ಬೆಂಬಲಿಗರು

ಭಾನುವಾರ, ಅಕ್ಟೋಬರ್ 25, 2020

ಹೆಸರು ಬದಲಿಸಿದ ಕೆಲವು ಊರುಗಳು

ಡಿ ವಿ ಜಿ ,ನವರತ್ನ ರಾಮ ರಾವ್  ಮತ್ತು ಮಾಸ್ತಿಯವರ ಕೃತಿಗಳಲ್ಲಿ ಕೆಲವು ಸ್ಥಳ ನಾಮಗಳು ಪುನಃ ಪುನಃ ಬರುತ್ತವೆ .ಅವುಗಳಲ್ಲಿ ಕೆಲವು ಈಗ ಹೆಸರು ಬದಲಿಸಿ ಕೊಂಡಿವೆ .. 

ಬೌರಿಂಗ್ ಪೇಟೆ .                                                                                         ಮರಮಠ್ಳು ಮತ್ತು ಹೊಸಿಂಗೆರೆ ಗ್ರಾಮದ ಪ್ರದೇಶಗಳನ್ನು ಸೇರಿಸಿ ರಚಿಸಿದ  ನಗರ .ಕೋಲಾರ ಚಿನ್ನದ ಗಣಿ ಮತ್ತು ಬೆಂಗಳೂರಿಗೆ ಮಧ್ಯ ಇದೆ .ಕೋಲಾರ ಚಿನ್ನದ ಗಣಿಯಲ್ಲಿ ಅಧಿಕಾರಿಯಾಗಿದ್ದ ಬ್ರಿಟಿಷ್ ಅಧಿಕಾರಿಯ ಹೆಸರು ಇಡಲಾಯಿತು .ಸ್ವಾತಂತ್ರ್ಯಾನಂತರ  ಇದುವೇ ಬಂಗಾರಪೇಟೆ ಆಯಿತು .ಅಕ್ಕಿ ವ್ಯಾಪಾರ ಕೇಂದ್ರ ..ಕೋಲಾರ ಜಿಲ್ಲೆಯಲ್ಲಿ ಇದೆ . 

ಕ್ಲೋಸ್ ಪೇಟೆ

ಈಗಿನ ರಾಮನಗರ ..ಟಿಪ್ಪು ಸುಲ್ತಾನನ ಕಾಲದಲ್ಲಿ  ಶಂಶೇರಾಬಾದ್ ಆಗಿತ್ತು .ಟಿಪ್ಪುವಿನ ಪತನದ ನಂತರ ಆತನೊಡನೆ ಬ್ರಿಟಿಷರ ಮಾತುಕತೆಗಳಲ್ಲಿ  ಮತ್ತು ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ ಸರ್ ಬೆರಿ ಕ್ಲೋಸ್ ಅವರಿಂದ ಕ್ಲೋಸ್ ಪೇಟೆ ಆಯಿತು .ಮುಂದೆ ಕ್ಲೋಸ್ ಅವರು ಮೈಸೂರಿನ ಮೊದಲ ರೆಸಿಡೆಂಟ್ ಆದರು .ಬ್ರಿಟಿಷರು  ಬಿಟ್ಟು ಹೋದ ಮೇಲೆ ರಾಮನಗರ ಆಯಿತು . 

ಯೆಡ ತೊರೆ 

ಈಗಿನ ಕೃಷ್ಣರಾಜನಗರ .ಹಾಸನ ಮತ್ತು ಮೈಸೂರು ನಡುವೆ ಮೈಸೂರು ಜಿಲ್ಲೆಯಲ್ಲಿ ಇದೆ . ೧೯೨೫ ರಿಂದ ೧೯೩೦ ರ ಅವಧಿಯಲ್ಲಿ  ಕೃಷ್ಣ ರಾಜ ವಡೆಯರ್ ಅವರಿಂದ ನಿರ್ಮಿತವಾಯಿತು .ಕಾವೇರಿ ನದಿಯಲ್ಲಿ ಪ್ರವಾಹ ಬಂದು ಯೆಡ ತೊರೆ ನಗರದಲ್ಲಿ ಭಾರೀ ನಾಶ ನಷ್ಟಗಳು ಉಂಟಾದುದನ್ನು ಕಂಡು ಮೈಸೂರು ಅರಸರು ಮೂರು ಮೈಲು ದೂರದಲ್ಲಿ  ಯೋಜನಾ ಪ್ರಕಾರ  ನಿರ್ಮಾಣ ಮಾಡಿದರು  

 .          ಡೊಬ್ಬ್ಸ್ ಪೇಟೆ  ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೆಲಮಂಗಲ ಸಮೀಪ ಇದೆ .ಇದರ ಹಳೇ  ಹೆಸರು ಸೋಮಾಪುರ ..ತುಮಕೂರಿನ ಜಿಲ್ಲಾಧಿಕಾರಿ ಆಗಿ ಜನಾನುರಾಗಿ ದ್ದ  ಮೇಜರ್ ರಿಚಾರ್ಡ್ ಸ್ಟೀವರ್ಟ್  ಡೊಬ್ಬ್ಸ್  ಅವರ ಹೆಸರು ಇಡಲಾಯಿತು .ಈ ಹೆಸರು ಈಗಲೂ ಇದೆ

ಶುಕ್ರವಾರ, ಅಕ್ಟೋಬರ್ 23, 2020

ಫೀಲ್ಡ್ ಮಾರ್ಷಲ್ ಮಾನೆಕ್ ಶಾ ಎಂಬ ದಂತ ಕತೆ

                                                          


ಆರ್ ಡಿ ಪ್ರಧಾನ್ ಸರಕಾರಿ ಅಧಿಕಾರಿ ಆಗಿ ನೆಹರು ಯುಗದಿಂದ  ನರಸಿಂಹ ರಾವ್ ವರೆಗೆ ಕಂಡವರು .ದೇಶದ ಗೃಹ ಕಾರ್ಯದರ್ಶಿ ,ಅರುಣಾಚಲದ ರಾಜ್ಯಪಾಲ ಇತ್ಯಾದಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಸೈ ಎನಿಸಿ ಕೊಂಡವರು .ಅವರ ಜೀವನ ಚರಿತ್ರೆ ಬಿಯಾಂಡ್ ಎಕ್ಷ್ಪೆಕ್ಟೇಷನ್ ಕೆಲವು ಮಾಸಗಳ ಹಿಂದೆ ಓದಿ ಸಂತೋಷ ಪಟ್ಟಿದ್ದೇನೆ .ಅದರಲ್ಲಿ  ಒಂದು ಘಟನೆಯ ಬಗ್ಗೆ ಬರೆದಿರುವರು .ಪ್ರಧಾನ್ ಅವರು ಆಗಿನ  ರಕ್ಷಣಾ ಸಚಿವ ವೈ ಬಿ ಚವಾಣ್ ಅವರ ಕಾರ್ಯದರ್ಶಿ ಆಗಿದ್ದ ಸಮಯ .ನೆಹರೂ ಪ್ರಧಾನ ಮಂತ್ರಿ .ಚೀನಾ ಯುದ್ಧದಲ್ಲಿ ಮುಖ ಭಂಗ ಅನುಭಸಿಸಿ  ರಕ್ಷಣಾ ಸಚಿವರಾಗಿದ್ದ ವಿ ಕೆ ಮೆನನ್ ಅವರ ತಲೆದಂಡ ತೆಗೆದು ಕೊಂಡ ಮೇಲೆ ಚವಾಣ್ ಅವರನ್ನು ಮಹಾರಾಷ್ಟ್ರ ದಿಂದ  ದೆಹಲಿಗೆ ಕರೆಸಿ ಆ ಸ್ಥಾನಕ್ಕೆ ನಿಯೋಜಿಸಲಾಗಿತ್ತು . 

        ೧೯೬೨ ರ ಡಿಸೆಂಬರ್ ೫ ಪ್ರಧಾನಿ ಅಸ್ಸಾಂ ಸಂದರ್ಶನ ಕೈಗೊಂಡಿದ್ದರು .. ಅಲ್ಲಿ ನಾಲ್ಕನೇ ಸೈನ್ಯ ವಿಭಾಗದ ಕೇಂದ್ರ ಕಚೇರಿಗೆ ಭೇಟಿ ನೀಡುವ ಸಮಯ .ಪ್ರಧಾನಿ ನೆಹರು ,ವೈ ಬಿ ಚವಾಣ್ ,ಕ್ಯಾಬಿನೆಟ್ ಸೆಕ್ರೆಟೇರಿಯಟ್ ನ ಉಪ ಕಾರ್ಯದರ್ಶಿ ಸುಶೀತಲ್ ಬ್ಯಾನರ್ಜಿ ,ಆರ್ ಡಿ ಪ್ರಧಾನ್ ,ಮತ್ತು ಇಂದಿರಾ ಗಾಂಧಿ  ಇದ್ದರು .ಇಂದಿರಾ ಗಾಂಧಿ ಆಗ ಯಾವುದೇ ಹುದ್ದೆಯಲ್ಲಿ ಇರಲಿಲ್ಲ ,ಸೇನೆಯ ಭೂಪಟ ಕೋಣೆಯ  ಒಳಗೆ ಪ್ರಧಾನಿ ಪ್ರವೇಶಿಸುವ ವೇಳೆ ಬಾಗಿಲಲ್ಲಿ ಇದ್ದ ಸ್ಯಾಮ್ ಮಾಣೆಕ್ ಷಾ  ಇಂದಿರಾ ಅವರನ್ನು ತಡೆದು "ಕ್ಷಮಿಸಿ ಅಧಿಕಾರ ಗೋಪ್ಯತೆ ಪ್ರಮಾಣ ಸ್ವೀಕರಿಸದ ವ್ಯಕ್ತಿಯನ್ನು ಒಳ ಬಿಡಲಾಗದು "ಎಂದು ಹೊರಗೇ  ನಿಲ್ಲಿಸದರು .ಪರಿಸ್ಥಿತಿ ಯ ಸೂಕ್ಷ್ಮತೆ ಅರಿತ ಚವಾಣ್ ಪ್ರಧಾನ್ ಅವರಿಗೆ ನೀವೂ ಹೊರಗಡೆ ಕುಳಿತು ಇಂದಿರಾ ಅವರಿಗೆ ಕಂಪೆನಿ ನೀಡಿ ಎಂದು ಕಿವಿ ಮಾತು ಹೇಳಿದರು .ತಮಗೆ ಅವಮಾನ ಆಯಿತು ಎಂದು ಗುಮ್ಮನೆ ಕುಳಿತ ಇಂದಿರಾ ಗಾಂಧಿ ಅಲ್ಲಿ ಸೌಜನ್ಯಕ್ಕೆ ಕೊಡ ಮಾಡಿದ ಚಹಾ ಮತ್ತು ಮ್ಯಾಗಜಿನ್ ನಿರಾಕರಿಸಿದರು .ಇದು ಮಾಣೆಕ್ ಷಾ  ಮೇಜರ್ ಜನರಲ್ ಆಗಿದ್ದಾಗ ನಡೆದ ಘಟನೆ ,ಪ್ರಧಾನಿ ಮಗಳಾದರೇನು ?ನೆಹರೂ ಅವರೂ ಈ ಘಟನೆಯನ್ನು ತಮಗೆ ಆದ ಅವಮಾನ ಎಂದು ತಿಳಿದ ಹಾಗೆ ಇಲ್ಲ . 

              ಮಾಣೆಕ್ ಷಾ ೧೯೭೧ ರ ಪಾಕಿಸ್ತಾನದ ವಿರುದ್ಧ ಜಯದ ರೂವಾರಿ .ಆದರೂ ಆಗಿನ ಪ್ರಧಾನಿ ಇಂದಿರಾ ಗಾಂಧಿ ಕೇಳಿದೊಡನೆ ಅವರು ಯುದ್ಧಕ್ಕೆ ಸಮ್ಮತಿಸಿರಲಿಲ್ಲ .ಸೈನ್ಯಕ್ಕೆ ಸಿದ್ದ ಗೊಳ್ಳಲು ತಮ್ಮದೇ ಲೆಕ್ಕದ ಸಮಯ ಕೇಳಿ ಆಮೇಲೆ ಹಸಿರು ನಿಶಾನೆ ತೋರಿದರು . 

ಇದೇ  ಮಾಣೆಕ್ ಷಾ ಮೇಜರ್ ಜನರಲ್ ಆಗಿದ್ದಾಗ   ಆಗಿನ ರಕ್ಷಣಾ ಸಚಿವ ವಿ ಕೆ ಮೆನನ್ ಸೇನೆಯ ಮುಖ್ಯಸ್ಥ ಜನರಲ್ ತಿಮ್ಮಯ್ಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಥಟ್ಟನೆ ಅವರು ಕೊಟ್ಟ ಉತ್ತರ "ಮಂತ್ರಿಗಳೇ  ನನ್ನ ಹಿರಿಯ ಅಧಿಕಾರಿ ಬಗ್ಗೆ ಅಭಿಪ್ರಾಯ ಕೊಡಲು ನನಗೆ ಅಧಿಕಾರ ಇಲ್ಲ .ನಾಳೆ ನೀವು ನನ್ನ ಬ್ರಿಗೇಡಿಯರ್ ಮತ್ತು ಕರ್ನಲ್ ಗಳಲ್ಲಿ ನನ್ನ ಬಗ್ಗೆ ಕೇಳುವಿರಿ ,ಸೈನ್ಯದ ಶಿಸ್ತಿಗೆ ಇದು ತರವಲ್ಲ .ಮುಂದೆ ಇಂತಹದನ್ನು ಮಾಡ ಬೇಡಿರಿ "


ಷಾ  ಅವರ ಕೆಲವು ನುಡಿ ಮುತ್ತುಗಳು 

"ಯಾವನಾದರೂ ನನಗೆ ಸಾವಿನ ಭಯ ಇಲ್ಲ ಎಂದು ಹೇಳಿದರೆ ಒಂದೋ ಅವನು ಸುಳ್ಳು ಹೇಳುತ್ತಿರುವನು ಇಲ್ಲಾ ಅವನು ಒಬ್ಬ ಗೂರ್ಖಾ ಆಗಿರುವನು "

ಇನ್ನೆರಡು ಅನುವಾದಿಸದೆ ಕೆಳಗೆ ಕೊಟ್ಟಿರುವೆನು

                             




 

ಬುಧವಾರ, ಅಕ್ಟೋಬರ್ 21, 2020

ಅಂಥೋನಿ ಸ್ಟೀಫನ್ ಫೌಚಿ

                       

ಜಗತ್ತಿನಾದ್ಯಂತ ವೈದ್ಯಕೀಯ  ಜಗತ್ತು ಅತ್ಯಂತ ಅದರ ಮತ್ತು  ಗೌರವದಿಂದ  ಮತ್ತು  ಆಕಾಂಕ್ಷೆ ಯೊಡನೆ  ಕಾಣುವ ವ್ಯಕ್ತಿ  ಡಾ ಅಂಥೋನಿ ಫೌಚಿ .ನಮ್ಮ ವೈದ್ಯ ಶಾಸ್ತ್ರ ದ ಬೈಬಲ್ ಎಂದು ಕರೆಯಲ್ಪಡುವ  ಮಹಾ ಗ್ರಂಥ ಹ್ಯಾರಿ ಸನ್ಸ್ ಟೆಕ್ಸ್ಟ್ ಬುಕ್ ಆಫ್ ಮೆಡಿಸಿನ್ .   ಅದರ  ಸಂಪಾದಕೀಯ ಮಂಡಳಿಯಲ್ಲಿ ಇವರದು ಸ್ಥಾಯೀ ಹೆಸರು .ಸೋಂಕು ರೋಗಗಳ ಮತ್ತು ಅಲರ್ಜಿ ಗೆ ಸಂಬಂಧ ಪಟ್ಟ ವಿಷಯಗಳಿಗೆ  ಇವರು ಅಥಾರಿಟಿ ..ವೈದ್ಯ ,ಸಂಶೋಧಕ ವಿಜ್ಞಾನಿ ,ಸಂಪಾದಕ  ಮತ್ತು ಆಡಳಿತಕ್ಕೆ  ಸಲಹೆಗಾರ . 

                                             



                    ಫೌಚಿಯವರ ಜನನ ೧೯೪೦ ರಲ್ಲಿ ನ್ಯೂಯೋರ್ಕ್ ನಗರದಲ್ಲಿ .ಅವರ ತಂದೆ ಇಟಲಿ ಮೂಲದ ಫಾರ್ಮಸಿಸ್ಟ್ ..ಕಾರ್ನೆಲ್ ವಿಶ್ವ ವಿದ್ಯಾಲಯದಿಂದ ೧೯೬೬ ನೇ ಇಸವಿ ವೈದ್ಯಕೀಯ ಪದವಿ ಪಡೆದ ಇವರು ೧೯೬೮ ರಲ್ಲಿ  ನ್ಯಾಷನಲ್ ಇನ್ಸ್ಟಿಟ್ಯೂಟ್ ಓಫ್ ಹೆಲ್ತ್ ನ  ಸೋಂಕು ರೋಗ ಮತ್ತು ಅಲರ್ಜಿ ವಿಭಾಗಕ್ಕೆ ಸೇರಿ ಕೊಂಡರು .ಮುಂದೆ ಅಲ್ಲಿಯೇ ಕ್ಲಿನಿಕಲ್ ಫಿಸಿಯೋಲಾಜಿ ಮತ್ತು ಇಮ್ಯು ನೊ ರೆಗ್ಯು ಲೇಷನ್ ಪ್ರಯೋಗಾಲಯದ  ಮುಖ್ಯಸ್ಥರಾ ಗುತ್ತಾರೆ . ೧೯೮೪ ರಲ್ಲಿ  ಅಲರ್ಜಿ ಮತ್ತು ಸೋಂಕು ರೋಗಗಳ ವಿಭಾಗದ ನಿರ್ದೇಶಕ  ರಾದವರು ಈಗಲೂ ಆ ಹುದ್ದೆಯಲ್ಲಿ ಮುಂದುವರಿದಿರುವರು .. ಎಚ್ ಐ ವಿ ,ಏಡ್ಸ್ ,ಸಾರ್ಸ್  ,ಮರ್ಸ್ ,ಎಬೋಲಾ ,ಹಂದಿ ಜ್ವರ ಇತ್ಯಾದಿ ವೈರಸ್ ಜನ್ಯ ಕಾಯಿಲೆಗಳ  ರೋಗ ಪತ್ತೆ ಹಚ್ಚುವಿಕೆ ,ತಡೆಗಟ್ಟುವಿಕೆ ಮತ್ತು  ಚಿಕಿತ್ಸೆಯ ಬಗ್ಗೆ  ತಪಸ್ಸಿನಂತೆ ದುಡಿದ  ಮಹಾ ವೈದ್ಯ ವಿಜ್ಞಾನಿ .ಇತ್ತೀಚಿಗೆ  ಅಮೇರಿಕಾದ  ವೈದ್ಯ ವಿಜ್ಞಾನ ಸಂಸ್ಥೆ ಯು  ಜೀವ ಮಾನದ ಸಾಧನೆ ಗೆ ಇರುವ ಗುಸ್ತಾವ್  ಲಿಏನ್ಹರ್ಡ್ ಪ್ರಶಸ್ತಿ  ಇವರಿಗೆ ನೀಡಿ ಗೌರವಿಸಿತು .ಈ ಬಗ್ಗೆ ಅವರು ನಮ್ಮದು ಒಂದು ಟೀಮ್ ವರ್ಕ್ .ಅದರ ಪರವಾಗಿ  ಪ್ರಶಸ್ತಿ ಸ್ವೀಕರಿಸುವಾಗ ನಮ್ಮನ್ನು ಮತ್ತಷ್ಟು  ವಿನಯವಂತರಾಗಿ ಮಾಡುತ್ತದೆ ಅಂದಿದ್ದಾರೆ . 

                       ಕೋ ವಿಡ್ ೧೯ ರ ಬಗ್ಗೆ  ಸರಕಾರಕ್ಕೆ ಸಲಹೆ ಗಾರ .ವಿಷಯ ನಿಷ್ಟುರತೆ ಮತ್ತು ವಿನಯ ಇವರ ಟ್ರೇಡ್ ಮಾರ್ಕ್ .ಹೊಸ ರೋಗದ ಬಗ್ಗೆ  ಅಂಕಿ ಅಂಶಗಳು ಶೇಖರವಾದಂತೆ ನಮ್ಮ ಹಳೆಯ ನಿರ್ಧಾರಗಳು ಎಷ್ಟು ತಪ್ಪು ಎಷ್ಟು ಒಪ್ಪು ಎಂದು ಅರಿವಾಗುಗುವುದು .ರೋಗ ಲಕ್ಷಣವಿಲ್ಲದ ರೋಗಿಗಳ ಪ್ರಮಾಣ ಇಷ್ಟು ಇರಬಹುದು ಎಂದು ನಾವು ಊಹಿಸಿರಲಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ ..ಈ ರೋಗದ ಹತೋಟಿಗೆ ವ್ಯಾಕ್ಸೀನ್ ಮತ್ತು  ಸುಧಾರಿತ   ಸಾರ್ವಜನಿಕ ಅರೋಗ್ಯ ವ್ಯವಸ್ಥೆ ಎರಡು ಸೇರಿದರೆ ಮಾತ್ರ ಸಾಧ್ಯ ಎಂದು ಖಡಾಖಡಿ ನುಡಿಯುತ್ತಾರೆ ..ಅಧಿಕಾರರೂಢ ರಾಜಕಾರಣಿಗಳಿಂದ ಒತ್ತಡ ಬಂದರೂ ಎದುರಿಸಿ ಬಹಳ ಜನಪ್ರಿಯ ಯಾದ ಅಂಥೋಣಿ  ಫೌಚಿ ನೀವು ಯಾವುದು ವೈಜಾನಿಕವಾಗಿ ನಿರೂಪಿಸಲ್ಪಟ್ಟಿದೆಯೋ ಅದನ್ನು ನೇರವಾಗಿ ಹೇಳಿ ,ನಿಮ್ಮ ಸಲಹೆ ಕೇಳಿ ದವರಿಗೆ ಅದು ಹಿತವಾಗಿ ಇರಲಿ ಇಲ್ಲದಿರಲಿ .ಇಂದಲ್ಲದಿದ್ದರೆ ಮುಂದೊಂದು ದಿನ ನಿಮ್ಮ ಮಾತಿನ ಸತ್ಯ ತಿಳಿದು ನಿಮ್ಮ ಗೌರವ ಹೆಚ್ಚುವುದು .,ನಿಮ್ಮ ಸಲಹೆಯನ್ನು ಪಾಲಿಸುವುದು ಬಿಡುವುದು  ಕೇಳಿದವರಿಗೆ ಬಿ ಡಿ, ಎಂಬ ಕಿವಿಮಾತು ಹೇಳುತ್ತಾರೆ.

ಇತ್ತೀಚಿಗೆ  ಚುನಾವಣಾ ಭಾಷಣಗಳಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಹಿಗ್ಗಾ ಮುಗ್ಗಾ ಟೀಕಿಸಿದ ವಿಚಾರಕ್ಕೆ ಅವರ ಪ್ರತಿಕ್ರಿಯೆ. ಗಾಡ್ ಫಾದರ್ ನಲ್ಲಿ ಹೇಳಿದಂತೆ "ವೈಯುಕ್ತಿವಾದದ್ದು ಏನೂ ಇಲ್ಲ .ಸ್ಟ್ರಿಕ್ಟ್ ಲಿ  ಬಿಸಿನೆಸ್ " ನಾನು ನನ್ನ ಕೆಲಸ ಪ್ರಾಮಾಣಿಕವಾಗಿ ಮಾಡಿ ನಮ್ಮ ಜನರ ಸೇವೆ ಮಾಡ ಬಯಸುವೆನು . 

                     ೨೦೦೫ ರಲ್ಲಿ ಅಧ್ಯಕ್ಷ ಬುಷ್ ರವರಿಂದ ಪ್ರಶಸ್ತಿ ಸ್ವೀಕರಿಸಿ

                             ರಾಸ್ಟ್ರಪತಿ ಕ್ಲಿಂಟನ್ ಜತೆ ಎಚ್ ಐ ವಿ  ಸಂಶೋಧನೆ ಬಗ್ಗೆ ವಿಚಾರ  ವಿನಿಮಯ . 

                                          

 ಅಂಥೋನಿ ಫಾಸ್ಸಿ  ಅಮೇರಿಕಾದಲ್ಲಿ  ಎಷ್ಟು ಜನಪ್ರಿಯ ಎಂದರೆ ಐ ಲವ್ ಯು ಫೌಚಿ ಎಂಬ ಸಾಕ್ಸ್ ಗಳು ,ಮತ್ತು  ಫಾಸ್ಸಿ  ಆಡು ಗೊಂಬೆಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ.  

                               




                 


ಶನಿವಾರ, ಅಕ್ಟೋಬರ್ 17, 2020

ಚೆನ್ನೈ ದಿನಗಳು 5

                         ಚೆನ್ನೈದಿನಗಳು 5

ಚೆನ್ನೈ ದಕ್ಷಿಣ ಭಾರತದ ಮಹಾ ನಗರ .ಬ್ರಿಟಿಷರ ಆಢಳಿತ ಕೇಂದ್ರ ವೂ ಇಗಿತ್ತು .ಹಳೆಯ ಮದ್ರಾಸ್ ಪ್ರಾಂತ್ಯದಲ್ಲಿ ಕನ್ನಡ ,ಮಲಯಾಳ  ಮತ್ತು ತೆಲುಗು ಭಾಷಿಕ  ಭಾಗಗಳೂ ಇದ್ದುದರಿಂದ ಇಲ್ಲಿ ಇವರೆಲ್ಲರ ಇರುವಿಕೆ ಬೇರೆ ಬೇರೆ ಅನುಪಾತದಲ್ಲಿ ಕಾಣ ಬಹುದು .. 

                  ಇಲ್ಲಿಯ  ನಾಸ್ತಿಕತೆ ಯ ಪ್ರತಿಪಾದಕ  ತಂದೈ ಪೆರಿಯಾರ್  ಅನುಯಾಯಿಗಳು ಅಧಿಕ ಸಂಖ್ಯಯಲ್ಲಿ ಇದ್ದರೂ ದೇವಾಲಯ ,ಪೂಜಾ ಸ್ಥಳ ಗಳಲ್ಲಿ ಫುಲ್ ರಶ್ .ಮೈಗೆಲ್ಲಾ  ಅರಿಶಿನ ಹಚ್ಚಿ ಕೊಂಡು ತುರುಬು ತುಂಬಾ ಹೂವು ಮತ್ತು ರೇಷ್ಮೆ ಸೀರೆ ಉಟ್ಟ ಭಕ್ತೆಯರು ಮತ್ತು ಹಣೆ ಉದ್ದಗಲ ನಾಮ ಹಾಕಿದ ಭಕ್ತರು ಎಲ್ಲೆಲ್ಲೂ ಕಾಣ ಸಿಗುವರು .ಸುಪ್ರಭಾತ , ದೇವರನಾಮಗಳು ಧ್ವನಿ ವರ್ಧಕಗಳ ಮೂಲಕ ಗಲ್ಲಿ ಗಲ್ಲಿಗಳಲ್ಲಿ  ಭಕ್ತಿ ಪ್ರಚೋದನೆ ಮಾಡುತ್ತಿರುವವು . 

ಚೆನ್ನೈ ನಗರ ಅನ್ವೇಷಣೆ ಮಾಡಲು ಟಿ ಟಿ ಕೆ ನಗರ ದರ್ಶನ ಮ್ಯಾಪ್ ತೆಗೆದುಕೊಂಡು ದರ್ಶನೀಯ ಸ್ಥಳ ಗಳು ಮತ್ತ್ತು ಅಲ್ಲಿಗೆ ಹೋಗುವ ರಸ್ತೆ ,ಸಿಟಿ ಬಸ್ ರೂಟ್ ಇತ್ಯಾದಿ ಕಲೆ ಹಾಕಿದೆವು . ಈಗಿನಂತೆ ಗೂಗಲ್ ಮ್ಯಾಪ್ ಇಲ್ಲ .ಚೆನ್ನೈ ನಗರ ಬಸ್ ಮತ್ತು ಉಪನಗರ ರೈಲು ವ್ಯವಸ್ಥೆ ಚೆನ್ನ್ನಾಗಿದೆ .ಈಗ ಸಾಲದ್ದಕ್ಕೆ ಮೆಟ್ರೋ ಸೇರಿಕೊಂಡಿದೆ . 

ಆ ಮೇಲೆ ರಜಾ ದಿನಗಳಂದು ಪ್ಯಾರಿಸ್ ಕಾರ್ನರ್(  ಬೆಂಗಳೂರಿನ ಮೆಜೆಸ್ಟಿಕ್ ,ಅಥವಾ ಮಂಗಳೂರಿನ ಸ್ಟೇಟ್ ಬ್ಯಾಂಕ್ ತರಹ )ಗೆ ಹೋಗಿ ನಮಗೆ ಹೋಗ ಬೇಕಾದ ಜಾಗಕ್ಕೆ ಬಸ್ ಹಿಡಿಯುವೆವು .ಚೆನ್ನೈ ಸಿಟಿ ಬಸ್ ಪಲ್ಲವನ್ ಟ್ರಾನ್ಸ್ಪೋರ್ಟ್ ಕಂಪನಿ  ಅಥವಾ ಪಿ ಟಿ ಸಿ .ಅದರಲ್ಲಿ ಮುಂದಿನ ಬಾಗಿಲು ಮಹಿಳೆಯರಿಗೆ ,ಹಿಂದಿನಿಂದ ಪುರುಷರಿಗೆ .ನಿರ್ವಾಹಕರು ತಮ್ಮ ಆಸನದಿಂದ ಏಳರು .ಕುಳಿತಲ್ಲಿಂದಲೇ ಪ್ರಯಾಣಿಕರ ಮೂಲಕ ಟಿಕೆಟ್ ಪಾಸ್ ಮಾಡುವರು . 

ಸಮೀಪದ  ಸ್ಥಳಗಳಿಗೆ ಬೈಕ್ ನಲ್ಲಿ  ಮೂವರು ಕುಳಿತು ಹೋಗುತ್ತಿದ್ದೆವು .ಈಗಿನ ಜನದಟ್ಟಣೆ ಇರಲಿಲ್ಲ ,ಈಗ ನನಗೆ ಸಿಂಗಲ್ ಆಗಿ ಬೈಕ್ ಸಂಚಾರ ಮಾಡಲೂ ಸಾಧ್ಯವಿಲ್ಲ . 

ಚೆನ್ನೈ ನಗರಕ್ಕೆ ರೈಲು ಮೂಲಕ ಬಂದಿಳಿದೊಡನೆ ಪ್ರತ್ಯೇಕ ವಾಸನೆ ಬರುವುದು .ಅದು  ಜೀವನಾಡಿ ಕೂವಂ ನದಿಯ ಗಂಧ ..ಎಲ್ಲ ಕಲ್ಮಶಗಳನ್ನು ಹೊತ್ತ ನದಿಯ ಆಕ್ರಂದ .ಮೊದಮೊದಲು ಹಿಂಸೆಯಾದರೂ ಆ ಮೇಲೆ ರೂಡಿಯಾಗುವುದು . 

                                  ಕೂವಂ ನದಿ 

                             
    ಒಂದು  ಭಾನುವಾರ  ನಾವು ವಂಡಲೂರಿನಲ್ಲಿ ಇರುವ ಅಣ್ಣಾ ಪ್ರಾಣಿ ಸಂಗ್ರಹಾಲಯಕ್ಕೆ  ತೆರಳಿ ಆನಂದಿಸಿದೆವು . 

                       ವಂಡಲೂರು ಪ್ರಾಣಿ ಸಂಗ್ರಹಾಲಯ ಮುಖ್ಯದ್ವಾರ 

ಚೆನ್ನೈ  ಕರಾವಳಿ ನಗರ ಆದುದರಿಂದ ಇಲ್ಲಿ ಬೀಚ್ ಗಳು ಇದ್ದೇ ಇರುತ್ತವೆ .ಸಾರ್ವಜನಿಕ ವಾದ  ಮರೀನಾ ಬೀಚ್ ಪ್ರಸಿದ್ಧ .ಇದರ ಪಕ್ಕದಲ್ಲಿ  ರಾಜಕೀಯ ನಾಯಕರ ಸಮಾಧಿ ಇದೆ ,ನಿರ್ವಹಣೆ  ಅಷ್ಟು ಚೆನ್ನಾಗಿ ಇರಲಿಲ್ಲ .ಇದು ಬಿಟ್ಟರೆ ಬೆಸಂಟ್ ನಗರ ಬೀಚ್ ಇದೆ . 

                        ಬೆಸಂಟ್ ನಗರ ಮತ್ತು ಮರೀನಾ ಬೀಚ್ 


           ವಿ ಜಿ ಪಿ ಬೀಚ್ ಎಂಬ ಖಾಸಗಿ ನಿರ್ವಹಣೆಯ ಕಡಲ ತೀರ ಇದೆ .ನಿರ್ಮಲ ವಾಗಿದೆ .ಮತ್ತು ಮಕ್ಕಳಿಗೆ ಆಟವಾಡಲು ಬೇಕಾದ ವ್ಯವಸ್ಥೆ ಇದೆ .ಇಲ್ಲಿಯ ಕ್ಯಾಂಟೀನ್ ನಲ್ಲಿ ಒಂದು ಭಾರೀ ದೊಡ್ಡ ದೋಸೆ ಆಕರ್ಷಣೆ .ಮತ್ತು ಒಬ್ಬ ಕಾವಲುಗಾರ ಬೊಂಬೆಯಂತೆ ನಿಂತಿರುವನು .ನಾವು ಏನು ಲಾಗ ಹಾಕಿದರೂ ಕಣ್ಣವೆ ಮಿಟುಕಿಸನು .                            



                                
ಮೇಲಿನ ಚಿತ್ರ  ಅಬ್ದುಲ್ ಅಜೀಜ್ ಎಂಬ ಜೀವಂತ ಮೂರ್ತಿ ವಿ ಜಿ ಪಿ ಬೀಚ್ ನ ಆಕರ್ಷಣೆ ಆಗಿದ್ದರು 

ಇತಿಹಾಸ ಪ್ರಸಿದ್ದವಾದ ಮಹಾಬಲಿಪುರಂ ೫೮ ಕಿ ಮೀ ದೂರ ಇದೆ .ಇಲ್ಲಿಯ ಕೋಟೆ ಮತ್ತು  ಸಮುದ್ರ ಕಿನಾರೆ ಪ್ರೇಕ್ಷಣೀಯ .ಹೋಗುವ ದಾರಿಯಲ್ಲಿ ಮೊಸಳೆ ಪಾರ್ಕ್ ಇದೆ .                         


ಇನ್ನು  ನಗರದ ಒಳಗೆ  ಸೆಂಟ್ರಲ್  ನಿಲ್ದಾಣದ  ಕಾರ್ಪೋರೇಶನ್ ಆಡಳಿತ ಕಟ್ಟಡ ರಿಪ್ಪನ್ ಬಿಲ್ಡಿಂಗ್ ರಚನೆ ನೋಡಲು ಅರ್ಹ 

             

ಅಲ್ಲಿಂದ ಪಶ್ಚಿಮ ಕ್ಕೆ ಹೋದರೆ  ರಾಜ್ಯದ  ವಿಧಾನ ಸೌಧ ಸೈನ್ಟ್  ಫೋರ್ಟ್ ಜೋರ್ಜೆ ಮತ್ತು ಹೈ ಕೋರ್ಟ್ ಕಟ್ಟಡಗಳು ಹಳೆಯ ವಾಸ್ತು  ಸೌನ್ದರ್ಯವನ್ನು ತೋರುತ್ತವೆ ..ಪ್ಯಾರಿ ಕಾರ್ನರ್  (ಇಲ್ಲಿ ಪ್ಯಾರಿ ಕಂಪನಿಯ  ಕಚೇರಿ ಇದ್ದುದರಿಂದ ಬಂದಿರಬೇಕು )ಆಗಿನ ದೊಡ್ಡ ಲ್ಯಾಂಡ್ ಮಾರ್ಕ್ .ನಗರ ಮತ್ತು ಪರವೂರ ಬಸ್ ಗಳು ಇಲ್ಲಿಂದ ಹೊ ರಡುತ್ತಿದ್ದವು .ಮತ್ತು ರಖಂ ತರಕಾರಿ ಮಾರ್ಕೆಟ್ ಇತ್ತು .ಈಗ ಅವು ಕೊಯಂಬೀಡಿ ಗೆ 
ಸ್ಥಳಾಂತರ ಹೊಂದಿವೆ .ಪ್ಯಾರಿ ಕಾರ್ನರ್ ಕೊನೆಗೆ  ಬರ್ಮಾ ಬಜಾರ್ ಇತ್ತು .ಇಲ್ಲಿ ಬ್ಲೇಕ್ ಮಾರ್ಕೆಟ್ ಐಟಂ ಗಳು ಸಿಗುತ್ತಿದ್ದವು ಎಂದು ಪ್ರತೀತಿ ..ಫೋರ್ಟ್ ಜಾರ್ಜೆ ಗೆ ಬೀಚ್ ರೈಲ್ವೆ ಸ್ಟೇಷನ್ ಬಳಿಯಿಂದ ಒಂದು ಕಿಂಡಿ ದಾರಿ ಇದೆ .ನಾನು ಈ ದಾರಿಯಿಂದ ಅಲ್ಲಿಗೆ ಆಗಾಗ ಹೋಗುತ್ತಿದ್ದೆ .ಅಲ್ಲಿ ತಮಿಳ್ನಾಡು ಸರಕಾರದ ಟೀ ಕಂಪನಿ ಟಾನ್ ಟೀ ಮಾರುವ ಔಟ್ಲೆಟ್ ಇತ್ತು .ನಮಗೆ ಅವರ ಟೈಗರ್ ಟೀ ರುಚಿ ಹಿಡಿದು ಹೋಗಿತ್ತು . 

ಹೈ ಕೋರ್ಟ್ ಕಟ್ಟಡ 
ಇನ್ನು ನುಂಗಂಬಾಕಂ ಬಳಿ ಕವಿ ದಾರ್ಶನಿಕ ತಿರು ವಳ್ಳ  ರ್  ಸ್ಮಾರಕ ವಳ್ಳುವರ್ ಕೋಟಂ ಇದೆ .ಇಲ್ಲಿ ಕರ ಕುಶಲ ವಸ್ತುಗಳ ಪ್ರದರ್ಶನ ನಡೆಯುವುದು . 

ವಳ್ಳುವರ್ ಕೊಟಂ 
ಸರ್ಕಾರೀವಸ್ತು ಸಂಗ್ರಹಾಲಯ ನೋಡ ಬೇಕಾದುದು ,ಇಲ್ಲಿ ರವಿ ವರ್ಮನ ಚಿತ್ರಗಳು ,ಮತ್ತು ತಂಜಾವೂರಿನ ಕೆತ್ತನೆ ಕೆಲಸಗಳನ್ನು ನೋಡ ಬಹುದು . 

ಮ್ಯೂಸಿಯಂ 
ನನಗೆ ಪ್ರಿಯವಾದ ಕೊನ್ನೆಮಾರಾ ರಾಷ್ಟೀಯ ಪುಸ್ತಕ ಭಂಡಾರ ಪಕ್ಕದಲ್ಲಿಯೇ ಇದೆ .ಕನ್ನಡ ಸೇರಿ ದೇಶದ ಎಲ್ಲಾ ಭಾಷೆಯ ಪುಸ್ತಕಗಳು ,ದಿನ ,ವಾರ ಮತ್ತು ಮಾಸ ಪತ್ರಿಕೆಗಳು ಇಲ್ಲಿಗೆ ಖಡ್ಡಾಯ ಬರುವವು 

ಕೊನ್ನೆಮಾರ ರಾಷ್ಟ್ರೀಯ ಪುಸ್ತಕ ಭಂಡಾರದ ಒಳ ನೋಟ . 
 
ಇನ್ನು  ಇಂಜಂಬಾಕಮ್ ನಲ್ಲಿ  ಚೋಳಮಂಡಲಂ ಕಲಾಗ್ರಾಮ .,ಕೊಟ್ಟೂರ್ ಪುರಂ ನಲ್ಲಿ ಯ ಬಿರ್ಲಾ ಪ್ಲಾನೆಟೋರಿಯಂ ಮತ್ತು ಗಿಂಡಿ ಉರಗ ಉದ್ಯಾನ  ಪ್ರವಾಸಿಗರಲ್ಲಿ ಜನಪ್ರಿಯ .ದೈವ ಭಕ್ತರಿಗೆ ಕಪಾಳೀಶ್ವರ ದೇವಸ್ಥಾನ ,ಪಾರ್ಥ ಸಾರಥಿ ಗುಡಿ ,ಸಂತೋಮ್ ಚರ್ಚ್ ಇತ್ಯಾದಿ ಪವಿತ್ರ ಸ್ಥಳಗಳು ಇವೆ . ಬಹು ಪಾಲು ಸಭಾ ಭವನಗಳು ಟಿ ನಗರ ,ಮೈಲಾಪುರ್ ,ನುಂಗಂಬಾಕಂ (ಎಲ್ಲ ದಕ್ಷಿಣ ಚೆನ್ನೈ )ಸುತ್ತ ಮುತ್ತ ಇವೆ .ಇಲ್ಲಿ ಜಗತ್ ಪ್ರಸಿದ್ಧ ಮಾರ್ಗಳಿ ಸಂಗೀತೋತ್ಸವಕ್ಕೆ ರಸಿಕರು ಮುಗಿ ಬೀಳುವರು . 
ಚೆನ್ನೈ ನಲ್ಲಿ  ಕೂವಂ ತೀರದಲ್ಲಿ ಒಂದು ವಸ್ತುಪ್ರದರ್ಶನ ದ್ವೀಪ ಇದೆ .ಇಲ್ಲಿ ವಾರ್ಷಿಕ ಕೈಗಾರಿಕಾ ವಸ್ತು ಪ್ರದರ್ಶನ ನಡೆಯುವುದು .ಇಲ್ಲಿಯೇ ನನಗೆ ಟೈಗರ್ ಟೀಯ ಪರಿಚಯ ಅದುದು .ರಾತ್ರಿ ಹೊತ್ತು ವಿಹಂಗಮ ನೋಟ ಇರುತ್ತಿತ್ತು . 

ವಸ್ತು ಪ್ರದರ್ಶನ ದ್ವೀಪ . 

ಚೆನ್ನೈ ಗೆ ಬರುವ ಅತಿಥಿಗಳು ರೇಷ್ಮೆ ಸೀರೆಗೆ ಅಸೆ ಪಡುವರು ,ಅವರನ್ನು ಟಿ ನಗರದ ನಲ್ಲಿ ಅಂಡ್ ಕೋ ಗೆ ದರ್ಶನ ಮಾಡಿಸುವೆವು .ಅಲ್ಲಿ ಗಂಡಸರು ಬೇಸರ ಕಳೆಯಲು ಕುಳಿತು ಕೊಳ್ಳುವ ಸ್ಟಳ ಇದೆ .ಕನ್ನಡ ಬಲ್ಲ ಸೇಲ್ಸ್ ಮ್ಯಾನ್ ಇದ್ದಾರೆ .ಈಗ ಕುಮಾರನ್ ಅಂತಹ ಅಂಗಡಿಗಳು ಮೇಲೆ ಬಂದಿವೆ . 

ಬಂದವರನ್ನು ಹೋಟೆಲ್ ಗೆ ಕರೆದುಕೊಂಡು ಹೋಗದಿದ್ದರೆ ಲೋಪ ಆಗುವುದು .ಶರವಣ ಭವನ ಪ್ರಸಿದ್ಧ ಸಸ್ಯಾಹಾರಿ ಹೋಟೆಲ್ .ಈಗ ಜಗತ್ತಿನಾದ್ಯಂತ ಶಾಖೆಗಳು ಇವೆ .ಇಲ್ಲಿಯ  ಮಿನಿ ಇಡ್ಲಿ ಅಥವಾ ತಿರುಪತಿ ಇಡ್ಲಿ ನಮ್ಮ ಮಗನಿಗೆ ಇಷ್ಟ .ನಾವು ಯಾವುದಾದರೂ ಕೆಲಸಕ್ಕೆ ಪುರುಷ್ವಕಾಮ್ ಗೆ  ಹೋದರೆ ಅವನು ಕೂಡಲೇ ನನಗೆ ಬಾಯಾರಿಕೆ ಆಗುವುದು ಎನ್ನುವನು .ಅದು ಶರವಣ ಭವನಕ್ಕೆ ಹೋಗಲು ಸೂಚನೆ . 


ಅಡ್ಯಾರ್ ಗ್ರಾಂಡ್ ಸ್ವೀಟ್ಸ್ ಸಿಹಿತಿಂಡಿ ಮತ್ತು ಖಾರರಕ್ಕೆ ಪ್ರಸಿದ್ಧ ..ಒಳ್ಳೆಯ ಗುಣಮಟ್ಟ ಮತ್ತು ರುಚಿ .ಅಲ್ಲಿಯ ಅತ್ತಿ ರಸ ,ಮುರುಕ್ಕು ಚೆನ್ನಾಗಿ ಇರುತ್ತಿತ್ತು 
ಚೆನ್ನೈ  ಗೆಳೆಯರು

 “I would rather walk with a friend in the dark, than alone in the light.” — Helen Keller. 

                                                                        

“True friends are never apart, maybe in distance but never in heart.” 

 

'ಗೆಳೆತನದ ಸುವಿಶಾಲ ಆಲದ ತಣ್ಣೆಳಲ ತಂಪಿನಲಿ ತಂಗಿರುವೆನು'- ಚೆನ್ನವೀರ ಕಣವಿ

 

ಚೆನ್ನೈ ವಾಸದಲ್ಲಿ ನಮ್ಮ ಬದುಕನ್ನು ಚಂದಗೊಳಿಸಿದ ಮಿತ್ರರು ಹಲವರು.ಅದರಲ್ಲಿ ಮೊದಲಿಗೆ ನೆನಪಿಗೆ ಬರುವುದು ಡಾ ಪ್ರಸನ್ನ ಕುಮಾರ್ .ಅವರ ತಂದೆ ಅರಣ್ಯ ಇಲಾಖೆಯಲ್ಲಿ  ದುಡಿದು ನಿವೃತ್ತ ಜೀವನವನ್ನು ಮೈಸೂರಿನಲ್ಲಿ ನಡೆಸುತ್ತಿದ್ದರು .ನಾನು  ರೇಲ್ವೆ ವೈದ್ಯಕೀಯ ಸೇವೆಯನ್ನು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ  ವಿಭಾಗೀಯ ಆಸ್ಪತ್ರೆಯಲ್ಲಿ ಆರಂಭಿಸಿದೆನು .ಅದರ ಮೊದಲು ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ಒಂದು ವರ್ಷ ಇದ್ದೆ. ಪ್ರಸನ್ನ ನಾನು ಮಡಿಕೇರಿ ಬಿಟ್ಟ ಮೇಲೆ ಅಶ್ವಿನಿಗೆ ಸೇರಿದ್ದರು .ನಾನು ಮತ್ತು ಅವರು ಯು ಪಿ ಎಸ ಸಿ ಒಂದೇ ಬ್ಯಾಚ್ ,ವಯಸ್ಸಿನಲ್ಲಿ ನನಗಿಂತ ತುಂಬಾ ಕಿರಿಯರು .ಅವರು ಮೈಸೂರಿನ ರೈಲ್ವೆ ಆಸ್ಪತ್ರೆ ಸೇರಿದಾಗಲೇ ಪರಿಚಯ .ಇಬ್ಬರೂ  ಬ್ಯಾಚಲರ್ .ಸಾಯಂಕಾಲ ಕೆಲಸ ಮುಗಿಸಿ ಒಂಟಿಕೊಪ್ಪನಿಂದ ಸರಸ್ವತಿ ಪುರಂ ನ ಅವರ ಮನೆಗೆ ನಡೆದುಕೊಂಡು ಹೋಗುವುದು .ದಾರಿಯಲ್ಲಿ ಕುವೆಂಪು ಮನೆ ಇತ್ತು .ಭಯ ಭಕ್ತಿಯಿಂದ ಅವರ ಮನೆಯತ್ತ ದೃಷ್ಟಿ ಹಾಕಿ ಹೋಗುತ್ತಿದ್ದೆವು .ಪ್ರಸನ್ನರ ಮನೆಯಲ್ಲಿ  ಅವರ ತಂದೆ ತಾಯಿ ಮಾತ್ರ .ಮಗನ ಸಹೋದ್ಯೋಗಿ ಬಂದರು ಎಂಬ ಖುಷಿಯಲ್ಲಿ  ತರಾತುರಿಯಲ್ಲಿ  ಸ್ಪೆಷಲ್ ಏನಾದರೂ ಮಾಡಿ ಬಡಿಸುವರು .ಅವರ ತಂದೆ ಅಗಾಧ ಆಂಗ್ಲ ಭಾಷಾ ಜ್ಞಾನ ಇದ್ದವರು .ಇಂಗ್ಲಿಷ್ ನಲ್ಲಿ  ಬಹುತೇಕ ಸಂಭಾಷಣೆ ಮಾಡುವರು .ಸ್ನೇಹಮಯಿ ಹೃದಯಗಳ ನೆನಪು ಈಗಲೂ ಬರುತ್ತದೆ . 

  ಮುಂದೆ ನನಗೆ ಸಕಲೇಶಪುರ ,ಪುತ್ತೂರಿಗೆ ವರ್ಗ ಆಯಿತು .ಅಲ್ಲಿಯೂ ನಾನು ರಜೆ ಹಾಕಿದಾಗ ರಿಲೀವಿಂಗ್ ಡ್ಯೂಟಿ ಗೆ ಪ್ರಸನ್ನ ಬರುತ್ತಿದ್ದರು .ಪುತ್ತೂರಿಗೆ ಬಂದರೆ ನನ್ನ ಬಂಧುಗಳ ಮನೆಗೆ ಬರುವರು .ಹಾಗೆ ನನ್ನ ಬಂಧುಗಳಿಗೂ ಪರಿಚಿತ .. ಮುಂದೆ ಅವರು ಸೂಕ್ಷ್ಮಾಣು ಜೀವ ಶಾಸ್ತ್ರ ದಲ್ಲಿ  ಪಿ ಜಿ ಮಾಡಲು ರಜೆ ಹಾಕಿ ಬೆಂಗಳೂರು ವೈದ್ಯಕೀಯ ಕೊಲೆಜ್ ಸೇರಿದರು .ಆಮೇಲೆ ಪ್ರಸಿದ್ಧ ಪೆರಂಬೂರ್ ರೈಲ್ವೆ ಆಸ್ಫತ್ರೆಗೆ ಸೇರಿದವರು ದಕ್ಷಿಣ ರೈಲ್ವೆ ವೈದ್ಯಕೀಯ ವಿಭಾಗ ಮುಖ್ಯಸ್ಥ ರ ಹುದ್ದೆಗೆ ಏರಿ ಪ್ರಸ್ತುತ  ದಕ್ಷಿಣ ಮಧ್ಯ ರೈಲ್ವೆ ಯ ಅದೇ ಹುದ್ದೆಯಲ್ಲಿ ಹೈದರಾಬಾದಿನಲ್ಲಿ ಇರುವರು . 

                                      

ಸರಕಾರಿ ಸೇವೆಗೆ ಬೇಕಾದ ತಾಳ್ಮೆ ,ಸಹನೆ ಮತ್ತು ಕ್ರಿಯಾಶೀಲತೆ  ಅವರಲ್ಲಿ ಇದೆ

                   ನನ್ನ ಚೆನ್ನೈ ದಿನಗಳಲ್ಲಿ ಅವರು ಜೊತೆ ಇದ್ದುದು ನನ್ನ ಭಾಗ್ಯ .ನಾನು ,ಅವರು  ಡಾ ಕೇಶವ್ ಮತ್ತು ಪ್ರಸನ್ನ ಅವರ ಮಿತ್ರರಾದ ಪ್ರದೀಪ್ (-ಇವರು ಓ ಏನ್ ಜಿ ಸಿ ರಲ್ಲಿ ಇಂಜಿನಿಯರ್ ಆಗಿದ್ದವರು ಮುಂದೆ ಕೆಲವೇ ವರ್ಷಗಳಲ್ಲಿ ಬಾಂಬೆ ಹೈ ಅಗ್ನಿ ದುರಂತದಲ್ಲಿ ಕರ್ತವ್ಯದ ವೇಳೆ ಮೃತ ಪಟ್ಟರು ) ಸಾಯಂಕಾಲ ಮಿತ್ರ ಮಂಡಳಿ ನಡೆಸುತ್ತಿದ್ದೆವು .ಆಗ ಹರ್ಷದ್ ಮೆಹತಾ ಏರು ಕಾಲ .ಶೇರ್ ಮಾರ್ಕೆಟ್ ಬಗ್ಗೆ ಚರ್ಚೆ ಆಗುತ್ತಿತ್ತು .ಪ್ರಸನ್ನ ಅವರಿಗೆ ಈ ವಿಷಯದಲ್ಲಿ ಅಷ್ಟು ತಾತ್ಪರ್ಯ ಇರಲಿಲ್ಲ .ನಮ್ಮಲ್ಲೇನೂ  ಹೂಡಿಕೆ ಮಾಡಲು ಭಾರಿ ನಿಕ್ಷೇಪ ಇರಲಿಲ್ಲ .ನನ್ನ  ಎರಡೂವರೆ  ಸಾವಿರ ಇತ್ತ್ತೋ ಏನೋ ?ಆದರೂ ಒಂದು ಮಾತು ಸತ್ಯ .ಹರ್ಷದ್ ಮೆಹ್ತಾ ಏನು ಗೋಲ್ಮಾಲ್ ಮಾಡಿದರೂ ಸಾಮಾನ್ಯ ಭಾರತೀಯರಲ್ಲಿ ವಿತ್ತೀಯ ಹೂಡಿಕೆ ಬಗ್ಗೆ ಆಸಕ್ತಿ ಹುಟ್ಟಿಸಿದ್ದು ಸತ್ಯ .ಆಸ್ಪತ್ರೆಯ ಆಗು ಹೋಗುಗಳು ನಗರದ ವಿದ್ಯಮಾನಗಳು ಚರ್ಚೆಯ  ವಿಷಯ ಆಗಿರುತ್ತಿದ್ದವು . 

ಪ್ರಸನ್ನ ಅವರ ವಿವಾಹ ನಾವು ಚೆನ್ನೈ ನಲ್ಲಿ ಇರುವಾಗ ಆಯಿತು .ತಿರುಚಿನಾಪಳ್ಳಿ  ಯಿಂದ  ಹುಡುಗಿ .ಆರ್ಕಿಟೆಕ್ಟ್ ಆಗಿದ್ದವರು,ತಂದೆ ವೈದ್ಯರು ,ಕನ್ನಡಿಗರು. ನಾವೆಲ್ಲ ಮನೆ ಮದುವೆ ಎಂದೇ ತಿರುಚಿಗೆ ದಿಬ್ಬಣದಲ್ಲಿ ತೆರಳಿ ಸಂಭ್ರಮಿಸಿದೆವು .. ಪತ್ನಿ ಅಪರ್ಣಾ ಅವರೂ ಸ್ನೇಹ ಜೀವಿ .ನಾವು  ಮುಂದೆ ಚೆನ್ನೈ ಗೆ ತೆರಳಿದಾಗ ಅವರ ಮನೆಯಲ್ಲಿಯೇ  ಠಿಕಾಣಿ . 

                                   



ನನ್ನ ಮಗನಿಗೆ  ಪ್ರಸನ್ನ ಅಚ್ಚು ಮೆಚ್ಚಿನ ಫ್ರೆಂಡ್ ..ಅವನನ್ನು ನಮ್ಮಂತೆಯೇ ಚಾಮಿ ಎಂದೇ  ಕರೆಯುತ್ತಿದ್ದರು ಮತ್ತು ಈಗಲೂ ಕರೆಯುವರು .ಪ್ರಸನ್ನ ಅವರಿಗೆ  ಬೀದಿ ನಾಯಿಗಳೆಂದರೆ  ಬಹಳ ಪ್ರೀತಿ .ಎಲ್ಲಿ ಕಂಡರೂ ಕರೆಯುವರು .ಅವರ ಬಳಿ ಒಂದು ಸ್ಕೂಟರ್ ಮತ್ತು ನನ್ನ ಬಳಿ ಬೈಕ್ ಇತ್ತು .ಈ ದ್ವಿಚಕ್ರದಲ್ಲಿ ನಾವು ಚೆನ್ನೈ ಉದ್ದಗಲ ಸುತ್ತಿದ್ದೆವು. 

  ರೈಲ್ವೆ ಆಸ್ಪತ್ರೆಯ ಮೈಕ್ರೋಬಯಾಲಜಿ  ವಿಭಾಗವನ್ನು ಅಭಿವೃದ್ಧಿ ಪಡಿಸಿದ ಶ್ರೇಯಸ್ಸು  ಅವರಿಗೆ ಸಲ್ಲಬೇಕು ..ಇದರ ಜತೆ  ತುರ್ತು ಚಿಕಿತ್ಸಾ ವಿಭಾಗದ ಡ್ಯೂಟಿ ಹಲವು ವರ್ಷ ನಿಭಾಯಿಯಿದ್ದಾರೆ .ಅದು ಸಾಲದೆಂದು  ಆಸ್ಪತ್ರೆಯ ಔಷಧಿ ಭಂಡಾರದ ಮೇಲುಸ್ತುವಾರಿ ಅವರಿಗೆ ಹೊರಿಸಿದ್ದರು .ಸಾಕಷ್ಟು ಹೊರೆ ಎನಿಸಿದ್ದಿರಬಹುದಾದರೂ ಮುಂದೆ ಅವರು ಉನ್ನತ ಹುದ್ದೆ ಗಳಿಗೆ ಹೋಗುವಾಗ ಅನುಭವ ಅವರಿಗೆ ಉಪಯೋಗ ಆಗಿರಬಹುದು .ಅವರು  ಬೆರಳಚ್ಚು ಗಾರರೂ ಆಗಿದ್ದು ನನ್ನ ಪಿ ಜಿ ಪ್ರಬಂಧವನ್ನು  ಟೈಪ್ ಅವರೇ ಮಾಡಿಕೊಟ್ಟಿದ್ದರು . 

ಮಗಳು  ಭಾವನಾ  , ಮಕ್ಕಳ ರೋಗ ದಲ್ಲಿ ಉನ್ನತ ವ್ಯಾಸಂಗ  ಮಾಡುತ್ತಿರುವಳು . 

ಈಗ ಚೆನ್ನೈ ನಲ್ಲಿ ಪ್ರಸನ್ನ ಇಲ್ಲದಿರುವುದರಿಂದ ಆ ನಗರ ನಮಗೆ ತಾಯಿ ಇಲ್ಲದ ತವರು ಮನೆ ಆಗಿದೆ

          ಡಾ  ಕೇಶವ ಪ್ರಹ್ಲಾದ ರಾಯ್ಚುರ್ಕರ್ 

                                


ಡಾ ಕೇಶವ್ ನಾವು ಮೈಸೂರಿನಲ್ಲಿ ಇದ್ದಾಗ ಹರಿಹರ  ರೈಲ್ವೆ ಡಿಸ್ಪೆನ್ಸರಿ ಯಲ್ಲಿ ಇದ್ದರು .ನಾನು ೧೯೮೪ ರ ಅಕ್ಟೋಬರ್ ಅಂತ್ಯಕ್ಕೆ ಅವರ  ಅವರ ರಜಾ ಬದಲಿ ವೈದ್ಯನಾಗಿ ಹೋಗಿದ್ದೆ .ನಾನು ಅಲ್ಲಿರುವಾಗಲೇ ಇಂದಿರಾ ಗಾಂಧಿಯವರ ಹತ್ಯೆ ನಡೆದು ಎಲ್ಲಾ ಬಂಧ್ ಆಗಿತ್ತು .ಅವರ ಫಾರ್ಮಸಿಸ್ಟ್ ದೇವಣ್ಣ ಎಂಬವುವರು ನನ್ನ ಊಟ ಉಪಚಾರ ವ್ಯತ್ಯಯ ಆಗದಂತೆ ನೋಡಿಕೊಂಡರು .ದೇವಣ್ಣ ಯಾವಾಗಲೂ ನಗು ಮುಖ ಮತ್ತು ಸರ್ವ ವ್ಯವಹಾರ ಚತುರರು .ಹರಿಹರಕ್ಕೆ  ನಾನು ತೆರಳುವ ಟ್ರೈನಿನಲ್ಲಿ ಹಾ ಮಾ ನಾಯಕ್ ನಮ್ಮ ಕಂಪಾರ್ಟ್ಮೆಂಟ್ ನಲ್ಲಿ ಇದ್ದರು .ಅವರು ಗುಲ್ಬರ್ಗ ವಿಶ್ವವಿದ್ಯಾಲಯದ  ಉಪ ಕುಲಪತಿ ಯಾಗಿ ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದರು .. 

               ಕೇಶವ್ ಮುಂದೆ ರೇಡಿಯಾಲಜಿ ಯಲ್ಲಿ ಉನ್ನತ ವ್ಯಾಸಂಗ ಮಾಡಿ ಪೆರಂಬೂರಿಗೆ ಬಂದರು ,ಅವರ ಪತ್ನಿ ವೈದ್ಯೆ ಪ್ಯಾಥೋಲಾಜಿಸ್ಟ್ .ಇಬ್ಬರೂ ಸರಳ ಸುಸಂಸ್ಕೃತ  ಜೀವಿಗಳು .ನಾನು ಚೆನ್ನೈಗೆ ಬಂದಾಗ ಅವರ ಕುಟುಂಬ ಇನ್ನೂ  ಬಂದಿರಲಿಲ್ಲ .ಅವರ ಬಳಿ ಒಂದು ಫಿಯಟ್   ಕಾರ್ ಇತ್ತು .ನಮ್ಮ ಓಡಾಟ ಅದರಲ್ಲಿ 

.ಮಹಾಬಲಿಪುರಂ , ವಿ ಜಿ ಪಿ ಬೀಚ್ ಇತ್ಯಾದಿ ಸುತ್ತಿದೆವು .ಕೇಶವ್ ಸಮಾಧಾನಿ ,ಕೋಪ ಬರುವುದು ಅಪರೂಪ .ಮುಂದೆ ಅವರ ಕುಟುಂಬ ಚೆನ್ನೈಗೆ ಬಂದಾಗ ಅವರ ಮನೆಯ ಊಟೋಪಚಾರ ಸ್ನೇಹ ಆನಂದಿಸಿದ್ದೇವೆ  .ಕೇಶವ್ ರೈಲ್ವೆ ಗೆ ರಾಜೀನಾಮೆ ಕೊಟ್ಟು ಮೈಸೂರಿಗೆ  ಖಾಸಗಿ  ಆರಂಭಿಸಿದರು .ಅವರು ಚೆನ್ನೈ ಬಿಟ್ಟಾಗ ಸಂಕಟ ಆದುದು ಸಹಜ  .ಪ್ರಸನ್ನ ಮದುವೆ ಸಮಯ ಅವರು ಇದ್ದರು .ಈಗ  ಮೈಸೂರಿನಲ್ಲಿ  ಸ್ವಂತ  diagnostic ಸೆಂಟರ್ ನಡೆಸುತ್ತಿದ್ದು  ಮಕ್ಕಳು ಉನ್ನತ  ವೈದ್ಯಕೀಯ ತಜ್ಞರಾಗಿರುವರು .ತಂಪು  ಸಮಯದಲ್ಲಿ    ಅವರನ್ನು  ನೆನೆಸಿಕೊಳ್ಳುವೆನು  . 

                          ಬಾಲಸುಬ್ರಹ್ಮಣ್ಯಂ 

ಇವರ ಬಗ್ಗೆ ಹಿಂದಿನ ಬ್ಲಾಗ್  ನಲ್ಲಿ  ಬರೆದಿರುವೆನು ..ಇವರು ನಮ್ಮ ವಿಭಾಗದಲ್ಲಿ ಆಫೀಸ್ ನಿರ್ವಹಣೆ ಮಾಡುತ್ತಿದ್ದರು .ಅವಿವಾಹಿತ .ನಮಗೆ ಚೆನ್ನೈ ಯ ಭೂಗೋಳ ,ಸರಕಾರಿ ಕಚೇರಿಗಳು ಮತ್ತು ರೈಲ್ವೆ  ಕಟ್ಟಳೆಗಳ ಬಗ್ಗೆ  ಸದಾ  ಸಲಹೆ ಸೂಚನೆ ಕೊಡುತ್ತಿದ್ದರು .ನಿಜ ಅರ್ಥದಲ್ಲಿ ಹಿತೈಷಿ . ಆಸ್ಪತ್ರೆಯ ಎಲ್ಲಾ ವಿಭಾಗದ ನೌಕರರರು ಅವರ ಅನುಭವ ಮತ್ತು ಸೇವಾ ಮನೋಭಾವದ ಲಾಭ ಪಡೆಯುತ್ತಿದ್ದರು .ಈಗ ಅವರು ಇಲ್ಲ .ಅವರ ನೆನಪು ಹಸಿರಾಗಿದೆ 

                       

            ಶಶಿಧರನ್

ಇವರ ಬಗ್ಗೆ ಹಿಂದೆ ಬರೆದಿದ್ದೇನೆ .ರೈಲ್ವೆ ವಿದ್ಯುತ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು .ನನ್ನ ಮಗನನ್ನು ಆವಡಿ ಕೇಂದ್ರೀಯ ವಿದ್ಯಾಲಯ ಕ್ಕೆ ಸೇರಿಸುವಲ್ಲಿ ಮತ್ತು ವೈಷ್ಣವಿ ನಗರದ ವಾಸದಲ್ಲಿ ಅವರು  ಮತ್ತು ಅವರ ಕುಟುಂಬ ತುಂಬಾ ಸಹಾಯ ಮಾಡಿದರು .ಅವರ ಮಕ್ಕಳು   ಕಣ್ಣ ಮತ್ತು ಕುಟ್ಟ(ಕರೆಯುತ್ತಿದ್ದ ಅಡ್ಡ ಹೆಸರು ) ನಮ್ಮ ಮಗನ ಸಹಚರರು .

                          

ಈಗ ನಿವೃತ್ತಿ ಜೀವನ ಕೇರಳದ ಚಾಲಕ್ಕುಡಿಯಲ್ಲಿ ನಡೆಸುತ್ತಿರುವರು . 

ಇದಲ್ಲದೆ   ವೈಷ್ಣವಿ ನಗರದಲ್ಲಿ ಶಂಕನಾ ರಾಯಣನ್ ,ಸರಸ್ವತಿ ದಂಪತಿಗಳು  ಅವರ ಮಗಳು  ಅನಿತಾ ,ಅನಿತಾಳ ದೊಡ್ಡಮ್ಮನ ಮಗಳು ವನಿತಾ ನಮಗೆ ಬಹಳ ಸಹಾಯ ಮಾಡಿರುವರು . ಪರ್ವತ ಆಂಟಿ ಎಂಬ ಪಕ್ಕದ ಮನೆ ಹಿರಿಯರು ಕುಟುಂಬ   ಊರಿಗೆ ಹೋಗಿದ್ದಾಗ  ಕರೆದು ಊಟ   ಹಾಕಿರುವರು .ಅವರನ್ನೆಲ್ಲ ನೆನೆಸಿಕೊಳ್ಳುತ್ತೇನೆ .


ಚೆನ್ನೈ ಯಲ್ಲಿ ನಾವು ಇದ್ದ ವೇಳೆ ಜಯಲಲಿತಾ ಮುಖ್ಯ ಮಂತ್ರಿ .ನಾವು ನಗರಕ್ಕೆ ಕಾಲು ಇಟ್ಟಾಗ  ಕಾವೇರಿ ಗಲಬೆ ಜೋರಾಗಿತ್ತು .ಆದರೂ ಆಕೆ ಕನ್ನಡಿಗರಿಗೆ ಮತ್ತು ಅವರ ವ್ಯವಹಾರಕ್ಕೆ ಹಾನಿ ಆಗದಂತೆ ನೋಡಿಕೊಂಡರು .ಮೊದ ಮೊದಲು ಜನಪ್ರಿಯ ರಾಗಿದ್ದ ಅವರು  ಕ್ರಮೇಣ  ಜನರಿಂದ ದೂರವಾಗ ತೊಡಗಿದರು .ವೀರಪ್ಪನ್ ಅಟ್ಟಹಾಸ ನಡೆಯುತ್ತಿದ್ದ ಸಮಯ .ಈ ವಿಚಾರದಲ್ಲಿ ಅವರು ಕಠಿಣ ಮತ್ತು ಸಮಯೋಚಿತ ವಾಗಿ ನಡೆದು ಕೊಂಡರು.ವಾಲ್ಟರ್ ದೇವಾರಂ ,ರಾಂಬೊ ಗೋಪಾಲಕೃಷ್ಣನ್  ಅವರಂತ ದಕ್ಷ  ಪೋಲೀಸು ಅಧಿಕಾರಿಗಳಿಗೆ (ಆಮೇಲೆ ವಿಜಯಕುಮಾರ್) ಪೂರ್ಣ ಸ್ವಾತಂತ್ರ್ಯ ಕೊಟ್ಟರು .ನಕ್ಕಿರನ್ ಪತ್ರಿಕೆಯ ಸಂಪಾದಕ ಗೋಪಾಲನ್ ವೀರಪ್ಪನ್ ಭೇಟಿ ಮಾಡಿ ಬಂದು ಡಿ ಎಂ ಕೆ ಯ ಮುಖವಾಣಿ ಸನ್ ಟಿ ವಿ ಯಲ್ಲಿ ಅದನ್ನು ಪ್ರಚಾರ ಮಾಡಿದರು .ಏನೇ ಆದರೂ ಜಯಲಲಿತಾ ವೀರಪ್ಪನ್ ಯಾವ ಬೇಡಿಕೆಗಳಿಗೂ ಸೊಪ್ಪು ಹಾಕಲಿಲ್ಲ ಎಂಬುದು ಗಮನಾರ್ಹ .ಜಯಲಲಿತಾ ಅವರ ದತ್ತು ಪುತ್ರ ಸುಧಾಕರನ್ ಅವರ  ಭಾರೀ ಪ್ರಚಾರದ ವಿವಾಹ ಮತ್ತು ಅದರ ಲ್ಲಿ ನಡೆದ ಸಂಪತ್ತು ಮತ್ತು ಅಧಿಕಾರದ ಪ್ರದರ್ಶನ ಜನ ಮೆಚ್ಚಲಿಲ್ಲ .ವಿಧಾನ ಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷದ ಪ್ರಧಾನ ಬಣವೊಂದು ಜಿ ಕೆ ಮೂಪನಾರ್ ನೇತ್ರತ್ವದಲ್ಲಿ ಪಕ್ಷದಿಂದ ಸಿಡಿದು ತಮಿಳು ಮಾನಿಲ ಕಾಂಗ್ರೆಸ್ ಪಕ್ಷ ಸ್ಥಾಪಿಸಿ  ಡಿ ಎಂ ಕೆ ಪಕ್ಷಕ್ಕೆ ಬೆಂಬಲ ಘೋಷಿಸಿತು .ಕಾಂಗ್ರೆಸ್ ಪಕ್ಷದ ಭೀಷ್ಮ  ಸಿ ಸುಬ್ರಹ್ಮಣ್ಯಂ ಕೂಡ ಮೂಪನಾರ್ ಗೆ ಬೆಂಬಲ ಸೂಚಿಸಿದರು .ಪಿ ಚಿದಂಬರಂ ಟಿ ಎಂ ಸಿ ಸೇರಿದರು .ಪಿ ವಿ ನರಸಿಂಹ ರಾವು ಪ್ರಧಾನಿ ಆಗಿದ್ದ ಕಾಲ .ಅವರು ಜಯಲಲಿತಾ ಗೆ ಬೆಂಬಲ ಮುಂದುವರಿಸಿದರು .ನಡೆದ ಚುನಾವಣೆಯಲ್ಲಿ ಜಯಲಲಿತಾ ಪಕ್ಷ ಧೂಳಿಪಟ ಆಯಿತು .ಆಕೆ ಸ್ಪರ್ದಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತರು .ಮುಂದೆ ಕರುಣಾನಿಧಿ ಮುಖ್ಯ ಮಂತ್ರಿ ಆಗಿ ಜಯಲಲಿತಾ ಮೇಲೆ ಬ್ರಷ್ಟಾಚಾರ ಕೇಸ್ ಹಾಕಿ ಬಂದಿಸಿ ದರು .ಅದೇ ಕೇಸ್ ದಶಕಗಳ ಕಾಲ ಉದ್ದ ಎಳೆದು ಕೊನೆಗೆ ಸುಪ್ರೀಂ ಕೋರ್ಟ್ ನ ತೀರ್ಪು ಬರುವಾಗ ಆಕೆ ಇಹ ಲೋಕ ತ್ಯಜಿಸಿದ್ದರು ಮತ್ತು ಜೈಲ್ ವಾಸದ ಕಳಂಕದಿಂದ ಕೂಡ .ಇದರ ನಡುವೆ ಆಕೆ ಪುನಃ ಮುಖ್ಯ ಮಂತ್ರಿ ಆಗಿ ಕರುಣಾನಿಧಿಯವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದೂ ನಡೆಯಿತು .ಎರಡೂ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಮಣ್ಣೆರಚಿದರೂ ಜನರಿಗೆ ಎರಡೂ ಪಕ್ಷ ಗಳ ಕೈ ನಿರ್ಮಲ ಇಲ್ಲ ಎಂಬುದು ನಿಚ್ಚಳ ವಾಗಿ ಕಾಣುತ್ತಿತ್ತು .

ಪೂರ್ವ ಕರಾವಳಿ ಯಲ್ಲಿ ಚಂಡ ಮಾರುತ ಹಾವಳಿ ಸಾಮಾನ್ಯ .ನಾನು ಇದ್ದ ಒಂದು ವರ್ಷ ಚೆನ್ನೈ ನಗರದಲ್ಲಿ ಅದರ ಅಟಾಟೋಪ ನೋಡಿದೆನು .ರಾತ್ರಿ ಮಲಗಿದ್ದವರು ಎದ್ದು ನೋಡುವಾಗ  ಎಲ್ಲೆಲ್ಲೂ ಜಲ ಸಾಗರ ,ಮರಗಳು ಧರಾಶಾಯಿ.ರೈಲ್ವೇ ಟ್ರಾಕ್ ನಲ್ಲಿ  ಮರಗಳು ಕಂಬಗಳು ಬಿದ್ದು ಅಸ್ತವ್ಯಸ್ತ .ನಾನು ಹೇಗೋ ಕಷ್ಟ ದಿಂದ ಆಸ್ಪತ್ರೆ ಸೇರಿದೆನು.

ದೀಪಾವಳಿ ಮತ್ತು ಪೊಂಗಲ್ ತಮಿಳು ನಾಡಿನ ಭಾರೀ ಸಂಭ್ರಮ ದಿಂದ  ಆಚರಿಸಲ್ಪಡುವ ಹಬ್ಬಗಳು .ದೀಪಾವಳಿ ಸಮಯ ಅಂಗಡಿಗಳಲ್ಲಿ ನೂಕು ನುಗ್ಗಲು .ಹೊಸ ಬಟ್ಟೆ ಕೊಳ್ಳುವರು .ಪಟಾಕಿ ತಯಾರಿಕೆಯ ರಾಜ್ಯ ತಾನೇ .ಪೊಂಗಲ್ ಹಬ್ಬವನ್ನು .ಬೋಗಿ ,ಸೂರ್ಯ ,ಮಾಟ್ಟು  ಮತ್ತು ಕಾಣಾ ಪೊಂಗಲ್ ಎಂದು ವಿಸ್ತೃತ ವಾಗಿ ಆಚರಣೆ .ಭೋಗಿ ದಿನ ಇಡೀ ನಗರವೇ ಹೊಗೆಯಿಂದ ಆವೃತ್ತವಾಗುವುದು ,ವಿಮಾನ ಸಂಚಾರಕ್ಕೆ ಅಡಚಣೆಯಾದುದೂ ಇದೆ .ಹಬ್ಬಗಳ ಆಚರಣೆಯಲ್ಲಿ ತಮಿಳುನಾಡು ಮುಂದು ,ಹೊಸತಾಗಿ ಮದುವೆ ಆದವರಿಗೆ ತಲೈ ದೀಪಾವಳಿ ,ತಲೈ ಪೊಂಗಲ್ ಎಂಬ ಸಡಗರ .ಹಬ್ಬ ಬಂದಾಗ ಸೀರೆ ತೆಗೆದು ಕೊಂಡು ಆಯಿತೇ ಎಂದು ಅಕ್ಕ ಪಕ್ಕದವರು ಕೇಳುವರು . 

ಮನೆಯ ಮುಂದೆ ಸಾರಿಸಿ ರಂಗೋಲಿ ಹಾಕುವುದು (ಕೋಲಂ )ಎಲ್ಲಾ  ಮನೆಗಳ ಎದುರು ಸಾಮಾನ್ಯ .. 

ಆಗ ಇಂಡಿಯನ್ ಬ್ಯಾಂಕ್ ನ ಛೇರ್ಮನ್ ಗೋಪಲಕೃಷ್ಣನ್ ಎಂಬುವರು ಇದ್ದರು .ಎಲ್ಲಿ ಉದ್ಘಾಟನೆ ,ವಾರ್ಷಿಕೋತ್ಸವ ಇದ್ದರೂ ಮುಖ್ಯ ಅಥಿತಿ ಯಾಗಿ ಕಾಣಿಸಿ ಕೊಳ್ಳುತ್ತಿದ್ದ ಭಾರೀ ಬೇಡಿಕೆಯ ವ್ಯಕ್ತಿ .ಅವರನ್ನು ಕುತ್ತು ವಿಳಕ್ಕು(ಸಮಾರಂಭದಲ್ಲಿ ಬೆಳಗುವ ದೀಪ ) ಗೋಪಾಲ ಕೃಷ್ಣನ್ ಎಂದೇ ಕರೆಯುತ್ತಿದ್ದರು .,ಪತ್ರಿಕೆಗಳಲ್ಲಿ ಪರಿಚಿತ ಮುಖ ,ಮುಂದೆ ಹಗರಣಗಲ್ಲಿ ಸಿಕ್ಕಿ ಹಾಕಿ ಕೊಂಡರು .ಇನ್ನೊಂದು ನೆನಪಿಗೆ ಬರುವುದು ಬಾಲು  ಜುವೆಲ್ಲರಿ  ಬಾಲಸುಬ್ರಹ್ಮಣ್ಯಂ .,ಪತ್ರಿಕೆ ಮತ್ತು ಟಿ ವಿ ಗಳಲ್ಲಿ ಕೈಮುಗಿದು ನಿಂತ ಮುಖ ಮತ್ತು ರೇಡಿಯೋ ದಲ್ಲಿ ಆಗಾಗ ಬರುತ್ತಿದ್ದ ಜಾಹಿರಾತು .ಅವರು ಮುಂದೆ ಖಾದ್ಯ ತೈಲ ಕಾರ್ಖಾನೆ   ಕೂಡ  ಆರಂಭಿಸಿ ಉದ್ಯಮದಲ್ಲಿ ಸೋತರು .. 

ಟಿ ವಿ ಯಲ್ಲಿ ಬರುತ್ತಿದ್ದ ವಸಂತ್ ಅಂಡ್ ಕೋ ದ  ತಿರುಗು ಕುರ್ಚಿಯ ವಸಂತ್ (ಮೊನ್ನೆ ಮೊನ್ನೆ ತೀರಿ ಕೊಂಡರು -ಸಂಸದ ರಾಗಿದ್ದರು ),ನರಸು ಕಾಫಿ ಯ ಭೇಷ್ ಭೇಷ್ ಅನ್ನುತ್ತಿದ್ದ ಅಜ್ಜ ,ಮಾಂಬಲಂ  ರೈಲ್ವೆ ನಿಲ್ದಾಣ ಬಳಿಯ ಶರವಣ ಸ್ಟೋರ್ ಜಾಹಿರಾತು ಇನ್ನೂ ಗುನುಗುತ್ತಿವೆ . ಕಡಿತದ ಮಾರಾಟಕ್ಕೆ ತಳ್ಳುಪಡಿ ಎನ್ನುವರು .ಪುತ್ತಾಂಡ್ ,ದೀಪಾವಳಿ ,ಪೊಂಗಲ್ ತಳ್ಳುಪಡಿ ವ್ಯಾಪಾರಕ್ಕೆ ಜನ ಮುಗಿ ಬೀಳುವರು ,ಖರೀದಿಸಿ  ಆನಂದಿಸುವರು . 

(ಈ ಸರಣಿ ಇಲ್ಲಿಗೆ ಮುಗಿಯಿತು )

 

 

 





ಶುಕ್ರವಾರ, ಅಕ್ಟೋಬರ್ 16, 2020

ಚೆನ್ನೈ ದಿನಗಳು 4(ಪೆರಂಬೂರು ರೈಲ್ವೇ ಆಸ್ಪತ್ರೆ )

 ಇನ್ನು ನನ್ನ ಮುಖ್ಯ ಕಾರ್ಯ ಭೂಮಿಕೆ ರೈಲ್ವೆ ಆಸ್ಪತ್ರೆ ಪೆರಂಬೂರಿಗೆ ಬರೋಣ .ಇದು ಪೆರಂಬೂರ್  ಕ್ಯಾರಿಯೇಜ್ ವರ್ಕ್ಸ್ ನ ದಕ್ಷಿಣಕ್ಕೆ ಅಯ್ಯನಾವರಂ  ನಲ್ಲಿ ಇತ್ತು .ಆದರೂ ಪೆರಂಬೂರು ರೈಲ್ವೆ ಆಸ್ಪತ್ರೆ ಎಂದೇ ಪ್ರಸಿದ್ಧ .ಈ ಆಸ್ಪತ್ರೆಯಲ್ಲಿ ಡಾ ಟಿ ಜೆ ಚೆರಿಯನ್  ಎಂಬ  ಖ್ಯಾತ ಹೃದ್ರೋಗ ತಜ್ಞರು ಇದ್ದರು .ಅವರು ಈ ಆಸ್ಪತ್ರೆ ಹೃದ್ರೋಗ ಕಾಯಿಲೆಗಳ  ದಕ್ಷಿಣ ಭಾರತದ ಪಥ ದರ್ಶಕ ಕೇಂದ್ರ ವಾಗುವಂತೆ ಮಾಡಿದರಲ್ಲದೆ ಆಸ್ಪತ್ರೆಯಲ್ಲಿ ಕಾರ್ಯ ಶಿಸ್ತು ಮತ್ತು ಕ್ಷಮತೆ ಯ ಒಂದು ಪರಂಪರೆಯನ್ನು ಹುಟ್ಟು ಹಾಕಿದರು..  ಕೆಲಸ ಗಳ್ಳರಿಗೆ ಇಲ್ಲಿ ಬದುಕಲೇ ಸಾಧ್ಯವಿಲ್ಲ ಎಂಬ ಪ್ರತೀತಿ ಇತ್ತು . 

                            
                                                  ನಾನು ೧೯೮೪ ರಿಂದ  ೧೯೯೨ ರ ವರೆಗೆ ಕೆಲವು ದಿನಗಳನ್ನು ಮೈಸೂರು ರೈಲ್ವೆ ಆಸ್ಪತ್ರೆಯಲ್ಲಿ ಕಳೆದುದನ್ನು ಬಿಟ್ಟರೆ ಬಹುಪಾಲು ಸೇವೆ  ಡಿಸ್ಪೆನ್ಸರಿ ಯಲ್ಲಿ ಆಗಿತ್ತು ..ನಾನು ಈ ಆಸ್ಪತ್ರೆಯ ಮೆಡಿಸಿನ್ ವಿಭಾಗ ಕ್ಕೆ ಸೇರಿಕೊಂಡೆನು ವಿಭಾಗದ ಮುಖ್ಯಸ್ಥರು ಡಾ ಜಿ ಸಿ ರಾಜು .ಸಜ್ಜನರು ,ಮೃದುಭಾಷಿ  ಮತ್ತು ಸಂಕೋಚ ಸ್ವಭಾವದವರು .ವಿಭಾಗದಲ್ಲಿ ಅವರಿಗೆ ಸಹಕರಿಸಲು  ರೈಲ್ವೆ ವೈದ್ಯಕೀಯ ಸೇವೆಯ ವೈದ್ಯರು ಮತ್ತು ರೆಸಿಡೆಂಟ್ ವೈದ್ಯರು ಇದ್ದರು . 

                              

                                  ಡಾ ಜಿ ಸಿ ರಾಜು 

ದಕ್ಷಿಣ ರೈಲ್ವೆ ಯಲ್ಲಿ ಡಾ ಯೋಗಿ ಮಲ್ಹೋತ್ರಾ  ಎಂಬ ಮುಖ್ಯ ವೈದ್ಯಾಧಿಕಾರಿ ಇದ್ದರು. 

ಅವರು  ಆಸ್ಪತ್ರೆಯಲ್ಲಿ  ಸ್ನಾತಕೋತ್ತರ ತರಬೇತಿ ಪ್ರಾರಂಭಿಸುವಲ್ಲಿ ಆಸಕ್ತಿ ವಹಿಸಿ 

ನ್ಯಾಷನಲ್ ಬೋರ್ಡ್ ಒಫ್  ಎಕ್ಸಾಮಿನೇಷನ್ಸ್ ಗೆ ನೋಂದಾಯಿತ  ಕೋರ್ಸು ಗಳನ್ನು ಆರಂಭಿಸಿದ್ದರು .ಡಾ ಕೆ ವಿ ತಿರುವೆಂಗಡಂ ,ಡಾ ರಂಗಭಾಷ್ಯಮ್ ರಂತಹ ಮೇಧಾವಿಗಳು  ಇಲ್ಲಿ  ಕಲಿಸಲು ಬರುತ್ತಿದ್ದರು. ನಾನು ಸೇರಿಕೊಂಡ ಮೇಲೆ  ಡಾ ಮದನಗೋಪಾಲನ್ (ಗ್ಯಾಸ್ಟ್ರೋ ಎಂಟೆರೊಲೊಜಿಸ್ಟ್ ),ಡಾ ಸೇತುರಾಮನ್ (ಹೆಮಟೊಲೊಜಿಸ್ಟ್ ),ಡಾ ಪಾರ್ಟಿಕ್ ಯೇಸುಡಿಯನ್ (ಚರ್ಮ ರೋಗ ತಜ್ಞರು ),ಡಾ ಸುಬ್ರಹ್ಮಣ್ಯಂ (ಕ್ಯಾನ್ಸರ್ ತಜ್ಞರು ) ಬರಲಾರಂಭಿಸಿದರು .ಮೇಲೆ ಹೆಸರಿಸಿದವರೆಲ್ಲ  ವೈದ್ಯಕೀಯ ಕ್ಷೇತ್ರದ ದಂತ ಕತೆಗಳು .ಅವರ ಸಾಂಗತ್ಯ ದೊರೆತುದು ನಮ್ಮ ಭಾಗ್ಯ ಸಂತ  ತ್ಯಾಗರಾಜರು ಹಾಡಿದಂತೆ ದೊರಕುನಾ ಇಟು ವಂಟಿ ಸೇವಾ .ಈ ಹಿರಿಯರಿಂದ ನಾವು ಪಡೆದುದೇ ಹೆಚ್ಚು ,ಮಾಡಿದ  ಅವರ ಸೇವೆ ಕಿಂಚಿತ್ . 

    ನಮ್ಮ ವಿಭಾಗದಲ್ಲಿ ಬೆಳಗ್ಗೆ ಏಳು ಮುಕ್ಕಾಲಕ್ಕೆ ಎಲ್ಲರೂ ಹಾಜರು .ಹಾಜರಿ ಪುಸ್ತಕ ,ಫಿಂಗರ್ ಪ್ರಿಂಟ್ ಯಾವುದೂ ಇಲ್ಲ . ಎಂಟರಿಂದ ಒಂಭತ್ತು  ಒಂದು ವೈದ್ಯಕೀಯ ವಿಷಯದ ಬಗ್ಗೆ  ಯಾರಾದರೂ ಒಬ್ಬರು ಮೊದಲೇ ನಿಶ್ಚಯಿದಂತೆ ಮಾತನಾಡುವರು .ಅನಂತರ  ಮುಖ್ಯಸ್ಥರೊಡಗೂಡಿ  ಐ ಸಿ ಯು ಮತ್ತು ಸೆಮಿ ಐ ಸಿ ಯು ರೌಂಡ್ಸ್ .ಆಮೇಲೆ  ಹೊರ ರೋಗಿ ವಿಭಾಗ ಪಾಳಿ ಇರುವವರು ಅಲ್ಲಿಗೆ ತೆರಳಿದರೆ  ಇತರರು ತಮ್ಮ ತಮ್ಮ ವಾರ್ಡ್ ರೌಂಡ್ಸ್ ಮಾಡುವರು .ಗಂಡಸರ ವಿಭಾಗದಲ್ಲಿ ಅಕ್ಯೂಟ್ ಮತ್ತು ಕ್ರಾನಿಕ್ ಎಂಬ ಎರಡು ವರ್ಗ ಇದ್ದುವು ..ಸೆಮಿ ಈ ಸಿ ಯು ,ಅಕ್ಯೂಟ್ ಮತ್ತು ಕ್ರಾನಿಕ್ ಒಬ್ಬೊಬ್ಬ ವೈದ್ಯರ ಸುಪರ್ದಿಯಲ್ಲಿ .ಹೆಂಗಸರ ವಾರ್ಡ್ ನಲ್ಲಿ ಎರಡು ವಿಭಾಗ .ಇಲ್ಲಿ  ಸೇವೆಯ ವೈದ್ಯರು ಮತ್ತು ರೆಸಿಡೆಂಟರು ಎಂಬ ಭೇದ ಇಲ್ಲ .ಎಲ್ಲರಿಗೂ ಒಂದೇ ತರಹ ಕೆಲಸ ಮತ್ತು ಜವಾಬ್ದಾರಿ .ಈ ರೌಂಡ್ಸ್ ಮುಗಿಯುವಾಗ ಮಧ್ಯಾಹ್ನ ೧೨ ಗಂಟೆ ಆಗುವುದು .ಒಬ್ಬರು ನರ್ಸ್ ಮತ್ತು ವಾರ್ಡ್ ಬಾಯ್ ಮಾತ್ರ ನಮ್ಮೊಡನೆ ರೌಂಡ್ಸ್ ನಲ್ಲಿ ಇರುವರು .ಈ ಹೊತ್ತಿನಲ್ಲಿ ಹೊರ ರೋಗ ವಿಭಾಗದಿಂದ  ಅಡ್ಮಿಶನ್ ಗೆ ಬಂದ ರೋಗಿಗಳನ್ನು  ಪರೀಕ್ಷಿಸಿ ಕೇಸ್ ಶೀಟ್ ಆರ್ಡರ್ ಬರೆಯಬೇಕು .ಆ ಮೇಲೆ ವಾರ್ಡ್ ನಲ್ಲಿ  ಬೆನ್ನು ಹುರಿ ನೀರು ತೆಗೆಯುವುದು ,ಹೊಟ್ಟೆ ,ಎದೆ ಯಲ್ಲಿ ನೀರು ಇದ್ದರೆ ತೆಗೆದು ಪರಿಶೋಧನೆಗೆ ಕಳುಹಿಸುವುದು ,ಎದೆಯಲ್ಲಿ ಗಾಳಿ ,ಕೀವು ತುಂಬಿದ್ದವರಿಗೆ ಟ್ಯೂಬ್ ಹಾಕುವುದು ಇತ್ಯಾದಿ ಕೆಲಸ ಸಾಕಷ್ಟು .ಇದರೊಂದಿಗೆ ಕೆಲವು ಕ್ಲಿಷ್ಟ ಕೇಸ್ ಗಳ  ಸ್ಕ್ಯಾನ್ ಮಾಡಿಸಲು ಜತೆಗೆ ತೆರಳಿ ರೇಡಿಯೊಲೊಜಿಸ್ಟ್ ರವರೊಂದಿದೆ  ಸಲಹೆ ಸಮಾಲೋಚನೆ .ರೇಡಿಯಾಲಜಿ ಯಲ್ಲಿ ಹಿರಿಯ ಮಿತ್ರ ಕೇಶವ್ ಮತ್ತು ಕನಕರಾಜು ಇದ್ದರು .ಈರ್ವರೂ ತುಂಬಾ ಒಳ್ಳೆಯವರು ಮತ್ತು ಸಮಾಧಾನದಿಂದ ಚರ್ಚಿಸುತ್ತಿದ್ದರು . ಲ್ಯಾಬ್ ನಲ್ಲಿ ಮಿತ್ರ ಪ್ರಸನ್ನ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ಞ ರಾಗಿ ಇದ್ದುದರಿಂದ ರಿಪೋರ್ಟ್ಸ ಗಳನ್ನು  ಅವರೊಡನೆ ವಿಶ್ಲೇಷಿಸುವುದು ಸುಲಭ ಆಯಿತು 

ಇಷ್ಟೆಲ್ಲ  ಆಗುವಾಗ ಮಧ್ಯಾಹ್ನ ಒಂದೂವರೆ ಗಂಟೆ ಆಗುವುದು .ಊಟದ ಶಾಸ್ತ್ರ ಮಾಡುವುದು .ಮತ್ತೆ ಡಿಸ್ಚಾರ್ಜ್ ಆದ  ರೋಗಿಗಳ  ಡಿಸ್ಚಾರ್ಜ್ ಬರೆಯುವುದು ಮತ್ತು ಅವರಿಗೆ ಸಲಹೆ ಮಾಡುವುದು .ಈ ನಡುವೆ ಐ ಸಿ ಯು ಅಥವಾ ವಾರ್ಡ್ ನಲ್ಲಿ ಯಾರಾದರೂ ಸಡನ್  ಸೀರಿಯಸ್ ಆದರೆ ಬೆಲ್ ಮೊಳಗುವುದು .ಕೂಡಲೇ ಅಲ್ಲಿ ಧಾವಿಸಿ ಚಿಕಿತ್ಸೆ ಮಾಡುವುದು .ನಂತರ  ಮೂರು  ಗಂಟೆ ಹೊತ್ತಿಗೆ ಪಿ ಜಿ ಟೀಚಿಂಗ್ ಶುರುವಾಗುವುದು .ಐದು ಐದೂವರೆ ತನಕ ಅದು ನಡೆಯುವುದು .ಆಮೇಲೆ ಬಾಕಿ ಉಳಿದ ವಾರ್ಡ್ ಕೆಲಸ ಬೇರೆ ವಿಭಾಗದಿಂದ ರೆಫರ್ ಆದ ರೋಗಿಗಳನ್ನು ನೋಡಿ ಸಲಹೆ ಮಾಡುವುದು .ಲೈಬ್ರರಿ ಯಲ್ಲಿ  ಕ್ಲಿಷ್ಟ ಕೇಸ್ ಗಳ  ಬಗ್ಗೆ ಮತ್ತು ಮುಂದಿನ ಕ್ಲಾಸ್ ಜರ್ನಲ್ ಕ್ಲಬ್ ಗೆ ಓದುವುದು .ವಾರಕ್ಕೆ ಒಮ್ಮೆ ಡೆತ್ ಆಡಿಟ್ ಇರುತ್ತಿತ್ತು . 

ಎಲ್ಲಾ ಮುಗಿದಾಗ ಸುಸ್ತು ಹೈರಾಣಾಗಿ ಹೋಗುತ್ತಿತ್ತು .ವಾರಕ್ಕೆ ಒಮ್ಮೆ ರಾತ್ರಿ ಪಾಳಿ ಇದ್ದಾಗ ಇಂದು ಬೆಳಿಗ್ಗೆ ಬಂದವರು ನಾಳೆ ಮಧ್ಯಾಹ್ನವೇ ಮನೆಗೆ ತೆರಳುವುದು ಆಗುತ್ತಿತ್ತು. 

 

                                                 ರೈಲ್ವೇ ಆಸ್ಪತ್ರೆಯ ಪಿ ಜಿ ವಿಭಾಗಕ್ಕೆ ಪುರಸ್ಕಾರ

                 ಕೆಳಗಿನ ಚಿತ್ರದಲ್ಲಿ ಮಿತ್ರ ಡಾ ಪ್ರಸನ್ನಕುಮಾರ್ ಬಲದಿಂದ ಮೂರನೆಯವರು




ರೈಲ್ವೆ ಆಸ್ಪತ್ರೆಗೆ ಒಳ್ಳೆಯ ಹೆಸರು ಇತ್ತು .ರೈಲ್ವೆ ನೌಕರ ಮತ್ತು ಅವರ ಕುಟುಂಬದ ಸದಸ್ಯರು ದೇಶದ ಮೂಲೆ ಮೂಲೆಯಿಂದ ಬರುತ್ತಿದ್ದರು .ಇತರರಿಗೂ ಜಾಗ ಇದ್ದಲ್ಲಿ  ಚಿಕಿತ್ಸೆ ಕೊಡುತ್ತಿದ್ದೆವು .ಅದಕ್ಕೆ ಭಾರೀ ಬೇಡಿಕೆ ಇತ್ತು . 

ನಾನು  ಅಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಾಜಿ ರಾಷ್ಟ್ರ ಪತಿ ಕೆ ಆರ್ ನಾರಾಯಣನ್ ಕುಟುಂಬ ಅವರ ಬಂಧುವನ್ನು ನೋಡಲು ,ಶ್ರೀ ಜಾಫರ ಷರೀಫ್ ತಪಾಸಣೆ ಮಾಡಿಸಲು ಬಂದಿದ್ದರು .ತಮಿಳ್ನಾಡಿನ ಬೆಂಕಿ ಉಂಡೆ ರಾಜಕಾರಿಣಿ ವೈಕೋ ತಮ್ಮ ಪಕ್ಷದ ಎಂ ಎಲ್  ಎ ಯೊಬ್ಬರನ್ನು ನೋಡಲು ಬಂದಿದ್ದರು .ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿಯೊಂದಿಗೆ ಬಹಳ ಮರ್ಯಾದೆಯಿಂದ ನಡೆದು ಕೊಂಡರು .

 

ರೈಲ್ವೆ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ನಾನು ಇದುವರೆಗೆ ಕಂಡುದಲ್ಲಿ ಅತ್ಯುತ್ಕ್ರಷ್ಟ ಎಂದು ಎದೆ ತಟ್ಟಿ  ಹೇಳಬಲ್ಲೆ .ಯಾಕೆಂದರೆ ಅಲ್ಲಿಯ ಕೆಲಸದ ವಾತಾವರಣ ಹಾಗೆ ಇತ್ತು .ಆಲಸ್ಯ ಮತ್ತು ಕಾಲಹರಣಕ್ಕೆ ಅಲ್ಲಿ ಎಡೆ ಇರಲಿಲ್ಲ .ನಾನು ಎಷ್ಟೋ ಸಂಗತಿಗಳನ್ನು ಅವರಿಂದ ಕಲಿತುಕೊಂಡಿರುವೆನು .ಅಲ್ಲಿ ನರ್ಸ್ ಗಳು ,ವೈದ್ಯಕೀಯ ಸಿಬ್ಬಂದಿ ಯಾವತ್ತೂ ಚಲನೆಯಲ್ಲಿ ಇರುತ್ತಿದ್ದರು .ಅವರಿಗೆಲ್ಲ ಮನಸಿನಲ್ಲೇ ನಮಸ್ಕರಿಸುವೆನು . 

                      ನಮ್ಮ ವಿಭಾಗದ ಕಚೇರಿ ಯಲ್ಲಿ ಬಾಲಸುಬ್ರಹ್ಮಣ್ಯಂ ಎಂಬ ಹಿರಿಯರು ಸ್ಟೆನೋ -ಟೈಪಿಸ್ಟ್ ಆಗಿ  ಇದ್ದರು .ಖಡಕ್ ಮನುಷ್ಯ .ಅವರು ಅವಿವಾಹಿತರಾಗಿಯೇ ಇದ್ದರು ,ತಾಯಿ ಜತೆಗೆ ಇದ್ದರು .ಅವರಿಗೆ ರೈಲ್ವೆ ಮತ್ತು ಆಸ್ಪತ್ರೆಯ ನಿಯಮಗಳು ಕರಗತ .ಆದರೆ ಶೇಕಡಾ ನೂರು ಪ್ರಾಮಾಣಿಕ ಮತ್ತು ಕೆಲಸ ಪ್ರಿಯ .ಅವರಿಗೆ ಆಸ್ಪತ್ರೆಯ ಮುಖ್ಯಸ್ಥರಿಂದ ಹಿಡಿದು ಕೊನೆಯ ನೌಕರರೂ ಗೌರವ ಕೊಡುತ್ತಿದ್ದರು ಮತ್ತು ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳುತ್ತಿದ್ದರು .ನಾನು ಮಂಗಳೂರಿನಲ್ಲಿ ಒಂದು ಫ್ಲಾಟ್ ಕೊಳ್ಳಲು ಇಲಾಖೆ ಯಿಂದ ಮುಂಗಡ ಪಡೆಯುವಲ್ಲಿ ನನ್ನ ಪೇಪರ್ ಗಳನ್ನು ಕ್ರಮ ಪ್ರಕಾರ ಸಿದ್ದ ಪಡಿಸಿ ,ಅದು ಮಂಜೂರು ಆದ ಮೇಲೆ ಒಂದು ಫೈಲ್ ನಲ್ಲಿ ಅವೆಲ್ಲವನ್ನು ಕ್ರೋಡೀಕರಿಸಿ ಕೊಟ್ಟಿದ್ದರು ,ಯಾವ ಪ್ರತಿ ಫಲಾಪೇಕ್ಷೆ ಇಲ್ಲದೆ .ಮಧ್ಯಾಹ್ನ ನನ್ನ ,ವಿಭಾಗ ಮುಖ್ಯಸ್ಥ ಮತ್ತು ಬಾಲುರವರ ಊಟ ಅವರ ಕೋಣೆಯಲ್ಲಿ 

                                      
                                    (  ಬಾಲು ಮತ್ತು ನಾನು ಮತ್ತು ನಿಂತವರು ಅಟೆಂಡರ್ ಯೋಹಾನನ  )

ಆಸ್ಪತ್ರೆಯ   ಹೃದ್ರೋಗ ವಿಭಾಗ ಬಹಳ ಪ್ರಸಿದ್ಧ .ಇಲ್ಲಿ  ತೆರದ ಹೃದಯ ಚಿಕಿತ್ಸೆ .ಆಂಜಿಯೋಪ್ಲಾಸ್ಟಿ ಇತ್ಯಾದಿಗಳನ್ನು ಆಗಲೇ ಬಹಳಷ್ಟು ಮಾಡಿದ್ದರು .ಅಲ್ಲಿಯ ಚಿಕಿತ್ಸೆಗೆ  ವೈಟಿಂಗ್ ಲಿಸ್ಟ್ ದೊಡ್ಡದು ಇರುತ್ತಿತ್ತು .ಹೃದಯಾಘಾತ ಆಗಿ  ಬಂದವರನ್ನು ನಮ್ಮ ಮೆಡಿಸಿನ್ ಐ ಸಿ ಯು ನಲ್ಲಿ ನಾವೇ ಉಪಚರಿಸುತ್ತಿದ್ದೆವು .ಹೃದಯ ವಿಭಾಗದಲ್ಲಿ ಆಮೇಲೆ ಕಾದಿರಿಸಿ ಅವರು ಹೋಗ ಬೇಕಿತ್ತು . 

ಮೂತ್ರ  ಅಂಗ  (ನೆಫ್ರಾಲಜಿ) ವಿಭಾಗ ವೂ ಡಯಾಲಿಸಿಸ್ ,ಮೂತ್ರಪಿಂಡ ಜೋಡಣೆ ಸಂಬಂದಿಸಿದ  ಚಿಕಿತ್ಸೆಗಳನ್ನು ನಡೆಸುತ್ತಿದ್ದು ಅಲ್ಲಿ ಕನ್ನಡಿಗರೇಆದ ಡಾ ಪ್ರಭಾಕರ ಎಂಬ ತಜ್ಞರು ಇದ್ದರು .ಒಮ್ಮೆ ಅವರು ದೀರ್ಘ ರಜೆಯಲ್ಲಿ ಇದ್ದಾಗ ಕೆಲ ದಿನ ನಾನೇ ಆ ವಿಭಾಗ ನೋಡಿಕೊಂಡು ಇದ್ದೆನು . 

ಮಕ್ಕಳ ವಿಭಾಗದಲ್ಲಿ ಡಾ ಎಸ್  ಎಸ್ ರಾವ್ ಎಂಬ ಸಜ್ಜನ ವೈದ್ಯರು ಮುಖ್ಯಸ್ಥರು .ಅವರು ಆಸ್ಪತ್ರೆಯ ಕಂಪ್ಯೂಟರ್ಗಳ  ಮೇಲುಸ್ತುವಾರಿ ನೋಡಿ ಕೊಳ್ಳುತ್ತಿದ್ದರು .ಮೂಲತಃ ಉಡುಪಿ ಬಳಿಯವರು .ಆಗಲೇ ಕಂಪ್ಯೂಟರ್ ಬಳಸಿ ಕೊಳ್ಳುತ್ತಿದ್ದ ಆಸ್ಪತ್ರೆ .(೧೯೯೨). 

ಒಂದು ಪ್ರಸಂಗ ಉಲ್ಲೇಖಿಸುವೆನು .ನಾನು ಅಲ್ಲಿ ಸೇರಿ ಎರಡನೇ ದಿನ ನನಗೆ ಕ್ವಾರ್ಟರ್ ಹುಡುಕುವ ಕೆಲಸ ಇದ್ದುದರಿಂದ ರೌಂಡ್ಸ್ ಮುಗಿಸಿ ಬಾಸ್ ಅನುಮತಿ ಪಡೆದು ಹೊರ ಹೋಗಿದ್ದೆನು .ಮರುದಿನ ನಾನು ಬಂದೊಡನೆ ನಮ್ಮಲ್ಲಿ ರೆಸಿಡೆಂಟ್ ಆಗಿದ್ದ ಡಾ ಬಾಲಸುಬ್ರಹ್ಮಣ್ಯಂ ನನ್ನೊಡನೆ "ಸಾರ್ ನೀವು ನಿನ್ನೆ ಡಿಸ್ಚಾರ್ಜ್ ಮಾಡಿದ  ರೋಗಿಗಳ ಡಿಸ್ಚಾರ್ಜ್ ಸಮ್ಮರಿ ಮತ್ತು ಸಲಹೆ ಬರೆಯದೆ ಹೋಗಿದ್ದೀರಿ .ಇಲ್ಲಿಯ ರೀತಿ ರಿವಾಜಿಗೆ ಅದು ವಿರುದ್ಧ "ಎಂದು ಸ್ವಲ್ಪ ಜೋರಾಗಿಯೇ ಹೇಳಿದಾಗ ನಾನು ಅವಾಕ್ಕಾದೆ .ಸ್ವಲ್ಪ ಬೇಸರ ಆದರೂ ಮುಂದೆ ಅಲ್ಲಿನ ಕೆಲಸ ಶಿಸ್ತು ಅದು ಸರಿ ಎಂದು ಹೇಳಿತು ..ಈ ತರುಣ ವೈದ್ಯರು ಈಗ ಚೆನ್ನೈ ನ  ಪ್ರಸಿದ್ಧ ನೆಫ್ರೊಲೊಜಿಸ್ಟ್ ಮತ್ತು ನನ್ನ ಮಿತ್ರರು . ಇನ್ನೊಬ್ಬ ಇಂತಹ ತರುಣ ವೈದ್ಯ ಡಾ ಪದ್ಮನಾಭನ್ .ಸಜ್ಜನ ಮತ್ತು ಮೃದು ಭಾಷಿ ಮತ್ತು ಕಠಿಣ ಪರಿಶ್ರಮಿ .ಈಗ ಬೆಂಗಳೂರಿನಲ್ಲಿ ಖ್ಯಾತ ನೆಫ್ರೊಲೊಜಿಸ್ಟ್ .ಡಾ ಕೀರ್ತಿ ವಾಸನ್ ಎಂಬ ನನಗೆ ಬಹಳ ಪ್ರಿಯ ರೆಸಿಡೆಂಟ್ ವೈದ್ಯರು ಇದ್ದರು ,ತುಂಬಾ ಹಾಸ್ಯ ಪ್ರಜ್ಞೆ . ಅವರು  ತಮಾಷೆಗೆ ಹೇಳುತ್ತಿದ್ದ ಒಂದು ಮಾತು ಯಾವಾಗಲೂ ನೆನಪಿಗೆ ಬರುತ್ತದೆ . "ಸಾರ್ ನಮ್ಮ ಎಲ್ಲಾ  ಪ್ರಯತ್ನದ ನಂತರವೂ ರೋಗಿ ಬದುಕಿ ಉಳಿದನು."ಅವರು ಈಗ ಇಂಗ್ಲೆಂಡ್ ನಲ್ಲಿ ನರ ರೋಗ ವೈದ್ಯರಾಗಿ ಕೆಲಸ ಮಾಡುತ್ತಿರುವರು .ಕನ್ನಡಿಗರೇ ಆದ ಡಾ ಸಂದೀಪ್  ಗ್ಯಾಸ್ಟ್ರೋ ಎಂಟೆರೊಲೊಜಿಸ್ಟ್ ಆಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದು ನನಗೆ ಹತ್ತಿರ ಇರುವರು . ಡಾ ತನುಜಾ ಕಾರ್ಡಿಯೋಲಾಜಿಸ್ಟ್ ,ಡಾ ವಿದ್ಯಾಶಂಕರಿ ವೈದ್ಯಕೀಯ ತಜ್ಞೆಯಾಗಿ  ಪೆರಂಬೂರ್ ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾರೆ ,ಡಾ ಆನಿ  ಕ್ರಿಟಿಕಲ್ ಕೇರ್ ತಜ್ಞೆಯಾಗಿ ಅಪೊಲೊ ಆಸ್ಪತ್ರೆಯಲ್ಲಿ ಇರುವರು 

                 


(ಮುಂದುವರಿಯುವುದು )

ಗುರುವಾರ, ಅಕ್ಟೋಬರ್ 15, 2020

ಚೆನ್ನೈ ದಿನಗಳು 3

ನಾನು ಚೆನ್ನೈಗೆ ಕಾಲಿಟ್ಟ ಸಮಯ ಕಾವೇರಿ ಗಲಾಟೆ ಏರು ಸ್ಥಿತಿಯಲ್ಲಿ ಇತ್ತು .ಜಯಲಲಿತಾ ಮುಖ್ಯ ಮಂತ್ರಿ . ಕನ್ನಡಿಗರ  ಸಂಸ್ಥೆ ,ಅಂಗಡಿ ,ಹೊಟೇಲ್ ಗಳಿಗೆ  ಬಲವಾದ ಪೋಲೀಸು ಕಾವಲು ಇತ್ತು .ಅಂಗಡಿ ನಾಮಪಲಕ ಗಳಿಂದ  ಬೆಂಗಳೂರು ,ಮೈಸೂರು ಇತ್ಯಾದಿ ಶಬ್ದಗಳನ್ನು  ಮಾಲೀಕರೆ ತೆಗೆದು ಹಾಕಿದ್ದರು .ತಮಿಳ್ ನಾಡಿನಲ್ಲಿ ಕನ್ನಡ ನಾಮ ಫಲಕ ಅಪರೂಪ ತಾನೇ .ಹಳೇ ಮದ್ರಾಸ್ ಪ್ರಾಂತ್ಯದಲ್ಲಿ  ದಕ್ಷಿಣ ಕನ್ನಡ ಕಾಸರಗೋಡು ,ಕೊಳ್ಳೇಗಾಲ ಇತ್ಯಾದಿ  ಪ್ರದೇಶಗಳು ಸೇರಿದ್ದರಿಂದ ಕನ್ನಡ ಭಾಷಿಕರಿಗೆ ಕೊರತೆ ಇಲ್ಲ ..ಹೋಟೆಲ್ ಗಳು ,ಬೇಕರಿ ,ಆಸ್ಪತ್ರೆ ಕ್ಲಿನಿಕ್ ಗಳು ಕನ್ನಡಿಗರದ್ದು ಸಾಕಷ್ಟು ಸಂಖ್ಯೆಯಲ್ಲಿ ಈಗಲೂ ಇವೆ .ಚೆನ್ನೈ ನಗರದಲ್ಲಿ ನಾನು ಕಂಡು ಕೊಂಡಂತೆ ಬಹಳಷ್ಟು ಕನ್ನಡಿಗರು  ತಮ್ಮ ಭಾಷಾ ಮೂಲ ತೋರ್ಪಡಿಸಲು ಇಷ್ಟ ಪಡುತ್ತಿರಲಿಲ್ಲ .ನಾವು ಕನ್ನಡದಲ್ಲಿ  ಕೇಳಿದರೆ ತಮಿಳಿನಲ್ಲಿಯೇ ಉತ್ತರ ಕೊಡುತ್ತಿದ್ದರು . 

            ಅಯ್ಯನಾವರಂ  ಮುಖ್ಯ ರಸ್ತೆಯಲ್ಲಿ ಒಂದು ಅಯ್ಯಂಗಾರ ಬೇಕರಿ ಇತ್ತು .ಅವರು ಕನ್ನಡ ವಾರ ಪತ್ರಿಕೆ ಸುಧಾ ,ತರಂಗ ,ಮಾಸ ಪತ್ರಿಕೆ ಮಯೂರ ,ತುಷಾರ  ತರಿಸಿ ಕೊಳ್ಳುತ್ತಿದ್ದರು .ಈ ಅಯ್ಯಂಗಾರ್ ಗಳ  ಮನೆ ಮಾತು ತಮಿಳು .ಆದರೆ  ಕನ್ನಡಕ್ಕೆ ಅವರ ಕೊಡುಗೆ ಅಪಾರ .ಮಾಸ್ತಿ ವೆಂಕಟೇಶ ಅಯ್ಯಂಗಾರ್ ,ಗೊರೂರು ರಾಮಸ್ವಾಮಿ ಅಯ್ಯಂಗಾರ್ .ಕ್ಯಾಪ್ಟನ್ ಗೋಪಿನಾಥ್ ಕೆಲವು ಹೆಸರಿಸ ಬಹುದಾದ ಸಾಧಕರು . 

ಚೆನ್ನೈ ನಲ್ಲಿ  ಮುಂಬೈಯಂತೆ  ಕನ್ನಡ ದಿನ ಪತ್ರಿಕೆ ಇರಲಿಲ್ಲ .ಮನೆಗೆ ಹಿಂದೂ ಆಂಗ್ಲ ದೈನಿಕ ಬರುತ್ತಿತ್ತ್ತು .ಪರ ಊರಿನಲ್ಲಿ ನಮಗೆ ನಮ್ಮ ಭಾಷೆ ,ಸಂಸ್ಕೃತಿ ಬಗ್ಗೆ ಪ್ರೀತಿ ಹೆಚ್ಚುವುದು .ಹಾಗೆ ಅರಸಿ ಹೋದಾಗ ದಾಸ್ ಪ್ರಕಾಶ್ ಹೋಟೆಲ್ ನ  ಸ್ಟಾಲ್ ನಲ್ಲಿ  ಉದಯವಾಣಿಯ ಬೆಂಗಳೂರು ಆವೃತ್ತಿ ಮತ್ತು ಜನಪ್ರಿಯ ಕನ್ನಡ ಮಾಸ ಪತ್ರಿಕೆ ಮತ್ತು ವಾರಿಕಗಳು ಸಿಗುವ ವಿಚಾರ ತಿಳಿಯಿತು .ಈ ಹೋಟೆಲ್ ಚೆನ್ನೈ ನ  ಪೂನಮಲೈ  ಹೈ ರೋಡ್ ನ ಆಯಕಟ್ಟು ಜಾಗದಲ್ಲಿ ಇತ್ತು .ಈಗ ಅದನ್ನು ನೆಲಸಮ ಮಾಡಿ ಶಾಪಿಂಗ್ ಕಾಂಪ್ಲೆಕ್ಸ್  ಮಾಡುವರೆಂದು ಕೇಳಿರುವೆನು . 

                        

                          ಹಿಂದಿನ ದಾಸ್ ಪ್ರಕಾಶ್ ಹೋಟೆಲ್ . 

ನಾನು ವರ್ಗವಾಗಿ ಹೊಸ ಊರಿಗೆ ಹೋದಾಗ ಮೊದಲು ಹುಡುಕುವುದು ಸಾರ್ವಜನಿಕ  ಲೈಬ್ರರಿ .ನಾನು ನಮ್ಮ ಹುಟ್ಟ್ಟೂರು ಕನ್ಯಾನ ಗ್ರಾಮದ  ಪಂಚಾಯತ್ ಲೈಬ್ರರಿ ಯಿಂದ ಮೊದಲು ಗೊಂಡು ,ಪುತ್ತೂರು ಕೇಂದ್ರ್ರ ಗ್ರಂಥಾಲಲಯ ,ಮೈಸೂರು ,ಹಾಸನ ,ಸಕಲೇಶಪುರ ,ಮಂಗಳೂರು , ಬೆಂಗಳೂರು ಸೌತ್ ಎಂಡ್,ಹುಬ್ಬಳ್ಳಿ  ,ಚೆನ್ನೈ ಜಿಲ್ಲಾ ಗ್ರಂಥಾಲಯ  ,ಚೆನ್ನೈ  ಕೊನ್ನೆಮರಾ ರಾಷ್ಟ್ರೀಯ ಲೈಬ್ರರಿ ,ಪಾಲಕ್ಕಾಡ್ ,ಕೊಜ್ಹಿಕೋಡ್ ನಗರ ಗ್ರಂಥಾಲಯ ಇವುಗಳ  ಸದಸ್ಯ ಆಗಿ ನನ್ನ ಜ್ಞಾನ ಭಂಡಾರ ಹೆಚ್ಚಿಸಿ ಕೊಂಡು ದಲ್ಲದೆ ಮನಸ್ಶಾಂತಿ ಪಡೆದಿದ್ದೇನೆ . 

ಅಯ್ಯನಾವರಂ  ಕನ್ನಡ ಸಂಘ ದವರು ಶಾಲೆ ಮತ್ತು  ಗ್ರಂಥಾಲಯಯ ನಡೆಸುತ್ತಿದ್ದರು ನಾನು ಸಂಘದ ಸದಸ್ಯತ್ವ ಪಡೆದು ಈ ಸವಲತ್ತು ಬಳಸಿಕೊಂಡೆನು . 

                                               



ಈ ಸಂಘವು  ನಮ್ಮ ಆಸ್ಫತ್ರೆಯ ಸನಿಹದಲ್ಲಿ ಇತ್ತು .ಮುಖ್ಯ ರಸ್ತೆಯ ಒಂದು ಕಡೆ ಆಸ್ಪತ್ರೆ ,ಇನ್ನೊಂದು ಕಡೆ ಯುನೈಟೆಡ್ ಇಂಡಿಯಾ ನಗರ ಎಂಬಲ್ಲಿ ಕನ್ನಡ ಸಂಘ .,ಪಕ್ಕದಲ್ಲಿಯೇ ಅಯ್ಯನವರಂ ತರಕಾರಿ ಸಂತೆ .ಸಂಘ ದಲ್ಲಿ  ಹಬ್ಬಗಳನ್ನು ಆಚರಿಸುತ್ತಿದ್ದರು .ಪುಳಿಯೋಗರೆ ,ಬಿಸಿ ಬೆಲೆ ಬಾತ್ ಮತ್ತು ಮೊಸರನ್ನ್ನ ಖಾಯಂ ಖಾದ್ಯಗಳು .ರುಚಿಕಟ್ಟು ,ಅಚ್ಚುಕಟ್ಟು .ಕನ್ನಡ ಸಂಘದವರು ಕರ್ನಾಟಕಕ ಮಂತ್ರಿಗಳು ,ಸಾಹಿತಿಗಳ  ಚೆನ್ನೈ ಆಗಮನದ ಮೇಲೆ ಹದ್ದಿನ ಕಣ್ಣು ಇತ್ತು ಸಂಘಕ್ಕೆ ತಪ್ಪದೆ ಆಹ್ವಾನಿಸುವರು .ಆಗಲೂ ಒಂದು ಕೂಟ ಇರುವುದು .ನಾನು ಇದ್ದಾಗ ಮಂತ್ರಿಗಳಾದ  ಎಸ ಎಂ ಯಾಹ್ಯಾ , ಎಚ್ ವಿಶ್ವನಾಥ್ ಬಂದಿದ್ದರು .ಎಚ್ ವಿಶ್ವನಾಥ್ ಸುಶ್ರಾವ್ಯ ವಾಗಿ  ದೋಣಿ ಸಾಗಲಿ ಮುಂದೆ ಹೋಗಲಿ ಹಾಡಿ ರಂಜಿಸಿದರು . 

  ದಕ್ಷಿಣ ಚೆನ್ನೈ  ನ  ಟಿ ನಗರದಲ್ಲಿ ಒಂದು ದೊಡ್ಡ ಮತ್ತು  ಶ್ರೀಮಂತ ಎನ್ನ ಬಹುದಾದ ಕನ್ನಡ ಸಂಘ ಇದೆ .ಅದಕ್ಕೆ ತನ್ನದೇ ಆದ ಶಾಲೆ ಮತ್ತು  ಸಭಾಭವನ ಇದೆ ,ಬಂಧು ಡಾ ಶ್ರೀಕೃಷ್ಣ ಭಟ್  ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರೊಫೆಸ್ಸರ್ ಆಗಿದ್ದವರು  ಈ ಸಂಘದ ಪದಾಧಿಕಾರಿ ಆಗಿದ್ದರಿಂದ ಅಲ್ಲಿನ ಕಾರ್ಯಕ್ರಮಗಳಿಗೂ ಅಹ್ವಾನ ಇರುತ್ತಿತ್ತು .ಒಂದು ಭಾರಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಂ ಎಸ ಸುಬ್ಬಲಕ್ಷ್ಮಿ ಮುಖ್ಯ ಅಥಿತಿಗಳಾಗಿದ್ದರು ,ಇನ್ನೊಮ್ಮೆ ಪ್ರಸಿದ್ಧ ನಟಿ ಲಕ್ಷ್ಮಿ ಅವರು . ಈ ಕಲಾವಿದೆ ಚೆನ್ನಾಗಿ ಅರಳು ಹುರಿದಂತೆ ಕನ್ನಡ ಮಾತನಾಡುವುದು ಕಂಡು ದಂಗಾದೆ . 

 ಸಾಹಿತ್ಯದ ನಂತರ  ನನ್ನ ಹುಡುಕಾಟ ಸಂಗೀತ .ಚೆನ್ನೈ ಕರ್ನಾಟಿಕ್ ಸಂಗೀತ ಕಾಶಿ .ಇಲ್ಲಿ ಹತ್ತಾರು  ಸಭಾಗಳು ಇವೆ .ದಶಂಬರ್ ಜನವರಿ ಯಲ್ಲಿ ಮಾರ್ಗಳಿ  ಸಂಗೀತೋತ್ಸವ  ಹಬ್ಬವೇ .ನೂರಾರು ಸಭಾ ಗಳು ,ಸಾವಿರಾರು ಕಲಾವಿದರು .ದೇಶ ವಿದೇಶಗಳಿಂದ ರಸಿಕರು ಚೆನ್ನೈ ಗೆ ಇದಕ್ಕಾಗಿಯೇ ಬರುವರು .ಸುಂದರ ಸಾಲಂಕೃತ ಸಭಾ ಭವನಗಳು .ಆದರೆ ಬಹುತೇಕ ಎಲ್ಲಾ ದಕ್ಷಿಣ ಚೆನ್ನೈ ನಲ್ಲಿ ಇದ್ದವು .ನಾವು ಇದ್ದ ಸ್ಥಳ ಕ್ಕೆ ದೂರ .ವಿಚಾರಿದರೆ ಪೆರಂಬೂರಿನಲ್ಲಿ ಒಂದು ಸಭಾ ಇದೆ ,ಪೆರಂಬೂರ್ ಸಂಗೀತ ಸಭಾ ಎಂದು ಹೆಸರು ..ಪೆರಂಬೂರಿಗೆ ಅಕ್ಕಿ ಬೇಳೆ  ಕೊಳ್ಳಲು ಹೋಗಿದ್ದಾಗ ಶಾಂತಿ ಕಾಫಿ ವರ್ಕ್ಸ್ ಎಂಬ ಅಂಗಡಿ ಎದುರು ಈ ಸಭಾ ಕಾರ್ಯಕ್ರಮ ದ  ಫಲಕ  ಕಂಡು ವಿಚಾರಿಸಲು ಅವರೇ ಅದರ ಕಾರ್ಯದರ್ಶಿ ಎಂದು ತಿಳಿದು ಸದಸ್ಯ ನಾದೆ .ಇದು ಆರ್ಥಿಕ ವಾಗಿ ಶ್ರೀಮಂತ ಸಭಾ ಆಗಿರಲಿಲ್ಲ .ಒಂದು ಸರಕಾರಿ ಶಾಲೆಯಲ್ಲಿ ಕಚೇರಿ ನಡುಸುತ್ತಿದ್ದರು .ಕುಳಿತು ಕೊಳ್ಳಲು ಶಾಲಾ ಬೆಂಚ್ .ಆದರೂ ದೊಡ್ಡ ಕಲಾವಿದರ ಕಚೇರಿ ಕೇಳಿದ್ದೇವೆ. ಬಡ ಸಭಾ ಎಂದು ಯಾವ ಕಲಾವಿದರೂ ಕಡೆಗಣಿಸದೆ  ಉತ್ತಮೋತ್ತಮ ಕಾರ್ಯಕ್ರಮ ಕೊಡೊತ್ತಿದ್ದುದು ಗಮನಾರ್ಹ .

                                                



                    


ಈ ಕಾರ್ಯಕ್ರಮಗಳಿಗೆ  ಬೈಕ್ ನಲ್ಲಿ  ತ್ರಿಬ್ಬಲ್ ರೈಡ್ ಹೋಗುವುದು .ಇಲ್ಲವಾದರೆ ಬಸ್ .


ನಾವು ಸ್ಥಳೀಯ ಭಾಷೆ ಗೊತ್ತಿರದ ದಿದ್ದರೂ ಮುಂಬೈ ,ಹೈದರಾಬಾದ್ ,ಡೆಲ್ಲಿ ,ದುಬಾಯಿನ್ಯೂಯೋರ್ಕ್ ನಗರಗಳಲ್ಲಿ ಸುಧಾರಿಸ ಬಹುದು .ಚೆನ್ನೈ ಯಲ್ಲಿ ಇದ್ದು ತಮಿಳು ಭಾಷೆ ಗೊತ್ತಿರದಿರಲು ಗತಿ ಗೋವಿಂದ .ರಿಕ್ಷಾ ಬಸ್ ಮತ್ತು ಅಂಗಡಿಗಳಲ್ಲಿ  ಬೇರೆ ಭಾಷೆ ಅರಿಯರು .ನಲ್ಲಿ ,ಕುಮಾರನ್ ಅಂತಹ ಪ್ರಸಿದ್ದ  ರೇಷ್ಮೆ ಬಟ್ಟೆ ಅಂಗಡಿಗಳಲ್ಲಿ ಮಾತ್ರಾ ಬಹು ಭಾಷಾ ಸೇಲ್ಸ್ ಮ್ಯಾನ್ ಗಳು ಇರುತ್ತಿದ್ದರು .ಅವರು ಗಿರಾಕಿಯ ಮುಖ ನೋಡಿ ಅವರ ಭಾಷೆ ಅರಿತು ಬಲ್ಲವರನ್ನು ನಮ್ಮ ಸೇವೆಗೆ ಕಳುಹಿಸುವರು .ಶ್ರೀರಂಗಂ ದೇವಸ್ಥಾನ ದಲ್ಲಿಯೂ  ಸ್ವಯಂ ಘೋಷಿತ ಅರ್ಚಕರು  ಸೇವೆ ಮಾಡಿಸಲು ಕನ್ನಡಿಗರಿಗೆ ಕನ್ನಡಲ್ಲಿ ದುಂಬಾಲು ಬೀಳುವುದನ್ನು ನೋಡಿದ್ದೇನೆ .ನೀವು ನಿರಾಕರಿಸಿದರೆ ಅಚ್ಚ ಕನ್ನಡದಲ್ಲಿಯೇ ಶಾಪ ಹಾಕುವರು .

   ನಾವು ಮೊದಲು ಇದ್ದ  ಕ್ವಾರ್ಟರ್ ಗೆ ಮನೆ ಕೆಲಸಕ್ಕೆ ಬರುತ್ತಿದ್ದವಳು ಬಹು ಭಾಷಾ ಪ್ರವೀಣೆ .ನನ್ನ ಮನೆಯವರು  ಉಪ್ಪು ಹುಳಿ ಅಕ್ಕಿ ಬೇಳೆ ಗಳಿಗೆ ತಮಿಳು ಶಬ್ದ ಅವಳಿಂದ ಕಳಿತಳು .ಇಂಗು ವಿಗೆ  ಅವಳ ತಮಿಳ್ ಶಬ್ದ ಎಲ್ಜಿ ಪೆಂಗಾಯಮ್ ಎಂದು ಆಗಿತ್ತು .ನನ್ನ ಮನೆಯವರು ಅದೇ ಶಬ್ದ ಉಪಯೋಗಿಸುವರು .ಕೊನೆಗೆ ಒಂದು ದಿನ ತಿಳಿಯಿತು .ಇಂಗುವಿಗೆ ಪೆಂಗಾಯಮ್ ಎನ್ನುವರು .ಎಲ್ಜಿ ಒಂದು ಕಂಪನಿ ಹೆಸರು ಎಂದು .ಕ್ರಮೇಣ ಅಕ್ಕಿ ಅರಸಿ ಆಯಿತು ,ಸಾಸಿವೆ ಕಡುಗು ,ಶುಂಠಿ ಇಂಜಿ ,ಟೊಮೇಟೊ ತಕಾಲಿ ಆಗಿ ಪರಿವರ್ತನೆ ಗೊಂಡವು 

ನಾನು ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ತಮಿಳು ಮಾತನಾಡಲು  ಸಹ ವೈದ್ಯರು .ನರ್ಸ್ ಗಳು ಸಹಾಯ ಮಾಡಿದರು .ನೋವು ಕಾಯಿಲೆಗೆ ನೋಯಿ ,ಶರೀರ  ಒಡಂಬು ,ಹೃದಯ  ಇರುದಯ, ಜ್ವರ ಕಾಚಲ್ ,ದಮ್ಮು ಕಟ್ಟುವುದು  ಮೂಚ್ ವಾಂಗುದು,ಕಫ  ಸಳಿ ,ಸೊಂಟ ನೋವು ಇಡುಪ್ಪು ವಲಿ  ,ಶ್ವಾಶ ಕೋಶ ನೊರೆಯಿಲ್ ಇಂಜೆಕ್ಷನ್ ಊಸಿ ಇತ್ಯಾದಿ ಶಬ್ದ ಕೋಶಗಳು ಬೆಳೆದವು .ನನ್ನ ಸಹೋದ್ಯೋಗಿ ಕನ್ನಡಿಗ ವೈದ್ಯರು ಒಮ್ಮೆ ಒಬ್ಬ ರೋಗಿಯನ್ನು ಪರೀಕ್ಷೆ ಮಾಡಿ ಮೂಳೆ ತಜ್ಞರಿಗೆ ತೋರಿಸ  ಬೇಕು ಎಂದು ತಮ್ಮದೇ ತಮಿಳ್ ನಲ್ಲಿ ಉಂಗಳುಕ್  ಮೂಳೆ  ನೋಯಿ ಇರುಕ್ಕು .ಮೂಳೆ  ಡಾಕ್ಟರುಕ್ಕು ಕಾಮಿಕುಕ್ಕೊಂಗೋ ಎಂದಾಗ ರೋಗಿ ಕಕ್ಕಾ ಬಿಕ್ಕಿ .ತಮಿಳಿನಲ್ಲಿ ಮೂಳೆ  ಎಂದರೆ ಮೆದುಳು ! ರೌಂಡ್ಸ್ ನಲ್ಲಿ ರೋಗಿಗಳೊಡನೆ ತಮಿಳು ಭಾಷೆಯಲ್ಲಿ ಮಾತನಾಡಲು ಮೋಡ ಮೊದಲು ಕಷ್ಟವಾಗಿ ಉಸಿರು ಕಟ್ಟಿದಂತೆ ಆಗುತ್ತಿತ್ತು .ಆಗೊಮ್ಮೆ ಈಗೊಮ್ಮೆ ಕನ್ನಡ ಬಲ್ಲ ರೋಗಿಗಳು ಸಿಕ್ಕಾಗ ಮುಖವರಳಿ  ಉಸಿರು ನಿರಾಳ ಆಗಿತ್ತಿತ್ತು . 

ಚೆನ್ನೈ ಗೆ ಬರುವ ಮೊದಲೇ ಮಂಗಳೂರಿನಲ್ಲಿ ಒಂದು ಕಲರ್ ಟಿವಿ ಕಂತಿನಲ್ಲಿ ಕೊಂಡಿದ್ದೆ .ಅಲ್ಲಿ ಡೆಲ್ಲಿ ಕಾರ್ಯಕ್ರಮ ಗಳು ಮಾತ್ರ ಮಂಗಳೂರಿನಿಂದ ರಿಲೇ ಆಗುತ್ತಿದ್ದವು .ಶುಕ್ರವಾರ ರಾತ್ರಿ ಚೆನ್ನೈ ಕೇಂದ್ರದ  ಚಿತ್ರ ಗೀತೆಗಳ ಕಾರ್ಯಕ್ರಮ ಒಲಿಯುಮ್ ಒಲಿಯುಮ್ ಮರು ಪ್ರಸಾರ ಮಾಡುತ್ತಿದ್ದರು .ಅದರಲ್ಲಿ ತಮಿಳು ಚಿತ್ರ ಗೀತೆಗಳ  ಕೊನೆಗೆ ದೃಷ್ಟಿ ತಾಗದಂತೆ ಒಂದು ಕನ್ನಡ ಚಿತ್ರಗೀತೆಯೂ ಇರುತ್ತಿತ್ತು ..ಆ ಕಾಲದಲ್ಲಿ  ತಪ್ಪದೇ  ನೋಡುತ್ತಿದ್ದ ಕಾರ್ಯಕ್ರಮ ರಾಮಾಯಾಣ ,ಸುರಭಿ ಮತ್ತು ಕೆಲವೊಮ್ಮೆ ಹಿಂದಿ ಸಿಕ್ಕಿದರೆ ಕನ್ನಡ ಚಲನ ಚಿತ್ರಗಳು .ಕ್ರಿಕೆಟ್ ಇದ್ದೆ ಇತ್ತು ಅನ್ನಿ . 

ಚೆನ್ನೈ ದೂರದರ್ಶನದಲ್ಲಿ ಆಗಲೇ ಮೂರು  ಪ್ರಸಾರ ಕೇಂದ್ರಗಳು ಇದ್ದವು .ಮನೆಯ ಮೇಲೆ ಆಂಟೆನಾ ನಿಲ್ಲಿಸುವ ಕಲೆ ಕರಾಗಗತ  ಆಗಿತ್ತು .ಚೆನ್ನೈ ನಲ್ಲಿ ಮೂರು  ಕೇಂದ್ರಗಳು ಇದ್ದುದರಿಂದ  ಎಕ್ಸ್ಟ್ರಾ ಕಡ್ಡಿಗಳು ಬೇರೆ ದಿಕ್ಕಿಗೆ ಬೇಕಿತ್ತು .ತಮಿಳರು ಸಿನೆಮಾ ಪ್ರಿಯರು .ಅಲ್ಲಿ ರಜನಿಕಾಂತ್ ಕಮಲಹಾಸನ್ ಚಿತ್ರಗಳಿಗೆ ಕೊನೆಯ ದಿನವೂ ಬ್ಲಾಕ್ ಮಾರ್ಕೆಟ್ ನಡೆಯುವುದು .ಎಂತಾ  ಕಾರ್ಯಕ್ರಮ ಇರಲಿ -ಹುಟ್ಟು ಹಬ್ಬದಿಂದ ವೈಕುಂಠ ಸಮಾರಾಧನೆ - ಮೈಕಾಸುರನು ತಮಿಳು ಸಿನೆಮಾ ಹಾಡುಗಳನ್ನು  ಹಾಡುತ್ತಿರುವನು .ಶುಕ್ರವಾರ ಸಂಜೆ ನಾನು ಆಸ್ಪತ್ರೆಯಿಂದ ಮನೆಗೆ ಮರಳುವ ಸಮಯ ಒಲಿಯುಮ್ ಒಲಿಯುಮ್ ಸಮಯ .ಎಲ್ಲಾ ಮನೆಯ ಟಿ ವಿ ಗಳೂ ಒಕ್ಕೊರಲಿನಿಂದ ಕೋರಸ್ ನಂತೆ ಹಾಡುವುದು ಕೇಳಿ ರೋಮಾಂಚನ ಆಗುತ್ತಿತ್ತು .ಆಗಿನ ಜನಪ್ರಿಯ ತಮಿಳ್ ಹಾಡುಗಳು ರಕ್ಕಮ್ಮಾ  ಕೈಯ್ಯ ತಟ್ಟು .ಪಾಂಡಿಯನಾ ಕೊಕ್ಕ ಕೊಕ್ಕ , ಚಿನ್ನ ಚಿನ್ನ ಅಸೆ .ರುಕ್ಮಣೀ ರುಕ್ಕ್ಕುಮಣಿ ,ಉಸಿಲಂಪಟ್ಟಿ ಪೆಂಕುಟ್ಟಿ ಇತ್ಯಾದಿ .. ಈ ಹೊತ್ತಿನಲ್ಲಿ ಎಲ್ಲರೂ ಟಿ ವಿ ಯ ಮುಂದೆಯೇ ಇರುವರು . ಡಿ ಡಿ ೩ ರಲ್ಲಿ ಶುಕ್ರವಾರ  ಏನ್ ಡಿ ಟಿ ವಿ ಯವರು ನಡೆಸಿ ಕೊಡುತ್ತಿದ್ದ  ವರ್ಲ್ಡ್ ದಿಸ್ ವೀಕ್ ತಪ್ಪದೆ ನೋಡುತ್ತಿದ್ದೆವು .ಅದರಲ್ಲಿ ಅಪ್ಪನ್ ಮೆನನ್ ಎಂಬ ಒಳ್ಳೆಯ ಆಂಕರ್ ಇದ್ದರು .ಕ್ರಿಕೆಟ್ ಮತ್ತು ಟೆನಿಸ್ ಆಟ ಕುಟುಂಬದವರೆಲ್ಲಾ  ಸೇರಿ ನೋಡುವೆವು . ತಮಿಳ್ ಹಬ್ಬಗಳಂದು ಪಟ್ಟಿ ಮಂನ್ರಮ್ ಎಂಬ ಒಳ್ಳೆಯ ಕಾರ್ಯಕ್ರಮ ಇದ್ದೆ ಇರುತ್ತಿತ್ತು .ಯಾವುದಾದರೂ ಒಂದು ವಿಷಯ ತೆಗೆದುಕೊಂಡು ಪರ ಮತ್ತು ವಿರುದ್ಧ ತಂಡಗಳಾಗಿ ಮಾತನಾಡುವರು .ಒಬ್ಬರು  ಮಾಡರೇಟರ್ .ಸೊಲೊಮನ್ ಪಾಪಯ್ಯ ಎಂಬ ಪ್ರೊಫೆಸ್ಸರ್ ಜನಪ್ರಿಯ ಅಧ್ಯಕ್ಷರು .ಮುಂದೆ ಕನ್ನಡದಲ್ಲಿಯೂ ಹಿರೇಮಗಳೂರ್ ಕಣ್ಣನ್ ಮುಂತಾದವರು ಇಂತಹ ಕಾರ್ಯಕ್ರಮ ಮಾಡುವುದು 

      ಚೆನ್ನೈ ನಲ್ಲಿ ನಾವು ನೋಡಿದ ಮೊದಲ ಸಿನೆಮಾ ರೋಜಾ .ಪುರುಷ್ವಕಾಮ್ ನ ಅಭಿರಾಮಿ ಚಿತ್ರ ಮಂದಿರ ..ಪರಿಚಯದವರು ಟಿಕೆಟ್ ಕೊಡಿಸಿದ್ದರು .ಒಳ್ಳೆಯ ಸೌಂಡು ಸಿಸ್ಟಮ್ ಇರುವ ಟಾಕೀಸ್ ನ ಅನುಭವ ಆಯಿತು .ನಮ್ಮ ಬೆನ್ನ ಹಿಂದಿನಿಂದಲೇ ಗುಂಡು ಹಾರಾಟದ ಶಬ್ದ ,ಮಾತುಗಳು ,ಹಾಡುಗಳು ಬರುತ್ತಿದ್ದಂತೆ ಭಾಸವಾಗುತ್ತಿತ್ತು .ಈಗ ಈ ಥೀಯೇಟರ್ ಶಾಪಿಂಗ್ ಮಾಲ್ ಆಗಿದೆ .ಮುಂದೆ ಜೆಂಟಲ್ಮ್ಯಾನ್ ,ಭಾಷಾ ,ಸತಿ ಲೀಲಾವತಿ ಚಿತ್ರ ನೋಡಿ ಸಂತೋಷ ಪಟ್ಟೆವು .ಮಗನಿಗೆ ಈ ಚಿತ್ರಗಳ ಕ್ಯಾಸೆಟ್ ತರಿಸಿ ಹಾಡಿಗೆ ಡಾನ್ಸ್ ಮಾಡುವುದು ಇಷ್ಟದ ಟೈಮ್ ಪಾಸ್ ಆಯಿತು . 

  ಚೆನ್ನೈ ಯಲ್ಲಿ ನಾಟಕಗಳೂ ಜನಪ್ರಿಯ .ಚೋ  ರಾಮ ಸ್ವಾಮಿ ,ವೈ ಜಿ ಮಹೇಂದ್ರ ಮತ್ತು  ಎಸ ವಿ ಶೇಖರ್ ಅವರ ನಾಟಕಗಳನ್ನು ಇಷ್ಟ ಪಡುತ್ತಿದ್ದರು .ಎಸ ವಿ ಶೇಖರ್ ಅವರ ಒಂದು ನಾಟಕ ನೋಡಿದ ನೆನಪು .ಆಗ ಜಯಲಲಿತಾ ಮುಖ್ಯ ಮಂತ್ರಿ .ಚನ್ನಾ ರೆಡ್ಡಿ ರಾಜ್ಯಪಾಲ .ಅವರಿಬ್ಬರಿಗೂ ಎಣ್ಣೆ ಸೀಗೆ ..ಆ ನಾಟಕದಲ್ಲಿ ಅಡಿಗೆಯವನನ್ನು ಸೂತ್ರಧಾರಿ ಇಂದು ಟಿಫನ್ ಗೆ ಏನು ಎಂದು ಕೇಳಿದ್ದಕ್ಕೆ ಪೂರಿ (ತಮಿಳಿನ ಭೂರಿ) ಚನ್ನಾ ಎಂದು ಉತ್ತರ ಬಂತು .ಅದಕ್ಕೆ ಸೂತ್ರಧಾರಿ (ಸ್ವಯಂ ಎಸ ವಿ ಶೇಖರ್ ) ಅಮ್ಮಾಕು (ಅಮ್ಮ ಜಯಲಲಿತನಿಗೆ )ಚನ್ನಾ ಪುಡಿಕಾದು ತೆರಿಯಾದ ಎಂದು ಮರು ಪ್ರಶ್ನೆ  ಹಾಕಿದಾಗ ನಗೆಯ ಅಲೆ.

ಮಂಗಳವಾರ, ಅಕ್ಟೋಬರ್ 13, 2020

ಚೆನ್ನೈ ದಿನಗಳು 2

 ನನ್ನ ಮಗ ನಾಲ್ಕು ವರ್ಷಕ್ಕೆ  ಕಾಲು ಇಡುತಿದ್ದ .ಅವನಿಗೆ  ಒಂದು ಶಾಲೆಯ ಏರ್ಪಾಡು  ಆಗಬೇಕು .ನಾವು ಕನ್ನಡಿಗರಾಗಿ ಮಕ್ಕಳಿಗೆ ಮಾತೃಭಾಷೆ ಬರದಿದ್ದರೆ ಹೇಗೆ ಎಂದು ಕಡಿಮೆ ಪಕ್ಷ ಕನ್ನಡ ವನ್ನು ಒಂದು ಭಾಷೆಯನ್ನಾಗಿ  ಕಲಿಸುವ ಶಾಲೆ ಇದೆಯೇ ಎಂದು  ಅನ್ವೇಷಣೆಗೆ  ಹೊರಟೆನು .ನಮ್ಮ ಆಸ್ಪತ್ರೆ ಪಕ್ಕದಲ್ಲಿಯೇ ಅಯ್ಯನಾವರಂ  ಕನ್ನಡ ಸಂಘ ನಡೆಸುವ  ಒಂದು ಶಾಲೆ ಇತ್ತು .. ಅಲ್ಲಿಯ  ಮುಖ್ಯೋಪಾಧ್ಯಾಯಿನಿ ಯವರನ್ನು  ಕಂಡು  ವಿಚಾರಿಸಲು  ನನ್ನ ಭಾಷಾಭಿಮಾನ ಮತ್ತು ಭಾವನಾತ್ಮಕತೆ ಗೆ  ಮೆಚ್ಚುಗೆ ಮತ್ತು ಸಂತಾಪ  ಏಕಕಾಲಕ್ಕೆ  ವ್ಯಕ್ತ ಪಡಿಸಿದರು . ಅದು ಕನ್ನಡ ಶಾಲೆ ಆದರೂ  ಸರಕಾರಿ ಗ್ರಾಂಟ್ ಇರುವ ಸಂಸ್ಥೆ ಆದುದರಿಂದ  ಫೀಸ್  ಇಲ್ಲ .ಈ ಕಾರಣದಿಂದ  ಅಲ್ಲಿ  ಕಲಿಯ ಬರುವ  ಮಕ್ಕಳೆಲ್ಲಾ  ಬಡ ಕುಟುಂಬದಿಂದ  ಬರುವ ತಮಿಳು ಮಕ್ಕಳು .ಅಲ್ಲಿ ಸೇರಿದರೆ  ನನ್ನ ಮಗ ಕನ್ನಡಿಗನಾಗಿಸುವ  ನನ್ನ ಆಶೆ ಈಡೇರುವುದು ಕಷ್ಟ .ಅಲ್ಲದೆ  ವರ್ಗಾವಣೆ  ಇರುವ  ನನಗೆ ಹೋದಲ್ಲೆಲ್ಲ  ಕನ್ನಡ ಶಾಲೆ ಸಿಗದು ಎಂದು ಹಿತೋಪದೇಶ ಮಾಡಿದರು . 

                     ನರ್ಸರಿ ಶಾಲೆಗೆಂದು  ಮಗನನ್ನು  ಪೆರಂಬೂರಿನ  ಸಂತ  ಮೇರಿ ಶಾಲೆಗೆ  ಸೇರಿಸಿದೆವು ..ನಮ್ಮ ಕ್ವಾರ್ಟರ್ಸ್ ನಿಂದ  ಪೆರಂಬೂರ್ ರೈಲ್ವೆ ಸೇತುವೆ ದಾಟಿ  ಮಾದಾವರಮ್  ರಸ್ತೆಯಲ್ಲಿ ಎರಡು ಕಿಲೋಮೀಟರು  ದೂರ .ಬೆಳಗ್ಗೆ ಮತ್ತು ಸಂಜೆ  ಬಹಳ ಜನ ಸಂದಣಿ ಇರುವ ರಸ್ತೆ .ಆರಂಭದಲ್ಲಿ  ನನ್ನ ಶ್ರೀಮತಿಯವರು ಅವನನ್ನು  ಶಾಲೆಗೆ ಬಿಟ್ಟು ಪುನಃ ಮಧ್ಯಾಹ್ನ  ಕರೆದು ತರುವರು .ಅಲ್ಲಿಯ ರಸ್ತೆಗಳಲ್ಲಿ  ಲಿಡ್ ಇಲ್ಲದ  ಅಪಾಯಕಾರಿ ಮ್ಯಾನ್ ಹೋಲ್  ಗಳು  ಯಥೇಶ್ಚ .ಮಳೆ ಬಂದು ರಸ್ತೆಯಲ್ಲಿ  ನೀರು ತುಂಬಿದರೆ  ರಸ್ತೆಯಲ್ಲಿ ನಡೆಯುವವರು  ಮುಖ್ಯವಾಗಿ ಮಕ್ಕಳು  ಕಾಣದಂತೆ  ಮಾಯವಾಗುವ ಸಾಧ್ಯತೆ ಇತ್ತು . ಅದಕ್ಕೆ ಕೊಡೆಯನ್ನೋ  ಮರದ ಕೋಲನ್ನೋ  ಊರುಗೋಲಾಗಿ  ಉಪಯೋಗಿಸಿ ನಡೆಯ ಬೇಕಿತ್ತು .ಕೆಲವು ದಿನಗಳ ನಂತರ  ಒಬ್ಬ ಸೈಕಲ್ ರಿಕ್ಷಾ  ದವನನ್ನು  ಗೊತ್ತು ಮಾಡಿದೆವು .ಅವನು ಸ್ವಲ್ಪ ಒರಟ ಮತ್ತು  ಮದ್ಯ ಪಾನಿ .ಆದರೆ  ಎಂಜಿನ್ ರಿಕ್ಷಾ ದವರಂತೆ  ಅಲ್ಲ .ಚೆನ್ನೈ ನ  ಆಟೋ ರಿಕ್ಷಾದವರಿಗೆ  ಆಗ  ಸ್ವಜನ ಪಕ್ಷಪಾತ ಇರಲಿಲ್ಲ .ತಮಿಳರಿಗೂ ಅನ್ಯ ಭಾಷಿಕರಿಗೂ ಒಂದೇ ತರಹ ಮೋಸ ಮಾಡುವರು ಮತ್ತು ಜಗಳ ಆಡುವರು .ಒಂದೇ ವ್ಯತ್ಯಾಸ  ನಮಗೆ ಅವರ ಬೈಗಳು ಅರ್ಥ ಆಗುತ್ತಿದ್ದಿಲ್ಲ .ಈಗ  ಓಲಾ  ಆಟೋ ಗಳು ಬಂದ  ಮೇಲೆ ಸ್ಥಿತಿ  ಸುಧಾರಿಸಿದೆ . 

                           ಪೆರಂಬೂರ್ ಶಾಲೆಯ ಒಂದು ಸಮಾರಂಭದಲ್ಲಿ ಮಗ ನಿತಿನ್ ಮತ್ತು ಅವನ ಸಹಪಾಠಿ 



    ನಮ್ಮ  ಸೈಕಲ್ ರಿಕ್ಷಾದವನಿಗೆ ಮಕ್ಕಳ ಮೇಲೆ ಪ್ರೀತಿ .ಏಳೆಂಟು ಮಕ್ಕಳನ್ನು ಶಾಲೆಗೆ  ಕೊಡೊಯ್ಯುತ್ತಿದ್ದ .ಏರು ರಸ್ತೆ ಅಥವಾ ಚಡಾವು ಬಂದರೆ  ಸೀನಿಯರ್ ಮಕ್ಕಳು  ಇಳಿದು ತಳ್ಳುವರು .ಮಕ್ಕಳಿಗೆ ಅದು ಒಂದು ಆಟ .ಅವರು ಎಂದೂ ಅದರ ಬಗ್ಗೆ  ಗೊಣಗಿದ್ದಿಲ್ಲ .ಪ್ರತಿಯಾಗಿ  ಮಧ್ಯಾಹ್ನ ಬರುವ ವೇಳೆ ರೋಡ್ ಸೈಡ್ ಸಂಚಾರಿ ಹೋಟೆಲ್ ನಲ್ಲಿ  ಗಂಜಿ ಸೇವನೆ ಸಂದರ್ಭದಲ್ಲಿ ಮಕ್ಕಳಿಗೆ  ಸಮೋಸಾ ಕೊಡಿಸುವನು .ಮಕ್ಕಳಿಗೆ ತುಂಬಾ ಖುಷಿ ,ಅಲ್ಲದೆ ನಮ್ಮ ಹುಡುಗ ಅವನಂತೆ ಗಂಜಿ ಸುರ್ ಸುರ್ ಎಂದು  ಕುಡಿಯ ಬೇಕು ಎನ್ನುವನು .ಮಕ್ಕಳಿಗೆ ಒಳ್ಳೆ ರೋಲ್ ಮಾಡೆಲ್ .ಅಲ್ಲದೆ ಅಂತಹ ಕಡೆ  ಸಮೊಸ ತಿಂದು  ರೋಗ ನಿರೋಧಕ ಶಕ್ತಿ ಉಚಿತವಾಗಿ .ಕೆಲವೊಮ್ಮೆ  ಸಂಜೆ ತೀರ್ಥ ಸೇವನೆ ಜಾಸ್ತಿ ಆದರೆ ಮರುದಿನ ರಿಕ್ಷಾ ಕಾಣೆ .ಎರಡು ದಿನ ಬಿಟ್ಟು ಬಂದಾಗ ಕೇಳಿದರೆ ಪಾಟಿಯನ್ನೋ (ಅಜ್ಜಿ ).ಮಾಮಿಯನ್ನೋ (ಅತ್ತೆ)  ಸ್ವರ್ಗ ಲೋಕಕ್ಕೆ  ಮಾತಿನಲ್ಲೇ ಕಳುಸಿಸುತ್ತಿದ್ದ .ಹೆಚ್ಚು ಕೇಳಿದರೆ  ತಮಿಳಿನಲ್ಲಿ ಸಹಸ್ರ ನಾಮಾರ್ಚನೆ  ಆಗುತ್ತಿತ್ತು .ಆದರೆ ನಮ್ಮ ಮೇಲಿನ ಕೋಪ ಮಕ್ಕಳ ಮೇಲೆ ತೋರಿಸುತ್ತಿದ್ದಿಲ್ಲ . 

                 ಒಂದನೇ ತರಗತಿಗೆ  ಎಲ್ಲಿಗೆ ಸೇರಿಸಲಿ ?ಪೆರಂಬೂರಿನಲ್ಲಿ  ಬಹಳಷ್ಟು  ರೈಲ್ವೆ  ನೌಕರರಿದ್ದರೂ  ಕೇಂದ್ರೀಯ ವಿದ್ಯಾಲಯ ಇರಲಿಲ್ಲ .ಈ ಶಾಲೆಗಳಲ್ಲಿ  ಗುಣಮಟ್ಟದ  ಶಿಕ್ಷಣ ಕಡಿಮೆ ಶುಲ್ಕದಲ್ಲಿ ಕೊಡುವರು .ವರ್ಗಾವಣೆ ಇರುವ ಕೇಂದ್ರ ಸರಕಾರದ  ನೌಕರರ ಮಕ್ಕಳಿಗೆ ಆದ್ಯತೆ .. ಅದರಲ್ಲೂ  ಹೆಚ್ಚು ಬಾರಿ ವರ್ಗಾವಣೆ ಗೊಂಡ  ಸರ್ಟಿಫಿಕೇಟ್ ಇದ್ದರೆ  ಸೀಟ್ ಸಿಗುವ ಸಾಧ್ಯತೆ ಹೆಚ್ಚು . ಗಿಲ್ ನಗರ ಮತ್ತು  ಆವಡಿ  ಯ ಎರಡು ಶಾಲೆಗಳಿಗೆ ಅರ್ಜಿ ಹಾಕಿದೆವು . ಗಿಲ್ ನಗರ ಪೆರಂಬೂರಿಗೆ ಹತ್ತಿರ  ಆದರೂ  ರೈಲ್ವೆ ಸೌಕರ್ಯ ಇಲ್ಲ .ಆವಡಿ ದೂರ ,ಆದರೆ  ಬೇಕಷ್ಟು ಉಪನಗರ  ರೈಲು ಸಂಪರ್ಕ ಇತ್ತ್ತು .ನನ್ನ ರೈಲ್ವೆ ಮಿತ್ರ ಇಂಜಿನಿಯರ್ ಶಶಿಧರನ್  ಪೆರಂಬೂರ್  ಕಾರಿಯೇಜ್  ವರ್ಕ್ಸ್  ನಲ್ಲಿ  ಇದ್ದರು .ಮಲಯಾಳಿ .ಅವರು  ಆವಡಿ ಯಲ್ಲಿ ನಾಲ್ಕು ಕೇಂದ್ರೀಯ ವಿದ್ಯಾಲಯ ಇವೆ ಎಂದು ತನ್ನ ಮಕ್ಕಳನ್ನು ಅಲ್ಲಿ ಸೇರಿಸಿದ್ದೇನೆ ಎಂದು ತಿಳಿಸಿ  ಅರ್ಜಿ ತಂದು ಕೊಟ್ಟರು .ಆವಡಿ  ಯಲ್ಲಿ  ಸೇನಾ ಉಪಕರಣ  ಕಾರ್ಖಾನೆ ,ಸೇನಾ ಬಟ್ಟೆ ತಯಾರಿಕಾ ಕಾರ್ಖಾನೆ ,ಕೇಂದ್ರೀಯ ಮೀಸಲು ಪಡೆ  ಇತ್ಯಾದಿ ನೌಕರಿಗೆ ಬೇರೆ ಬೇರೆ ಕೇಂದ್ರೀಯ ವಿದ್ಯಾಲಯ ಇತ್ತು . ಅವುಗಳಲ್ಲಿ ಒಂದರಲ್ಲಿ  ಮಗನಿಗೆ ಸೀಟ್ ಸಿಕ್ಕಿತು .ಆದರೆ ಪೆರಂಬೂರ್ ಕ್ವಾಟರ್ಸ್ ನಿಂದ  ದಿನಾಲೂ ಹೋಗಿ ಬರುವುದಕ್ಕೆ ಅವನು ಸಣ್ಣವನು .ಅದಕ್ಕೆ ಎಲ್ಲಾ ಸೌಕರ್ಯ ವಿದ್ದ   ಕ್ವಾಟರ್ಸ್ ನ್ನು  ತ್ಯಜಿಸಿ  ಮಗನ ಶಾಲೆಗೆ ಸಮೀಪ  ವೈಷ್ಣವಿ ನಗರ ಎಂಬಲ್ಲಿ  ಬಾಡಿಗೆ ಮನೆ ಮಾಡಿದೆವು .ಅದಕ್ಕೂ ಶಶಿಧರನ್ ಅವರ ಸಹಾಯ ಹಸ್ತ . 

          ನಮ್ಮ  ಮನೆಯ ಸುತ್ತ ಮುತ್ತ  ಆರ್ಡಿನೆನ್ಸ್  ಕಾರ್ಖಾನೆ ನೌಕರ ರು .ಹೆಚ್ಚಿನವರು  ಮಲಯಾಳಿಗಳು ,ಮಿಕ್ಕವರು ತಮಿಳರು .ಕನ್ನಡಿಗರು ಅಪರೂಪ ಆದರೂ ಇದ್ದರು. ನಮ್ಮ ಪಕ್ಕದ ಮನೆಯಲ್ಲಿ  ಶಂಕರ ನಾರಾಯಣನ್ ಮತ್ತು  ಅವರ ಪತ್ನಿ ಸರಸ್ವತಿ (ಸರಸು ಆಂಟಿ ) ಇದ್ದರು .ಮಲಯಾಳಿಗಳು .ಅವರು ನಮಗೆ ಮಾಡಿದ ಉಪಕಾರ  ಅಷ್ಟಿಟ್ಟಲ್ಲ  .ಆರ್ಡಿನೆನ್ಸ್ ಫ್ಯಾಕ್ಟರಿ  ನೌಕರರ ಮಕ್ಕಳನ್ನು  ಕೇಂದ್ರೀಯ ವಿದ್ಯಾಲಯ ಗಳಿಗೆ  ಕರೆದು ಕೊಂಡು ಹೋಗಲು  ಅವರ ಬಸ್ ಬರುತ್ತಿತ್ತು .ಅದರಲ್ಲಿ ನಮ್ಮ ಮಗನಿಗೆ ಅವರ ಕೇರ್ ಒಫ್  ಪಾಸ್ ಮಾಡಿಸಿ ಕೊಡಿಸಿದರು .ಪಕ್ಕದಲ್ಲಿ  ವಾಸವಿದ್ದ ಅವರ ಬಂದುಗಳ ಮಗಳು ಅದೇ ಶಾಲೆಗೆ ಹೋಗುತ್ತಿದ್ದಳು .ಅವಳು ನನ್ನ ಮಗನನ್ನು ತನ್ನ ಒಡ ಹುಟ್ಟಿದ ತಮ್ಮನಂತೇ  ಸಂತೋಷದಿಂದ ಶಾಲೆಗೆ ಕೂಡಿ ಕೊಂಡು ಹೋಗಿ ಬಂದು ಮಾಡುವಳು . ನೋಡಿ ಆಗೆಲ್ಲಾ ಜನರು ಒಬ್ಬರಿಗೊಬ್ಬರು  ಆಗುವರು .ಈಗಿನಷ್ಟು ಹಣ ಚಲಾವಣೆ ಇರಲಿಲ್ಲ . 

ವೈಷ್ಣವಿ ನಗರ ಕ್ಕೆ  ಸಮೀಪ ಅಣ್ಣಾ ನೂರ್ ನಲ್ಲಿ  ಉಪನಗರ ರೈಲ್ವೆ ನಿಲ್ದಾಣ ಇತ್ತು .ಪಕ್ಕದಲ್ಲಿ  ರೈಲ್ವೆ ಕಾರ್ ಶೆಡ್ .(ಉಪನಗರ ರೈಲುಗಳ ನಿಲುಗಡೆ ,ದುರಸ್ತಿ ತಾಣ )ನಮ್ಮ ಬಾಡಿಗೆ ಮನೆಯಿಂದ ಒಂದೂವರೆ ಕಿಲೋಮೀಟರ್ .ನನ್ನ ಮೋಟಾರ್ ಸೈಕಲ್ ನಲ್ಲಿ  ಅಲ್ಲಿಗೆ ತೆರಳಿ  ,ಬೈಕ್ ಸ್ಟಾಂಡ್ ನಲ್ಲಿ ಬೈಕ್ ಇತ್ತು ರೈಲು ಹಿಡಿದು ಪೆರಂಬೂರಿಗೆ ಹೋಗುತ್ತಿದ್ದೆ . ನಿಲ್ದಾಣದಿಂದ  ಆಸ್ಪತ್ರೆಗೆಗೆ  ಒಂದೂವರೆ ಕಿಲೋ ಮೀಟರ್ ನಡಿಗೆ .ರಾತ್ರಿ ಪಹಳಿ  ಕರ್ತವ್ಯ ಇದ್ದಾಗ ನಾನು ಮನೆಯಿಂದ ಎರಡು ದಿನ ದೂರ ಇರುತ್ತಿದ್ದೆ .ಆಗ ಮೊಬೈಲ್ ಫೋನ್ ಇಲ್ಲ .ಲ್ಯಾಂಡ್ ಲೈನ್ ಫೋನೂ ಇರಲಿಲ್ಲ .ಅಕ್ಕ  ಪಕ್ಕದವರು ಸಹಾಯ ಮಾಡುತ್ತಿದ್ದರು .ಮಗನಿಗೆ ಅಸೌಖ್ಯ ಆದರೆ  ಕಾರ್ ಶೆಡ್ ಡಿಸ್ಪೆನ್ಸರಿ ಯಲ್ಲಿ  ಪರಿಚಯದ ಒಳ್ಳೆಯ ಡಾಕ್ಟರ್ ರಾಧಾ ಇದ್ದರು . 

        ಒಂದು ದಿನ  ನಮ್ಮ ಹುಡುಗ  ಯಾವತ್ತ್ತು ಬರುವ  ಬಸ್ಸಿನಲ್ಲಿ  ಮಕ್ಕಳೊಡನೆ ಬರಲಿಲ್ಲ .ಪಕ್ಕದ ಮನೆಯ ಹುಡುಗಿ   ಕೂಡ ಶಾಲೆ ಬಿಡುವಾಗ ನನಗೆ ಸಿಗಲಿಲ್ಲ ಎಂದಳು .ಪುಣ್ಯಕ್ಕೆ ಆ ದಿನ ನಾನು ಮನೆಯಲ್ಲಿಯೇ ಇದ್ದೆನು .ಬೈಕ್ ತೆಗೆದು ಕೊಂಡು ಅವನ ಶಾಲೆಯ ಅಕ್ಕ ಪಕ್ಕ ಹುಡುಕಾಡಿದೆನು .ಮನಸ್ಸಿನಲ್ಲಿ ಭಯ .ಈ  ಮಹಾ ನಗರದಲ್ಲಿ  ಎಲ್ಲಿ ಕಳೆದು ಹೋದನೋ ಎಂದು ..ಮನಸಿನಲ್ಲಿ  ಏನೇನೋ ಯೋಚನೆಗಳು .ಪುನಃ  ಮನೆಗೆ ಬಂದಾಗ ಅವನು ವಾಪಸ್ ಆಗಿದ್ದ.  ನಡೆದುದೇನೆಂದರೆ ಆ ದಿನ ಕ್ಲಾಸ್ ಸ್ವಲ್ಪ ಬೇಗ ಬಿಟ್ಟಿತ್ತು .ಅವನು ಯಾವತ್ತೂ ಬರುವ ಬಸ್ಸಿನ  ಬದಲು ಬೇರೆ  ಲೈನ್ ನ ಬಸ್ ಹತ್ತಿದ್ದ .ಅದು ಎಲ್ಲಾ ಕಡೆ ಸುತ್ತು ಹಾಕಿ ವೈಷ್ಣವಿ ನಗರಕ್ಕೆ  ಬರುವುದು .ಅಂತೂ ನಮಗೆಲ್ಲ ಕೆಲವು ಗಂಟೆ  ಟೆನ್ಶನ್ . 

                  ( ಆವಡಿ ಕೇಂದ್ರೀಯ ವಿದ್ಯಾಲಯ ಸ್ಕೂಲ್ ಡೇ ಯಲ್ಲಿ )



            ವೈಷ್ಣವಿ ನಗರದಲ್ಲಿ ಹೆಚ್ಚು ಆರ್ಡಿನೆನ್ಸ್ ಫ್ಯಾಕ್ಟರಿ ನೌಕರರೇ  ಇದ್ದರು .ಅಕ್ಕ ಪಕ್ಕದವರೂ ಅವರೇ .ಅವರಿಗೆ  ರಕ್ಷಣಾ ನೌಕರರಂತೆ  ಕ್ಯಾಂಟೀನ್ ಸೌಕರ್ಯ ಇತ್ತು .ನಮಗೆ ತಮ್ಮ ಖಾತೆಯಿಂದ ಕೆಲವು ದಿನ ಬಳಕೆ ವಸ್ತು ಗಳು ಸಿಗುವಂತೆ ಮಾಡುತ್ತಿದ್ದರು .ನಾವು ಮೊದಲು ಬಾಡಿಗೆಗೆ ಇದ್ದ ಮನೆ ತುಂಬಾ ಸಣ್ಣದು ,ಮತ್ತು  ಕೆಲವೊಮ್ಮೆ ಬಾವಿಯಲ್ಲಿ ನೀರಿಗೆ ತತ್ವಾರ ಆಗುತ್ತಿತ್ತು .ಆಗ ನಮ್ಮ ಮನೆಯವರು  ಸಾರ್ವಜನಿಕ  ನಲ್ಲಿಗೆ ಹೋಗುತ್ತಿದ್ದರು .ಸ್ವಲ್ಪ ಸಮಯದಲ್ಲಿ  ಇನ್ನೊಂದು ಅನುಕೂಲಕರ  ಮನೆ ಸಿಕ್ಕಿತು . 

ಕೇಂದ್ರೀಯ ವಿದ್ಯಾಲಯ ನನ್ನ ಮಗನಿಗೆ ಇಷ್ಟ ವಾಯಿತು .ಅಲ್ಲಿ ಒಳ್ಳೆಯ ಶಿಕ್ಷಕರು ಇದ್ದರಲ್ಲದೆ ಪಠ್ಯೇತರ ಚಟುವಟಿಕೆ ಗಳಿಗೆ  ಪ್ರೋತ್ಸಾಹ ಇತ್ತು  .ನಾನು ಆಸ್ಪತ್ರೆ  ಕೆಲಸದಲ್ಲಿ  ಬ್ಯುಸಿ ಯಾಗಿ ಇರುತ್ತಿದ್ದೆನು  ಮತ್ತು ಪ್ರಯಾಣದಲ್ಲಿ ಸಮಯ ಶಕ್ತಿ ವ್ಯಯ ಆಗುತ್ತಿತ್ತು .ನನ್ನ ಮನೆಯವರೇ  ಅವನ  ಅವಶ್ಯಕತೆ ಗಳನ್ನು ನೋಡಿಕೊಳ್ಳುತ್ತಿದ್ದರು . ಅಕ್ಕ ಪಕ್ಕದಲ್ಲಿ ಆಟವಾಡಲು ಮಕ್ಕಳು ಇದ್ದರು .

ಮಕ್ಕಳ ಮನಸ್ಸು ಬಲು ಸೂಕ್ಷ್ಮ . ನನ್ನ ಮಗನಿಗೆ ಒಳ್ಳೆಯ ಅಂಕಗಳು ಬರುತ್ತಿದ್ದವು .ಶಾಲೆಯ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಇತ್ತು .ಒಂದು ದಿನ ರಾತ್ರಿ ಮಲಗಿದ್ದಾಗ ಬಿಕ್ಕಳಿಸುತ್ತಿದ್ದನು .ಏಕೇಂದು ವಿಚಾರಿಸಲು ಈ ವರ್ಷ ಸ್ಕೂಲ್ ಡೇ ಯಲ್ಲಿ ನನಗೆ ಒಂದೂ ಬಹುಮಾನ ಇಲ್ಲ .ಬೇರೆಲ್ಲರಿಗೆ ಇದೆ .,ನಾವು ಅವನಿಗೆ ಸಮಾಧಾನ ಮಾಡಿ ಮುಂದಿನ ವರ್ಷ ಬರುವುದು ಎಂದೆವು .ಮುಂದೆ ಬಹುಮಾನಗಳು ಬಂದುವು .ನಾನು ಮುಂದೆ ಕೆಲವು ಶಾಲೆಗಳಲ್ಲಿ ಅತಿಥಿಯಾಗಿ ಬಹುಮಾನ ವಿತರಣೆ ಮಾಡುವಾಗ ಪಡೆಯುವವರ  ಪಟ್ಟಿ ಬಹಳ ದೊಡ್ಡದು ಇರುತ್ತಿತ್ತು .ಏನಾದರೂ ಒಂದು ಕಾರಣ ಕಾಣಿಸಿ  ಎಲ್ಲರಿಗೂ ಉಡುಗೊರೆ ಸಿಗುವಂತೆ ಮಾಡುತ್ತಿದ್ದರು .ನಮಗೆ ಎಷ್ಟು ಕೊಟ್ಟರೂ ಮುಗಿಯುವುದಿಲ್ಲ ಎಂದು ಯೋಚನೆ ಬರಬಹುದು ,ಆದರೆ ಮಕ್ಕಳ ಮೊಗದಲ್ಲಿ  ಸಂತಸ ಕಂಡರೆ ಅದೆಲ್ಲ ಮರೆಯಾಗುವುದು 

ವೈಷ್ಣವಿ ನಗರ ದಲ್ಲಿ  ನಮ್ಮ ಎರಡನೇ ಮನೆ ಓಣಿಯಲ್ಲಿ  ಒಬ್ಬರು  ಬ್ರಿಟ್ಟಾನಿಯ  ಬಿಸ್ಕತ್  ಫ್ಯಾಕ್ಟರಿ ಯಲ್ಲಿ ಕೆಲಸದಲ್ಲಿ ಇದ್ದರು .ಅವರ ಹೆಂಡತಿ ಮೀನಾ ಮಾಮಿ .ಫ್ಯಾಕ್ಟರಿ ಯಿಂದ ಸೆಕೆಂಡ್ಸ್ ಬಿಸ್ಕತ್ ಕಡಿಮೆ ಕ್ರಯಕ್ಕೆ  ತಂದು ಕೊಡುವರು .ರಜೆಯಲ್ಲಿ  ಹೆಂಡತಿ ಮಗ  ಊರಿಗೆ ಹೋದಾಗ ಪಕ್ಕದ ಮನೆಯವರು ಊಟ ತಿಂಡಿ ಕೊಡುವರು .ನಮ್ಮ  ಮನೆಯಲ್ಲಿ ಕೇಬಲ್ ಟಿ ವಿ ಇರಲಿಲ್ಲ .ಕ್ರಿಕೆಟ್ ಮ್ಯಾಚ್ ನೋಡಲು ಪಕ್ಕದ ಮನೆ ಆಶ್ರಯ . 

  ಹತ್ತಿರದ  ಬಸ್ ಸ್ಟಾಪ್ ವೈಷ್ಣವಿ ನಗರ .ಆದರೂ ಎಲ್ಲಾ ಸಿಟಿ ಬಸ್ ಗಳಿಗೆ ಸ್ಟಾಪ್ ಇರಲಿಲ್ಲ .ಪಕ್ಕದಲ್ಲಿ ತಿರುಮಲೆ ಒಯಲ್ ಇತ್ತು .ಅಲ್ಲಿ ಎಲ್ಲಾ ಬಸ್ ನಿಲ್ಲುವುವು .ಅಲ್ಲಿಗೆ ಒಂದು ಒಳ ದಾರಿ ಇತ್ತು ..ಆ ದಾರಿ ಬದಿಯಲ್ಲಿ ಒಬ್ಬರು ಸಂಗೀತ ಟೀಚರ್ ಇದ್ದರು .ಅವರು ಮಗನಿಗೆ ಸಂಗೀತ ಓನಾಮ ಮಾಡಿದರು ..ತಿರುಮಲೆ ಒಯಲ್ ನಿಂದ  ಪೆರಂಬೂರಿಗೆ  ೨೩ ನಂಬರ್ ಬಸ್ .ಅಂಬತ್ತೂರ್  ಮೂಲಕ ಅಯ್ಯನಾವರಂ (ಜಾಯಿಂಟ್ ಆಫೀಸ್ ಸ್ಟಾಪ್ ) ,ಪುರುಶ್ವಾಕಮ್  ,ಮೂಲಕ ಪ್ಯಾರಿಸ್ ಗೆ ..ಹಲವು ಬಾರಿ ಈ ಬಸ್ಸಿನಲ್ಲಿ ಹೋಗಿದ್ದೇನೆ .     (ಮುಂದುವರಿಯುವುದು )

    ಬಾಲಂಗೋಚಿ : ಮುಂದೆ ನಮ್ಮ ಮಗ ಕನ್ನಡ ಚೆನ್ನಾಗಿ ಓದಿ  ಬರೆಯಲು    ಕಲಿತಿರುವನು       

 

ಭಾನುವಾರ, ಅಕ್ಟೋಬರ್ 11, 2020

ಚೆನ್ನೈ ದಿನಗಳು 1

 ರೈಲ್ವೇ ವೈದ್ಯಕೀಯ ಸೇವೆಯಲ್ಲಿದ್ದ ನನಗೆ1992ರಲ್ಲಿ ಚೆನ್ನೈ ಪೆರಂಬೂರು ಆಸ್ಪತ್ರೆಗೆ  ವರ್ಗ ಆಯಿತು .ಅದು ಬಹಳ ಪ್ರಸಿದ್ಧ  ಆಸ್ಪತ್ರೆ .ತುಂಬಾ ಸಂತೋಷವಾಯಿತು .ಈ ವರ್ಗಾವಣೆಗೆ  ಕಾರಣ  ಡಾ ಯೋಗಿ ಮಹ್ರೋತ್ರ ,ದಕ್ಷಿಣ ರೈಲ್ವೇ ಮುಖ್ಯ ವೈದ್ಯಾಧಿಕಾರಿ ಅಗಿದ್ದವರು .ಒಮ್ಮೆ  ಮಂಗಳೂರಿಗೆ  ಇನ್ಸ್ಪೆಕ್ಷನ್  ಗೆ ಬಂದವರು  ನಿಮ್ಮಂತಹ ಯುವಕರು  ಪೆರಂಬೂರಿಗೆ ಬರಬೇಕು .ಅಲ್ಲಿ ಕಲಿಯುವುದು ಬಹಳ ಇದೆ ಎಂದು ನನ್ನನ್ನು  ಪ್ರೋತ್ಸಾಹಿಸಿದ್ದರು .ಅವರಿಗೆ ನಾನು ಚಿರ ಋಣಿ .

ಚೆನ್ನೈ ಆಸ್ಪತ್ರೆಯಲ್ಲಿ  ನನ್ನ ಮಿತ್ರ ಡಾ ಪ್ರಸನ್ನ ಕುಮಾರ್ ಸೂಕ್ಷ್ಮಾಣು ಶಾಸ್ತ್ರ ತಜ್ನರಾಗಿ ಕೆಲಸ ಮಾಡುತ್ತಿದ್ದರು.ಹಿರಿಯರಾದ  ಕೇಶವ ಪ್ರಸಾದ್ ರಾಯಚುರ್ಕರ್  ರೇಡಿಯೊಲೊಜಿಸ್ಟ್  ಆಗಿದ್ದರು . ನಾನು ಬರುವ ವಿಚಾರ ಅವರಿಗೆ ತಿಳಿಸಿದೆ ..ಮೊದಲಿಗೆ  ನಾನೊಬ್ಬನೇ  ಪೈಲಟ್ ಆಗಿ  ಚೆನ್ನೈ ಗೆ  ತೆರಳಿ  ಕೆಲಸಕ್ಕೆ ರಿಪೋರ್ಟ್ ಮಾಡಿದೆ .ಪೆರಂಬೂರ್  ಕಾನ್ಸ್ಟೇಬಲ್  ರಸ್ತೆಯಲ್ಲಿ  ಒಂದು ಹಳೇ  ಕ್ವಾಟರ್ಸ್ ನಲ್ಲಿ  ಪ್ರಸನ್ನಕುಮಾರ್ ಇದ್ದರು .ಅವರಿಗೆ ಮದುವೆ  ಆಗಿರಲಿಲ್ಲ .ಕೇಶವ್  ಕುಟುಂಬ ಇನ್ನೂ ಮೈಸೂರು ನಲ್ಲಿಯೇ  ಇತ್ತು .ಅವರೂ  ,ಹೃದಯ ಶಸ್ತ್ರ  ತಜ್ಞ ಮೂಸಾ  ಕುನ್ಜಿ  ಅದೇ ಮನೆಯಲ್ಲಿ ಇದ್ದರು .ನಾನೂ  ಅವರೊಡನೆ ಸೇರಿ ಕೊಂಡೆ .ಅದು ಆಸ್ಪತ್ರೆಗೆ ಸಮೀಪ ಇತ್ತು .. ಅವರೊಡನೆ ಕಳೆದ  ಮೊದಲ ಚೆನ್ನೈ ದಿನಗಳು ಸಂತೋಷಕರ ಆಗಿದ್ದವು 

ಎಲ್ಲಿಯಾದರೂ  ಅನುಕೂಲ ಕರ ವಾದ ಜಾಗದಲ್ಲಿ ಕ್ವಾಟರ್ಸ್ ಹುಡುಕುವ ಕೆಲಸ ಆರಂಭ ವಾಯಿತು .ಇಲಾಖೆಯಲ್ಲಿ  ಇದಕ್ಕೆ ಶಿಫಾರಸು  ಇತ್ಯಾದಿ ನಡೆಯುತ್ತದೆ .ನನಗೆ ಅಲ್ಲಿ ಯಾರೂ ಗಾಡ್ ಫಾದರ್ ಇಲ್ಲ ...ಕೊನೆಗೂ  ಪಿಲ್ಕಿಂಗ್ಟನ್  ರಸ್ತೆಯ ಒಂದು ಬಂಗ್ಲೆಯ  ಮಹಡಿ ಮನೆ ಸಿಕ್ಕಿತು .ಕೆಳಗಡೆ  ಎರಡು ಮನೆಗಳು ಇದ್ದವು 

ಮಂಗಳೂರಿನ  ನನ್ನ  ಮನೆ ಸಾಮಾನು ಫಾರ್ಮಸಿಸ್ಟ್  ಮಿತ್ರ ವಿಜಯನ್  ಅವರ ಮತ್ತು ಸಹೋದ್ಯೋಗಿಗಳ  ಸಹಾಯದಿಂದ  ರೈಲ್ವೆ ವ್ಯಾಗನ್ ಗೆ  ತುಂಬಿಸ ಲಾಯಿತು .ಇದರಲ್ಲಿ  ದೊಡ್ಡ ವಸ್ತು  ಸ್ಟೀಲ್ ಕಪಾಟು ;ಪುತ್ತೂರಿನ  ಸೋಜಾ ರ  ಅಂಗಡಿಯಿಂದ ೧೯೮೪ ರಲ್ಲಿ ಕೊಂಡದ್ದು ,ಈಗಲೂ ನನ್ನ್ನ ಮನೆಯಲ್ಲಿ ಹಾಗೇ  ಇದೆ .ಇನ್ನು ಭಾರದ ವಸ್ತು  ಅರೆಯುವ ಕಲ್ಲು .ಈಗಲೂ ಇದೆ ಆದರೆ ಉಪಯೋಗದಲ್ಲಿ ಇಲ್ಲ .ಇನ್ನು  ನನ್ನ ಎಲ್ಲಾ ಟ್ರಾನ್ಸ್ಫರ್ ಗಳಲ್ಲಿಯೂ  ತೂಕದ ವಸ್ತು  ನನ್ನ ಲೈಬ್ರರಿ .ನಾಲ್ಕೈದು ಕಟ್ಟು ಪುಸ್ತಕ ಇದ್ದಿರಬಹುದು .ಇದರ ಜೊತೆ ನನ್ನ ಐರಾವತ  ಕವಾಸಾಕಿ  ೧೦೦ ಬೈಕ್ .ಇವನ್ನು ನನ್ನ  ಮಿತ್ರರ ಮುಖ್ಯವಾಗಿ  ಪ್ರಸನ್ನ ಮತ್ತು  ಕೇಶವ್ ಅವರ ಸಹಾಯದಿಂದ  ಮನೆಗೆ ಸಾಗಿಸಿ  ಮನೆ ಸಜ್ಜು ಗೊಳಿಸಲಾಯಿತು . 

    ಇನ್ನು  ರೇಷನ್ ಶಾಪ್ ಹುಡುಕಾಣ .ಆಗಿನ್ನೂ ಸಕ್ಕರೆ ,ಧಾನ್ಯ  ರೇಷನ್ ಅಂಗಡಿಯಲ್ಲಿ  ಕೊಳ್ಳುತ್ತಿದ್ದೆವು .ರೇಷನ್ ಕಾರ್ಡ್ ಟ್ರಾನ್ಸ್ಫರ್  ವೋಚರ್  ಮಂಗಳೂರಿನಿಂದ  ತಂದುದನ್ನು  ಚೆಟ್ ಪೆಟ್  ನ  ಆಹಾರ ಇಲಾಖೆ ಆಫೀಸ್ ನಲ್ಲಿ ನಲ್ಲಿ  ಕೊಡುವಾಗ  ಅರ್ಜಿ ಫಾರಂ  ತಮಿಳಿನಲ್ಲಿ  ತುಂಬಿಸ ಬೇಕು .ಅಲ್ಲಿ  ಖಾಸಗಿ ಬರವಣಿಗೆಯವರು ಇದ್ದರು .ನನಗೆ ಭಯ .ಅವರು ನನ್ನ ಹೆಸರನ್ನು ತಮಿಳೀಕರಿಸಿ  ಬದ್ಮಾನಾಭನ್ ಎಂದು ಮಾಡಿದರೆ ? ತಮಿಳಿನಲ್ಲಿ  ವ್ಯಂಜನ ಅಕ್ಷರಗಳು ಕಡಿಮೆ .ಕ ಖ ಗ ಘ ಮ  ಕ್ಕೆ  ಕ  ಮತ್ತು ಮ ಮಾತ್ರ .ಉಚ್ಚಾರಣೆ ಸಂದರ್ಭ ನೋಡಿ ಕೊಂಡು ಇರುವುದು .. ಆದರೆ  ಗಣಪತಿ ಕಣಪತಿ ಆಗುವುದು .ಪೂರಿ  ಭೂರಿ ಆಗುವುದು .ರಾಜ್ಯ ಸರಕಾರದ ಮೊದಲ ಕೆಲಸ ಸುಸೂತ್ರ ಆಯಿತು .ತಮಿಳ್ನಾಡಿನಲ್ಲಿ  ಸರಕಾರಿ ಯಂತ್ರ ಉತ್ತಮ ವಾಗಿಯೇ ಇದೆ .ರಾಜಾಜಿ ಕಾಮರಾಜ್ ಮತ್ತು ಅಣ್ಣಾದುರೈ  ಅವರ  ಆಡಳಿತ ದ  ಪಳೆಯುಳಿಕೆಗಳು ಇವೆ .ಆಗ  ಜಯಲಲಿತಾ ಮುಖ್ಯ ಮಂತ್ರಿ . 

ಇನ್ನು  ಗ್ಯಾಸ್ ಸಂಪರ್ಕ  ಕೂಡಲೇ ಆಯಿತು .ನಾನು ಕಂಡ ಅತ್ಯುತ್ತಮ ಗ್ಯಾಸ್ ಏಜನ್ಸಿ  ಅದು . 

ಹಾಲು  ಬೇಕಲ್ಲ .ತಮಿಳ್ನಾಡಿನ ಡೈರಿ  ಅವಿನ್ .ಅಲ್ಲಿ ಆಗ ಹಾಲಿನ ಕಾರ್ಡ್ ಕೊಡುತ್ತಿದ್ದರು .ಹಾಲಿನ ಕೊರತೆ ಇತ್ತು .ಕರ್ನಾಟಕದಲ್ಲಿಯೂ ಅದೇ ಪರಿಸ್ಥಿತಿ ಇತ್ತು ..ಅವಿನ್ ನವರದು  ಆಗ  ಪ್ರಿ ಪೈಡ್  ಹಾಲಿನ ಕಾರ್ಡ್ ಮಾತ್ರ ಇತ್ತು .ಹಣ ಕೊಟ್ಟು ಹಾಲು ಕೊಳ್ಳಲು ಅವಕಾಶ ಇರಲಿಲ್ಲ .ಹೊಸ ಕಾರ್ಡ್ ಡೇರಿ ಯಲ್ಲಿ ಮಾತ್ರ ಇಶ್ಯೂ ಮಾಡುತ್ತಿದ್ದರು .ಅದಕ್ಕೋಸ್ಕರ ಮಾದವರಂ ನಲ್ಲಿ  ಇದ್ದ  ಡೇರಿ ಗೆ  ಹೋಗಿ ಅರ್ಜಿ ಕೊಟ್ಟೆ. ಅಲ್ಲಿಯ ಅಧಿಕಾರಿ ನಿಮ್ಮ ಮನೆಯಲ್ಲಿ ಎಷ್ಟು ಮಂದಿ ಇದ್ದೀರಿ ,ಮಕ್ಕಳೆಷ್ಟು  ಎಲ್ಲ ವಿಚಾರಿಸಿ  ನಾನು ಅರ್ಜಿಯಲ್ಲಿ ದಿನಕ್ಕೆ ಒಂದೂವರೆ ಲೀಟರ್ ಕೇಳಿದ್ದಕ್ಕೆ  ಅದನ್ನು ಕಟ್ ಮಾಡಿ  ಒಂದು ಲೀಟರ್ ಮಾಡಿ ದಯಪಾಲಿಸಿದನು .ಈಗ ಇದನ್ನೆಲ್ಲ ನೆನಸಿ ಕೊಂಡರೆ  ಆಶ್ಚರ್ಯ ಆಗುವುದು .ಆದರೆ  ಹಾಲಿಗೆ ನಮಗೆ ತತ್ವಾರ ಆಗಲಿಲ್ಲ .ಯಾಕೆಂದರೆ  ವಸತಿ ಪ್ರದೇಶದಲ್ಲಿ ಹಾಲಿನ ಅಜ್ಜಿಯರು (ಪಾಟಿ -ತಮಿಳಿನಲ್ಲಿ )ಇರುತ್ತಿದ್ದರು .ಅವರು  ತಮ್ಮ ಏರಿಯಾ ದ  ಮನೆಯವರ ಹಾಲಿನ ಕಾರ್ಡ್ ಶೇಖರಿಸಿ ಬೂತ್ ನಿಂದ ಹಾಲು ತಂದು ವಿತರಿಸುತ್ತಿದ್ದರು .ತಮ್ಮ ಸೇವೆಗೆ ಹೆಚ್ಚು ಸಂಭಾವನೆ ತೆಗೆದು ಕೊಳ್ಳುತ್ತಿರಲಿಲ್ಲ .ಆದರೆ  ಕೆಲವು ಮನೆಯವರು ಊರಿನಲ್ಲಿ ಇಲ್ಲದ ವೇಳೆ  ಅವರ ಲೆಕ್ಕದ ಹಾಲನ್ನು ಹೆಚ್ಚು ಬೇಕಾದವರಿಗೆ ಈ ಅಜ್ಜಿಯರು ವಿಲೇವಾರಿ ಮಾಡುತ್ತಿದ್ದರು .ಹಾಲಿನ ಕೊರತೆ ಇದ್ದುದರಿಂದ  ಅವರಿಗೆ ದಿವಸದ ಕೊನೆಗೆ ಹಾಲು ಉಳಿಯುತ್ತಿರಲಿಲ್ಲ .ದೊಡ್ಡ ಅಲ್ಯೂಮಿನಿಯಂ ಬಾಣಲೆಯಲ್ಲಿ ಹಾಲಿನ ಪ್ಯಾಕೆಟ್  ತುಂಬಿ ಬರುತ್ತಿದ್ದ  ಹಾಲಿನ ಮಂಗಮ್ಮರು  ಈಗಲೂ ನೆನಪಿನಲ್ಲಿ ಅಚ್ಚಾಗಿ ಉಳಿದಿದ್ದಾರೆ   ( ಮುಂದುವರಿಯುವುದು)