ಬೆಂಬಲಿಗರು

ಬುಧವಾರ, ಜೂನ್ 29, 2022


 ನಮ್ಮಲ್ಲಿ ಅನೇಕರು ಏನಾದರೂ ಸಾಧಿಸಬೇಕು ಎಂಬ ಉತ್ಸಾಹದೊಡನೆ  ಸರಕಾರಿ ಸೇವೆ ಸೇರುತ್ತೇವೆ . ಅಲ್ಪ ಸಮಯದಲ್ಲಿ ಅಲ್ಲಿನ ಜಡ ಗಟ್ಟಿದ  ಕೆಲಸ ಸಂಸ್ಕೃತಿಯಲ್ಲಿ ನಾವೂ ಒಂದಾಗಿ ಹೋಗುತ್ತೇವೆ .' ಇಲ್ಲಿ ಏನೂ ಹೊಸತು ಮಾಡಲು ಸಾಧ್ಯವಿಲ್ಲ . ನಮ್ಮ ಸಂಬಳ ಸಾರಿಗೆ ಪ್ರಮೋಷನ್ ಸರಿಯಾಗಿ ಬಂದರೆ ಸಾಕು .' ಎಂಬ ಭಾವ ಬರುತ್ತದೆ . ಬೆರಳೆಣಿಕೆಯವರು ರಾಜೀನಾಮೆ ಕೊಟ್ಟು ಹೋಗುತ್ತಾರೆ ಅಥವಾ ತಮ್ಮ ಹುದ್ದೆಗೆ ಸೀಮಿತ ಪರಿಧಿಯಯಲ್ಲಿ ಹೊಸ ಅರ್ಥ ಕೊಟ್ಟು , ಮಾಡ ಬಹುದಾದ ಸಮಾಜಮುಖಿ ಕೆಲಸ ಹುಡುಕುತ್ತಾರೆ . ಎರಡನೇ ವರ್ಗದವರು ನಮ್ಮ ಜಿಲ್ಲೆಯ ಪ್ರಸ್ತುತ  ಸೀನಿಯರ್ ಪೋಸ್ಟಲ್ ಸೂಪರಿಂಟೆಂಡೆಂಟ್ ಅಗಿರುವ ತರುಣ ಅಧಿಕಾರಿ ಶ್ರೀಹರ್ಷ ನೆಟ್ಟಾರ್ ಅವರು .ತಮ್ಮ ಖಾಸಗಿ ಸಾಫ್ಟ್ ವೇರ್ ಕೆಲಸ ಬಿಟ್ಟು ಕೇಂದ್ರ ಲೋಕ ಸೇವ ಆಯೋಗ ಪರೀಕ್ಷೆ ಉತ್ತೀರ್ಣ ರಾಗಿ ಅಂಚೆ ಇಲಾಖೆ ಸೇರಿದವರು .

ಈಗ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಅಂಚೆ ಮೂಲಕ ಜನನ ಮರಣ  ಸರ್ಟಿಫಿಕೇಟ್ ಮನೆಗೇ ತಲುಪಿಸುವ ಯೋಜನೆ ಆರಂಬಿಸಿದ್ದು ಜನರು ಇದಕ್ಕಾಗಿ ಅಲೆದಾಡ ಬೇಕಿಲ್ಲ . ನಗರ ಸಭೆ ,ಕಾರ್ಪೊರೇಷನ್ ನವರಿಗೂ ತಲೆ ನೋವು ಆಗದಂತೆ ಅಂಚೆ ತಲುಪಿದ ಮೇಲೆ ಹಣ ಕೊಡುವ ವ್ಯವಸ್ಥೆ ಮಾಡಿದ್ದಾರೆ .

ಇಂತಹ ಅನೇಕ ನೂತನ ಯೋಜನೆಗಳು ಇವರ ಕಾರ್ಯವಧಿಯಲ್ಲಿ ಮೂಡಿ ಬರಲಿ .ಜನರ ಜೀವ ನಾಡಿ ಯಾಗಿದ್ದ ಅಂಚೆ ಇಲಾಖೆ ಸೇವೆಯ ಹೊಸ ಆಯಾಮಗಳನ್ನು ಕಂಡು ಕೊಳ್ಳಲಿ .

ಮಂಗಳವಾರ, ಜೂನ್ 28, 2022

ವಿಮಾನ ಯಾನ

ನಾನು ಮೊದಲು ವಿಮಾನದಲ್ಲಿ ಪ್ರಯಾಣ ಮಾಡಿದ್ದು ೨೦ ವರ್ಷಗಳ ಹಿಂದೆ . ಅದೂ ಕೊಲ್ಲಿ ರಾಷ್ಟ್ರಕ್ಕೆ ಹೋಗುವ ಅಂತರ ರಾಷ್ಟೀಯ ಪ್ರಯಾಣ . ಆದಾಗಲೇ ೯/೧೧ ರ ಭಯೋತ್ಪಾದಕ ಕೃತ್ಯ ಆಗಿದ್ದು  ವಿಮಾನ ನಿಲ್ದಾಣಗಳಲ್ಲಿ ಸುರಕ್ಷಾ ಕ್ರಮಗಳು ಕಠಿಣ ವಾಗಿದ್ದವು .ಪ್ರಯಾಣಿಕರು ಮೂರು ಗಂಟೆ ಮೊದಲೇ ನಿಲ್ದಾಣಕ್ಕೆ ತಲುಪಿ ಲಗ್ಗೇಜ್ ಪರಿಶೋಧಕ ಮೂಲಕ ತಪಾಸಣೆ ನಡೆಸಿ ,ಆಮೇಲೆ ಒಳಗಡೆ ಹೋಗುವಾಗ ಪುನಃ ಲೋಹ ಪರಿಶೋಧಕ ದಿಂದ ಸ್ಪೋಟಕ ಇದೆಯೋ ಎಂದು ನೋಡುವ ಪದ್ಧತಿ ಜಾರಿಗೆ ಬಂದಿತ್ತು . 

ನಾನು ಪ್ರಯಾಣಿಸಿದ ವಿಮಾನದಲ್ಲಿ ಕೋಟ್ ಟೈ ಧಾರಿಗಳಿಂದ ಹಿಡಿದು ಮುಂಡು  ಬನಿಯನ್ ಕೊರಳಿಗೆ ಒಂದು ಕರ್ಚೀಫ್ ಸುತ್ತಿದ ಸಾಮಾನ್ಯರ ವರೆಗೆ ಇದ್ದು ನಿಜವಾದ ಸಮಾಜವಾದದ ಪ್ರತೀಕ ಎಂಬಂತಿತ್ತು . ಇವರಲ್ಲಿ ಬಹಳ ಮಂದಿ ಜನ ಸಾಮಾನ್ಯರಾಗಿದ್ದು ಉದ್ಯೋಗಾಕಾಂಕ್ಷಿ ಗಳಾಗಿ ಕನಸು ತುಂಬಿ ಕೊಂಡು ಹೋಗುತ್ತಿದ್ದವರು . ನನಗೂ ಮೊದಲನೇ  ಅಂತರಿಕ್ಷ ಪಯಣ . 

ವಿಮಾನ ಹೊರಡುವುದಕ್ಕೆ ಮೊದಲು ಗಗನ ಸಖಿ ಬಂದು ಸೀಟ್ ಬೆಲ್ಟ್ ಕಟ್ಟುವ ಕ್ರಮದ ಬಗ್ಗೆ (ಆಗೆಲ್ಲಾ ಕಾರ್ ಗಳಲ್ಲಿ ಸೀಟ್ ಬೆಲ್ಟ್ ಬಂದಿರಲಿಲ್ಲ ,ಕಾರಣ ನಮಗೆ ಅದೂ ಹೊಸತು ) ತಿಳಿಸುವರು  .ಆಮೇಲೆ ವಿಮಾನ ಒಂದು ವೇಳೆ ನೀರಿನಲ್ಲಿ ಲ್ಯಾಂಡ್ ಆಗ ಬೇಕಾಗಿ ಬಂದರೆ ಲೈಫ್ ಜಾಕೆಟ್ ಸೀಟ್ ನ ಕೆಳಗೆ ಇರುವುದು .ಅದನ್ನು ಹಾಕಿ ಕೊಂಡು ಬಾಯಲ್ಲಿ ಊದಿದರೆ ಅದು ಉಬ್ಬಿಕೊಳ್ಳುವುದು ಎಂದು ಹೇಳುವರು .ಅದನ್ನು ಊಹಿಸಿ ಒಂದು ಕ್ಷಣ ನಮಗೆ ಗಾಬರಿ ಯಾಗಿ  ಮಧೂರು ವಿಘ್ನೇಶ್ವರ ನಿಂದ ಹಿಡಿದು ಪುತ್ತೂರು ಮಹಾಲಿಂಗೇಶ್ವರ ನ ವರಗೆ ಎಲ್ಲಾ ದೇವರ ನೆನಪು ಆಗುವುದು . ಈ ಪಾಠ ವನ್ನು ನಂತರದ ಅನೇಕ ಯಾನದಲ್ಲಿಯೂ ಕೇಳಿದ್ದೇನೆ . ಆದರೆ ಅಂತಹ ಪರಿಸ್ಥಿತಿ ಬಂದರೆ ನಿಜಕ್ಕೂ ಜಾಕೆಟ್ ಉಪಯೋಗಕ್ಕೆ ಬರುವುದು ಸಂಶಯ . ಅಲ್ಲದೆ ವಿಮಾನದ ತುರ್ತು ಬಾಗಿಲಿಂದ ಹೊರ ಬರುವ ಮೊದಲೇ ಉಬ್ಬಿದ ಜಾಕೆಟ್ ಧರಿಸಿದರೆ ಹೊರ ಬರುವುದು ಕಷ್ಟವಾಗ ಬಹುದು .ಅಂದ ಹಾಗೆ ನಾವು ಊದಿದ ಗಾಳಿಯಿಂದ ಜಾಕೆಟ್ ಉಬ್ಬುವುದಲ್ಲ ಅಂತೆ .ಅದರಲ್ಲಿ ಇರುವ ರಾಸಾಯನಿಕಗಳು ನಾವು ಮುಚ್ಚಳ ತೆಗೆದೊಡನೆ ಕ್ರಿಯಾಶೀಲ ಗೊಂಡು ಅನಿಲ ಉತ್ಪನ್ನ ಮಾಡುವವು . 

ವಿಮಾನ ನಿಂತ ಕೂಡಲೇ ಸಿಬ್ಬಂದಿ ಸೂಚನೆ ಬರುವ ಮೊದಲೇ ಇಳಿಯಲು ತರಾತುರಿ ಮಾಡುವ ನಾವು ಇಂತಹ ಸೂಚನೆಗಳನ್ನು ಎಷ್ಟು ಪಾಲಿಸಿಯೇವು ?

ಇನ್ನೊಂದು ಗಿಣಿ ಪಾಠ ಆಮ್ಲಜನಕ ದ  ಮಾಸ್ಕ್ ಬಗ್ಗೆ .ನಿಮಗೆ ತಿಳಿದಂತೆ ವಿಮಾನ ಆಗಸದಲ್ಲಿ ಬಲು ಎತ್ತರಕ್ಕೆ ಹಾರುತ್ತಲಿರುವುದು .ಮೇಲೆ ಹೋದಂತೆ ಗಾಳಿಯಲ್ಲಿ ಆಮ್ಲಜನಕ ದ  ಒತ್ತಡ ಕಡಿಮೆ ಆಗುವುದು .ವಿಮಾನದಲ್ಲಿ ಅದನ್ನು ಮನುಷ್ಯನಿಗೆ ಬೇಕಾದ ಒತ್ತಡದಲ್ಲಿ ಕೊಡುವ ವ್ಯವಸ್ಥೆ ಇದ್ದು ,ಅದು ವಿಫಲ ಆದರೆ ಅಥವಾ ವಿಮಾನ ಬಹಳ ಎತ್ತರಕ್ಕೆ ಹೋದರೆ ಪ್ರಾಣ ವಾಯು ಕಡಿಮೆ ಆದ ಸೂಚನೆ ಬರುವುದು . ಕೂಡಲೇ ಪ್ರಯಾಣಿಕರ ಮೇಲಿಂದ ಆಮ್ಲಜನಕ ದ  ಮಾಸ್ಕ್ ಇಳಿದು ಬರುವುದು(ವಾಯು ದೇವ ) .ಇಲ್ಲಿ ಕೂಡಾ ಇದು ಕೆಲವು ಕ್ಷಣಗಳಿಗೆ ಮಾತ್ರ ಲಭ್ಯ ವಿದ್ದು ಅಷ್ಟರಲ್ಲಿ ಪೈಲಟ್ ವಿಮಾನವನ್ನು ಕೆಳಕ್ಕೆ ತರುವನು . ವಿಮಾನದಲ್ಲಿ ಆಮ್ಲಜನಕದ ಅಂಡೆ ಇರದೇ ಮಾಸ್ಕ್ ಮತ್ತು ಗಾಳಿ ಚೀಲಕ್ಕೆ ಹೊಂದಿಕೊಂಡು ಕೆಲವು ರಾಸಾಯನಿಕಗಳು ಆಮ್ಲ ಜನಕ ಉತ್ಪತ್ತಿ ಮಾಡುವ ವ್ಯವಸ್ಥೆ . ಇದರಲ್ಲಿ ಒಂದು ಸೂಚನೆ ಇರುತ್ತದೆ .'ಇನ್ನೊಬ್ಬರಿಗೆ ಸಹಾಯ ಮಾಡುವ ಮೊದಲು ತಮ್ಮ ಗತಿ ಗಮನಿಸಿ ಕೊಳ್ಳಿ' ಎಂದರೆ ನೀವು ಸ್ವಾರ್ಥಿಗಳು ಆಗಿರಿ ಎಂದಲ್ಲ . ಒಡನೇ ಸ್ವಯಂ ಆಮ್ಲಜನಕ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಇನ್ನೊಬ್ಬರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ನೀವು ಇರಲಾರಿರಿ ಎಂದು ಅರ್ಥ . 

ಇನ್ನು ವಿಮಾನ ಏರುವಾಗ ಮತ್ತು ಇಳಿಯುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಿರಿ .ನಿಮ್ಮ ಮೊಬೈಲ್ ಏರೋಪ್ಲೇನ್ ಮೋಡ್ ನಲ್ಲಿ ಅಥಾವ ಆಫ್ ಮಾಡಿ ಇಡಿ ,ಸೀಟ್ ಮುಂದಕ್ಕೆ ತನ್ನಿರಿ ,ಕಿಟಿಕಿ ಗಾಜು ತೆರೆಯಿರಿ ಇತ್ಯಾದಿ ತಿಳಿದ ವಿಚಾರವನ್ನು ಮೊದಲನೇ ಬಾರಿ ಹೇಳುವಂತೆ ನಿಷ್ಠೆಯಿಂದ ಸಿಬ್ಬಂದಿ ಹೇಳುತ್ತಿದ್ದರೂ ಬಹಳ ಮಂದಿ ತಿಳಿದೂ ಅದನ್ನು ಪಾಲಿಸರು . ಪರಿಚಾರಿಕೆ ಬಂದು ಗದರಿಸ ಬೇಕು . 

ಮೊದಲ ಯಾನದಲ್ಲಿ ಅಕ್ಕ ಪಕ್ಕದವರು ಮಾಡಿದ ಹಾಗೇ ನೋಡಿ ಮಾಡುವುದು ,ವಾತಾಯನ ವ್ಯವಸ್ಥೆ ಹೇಗೆ ತಿರಿಗಿಸುವುದು ,ಪರಿಚಾರಿಕೆಯನ್ನು ಕರೆಯುವ ಗುಂಡಿ ಒತ್ತುವುದು ,ಹೇಗೆ ಊಟ ಮಾಡುವುದು ಇತ್ಯಾದಿ . ವಾಷ್ ರೂಮ್ ನಲ್ಲಿ ಮಾತ್ರ ನಾವು ಮಾತ್ರ ಇರುವ ಕಾರಣ ಭಯ ;ಯಾವುದನ್ನು ಮುಟ್ಟಿದರೆ ಏನು ಆಗುವುದೋ ?

ವಿಮಾನದಲ್ಲಿ ನಮ್ಮಂತವರು ಪ್ರಯಾಣಿಸುವ ಇಕೋನೋಮಿ ಕ್ಲಾಸ್ ನಲ್ಲಿ ಸೀಟ್ ಗಳು ಬಹಳ ಹತ್ತಿರ ಹತ್ತಿರ ಇದ್ದು ನನ್ನಂತಹ ಉದ್ದದವರಿಗೆ ಕಷ್ಟ . ಮುಂದಿನ ಸೀಟಿನ ವ್ಯಕ್ತಿ ಧಡೂತಿ ಆಸಾಮಿ ಯಾಗಿದ್ದು ಪುಶ್ ಬ್ಯಾಕ್ ಮಾಡಿದರೆ ನಮ್ಮ ಮೊಣಕಾಲು ಚಟ್ನಿ . ಈಗ ಬಸ್ ಮತ್ತು ಟ್ರೈನ್ ನಲ್ಲಿ  ಅಕ್ಕ ಪಕ್ಕದವರ ಜತೆ ಸಂಭಾಷಣೆಯಲ್ಲಿ ಯಾರೂ ತೊಡಗುವದಿಲ್ಲ .ವಿಮಾನದಲ್ಲಿ ಅದು ಸ್ವಲ್ಪ ಮೊದಲೇ ಬಂದಿರಬೇಕು . 

ಒಮ್ಮೆ ನಾವು(ನಾನು ಮತ್ತು ಪತ್ನಿ ) ಅಮೆರಿಕಾದಲ್ಲಿರುವ ಮಗನ ಭೇಟಿಗಾಗಿ ಬೆಂಗಳೂರಿನಿಂದ ದುಬೈ ಮೂಲಕ ಸಿಯಾಟಲ್ ಪಟ್ಟಣಕ್ಕೆ ಹೋಗುವ ಎಮಿರೇಟ್ ವಿಮಾನದಲ್ಲಿ ಬೆಂಗಳೂರಿನಿಂದ ಪಯಣ ಆರಂಭಿಸಿದೆವು .ದುಬೈಯಲ್ಲಿ ಇಳಿದು ವಿಮಾನ ಬದಲಿಸ ಬೇಕು .ದುಬೈ ಯಲ್ಲಿ ಬೋರ್ಡಿಂಗ್ ಮಾಡುವ ವೇಳೆ ನಮ್ಮ ಟಿಕೆಟ್  ನೋಡಿ ತಡೆದು ಬದಿಗೆ ನಿಲ್ಲುವಂತೆ ಹೇಳಿದರು .ನನಗೋ ಭಯ ;ನಮ್ಮ ಮೇಲೆ ಯಾರಾದರೂ ಲುಕ್ ಔಟ್ ನೋಟೀಸ್ ಜ್ಯಾರಿ ಮಾಡಿದ್ದಾರೋ ?ಸ್ವಲ್ಪ ಸಮಯದ ಬಳಿಕ  ಪರಿಚಾರಿಕೆ ಓರ್ವಳು ಬಂದು ನಿಮ್ಮಿಬ್ಬರ ಟಿಕೆಟ್ ನ್ನು  ಬ್ಯುಸಿನೆಸ್ ಕ್ಲಾಸ್ ಗೆ ಏರಿಸಿದ್ದೇವೆ ಎಂದು ನಮ್ಮನ್ನು ಸೀಟ್ ನ ಬಳಿಗೆ ಒಯ್ದಳು . ಅಲ್ಲಿ ದಂತ ವೈದ್ಯರ ಚೇರ್ ನಂತೆ ಇರುವ ಸೀಟ್ .ಕಾಲು ಚಾಚಿ ಮಲಗ ಬಹುದು . ,ಮೇಲೆ ಕೆಳಗೆ ಮಾಡ ಬಹುದು . ಕುರ್ಚಿಯಲ್ಲಿ ಕುಳಿತ ಒಡನೆ ಮಕ್ಕಳಂತೆ  ಸ್ವಿಚ್ ಗಳನ್ನು ಅದುಮಿ ಏನೇನು ಅಡ್ಜಸ್ಟ್ಮೆಂಟ್ ಇದೆ ಎಂದು ನೋಡಿದೆವು . ಅಕ್ಕ ಪಕ್ಕದಲ್ಲಿ ಇದ್ದ ಪ್ರಯಾಣಿಕರು ಗಂಭೀರವಾಗಿ ವಿಸ್ಕಿ ಸೇವಿಸುತ್ತಾ ಲ್ಯಾಪ್ ಟಾಪ್ ಇಲ್ಲವೇ ಪುಸ್ತಕದಲ್ಲಿ ಮಗ್ನವಾಗಿದ್ದರು . ಆಗಾಗ ಸ್ವಿಚ್ ಒತ್ತಿ ಏನೇನೋ ತರಿಸಿ ತಿನ್ನುವರು . ನಾನು  ಎಕಾನಮಿ ಕ್ಲಾಸ್ ನಲ್ಲಿ ಬರುವಂತೆ ಸಮಯಕ್ಕೆ ಸರಿಯಾಗಿ ಊಟ ಕೊಡುವರೆಂದು ಕಾದದ್ದೇ ಬಂತು .ಹಸಿವು ತಡೆಯದೆ ಹೆಂಡತಿ ನೀವು ಊಟ ಕೇಳಿ ಎಂದಾಗ ;'ಸ್ವಲ್ಪ ತಾಳು ಈಗ ತಂದಾರು 'ಎಂದು ಸಮಾಧಾನ ಮಾಡಿದೆ .ಇನ್ನು ಸ್ಪೆಷಲ್ ಆಗಿ ಆರ್ಡರ್ ಮಾಡಿದರೆ ಡಾಲರ್ ನಲ್ಲಿ ಸಿಕ್ಕಾ ಬಟ್ಟೆ ಚಾರ್ಜ್ ಮಾಡಿದರೆ ?ಎಂದು ಭಯ . ಕೊನೆಗೆ ತಡೆಯಲಾರದೆ ಪ್ಯಾಂಟ್ರಿ ಬಳಿಗೆ ಹೋಗಿ ಊಟ ?ಎಂದೆ .ನಿಮಗೆ ಇಂತಹ ಆಹಾರ ಬೇಕು ಎಂದು ನಾನು ಅದುವರೆಗೆ ಕೇಳದೇ ಇದ್ದ ಐಟಂ ಗಳ ಹೆಸರು ಗಳನ್ನು ಹೇಳಲು ವೆಜ್ ವೆಜ್ ಮೀಲ್ಸ್ ಎಂದು ಬಡ ಬಡಿಸಿದೆ . ಉಪ್ಪು ಹುಳಿ ಖಾರ ಇಲ್ಲದ ಅನ್ನ ದಿಂದ ಮಾಡಿದ ಏನಂತಹದೋ ಒಂದು ತಂದು ಕೊಟ್ಟುದನ್ನು ಮುಖ ಸಿಂಡರಿಸಿ ಕೊಂಡು ತಿಂದೆವು . ದುಬೈ ಯಿಂದ ಸಿಯಾಟಲ್ ಗೆ ಹೀಗೇ ಹನ್ನೊಂದು ಗಂಟೆ ಸುಖಾಸೀನ ವಿದ್ದರೂ ಅತೃಪ್ತ ಉದರ ದೊಂದಿಗೆ ಪ್ರಯಾಣಿಸಿದೆವು . ಮಗನ ಬಳಿ ಹೇಳಲು ನೀವು ಅದೃಷ್ಟವಂತರು ,ಹೆಚ್ಚು ವೆಚ್ಚ ಇಲ್ಲದೆ ಮೇಲ್ವರ್ಗ ದಲ್ಲಿ ಪ್ರಯಾಣ ,ಒಮ್ಮೆ ಅವರೇ ಕ್ಲಾಸ್ ಅಪ್ಗ್ರೇಡ್ ಮಾಡಿದರೆ ಅದರ ಎಲ್ಲಾ ಸೌಲಭ್ಯಗಳನ್ನೂ ಪಡೆಯ ಬಹುದು ಎಂದ 

ಏನೇ ಹೇಳಿ ನನಗೆ ನಮ್ಮೂರಿನ  ಬಸ್ ಮತ್ತು ಟ್ರೈನ್ ಯಾತ್ರೆಯೇ ವಿಮಾನ ಯಾನಕ್ಕಿಂತ ಸುಖ ಎನಿಸುತ್ತದೆ . 

ಬಾಲಂಗೋಚಿ : ಹಿಂದೆ ವಿಮಾನ ಪ್ರಯಾಣಿಕರಿಗೆ ಕೊಂಪ್ಲಿ ಮೆಂಟರಿ ಆಗಿ ಚಾಕ್ಲೆಟ್ ನೀಡುತ್ತಿದ್ದು ,ನನ್ನ ಅಮ್ಮ ತಾನು ತಿನ್ನದಿದ್ದರೂ ಮೊಮ್ಮಕ್ಕಳಿಗೆ ಎಂದು ಚೀಲಕ್ಕೆ ಹಾಕಿ ತರುತ್ತಿದ್ದರು .

ಭಾನುವಾರ, ಜೂನ್ 12, 2022

ತಲೆಯೊಳಗಿನ ಬೆಲ್ಲ

                     


ನಮ್ಮ ತಳೆಯಯೊಳಗೆ ಮೆದುಳಿನ ಬುಡದಲ್ಲಿ ಒಂದು ಕಿರು ಮೆದುಳು ಇದೆ ;ಅದನ್ನು ಸೆರೆಬೆಲ್ಲಮ್ ಎಂದು ಕರೆಯುವರು . ಲ್ಯಾಟಿನ್ ಭಾಷೆಯಲ್ಲಿ ಕಿರಿ ಮೆದುಳು ಎಂದು ಕರೆಯುವರು . ಇದು ಗಾತ್ರದಲ್ಲಿ ಕಿರಿದಾದರೂ ಕಾರ್ಯ ವ್ಯಾಪ್ತಿ ಹಿರಿದು . 

 ಈ ಭಾಗದ ರಕ್ತನಾಳದಲ್ಲಿ ರಕ್ತ ಹೆಪ್ಪು ಗಟ್ಟಿ ಅಥವಾ ರಕ್ತ ಸ್ರಾವ ವಾಗಿ ಸೆರೆಬೆಲ್ಲಮ್ ನ ಕಾರ್ಯ ವ್ಯತ್ಯಯ  ಆಗುವದು . ಆಲ್ಕೋಹಾಲ್ ಕೂಡಾ ಈ ಅಂಗವನ್ನು  ನಶಿಶ ಬಲ್ಲುದು . 

ಸೆರೆಬೆಲ್ಲಮ್ ಅನಾರೋಗ್ಯ ಗೊಂಡರೆ ಶರೀರದ ಸಮತೋಲ ತಪ್ಪುವುದು ,ಕೈ ಕಾಲುಗಳ ನಡುಕ ,ನೇರ ಕುಳಿತು ಮತ್ತು ನಿಂತು ಕೊಳ್ಳಲು ಆಗದಿರುವುದು,ನಿಂತರೂ ನಡೆ ವಾಲುವುದು ,ಮಾತು ತೊದಲುವುದು ಇತ್ಯಾದಿ ಉಂಟಾಗುವದು . 

ರೋಗಿಯ ರೋಗ ಲಕ್ಷಣ ,ಪರೀಕ್ಷೆ ಮತ್ತು (ಎಂ ಆರ್ ಐ ಉತ್ತಮ  )ಸ್ಕ್ಯಾನ್ ಮೂಲಕ ರೋಗ ಪತ್ತೆ ಮಾಡುವರು ,

ಶುಕ್ರವಾರ, ಜೂನ್ 10, 2022

ಒಂದು ನೆನಪು

 ಮನೆಗೆ ವಿಶಾಲವಾದ ಚಾವಡಿ .ಅದಕ್ಕೆ ಕಿಟಿಕಿಗಳಿಲ್ಲ . ಸರಳಿನ ದಳಿಗಳು ಮಾತ್ರ . ಇದರ ಮೂಲಕ ಬೆಕ್ಕುಗಳಿಗೆ ಪ್ರವೇಶಕ್ಕೆ ವೀಸಾ ಅವಶ್ಯವಿಲ್ಲ .ಕೆಲವೊಮ್ಮೆ ಇಲಿ ಮತ್ತು ಕೇರೆ ಹಾವುಗಳಿಗೂ . ಬಾರ್ಡರ್ ಸೆಕ್ಯೂರಿಟಿ ಗೆ ಬೆಕ್ಕು ನಾಯಿ ಇದ್ದ ಕಾರಣ ಇವುಗಳ ಹಾವಳಿ ಅಪರೂಪ . ಮುಖ್ಯ ಬಾಗಿಲು ಯಾವತ್ತೂ ತೆರೆದಿದ್ದು ರಾತ್ರಿ ಹನ್ನೊಂದರಿಂದ ಮುಂಜಾನೆ ಐದರ ವರೆಗೆ ಮಾತ್ರ ಹಾಕುವದು . 

 ರಾತ್ರಿ ಆಟ ,ಸಾಮೂಹಿಕ ಭೋಜನ ಮತ್ತೆ ಅಧ್ಯಯನ ದ  ಸೋಗು ಮುಗಿದ ಮೇಲೆ ಒಬ್ಬೊಬ್ಬರೇ ಒಳಗಿನ ಉಗ್ರಾಣದಿಂದ  ಚೇರಟೆಯಂತೆ ಮಡಿಚಿದ್ದ ತಮ್ಮ ತಮ್ಮ  ಚಾಪೆ ,ಹಾಸಿಗೆ(ಕೆಲವು ಒಲಿಯದ್ದು ,ಕೆಲವು ಹುಲ್ಲಿನದ್ದು ) ಇತ್ಯಾದಿ ತಂದು ಮಲಗುವುದು. (ಮಡಿಚಿಟ್ಟ ಚಾಪೆ ಹಾಸಿಗೆಯಲ್ಲಿ ಧೂಳು ಮತ್ತು ಧೂಳು ಕ್ರಿಮಿಗಳು ಸೇರವು .ಮತ್ತು ಈಗಿನಂತೆ ಫ್ಯಾನ್ ಹಾಕುವಾಗ ಹಾರಿ ನಮ್ಮ ಶ್ವಾಸಕೋಶ ಸೇರಿ ಅಲ್ಲರ್ಜಿ ಉಂಟು ಮಾಡುವ ಪ್ರಮೇಯ ಇರಲಿಲ್ಲ . )ಪಕ್ಕದಲ್ಲಿ ಅಜ್ಜನಿಗೆ ಮೂಡ್ ಇದ್ದರೆ ಕತೆ ಹೇಳುವರು .ಇಲ್ಲದಿದ್ದರೆ ಶಾಲೆಯ  ಮೇಷ್ಟ್ರ ಮತ್ತು ಮಕ್ಕಳ ಬಗ್ಗೆ ತಮಾಷೆ ಮಾಡುತ್ತಾ ನಿದ್ರಾ ದೇವಿಗೆ ಕಾಯುವುದು . ಕೆಲವೊಮ್ಮೆ ಹಿರಿಯರು 'ಸುಮ್ಮನೆ ಬಾಯಿ ಮುಚ್ಚಿ ಮಲಗಿರಿ 'ಎಂದು ಗದರಿಸುವರು . 

 ಬಾಗಿಲು ಇಲ್ಲದ ಚಾವಡಿಯಲ್ಲಿ ಸೊಳ್ಳೆಗಳಿಗೆ ದೊಣ್ಣೇ  ನಾಯಕನ ಅಪ್ಪಣೆ ಬೇಕೇ ?ನಾವು ಮಲಗುವುದಕ್ಕೆಯೇ ಕಾಯುತ್ತಿದ್ದು ಗಡಿಯಾಚೆಗಿನ ಭಯೋತ್ಪಾದಕರಂತೆ ಧಾಳಿ ಇಡುತ್ತಿದ್ದವು .ತಮ್ಮ ಸಂಗೀತದ ಬ್ಯಾಂಡ್ ಜತೆ .ತಡೆಯಲಾರದೆ ಕೆಲವೊಮ್ಮೆ ಅಡಿಕೆ ಸೊಪ್ಪಿನ ಅಗ್ಗಿಷ್ಟಿಕೆಯಿಂದ ಹೊಗೆ ಹಾಕುತ್ತಿದ್ದೆವು ..ನಮ್ಮ ನಖಶಿಖಾಂತ ಹೊಗೆ ಪರಿಮಳ . ರಾತ್ರಿ ಆಗಾಗ ಗುಡ್ಡದಿಂದ ಉಕ್ಕೆವೋ ಉಕ್ಕೆವೋ ಎಂದು ನರಿ ಊಳಿಡುವುದು .. ಅದಕ್ಕೆ ಮನೆಯ ನಾಯಿ ಪ್ರತಿಧ್ವನಿ ಮಾಡುವುದು . (ಪಿರಂಗಿಗೆ ಪ್ರತಿ ಪಿರಂಗಿ ). 

ಬೆಳಗ್ಗೆ  ಎದ್ದೊಡನೆ  ಮನೆ ಬಾಗಿಲ ಬಳ್ಳಿ ತೋಟದ ಅಡಿಕೆ ಮರದ ಕೊಬೆಗಳು ಕಾಣುವವು . ಬೇಸಿಗೆಯಲ್ಲಿ ಅವುಗಳ  ಹಸಿರು ಬಣ್ಣ ಹಳದಿ ಮತ್ತು ಕೆಂಪು ಬಣ್ಣಕ್ಕೆ ತಿರುಗುವುದು ಹಂತ ಹಂತವಾಗಿ  ಕಾಣುವುದು . ಮಳೆಯ ಆಗಮನ ತುಂಬಾ ವಿಳಂಬವಾದ ವರ್ಷಗಳಲ್ಲಿ ಸಂಪೂರ್ಣ ಒಣಗಿ ಸತ್ತ ದೃಶ್ಯಗಳೂ ಕಣ್ಣ ಮುಂದೆ ಇದೆ . 

ಈ ವರ್ಷ ಮಳೆ ತಡವಾಗಿದೆ ,ಆದುದರಿಂದ ಹಳೆಯ ನೆನಪುಗಳು ಬರುತ್ತಿವೆ .

ಬುಧವಾರ, ಜೂನ್ 8, 2022

ಇತ್ತೆ ಬರ್ಪೆ ಸಿ0ಡ್ರೋಮ್

 ಒಂದು ಒಳ್ಳೆಯ ಸಂಗೀತ ಕಚೇರಿ . ತುಂಬಿದ ಸಭಾಂಗಣ . ತನ್ಮಯನಾಗಿ ಕೇಳುತ್ತಿದ್ದೆ .ನನ್ನ ಪಕ್ಕದಲ್ಲಿ ಕುಳಿತಿದ್ದ ಮಿತ್ರರು ಈಗ ಬರುತ್ತೇನೆ ಸೀಟ್ ನೋಡಿಕೊಳ್ಳಿ ಎಂದು ಎದ್ದು ಹೋದರು .ವಾಶ್ ರೂಮ್ ಗೋ ಟೀ ಸೇವನೆಗೋ ಇರಬೇಕು ಎಂದು ಕೊಂಡೆ . ಎಷ್ಟು ಹೊತ್ತಾದರೂ ಆಸಾಮಿ ಕಾಣೆ .ಖಾಲಿ ಸೀಟ್ ಇದೆ ಎಂದು ಲೇಟ್ ಆಗಿ ಬಂದ ಅನೇಕರು 'ಇಲ್ಲಿ ಯಾರಾದರೂ ಇದ್ದಾರೆಯೇ ?"ಎಂದು ನನ್ನನ್ನು ಕೇಳುವರು .ಇಲ್ಲ ಇದ್ದಾರೆ ಎಂದು ನಾನು ಅನ್ನುವೆನು . ನನ್ನ ಏಕಾಗ್ರತೆಗೆ ಭಂಗ ಬರುತ್ತಿದ್ದುದು ಮಾತ್ರವಲ್ಲ ,ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಉಳಿದವರು ತಿಳಿಯುವರು . ಕಾರ್ಯಕ್ರಮ ಆಸ್ವಾದ ಸಾಧ್ಯವಾಗದೆ ನಾನೇ ಕೊನೆಗೆ ಎದ್ದು ಹೋಗ ಬೇಕಾಯಿತು . 

       ಹಾಗೆ ನನ್ನಲ್ಲಿ ಸೀಟ್ ನೋಡಿಕೊಳ್ಳಲು ಹೇಳಿ ಹೋದವರು ಪತ್ನಿಯ ಒತ್ತಾಯಕ್ಕೆ ಬಂದವರು ,ಅವರಿಗೆ ಸಂಗೀತದಲ್ಲಿ ಅಭಿರುಚಿ ಇರಲಿಲ್ಲ . ಅವರ ಮನೆಯವರು ಹೆಣ್ಣು ಮಕ್ಕಳ ಸಾಲಿನಲ್ಲಿ ಇದ್ದು ತಲ್ಲೀನರಾಗಿ ಇದ್ದರು . ನನ್ನ ಬಳಿ ಹೇಳಿ ಹೋದವರು ಪೇಟೆ ಇಡೀ ಸುತ್ತಿ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಬಂದರಂತೆ . 

                   ಹಿಂದೆ ಬಸ್ ನಲ್ಲಿ ಈ ರೀತಿ ಆಗುತ್ತಿತ್ತು .ಬಸ್ ಸ್ಟ್ಯಾಂಡ್ ನಲ್ಲಿ ನಿಂತಿರುವಾಗ 'ಈಗ ಬರುತ್ತೇನೆ 'ಎಂದು ಪಕ್ಕದವರಲ್ಲಿ ಹೇಳಿ ಹೋಗುವರು .ಆಮೇಲೆ ಬಸ್ ಹೊರಡುವಾಗ ಅವರು ಕಾಣೆ . ಒಪ್ಪಿ ಕೊಂಡವರಿಗೆ ಟೆನ್ಶನ್ . 

ಬಸ್ ಸ್ಟಾಂಡ್ ಅನ್ನುವಾಗ ಕೆಲ ವರ್ಷಗಳ ಹಿಂದಿನ ದಿನಗಳು ನೆನಪಾಗುವವು . ಸ್ಟಾಂಡ್ ಗೆ ಬೇರೆ ಊರಿನಿಂದ ಬಸ್ ಬಂದೊಡನೆ ಒಳಗೆ ಇರುವವರನ್ನು  ಹೊರಗೆ ಇರುವವರು ತಮ್ಮ ಶಾಲು ,ಬೈರಾಸು ,ಚೀಲ ಇತ್ಯಾದಿ ಒಳ ತುರುಕಿ ಒಂದು ಸೀಟ್ ಇಡಿರಿ ಎಂದು ಅಂಗಲಾಚುವರು . ಆಮೇಲೆ ಹೇಗೋ ತುರುಕಿ ಕೊಂಡು ಒಳ ಬಂದು ಆಸೀನರಾದಾಗ ರಾಜ್ಯ ಗೆದ್ದ ಹೆಮ್ಮೆ . ಹಲವು ಬಾರಿ ಒಂದೇ ಸೀಟಿಗೆ ಇಬ್ಬರು ಹಕ್ಕು ಪ್ರತಿಪಾದಿಸಿ ಜಗಳ ಆಗುತ್ತಿದ್ದು ಬಸ್ಸಿನ ಒಳಗಿನ ಸೆಖೆಯ ತಾಪವನ್ನು ಏರಿಸುತ್ತಿತ್ತು .

ಸೋಮವಾರ, ಜೂನ್ 6, 2022

ವಿದ್ಯಾಭೂಷಣ


ನಿನ್ನೆ  ಟಿ ವಿ ಯಲ್ಲಿ ಉಡುಪಿಯಿಂದ  ವಿದ್ಯಾಭೂಷಣ ಅವರ ಸಂಗೀತ ಲೈವ್ ಆಗಿ  ಬರುತ್ತಿತ್ತು .ಭಾರೀ ಸೆಖೆ (ದಕ್ಷಿಣ ಕನ್ನಡದ್ದು "ಶೆಖೆ "ಎಂದು ವಿದ್ಯಾಭೂಷಣ ರೇ ಕಚೇರಿ ನಡುವೆ  ಮುಖ ಒರಸಿ ಕೊಂಡು ಹೇಳಿದರು )ನಡುವೆಯೂ ತುಂಬಿದ ಸಭಾಂಗಣ ,ಕೊನೆಯ ವರೆಗೂ . ವಿದ್ಯಾಭೂಷಣ ಅವರ  ಸಾಹಿತ್ಯ ಶುದ್ದಿ ,ಮತ್ತು  ಯುಕ್ತ ಉಗಾಭೋಗ ದೊಂದಿಗೆ ಕೀರ್ತನೆ ಪ್ರಸ್ತುತಿ ,ಮತ್ತು ಅವರ ಧ್ವನಿಯಲ್ಲಿಯೇ  ಇರುವ ದೈವೀಕತೆ   ಮತ್ತು ಎಲ್ಲಕ್ಕೂ ಕಳಶವಿಟ್ಟಂತೆ ಅವರ ಸರಳತೆ  ಇದು ಅವರ ಆಕರ್ಷಣೆಯ ಗುಟ್ಟು . 

 ನಿನ್ನೆಯ ಕಚೇರಿಯಲ್ಲಿ ಶ್ರೀ ಪ್ರಾದೇಶ್  ಆಚಾರ್ ಅವರ ವಯೊಲಿನ್  ಬಹಳ ಖುಷಿ ಕೊಟ್ಟಿತು . ಅವರ ನಗು ಮುಖ ,ಗಾಯಕ ಮತ್ತು ಸಾಹಿತ್ಯದ ಮನೋಧರ್ಮ ದ  ಚಂದ ಅನುಸರಣೆ  ಚೇತೋಹಾರಿ . ಬಹಳ ಪ್ರತಿಭಾವಂತ ರಾದ ಈ  ಯುವಕನಿಗೆ ಒಳ್ಳೆಯ ಭವಿಷ್ಯ ಇದೆ . 

ನನ್ನ ಮದುವೆ ಆದ ವರ್ಷ ,ಮನೆಯವರು ಸುಬ್ರಹ್ಮಣ್ಯ ಕ್ಕೆ ಹೋಗುವ ಆಸೆ ವ್ಯಕ್ತ ಪಡಿಸಿದ್ದರಿಂದ ಒಂದು ಸಂಜೆ ಅಲ್ಲಿಗೆ ಹೋಗಿದ್ದೆವು . ಆಗಿನ್ನೂ ವಿದ್ಯಾಭೂಷಣ ಅವರು ಮಠ ದಲ್ಲಿ  ಸ್ವಾಮಿಗಳಾಗಿ ಇದ್ದರು .ಗಾಯಕರಾಗಿ ಪ್ರಸಿದ್ದಿ ಪಡೆದಿದ್ದರು .ಸುಬ್ರಹ್ಮಣ್ಯ ದರ್ಶನ ಆದ ಮೇಲೆ ವಿದ್ಯಾಭೂಷಣ ರನ್ನು ಕಾಣುವ ಆಸೆ ವ್ಯಕ್ತ ಪಡಿಸಿದಾಗ ಒಡನೆಯೇ ಒಪ್ಪಿಗೆ ಸಿಕ್ಕಿ ಕಂಡು ಮಾತನಾಡಿಸಿದೆವು .ಅವರ ನೈಜ ಸರಳತೆ ಗೆ ಮಾರು ಹೋದೆವು .ಅಂದು ಏಕಾದಶಿ ಆಗಿದ್ದುದರಿಂದ ನಮಗೆ ಊಟ ಹಾಕಲು ಆಗುವುದಿಲ್ಲವಲ್ಲಾ ಎಂದು ಬೇಸರ ಪಟ್ಟು ಕೊಂಡರು . 

ಹಿಂದೆ ಹೆಚ್ಚಾಗಿ ಅವರಿಗೆ ಎಂ ಎಸ ಗೋವಿಂದಸ್ವಾಮಿ ವಯೊಲಿನ್ ನಲ್ಲಿ ಮತ್ತು  ದಿ ಎಂ ಆರ್ ಸಾಯಿನಾಥ್(ಇವರೂ ಇವರ ಮಕ್ಕಳೂ ನನ್ನ ಆಪ್ತರು ) ಮೃದಂಗ ದಲ್ಲಿ ಸಾಥ್ ಕೊಡುತ್ತಿದ್ದರು

ಶನಿವಾರ, ಜೂನ್ 4, 2022

ಬಯಕೆ

ಒಂದು ಮಲಯಾಳ ಸಿನಿಮಾ ಹೆಸರು ಮರೆತು ಹೋಗಿದೆ .ಹೊಸತಾಗಿ ಮದುವೆ ಆದ ತರುಣದಲ್ಲಿ ಪತ್ನಿ ಗರ್ಭಿಣಿ ಎಂದು ತಿಳಿದಾಗ ಗಂಡ ಅವಳನ್ನು ಸರ್ಪ್ರೈಸ್ ಆಗಿ ಖುಷಿ ಪಡಿಸುವಾ ಎಂದು ಊರೆಲ್ಲಾ ಹುಡುಕಿ ಹುಳಿ ಮಾವಿನ ಕಾಯಿ ತಂದು ಕೊಡುತ್ತಾನೆ .ಅದನ್ನು ಕಂಡು ಆಕೆ 'ಇದು ಯಾಕೆ ತಂದಿರಿ ,ನನಗೆ ಇದು ಬೇಡ "ಎನ್ನುತ್ತಾಳೆ .ಮತ್ತೇನು ತಿನ್ನಲು ಆಸೆ ಎನ್ನಲು 'ಮಸಾಲೆ ದೋಸೆ 'ಎನ್ನುತ್ತಾಳೆ . ಒಬ್ಬೊಬ್ಬರಿಗೆ ಒಂದೊಂದು ಬಯಕೆ . ಬಯಕೆಗಳಲ್ಲಿ ಎರಡು ವಿಧ .ಒಂದು ಆಹಾರ ವಸ್ತುಗಳಾದ ಹುಳಿ ವಸ್ತುಗಳು ,ಐಸ್ ಕ್ರೀಮ್ ,ಚಾಕಲೇಟ್ ಇತ್ಯಾದಿ ಆದರೆ ಇನ್ನೊಂದು ಅಹಾರೇತರ ವಸ್ತುಗಳಾದ  ಮಣ್ಣು ,ಇದ್ದಲು ಇತ್ಯಾದಿ . ಈ ತರಹದ ಬಯಕೆ ಗರ್ಭಿಣಿಯಲ್ಲಿ ಕೊರತೆ ಇರುವ ವಸ್ತುಗಳ ಪರೋಕ್ಷ ವಾದ ಬೇಡಿಕೆಗಳು ಎಂದು ತಿಳಿದಿದ್ದರು . ಗರ್ಭಿಣಿಯರ ಸೀಮಂತ ಶಾಸ್ತ್ರಕ್ಕೆ ನಮ್ಮಲ್ಲಿ ಬಯಕೆಯ  ಮದುವೆ ಎಂದು ಕರೆಯುತ್ತಾರೆ 

 ಆರೋಗ್ಯವಂತ ಗಂಡು ಹೆಣ್ಣು ಇಬ್ಬರಲ್ಲೂ ಪ್ರಾಯಕ್ಕೆ ಬಂದಾಗ ಮದುವೆಯ ಬಯಕೆ ಆಗುತ್ತದೆ .ಅದಕ್ಕೆ ನಮ್ಮಲ್ಲಿ   ಮೂಲ ಪ್ರವೃತ್ತಿ (ಸಂತಾನ ಅಭಿವೃದ್ಧಿ ,ರಕ್ಷಣೆ ಇತ್ಯಾದಿ )ಜನಕ  ಹಾರ್ಮೋನ್ ಗಳೇ ಕಾರಣ . 

ಮೊದಲು ಮದುವೆಯ ಬಯಕೆ ,ಆಮೇಲೆ ಬಯಕೆಯ ಮದುಮ್ಮೆ

ಶುಕ್ರವಾರ, ಜೂನ್ 3, 2022

ತಂದ ಪಾಪ ಕೊರೆದು ಪರಿಹಾರ

'ಹಲಸಿನ ಹಣ್ಣಿನ ಮೇಲೆ ಪ್ರೀತಿ ಜತೆಗೆ ಅಂಟು  ಮಯಣದ ಭೀತಿ "ಇದು ನನ್ನ ಗಾದೆ . ಮಿತ್ರರು ಪ್ರೀತಿಯಿಂದ ಒಂದು ಹಲಸಿನ ಹಣ್ಣು ಕೊಟ್ಟಿದ್ದರು . ನನ್ನ ಪತ್ನಿಯ ಒಂದು ಕಂಡೀಶನ್ ಇದೆ ;ಹಣ್ಣು ಎಷ್ಟು ಬೇಕಾದರೂ ಇರಲಿ ಅದನ್ನು ಕೊರೆಯಲು ಸೇರಬೇಕು .ನಾನೂ ಹೇಗೂ ವಿವಿದೋದ್ದೇಶ ಸಹಕಾರಿ ಸಂಘದ ಹಾಗೆ ಎಲ್ಲದಕ್ಕೂ ತಯಾರು . 

ಹಿಂದೆ ಹುಟ್ಟೂರಿನಲ್ಲಿ ಹಲಸಿನ ಹಣ್ಣು ಕೊರೆದು ಕಡಿಯಿಂದ ಬೇರೆ ಮಾಡಲು ಬೇಕಾದಷ್ಟು ಮಕ್ಕಳ ಸೈನ್ಯ ಇರುತ್ತಿತ್ತು . ಕೆಲವರು ತುಂಡು ಮಾಡಲು ,ಕೆಲವರು ಸ್ವಚ್ಚ ಮಾಡಲು ಮತ್ತು ಇನ್ನು ಒಬ್ಬಿಬ್ಬರು ಹಾಳೆಯಲ್ಲಿ ಅದನ್ನು ಬಾಳು ಅಥವಾ ಮಚ್ಚು ವಿನಿನಿಂದ ಕೊಚ್ಚಲು. ಇನ್ನು ಕೆಲವರು ಬಾಳೆ ಎಲೆಯಲ್ಲಿ ಹಣ್ಣು ಮತ್ತು ಅಕ್ಕಿ ಹಿಟ್ಟು ಕಲಸಿ ಮಡಿಸುವರು  .ಹಲಸಿನ ಹಣ್ಣಿನ ಸೀಸನ್ ನಲ್ಲಿ ಸೊಳ್ಳೆಗಳು ಕೂಡಾ ಇರುತ್ತಿದ್ದು ನಮ್ಮ ಕೈ ಮಯಣ ಮಾಯವಾಗುವ ವರೆಗೆ ಕಾದು ಬಂದು ಬೆನ್ನಿಗೆ ಕಚ್ಚುತ್ತಿದ್ದವು . ನಾವು ಮರು ಆಕ್ರಮಣ ಮಾಡುವಂತಿಲ್ಲ . ರಥ ಉರುಳಿದ ಕರ್ಣನ ಮೇಲೆ ಅರ್ಜುನ ಧಾಳಿ ಮಾಡಿದಂತೆ .ಇಲ್ಲಿ ಯುದ್ಧ ಧರ್ಮ ಇಲ್ಲ . ಯಾರಾದರೂ ಹಲಸಿನ ಹಣ್ಣಿಗೆ ಕೈ ಹಾಕದೇ ಇದ್ದವರು ಇದ್ದರೆ ಸೊಳ್ಳೆ ಹೊಡೆಯಲು ಹೇಳುತ್ತಿದ್ದು ಅವರು ಬೇಕೆಂದೇ ಜೋರಾಗಿ ಬಡಿಯುವರು . ಈಗ ಮೊಬೈಲ್ ರಿಂಗ್ ಆದರೆ ಮುಟ್ಟುವಂತಿಲ್ಲ 

ಹಲಸಿನ ಮಯಣವನ್ನು ಒಂದು ಕೋಲಿನ ತುದಿಯಲ್ಲಿ ಉಂಡೆ ಮಾಡಿ  ಬಡವರ ಫೆವಿಕಾಲ್ ನಂತೆ ಬಳಸುತ್ತಿದ್ದರು . ಬೇಳೆ ಮುಂದೆ ಖರ್ಚಿಗೆ ,ಬಾರ್ಟರ್ ವ್ಯವಹಾರಕ್ಕೆ ಶೇಖರಣೆ ,ರೆಚ್ಚೆ  ಹಟ್ಟಿಗೆ ಹಾಕಿದರೆ ದನಗಳು ಮೆಲ್ಲುತ್ತಿದ್ದವು . 

ಈಗ ಪೇಟೆಯಲ್ಲಿ ಈ ರೆಚ್ಛೆ ಇತ್ಯಾದಿ ಗಳನ್ನು  ಡಿಸ್ಪೋಸ್ ಮಾಡುವುದೇ ದೊಡ್ಡ ಚಿಂತೆ . 

ಇಷ್ಟೆಲ್ಲಾ ಪಟ್ಟ  ಕಷ್ಟ  ಅಟ್ಟಿನಳಗೆ ಯಲ್ಲಿ ಹಲಸಿನ ಹಣ್ಣಿನ ಕೊಟ್ಟಿಗೆ ಅಥವಾ ಕಡುಬು ಬೇಯುವಾಗ ಬರುವ ಪರಿಮಳ ದೊಡನೆ ಆವಿಯಾಗಿ ಹೋಗುವದು . 

 Why Jackfruit Might Save the World

ಒಂದು ವಿಚಾರ

ಜೀವಂತ ವ್ಯಕ್ತಿಯ ಅಂಗಾಂಶ ವನ್ನು   ಹೊರ ತೆಗೆದು ರೋಗ ಪತ್ತೆಗಾಗಿ ವೈಜ್ಞಾನಿಕ ಪರೀಕ್ಷಣೆಗೆ ಒಳ ಪಡಿಸುವುದನ್ನು ಬಯಾಪ್ಸಿ  ಎನ್ನುತ್ತಾರೆ . ಮರಣಾ ನಂತರ ಮಾಡುವುದಕ್ಕೆ ಅಟಾಪ್ಸಿ ಎನ್ನುವರು . ವೈದ್ಯಕೀಯ ಕ್ಷೇತ್ರದಲ್ಲಿ  ರೋಗಗಳ ಬಗ್ಗೆ ಅಧ್ಯಯನ ದಲ್ಲಿ ಅಟಾಪ್ಸಿ  ಮುಖ್ಯ ಸ್ಥಾನ ವಹಿಸಿದೆ .ನಮ್ಮ ದೇಶದಲ್ಲಿ ಮಾತ್ರ ಇದು ಇನ್ನು ವ್ಯಾಪಕವಾಗಿ ಇಲ್ಲ .ರೋಗಿಯ ಸಂಬಂದಿಕರ ವಿರೋಧ ಮತ್ತು ವೈದ್ಯಕೀಯ ರಂಗದವರ ಅನಾಸ್ಥೆ  ಎರಡೂ ಕಾರಣ . 

ಹಠಾತ್ ಯಾರು ಮರಣ ಹೊಂದಿದರೂ ಹೃದಯಾಘಾತ ಎಂದು ಕರೆದು ಕೈ ತೊಳೆದು ಬಿಡುತ್ತೇವೆ . ಆದರೆ ಸಂಭವಿಸುತ್ತಿರುವ ,ಅದೂ ಸಾಯುವ ವಯಸ್ಸಲ್ಲ ಎನ್ನುವ ಮರಣಗಳ ಕಾರಣ ವ್ಯಕ್ತಿಯ ಅಂತ್ಯ ಕ್ರಿಯೆಯೊಡನೆ ಅಂತ್ಯ ಕಾಣುವುದು ದುರ್ದೈವ್ಯ ,ಅಲ್ಲದೆ ವೈಜ್ಞಾನಿಕ ಪ್ರಗತಿಗೆ ಮಾರಕ . 

ರೋಗಿಯ ಸಂಬಂದಿಕರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ನುರಿತ ಮರಣೋತ್ತರ ಪರೀಕ್ಷಾ ತಜ್ಞರ ತಯಾರಿ ನಮ್ಮ ದೇಶದಲ್ಲಿ ಬಹಳ ಅವಶ್ಯ .

ಗುರುವಾರ, ಜೂನ್ 2, 2022

ಕೆರೆ ಕಟ್ಟೆ

 


ಫ್ರಾನ್ಸಿಸ್ ಬುಕನನ್ ಅವರ "ಮೈಸೂರು ,ಕೆನರಾ ಮತ್ತು ಮಲಬಾರ್ ಪ್ರಾಂತ್ಯಗಳ ಮೂಲಕ ಮದ್ರಾಸಿನಿಂದ ಒಂದು ಪಯಣ "ಸಂಪುಟ 1 ಓಡುತ್ತಿದ್ದೇನೆ . ಕೆನರಾ ವಿವರ ಇದರಲ್ಲಿ ಬರುವುದಿಲ್ಲ . ಶೈಲಜಾ ಕೆ ಪಿ ಚೆನ್ನಾಗಿ ಅನುವಾದ ಮಾಡಿರುವರು .

  ಬೆಂಗಳೂರು  ಬಳಿ ಬಿಡದಿ ಯ ವರ್ಣನೆ ಯ ಒಂದು ಪ್ಯಾರ ಹೀಗಿದೆ .

ಜಲಾಶಯಗಳು 

"ಇಲ್ಲಿ ಕೆಲವು ಚಿಕ್ಕ ಜಲಾಶಗಳಿವೆಯಾದರೂ ,ಅವುಗಳ್ಳಿನ ನೀರು ದನಕರುಗಳ ದಾಹ ತಣಿಸಲಿಕ್ಕೆ ಮಾತ್ರ ಸಾಲುವಷ್ಟಿದೆ. ಕರ್ನಾಟಕದ ಭಾಷೆಯಲ್ಲಿ ಇಂತಹ ಚಿಕ್ಕ ಜಲಾಶಯಗಳನ್ನು 'ಕಟ್ಟೆ' ಎನ್ನುತ್ತಾರೆ .ಜಮೀನುಗಳಿಗೆ ನೀರು ಹರಿಸುವ ದೊಡ್ಡ ಜಲಶಯಗಳಿಗೆ' ಕೆರೆ ' ಎಂಬ ಹೆಸರಿದೆ . "

                      ಇದನ್ನು ಓದಿದಾಗ ನನಗೆ ತೋರಿದ್ದು ನಮ್ಮ ಊರಿನ "ಕಟ್ಟ " ಎಂಬ ಕಿರು ಜಲಾಶಯಗಳು ಮತ್ತು ಈ" ಕಟ್ಟೆ "ಒಂದೇ ಇರ ಬಹುದು .


ಬುಧವಾರ, ಜೂನ್ 1, 2022

ನೋವನ್ನು ವೇದಾಂತ ಮಾಡುವ ಕೈವಲ್ಯ


ರೋಗಿಗಳ ಸಹನಾ ಶಕ್ತಿ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ಇರುತ್ತದೆ . ಅದು ಅವರವರ ಪ್ರಕೃತಿ ,ಇದಕ್ಕೆ ಪೂರಕವಾಗಿ ದೇಹದಲ್ಲಿ ಹಲವು ರಾಸರಾಯನಿಕಗಳು ಬೇರೆ ಬೇರೆ ಪ್ರಮಾಣದಲ್ಲಿ ಉತ್ಪತ್ತಿ ಆಗುವುದು ಒಂದು ಕಾರಣ .ಕೆಲವರು ಸಣ್ಣ ನೋವು ಜ್ವರಕ್ಕೂ ಹೊಡಚಾಡಿದರೆ ಇನ್ನು ಕೆಲವರು ಹೆರಿಗೆ ನೋವು ಸಹಿತ ಭಾರೀ ನೋವನ್ನೂ ಸ್ಥಿತಪ್ರಜ್ಞರಾಗಿ ಮೌನವಾಗಿ ಸಹಿಸುವರು . 

ಜೀವವನದಲ್ಲಿ  ಎದುರಿಸುವ ಸಮಸ್ಯೆಗಳೂ ಹಾಗೆಯೇ . ಒಳ್ಳೆಯ ಸಾಹಿತ್ಯ ಮನುಷ್ಯನಿಗೆ ಪ್ರಕೃತಿ ದತ್ತವಲ್ಲದ ದಾರ್ಶನಿಕ ಮನಸು ಕೊಡುವುದರಿಂದ ಇಂತಹ ಕಷ್ಟಗಳ  ತೀವ್ರತೆ ಸಾಪೇಕ್ಷವಾಗಿ ಕಡಿಮೆ ಆಗುವುದು .ಸಂಗೀತ ಕಲೆ ಕೂಡಾ ಹಾಗೆಯೆ . 

 ಹಳೆಯ ಮಲಯಾಳಂ ಸಿನೆಮಾ' ಸರ್ಗಮ್ ' ನಲ್ಲಿ  ಕವಿ ಯೂಸುಫ್ ಅಲಿ ಕೆಚೇರಿ ಬರೆದ ಸಂಗೀತಮೇ ಅಮರ ಸಲ್ಲಾಪಮೆ ಎಂಬ  ಪ್ರಸಿದ್ಧ ಹಾಡು ಇದೆ . ಇದರ ಲ್ಲಿ  ವೇದನೆಯನ್ನು ಕೂಡಾ ವೇದಾಂತವನ್ನಾಗಿಸುವ ನಾದಾ ನುಸಂಧಾನ ಕೈವಲ್ಯವೇ ಸಂಗೀತ ಎಂದು ಕವಿ ವರ್ಣಿಸುತ್ತಾನೆ .ಅದೇ ಶಕ್ತಿ ಸಾಹಿತ್ಯ ಮತ್ತು ಕಲೆಗೂ ಇದೆ ಎಂಬುದು ಬಲ್ಲವರ ಅನುಭವ .

 https://youtu.be/nh1D6PFl8pI