ಬೆಂಬಲಿಗರು

ಮಂಗಳವಾರ, ಜನವರಿ 11, 2022

ಮರೆಯಾದ ಚಂಪಾ

                           ಮರೆಯಾದ ಚಂಪಾ 

 'ಕನ್ನಡ ಕಾವ್ಯದ ಭೂತ ಭವಿಷ್ಯವ

                                                                                                                 ಬಣ್ಣಿಸಿ ಹೇಳೋ ಗಾಂಪಾ;                                                                        

ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ' 

ಇದು ನಿನ್ನೆ ದಿವಂಗತರಾದ ಕವಿ ಚಂದ್ರ ಶೇಖರ ಪಾಟೀಲರು ತಮ್ಮನ್ನು ತಾವೇ ವಿನೋದವಾಗಿ ಪರಿಚಯಿಸುವ ರೀತಿ . ಇನ್ನು ಈಗಿನ ಪರಿಸ್ಥಿತಿಗೆ ಅನ್ವಯವಾಗುವಂತಿರುವ ಅವರ ಹಳೇ ಕವನ ,ಸೈದ್ದಾಂತಿಕ ಸೇತುವೆ ಪುನರ್ನಿಮಾಣದ ಆಶಯದಲ್ಲಿ ಹೀಗಿದೆ .

ಯಾವಾಗ ಹೇಗೆ ಯಾರಿಂದ ಯಾಕೆ 

ಅದೆಲ್ಲಾ ಯಾಕೆ ?ಅಂತೂ ಸೇತುವೆ 

ಕಡಕೊಂಡು ಮುರಿದು ಬಿದ್ದಿದೆ . 

ಶಬ್ದಗಳಿಂದ ಮುರಿದಿರ ಬಹುದು ,

ಮೌನದಿಂದ ಮುರಿದಿರ ಬಹುದು . 

ಆ ಕಡೆ ನಿಂತ ನಿನ್ನ ಈ ಕಡೆ ನಿಂತ ನನ್ನ 

ಶಬ್ದಗಳು ಈ ಹುಚ್ಚು ಹೊಳೆಯ ಮೌನದಲಿ 

ತೇಲುತ್ತವೆ .ಮೌನಗಳು ಅದರ ಶಬ್ದದಲ್ಲಿ 

ಮುಳುಗುತ್ತವೆ. 

ದುರ್ಬೀನು ಹಚ್ಚಿ ಮುಖ ಮುಖ ಕಂಡೇವು 

ಟೆಲಿಫೋನ್  ಮಾಡಿ  ಮಾತು ಕೇಳೇವು 

ಆದರೆ ಕೈಕುಲುಕಿದ ಕಾವಿನಲಿ 

ಮೈ ಚಳಿ ಬಿಡ ಬೇಕೆಂದಿದ್ದರೆ..

ಮತ್ತೆ ಕಟ್ಟಲೇ ಬೇಕು ಮುರಿದ ಸೇತುವೆಯನ್ನು .

              

ಹಿರಿಯರಿಗೆ ಮತ್ತು ಅವರಿಗೆ ಗೌರವ ಕೊಡ ಬೇಕಾದರೂ ಅಂಧ ಶ್ರದ್ದೆ ಸಲ್ಲ ಎಂಬುದನ್ನು 

"ನಿಮ್ಮ ಪಾದದ ಧೂಳಿ ನಮ್ಮ ಹಣೆಯ ಮೇಲಿರಲಿ ,ಕೆಳಗಡೆ ಬಂದು ದೃಷ್ಟಿ ಮಸುಕಾಗಿಸದಿರಲಿ "ಇದು ಅವರ ಸಂದೇಶ .

ನಾನು ಹುಬ್ಬಳ್ಳಿಯಲ್ಲಿ  ವಿದ್ಯಾರ್ಥಿಯಾಗಿದ್ದಾಗ  ಧಾರವಾಡ ವಿದ್ಯಾವರ್ಧಕ  ಸಂಘದ ಕಾರ್ಯದರ್ಶಿ  ಆಗಿದ್ದರು . ಆಗಷ್ಟೇ ತುರ್ತು ಪರಿಸ್ತಿತಿ ಕೊನೆಗೊಂಡಿತ್ತು .ತುರ್ತು  ಪರಿಸ್ಥಿತಿ ವಿರೋಧಿಸಿ  ಚಂಪಾ  ಜೈಲಿಗೂ ಹೋದವರು . ಅಡಿಗ ,ಲಂಕೇಶ ,ಅನಂತ ಮೂರ್ತಿ .ಕಾರಂತ ಮುಂತಾದವರನ್ನು  ಕರೆಸಿ ಭಾಷಣ ಸಂವಾದ  ಏರ್ಪಡಿಸುವರು . ಎಲ್ಲಾ ಸಂದರ್ಭದಲ್ಲಿಯೂ  ತಮ್ಮ  ಚಾಟೂಕ್ತಿ ಯಿಂದ  ಗಮನ ಸೆಳೆಯುವರು ; ಅವರ  ಛೂಬಾಣ ಗಳನ್ನು  ಎಂತಹವರೂ ಎದುರಿಸ ಬೇಕಿತ್ತು . 

ತಾವು ಕಟುವಾಗಿ  ವೈಚಾರಿಕವಾಗಿ ಟೀಕಿಸುತ್ತಿದ್ದವರನ್ನು ಕೂಡಾ ವೈಯುಕ್ತಿಕವಾಗಿ ಗೌರವಿಸುತ್ತಿದ್ದರು . ನಾಲ್ಕು ವರ್ಷಗಳ ಹಿಂದೆ  ಧಾರವಾಡ ಸಾಹಿತ್ಯ ಸಂಭ್ರಮ ಕ್ಕೆ  ಬೆಂಗಳೂರಿನಿಂದ  ಬಂದವರು  ಬಸವೇಶ್ವರ ಖಾನಾವಳಿ ಯಲ್ಲಿ  ರಾತ್ರಿ ರೊಟ್ಟಿ ಊಟಕ್ಕೆ ಬಂದವರು ಸಿಕ್ಕಿದ್ದರು . ಧಾರವಾಡ ದಿಂದ ಬೆಂಗಳೂರಿಗೆ ವಾಸ ಬದಲಿಸಿದ ತಮ್ಮನ್ನು ನೋನ್ ರೆಸಿಡೆಂಟ್  ಧಾರವಾಡ ದವ ಎಂದು ಕರೆದು ಕೊಳ್ಳುತ್ತಿದ್ದರು . ತಮ್ಮ ಶಿಷ್ಯ ಪೋಲೀಸು ಅಧಿಕಾರಿ ವೇದಿಕೆಯಲ್ಲಿ ಇದ್ದಾಗಲೇ 'ಧಾರವಾಡದಲ್ಲಿ ನಮ್ಮ ಮನೆ  ಪೋಲೀಸು ಸ್ಟೇಷನ್ ಪಕ್ಕದಲ್ಲಿ ಇತ್ತು ,ಆದುದರಿಂದ ಕಳ್ಳರ ಭಯ ಇರಲಿಲ್ಲ ,ಪೊಲೀಸರದ್ದೇ ಭಯ "ಎಂದು ಹೇಳಿದ ನೆನಪು .

ನಿನ್ನೆ ತಳುಕಿನ ವೆಂಕಣ್ಣಯ್ಯ ಗ್ರಂಥ ಮಾಲೆಯವರು ಪ್ರಕಟಿಸಿದ ಅವರ ಚಂಪಾಂಕಣ ಓದುತ್ತಿದ್ದೆ . ಇಂತಹ ಅಬಿವ್ಯಕ್ತಿ ಈಗ ಸಾಧ್ಯವೇ ?ಎಂದು ಆಲೋಚಿಸುತ್ತಿದ್ದೆ .




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ