ಬೆಂಬಲಿಗರು

ಸೋಮವಾರ, ಜನವರಿ 30, 2023

ರಾಜ (ಗಾನ )ಯೋಗ

 

                                                                                       ನಿನ್ನೆ ಪುತ್ತೂರಿನ ಜೈನ ಭವನದಲ್ಲಿ ತ್ರಿವಾಂಕೋರ್ ರಾಜ ಮನೆತನದ  ರಾಜಕುಮಾರ ರಾಮ ವರ್ಮ ಅವರ ಸಂಗೀತ ಯಾಗ (ಅಶ್ವ ಮೇಧ ಯಾಗದಂತೆ ; ಸಂಗೀತ ಅಶ್ವ ತನ್ನನ್ನು ಹಿಡಿಯಿರಿ ಎಂದು ಹೇಳುವಂತಿತ್ತು ). ಹೇಳಿಕೇಳಿ ರಾಜರು ,ಸ್ವಾತಿ ತಿರುನಾಳ್ ವಂಶಜರು ;ಅವರ ಬತ್ತಳಿಕೆಯಲ್ಲಿ ಹಲವು ನಾದ ಬಾಣಗಳು . 

ರಾಮ ವರ್ಮಾ ಬಾಲಮುರಳಿ ಕೃಷ್ಣ ಅವರ ಶಿಷ್ಯರು .ಅವರ ಛಾಪು ಎದ್ದು ಕಾಣಿಸುವುದು ಸಹಜ .ಹಸನ್ಮುಖ ,ಪ್ರತಿ ಕೃತಿ ಆರಂಭದಲ್ಲಿ ಯೂ ಅದರ ಕಿರು ಪರಿಚಯ . ಮುಖ ಚಹರೆ ಬದಲಿಸದೆ ಸಂಗೀತ ಸ್ವರ ದ ಏರಿಳಿತ ಪ್ರಸ್ತುತಿ ;ತಾರಕಕ್ಕೆ ಕಡಿಮೆ ಮಂದ್ರ ಜಾಸ್ತಿ . ,ಕನ್ನಡವೂ ಸೇರಿ  ಎಲ್ಲಾ ಭಾಷೆಯ ಕೃತಿಗಳ ಅರ್ಥ ಅವರಿಗೆ ಕರತಮಾಲಕ . ಶುದ್ಧ ಸಾಹಿತ್ಯ .ಸಾಹಿತ್ಯಕ್ಕೆ ತಕ್ಕಂತೆ ಅಭಿನಯ .ಉದಾ;ಕೊಳಲನೂದುತ ಬಂದ  ಎಂದು ಹಾಡುವಾಗ ಮಾಡಿ ತೋರಿಸುವರು . ನಿನ್ನೆಯ ಕಚೇರಿಯಲ್ಲಿ ದಾಸ ಸಾಹಿತ್ಯಕ್ಕೆ   ಪ್ರಾಧಾನ್ಯತೆ . 

ಕಚೇರಿ ಯಶಸ್ವಿ ಆಗಲು ಸಂಗೀತ ಗಾರರ ತಂಡ ಮತ್ತು ಆಸಕ್ತ  ಪ್ರೇಕ್ಷಕ ಗಣ ಎರಡೂ ಮುಖ್ಯ .ನಿನ್ನೆ ವಯಲಿನ್ ನಲ್ಲಿ ಶ್ರೀ ಎಸ ಅರ ವೇಣು ; ಮುಖದಲ್ಲಿ ಮಾಸದ ತುಂಟ ನಗು .ನನಗೆ ಎಚ್ ಏನ್ ಭಾಸ್ಕರ್ ಅವರ ನಗು ನೆನಪಿಸುತ್ತದೆ . ರಾಮ ವರ್ಮ ಅವರ ಜತೆಗೆ  ಪಳಗಿದ ಇವರಿಗೆ ಅವರ ಮನೋಧರ್ಮ ಸುಪರಿಚಿತ .  ಅವರ ಪಕ್ಕ ವಾದ್ಯ ಕಚೇರಿಯ ಕಳೆ ಏರಿಸಿದ್ದ್ದು ಸತ್ಯ . ಮೃದಂಗ ದಲ್ಲಿ ಶ್ರೀ ಹರಿಕುಮಾರ್ ಮತ್ತು ಘಟಂ ನಲ್ಲಿ ಡಾ ಕಾರ್ತಿಕ್ ಇವರು ಹೇಳಿಕೇಳಿ ಘಟಾನುಘಟಿಗಳು . ಕಚೇರಿ ಉತ್ಸಾಹ  ತಾರಕಕ್ಕೆ  ಹೋಗಲು ಇವರೇ ಕಾರಣ .ಹೊಡಿ ನಗಾರಿ ಮೇಲೆ ಕೈಯ್ಯಾ ಎಂಬ ದಾಸರ  ಕೀರ್ತನೆ ಆರಂಭದಲ್ಲಿ ಕಾರ್ತಿಕ್ ಘಟ   ಘಟಿಸಿದ್ದು ನಗು ಉಕ್ಕಿಸಿತು . 

ರಾಮ ವರ್ಮಾ ಪಕ್ಕ ವಾದ್ಯದವರು ಮತ್ತು ಪ್ರೇಕ್ಷಕರ ನಡುವೆ ಸದಾ ಸಂಹವನ ನಿರತರು . ಇದರಿಂದ ನಿರೀಕ್ಷಿತ ಉತ್ತೇಜನ . ರಾಜಕುಮಾರ ರಾಮ ವರ್ಮಾ ಅವರ    ಸುಮಧುರ ಸಂಗೀತ ವರ್ಷ  ಧಾರೆಯಲ್ಲಿ ಗುಡುಗು ಮಿಂಚುಗಳು ಇಲ್ಲ ,ಅವನ್ನು ತುಂಬಿದ್ದು ತಾಳ ವಾದ್ಯಗಳು . 

ಒಳ್ಳೆಯ ಶ್ರೋತೃಗಳು .ನಿನ್ನೆ ಕೊನೆತನಕ ಎಂದರೆ ರಾತ್ರಿ ಒಂಬತ್ತು ವರೆಗೆ ತುಂಬಿದ  ಸಭಾಂಗಣ . ಕೊನೆಗೆ ಎದ್ದು ನಿಂತು ಕರತಾಡನ . ನೀವು ಯಾವತ್ತು ಕರೆದರೂ ನಾನು ಬರುವೆನು ಎಂದು ಕಲಾವಿದರು ಮನ ತುಂಬಿ ಹೇಳಿದರು . 

ಧ್ವನಿ ವರ್ಧಕ ವ್ಯವಸ್ಥೆ ಬಲು ಉತ್ತಮ ಮಟ್ಟದಲ್ಲಿ ಇತ್ತು . ಪ್ರಾಯೋಜಕರಾದ ಡಾ ಶ್ರೀ ಪ್ರಕಾಶ್ ಕುಟುಂಬ ಮತ್ತು ಅವರಿಗೆ ಸಹಕರಿಸಿದ ಪುತ್ತೂರು ನಿಕ್ಷಿತ್ ಅವರನ್ನು  ಎಷ್ಟು ಕೊಂಡಾಡಿದರೂ ಸಾಲದು . 

ನಿನ್ನೆ ಕಚೇರಿ ತಪ್ಪಿದ್ದರೆ ತುಂಬಲಾರದ ನಷ್ಟ ಆಗುತ್ತಿದದ್ದು ಕ್ಲೀಶೆ ಅಲ್ಲ 

(ನಾನು ಕುಳಿತಲ್ಲಿಂದ ಪಿಟೀಲು ವಾದಕ ವೇಣು ಅವರ ಮುಖ  ಸರಿಯಾಗಿ ಕಾಣಿಸುತ್ತಿರಲಿಲ್ಲ ,ಆದ್ದರಿಂದ ಕಚೇರಿ ಮುಗಿದ ಮೇಲೆ ಪ್ರತ್ಯೇಕ ಫೋಟೋ ತೆಗೆದು ಹಾಕಿದ್ದೇನೆ )

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ