ಬೆಂಬಲಿಗರು

ಭಾನುವಾರ, ಸೆಪ್ಟೆಂಬರ್ 12, 2021

ಶ್ರೀ ಪುರಂಧರ ಭಟ್

                                              ಶ್ರೀ ಪುರಂಧರ ಭಟ್ 

                                      

                                  ನಾನು ಹತ್ತು ವರ್ಷಗಳ ಹಿಂದೆ ಪುತ್ತೂರಿಗೆ ಮರಳಿ ಮಣ್ಣಿಗೆ ಎಂಬಂತೆ ಪುನಃ ಪಾದಾರ್ಪಣೆ  ಮಾಡಿದಾಗ ಇಲ್ಲಿಯ ಸಾಂಸ್ಕೃತಿಕ ರಂಗದ ಬೆನ್ನೆಲುಬು ಮತ್ತು ವೇಗವರ್ಧಕ ಆಗಿದ್ದ ಶ್ರೀ ಬೋಳಂತಕೋಡಿ ಈಶ್ವರ ಭಟ್ ತೀರಿ ಕೊಂಡಿದ್ದರು . ನನಗೆ ಅದೊಂದು ದೊಡ್ಡ ನಿರಾಶೆ . ಆದರೆ ಅದನ್ನು ನಿವಾರಿಸಿದವರು ಶ್ರೀ ಪುರಂಧರ ಭಟ್ ಅವರು . ಬೋಳಂತ ಕೋಡಿ ,ಪುರಂಧರ ಭಟ್ ಮತ್ತು ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಮೂವರು ಹಿರಿಯ ವಕೀಲರು ತಮ್ಮ ವೃತ್ತಿಯ ಹೊರತಾಗಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಡಿದ್ದವರು . 

             ಪುರಂಧರ ಭಟ್ ವರ್ಷಕ್ಕೆ ಒಮ್ಮೆ ತಮ್ಮ ಅನುರಾಗ ವಠಾರದಲ್ಲಿ ಸಾಹಿತ್ಯ ,ಸಂಗೀತ ಮತ್ತು ಸಾಂಸ್ಕೃತಿಕ ಸಪ್ತಾಹ ನಡೆಸುತ್ತಿದ್ದು ,ನಾಡಿದ ವಿವಿದೆಡೆಯಿಂದ ಉದ್ದಾಮ ಸಾಹಿತಿಗಳು ,ಸ್ಥಳೀಯ ಕಲಾವಿದರು ಭಾಗವಹಿಸುತ್ತಿದ್ದರು .  ಊಟ ತಿಂಡಿ ಸೇರಿ ಹೆಚ್ಚಿನ ವೆಚ್ಚವನ್ನು ತಾವೇ ಭರಿಸುತ್ತಿದ್ದರೂ ಎದುರು ಕಾಣಿಸಿ ಕೊಳ್ಳದೆ ಮೂಲೆಯಲ್ಲಿ ಕುಳಿತು ಸಂತೋಷ ಪಡುವರು . 

ಅನುರಾಗ ವಠಾರದ ಅಟ್ಟ ಪುತ್ತೂರಿನಲ್ಲಿ ಜನಪ್ರಿಯ ತಾಣ . ಶ್ರೀ ಲಕ್ಷ್ಮೀಶ ತೋಲ್ಪಾಡಿ ಯವರ ಮಂಕುತಿಮ್ಮನ ಕಗ್ಗ ,ಮಹಾಭಾತದ ಶಾಂತಿ ಪರ್ವ ಇತ್ಯಾದಿಗಳ ಉಪನ್ಯಾಸಕ್ಕೆ ನಾನೂ ಹಾಜರಾಗಿದ್ದೇನೆ.ಇನ್ನು ಪುತ್ತೂರಿಗೆ ಪರವೂರಿನಿಂದ ಲೇಖಕರು ಬಂದಾಗ ಇಲ್ಲಿ ಕರೆಸಿ ಭಾಷಣ ಮಾಡಿಸುವರು .ವಸುದೇಂದ್ರ ,ನಾಗ ಐತಾಳರ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ .  

ಪುತ್ತೂರಿನ ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘನೆಗಳಿಗೆ ಅನುರಾಗ ವಠಾರದ ಅಟ್ಟವೇ ವೇದಿಕೆ .ಪುತ್ತೂರು ಕರ್ನಾಟಕ ಸಂಘ ,ಕುಶಲ ಹಾಸ್ಯ ಸಂಘ ,ಹವ್ಯಾಸಿ ಪತ್ರ ಕರ್ತರ ಸಂಘ ,ಗ್ರಾಹಕರ ವೇದಿಕೆ ,ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ,ರಿಕ್ಷಾ ಚಾಲಕ ಮಾಲಕರ ಸಂಘ ಇತ್ಯಾದಿಗಳಿಗೆ ಆಶ್ರಯ . 

 ತರುಣದಲ್ಲಿ ನಾಟ್ಯ ,ನಟನೆ ಎರಡರಲ್ಲಿಯೂ ಕೈಯಾಡಿಸಿದ ಇವರು ಸ್ವತಃ ಕವಿ ಮತ್ತು ಲೇಖಕ . ತುರ್ತು ಪರಿಸ್ಥಿತಿ ಸಮಯ ಜೈಲು ವಾಸ . ಈಗಲೂ ಗಾಂಧಿ ಕಟ್ಟೆ ಉಳಿಸಿ ಇತ್ಯಾದಿ ಚಳುವಳಿಗಳಲ್ಲಿ ಸಕ್ರಿಯ . ಯಾವುದನ್ನೂ ಮತ್ತು ಯಾರನ್ನೂ ಅಂಧ ಭಕ್ತಿಯಲ್ಲಿ ಹಿಂಬಾಲಿಸುವರಲ್ಲ . 

ಬಹಳ ಸರಳ ಜೀವಿಯಾದ ಇವರು ಆಸ್ಪತ್ರೆಗೆ ಬಂದಾಗ ವಿಶೇಷ ಗಮನ ನಿರೀಕ್ಷೆ ಮಾಡದೇ ಸಾಮಾನ್ಯರಂತೆ ಬರುವರು .ಅವರ ಸೇವೆ ಕಿಂಚಿತ್ ಮಾಡ ಸಿಕ್ಕಿದ್ದು ನನ್ನ ಭಾಗ್ಯ . ಅವರ ಮನೆಗೆ ಆಗಾಗ ಭೇಟಿ ನೀಡಿ ಕ್ಷೇಮ ವಿಚಾರಿಸುವೆನು . ನಾನು ಯಾವುದಾದರೂ ಪುಸ್ತಕ ಕೇಳಿದರೆ ಉತ್ಸಾಹದಿಂದ ಹುಡುಕಿ ಕೊಡುವರು . ಕೆಲವೊಮ್ಮೆ ಅದನ್ನು ಚೆನ್ನಾಗಿ ಒರಸಿ ಕಟ್ಟು ಮಾಡಿ ಯಾರ ಬಳಿಯಾದರೂ ಕಳುಹಿಸುವರು . 

 ಅವರು ಅರೋಗ್ಯ ಮತ್ತು ಶಾಂತಿಯಿಂದ ಇರಲಿ ಎಂಬುದೇ ಎಲ್ಲರ ಹಾರೈಕೆ . 


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ