆ  ಇಂಗ್ಲಿಷ್ ಚೆನ್ನಾಗಿ ಬರುವುದಿಲ್ಲ ಎಂದು ಬೇಸರ ನಾಚಿಕೆ ಕೀಳರಿಮೆ ಇಲ್ಲ .ಹಲವಾರು ಬಾರಿ ರೋಗಿಯ ಕೇಸ್ ಶೀಟ್ ನಲ್ಲಿ ನಾನು ನನ್ನಂತೆ ಇರುವ ಸಹೋದರಿಯರಿಗೆ (nurse) ಕನ್ನಡಲ್ಲಿ ಆದೇಶ ಬರೆಯುವೆನು ,ಆಗಾಗ ಮಗ್ಗಲು ತಿರುಗಿಸಿರಿ ,ಗಂಟಲು ಗರ ಗರ ಎಂದರೆ ಸಕ್ಷನ್ ಮಾಡಿರಿ ,ತಲೆ ಏರಿಸಿ (ರೋಗಿಯ ತಲೆ ನಿಮ್ಮದಲ್ಲ )ಮಲಗಿಸಿ ಇತ್ಯಾದಿ .-

ಅಂಗಡಿಯಲ್ಲಿ ಅಕ್ಕಿ ಕೇಳಿದರೆ ಸಾಧಾರಣ ,ಮೀಡಿಯಂ ಮತ್ತು ಎ ಒನ್ ಯಾವ್ದು ಬೇಕು ಎನ್ನುವರು ,ಅದರಂತೆ ಕನ್ನಡ ಎ ಒನ್ ಇಂಗ್ಲಿಷ್ ಮೀಡಿಯಂ .ಆದರೆ ವಶಿಷ್ಠ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಇತ್ಯಾದಿ ಹೆಸರು ಕಂಡಾಗ ಏನೋ ಕಸಿ ವಿಸಿ ಆಗುವುದು 

 ಇಷ್ಟೆಲ್ಲಾ ಹೇಳಿದರೂ ಇವಳು ನನ್ನ ಹೆಂಡತಿ ಎನ್ನುವುದಕ್ಕಿಂತ ನನ್ನ ವೈಫ್ ,ಇದು ನನ್ನ ತಂದೆ ಗೆ ಬದಲು ಡ್ಯಾಡಿ ಇತ್ಯಾದಿ ಎನ್ನುವುದರಲ್ಲಿ ಒಂದು ಗತ್ತು ಮೇಲೇ  ಇದೆ ಎನ್ನುವಿರೋ ?


ಸೋಮವಾರ, ನವೆಂಬರ್ 16, 2020

ಅಂಗ್ರಿ ದಿನಗಳು 3 ನನ್ನ ತಂದೆ

                                


ಮೇಲಿನ ಚಿತ್ರದಲ್ಲಿ ಕಾಣುವುದು ನನ್ನ ತಂದೆ ಅಂಗ್ರಿ ಸುಬ್ಬಣ್ಣ ಭಟ್ ,ತಾಯಿ ವೆಂಕಟ ಲಕ್ಷ್ಮಿ ಕಿರಿಯ ತಮ್ಮ ಶ್ರೀನಿವಾಸ .

                   ನಾನು ಜನಿಸಿದ ಮನೆ ಕೆಳಗೆ ಇರುವುದು

ತಂದೆಯವರು ಶ್ರಮ ಜೀವಿ .ಪಶು ಪಾಲನೆ ಅವರ ಮೊದಲ ಪ್ರೀತಿ .ಕೃಷಿ ಎರಡನೇ .ಬೆಳಗ್ಗೆ ಎದ್ದವರು ಮುಖ ಮಾರ್ಜನೆ ಆಗಿ ನೇರ ದನ ಕಾರು ಗಳ ವಾಸ ಸ್ಥಾನ ಕೆದೆ ಅಥವಾ ಹಟ್ಟಿಗೆ ಹೋಗಿ ಹುಲ್ಲು ಹಾಕುವರು .ಬಳಿಕ ಬಂದು ಮನೆಯಯಿಂದ ಮಡ್ಡಿ ಯ  ದೊಡ್ಡ ಪಾತ್ರೆಯನ್ನು ಭುಜದ ಮೇಲೆ ಹೊತ್ತುಕೊಂಡು ದನಕರುಗಳಿಗೆ ಬ್ರೇಕ್ ಫಾಸ್ಟ್ .ಹಾಲು ಕರೆಯುವುದು ಮನೆಯ ಹೆಂಗಸರು ಮಾಡುತ್ತಿದ್ದರೂ ಕೆಲವೊಮ್ಮೆ ತಂದೆಯೇ ಆ ಕೆಲಸ ಮಾಡುವರು .  ಇಷ್ಟೆಲ್ಲಾ ಆದ ಮೇಲೆಯೇ ಬೆಳಗಿನ ಕಾಪಿ ಉಪಾಹಾರ .

                ಆಮೇಲೆ ರಾಸುಗಳನ್ನು ಮೇಯಲು ಬಿಡುವರು .ಹಸು ಕರುಗಳು ಶಾಲೆ ಬಿಟ್ಟ ಮಕ್ಕಳಂತೆ ಸಂತೋಷದಿಂದ ಗುಡ್ಡಕ್ಕೆ ಗುಂಪಾಗಿ ಮೇಯಲು ತೆರಳುವುದು ನೋಡಲು ಚಂದ.

ಅಪ್ಪನ  ಉಡುಗೆ ಸೊಂಟಕ್ಕೆ ಒಂದು ಬೈರಾಸು ,ತಲೆಗೆ ಒಂದು ಬೈರಾಸಿನ ಮುಂಡಾಸು .ಇದರಲ್ಲಿ ತೋಟಕ್ಕೆ ಹೋಗುವರು .ಅಡಿಕೆ ಹೆಕ್ಕುವುದು ,ಕೆಲಸದವರಿಗೆ ಮಾರ್ಗ ಸೂಚಿ ಕೊಡುವುದು ,ಮತ್ತು ರಾಸುಗಳಿಗೆ ಹಸಿ ಹುಲ್ಲು ಸಂಗ್ರಹಣೆ ಮಾಡುವುದು  ಮುಂಜಾನೆಯ ದಿನಚರಿ .ಮಧ್ಯಾಹ್ನ ಸ್ನಾನ ಮಾಡಿ ಪೂಜೆ .ನಂತರ ಊಟ . ಸಣ್ಣ ನಿದ್ದೆ ತೆಗೆದು ಪುನಃ ತೋಟಕ್ಕೆ .ಸಂಜೆಯಾಗುತ್ತಲೇ ದನಕರುಗಳು ಗೇಟ್ ನ ಬಳಿ ಅಂಬಾ ಎಂದು ಕರೆಯುವವು .ಅವುಗಳನ್ನು ಹಟ್ಟಿಗೆ ಸೇರಿಸಿ ,ಹಾಲು ಕರೆಯುವುದಿದ್ದರೆ ಅದನ್ನು ತೀರಿಸಿ ಮುಸ್ಸಂಜೆ ಮನೆಗೆ ಬರುವರು .ಕೆಲಸದವರ ದಿನ ಲೆಕ್ಕ ,ಸೊಪ್ಪು ಹುಲ್ಲು ತಂದು ಹಾಕುವವರ ಲೆಕ್ಕ ತಂದೆ ಇಡುತ್ತಿದ್ದರು .ಹಣದ ಬಟವಾಡೆ ಚಿಕ್ಕಪ್ಪ ಮಾಡುವರು .(ಇದು ಆಸ್ತಿ ಪಾಲು ಆಗುವವರೆಗೆ ).,ಆಮೇಲೆ ನವಭಾರತ (ನಂತರ ಉದಯವಾಣಿ )ಪತ್ರಿಕೆ ಅಡಿಕೆ ಧಾರಣೆ ನೋಡುವರು .ರಾತ್ರಿ ಸ್ನಾನಕ್ಕೆ ಮೊದಲು ಹಟ್ಟಿಗೆ ಭೇಟಿ .ಸ್ನಾನ ,ಊಟ ,ರಾತ್ರಿ ರೇಡಿಯೋ ದಲ್ಲಿ ತಾಳ  ಮದ್ದಳೆ ಇದ್ದರೆ  ತಪ್ಪದೆ ಕೇಳುವರು . 

ಮನೆ ಸಮೀಪ ಯಕ್ಷಗಾನ ಇದ್ದರೆ ನಮ್ಮನ್ನು ಕರೆದು ಕೊಂಡು ಹೋಗುವರು ,ಅದೇ ರೀತಿ ಊರ ಜಾತ್ರೆಗೆ ಮತ್ತು ಭೂತ ಕೋಲಕ್ಕೆ 

ಅಪ್ಪನಿಗೆ ಸಿಟ್ಟು ಬರುತ್ತಿದ್ದುದೇ ಅಪರೂಪ .ನಮಗೆ ಹೊಡೆದುದೇ ಇಲ್ಲ .ಅಮ್ಮ ಪೆಟ್ಟು ಕೊಡಲು ಬಂದಾಗ  ನಾವು ಮಕ್ಕಳು ಅವರ ಆಶ್ರಯ ಅರಸಿ ಹೋಗುತ್ತಿದ್ದೆವು ..ಅಲ್ಲದೆ ಅವರು ನಿಜ ಸ್ಥಿತ ಪ್ರಜ್ಞರಾಗಿದ್ದರು .ಯಾವುದೇ ಸಂದರ್ಭದಲ್ಲಿ ಅತಿ ಸಂತೋಷ ,ದುಃಖ ,ಕೋಪ ಕಂಡುದಿಲ್ಲ .ನಮ್ಮ ದೊಡ್ಡಪ್ಪ ತೀರಿ  ಕೊಂಡಾಗ ಅವರಿಗೆ ಬೇಸರ ಆಗಿತ್ತು ಆದರೆ ಮುಖದಲ್ಲಿ ಅದರ ಗೋಚರ ಇರಲಿಲ್ಲ .ನಮ್ಮ ಶಾಲಾ ಸಾಧನೆ ಗಳ ವಿಚಾರದಲ್ಲಿ ಕೂಡಾ .ನಾವು ಪ್ರೋಗ್ರೆಸ್ ರಿಪೋರ್ಟ್ ಸಹಿ ಹಾಕಲು ಕೊಟ್ಟಾಗ ಯಾಕೆ ಕಡಿಮೆ ಅಂಕ ಎಂದು ಕೇಳಿದ್ದಿಲ್ಲ . 

ನಮ್ಮ ಕೂಡು  ಕುಟುಂಬ ಇರುವ ವರೆಗೆ ಎಲ್ಲಾ ಮೇಲ್ನೋಟಕ್ಕೆ ಸರಿಯಾಗಿ ನಡೆಯುತ್ತಿತ್ತು .ಆಸ್ತಿ ಪಾಲು ಆದ ಸಮಯ ಅಡಿಕೆ ದರ  ಪಾತಾಳಕ್ಕೆ ಬಂದಿತ್ತ್ತು .ನಾವು ಹತ್ತು ಮಕ್ಕಳು ,ಎಲ್ಲಾ ವಿದ್ಯಾಭ್ಯಾಸದ ಬೇರೆ ಹಂತದಲ್ಲಿ ಇದ್ದೆವು .ಹಣದ ತಾಪತ್ರಯ ವಿಪರೀತ .ಬ್ಯಾಂಕ್ ನಲ್ಲಿ ಸಾಲ  ಕೂಡಾ ಸರಿಯಾಗಿ ಸಿಗುತ್ತಿರಲಿಲ್ಲ .ನನ್ನ ಎಮ್ ಬಿ ಬಿ ಎಸ ಸೇರ್ಪಡೆ ಫೀಸ್ ಗಾಗಿ ತಾಯಿಯವರ ಚೈನ್ ಬ್ಯಾಂಕ್ ನಲ್ಲಿ ಅಡವು  ಇಟ್ಟು ಹಣ ಸಾಲ ಮಾಡ ಬೇಕಾಯಿತು .ಅಡಿಕೆಗೆ ಬೆಲೆಯಿಲ್ಲ ಎಂದು ಕೊಕ್ಕೋ ನೆಟ್ಟರು .ಅದರ ಫಸಲು ಬರುವಾಗ ಅದಕ್ಕೂ ಬೇಡಿಕೆ ಇಲ್ಲದಾಯಿತು .ಈ ಕಾಲದಲ್ಲಿಯೇ ವಾರಾಣಸಿ ಸುಬ್ರಾಯ ಭಟ್ಟರು ಕ್ಯಾಮ್ಕೋ ಸ್ಥಾಪಿಸಿದ್ದು . 

 ಪೇಟೆಗೆ ಹೋದಾಗ ಲಾಟರಿ ಟಿಕೆಟ್ ಕೊಳ್ಳುವುದು ,ಪತ್ರಿಕೆಯಲ್ಲಿ ಅದರ ಫಲಿತಾಂಶ ನೋಡುವುದು ಹವ್ಯಾಸ .ಬೈರಿಕಟ್ಟೆ ರಾಯರ ಹೋಟೆಲ್ ನ ಬನ್ಸ್ ಟೀ ಅವರಿಗೆ ಇಷ್ಟ . ಮಂಗಳೂರು ಪೇಟೆಯ ಹೊಟೇಲ್ ನಲ್ಲಿ  ತಿಂಡಿಯೊಡನೆ ತನಗೆ ಎರಡು ಗ್ಲಾಸ್ ಚಹಾ ಬೇಕು ಎಂದು ಆರ್ಡರ್ ಮಾಡುವರು .ಅವರ್ ಕಪ್ ಗಂಟಳೊಳಗೆ ಇಳಿಯುವಷ್ಟರಲ್ಲಿ ಮುಗಿಯುವುದು ಎಂದು .ಅಡಿಕೆಗೆ ದರ ಕಮ್ಮಿ ಇದ್ದಾಗ ಅದು ಮೇಲೆ ಬಂದರೆ ಕಟೀಲು ಮೇಳದ  ಹರಕೆ ಆಟ ಆಡಿಸುತ್ತೇನೆ ಎಂದು ಮನದಲ್ಲೇ ಹೇಳಿ ಕೊಂಡಿದ್ದರು .ಅವರಿಗೆ ತುಂಬಾ ವಯಸ್ಸು ಆದಾಗ ಅದನ್ನು ನನ್ನ ತಮ್ಮನಲ್ಲಿ ಹೇಳಿದ್ದರು .ಅಡಿಕೆ ಧಾರಣೆ ಏರಿದರೆ ಸಮಸ್ತ ಬೆಳೆಗಾರರಿಗೂ ಲಾಭ ಆದ ಹಾಗೆ ,ನಮಗೆ ಮಾತ್ರ ವರವಾಗುವ ಹರಿಕೆ ಹಾಕಬಹುದಿತ್ತು ಎಂದು ಆತ ತಮಾಷೆಗೆ ಹೇಳಿದರೂ ಅಪ್ಪನ ಮೇಲೆ ಬಹಳ ಪ್ರೀತಿ ಮತ್ತು ಗೌರವ ಹೊಂದಿದ್ದ ಅವನು ಅಣ್ಣ ಸೇರಿ ಹರಕೆ ಆಟ ಆಡಿಸಿದರು . 

      ನಾವು ಬೇರೆ ಬೇರೆ ಉದ್ಯೋಗದಲ್ಲಿ ಇದ್ದುದರಿಂದ ವೃದ್ದಾಪ್ಯದಲ್ಲಿ ಅಪ್ಪನಿಗೆ ನೋಡಿ ಕೊಳ್ಳಲು ಆಗುವುದಿಲ್ಲ ಎಂದು ಅಸ್ತಿ ಮಾರಾಟ ಮಾಡಿ ,ಅವರು ಮಕ್ಕಳ ಮನೆಯಲ್ಲಿ ಇರುವ ವ್ಯವಸ್ಥೆ ಮಾಡಿದೆವು .ಅದಾದ ಕೆಲ ತಿಂಗಳಲ್ಲಿ ನಮ್ಮ ಅಕ್ಕನ ಮನೆಯಲ್ಲಿ ಇದ್ದಾಗ ಮೆದುಳಿನ ರಕ್ತ ಸ್ರಾವದಿಂದ ತೀರಿ ಕೊಂಡರು .ನಾನು ಆಗ ಮದ್ರಾಸಿಗೆ ಬಂದ  ತರುಣ . 

ಹತ್ತು ಮಕ್ಕಳನ್ನು ಎಲ್ಲಾ ಕಷ್ಟಗಳನ್ನು ಎದುರಿಸಿ ಒಂದು ನೆಲೆಗೆ ತಂದು ನಿಲ್ಲಿಸಿ ,ಅದರಲ್ಲಿ ತನ್ನ ಪಾಲು ಏನೂ ಇಲ್ಲ ಎಂದು ನಿಲಿಪ್ತರಾಗಿ ಬಾಳಿ ತೆರಳಿದ ನಮ್ಮ ಅಪ್ಪ ನಿಗೆ ನಾವು ಎಷ್ಟು ಋಣಿ ಗಳು ಎಂದು ಹೇಳಲಾಗದು

ಗುರುವಾರ, ನವೆಂಬರ್ 5, 2020

ಅಂಗ್ರಿ ನೆನಪುಗಳು , 2 ನಮ್ಮ ಅಜ್ಜ

ನಮ್ಮ  ಅಜ್ಜ  ಅಂಗ್ರಿ ಮಹಾಬಲ ಭಟ್ಟರು .ವರ್ಣ ರಂಜಿತ ವ್ಯಕ್ತಿತ್ವ .ನಮಗೆ  ಅರಿವು ಬರುವ ವೇಳೆ ಮನೆಯ ಉಸ್ತುವಾರಿ  ಚಿಕ್ಕಪ್ಪನಿಗೆ ಬಿಟ್ಟು ಕೊಟ್ಟು ವಿಶ್ರಾಂತ ಜೀವನ ನಡೆಸುತ್ತಿದ್ದರು .ಹೆಚ್ಚು ಓದಿದವರಲ್ಲದಿದ್ದರೂ ಜ್ನಾನಿಗಳು,ಮಹಾಭಾರತ ಕಾವ್ಯವನ್ನು ಓದಿ ಅರ್ಥ ಹೇಳುವಷ್ಟು .(ನಮಗೇ ಅದು ಕಬ್ಬಿಣದ ಕಡಲೆ ಅನಿಸುತ್ತಿತ್ತು.   

     


                                                             

        ದೊಡ್ಡಪ್ಪ ,ಅಜ್ಜ ಅಜ್ಜಿ.  

ಹಜಾರದ ಒಂದು ಮೂಲೆ ಅಜ್ಜನ ಆಫೀಸ್ ಮತ್ತು ಬೆಡ್ ರೂಮ್ .ಅಜ್ಜನ ಬಳಿ ಒಂದು ಗೋದ್ರೇಜ್ ಕಪಾಟು ,ಅದರೊಳಗೆ ಕೆಲವು ಟಾನಿಕ್ ಬಾಟಲಿಗಳು ಮತ್ತು ಕೆಲವು ಕಾಗದ ಪತ್ರ .ಕಾಗದ ,ಪತ್ರಿಕೆಗಳಿಗೆ ಅಜ್ಜನ ಭಾಷೆಯಲ್ಲಿ ಗಜೆಟ್ ಎನ್ನುವರು .ಅಜ್ಜನ ಕೈಯಲ್ಲಿ ಒಂದು ಚಂದದ ಊರುಗೋಲು .ತೋಟಕ್ಕೆ ಹೋಗುವಾಗ ಹಾಕಲೆಂದು ಖಾಕಿ ಪ್ಯಾಂಟ್ ಮತ್ತು ಶೂ ಕೂಡ ಇದ್ದವು . 

ಮನೆಯಲ್ಲಿ ಯಾವಾಗಲೂ ಒಂದು ಹಸುಗೂಸು  ಇದ್ದೇ  ಇರುತ್ತಿದ್ದ ಕಾಲ .ಅಜ್ಜ ಮನಸು ಬಂದರೆ ಮಗುವಿನ ಬಳಿ ಕುಳಿತು ತಾ ತಾ ಗುಬ್ಬಿ ತಾವನ ಗುಬ್ಬಿ ಎಂದು ಹಾಡುವರು . ಯಾವಾಗಲೂ ಬಾಯಲ್ಲಿ ಹರಿ ನಾರಾಯಣ ಹರಿ ನಾರಾಯಣ ಎಂದು ಜಪಿಸುತ್ತಿದ್ದರು .ಓರ್ವ ನಾಸ್ತಿಕ ಕೃಪಣನ  ಬಾಯಲ್ಲಿ ಹರಿಯ ಹೆಸರು ಬರಲು ಮಕ್ಕಳು ರೂಪಾಯಿ ನೋಟನ್ನು ಹರಿಯ ತೊಡಗಿದರು ,ಅದನ್ನು ಕಂಡ ಈತ ಹರಿಯ ಬೇಡ ಹರಿಯ ಬೇಡ ಎಂದಾಗ ಅವನ ಬಾಯಲ್ಲಿ ಹರಿ ಎಂಬ ಶಬ್ದ ಬಂದು ಪಾಪ ಎಲ್ಲಾ ಪರಿಹಾರ ಅದ ಕತೆ ನಮಗೆ ಹೇಳುತ್ತಿದ್ದರು . 

ಮಧ್ಯಾಹ್ನ ಊಟ ಅದ ಮೇಲೆ ನಿದ್ದೆ ಮಾಡುವರು .ಆ ವೇಳೆ ನಾವು ಮಕ್ಕಳು ಗಲಾಟೆ ಮಾಡಿ ಎಚ್ಚರ ಆದರೆ ಕೋಪ ಗೊಂಡು ಬೈಯ್ಯುವರು ,ತನ್ನ ಎದೆ ಮೇಲೆ ಹೊಡೆದ ಹಾಗೆ ಆಯಿತು ಎನ್ನುತ್ತಿದ್ದರು .ಈಗ ನಮಗೆ ವಯಸ್ಸು ಆದಾಗ ಅದರ ಅರ್ಥ ಆಗುತ್ತದೆ . ಅವರು  ಕೋಪ ಬಂದಾಗ ಉಪಯೋಗಿಸುತ್ತಿದ್ದ  ಒಂದು ಶಬ್ದ  "ಕಂತಾ ಮೂಟೆ" ಕೆಳಗೆ ಮೇಲೆ ಎಂಬ ಅರ್ಥ ಇರ ಬಹುದು .ಅಲ್ಲೋಲ ಕಲ್ಲೋಲ ಇರ ಬಹುದು . 

   ಆದರೂ ಅಜ್ಜ ನನಗೆ ತುಂಬಾ ಇಷ್ಟ .ಯಾಕೆಂದರೆ ಅವರು  ಪುರಾಣದ ಕತೆಗಳನ್ನು  ಪುಂಖಾನುಪುಂಖ ವಾಗಿ ವರ್ಣ ರಂಜಿತವಾಗಿ ಹೇಳುತ್ತಿದ್ದರು .ಅವುಗಳನ್ನು ಸಮಕಾಲೀನ  ವಿದ್ಯಮಾನಗಳಿಗೆ ತಳಕು ಹಾಕುತ್ತಿದ್ದರು .ಬಚ್ಚಲು ಮನೆಯಲ್ಲಿ ಒಲೆಗೆ ಬೆಂಕಿ ಹಾಕಿ  ಮೈಗೆ ಎಣ್ಣೆ ಹಚ್ಚಿ ಕುಳಿತಿರುವಾಗ  ಅವರ ಕತೆಗಳು ಮೂಡ್ ಹೊಂದಿಕೊಂಡು  ಹೊರ ಬರುತ್ತಿದ್ದವು .ನಡುವೆ ನಾವು ಬಾಯಿ ಹಾಕ ಬಾರದು .ಭಗವದ್ಗೀತೆಯಲ್ಲಿ  ಶ್ರೀ ಕೃಷ್ಣ  "ನೀನು ಎಂಬುದು ನಿಮಿತ್ತ ,ಎಲ್ಲವೂ ನನ್ನ ಇಚ್ಛೆಯಂತೆ ನಡೆಯುವುದು "ಎಂಬ ವಾಕ್ಯ ಆಗಾಗ ಹೇಳುವರು . 


ಅಜ್ಜನಿಗೆ ಮೂವರು ಗಂಡು ಮಕ್ಕಳು .ಹಿರಿಯವರು ಕನ್ನಡ ಸಿನೆಮಾ ನಟರಾಗಿದ್ದ  ಗಣಪತಿ ಭಟ್ ,ನಂತರ ನನ್ನ ತಂದೆ ಮತ್ತು ಚಿಕ್ಕಪ್ಪ ಶಂಕರ ನಾರಾಯಣ ಭಟ್ . 

ಅಜ್ಜನ ಸುಪರ್ದಿಯಲ್ಲಿ  ಒಂದು ಜರ್ಮನ್ ಗೋಡೆ ಗಡಿಯಾರ ,ಅದಕ್ಕೆ ಕೀ ಕೊಡುವುದು ಮತ್ತು  ಆಗಾಗ ಅದರ ಸರ್ವೀಸ್ ಮಾಡುವುದು ಅವರ ಪ್ರಿಯ ಕಾರ್ಯ .ಮಂಗಳೂರು ನಿವಾಸರ ಅಂಗಡಿಯಿಂದ ತಂದುದು ಎಂದು ಹೇಳುತ್ತಿದ್ದರು .

ನಮ್ಮ ತಂದೆಯವರು ಯಾವಾಗಲೂ ಕೃಷಿ ಮತ್ತು ಪಶು ಸಂಗೋಪನೆಯಲ್ಲಿ ಬ್ಯುಸಿ ಯಾಗಿ ಇರುತ್ತಿದ್ದರಿಂದ  ಶಾಲೆಯ ಪ್ರೋಗ್ರೆಸ್ ರಿಪೋರ್ಟ್ ಗೆ ಅಜ್ಜನ ಸಹಿ ಹಾಕಿಸಿ ಕೊಳ್ಳುತ್ತಿದ್ದೆವು .ಅಜ್ಜನ ಜೊತೆ ವಿಟ್ಲ ಜಾತ್ರೆಗೆ ಹೋಗುತ್ತಿದ್ದ ನೆನೆಪು ಸವಿಯಾಗಿದೆ .ಸಂಜೆ ಹೊತ್ತು ವಿಟ್ಲ ತಲುಪಿ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಬಂದು ಅವರು ಕೇಕುಣ್ಣಾಯರ ಹೋಟೆಲ್ನಲ್ಲಿ ಒಂದು ಬೆಂಚ್ ನಲ್ಲಿ ವಿಶ್ರಮಿಸುವರು .ಹೋಟೆಲ್ ಧನಿಗೆ ಈ ಮಕ್ಕಳು ಬಂದಾಗ ಕೇಳಿದ ತಿಂಡಿ ಕೊಡಿ ಎಂದು ಸ್ಟ್ಯಾಂಡಿಂಗ್ ಇನ್ಸ್ತ್ರಕ್ಷನ್ .ನಾವು ಜಾತ್ರೆ ಗದ್ದೆಗೆ ಒಮ್ಮೆ ಹೋಟೆಲ್ ಗೆ ಒಮ್ಮೆ ,ಬೆಳಗಾಗುವ ವರೆಗೂ .ಮಕ್ಕಳೇ ನೀವು ಚಿಕ್ಕವರಾಗಿದ್ದಾಗ ಬಂಧುಗಳು ನಿಮ್ಮ ಕೈಯ್ಯಲ್ಲಿ ಇಟ್ಟ  ಹಣ ನಾವು ತೆಗೆದು ಕೊಂಡಿದ್ದೆವು .ಅದನ್ನೇ ನಿಮಗೆ ಈಗ ಮರಳಿಸುವುದು ,ಎಂದು ಹೇಳುವರು . 

  ನಮ್ಮ ಅಜ್ಜಿ ಯವರ ತಾಯಿ ಮನೆ  ಕುಂಬ್ಳೆ ಸೀಮೆಯ ಚೆಕ್ಕೆಮನೆ .ಅಜ್ಜನವರು ತರುಣದಲ್ಲಿ  ಪೆಲತಡ್ಕ ರಾಮ ಭಟ್ಟರ ಸಾಲ ತೀರಿಸಲಾಗದೆ ಆಸ್ತಿ ಏಲಂ ಆಗಿ ಮಕ್ಕಳು ಮರಿಗಳ ಕೂಡಿ  ಅಜ್ಜಿಯ ತವರು ಮನೆಯಲ್ಲಿ ವನವಾಸ ಇದ್ದ ಕತೆ ಅಜ್ಜ ಮತ್ತು ಅಪ್ಪ ಆಗಾಗ ಹೇಳುತ್ತಿದ್ದರು. ಈ ಘಟನೆಗಳನ್ನು ಪಾಂಡವರ ಅಜ್ಞಾತವಾಸದಂತೆ  ರಸವತ್ತಾಗಿ ವಿವರಿಸುತ್ತಿದ್ದರು .ಬಂಧುಗಳು ಕಷ್ಟದಲ್ಲಿ ಇರುವಾಗ ,ಅಥವಾ ನಮ್ಮ ಸಹಾಯ ಅವಶ್ಯ ಬಿದ್ದಾಗ ಹಿಂದೆ ಮುಂದೆ ನೋಡದೆ ಒಬ್ಬರಿಗೊಬ್ಬರು ಆಗುತ್ತಿದ್ದ ಕಾಲ .ಅದೆಲ್ಲಾ ಸುಖಮಯ ವಾಗಿ ಇರಬೇಕು ಎಂದು ಇಲ್ಲ .ಆಮೇಲೆ  ನಮ್ಮ ದೊಡಪ್ಪನವರ ಮೈನರ್ ಹಕ್ಕಿನ ಆಸರೆಯಿಂದ ಆಸ್ತಿ ಪುನಃ ಸಿಕ್ಕಿತು . ..ಕೋರ್ಟ್  ಕೇಸುಗಳಿಗೆ ಆಗಾಗ ಎಡತಾಕುತ್ತಿದ್ದರಿಂದ  ಕೈಪೇತು (caveat ),ಹೆರಿಂಗ್ (ಹಿಯರಿಂಗ್ ),ಪೈಂಟ್ (ಪಾಯಿಂಟ್ )ಇತ್ಯಾದಿ  ಶಬ್ದಗಳು ಆಗಾಗ್ಗೆ ಬರುತ್ತಿದ್ದವು .ಮಂಗಳೂರಿನ ಸೋಮ ಶೇಖರ ರಾವ್ ,ಪುತ್ತೂರಿನ ಸದಾಶಿವ ರಾವ್ ಮತ್ತು ಹೈ ಕೋರ್ಟ್ ನಲ್ಲಿ  ಕೆ ಆರ್  ಕಾರಂತ ಅಜ್ಜನ ವಕೀಲರು .ಅವರ ನಾಮಸ್ಮರಣೆ ಮೇಲಿಂದ ಮೇಲೆ ಆಗುತ್ತಿತ್ತು .ಅಜ್ಜನ ಬಾಯಿಯಿಂದ  ಕೋರ್ಟ್ ನಲ್ಲಿಯ ವಾದ ವಿವಾದಗಳನ್ನು  ತೆರೆದ ಬಾಯಿಯಿಂದ ನಾವು ಕೇಳುತ್ತಿದ್ದೆವು . 

ಅಜ್ಜನಿಗೆ ಹೇಳಿಕೊಳ್ಳುವ ಅನಾರೋಗ್ಯ ಏನೂ ಇರಲಿಲ್ಲ .ಆದರೂ ಯಾವುದಾದರೂ ಕಾಯಿಲೆಯನ್ನು ಆರೋಪಿಸಿ ಕೊಂಡು  ಮಂಗಳೂರಿನಲ್ಲಿ ಡಾ ವೆಂಕಟ ರಾವ್ ,ಡಾ ಚಾರಿ ಮುಂತಾದ ಪ್ರಸಿದ್ಧ ವೈದ್ಯರನ್ನು ಕಂಡು ಅವರು ಪರೀಕ್ಷಿದ ಪರಿಯನ್ನು ,ಅಲ್ಲಿ ಕುಟ್ಟಿದರು ಇಲ್ಲಿ ಕುಟ್ಟಿದರು ಎಂದು ಸವಿವರವಾಗಿ ಹೇಳುವರು ಮತ್ತು ಚಾರಿಯವರ ಕಷ್ಟ ಪಟ್ಟು ಕನ್ನಡ ಮಾತನಾಡುತ್ತಿದ್ದುದನ್ನು ವಿವರಿಸುವರು .ಪುತ್ತೂರಿನಲ್ಲಿ ಅವರ ವೈದ್ಯರು ಸುಂದರ ರಾಯರು .ಈ ಡಾಕ್ಟರುಗಳು ಕೊಟ್ಟ  ಟಾನಿಕ್ ಗಳನ್ನು ಬಹಳ ಶ್ರದ್ದೆಯಿಂದ  ಭಕ್ತಿಯಿಂದ ಕುಡಿಯುವರು . 

 ಅಜ್ಜನ ಜತೆ ಜಾತ್ರೆ ,ನೆಂಟರ ಮನೆಗೆ ಹೋಗುವುದು ಬಹಳ ಖುಷಿ .ಆದರೆ ಬಸ್ ಹಿಡಿಯಲು  ಗುಡ್ಡ ಹತ್ತಿ ಒಂದೂವರೆ ಕಿಲೋಮೀಟರು ದೂರದ ಬೈರಿಕಟ್ಟೆಗೆ ಹೋಗ ಬೇಕು .ಆಗ ನಮ್ಮನ್ನು ಮುಂದೆ ಓದಿ ಹೋಗಿ ಬಸ್ ಬಂದಾಗ ಹಿಂದೆ ಅಜ್ಜ ಬರುತ್ತಿದ್ದಾರೆ ,ಸ್ವಲ್ಪ ನಿಲ್ಲಿಸಿ ಎಂದು ಡ್ರೈವರ್ ನಲ್ಲಿ ಬೇಡಿಕೊಳ್ಳಲು ಹೇಳುವರು .ಕೆಲವೊಮ್ಮೆ ಅವರು ಒಪ್ಪಿ ಸ್ವಲ್ಪ ಕಾಯುವರು . 

ಪುತ್ತೂರು ಪೇಟೆಯಲ್ಲಿ ವಕೀಲಸದಾಶಿವ ರಾವ್ ಮನೆಗೆ ತಿರುಗುವಲ್ಲಿ ಕುಂಬ್ಳೆಕಾರ್ ಅವರ ಬಟ್ಟೆ ಅಂಗಡಿ .ಅಜ್ಜನನ್ನು ಕಂಡ ಒಡನೆ 'ನಮಸ್ಕಾರ ಮಹಾಬಲ ಭಟ್ಟರೇ ಹೊಸಾ ಕೋಮಣ (ಲಂಗೋಟಿ )ಬಟ್ಟೆ ಬಂದಿದೆ ಬನ್ನಿ "ಎಂದು ಕರೆಯುತ್ತಿದ್ದುದುದು ಮಾಮೂಲಿ .ಹಾಗೆಯೇ ವಿಟ್ಲದ ನಾಯ್ಕರ ಅಂಗಡಿ ,ಮಂಗಳೂರಿನ ಬಂಡಸಾಲೆ ಯ ಧಣಿಗಳು ಅಜ್ಜನ ಮಿತ್ರರು .

 ಅಜ್ಜಿ ಪರಮೇಶ್ವರಿ  ಮಿತ ಭಾಷಿ, ಸ್ಥಿತಪ್ರಜ್ನೆ.ಅವರ ಆರೋಗ್ಯ ಸರಿ ಇರುವ ವರೆಗೆ ಮೊಸರು ಕಡೆಯುವುದು ,ಮಾಂಬಳ ಎರೆವುದು ಇತ್ಯಾದಿ ಮಾಡುತ್ತಿದ್ದರು.  ಅಡಿಗೆ ಇತ್ಯಾದಿಗಳಲ್ಲಿ ಅಮ್ಮ ಚಿಕ್ಕಮ್ಮ ಅವರ ಸಲಹೆ ಸೂಚನೆ ಪಡೆಯುತ್ತಿದ್ದರು .ಅದು ಒಂದು ಪ್ರೋಟೋಕಾಲ್ ಮಾತ್ರ . ಅಜ್ಜಿಯ ಸೌಮ್ಯ ಗುಣ ನನ್ನ ತಂದೆಯವರಿಗೆ  ಬಂದುದು . ಬೆನ್ನಿನ  ಡಿಸ್ಕ್ ತೊಂದರೆಯಯಿಂದ  ಹಲವು ವರ್ಷ ಹಾಸಿಗೆ ಹಿಡಿದರು . ನಾನು ದಿನಾಲೂ ಅಜ್ಜ ಅಜ್ಜಿಯರ  ಪಾದಕ್ಕೆ ನಮಸ್ಕರಿಸುವ ಪದ್ದತಿ  ರೂಡೀಕರಿಸಿದ್ದು ಎಲ್ಲರಿಗೂ ಒಂದು ತಮಾಷೆ  ಕಾಣುತ್ತಿತ್ತು . ಅಜ್ಜಿವರಿಗೆ ಆಸೌಖ್ಯ ಆದ ಮೇಲೆ ಚಾವಡಿಯ ಮೂಲೆಯಲ್ಲಿ ಒಂದು  ಪರದೆ ಕಟ್ಟಿ ಅದರ ಒಳಗೆ ಚಾಪೆಯಲ್ಲಿ ಮಲಗುತ್ತಿದ್ದರು . ನಾನೂ ಹಲ ವರ್ಷ ಪಕ್ಕದಲ್ಲಿ ರಾತ್ರಿ ಅವರೊಡನೆ ಮಾತನಾಡಿಕೊಂಡು  ಮಲಗುತ್ತಿದ್ದೆ . ಅವರು ಕಾಲಕ್ಕಿಂತ  ತುಂಬಾ ಮುಂದುವುರಿದ ಒಬ್ಬರು  ಫಿಲೋಸಫರ್  ನಂತೆ  ನನಗೆ ಕಾಣುತ್ತಿದ್ದು , ನಾನು ಕಂಡ ಸ್ತ್ರೀ ರೂಪಗಳಲ್ಲಿ  ಅತ್ಯಂತ ಪಕ್ವ ಮನಸಿನ ಮೂರ್ತಿ ಆಗಿದ್ದರು .

 

                                 
 

ಮಂಗಳವಾರ, ನವೆಂಬರ್ 3, 2020

ಅಂಗ್ರಿ ನೆನಪುಗಳು 1

 ನನ್ನ ಬ್ಲಾಗ್ ನ ಹೆಸರು ಅಂಗ್ರಿ .ಅಂಗ್ರಿ ನಾನು ಹುಟ್ಟಿ ದ  ಊರು .ಹುಟ್ಟೂರ ಗುಣ ,ಋಣ ಮತ್ತು  ವ್ಯಾಮೋಹ  ಘಟ್ಟ ಹತ್ತಿದರೂ ಬಿಡದು .ದಕ್ಷಿಣ ಕನ್ನಡ ಜಿಲ್ಲೆ ಬಂಟವಾಳ ತಾಲೂಕಿನ  ಕನ್ಯಾನ ಗ್ರಾಮ .ಗ್ರಾಮದ ಗಡಿಗೆ ತಾಗಿ  ಪಕ್ಕದ ಅಳಿಕೆ ಗ್ರಾಮಕ್ಕೆ ತಾಗಿ ಇರುವ  ಬಯಲು .ಪಶ್ಚಿಮ ದಲ್ಲಿ ದೇಲಂತಬೆಟ್ಟು  ,ಇಲ್ಲಿ ಊರ ದೇವಸ್ಥಾನ ಇದೆ. ಬಯಲು ಪ್ರದೇಶ ಪೂರ್ವಕ್ಕೆ ಹೋದಂತೆ ಗುಡ್ಡಗಳ ನಡುವಿನ ಕಣಿವೆ ರೂಪದಲ್ಲಿ ಇದೆ . ಅರ್ಧ ಮೈಲು ಪೂರ್ವಕ್ಕೆ ಅಳಿಕೆ.ಇಲ್ಲಿ ಯ ವಿದ್ಯಾ ಸಂಸ್ಥೆಗಳು ಪ್ರಸಿದ್ಧ.ದಕ್ಷಿಣಕ್ಕೆ ಒಂದು ಗುಡ್ಡದ ಶ್ರೇಣಿ ,ಅದು ದಾಟಿದರೆ ಕೇಕ ನಾಜೆ. ನೈರುತ್ಯ ದಲ್ಲಿ ಮುಳಿಯ ,ಪೆರುವಾಯಿ.ಉತ್ತರಕ್ಕೆ ಅಂಗ್ರೀ ಬಯಲು ದಾಟಿದರೆ ಮುಡ್ಕುಂಜ , ಕಿರಿಂಚಿಮೂಲೆ.ವಿಟ್ಲ ಕನ್ಯಾನ ಮಾರ್ಗಕ್ಕೆ ಇಲ್ಲಿಗೆ ಬರಬೇಕು.ಮುಂದೆ ಕಳಂಜಿ ಮೇಲೆ ಪರ್ವತ ಶ್ರೇಣಿ ಮತ್ತು ರಕ್ಷಿತಾರಣ್ಯ. ಕಿರಿಂಚಿ ಮೂಲೆಯಿಂದ ಅರ್ಧ ಮೈಲು ಪಶ್ಚಿಮಕ್ಕೆ ಸಾಗಿದರೆ ಕನ್ಯಾನ ಪೇಟೆ.

                             ನಮ್ಮ ಮನೆಯ ಮುಂದೆ ಹೊಲ ,ಮುಂದೆ ಇಲ್ಲಿ ಅಡಿಕೆ ತೋಟ ಆಯಿತು ,ಅದನ್ನು ದಾಟಿದರೆ ಒಂದು ಮಳೆ ನೀರ ಝರಿ ,ಮುಂದಕ್ಕೆ  ಎಡದ ಬದಿ ಗದ್ದೆ ,ಇದನ್ನು ಆಚ ಕರೆ ಎಂದು ಕರೆಯುತ್ತಿದ್ದರು .ಬಲದ ಬದಿಯಿಂದ ಎತ್ತರ ದ  ಗುಡ್ಡ .ಮನೆಯ ಹಿಂದೆ  ಚಿಕ್ಕ ಗುಡ್ಡ ಬಲಕ್ಕೆ ಅದರ ಸೆರಗು ..ಮನೆಯ ಮುಂದಿನ ಬಯಲಿಗೆ ಬಲದ  ಬದಿಯಲ್ಲಿ  ಬಳ್ಳಿ ಗದ್ದೆ ,ಮಜ್ಜಜೆ ಎಂಬ ಹೆಸರೂ ಎಡದ ಬದಿ ನಡುವಿನ ತೋಟಕ್ಕೆ  ಮದ್ಲಾ ಡಿ  (ಮಧ್ಯದ ಹಾಡಿ ),ಅದಕ್ಕೆ ತಾಗಿ ದಕ್ಷಿಣಕ್ಕೆ ಪಾರೆ (ಕಲ್ಲು ಬಂಡೆ )ತೋಟ .ನೈರುತ್ಯದ  ವಿಶಾಲ ಗದ್ದೆ ಪ್ರದೇಶ ಕ್ಕೆ ನೆರಳಕೋಡಿ ಎಂಬ ಹೆಸರಿತ್ತು .ಕೆಲವು ಹೆಸರುಗಳು ಮರೆತು ಹೋಗಿವೆ . 

ಮೇಲೆ ಉಪಯೋಗಿಸಿದ ಆಚಕರೆ ನಮ್ಮಲ್ಲಿ  ಸಾಮಾನ್ಯ ಬಳಕೆಯಲ್ಲಿ ಇರುವ ಪದ .  ಆಚಕರೆ ಮಾವ ,ಆಚಕರೆ ಚಿಕ್ಕಪ್ಪ ಇತ್ಯಾದಿ ಅಕ್ಕ ಪಕ್ಕದ ಮನೆಯವರನ್ನು ಕರೆಯುತ್ತಿದ್ದುದು ಸಾಮಾನ್ಯ . 

ನಮ್ಮದು ಕೂಡು ಕುಟುಂಬ .ನನಗೆ ಅರಿವು ಬಂದಾಗ ನಮ್ಮ ಮನೆಯಲ್ಲಿ ಅಜ್ಜ ಅಜ್ಜಿ .ಅಪ್ಪ ,ಅಮ್ಮ ,ಚಿಕ್ಕಪ್ಪ ,ಚಿಕ್ಕಮ್ಮ ,ಮಕ್ಕಳು ಇದ್ದರು .ದೊಡ್ಡಪ್ಪ ಮತ್ತು ಕುಟುಂಬ ಮದರಾಸಿನಲ್ಲಿ ಇತ್ತು .ನನ್ನ ಅಜ್ಜನ ಹೆಸರು ಮಹಾಬಲ ಭಟ್ಟ ,ಅಜ್ಜಿ  ಪರಮೇಶ್ವರಿ .. 

ಅಜ್ಜನ  ತಂದೆ ಗಣಪತಿ ಭಟ್  .ಅವರು ಆ ಕಾಲದಲ್ಲಿ ಹೆಸರಾಂತ ಅಶು ಕವಿ ಆಗಿದ್ದರು .ತುಳು ಮತ್ತು ಕನ್ನಡದಲ್ಲಿ  ಇನ್ಸ್ಟಂಟ್  ಆಗಿ ಕವಿತೆ ರಚನೆಗೆ ಹೆಸರಾಗಿದ್ದರು .ಕವಿ ಗಣಪ್ಪಜ್ಜ ಎಂದು ಅವರನ್ನು ಕರೆಯುತ್ತಿದ್ದರು .ಅವರ ಹಲವು ಕವಿತೆಗಳನ್ನು ನನ್ನ ಅಜ್ಜ ನಮಗೆ  ಹೇಳಿ ಕೊಟ್ಟಿದ್ದರೂ  ಅದ್ಯಾವುದನ್ನೂ ದಾಖಲಿಸದೆ ಇದ್ದುದರಿಂದ ಇಲ್ಲಿ ಉಲ್ಲೇಖಿಸುವುದಕ್ಕೆ  ಆಗದಿರುವುದಕ್ಕೆ  ವಿಷಾದಿಸುತ್ತೇನೆ .ಆದರೂ ಅಜ್ಜ ಹೇಳಿದ ಒಂದು ಘಟನೆ ನೆನೆಪಿನಲ್ಲಿ ಇದೆ .ಸ್ವಾಮಿಗಳು (ಧರ್ಮಗುರು )ಒಮ್ಮೆ  ನಮ್ಮ ಸೀಮೆಯ ಆಡ್ಯರ ಮನೆಯಲ್ಲಿ ಮೊಕ್ಕಾಮ್ ಹಾಕಿದ್ದ ವೇಳೆ ಎಲ್ಲರಂತೆ ನಮ್ಮ ಮುತ್ತಜ್ಜ ಅಲ್ಲಿಗೆ  ಹೋಗಿದ್ದರು .ಅಲ್ಲಿ ಸ್ವಾಮಿಗಳು  ತಮಗೆ ನಮಸ್ಕರಿಸಿ ಕಾಣಿಕೆ ಕೊಟ್ಟವರಿಗೆ ಫಲ ಮಂತ್ರಾಕ್ಷತೆ  ಕೊಡುತ್ತಿದ್ದರು ..ತಮಗೆ ಹಾಗೂ ಕಡಿಮೆ ಸ್ಥಿತಿವಂತರಿಗೆ  ಕೊಟ್ಟುದರಲ್ಲಿ  ಕೇವಲ ಮಂತ್ರಾಕ್ಷತೆ (ಅಕ್ಕಿ ಕಾಳು )ಇದ್ದುದನ್ನು ಕಂಡು ಉದ್ಧರಿಸಿದರಂತೆ "ಇದರಲ್ಲಿ ಫಲವಿಲ್ಲ ". 

 ಮುತ್ತಜ್ಜ ಗಣಪತಿ ಭಟ್ಟರಿಗೆ ಮೂವರು ಗಂಡು ಮಕ್ಕಳು .ಅಣ್ಣಯ್ಯ (ಇದು ನಿಜ ಹೆಸರೋ ಅಡ್ಡ ಹೆಸರೋ ಗೊತ್ತಿಲ್ಲ ) ,ನರಸಿಂಹ ಮತ್ತು ನನ್ನ ಅಜ್ಜ ಮಹಾಬಲ . 

                       

ಮೇಲಿನ  ಚಿತ್ರದಲ್ಲಿ ಮುತ್ತಜ್ಜ ,ಮುತ್ತಜ್ಜಿ .ನರಸಿಂಹ ಅಜ್ಜ ಅಜ್ಜಿ ಮತ್ತು ಮಹಾಬಲ ಅಜ್ಜ ಅಜ್ಜಿ ಇದ್ದಾರೆ .

ಅಣ್ಣಯ್ಯ ಅವರು ಯಕ್ಷಗಾನ ಭಾಗವತರಾಗಿ ಹೆಸರು ಪಡೆದಿದ್ದರು .ಅವರು ಸುತ್ತಾಟ ದಿಂದ  ಎಳವೆಯಲ್ಲಿಯೇ ಅನಾರೋಗ್ಯಕ್ಕೆ ತುತ್ತಾದರು .'ನನ್ನ ಮಗ ಮೊದಲು ಗಂಟೆ ಹಿಡಿದ ,ಆಮೇಲೆ ದಂಟೆ(ಊರು ಗೋಲು )ಹಿಡಿದ "ಎಂದು ಮುತ್ತಜ್ಜ ಹೇಳುತ್ತಿದ್ದರಂತೆ .ಇವರಿಗೆ ಒಬ್ಬಳು ಮಗಳು ಎಂದು ಕಾಣುತ್ತದೆ .ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪ ಇವರ ಮುಂದುವರಿದ ಕುಟುಂಬ ಕವಲು ಇದೆ ಎಂದು ಕೇಳಿದ್ದೇನೆ ..