ಬೆಂಬಲಿಗರು

ಭಾನುವಾರ, ಫೆಬ್ರವರಿ 28, 2021

ಡೆಂಗು ಅಥವಾ ಡೆಂಗಿ ಜ್ವರ

                         ಡೆಂಗು  ಅಥವಾ ಡೆಂಗಿ  ಜ್ವರ 

 

ಇದು  ವೈರಸ್ ಜನ್ಯ ಕಾಯಿಲೆ . ಈಡಿಸ್ ಸೊಳ್ಳೆ ಸಾರ್ವಜನಿಕ ಸಂಪರ್ಕಾಧಿಕಾರಿ(ಒಬ್ಬರಿನಂದ ಇನ್ನೊಬ್ಬರಿಗೆ ಹರಡುವುದು ) . ಮೊದಲ  ಮಳೆ  (ಈಗಲಂತೂ ಅಕಾಲ ಮಳೆ ಸಾಮಾನ್ಯ ) ಬಿದ್ದ ಕೂಡಲೇ  ಇವುಗಳ ಕಾಟ ಜೋರು .ಅಲ್ಲಲ್ಲಿ  ನಿಂತ ನೀರು  ಕೂಡ ಇವುಗಳ ಉಗಮ ಸ್ಥಾನ . ವೈರಸ್ ವಾಹಕ ಸೊಳ್ಳೆ ಕಡಿತದ  ೪ ರಿಂದ ೧೦ ದಿನಗಳಲ್ಲಿ  ರೋಗ ಲಕ್ಷಣಗಳು ಕಾಣಿಸಿ ಕೊಳ್ಳುವವು .. 

ಜ್ವರ ,ವಿಪರೀತ ತಲೆನೋವು ಅದೂ ಕಣ್ಣ ಹಿಂದಿನ ನೋವು ,ಮೈಕೈ ನೋವು ,ಗಂಟು ನೋವು ಸಾಮಾನ್ಯ ಲಕ್ಷಣಗಳು . ಮೈಯಲ್ಲಿ ಕೆಂಪು ಬೀಳುವುದು,ತುರಿಕೆ(ಇದು ಔಷಧಿ ಯ  ಅಲ್ಲರ್ಜಿ ಅಲ್ಲಾ ),ಹೊಟ್ಟೆ ನೋವು(ಇದು ಸಾಮಾನ್ಯ ಗ್ಯಾಸ್ಟ್ರಿಕ್ ನೋವು ಅಲ್ಲ ) ,ವಾಂತಿ , ಭೇದಿ ,ರಕ್ತ ಸ್ರಾವ ಮತ್ತು  ಪ್ರಜ್ಞಾವಸ್ಥೆ  ಏರು ಪೇರು  ಉಂಟಾಗ ಬಹದು . 

ರೋಗ ಲಕ್ಷಣಗಳು ಮತ್ತು ರಕ್ತ ಪರೀಕ್ಷೆಯಿಂದ  ಈ ಕಾಯಿಲೆ ದೃಢ ಪಡಿಸಿ ಕೊಳ್ಳುವರು . ರಕ್ತದಲ್ಲಿ  ಬಿಳಿ ರಕ್ತ ಕಣಗಳು ಮತ್ತು  ಪ್ಲೇಟಿಲೆಟ್ ಕಡಿಮೆ ಇರುವುದು . ಪ್ಲೇಟಿಲೆಟ್ ಸಂಖ್ಯೆ  ಕಾಯಿಲೆಯ  ತೀವ್ರತೆ ಸೂಚಿಸ ಬಹುದಾದರೂ ಅದರ ಕೊರತೆ ಪ್ರಾಣಾಪಾಯಕ್ಕೆ ಕಾರಣ ವಾಗುವುದು ಅಪರೂಪ . ಯಾವುದೇ ರಕ್ತ ಸ್ರಾವ ಇಲ್ಲದಿದ್ದರೆ  ಪ್ಲೇಟಿಲೆಟ್  ೧೦೦೦೦(ನಾರ್ಮಲ್  ಒಂದುವರೆ ಯಿಂದ ನಾಲ್ಕು ಲಕ್ಷ ) ಕಡಿಮೆ ಆಗುವ ವರೆಗೂ ಪ್ಲೇಟೆಲೆಟ್ ಕೊಡ ಬಾರದು ಎಂದು ಜಾಗತಿಕ ಅರೋಗ್ಯ ಸಂಸ್ಥೆಯೇ ಸೂಚಿಸಿದೆ .ರಕ್ತ  ಪರೀಕ್ಷೆಯಲ್ಲಿ ಪಿ ಸಿ ವಿ (Packed  Cell  Volume ) ಏರುವುದು .ನೀರಿನ ಅಂಶ ಹೊರಹೋಗುವುದರಿಂದ  ರಕ್ತದ ಕೆಂಪು ರಕ್ತ ಕಣ ಮತ್ತು ರಕ್ತ ದ್ರವದ ದಾಮಾಶಯ ಹೆಚ್ಚುವುದು   . .  ರಕ್ತನಾಳ ಗಳಿಂದ  ನೀರಿನ ಅಂಶ ಸೋರಿ ರಕ್ತದ ಒತ್ತಡ ಕಡಿಮೆ ಆಗುವುದು ಅಪಾಯದ ಲಕ್ಷಣ . ಮೊದ  ಮೊದಲು ಕುಳಿತಾಗ ಮತ್ತು ನಿಂತಾಗ  ತಲೆ ತಿರುಗುವುದು ,ಮೈ ಮಾಲುವುದು ಉಂಟಾಗ ಬಹದು . ಮಲಗಿದ ಸ್ಥಿತಿ ಯಲ್ಲಿ  ಬಿ ಪಿ ಸರಿ ಇದ್ದರೂ ಕುಳಿತಾಗ ಕುಸಿಯುವುದು . ಇದರ ಮುಂದುವರಿದ  ರೋಗಸ್ಥಿತಿಗೆ  ಡೆಂಗು  ಶಾಕ್ ಎನ್ನುವರು . ವೈದ್ಯ ಶಾಸ್ತ್ರದಲ್ಲಿ  ಯಾವುದೇ ಕಾರಣಕ್ಕೆ ರಕ್ತದ ಒತ್ತಡ ಕಡಿಮೆ ಆಗಿ  ಅಂಗಾಂಗಗಳಿಗೆ (ಮುಖ್ಯವಾಗಿ ಮೆದುಳು ಮತ್ತು ಮೂತ್ರ ಪಿಂಡ )ಆಹಾರ ಮತ್ತು ಪ್ರಾಣವಾಯು ಸರಬರಾಜು ವ್ಯತ್ಯಯ ಆಗುವುದಕ್ಕೆ  ಶಾಕ್ ಎನ್ನುವರು 

     ಡೆಂಗು  ವೈರಸ್ ಗೆ ಚಿಕಿತ್ಸೆ ಇಲ್ಲ .ಆದುದರಿಂದ ಕಾಯಿಲೆ ತನ್ನಿಂದ ತಾನೇ ಕಡಿಮೆ ಆಗಬೇಕು .ಜ್ವರಕ್ಕೆ  ಪ್ಯಾರಾಸಿಟಮಾಲ್ ಮಾತ್ರೆ ಸಾಕು . ಹೆಚ್ಚಿನವರಿಗೂ  ಮನೆಯಲ್ಲಿ ವಿಶ್ರಾಂತಿ ತೆಗೆದು ಕೊಳ್ಳಲು ಸೂಚಿಸುವರು . 

ತೀವ್ರತರ  ಹೊಟ್ಟೆ ನೋವು ,ವಾಂತಿ ,ರಕ್ತದ ಒತ್ತಡ ಏರುಪೇರು ಇದ್ದರೆ ,ವೃದ್ದರು ,ಗರ್ಭಿಣಿಯರು ಮತ್ತು  ಬೇರೆ ಕಾಯಿಲೆಗಳಿಂದ ಬಳಲುವವರನ್ನು ಆಸ್ಪತ್ರೆಗೆ  ದಾಖಲು ಆಗಲು ಸೂಚಿಸುವರು . ಅವರಿಗೆ ರಕ್ತ ನಾಳಗಳ ಮೂಲಕ ಜಲ ಪೂರಣ ಮತ್ತು ಜ್ವರ ನಿವಾರಕ ಕೊಡುವರು . 

ಪ್ಲಾಟಿಲೆಟ್ ಸಂಖ್ಯೆ ಒಂದು ಮಟ್ಟದ ವರೆಗೆ ಕಡಿಮೆ ಆಗಿ ತನ್ನಿಂದ ತಾನೇ ಸರಿ ಆಗುವುದು .ಅದಕ್ಕೆಂದು ಪಪ್ಪಾಯಿ ಎಲೆ ,ಕಿವಿ  ಹಣ್ಣು ಇತ್ಯಾದಿ ತಿನ್ನ ಬೇಕಿಲ್ಲಾ . ಊರಿನಲ್ಲಿ  ಸುಲಭವಾಗಿ ಸಿಗುವ ಯಾವುದೇ ಹಣ್ಣು ತಿನ್ನ ಬಹುದು . 

ಜ್ವರ ಬಿಟ್ಟ ಕೂಡಲೇ  ಸಂಪೂರ್ಣ ಅಪಾಯ ಮರೆಯಾಗದು  .ಹಠಾತ್  ರಕ್ತದ ಒತ್ತಡ ಕಡಿಮೆ  ಆಗ ಬಹುದು .(ಡೆಂಗು  ಶಾಕ್ ಎನ್ನುವರು )


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ