ಬೆಂಬಲಿಗರು

ಬುಧವಾರ, ಮಾರ್ಚ್ 25, 2015

ಹಿರಿಯರು ಘನ ತ್ಯಾಜ್ಯ ವಸ್ತುಗಳೇ ?

ನೀನಾಸಂ  ವಾರ್ಷಿಕ  ಶಿಬಿರದಲ್ಲಿ ಖ್ಯಾತ ಚಿಂತಕರು  ಇಂದಿನ ಸಮಾಜದಲ್ಲಿ 

ಹಿರಿಯರು  ಘನ ತ್ಯಾಜ್ಯ ವಸ್ತು ಗಳಾಗಿ ಬಿಟ್ಟಿರುವರು ಎಂದು  ವಿಷಾಧ ವ್ಯಕ್ತ 

ಪಡಿಸಿದರೆಂದು ಓದಿದ ನೆನಪು .ಇಂದಿನ ಯುವಕರೇ ಮುಂದಿನ ವೃದ್ದರು 

ಆಗಿರುವುದರಿಂದ ಈ ಬಗ್ಗೆ ಗಂಭೀರ ಚಿಂತನೆ ಅವಶ್ಯ .ಅಲ್ಲದೆ  ಸುಧಾರಿತ 

ಅರೋಗ್ಯ  ಸೇವೆಯಿಂದ ಹಿರಿಯ ನಾಗರಿಕರ ಸಂಖ್ಯೆಯೂ ಏರುತ್ತಿದೆ.ಯಾಕೆ  ಹೀಗೆ 

ಆಯಿತು ?ಹಿಂದೆ ವಯಸ್ಸಿಗೆ ಗೌರವ ಇತ್ತು .ಮನೆಯಲ್ಲಿ ಯಾವ ಕಾರ್ಯ 

ನಡೆಸುವುದಿದರೂ ಹಿರಿಯರನ್ನು ಕೇಳಿ ಮುಂದುವರಿಸುವ ಕ್ರಮ ಇತ್ತು .ಹಿರಿಯರ 

ಆಶಿರ್ವಾದ ನಮ್ಮನ್ನು ಮುನ್ನಡೆಸುವುದು ಎಂಬ ನಂಬಿಕೆಯೂ ಇತ್ತು .ಮನೆ 

ವಾರ್ತೆಯಲ್ಲಿ ತಂದೆ ತಾಯಿ ಮಗ್ನರಾಗಿದ್ದಾಗ  ಮಕ್ಕಳಿಗೆ  ಅಜ್ಜ ಆಜ್ಜಿಯರ ಒತ್ತಾಸೆ 

ಆಪ್ಯಾಯಮಾನವಾಗಿತ್ತು .ಅಜ್ಜ ಅಜ್ಜಿ ಯರ  ಅನುಭವ  ಮಾತುಗಳು ,ಅವರು 

ಹೇಳುತ್ತಿದ್ದ  ಪುರಾಣ ,ಕತೆಗಳು  ಮಕ್ಕಳಿಗೆ  ಮುಖ್ಯ ರಂಜನೆ .ತುಂಬಿದ 

ಕುಟುಂಬಗಳಲ್ಲಿ  ಒಬ್ಬನಲ್ಲದಿದರೆ ಒಬ್ಬ ಹಿರಿಯರ ಯೋಗ ಕ್ಷೇಮ ನೋಡುವುದಕ್ಕೆ 

ಇರುತ್ತಿದ್ದುದಲ್ಲದೆ  ಅದರಿಂದ  ಸಂತೋಷ ಪಡುತ್ತಲಿದ್ದರು .

        ಈಗ  ಯುವ ತಾಯಿ ತಂದೆಯರಿಗೆ  ಮಕ್ಕಳ ವಿದ್ಯಾಭ್ಯಾಸ  ದೊಡ್ಡ ಹೊರೆ 

ಎನಿಸಿದೆ .ಮನೆಯಲ್ಲಿ ಅಡಿಗೆ ,ಬಟ್ಟೆ ತೊಳೆಯುವುದು ಇತ್ಯಾದಿಗಳಿಗೆ ಯಂತ್ರಗಳು   

 ಹೊರಗಡೆ  ಹೋಗಲು ವಾಹನ ,ಮೊಬೈಲ್ ಇತ್ಯಾದಿಗಳು  ಸಮಯ ಸಾಕಷ್ಟು 


ಉಳಿತಾಯ  ಆಗಿದ್ದರೂ   ಅದರ ಬಹು ಪಾಲು  ಟಿ ವಿ ಕಾರ್ಯಕ್ರಮ ಗಳು  

ಕೊಂಡರೆ , ಈಗ  ದೂರದ ಪ್ರಯಾಣ ಮತ್ತು ಪ್ರವಾಸಗಳು  ಸುಲಭ ಲಭ್ಯ 

ವಾಗಿರುವುದರಿಂದ ಅದಕ್ಕೆ  ಇಷ್ಟು ಕಾಲ ಕಳೆಯುವುದು .ಅಲ್ಲದೆ  ಬಿ ಪಿ 

ಸಕ್ಕರೆ ,ಹೃದಯ ಕಾಯಿಲೆಗಳು  ಸಣ್ಣ ಪ್ರಾಯಕ್ಕೆ ಕಾಲಿಡುವುದರಿಂದ  ಮಧ್ಯ 

ವಯಸ್ಕರ ಅರೋಗ್ಯ ವೂ ಹಿಂದಿನಂತೆ ಇಲ್ಲ .ಹಿಂದಿನಂತೆ ಸೇವಕರ ದಂಡು ಈಗ 

ಮರೆಯಾಗಿದೆ .ಮುಖ್ಯವಾಗಿ  ಮನೆಯಲ್ಲಿ  ಗಂಡ ಮತ್ತು ಹೆಂಡತಿ ಇಬ್ಬರೂ ಹೊರಗೆ 

ದುಡಿಯಲು ಹೋಗುವುದರಿಂದ  ,ಆರ್ಥಿಕವಾಗಿ ಒಬ್ಬರ ಮೇಲೆಯೇ ಅವಲಂಬನೆ 

ಇಲ್ಲದ ಕಾರಣ  ಹಿರಿಯರನ್ನು ಯಾರು ನೋಡಿ ಕೊಳ್ಳುವುದು ಎಂಬ ತರ್ಕ 

ಬರುವುದು .ಒಬ್ಬರ ಮುಲಾಜಿಗಾಗಿಯಾದರೂ  ತ್ಯಾಗ ಮಾಡುವ ಮನೋಭಾವ 

ಕಡಿಮೆ ಆಗುತ್ತಿದೆ .

  ವೈದ್ಯನಾಗಿ   ನಾಲ್ಕು ದಶಕಗಳಿಂದ  ಕೆಲಸ ಮಾಡುತ್ತಿರುವ ನನಗೆ ಈ 

ಬದಲಾವಣೆ ಗಳು  ಹೊಡೆದು ಕಾಣುತ್ತಿವೆ .ವೃದ್ಧರ ಆರೋಗ್ಯದ ಬಗ್ಗೆ ಕುಟುಂಬ 

ಕಾಳಜಿ ಕಡಿಮೆ ಆಗುತ್ತಿದೆ .ಅದೇ ವೇಳೆ ಮಕ್ಕಳ ಆರೋಗ್ಯದ ಬಗ್ಗೆ ಅತಿರೇಕ 

ಎನಿಸುವ   ಕಾತರ ,ಚಿಂತೆ  ತಂದೆ ತಾಯಂದಿರಲ್ಲಿ ಕಂಡು ಬರುತ್ತಿದೆ . ಮಗುವಿಗೆ 

ಸಣ್ಣ  ಶೀತ 

ಜ್ವರ ಬಂದರೂ ಅಸ್ಪತ್ರೆಗೆ ದೌಡಾಯಿಸುತ್ತಾರೆ. ಹಿಂದೆ ತುರ್ತು ಚಿಕಿತ್ಸಾ ವಿಭಾಗದಲ್ಲಿ

ರೋಗಿಯನ್ನು ನೋಡಿ ಹೊರ ಬರುವಾಗ  ಕುಟುಂಬದವರು ನಮಗೆ ಮುತ್ತಿಗೆ  

ಹಾಕಿ ರೋಗಿಯ ಪರಿಸ್ಥಿತಿ  ಕಾತರದಿಂದ ಕೇಳುತ್ತಿದ್ದರು .ಈಗ ಹಿರಿಯರು  

ಅಯ್ ಸಿ ಯು ನಲ್ಲಿ ಇದ್ದರೆ ಅವರ  ಸ್ಥಿತಿ  ವಿವರಿಸುವ ಸಲುವಾಗಿ ನಾವು ಮಕ್ಕಳನ್ನು 

ಹುಡುಕಿ ಕೊಂಡು ಹೋಗ ಬೇಕಿದೆ .ಒಂದು ವೇಳೆ ತೀರಾ ಗಂಬೀರ ಸ್ಥಿತಿಯಲ್ಲಿ 

ರೋಗಿ ಇದ್ದರೆ  ಮಕ್ಕಳು ತಮ್ಮ ಮಗನ ಮದುವೆ ಇತ್ಯಾದಿ ಮೊದಲೇ  ನಿಶ್ಚಯಿಸಿದ್ದ 

ಕಾರ್ಯಕ್ರಮಗಳು ಮುಂದೆ ಹೋಗುವ ಚಿಂತೆ ತಂದೆ ತಾಯಿ ಅಗಲುವಿಕೆಗಿಂತ 

ಹೆಚ್ಚು  ಕಾಡುತ್ತವೆ .ಹಿಂದೆ ನಾವು  ರೋಗಿ ಮೃತ ಪಟ್ಟರೆ  ನಮ್ಮ ಎಲ್ಲ ಪ್ರಯತ್ನಗಳ 

ಹೊರತಾಗಿಯೂ  ಉಳಿಸಲಾಗಲಿಲ್ಲ ಎಂದು ದೈನ್ಯತೆಯಿಂದ ಹೇಳುತ್ತಿದ್ದೆವು .ಈಗ 

ರೋಗಿ ಬದುಕಿ ಉಳಿದರೆ ಹಾಗೆ ಹೇಳುವ ಸ್ಥಿತಿ  ನಿರ್ಮಾಣ ಆಗಿದೆ .ಹಿರಿಯರು 

ಅಡ್ಮಿಟ್ ಆದರೆ ಹಣ್ಣು ಹಂಪಲು ಕೊಂಡು ಬರುವವರು ನಾಪತ್ತೆ .ಮತ್ತೆ ಅವರು 

ಗುಣ ಮುಖರಾದುದಕ್ಕೆ ನಾವು  ಸಿಹಿ ನಿರೀಕ್ಷಿಸುವುದಂತು  ಅಸಾಧ್ಯ .ಮಕ್ಕಳು 

ಹುಟ್ಟಿದಾಗ ಮಾತ್ರ ಸಿಹಿ ವಿತರಣೆ .

     ಒಬ್ಬಾಕೆ ಗೃಹಿಣಿ ,ಧರ್ಮ ಬೀರು.ರಾಮಾಯಣ ಶ್ರವಣಕ್ಕೆ ಯಾವಾಗಲೂ 

ಹೋಗುತಿದ್ದವಳು .ಮನೆಯಲ್ಲಿ ಅತ್ತೆಯನ್ನು ಸರಿ ನೋಡಿ ಕೊಳ್ಳುತ್ತಿರಲಿಲ್ಲ .

ಆಕೆಯನ್ನು ಕುತೂಹಲದಿಂದ ಕೇಳಿದೆ ರಾಮ ಭಕ್ತೆಯಾದ ನೀವು ಹೀಗೆ ಮಾಡ 

ಬಹುದೇ ?ಅದಕ್ಕೆ ಅವಳೆಂದಳು "ಡಾಕ್ಟ್ರೆ ನನ್ನ ಅತ್ತೆ ಕೌಸಲ್ಯ ಅಲ್ಲ ಕೈಕೇಯಿ .

ಮಂಥರೆ ," ಅದು ಬಿಡಿ ನಿಮಗೆ ಭರತನ ಹೆಂಡತಿ ಹೆಸರು ಗೊತ್ತೇ ? ನಾನೆಂದೆ 

"ತಿಳಿಯದು ". " ನೋಡಿ ರಾಮ ಸೀತೆಯೊಡನೆ ಕಾಡಿಗೆ ಹೋದ ಹದಿನಾಲ್ಕು ವರ್ಷ 

ಮೂರು ಅತ್ತೆಯರನ್ನು ನೋಡಿ  ಕೊಂಡಾಕೆ ಮಾಂಡವಿ ,ಭರತನ ಪತ್ನಿ .ಅವಳ 

ಹೆಸರೇ ಬಹಳ ಮಂದಿಗೆ ಗೊತ್ತಿಲ್ಲ !"

      ಇನ್ನು ಈ ಸ್ಥಿತಿಗೆ   ಹಿರಿಯರೂ ಸ್ವಲ್ಪ ಮಟ್ಟಿಗೆ ಕಾರಣ .ತಾವು ತಮ್ಮ 

ಹಿರಿಯರನ್ನು ನಡೆಸಿ ಕೊಂಡ ರೀತಿ ತಮ್ಮ ಮಕ್ಕಳು ತಮ್ಮನ್ನು ನೋಡಿ ಕೊಳ್ಳ 

ಬೇಕು ಎಂಬ ನಿರೀಕ್ಷೆ ದುಃಖಕ್ಕೆ ಕಾರಣ .

ಖಲೀಲ್ ಗಿಬ್ರಾನ್ ಹೇಳಿದಂತೆ " ನಿಮ್ಮ ಮಕ್ಕಳು ನಿಮ್ಮವಲ್ಲ  ,ಅವು  ಜೀವ 

ಸಲೆಯ ಮಗ ಮಗಳಂದಿರು. ಅವು ನಿಮ್ಮ ಮೂಲಕ ಬಂದವು ,ನಿಮ್ಮಿಂದ ಅಲ್ಲ.

ನಿಮ್ಮೊಡನೆ ಇದ್ದರೂ ನಿಮ್ಮದಲ್ಲ "ಎಂಬ  ತತ್ವ ಬೇಗ ಗ್ರಹಿದಸ್ಟೂ ಕ್ಷೇಮ .

 ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು .ಸಂಸಾರ ವೂ ಹಾಗೆ 

ಎಂದು  ಕೊಂಡಿದ್ದೆವು. ಆದರೆ ಈಗ ಚಿಗುರು ಮಾತ್ರ ಬೇಕು ,ಬೇರು ಯಾಕೆ  

ಎಂಬಂತಾಗಿದೆ .ಶಂಕರಾಚಾರ್ಯರು  ಭಜ ಗೋವಿಂದಂ ನಲ್ಲಿ  ಹೇಳಿರುವ 

ವಾಕ್ಯಗಳು  ನಿಜವಾಗುತ್ತಿವೆ.

  ಯಾವದ್ವಿತ್ತೋಪಾರ್ಜನಸಕ್ತಃ


ಸ್ತಾವನ್ನಿಜಪರಿವಾರೋ ರಕ್ತಃ|


ಪಶ್ಚಾಜ್ಜೀವತಿ ಜರ್ಜರದೇಹೇ


ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||5||

ನಿನಗೆ  ಧನಾರ್ಜನೆ ಇರುವ ವರೆಗೆ ಕುಟುಂಬದ ಪ್ರೀತಿ ಅದರ 

ಶರೀರ ಜರ್ಜರವಾಗೆ ಎಲ್ಲರ  ಅನಾದರ 


ಇತ್ತೀಚಿಗೆ  ಕೆಲವರು ಮರಣಾನಂತರ ತಮ್ಮ ಮಕ್ಕಳಿಗೆ ಹೊರೆಯಗುವುದು ಬೇಡ 

ಎಂದು ತಮ್ಮ ಶರೀರವನ್ನು ಮೆಡಿಕಲ್ ಕಾಲೇಜ್ ಗೆ  ದಾನ ಪತ್ರ ಬರೆದು  ಇಡಲು  

ಆರಂಬಿಸಿರುವರು .ಇಲ್ಲಿ ಕೆಲವರು  ಈ ಅನಿವಾರ್ಯತೆಯನ್ನು  ಒಂದು 


ಸದ್ಗುಣ  ಎಂದು  ಹೇಳಿಕೊಳ್ಳುವುದೂ ಉಂಟು .(Virtue out of necessity ).

 ಕೆಲವು ತಂದೆ ತಾಯಂದಿರು  ಮನೆಯಲ್ಲಿ ತಿರಸ್ಕಾರ ತಾಳಲಾರದೆ ವೃದ್ದಾಶ್ರಮ 

ಸೇರುವುದುಂಟು  ಅಥವಾ ಸೇರಿಸಲ್ಪಡುವುದುಂಟು .ಮನೆಯಲ್ಲಿ ಸಿಗದ ಪ್ರೀತಿ ಅಲ್ಲಿ 

ದೊರಕಿದರೆ  ಅದೃಷ್ಟ .ಕಡಿಮೆ ಪಕ್ಷ ತಿರಸ್ಕಾರ   ದ್ವೇಷ ಇಲ್ಲದಿರಲಿ .

    ಬಹಳ  ಮಂದಿ ಹಿರಿಯರು ಬದುಕಿದ್ದಾಗ  ಸೇವೆ ಮಾಡಲು ಆಗದಿದ್ದರೂ ಸತ್ತ 

ಮೇಲೆ  ವಿಧಿ ವಿಧಾನಗಳನ್ನು  ಕ್ರಮ ಪ್ರಕಾರ ಮಾಡುವರು.ಶರೀರಕ್ಕೆ ದೊರಕದ 

ಪ್ರೀತಿ ಆತ್ಮಕ್ಕೆ ದೊರಕೀತೇ?

ಒಂದು  ಬೆಳ್ಳಿ ಗೆರೆ .ಇನ್ನೂ ಬಡವರಲ್ಲಿ ಮತ್ತು ಶ್ರಮ ಜೀವಿಗಳಲ್ಲಿ  ಹಿರಿಯರ ಬಗ್ಗೆ 

ಪ್ರೇಮ ಗೌರವ ಕಾಳಜಿ ಉಳಿದು ಕೊಂಡಿದೆ .

ಸಿರಿಯು  ವರವೋ  ,ಮಾರುವೇಷದ ಶಾಪವೋ ?

1 ಕಾಮೆಂಟ್‌: