ಬೆಂಬಲಿಗರು

ಮಂಗಳವಾರ, ಮಾರ್ಚ್ 23, 2021

ವಿಷ ಪ್ರಾಶನ

                           ವಿಷ  ಪ್ರಾಷನ 

ಇತ್ತೀಚಿಗೆ  ಆತ್ಮ ಹತ್ಯಾ (ಆತ್ಮಕ್ಕೆ ಸಾವಿಲ್ಲ ಎನ್ನುತ್ತಾರೆ )ಪ್ರಕರಣಗಳು  ಮತ್ತು ರಸ್ತೆ ಅಪಘಾತಗಳು ಹೆಚ್ಚುತ್ತಿವೆ . ಆತ್ಮಹತ್ಯೆಗೆ ಹಲವು ದಾರಿಗಳು ,ಅವುಗಳ ಬಗ್ಗೆ ವಿವರ ಕೊಟ್ಟರೆ  ಯಾರಾದರೂ ಅದನ್ನು ಉಪಯೋಗಿಸುವ ಅಪಾಯ ಇರುವುದರಿಂದ ವಿವರ ಬೇಡ  . ( ಕೊಟ್ಟರೂ ಅದರ ಕಾಪಿ ರೈಟ್ ಪೂರ್ಣ ನನ್ನದೇ ಮತ್ತು ಉಪಯೋಗಿಸುವವರು ಗೌರವ ಧನ  ಪಾವತಿಸದಿದ್ದರೆ  ಕಾನೂನು ಕ್ರಮ ಕೈಗೊಳ್ಳಲಾಗುವುದು !)

ಪ್ರೇಮ ವೈಫಲ್ಯ , ಪ್ರೇಮ ಸಫಲವಾದ ಕಾರಣ ಆದ ವಿವಾಹ (ಅದರ ವೈಫಲ್ಯ ),ಪರೀಕ್ಷೆಯಲ್ಲಿ  ಅನುತ್ತೀರ್ಣ ,ತಾಯಿ ಮೊಬೈಲ್ ನೋಡುವದು ಬಿಟ್ಟು ಓದು ಎಂದು ಹೇಳಿದಳು ,ತಂದೆ ದಿನವಿಡೀ ಟಿ ವಿ ನೋಡ ಬೇಡ ಎಂದು ಗದರಿಸಿದರು ಇತ್ಯಾದಿ ಹಲ ಕಾರಣ ಗಳು . 

ಹಿಂದೆ  ಹೆಚ್ಚಿನವರು  ಟಿಕ್ ಟ್ವೆಂಟಿ ಎಂಬ ತಗಣೆ ನಿವಾರಕ ಕುಡಿದು ಬರುತ್ತಿದ್ದರು .ಅದು  ಒರ್ಗನೋ  ಫೋಸ್ಫರಸ್ ಎಂಬ ರಾಸಾಯನಿಕ .ಅದನ್ನು ಕುಡಿದರೆ ನರ ವೈಫಲ್ಯ  ಆಗಿ ಸಾಯುತ್ತಿದ್ದರು . ಅದರ   ವಾಸನೆ ಮತ್ತು ಚಿಕಿತ್ಸೆ ನಮಗೆ ನಾಸಿಕ ಮತ್ತು  ಕರ ಗತ ಆಗಿತ್ತು . ಆದರೆ ಇತ್ತೀಚಿಗೆ  ಬೇರೆ ಬೇರೆ ವಿಷಗಳು ಇದ್ದು ಅವುಗಳ ಹೆಸರು ಗೊತ್ತಿದ್ದರೆ ಪುಸ್ತಕ ,ಆನ್ಲೈನ್  ಮತ್ತು  ತಯಾರಕ ಕಂಪನಿ ಯ ಎಚ್ಚರಿಕಾ ಪತ್ರ (ಇದು ವಿಷದ  ಜತೆ ಬರುತ್ತದೆ )ನೋಡಿ ಚಿಕಿತ್ಸೆ ಮಾಡ ಬೇಕಾಗುವದು .ಈಗಲೂ ಕೀಟ ನಾಶಕಗಳ ಸೇವನೆ ಮಾಡಿ ಬರುವವರೇ ಅಧಿಕ .ಅವುಗಳಲ್ಲಿ ಒರ್ಗನೋ ಫೋಸ್ಫರಸ್ ,ಒರ್ಗನೋ ಕ್ಲೋರೈಡ್ ಇತ್ಯಾದಿ ಇವೆ .

   ಹಲವು  ವಿಷಗಳನ್ನು  ರೋಗಿಯನ್ನು ತಡ ಮಾಡದೇ ಆಸ್ಪತ್ರೆಗೆ  ಕರೆದುಕೊಂಡು ಬಂದರೆ  ಜಠರ ಕ್ಕೆ  ಕೊಳಾಯಿ ಹಾಕಿ  ತೊಳೆದು ತೆಗೆಯುವೆವು . ಕಾರ್ಬಾಲಿಕ್  ಆಸಿಡ್ (ಫಿನೈಲ್ ಇತ್ಯಾದಿ ),ಆಮ್ಲ ,ಕ್ಷಾರ  ಕುಡಿದವರಲ್ಲಿ  ಹೊಟ್ಟೆ ತೊಳೆಯುವುದು ನಿಷಿದ್ಧ . 

ವಿಷ  ಪ್ರಾಶನ  ಮಾಡಿದವರಿಗೆ  ಪ್ರಥಮ ಚಿಕಿತ್ಸೆ  ಕಲುಷಿತ ವಸ್ತ್ರಗಳನ್ನು  ತೆಗೆದು ,ಕೂಡಲೇ  ಆಸ್ಪತ್ರೆಗೆ ಸಾಗಿಸುವದು . ವಾಂತಿ ಬರಿಸಲೆಂದು  ಬಾಯಿಗೆ ಬೆರಳು ಹಾಕುವುದು ,ಜಿರಳೆ ಪಿಟ್ಟೆ ತಿನಿಸುವದು ಮಾಡ ಬಾರದು ,

ಇಲಿ  ಪಾಷಾಣ ಗಳಲ್ಲಿ  ಎರಡು ವಿಧ ಇದೆ  .ಒಂದು ರಕ್ತ ಹೆಪ್ಪು ಗಟ್ಟದಂತೆ ಮಾಡುವುದು ,ಇನ್ನೊಂದು ಲಿವರ್ ಗೆ  ಹಾನಿ ಮಾಡುವುದು . 

ಮೈಲು ತುತ್ತು  ಕೆಂಪು ರಕ್ತ ಕಣಗಳನ್ನು ನಶಿಸುವುದು ,ಮೂತ್ರ ಪಿಂಡ ವೈಫಲ್ಯ ಕ್ಕೂ ಕಾರಣ  ಆಗ ಬಹುದು .ಕಾರ್ಬೊಲಿಕ್  ಆಮ್ಲ ಕೂಡ ಕಿಡ್ನಿ ವಿರೋಧಿ . 

ಕೆಲವರು  ನಿದ್ರೆ ಮಾತ್ರೆ ಸೇವಿಸಿ ಚಿರನಿದ್ರೆಗೆ ಹೋಗಲು ಯತ್ನಿಸುವರು .ಇನ್ನು ಕೆಲವರು ಕೈಗೆ ಸಿಕ್ಕಿದ ಮಾತ್ರೆ ಸೇವಿಸುವರು

    ಹಲವು  ಬಾರಿ  ಮನೆಯವರನ್ನು ಹೆದರಿಸಲು ವಿಷ ತಿಂದಿದ್ದೇವೆ ಎಂದು ಹೇಳಿ ಆಸ್ಪತ್ರೆಗೆ  ಬರುವವರೂ ಇದ್ದಾರೆ . 

ಅಗ್ನಿ ಅಸ್ತ್ರಕ್ಕೆ ವರುಣಾಸ್ತ್ರ ,ಸರ್ಪಾಸ್ತ್ರಕ್ಕೆ  ಗರುಡಾಸ್ತ್ರ ಇರುವಂತೆ  ಕೆಲವು ವಿಷಗಳಿಗೆ  ಪ್ರತಿ ವಿಷ ಇವೆ .ಇನ್ನು ಕೆಲವಕ್ಕೆ ಇಲ್ಲ .

ವಿಷ ಕುಡಿದವರನ್ನು ,ಮದ್ಯ ಪಾನ ಸಂಬಂಧಿ , ಲೈಂಗಿಕ ರೋಗದಿಂದ ಬಳಲುವವರು  ಬಂದಾಗ ನಾವು ವಿಷ ಕುಡಿದಿದ್ದಿ  ಈಗ ಅನುಭವಿಸು ಅಥವಾ ಮಜಾ ಮಾಡಿ ಬಂದಿದ್ದಿ ನಿನ್ನ ಕರ್ಮ  ಎಂದು ಹೇಳ ಬಾರದು ಎಂದು ನಮ್ಮ ಗುರುಗಳು ಹೇಳಿ ಕೊಟ್ಟಿರುವರು .ನಾವು ಸಮಾಜದ ಮೋರಲ್  ಗಾರ್ಡಿಯನ್ ಗಳು ಅಲ್ಲಾ  ,ಕಾಯಿಲೆ ಶಮನ ಮತ್ತು ಸಾಂತ್ವನ ಮಾತ್ರ ನಮ್ಮ  ಧ್ಯೇಯ . ಗುಣ ಮುಖ ಆದಮೇಲೆ  ಯೋಗ್ಯ ಸಲಹೆ ನೀಡುವೆವು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ