ಬೆಂಬಲಿಗರು

ಬುಧವಾರ, ಜುಲೈ 14, 2021

ಸಾಧಕ ಕೆ ಕೆ ನಾಯರ್

 

                                                                                 ಸಾಧಕ  ಕೆ ಕೆ ನಾಯರ್                 

ಜಿ ಬಾಲಚಂದ್ರನ್ ಅವರ ಮೋಚನಂ  ಮಲಯಾಳ ಕಾದಂಬರಿಯ ಕನ್ನಡ ಅನುವಾದ ಓದಿ  ಬಹಳ  ಮೆಚ್ಚಿದೆ . ಕಾರಣ ಕಥಾ ಭೂಮಿ ನೆರೆ ದೇಶ ಭೂತಾನ್,ಈ ದೇಶದ ಜನ ಜೀವನ ಮತ್ತು ಸಂಸ್ಕೃತಿ ಬಗ್ಗೆ ಕುತೂಹಲ ಇತ್ತು . ಅಲ್ಲಿಗೆ ಶಿಕ್ಷಕನಾಗಿ ತೆರಳಿದ ಮಲಯಾಳಿ ಶಿಕ್ಷಕನ ಕತೆ . ಅದನ್ನು ಅನುವಾದ ಮಾಡಿದವರು ದಿ .ಶ್ರೀ ಕೆ ಕೆ ನಾಯರ್ .. ಅವರ ಕೆಲವು ಅನುವಾದಿತ ಪುಸ್ತಕಗಳನ್ನು ಹಿಂದೆ ಓದಿದ್ದೆ. ಈ ಪುಸ್ತಕದ ಬಗ್ಗೆ ಮೆಚ್ಚುಗೆ ಸೂಚಿಸಿ ಒಂದು ಪತ್ರವನ್ನು ಬರೆದೆ . ಅದು ಸಿಕ್ಕಿದ ಕೂಡಲೇ ಫೋನ್ ಮಾಡಿದರು .ನಾನು ಅವರ ಎಲ್ಲಾ ಪುಸ್ತಕಗಳ ಒಂದು ಪ್ರತಿ  ಕಳುಹಿಸಲು ಹೇಳಿದೆ . ಪೋಸ್ಟ್ ನಲ್ಲಿ  ಕೆಲವು ಪುಸ್ತಕಗಳು ಬಂದವು . 

 ಮಲಯಾಳಂ ಭಾಷೆಯಲ್ಲಿ ಕೇವಲ 4ನೇ ತರಗತಿಯವರೆಗೆ ಓದಿದ್ದ ನಾಯರ್‌ಗೆ ಮಲಯಾಳಂನಷ್ಟೇ ಕನ್ನಡ ಭಾಷೆಯ ಮೇಲೆ ಹಿಡಿತ ಇತ್ತು. 10ನೇ ವಯಸ್ಸಿನಲ್ಲಿಯೇ ಕವಿತೆಗಳನ್ನು ರಚಿಸಿದ್ದ ಅವರು, ಓದುವ ಗೀಳನ್ನು ಬಾಲ್ಯದಿಂದಲೇ ಬೆಳೆಸಿಕೊಂಡಿದ್ದರು. ಅವರು 1966ರಿಂದ 1994ರವರೆಗೆ ಮಣಿಪಾಲ ಪವರ್ ಪ್ರೆಸ್‌ನಲ್ಲಿ ಮೋನೊಟೈಪ್‌ಕಾಸ್ಟರ್  ಆಗಿ ಉದ್ಯೋಗಕ್ಕಾಗಿ ಮಣಿಪಾಲಕ್ಕೆ ಬಂದವರು, ಸಾಹಿತ್ಯ ರಚನೆಯನ್ನು ಗಂಭೀರವಾಗಿ ಪರಿಣಿಸಿದ್ದು 1960ರಲ್ಲಿ

೨೮ ವರ್ಷ ಮಣಿಪಾಲ ಪವರ್ ಪ್ರೆಸ್ ನಲ್ಲಿ ಉದ್ಯೋಗಿ ಯಾಗಿ ಕೆಲಸ ಮಾಡಿದ ಇವರು ಮಲಯಾಳಂನಿಂದ ಕನ್ನಡಕ್ಕೆ 16 ಕಾದಂಬರಿ, 7 ಕಾವ್ಯ, 5 ಸಣ್ಣ ಕಥೆಗಳ ಸಂಗ್ರಹ ಅನುವಾದಿಸಿದ್ದಾರೆ. ಅವರು ’ಒಂದು ಆತ್ಮ ಕಥನ’ (ಕುಂಞಪ್ಪ) ಮಾತ್ರ ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಿಂದ ಮಲಯಾಳಕ್ಕೆ ಐದು ಕಾದಂಬರಿ ಅನುವಾದಿಸಿರುವ ಅವರು ಡಾ ಅಶೋಕ್ ಕುಮಾರ್ ಜತೆ ಸೇರಿ   ತಗಳಿ ಶಿವಶಂಕರ ಪಿಳ್ಳೈ ಅವರ ಮಲಯಾಳ ಕೃತಿ ‘ಕಯರ್ ’ಅನ್ನು ’ಹಗ್ಗ’ ಎಂದು ಭಾಷಾಂತರಿಸಿದ್ದರು.ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ (2012) ಪಡೆದಿದೆ. ಎಸ್. ಕೆ. ಪೊಟ್ಟೈ ಕ್ಕಾಟ್ ಅವರ ಮಲಯಾಳ ಕೃತಿ ಒರು ದೇಶ ತ್ತಿಂಡೆ ಕಥಾ 1997ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ(ಒಂದು ಊರಿನ ಕಥೆ) ಗಳಿಸಿದೆ. ಇವೆರಡೂ ಕೃತಿಗೆ ಡಾ. ಅಶೋಕ್ ಕುಮಾರ್ ಸಹ ಅನುವಾದಕರು .
ಅವರ ಜೀವಮಾನದ ಸಾಧನೆಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ((2011-12) ಗೌರವ ಪ್ರಶಸ್ತಿ ನೀಡಿತ್ತು.

ನಿವೃತ್ತಿ ಬಳಿಕ ಮಣಿಪಾಲದಲ್ಲಿ ಫಾರ್ಮಸಿ ಕಾಲೇಜು ಅಧ್ಯಾಪಕ ರಾಗಿದ್ದ ತಮ್ಮ ಮಗನ ಜತೆ ನೆಲಸಿದ್ದ ಅವರು ೨೦೧೪ ರ ಜನವರಿ ತಿಂಗಳಲ್ಲಿ ತೀರಿ ಕೊಂಡರು

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ