ಬೆಂಬಲಿಗರು

ಗುರುವಾರ, ನವೆಂಬರ್ 30, 2023

 ನಮಗೆ ಆಪ್ತರಾಗಿದ್ದ ರೈಲ್ವೇ ಇಲಾಖೆಯಲ್ಲಿ ಇಂಜಿನೀಯರ್ ಆಗಿದ್ದ  ಶ್ರೀ ನಾಗರಾಜಪ್ಪ ಕುಟುಂಬ ದ ಬಗ್ಗೆ ಹಿಂದೆ ಬರೆದಿದ್ದೆ . ಅವರ ಇಚ್ಛೆಯಂತೆ  ನಿಧನಾನಂತರ ಅವರ ಶರೀರವನ್ನು  ಮೆಡಿಕಲ್ ಕಾಲೇಜು ಗೆ ದಾನ ಮಾಡಿದರು . ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಊಟ ಹಾಕಿದರು . ಇಲ್ಲಿ ಗಮನಿಸ ಬೇಕಾದ ಅಂಶ ಕೊನೆಯ ವರೆಗೂ ಮಕ್ಕಳು ಅವರನ್ನು ಚೆನ್ನಾಗಿ ನೋಡಿಕೊಂಡರು ಮತ್ತು ಮಕ್ಕಳು ಒಂದು ನೆಲೆಗೆ ಬರುವ ವರೆಗೆ ಅವರು ಬದುಕಿದ್ದರು . 

            ಇದೇ ರೀತಿ ರೈಲ್ವೆಯ ನನ್ನ ಸಹೋದ್ಯೋಗಿ ವೈದ್ಯ ಮಿತ್ರ ಡಾ ಪ್ರಸನ್ನ ಕುಮಾರ್ (ರೈಲ್ವೆ ವೈದ್ಯಕೀಯ ಸೇವೆಯ ಅತ್ಯುನ್ನತ  ಹುದ್ದೆ ಅಲಂಕರಿಸಿ ತಿಂಗಳ ಹಿಂದೆ ನಿವೃತ್ತ ರಾಗಿರುವರು ) ತಮ್ಮ ತೀರ್ಥ ರೂಪ ರನ್ನು ಕೊನೆಯ ತನಕ ಚೆನ್ನಾಗಿ ನೋಡಿಕೊಂಡು ,ಅವರ ಪುಣ್ಯ ತಿಥಿಯಂದು ಆಶ್ರಮ ವಾಸಿಗಳಿಗೆ ಊಟ ಹಾಕಿ ಆಚರಿಸುತ್ತಲಿರುವರು . 

               ನಮ್ಮಲ್ಲಿ ಈಗ ಕೆಲವು ತಂದೆ ತಾಯಿಗಳು ನಿಧನಾನಂತರ ಹೊರೆಯಾಗುವುದು ಬೇಡ ಎಂದು ತಮ್ಮ ಶರೀರ ಮೆಡಿಕಲ್ ಕಾಲೇಜು ಗೆ ದಾನ ಬರೆಯುವರು ..ಬದುಕಿರುವಾಗ ಹೆತ್ತವರನ್ನು ಕಾರಣಾಂತರ ಗಳಿಂದ ಸರಿಯಾಗಿ ನೋಡಿಕೊಳ್ಳದವರೂ ನೋಡಿ ಕೊಂಡವರೂ  ಅವರ ಉತ್ತರ ಕ್ರಿಯೆ ಇತ್ಯಾದಿ ಗಳನ್ನು ವೈಭವೋಪೇತ ವಾಗಿ  ಆಚರಿಸುವರು . ಮಕ್ಕಳು ಹಲವರು ಇದ್ದರೆ ಪ್ರತಿಯೊಬ್ಬರೂ ತಮ್ಮ ವತಿಯಿಂದ ಭೋಜನಕ್ಕೆ  ವಿಶೇಷ ಸಿಹಿತಿಂಡಿ  ಏರ್ಪಾಡು ಮಾಡುವರು .ಇಂತಹ ಕೆಲವು ಊಟಕ್ಕೆ ನಾಲ್ಕೈದು ಸಿಹಿ ತಿಂಡಿ ಇರುವುದೂ ಉಂಟು ,ಈಗ ಹೆಚ್ಚಿನವರು ಎಳೆಯ ಪ್ರಾಯದಲ್ಲಿಯೇ ಸಕ್ಕರೆ ಕಾಯಿಲೆ ಯಿಂದ ಬಳಲುತ್ತಿರುವಾಗ ಅತಿಥಿಗಳಿಗೆ ಇದು ಹೊರೆಯೇ . ಇಂತಹ ಆಚರಣೆ ನಿಜಕ್ಕೂ ಹಿರಿಯರ ಆತ್ಮಕ್ಕೆ ಶಾಂತಿ ತಂದಿತೇ ? ಸರ್ವ ಶಕ್ತನಾದ ಭಗವಂತ ಎಂದು ನಾವು ನಂಬುವುದಿದ್ದರೆ ಅವನಿಗೂ ಅದು ಇಷ್ಟವಾದೀತೇ ?

ಮಂಗಳವಾರ, ನವೆಂಬರ್ 14, 2023

ಮೊನ್ನೆ ಕುತೂಹಲದಿಂದ ತರಿಸಿದ್ದ ಶ್ರೀ ಟಿ ಜಿ ಮುಡೂರು ಅವರ' ಬೊಲ್ಪಾನಗ  ಮುಗ್ತು ' ಅರೆ ಭಾಷೆಯ ನಾಟಕದ ಕನ್ನಡ ಅನುವಾದ (ಅನು; ಡಾ ಕರುಣಾಕರ ನಿಡುಂಜಿ ). ಲೇಖಕರು ಕನ್ನಡ ತುಳು ಹವ್ಯಕ ,ಅರೆ ಭಾಷೆ ಇತ್ಯಾದಿಗಳಲ್ಲಿ ಕೃತಿ ರಚನೆ ಮಾಡಿರುವ ಉಲ್ಲೇಖ ಇದೆ . ಶಿಷ್ಯ ಗಣ ಮೆಚ್ಚಿದ ಪ್ರತಿಭಾವಂತ ,ನಿಷ್ಟಾವಂತ ಶಿಕ್ಷಕರು ಎಂದು ಕೇಳಿದ್ದೇನೆ .. ನನಗೆ ತಿಳಿದಂತೆ ಅವರ ಗರಡಿಯಲ್ಲಿ ಪಳಗಿದ ಕೆಲವು ಮಿತ್ರರು ಇದ್ದಾರೆ . ಗುರುವಿನ ಗುಣ ಶಿಷ್ಯರ ಲ್ಲಿ ಕಾಣಬಹುದು . 

ಇದೊಂದು ನಗೆ ಪ್ರಹಸನ ಎಂದು ಕರೆದಿದ್ದರೂ ಆಗಿನ ಕಾಲದ ಗ್ರಾಮೀಣ ಜೀವನದ ಚಿತ್ರಣ ಚೆನ್ನಾಗಿ  ಬಂದಿದೆ .(ಮೂಲಕೃತಿ ರಚನೆ ೧೯೫೬ ರಲ್ಲಿ ). ಲೇಖಕರು ಯಕ್ಷಗಾನ ಪ್ರಿಯರು ;ಹಲವು ಪಾತ್ರಗಳು ಸಮಯೋಚಿತವಾಗಿ  ಜನಪ್ರಿಯ ಪ್ರಸಂಗ  ದ ಸಾಲುಗಳನ್ನು ಸಂಭಾಷಣೆಯಲ್ಲಿ ಬಳಸಿವೆ .  ಬೇಟೆ ,ಬೇಟ ,ಯಕ್ಷಗಾನ ಆಟ ,ಜಾತ್ರೆಯ ಕೂಟ ,ಕೋಳಿ ಕಟ್ಟ ,ತೆಂಗಿನ ಕಾಯಿ ಕುಟ್ಟುವುದು ಇತ್ಯಾದಿ ಅಂದಿನ ಗ್ರಾಮೀಣ ಜೀವನದ ಹಾಸುಹೊಕ್ಕಾಗಿದ್ದ ಅಂಶಗಳ ಚಿತ್ರಣ ಇಲ್ಲಿ ಕಾಣಬಹುದು .

ಇದರಲ್ಲಿ ಬಂದ ಒಂದು ಗಾದೆ ನನಗೆ ಇಷ್ಟ ವಾಯಿತು .ಮಗಳ ಮದುವೆಗೆ ಹುಡುಗ ಹುಡುಕುವಾಗ ''ಮುಂದಾಸಿನವ ಸಿಗಲಿಲ್ಲ ,ಮುಟ್ಟಾಳೆ ಯವನು ಇಷ್ಟವಿಲ್ಲ "-ಎಂಬ ಧೋರಣೆಯಿಂದ ಎಲ್ಲೂ ಸರಿ ಆಗಲಿಲ್ಲ ಎಂದು .ಇದು ಮೂಲತಃ ತುಳು ಗಾದೆ ಇರ ಬೇಕು "ಮುಂಡಾಸುದಾಯೆ ತಿಕ್ಕುಜ್ಯೆ ,ಮೂಟ್ಟಾಲೆ ದಾಯೆ ಆಪುಜ್ಜಿ" ಎಂದು ಇರಬೇಕು . ದೊಡ್ಡ ಮನೆತನದವರು ಸಿಗರು ,ಬಡವರು ಆಗದು ಎಂಬ ಅರ್ಥ .

ಅರೆ ಭಾಷೆಯ ಒಂದು ಕೃತಿಯನ್ನು ಕನ್ನಡಕ್ಕೆ ಹುಡುಕಿ ತಂದು ಪ್ರಕಟಿಸಿದ ಕುವೆಂಪು ಭಾಷಾ ಪ್ರಾಧಿಕಾರದ ಕಾರ್ಯ ಮೆಚ್ಚುವಂತಹುದು

ಸೋಮವಾರ, ನವೆಂಬರ್ 13, 2023


           ಮೊನ್ನೆ ಬೆಟ್ಟಂಪಾಡಿ ಕಾಲೇಜು ನಲ್ಲಿ' ಕನಕ ದಾಸ ಬಸವ ಣ್ಣ ' ಕಮ್ಮಟಕ್ಕೆ ಹೋಗಿ ದ್ದೆ .ಬಹಳ ದಿನಗಳ ನಂತರ ಒಂದು ಒಳ್ಳೆಯ ಸಾಹಿತ್ಯ ಗೋಷ್ಠಿ . ಹಿಂದೆ ಶಾಲೆಯಲ್ಲಿ ಕಲಿತು ,ಆ ಮೇಲೆ ಪುಸ್ತಕಗಳಲ್ಲಿ ಓದಿ ಮರೆತಿತಿದ್ದ ಹಲವು ವಿಚಾರಗಳನ್ನು ಮೆಲುಕು ಹಾಕುವ ಯೋಗ . ಹಳೆಯ ಸಾಲುಗಳಿಗೆ  ಹೊಸ ಹೊಳವು ಗಳು .                                                                 ಧರ್ಮ ಎಂಬ ಶಬ್ದಕ್ಕೆ ಬೇಕಾದಂತೆ ವ್ಯಾಖ್ಯೆ ಹಣಿದು ಅದರ ಹೆಸರಲ್ಲಿ ಬಡಿದಾಡುವರ ಕಂಡಾಗ  ಬಸವಣ್ಣ ಅವರ ಈ ಸರಳ ವಚನ ಎಷ್ಟು ಆಪ್ತ ವಾಗುತ್ತದೆ . 

    ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. 

ನಾನು ಶುದ್ಧ ,ಅಶುದ್ಧ ಆದವರು ಮುಟ್ಟಿ ನನ್ನ ಪವಿತ್ರ ತೆ  ನಾಶ ಮಾಡಿದರೆ ಪೂಜಿಸುಲ್ಪಡುವ ದೇವ ಮೆಚ್ಚಲಾರ ಎಂಬ ನಂಬಿಕೆ ಗೆ ಅಕ್ಕ ಮಹಾದೇವಿ ವಚನ  ಕನ್ನಡಿ  ಹಿಡಿಯುತ್ತದೆ .ನೋಡಿ ಇದರಲ್ಲಿ ತನುಕರಗದವರಲ್ಲಿ ಎಂಬ ಮಾತು ಇದೆ . ಬೆವರಿಳಿಸಿ ದುಡಿಯದವರು ಮಾಡುವ ಪೂಜೆ ದೇವನು ಮೆಚ್ಚನು . ಬಸಣ್ಣ ಕಾಯಕವೇ ಕೈಲಾಸ ಎಂದುದು ಇದೇ ಅರ್ಥದಲ್ಲಿ .ಹೇಳಿರುವುದು

 ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾನೀನು.
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾನೀನು.
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾನೀನು.
ಅರಿವುಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾನೀನು.
ಭಾವಶುದ್ಭವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾನೀನು.
ಪರಿಣಾಮಿಗಳಲ್ಲದವರಲ್ಲಿನೈವೇದ್ಯವನೊಲ್ಲೆಯಯ್ಯಾನೀನು.
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾನೀನು.
ಹೃದಯಕಮಲಅರಳದವರಲ್ಲಿ ಇರಲೊಲ್ಲೆಯಯ್ಯಾನೀನು.
ಎನ್ನಲ್ಲಿಏನುಂಟೆಂದುಕರಸ್ಥಲವನಿಂಬುಗೊಂಡೆಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ. 

ಇನ್ನು ನಿಜವಾದ ಶುದ್ದಿ ಎಂದರೆ ಏನು ?ಎಂದು ಬಸವಣ್ಣ ಸರಳವಾಗಿ ತಿಳಿಸಿರುವರು

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ
ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. 

 
ಕಮ್ಮಟದಲ್ಲಿ ಪಂಪ ಕು ವೆಂಪು ಅವರ ಪ್ರಸ್ತಾಪವೂ ಬಂತು . ಮನುಜ ಜಾತಿ ತಾನೋಂದೆ ವಲಮ್ ಎಂಬ ಪಂಪನ ಸಾಲು ಕುಲ ಕುಲ ವೆಂದು ಹೊಡೆದಡದಿರಿ ಎಂಬ ಕನಕದಾಸರ ಆಶಯಕ್ಕೆ ಇರುವ ಸಾಮ್ಯತೆ ಬಗ್ಗೆ ಹಲವರು ಎತ್ತಿ ತೋರಿದರು . ಕುವೆಂಪುಅವರ ' ಒ ನನ್ನ ಚೇತನ ಆಗು ನೀ ಅನಿಕೇತನ ಕ್ಕೂ'   ಬಸವಣ್ಣ ನವರ 'ಸ್ಥಾವರಕ್ಕಳಿವಿಲ್ಲ ಜಂಗಮಕ್ಕಳಿವುಂಟು' ವಿಗೂ  ಇದೇ ತರಹ ಇರ ಬಹುದು .

ಕನಕದಾಸರ ಈ ದೇವರನಾಮಕ್ಕೆ ಹತ್ತಿರವಾದ ಶರಣರ ವಚನಗಳು ಹಲವು ಇವೆ .

ನೀ ಮಾಯೆಯೊಳಗೊನಿನ್ನೊಳು ಮಾಯೆಯೊ
  ನೀ ದೇಹದೊಳಗೊ ನಿನ್ನೊಳು ದೇಹವೊ

ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ                                                                                                                ನಯನ ಬುದ್ಧಿಯೊಳಗೊ

ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು
ನಿನ್ನೊಳಗೊ ಹರಿಯೆ

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ

ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ
ನಿನ್ನೊಳಗೊ?

 ಮನದ ಮುಂದಿನ ಆಸೆಯೇ ಹೊರತು ಹೆಣ್ಣು ಹೊನ್ನು ಮಣ್ಣು ಅಲ್ಲ ಎಂದು ಅಲ್ಲಮ ಹೇಳಿದ್ದಾನೆ

 ಬಾಲಂಗೋಚಿ :ಮನೆ ,ಕಚೇರಿ ,ಆಸ್ಪತ್ರೆ ಎಲ್ಲಾ ಕಡೆ ಹಿರಿಯರು ಇಹ ಲೋಕ ಮರೆತು ಮಕ್ಕಳು ಮೊಬೈಲ್ ನಲ್ಲಿ ಮುಳುಗಿರುವಾಗ ನಾ ಜಂಗಮ (ಮೊಬೈಲ್ )ದೊಳಗೊ  ,ಜಂಗಮ (ಮೊಬೈಲ್ )ದೊಳು ನಾನೋ ಎಂಬ ಆಲೋಚನೆ ಬರುತ್ತದೆ . ಅಂತೆಯೇ ಶಿಶುನಾಳ ಶರೀಫರ  ಕೋಡಗ ನ ಕೋಳಿ ನುಂಗಿತ್ತಾ ಎಂಬುದು  ಈಗ ಕೊಡಗನೇ ಕೋಳಿ ನುಂಗಿದ ಹಾಗೆ ಆಗಿದೆ ಅನಿಸುತ್ತದೆ .


 

ಶನಿವಾರ, ನವೆಂಬರ್ 11, 2023

ಮಂಗ ಳೂರ ಸಮಾಚಾರ ಕ0ನಡ ಸಮಾಚಾರವು ( ಕನ್ನಡದ ಮೊದಲ ಪತ್ರಿಕೆ ಹೆರ್ಮನ್ ಮ್ಯೋಗ್ಲಿಂಗ್ ಸಂಪಾದಿತ )

                                         



ಒಂದನೇ ಪುಸ್ತಕ 1843     1ನೇ ಜೂಲೈ                      ಕ್ರಯವು 1ದುಡ್ಡು 


ಪೀಠಿಕೆ 

ಮಂಗಲೂರಿನವರು  ಮೊದಲಾದ ಯೀ ದೇಶಸ್ಥರು ಕತೆಗಳ೦ನೂ ವರ್ತಮಾನಗಳ೦ನೂ ಕೇಳುವದರಲ್ಲಿಯೂ ಹೇಳುವದರಲ್ಲಿಯೂ ಬಹಳ ಯಿಚ್ಛೆ ಯುಳ್ಳ ವರಾಗಿರುತ್ತಾರೆ .

ಬೆಳಿಗ್ಗೆ ಬಂದ್ರಂದಲ್ಲ್ಯಾ ಗಲಿ ,ಕಚೇರಿ ಹತ್ತರವಾಗಲೀ  ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ಮಾತಾಡಿದರೆ ಅದ೦ನು ಬೇರೊಬ್ಬನು ಆಶ್ಚರ್ಯದಿಂದ ಹೇಳಿ ಯಿ೦ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ವೂರೆಲ್ಲ ತುಂಬಿಸುತ್ತಾರೆ . 

ಮರುದಿನ ನಿ೦ನಿನ ವರ್ತಮಾನ ಸುಳ್ಳು ಯ೦ತಾ ಕಾಣುವಷ್ಟರೊಳಗೆ ಯೆ೦ಮೆ ಮೊಲೆಯಂತೆ ಮತ್ತೆ ಹುಟ್ಟಿ ಆಯ್ತು . 

 ಯೀ ಪ್ರಕಾರವಾಗಿ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಯಿಲ್ಲಿ ವಸ್ತಿಯಾಗಿದ್ದ ಕೆಲವರು ತಿಳು ಕೊಂಡು ಯಿದರಲ್ಲಿ ಪ್ರಯೋಜನ ಪ್ರಯೋಜನ ವಿಲ್ಲವೆಂದು ಯೀ  ಮನುಷ್ಯರ ಸಮಾಚಾರ ಆಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದ್ ದರಿಂದ ನಿಜ ಸಮಾಚಾರದ ಸಂಗ್ರಹವ೦ನು ಕೂಡಿಶಿ  ಪಕ್ಷಕ್ಕೆ ವೊಂದು ಕಾಗದವ೦ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸ ಬೇಕೆಂಬದಾಗಿ ನಿಶ್ಚಯಿಸಿ ಅಧೆ .