ಬೆಂಬಲಿಗರು

ಬುಧವಾರ, ಜುಲೈ 27, 2022

ಒಂದು ನೆನಪು

                                              



 

 1978 ರಲ್ಲಿ ಶಿವರಾಮ ಕಾರಂತರಿಗೆ ಜ್ನಾನಪೀಠ ಪ್ರಶಸ್ತಿ ಬಂದು ಕನ್ನಡಿಗರಿಗೆಲ್ಲ ಸಂತೋಷ .ನಾನು ಆಗ ಕೆ ಎಂ ಸಿ ಹುಬ್ಬಳ್ಳಿ ಯಲ್ಲಿ ವಿದ್ಯಾರ್ಥಿ .ರಾಜ್ಯದ ಎಲ್ಲಾ ಕಡೆಯಂತೆ ಹುಬ್ಬಳ್ಳಿ ಧಾರವಾಡ ದಲ್ಲಿಯೂ ಕಾರಂತರ ಭಾಷಣ ,ಸನ್ಮಾನ ಕಾರ್ಯಕ್ರಮ ಅದ್ದೂರಿಯಂತೆ ಏರ್ಪಡಿಸಿದ್ದರು . ನಮ್ಮ ಕಾಲೇಜಿನ ಕನ್ನಡ ಸಂಘದ ಪರವಾಗಿ ಸ್ವಲ್ಪ ಬಿಡುವು ಮಾಡಿಕೊಂಡು ನಮ್ಮಲ್ಲಿ ಬರ ಬಹುದೋ ಎಂದು ಕಾರಂತರಲ್ಲಿ ಕೇಳಿ ಕೊಳ್ಳಲು ,ಎಲ್ಲಾ ಕಾರ್ಯಕ್ರಮ ಕು ಶಿ ಹರಿದಾಸ ಭಟ್ಟರೇ ಏರ್ಪಡಿಸುವುದು ,ಅವರನ್ನು ಸಂಪರ್ಕಿಸುವಂತೆ ಕೇಳಿದರು .ಪ್ರವಾಸ ದುದ್ದಕ್ಕೂ  ಹರಿದಾಸ ಭಟ್ ಕಾರಂತರ ಜತೆಗೆ ಇದ್ದರು .ಸರಿ ,ಅವರನ್ನು ಕಾಣಲು ಲ್ಯಾಮಿಂಗ್ಟನ್ ರಸ್ತೆಯ ಒಂದು ಸಾಮಾನ್ಯ ಹೋಟೆಲ್ ನಲ್ಲಿದ್ದ ಅವರನ್ನು ಕಾಣಲು ಹೋದೆವು .ಅವರು ಅಲ್ಲಿಯೇ ಪಕ್ಕದ ಕೋಣೆಯಲ್ಲಿ ತಂಗಿದ್ದ ಕರ್ನಾಟಕ ಬ್ಯಾಂಕ್ ಛೇರ್ಮನ್  ಶ್ರೀ ಕೆ ಎಸ ಏನ್ ಅಡಿಗರ ಜತೆ ಏನೋ ಗಹನವಾದ ಚಿಂತನೆಯಲ್ಲಿ ಇದ್ದವರು ನಮ್ಮ ಕೋರಿಕೆಯನ್ನು ಈಡೇರಿಸಲು ತಮ್ಮ ಅಶಕ್ತತೆ ವ್ಯಕ್ತ ಪಡಿಸಿದರು . 

ಆದರೆ ನನಗೆ ಆಶ್ಚರ್ಯ ಒಬ್ಬ ಬ್ಯಾಂಕಿನ ಅಧ್ಯಕ್ಷ  ಅಧಿಕೃತ ಕಾರ್ಯ ನಿಮಿತ್ತ ಪರವೂರಿಗೆ ಬಂದಾಗ ಸಾಧಾರಣ ಹೋಟೆಲ್ ನಲ್ಲಿ ಉಳಿದು ಕೊಂಡಿದ್ದು ,ಸುತ್ತ ಮುತ್ತ ವಂದಿ ಮಾಗಧರು ಇಲ್ಲ, ಸರಳ ಖಾದಿ ಉಡುಗೆ . ಅವರಿಗೆ ಬೇಕಿದ್ದಲ್ಲಿ  ಪ್ರವಾಸಿ ಬಂಗ್ಲೆಯೋ ,ವಿಲಾಸಿ ವಸತಿ ಗೃಹಕ್ಕೋ ಹೋಗ ಬಹುದಿತ್ತ್ತು ..ಒಂದು ಕಾಲಕ್ಕೆ ಎಂ ಎಲ್ ಸಿ ಕೂಡಾ ಆಗಿ ಇದ್ದವರು . ಸಾರ್ವಜನಿಕ ಕೆಲಸದಲ್ಲಿ  ಆಡಂಬರ ಕ್ಕೆ ವೆಚ್ಚ ಮಾಡ ಬಾರದು ಎಂಬ ಉದ್ದೇಶ ಇರ ಬೇಕು .  ಅಂತಿದ್ದರು ಅಂದಿನ ನಾಯಕರು .ಸರಳ ಬದುಕು ಹಿರಿಯ ಬಾಳು .

ಸೋಮವಾರ, ಜುಲೈ 25, 2022

ವಿ ಬಿ ಅರ್ತಿಕಜೆ

                                    ವಿ ಬಿ ಅರ್ತಿಕಜೆ 


ನಿಮಗೆಲ್ಲಾ ಇತಿಹಾಸ ಪ್ರಾಧ್ಯಾಪಕ ,ಪತ್ರಕರ್ತ ,ಸಾಹಿತಿ ಮತ್ತು ಸಂಘಟಕ ಎಂದು ಪರಿಚಿತರಾದ  ಶ್ರೀ ವಿ ಬಿ ಅರ್ತಿಕಜೆ  ನನ್ನ ಅಕ್ಕ (ಒಪ್ಪಕ್ಕ )ಭಾಗ್ಯ ಲಕ್ಷ್ಮಿ ಯ  ಪತಿ .  ಹೆಚ್ಚು ಕಡಿಮೆ ಐದು ದಶಕಗಳ ದಾಂಪತ್ಯ ಜೀವನ . 

ನಾನು ಕಂಡಂದಿನಿಂದ ಇಂದಿನ ವರೆಗೆ ಅರ್ತಿಕಜೆ ಯವರ  ದಿನಚರಿ  ಮುಂಜಾನೆ ಕಾವಿ  ಧೋತಿ ಉಟ್ಟು ತಮ್ಮ ಹಿತ್ತಿಲಿನಲ್ಲಿ ಇರುವ ತೆಂಗಿನ ಮರಗಳಿಗೆ  ನೀರು ಉಣಿಸುವದರಿಂದ ಆರಂಭ .ಮೊದಲು ಬಾವಿಯಿಂದ ನೀರು ಸೇದಿ ಕೊಡಪಾನದಲ್ಲಿ ,ಆಮೇಲೆ  ಈಗ ಪೈಪಿನ ಮೂಲಕ . ಮಳೆಗಾಲದಲ್ಲಿ ತೋಟದ ಕಸ  ಗರಿ ಗಳನ್ನು  ತೆಗೆದು ಸ್ವಚ್ಛ ಮಾಡುವುದು . ಆಮೇಲೆ ಪುಸ್ತಕ ರಾಶಿಯಿಂದ ಆವೃತ್ತವಾದ ತಮ್ಮ ಕೋಣೆ ಯಲ್ಲಿ ಕುಳಿತು  ಬರವಣಿಗೆ . ಕಾಪಿ ತಿಂಡಿ ಆದ ಮೇಲೆ  ಕೊಲೇಜಿಗೆ (ನಿವೃತ್ತ ರಾಗುವ ವರೆಗೆ ) .ಪುತ್ತೂರು ಪೇಟೆಯ ವರೆಗೆ ನಡಿಗೆ ಆಮೇಲೆ ನಗರಕ್ಕೆ ಆಟೋ .ನಗರದಿಂದ ಕಾಲೇಜ್ ವರೆಗೆ ಪುನಃ ನಡಿಗೆ . ಸಂಜೆ ಇದೇ ಮನೆ ಕಡೆಗೆ . 

ಈಗ ಕಾಲೇಜ್ ಇಲ್ಲದ ಕಾರಣ ಮುಂಜಾನೆ ಪೇಟೆಗೆ ಒಂದು ನಡಿಗೆ ,ಪೇಪರ್ ಕೊಂಡು ವಾಪಾಸು .. ಆಮೇಲೆ ಯಥಾ ಪ್ರಕಾರ ಬರವಣಿಗೆ . ನೆಂಟರು ,ಅತಿಥಿ ಗಳು ಬಂದರೆ ಅಲ್ಲಿಂದಲೇ ನಮಸ್ಕಾರ ಮಾಡಿ ಬರವಣಿಗೆ ಒಂದು ಹಂತಕ್ಕೆ ಬಂದ ಮೇಲೆ ಬಂದು ಭೇಟಿ . 

ಸಂಜೆ ತಪ್ಪದೇ  ಕುಟುಂಬದ ಜತೆ ಭಜನೆ ಕಾರ್ಯಕ್ರಮ .  

ಶಾಲಾ ಕಾಲೇಜ್ ವಿದ್ಯಾರ್ಜನೆ ಬಡತನದ ನಡುವೆ . ಆಮೇಲೆ ತಾವು ಒಂದು ನೆಲೆಗೆ ಬಂದಮೇಲೆ ಇಡೀ ಕುಟುಂಬದ ಆಧಾರ . ತಂದೆ ತಾಯಿಯನ್ನು ನೋಡಿ ಕೊಳ್ಳುವುದರ ಜತೆ ತಮ್ಮ ತಂಗಿಯರಿಗೆ ಆಸರೆ . 

ಈ ಸಂದರ್ಭದಲ್ಲಿ ಅವರು ಆಗಾಗ ನೆನಪಿಸಿ  ಕೊಳ್ಳುವುದು ಫಿಲೋಮಿನಾ ಹೈ ಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದ ಶ್ರೀ ಡೆನ್ನಿಸ್ ಡಿ ಸೋಜಾ ಅವರ  ನಿಷ್ಕಲ್ಮಶ ಶಿಷ್ಯ ಪ್ರೀತಿ ಮತ್ತು ಪ್ರೋತ್ಸಾಹ . ಅದೇ ಹೈ ಸ್ಕೂಲ್ ನಲ್ಲಿ ಸ್ವಲ್ಪ ಸಮಯ ಅಧ್ಯಾಪನ .ಆಮೇಲೆ ಮೈಸೂರು ವಿಶ್ವ ವಿದ್ಯಾಲಯದಿಂದ ಚರಿತ್ರೆ ಯಲ್ಲಿ  ಎಂ ಎ . ಮಾಡಿ ವಿವೇಕಾನಂದ ಕಾಲೇಜು ನಲ್ಲಿ ಅಧ್ಯಾಪನ .ಕಾಲೇಜಿನ ಸ್ಥಾಪಕ ಆಡಳಿತ ಗಾರ  ದಿ. ಉರಿಮಜಲು ರಾಮ ಭಟ್ ಅವರಲ್ಲಿ ಅತೀವ ಗೌರವ ಮತ್ತು ಪ್ರೀತಿ . 

   ಪ್ರಾಧ್ಯಾಪಕ ರಾಗಿ ಇದ್ದಾಗಲೇ ನವಭಾರತ ,ಉದಯವಾಣಿಗೆ  ನಂತರ ಕರಾವಳಿ ಅಲೆ ,ಹೊಸ ದಿಗಂತ ಪತ್ರಿಕೆಗಳಲ್ಲಿ ನಿಯತವಾಗಿ ಬರವಣಿಗೆ . ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಾಗಿ  ದಶಕಗಳ ನಿರ್ವಹಣೆ ಮತ್ತು ಪ್ರಸ್ತುತ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ದೈನಿಕ ಅಂಕಣ .ವಿವೇಕಾನಂದ ಕಾಲೇಜು ನಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ ನಾಂದಿ ಹಾಕಿದವರು . 

ಪುತ್ತೂರಿನಲ್ಲಿ ಬೋಳಂತಕೋಡಿ ಈಶ್ವರ ಭಟ್ ಅವರ ಕನ್ನಡ ಸಂಘ  ಚಟುವಟಿಕೆಗಳು  ಉತ್ತುಂಗ ಸ್ಥಿತಿ ಯಲ್ಲಿ ಇದ್ದ ಕಾಲ . ಬೋಳಂತ ಕೋಡಿ ,ಅರ್ತಿಕಜೆ ಮತ್ತು ಮೊಳೆಯಾರ್ (ವಿ ಬಿ ಮೊಳೆಯಾರ್ )ಎಂಬ ತ್ರಿಮೂರ್ತಿಗಳು  ಊರೆಲ್ಲಾ  ಕಾಲು ನಡಿಗೆಯಲ್ಲಿ ಮತ್ತು ದೂರಕ್ಕೆ ರಾಮ ಭಟ್ಟರ  (ಕಾರ್ ರಾಮ ಭಟ್ ಅವರು )ಕಾರಿನಲ್ಲಿ ಸುತ್ತಿದಕ್ಕೆ ಲೆಕ್ಕ ಇಲ್ಲ . ಅವರು ಸಂಘಟಿಸಿದ ಕಾರ್ಯ ಕ್ರಮಗಳು ಎಷ್ಟೋ ,ಪ್ರಕಟಿಸಿದ ಅಮೂಲ್ಯ ಗ್ರಂಥಗಳು ಎಷ್ಟೋ ?ಬೋಳಂತ ಕೋಡಿ  ಈಶ್ವರ ಭಟ್ ಅವರನ್ನು ಯಾವಾಗಲೂ ಸ್ಮರಿಸುತ್ತ  ಇರುತ್ತಾರೆ . 

ಇಳಿ ವಯಸ್ಸಿನಲ್ಲಿ ಕೂಡಾ ವಿಟ್ಲ ಸಮೀಪ ಮೈತ್ರೆಯೀ ಗುರುಕುಲಕ್ಕೆ ಗೌರವ ಅಧ್ಯಾಪಕೆರಾಗಿ ಹೋಗಿ ಪಾಠ ಮಾಡುತ್ತಿದ್ದರು . 

ಅವರದು ತುಂಬು ಕುಟುಂಬ ಆಗಿತ್ತು . ತಮ್ಮಂದಿರು ,ಅವರ ಕುಟುಂಬ ಮಕ್ಕಳು ,ತಂದೆ ತಾಯಿ ಎಲ್ಲರೂ ಒಟ್ಟಿಗೇ ಇದ್ದು ಮನೆಯಲ್ಲಿ ನಮ್ಮಂತಹ ನೆಂಟರು ಸದಾ ಇರುತ್ತಿದ್ದರು . ಜಾತ್ರೆಯ ಸಮಯ ಇದು ಇನ್ನೂ ಜಾಸ್ತಿ . ಎಲ್ಲಾ ಗದ್ದಲಗಳ ನಡುವೆ ಇವರ ಅಧ್ಯಯನ ಬರವಣಿಗೆ ;ಜತೆಗೆ ಸಭೆ ಸಮಾರಂಭಗಳಿಗೆ ಅಹ್ವಾನ ,ಯುವ ಬರಹಗಾರರಿಗೆ ಸಲಹೆ ,ಮುನ್ನುಡಿ ಇತ್ಯಾದಿ ಬರೆಯುವುದು .ಇವರ ಪುಸ್ತಕ ಸಂಗ್ರಹ ನನಗೆ  ಅಲ್ಲಿ ಆಗಾಗ ಹೋಗಲು ಮುಖ್ಯ ಆಕರ್ಷಣೆ ಆಗಿತ್ತು . ನಾನು ಮತ್ತು ಅವರು ಹಲವು ಪುಸ್ತಕಗಳನ್ನು ವಿನಿಮಯ  ಮಾಡಿ ಕೊಂಡಿದ್ದೇವೆ . ಸಾವಿರಾರು ರೂಪಾಯಿ ಬೆಲೆ ಬಾಳುವ  ಗ್ರಂಥಗಳನ್ನು ಶಾಲೆಗಳಿಗೆ ನೀಡಿದ್ದಾರೆ 

ಸಾಧ್ಯವಾದಷ್ಟು ನಡಿಗೆ ,ಶ್ರಮ ಜೀವನಕ್ಕೆ ಕೊಡದ ವಿರಾಮ ಇವರ ಆರೋಗ್ಯ ಕಾಪಾಡಿದೆ ;ಪಂಚೆ ಷರಟು ಸರಳ ಉಡುಗೆ ಇವರ ಟ್ರೇಡ್ ಮಾರ್ಕ್ . . ಪರ್ಲಡ್ಕದ ಹಳೇ  ಹಂಚಿನ ಮನೆಯಲ್ಲಿ ಈಗಲೂ ವಾಸ 

ಅವರಿಗೆ ದೊರೆತ ಸನ್ಮಾನ ,ಬಿರುದು ಗಳ ಉಲ್ಲೇಖ ನಾನು ಮಾಡುವುದಿಲ್ಲ ..ಬಹಳಷ್ಟು ಗಳಿಕೆಯನ್ನು ಸಾಹಿತ್ಯ ಸೇವೆಗೆ ,ಅಶಕ್ತರ ಸಹಾಯಕ್ಕೆ ಅವರು ವಿನಿಯೋಗಿಸಿದ್ದಾರೆ 

 

 

ಭಾನುವಾರ, ಜುಲೈ 24, 2022

ಎ ವಿ ನಾರಾಯಣ ದಂಪತಿಗಳು

                                 ಪ್ರೊ  ಎ  ವಿ ನಾರಾಯಣ ಮತ್ತು ಪ್ರೊ ವತ್ಸಲಾ ರಾಜ್ಞಿ ದಂಪತಿಗಳು 

 ಶೈಕ್ಷಣಿಕ ರಂಗದಲ್ಲಿ  ಸುಧೀರ್ಘ ಸೇವೆ ಸಲ್ಲಿಸಿ  ನಿವೃತ್ತಿ ಬಳಿಕ (ಯುವಕರನ್ನೂ ನಾಚಿಸುವಂತೆ )ಕ್ರಿಯಾ ಶೀಲವಾಗಿ  ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ  ತಮ್ಮನ್ನು ತೊಡಗಿಸಿ ಗೊಂಡ ದಂಪತಿ ಶ್ರೀ ಎ ವಿ ನಾರಾಯಣ ಮತ್ತು ವತ್ಸಲಾ ಮೇಡಂ . 

ಪ್ರೊ ನಾರಾಯಣ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ದಿಂದ ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕ ರಾಗಿ ಸೇರಿ ,ಪ್ರಿನ್ಸಿಪಾಲ್ ಆಗಿ ನಿವೃತ್ತರಾದವರು. ಒಳ್ಳೆಯ ಶಿಕ್ಷಕ ರೂ  ,ಆಡಳಿತ ಗಾರರೂ ಎಂದು ನಿರೂಪಿಸಿದ ಇವರು ನಂತರವೂ ಕಾಲೇಜು  ಆಡಳಿತ ಮಂಡಳಿಯಲ್ಲಿ ಸಕ್ರಿಯರಾಗಿ ಇದ್ದು  ಸಂಸ್ಥೆಯ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ತಮ್ಮ ಯೋಗದಾನ ನೀಡಿದವರು . ಜತೆಗೆ ಸಾಹಿತ್ಯ ಪರಿಷತ್ ,ಹಿರಿಯ ನಾಗರಿಕರ ಸಂಘಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು . ತನು ಮನ ಧನ ದ  ಕೊಡುಗೆ ಎಂಬುದು ಇವರ ವಿಚಾರಕ್ಕೆ ಕ್ಲೀಷೆ ಯಲ್ಲ . ಕನ್ನಡ ಕೆಲಸ ಗಳಲ್ಲಿ ಉತ್ಸಾಹ ದಿಂದ ಓಡಾಡುವದು ಕಾಣ ಬಹುದು . 

ವತ್ಸಲಾ ಮೇಡಂ ಗಣಿತ ಶಾಸ್ತ್ರ ಪ್ರಾಧ್ಯಾಪಕೆರಾಗಿ ಅದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು .  ಕಠಿಣ ವೆಂದು ಪರಿಗಣಿತವಾದ ಈ ವಿಷಯವನ್ನು ಸುಲಿದ ಬಾಳೆಯ ಹಣ್ಣಿನಂತೆ ಮಾಡುವ ಇವರ ಪಾಠ ಪ್ರವಚನ ಗಳನ್ನು  ವಿದ್ಯಾರ್ಥಿಗಳು ಈಗಲೂ ನೆನಪಿಸಿ ಕೊಳ್ಳುತ್ತಾರೆ . 

ಇಬ್ಬರೂ ವಿದ್ಯಾರ್ಥಿ ಮತ್ತು ಆಡಳಿತ ಮಂಡಳಿ ಮನ್ನಣೆ ಪಡೆದವರು . ಮೃದು ಮಿತ ಮತ್ತು ಹಿತ ಭಾಷಿಗಳು . ಇಂತಹವರ ಇರುವಿಕೆಯಿಂದ ಸಮಾಜದ ಶ್ರೀಮಂತಿಕೆ ಇದ್ದದ್ದು ಉಳಿಯುತ್ತದೆ ,ಮತ್ತು ಹೆಚ್ಚುತ್ತದೆ . 

 ಇವರು ಹೀಗೇ ಅರೋಗ್ಯ ,ಸಂತೋಷ ಮತ್ತು ಸಡಗರದಿಂದ ಇದ್ದು ನಮಗೆಲ್ಲಾ ಮಾರ್ಗ ದರ್ಶನ ಮಾಡುತ್ತ ಇರಲಿ

ಬುಧವಾರ, ಜುಲೈ 20, 2022

ಜೇನು ಹುಳ ಕಡಿತ

 Catching a Wild Honeybee Swarm - YouTube

 

ನನ್ನ ಸಹಪಾಠಿ ಮಿತ್ರ ಶಿರಂಕಲ್ಲು ಶಿವರಾಮ ಭಟ್ ನಿನ್ನೆ ಕಾಡು ಜೇನು ಹುಳ ಕಡಿತದಿಂದ ಬಾಧಿತ ರಾಗಿ ಬಂದಿದ್ದರು . 

 ಜೇನು ಹುಳಗಳು ಕಡು ಬಣ್ಣ (ಕಪ್ಪು ,ಕೆಂಪು )ದ್ವೇಷಿಗಳು . ಅರಿವಿಲ್ಲದೆ ಅವರ ಸುದ್ದಿಗೆ ಹೋದರೂ ,ತಿಳಿಯದೇ ಮಾಡಿದ ಪಾಪ ಎಂದು ಅವು ಬಿಡವು . ಅಟ್ಟಿಸಿ ಕೊಂಡು ಬಂದು ಕಚ್ಚ್ಚುವವು . ಜೇನ್ ನೊಣಗಳಿಗೆ ಪ್ರತಿ ಧಾಳಿ ಮಾಡಲು ಹೋಗ ಬಾರದು . ಕಾಲಿಗೆ ಬುದ್ದಿ ಹೇಳುವುದು ಜಾಣ ತನ .ಓಡಿ ಹೋಗಿ ಕೋಣೆಯೊಳಗೋ ,ಕಾರಿನ ಒಳಗೋ ರಕ್ಷಣೆ ಪಡೆಯ ಬೇಕು . ಗೋಣಿಯೋ ,ದಪ್ಪ ಬಟ್ಟೆಯೋ ಇದ್ದರೆ ಕಣ್ಣು ಮಾತ್ರ ಬಿಟ್ಟು ಮುಖ ಸಾಧ್ಯ ವಾದಷ್ಟು ದೇಹ ಮುಚ್ಚಿ ಕೊಳ್ಳ ಬೇಕು . ನೀರಿಗೆ ಹಾರಿ ಮುಳುಗುವುದು ಕ್ಷೇಮ ಅಲ್ಲ .ಅವು ನೀರಿನ ಮೇಲೆ ಹಲವೊಮ್ಮೆ ಕಾಯುತ್ತ ಇರುವವು . 

ಜೇನು ನೊಣದ ಮುಳ್ಳುಗಳನ್ನು ಸಾಧ್ಯ ವಾದಷ್ಟು ತೆಗೆದು ಕೊಳ್ಳ ಬೇಕು . (ಪಾಶ್ಚಾತ್ಯ ಮಾಧ್ಯಮಗಳು ಇದಕ್ಕಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನ ಬದಿ ಉಪಯೋಗಿಸಿ ಎಂದು ಸಲಹೆ ಮಾಡುವರು .)ನೋವು ಶಮನಕ್ಕೆ  ಬಟ್ಟೆಯೊಗೆ ಐಸ್ ಸುತ್ತಿ ಇಡಬಹುದು . ಅಡಿಗೆ ಸೋಡಾ ಕರಡಿಸಿ ಹಚ್ಚಿದರೆ ಉರಿ ಕಡಿಮೆ ಆಗುವುದು ಎನ್ನುವರು . 

ಇದರಲ್ಲಿ ಪ್ರಾಣಾಪಾಯ ಆಗುವುದು ಜೇನ್ ನೊಣದ ವಿಷಕ್ಕೆ ಅಲ್ಲರ್ಜಿ ರಿಯಾಕ್ಷನ್ ಆಗಿ.ಇವರಲ್ಲಿ ಮೈಯೆಲ್ಲಾ ತುರಿಕೆ ರಾಷ್ ,ದಮ್ಮು ಕಟ್ಟುವುದು ,ರಕ್ತದ ಒತ್ತಡ ಕುಸಿತ ಆಗುವುದು .ಅದಕ್ಕೆ ವೈದ್ಯರು  ಜೀವ ಉಳಿಸುವ ಅಡ್ರೆನಲಿನ್ ಇಂಜೆಕ್ಷನ್ ಕೊಡುವರು .ಸಣ್ಣ ಅಲರ್ಜಿ ಗೆ  ಆಂಟಿ ಹಿಸ್ಟಾಮಿನಿಕ್ಸ್ ,ಸ್ಟ್ರೆರೋಯಿಡ್ ಸಾಕು .ನೋವಿಗೆ ಇಬು ಪ್ರೊಫೆನ್ ,ಡೈಕ್ಲೋ ಫೆನಾಕ್ ನಂತ ವೇದನಾ ಹಾರಕ  ಕೊಡುವರು . 

ಬಾಲಂಗೋಚಿ : ಕನ್ನಡದಲ್ಲಿ ಜೇನು ನೊಣ ,ಚೇಳು ಕಡಿತ ಎನ್ನುವರಾದರೂ ಇಂಗ್ಲಿಷ್ ನಲ್ಲಿ ಅದನ್ನು ಬೈಟ್ ಎನ್ನದೆ ಸ್ಟಿಂಗ್ ಎನ್ನುವರು

ಮಂಗಳವಾರ, ಜುಲೈ 19, 2022

                  ಜಲೋದರ 

 Ascites - WikipediaAscites causes, symptoms, diagnosis, prognosis and ascites treatment

 

ನಮ್ಮ  ಉದರದದೊಳಗೆ ಜಠರ ಕರುಳ ಮಾಲೆ ಇತ್ಯಾದಿ ತೇಲುತ್ತಲಿದ್ದು ಅದಕ್ಕೆ  ಸಾಕಷ್ಟು ಸ್ಥಳಾವಕಾಶ ಇದೆ .ಅಲ್ಲದೆ ಅವುಗಳ ಸುಲಲಿತ ಚಲನೆಗೆ ಸುಮಾರು ೫೦ ಮಿಲ್ಲಿ ಲೀಟರ್ ನಷ್ಟು ದ್ರವ ಇದ್ದು ಘರ್ಷಣೆ ನಿವಾರಕ ಆಗಿ ಕೆಲಸ ಮಾಡುವದು .

ಆದರೆ ಕೆಲವು ಸಂದರ್ಭಗಳಲ್ಲಿ ದ್ರವ ಉತ್ಪತ್ತಿ ಮತ್ತು ಶೇಖರಣೆ ಹೆಚ್ಚು ಆಗಿ ಹೊಟ್ಟೆ ಉಬ್ಬುವುದು . ಎದೆಯ ನೀರಿಗಿಂತ ಇಲ್ಲಿ ಹೊರಗೆ ವಿಕಸಿಸಲು ಅವಕಾಶ ಇದೆ . 

ಮದ್ಯಪಾನ ,ಅಥವಾ ಸೋಂಕು ರೋಗಗಳಿಂದ ಲಿವರ್ ಕಾರ್ಯ ನಾಶ ಆದರೆ ಜಲೋದರ ಬರುವದು ಸಾಮಾನ್ಯ . ಹೊಟ್ಟೆಯ ಪೋರ್ಟಲ್ ರಕ್ತ ನಾಳ ಗಳ ಒಳಗೆ ಹೆಚ್ಚಿದ ಒತ್ತಡ , ಲವಣ ಮತ್ತು ನೀರು ಹಿಡಿದು ಕೊಳ್ಳುವ ಅಲ್ದೊ  ಸ್ಟಿರೋನ್ ಎಂಬ ಹಾರ್ಮೋನ್ ಮಿತಿ ಮೀರಿ ಉತ್ಪಾದನೆ ಮತ್ತು ರಕ್ತದಲ್ಲಿ ಸಸಾರ ಜನಕದ (ಲಿವರ್ ಇದರ ಕಾರ್ಖಾನೆ )ಕೊರತೆ ಇದಕ್ಕೆ ಕಾರಣ . 

ಇನ್ನು ಕ್ಷಯ ರೋಗ ,ಕ್ಯಾನ್ಸರ್,ಅಪೌಷ್ಟಿಕತೆ  ಮತ್ತು ಮೂತ್ರ ಪಿಂಡ ಹೃದಯ  ವೈಫಲ್ಯ ದಲ್ಲಿಯೂ ಹೊಟ್ಟೆಯಲ್ಲಿ ನೀರು ತುಂಬಿ ಕೊಳ್ಳ ಬಹುದು . ಸೂಜಿ ಹಾಕಿ ನೀರು ಪರೀಕ್ಷೆ ಮಾಡಿ ಕಾರಣ ತಿಳಿದು ಕೊಳ್ಳುವರು . ಹೊಟ್ಟೆಯ ಸ್ಕ್ಯಾನ್ ಸಹಾಯ ಕಾರಿ


 

ಭಾನುವಾರ, ಜುಲೈ 17, 2022

 ಎದೆಯಲ್ಲಿ  ನೀರು ತುಂಬುವುದು 

 Pleural effusion | HealthEngine BlogPleural Fluid Drainage Frequency - Dr. Flores Pulmonology                                                                                          

ಎದೆಯಲ್ಲಿ ಮುಖ್ಯವಾದ ಎರಡು ಅಂಗಗಗಳು ಇವೆ . ಎರಡು  ಶ್ವಾಸ ಕೋಶಗಳು ಮತ್ತು ಅವುಗಳ ನಡುವೆ ಹೃದಯ .ಶ್ವಾಸ ಕೋಶಗಳಲ್ಲಿ  ಆಮ್ಲಜನಕ ಹೀರಿ ಶುದ್ದವಾದ  ರಕ್ತ  ಶ್ವಾಸಕೋಶದ  ಅಭಿಧಮನಿ ಮೂಲಕ ಹೃದಯದ ಎಡ ಹೃತ್ಕರ್ಣ ,ಹೃತ್ಕುಕ್ಷಿ  ಸೇರಿ ಮಹಾ ಅಪಧಮನಿ ಮೂಲಕ ಶರೀರದ  ಎಲ್ಲಾ ಅಂಗಗಳಿಗೆ ಸರಬರಾಜು ಆಗುವುದು .

 ಅದೇ ರೀತಿ ಶರೀರದಿಂದ ಬಂದ ಕಡಿಮೆ ಆಮ್ಲಜನಕ  ಇರುವ  ಹೆಚ್ಚು ಕಾರ್ಬನ್ ಡಯಾ ಕ್ಸೈಡ್ ಇರುವ ರಕ್ತ  ಬಲ ಹೃತ್ಕರ್ಣ ,ಹೃತ್ಕುಕ್ಷಿ ,ಶ್ವಾಸ ಕೋಶದ ಅಪಧಮನಿ ಮೂಲಕ ಶ್ವಾಸಕೋಶಗಳಿಗೆ ಹೋಗುವುದು .

ಶ್ವಾಸ ಕೋಶ ಮತ್ತು ಹೃದಯಕ್ಕೆ  ಅನುಕ್ರಮ ವಾಗಿ ಪ್ಲೂರಾ ಮತ್ತು ಪೆರಿ ಕಾರ್ಡೀಯಮ್ ಎಂಬ ಎರಡು ಹೊದಿಕೆಯ ರಕ್ಷಣಾತ್ಮಕ ಪೊರೆಗಳು ಇರುತ್ತವೆ .ಇವುಗಳ ಒಳಗೆ 10 ಮಿಲಿ ಲೀಟರ್ ನಷ್ಟು ಲುಬ್ರಿ ಕೆಂಟ್ ದ್ರವ ಇರುತ್ತದೆ .

ಕೆಲವೊಮ್ಮೆ ಕಾಯಿಲೆಯಲ್ಲಿ  ಪ್ಲೂರಾ ದ  ಎರಡು ಹೊದಿಕೆಗಳ ನಡುವೆ ದ್ರವ ತುಂಬಿ ಅದು ಶ್ವಾಸ ಕೋಶವನ್ನು ಒತ್ತಿ ಸರಿಯಾಗಿ ವಿಕಸನ ಆಗಲು ಬಿಡದು .ಎದೆಯ ಗೂಡನ್ನು ಪಕ್ಕೆಲುಬುಗಳು ಕಾಯುವುದರಿಂದ ಹೊರಗಡೆ ವಿಸ್ತರಿಸಲು ಆಗದು ತಾನೇ . ಇದನ್ನು ಪ್ಲೂರಲ್  ಎಫ್ಯೂಶನ್ ಎನ್ನುತ್ತಾರೆ . ಅದೇ ರೀತಿ ಹೃದಯದ ಎರಡು ಹೊದಿಕೆಗಳ ನಡುವೆ ಆದರೆ ಪೆರಿ ಕಾರ್ಡಿಯಲ್  ಎಫ್ಯೂಶನ್ ಎನ್ನುವರು . ಇದು ದೊಡ್ಡ ಪ್ರಮಾಣದಲ್ಲಿ ಇದ್ದರೆ ಹೃದಯ ಸಂಕುಚನ  ವಿಕಸನದಲ್ಲಿ ,ವಿಕಸನಕ್ಕೆ ಅಡ್ಡಿ ಬಂದು ತೊಂದರೆ ಉಂಟು ಮಾಡುವುದು .

ಎರಡೂ ರೀತಿಯ ದ್ರವ ಸಂಗ್ರಹ ಬೇರೆ ಬೇರೆ ಕಾರಣಕ್ಕೆ  ದಮ್ಮು ಕಟ್ಟುವುದು ಉಂಟು ಮಾಡುವುದು .ಮತ್ತು ಅದನ್ನು ಉಂಟು ಮಾಡುವ ಮೂಲ ಕಾಯಿಲೆ ಯಾ ಲಕ್ಷಣ ಗಳಾದ ಕೆಮ್ಮು ಜ್ವರ ಇತ್ಯಾದಿ

ಪ್ಲೂರಲ್ ಎಫ್ಯೂಶನ್ ಗೆ ನಮ್ಮ ದೇಶದಲ್ಲಿ ಮುಖ್ಯ ಕಾರಣ ಕ್ಷಯ ರೋಗ .ಹೃದಯ ವೈಫಲ್ಯ ,ಕಾನ್ಸರ್ ,ಶ್ವಾಸ ಕೋಶದ ಸೋಂಕು, ಇತ್ಯಾದಿ ಇತರ ಕೆಲ ಸಾಮಾನ್ಯ ಕಾರಣಗಳು . ಡೆಂಗು ಜ್ವರದಲ್ಲಿ ಕೂಡಾ ಸಣ್ಣ  ಪ್ಲೂರಲ್ ದ್ರವ ಸಂಗ್ರಹ ಸಾಮಾನ್ಯ .ವೈದ್ಯರು ಎದೆಯ ಮೇಲೆ ಕುಟ್ಟುವುದು (ಮರ್ಧನ)ಮತ್ತು  ಶ್ರವಣ ದ ಮೂಲಕ ನೀರು ತುಂಬಿರುವುದು ಸಂಶಯಿಸಿ  ಎಕ್ಸ್ ರೇ ಮತ್ತು  ಸ್ಕ್ಯಾನ್ ಮೂಲಕ ದೃಢ ಪಡಿಸಿ ಕೊಳ್ಳುವರು . ನೀರು ಇರುವ ಭಾಗಕ್ಕೆ ಪಕ್ಕೆಲುಬುಗಳ ನಡುವಿಂದ ಸೂಜಿ ಹಾಯಿಸಿ ನೀರು ತೆಗೆದು ಪರೀಕ್ಷೆ ಮಾಡಿ ಕಾರಣ ಕಂಡು ಹಿಡಿದು ಚಿಕಿತ್ಸೆ ಮಾಡುವರು .

 ಹೃದಯದ ಸುತ್ತ ನೀರು ನಿಲ್ಲುವುದಕ್ಕೆ ಕ್ಷಯ , ಇತರ ಸೋಂಕು ರೋಗಗಳು ,ಥೈರೊಯ್ಡ್ ಹಾರ್ಮೋನ್ ಕೊರತೆ ಇತ್ಯಾದಿ ಕಾರಣಗಳು . ಹೃದಯದ ಸ್ಕ್ಯಾನ್ -ಏಕೋ ಕಾರ್ಡಿಯೋಗ್ರಫಿ ಮೂಲಕ ದೃಢ ಪಡಿಸಿ ,ದ್ರವ ಸಂಗ್ರಹಿಸಿ ಕಾರಣ ಕಂಡು ಹಿಡಿದು ಚಿಕಿತ್ಸೆ . 

ಅವಘಡ ,ಮತ್ತು ಇನ್ನಿತರ ಕಾರಣಗಳಿಂದ ಪೆಟ್ಟು ಆದಾಗ ಎದೆಯ ಒಳಗೆ ರಕ್ತ ಸ್ರಾವ ಆಗಿ ಪ್ಲೂರಲ್ ಅಥವಾ ಪೆರಿ ಕಾರ್ಡಿಯಲ್ ಗಳ  ಒಳಗೆ ರಕ್ತ ಸಂಗ್ರಹ ಆಗಿ   ದುಷ್ಪರಿಣಾಮ ಉಂಟು ಮಾಡಬಹುದು . 

ಈ ರೀತಿ ಸಂಗ್ರಹ ಆದ  ದ್ರವದ ಪ್ರಮಾಣ  ಉಸಿರುಕಟ್ಟುವಿಕೆ ಉಂಟು ಮಾಡುತ್ತಿದ್ದರೆ   ಸೂಜಿ ಮತ್ತು ಕೊಳಾಯಿ ಮೂಲಕ ಅದನ್ನು ಹೊರತೆಗೆಯುವರು . ಮತ್ತು ಮೂಲ ಕಾರಣಕ್ಕೆ ಚಿಕಿತ್ಸೆ ಮಾಡುವರು

ಶನಿವಾರ, ಜುಲೈ 16, 2022

ಸಾಫ್ಟ್ ಹ್ಯಾಂಡ್ ನ ಸಾಫ್ಟವೆರ್ ಹುಡುಗ ಹುಡುಗಿಯರಿಗೆ ಉಪ್ಪಿಟ್ಟು ಮಾಡುವ ವಿಧಾನ (ಇಬ್ಬರಿಗೆ)

 Image result for upma

ಸಾಫ್ಟ್ ಹ್ಯಾಂಡ್ ನ ಸಾಫ್ಟವೆರ್ ಹುಡುಗ ಹುಡುಗಿಯರಿಗೆ ಉಪ್ಪಿಟ್ಟು ಮಾಡುವ ವಿಧಾನ (ಇಬ್ಬರಿಗೆ)

 ವಿಧಾನ ೧ 

ಮೂರು ಹಸಿಮೆಣಸು ,ಎರಡು ಈರುಳ್ಳಿ ,ಸಣ್ಣ ತುಂಡು ಶುಂಠಿ ಸಣ್ಣಕೆ ಹಚ್ಚಿಕೊಳ್ಳಿರಿ . ಆಮೇಲೆ  ಚೆನ್ನಾಗಿ ಕೈ ತೊಳೆದು ಕೊಳ್ಳಿರಿ . ಒಂದು ಒಲೆಯ ಮೇಲೆ ಬಾಣಲೆಯಲ್ಲಿ  ಎರಡು ಕಪ್ ರವೆ ಹಾಕಿ ಚಿನ್ನದ ಬಣ್ಣ ಬರುವ ವರೆಗೆ ತಿರುವಿ ಅದನ್ನು ಒಂದು ಬಟ್ಟಲಲ್ಲಿ ಸುರುವಿರಿ . ಇನ್ನೊಂದು ಒಲೆಯಲ್ಲಿ ಎರಡು ಕಪ್ ನೀರು  ಕುಡಿಯಲು ಒಂದು ಪಾತ್ರೆಯಲ್ಲಿ ಇಡಿರಿ . ಬಾಣಲೆಗೆ  ದೊಡ್ಡ ಎರಡು ಚಮಚೆ ಎಣ್ಣೆ (ಉದಾ ತೆಂಗಿನ ಎಣ್ಣೆ ,ನೆಲಗಡಲೆ ಎಣ್ಣೆ )ಹಾಕಿ ,ಅದಕ್ಕೆ ಎರಡು ಸಣ್ಣ ಚಮಚ ಸಾಸಿವೆ ,ಉದ್ದಿನ ಬೇಳೆ ಸೇರಿಸಿ ತಿರುವಿರಿ ,ಸಾಸಿವೆ ಚಟ ಚಟ ಹೇಳುವಾಗ ಹಚ್ಚಿ ಇಟ್ಟ ಈರುಳ್ಳಿ,ಹಸಿಮೆಣಸು ,ಶುಂಠಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ . ಚೆನ್ನಾಗಿ ತಿರುವಿರಿ . ಬಟ್ಟಲಲ್ಲಿ ಇಟ್ಟ ರವೆ (ಸಜ್ಜಿಗೆ )ಬಾಣಲೆಗೆ ಹಾಕಿರಿ ,ಒಂದು ಚಮಚ ಪುಡಿ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ತಿರುವಿರಿ . ಅಷ್ಟರಲ್ಲಿ ಇನ್ನೊಂದು ಒಲೆಯ ಮೇಲಿನ ಪಾತ್ರೆಯಲ್ಲಿ ನೀರು ಕುದಿಯಲು ಆರಂಭವಾಗುವದು . ಆ ನೀರನ್ನು ಬಾಣಲೆಗೆ ಹಾಕಿ ತಿರುವಿರಿ .ಆಮೇಲೆ ಒಂದು ಮುಚ್ಚಳ ಮುಚ್ಚಿ ಸ್ವಲ್ಪ ಕಾಯಿರಿ . ನೀರು  ಆರಿದ ಒಡನೆ ಒಲೆಯಿಂದ ಕೆಳಗೆ ತೆಗೆದು ಇಟ್ಟು ,ತುರಿದ ತೆಂಗಿನ ಕಾಯಿ ,ಕೊತ್ತಂಬರಿ ಸೊಪ್ಪು  ಹಾಕಿ ರಿ .ಬಿಸಿ ಬಿಸಿ ಉಪ್ಪಿಟ್ಟು ರೆಡಿ . (ಬಿಸಿ ಪಾತ್ರೆಯನ್ನು ಬರಿ ಕೈಯಲ್ಲಿ ಮುಟ್ಟದಿರಿ .ಬಟ್ಟೆ ಅಥವಾ ಇಕ್ಕುಳ ಉಪಯೋಗಿಸಿ . 

ವಿಧಾನ ೨ 

ನೀವು ಭಯಂಕರ ಬ್ಯುಸಿ ಆಗಿದ್ದು ಸಮಯದ ಅಭಾವ ಇದ್ದರೆ ಎಂ ಟಿ  ಆರ್ ಅಥವಾ ೭೭೭ ಉಪ್ಪಿಟ್ಟು ಮಿಕ್ಸ್ ನ್ನು ಒಂದು ಕಪ್ ಗೆ ಎರಡರಂತೆ ನೀರು ಕುದಿಸಿ ಅದಕ್ಕೆ ಸುರುವಿರಿ .ಉಪ್ಪಿಟ್ಟು ರೆಡಿ ,ತಿನ್ನುವಾಗ ಪೇಪರ್ ಪ್ಲೇಟ್ ನಲ್ಲಿ ತಿಂದರೆ ತೊಳೆಯುವ ಕೆಲಸ ಇಲ್ಲ . 

ಇಷ್ಟೂ ಸಮಯ ಇಲ್ಲದಿದ್ದರೆ  ಸ್ವಿಗ್ಗಿ ಅಥವಾ ಝೋಮ್ಯಾಟೋ ಆಪ್ ಒತ್ತಿ ನಿಮ್ಮ ಇಷ್ಟದ ಹೋಟೆಲ್ ಗೆ ಆರ್ಡರ್ ಮಾಡಿರಿ 


ಶುಕ್ರವಾರ, ಜುಲೈ 15, 2022

ಹೋಟೆಲ್

                                      


ನಮ್ಮ ನೆಹರೂನಗರ ಪರಿಸರದಲ್ಲಿ ಬಂಜಾರ ವನಸ್ ಎಂಬ ಹೋಟೆಲ್ ಆರಂಭಿಸಿದ್ದಾರೆ . ಬಂಜಾರ ವನಸ್ ಎಂದರೆ ಹೊಟ್ಟೆ ತುಂಬಾ ಊಟ ಎಂದು ಅರ್ಥ . ಇದರ ಪ್ರವರ್ತಕರಿಗೆ ಶುಭಾಶಯ ಗಳು . 

ಉಡುಪಿ  ಯಲ್ಲಿ  ಬಹಳ ಹಿಂದೆ ವನಸ್ ಎಂಬ ಹೋಟೆಲ್ ಆರಂಭ ವಾಗಿತ್ತು . ಜತೆಗೆ ಬಾಜಲ್  ಎಂಬ ತಂಪು ಪಾನೀಯ ಬಹಳ ವರ್ಷಗಳ ವರೆಗೆ ಬರುತ್ತಿತ್ತು . ತುಳು ಶಬ್ದಗಳನ್ನು ಜನಪ್ರಿಯ ಗೊಳಿಸಿದ ಅವರಿಗೆ ಅಭಿನಂದನೆಗಳು .. ಮಂಗಳೂರಿನಲ್ಲಿ ಕೂಡಾ ಹೊಟೇಲ್ ವನಸ್ ,ಇರೆತ್ತ ವನಸ್ ಹೆಸರಿನ ಹೊಟೇಲ್ ಗಳಿವೆ ಎಂದು ಕೇಳಿದ್ದೇನೆ.

ತಮಿಳು ಭಾಷೆಯಲ್ಲಿ ಪಾರ್ತಾಲ್ ಪಶಿ ತೀರುಮ್ (ನೋಡಿದರೇ ಸಾಕು ಹಸಿವು ನೀಗುವುದು )ಎಂಬ ನುಡಿಗಟ್ಟು ಇದೆ .ಇದೇ ಹೆಸರಿನ ಸಿನಿಮಾ ಕೂಡಾ ೧೯೬೨ ರಲ್ಲಿ ಬಂದಿದ್ದು ಕಮಲ ಹಾಸನ್ ಬಾಲ ನಟರಾಗಿ ಅಭಿನಯಿಸಿದ್ದರು . ಎಂ ಟಿ ಆರ್ ಹೋಟೆಲ್ ತಿಂಡಿ ಪಾರ್ತಾಲೆ ಪಶಿ ತೀರುಮ್ ಎಂದು ಟಿ ಎಸ ಆರ್ ಪ್ರಜಾವಾಣಿಯಲ್ಲಿ ಬರೆದದ್ದನ್ನು ಓದಿದ ನೆನಪು . 

ನಾ ಮೊಗಸಾಲೆ ಯವರ ಧರ್ಮ ಯುದ್ಧ ಕಾದಂಬರಿ ಯಲ್ಲಿ ನಮ್ಮ ಹಳ್ಳಿಗಳ ಆಗಿನ ಹೋಟೆಲ್ ಗಳ ಪ್ರೋಟೋ ಟೈಪ್ ಒಂದರ ಚಿತ್ರಣ ಚೆನ್ನಾಗಿ ಚಿತ್ರಿಸಿದ್ದಾರೆ . ನಮ್ಮ ಮನೆ ಸಮೀಪ ಬೈರಿ ಕಟ್ಟೆಯಲ್ಲಿ ಶಂಕರ ನಾರಾಯಣ ರಾವ್ ಎಂಬುವರ ಹೋಟೆಲ್ ಇದೇ ತರಹ ಇದ್ದು ,ಕ್ಯಾಷಿ ಯರ್ ,ಸಪ್ಲೈಯ್ಯರ್ ,ಕುಕ್ ಮತ್ತು ಕ್ಲೀನರ್ ಗಳ ಏಕ ಪಾತ್ರಾಭಿನಯ ಕಾಣ ಬಹುದಾಗಿತ್ತು . ನನ್ನ ತಂದೆಯವರ ಆಪ್ತ  ಮಿತ್ರರು . ಒಂದೂವರೆ ಮೀಟರ್ ಚಾ ವನ್ನು ದೊಡ್ಡ ಕುಪ್ಪಿ  ಗ್ಲಾಸ್ (ಈಗಿನ ಹೋಟೆಲ್ ಗಳಲ್ಲಿ ಇರುವುದರ ಮೂರು ಪಟ್ಟು )ತುಂಬಿಸಿ ಕೊಡುತ್ತಿದ್ದರು .ಅವರ ಬನ್ಸ್ ,ಕಾರದ ಕಡ್ಡಿ ,ಸಜ್ಜಿಗೆ ಬಜಿಲ್ ತುಂಬಾ ಚೆನ್ನಾಗಿತ್ತು . 

Hotel Vanas, Km Marg, Udupi - South Indian, Sea Food, Udupi, Non Veg Thali  Cuisine Restaurant - Justdial

ಬೆಲ್ಚಪ್ಪಾಡರು

 ಬಾಲ್ಯದಲ್ಲಿ  ದೇವಸ್ಥಾನ  ಗಳಲ್ಲಿ ಬೆಲ್ಚ ಪ್ಪಾಡ  ರು  ಕಾಣ ಬರುತ್ತಿದ್ದರು . ಉದ್ದ ಕೂದಲು ಬಿಟ್ಟು ಕೆಂಪು ಬಟ್ಟೆ  ಶಾಲು ಧರಿಸಿ ,ಕೈಯಲ್ಲಿ ಕಡಗ , ಒಂದು ಖಡ್ಗ ಹಿಡಿದು ಬರುತ್ತಿದ್ದ ದೃಶ್ಯ ಕಣ್ಣು ಮುಂದೆ ಇದೆ .ದೇವರು (ದೇವಿ )ಇವರ ಮೈಮೇಲೆ  ಬಂದು ಭಕ್ತರಿಗೆ ಸಾಂತ್ವನ ಹೇಳಿ  ಧೈರ್ಯ ಕೊಡುವರು ಎಂಬ ನಂಬಿಕೆ  .ಇದು ಒಂದು ಕೇರಳೀಯ ಪರಂಪರೆ . ನಮ್ಮ ಗ್ರಾಮದ ಬೆಲ್ಚ ಪ್ಪಾಡರ  ಮಾತೃ ಭಾಷೆ ಕೂಡಾ ಮಲಯಾಳ ಆಗಿದ್ದು ನನ್ನ ಆಪ್ತ ಮಿತ್ರ ರಾಜು ಬೆಲ್ಚಡ   ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಆಗಿದ್ದಾರೆ . 

ಮಲಯಾಳದ ವೆಲುಪ್ಪಚ್ಚಾಡ ಎಂಬ ಮೂಲದಿಂದ ಈ ಶಬ್ದ ಬಂದಿರ ಬೇಕು . ಪದದ ಅರ್ಥ ಬೆಳಕು ತೋರುವವವನು .ತೆಂಕ್ಲಾಗಿ ಗಂಡು   ಮತ್ತು ಸ್ತ್ರೀ  ವೆಲ್ಚಪ್ಪಾಡ್ ಇರುವರು .ಉತ್ಸವ ದಿನ ಪೂಜಾ ಸಮಯ ಚೆಂಡೆ  ಗಂಟೆ  ಘಂಟಾ ಘೋಷಕ್ಕೆ  ಖಡ್ಗ ಝಳಪಿಳಸುತ್ತಾ  ಆವೇಶ ಬಂದು ಕುಣಿಯುವರು ,

ಇತರ ದಿನಗಳಲ್ಲಿ ಕೂಡಾ ಮನೆ ಮನೆಗೆ ಬಂದು ಆಶೀರ್ವಾದ ಮಾಡಿ ಪ್ರೀತಿಯಿಂದ ಕೊಟ್ಟ ಕಾಣಿಕೆ ತೆಗೆದು ಕೊಂಡು ಹೋಗುವರು .ನಮ್ಮ ಊರಿನಲ್ಲಿ ಈಗ ಇವರನ್ನು ಕಾಣ ಸಿಗುವುದಿಲ್ಲ . 

ಪ್ರಸಿದ್ಧ ಕೊಡುಂಗಲ್ಲೂರು ಭಗವತಿ ಕ್ಷೇತ್ರದ  ವೆಳಿಚ್ಚ ಪ್ಪಾಡ್  ತುಳ್ಳಲ್(ಕುಣಿತ ) ನೋಡಲು

 https://www.youtube.com/watch?v=2xl94n81wiE&t=16s


ರೇಷನ್ ಅಂಗಡಿ

 ಕರೋಪಾಡಿ ಕನ್ಯಾನದಿಂದ ಪಶ್ಚಿಮಕ್ಕೆ ಕೇರಳಕ್ಕೆ ತಾಗಿ ಇರುವ ಗ್ರಾಮ.ಮಿತ್ತನಡ್ಕ ಇದರ ಕೇಂದ್ರ ಸ್ಥಾನ . ಕರೋಪಾಡಿ ಯಲ್ಲಿ ಕೃಷಿಕರ ಸಹಕಾರಿ ಸಂಘ ಸ್ಥಾಪಿತವಾಗಿ ಇದ್ದು ಕನ್ಯಾನದಲ್ಲಿ  ಒಂದು ರೇಷನ್ ಷಾಪ್ ನಡೆಸುತ್ತಿದ್ದರು . ಕನ್ಯಾನ ಗ್ರಾಮದ ಕೃಷಿಕರೂ ಇದೇ ಸಂಘವನ್ನು ಅವಲಂಬಿಸಿ ಇದ್ದರು.(ಮುಖ್ಯವಾಗಿ ಸಾಲ ಕ್ಕೆ ).ಪಾದೆಕಲ್ ನ ಶ್ರೀ ಸಿ ಎಚ್ ಶಂಕರ ನಾರಾಯಣ ಭಟ್ ಎಂಬುವರು ಈ ಸೊಸೈಟಿ ಯ ಅಧ್ಯಕ್ಷರಾಗಿ ಇದ್ದರು ,


                         ಕನ್ಯಾನ ದಲ್ಲಿ  ಮುಖ್ಯ ರಸ್ತೆಯ  ಡಿ ಕೆ ಶೇಕಬ್ಬ ನವರ ಜೀನಸು ಅಂಗಡಿ ಪಕ್ಕ ರೇಷನ್ ಅಂಗಡಿ .ಇಲ್ಲಿ  ಪದ್ಮನಾಭ ಭಟ್ ಮತ್ತು ಶಂಕರ ಭಟ್ ಎಂಬುವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದು , ಡಾ ಮಹಾದೇವ ಶಾಸ್ತ್ರಿ ಅವರ ಕಾಂಪೌಂಡರ್ ಆಗಿಯೂ ಇದ್ದ ತಿಮ್ಮಪ್ಪ ಶೆಟ್ಟರು ತೂಕ ಮಾಡಿ ಕೊಡುವ ಅಸಿಸ್ಟೆಂಟ್ ಆಗಿದ್ದರು .ಕನ್ಯಾನ ಆಗ ಬೆಲ್ಟ್ ಏರಿಯಾ ದಲ್ಲಿ ಇದ್ದುದರಿಂದ  ಅಕ್ಕಿ ,ಅವಲಕ್ಕಿ ,ಸಕ್ಕರೆ ,ಚಿಮಿಣಿ ಎಣ್ಣೆ ಇತ್ಯಾದಿ ಗಳನ್ನು ರೇಷನ್ ಅಂಗಡಿಯಲ್ಲಿಯೇ  ಖರೀದಿಸ ಬೇಕಿತ್ತು .ಈಗಿನಂತೆ ನಿಯತವಾದ ಸರಬರಾಜು ಇರಲಿಲ್ಲ . ಪೇಟೆಗೆ ಹೋಗಿ ಬಂದವರು ಇನಿ ಅರಿ ಬತ್ತುದುಂಡು ,ಇನೀ ಚಿಮ್ಮಿಣಿ ದ ಎಣ್ಣೆ ಬತ್ತುದುಂಡಿಗೆ ಇತ್ಯಾದಿ ಸುದ್ದಿ ತರುವರು.ನಾವು ಶಾಲೆಯಿಂದ ಮರಳುವಾಗ 'ಬಾಲೆ, ಅರಿ ಬಜಿಲು ಬತ್ತುದುಂಡಾ' ಎಂದು ವಿಚಾರಿಸುವರು . ಹೀಗೆ ತಿಳಿದುಕೊಂಡು ಅಂಗಡಿಗೆ ಹೋಗುವುದು .ಕೆಲವೊಮ್ಮೆ ನಾವು ಹೋಗುವಾಗ ಖಾಲಿ . ನೆನೆಸಿದರೆ ಆಶ್ಚರ್ಯ ಆಗುತ್ತದೆ . ಮೊನ್ನೆ ಮೊನ್ನೆಯ ವರೆಗೆ  ನಾವು ರೇಷನ್ ಅಕ್ಕಿ ,ಸಕ್ಕರೆ ,ಗೋಧಿ ,ಎಣ್ಣೆ ಇತ್ಯಾದಿ ಗಳ  ಮೇಲೆ ಎಷ್ಟು ಅವಲಂಬಿಸಿ ಇದ್ದೆವು .ನಾನು ಸರ್ವೀಸ್ ನಲ್ಲಿ ಇದ್ದಾಗ  ವರ್ಗವಾದ ಸಮಯ ರೇಷನ್ ಕಾರ್ಡ್ ಸರೆಂಡರ್ ಮಾಡುವುದು ,ಹೊಸ ಊರಿನಲ್ಲಿ ಅದನ್ನು ಪುನಃ ಪಡೆದು ರೇಷನ್ ಅಂಗಡಿ ಹುಡುಕುವುದು ಮುಖ್ಯ ಕೆಲಸ ಆಗಿತ್ತು ,

 ಕೆಲವೊಮ್ಮೆ ಅಕ್ಕಿ ಕಡಿಮೆ ಬಂದಾಗ ಜೋಳ ಕೊಡುತ್ತಿದ್ದು ಅದನ್ನು ಹೇಗೆ ತಿನ್ನುವುದು ಎಂದು ತಿಳಿಯದೆ ಜೋಳದ ಗಂಜಿ ,ಅಡ್ಯೆ ಇತ್ಯಾದಿ  ಪ್ರಯೋಗ ಮಾಡಿ ಮುಖಃ ಸಿಂಡರಿಸಿ ಕೊಂಡು ತಿನ್ನುತ್ತಿದ್ದೆವು . ರೇಷನ್ ಅಂಗಡಿಯಲ್ಲಿ  ಅಪರೂಪಕ್ಕೆ ಕೋರಾ ಬಟ್ಟೆ ಸಿಗುತ್ತಿದ್ದು ಅದನ್ನೂ ಮುಗಿ ಬಿದ್ದು ಖರೀದಿಸುತ್ತಿದ್ದರು . 

ಧಾನ್ಯಗಳಲ್ಲಿ ಕಲ್ಲು ಮಿಶ್ರಣ ಮಾಡುತ್ತಿದ್ದರೋ ಕಲ್ಲಿನ ಹರಳುಗಳ ಜತೆ ಅಕ್ಕಿ ಸೇರಿಸುತ್ತಿದ್ದರೋ ಎಂದು ಗೊಂದಲ ಆಗುವಂತೆ ಕಲ ಬೆರಕೆ ಸಾಮಾನ್ಯ ಆಗಿತ್ತು .ಎಷ್ಟು ಹೆಕ್ಕಿದರೂ ಉಳಿಯುತ್ತಿತ್ತು .ನಾವು ಕೇಜಿ ಬಟ್ಟಲಿನಲ್ಲಿ ಗಂಜಿ ಹಾಕಿ ಕೈಯಲ್ಲಿ ಜಾಲಾಡುವಾಗ ಕರ ಕರ ಶಬ್ದ ವಾದರೆ ಕಲ್ಲು ಹೆಕ್ಕಿ ಇಡುವುದು .

ಇದನ್ನೆಲ್ಲ ನೆನೆಸುವಾಗ ಆಗ ಎಷ್ಟು ಬಡತನ ಇತ್ತು ಎಂದು ನೀವು ಆಲೋಚಿಸುತ್ತಿರ ಬಹುದು .ಹೌದು ,ಆದರೆ ಆಗಿನ  ಬಡತನದಲ್ಲಿಯೂ ಒಂದು ಸುಖ ಶಾಂತಿ ,ಸುರಕ್ಷತೆ ಅಡಗಿತ್ತು .ಈಗಿನ ಸಂಪತ್ತಿನ ಒಳಗೂ ಹೊರಗೂ ಅಶಾಂತಿ ಅತೃಪ್ತಿ ಅಸುರಕ್ಷಿತತೆ ಹಾಸು ಹೊಕ್ಕಾಗಿ ಇರುವಂತೆ .

ಮಂಗಳವಾರ, ಜುಲೈ 12, 2022

ಡಾ ಸುಬ್ರಹ್ಮಣ್ಯ ಭಟ್

 


ಕನ್ಯಾನ  ,ಕರೋಪಾಡಿ ಮತ್ತು ಸನಿಹದ  ಕೇರಳಕ್ಕೆ ಸೇರಿದ ಬಾಯಾರು ಆನೇಕಲ್ ವರೆಗಿನ ವಿಸ್ತಾರವಾದ ಪ್ರದೇಶದ  ಜನ ಔಷದೋಪಚಾರ ಕ್ಕಾಗಿ  ಕನ್ಯಾನವನ್ನು ಅವಲಂಬಿಸಿದ್ದರು .ಕನ್ಯಾನದಲ್ಲಿ ಇದ್ದವರು ಒಬ್ಬರೇ ಡಾಕ್ಟರ್ ಡಾ ಮಹಾದೇವ ಶಾಸ್ತ್ರಿಗಳು . ಆಮೇಲೆ ಕೋಡ್ಲ ವೆಂಕಟ್ರಮಣ ಭಟ್ ಎಂಬ ಆಯುರ್ವೇದ ವೈದ್ಯರು ಬಂದರು . ಎಂ ಬಿ ಬಿ ಎಸ್ ಪದವಿ ಪಡೆದು ಇಲ್ಲಿ ಸೇವೆ ಸಲ್ಲಿಸಲು ಬಂದ ಮೊದಲ ವೈದ್ಯ ಡಾ ಸುಬ್ರಹ್ಮಣ್ಯ ಭಟ್ (1979).ಅವರು ,ಮೂಲತಃ ಬಂಟ್ವಾಳ ಸಮೀಪ ಪ್ರಸಿದ್ದ ತೀರ್ಥ ಕ್ಷೇತ್ರ  ಕಾರಿಂಜದವರು .ಪ್ರತಿಭಾವಂತರಾದ ಇವರು ಬಳ್ಳಾರಿ ಸರಕಾರಿ ವೈದ್ಯಕೀಯ ಕಾಲೇಜ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು . ಕನ್ಯಾನ ಕೆಳಗಿನ ಪೇಟೆ ವಿಟ್ಲ ರಸ್ತೆಯಲ್ಲಿ ಇವರ ಕ್ಲಿನಿಕ್ ಇತ್ತು ,ಮುಂದೆ ಅದನ್ನು ಮಂಜೇಶ್ವರ ರೋಡ್ ಗೆ ಸ್ಥಳಾಂತರಿಸಿದರು . ಪೇಟೆಯ ದೊಡ್ಡ ಆಸ್ಪತ್ರೆಗೆ ಹೋಗ ಬೇಕಿದ್ದ ಅನೇಕ ರೋಗಿಗಳನ್ನು ತಾವೇ ಚಿಕಿತ್ಸೆ ಮಾಡಿ ,ಹಳ್ಳಿಯ ಜನರ ಕಷ್ಟ ಹಗುರವಾಗುವಂತೆ ಮಾಡಿದರು . ಆಗಿನ ಹಳ್ಳಿ ಪ್ರಾಕ್ಟೀಸ್ ನಲ್ಲಿ ಇವರು ರೋಗಿಯ ಭೇಟಿಗಾಗಿ ಸವೆದ ಕಟ್ಟ ಪ್ಪುಣಿ ಗಳೆಷ್ಟೋ ?ಹಾರಿದ ತಡಮ್ಮೆಗಳೆಷ್ಟೋ ?ನಡೆದ ಒರುಂಕು ಗಳೆಷ್ಟೋ ? ಜಾತಿ ,ಆರ್ಥಿಕ ಸ್ಥಿತಿ ನೋಡದೆ ಸಲ್ಲಿಸಿದ ಸೇವೆ .ಮದುವೆಯಾದ ಮೇಲೆ ಪುತ್ತೂರಿನಲ್ಲಿ ಮನೆ ಮಾಡಿ  ಬಸ್ ,ಮೋಟಾರ್ ಸೈಕಲ್ ನಲ್ಲಿ  ಕನ್ಯಾನಕ್ಕೆ .ಕೆಲ ವರ್ಷಗಳ ಹಿಂದೆ ಸೂಕ್ಷ್ಮಣು ಶಾಸ್ತ್ರದಲ್ಲಿ ಎಂ ಡಿ ಮಾಡಿ  ವೈದ್ಯಕೀಯ ಕಾಲೇಜ್ ನಲ್ಲಿ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸುತ್ತಿರುವರು .ಆದರೂ ಕನ್ಯಾನದ ಮೇಲಿನ ಪ್ರೀತಿಯಿಂದ ವಾರಕ್ಕೊಮ್ಮೆ ಭಾನುವಾರ ಅಲ್ಲಿಗೆ ತಪ್ಪದೇ ಭೇಟಿ ನೀಡಿ ವೈದ್ಯಕೀಯ ಸಲಹೆ ನೀಡುತ್ತಲಿರುವರು .

ಡಾ ಸುಬ್ರಹ್ಮಣ್ಯ ಭಟ್ ಅವರ ಪತ್ನಿ ಪ್ರಸಿದ್ದ ಸ್ತ್ರೀ ರೋಗ ಮತ್ತು ಪ್ರಸವ ಶಾಸ್ತ್ರ ತಜ್ನೆ ಡಾ ಪ್ರತಿಭಾ ಭಟ್ . ಹೆಸರಿಗೆ ತಕ್ಕಂತೆ ಪ್ರತಿಭಾ ವಂತರು . ನನ್ನ ಹಾಗೆ ಅವರೂ ಕೆ ಎಂ ಸಿ ಹುಬ್ಬಳ್ಳಿ ವಿದ್ಯಾರ್ಥಿನಿ .ವೈದ್ಯಕೀಯ ಕ್ಷೇತ್ರದ ದಂತ ಕತೆ ಡಾ ಎಸ್ ಎನ್ ಕೌಲ್ ಗುಡ್ ಅವರ ಶಿಷ್ಯೆ .(ನಾನೂ ಕೌಲ್ ಗುಡ್ ಶಿಷ್ಯ ) . ಪುತ್ತೂರಿನ  ಗಿರಿಜಾ ಕ್ಲಿನಿಕ್ ನಲ್ಲಿ ಆರಂಭಿಸಿ ಪ್ರಸ್ತುತ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ  ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ . ಯಥಾ ಗುರು ತಥಾ ಶಿಷ್ಯ ಎಂಬಂತೆ ಕೌಲ್ಗುಡ್ ಅವರ  ಸರಳತೆ ಮತ್ತು  ವೃತ್ತಿ ಪ್ರಾವೀಣ್ಯತೆ ಇವರನ್ನು  ಜನಪ್ರಿಯರನ್ನಾಗಿ ಮಾಡಿದೆ 

ಸೋಮವಾರ, ಜುಲೈ 11, 2022

ಕನ್ಯಾನದ ಕೆಲವು ನೆನಪುಗಳು

ವಿಟ್ಲ ಕಡೆಯಿಂದ  ಕನ್ಯಾನ ಕ್ಕೆ ಬರುತ್ತಿದ್ದಂತೆ ಬಲಕ್ಕೆ ಪಂಜಾಜೆ ,ಎಡಕ್ಕೆ ಅರ್ಪಿಣಿ . ಪೇಟೆ ಎಂದು ಸಾರಲು ಕೆಲವು ಕಟ್ಟಡಗಳು . ಬಲ ಬದಿಗೆ ಅಧಿಕ . ಕೇಕಣಾಜೆ ಶೆಟ್ಟರ ಗದ್ದೆ ,ತೋಟ ,ಡ್ರೈವರ್ ಗೋಪಾಲ ನ ಮನೆ , ಬಾಡಿಗೆ ಸಾಲು  ಮನೆಗಳು .ಇವುಗಳಲ್ಲಿ ಒಂದರಲ್ಲಿ ನಮ್ಮ ಜನಾರ್ಧನ ಶೆಟ್ಟಿ ಮೇಷ್ಟ್ರ ಕುಟುಂಬ ವಾಸ . ಮಾಸ್ಟ್ರು ಸಜ್ಜನಿಕೆಯ ಮೂರ್ತಿವೆತ್ತ ವರು . ಸುಶ್ರ್ಯಾವ್ಯ ವಾಗಿ ಹಾಡುತ್ತಿದ್ದರು .ಅವರ ಮನೆಯಲ್ಲಿ ನಿತ್ಯ ಭಜನೆ ನಡೆಯುತ್ತಿತ್ತು . 

ನಂತರದ ಮನೆಯಲ್ಲಿ  ಮಿಡ್ ವೈಫ್ ಅವರ ಕುಟುಂಬ . ಶಾಲೆ ಮಕ್ಕಳಿಗೆ ಚುಚ್ಚು ಮದ್ದು ಕೊಡಲು ಬರುವರು .ಹಳ್ಳಿಯಲ್ಲಿ ಯಾರಿಗಾದರೂ ಹೆರಿಗೆ ನೋವು ಬಂದರೆ ಅಲ್ಲಿಗೆ ಧಾವಿಸುವರು . ನನಗೆ  ಜ್ಞಾಪಕ ಇರುವಂತೆ ಶಾಂಭವಿ ಅಕ್ಕ ಎಂಬವರು ಇದ್ದರು . ನಮ್ಮ ಕೂಡು ಕುಟುಂಬದಲ್ಲಿ ವರ್ಷಕ್ಕೆ ಸರಾಸರಿ ಒಂದು ಜನನ ಇರುತ್ತಿದ್ದು ಅವರು ನಮಗೆ ಆಪತ್ಭಾಂಧವರು . ಎಷ್ಟೋ ಬಾರಿ ತಾವು ಹೋದ ಮನೆಗಳಲ್ಲೇ ತಂಗಿ ಹೆರಿಗೆ ಆದ ಮೇಲೆಯೇ ವಾಪಾಸು ಆಗುವರು . 

ಅದು ಬಿಟ್ಟರೆ  ಡಾ ಬಿ ಕೆ ಎಸ್ ಭಟ್ ಅವರ ಶಾಪ್ . ಇವರು ಕೇರಳ ಗಡಿಗೆ ತಾಗಿ ಇರುವ ಬೇತದವರು . ಕಾಂಗ್ರೆಸ್ ಪಕ್ಷದ ನಾಯಕರು . ತಾಲೂಕು ,ಜಿಲ್ಲಾ ಪಂಚಾಯತ್ ಸದಸ್ಯರೂ ಆಗಿದ್ದರು . 

ಪಶ್ಚಿಮಕ್ಕೆ ತಾಗಿ ಇರುವ ಕಟ್ಟಡದಲ್ಲಿ ಕನ್ಯಾನದ ಮೊದಲ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಆರಂಭವಾಯಿತು .ಊರಿಗೆಲ್ಲಾ ಇದು ದೊಡ್ಡ ಸಂಭವ . ಅಲ್ಲಿ ಉದ್ಯೋಗಿಯಾಗಿ ಬಂದ ಉಡುಪಿಯ ಮಧ್ಯಸ್ಥ ಎಂಬ ಸ್ಪುರ ದ್ರೂಪಿ ತರುಣ ಒಬ್ಬರು ಇದ್ದರು .ನಗು ಮುಖ .ಹಳ್ಳಿಯವರಿಗೆಲ್ಲಾ  ಸದಾ ಸಹಾಯ ಹಸ್ತ ;ಚಲಂ ತುಂಬುಬುವುದು ,ಚೆಕ್ ಬರೆಯುವುದು ಎಲ್ಲಾ ಅವರೇ ಮಾಡುವುದು .ಆಗಿನ್ನೂ ಬ್ಯಾಂಕ್ ರಾಷ್ಟ್ರೀಕರಣ ಆಗಿರಲಿಲ್ಲ . 

ಬ್ಯಾಂಕಿನ ಪಕ್ಕದಲ್ಲಿ ಭಾರತ ಸೇವಾಶ್ರಮ ದವರ ಒಂದು ಕೋಣೆ ಇದ್ದದ್ದು ನೆನಪು . ಅಲ್ಲಿ ಅಗರಬತ್ತಿ ತಯಾರು ಮಾಡುತ್ತಿದ್ದರು .ಮುಂದೆ ಇದೇ ಜಾಗದಲ್ಲಿ ಡಾ ಸುಬ್ರಹ್ಮಣ್ಯ ಭಟ್  (ಕನ್ಯಾನದ ಮೊದಲ ಎಂ ಬಿ ಬಿ ಎಸ ಡಾಕ್ಟರ್ )ಹಲವು ವರ್ಷ ತಮ್ಮ ಕ್ಲಿನಿಕ್ ಮೂಲಕ ಜನ ಸೇವೆ ಮಾಡಿದರು . 

ಇನ್ನು ಅರ್ಪಿಣಿ ಬದಿಗೆ ಬಂದರೆ ಅಲ್ಲಿ ಒಂದು ಸಾಯ್ಬರ ಅಂಗಡಿ . ಸುತ್ತ ಮುತ್ತ ಬೇಸಾಯದ ಗದ್ದೆಗಳು . ಇಲ್ಲಿಯೇ ಭಾರತ ಸೇವಾಶ್ರಮ ಆರಂಭವಾಗಿ ಇಂದು ಒಳ್ಳೆಯ ಹೆಸರು ಪಡೆದಿದೆ . ಸೇವಾಶ್ರಮವನ್ನು ೧೯೬೪ ರಲ್ಲಿ  ಮೂಲತಃ ಪೂರ್ವ ಬಂಗಾಳದವರಾದ ,ಗಣಿ ಇಲಾಖೆಯಲ್ಲಿ ಉದ್ಯೋಗಿಯಾಗಿ ಇದ್ದ  ದೇವೇಂದ್ರನಾಥ ಭಟ್ಟಾಚಾರ್ಯ ಎಂಬ ಮಹಾತ್ಮರು ಸ್ಥಾಪಿಸಿದರು .ಅವರಿಗೆ ಉದ್ದನೆಯ ಗಡ್ಡ ಇದ್ದು ರವೀಂದ್ರನಾಥ ಟಾಗೋರ್ ಅವರಂತೆ ಕಾಣುತ್ತಿದ್ದರು . ಊರವರು ಅವರನ್ನು ಭಟ್ಟಾಚಾರಿ ಎಂದು ಹೃಸ್ವ ನಾಮದಿಂದ ಕರೆಯುತ್ತಿದ್ದರು . ಅವರು ಊರ ಪರವೂರ ದಾನಿಗಳನ್ನು ಬೇಡಿ ಈ ಸಂಸ್ಥೆ ಆರಂಭಿಸಿದರು . ಮೊದಲಿಗೆ ಅದು ಅನಾಥಾಶ್ರಮ ಆಗಿತ್ತು . ನನ್ನ ತರಗತಿಯಲ್ಲಿ ಕೃಷ್ಣ ಪುರುಷ ಎಂಬ ಹುಡುಗ ಅಲ್ಲಿಂದ ಬರುತ್ತಿದ್ದು ,ನಮ್ಮ ಕಬಡಿ ಟೀಮ್ ನ ನಾಯಕ ಆಗಿದ್ದನು . ಅದುವರೆಗೆ ಬೀಡಿ ಕಟ್ಟುವ ಗೃಹ ಉದ್ಯಮ ಮಾತ್ರ ಕಂಡಿದ್ದ ನಮಗೆ ಆಗರ ಬತ್ತಿ ಸುತ್ತುವ ಹೊಸ ವೃತ್ತಿ ತೋರಿದವರು ಶ್ರೀ ಭಟ್ಟಾಚಾರ್ಯರು . ಅವರು ವಾರಕ್ಕೊಂಮ್ಮೆ ಮುಂಜಾನೆ ರಾಂಪಣ್ಣ ನ ಬಸ್ಸಿನಲ್ಲಿ ಮಂಗಳೂರಿಗೆ ಅದನ್ನು ಸಾಗಿಸಿ ಅಲ್ಲಿಂದ ಆಶ್ರಮಕ್ಕೆ ಬೇಕಾದ ವಸ್ತುಗಳನ್ನು ತರುತ್ತಿದ್ದ್ದರು . ಆಶ್ರಮದಲ್ಲಿಯೇ ಬೆಳೆದ ಶ್ರೀ ಈಶ್ವರ ಭಟ್ ಈಗ ಅದನ್ನು ನಡೆಸುತ್ತಿದ್ದಾರೆ , ಬೈರಿಕಟ್ಟೆ ಬಳಿ ಕಳಂಜಿ ಮೂಲೆ ತಪ್ಪಲಲ್ಲಿ ಇನ್ನೊಂದು ದೊಡ್ಡ ಕ್ಯಾಂಪಸ್ ನಿರ್ಮಿಸಿದ್ದಾರೆ . ಈಗ ಹಿರಿಯರ ನ್ನು ನೋಡಿ ಕೊಳ್ಳುವ ವ್ಯವಸ್ಥೆಯೂ ಇದೆ 

 

ಭಾನುವಾರ, ಜುಲೈ 10, 2022

          

                                              

ದಶಕಗಳ ಹಿಂದೆ ನಾನು ಪುತ್ತೂರಿಗೆ ಬಂದು ನೆಲಸಿದ ಕೆಲವು ದಿನಗಳಲ್ಲಿ ಅನಿರೀಕ್ಷಿತವಾಗಿ ಒಂದು ಪೋಸ್ಟ್ ಕಾರ್ಡ್ ;ಜತೆಗೆ ಒಂದು ' ಕಗ್ಗೋಕ್ತಿ ಸಂಪದ 'ಎಂಬ ಒಂದು ಪುಸ್ತಕ ಅಂಚೆಯಲ್ಲಿ ಬಂದಿತು . ಅದು ಹಿರಿಯರಾದ ಕುಲ್ಯಾಡಿ ಮಾಧವ ಪೈ ಅವರದು .ನಾನು ಅವರ ಹೆಸರು ಕೇಳಿದ್ದೆ .ಕಂಡು ಬಲ್ಲವನಲ್ಲ . 

ಪ್ರಸಿದ್ಧ ಜವುಳಿ ವ್ಯಾಪಾರಿ ಕುಲ್ಯಾಡಿಕಾರ್ಸ್ ನಡೆಸುತ್ತಿದ್ದ ಶ್ರೀ ಮಾಧವ ಪೈ ಸಾಹಿತ್ಯ ಪ್ರಿಯರೂ ,ಬರಹಗಾರರೂ ಆಗಿದ್ದು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಆಗಿದ್ದರು ಎಂಬುದು ಆಮೇಲೆ ಗೊತ್ತಾಯಿತು . ಕಾಂತಾವರ ವರ್ಧಮಾನ ಪೀಠದ ಅಧ್ಯಕ್ಷರೂ ಆಗಿದ್ದರು .  ವಾಣಿಜ್ಯ ಚಟುವಟಿಕೆ ನಡುವೆ ಬಿಡುವು ಮಾಡಿಕೊಂಡು ಕನ್ನಡದ ಕಾಯಕ ನಡೆಸುತ್ತಿದ್ದ ಹಿರಿಯ ಮುತ್ಸದ್ದಿ . 

ಅವರಿಗೆ ಕೃತಜ್ಞತಾ ಪೂರ್ವಕ ಪತ್ರ ಬರೆದೆ .ಅವರನ್ನು ಮುಖತಾ ಕಾಣುವ ಅಸೆ ನೆರವೇರಲಿಲ್ಲ .ಇದಾಗಿ ಆರು ತಿಂಗಳಲ್ಲಿ ಅವರು ತೀರಿ ಕೊಂಡ ವಾರ್ತೆ ಪತ್ರಿಕೆಗಳಲ್ಲಿ ಓದಿದೆ . 

ಇಂದಿಗೂ  ವೈಯುಕ್ತಿಕ ಪರಿಚಯವಿಲ್ಲದ ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಹೆಕ್ಕಿ ತಮ್ಮ ಕೃತಿಯನ್ನು ಹೇಗೆ ಕಳುಹಿಸಿದರು ?ಎಂದು ನನಗೆ ತಿಳಿದಿಲ್ಲ . ಆದರೆ ಆ ಮಹಾ ಚೇತನಕ್ಕೆ ನೂರು ನೂರು ಶರಣು