ಬೆಂಬಲಿಗರು

ಭಾನುವಾರ, ಮಾರ್ಚ್ 21, 2021

ಮೆಡಿಕಲ್ ರೆಪ್ರೆಸೆಂಟೇಟಿವ್ ಎಂಬ ಶ್ರಮ ಜೀವಿಗಳು

 ಮೆಡಿಕಲ್ ರೆಪ್ರೆಸೆಂಟೇಟಿವ್  ಎಂಬ ಶ್ರಮ ಜೀವಿಗಳು .

 ಕೈಯಲ್ಲಿ ಒಂದು ಬಾಗ್ ,ಕೊರಳಲ್ಲಿ ಸೆಖೆಕಾಲದಲ್ಲೂ  ಟೈ ಹಿಡಿದು ಬಿಸಿಲು ಮಳೆ ಎನ್ನದೆ ಸದಾ ಸಂಚಾರಿಗಳಾಗಿ  ಕಾರ್ಯ ನಿರ್ವಹಿಸುವ ಮೆಡಿಕಲ್ ರೆಪ್ರೆಸೆಂಟೇಟಿವ್ ಗಳನ್ನು ನೀವು ನೋಡಿರ ಬಹುದು . ಆಸ್ಪತ್ರೆ ,ಕ್ಲಿನಿಕ್ ಮತ್ತು ಔಷಧಿ ಅಂಗಡಿಗಳಲ್ಲಿ ಇವರು ಕಾಣ ಸಿಗುವರು . ಎಂ ಬಿ ಬಿ ಎಸ್ ಪಾಸ್ ಆಗಿ ಹೌಸ್ ಸರ್ಜನ್ ಆದಾಗ ಇವರು ಕೊಡುತ್ತಿದ್ದ ಸಾಂಪಲ್ ಔಷಧಿ  ,ಪೆನ್ ಇತ್ಯಾದಿ ನನಗೆ ಅತೀವ ಸಂತೋಷ ಉಂಟು ಮಾಡುತ್ತಿತ್ತು .ಆಗ ಔಷಧಿ  ಕಂಪನಿ ಗಳು ಕಡಿಮೆ ಇದ್ದವು .ಕ್ರಮೇಣ ಇವರ ಸಂಖ್ಯೆ ಜಾಸ್ತಿ ಆಗಿ  ಇವರು ಹೇಳಿದ್ದನ್ನೇ  ಕೇಳಿ ತಲೆ ಚಿಟ್ಟು ಹಿಡಿದು ಒಮ್ಮೆ ನಾನು ಯಾವುದೇ ಕಂಪನಿ ಯ  ಪ್ರತಿನಿಧಿಯನ್ನು  ನೋಡುವುದಿಲ್ಲ ಎಂದು ಒಂದು ವರ್ಷ ಮಾಡಿದೆ .ಆಮೇಲೆ ಒಂದು ದಿನ ಯೋಚಿಸಿದಾಗ ನನಗೆ ಜ್ನಾನೋದಯ ಆಯಿತು ."ಪಾಪ ಅವರ ಕೆಲಸ ಅವರು ಮಾಡುತ್ತಾರೆ ,ಎಲ್ಲೆಲ್ಲಾ ನಡೆದು ಹೋಗಬೇಕು .ಹೋದ ಕೂಡಲೇ  ವೈದ್ಯರು ಕಾಣ ಸಿಗರು ;ಕಾಯ ಬೇಕು .ನಾನು ಕೆಲವು ಕ್ಷಣ ಅವರನ್ನು ಆಲಿಸ ಬೇಕು "ಎಂದು  ನಿರ್ಧಾರ ಬದಲಿಸಿದೆ . ಅವರು ತಮ್ಮಕಂಪನಿ ಯ  ಉತ್ಪನ್ನಗಳ  ಚಿತ್ರ ಮತ್ತು ಗುಣ ವಿಶೇಷಗಳುಳ್ಳ ಒಂದು ಫೈಲ್ ನ ಪುಟಗಳನ್ನು ತಿರುವಿ  ವರ್ಣನೆ ಮಾಡುವರು .ಈಗೀಗ  ಕಂಪ್ಯೂಟರ್ ಬಳಕೆ ಹೆಚ್ಚಾಗಿದೆ .ಕೆಲವರು  ಕಂಪನಿ ಬದಲಿಸಿದಾಗ (ಪಕ್ಷಾಂತರಿ ರಾಜಕಾರಿಣಿಗಳಂತೆ ) ತಮ್ಮ ಹಳೇ ಕಂಪನಿ ಯ ಔಷಧಿಗಳಿಗಿಂತ  ಈಗಿನವೇ ಉತ್ತಮ ಎಂದು ಪ್ಲೇಟ್ ಬದಲಿಸುವರು .

 ನನಗೆ  ಒಂದೇ ಬೇಸರ  ,ಇವರು  ಬಹಳ ಕಾಗದ ವೇಸ್ಟ್  ಮಾಡುವರು ಎಂದು .ಪ್ರತಿಯೊಬ್ಬರೂ  ತಮ್ಮ ಉತ್ಪನ್ನಗಳ ಪರಿಚಯ ಹಾಳೆಗಳನ್ನು ಯಥೇಚ್ಛ ವಾಗಿ ಕೊಟ್ಟು ಹೋಗುವರು .ಅದು ಕಸದ ಬುಟ್ಟಿ ಸೇರುವುದು .ಇನ್ನು ಉಪಯೋಗಕ್ಕೆ ಬಾರದ ಸಾಂಪಲ್ ಮತ್ತು ವೈದ್ಯರಿಗೆ ನೆನಪಿನ ಕಾಣಿಕೆ ನಿಲ್ಲಿಸಿದರೆ ವೆಚ್ಚ ತಗ್ಗಿಸ ಬಹುದು .

ನಾನು ಮೊದಲೇ  ಔಷಧಿ ಬರೆಯುವುದರಲ್ಲಿ ಜಿಪುಣ . ಕಡಿಮೆ ಕ್ರಯದಲ್ಲಿ ಉತ್ತಮ ಗುಣ ಮಟ್ಟದ  ಔಷಧಿಗಳಿಗೆ  ಪ್ರಾಧಾನ್ಯ . ನನ್ನನ್ನು ಕಂಡು ಅವರಿಗೆ ವ್ಯಾಪಾರ ಹೆಚ್ಚುವುದು ಸಂಶಯ .ಆದರೂ ನನ್ನ ದರ್ಶನದಿಂದ  ಅವರ  ಲೋಗ್ ಬುಕ್ ನಲ್ಲಿ  ನೋಡಿದ  ವೈದ್ಯರ ಸಂಖ್ಯೆ ಒಂದು ಹೆಚ್ಕುವುದು .

ಮೊದಲು ಗಂಡಸರು ಮಾತ್ರ ಈ ಕೆಲಸಕ್ಕೆ ಬರುತ್ತಿದ್ದು ಈಗ ಹೆಂಗಳೆಯರೂ ಇದ್ದಾರೆ.

ತಾವು ಭೇಟಿ ಮಾಡಿದ ವೈದ್ಯರ  ಕ್ಲಿನಿಕ್ ನಲ್ಲಿ  ಕಡಿಮೆ ರೋಗಿಗಳು ಇದ್ದರೆ "ಈಗ ಸೀಸನ್ ತುಂಬಾ ಡಲ್ ಸಾರ್ ಎಲ್ಲಾ ಕಡೆ " ಎಂದು ಸಾಂತ್ವನ ಹೇಳುತ್ತಾರೆ .ನಾನು ಕಾಯಿಲೆ ಕಮ್ಮಿ ಇದ್ದರೆ ಒಳ್ಳೆಯದು ಅಲ್ಲವೇ ಎಂದು ತಮಾಷೆ ಮಾಡುವೆನು.ಒಬ್ಬನ ಸಂಕಟ ಇನ್ನೊಬ್ಬನಿಗೆ ಅನ್ನ ; ಇದು ಹಲವು ವೃತ್ತಿಗಳಲ್ಲಿ ಇದೆ .


ಬಹಳ ಮಂದಿ  ಕಂಪನಿ  ಔಷಧಿಗಳು  ಬಹು ತುಟ್ಟಿ .ಜನೌಷಧಿ ಮಾತ್ರ ಒಳ್ಳೆಯದು ಎಂದು  ಮಾತನಾಡುತ್ತಾರೆ .ಆದರೆ ಲಕ್ಷಾಂತರ  ಮಂದಿಗೆ  ಉದ್ಯೋಗ ಕೊಡಲು   ಮತ್ತು ಹೊಸ ಹೊಸ ಔಷಧಿಗಳಿಗ  ಆವಿಷ್ಕಾರಕ್ಕೆ  ಲಾಭ  ದ  ಉತ್ತೇಜನ ಬೇಕು . ನಾವು (ನಾನೂ ಸೇರಿ )ಕಡಿಮೆ ಹಣಕ್ಕೆ ಸಿಕ್ಕಿದೊಡನೆ ಅಲ್ಲಿಗೆ ಧಾವಿಸುತ್ತೇವೆ . ಉದಾಹರಣೆಗೆ  ಭಾರೀ ಕಂಪನಿ ಗಳು ಈಗ ಚಿಲ್ಲರೆ ಔಷಧಿ ವ್ಯಾಪಾರಕ್ಕೆ ಇಳಿದಿದ್ದು ದಿಸ್ಕೌಂಟ್ ಕೊಡುತ್ತಿವೆ .ಅವರ ಜತೆ ಸಾಲ ಮಾಡಿ ,ಬಾಡಿಗೆ ಸಂಬಳ ಇತ್ಯಾದಿ ಕೊಟ್ಟು  ಅಂಗಡಿ ಇಟ್ಟ ನಮ್ಮ ಊರಿನ ಸಾಮಾನ್ಯ ಒಬ್ಬ ಫರ್ಮಾಸಿಸ್ಟ್ ಗೆ  ಇಂದು ಅಸಾಧ್ಯ . ಇದು ಇಂದಿರಾ ಕಾಂಟೀನ್ ಪಕ್ಕದಲ್ಲಿ  ಇರುವ ಸಣ್ಣ ಕಾಂಟೀನ್ ನವನ ಅವಸ್ಥೆ .



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ