ಬೆಂಬಲಿಗರು

ಸೋಮವಾರ, ಮಾರ್ಚ್ 15, 2021

ಮಾಂಕಾಳಿ ಭೂತ

                         ಮಾಂಕಾಳಿ ಭೂತ 

ಕನ್ಯಾನ ಗ್ರಾಮದ ದೇಲಂತ ಬೆಟ್ಟು ಬಯಲಿನ  ಆರಾಧ್ಯ ಭೂತ ಮಾಂಕಾಳಿ . ಚಾವಡಿ ಬಾಗಿಲು ಎಂಬಲ್ಲಿ ಭೂತ ಸ್ಥಾನ ಇದೆ . ಬೇಸಗೆಯಲ್ಲಿ ಇಲ್ಲಿ ನೇಮ (ಈಗ ನೇಮೋತ್ಸವ ಆಗಿದೆ ) ನಡೆಯುವುದು . ಬೈಲಿನ ಭಕ್ತಾದಿಗಳು  ಭಯ ಭಕ್ತಿಯಿಂದ ನೇಮಕ್ಕೆ ತಮ್ಮ ತನು ಮನ ಮತ್ತು ಕಾಣಿಕೆಗಳಿಂದ (ಇದು ಹೆಚ್ಚಾಗಿ ಎಳನೀರು ಇತ್ಯಾದಿ ವಸ್ತು ರೂಪದಲ್ಲಿ ಇರುವುದು .)ಕೈಜೋಡಿಸುವರು .ನೇಮಕ್ಕೆ ಪೂರ್ವ ಭಾವಿಯಾಗಿ  ಗೊನೆ ಕಡಿಯುತ್ತಿದ್ದುದು  ನಮ್ಮ ಮನೆಯಲ್ಲಿ .ಅದೊಂದು ಗೌರವ .ನೇಮದಂದು ಭೂತ  ನಮ್ಮ ಮನೆಯವರನ್ನು  ಬಾರೆದ ಕಡ್ತುಲೇ ಎಂದು  ಎಂದು ವಿಶೇಷ ಸಂಭೋದನೆ ಮಾಡುವುದು . ನಮ್ಮ ಬೈಲಿನ  ಕಿರಿಂಚಿ ಮೂಲೆ  ಶ್ರೀನಿವಾಸ ರಾವ್ ಎಂಬ ಹಿರಿಯರು  ಇದಕ್ಕೆ ಗುರಿಕಾರ್ (ಅವರನ್ನು ಚೀನಣ್ಣ ಎಂದು ಎಲ್ಲರೂ  ಪ್ರೀತಿ ಗೌರವದಿಂದ ಕರೆಯುತ್ತಿದ್ದರು ) .ಅವರಿಗೆ ಮೊದಲ ಸಂಬೋಧನೆ . ಅವರು ಗಾಂಭೀರ್ಯದಲ್ಲಿ ಇಡೀ ನೇಮದ  ಉಸ್ತುವಾರಿ ವಹಿಸಿ ಕೊಳ್ಳುವರು . ಅವರು ಪಾರ್ಲಿಮೆಂಟ್ ಸ್ಪೀಕರ್ ಇದ್ದಂತೆ .ನಮಗೆ  ಭೂತಕ್ಕೆ ಏನಾದರೂ ನಿವೇದಿಸುವುದಿ ದ್ದರೆ ಅವರ ಮೂಲಕವೇ ಹೋಗಬೇಕು . ನೇಮ ಕೊನೆ ಹಂತದಲ್ಲಿ ಭೂತಕ್ಕೆ ಹರಕೆ ದೂರು  ಸಲ್ಲಿಸಿದವರ ವಿಚಾರಣೆ ಆಗುವಾಗ ಭೂತ ಅವರ ಅಭಿಪ್ರಾಯ ಕೇಳಿ ಕೊನೆಗೆ ತನ್ನ ತೀರ್ಪು ಕೊಡುತ್ತಿದ್ದುದು ವಾಡಿಕೆ . 

ಗೊನೆ  ಕಡಿದು ನೇಮ ಮುಗಿಯುವ ತನಕ ಬೈಲಿನವರು ಯಾರೂ ಪರ ಊರಿಗೆ ತೆರಳಿ ತಂಗುವಂತಿಲ್ಲ . ನಾವು ಕಾಲೇಜು ವಿದ್ಯಾಭ್ಯಾಸಕ್ಕೆ ಮನೆ ಬಿಟ್ಟು ಹೋದ ತಪ್ಪಿಗೆ ನೇಮದ ದಿನ ಎಂಟಾಣೆ  ತಪ್ಪು ದಂಡ ಕಟ್ಟಿ  ಕ್ಷಮೆ ಕೇಳುತ್ತಿದ್ದರು .. ಅದಕ್ಕೆ ಸಮ್ಮತಿಸಿದ  ಭೂತ ಯಾವ ಊರಿನಲ್ಲಿ ಇದ್ದರೂ ತನ್ನ ಅಭಯ ಹಸ್ತ ನಿಮ್ಮ ಮಕ್ಕಳ ಮೇಲೆ ಇರುತ್ತದೆ ಎನ್ನುವುದು .. 

ಭೂತ  ಕಟ್ಟುತ್ತಿದ್ದ  ಗುರುವ ಎಂಬುವರು ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು . ಆದರೆ ಭೂತ ಕಟ್ಟಿದ ಮೇಲೆ ದರ್ಶನ ಬಂದಾಗ ನಮಗೆ ಅವರು ದೈವವೇ . 


 ಭೂತ ಕಟ್ಟುವವರ ಮಾತು ನಿಜಕ್ಕೂ ಒಂದು ಜಾನಪದ ಸಾಹಿತ್ಯ . ಯಾವುದೇ ಅಡೆ  ತಡೆಯಿಲ್ಲದೆ  ಪುಂಖಾನುಪುಂಖ ಬರುತ್ತಿದ್ದ  ಮಾತುಗಳು ನನ್ನಲ್ಲಿ  ಕುತೂಹಲ ಹುಟ್ಟಿಸುತ್ತಿದ್ದವು . ಸನ್ನಿವೇಶಕ್ಕೆ ಸರಿಯಾಗಿ ಭೂತಕ್ಕೆ ವಾಲಗದ ಹಿಮ್ಮೇಳವೂ ಇರುತ್ತಿತ್ತು . ಜೊತೆಗೆ ಗರ್ನಾಲು . 

 ಬಾಲ್ಯದಲ್ಲಿ  ಭೂತ ಸ್ಥಾನ ,ಬನ ,ಹಾವಿನ ಹುತ್ತ ಇತ್ಯಾದಿಗಳಿಗೆ ಕೈ ತೋರಿಸ ಬಾರದು  ಎಂಬ  ನಂಬಿಕೆ ಇತ್ತು . ಒಂದು ವೇಳೆ ತಪ್ಪಿ ಬೆರಳು ತೋರಿಸಿದರೆ ತಪ್ಪಾಯಿತು ಎಂದು ಬೆರಳು ಕಡಿಯುತ್ತಿದ್ದೆವು . ಎಷ್ಟು ಅತಿರೇಕ ಎಂದರೆ ಕೇರೆ  ಹೂವು ಎಂಬ  ಕಾಡ  ಪುಷ್ಪಕ್ಕೂ  ಕೈ ತೋರಿಸುತ್ತಿರಲಿಲ್ಲ .ಈಗೆಲ್ಲ ನೇಮದ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಾರೆ .

ನಮ್ಮ  ಗುಡ್ಡದಲ್ಲಿ ಗುಳಿಗನ ವನ  ಇತ್ತು .ಅದಕ್ಕೆ ವರ್ಷ ಕ್ಕೊಮ್ಮೆ  ತಂಬಿಲ ಮತ್ತು ಸೇವೆ ನಡೆಯುತ್ತಿದ್ದು ಅದಕ್ಕೆ  ಒಂದು ಕೋಳಿ ಬಲಿ  ಕೊಡುತ್ತಿದ್ದರು . 

ಇದಲ್ಲದೆ  ಅಲ್ಲಲ್ಲಿ  ಅನಧಿಕೃತ  ಭೂತಗಳು ಇವೆ ಎಂಬ ಉಹಾಪೋಹಗಳು ನೆಂಟರು ಮಿತ್ರರು ಮಾತನಾಡುವುದನ್ನು  ನಾವು ಕೇಳಿಸಿಕೊಳ್ಳುತ್ತಿದ್ದೆವು . ಕಾಡು ದಾರಿಯಲ್ಲಿ ಯಾರಾದರೂ ಅನಿರೀಕ್ಷಿತ ವಾಗಿ  ಮರಣ ಹೊಂದಿದರೆ ಭೂತ ಬಡಿದು ಕೊಂಡದ್ದು ,ರಕ್ತ ಕಾರಿ ಸತ್ತನಂತೆ ಎಂದು ಹೇಳುತ್ತಿದ್ದರು . ಇನ್ನು ಕೆಲವರು "ನಮ್ಮ  ರಾಮಣ್ಣ ಮೊನ್ನೆ  ರಾತ್ರಿ ಪೆರುವಾಯಿ ಗುಡ್ಡ ದ ಬಳಿ  ಸೂಟೆ ಬೆಳಕಿನಲ್ಲಿ ಹೋಗುವಾಗ ಯಾರೋ  ಆಂಜಿದಂತೆ ಆಯಿತಂತೆ . ಬಿಳಿ ಬಟ್ಟೆ ಧರಿಸಿದ ವ್ಯಕ್ತಿ ,ಪಾದ ನೋಡುತ್ತಾನೆ  ತಿರುಗ ಮುರುಗ .ಇದು ಭೂತವೇ ,ನನ್ನ ಕತೆ ಮುಗಿಯಿತು ಎಂದು ದೇಲಂತ ಬೆಟ್ಟು ವಿಷ್ಣು ಮೂರ್ತಿಯನ್ನೂ ,ಮಾಂಕಾಳಿ ದೈವವನ್ನೂ ಗಟ್ಟಿಯಾಗಿ ಪ್ರಾರ್ಥಿಸಿದನಂತೆ .ಮಾಂಕಾಳಿ ಹೆಸರು ಕೇಳಿದ್ದೇ ಅದು ಮಾಯ" ಎನ್ನುತ್ತಿದ್ದ ಎಂಬ ಸುದ್ದಿ ಹರಡಿ ನಮ್ಮನ್ನು ಭಯ ಭೀತ ಮಾಡುವರು .ಕಲ್ಲುರ್ಟಿ ಭೂತ ದಾರಿಯಲ್ಲಿ  ಮಾರು ವೇಷದಲ್ಲಿ ಬಂದು ದಾರಿ ತಪ್ಪಿಸುವುದು ಎಂದೂ ಹೇಳುತ್ತಿದ್ದರು .ಇದನ್ನೆಲ್ಲ ಕೇಳಿದ ಕೆಲವು ದಿನಗಳು ನಮಗೆ  ಕತ್ತಲೆಯಲ್ಲಿ  ಹೊರ ಹೋಗಲು ಭಯ ಆಗುತ್ತಿತ್ತು .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ