ಬೆಂಬಲಿಗರು

ಗುರುವಾರ, ಮೇ 16, 2024

ಪರಕ್ಕೆ ಸಂದಾಪುನೆ

 

  ಅತೀವ ಕಷ್ಟ ಬಂದಾಗಬಾಲ್ಯದಲ್ಲಿ ತಾಯಿ( ಮತ್ತು ಈಗ ಪತ್ನಿ ಬಾಯಲ್ಲಿ )ಹಲವು ಬಾರಿ ನನಗೆ ಒಟ್ರಾಸಿ 'ಪರಕ್ಕೆ ಸಂದಾಪುನೆ ' ಎಂದು ಅವರು ಹೇಳಿದ ಕೆಲಸ ನಿರೀಕ್ಷಾ ಮಟ್ಟಕ್ಕೆ ಬರದಿದ್ದಾಗ ಬೈದದ್ದು ಇದೆ . ಪರಕ್ಕೆ ಸಂದಾಪುನೆ ಅಥವಾ ಹರಕೆ ಸಲ್ಲಿಸುವುದನ್ನು ಅಷ್ಟು ತಾಪು ಮಾಡುತ್ತಾರೆ ಎಂದು ನಾನು ಹಲವು ಬಾರಿ ಯೋಚಿಸಿದ್ದಿದೆ .  ,ಜನರು ಧರ್ಮಾತೀತ ವಾಗಿ ದೇವರು ,ದೈವ ಗಳಿಗೆ ಹರಕೆ ಹೇಳುವುದು ನಡೆದು ಕೊಂಡು ಅನತಿ ಕಾಲದಿಂದ ನಡೆದು ಕೊಂಡು ಬಂದಿದೆ . ಒಂದೊಂದು ರೋಗ ಮತ್ತು ಸಂಕಟಕ್ಕೂ ಪರಿಹಾರ ಕೇಳುವ ಪ್ರತ್ಯೇಕ  ಕ್ಷೇತ್ರ ಇವೆ . ಇಲ್ಲಿ ನಂಬಿಕೆ  ಭಕ್ತರಿಗೆ ಒಂದು ಪ್ಲಾಸಿಬೊ ರೀತಿಯ ಧೈರ್ಯ ನೀಡುವುದು . ಎಲ್ಲವನ್ನೂ ವೈಜ್ನಾನಿಕ ವಾಗಿ ನೋಡಲು ಆಗುವುದಿಲ್ಲ . ಅಡ್ಡ ದಾರಿಯಲ್ಲಿ ನಡೆದು ದೇವರಿಗೆ ಹರಕೆ ರೂಪದಲ್ಲಿ ಕಪ್ಪ ಕಾಣಿಕೆ ಕೊಟ್ಟರೆ ಸರ್ವ ಜ್ನಾನಿ ಭಗವಂತ ನಿಗೆ ಗೊತ್ತಾಗದೇ? ಅವನಿಗೆ ಗೊತ್ತಾಗದು ಎಂದು ತಿಳಿದರೆ ಅವನ ಮಹಿಮೆಯನ್ನೇ ಕುಗ್ಗಿಸಿ ದಂತೆ.

              ಹರಕೆ ಹೇಳಿ ಆಯಿತು . ಇಷ್ಟಾರ್ಥ ವೂ ಈಡೇರಿತು . ಆಮೇಲೆ ಜಿಜ್ನಾಸೆ . 'ಭೂತಕ್ಕೆ ಕೋಳಿ ಕೊಡುತ್ತೇನೆ ಎಂದು ಕೋಳಿ ಕೊಳ್ಳಲು ಹೋದಾಗ ಹೇಗೂ ಹರಕೆಗೆ ತಿನ್ನಲು ಅಲ್ಲ ,ಹೆಚ್ಚು ಕ್ರಯದ್ದು ಯಾಕೆ ?  '  ಗೋದಾನ ಮಾಡುತ್ತೇನೆ ಎಂದು ಹೇಳಿಕೊಂಡು ಆಗಿದೆ . ಇನ್ನೂ ತುಂಬಾ ಹಾಲು ಕೊಡುವ ದನವೇ ಆಗ ಬೇಕು ಎಂದು ಏನು ?"ಚಿನ್ನದ ತೊಟ್ಟಿಲು ಕೊಡುತ್ತೇನೆ ಎಂದದ್ದು ಹೌದು ಇಷ್ಟು ಪವನಿಂದೆ ಎಂದು ಹೇಳಿಲ್ಲವಲ್ಲ " ಇತ್ಯಾದಿ ಲೌಕಿಕ ವಿಚಾರಗಳು ಪ್ರಮಾರ್ಥಿಕತೆಯನ್ನು ಅವರಿಸುತ್ತವೆ . ಒಟ್ಟಾರೆ ಹರಕ್ಕೆ ಹೇಳಿದ್ದಕ್ಕೆ ತೀರಿಸಿ ದೇವರ ಲೆಕ್ಕ ಚುಕ್ತಾ ಮಾಡಿದರೆ ಆಯಿತು .ಈ ಅರ್ಥದಲ್ಲಿಯೇ ನನ್ನ ತಾಯಿ ಯವರು ಹೇಳುತ್ತಿದ್ದರು ಅನ್ನಿಸುತ್ತದೆ .ಯಾವುದೇ ಕೆಲಸದಲ್ಲಿ ಆತ್ಮಾರ್ಥತೆ ಇಲ್ಲದೆ ಮಾಡ ಬಾರದು ಎಂಬ ಉದ್ದೇಶ . 

ಇನ್ನೊಂದು ನುಡಿಗಟ್ಟು ಇದೆ ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ .ಇಲ್ಲಿ ದಕ್ಷಿಣೆ ಕೊಡುವುದು ಯಾರು ,ತಕ್ಕಂತೆ ಪ್ರದಕ್ಷಿಣೆ ಹಾಕುವವವರು ಯಾರು ?ಯಾಕೆಂದರೆ ವಾಡಿಕೆಯಲ್ಲಿ ದಕ್ಷಿಣೆ ಹಾಕುವವರೂ ಪ್ರದಕ್ಷಿಣೆ ಹಾಕುವವರೂ ಒಬ್ಬರೇ ಆಗಿರುತ್ತಾರೆ . ಈಗಿನ ವಾತಾವರಣ]ದಲ್ಲಿ  ದಕ್ಷಿಣೆ ತಕ್ಕ ಪ್ರದಕ್ಷಿಣೆ ಹಾಕುವವರೂ ಅಪರೂಪ . ಮೇಲಿಂದ ಅಥವಾ ಕೆಳಗಿಂದ ಎಂದರೂ ಬಂದರೆ ಮಾತ್ರ ಎಂಬಂತಾಗಿದೆ . 

ನನ್ನ ಅಮ್ಮ ಹೇಳುತ್ತಿದ್ದ ಇನ್ನೊಂದು ಮಾತು ,ಏನು ಮಗ ಒತ್ತಾಯದ ಮೇಲೆ ಶಂಭಟ್ಟನ ರುಜು ಎಂಬ ಮಾತು . ಅವರ ಕಟ್ಟುಪಾಡಿಗೆ ಸಿಕ್ಕ್ಕಿ ಮನಸಿಲ್ಲದ ಮನಸಿನಲ್ಲಿ ಏನಾದರೂ ಮಾಡಿದರೆ ಹೇಳುತ್ತಿದ್ದರು 


ಬುಧವಾರ, ಮೇ 15, 2024

ಕೆಪ್ಪಟ್ರಾಯ

 ಕೆಪ್ಪಟ್ರಾಯ ಬೇಸಿಗೆಯಲ್ಲಿ  ಸೋಂಕು ರೋಗಗಳ ಹಾವಳಿ .ಇದೇ  ಸಮಯ ವಾರ್ಷಿಕ ಪರೀಕ್ಷೆಗಳೂ ನಡೆಯುವವು . ಈ ವರ್ಷ  ಮಕ್ಕಳಲ್ಲಿ ಮತ್ತು ಯುವಕರಲ್ಲಿ  ಹೆಚ್ಚಾಗಿ ಕಂಡು ಬಂದ ಕಾಯಿಲೆ ಕೆಪ್ಪಟರಾಯ ಅಥವಾ ಮಂಪ್ಸ್ . ಇದು ಒಂದು ವೈರಸ್ ಜನ್ಯ ಮತ್ತು ತಾನೇ ವಾಸಿ ಯಾಗುವ  ಕಾಯಿಲೆ . 

ಈ ಕಾಯಿಲೆ ಲಾಲಾರಸ  ಉತ್ಪತ್ತಿ  ಮಾಡುವ ಪ್ಯಾರೋಟಿಡ್ ಗ್ರಂಥಿಯನ್ನು ಮುಖ್ಯವಾಗಿ ಬಾಧಿಸುವುದಾದರೂ ಉಳಿದ ಲಾಲಾ ಗ್ರಂಥಿ ಗಳು  ,ವೃಷಣ ಬೀಜ ,ಅಂಡಾಶಯ ,ಮೇದೋಜೀರಕ ಗ್ರಂಥಿ  , ಅಪರೂಪಕ್ಕೆ ಮೆದುಳನ್ನೂ . ಒಂದು ಅಥವಾ ಎರಡು ಪ್ಯಾರೋಟಿಡ್  ಗ್ರಂಥಿ ಊದಿ  ಕೊಂಡು ವಿವರೀತ ನೋವು ,ಜ್ವರ ಬರುವುದು . ಕೆಲವರಲ್ಲಿ ವೃಷಣ ಬಾಧೆ ಪ್ಯಾರೋಟಿಡ್ ಊತ ಕಡಿಮೆ ಆದಮೇಲೆ ಅಥವಾ ತತ್ಸಮಯ ಬರಬಹುದು .ಅಂಡಾಶಯ ಅಥವಾ ಮೇದೋಜೀರಕ ಗ್ರಂಥಿ ಗೆ ಕಾಯಿಲೆ ಬಂದರೆ ಹೊಟ್ಟೆ ನೋವು ಉಂಟಾಗುವುದು 

ಈ ಕಾಯಿಲೆಗೆ ನೋವು ನಿವಾರಕಗಳನ್ನು ಕೊಟ್ಟು ವಿಶ್ರಾಂತಿ ಸಲಹೆ ಮಾಡುವರು . ಮಂಪ್ಸ್  ವೈರಸ್ ಗೆ ಔಷಧಿ ಇಲ್ಲ . ತಡೆಗಟ್ಟುವ  ಲಸಿಕೆ ಇದೆ . ಮಕ್ಕಳ ಲಸಿಕಾ ಕಾರ್ಯಕ್ರಮದಲ್ಲಿ ಎಂ ಎಂ ಆರ್ ನಲ್ಲಿ ಮೊದಲನೇ ಎಂ  ಮಂಪ್ಸ್ . ಲಸಿಕೆ ಕೊಂಡವರಲ್ಲಿ ಕೂಡಾ ಈ ವರ್ಷ ಸ್ವಲ್ಪ ತೀವ್ರತರ ನೋವು ಬಂದಂತೆ ಇದೆ . ವೈರಸ್ ರೂಪ ಬದಲಿಸುವುದು ಕಾರಣ ಇರ ಬಹುದು . 

ಲಾಲಾ ರಸದಲ್ಲಿ ವೈರಾಣು ಇರುವುದು ,ಜಲ ಬಿಂದು ರೂಪದಲ್ಲಿ ಗಾಳಿ ಮೂಲಕ ಹರಡುವುದು . 

ಎರಡೂ  ವೃಷಣಗಗಳ  ಬಾಧೆ ಬಂದರೂ ವೀರ್ಯಾಣುಗಳ ಕೊರತೆ ಅಪರೂಪದಲ್ಲಿ ಆಗ ಬಹುದಷ್ಟೇ . 

ಬಾಲಂಗೋಚಿ : ನನಗೆ ಬಾಲ್ಯದಲ್ಲಿ ಕೆಪ್ಪಟ್ರಾಯ  ಬಂದಿತ್ತು .ಆಗ ಅದಕ್ಕೆ ಗಾಮಟೆ  ತೊಗಟೆ  ಅರೆದು ಹಚ್ಚುತ್ತಿದ್ದು ಕಹಿ ಕಷಾಯ ಕೊಡುತ್ತಿದ್ದರು . ಒಮ್ಮೆ ಕಾಯಿಲೆ ಬಂದರೆ ನೈಸರ್ಗಿಕ ರೋಗ ಪ್ರತಿಬಂಧಕ ಶಕ್ತಿ ಬರುವುದು

ಶುಕ್ರವಾರ, ಮೇ 10, 2024

 ತೆ ಲಿಂದ  ನಿಲವು ಪಟ್ಟ ಪಗಲ್ ಪೋಲೆ ಎರಿಯುದೇ 

ಈ ಸುಡು ಬೇಸಗೆ ಮತ್ತು   ರಾಜಕೀಯ ಬೇಗೆ ಶಮನ ಗೊಳಿಸಲು ತಣ್ಣೀರು ಮತ್ತು ಸಂಗೀತ ದ ಆಶ್ರಯ ಪಡೆಯುತ್ತೇನೆ. ಮೊನ್ನೆ ಸಂಜೆ ಪ್ರಸಿದ್ಧ ತಮಿಳು ಕೀರ್ತನೆ ಅಲೈ ಪಾಯುದೇ ಕಣ್ಣಾ ಏನ್ ಮನ ಮಿಗ ಅಲೈ ಪಾಯುದೇ  ಕೇಳುತ್ತಿದ್ದೆ .  ಕೃಷ್ಣ ನ ಕುರಿತು ಗೋಪಿಕೆ ಯ  ಹಾಡು . ನಿನ್ನ ಕೊಳಲ ಸಂಗೀತ ಅಲೆ ಅಲೆಯಾಗಿ ಬರುತ್ತಿದೆ ಎಂಬುದು ಪಲ್ಲವಿ ಅರ್ಥ ಇರಬೇಕು . ಈ ಗೀತೆಯ ಒಂದು ಸಾಲು' ತೆ ಲಿಂದ  ನಿಲವು ಪಟ್ಟ ಪಗಲ್ ಪೋಲೆ ಎರಿಯುದೇ 'ಎಂದು ಆರಂಭ ವಾಗುತ್ತದೆ . ತಿಳಿ ಬೆಳದಿಂಗಳು ಕೂಡಾ ಮಟ  ಮಧ್ಯಾಹ್ನ ದಂತೆ  ಉರಿಯುತ್ತಿದೆ .(ನಿನ್ನ ಪ್ರೇಮ ತಾಪದಲ್ಲಿ ಎಂದು ಇರಬೇಕು  )ಎಂದು ಅರ್ಥ . ಇದನ್ನು ಕೇಳುತ್ತಿದ್ದ ಸಮಯ ಸಂಜೆ ಏಳು ಗಂಟೆ . ಎಂದೂ ಕಾಣದ ಸೆಖೆ . ಕೃಷ್ಣನ ಕೊಳಲ ಗಾನ ಇಲ್ಲದಿದ್ದರೂ ಪಟ್ಟ ಪಗಲ್ ಪೋಲ್ ಎರಿಯುದೇ  ಎಂದು ನನ್ನ ಮನೆಯವರಲ್ಲಿ ಹೇಳಿದೆ . 

ಇಂತಹುದೇ ಅರ್ಥ ಬರುವ ಹಳೆ ಜನಪ್ರಿಯ ಚಿತ್ರ ಗೀತೆ ಒಂದು ಇದೆ .  ನಲ್ಲ ನಲ್ಲೆಯನ್ನು ಕುರಿತು ಹಾಡುವುದು

"ಬಳಿ  ನೀನಿರಲು ಬಿಸಿಲೇ  ನೆರಳು  ಮಧುಪಾನ ಪಾತ್ರೆ  ನಿನ್ನೊಡಲು ಮಧುವಿಲ್ಲದೆ ಮದವೇರಿಪ ನಿನ್ನಂತರಂಗ ಮಧುರಂಗ " ಇಲ್ಲಿ ಸೂರ್ಯನ ತಾಪಕ್ಕೆನಲ್ಲೆಯ ಸಾನ್ನಿಧ್ಯ ತಂಪೆರೆದರೆ , ಮೇಲಿನ ಗೀತೆಯಲ್ಲಿ  ತಂಪಾದ ಬೆಳದಿಂಗಳಲ್ಲೂ ಹಗಲ  ತಾಪ . 

ಏನಿದ್ದರೂ ಇಂತಹ ಆಲಾಪಗಳಿಗೆಲ್ಲ ಈ ಉರಿ ಬೇಸಿಗೆ ಹೇಳಿದ್ದಲ್ಲ

ಭಾನುವಾರ, ಮೇ 5, 2024

ಚಿಣ್ಣರೊಂದಿಗೆ ಸ್ವಲ್ಪ ಹೊತ್ತು 



 ಯುವ  ಉದ್ಯಮ ಶೀಲ  ದಂಪತಿಗಳಾದ ಗಣೇಶ್  ಮತ್ತು  ಪ್ರಫುಲ್ಲ  ಹಲವು ವರ್ಷಗಳಿಂದ  ನನಗೆ ಪರಿಚಿತರು ;ನಮ್ಮ ಆಸ್ಪತ್ರೆಯ ಸಮೀಪ ತರಬೇತಿ ಸಂಸ್ಥೆ ಯೊಂದನ್ನು ನಡೆಸುತ್ತಿದ್ದು  ನನ್ನ ಮೇಲೆ ಅಭಿಮಾನ ಇಟ್ಟುಕೊಂಡವರು . ದಿವಸಗಳ ಹಿಂದೆ ತಮ್ಮ ಸಂಸ್ಥೆ ನಡೆಸುತ್ತಿರುವ ಮಕ್ಕಳ  ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕ್ಕೆ ಅತಿಥಿ ಗಳಾಗಿ ಬರಬೇಕು ಎಂದು ಕೇಳಿ ಕೊಂಡಾಗ ಈಗಿನ ಗೊಂದಲ ಮತ್ತು  ಬಿಸಿಲು ಎರಡರಿಂದ ಸ್ವಲ್ಪ ವಿರಾಮ ವಾಗಲಿ ಎಂದು ಒಪ್ಪಿಕೊಂಡೆನು . ನಿರಾಸೆ ಆಗಲಿಲ್ಲ 

ನಮ್ಮ ಬಾಲ್ಯದಲ್ಲಿ ಸಮ್ಮರ್ ಕ್ಯಾಂಪ್ ಅಜ್ಜನ ಮನೆಯಲ್ಲಿ . ಅಲ್ಲಿ ಅಜ್ಜಿ ,ಮಾವ ಅತ್ತೆ ,ಅವರ ಮಕ್ಕಳ ಜತೆ . ಸ್ವಂತ ಮನೆಯೇತರ ವಾತಾವರಣ ಕ್ಕೆ ಹೊಂದಿಕೊಳ್ಳುವುದು ,ತೋಟ ,ಗುಡ್ಡೆ ಅಲೆಯುವುದು ,ತನ್ಮೂಲಕ ಸಹಜ ಕಲಿಕೆಯೂ ಆಗುವುದು . ನಮ್ಮ ಭಾವಂದಿರೊಂದಿಗೆ ಅವರ ತರಗತಿಗಳಿಗೆ ಅತಿಥಿ ವಿದ್ಯಾರ್ಥಿ ಯಾಗಿ ಹೋಗಿದ್ದೂ ಇದೆ . ಕೇರಳದಲ್ಲಿ ಓಣಂ ಗೆ ಹೆಚ್ಚು ರಜೆ ಇದ್ದುದರಿಂದ ನಮ್ಮ ರಜಾ ದಿನಗಳಲ್ಲಿ ಅವರಿಗೆ ಶಾಲೆ ಇರುತ್ತಿತ್ತು . ಸ್ವಂತ ಮನೆಯ ಮಕ್ಕಳಿಗೆ ಇರುವ ಕಟ್ಟು ನಿಟ್ಟಿನ ನಿಯಮಗಳು  ಅತಿಥಿಗಳಾದ ನಮಗೆ ಕಡಿಮೆ ಅನ್ವಯ ಅಲ್ಲದೆ  ಅತಿಥಿಗಳು ಇರುವಾಗ ಮನೆ ಮಕ್ಕಳಿಗೆ ಪೆಟ್ಟು ಬೀಳುತ್ತಿದುದು ಕಡಿಮೆ . ಅಜ್ಜನ ಮನೆಯಲ್ಲಿ ಇದ್ದ ಕತೆ ಪುಸ್ತಕಗಳನ್ನು ಓದುವುದು ;ಜತೆಗೆ ನಮ್ಮ ಭಾವಂದಿರ  ಪಠ್ಯ ಪುಸ್ತಕಗಳು .. ಇಂತಹ ಸಹಜ ಶಿಬಿರಗಳು ಮಕ್ಕಳು  ಸಮಾಜ ಜೀವಿಗಳಾಗಲು ಸಹಾಯ ಎಂದು ನನ್ನ ಅನಿಸಿಕೆ . 

ಆದರೆ ಈಗ ಅಂತಹ ದೀರ್ಘ ಕಾಲದ ಅಜ್ಜಿ ಮನೆ ವಾಸ ಕಾಣೆಯಾಗಿದೆ .ಮಕ್ಕಳು ಸುಮ್ಮನೆ ಬಿಟ್ಟರೆ ಮೊಬೈಲ್ ಟಿವಿ ರಾಗುತ್ತಾರೆ .ದಿನವಿಡೀ ಆಟವಾಡಲೂ ಆಗುವುದಿಲ್ಲ . ಅದಕ್ಕೆಂದು ಬೇಸಗೆ ಶಿಬಿರಗಳನ್ನು ಏರ್ಪಡಿಸುವರು . ಇಂತಹ ಶಿಬಿರಕ್ಕೇ ಮೊನ್ನೆ ಹೋದುದು . ಈಗಿನ ಮಕ್ಕಳು ಮೇಲ್ನೋಟಕ್ಕೆ ನಾವು ಬಾಲ್ಯದಲ್ಲಿ ಇದ್ದುದಕ್ಕಿಂತ ಬಹಳ ಚೂಟಿ ಯಾಗಿರುವುದಲ್ಲದೆ  ,ಸಂಕೋಚ ,ಅತಿ ನಾಚಿಕೆ ಇಲ್ಲ . ನೀವೆಲ್ಲಾ ದೊಡ್ಡ ವರಾಗಿ ಏನು ಆಗ ಬಯಸುತ್ತೀರಿ ಎಂದುದಕ್ಕೆ ಡಾಕ್ಟರ್ ಎಂದು ಒಬ್ಬರೂ ಹೇಳಲಿಲ್ಲ . ಒಬ್ಬಳು ಹುಡುಗಿ ನನಗೆ ಆರ್ಟಿಸ್ಟ್ ಆಗಬೇಕು ಎಂದಳು  

 

ಸೋಮವಾರ, ಜನವರಿ 22, 2024

 


ಖ್ಯಾತ ಮಲಯಾಳಿ  ಲೇಖಕ ದಿ ಎಸ್ ಕೆ ಪೊಟ್ಟೆಕ್ಕಾಟ್ ಅವರ ಬಗ್ಗೆ ಹಿಂದೆ ಬರೆದಿದ್ದೆ . ಅವರ ಮ್ಯಾಗ್ನಮ್ ಓಪಸ್ ಎನ್ನ ಬಹುದಾದ ಒರು ದೇಶತ್ತಿನಂದೆ ಕಥಾ ಮಿತ್ರರಾದ ಡಾ ಅಶೋಕ್ ಕುಮಾರ್ ಮತ್ತು ದಿ ಕೆ ಕೆ ನಾಯರ್ ಒಂದು ಊರಿನ ಕತೆ ಎಂದು ಅನುವಾದಿಸಿದ್ದರು . ಇಂಗ್ಲಿಷ್ ನಲ್ಲಿ ಟೇಲ್ಸ್ ಒಫ್ ಅತಿರಾನಿಪಾದಮ್ ಎಂಬ ಶೀರ್ಷಿಕೆಯಲ್ಲಿ  ಚೆನ್ನಾಗಿ ಬಂದಿದೆ .ದುರದೃಷ್ಟ ವಶಾತ್ ಇವುಗಳ ಪ್ರತಿಗಳು ಈಗ ಲಭ್ಯವಿಲ್ಲ . ಅವರ ಪ್ರಸಿದ್ಧ ಪ್ರವಾಸ ಕಥನಗಳು ಅನುವಾದ ಗೊಳ್ಳ  ಬೇಕಾಗಿದೆ . 

ಹೀಗೆ ಜಾಲಾಡುತ್ತಿರುವಾಗ ಕಲ್ಲಿಕೋಟೆ ಲಿಪಿ ಪ್ರಕಾಶನದವರು ಡಾ ಪಿ ಪರಮೇಶ್ವರನ್ ಅವರು ಅನುವಾದಿಸಿದ ಸಣ್ಣ ಕತೆಗಳ ಸಂಕಲನ ನೈಟ್ ಕ್ವೀನ್ (ರಾತ್ರಿ ರಾಣಿ )ಅಂಡ್ ಅದರ್ ಸ್ಟೋರೀಸ್ ಎಂಬ ಕೃತಿ ಲಭ್ಯವಿದೆ ಎಂದು ತಿಳಿದು ತರಿಸಿ ಓದಿ ಸಂತೋಷ ಪಟ್ಟಿದ್ದೇನೆ ..ಇಲ್ಲಿಯ ಕತೆಗಳು ಕೇರಳ ,ಕಾಶ್ಮೀರ ,ಸ್ವಿಜರ್ ಲ್ಯಾಂಡ್ ,ಉಗಾಂಡಾ ,ರೊಡೇಷಿಯಾ ಮತ್ತು ಝೆಕೋ ಸ್ಲಾವಾಕಿಯ ಇತ್ಯಾದಿ ದೇಶಗಳ ಹಿನ್ನಲೆಯಲ್ಲಿ ಇವೆ . ಅವರ ಪ್ರವಾಸ ಅನುಭವ ಎದ್ದು ಕಾಣುತ್ತದೆ .ಒಂದು ರೀತಿಯಲ್ಲಿ ಮಾಸ್ತಿ ಯವರ ನಿರೂಪಣೆ ಹೋಲುತ್ತವೆ . ಒಂದೇ ವ್ಯತ್ಯಾಸ ಮಾಸ್ತಿಯವರು ಶೃಂಗಾರ ವರ್ಣನೆಯಲ್ಲಿ ಸ್ವಲ್ಪ ಮಡಿ ತೋರಿದರೆ ಇವರ ಬರವಣಿಗೆಯಲ್ಲಿ ಅಲ್ಲೂ ಸಹಜತೆ ಎದ್ದು ಕಾಣುತ್ತದೆ . ಒಟ್ಟಿನಲ್ಲಿ ಬಹಳ ದಿನಗಳ ನಂತರ ಒಂದು ಒಳ್ಳೆಯ ಕಥಾ ಸಂಕಲನ ಓದಿ ಸಂತೋಷ ಪಟ್ಟೆ 

ಬುಧವಾರ, ಜನವರಿ 17, 2024

                     



 ಕೇರಳ ಲಿಟರೇಚರ್ ಫೆಸ್ಟಿವಲ್ ನ  ನಾನು ಮೆಚ್ಚಿದ ಇನ್ನೊಂದು ಗೋಷ್ಠಿ ಶ್ರೀ ಸಂತೋಷ್ ಜಾರ್ಜ್ ಕುಳಂಗರ ಅವರದ್ದು . ಈ ವ್ಯಕ್ತಿ ಒಂದು ವಿಸ್ಮಯ . ಚರಿತ್ರೆ ಮತ್ತು ಪ್ರವಾಸ ಸಂಬಂದಿಸಿದ ಮಲಯಾಳಂ  ಟಿ ವಿ ಚಾನೆಲ್ ' ಸಫಾರಿ 'ಯನ್ನು ದಶಕಗಳಿಂದ ,ಯಾವುದೇ ಬಾಹ್ಯ ಜಾಹಿರಾತು ಇಲ್ಲದೆ ನಡೆಸಿ ಕೊಂಡು ಬರುತ್ತಿದ್ದಾರೆ .ತಾನು ಸ್ವಯಂ ೧೩೦ ಕ್ಕೂ ಅಧಿಕ ದೇಶಗಳ ಪ್ರವಾಸ ಕೈಗೊಂಡು ಅದನ್ನು ದಾಖಲಿಸಿ ಸಂಚಾರಂ ಎಂಬ ಶೀರ್ಷಿಕೆಯಲ್ಲಿ ಪ್ರಸಾರ ಮಾಡಿದ್ದಾರೆ . ಅವುಗಳ ಡಿವಿಡಿ , ಯು ಎಸ್ ಬಿ ಗಳನ್ನು  ತಯಾರಿಸಿ ಆಸಕ್ತರಿಗೆ  ಲಭ್ಯ ಮಾಡಿದ್ದಾರೆ . ನಾನು ಹಲವು ಎಪಿಸೋಡ್ ಗಳನ್ನು ನೋಡಿ ಆನಂದ ಪಟ್ಟಿದ್ದೇನೆ . ಅವರೊಡನೆ ನಾವೂ ದೇಶ ಸಂಚಾರ ಮಾಡಿದ ಅನುಭವ ಆಗುತ್ತದೆ . 

ತಮಗೆ ಸ್ಪೂರ್ತಿ  ಪ್ರವಾಸ ಸಾಹಿತ್ಯ ,ಕಾದಂಬರಿ ,ಸಣ್ಣಕತೆ ಇತ್ಯಾದಿಗಳಿಂದ ಪ್ರಸಿದ್ಧ ರಾಗಿ ,ಸಂಸದರೂ ಆಗಿದ್ದ ಜ್ಞಾನ ಪೀಠ ,ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಪ್ರಸಿದ್ಧ ಸಾಹಿತಿ ಕಲ್ಲಿಕೋಟೆ ಯವರೇ ಆದ ಶ್ರೀ ಎಸ್ ಕೆ ಪೊಟ್ಟೆಕ್ಕಾಟ್ ಎಂದರು . ಪೊಟ್ಟೆಕ್ಕಾಟ್ ಅವರ ಪ್ರವಾಸ ಸಾಹಿತ್ಯ ಬಹುಶಃ ಬೇರೆ ಭಾಷೆಗಳಿಗೆ ಅನುವಾದ ಆಗಿರದಿದ್ದರೂ ಅನುವಾದ ಆಗಿರುವ ಸಣ್ಣ ಕತೆ ಕಾದಂಬರಿಗಳಲ್ಲಿ ಅವರಲ್ಲಿರುವ ಪ್ರವಾಸಿ ಅಲ್ಲಲ್ಲಿ ಪ್ರಕಟವಾಗುವುದನ್ನು ಕಂಡಿದ್ದೇನೆ 

ಗೋಷ್ಠಿಯಲ್ಲಿ ಒಂದು ವಿಷಯ ಉಲ್ಲೇಖಿಸಿದರು ..ನಮ್ಮಲ್ಲಿ ಶೈಕ್ಷಣಿಕ ಪ್ರವಾಸ ಎಂದರೆ ಗಟ್ಟಿಯಾಗಿ ಡಿಶುಮ್ ಡಿಶುಮ್ ಸಂಗೀತ ಹಾಕಿಕೊಂಡು ಬಸ್ಸಿನಲ್ಲಿ ಹೋಗಿ  ಅಲ್ಲಿ ಇಲ್ಲಿ ಅಡ್ಡಾಡಿ ಬರುವದು .ಆದರೆ ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳು ತಿಂಗಳು ಗಟ್ಟಲೆ ಹೊರ ನಾಡುಗಳಿಗೆ ತಾವೇ ಹೋಗಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವುದರ ಜತೆ   ಅಲ್ಲಿಯ ಜೀವನ ಕ್ರಮ ,ಸಂಸ್ಕೃತಿ ಮತ್ತು ಚರಿತ್ರೆ ಯ ಅಧ್ಯಯನ ಮಾಡಿ ವರದಿ ಸಲ್ಲಿಸುವುದು ಪಠ್ಯ ಕ್ರಮದ ಒಂದು ಭಾಗ . (ಇಂಗ್ಲೆಂಡ್ ನಲ್ಲಿ ಕಲಿಯುವ ನನ್ನ ಅಣ್ಣನ ಮೊಮ್ಮಗಳು ಶ್ರೀ ಲಂಕಾ  ದೇಶದಲ್ಲಿ ಪ್ರವಾಸಿ ವಾಸ್ತವ್ಯ ಮಾಡಿದ್ದಳು ). ಇದರಿಂದ ವಿದ್ಯಾರ್ಥಿಗಳ ದೃಷ್ಟಿ ಕೋನ ವಿಶಾಲವಾಗುವುದು .

ನಮ್ಮ ದೇಶದಲ್ಲಿ ವಿದ್ಯಾಭ್ಯಾಸ  ದ  ಜತೆಗೆ ನಾಗರೀಕ ಪ್ರಜ್ಞೆ ಯ ಮೈಗೂಡಿಸುವಿಕೆ ಇಲ್ಲದಿರುವುದು ವಿಷಾದನೀಯ ಎಂದರು . 

Human beings need not apply

 ಹೋದ ವಾರ ಕಲ್ಲಿಕೋಟೆ ಯಲ್ಲಿ ನಡೆದ ಕೇರಳ ಲಿಟೆರರಿ ಫೆಷ್ಟಿವಲ್ ನಲ್ಲಿ ನಡೆದ ಗೋಷ್ಟಿಗಳನ್ನು  ಯು ಟ್ಯೂಬ್ ನಲ್ಲಿ ನೋಡುತ್ತಿದ್ದೆ .ಒಂದು ಗೋಷ್ಟಿಯ ಶೀರ್ಷಿಕೆ ನನ್ನ ಗಮನ ಸೆಳೆಯಿತು .ಹ್ಯೂಮನ್ ಬೀಯಿಂಗ್ಸ ನೀಡ್ ನೋಟ್  ಎಪ್ಲಯ್(Human beings need not apply )ಎಂದಾಗಿತ್ತು ಅದು . ಮನುಷ್ಯರು ಅರ್ಜಿ ಹಾಕುವುದು ಬೇಡ ಎಂಬ ಅರ್ಥ . 

ಕೆಲಸಕ್ಕೆ ಅರ್ಜಿ ಕರೆಯುವಾಗ ಇಂತಹ ಷರತ್ತುಗಳು ಇರುವುದು ಸಹಜ  ಮೂವತ್ತು ವಯಸ್ಸಿನ ಮೇಲಿನವರು ಬೇಡ ,ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಿ ಇತ್ಯಾದಿ . ಆದರೆ ಇಲ್ಲಿ ಮನುಷ್ಯರೇ ಬೇಡ ಎಂದರೆ , ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಕು ಎಂಬ ಅರ್ಥ . ಒಂದು ರೀತಿಯಲ್ಲಿ ಈಗಿನ ಕಂಪ್ಯೂಟರ್ ಗಳೂ ಭಾಗಶಃ ಕೃತಕ ಬುದ್ದಿಜೀವಿ ಗಳೇ .ಆದರೆ ಅವಕ್ಕೆ ದಾರಿ ತೋರಲು ಮನುಷ್ಯ ಮೆದುಳಿನ ಅವಶ್ಯಕತೆ ಇತ್ತು . 

ಕಂಪ್ಯೂಟರ್ ಆಧರಿತ  ಸಾಫ್ಟ್ ವೆರ್  ಹಲವು ಉದ್ಯೋಗಗಳನ್ನು ಸೃಷ್ಟಿಸಿತು . ಜತೆಗೆ ಹಲವು ಉದ್ಯೋಗಗಳು ಅಪ್ರಸ್ತುತ ವಾದುವು . ನಮ್ಮ ದೇಶದಲ್ಲಿ ಇದು ಒಂದು ಕಡೆ  ಆರ್ಥಿಕ  ಸಮಾನತೆ (equalizer )ತರುವ ಮಾರ್ಗವಾದರೆ ಇನ್ನೊಂದೆಡೆ ಸಾಂಪ್ರದಾಯಿಕ ಉದ್ಯೋಗ ಗಳನ್ನು ಅವಲಂಬಿಸಿದವರು ಮತ್ತು ಇವರ ನಡುವೆ ದೊಡ್ಡ ಕಂದರ ನಿರ್ಮಾಣ ವಾಯಿತು . ಮಾರುಕಟ್ಟೆಯಲ್ಲಿ ಹಣ ಚಲಾವಣೆ ದಿಢೀರ್ ಹೆಚ್ಚು ಆಯಿತು . ನಗರಗಳಲ್ಲಿ ಮಾಲ್ ಸಂಸ್ಕೃತಿ ಬೆಳೆಯಿತು, ನಿವೇಶನ ಬೆಲೆ ಗಗನಕ್ಕೆ ಏರಿತು  .;ಕೌಟುಂಬಿಕ ಸಾಮಾಜಿಕ ಬಂಧಗಳು ಶಿಥಿಲ ವಾದುವು . 

ಇದೇ ವೈಜ್ಞಾನಿಕ ಬೆಳವಣಿಗೆ ಇಂದು ಕೃತಕ ಬುದ್ದಿ ಮತ್ತೆಯ ರೂಪದಲ್ಲಿ ಬಂದಿದೆ .ಹಲವರ ಉದ್ಯೋಗ ಕಸಿಯುವ ,ಹೊಸ ಮಾನವ ಉದ್ಯೋಗ ಸೃಷ್ಟಿ ಕುಂಠಿತ ಗೊಳಿಸುವ ಇದು ಒಂದು ಭಸ್ಮಾಸುರ ನಾಗಿ ಕಾಡುವುದೇ ?ನಮ್ಮ ಯುವ ಪೀಳಿಗೆಯ ಮೇಲೆ ಏನು ಪರಿಣಾಮ ಬೀರೀತು ?ದಾವೋಸ್ ನಲ್ಲಿ ನಡೆಯುವ ವಿಶ್ವ ವಾಣಿಜ್ಯ  ಕೂಟದಲ್ಲಿ ಕೂಡಾ ಈ ವರ್ಷ ಈ ವಿಷಯದ ಮೇಲೆ ಗಂಭೀರ ಚರ್ಚೆ ನಡೆಯಲಿದೆ