ಬೆಂಬಲಿಗರು

ಬುಧವಾರ, ಮಾರ್ಚ್ 24, 2021

 ಹುಟ್ಟೂರೆಂದರೆ ಬರೀ ಹೆಸರಲ್ಲ ,ನೆನಪ ಒಸರು 

ನಡೆದ ಒರುಂಕು ಹಾರಿದ ತಡಮ್ಮೆ ಸವೆದ ಸಂಕ 

ಹೊಲದಲ್ಲಿ  ಏರು ದನಿ ಓ ಬೇಲೆ  ಹಾಕುವಾ ಯೆಂಕ ,

ಅಂಬಾ ಎನುವವಳು ಹಟ್ಟಿಯಲಿ ಗೌರಿಯಲ್ಲವೇ ಹೆಸರು .


ಗುಡ್ಡೆಯಿಳಿದು ಬರೆ ಕಾಣುವಾ ಬಚ್ಚಲಿನ ಹೊಗೆ 

ಬೌ ಬೌ ಎಂದು ಟೈಗರ್ ಸಂತಸದಿ ಸ್ವಾಗತಿಪ  ಬಗೆ 

ಅಂಗಳದಿ  ಹರಡಿಯುವ  ಧನ ರಾಶಿ ಅಡಿಕೆ 

ಚಾವಡಿ ಜಗಲಿ  ಗೆ  ಕಟ್ಟಿದ  ಓಲೆಯಾ ತಡಿಕೆ .


ನಿತ್ಯ  ಶಾಲೆಗೆ ನಡೆದ  ಹಸಿರ ಹಾದಿ 

ಬರಿಗಾಲು ಪಾದ ಮೆಟ್ಟಿದಾ ಸುಗ್ಗಿ  ಹುಣಿ ಮೆತ್ತೆ 

 ಬಾಗಿ ಬಾಗಿ ಚಾಮರ ಬೀಸುವ ಪೈರಿನಾ  ಗತ್ತೇ

ಮರೆಯಲಿ ಹೇಗೆ ಚಡ್ಡಿದಾರೀ ಮಿತ್ರಗಣಮತ್ತೆ.

 

ಶಾಲೆಯೆಂದರೆ  ಬರೀ ಕಟ್ಟಡವೇ ಅಲ್ಲ  ನಮ್ಮ ಉಸಿರು 

ಮಮ್ಮದೆ  ಸಂಕಪ್ಪ ನರಸಿಂಹ ಅಲ್ಲವೇ ಅವರ ಹೆಸರು 

ಅಲ್ಲಿ ಜೋಡು ಜಡೆ ಬಣ್ಣ ಬಣ್ಣದ ಲಂಗ

ಸಾವಿತ್ರಿ  ಪಾರ್ವತಿ  ಶ್ರೀದೇವಿ ಗೆಳತಿ ಗೆಳೆಯರ ಸಂಗ .


ಆಗೋ ಕಾಣುವುದು ಐತಪ್ಪನಾಯ್ಕರ  ಗಾಂಧಿ ಟೋಪಿ

ಇಲ್ಲಿ ಕರೆವರು  ರಾಮ ರಾಯರು  ಆಟಕ್ಕೆ  ಶೀಘ್ರ ಕೋಪಿ 

ಮಾಸ್ತರರ  ಮೆರವಣಿಗೆ ಕೃಷ್ಣಪ್ಪ ,ಸಂಜೀವ , ಕೊರಗಪ್ಪಶೆಟ್ಟಿ  

ಏರುತಿದೆ  ಸಂತಸದಿ ನೆನಪಿನಾ ಅಟ್ಟಿ.

 

ಕೋಡಿ  ಭಟ್ಟರ ಹೊಟೇಲ್ ನೀರುಳ್ಳಿ ಬಜೆ ಕಂಪು 

ಸಾಯಿಬ್ಬರಾ  ಅಂಗಡಿ ಗೋಲಿ ಸೋಡದ ತಂಪು 

 ಜವಳಿ ಶೆಟ್ಟರ ಅಂಗಡಿ  ಎದುರು ಹೊಲಿಗೆ  ಯಂತ್ರದ ಸದ್ದು 

ಪಕ್ಕದಲೇ ಡಾ  ಮಹಾದೇವ ಶಾಸ್ತ್ರಿಗಳ ಮದ್ದು .


ಗಂಟೆ ಬಾರಿಸುತಲೆ ಕಲರವದಿ ಹೊರಟ ಮಕ್ಕಳ ಮಂದೆ
ನಶ್ಯ ಸೇವಿಸುವ ನಾವುಡ ಮೇಷ್ಟ್ರು ನಮ್ಮ ಮುಂದೆ
ಕೇಪುಳುಗುಡ್ಡೆಯ ಹುಣಿಸೆ ಹಣ್ಣಿನ ಮರವು
ಪೀರ್ ಸಾಯಿಬ್ಬರ ಬಿಳಿ ಬಸ್ಸಿನಾ ಬರವು .



 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ