ಬೆಂಬಲಿಗರು

ಮಂಗಳವಾರ, ಸೆಪ್ಟೆಂಬರ್ 6, 2022

ಒಂದು ಅನುಭವ

ಹಿಂದೆ ರಾಜರು ,ಮಂತ್ರಿಗಳು ಪ್ರಜೆಗಳ ನಿಜ ಸ್ಥಿತಿ ಅರಿಯಲು ಮಾರು ವೇಷದಲ್ಲಿ ಹೋಗುತ್ತಿದ್ದರು . ಈಗ ಮಂತ್ರಿಗಳು ಬರುವ ಬಗ್ಗೆ ಅವರ ಕಚೇರಿಯಿಂದಲೇ ಸೂಚನೆ ಮೊದಲೇ ಹೋಗುತ್ತದೆ . ಸಂಚರಿಸುವ ದಾರಿ ದಿಢೀರ್ ರಿಪೇರಿ ಆಗುತ್ತದೆ ,ಬಡವರ ಗುಡಿಸಲು ಎತ್ತಂಗಡಿ ಆಗುತ್ತದೆ .ಎಲ್ಲರೂ ಸೌಖ್ಯ ಎಂದು ಬಿಂಬಿಸಲಾಗುತ್ತದೆ . ಯಾರಾದರೂ ಅಧಿಕ ಪ್ರಸಂಗಿ ತನ್ನ ನಿಜ ಕಷ್ಟದ ನಿವೇದನೆ ಮಾಡ ಹೋದರೆ ಸುತ್ತ ಮುತ್ತಲಿನವರು  ತಡೆಯುತ್ತಾರೆ . 

ಒಂದು ಸಾರಿ ನನ್ನ ಮನೆಯವರು ಮದುವೆ ಸಮಾರಂಭದಲ್ಲಿ ಒಬ್ಬ ಅಪರಿಚಿತ  ಮಹಿಳೆಯ ಜತೆ ಉಭಯ ಕುಶಲೋಪರಿ ಮಾತನಾಡುತ್ತಾ ನನ್ನ ಪತಿ ಇಂತಹ ಆಸ್ಪತ್ರೆಯಲ್ಲಿ ಡಾಕ್ಟರು ಎಂದು ಹೆಮ್ಮೆಯಿಂದ ಹೇಳಿ ಕೊಂಡರು . ಅದನ್ನು ಕೇಳಿದ ಕೂಡಲೇ ಆಕೆ ಸಿಟ್ಟಿಗೆದ್ದು ಅವರು ಇಂತಹ ಡಾಕ್ಟರರು ,ಒಂದು ಸ್ಕ್ಯಾನ್ ಮಾಡಿಸುವುದಿಲ್ಲ .ಮದ್ದು ಸರಿ ಕೊಡುವುದಿಲ್ಲ ಎಂದು ಮುಖದ ಮೇಲೆಯೇ ಹೇಳಿದರು . ಈ ಪ್ರಸಂಗದ ನಂತರ  ತನ್ನ ಪತಿಯ ವೃತ್ತಿಯ ಬಗ್ಗೆ ಸುವೋ ಮೋಟೋ ಸ್ಟೇಟ್ಮೆಂಟ್ ಕೊಡುವದುದು ನಿಲ್ಲಿಸಿದಳು . 

ಮೊನ್ನೆ ಭಾನುವಾರ ನಾನು ಕಲ್ಲಡ್ಕದಲ್ಲಿ ನನ್ನ ಬಂಧುವೊಬ್ಬರ ವೈಕುಂಠ ಸಮಾರಾಧನೆ ಗೆ ಬಸ್ಸಿನಲ್ಲಿ ಹೋಗುತ್ತಿದ್ದೆ . ದಾರಿಯಲ್ಲಿ ತುಂಬಾ ಧೂಳು ಇರುವುದರಿಂದ ಮಾಸ್ಕ್ ಹಾಕಿ ಕೊಂಡಿದ್ದೆ . ಅವರೂ ಕಲ್ಲಡ್ಕಕ್ಕೆ . ಎಂದಿನಂತೆ ಪಕ್ಕದ ಸೀಟಿನವರಲ್ಲಿ ಉಭಯ ಕುಶಲೋಪರಿ . ನನ್ನ ಪಕ್ಕದ ಸೀಟಿನಲ್ಲಿ ಇದ್ದವರು ಬೆಟ್ಟಂಪಾಡಿ ಬಳಿಯ ಕೃಷಿಕರು . ನನ್ನ ವೃತ್ತಿ ಕೇಳಲು ನನಗೆ  ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಕೆಲಸ ಎಂದೆ .ಡಾಕ್ಟರು ಎಂದು ಉದ್ದೇಶ ಪೂರ್ವಕ ಹೇಳಲಿಲ್ಲ .ಒಂದು ಡಾಕ್ಟರು ಎಂದ ಒಡನೆ ಅವರು ಆರಾಮವಾಗಿ ಮನ ಬಿಚ್ಚಿ ಮಾತನಾಡುವುದು ನಿಲ್ಲಿಸುತ್ತಾರೆ . ಇನ್ನೊಂದು ನನ್ನ ಪತ್ನಿಗೆ ಆದ ಅನುಭವ. ಅಲ್ಲದೆ ಡಾಕ್ಟರು ಆಗಿ ಇವರು  ಬಸಿನಲ್ಲಿ  ಪ್ರಯಾಣಿಸುವ ಗತಿಗೇಡು ಬಂತಲ್ಲಾ ಎಂದು ಪರಿತಪಿಸುವುದು ಬೇಡ ಎಂಬ ಉದ್ದೇಶ ಕೂಡಾ.

ನನ್ನ ಸಹಯಾತ್ರಿ ನಾನು ನಿಮ್ಮ ಆಸ್ಪತ್ರೆಗೆ ಬಹಳ ಸಾರಿ ಬಂದಿರುವೆನು .ಅಲ್ಲಿ ಡಾಕ್ಟರ್ ಎ ಪಿ ಭಟ್ ಎಂಬವರರದ್ದು ನನ್ನ ಕುಟುಂಬಕ್ಕೆ ಮದ್ದು ;ಎಂದರು . ಹೇಗೆ ಮದ್ದು ?ಎಂದೆ .ಪರವಾಗಿಲ್ಲ ಈಗ ಏನೂ ತೊಂದರೆ ಇಲ್ಲ .ಒಳ್ಳೆ ಡಾಕ್ಟರ್ ಎಂದರು .ಹಾಗೆ ಹೀಗೆ ಮಾತನಾಡುವಾಗ ಕಲ್ಲಡ್ಕ ಬಂತು .ಇಳಿದ ಮೇಲೆ ಜತೆಗೇ ಹೆಜ್ಜೆ ಹಾಕುವಾಗ ನನ್ನ ಮಾಸ್ಕ ತೆಗೆದೆ .ಅವರು ಕೂಡಲೇ ಅಚ್ಚರಿ ಮತ್ತು ಸಂತೋಷದಿಂದ ನೀವೇ ಅಲ್ವ ಸರ್ ನಮ್ಮ ಡಾಕ್ಟರು .ಮಾಸ್ಕ ಇದ್ದುದರಿಂದ ಗುರುತು ಸಿಗಲಿಲ್ಲ ಎಂದರು . ನಾನು ಹೇಳಿದೆ ಇಲ್ಲ ನನ್ನ ಬಗ್ಗೆ ಸರಿಯಾದ ಫೀಡ್ ಬ್ಯಾಕ್ ಸಿಕ್ಕಿತು ಸಂತೋಷ ಎಂದೆ

ಭಾನುವಾರ, ಸೆಪ್ಟೆಂಬರ್ 4, 2022

ಉಸ್ತಾದ್ ಕರೀಂ ಖಾನ್ ಮತ್ತ್ತು ಸಂಗೀತ ಪ್ರೇಮಿ ನಾಯಿ ಮರಿ

 Music 7 - The Story Of His Master's Voice - Music 7 - The ...Abdul Karim Khan - Wikipedia ಉಸ್ತಾದ ಕರೀಂ ಖಾನ್ ಸಂಗೀತ ಲೋಕದ ದಂತ ಕತೆ . ಭೀಮ್ ಸೆನ್ ಜೋಶಿ ಯಂತಹವರು ಅವರಿಂದ ಪ್ರಭಾವಿತರಾಗಿದ್ದರು ಎಂದು ಪ್ರತೀತಿ . 

ಖಾನ್ ಸಾಹೇಬರು ಒಂದು ನಾಯಿ ಮರಿ ಸಾಕಿದ್ದರು .ಅದರ ಹೆಸರು ಟೀಪೂ ಮಿಯಾ . ಖಾನ್ ಸಾಹೇಬರು ಸಂಗೀತ ಅಭ್ಯಾಸ ಮಾಡುವಾಗಲೆಲ್ಲಾ ಅದು ಓಡಿ ಬಂದು ಪಕ್ಕದಲ್ಲಿ ಕುಳಿತು ಕೊಳ್ಳುತ್ತಿತ್ತು . ಅದಕ್ಕೂ ಸಾಕಷ್ಟು ಅಭ್ಯಾಸ ಆಗಿರ ಬೇಕು . ಒಂದು ಬಾರಿ ಸತಾರಾ ದಲ್ಲಿ ಮತ್ತೊಮ್ಮೆ ಮುಂಬೈ ಯಲ್ಲಿ ಕಚೇರಿ ಯಲ್ಲಿ ತಾನೂ ಪಾಲ್ಕೊಂಡು ಸ್ವರ ಸೇರಿ ಸಿ  ಶೋತೃಗಳನ್ನು ರೋಮಾಂಚನ ಗೊಳಿಸಿತ್ತು ಎಂಬ  ಪ್ರತೀತಿ . 

 ಗ್ರಾಮೋಫೋನ್ ರೆಕಾರ್ಡ್ ನಲ್ಲಿ ತನ್ನ ಧನಿಯ ದನಿ ಗುರುತಿಸಿ ಅಲ್ಲೇ ಬಂದು ಕುಳಿತು ಕೊಳ್ಳುತ್ತಿತ್ತು . ಅದರ ಭಾವ ಚಿತ್ರವನ್ನೇ ಭಾರತದ  ಎಚ್ ಎಂ ವಿ ಕಂಪನಿ ತನ್ನ ಲೋಗೋ ವಾಗಿ ಮಾಡಿತ್ತು  ಎಂಬ ಅಂಬೋಣ 

ಉಸ್ತಾದ್ ಕರೀಂ ಖಾನ್ ಕರ್ನಾಟಕ ಸಂಗೀತ ದಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದರು . ಅವರು ಹಾಡಿದ ತ್ಯಾಗರಾಜರ ಪ್ರಸಿದ್ಧ ಕೃತಿ ರಾಮಾ ನೀ ಸಮಾನ ನೆವರೋ  ಲಿಂಕ್  https://youtu.be/FuUyLQpE22g


 

 Epidemiology triad


 

ಸಮೂಹ ವೈದ್ಯ ಶಾಸ್ತ್ರದಲ್ಲಿ ರೋಗಕಾರಕ  ತ್ರಿಕೋನ ಎಂದು ಇದೆ .ಇದನ್ನು ಎಪಿಡೆಮಿಯೋಜಿಕಲ್ ಟ್ರಯಾಂಗಲ್ ಎನ್ನುವರು. ಒಂದು ರೋಗ  ಬಂದು ಊರಲು ಒಬ್ಬ ಆತಿಥೇಯ , ಒಂದು ರೋಗಕಾರಕ ವಸ್ತು (ಏಜೆಂಟ್ )ಮತ್ತು  ಪೂರಕ ವಾತಾವರಣ ಬೇಕು .ಉದಾಹರಣೆ ಗೆ  ಮಲೇರಿಯ ರೋಗ ಉಂಟಾಗಲು ಈ ರೋಗದ ಕ್ರಿಮಿ ಇದ್ದರೆ ಸಾಲದು . ಅದನ್ನು ಅನುಭವಿಸಲು ಒಬ್ಬ ಬಲಿ ಪಶು (ಮನುಷ್ಯ ) ವಾಹಕ ಸೊಳ್ಳೆ ಮತ್ತು ಅದು ಬೆಳೆಯಲು ಬೇಕಾದ ವಾತಾವರಣ ಇರ ಬೇಕು . ಇಲ್ಲದಿದ್ದರೆ ರೋಗ ಇಲ್ಲ . 

  ನಮ್ಮ ಸಮಾಜದಲ್ಲಿ ಈಗ ಕಂಡು ಬರುವ  ಅಶಾಂತಿ ಅಸಹನೆ ಎಲ್ಲಾ ಯಾವುದೊ ಒಂದು ಹೆಸರಿಡದ ಕಾಯಿಲೆ . ಇದರಿಂದ ಬಳಲುವವರು ಜನ ಸಾಮಾನ್ಯರು . ರೋಗಾಣು ನಿಮ್ಮ ಊಹೆಗೆ ಬಿಟ್ಟದ್ದು . ಪೂರಕ ವಾತಾವರಣದ ಒಂದು ಅಂಶ ಸಮೀಪದಲ್ಲಿ ಬರುತ್ತಿರುವ ಸಾರ್ವತ್ರಿಕ ಚುನಾವಣೆ

ಸೋಮವಾರ, ಆಗಸ್ಟ್ 22, 2022

ಪಾರ್ಶ್ವ ವಾಯು ಮತ್ತು ಮಾಲೀಷ್

 ಪಕ್ಷವಾತ  ಎಂದು ಕರೆಯಲ್ಪಡುವ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ನಲ್ಲಿ  ಮೆದುಳಿನ  ಚಲನ ನಿರ್ದೇಶನ ಪ್ರದೇಶ (ಮೋಟಾರ್ ಏರಿಯಾ ) ಕಾರ್ಯ ಕ್ಷಮತೆ ಕುಗ್ಗಿ ಅಲ್ಲಿಂದ ಕೈಕಾಲುಗಳ ಚಲನೆಗೆ ನಿರ್ದೇಶನ ಸರಿಯಾಗಿ ಹೋಗುವುದಿಲ್ಲ .ಎಡ ಮೆದುಳು ಶರೀರದ ಬಲ ಭಾಗವನ್ನು ಮತ್ತು ಬಲ ಮೆದುಳು ಎಡ ಭಾಗವನ್ನು ನಿಯಂತ್ರಿಸುತ್ತದೆ . .ಜತೆಗೆ ಮಾತನಾಡುವ  ಕ್ರಿಯೆಯನ್ನು ನಿಯಂತ್ರಿಸುವ ಕೇಂದ್ರ ಎಡ ಮೆದುಳಿನಲ್ಲಿ ಇರುವುದು .ಈ ಕಾರಣದಿಂದ ಬಲ ಪಾರ್ಶ್ವ ವಾತ ಆದವರಲ್ಲಿ ಮಾತು ಬೀಳುವುದು ಸಾಮಾನ್ಯ . 

ಹಾಗಾದರೆ ಪಾರ್ಶ್ವ ವಾಯು ವಿನಲ್ಲಿ  ಕೈ ಕಾಲಿಗೆ ಎಣ್ಣೆ ಹಚ್ಚಿ ಮಾಲಿಶ್ ಮಾಡುವದುದರಿಂದ ಪ್ರಯೋಜನ ಇಲ್ಲವೇ ?ಇದೆ .ಎಣ್ಣೆ ಹಚ್ಚದೆ ಮಾಡಿದರೂ ಇದೆ . ಯಾಕೆಂದರೆ ಚಲನ ಹೀನಾ ಅವಯವಗಳು ಹಾಗೇ ಬಿಟ್ಟರೆ ಮಾಂಸ ಖಂಡಗಳ ಅಂಗಾಂಶಗಳು ನಶಿಸಿ ಮರಗಟ್ಟಿ ಹೋಗುವವು .ಇದರಿಂದ ಮೆದುಳಿನಲ್ಲಿ ಇರುವ ಮೂಲ ಕಾಯಿಲೆ ವಾಸಿ ಆದರೂ ಚಲನಾ ನಿರ್ದೇಶನ ಪಾಲನೆ ಸರಿಯಾಗಿ ನಡೆಯದು . ನಾವು ಅದಕ್ಕೆ ಫಿಸಿಯೋಥೆರಪಿ ಸಲಹೆ ಮಾಡುತ್ತೇವೆ 

ಭಾನುವಾರ, ಆಗಸ್ಟ್ 21, 2022

ಮೆದುಳಿನ ಆಘಾತ (ಪಕ್ಷವಾತ ,ಸ್ಟ್ರೋಕ್ )ಮತ್ತು ರಕ್ತದ ಒತ್ತಡ

ಮೆದುಳಿನ ಆಘಾತ (ಪಕ್ಷವಾತ ,ಸ್ಟ್ರೋಕ್ )ಮತ್ತು ರಕ್ತದ ಒತ್ತಡ 

ಅನಿಯಂತ್ರಿತ ರಕ್ತದ ಒತ್ತಡ ಇರುವವವರಲ್ಲಿ ಮೆದುಳಿನ ಆಘಾತ ಅಧಿಕ . ಏರು ರಕ್ತದ ಒತ್ತಡ ಇಲ್ಲದವರಲ್ಲಿಯೂ ಮೆದುಳಿನ ಆಘಾತಕ್ಕೆ ಕಾರಣ ವಾದ  ಮೆದುಳಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತಸ್ರಾವ ಆಗ ಬಹುದು . 

      ಇಂತಹ ಸಂದರ್ಭದಲ್ಲಿ  ಮೆದುಳಿನ ಆಯಕಟ್ಟಿನ ಜಾಗಗಳಿಗೆ ರಕ್ತ ಸಂಚಾರ ಅಡಚಣೆ ಆಗದಂತೆ ಶರೀರದ ರಕ್ಷಣಾ ವ್ಯವಸ್ಥೆಯ ಆದೇಶ ದಂತೆ  ರಕ್ತದ ಒತ್ತಡ ಜಾಸ್ತಿ ಆಗುವುದು . ಮೆದುಳಿನ ರಕ್ತನಾಳಗಲ್ಲಿ ರಕ್ತ ಹೆಪ್ಪು ಗಟ್ಟಿ ಸ್ಟ್ರೋಕ್ ಆದರೆ ನಾಲ್ಕು ಗಂಟೆಗಳ ಒಳಗೆ ಬಂದರೆ ಅದನ್ನು ಕರಗಿಸುವ ಔಷಧಿ ಚುಚ್ಚು ಮದ್ದು ರೂಪದಲ್ಲಿ ಕೊಡುವರು . ಅಂತಹ ಸಂದರ್ಭ ಮಾತ್ರ ಬಿಪಿ ಹೆಚ್ಚು ಇದ್ದರೆ ೧೮೫/೧೦೫ (ನಾರ್ಮಲ್ ೧೨೦/೮೦)ಮಟ್ಟಕ್ಕೆ ತರಬೇಕಾಗುತ್ತದೆ . ಇಲ್ಲಿ ಕೂಡಲೇ ರಕ್ತ ನಾಳದ ಬ್ಲಾಕ್ ತೆರವು ಆಗುವುದರಿಂದ ಮೆದುಳಿನ ರಕ್ತ ಸರಬರಾಜು ಹೆಚ್ಚ್ಚು ವೇಳೆ ಅಸ್ತವ್ಯಸ್ತ ಆಗದು . 

ಆದರೆ ತಡವಾಗಿ ಬಂದ  ರೋಗಿಗಳಲ್ಲಿ , ಹೆಚ್ಚಿದ ರಕ್ತದ ಒತ್ತಡವನ್ನು ದಿಢೀರ್ ಕಡಿಮೆ ಮಾಡಿದರೆ ಮೆದುಳಿಗೆ ಹೆಚ್ಚು ಹಾನಿ ಆಗುವದು .ಇಂತಹ ಸಂದರ್ಭ ಆಸ್ಪಿರಿನ್ ನಂತಹ ಹೆಪ್ಪು ನಿರೋಧಕ ಔಷಧಿ ಮಾತ್ರ ಕೊಡುವರು . ರೋಗಿಗೆ ಈಗಾಗಲೇ ಬಿ ಪಿ ಮಾತ್ರೆ ಇದ್ದರೆ ಅದನ್ನು ಮುಂದುವರಿಸುವರು . 

ಇನ್ನು ಮೆದುಳಿನ ರಕ್ತ ಸ್ರಾವ ದಲ್ಲಿ  ರಕ್ತದ ಒತ್ತಡ ಅಧಿಕ ಇದ್ದರೆ ಕೂಡಲೇ ಕಡಿಮೆ ಮಾಡುವ ಔಷಧಿ ಕೊಡುವರು . 

 ನಾನು ಹಿಂದೆ ತಿಳಿಸಿದಂತೆ ಇಂತಹ ಕಾಯಿಲೆಯನ್ನು ವಾಡಿಕೆಯಲ್ಲಿ ಪಕ್ಷವಾತ ಎಂದು ಕರೆದರೂ ರೋಗ ಇರುವದು  ಮೆದುಳಿನಲ್ಲಿಯೇ ಹೊರತು ಕೈ ಕಾಲಿನಲ್ಲಿ ಅಲ್ಲ

ಸೋಮವಾರ, ಆಗಸ್ಟ್ 8, 2022

ಹಿರಿಯರ ನುಡಿಮುತ್ತುಗಳು

  ಕನ್ನಡ ಸಂಸ್ಕೃತಿ ಇಲಾಖೆಯವರು ಹಿರಿಯ ಸಾಹಿತಿ ,ಕಲಾವಿದ ಮತ್ತು ಆಡಳಿತ ಗಾರ ರ ಮನೆಯಂಗಳದಲ್ಲಿ ಮಾತುಕತೆ ಎಂಬ ಕಾರ್ಯಕ್ರಮ ಆರಂಭಿಸಿತ್ತು .ಅದರ ಕೆಲವನ್ನು ಒಟ್ಟು ಸೇರಿಸಿ 'ಮನೆಯಂಗಳದಲ್ಲಿ ಮಾತುಕತೆ 'ಎಂಬ ಹೊತ್ತಿಗೆ ಬಂದಿತ್ತು . ಒಳ್ಳೆಯ ಚಿತ್ರಗಳೂ ಮಾತುಗಳೂ ಇರುವ ಸಂಗ್ರಹಾರ್ಹ ಕೃತಿಯಿಂದ ಆಯ್ದ ಕೆಲ ನುಡಿ ಮುತ್ತುಗಳು 

ಎ ಎನ್ ಮೂರ್ತಿ ರಾವ್ 

ಒಬ್ಬ ವ್ಯಕ್ತಿ ಸತ್ತ ಮೇಲೆ ಅವನನ್ನು ನರಕಕ್ಕೆ ಅಥವಾ ಸ್ವರ್ಗಕ್ಕೆ ಕಳುಹಿಸುತ್ತಾನೆ ಎಂಬ ದೇವರನ್ನು ನಾನು ನಂಬುವುದಿಲ್ಲ .ಮಧ್ಯವರ್ತಿಗಳಿಂದಾಗಿ ದೇವರಿದ್ದಾನೆ ಎಂಬುದನ್ನೂ ನಾನು ಒಪ್ಪುವುದಿಲ್ಲ .ಕಷ್ಟದಲ್ಲಿ ಇರುವ ವ್ಯಕ್ತಿಯನ್ನು ನೋಡಿ ಸಹಾಯ ಮಾಡುವ ವಿಚಾರ ಬಂದರೆ ಅದೇ ದೇವರು . 

ನಮ್ಮ ಹೃದಯದಲ್ಲಿ ಏನು  ಒಳ್ಳೆಯದು ಅಂತ ಇದೆ ಅದೇ ದೇವರು ಅಂತ ನನ್ನ ಅಭಿಪ್ರಾಯ . 

       ಪ್ರೊ ಯು ಆರ್ ರಾವ್ 

 ಒಂದುಗಡೆ     ನಾವು ಹೇಳುತ್ತೇವೆ ದೇವರು ಎಲ್ಲಾ ಕಡೆ ಯಲ್ಲೂ  ಇದ್ದಾನೆ ಎಂದು ,ನಮ್ಮ ಸಂಸ್ಕೃತಿಯೂ ಪ್ರತಿಯೊಬ್ಬ ದೇವರೂ ಕೂಡಾ ಒಂದೇ ಎಂದು .ಎಲ್ಲ ನದಿಗಳು ಕೊನೆಗೆ ಸಮುದ್ರವನ್ನು ಹೋಗಿ ಸೇರುತ್ತವೆ ,ಹಾಗೆಯೆ ದೇವರುಗಳು ಕೂಡಾ ಎಂದು ಹೇಳುತ್ತೇವೆ.ಹಾಗೆ ಹೇಳಿ ಆಮೇಲೆ ಹೊಡೆದಾಡಿಕೊಳ್ಳುತ್ತೇವೆ .ಇದು ಬಹಳ ವಿಚಿತ್ರವಾಗಿದೆ .ನಮಗೆ ಬಹಳಷ್ಟು ವಿದ್ಯೆ ಜ್ಞಾನ ಎಲ್ಲ ಇದೆ ,ಆದರೆ ಮತ್ತೊಂದಡೆ ಇಂತಹ ನಂಬಿಕೆಗಳನ್ನು ಇಟ್ಟುಕೊಳ್ಳುತ್ತೇವೆ . 

ಮಿದುಳನ್ನು ಉಪಯೋಗ ಮಾಡದೇ ಇದ್ದರೆ ಅದು ಕೆಲಸ ಮಾಡುವುದಿಲ್ಲ .ಯುವಕರಂತೆ ಕಾಣಬೇಕಾದರೆ ಯಾವಾಗಲೂ ಕ್ರಿಯಾಶೀಲರಾಗಿ ಇರಬೇಕು . 

ಎಚ್ ನರಸಿಂಹಯ್ಯ 

ಪರೀಕ್ಷೆಗಳಲ್ಲಿ  ಅಂಕಗಳನ್ನು ಗಳಿಸುವುದು  ಕ್ವಾಲಿಟಿ ಎಂದು ಹೇಳುವುದು ತುಂಬಾ ತಪ್ಪಾಗುತ್ತದೆ .ಕ್ವಾಲಿಟಿ ಎಂಬುದಕ್ಕೆ ವ್ಯಾಪಕವಾದ ಅರ್ಥವಿದೆ .ಪರೀಕ್ಷೆಯಲ್ಲಿ ಅಂಕ ಗಳಿಸುವುದು ಅದೊಂದು ಭಾಗ ,ಅಂಶ ಅಷ್ಟೇ . 

ಗ್ರಹಣದಲ್ಲಿ ನಂಬಿಕೆ ಇರುವವರು ಕೆಲವರು ಆ ದಿನ ಅಡಿಗೆ ಮಾಡ ಬಾರದು ,ಊಟ ಮಾಡ ಬಾರದು ,ಮನೆಯೊಳಗೇ ಇರಬೇಕೆಂದು ಬಯಸುತ್ತಾರೆ .ಆದರೆ ,ಗ್ರಹಣದ ಸಮಯದಲ್ಲಿ ಸಿಟಿ ಮಾರ್ಕೆಟ್ ನಲ್ಲಿ ಬಿರಿಯಾನಿ ತಿನ್ನುತ್ತಾ ಕುಳಿತಿರುವವರಿಗೆ ಏನೂ ಆಗುವುದಿಲ್ಲ . 

ನಾನು ಗಾಂಧೀಜಿಯವರ ಅನುಯಾಯಿ .ಏನೇ ಆಗಲಿ ಇವತ್ತಿನ ರಾಜಕೀಯ ನಾಯಕರನ್ನು ಕಂಡಾಗ ಮನಸಿಗೆ ತುಂಬಾ ನೋವುಂಟಾಗುತ್ತದೆ ,ಸಂಕಟವಾಗುತ್ತದೆ ,ಇನ್ನೇನೂ ಇಲ್ಲ. 

ನಿಟ್ಟೂರ್ ಶ್ರೀನಿವಾಸ ರಾವ್ 

ಹಿಂದಿನ ಕಾಲದಲ್ಲಿ ಪತ್ರಿಕೆಗಳು ಕೂಡ ಗಂಭೀರವಾಗಿದ್ದವು .ಅವು ಪ್ರಸಾರಕ್ಕೋಸ್ಕರ   ರಾಜಕಾರಿಣಿಗಳನ್ನು ಸಂತೃಪ್ತಿ ಮಾಡುವುದಕ್ಕೆ ಪ್ರಯತ್ನಿಸುತ್ತಿರಲಿಲ್ಲ .ಇವತ್ತು ಈ ತರಹ ಮಾಡಿಕೊಂಡು ಹೋಗುತ್ತಿದ್ದಾರೆ .ಇದು ತಪ್ಪು ಎಂದು ನಾನು ಧಾರಾಳವಾಗಿ ಹೇಳುತ್ತೇನೆ . 

ಗಂಗೂ ಬಾಯಿ ಹಾನಗಲ್ 

ಅನೇಕರು ನನ್ನನ್ನು ಕೇಳಿದ್ದಾರೆ 'ನಿಮಗೆ ಇಂಗ್ಲಿಷ್ ಬರೂದಿಲ್ಲ ,ನೀವು ಹೇಗೆ ವಿದೇಶ ಪ್ರವಾಸ ಮಾಡಿ ಕಾರ್ಯಕ್ರಮ ಕೊಟ್ರಿ ?'ಅಂತ .'ನನ್ನ ಭಾಷಾ ಅವರಿಗೆ ಬರ್ತಿತ್ತು' ಅಂದೆ .ಸಂಗೀತಕ್ಕೆ ಭಾಷಾನೆ ಇಲ್ಲ !. 

ನನಗೆ ಯಾವತ್ತು ಪ್ರಶಸ್ತಿಗಳತ್ತ  ಲಕ್ಷ್ಯ ಇರೂದಿಲ್ಲ .ತಾವೆಲ್ಲಾ ಆನಂದ ಪಡುತ್ತೀರಲ್ಲ ಅದೇ ಸಾಕು . 

ಏನ್ ಲಕ್ಷ್ಮಣ ರಾವ್ 

ಭ್ರಷ್ಟಾಚಾರದ ವಿಚಾರದಲ್ಲಿ ಅಧಿಕಾರಿಗಳಾದವರು ರಾಜಕಾರಿಣಿಗಳೊಡನೆ ಕೈ ಜೋಡಿಸ ಬಾರದು ..                     

ಬುಧವಾರ, ಆಗಸ್ಟ್ 3, 2022

ಜಂಬೂ ದ್ವೀಪೇ ಪರಶುರಾಮ ಕ್ಷೇತ್ರೇ ಕಲಿಯುಗೇ ಪ್ರಥಮ ಪಾದೇ

ನಿನ್ನೆ ಕೇರಳ ಮತ್ತು  ದಕ್ಷಿಣ ಕನ್ನಡದಲ್ಲಿ ಮಳೆಯ ಅನಾಹುತ ದೃಶ್ಯಗಳನ್ನು ಟಿ ವಿ ಯಲ್ಲಿ ನೋಡುತ್ತಿದ್ದೆ . ಬಾಲ್ಯದಲ್ಲಿ ನನ್ನ ಅಜ್ಜ ಈ ಭಾಗ ವೆಲ್ಲಾ ಪರಶುರಾಮ ಕ್ಷೇತ್ರ ,ಇಲ್ಲಿ ಪ್ರಾಕೃತಿಕ ವಿಕೋಪಗಳು ಆಗುವುದಿಲ್ಲ ಎಂದು ಆಗಾಗ ಹೇಳುತ್ತಿದ್ದರಿಂದ ಒಂದು ಸುರಕ್ಷಿತ ಭಾವನೆ ನಮ್ಮ ಮನಸಿನಲ್ಲಿ ಬೇರೂರಿತ್ತು . ಪರಶುರಾಮನು ಕ್ಷತ್ರಿಯ ಸಂಹಾರ ಮಾಡಿ ಗೆದ್ದ ರಾಜ್ಯಗಳನ್ನೆಲ್ಲಾ  ದಾನ ಮಾಡಿದ ಮೇಲೆ ತನಗೆ ಇರುವುದಕ್ಕೆ ಅರಬೀ ಸಮುದ್ರದಿಂದ  ರಿ ಕ್ಲೈಮ್  ಮಾಡಿದ  ಭೂಮಿಯೇ ಈ ಪ್ರದೇಶ ವೆಂಬ ನಂಬಿಕೆ . ಮುಂಬೈಯಲ್ಲಿ ಬಾಂದ್ರಾ ರಿಕ್ಲ ಮೇಷನ್ ಇದ್ದ ಹಾಗೆ . ಪರಶುರಾಮ  ಕೆಲಸ ಮುಗಿದ ಮೇಲೆ ಯಾಕೆ ಬೇಕು ಎಂದು ಎಸೆದ ಕೊಡಲಿಯ ಅಳತೆಯಷ್ಟು ಸಮುದ್ರರಾಜ ಬಿಟ್ಟು ಕೊಟ್ಟ ಜಾಗ ,ಪಶ್ಚಿಮ ಘಟ್ಟದ ತಪ್ಪಲಲ್ಲಿ ಸಮುದ್ರ ಕರಾವಳಿ ವರೆಗೆ ಇದೆ. 

ಈಗ ಪ್ರಾಕೃತಿಕ ಅನಾಹುತಗಳನ್ನು ನೋಡುವಾಗ ಸಮುದ್ರ ರಾಜ ಪರಶುರಾಮನಿಗೆ ಕೊಟ್ಟ ಲೀಸ್ ಪಿರಿಯಡ್ ಮುಗಿದ ಹಾಗಿದೆ . ಇದು ಯಾಕೆ ಹೀಗೆ ? ಇಲ್ಲಿನ ಗುಡ್ಡ ಬೆಟ್ಟಗಳು ಬೆಂಕಿ ಪೆಟ್ಟಿಗೆಯ ಮನೆಗಳಂತೆ ಉರುಳುತ್ತಿವೆ . ನಮ್ಮಲ್ಲಿ ಮನೆಗಳು ಗುಡ್ಡದ ತಳದಲ್ಲಿ ಇರುವುದು ಸಾಮಾನ್ಯ .ಅಂಗ್ರಿ ಯಲ್ಲಿ ನಮ್ಮ ಮನೆಯೂ ಹಾಗೆಯೇ ಇತ್ತು . ಈಗ ಯಾವ ಸಮಯ ಇವು ಕುಸಿದು ಮನೆಯನ್ನು ಆಹುತಿ ತೆಗೆದು ಕೊಳ್ಳುತ್ತವೆಯೋ ಎಂದು ಹೇಳಲಾಗದ ಸ್ಥಿತಿ .ಪದ ಕುಸಿಯೇ ನೆಲವಿವುದು ಸರಿ ,ಆದರೆ ನೆಲ ಕುಸಿಯೇ ?

ಮಣ್ಣು ಯಾಕೆ ಹೀಗಾಯಿತು ?ನಾವು ಕಾಡು ನಾಶ ಮಾಡಿದ್ದು ,ಕಲ್ಲಿನ ಹಾಸು ಕಡಿದು ತೆಗೆದದ್ದು ,ಸಿಕ್ಕ ಸಿಕ್ಕಲ್ಲಿ ನೀರಿನ ನೈಸರ್ಗಿಕ ಹರಿವಿಗೆ ಅಡ್ಡ ಕಟ್ಟಿ ದ್ದು  ಕಾರಣವೇ ?ಅಲ್ಲ ವಾತಾವರಣ ಉಷ್ಣತೆ ಏರು ಪೇರಾಗಿ ಮಳೆ ಒಂದೊಂದು ಪ್ರದೇಶದಲ್ಲಿ  ಯರಾ ಬಿರ್ರಿ ಬರುತ್ತಿದ್ದೆಯೇ ?