ಬೆಂಬಲಿಗರು

ಮಂಗಳವಾರ, ಮೇ 31, 2022

ನಮ್ಮ ನಾಯಿ

 


 ಚಿತ್ರದಲ್ಲಿ ಕಾಣುವುದು ನಮ್ಮ ಬೀದಿ ನಾಯಿ ;ನನ್ನ ಮನೆಯವರು ಅದಕ್ಕೆ ಪ್ಯಾಚಿ ಎಂದು ಕರೆಯುವರು .ಅದರ ಸಂಗಾತಿ ಒಂದು ಇದೆ .ಅದರ ಹೆಸರು ಬೊಳ್ಳಿ. ಬೆಳಿಗ್ಗೆ  ಬ್ರೇಕ್ ಫಾಸ್ಟ್ ಮತ್ತು ಸಂಜೆ ಟಿಫಿನ್  ನಮ್ಮ ಮನೆಯಲ್ಲಿ . ಮಿಕ್ಕವು ಬೀದಿಯ ಬೇರೆ ಮನೆಗಳಲ್ಲಿ . 

ಪುಟಿನ್ ನಂತೆ ಕಂಡ ಕಂಡವರನ್ನೆಲ್ಲಾ  ವಿನಾ ಕಾರಣ ಆಕ್ರಮಿಸದೆ ತಮ್ಮ ಸುದ್ದಿಗೆ ಬಂದವರನ್ನು ಮಾತ್ರ ಉಕ್ರೇನ್ ನವರಂತೆ ಬಿಡುವುದಿಲ್ಲ .  ಪರಕೀಯರು (ಬಿಕ್ಷುಕರು ,ನೆಂಟರು ಇತ್ಯಾದಿ )ಮತ್ತು  ಸ್ವಕೀಯರು ಇಬ್ಬರಿಗೂ ಬಾಲ ಅಲ್ಲಾಡಿಸಿ ಸ್ವಾಗತಿಸುವುದು . ಯಾರೂ "ಯಾನತ್ತ ನಾಯಿ ಈ ದಾಯೆ ಕೊರೆಪ್ಪುನೆ ?"ಎಂದು ಪರಿಚಯ ಹೇಳುವ ಅವಶ್ಯಕತೆ ಇಲ್ಲ .ಹಾಲಿನವರು ,ಮೀನಿನವರು , ಗುಜರಿಯವರು  ಇತ್ಯಾದಿ  ಬರುವಾಗಲೂ ಸ್ವಾಗತಿಸುವ  ಇದು ಮತ್ತು ಇದರ  ಮಿತ್ರರು  ಪೇಪರ್ ನ  ಅಣ್ಣ ಬಂದಾಗ ಮಾತ್ರ ಅವರ ಬೈಕನ್ನು ಅಟ್ಟಿಸಿ ಕೊಂಡು ಹೋಗುವವು .ಅದೇ ಪೇಪರ್ ಅಣ್ಣ  ಮಾಸಾಂತ್ಯ  ಬಿಲ್ ಸಂಗ್ರಹಿಸಲು ಬಂದಾಗ ಸುದ್ದಿ ಇಲ್ಲ .

ಇದು ಯಾಕೆ ಹೀಗೆ ?ಎಂದು ತಲೆ ಕೆರೆದು ಕೊಂಡರೂ ಅರ್ಥವಾಗಿರಲ್ಲ . ಹಿಂದೆ ಒಬ್ಬರಿಗೆ ದಿನಾಲೂ ನಾಯಿ  ನಿದ್ರೆಯಯಲ್ಲಿ ಮೈಮೇಲೆ  ಹಾರಿ ಕಚ್ಚಿದಂತೆ  ಕನಸು  ಬೀಳುವ ಕಾರಣ  ತಿಳಿಯುವುದಕ್ಕಾಗಿ  ಬಲ್ಮೆ ಇಟ್ಟಾಗ  ಸಿಂಡಿಕೇಟ್ ಬ್ಯಾಂಕ್ ನಿಂದ ಕೊಂಡ  ಸಾಲ  ಮರು ಪಾವತಿ ಮಾಡದೇ ಇರುವುದು  ತಿಳಿದು ಬಂತು ಎಂಬ ಕತೆ ಕೇಳಿದ್ದೀರಿ .(ಆ ಬ್ಯಾಂಕ್ ನ ಲೋಗೋ ದಲ್ಲಿ ನಾಯಿ ಚಿತ್ರ ಇತ್ತು ).

ಕೊನೆಗೆ ಅರ್ಥವಾಯಿತು .ಪತ್ರಿಕೆ ಒಳ್ಳೆಯದಿದ್ದರೂ ಇತ್ತೀಚೆಗೆ ದಿನಾಲೂ ಕೆಟ್ಟ ಸುದ್ದಿಗಳೇ ತುಂಬಿರುವ ಕಾರಣ ಅದನ್ನು ಮುಂಜಾನೆ ಓದಿದವರ ತಲೆ ಹಾಳಾಗುವುದು .ಮೂಡ್ ನಷ್ಟವಾಗಿ  ಕೆಲವೊಮ್ಮೆ ನಾಯಿಯ ಮೇಲೆ ವಿನಾ ಕಾರಣ ಮಂದಿ ರೇಗುವರಲ್ಲದೆ ನಾಸ್ಟಾ   ಕೂಡಾ ಕಡಿಮೆ ಹಾಕುವರು .ನಾಯಿ ತುಂಬಾ ಸೂಕ್ಷ್ಮ ಗ್ರಾಹಿ ತಾನೇ ?

ಸೋಮವಾರ, ಮೇ 30, 2022

ಸಜ್ಜನರ ಸಂಗದಲಿ

ನಿನ್ನೆ ಸಂಜೆ  "ಪಂಚವಟಿ " ಯಲ್ಲಿ ವಾಸವಿರುವ ಹಿರಿಯರು ಶ್ರೀ ಬಲ್ನಾಡು ಸುಬ್ಬಣ್ಣ ಭಟ್ ಅವರ ಜತೆ ಕಳೆದು ನಾವು ಪುನರ್ಯವ್ವನ ಪಡೆದ ಅನುಭವ .ಸಜ್ಜನ  ವಿದ್ವದ್ಜನ ರೊಡನೆ  ಕಾಲ ಕಳೆಯುವುದೇ ಒಂದು ಟಾನಿಕ್ . 

ಈ ಹಿರಿಯರ ಬಗ್ಗೆ ಹಿಂದೆಯೇ ಬರೆದಿದ್ದೇನೆ .ಎಸ್ ಬಿ ಹೇಟ್ ಎಂಬ ಕಾವ್ಯನಾಮದಿಂದ  ತ್ರಿಪದಿ ಚೌಪದಿಗಳನ್ನು ರಚಿಸಿರುತ್ತಾರೆ  . ಹಿಂದೆ ಶಿಂಗಣ್ಣ ರಾಮಕೃಷ್ಣ ಶಾಸ್ತ್ರೀ ಅವರ ಇಂದ್ರ ಧನುಸ್ ,ಜಿ ನಾರಾಯಣ ಅವರ ವಿನೋದ ಪತ್ರಿಕೆ ಗಳಲ್ಲಿ ಇವರ ಲೇಖನ ಪದ್ಯ ಗಳು ಪ್ರಕಟವಾಗುತ್ತಿದ್ದವು .  ಗಣಿತಾಸಕ್ತಿ ಮತ್ತು ಹಾಸ್ಯ ಪ್ರಜ್ಞೆ ಇವರ ವೈಶಿಷ್ಟ್ಯ . 

ಅವರ ಪುತ್ರ ಶ್ರೀ ಪ್ರಸನ್ನ ಮತ್ತು ಸೊಸೆ ತ್ರಿವೇಣಿ ಯವರ ಆತಿಥ್ಯ .ಹೊಟ್ಟೆ ಮತ್ತು ಮನಸು ಎರಡೂ ತಂಪಾಯಿತು .

                                             



 


ಭಾನುವಾರ, ಮೇ 29, 2022

ಪುಂಡಿಕಾಯಿ ನಾರಾಯಣ ಭಟ್


 

                              No photo description available.                                                                                                         ನಮ್ಮಲ್ಲಿ ಕೆಲವು ಸಾಹಿತ್ಯ ಕಲಾ ಪ್ರೇಮಿ ಕುಟುಂಬಗಳು ಇವೆ . ಉದಾಹರಣೆಗೆ  ವಿಟ್ಲ ಸೀಮೆಯಲ್ಲಿ  ಮುಳಿಯ ಎಂಬ ಊರು ಇದೆ . ಅನ್ಯಥಾ ಸಾಧಿಸದಿದ್ದರೆ(Unless otherwise proved ) ಇಲ್ಲಿ ಎಲ್ಲರೂ ಸಾಹಿತ್ಯ ಕಲಾ ಪ್ರಿಯರು ಮತ್ತು ಪೋಷಕರು . ಮುಳಿಯ ತಿಮ್ಮಪ್ಪಯ್ಯ ,ಮುಳಿಯ ಮಹಾಬಲ ಭಟ್(ಮುಳಿಯ ತಿಮ್ಮಪ್ಪಯ್ಯನವರ ಪುತ್ರ ವಕೀಲ ,ಬರಹಗಾರ ಯಕ್ಷಗಾನ ಅರ್ಥಧಾರಿ ) ,ಗಂಗಾ  ಪಾದೇಕಲ್(ತವರು ಮನೆ ಮುಳಿಯ ) ಇವರೆಲ್ಲಾ ಪ್ರಸಿದ್ಧ ಬರಹಗಾರರು . ಮುಳಿಯದ ಯಾವುದೇ ಮನೆಗೆ ಹೋದರೂ ಅಲ್ಲಿ ಓದುಗರು ಕಲಾ ರಸಿಕರು  ಸಿಗುವರು .

ಅದೇ ರೀತಿ ವಿಟ್ಲ ಸೀಮೆಯ  ಪುಂಡಿಕಾಯಿ ಕೋಡ ಪದವು ಬೈಲಿನವರು ಹೆಚ್ಚಿನವರು ರಸಿಕರು .ಕಲೆ ಸಾಹಿತ್ಯ ಆಸ್ವಾದಕರು ಮತ್ತು ಪೋಷಕರು . 

ಇದರಲ್ಲಿ ಓರ್ವರು ಪುಂಡಿಕಾಯಿ ನಾರಾಯಣ ಭಟ್ ಅವರು .ಇವರು ಹಿರಿಯ ವಕೀಲರು . ಸಾಹಿತ್ಯ ,ಯಕ್ಷಗಾನ ಮತ್ತು ಒಳ್ಳೆಯ  ಸಿನೆಮಾ ಗಳನ್ನು ಅರಸಿ ಆಸ್ವಾದಿಸುವರು . ಅವರ ಸಹೋದರಿ  ಮತ್ತು ನನ್ನ ಹಿರಿಯ  ಅಕ್ಕನನ್ನು ಒಂದೇ ಮ ನೆಗೆ ಮದುವೆ ಮಾಡಿ ಕೊಟ್ಟಿದ್ದು ನಾವು ಬಂಧುಗಳು ಕೂಡಾ .ಆದರೆ ನಾನು ಅವರಿಗಿಂತ ವಯಸಿನಲ್ಲಿ ಬಹಳ ಕಿರಿಯ ನಾದುದರಿಂದ  ಅಲ್ಲಿ ಅವರೊಡನೆ ಮಾತನಾಡುವ ಅವಕಾಶ ಸಿಕ್ಕಿದ್ದು ಕಡಿಮೆ . 

ನನ್ನ ಇತ್ತೀಚೆಗಿನ ಬರವಣಿಗೆಗೆ ಅವರೂ ಅವರ ಶ್ರೀಮತಿ  ಸವಿತಾ ಅಕ್ಕ ನವರೂ ತುಂಬು ಹೃದಯದಿಂದ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ . ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕ್ಕೆ  ಭಾರೀ ಮಳೆ ಇದ್ದರೂ ಬಂದು ಹರಸಿದ್ದಾರೆ . 

ಇವರ ಸಹೋದರ ಪ್ರಸಿದ್ಧ ಇತಿಹಾಸ ತಜ್ಞ ಲೇಖಕ  ಪುಂಡಿಕಾಯಿ  ಗಣಪಯ್ಯ ಭಟ್ .ಮಗ ಡಾ ರಾಮರಾಜ್  ಶಸ್ತ್ರ ಚಿಕಿತ್ಸಾ ತಜ್ಞ ;ಜತೆಗೆ  ಹಿರಿಯರ ಹವ್ಯಾಸ ಮೈಗೂಡಿಸಿ ಕೊಂಡವರು . ಇಷ್ಟೆಲ್ಲಾ ಬರೆಯಲು  ಕಾರಣ ಮೊನ್ನೆ ಈ ಹಿರಿಯ ವಕೀಲರು ತಮ್ಮೆಲ್ಲಾ ಕಾರ್ಯ ಬಾಹುಳ್ಯದ ನಡುವೆಯೂ ಬರೆದ ಒಂದು ಪತ್ರ . 

ಪುಂಡಿಕಾಯಿ ನಾರಾಯಣ ಭಟ್ 

ಹಿರಿಯ ವಕೀಲರು  ಬಿ ಸಿ ರೋಡ್ 

ರಿಗೆ ,

   ಡಾ ಎ ಪಿ ಭಟ್ 

                ನಿಮ್ಮ' ವೈದ್ಯನ ವಗೈರೆಗಳು "ಪುಸ್ತಕದಲ್ಲಿ ಪೂರ್ವ ಸೂರಿಗಳೂ ಮಹಾನ್ ವಕೀಲರೂ ಆದ ಸದಾಶಿವ ರಾವ್ ,ಕೆ ಆರ್ ಕಾರಂತ್ ಇತ್ಯಾದಿ ವಕೀಲರ ಹೆಸರು ಓದುವಾಗ ರೋಮಾಂಚನ ವಾಯಿತು . ಅವು  ವಕಾಲತ್ತಿನ ವೈಭವದ ದಿನಗಳು .ಈಗ  ಕಾಣೆಯಾಗಿದೆ ಎನ್ನಲು ಬೇಸರವಾಗುತ್ತಿದೆ .ಹಾಗೇ  ಡಾ ವೆಂಕಟ್ ರಾವ್ ,ಡಾ ಚಾರಿ ,ಡಾ ಸಿ ಆರ್ ಬಲ್ಲಾಳ್ ದಂತಕತೆಗಳು ಆದವರು . 

 ಪುಸ್ತಕದಲ್ಲಿ ಕೈಪೇತು (Caveat )ಎಂದಿದೆ .ಅದು Caveat  ಅಲ್ಲ .ಕೈಪೇತು ಎಂದರೆ Plaint (ವಾದ ಪತ್ರ ).ದಾವಾ ಸಲ್ಲಿಸುವ ಮೊದಲಿಗೆ ತನ್ನ ಸಮಸ್ಯೆಗಳನ್ನು ಕೋರ್ಟಿಗೆ ಸಲ್ಲಿಸುವ ಪ್ರಮಾಣ ಪತ್ರ .Caveat  ಪದ ಹೆಚ್ಚು ಚಾಲ್ತಿಗೆ ಬಂದದ್ದು 1976ರ C.P.Cತಿದ್ದುಪಡಿಯ ನಂತರ . 

ನಿಮ್ಮ ಗಮನಕ್ಕೆ ಈ ಪತ್ರ 

ಬಿ ಸಿ ರೋಡ್                                         ಇಂತೀ ನಮಸ್ಕಾರ 

                                                        ( ಸಹಿ ) ಪುಂಡಿಕಾಯಿ ನಾರಾಯಣ ಭಟ್

25 .5.2022                                                                             

    ಹಿರಿಯರ ಆಶಯ setting things right.ಅವರಿಗೆ ನಾನು ಋಣಿ .

ಕೈಫಿಯತ್ತು  ಪಾರ್ಸಿ ಭಾಷೆಯ ಮೂಲದಿಂದ ಬಂದದ್ದು . ಈ ಮಾತಿಗೆ ಸಮಾಚಾರ ಎಂಬುದು ಸಾಮಾನ್ಯವಾದ ಅರ್ಥ. ಇಂದೂ ನ್ಯಾಯಸ್ಥಾನಗಳಲ್ಲಿ ಸಾಕ್ಷಿ ನುಡಿಯುವವರ ಕಡೆಯಿಂದ ಪ್ರಮಾಣ ಮಾಡಿಸಿ ಪಡೆಯುವ ಹೇಳಿಕೆಗಳನ್ನು ಕೈಫೀತು ಅನ್ನುತ್ತಾರೆ. ಈ ಮಾತು ಬಿಜಾಪುರ ದ ಅದಿಲ್ ಶಾಹಿ ಗಳ ಕಾಲದಲ್ಲಿ ಕನ್ನಡ ಭಾಷೆಗೆ ಬಂದು ಸೇರಿ  ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಕನ್ನಡ ನಾಡಿನಲ್ಲೆಲ್ಲ ವಿಶೇಷವಾಗಿ ಪ್ರಚುರಗೊಂಡಿತು. ಅಂದಿಗಾಗಲೇ ಈ ಮಾತಿನ ಅರ್ಥ ವಿಶಾಲಗೊಂಡು ಚಾರಿತ್ರಿಕ ನಿರೂಪಣೆಯೆಂಬ ಬಣ್ಣವೂ ಬಂದಿತು.ಇದನ್ನೇ ನನ್ನ ಅಜ್ಜ ಆಗಾಗ ಕೈಪೇತು (ಪ್ರಮಾಣ ಪತ್ರ )ಎನ್ನುತ್ತಿದ್ದಿರ ಬೇಕು .


ಶನಿವಾರ, ಮೇ 28, 2022

ಸಾಹಿತ್ಯ (ಪುಸ್ತಕ )ಪ್ರೇಮಿ ಅಬೂಬಕರ್

                                      

                                           

      



ಇಲ್ಲಿಯ ಪುಸ್ತಕ ವೈವಿದ್ಯ ನೋಡಿ ಕಾರಂತರ  ಮರಳಿ ಮಣ್ಣಿಗೆ ,ಗೋಕಾಕರ ಸಮರಸವೇ ಜೀವನ ,ಬೈರಪ್ಪನವರ ವಂಶ ವೃಕ್ಷ ,ಚಿತ್ತಾಲರ  ಪುರುಷೋತ್ತಮ ,ಕುವೆಂಪು ಅವರ ಕಾನೂರು ಹೆಗ್ಗಡಿತಿ ;ನಾವು ಸಂಗ್ರಹಾರ್ಹ ಕೃತಿ ಗಳು ಎಂದು ಕರೆಯುವ ಪುಸ್ತಕಗಳು ಇರುವ ಇದು ಯಾವುದೋ ಕನ್ನಡ ಸಾಹಿತಿ ಪ್ರಾಧ್ಯಾಪಕರ  ಸಂಗ್ರಹ ಎಂದು ನೀವು ಊಹಿಸುತ್ತಿರ ಬೇಕು .

ಇದು ಕಬಕ ನಿವಾಸಿ ಅಬೂಬಕರ್ ಅವರ ಮನೆ ಲೈಬ್ರರಿ ಸಂಗ್ರಹ . ಇವರನ್ನು ನಾನು ವರ್ಷಗಳಿಂದ ಬಲ್ಲೆ .ಸಾರಿಗೆ ಇಲಾಖೆ ಕೆಲಸಗಳಲ್ಲಿ ಜನರಿಗೆ ಸಹಾಯ ವಾಗುತ್ತಾ ಇದ್ದವರು . ನನ್ನ ಬಳಿಗೆ ಸಣ್ಣ ಪುಟ್ಟ ತೊಂದರೆಗೆ ಔಷಧೋಪಚಾರಕ್ಕೂ ಬಂದಿದ್ದರು.ಶ್ವೇತ ವಸನ ದಾರಿ ,ಸರಳ ವ್ಯಕ್ತಿತ್ವ . ಆಸ್ಪತ್ರೆಗೆ ಬಂದರೆ  ಎಲ್ಲರಂತೆ ಸರತಿಯಲ್ಲಿ ಬರುವರು .

ಆದರೆ ಅವರ ಪುಸ್ತಕ ಪ್ರೀತಿಯ ವಾಸನೆ ನನಗೆ ಸಿಕ್ಕಿದ್ದು ಇತ್ತೀಚೆಗೆ . ಪುಸ್ತಕದ ಅಂಗಡಿಯಿಂದ ನನ್ನ ಕೃತಿ ಯನ್ನು ಖರೀದಿಸಿ ಅವರು ಮತ್ತು ಮನೆಯವರು ಎಲ್ಲರೂ ಓದಿ ಆನಂದಿಸಿದ ವಿವರ ಸಿಕ್ಕಿದಾಗ ನನಗೆ ಅಚ್ಚರಿ ;ನನ್ನ ಪರಿಚಯ ಇದ್ದ ಕಾರಣ ಇರಬೇಕು ಎಂದು ಕೊಂಡು ಅನ್ವೇಷಣೆ ಮಾಡಲು ಇವರ ಬಳಿ ಓದುಗರಿಗೆ  ಈರ್ಷೆಯಾಗುವ ದೊಡ್ಡ ಸಂಗ್ರಹವೇ ಇದೆ ಎಂಬ ವಿಚಾರ ತಿಳಿದು ಬಹಳ ಸಂತೋಷ ವಾಗಿ  ಅದನ್ನು ನಿಮ್ಮೊಡನೆ ಹಂಚಿ ಕೊಳ್ಳುತ್ತಿದ್ದೇನೆ . 

ಇಳಿ ವಯಸ್ಸಿನಲ್ಲಿ ಇರುವ ಅವರಿಗೆ ಒಳ್ಳೆಯ ಆಯುರಾರೋಗ್ಯ ಹಾರೈಸುವಾ ಮತ್ತು ಅವರ ಸಂಪತ್  ಭಂಡಾರ ಬೆಳೆಯಲಿ .

ಬುಧವಾರ, ಮೇ 25, 2022

ಪಂಜೆ ಓದು

 ಪಂಜೆಯವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೈಯಾಡಿಸಿದವರು . ಸ್ವಯಂ ಅಧ್ಯಾಪಕ ,ಇನ್ಸ್ಪೆಕ್ಟರ್ ಆಗಿದ್ದ ಅವರ ಸಬ್ ಅಸಿಸ್ಟಂಟನ ಸುಳ್ಳು ಡೈರಿಯಿಂದ  ತೆಳು ಹಾಸ್ಯ ಲೇಪಿತ ,ಆದರೆ ಆಗಿನ ಅಧ್ಯಾಪಕರ ಬಡತನ ಮತ್ತು ಪ್ರಾಮಾಣಿಕತೆಗೆ ಹಿಡಿದ ಕೈ ಗನ್ನಡಿ.  ಶ್ರೀ ನಿವಾಸ ಮೂರ್ತಿಯವರ "ರಂಗಣ್ಣನವರ ಕನಸಿನ ದಿನಗಳು " ಕೂಡಾ ಇದೇ ಆಶಯ ಮತ್ತು ವೈಖರಿಯ ಕೃತಿ . (ಇದನ್ನು ಈಗ  ಹಾಸ್ಯ ಕೃತಿ ಎಂಬ ಶೀರ್ಷಿಕೆಯಲ್ಲಿ  ಪ್ರಕಟಿಸುತ್ತಿರುವುದು ಸ್ವಲ್ಪ ಬೇಸರದ ಸಂಗತಿ) . ಪಂಜೆ ಅವರು ಅವರು ಸತ್ಯ ದೀಪಿಕಾ ಎಂಬ ಪತ್ರಿಕೆಯಲ್ಲಿ ಹರಟೆಮಲ್ಲ ,ವಿಕಟ ಮಲ್ಲ ಇತ್ಯಾದಿ ಗುಪ್ತನಾಮದಿಂದ ಅಂಕಣ ಬರೆಯುತ್ತಿದ್ದರು . 

  ಹರಟೆ ಮಲ್ಲನ ಉವಾಚ 

ಮಾಸ್ತರನು  ಪಾಸು ಮಾಡಬೇಕು ;ಕಾನ್ಸ್ಟೇಬಲನು ತಪಾಸು ಮಾಡ ಬೇಕು .ಪೋಲೀಸಿನವನಿಗೆ ಕೈತುಂಬಾ ಗಂಟಾದರೂ ಉಂಟು .ಉಪಾಧ್ಯಾಯನಿಗೆ ಬೆರಳು ಗಂಟುಗಳಲ್ಲದೆ ಮತ್ತೇನೂ ಇಲ್ಲ . 

ವಿಕಟ ಮಲ್ಲನ ಉವಾಚ 

ಕಳೆದ ವರ್ಷ ಮಾತೃ ಕ್ಲೇಶ (ಮೆಟ್ರಿಕ್ಯುಲೇಷನ್)ಯಜ್ಞದಲ್ಲಿ ಅನೇಕಾನೇಕ ಹುಡುಗರನ್ನು ಆಹುತಿಯಾಗಿ ಕೊಟ್ಟರಂತೆ .ಇಂಥವರ ಪಿತೃಗಳಿಗೆಲ್ಲಾ  ಮನೋಕ್ಲೇಶ .ದೊಡ್ಡ ಉಪಾಧ್ಯಾಯರಿಗೆ ಪಶ್ಚಾತ್ತಾಪ .ಸಣ್ಣ ಉಪಾಧ್ಯಾಯರಿಗೆ ಸಂತಾಪ .ಹುಡುಗರ ಪ್ರಲಾಪ . 

 

ಶ್

ಮಂಗಳವಾರ, ಮೇ 24, 2022

"ಧೀ" ಗುಜ್ಜೆ

                                             ದೀವಿ ಹಲಸನ್ನು ಬೆಳೆಯುವುದು ಹೇಗೆ?  

ಇಂದು ಮುಂಜಾನೆ ಮಿತ್ರ ಮಣಿಲಾ ಸುಬ್ಬಣ್ಣ ಶಾಸ್ತ್ರಿಗಳು ಪ್ರೀತಿಯಿಂದ  ದೀಗುಜ್ಜೆ ಮತ್ತು  ಕಬ್ಬು ತಂದು ಕೊಟ್ಟಿದ್ದರು . ಮೊದಲನೆಯದು ಪದಾರ್ಥ ಮಾಡಲು ,ಇನ್ನೊಂದು ನಮ್ಮ ಹಿತ್ತಿಲಲ್ಲಿ ನೆಡಲು.ಅವರು ಆಗಾಗ  ಅವರಲ್ಲಿ ಬೆಳೆದುದನ್ನು  ಹಂಚಿ ಕೊಂಡು ನನ್ನನ್ನು ಚಿರ ಋಣಿ ಯಾಗಿ ಮಾಡಿದ್ದಾರೆ.

ದೀಗುಜ್ಜೆ ಕೊಟ್ಟಾಗ  ನಾನು ಬೇಡ ಎನ್ನುವುದಿಲ್ಲ . ಅದು ಧೀ ಶಕ್ತಿ ಹೆಚ್ಚಿಸುವ ಕಾರಣ ಅದಕ್ಕೆ ಆ ಹೆಸರು ಬಂದಿರಬೇಕು . ಈಗ ನೀವು ಎಲ್ಲಿ ಮದುವೆ  ಇತ್ಯಾದಿ ಸಮಾರಂಭ ಗಳಿಗೆ ಹೋದರೂ ಅದರದ್ದೇ ಸಂಭಾರು . ಮನೆಗಳಲ್ಲಿ ಸಂಜೆ ಮಳೆ ಬರುವಾಗ  ತಿನ್ನಲು ಅದರ ಪೋಡಿ ಮತ್ತು  ಚಿಪ್ಸ್ . ಎಳೆ ದೀಗುಜ್ಜೆ  ಪಲ್ಯ ಕೂಡ ತಿನ್ನಲು ರುಚಿ . 

ದೀಗುಜ್ಜೆ ಸಾಂಭಾರು ಮಿಕ್ಕರೆ ಮರುದಿನ  ಮುಂಜಾನೆ  ಆರಿಸಿ ತಿನ್ನಲು  ಬಹಳ ರುಚಿ . 

ಮಾರುತಿ ಪಿತನಿಗೂ ದೀಗುಜ್ಜೆ ಗೂ ನಂಟು ಇರುವುದರಿಂದ ಕೆಲವರು ಇದರ ಬಳಿ ಹೋಗರು.ಕಾರಣ  ಇದರಲ್ಲಿ ಬಟಾಟೆಯಂತೆ  ಶರ್ಕರ ಪಿಸ್ಟ ಜಾಸ್ತಿ ಇದ್ದು ನಮ್ಮ ಕರುಳ  ಬಾಕ್ಟೀರಿಯಾ ಗಳು ಅದನ್ನು ಒಡೆದು  ಅನಿಲ ಉತ್ಪತ್ತಿ ಮಾಡುವವು. ನಾವು ಇಂಗು ,ಓಮ ಇತ್ಯಾದಿ ಸೇರಿಸಿದರೆ  ಪಚನ ಸ್ರಾವಗಳು ಅಧಿಕ ಉತ್ಪತ್ತಿ ಆಗಿ  ಬಾಕ್ಟೀರಿಯಾ ತಲುಪುವ ಮೊದಲೇ ಅವು ಜೀರ್ಣ ಆಗಿರುವವು .

ಭಾನುವಾರ, ಮೇ 22, 2022

ತವರು ಭೇಟಿ

 ಮೊನ್ನೆ ಶನಿವಾರ ರಾತ್ರಿ ಮಡಿಯಾಲ  ಗೋಪಾಲಕೃಷ್ಣ ದೇವಸ್ಥಾನ ಸಂಭಾಂಗಣ ಕ್ಕೆ ಗೆಳೆಯ ವರದ ರಾಜ ಚಂದ್ರಗಿರಿ ಜತೆ ಹೋಗಿದ್ದೆ . ಸಂಧರ್ಭ ಮಡಿಯಾಲ  ಬಾಲಕೃಷ್ಣ ರಾವ್ ಅವರ ಮಗ ಅತುಲ್ ಅವರ ವಿವಾಹ ವಧೂ ಗೃಹ ಪ್ರವೇಶ ಮುನ್ನಾ ದಿನ . ಮದುವೆ ಇತ್ಯಾದಿ ಸಮಾರಂಭಗಳಿಗೆ ಅದೇ ದಿನ ಊಟದ ಸಮಯಕ್ಕೆ ಸರಿಯಾಗಿ ಹೋದರೆ ಯಾರನ್ನೂ ಮಾತನಾಡಿಸಲು ಆಗುವುದಿಲ್ಲ ;ಬರೀ ಯಾಂತ್ರಿಕ ಎನಿಸುತ್ತದೆ . ಹಿಂದಿನ ದಿನ ಹೋದರೆ ನೆಂಟರಿಷ್ಟರ ಜತೆ ಬೆರೆತು ಸಂತೋಷ ಆಗುವುದು . 

           ಬಾಲಕೃಷ್ಣ ರಾವ್ ಅವರ ಮನೆ ಕಿರಿಂಚಿ ಮೂಲೆ . ಅವರ ತಂದೆ ಶ್ರೀನಿವಾಸ ರಾವ್ ಮತ್ತು ಅಣ್ಣ ಶ್ರೀಪತಿ ರಾವ್ ನನ್ನ ಅಧ್ಯಾಪಕರು .ಬಾಲಕೃಷ್ಣ ರಾಯರಿಗೂ . ಬಾಲಕೃಷ್ಣ ಜೂನಿಯರ್ ಕಾಲೇಜು ಗಳಲ್ಲಿ ಅಧ್ಯಾಪನ ನಡೆಸಿ ,ಬೆಟ್ಟಂಪಾಡಿ ಜೂನಿಯರ್ ಕಾಲೇಜು ಪ್ರಿನ್ಸಿಪಲ್ ಆಗಿ ನಿವೃತ್ತಿ ಹೊಂದಿದವರು . ಅವರು  ಶಾಲೆಯಲ್ಲಿ ನನ್ನಿಂದ ಒಂದು ವರ್ಷ ಜೂನಿಯರ್ .ನಾವೆಲ್ಲ ಜತೆಗೆ ನಡೆದು ಕೊಂಡು ಶಾಲೆಗೆ ಹೋದವರು .ಅವರ ಅಣ್ಣ ಸುರೇಶ ನನ್ನ ಒಂದು ವರ್ಷ ಸೀನಿಯರ್ . 

  ನಾನು ಸ್ವಲ್ಪ ಬೇಗ ಪುತ್ತೂರಿನಿಂದ ತೆರಳಿ ಚಂದ್ರಗಿರಿ ಅವರಿಗೆ ನಮ್ಮ ಊರು ಸ್ವಲ್ಪ ದರ್ಶನ ಮಾಡಿಸ ಬೇಕು ಎಂದಿದ್ದೆ .ಆದರೆ ಅವರು ತಮ್ಮ ಕೆಲಸದಲ್ಲಿ ತುಂಬಾ ಬ್ಯುಸಿ ಯಾಗಿದ್ದುದರಿಂದ ಹೊರಡುವಾಗಲೇ ರಾತ್ರಿ ಆಗಿತ್ತು . ವಿಟ್ಲ ,ಪಡಿಬಾಗಿಲು ಮೂಲಕ ಅಳಿಕೆ ಗೆ ಹೋದೆವು . ಅಳಿಕೆ ಜೂನಿಯರ್ ಕಾಲೇಜು ಇರುವ ಜಾಗಕ್ಕೆ ಹಿಂದೆ ಓಟೆ ತಿಮಾರು ಎಂದು ಕರೆಯಯುತ್ತಿದ್ದರು . ಈಗ ಪ್ರೈಮರಿ ಶಾಲೆ ಇರುವ ಸ್ಥಳ ಅಳಿಕೆ . ಹಿಂದೆ  ಇಲ್ಲಿ ಕಾಲು ದಾರಿ ಮಾತ್ರ ಇದ್ದು ನಾವು  ಕಾಸರಗೋಡು ಕಡೆ ಬಸ್ ಹಿಡಿಯಲು ನನ್ನ ಹುಟ್ಟೂರು ಅಂಗ್ರಿ ಯಿಂದ ಮೂರು ಮೈಲು ನಡೆದು ಪಡಿ ಬಾಗಿಲಿಗೆ ಬರುತ್ತಿದ್ದೆವು . 

ಅಳಿಕೆ ಪೇಟೆಗೆ ತಾಗಿ ಪಶ್ಚಿಮಕ್ಕೆ  ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನ ಇದೆ . ಅಲ್ಲಿಂದ ಪಶ್ಚಿಮಕ್ಕೆ ಒಂದು ಗುಡ್ಡೆ ಹತ್ತಿ ಇಳಿದರೆ(ಅರ್ಧ ಮೈಲು ) ನಮ್ಮ ಅಂಗ್ರಿ ಮನೆ . ನಮ್ಮ ಮನೆಯಲ್ಲಿ ದನ ಕರು ಹಾಕಿ ಶುದ್ಧದ ದಿನ ಮೊದಲ ಕರೆವಿನ ಹಾಲು ಈ ದೇವಸ್ಥಾನಕ್ಕೆ ಕೊಟ್ಟು ಮತ್ತೆ ಮನೆಯಲ್ಲಿ ಉಪಯೋಗ  ಮಾಡುತ್ತಿದ್ದೆವು . 

 ಅದಿರಲಿ ;ನಾವು ಕಲ್ಯಾಣ ಮಂಟಪ ಹೊಕ್ಕೊಡನೆ ಎಲ್ಲಾ ನನ್ನ ಬಾಲ್ಯದ ಒಡನಾಡಿಗಳು .ನನ್ನ ಕಿವಿಗೆ ಗಾಳಿ ಹೊಗ್ಗಿದ ಹಾಗೆ ಆಯಿತು .ಕಿರಿಂಚಿ ಮೂಲೆ ಚೀನಣ್ಣ ನ ಮಗ ನಾರಾಯಣ ರಾವ್ (ನನ್ನ ಅಕ್ಕನ ಕ್ಲಾಸ್ ),ಹಿಂದೆ ವಿವೇಕಾನಂದ ಕಾಲೇಜು ಜೆ ಓ ಸಿ ಯಲ್ಲಿ ಪ್ರಾಧ್ಯಾಪಕ ರಾಗಿ ಇದ್ದವರು ಮೊದಲು ಸಿಕ್ಕಿದರು .ಅವರೂ ನಮ್ಮ ಶಾಲಾ ಪಾಟಿ ,ಅವರ ಅಣ್ಣ ಶ್ರೀಧರ ರಾವ್ ನನ್ನ ಅಧ್ಯಾಪಕರು .ಅಣ್ಣ ಸೀತಾರಾಮ ಕಿರಿಂಚಿಮೂಲೆ ಯಲ್ಲಿ ಭಂಡ ಸಾಲೆ ಇಟ್ಟಿದ್ದರು .ಈಗ ಇಲ್ಲ .ಅವರ ಮಗ ಆಮೇಲೆ ಪರಿಚಯ ಆಯಿತು . ನನ್ನ ಕ್ಲಾಸ್ ಮೇಟ್ ಲಕ್ಷ್ಮಿ ನಾರಾಯಣ ಉರುಫ್ ರಾಜಣ್ಣ (,ಈಗ ಕನ್ಯಾನ ದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ ),ನ ಭೇಟಿ . ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿ ಕೊಂಡೆವು . 

ಬಾಲಕೃಷ್ಣ ರಾವ್ ಅವರ ಅಣ್ಣ ಶ್ರೀಪತಿ ರಾವ್ ,ಸುರೇಶ ಮತ್ತು ಅವರ ಕುಟುಂಬ .ಅವರ ಸಹೋದರಿಯರು ಎಲ್ಲಾ ಬಹಳ ಖುಷಿ ಯಿಂದ ಮಾತನಾಡಿಸಿದರು . ಸಣ್ಣ ಸಂಗೀತ ಕಾರ್ಯಕ್ರಮ ,ನಂತರ ರುಚಿಯಾದ ಊಟ .ಮನೆಗೆ ಮರಳುವಾಗ ಹೊಟ್ಟೆಯೊಡನೆ ಮನಸೂ ಸಂತೋಷದಿಂದ ತುಂಬಿತ್ತು .

ಪಡುವಣ ತೀರದ
ಕನ್ನಡ ನಾಡಿನ
ಕಾರ್ಗಾಲದ ವೈಭವವೇನು?
ಚೆಲ್ಲಿದರನಿತೂ
ತೀರದ ನೀರಿನ
ಜಡದೇಹದ ಕಾರ್ಮುಗಿಲೇನು?

ಕೆರೆಗಳನುಕ್ಕಿಸಿ
ತೊರೆಗಳ ಸೊಕ್ಕಿಸಿ
ಗುಡ್ಡವ ಬೆಟ್ಟವ ಕೊರೆ ಕೊರೆದು
ಕಡಲಿನ ತೆರೆಗಳ
ರಿಂಗಣಗುಣಿಯಿಸಿ
ಮೊರೆಮೊರೆವುದದೋ ಸರಿಸುರಿದು

ಕುದುರೆಮೊಗದ ಕಡಿ
ವಾಣದ ತೆರದಲಿ
ಮಿಂಚುಗಳವು ಥಳಥಳಿಸುವುವು
ಗೊರಸಿನ ಘಟ್ಟನೆ
ಯಂತಿರೆ ಥಟ್ಟನೆ
ಗುಡುಗುಗಳವು ಗುಡುಗಾಡಿಪುವು

ಆವೇಶದ ವೇ
ಷದ ಬಿರುಸುಟ್ಟುರೆ
ಊರೂರಲಿ ಹಾರೋಡುವುದು
ಮರಗಳ ಕೀಳುತ
ಬಂಡೆಯ ಹೋಳುತ
ಜಗಜಟ್ಟೆಯ ತೆರನಾಡುವುದು

ಹಗಲಿರುಳೆನ್ನದೆ
ಹೊಡೆಯುವ ಜಡಿಮಳೆ
ಬಡಿಕೋಲ್ಮಿಂಚಿನ ಲಾಗುಗಳು.
ಮನೆಗಳ ಮನಗಳ
ಒಳಗೂ ಹೊರಗೂ
ಜಿನುಗುತಿರುವ ಹನಿಸೋನೆಗಳು
ಮುಗಿಲಿನ ಹುಬ್ಬಿನ
ಗಂಟಿಕ್ಕುತ ಬಿರು
ದನಿಯಲಿ ಬೆದರಿಸುತಿಹನಲ್ಲ.
ನಲ್ಲನೆನುತೆ ಆ
ಗಸವೆಣ್ಕೂಗುತೆ
   ಸುರಿಸಿದ ಕಣ್ಣೀರ್ವೊನಲೆಲ್ಲ                  ------"ಕಾರ್ಗಾಲದ ವೈಭವ "ಕಡೆಂಗೋಡ್ಲು ಶಂಕರ ಭಟ್  

                                                                                                                                                                  ಕುಂಭ ದ್ರೋಣ ಮಳೆ =ಅದೊಂದು ಮಳೆಯ ಮಾಪನ.

ಕುಂಭ=ಮಡಕೆ; ದ್ರೋಣ = ದೊನ್ನೆ; ಆ ಅಳತೆಯಷ್ಟು
ಮಳೆ ಸುರಿಯಿತು ಎಂದು ಅರ್ಥ.
ಮುಸಲ ಧಾರಾ =ಒನಕೆಯಷ್ಟು ದಪ್ಪದ ಧಾರೆಯ (ಮಳೆ ).
ಇಂಗ್ಲೀಷ್ ನಲ್ಲಿ ರೈನಿಂಗ್  ಕ್ಯಾಟ್ಸ್ ಅಂಡ್ ದೋಗ್ಸ್(Raining Cats and Dogs )ಎಂಬ ನುಡಿಗಟ್ಟು ಇದೇ ಅರ್ಥವನ್ನು ಸೂಚಿಸುವುದು .

 

ಶನಿವಾರ, ಮೇ 21, 2022

ಆದರ್ಶ ಸಂಶೋಧಕ ಡಾ ಶ್ರೀನಿವಾಸ ಹಾವನೂರ್

                                                          Kamat's Potpourri: Amma's Column - Honoring Havnur Mama (b. 1928)

"ಗ್ರಂಥ ಪಾಲಕರ ಕರ್ತವ್ಯ  ಪುಸ್ತಕಗಳನ್ನು ಜೋಪಾನ ಮಾಡುವುದು ಮಾತ್ರವಲ್ಲ  ,ಓದುಗರಿಗೆ ಬೇಕಾದ ಮಾಹಿತಿ ಒದಗಿಸುವುದೂ ಕೂಡಾ  ಮಾಡಬೇಕು . ಪುಸ್ತಕಗಳು  ನಮ್ಮೊಡನೆ ಸಂವಹನ ನಡೆಸುತ್ತವೆ ,ಓದುಗರೊಂದಿಗೆ ಮಾತನಾಡುತ್ತವೆ ..ಯಾವುದೇ ಕೃತಿ ನಿ ರುಪಯುಕ್ತ ಎಂದು ಅಸಡ್ಡೆ ಮಾಡ ಬಾರದು ,ಪ್ರತಿಯೊಂದಕ್ಕೂ ಅದರದೇ ಆದ ಮಹತ್ವ ಇರುತ್ತದೆ ..ದಾಖಲೀಕರಣ ,ಸಂಶೋಧನೆ ,ಪ್ರಕಟಣೆ ಮತ್ತು  ಮಾರ್ಗ ದರ್ಶನ ಇವು ಗ್ರಂಥ ಪಾಲಕನಲ್ಲಿ ಇರಬೇಕು "

ಇವು  ದಿ ಡಾ ಶ್ರೀನಿವಾಸ ಹಾವನೂರು ಅವರ  ನುಡಿ ಮುತ್ತುಗಳು ..ಇವರು ೧೯೬೯ ರಿಂದ ೧೯೮೯ ರ ವರೆಗೆ ಮುಂಬೈ ಯ ಪ್ತತಿಷ್ಠಿತ  ಟಾಟಾ ಮೂಲಭೂತ ಅಧ್ಯಯನ ಸಂಸ್ಥೆಯಲ್ಲಿ ಗ್ರಂಥ ಪಾಲಕರಾಗಿ ಇದ್ದವರು . ಖ್ಯಾತ ವಿದ್ವಾಂಸ ಮತ್ತು ತನ್ನನ್ನು ಮಾನಸ ಶಿಷ್ಯ ಎಂದು ಸ್ವೀಕರಿಸಿದ ರಂ  ಶ್ರೀ ಮುಗಳಿ ಅವರ ಮಾರ್ಗ ದರ್ಶನ ದಲ್ಲಿ ಇವರು ರಚಿಸಿದ ಸಂಶೋಧನಾ  ಪ್ರಬಂಧ "ಹೊಸಗನ್ನಡ  ಅರುಣೋದಯ :ಒಳ್ಳೆಯ ಆಕರ  ಎಂದು ಹೆಸರು ಪಡೆದಿದ್ದು  ಪುಸ್ತಕ ರೂಪದಲ್ಲಿ ಹಲವು ಆವೃತ್ತಿಗಳನ್ನು ಕಂಡಿದೆ . ಈ  ಪ್ರಬಂಧ ದ  ಅಖಲನ ನಡೆಸಿದ ಪರೀಕ್ಷಕರಾದ ಡಾ ಹಾ ಮಾ ನಾಯಕ್ ಮತ್ತು ಪ್ರೊ. ಮರಿಯಪ್ಪ ಭಟ್ ಅವರು ಮೌಖಿಕ  (ವೈವಾ) ಪರೀಕ್ಷೆಯ ಅವಶ್ವಕತೆ ಇಲ್ಲದೆಯೇ ಪಿ ಎಚ್ ಡಿ ಕೊಡ ಬಹುದು ಎಂದು ಶಿಫಾರಸು ಮಾಡಿದರಂತೆ.ಪರಿಶೀಲನೆಗೆ ಕಳುಹಿಸಿದ  ಪ್ರಬಂಧದ ಹಸ್ತ ಪ್ರತಿ ಹಾ ಮಾ ನಾಯಕ್ ವಾಪಸು ಕಳುಹಿಸದೆ ತಮ್ಮಲ್ಲೇ ಆಕರ ವಾಗಿ ಇಟ್ಟು ಕೊಂಡಿದ್ದರಂತೆ ;ಮುಂದೆ ಮೈಸೂರು ವಿಶ್ವ ವಿದ್ಯಾಲಯದ ವತಿಯಿಂದ ಅದು ಪ್ರಕಟವಾಗುವಂತೆ ನೋಡಿಕೊಂಡರಂತೆ . ಮುಂದೆ ಮಂಗಳೂರು ವಿಶ್ವ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ರಾಗಿ ಬರುವಂತೆ ಡಾ ಹಾ ಮಾ ನಾಯಕ್ ಕೇಳಿ ಕೊಂಡಾಗ  ತಮಗೆ  ಅಧ್ಯಾಪನ ಅನುಭವ ಇಲ್ಲಾ ಎಂದು ಮೀನ ಮೇಷ ನೋಡಿದಾಗ ,ವಿಶ್ವ ವಿದ್ಯಾಲಯ ಪ್ರಾಧ್ಯಾಪಕರಿಗೆ ಸಂಶೋಧನಾ ಅನುಭವ ಮುಖ್ಯ ಎಂದು ಒಪ್ಪಿಸಿ ಕರೆ ತಂದರಂತೆ . ಅದೇ ರೀತಿ ಮುಂದೆ ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗಕ್ಕೆ . ೧೯೮೯ ರಲ್ಲಿ ಅಲ್ಲಿಂದ ನಿವೃತ್ತರಾದ ಮೇಲೂ ಮಂಗಳೂರಿನ ಥಿಯೋಲೋಜಿಕಲ್ ಕಾಲೇಜು ನಲ್ಲಿ ಸಂಶೋಧನಾ ಕಾರ್ಯ ಮುಂದುವರಿಕೆ . ಇವರ ಕ್ರಿಯಾಶೀಲತೆ ಕಂಡು   'ಕಾರ್ಯಾನಂದ ಸ್ವಾಮಿ "ಎಂದು ಇವರನ್ನು ತಮಾಷೆ ಮಾಡುತ್ತಿದ್ದರಂತೆ . 

 

ನಿರ್ವಹಿಸಿದ ಹುದ್ದೆಗಳು

  • ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಣೆ.
  • 1984 ರಲ್ಲಿ ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದರು.
  • 1986ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದರು.
  • ಮಂಗಳೂರಿನ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನಲ್ಲಿ ಬಾಸೆಲ್ ಮಿಷನ್ ಸಂಶೋಧನೆ.
  • ಗ್ರಂಥಪಾಲಕ, ಪ್ರಾಧ್ಯಾಪಕ, ಸಂಶೋಧಕರಾಗಿ ಮುಂಬಯಿ, ಮಂಗಳೂರು, ಪುಣೆ, ಬೆಂಗಳೂರುಗಳಲ್ಲಿ ದೀರ್ಘ ಕಾಲದ ವಾಸ್ತವ್ಯ

 ರ್ನಾಟಕದ ಇತಿಹಾಸ ಸಾಹಿತ್ಯಗಳ ಸಂಶೋಧನೆಗಾಗಿ ಕಂಪ್ಯೂಟರ್‌ ನ್ನು ಬಳಸಿದವರಲ್ಲಿ ಹಾವನೂರರು ಮೊದಲಿಗರು, 

ಹಾವನೂರರು ೬೦ ಕ್ಕೂ ಹೆಚ್ಚು ಮೌಲಿಕ ಕೃತಿಗಳ ಲೇಖಕರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ 

  • ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ
  •  ಮುಂಬೈ ಕರ್ನಾಟಕ
  • ಗಳಗನಾಥ ಮಾಸ್ತರರು
  • ಒಂದಿಷ್ಟು ಲಘು, ಒಂದಿಷ್ಟು ಗಂಭೀರ
  • ಪಾವೆಂ ಆಚಾರ್ಯರ ಸಮಗ್ರ ಕೃತಿಗಳ ಸಂಪಾದನೆ
  • ಹಟ್ಟಿಯಂಗಡಿ ನಾರಾಯಣರಾಯರ ಸಾಹಿತ್ಯವಾಚಿಕೆ
  • ಎಪಿಗ್ರಾಫಿಕಲ್ ಸ್ಟಡೀಸ್
  • ಮ.ಪ್ರ.ಪೂಜಾರರ ಹಳಗನ್ನಡ ಕವಿ ಕಾವ್ಯ ಮಹೋನ್ನತಿ,
  • ಕಾದಂ ಕಥನಗಳು (ಭೈರಪ್ಪನವರ ಕಾದಂಬರಿಗಳಿಂದ) ಹೊಸ ರೀತಿಯ ಬರವಣಿಗೆ
  • ಫರ್ಡಿನಂಡ್ ಕಿಟೆಲ್ (40 ವರ್ಷಗಳಿಂದ, ರೆ.ಫಾ.ಕಿಟೆಲರ ಜೀವನ, ಸಾಧನೆಯ ಬಗ್ಗೆ ಬರೆಯುತ್ತಲೇ ಬಂದವರು ಅವರು. ಕಿಟೆಲ್ ಕುರಿತ ಕೃತಿ, ಜರ್ಮನ್ ಭಾಷೆಯಲ್ಲಿಯೂ ಪ್ರಕಟವಾಗಿದೆ)

ಬಾಲಂಗೋಚಿ ;ನನಗೆ ಬಾಲ್ಯದಲ್ಲಿ ಬಸ್ ಕಂಡಕ್ಟರ್ ಆಗುವ ಅಸೆ ಇತ್ತು .ಆಮೇಲೆ ಲೈಬ್ರರಿಯನ್ ಆಗುವ ಕನಸು .ಪುಸ್ತಕಗಳ ನಡುವೆ ಇದ್ದು ಎಷ್ಟು ಬೇಕಾದರೂ ಓದ ಬಹುದು .ಈಗಲೂ ಆ ಅಸೆ ಇದೆ . ಪುತ್ತೂರು ಸಾರ್ವಜನಿಕ ಗ್ರಂಥಾಲಯದಲ್ಲಿ ಇದ್ದ ಶ್ರೀ ಲಾರೆನ್ಸ್ (?),ಮಂಗಳೂರು ವಿಶ್ವ ವಿದ್ಯಾಲಯದ ಶ್ರೀ ಭಂಡಿ  ಮತ್ತು ಕೆ ಎಸ ಹೆಗ್ಡೆ ಮೆಡಿಕಲ್ ಕಾಲೇಜು ಲೈಬ್ರರಿಯನ್ ಶ್ರೀಮತಿ ಸುಪ್ರಿತಾ ನಾನು ಕಂಡ ಒಳ್ಳೆಯ ಗ್ರಂಥ ಪಾಲಕರು . ಓದುಗರು ಬಂದರೆ ಅವರಿಗೆ ಕಿರಿ ಕಿರಿ ಆಗದು .ಸಹಾಯ ಮಾಡುವ ಉತ್ಸಾಹ . ಇನ್ನು ಹಲವು ಕಡೆ ನಾವು ಏನಾದರೂ ಕೇಳಿದರೆ ಅಲ್ಲಿ ಎಲ್ಲಿಯಾದರೂ ಇರ ಬಹುದು ನೋಡಿ ಎಂದು ಅನ್ಯ ಮನಸ್ಕರಾಗಿ ಹೇಳುತ್ತಿದ್ದವರೇ ಅಧಿಕ . ಒಂದು ಜಿಲ್ಲಾ ಸಾರ್ವಜನಿಕ ಗ್ರಂಥಾಲಯದಲ್ಲಿ ಪುಸ್ತಕಗಳಿಗೆ ಅಂಟಿದ್ದ ಧೂಳು ಹೊಡೆಯುವ ಕಾರ್ಯಕ್ ನಾನು ಕೆಲ ಗೆಳೆಯರೊಡನೆ ಬರಲೇ ಎಂದು ಸದುದ್ದೇಶದಿಂದ ಅರಿಕೆ ಮಾಡಲು "ಬೇಡ ಅದಕೆಲ್ಲಾ ನಮ್ಮಲ್ಲಿ ಜನ ಇದ್ದಾರೆ "ಎಂದು ತಾವೂ ಮಾಡದೇ ಇದ್ದವರು ಕಂಡಿದ್ದೇನೆ 

 

 



ಗುರುವಾರ, ಮೇ 19, 2022

ಮಕ್ಕಳ ಅಪೀಲ್ ಕೋರ್ಟ್

  ವಾರದ ನನಗೆ ಮೊಮ್ಮಗು ಆದ ವಿಷಯ ತಿಳಿಸಿದ್ದೆ ತಾನೇ .ಜನನ ದೂರದ ಅಮೆರಿಕಾ ದಲ್ಲಿ .ಆದುದರಿಂದ ಇಂದು ಮೊಬೈಲ್ ಮೂಲಕ ಅವನನ್ನು ನನ್ನ ಮಗ ಸೊಸೆ ತೋರಿಸಿದಾಗ ಸ್ವಲ್ಪ ಅಳುತ್ತಿದ್ದ . ಕೂಡಲೇ ನನಗೆ ಯಾರು ಮಗಾ ನಿನ್ನನ್ನು ಅಳಿಸಿದ್ದು ,ಅಪ್ಪನಾ ಅವನಿಗೆ ಹಪ್ಪ ಮಾಡುತ್ತೇನೆ (ಶಿಕ್ಷಿಸುತ್ತೇನೆ )ಎಂದು ಬಾಯಲ್ಲಿ ಬಂತು .ಕಾಕತಾಳೀಯ ವಾಗಿ  ಮಗು ಅಳು ನಿಲ್ಲಿಸಿತು .

ಹಿಂದೆ ದೊಡ್ಡ ಕುಟುಂಬಗಳ ಒಂದು ಅನುಕೂಲ ಇದು ಆಗಿತ್ತು .ತಪ್ಪು ಮಾಡಿದಾಗ ತಂದೆ ಹೊಡೆದರೆ ಅಜ್ಜನ ಬಳಿ ,ಅಮ್ಮ ಬಡಿದರೆ ಅಜ್ಜಿ ಬಳಿ ದೂರು ಹೇಳುವುದು .ಅವರು ಸಮಾಧಾನ ಹೇಳಿ  ಪೆಟ್ಟು ಕೊಟ್ಟವರಿಗೆ  ಚಿವುಟಿದ ಹಾಗೆಯೋ ,ಹೊಡೆದ ಹಾಗೆಯೋ ನಟಿಸುವರು .ಜತೆಗೆ 'ಹಪ್ಪ ಅವನ ಹಾಂಕಾರವೇ ಮಗುವಿಗೆ ಸುಮ್ಮನೇ ಬಡಿಯುವುದು' ಎನ್ನುವರು ,; ಮಗುವಿಗೆ ತಿನ್ನಲು ಕಲ್ಲುಸಕ್ಕರೆ ಇತ್ಯಾದಿ ಕೊಡುವರು . ಮಗುವಿನ ಅಳು ನಗುವಾಗಿ ಮಾರ್ಪಾಡುವುದು . ಇಟ್ಟಿಗೆ ಕೇಸ್ ಪುಸ್ಕಾ ಆಗುವುದು .

ಈಗ ಸಣ್ಣ ಕುಟುಂಬಗಳಲ್ಲಿ ಇದು ಕಾಣ ಸಿಗದು

ಶನಿವಾರ, ಮೇ 14, 2022

ನನ್ನ ಕೆಲ ವೈದ್ಯಕಿಯೇತರ ಅಧ್ಯಯನ

 ಮಂಗಳೂರಿನಲ್ಲಿ ಪ್ರಸಿದ್ದ ಭಾರತೀಯ ವಿದ್ಯಾ ಭವನ ಸ್ಥಾಪನೆಗೆ ಪ್ರಾತಃ ಸ್ಮರಣೀಯ ಡಾ ಎಂ ಪಿ ಪೈ ಕಾರಣ ಎಂದು ತಿಳಿದು ಕೊಂಡಿದ್ದೇನೆ .  ತನ್ನ ಸ್ವಂತ ಕಟ್ಟಡ ಆಗುವುದಕ್ಕಿಂತ ಮೊದಲು ಅದರ ಕಾರ್ಯಕ್ರಮಗಳು ಕೆ ಎಂ ಸಿ ಮಂಗಳೂರು ಸಭಾ ಭವನದಲ್ಲಿ ನಡೆಯುತ್ತಿದ್ದು ಆಮೇಲೆ ಈಗ ಪಾಂಡೇಶ್ವರದಲ್ಲಿ ಇರುವ ಸೌಧಕ್ಕೆ ಖಾಯಂ ಆಗಿ ಸ್ಥಳಾಂತರ ಆಯಿತು . ಆರಂಭದಲ್ಲಿ  ಸಾಂಸ್ಕೃತಿಕ  ಕಾರ್ಯಕ್ರಮಗಳು ಮತ್ತು ಸಂಗೀತ ತರಬೇತಿ ಗೆ ಸೀಮಿತ ವಾಗಿದ್ದ  ಚಟುವಟಿಕೆಗಳು ಕ್ರಮೇಣ ವಿಸ್ತರಿಸಿ ಕೊಂಡವು . ಶ್ರೀಮತಿ ಶಾರದಾ(ಸರೋಜಾ?) ಆಚಾರ್ ಎಂಬ ಹಿರಿಯರು ಸಂಗೀತ ಕಲಿಸುತ್ತಿದ್ದರು .ಆಗ ಅದು ಉಚಿತ ವಾಗಿದ್ದು ಖರ್ಚು ವೆಚ್ಚ ಕೇಂದ್ರವೇ ವಹಿಸುತ್ತಿತ್ತು . ನಾನು ಕೂಡಾ ಒಂದು ವರ್ಷ ಸಂಗೀತ ಕಲಿಯುವ ಹಂಬಲದಿಂದ ಒಂದು ವರ್ಷ ಹೋಗಿದ್ದೆ . ತರಗತಿಯಲ್ಲಿ ಹುಡುಗ ನಾನೊಬ್ಬನೇ ಇದ್ದು ಉಳಿದವರು ಎಲ್ಲಾ ಹುಡುಗಿಯರು. ಮೇಡಮ್ ಮತ್ತು ವಿದ್ಯಾರ್ಥಿನಿಯರಿಗೆಲ್ಲಾ ನನ್ನ ಮೇಲೆ ಅನುಕಂಪ .ಆದರೆ ಜತೆಯಾಗಿ ಅಭ್ಯಾಸ ಮಾಡುವಾಗ ಕೋಗಿಲೆಗಳ ನಡುವೆ ನನ್ನದೊಂದು ಕಾಗೆಯ ಸ್ವರದಂತೆ ಎದ್ದು ಕೇಳುತ್ತಿತ್ತು . ವಾರ್ಷಿಕೋತ್ಸವ ಮುಂತಾದ ಕಾರ್ಯಕ್ರಮ ಗಳಲ್ಲಿ ಹೊರ್ಮೋನಿಯಂ ಪೆಟ್ಟಿಗೆ ಹೊತ್ತು ಕೊಂಡು ಹೋಗಲು ಮುಂತಾದ ಕಾರ್ಯಗಳಿಗೆ ನಾನೊಬ್ಬ ಹುಡುಗ ಇದ್ದುದು ಅವರಿಗೆ ಅನುಕೂಲ ಕೂಡಾ ಇದ್ದುದರಿಂದ ನನ್ನ ಪ್ರಗತಿ ಅಷ್ಟು ಇಲ್ಲದಿದ್ದರೂ ಹುರಿದುಂಬಿಸಿ ನಾನು ಅರ್ಧಕ್ಕೆ ಬಿಡದಂತೆ ನೋಡಿಕೊಂಡರು .ಆದರೆ ಪಿ ಯು ಸಿ ಮುಗಿಸಿ ಎಂ ಬಿ ಬಿ ಎಸ್ ಗೆ ನಾನು ಹುಬ್ಬಳ್ಳಿಗೆ ಹೋದುದರಿಂದ ಸಂಗೀತ ಅಭ್ಯಾಸ ಅಲ್ಲಿಗೇ ನಿಂತಿತು . ಆದರೂ ನನ್ನ ಶಾಸ್ತ್ರೀಯ ಸಂಗೀತ ಅಭಿರುಚಿ ಗಟ್ಟಿ ಮಾಡಿತು .

ನಾನು ಎಂ ಬಿ ಬಿ ಎಸ್  ಉತ್ತೀರ್ಣ ನಾಗಿ ಎರಡು ವರ್ಷ ನಂತರ ರೈಲ್ವೇ ವೈದ್ಯಕೀಯ ಸೇವೆಗೆ ಸೇರಿದೆ . ಈ ಹುದ್ದೆಯಲ್ಲಿ ಮಂಗಳೂರಿಗೆ 1989 ರಲ್ಲಿ ಪೋಸ್ಟ್ ಆಯಿತು . ಸಂಜೆ ಐದು ಗಂಟೆಯಿಂದ ನಾನು ಫ್ರೀ ಇರುತ್ತಿದ್ದೆ .ನಮ್ಮ  ವಸತಿ ಗೃಹ ಸಮೀಪದಲ್ಲಿಯೇ  ಭಾರತೀಯ ವಿದ್ಯಾ ಭವನ ಮಂಗಳೂರು ಕೇಂದ್ರ ಪಾಂಡೇಶ್ವರ ದಲ್ಲಿ ಇತ್ತು . ಅವರು ಆಗ ಸಂಗೀತ ,ನೃತ್ಯ ದೊಡನೆ  ಮ್ಯಾನೇಜ್ಮೆಂಟ್ ಕೋರ್ಸ್ ಕೂಡಾ  ನಡೆಸುತ್ತಿದ್ದರು . ಅದು ಸಂಜೆ ಇದ್ದು ನಾನೂ ಸೇರಿ ಕೊಂಡೆ .ಮಂಗಳೂರು ವಿಶ್ವ ವಿದ್ಯಾಲಯದ ಕಾಮರ್ಸ್ ಪ್ರೊಫೆಸರ್  ಪೋದುವಾಳ್ ,ಎಸ್ ಡಿ ಎಂ ಕಾಲೇಜ್ ನ ಶ್ರೀ ದೇವರಾಜ್ ಮತ್ತು  ಕಾರ್ಮಿಕ ಕಾನೂನಿನಲ್ಲಿ ಪ್ರಸಿದ್ದ ರಾದ ಶ್ರೀ ಚಂದ್ರಶೇಖರ ಹೊಳ್ಳ ಮತ್ತು ಇನ್ನೂ ಕೆಲವರು ಅಲ್ಲಿ ಕಲಿಸಲು ಬರುತ್ತಿದ್ದರು . ಮಂಗಳೂರಿನ ವಿವಿಧ ರಂಗಗಳಲ್ಲಿ ಪ್ರಸಿದ್ದರಾದ ಶ್ರೀ ಶೇಖರ ಪೂಜಾರಿ ,ಜಯನಾಥ ಕೋಟ್ಯಾನ್ ನನ್ನ ಸಹಪಾಠಿ ಗಳು . ವರ್ಕ್ಸ್ ಮನ್ಸ್ ಕಂಪೆನ್ಸಷನ್ ಆಕ್ಟ್ ,ಮಿನಿಮಲ್ ವೇಜ್ ಆಕ್ಟ್ ,ಬೋನಸ್ ಆಕ್ಟ್ ಇತ್ಯಾದಿ ಕಲಿತ ನೆನಪು .(ಬೋನಸ್ ಐಸ್ ಡಿಫರ್ಡ್ ವೇಜ್ ಇತ್ಯಾದಿ ). ತರಗತಿಯಲ್ಲಿ ಸಣ್ಣ ಹುಡುಗರಿಂದ ಹಿಡಿದು ಮಧ್ಯ ವಯಸ್ಕರ ವರೆಗೆ ಹೆಣ್ಣು ಗಂಡು ವಿದ್ಯಾರ್ಥಿಗಳು ಇದ್ದು ನಾನು ವೈದ್ಯನಾದ ಕಾರಣ ಮತ್ತು ನನ್ನಲ್ಲಿ  ಹಾಸ್ಯ ಪ್ರಜ್ಞೆ ಇದ್ದ ಕಾರಣ  ಪ್ರೀತಿ ಗೌರವದಿಂದ ನಡೆದು ಕೊಳ್ಳುತ್ತಿದ್ದರು . ವರ್ಷಾಂತ್ಯದಲ್ಲಿ ಪರೀಕ್ಷೆ ನಡೆದು ನನಗೆ ಡಿಪ್ಲೊಮಾ ಇನ್ ಪರ್ಸನಲ್ ಮ್ಯಾನೇಜ್ಮೆಂಟ್ (ದ್ವಿತೀಯ ದರ್ಜೆ )ಉಪಾಧಿ ಸಿಕ್ಕಿತು .ಆದರೆ ನನ್ನ ಮ್ಯಾನೇಜ್ಮೆಂಟ್  ಸ್ಕಿಲ್ ಇದರಿಂದ ಏನಾದರೂ ಉತ್ತಮವಾದ ಹಾಗೆ ಕಾಣೆ . ಕೆಲ ಒಳ್ಳೆಯ ಮಿತ್ರರು ಸಿಕ್ಕಿದರು . 



ಫ್ರೀ ಹೋಮ್ ಡೆಲಿ ವರಿ

ಹಿಂದೆ   ಹೊಸತಾಗಿ ಮದುವೆ  ಆದ ಹುಡುಗಿ ಗರ್ಭಿಣಿ ಆದಾಗ ಸಂಭ್ರಮ . ಸೀಮಂತ ಆಚರಿಸಿ  ತವರು ಮನೆಗೆ ಬಂದ ಆಕೆಗೆ ಅದರ ಪ್ರೀತಿಯ ಉಪಚಾರ . ಶ್ರೀಮಂತರಲ್ಲಿ ದೊಡ್ಡ ಉಪಚಾರ ಇದ್ದರೆ ಹೃದಯ ಶ್ರೀಮಂತಿಕೆ ಇದ್ದ ಉಳಿದವರಲ್ಲಿಯೂ ಶಕ್ತ್ಯಾನುಸಾರ ಅವಳ ಆಸೆಗಳನ್ನು ಪೂರೈಸುತ್ತಿದ್ದರು . ತವರು ಮನೆಯ ಅಕ್ಕ ಪಕ್ಕದ ಸ್ನೇಹಿತೆಯರೂ ಆಗಾಗ ಬಂದು ವಿಚಾರಿಸುವರು . ಸಣ್ಣ ಸಣ್ಣ ಕಾಯಿಲೆ ಬಂದಾಗ ಅನುಭವಿಗಳಾದ ಅಜ್ಜಿಯರು ,ದೊಡ್ಡಮ್ಮ ಚಿಕ್ಕಮ್ಮ ನವರ  ಉಪಚಾರ ಸಾಕಾಗುತ್ತಿತ್ತು ,

 ಈಗಿನ ಹಾಗೆ ತಿಂಗಳಿಗೆ ಒಮ್ಮೆ ಡಾಕ್ಟ್ರ ಅಪಪೋಯಿಂಟ್ (ಇದೂ ಕಷ್ಟದಲ್ಲಿ ಸಿಗುವುದು ),ಸ್ಕ್ಯಾನ್ ,ಪಿ ಏನ್ ಡಿ ಟಿ ಫಾರಂ ತುಂಬುವುದು ,ಆಧಾರ್ ಕಾರ್ಡ್ ಯಾವುದೂ ಇರಲಿಲ್ಲ . ಆಸ್ಪತ್ರೆಯಲ್ಲಿ ಬಂದು  ಕ್ಯೂ ನಿಲ್ಲುವುದೂ ಇಲ್ಲ . 

ಬಹಳ ಹಿಂದೆ ಹಳ್ಳಿಯ ಸೂಲಗಿತ್ತಿಯರೇ ಪ್ರಸವ ಶಾಸ್ತ್ರಜ್ಞೆ ಯರು ಆಗಿದ್ದರೆ ,ಆಮೇಲೆ  ಸರಕಾರಿ ಮಿಡ್ ವೈಫ್ ನವರು . ಮಿಡ್ ವೈಫ್ ನಮ್ಮಂತಹ ಹಳ್ಳಿಯವರ ಬಾಯಿಯಲ್ಲಿ ಮೆಡ್ ಬಾಯ್ ಆಗಿದ್ದರು .ಅವರು ಒಂದೆರಡು ಬಾರಿ ತಮ್ಮ ಗ್ರಾಮ ಸಂಚಾರದಲ್ಲಿ  ಗರ್ಭಿಣಿಯರ ಪರೀಕ್ಷೆ ಮಾಡುವರು .ಹೆರಿಗೆ ನೋವು ಆರಂಭ ಆದಾಗ ಅವರ ವಸತಿ ಗೃಹಕ್ಕೆ ಯಾರಾದರೂ ದೂತರು ಓಡಿ ಅವರ ಪೆಟ್ಟಿಗೆ ಹೊತ್ತು ಗೊಂಡು ಕರೆ ತರುವುದು .ಹಗಲು ರಾತ್ರಿ ಎನ್ನದೆ ಅವರು ಬಂದು ಪ್ರಸವ ಆದ ಮೇಲೆಯೇ ಹೋಗುವರು . ಒಳ್ಳೆಯ ಅನುಭವ ಇದ್ದ ಅವರು ತಮಗೆ ಕಷ್ಟ ಕರ ಎಂದು ತೋರಿದರೆ ಮಾತ್ರ ಆಸ್ಪತ್ರೆಗೆ ಒಯ್ಯಲು ಹೇಳುವರು . ಹಳ್ಳಿಯವರು ಅವರಿಗೆ ಪ್ರೀತಿಯಿಂದ ಶಕ್ತ್ಯಾನುಸಾರ ಕಾಣಿಕೆ ಕೊಡುವರು ;ಆದರೆ ಅದರ ಮುಖ ನೋಡಿ ಅವರು ಕೆಲಸ ಮಾಡರು . 

ಹೆರಿಗೆ ಆದ ಕೂಡಲೇ ಗಂಡನ ಮನೆಗೆ ಸಕ್ಕರೆ (ಬೆಲ್ಲ ),ತೆಂಗಿನ ಕಾಯಿ ತೆಗೆದು ಕೊಂಡು ಹೋಗಿ ತಿಳಿಸುವುದು .ಅಲ್ಲಿ ಪಾಯಸ ದ ಊಟ ಮಾಡಿ ಬರುವುದು .ಈಗಿನಂತೆ ಫೋನ್ ಇಲ್ಲವಲ್ಲ . ಮಿಕ್ಕ ಬಂಧುಗಳಿಗೆ ಪೋಸ್ಟ್ ಕಾರ್ಡ್ ಹಾಕಿ ತಿಳಿಸುವುದು .. 

ಮಗುವಿನ ಲಾಲನೆ ಪಾಲನೆಗೆ ಮನೆಯಲ್ಲಿ ಎಷ್ಟು ಜನ .ಅಜ್ಜ ಅಜ್ಜಿ ದೊಡ್ಡಮ್ಮ  ,ಚಿಕ್ಕಮ್ಮ ,ಮಕ್ಕಳು . ಮಗು ಅತ್ತ ಒಡನೆ ಧಾವಿಸುವರು . ಅಡಿಕೆ ಹಾಳೆಯಲ್ಲಿ ಶಿಶುವಿನ ಶಯನ . ಮಗು ಬಟ್ಟೆ ಒದ್ದೆ ಮಾಡಿದ್ದರೆ ಅದನ್ನು ಕೆಳಕ್ಕೆ ಎಳೆದು ಉಂಡೆ ಮಾಡುವರು ,ಹಾಳೆಯನ್ನು ಕರ ಕರ ಮಾಡಿದರೆ ಮಗು ಅಳುವುದು ನಿಲ್ಲಿಸುವದು . ಈಗಿನಂತೆ ಸಣ್ಣ ಶೀತ ಆದಾಗ ಆಸ್ಪತ್ರೆಗೆ ಓಡುವ ಪದ್ಧತಿ ಇರಲಿಲ್ಲ . ಎಲ್ಲವೂ ಸಹಜ ಸಂಭ್ರಮ ಆಗಿತ್ತು . 

ನಾನು ಇಷ್ಟೆಲ್ಲಾ ಬರೆದ ಕಾರಣ ವಿಜ್ಞಾನ ಮತ್ತು ಈಗಿನ ತಪಾಸಣೆ ಗಳಿಂದ ಉಪಯೋಗ ಇಲ್ಲ ಎಂದು ತಿಳಿಯ ಬಾರದು . ಕುಚ್ ಪಾನೇಕೆ ಲಿಯೇ ಕುಚ್ ಖೋನಾ ಹೈ . 

ಬಾಲಂಗೋಚಿ : ಮೊದಲು ಫ್ರೀ ಹೋಮ್  ಡೆಲಿ ವರಿ ಇದ್ದದ್ದು ಈಗ ಕ್ಯಾಷ್ ಒನ್  ಡೆಲಿ ವರಿ ಆಗಿದೆ

ಶುಕ್ರವಾರ, ಮೇ 13, 2022

ಹಿರಿಯರ ಮೆಚ್ಚಿಗೆ ರೂಪದ ಆಶೀರ್ವಾದ

                            




 

 ಮೊನ್ನೆ ರಾತ್ರಿ ದೆಹಲಿಯಿಂದ ಶ್ರೀಮತಿ ಕಿರಣ ಎಂಬುವರು ಫೋನ್ ಮಾಡಿ ನನ್ನ ಪುಸ್ತಕ ಓದಿ ತುಂಬಾ ಸಂತೋಷ ಪಟ್ಟುದಾಗಿ ಮತ್ತು ಹಿರಿಯರಾದ ತನ್ನ ಅತ್ತೆಯವರೂ ಅದನ್ನು ಬಹಳ ಇಷ್ಟ ಪಟ್ಟರು ಎಂದು ಹೇಳಿದರು . ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಸಹಜವಾಗಿ ನನಗೆ ಸಂತೋಷ ಆಗಿ ಅವರಿಗೆ ಧನ್ಯವಾದ ಹೇಳಿದೆ . 

ನಿನ್ನೆ ರಾತ್ರಿ ಮತ್ತೊಂದು ಆಶ್ಚರ್ಯ . ಮಂಜೇಶ್ವರದಿಂದ ಹಿರಿಯರಾದ ಡಾ ರಮಾನಂದ ಬನಾರಿ ದೂರವಾಣಿ ಮೂಲಕ ಸುಮಾರು ಹತ್ತು ನಿಮಿಷ ಅದೇ ಕಾರಣ ಮಾತನಾಡಿ ತಮ್ಮ ಸಂತಸ ಹಂಚಿ ಕೊಂಡರು . ರಮಾನಂದ ಬನಾರಿ ವಯೋ ವೃದ್ದರು ಮತ್ತು ಜ್ಞಾನ ವೃದ್ದರು .ಅವರಿಗೆ ಓದುವುದು ಈಗ ಸ್ವಲ್ಪ ತ್ರಾಸ ದಾಯಕ ,ಆದರೂ ತನಗಿಂದ ಕಿರಿಯ ವೈದ್ಯ ಏನೋ ಬರೆದಿದ್ದಾನೆ ಎಂದು ಕಷ್ಟ ಪಟ್ಟು ಓದಿ ,ಸಂತಸ ಪಟ್ಟು ನನ್ನೊಡನೆ ಹಂಚಿಕೊಂಡದ್ದು ಅವರ ದೊಡ್ಡ ಮನಸು . ಅವರ ಮೆಚ್ಚುಗೆ ನುಡಿ ನನಗೆ ಆಶೀರ್ವಾದ . 

 ನೀವು ೨೦ ನೇ ಶತಮಾನದಲ್ಲಿ ಯಕ್ಷಗಾನ ಬೆಳೆದು ಬಂದ ಚರಿತ್ರೆ ಓದಿದರೆ ಅದರಲ್ಲಿ ಬರುವ ಎರಡು ಮೇರು ವ್ಯಕ್ತಿತ್ವ ಗಳು  ಒಂದು ಕುರಿಯ ವಿಠಲ ಶಾಸ್ತ್ರಿಗಳು ಆದರೆ ಇನ್ನೊಂದು ಕೀರಿಕ್ಕಾಡ್ ಮಾಸ್ಟರ್ ವಿಷ್ಣು ಭಟ್ಟರು .೧೯೪೪ ರಲ್ಲಿ ವಿಷ್ಣು ಭಟ್ ಅವರು ಸ್ಥಾಪಿಸಿದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ರೂಪಿಸಿದ ಯಕ್ಷ  ಕಲಾವಿದರೆಷ್ಟು . ಅವರು ಮತ್ತು ವಿಠಲ ಶಾಸ್ತ್ರಿಗಳು  ಈ ಕಲೆಯ  ಎಲ್ಲಾ ಪ್ರಾಕಾರಗಳಲ್ಲಿ  ತರಬೇತು ಕೊಟ್ಟುದಲ್ಲದೇ  ,ತಮ್ಮದೇ ಛಾಪು ಮೂಡಿಸಿ ದಂತ ಕತೆಗಳಾದವರು . 

 ಡಾ ರಮಾನಂದ ಬನಾರಿ ವಿಷ್ಣು ಭಟ್ ಅವರ ಎರಡನೇ ಪುತ್ರ ..ಪ್ರತಿಭಾವಂತ .ಕ್ಯಾಲಿಕಟ್ ಮೆಡಿಕಲ್ ಕಾಲೇಜು ನಿಂದ ಎಂ ಬಿ ಬಿ ಎಸ ಪದವಿ ಗಳಿಸಿ ,ಸ್ವಲ್ಪ ಸಮಯ ಸರಕಾರಿ ಸೇವೆ . ಆಮೇಲೆ ಮಂಜೇಶ್ವರ ದಲ್ಲಿಯೇ ಆಸ್ಪತ್ರೆ ಸ್ಥಾಪಿಸಿ ಹಲವು ದಶಕಗಳ ಸೇವೆ ಸಲ್ಲಿಸಿ  ಜನಾನುರಾಗಿ . ಆದರೂ ರಕ್ತದಲ್ಲಿ ಬಂದ ಕಲಾ ಸಾಹಿತ್ಯ ಅಭಿರುಚಿ ಮತ್ತು ಪ್ರತಿಭೆ ಬಿಡುವುದೇ .ತಾವೂ ಕೂಡಾ ಮೊದಲನೇ ಸಾಲಿನ ಯಕ್ಷಗಾನ ಅರ್ಥದಾರಿ , ಹಲವು ಕೃತಿಗಳ ರಚನೆ . ಅವುಗಳಿಗೆ ವಿದ್ವಜ್ಜನರ ಮನ್ನಣೆ .

ನಾನು ಉಪ್ಪಳ ಕೆ ಎನ್ ಎಚ್ ಆಸ್ಪತ್ರೆಗೆ ಹೋಗುತ್ತಿದ್ದ ಸಮಯ  ನನ್ನ ಸಲಹೆಗಗಾಗಿ  ರೋಗಿಗಳನ್ನು ಕಳುಹಿಸುತ್ತಿದ್ದರು . ಅವರ ರೋಗ ದಾಖಲೆ ಬಹಳ ಸ್ಫುಟ .ಚಿಕಿತ್ಸಾ ವಿಧಾನ  ವೈಜ್ನಾನಿಕ . ಒಂದೆರಡು ಬಾರಿ ಅವರ ಗಣರಾಜ ಕ್ಲಿನಿಕ್ ಗೆ ಕೂಡಾ ಭೇಟಿ ನೀಡಿದ್ದೇನೆ . ಏಕ ವ್ಯಕ್ತಿ ಆಸ್ಪತ್ರೆ ಯಾದರೂ  ಒಳ ರೋಗಿ ಚಿಕಿತ್ಸೆ ,ಪ್ರಸವ ಇತ್ಯಾದಿ ನೆಡೆಸುತ್ತಿದ್ದರು ಎಂದರೆ ಅವರ ವೈದ್ಯಕೀಯ ಕ್ಷಮತೆ ಯ ಅರಿವು ಆದೀತು .  ಮಂಜೇಶ್ವರ ಗೋವಿಂದ ಪೈ ಮನೆ ಇವರ ಮನೆಗೆ ಸಮೀಪ ." ಗಿಳಿವಿಂಡು" ಅಬಿವೃದ್ದಿ ಪಡಿಸುವುದರಲ್ಲಿ  ಇವರ ಪಾತ್ರವೂ ಇದೆ .ಉಪ್ಪಳ ಐ ಎಂ ಎ ಯ ಸ್ಥಾಪಕ ಸದಸ್ಯರು ಮತ್ತು ಕ್ರಿಯಾಶೀಲ ರಾಗಿ ಭಾಗ ವಹಿಸುತ್ತಿದ್ದರು .ಇತ್ತೀಚೆಗೆ ಸಮರ್ಪಿತವಾದ ಡಾ ಪ್ರಭಾಕರ ಹೊಳ್ಳ ಅವರಿಗೆ ಗೌರವ ಗ್ರಂಥ ತಯಾರಿಯ ಮೂಲ ಪ್ರೇರಣೆ ಇವರೇ .

   ಡಾ  ಬನಾರಿ ಅವರು ಆಯುರಾರೋಗ್ಯ ದಿಂದ ಇದ್ದು ನಮ್ಮಂತವರಿಗೆ  ಮಾರ್ಗ ದರ್ಶನ ನೀಡುತ್ತಿರಲಿ .

ಗುರುವಾರ, ಮೇ 12, 2022

ಎಕ್ಸ್ ಪೆಕ್ಟೆಡ್ ಡೇಟ್ ಆಫ್ ಡೆಲಿವರಿ

 ಯಾವುದೇ  ಸ್ತ್ರೀ ರೋಗ ತಜ್ನರ ಬಳಿಗೆ ತಪಾಸಣೆಗೆ ಹೋದ ಗರ್ಭಿಣಿಯರ  ದಾಖಲೆಯ ಮೇಲ್ಬಾಗ ಎರಡು ಷಾರ್ಟ್ ಫೋರ್ಮ್ ಗಳನ್ನು ನೋಡ ಬಹುದು .ಒಂದು   ಎಲ್ ಎಂ ಪಿ (LMP) ,ಇನ್ನೊಂದು ಇ ಡಿ ಡಿ (E D D). ಕೊನೆಯ ಋತು  ಸ್ರಾವ ದ ಮೊದಲನೇ ದಿನವನ್ನು  ಎಲ್ ಎಂ ಪಿ(Last Menstrual Period) ತೋರಿಸುತ್ತದೆ . . ಇ ಡಿ ಡಿ ಎಂದರೆ  ಸಂಭವನೀಯ ಹೆರಿಗೆ ದಿನಾಂಕ(Expected Date of Delivery) . ಪ್ರಸವ ತಜ್ನರ ಬಳಿಯಿಂದ ಬಂದ ಗರ್ಭಿಣಿಯರು  ತಮಗೆ ಹೆರಿಗೆಗೆ  ಈ ದಿನಾಂಕ ಕೊಟ್ಟಿದ್ದಾರೆ ಎಂದು ಹೇಳುವರು .ಇದು ಅವರು ಬಲ್ಮೆ ಇಟ್ಟು ಹೇಳುವುದಲ್ಲ . 

    ಪೂರ್ಣ ಬೆಳವಣಿಗೆಗೆ ತಾಯ ಗರ್ಭದ ಒಳಗೆ ಸಾಮಾನ್ಯವಾಗಿ   ಶಿಶುವಿನ   ವಾಸ 280 ದಿನಗಳು . ಅದನ್ನು ಗಮನದಲ್ಲಿ ಇಟ್ಟು ಕೊಂಡು ಕೊನೇ ಋತು ಸ್ರಾವದ ಆರಂಭದ  ತಾರೀಕಿಗೆ ಏಳು ಸೇರಿಸಿ ,ಮೂರು ತಿಂಗಳು ಹಿಂದೆ  ಹೋದಾಗ ಬರುವ ದಿನಾಂಕ ಮುಂದಿನ ವರ್ಷದಲ್ಲಿ  ಸುಮಾರಾಗಿ ಹೆರಿಗೆ ದಿನ ಆಗಿರುತ್ತದೆ . ಉದಾಹರಣೆಗೆ  ಎಲ್ ಎಂ ಪಿ   20022 ಏಪ್ರಿಲ್ 15  ಆಗಿದ್ದರೆ ಏಳು ಸೇರಿಸಿದಾಗ 2022 ಏಪ್ರಿಲ್ 22 ಆಯಿತು .ಮೂರು ತಿಂಗಳು ಹಿಂದೆ ಅಂದರೆ  2022 ಜನವರಿ 22. ಒಂದು ವರ್ಷ ಮುಂದೆ ಅದೇ ದಿನ 2023 ರ ಜನವರಿ 22 . ಅದು ಇಡಿ ಡಿ .

ಈಗ  ಅಲ್ಟ್ರಾ ಸೌಂಡ್ ಸ್ಕ್ಯಾನ್ ಮೂಲಕವೂ ಸಂಭವನೀಯ ಹೆರಿಗೆ ದಿನಾಂಕ ಹೇಳುವರು .ಅದು ಹೆಚ್ಚು ನಿಖರ ಇರುವುದಲ್ಲದೆ  ದಿನ  ಲೆಕ್ಕ ಮತ್ತು ಬೆಳವಣಿಗೆ ಲೆಕ್ಕ  ಒಂದ್ಕಕೊಂದು ತಾಳೆ ಆಗುತ್ತದೆಯೋ ಎಂದು ಕೂಡಾ ಸೂಚಿಸುವದು . 

ಇನ್ನೊಂದು ಅಪಭ್ರಂಶ ಕೂಡಾ ನೀವು ಕಾಣ ಬಹುದು . ಒಂದು ಗ್ರಾವಿಡಾ (GRAVIDA )ಎಷ್ಟನೇ ಗರ್ಭಿಣಿ ಎಂದು ಸೂಚಿಸುವುದು . ಪ್ಯಾರಾ   ಎಂದರೆ ಪ್ರಸವಿದರೆ ಶಿಶು  ಬದುಕ ಸಾಧ್ಯವಾಗುವ ವರೆಗೆ ಮುಂದುವರಿದವು ಎಷ್ಟು ಎಂದು ಸೂಚಿಸಿದರೆ ಅದಕ್ಕಿಂತ ಮೊದಲೇ ಆದರೆ ಗರ್ಭಪಾತ   . ಗ್ರಾವಿಡಾ ವನ್ನು Gr ಎಂದೂ ಪ್ಯಾರಾ ವನ್ನು P ಎಂದೂ ಗರ್ಭಪಾತವನ್ನು A(Abortion) ಎಂದೂ ಸೂಚಿಸುವರು .ಉದಾ  ಒಂದು ಮಗು ಇದ್ದು ಎರಡನೇ  ಗರ್ಭಿಣಿಗೆ Gr 2 P1  ಇತ್ಯಾದಿ .

ಅದಕ್ಕೆ LD (Last Delivery) ಎಂದರೆ ಕೊನೆಯ ಹೆರಿಗೆ ಯಾವಾಗ ಎಂಬ ಸೂಚಕವೂ ಸೇರುವುದಲ್ಲದೆ  ಅದು ತಿಂಗಳು ತುಂಬಿ ಸಹಜ ಹೆರಿಗೆ ಆದರೆ FTND (Full Term Normal Delivery )ಶಸ್ತ್ರ ಚಿಕಿತ್ಸೆ ಮೂಲಕ ಆದರೆ LSCS(Lower Segment Caesarean Section)ಎಂಬ  ಷಾರ್ಟ್ ಫೋರ್ಮ್ ಕಾಣ ಬಹುದು .

 ಒಳ್ಳೆಯ ದಿನ ಮತ್ತು ನಕ್ಷತ್ರ ಬೇಕು ಎಂದು ಮೊದಲೇ ಹೆರಿಗೆ ಮಾಡಿಸಿ ಎಂದು ಗೋಗೆರೆಯುವವರೂ ಇದ್ದಾರೆ .ತಮ್ಮ ವಾಹನಕ್ಕೆ ಎಷ್ಟು  ಕೊಟ್ಟಾದರೂ  ಇಷ್ಟದ  ಮತ್ತು ಅದೃಷ್ಟದ ನಂಬರ್ Reg.  ಪಡೆಯುವಂತೆ .

ಬಾಲಂಗೋಚಿ : ಈಗ ಒನ್ ಲೈನ್ ಅಂಗಡಿಗಳಿಂದ  ವಸ್ತು ಖರೀದಿಸುವಾಗ  ಕೊರಿಯರ್ ಕಂಪೆನಿ ಯವರು EDD ಮೊದಲೇ ಸೂಚಿಸುವರು .

ಬುಧವಾರ, ಮೇ 11, 2022

ಮೌನ ಸಾಧಕರು ಡಾ ಡಿ ಸದಾಶಿವ ಭಟ್

                       


ಇವರು ಡಾ ಸದಾಶಿವ ಭಟ್.ಪುತ್ತೂರು ತಾಲೂಕು ನಿಡ್ಪ ಳ್ಳಿ ಯವರು . 90 ವರ್ಷದ ತರುಣ .ಪೆರಡಾಲ ಸಂಸ್ಕೃತ ಕಾಲೇಜಿನಲ್ಲಿ ವ್ಯಾಸಂಗ .ಮದರಾಸು ವಿಶ್ವ ವಿದ್ಯಾಲಯದ ವಿದ್ವಾನ್ ಪದವಿ . ೧೯೭೬ರಲ್ಲಿ ಮೈಸೂರು ವಿಶ್ವ ವಿದ್ಯಾಲಯದಿಂದ ಬಿ ಎ ಪದವಿ ,೧೯೭೮ ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯ ದಿಂದ ಬಿ ಎಡ್ ,೧೯೭೯ ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ದಿಂದ ಎಂ ಎ ಪದವಿ . ಇದಕ್ಕೆಲ್ಲಾ ಕಿರೀಟ ವಿಟ್ಟಂತೆ ೧೯೮೬ ರಲ್ಲಿ  ಮಂಗಳೂರು ಯೂನಿವರ್ಸಿಟಿ ಯಿಂದ 'ಪಂಜೆಯವರ ಸಾಹಿತ್ಯ ಕೃತಿಗಳು -ಒಂದು ಅಧ್ಯಯನ 'ಎಂಬ ಮಹಾ ಪ್ರಬಂಧಕ್ಕೆ ಪಿ ಎಚ್ ಡಿ ಪದವಿ .. ಇದಲ್ಲದೆ ಹಿಂದಿಯಲ್ಲಿ ರಾಷ್ಟ್ರ ಭಾಷಾ ವಿಶಾರದ . 

೧೯೬೪ ರಲ್ಲಿ ಬೆಟ್ಟಂಪಾಡಿ ನವೋದಯ ಹೈ ಸ್ಕೂಲ್ ನಲ್ಲಿ ಅಧ್ಯಾಪಕರಾಗಿ ಸೇರಿ ೧೯೯೨ರಲ್ಲಿ ನಿವೃತ್ತಿ . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿ ಎಚ್ ಡಿ ಪಡೆದ ಮೊದಲ ಹೈ ಸ್ಕೂಲ್ ಅಧ್ಯಾಪಕ ಎಂಬ ಹೆಗ್ಗಳಿಕೆ .ಅಲ್ಲದೆ ಕರ್ನಾಟಕದ ಎಲ್ಲಾ ವಿಶ್ವ ವಿದ್ಯಾಲಯ ಮತ್ತು ಮದ್ರಾಸ್ ವಿಶ್ವ ವಿದ್ಯಾಲಯ ಗಳಿಂದ ಪರೀಕ್ಷೆ ಉತ್ತೀರ್ಣ ರಾಗಿ ಪದವಿ . 

೧೯೬೦ ರಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ "ಶ್ರೀ ಸತ್ಯನಾರಾಯಣ ಯಕ್ಷಗಾನ ಕೂಟ "ಸ್ಥಾಪನೆ .ಯಕ್ಷಗಾನ ತರಬೇತಿ ತಾಳ ಮದ್ದಳೆ ಮತ್ತು ಬಯಲಾಟ ಪ್ರದರ್ಶನ .ಇವರು ಪ್ರಸಂಗ ಕರ್ತೃ,ಅರ್ಥದಾರಿ ಮತ್ತು ವೇಷಧಾರಿ ಕೂಡಾ . 

ಇವರ ಗುರು ಕನ್ನಡದೋಜ  ಪೆರಡಾಲ ಕೃಷ್ಣಯ್ಯ ಮತ್ತು ಸಹಪಾಠಿ ಅಡೂರ್ ವೆಂಕಟ್ರಾವ್ ಅವರಿಂದ ಅರ್ಥಗಾರಿಕೆಯ ಸೂಕ್ಷ್ಮಗಳ  ಕಲಿಕೆ ..೧೯೫೭ ರಲ್ಲಿ  ಹುಡುಗಿಯರಿಂದ ಮೊದಲ ಯಕ್ಷಗಾನ ಮಾಡಿಸಿದ ಶ್ರೇಯ ಇವರಿಗೆ . 

ಇದುವರೆಗೆ ೧೭೪ ಯಕ್ಷಗಾನ ಪ್ರಸಂಗಗಳನ್ನು ಪ್ರಕಟಿಸಿರುವ ಇವರು ಸಂಸ್ಕೃತ ,ಹಿಂದಿ ಭಾಷೆಯವೂ ಇದರಲ್ಲಿ ಸೇರಿರುವುದು ಗಮನಾರ್ಹ . ಇವರ ಮಾತೃ ಭಾಷೆ ಕರಾಡ್ ನಲ್ಲಿ ೩ ಮಹಾ ಕಾವ್ಯ ರಚಿಸಿದ್ದಾರೆ . ೫೧೦ ಪುಟಗಳ ಯಕ್ಷಗಾನ ಮಹಾ ಕಾವ್ಯ ವನ್ನು ರಚಿಸಿದ ಹೆಗ್ಗಳಿಕೆ . 

ಪುತ್ತೂರು ತಾಲೂಕು ೧೩ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ,ಹಲವು ಗ್ರಂಥಗಳ ಸಂಪಾದನೆ ಮತ್ತು ಸಹ ಸಂಪಾದನೆ .ಆಕಾಶವಾಣಿಯಲ್ಲಿ ವಾರದ ವ್ಯಕ್ತಿ ,ಸೀತಾನದಿ ಗಣಪಯ್ಯ ಪ್ರಶಸ್ತಿ ,ಪೊಳಲಿ ಶಾಸ್ತ್ರೀ ಪ್ರಶಸ್ತಿ ಯಂತಹ ಹತ್ತು ಹಲವು ಇವರನ್ನು ಅರಸಿ ಬಂದಿವೆ . 

ಸರಳ ಸಜ್ಜನ , ವಿನಯ ಭೂಷಣ ವಿದ್ವತ್ ಇವರ ಛಾಪು . 

ಇವರು ಆರೋಗ್ಯವಾಗಿದ್ದು ಇನ್ನೂ ಸಾಹಿತ್ಯ ಕಲಾ ಸೇವೆ ಮುಂದುವರಿಸಲಿ .

ಇವರ ಕೃತಿಗಳ ಪಟ್ಟಿ 



ಮಂಗಳವಾರ, ಮೇ 10, 2022

ಅಗಲಿದ ಮಿತ್ರ ಅಮೈ ವಸಂತ ಆಚಾರ್ಯ


 ಪುತ್ತುರಿನಲ್ಲಿ ನನಗೆ ಎಲ್ಲಾ ಸ್ತರದವರು ಮತ್ತು ವಿವಧ ಉದ್ಯೋಗದಲ್ಲಿ ಇರುವ ಮಿತ್ರರು ಇದ್ದಾರೆ . ನಾನು ಅವರೊಡನೆ ಮಾತು ಕತೆಯಿಂದ ಸಂತೋಷ ಪಡುತ್ತೇನೆ .ಅಂತವರಲ್ಲಿ ಒಬ್ಬರು ಮೂರು ತಿಂಗಳುಗಳ ಹಿಂದೆ ನಮ್ಮನ್ನು ಅಗಲಿದ ಶ್ರೀ ವಸಂತ ಆಚಾರ್ಯ .

ಇವರು ನಲುವತ್ತು ವರ್ಷ ಗಳಿಂದ ಅರುಣಾ ಥಿಯೇಟರ್ ಬಳಿ ವಾಚ್ ದುರಸ್ತಿ ಅಂಗಡಿ ನಡೆಸುತ್ತಿದ್ದರು .ಪುತ್ತೂರು ಹಾರಾಡಿ ಯಲ್ಲಿ ಮನೆ.ಮುಂಜಾನೆ  ವಾಕಿಂಗ್  ಹಾರಾಡಿ ಯಿಂದ ಕರ್ಮಳ  ವಿವೇಕಾನಂದ ಕಾಲೇಜ್ ಮೂಲಕ ನಗರಕ್ಕೆ ಬಂದು ಮುಖ್ಯ ರಸ್ತೆ ಯಲ್ಲಿ  ಬೊಳುವಾರು ಮೂಲಕ ವಾಪಾಸು .ನನಗೆ  ಎದುರು ಸಿಕ್ಕು ಒಂದು ನಮಸ್ಕಾರ ಉಭಯ ಕುಶಲೋಪರಿ . ನಾನು ಅವರ ಅಂಗಡಿಗೆ ವಾಚ್ ರಿಪೇರ್ ಇದ್ದರೆ ಅಥವಾ ಎದುರು ರಸ್ತೆಯಲ್ಲಿ ಹೋಗುತ್ತಿದ್ದರೆ ನಗು ಮುಖದ ಅವರ ಮಾತುಗಳು . 

ಇದ್ದಕ್ಕಿಂದ್ದಂತೆ ಹೋಗಿ ಬಿಟ್ಟರು .ನನಗೆ ತಿಳಿದಾಗ ತಿಂಗಳು ಕಳಿದಿತ್ತು.

ಪಂಖಾವರೋಹಣ

 



ನಮ್ಮ ಮನೆ ಜಗಲಿಯಲ್ಲಿ ಸೆಖೆಗಾಲಕ್ಕೆ ಆಗಲಿ ಎಂದು ಒಂದು ಫ್ಯಾನ್  ಹಾಕಿಸಿದ್ದೆವು .ಕಳೆದ  ಕೆಲವು  ತಿಂಗಳಿನಿಂದ  ಹಕ್ಕಿ  ಅದರ  ಮೇಲೆ ಗೂಡು  ಕಟ್ಟಲು ಶತ  ಪ್ರಯತ್ನ  ಮಾಡುತ್ತಿದೆ ,ದಿನವೂ  ಆ ಕಸವನ್ನು  ಗುಡಿಸುವುದೇ ಪ್ರಯಾಸ ಆಗ ತೊಡಗಿತು . ಹಕ್ಕಿಗಳು  ಕಡ್ಡಿ ಎಲೆ ಜತೆ  ಹಾವಿನ ಪೊರೆ ಎಲ್ಲೆಲ್ಲಿಂದಲೋ ಹೆಕ್ಕಿ  ತರುತ್ತಿದ್ದು ಅವುಗಳ ಸಂಗ್ರಹ ವೈವಿಧ್ಯ ಮತ್ತು ತಾಂತ್ರಿಕ ಜ್ಞಾನ  ಬೆರಗು  ಹುಟ್ಟಿಸುವಂತಹದು . 

ಹಕ್ಕಿಗಳ ಮರಳಿ ಯತ್ನವ ಮಾಡು ಎಂಬ  ಶ್ರಮ ಸುಮ್ಮನೆ ವ್ಯರ್ಥ ವಾಗುವುದು ಮತ್ತು ದಿನವಿಡೀ ಕಸ ಶೇಖರಣೆ  ಕಂಡು ಇಂದು ಮುಂಜಾನೆ ಆ ಫ್ಯಾನನ್ನು ಅವರೋಹಣ  ಮಾಡಿದೆನು .

ಸೋಮವಾರ, ಮೇ 9, 2022

ಕೆಲ ವೈದ್ಯಕೀಯ ಪರೀಕ್ಷಾ ಕ್ರಮಗಳು

 ವೈದ್ಯಕೀಯ ಪರೀಕ್ಷಣ ದಲ್ಲಿ  ಕೆಲವು ನಿಯಮಗಳು ಇವೆ . ಉದಾಹರಣೆಗೆ  ಬಲ ಬಾಗದ ಕೆಳ ಹೊಟ್ಟೆ ನೋವು ಎಂದು ಬಂದರೆ ನಾವು  ಕೈಯಿಂದ ಮುಟ್ಟಿ ಪರೀಕ್ಷೆ  ಮಾಡುವಾಗ ನೋವು ಇಲ್ಲದ ಭಾಗದಿಂದ ಆರಂಬಿಸಿ ಕೊನೆಗೆ ನೋವು ಇರುವ ಜಾಗಕ್ಕೆ ಬರುತ್ತೇವೆ . ಹಲವು ರೋಗಿಗಳು ಇವರು ನನಗೆ ಬಲ ಬದಿಯಲ್ಲಿ ನೋವು ಇದ್ದರೆ ಎಡ ಬದಿ ಯಾಕೆ ಪರೀಕ್ಷೆ ಮಾಡುತ್ತಿದ್ದಾರೆ ಎಂದು ತಪ್ಪು ತಿಳಿಯುವರು . ನೋವು ಇರುವ ಕಡೆ ಮೊದಲೇ ಮುಟ್ಟಿದರೆ ಉಳಿದ ಕಡೆ ಮುಟ್ಟುವಾಗಲೂ ಹೊಟ್ಟೆಯ ಮೇಲ್ಮೈ ಯ  ಮಾಂಸ ಖಂಡದಳು  ರೋಗಿಯ ಅರಿವಿಲ್ಲದಂತೆಯೇ ಸಂಕುಚನ ಗೊಂಡು (Contracting ) ಗಟ್ಟಿಯಾಗಿ ನಮಗೆ  ಒಳಗಿನ ಅಂಗಗಳ ಬಗ್ಗೆ ತಿಳಿಯುವುದು ಕಷ್ಟವಾಗುವುದು . 

ಇನ್ನು ವೈದ್ಯ ಶಾಸ್ತ್ರದಲ್ಲಿ ಯಾವುದೇ ಉದರ  ಪರೀಕ್ಷೆ ಯು  ಹರ್ನಿಯಾ ಉಂಟಾಗುವ ತಾಣಗಳ (ಉದಾ ತೊಡೆ ಬುಡ )ಮತ್ತು ಗಂಡಸರಲ್ಲಿ ವೃಷಣ ಪರೀಕ್ಷೆ  ಹೊರತಾಗಿ ಅಪೂರ್ಣ ವೆನಿಸುವುದು ಎಂಬ ನಿಯಮ ಇದೆ .ಬಹಳ ವೇಳೆ  ರೋಗಿ ಗೆ ಸಂಕೋಚ ಉಂಟು ಮಾಡುವುದು ಯಾಕೆಂದು ಇದನ್ನು ಬಿಟ್ಟು ಬಿಡುವುದು ಸಾಮಾನ್ಯ .ಕೆಲವೊಮ್ಮೆ  ಇದರಿಂದ ರೋಗ ಪತ್ತೆ ಕೈ ತಪ್ಪುವುದು . 

ಇನ್ನು  ಗುದದ್ವಾರದ ಮತ್ತು ಸುತ್ತಲಿನ ರೋಗ ಲಕ್ಷಣಗಳಿಂದ ಬರುವ ರೋಗಿದಳ ಗುದನಾಳದ ಒಳ ಭಾಗವನ್ನು ತೋರು ಬೆರಳಿನ ಮೂಲಕ ಪರೀಕ್ಷೆ ಮಾಡ ಲೇ  ಬೇಕು ಎಂದು ಶಸ್ತ್ರ ಚಿಕಿತ್ಸಾ ಶಾಸ್ತ್ರದಲ್ಲಿ ಕಲಿಸುವರು . ಆ ಶಾಸ್ತ್ರದ ಜನಪ್ರಿಯ ಪಠ್ಯ ಪುಸ್ತಕ ಬೈಲಿ ಮತ್ತು ಲವ್ ನಲ್ಲಿ If you don’t put your finger in, you might put your foot in it’ ಎಂಬ ಹೇಳಿಕೆ ಇದೆ . 

ಹಿಂದೆ  ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಮೇಲಿನ ಪರೀಕ್ಷಣಗಳನ್ನು ಮಾಡದ ಕಾರಣ  ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಿದ ನಿದರ್ಶನಗಳು ಇವೆ . 

ಹೊಟ್ಟೆಯ ಕಾಯಿಲೆಗಳು ಎದೆಯಲ್ಲಿಯೂ ಮತ್ತು ಎದೆಯ ಕಾಯಿಲೆ ಹೊಟ್ಟೆಯಲ್ಲಿಯೂ ರೋಗ ಲಕ್ಷಣ ಉಂಟು ಮಾಡಬಲ್ಲವು . ಆದುದರಿಂದ ವೈದ್ಯರು ರೋಗಿ ಹೇಳದಿದ್ದರೂ ಎರಡನ್ನೂ ಪರೀಕ್ಷೆ ಮಾಡುವರು .

ಇದೇ  ರೀತಿ ತಲೆ ನೋವು ಎಂದು ಬಂದವರ ಕಾಲು ಕೂಡಾ ಪರೀಕ್ಷೆ ಮಾಡ ಬೇಕಾಗಿ ಬರ ಬಹುದು . ವೈದ್ಯರನ್ನು ತಪ್ಪು  ತಿಳಿಯ ಬಾರದು . 

ಬಾಲಂಗೋಚಿ :ವೈದ್ಯಕೀಯ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ  ರೋಗಿಯನ್ನು ಕೊಟ್ಟು ಪರೀಕ್ಷೆ  ಮಾಡಿ ಡಯಗ್ನೋಸಿಸ್  ಮಾಡಲು ಹೇಳುವರು  . ಇಲ್ಲಿ ರೋಗದ ಇತಿಹಾಸ ಪಡೆದು ಕೊಳ್ಳುವ ರೀತಿ , ಪರೀಕ್ಷಾ ವಿಧಾನ ,ಮತ್ತು  ರೋಗ ನಿಧಾನ ಎಲ್ಲದಕ್ಕೂ  ಅಂಕಗಳು ಇವೆ . ಮೊದಲು ಪರೀಕ್ಷೆ  ಆದ ವಿದ್ಯಾರ್ಥಿಗಳಿಂದ ಕೆಲವು  ಕ್ಲ್ಯೂ  ನಂತರದವರು  ಕೇಳಿ  ತಿಳಿಯುವರು ,ಏನು  ಕೇಸ್ ಇಟ್ಟಿದ್ದಾರೆ   ಏನೇನು ಪ್ರಶ್ನೆ ಕೇಳುತ್ತಾರೆ ಇತ್ಯಾದಿ . ಒಂದು ಪರೀಕ್ಷೆ ಯಲ್ಲಿ  ಮುಖ್ಯ ಕೇಸ್  ಮೆದುಳಿನಲ್ಲಿ  ರಕ್ತ ಹೆಪ್ಪುಗಟ್ಟುವುಕೆ ಯಿಂದ  ಬಲ ಭಾಗದ ಪಾರ್ಶ್ವ  ವಾಯು ಆಗಿದ್ದ ರೋಗಿ .ಅವನಿಗೆ  ಕಾಕತಾಳೀಯವಾಗಿ   ವೃಷಣ ಚೀಲದ ನೀರು (Hydrocele ) ಕೂಡಾ ಇತ್ತು .ಸಾಮಾನ್ಯವಾಗಿ ಇಂತಹ ಕೇಸ್ ನಲ್ಲಿ ನಾವು ವೃಷಣ ಪರೀಕ್ಷೆ ಮಾಡುವುದಿಲ್ಲ . ಮೊದಲು ಪರೀಕ್ಷೆ ಆದ  ವಿದ್ಯಾರ್ಥಿಗಳು ಅಲ್ಲಿ ಬಲ ಬದಿ ಪ್ಯಾರಾಲಿಸಿಸ್  ಕೇಸ್ ಇಟ್ಟಿದ್ದಾರೆ ,ಅವನಿಗೆ ಹೈಡ್ರೋಸೀಲ್ ಕೂಡಾ ಇದೆ ,ನೋಡಲು ಮರೀ  ಬೇಡ ಜಾಗ್ರತೆ ಎಂದು ನಂತರ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ  ಎಚ್ಚರಿಸುತ್ತಾರೆ . ಮರುದಿನ  ಆ ರೋಗಿಯನ್ನು ಬದಲಿಸಿ ಬೇರೆ ವ್ಯಕ್ತಿಯನ್ನು ಇಟ್ಟಿದ್ದರು,ಅವನಿಗೂ  ಬಲ  ಬದಿ ಪಾರ್ಶ್ವ ವಾತ .ನರಾಂಗದ ಮುಖ್ಯ ಪರೀಕ್ಷೆ ಆದ  ಮೇಲೆ ಮರೆಯದೇ  ವೃಷಣ ಪರೀಕ್ಷೆ ಮಾಡಿದ  ಹುಡುಗನಿಗೆ ಅಲ್ಲಿ  ನೀರು ತುಂಬಿದ್ದು ಕಾಣದೆ ನಿರಾಶೆ .  ಪರೀಕ್ಷಕರು  ಅವನ ಪ್ರೆಸೆಂಟೇಷನ್ ಎಲ್ಲಾ  ಕೇಳಿ ವಾಟ್ ಐಸ್ ಯುವರ್ ಡೈಗನೊಸಿಸ್ ?ಎಂದು ಕೇಳಲು ಸರ್ It is a case of stroke with right hemipareris (ಬಲಬದಿ ಪಾರ್ಶ್ವವಾತ) without hydrocele ಎಂದುಉತ್ತರಿಸಿದಾಗ ಪರೀಕ್ಷಕರು ತಬ್ಬಿಬ್ಬು.

ಶನಿವಾರ, ಮೇ 7, 2022

ಪಂಜಾಜೆ ರಾಮ ಭಟ್

                              


                                     ಜನನ   22.01.1934                   ನಿಧನ  02.05.2022

                                                 



                                               ಅವಳ ಉಡುಗೆ ಇವಳಿಗಿಟ್ಟು ನೋಡಬಯಸಿದೆ,
                                               ಇವಳ ತೊಡುಗೆ ಅವಳಿಗಿಟ್ಟು ಹಾಡಬಯಸಿದೆ.”

            ಎಂಟನೇ ತರಗತಿಯಲ್ಲಿ ಇರಬೇಕು .ಬಿ ಎಂ ಶ್ರೀ ಅವರ ಮೇಲಿನ  ಸಾಲುಗಳು ಇರುವ ಕವನ ದ  ಅರ್ಥ ವಿಶ್ಲೇಷಣೆ ಮಾಡಲು ಪರೀಕ್ಷೆಯಲ್ಲಿ ಪ್ರಶ್ನೆ ಕೇಳಿದ್ದರು . ನಮಗೆ ಪಾಠಕ್ಕೆ ಇಲ್ಲದ (ಪಠ್ಯ ಪುಸ್ತಕ ದಲ್ಲಿ ಇಲ್ಲದ )ಒಂದು ಕವನ ದ  ಬಗ್ಗೆ ಒಂದು ಪ್ರಶ್ನೆ ಎಲ್ಲಾ ಪರೀಕ್ಷೆಯಲ್ಲಿಯೂ ಕೇಳುತ್ತಿದ್ದರು . ನನಗೆ ಆಗ ಇದರ ತಲೆ ಬುಡ ಗೊತ್ತಾಗಲಿಲ್ಲ ಮತ್ತು ಪ್ರಾಮಾಣಿಕವಾಗಿ  ನನಗೆ ಅರ್ಥ ಆಗಿಲ್ಲ ಎಂದೇ ಬರೆದೆ .ನಮ್ಮ ಕನ್ನಡ ಮಾಸ್ಟ್ರು ಪ್ರಸಿದ್ಧ ರಾದ ಪಂಜಾಜೆ ಶಂಕರ ಭಟ್ ಅವರು . ನನ್ನ ಉತ್ತರ ಪತ್ರಿಕೆ ಓದಿ ,ಈ ಹೊಸ (ನವೋದಯ )ಕವಿತೆಗಳು ನನಗೂ ಸರಿ ಅರ್ಥ ವಾಗುವುದಿಲ್ಲ ಎಂದರು . ಒಂದರಿಂದ ಪಿ ಯು ಸಿ ವರೆಗೆ ನನ್ನ ಸಹಪಾಠಿ ಮಿತ್ರ ಪಂಜಾಜೆ ನರಸಿಂಹ ಭಟ್ .(ಈಗ ಬೆಂಗಳೂರಿನಲ್ಲಿ ನೆಲಸಿದ್ದಾರೆ )ಅವರ ಚಿಕ್ಕಪ್ಪ  ರಾಮ ಭಟ್ . ಅವರ ಮೂಲಕ ಮೇಲಿನ ಪದ್ಯದ  ನಿಜ  ಭಾವಾರ್ಥ ನನಗೆ ತಿಳಿಯಿತು . 

ರಾಮ ಭಟ್ ಮೊದಲು ಶಿರಂಕಲ್ಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು . ಆಮೇಲೆ ಪಂಡಿತ ಪರೀಕ್ಷೆ ಉತ್ತೀರ್ಣರಾಗಿ ಪುತ್ತೂರು ವಿಕ್ಟರ್ಸ್ ಹೆಣ್ಣು ಮಕ್ಕಳ ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ  ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು . ಇವರ ವಿಶೇಷ ಎಂದರೆ ನಿಜಕ್ಕೂ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಅತೀವ ಆಸಕ್ತಿ ಇದ್ದವರು .ಯಾವಾಗಲೂ  ಒಳ್ಳೆಯ ಪುಸ್ತಕ ಹಿಡಿದು ಗೋಡೆಗೆ ಒರಗಿ  ಕುಳಿತು ಓದಿಕೊಂಡು ಇರುತ್ತಿದ್ದರು ಎಂದು ಮಿತ್ರ  ನರಸಿಂಹ ಹೇಳುವರು . ರಾಮ ಭಟ್ ಅವರ ಅಣ್ಣ  ಶಂಕರ ಭಟ್ ನರಸಿಂಹನ ತಂದೆ .  ನಿವೃತ್ತಿ ನಂತರ ಸುಮಾರು ಏಳು ವರ್ಷ ಬೆಂಗಳೂರಿನಲ್ಲಿ ಅಣ್ಣನ ಜತೆ ಇದ್ದು ಅವರು ತೀರಿ ಕೊಂಡ ಮೇಲೆ ಹರಹರದ ತಮ್ಮ ಮಗನ ಮನೆಗೆ ಹೋಗಿ ಇದ್ದರು .  ಇವರ ಶ್ರೀಮತಿಯವರು ಎಳವೆಯಲ್ಲಿಯೇ ತೀರಿಕೊಂಡ ಆಘಾತವನ್ನು ಕೂಡು ಕುಟುಂಬ  ಸಹನೀಯ ಮಾಡಿತು ಎನ್ನ ಬಹುದು . ಶಂಕರ ಭಟ್ ಮತ್ತು ರಾಮ ಭಟ್ ರಾಮ ಲಕ್ಷ್ಮಣ ರಂತೆ ಇದ್ದವರು . ಬಹಳ ಸಾರಿ  ಮಂಗಳೂರಿನ ಅತ್ರಿ ಬುಕ್ ಸೆಂಟರ್ ನಲ್ಲಿ ನಾನೂ ರಾಮ ಭಟ್ಟರೂ ಮುಖಾ ಮುಖಿ ಆದದ್ದು ಇದೆ ಎಂದರೆ ಎಷ್ಟು ಪುಸ್ತಕ ಪ್ರಿಯರು ಎಂದು ಊಹಿಸ ಬಹುದು . ಅವರ ಮನೆಗೆ ಕರ್ಮವೀರ ಮತ್ತು ಕಸ್ತೂರಿ  ಆ ಕಾಲದಲ್ಲಿಯೇ ನಿಯತವಾಗಿ ಬರುತ್ತಿತ್ತು .

ರಾಮ ಭಟ್ ಅವರದು ಗೌರವ ವರ್ಣ ,ಬಹಳ ಚಂದದ ನಗು ಮುಖ ,ಅಷ್ಟೇ ಆಕರ್ಷಕ ಅವರ ಮಾತು . ಅವರ ತರಗತಿಗಳು ಎಂದರೆ ವಿದ್ಯಾರ್ಥಿಗಳಿಗೆ ಹಬ್ಬಗ ಎಂದು ಅನೇಕರು ನೆನಪಿಸಿ ಕೊಳ್ಳುತ್ತಾರೆ . 

ಅಣ್ಣ ಶಂಕರ ಭಟ್  ಮೃದುಭಾಷಿ  ,ಸಜ್ಜನ .ಕೃಷಿಯೊಡನೆ ಕನ್ಯಾನದಲ್ಲಿ ಕರೋಪಾಡಿ ಸೊಸೈಟಿಯ ರೇಷನ್ ಅಂಗಡಿ ಉಸ್ತುವಾರಿ  ನೋಡಿ ಕೊಳ್ಳುತ್ತಿದ್ದು  ಆಮೇಲೆ  ಅಕ್ಕಿ ಮಿಲ್ ಕೂಡಾ ನಡೆಸುತಿದ್ದರು  ಎಂದು ನೆನಪು .ಕೆಲವು ವರ್ಷಗಳ ಹಿಂದೆ ತೀರಿ ಕೊಂಡರು

ಬಾಲಂಗೋಚಿ :ಈಗ ವೃತ್ತಿಗಾಗಿ ಕನ್ನಡ ಆರಿಸಿ ಕೊಳ್ಳುವವರು (ಎಂಎ  ಪಿ ಎಚ್ ಡಿ ಇತ್ಯಾದಿ ಇದ್ದವರೂ ಸೇರಿ )ಕೆಲಸಕ್ಕೆ ಸೇರಿದ ಮೇಲೆ ಭಾಷೆ ಮತ್ತು ಸಾಹಿತ್ಯದಲ್ಲಿ ತೋರುವ ಅನಾಸ್ಥೆ  ಕಂಡಾಗ ಬೇಸರ ಆಗುವುದು

ಗುರುವಾರ, ಮೇ 5, 2022

ಇಳಿದು ಬಾ ತಾಯಿ

ಬಹಳ ಮಂದಿ ತಲೆ ನೋವಿನಿಂದ ಬಳಲುವವರು ತಮಗೆ ಶೀತವೇ ಇತ್ತೀಚಿಗೆ ಆಗುವುದಿಲ್ಲ .ಶೀತವಾಗಿ ಮೂಗಿನಿಂದ ಇಳಿದರೆ ತಲೆ ನೋವು ತನ್ನಿಂದ ತಾನೇ ಕಡಿಮೆ ಆಗುವುದು .ಆದ ಕಾರಣ ಶೀತವಾಗಲು ಮದ್ದು ಕೊಡಿ ಎಂದು ಕೇಳುತ್ತಾರೆ . 

ಇದು ಸ್ವಲ್ಪ ನಿಜ ಇರ  ಬಹುದು .ನಮ್ಮ ಮೂಗಿನ ಸುತ್ತ ಮುತ್ತ ಎಲುಬಿನಲ್ಲಿ ಪ್ಯಾರಾ ನೇಸಲ್ (ನಾಸಿಕ ಕ್ಕೆ ಹೊಂದಿಕೊಂಡ )ಸೈನಸ್ ಎಂಬ  ಖಾಲಿ ಜಾಗ  ಇರುತ್ತವೆ . ನಮ್ಮ ಸ್ವರಕ್ಕೆ ವಿಶೇಷ ಗುಣ ಕೊಡುವುದು(ಮ್ಯೂಸಿಕ್ ಸಿಸ್ಟಮ್ ನ ಟೊಳ್ಳು ಸ್ಪೀಕರ್ ಪೆಟ್ಟಿಗೆಯಂತೆ  ) ಮತ್ತು ಮೂಗನ್ನು ಆರ್ದ್ರವಾಗಿ ಇಟ್ಟುಕೊಳ್ಳುವ ದ್ರವ ಉತ್ಪತ್ತಿ  ಇವುಗಳ ಕಾರ್ಯ . ಎಲ್ಲಾ ಸೈನಸ್ ಗಳು ನಾಳಗಳ ಮೂಲಕ ಮೂಗಿಗೆ ಸಂಪರ್ಕ ಪಡೆದಿವೆ . ಶೀತ  ಆದಾಗ ಈ ನಾಳಗಳು  ಮುಚ್ಚಿ ಸೈನಸ್ ಗಳಲ್ಲಿ ಉತ್ಪತ್ತಿ ಆದ  ದ್ರವ್ಯ ಹೊರ ಹೋಗಲು ಸಾಧ್ಯವಿಲ್ಲದೆ ಅಲ್ಲಿಯೇ ತುಂಬಿ ಮತ್ತು ಕೆಲವೊಮ್ಮೆ ಬ್ಯಾಕ್ಟೀರಿಯಾ ಸೋಂಕು ಹೊಂದಿ ನೋವು ಉಂಟು ಮಾಡ ಬಹುದು .ಇದಕ್ಕೆ ಸೈನುಸೈಟಿಸ್ ಎನ್ನುತ್ತಾರೆ . ಇಲ್ಲಿ ಕಫ ಇಳಿದರೆ ತಲೆನೋವು ಕಡಿಮೆ ಆಗುವ ಸಾಧ್ಯತೆ ಇದೆ 

ಇದು ಬಿಟ್ಟರೆ  ಸೋಂಕೇತರ ಕಾರಣಗಳಲ್ಲಿ  ತಲೆ ನೋವು ಬರುವದು ಸಾಮಾನ್ಯಾಗಿ ಉದ್ವೇಗದ ತಲೆನೋವು (ಟೆನ್ಶನ್ ಟೈಪ್ )ಮತ್ತು ಮೈ ಗ್ರೇನ್ . ನಮ್ಮಲ್ಲಿ  ಶೀತ ಇಳಿದು ಹೋಗುವುದಿಲ್ಲ ಎಂದು ಬರುವವರು ಈ ವರ್ಗದವರು ,. ಇದಕ್ಕೂ ಶೀತಕ್ಕೂ ಯಾವ ಸಂಬಂಧವೂ ಇಲ್ಲ . ಅದಕ್ಕೆ ಯೋಗ್ಯ ಔಷಧಿಗಳು ಇವೆ . 

ಶೀತ ಉಂಟು ಮಾಡಲು ನಮ್ಮಲ್ಲಿ ಮದ್ದು ಇಲ್ಲ .ನಾನು ಹಾಗೆ ಕೇಳಿ ಕೊಳ್ಳುವವರಲ್ಲಿ  'ಇಳಿದು ಬಾ ತಾಯಿ ಇಳಿದು ಬಾ  ನನ್ನ ಮೂಗಿಂದ ,ಬದಿಯ ಸೈನಸ್ ನಿಂದ ಇಳಿದು ಬಾ "ಎಂದು ಹಾಡಿರಿ ಎನ್ನುವೆನು .

Definition of paranasal sinus - NCI Dictionary of Cancer Terms - NCI


 

ವಿವಾಹ ಒಂದು ಚಿಂತನೆ

 ಕೆಲ  ತಿಂಗಳ ಹಿಂದೆ ನನ್ನೊಂದಿಗೆ ಕೆಲಸ ಮಾಡುತ್ತಿದ್ದ  ಯುವ ವೈದ್ಯೆ ಕಾಣ ಸಿಕ್ಕಿದರು .ವರ್ಷ ಹಿಂದೆ ಅವರ ಮದುವೆಗೆ ಹೋಗಿದ್ದೆ .ಈ ಬಾರಿ ಸಿಕ್ಕಿದಾಗ ಲೋಕಾಭಿರಾಮವಾಗಿ ಹೇಗಿದೆ ವೈವಾಹಿಕ ಜೀವನ ?ಎಂದು ವಿಚಾರಿಸಲು ನಮ್ಮದು ದೈವೋರ್ಸ್ ಆಯಿತು ಎಂದರು .ಯಾಕಾದರೂ ಕೇಳಿದೆನೋ ಎಂದು ವಿಷಯ ಬದಲಿಸಿ ಕೆಲ ಹೊತ್ತು ಮಾತನಾಡಿದೆ . ಇದು ನನ್ನ ಮೊದಲನೇ ಅನುಭವ ಅಲ್ಲ . ಗಂಡ ಹೆಂಡತಿ ಬೇರೆ ಆಗುವ ಹಲವು ನಿದರ್ಶನ ಇತ್ತೀಚೆಗೆ ಕಂಡಿದ್ದೇನೆ . ಕೆಲವು ಮಕ್ಕಳಾದ ನಂತರ ,ಹಲವು ಅದಕ್ಕಿಂತ ಮೊದಲೇ . ಇನ್ನು ಕೆಲವು ಸಂಬಂಧಗಳು  ನಿಶ್ಚಿತಾರ್ಥ ಆದ ಮೇಲೆ ಮುರಿದಿವೆ .ಇದು ಆದರೂ ಸ್ವಲ್ಪ ಪರವಾಗಿಲ್ಲ ಎನ್ನ ಬಹುದು .

ನೀವು ಗಮನಿಸಿರುವಂತೆ ನಿಶ್ಚಿತಾರ್ಥ ,ಮದುವೆ (ಮದರಂಗಿ ಶಾಸ್ತ್ರ ಇತ್ಯಾದಿ ಸೇರಿ )ಸಮಾರಂಭಗಳು ಇತ್ತೀಚೆಗೆ ಬಹಳ ವೈಭವೇತ ವಾಗಿ ಗೌಜಿ ಗದ್ದಲಗಳಿಂದ ನಡೆಯುತ್ತವೆ .ಹೆಚ್ಚು ಕಡಿಮೆ ನಾವು ವಿದೇಶ . ಉತ್ತರ ಭಾರತ ಮತ್ತು ಹಿಂದಿ ಸಿನೆಮಾ ದಿಂದ ಬಹಳ ಸ್ಪೂರ್ತಿ ಪಡೆದಂತೆ ಕಾಣುತ್ತದೆ . ವಿವಾಹೋತ್ತರ ಸಂಬಂಧ ಹೊಂದಾಣಿಕೆ ಇಲ್ಲದೆ ಶಿಥಿಲ ವಾಗುತ್ತಿದೆ . ಜತೆಗೆ ಕಾವಲು ನಾಯಿ (ವಾಚ್ ಡಾಗ್ )ಗಳಾಗಿ ಹಿರಿಯರೂ ಮಕ್ಕಳ ಜತೆ ಇರುವುದಿಲ್ಲ . ಗಂಡು ಹೆಣ್ಣು ಇಬ್ಬರೂ ಆರ್ಥಿಕವಾಗಿ ಸ್ವಾವಲಂಬಿ ಆಗಿದ್ದು  ಒಬ್ಬರ ಹಂಗಿನಲ್ಲಿ (ಹಾಗೆ ತಿಳಿದರೆ )ಇನ್ನೊಬ್ಬರು ಇರಬೇಕಾಗಿಲ್ಲ .

 ನಮ್ಮಂತಹ ಹಳೆಯ ತಲೆಮಾರಿನವರಿಗೆ ಇದೊಂದು ಸಮಸ್ಯೆ ಎಂದು ತೋರಿದರೆ ಇಂದಿನ ಜನಾಂಗಕ್ಕೆ ಇದುವೇ ಸರಿ ಎನಿಸ ಬಹುದು .ಮೂರು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಪ್ರಸಿದ್ದ ಕತೆಗಾರ ಸಾಹಿತಿ ಯವರೊಡನೆ  ಸಂವಾದ ಕಾರ್ಯಕ್ರಮದಲ್ಲಿ  ನಿವೃತ್ತ ಪ್ರಾಧ್ಯಾಪಿಕೆ ಒಬ್ಬರು ಈ ಗಂಭೀರ ಸಮಸ್ಯೆ ಬಗ್ಗೆ  ಅವರ ಅಭಿಪ್ರಾಯ ಕೇಳಲು "ಇದು ಒಳ್ಳೆಯ ಬೆಳವಣಿಗೆ ,ಪರಸ್ಪರ ಹೊಂದಾಣಿಕೆಯಿಲ್ಲದೆ ಜೀವನ ಪರ್ಯಂತ ಕೊರಗುತ್ತ ಬದುಕುವುದಕ್ಕಿಂತ ಬೇರೆ ಬೇರೆ ಆಗುವುದೇ ಲೇಸು ಅಲ್ಲವೇ ?" ಎಂದು ಉತ್ತರಿಸಿದರು .ಪ್ರಶ್ನೆ ಕೇಳಿದವರು ನಿರೀಕ್ಷಿಸಿದ್ದ ಉತ್ತರ ಅದಲ್ಲ .

ಹಿಂದೆ ಗಂಡ ಹೆಂಡಿರು ಪರಸ್ಪರ ಋಣಾತ್ಮಕ ವಿಚಾರಗಳನ್ನು ಸರಿ ತೂಗಿಸಿ ,ಆದಷ್ಟು ಹೊರಗೆ ಪ್ರಕಟ ಪಡಿಸದೆ ದಾಂಪತ್ಯ ಜೀವನ ನಡೆಸುತ್ತಿದ್ದರು .ನನ್ನ ಬಂಧು ಓರ್ವ ಹಿರಿಯ ಮಹಿಳೆಯ ಗಂಡ ಶೀಘ್ರ ಕೋಪಿ ;ಈಕೆಯಾದರೋ ಅವರಿಗೆ ಹೊಂದಿ ಕೊಂಡು ಹೋಗುವರು .ನೆಂಟರು ಇಷ್ಟರೊಡನೆ ತಮ್ಮ ಗಂಡನ ಕೋಪವನ್ನೇ ಒಂದು ಸದ್ಗುಣ ಎಂದು ಹೇಳಿಕೊಳ್ಳುವರು .(ಎಂತ ಕೋಪ ಇವರಿಗೆ ,ಸಿಟ್ಟು ಬಂದರೆ ದೂರ್ವಾಸರೇ ಇತ್ಯಾದಿ ).ಜೀವನವಿಡೀ ತಗ್ಗಿ ಬಗ್ಗಿ ನಡೆದು ಇಳಿ ವಯಸ್ಸಿನಲ್ಲಿ ಅಮೆರಿಕಾ ದಲ್ಲಿ ಇರುವ ಮಗನ ಮನೆಗೆ ಹೋಗಿ ಇದ್ದು ಬಂದರು .ಅಲ್ಲಿ ಮಗ ಹೆಂಡತಿಗೆ ಕೊಡುವ ಗೌರವ ,ಮಾಡುವ ಸಹಾಯ ,ಮತ್ತು ಹೊರಗಡೆ ಮಹಿಳೆಯ ಸ್ಥಾನ ಮಾನ ಕಂಡು ಜ್ನಾನೋದಯ ಆದಂತಾಗಿ ತಿರುಗಿ ಬಂದವರು ಸಂಪೂರ್ಣ ಬದಲಾದರು.ಹಿಂದಿನ ಬಾಕಿ ತೀರಿಸಲೋ ಎಂಬಂತೆ ಗಂಡ ಮಾಡದಿದ್ದರೂ ತಪ್ಪು ಕಂಡು ಹುಡುಕಿ ಜಗಳ ಮಾಡ ತೊಡಗಿದರು . ಇವರ ಯಜಮಾನರು ದುಷ್ಟ ರೇನೂ ಅಲ್ಲ .ಬಾಲ್ಯದಲ್ಲಿಯೇ ತಂದೆಯನ್ನು ಕಳೆದು ಕೊಂಡು ,ತಮ್ಮ ಮನೆಯನ್ನು ಮತ್ತು ತಮಗಿಂತಲೂ ಕಷ್ಟದಲ್ಲಿ ಇದ್ದ ಸಮೀಪದ ಬಂಧುಗಳ ಜೀವನ ವನ್ನು (ಅಗೆಲ್ಲಾ ಬಂಧು ಮಿತ್ರರಿಗೆ ಸಂಕಷ್ಟದಲ್ಲಿ ಸಹಾಯ ಮಾಡುವುದು ಧರ್ಮ ಆಗಿತ್ತು )ಒಂದು ನೆಲೆಗೆ ತರುವ ಜವಾಬ್ದಾರಿ ಹೊತ್ತಿದ್ದರು .

ಬದಲಾವಣೆ ಗಂಡತಿ ಸಂಬಂಧಕ್ಕೆ ಸೀಮಿತವಾಗಿ ಇಲ್ಲದೆ ಹೆತ್ತವರು -ಮಕ್ಕಳು ,ಗುರು- ಶಿಷ್ಯರು ,ವೈದ್ಯ- ರೋಗಿ ಮತ್ತು ವ್ಯಾಪಾರಿ ಗಿರಾಕಿಗಳ ಸಂಬಂಧದಲ್ಲಿ ಕೂಡಾ ಬಹಳ ಆಗಿದೆ .ತಮ್ಮ  ತಮ್ಮ ಧರ್ಮದ ವ್ಯಾಖ್ಯೆ ಯಿಂದ ಪರಾಂಬಿಸಿದರೆ ಇವು ಅಧಾರ್ಮಿಕ ಎಂದು ಕಾಣುತ್ತವೆಯಾದರೂ . ಧರ್ಮದ ಅಂತಃಸತ್ವದ ಆಚರಣೆಗಿಂತಲೂ ಧಾರ್ಮಿಕತೆಯ ಪ್ರದರ್ಶನ ವೇ ಮುಖ್ಯವಾಗಿ ರುವ  ಮತ್ತು   ಮರೆತು ಪರಸ್ಪರ ಕಾದಾಡಿ ಸಂಬಂದಗಳನ್ನು ಮುರಿಯಲು ಧರ್ಮಕ್ಕೆ ಸಿಗುವ ಆಯುಧ ವಾಗಿರುವಾಗ ಇವುಗಳ ಬಗ್ಗೆ ಯೋಚಿಸಲು ಸಮಯ ವ್ಯವಧಾನ ಎಲ್ಲಿ ?

ಸೋಮವಾರ, ಮೇ 2, 2022

ಡಾ ಸುಬ್ಬರಾಯರ ನೆನಪು

ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಸೂರಿ ಕುಮೇರು ಗೋವಿಂದ ಭಟ್ ಅವರ ಎಪ್ಪತ್ತು ತಿರುಗಾಟಗಳು ಸಮೀಪದಲ್ಲಿ ಓದಿದ್ದೆ . ಬಾಲ್ಯದಲ್ಲಿ ಅನ್ನ ಸಂಪಾದನೆಗಾಗಿ ಮೇಳ ಸೇರಿದ ತನಗೆ ಒಂದು ವರ್ಷ ತಿರುಗಾಟ ಮುಗಿದ ಮೇಲೆ ಎಲ್ಲಿ ಹೋಗುವುದು ಎಂಬ ಪ್ರಶ್ನೆ ಬಂದಾಗ  ಮಂಜೇಶ್ವರ ದ  ಡಾ ಸುಬ್ಬ ರಾವ್ ಅವರ ಮನೆಯಲ್ಲಿ ಆಶ್ರಯ ಸಿಕ್ಕಿದ ಬಗ್ಗೆ ,ಡಾಕ್ಟರು ಮತ್ತು ಅವರ ಶ್ರೀಮತಿ ಮನೆಯ ಮಗನಂತೆಯೇ ತನ್ನನ್ನು ನೋಡಿಕೊಂಡುದು ಮತ್ತು ತಮ್ಮ ಮಕ್ಕಳಿಗೆ ನಾಟ್ಯ ಕಲಿಸುವಾಗ ತಮ್ಮನ್ನೂ ಸೇರಿ ಕೊಳ್ಳುವಂತೆ ಹೇಳಿದುದ ಬಗ್ಗೆ ಕೃತಜ್ಞತಾ ಪೂರ್ವಕ ಬರೆದಿದ್ದಾರೆ . 

ಅವರ ಮಾತುಗಳಲ್ಲಿಯೇ ಹೇಳುವುದಾದರೆ 

"ಕೂಡ್ಲು ಮೇಳದ ಆರಂಭದ ದಿನ ಡಾ ಸುಬ್ಬರಾಯರಿಗೆ ,ಅವರ ಹೆಂಡತಿಗೆ  ನಮಸ್ಕರಿಸಿ ಹೊರಡುವಾಗ ಇಪ್ಪತ್ತೈದು ರೂಪಾಯಿ ಮತ್ತು  ಒಂದು ಜತೆ ಅಂಗಿ ಚಡ್ಡಿಯನ್ನು ಕೊಟ್ಟು ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ ಎಂದು ಹರಸಿದರು .ನಾನೊಂದು ವರ್ಷ ಅಲ್ಲಿಯೇ ಇದ್ದರೆ ಒಬ್ಬ ಕಮ್ಯುನಿಸ್ಟ್ 'ಆಗುತ್ತಿದ್ದೆನೇನೋ .ಆಗೆಲ್ಲಾ ಕಮ್ಯೂನಿಸಂ ಎಂದರೆ ಏನೆಂದು ನನಗೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ .ಆದರೆ ಬಡವ -ಶ್ರೀಮಂತ ಎಂಬ ಆರ್ಥಿಕ ತಾರತಮ್ಯದ ಬಿಸಿ ನನಗೆ ತಟ್ಟಿತ್ತು .ಯಾಕೆಂದರೆ ಆ ಕಾಲದಲ್ಲಿ ಮನುಷ್ಯನಿಗೆ ಸ್ಥಾನಮಾನ ಬೆಲೆ ಸಿಗುತ್ತಿತ್ತುದು ಅವನ ಸಾಮಾಜಿಕ ಸ್ಥಾನ ಮಾನದಿಂದಾಗಿ .ಮನುಷ್ಯನನ್ನು ಅಳೆಯುತ್ತಿದ್ದಿದುದೇ ಅವನ ಆರ್ಥಿಕ ಸ್ಥಿತಿ ಗತಿಯನ್ನು ನೋಡಿ .ಹೀಗಾಗಿ ಶೋಷಣೆಯನ್ನು ಒಪ್ಪದ ,ಖಾಸಗಿ ಒಡೆತನವನ್ನು ನಿರಾಕರಿಸುವ .ಸಮಾಜದ ಅಸ್ತಿ ಎಂಬು'ದು ಎಲ್ಲ ಸಮುದಾಯಕ್ಕೂ ತಲುಪಲಿ ಎಂಬ ಮೂಲ ಆಶಯದ ಕಮ್ಯೂನಿಸಂ ಬಗ್ಗೆ ನನಗೆ ಬೆರಗು ಹುಟ್ಟಿದ್ದು ಸುಳ್ಳಲ್ಲ .ಇಂದು ಕಮ್ಯೂನಿಸಂ ನ್ನು  ಅರ್ಥೈ ಸುವ ರೀತಿಯೇ ಬೇರೆ .ಕಮ್ಯೂನಿಸಂ ನ್ನ ಅರ್ಥವನ್ನು ಸರಿಯಾಗಿ ತಿಳಿಯದೆ .ಕಮ್ಯೂನಿಸಂ ನ್ನು ಓದದೇ ,ಕಮ್ಯುನಿಸ್ಟರೆಂದರೆ ದೇವರು -ಧರ್ಮವನ್ನು ಒಪ್ಪದ ನಾಸ್ತಿಕರೆಂದೋ ಭಾವಿಸಲಾಗಿದೆ .ಆದರೆ ಭಾರತೀಯ ಅನೇಕ ನಿಜ ಕಮ್ಯೂನಿಸ್ಟರು ಗಾಢ ಆಧ್ಯಾತ್ಮಿಕ ಒಲವುಳ್ಳವರು ಎಂಬ ಸಂಗತಿ ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ .'ನನ್ನ ಹಾಗೆ ಎಲ್ಲರೂ 'ಎಂದು ಭಾವಿಸ ಬೇಕೆಂದು ಹೇಳುವ ಕಮ್ಯೂನಿಸಂ ನಲ್ಲಿ ಏನು ದೋಷವಿದೆಯೆಂದು ನನಗೆ ಗೊತ್ತಿಲ್ಲ ..'ನನ್ನ ನೋವು ಸಮಾಜದ ನೋವು 'ಎಂದು ತಿಳಿಯುವದಕ್ಕಿಂತ ದೊಡ್ಡ ಅಧ್ಯಾತ್ಮ ಏನಿದೆ ?"

 ಡಾ ಸುಬ್ಬರಾವ್ ೧೯೧೯ ರಲ್ಲಿ ಜನಿಸಿದರು .ಅವರ ತಂದೆ ಡಾ ಕೃಷ್ಣಯ್ಯ . ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಇದ್ದ ಡಾ ಸುಬ್ಬ ರಾವ್ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಂಧಿಸಲ್ಪಟ್ಟು ಮೂರು ವರ್ಷ  ಆಲಿ ಪೂರ್ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿದರು . ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದ ಇವರು ವೈದ್ಯಕೀಯ ವೃತ್ತಿಯೊಡನೆ ಸಮಾಜ ಮುಖಿ ಕಾರ್ಯಗಳಲ್ಲಿ ಕೂಡಾ ತೊಡಗಿಸಿ ಕೊಂಡಿದ್ದರು ..ಮಂಜೇಶ್ವರ ಸಹಕಾರಿ ಸಂಘ ಮತ್ತು ಬೀಡಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರೂ ಆಗಿದ್ದರು .ಕಾರ್ಮಿಕ ಮತ್ತು ರೈತ ಸಂಘಟನೆ ಯಲ್ಲಿ ಸಿದ್ದ ಹಸ್ತರಾಗಿದ್ದ ಇವರು "ಜನತಾ ರಂಗ ಭೂಮಿ "ಎಂಬ ಸಾಂಸ್ಕೃತಿಕ ಕೂಟದ ರೂವಾರಿ ಆಗಿದ್ದರು ..೧೯೫೮ ರಿಂದ ೧೯೬೪ ವರೆಗೆ ರಾಜ್ಯ ಸಭಾ ಸದಸ್ಯ ರಾಗಿದ್ದರು 25-1-1980 ರಿಂದ  20-10-1981 ವರೆಗೆ  ಈ ಕೆ ನಾಯನಾರ್ ಮಂತ್ರಿ ಮಂಡಲ ದಲ್ಲಿ ಮಂತ್ರಿ ಯಾಗಿದ್ದು , ೬ ಮತ್ತು ೭ ನೇ ಕೇರಳ ವಿಧಾನ ಮಂಡಲದಲ್ಲಿ ಮಂಜೇಶ್ವರ ಮಂಡಲದಿಂದ  ಶಾಸಕ ರಾಗಿ ಆಯ್ಕೆ ಆಗಿದ್ದರು . ಕಲ್ಲಿಕೋಟೆ ವಿಶ್ವ ವಿದ್ಯಾಲಯ ಸೆನೆಟ್ ನಲ್ಲಿ ಭಾಷಾ ಅಲ್ಪ ಸಂಖ್ಯಾತ ರನ್ನು ಪ್ರತಿನಿಧಿಸಿ ಕಾಸರಗೋಡು ಪ್ರದೇಶ ದಲ್ಲಿ ಕನ್ನಡ ಭಾಷೆ ಭೋಧನೆ ಗೆ  ಪ್ರೋತ್ಸಾಹ ಸಿಗುವಂತೆ ನೋಡಿಕೊಂಡರು . ಮಂಜೇಶ್ವರ ಗೋವಿಂದ ಪೈ ಕಾಲೇಜ್ ಸ್ಥಾಪನೆ ಇವರ ಕಾಲದಲ್ಲಿಯೇ ಆಯಿತು .ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ದುಡಿದ ವ್ಯಕ್ತಿ ಎಂದು ಜನರು ಈಗಲೂ ನೆನಪಿಸಿ ಕೊಳ್ಳುತ್ತಾರೆ .

      14.9.2003 ರಲ್ಲಿ ನಿಧನ ಹೊಂದಿದರು .
                                                        



ಆತ್ಮೀಯ ಅವಿಸ್ಮರಣೀಯ


                   ಆತ್ಮೀಯ  ಅವಿಸ್ಮರಣೀಯ 

              
                                        







                                            

                                               

                                            

                                                    

                                                



                     ನಿನ್ನೆ ಕಯ್ಯಾರಿನ ಡಾ ಕೆ ಪಿ ಹೊಳ್ಳರ ಮೂಲ ಮನೆಯಲ್ಲಿ ಸಂಭ್ರಮ ದ  ವಾತಾವರಣ . ಶ್ರದ್ಧಾ ಭಟ್ ನಾಯರ್ಪಳ್ಳ ಸಂಪಾದಿಸಿದ  "ವೈದ್ಯಯೋಗಿ ಪ್ರಭಾಕರ ಹೊಳ್ಳ " ಕೃತಿ ಬಿಡುಗಡೆ . ಡಾ ಹೊಳ್ಳರ ಒಡನಾಡಿಗಳು  ಬಂಧುಗಳು ಮತ್ತು ಸಹೋದ್ಯೋಗಿಗಳು ತುಂಬಿದ್ದು ಹಬ್ಬದ ವಾತಾವರಣ . 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಾಪುರದ ಪ್ರಸಿದ್ಧ ವೈದ್ಯರೂ ಕೂಟ ಮಹಾ ಜಗತ್ತಿನ ಅಧ್ಯಕ್ಷರೂ ಆದ  ಡಾ ಕೆ ಎಸ ಕಾರಂತರು  ಡಾ ಕೆ ಪಿ ಹೊಳ್ಳರ ವೈದ್ಯಕೀಯ ಹೋರಾಟದ ಸಂಘಟನಾ ಚತುರತೆ ಮತ್ತು ನಾಯಕತ್ವ ವನ್ನು    ಉದಾಹರಣೆ ಸಹಿತ  ತಿಳಿಸಿದರು . 

ಕಾಸರಗೋಡಿನ ಹಿರಿಯ ತಜ್ಞ ವೈದ್ಯ ಡಾ ಬಿ ಎಸ ರಾವ್  ತಮ್ಮ ವಿದ್ಯಾರ್ಥಿ ಜೀವನ ಮತ್ತು ತದನಂತರ ಡಾ ಹೊಳ್ಳರು ತಮಗೆ ನೀಡಿದ ಮಾರ್ಗದರ್ಶನ ಮತ್ತು ಮಾಡಿದ ಸಹಾಯ ಬಗ್ಗೆ ವಿವರಿಸಿ ,ಹೊಳ್ಳರ ಸಹಾಯ ಇಲ್ಲದಿದ್ದರೆ ತಾನು ಎಂ ಡಿ ಅಧ್ಯಯನ ಅರ್ಧಕ್ಕೆ ನಿಲ್ಲಿಸ ಬೇಕಾಗುತ್ತಿತ್ತು ಎಂದರು .ಹೊಳ್ಳರ ಸಹೋದರ ನಿವೃತ್ತ ನ್ಯಾಯಾಧೀಶ ಶ್ರೀ ರಾಧಾಕೃಷ್ಣ ಕಾರಂತ ಅವರು ಅಣ್ಣ ತನ್ನ  ವೃತ್ತಿ ಜೀವನ ರೂಪಿಸುವುದರಲ್ಲಿ ಅಣ್ಣನ ಪಾತ್ರ ಬಗ್ಗೆ ಪ್ರೀತಿ ಮತ್ತು ಕೃತಜ್ಞತೆ ಯಿಂದ ವಿವರಿಸಿದರು . ಉತ್ತರಾಖಂಡ ದಲ್ಲಿ    ಸೇವೆ ಸಲ್ಲಿಸುತ್ತಿರುವ ಮಗಳು ಡಾ ಸಂಧ್ಯಾ ಅಪ್ಪನ  ಶಿಸ್ತು ,ಪ್ರೋತ್ಸಾಹ ಮತ್ತು ಧನಾತ್ಮಕ ಚಿಂತನೆಗಳ ಬಗ್ಗೆ ತಿಳಿಸಿದರು . 

ಅಧ್ಯಕ್ಷ ಸ್ಥಾನ ವಹಿಸಿದ್ದ ಈ ಕೃತಿ ರಚನೆಯ ಪ್ರೇರಕ ಹಿರಿಯ ವೈದ್ಯ ,ಸಾಹಿತಿ ಮತ್ತು ಯಕ್ಷಗಾನ ಅರ್ಥಧಾರಿ ಡಾ ರಮಾನಂದ ಬನಾರಿ ,ಹೇಗೆ ಡಾ ಹೊಳ್ಳರು ಒಬ್ಬ ವೈದ್ಯ ಯೋಗಿ ಮತ್ತು  ಕರ್ಮ ಯೋಗಿ ಎಂದು ತಿಳಿಸಿದರು . ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ ಸ್ಥಾಪಿಸಿ ನಡೆಸಿದ ಸಾಹಸ ,ಕಾಸರಗೋಡು ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ . ವೈದ್ಯಕೀಯ ಸಂಘಟನೆ ,ಲಯನ್ಸ್ ಕ್ಲಬ್ ,ಕೂಟ ಮಹಾ ಜಗತ್ತಿನ ಕಾರ್ಯಗಳು ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯ ಇವರ ಸಾಧನೆ . ತನಗೆ ಒಬ್ಬ ಅಣ್ಣನಿದ್ದಂತೆ ಎಂದು ಮನತುಂಬಿ ಹೇಳಿದರು . 

ಕೊನೆಗೆ ಡಾ ಹೊಳ್ಳರು ತಮ್ಮ ಸಾಧನೆಯಲ್ಲಿ ತಮ್ಮ ಪತ್ನಿ ಡಾ ಸುಮತಿ ಹೊಳ್ಳ ,ಮಾತಾ ಪಿತರು ,ಸಿಬ್ಬಂದಿ ಮತ್ತು ಸಹೋದ್ಯೋಗಿಗಳ ಬೆಂಬಲ ವನ್ನು ಸಮಯೋಚಿತವಾಗಿ ನೆನೆದರು

              ನಾನು ಉಪ್ಪಳ ಬಿಟ್ಟು ಹಲ ವರ್ಷಗಳು ಆದರೂ  ಬಂದವರೆಲ್ಲಾ ಆತ್ಮೀಯತೆಯಿಂದ ಗುರುತಿಸಿ ಪ್ರೀತಿಯಿಂದ ಮಾತನಾಡಿಸಿದಾಗ ಸಣ್ಣ ಊರುಗಳಲ್ಲಿ ಹೃದಯ ಮತ್ತು ಮನಸು ದೊಡ್ಡದು ಇರುತ್ತದೆ ಎಂದು ಖಾತರಿ ಆಯಿತು ..ಉಪ್ಪಳ ಕೆ ಏನ್ ಎಚ್ ಆಸ್ಪತ್ರೆಗೆ ಸಂದರ್ಶನಕ್ಕೆ ಬರುತಿದ್ದ ಕಣ್ಣಿನ ವೈದ್ಯ ಡಾ ಮಯ್ಯ ,ಹೊಸಂಗಡಿ ಯ ಡಾ ಶಿವರಾಂ ಇವರು ವರ್ಷಗಳ ಬಳಿಕ ಅದೇ ಪ್ರೀತಿಯಿಂದ ಕಂಡರು .ಎಲ್ಲಕಿಂತ ಹೆಚ್ಚು ಕೆ ಏನ್ ಎಚ್ ಆಸ್ಪತ್ರೆಯ ಶ್ರೀಮತಿ ಸುಮತಿ ಮತ್ತು ಕಸ್ತೂರಿ ಯವರ ಭೇಟಿ  ನನಗೆ ನನ್ನ ಉಪ್ಪಳದ ಸೇವೆ ದಿನಗಳ ಸವಿ   ನೆನಪುಗಳನ್ನು ತಂದಿತು . 

ಬಾಲಂಗೋಚಿ : ಕರ್ನಾಟಕ ಗಡಿ ದಾಟಿ ಕೇರಳ   ಪ್ರವೇಶಿಸಿದ ಒಡನೇ ಎಷ್ಟು ಸುಂದರ ಅಗಲ  ರಸ್ತೆಗಳು ಮತ್ತು ಚಂದದ ದೊಡ್ಡದಾದ ನಾಮ ಫಲಕಗಳು . 

ಭಾನುವಾರ, ಮೇ 1, 2022

ಸೇವಾ ಧನ್ವಂತರಿ ರಾಮ ದ್ವಯರು

ನಮ್ಮೂರಿಗೆಲ್ಲಾ ವಿಟ್ಲವೇ ದೊಡ್ಡ ಪೇಟೆ ಆಗಿತ್ತು .ಪೆರ್ಲ,ಆನೆಕಲ್ಲು ಮತ್ತು ಈ ಕಡೆ ಬಾಯರು ವರೆಗೆ ಹಳ್ಳಿಯ ಜನ ಈ ಪಟ್ಟಣವನ್ನು ಆಶ್ರಯಿಸಿದ್ದು ,ವಿಟ್ಲ ಜಾತ್ರೆ ಸೀಮೆಯ ದೊಡ್ಡ ಜಾತ್ರೆ . ಸಮಾರಂಭಗಳಿಗೆ ನಾಯ್ಕರ ಅಂಗಡಿ ಜೀನಸು ,ಅಪ್ರಾಯರ ಅಂಗಡಿ ಬಟ್ಟೆ .

ರೋಗ ರುಜಿನ ಬಂದಾಗ ವಿಟ್ಲ ಕ್ಕೆ ಕುಪ್ಪಿ ಹಿಡಿದುಕೊಂಡು ಓಡುವುದು. ಹೈ ಸ್ಕೂಲ್ ರಸ್ತೆಯಲ್ಲಿ ಮೂರ್ತಿ ಡಾಕ್ತ್ರ ಷಾಪ್ .ಇವರು ಒಳ್ಳೆಯ ವೈದ್ಯರು ,ನಿಖರ ಡಯಗ್ನೋಸಿಸ್ ,ಆಗಿನ ಎಲ್ಲಾ ವೈದ್ಯರಂತೆ  ಕೈಗೆಟುಕುವ ಫೀಸ್.ಆದರೆ ಅದನ್ನು ವಸೂಲು ಮಾಡುವುದರಲ್ಲಿ ತುಂಬಾ ಕಟ್ಟು ನಿಟ್ಟು . ಬಸ್ ಸ್ಟಾಂಡ್ ಆವರಣದಲ್ಲಿ ಡಾ ಮಂಜುನಾಥ ರೈ ಇದ್ದು ಜನಾನುರಾಗಿ ಆಗಿದ್ದರು .ಮೇಗಿನ ಪೇಟೆಯಲ್ಲಿ ಡಾ ಎಸ್ ಎನ್ ಭಟ್ ಇದ್ದು ತುಂಬಾ ಸಮಾಧಾನ ದವರು ,ಶುದ್ಧ ಆಯುರ್ವೇದ ಪ್ರಾಕ್ಟೀಸ್ . ಇವರೆಲ್ಲಾ ಮಾಡಿದ ಸೇವೆ ನಾವು ನೆನೆಸಿ ಕೊಳ್ಳ ಬೇಕು .ಆಗ ವೈದ್ಯರಲ್ಲಿ ಹೋಗುವಾಗ ಕಿಸೆಯಲ್ಲಿ ಹಣ ಇಲ್ಲದಿದ್ದರೂ  ಹೆಚ್ಚಿನ ವೈದ್ಯರು ಸಾಲ ರೂಪದಲ್ಲಿ ಮದ್ದು ಕೊಡುತ್ತಿದ್ದರು .

 

ವಿಟ್ಲ ಪೇಟೆಯಲ್ಲಿ ಎಂ ಬಿ ಬಿ ಎಸ್ ಮಾಡಿ ಬಂದು ಮೊದಲು ಕ್ಲಿನಿಕ್ ತೆರೆದವರು ಡಾ ರಾಮ ಮೋಹನ್ ಅವರು .ಹೆಸರಿನಂತೆ ಮೋಹಕ ವ್ಯಕ್ತಿತ್ವ . ಉಕ್ಕುಡ ರಸ್ತೆಯಲ್ಲಿ ನಾಯ್ಕರ ಅಂಗಡಿ ಎದುರು ಮಾಳಿಗೆಯಲ್ಲಿ ಅವರ ಷಾಪ್ .ಇವರು ರೋಗಿಗಳ ವೈದ್ಯಕೀಯ ದಾಖಲೆ ಇಡುತ್ತಿದ್ದರು . ಬಹುಬೇಗ ಜನಾನುರಾಗಿ ಆದರು.ಮುಂದೆ ಮಂಗಳೂರು ರಸ್ತೆಗೆ ಮತ್ತು ಆಮೇಲೆ ಈಗ ಇರುವ ಹೈ ಸ್ಕೂಲ್ ರಸ್ತೆಗೆ ಅವರ ಕ್ಲಿನಿಕ್ ಸ್ಥಳಾಂತರ  ಆಯಿತು . ಇವರು ತಮ್ಮ ಪದವಿ ಕೆ ಎಂ ಸಿ  ಮಣಿಪಾಲ್ ನಲ್ಲಿ ಮಾಡಿ ನಂತರ ದೆಹಲಿ ಸಫ್ಧರ ಜಂಗ್ ಆಸ್ಪತ್ರೆ ಯಲ್ಲಿ ರೆಸಿಡೆನ್ಸಿ ಮಾಡಿ ಅನುಭವ ಪಡೆದಿದ್ದು ಉತ್ಸಾಹಿ ಆಗಿದ್ದರು .ಮೈನರ್ ಸರ್ಜರಿ ಮತ್ತು ಡ್ರಿಪ್ ಹಾಕುವುದು ಇತ್ಯಾದಿ ಕ್ಲಿನಿಕ್ ನಲ್ಲಿ ಆರಂಬಿಸಿದ್ದರು . ತಮ್ಮ ವ್ಯಾಪ್ತಿಗೆ ಮೀರಿದ ಕೇಸ್ ಗಳನ್ನು  ಮಂಗಳೂರಿನ ಒಳ್ಳೆಯ ವೈದ್ಯರಲ್ಲಿ  ಕಳುಹಿಸುವುದಲ್ಲದೆ  ಅದರ ಫಾಲೋ ಅಪ್ ಮಾಡುವರು .ವಿಟ್ಲದ ತಮ್ಮ ಕ್ಲಿನಿಕ್ ಗೆ ಪುತ್ತೂರಿನಿಂದ ತಜ್ನ ವೈದ್ಯರನ್ನು ಕರೆಸಿ ಸೇವೆ ಈ ಭಾಗದ ಜನರಿಗೆ ಅವರ ಅನುಭವದ ಲಾಭ ಸಿಗುವಂತೆ ಮಾಡಿದರು .ಕೆಲ ವರ್ಷಗಳ ಹಿಂದೆ ಅವರು ತೀರಿಕೊಂಡಾಗ ಊರಿಗೆ ಊರೇ ಕಣ್ಣೀರು ಮಿಡಿಯಿತು . .ಅವರ ಕ್ಲಿನಿಕ್ ಸಹೋದರ ಮತ್ತು ಮಗ  ಡಾ ಅರವಿಂದ್ ಈಗಲೂ ಮುನ್ನೆಡೆಸಿ ಕೊಂಡು ಬರುತ್ತಿರುವುದು ಸಂತೋಷ .


 

ಡಾ ರಾಮ ಮೋಹನ್ ಕ್ಲಿನಿಕ್ ಆರಂಬಿಸಿ ಆರು ತಿಂಗಳಲ್ಲಿ  (1969ರಲ್ಲಿ ) ಡಾ ಅಲಂಗಾರು ರಾಮ ಭಟ್ ವಿಟ್ಲದಲ್ಲಿ ಪ್ರಾಕ್ಟೀಸ್ ಆರಂಬಿಸಿದರು .ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜ್ ವಿದ್ಯಾರ್ಥಿ . ಹಳೆಯ ಪೋಸ್ಟ್ ಆಫೀಸು ಬಳಿ ಬಸ್ ಸ್ಟಾಂಡ್ ಪರಿಸರದಲ್ಲಿ ಇವರ ಷಾಪ್ .ಈಗಲೂ ಅಲ್ಲಿಯೇ ಇದೆ . ಅತೀವ ತಾಳ್ಮೆ ,ಶಾಸ್ಟ್ರೀಯ ಪರೀಕ್ಷೆ ಮತ್ತು ಚಿಕಿತ್ಸೆ ಇವರ ಹೆಗ್ಗಳಿಕೆ . ಇವರೂ ಪುತ್ತೂರು ಮಂಗಳೂರಿನ ತಜ್ಜ ವೈದ್ಯರ ಸಂಪರ್ಕ ಇತ್ತು ಕೊಂಡು ಅವರ ಸಲಹೆ ಬೇಕಾದಾಗ ಪಡೆದು ಕೊಳ್ಳುವರು .ಈಗ ಇವರಿಗೆ  ಎಂಬತ್ತು ವರ್ಷ ದಾಟಿದೆ .ತಮ್ಮ ವೈದ್ಯಕೀಯ ಸೇವಾ ಹುಮ್ಮಸ್ಸಿಗೆ ಇನ್ನೂ ವಾರ್ಧಕ್ಯ ಬಂದಿಲ್ಲ . ಮಗ ಮತ್ತು ಮಗಳು ಎಂಜಿನಿಯರ್ ಗಳಾಗಿ ವಿದೇಶದಲ್ಲಿ ಇದ್ದರೆ ,ತಾವು ಮತ್ತು ಮಡದಿ ಕೃಷ್ಣವೇಣಿ ಹುಟ್ಟೂರು ಅಲಂಗಾರಿನಲ್ಲಿಯೇ  ನೆಲೆಸಿದ್ದಾರೆ . ಆರಂಭದಲ್ಲಿ ರೋಗಿಗಳ ತಪಾಸಣೆ ,ಚುಚ್ಚು ಮದ್ದು ಕೊಡುವುದು ,ಬ್ಯಾಂಡೇಜ್ ಮಾಡುವುದು ಮತ್ತು  ಔಷಧಿ ವಿತರಣೆ ತಾವೇ ಮಾಡುತ್ತಿದ್ದು ,ಹಳ್ಳಿಯವರ ಮತ್ತು ಪೇಟೆಯ ಬಡವರ ಕೈಗೆ ಎಟಕುವಂತೆ ಇತ್ತು ಮತ್ತು ಈಗಲೂ ಇದೆ .ಡಾ ರಾಮ ಭಟ್ ಹೀಗೆಯೇ ಆರೋಗ್ಯವಾಗಿದ್ದು ತಮ್ಮ ಸೇವೆಯನ್ನು ಮುಂದು ವರಿಸುತ್ತಿರಲಿ.