ಬೆಂಬಲಿಗರು

ಶುಕ್ರವಾರ, ಮಾರ್ಚ್ 19, 2021

ಲಕ್ಷ್ಮೀಧರ ಅಮಾತ್ಯನ ತಾಯಿಯ ಉಪದೇಶ

                           ನನ್ನ ಅಮ್ಮನ ಬಗ್ಗೆ ಬರೆಯುವಾಗ ಲಕ್ಷ್ಮಿ ಧರ  ಅಮಾತ್ಯನ ಉಲ್ಲೇಖ ಮಾಡಿದ್ದೆ .ಅವನು ಯಾರು ಎಂದು ಕೆಲವರು ಕೇಳಿದ್ದಾರೆ . ವಿಜಯನಗರ ಅರಸರ ಕಾಲದಲ್ಲಿ ಮಂತ್ರಿ ಆಗಿದ್ದವನು . ತಾಯಿ ಹಾಲು ಉಣಿಸುವಾಗ   ಮುಂದೆ ಮಂತ್ರಿಯಾದಾಗ ಏನು ಮಾಡಬೇಕೆಂದು    ಅವನ ಕಿವಿಯಲ್ಲಿ ಉಲಿಯುವ ಉಪದೇಶ ಪ್ರಸಿದ್ಧ  ಕಾವ್ಯ  ಶಾಸನ . 

             ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ

ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದ|

ರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾ

ನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ|

 ಈಗಿನ  ಕಾಲಕ್ಕೆ   ಇದನ್ನು ಸ್ವಲ್ಪ  ಮಾರ್ಪಾಟು ಮಾಡಬೇಕಾದೀತು ." ಕೆರೆಯಮ್  ಕಟ್ಟಿಸಿ  ನಿನ್ನ ಅನುದಾನದಿಂದ ಎಂಬ ಫಲಕ ಹಾಕಿಸು , ಅಜ್ಜರೆಯೊಳ್ ಸಿಲ್ಕಿದ ಅನಾಥರಿಗೆ  ಸಹಾಯ ಮಾಡಿ ಅದರ ಚಿತ್ರ ಪತ್ರಿಕೆ ದೃಶ್ಯ ಮಾಧ್ಯಮಗಳಲ್ಲಿ ಹಾಕು ,ಇಲ್ಲದಿದ್ದರೆ  ಮಾಡಿ ಪ್ರಯೋಜನ ಇಲ್ಲ "

 ನವರತ್ನ ರಾಮರಾಯರ  'ಕೆಲವು ನೆನಪುಗಳು' ಪುಸ್ತಕದಲ್ಲಿ ಒಂದು ಪ್ರಸಂಗ ಉಲ್ಲೇಖ ಇದೆ . ಮೈಸೂರು ಮಹಾರಾಜರ ಆಡಳಿತದಲ್ಲಿ ಅಮಲ್ದಾರ್ ಆಗಿ ಕೆಲಸ ಮಾಡಿದವರು . ಎಡತೊರೆ ಅಥವಾ ಈಗಿನ ಕೃಷ್ಣರಾಜ ನಗರ ದಲ್ಲಿ  ಸೇವೆ ಸಲ್ಲಿಸಿದ ಹಲ ವರುಷಗಳ ನಂತರ ಹಾಸನದಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಕಾರಿನ ರೇಡಿಯೇಟರಿಗೆ  ನೀರು ಹಾಕಲೆಂದು ಸರಕಾರಿ ಬಾವಿಯ ಬಳಿ ನಿಲ್ಲಿಸಿ ಅಲ್ಲಿ ನೀರು ಸೇದುತ್ತಿದ್ದ ಮಹಿಳೆಯ ಬಳಿ ಕೇಳಿದರು  . ಆಳವಾದ ಬಾವಿಯಿಂದ ಸೇದಿ ಕೊಡ ತುಂಬ  ನೀರು ಕೊಟ್ಟ ಆಕೆಗೆ ಹಣ ಕೊಡಲು  ಹೋದಾಗ ದುಡ್ಡಿಗೆ ನೀರು ಮಾರಲು  ನಾವೇನು ಪೇಟೆಯವರು ಕೆಟ್ಟು ಹೋದೆವೆಯೇ ?ಎಂದು ಖಡಾಖಡಿ ನಿರಾಕರಿಸುತ್ತಾಳೆ .ಅಲ್ಲೇ ಇದ್ದ ಹಿರಿಯ  ಮಹಿಳೆ ಒಬ್ಬಳು "ಸ್ವಾಮಿ ,ಹಿಂದೆ ಇಲ್ಲಿ ಜನ ಕುಡಿಯುವ ನೀರಿಗಾಗಿ ಮೈಲು ಗಟ್ಟಲೆ  ನಡೆಯಬೇಕಿತ್ತು .ಅಳುವ ಕಂದ ಕೂಡ ಕುಡಿಯೋ ನೀರು ತರೋಕೆ ಹೋಗ್ತೀನಿ ಕಣಪ್ಪಾ  ಎಂದರೆ ಅಳು ನಿಲ್ಸೋನು . ನವರತ್ನ ರಾಯ ಎಂಬ ಎಳೇ  ಅಮಲ್ದಾರ್ ಈ ಬಾವಿ   ತೋಡಿಸಿ ಪುಣ್ಯ ಕಟ್ಕೊಂಡ .ನಿಮ್ಮ ಕಾಸು ಬೇಕಾದರೆ ಅವನಿಗೇ ಕೊಡಿ ಎಂದಳು .. 

ನವರತ್ನ ರಾಮ ರಾಯರಿಗೆ ಮನ ತುಂಬಿ ಬರುತ್ತದೆ .ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಪ್ರಜೆಗಳ ಹಣವನ್ನು ಅವರ ಕ್ಷೇಮಕ್ಕೆ ಮಹಾರಾಜರ ಹೆಸರಿನಲ್ಲಿ ನಡೆಸಿದ್ದ ನನಗೆ ಸಿಕ್ಕಿದ ಸಂಬಳ ಎಲ್ಲಾ ಭಕ್ಷೀಸು  (ಟಿಪ್ಸ್)ಮಾತ್ರ . ಅಂದರೆ ಜನರ ಕೃತಜ್ಞತೆ ಆಶೀರ್ವಾದ ನಿಜವಾದ ಸಂಬಳ ಎಂಬ ಅರ್ಥದಲ್ಲಿ ಬರೆಯುತ್ತಾರೆ 

ಮೈಸೂರು ದಿವಾನರಾಗಿದ್ದ  ಸರ್ ಮಿರ್ಜಾ ಇಸ್ಮಾಯಿಲ್ ಬಗ್ಗೆ ಡಿ ವಿ ಜಿ ಇಂತಹದೇ ಒಂದು ಪ್ರಸಂಗ ಉಲ್ಲೇಖಿಸುತ್ತಾರೆ . ಮಿರ್ಜಾ ನಿಧನರಾದಾಗ ಸ್ಮಶಾನದ ಹೊರಗೆ ಓರ್ವ ಮಹಿಳೆ ಬಿಕ್ಕಿ ಬಿಕ್ಕಿ ಅಳುತ್ತಿದ್ದು  ಕಾರಣ ವಿಚಾರಿಸಿದಾಗ  ಆಕೆ ಗರ್ಭಿಣಿಯಾಗಿದ್ದಾಗ  ದೂರದ ನಲ್ಲಿಯಿಂದ  ಏದುಸಿರು ಬಿಡುತ್ತಾ ನೀರು ತರುವುದನ್ನು  ನಗರ ವೀಕ್ಷಣೆಗೆ ಕುದುರೆ ಮೇಲೆ ಬಂದಿದ್ದ ದಿವಾನರು ಕಂಡು  ಮರುದಿನ ಬೆಳೆಗಾಗುವಾಗ  ಈಕೆಯ ಮನೆಯ ಮುಂದೆ ನಲ್ಲಿ ಇರಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿ ಅವಳ ಕಷ್ಟವನ್ನು  ಬೇಡದೇ  ನಿವಾರಿದ ದೇವರು ಎಂದು ಸ್ಮರಿಸುತ್ತಾಳೆ 

 

 

 

                                  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ