ಬೆಂಬಲಿಗರು

ಶುಕ್ರವಾರ, ಫೆಬ್ರವರಿ 20, 2026

ಹಿರಿಯರಲ್ಲಿ ಬೀಳುವಿಕೆ ಮತ್ತು ಮೂಳೆ ಮುರಿತ

Our aim should be not only adding years to life but also adding life to years

  

೬೦ ವರ್ಷ ಮೇಲ್ಪಟ್ಟವರ ಪೈಕಿ  ೩೦% ಮಂದಿ ಬೀಳುತ್ತಾರೆ ,ಮತ್ತು ೧೦% ಮಂದಿಗೆ ಮೂಳೆ ಮುರಿತ ಉಂಟಾಗುವುದು . ಹಿರಿಯ ನಾಗರಿಕರಲ್ಲಿ ಇದು  ಗಂಭೀರ ಸಮಸ್ಯೆ . ಒಮ್ಮೆ ಬಿದ್ದವರಿಗೆ ಮತ್ತೆ  ಬಿದ್ದು ಬಿಡುವ ಭಯ ಅಡರಿ ಬಿಟ್ಟು  ಅದೇ ಒಂದು ಕಾಯಿಲೆ ಆಗುತ್ತದೆ .

 ಹಿರಿಯರಲ್ಲಿ ಬೀಳುವಿಕೆಗೆ ಹಲವು ಕಾರಣಗಳು ಇವೆ . ಕೆಲವನ್ನು ಪರಿಶೀಲಿಸುವಾ .

೧ . ಮಾಂಸ ಖಂಡಗಳ ದೌರ್ಬಲ್ಯ . ವಯಸ್ಸು ಆದಂತೆ ಮಾಂಸ ಖಂಡಗಳ  ಶಕ್ತಿ   ಕುಂದುವುದು . ಗಂಡಸರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಹೆಂಗಸರಲ್ಲಿ ಈಸ್ಟ್ರೋಜನ್ ಕಡಿಮೆ ಯಾಗುವುದು ಒಂದು ಕಾರಣ . ಸರಿಯಾದ ವ್ಯಾಯಾಮ ಇಲ್ಲದೆ ಇರುವುದೂ ಒಂದು ಕಾರಣ .ಹಿಂದೆ ನೆಲದಲ್ಲಿ ಕುಳಿತು ಕೊಳ್ಳುವ (ಊಟಕ್ಕೆ ಸೇರಿ)ಪದ್ಧತಿ ಇತ್ತು .ಇದರಿಂದ ಕುಳಿತು ಏಳುವುದು ಸಹಜ ವ್ಯಾಯಾಮ ಆಗುತ್ತಿತ್ತು .ಈಗ ಮಂಚ  .ಕುರ್ಚಿ ಸೋಫಾ  ಇತ್ಯಾದಿ ಬಂದ ಮೇಲೆ ಸೊಂಟ ಮತ್ತು ತೊಡೆಯ ಮಾಂಸ ಖಂಡಗಳು ವ್ಯಾಯಾಮ ಇಲ್ಲದೆ ಬೇಗ ಸೊರಗುತ್ತವೆ . ಬರೀ ನಡೆಯುವಿಕೆ  ಅಥವಾ ವಾಕಿಂಗ್ ಇದಕ್ಕೆ ಸಾಲುವುದಿಲ್ಲ .ಆದುದರಿಂದ ಇದಕ್ಕೆಂದೇ ಕೆಲವು ವ್ಯಾಯಾಮ ಗಳನ್ನು  ರೂಢಿಸಿ ಕೊಳ್ಳಬೇಕಾಗುತ್ತದೆ .(ಉದಾ Tai chi ಯಂತಹ ).ಮಾಂಸ ಖಂಡಗಳ ಆರೋಗ್ಯಕ್ಕೆ ಒಳ್ಳೆಯ ಸಸಾರ ಜನಕ ಯುಕ್ತ ಆಹಾರದ ಪ್ರಾಮುಖ್ಯತೆ ಇದ್ದೇ ಇದೆ .

೨. ಹಿರಿಯರಲ್ಲಿ ಸಮತೋಲ ಮತ್ತು ರಕ್ಷಣಾತ್ಮಕ  ಕ್ರಿಯೆಗಳು ಕುಂಠಿತ ವಾಗಿರುವುದು 

೩ ದೃಷ್ಟಿ  ಮಾಂದ್ಯ 

೪  ನರಗಳ ದೌರ್ಬಲ್ಯದಿಂದ ಕೆಲವರಲ್ಲಿ  ಕುಳಿತು ಕೊಳ್ಳುವಾಗ ಅಥವಾ ನಿಲ್ಲುವಾಗ  ರಕ್ತದ ಒತ್ತಡ ಹಠಾತ್ ಕಡಿಮೆ ಯಾಗಿ ಮೆದುಳಿಗ ಸಾಕಷ್ಟು ರಕ್ತ ಹೋಗದೆ ಬೀಳುವುದೂ ಇದೆ . ಇದನ್ನು postural hypotension  ಎನ್ನುವರು .

೫  ಸಂಧಿ ಸವೆತ .ಮುಖ್ಯವಾಗಿ ಸೊಂಟ ಮತ್ತು ಮೊಣಕಾಲು . 

೬  ನಿದ್ದೆ ಮಾತ್ರೆ ಸೇವನೆಯಿಂದ ಆಗುವ ಅಮಲು ,ಮದ್ಯ ಪಾನ 

೭ ಹೃದಯ ಸಂಬಂದಿ ಕಾಯಿಲೆಗಳು ,ಬಡಿತದ ಏರು ಪೇರು 

೮ ರಕ್ತದಲ್ಲಿ ಸೋಡಿಯಂ ,ಪೊಯಸ್ಸಿಯಂ ಇತ್ಯಾದಿಗಳ ಕೊರತೆ 

೯  ಮೂತ್ರ ಹಿಡಿದು ಕೊಳ್ಳಲು ಆಗದೇ ಇರುವುದರಿಂದ ಶಂಕೆಗೆ ಓಡುವುದು .

೧೦ ಪಾಲಿ ಫಾರ್ಮಸಿ ಅಥವಾ ಹಲ ಔಷಧಿಗಳ ಸೇವನೆ  

ಇತ್ಯಾದಿ ಬೀಳಲು ಕಾರಣಗಳು ಆದರೆ   ಸುಲಭವಾಗಿ  ಮುರಿತ ಉಂಟಾಗಲು ಎಲುಬು ಟೊಳ್ಳಾಗುವುದು ಕಾರಣ .ವಯಸ್ಸು ಆದಂತೆ ಸ್ತ್ರೀಯರಲ್ಲಿ  ಈಸ್ಟ್ರೋಜೆನ್ ಮತ್ತು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಮುಖ್ಯ ಕಾರಣ . ಎಲುಬು ಸಾಂದ್ರತೆಗೆ ಕ್ಯಾಲ್ಸಿಯಂ ಮುಖ್ಯ ಮತ್ತು ಅದು ರಕ್ತ ಮೂಲಕ ಮೂಳೆ  ಸೇರಲು ವಿಟಮಿನ್ ಡಿ.ಇವೆರಡರ ಕೊರತೆ ಎಲುಬುಗಳನ್ನು  ಶಕ್ತಿ ಹೀನ ಮಾಡಿದರೆ    ವ್ಯಾಯಾಮದ ಕೊರತೆ ,ಕೆಲವು ಔಷಧಿಗಳು ,ಧೂಮ ಪಾನ ಇತ್ಯಾದಿ ಪೂರಕ ಅಂಶಗಳು .

 

 

 

  

 

ಬುಧವಾರ, ಫೆಬ್ರವರಿ 18, 2026

ಹಿರಿಯರ ಆರೋಗ್ಯ

 ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಲೇವರೇ |
ಔಷಧಂ ಜಾನ್ಹವೀ ತೋಯಂ ವೈದ್ಯೋ ನಾರಾಯಣೋ ಹರಿಃ 

ಆ ಗಾಗ ಕೇಳಿ ಬರುವ ಶ್ಲೋಕ .  ರೋಗ ಗ್ರಸ್ತ ವಾಗಿ ಜರ್ಜರಿತ  ಶರೀರ ಜರ್ಜರಿತ ವಾದಾಗ ದೇವರೇ ವೈದ್ಯ ,ಗಂಗಾ ಜಲವೇ ದಿವ್ಯ ಔಷಧ .ಮನುಷ್ಯನಿಗೆ  ವಯಸ್ಸಾದಾಗ ಶರೀರ ಶಿಥಿಲ ವಾಗಿ ರೋಗಗಳು ಹುಡುಕಿ ಕೊಂಡು ಬರುತ್ತವೆ .

ವಿನಾ ದೈನ್ಯೇನ ಜೀವಿತಂ ಅನಾಯಸೇನ ಮರಣಂ ಎಂಬ  ಮಂತ್ರ ಎಲ್ಲರಿಗೂ ಅಪ್ಯಾಯಮಾನವಾಗಿ ತೋರುವುದು .

ಆದುದರಿಂದ ಅನಾರೋಗ್ಯ ದೂರ ಇಡುವ ಕೆಲವು ಮಾರ್ಗೋಪಾಯ ಗಳನ್ನು  ಗಮನಿಸುವ .

ಇದರಲ್ಲಿ ಸುಲಭ (?)ಸಾಧ್ಯ  ಸರಿಯಾದ ಸಮತೋಲ ಆಹಾರ ಸೇವನೆ .

 

ಹಿರಿಯರಿಗೆ  ಸಮತೋಲಿತ ಆಹಾರವು ಕಡಿಮೆ ಕ್ಯಾಲೊರಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರಬೇಕು.ನಮ್ಮಲ್ಲಿ ಬಹು ಮಂದಿ ಅಕ್ಕಿ ಗಂಜಿ ,ನೀರು ದೋಸೆ ,ಪುಂಡಿ ಇತ್ಯಾದಿ ಆರೋಗ್ಯಕರ ಆಹಾರ ಎಂದು ಹೇಳುತ್ತಾರೆ .ಆದರೆ ಅಕ್ಕಿಯಲ್ಲಿ ಸಕ್ಕರೆ ಅಥವಾ ಕ್ಯಾಲೋರಿ ಜಾಸ್ತಿ .  ಸ್ನಾಯುಗಳ ಸಂರಕ್ಷಣೆಗೆ ಹೆಚ್ಚಿನ ಪ್ರೋಟೀನ್, ಜೀರ್ಣಕ್ರಿಯೆಗೆ ನಾರು, ಹಾಗೂ ಎಲುಬುಗಳ ಆರೋಗ್ಯಕ್ಕಾಗಿ ಅಗತ್ಯವಾದ ವಿಟಮಿನ್ ಮತ್ತು ಖನಿಜಗಳ ಮೇಲೆ ಒತ್ತು ನೀಡಬೇಕು. ಮುಖ್ಯ ಅಂಶಗಳಲ್ಲಿ ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಕಡಿಮೆ ಕೊಬ್ಬಿನ ಪ್ರೋಟೀನ್ (ಮೀನು, ಕೋಳಿ, ಬೀನ್ಸ್), ಮತ್ತು ಕಡಿಮೆ ಕೊಬ್ಬಿನ ಹಾಲು ಉತ್ಪನ್ನಗಳು ಸೇರಿವೆ.  ಕೊಬ್ಬು, ಉಪ್ಪು ಮತ್ತು ಸಕ್ಕರೆ ಬಳಕೆಯನ್ನು ಕಡಿಮೆ ಮಾಡಬೇಕು. ದೇಹದಲ್ಲಿ ನೀರಿನ ಸಮತೋಲನ ಕಾಪಾಡುವುದು ಅತ್ಯಂತ ಮುಖ್ಯ, ಹಾಗೆಯೇ ಮೃದುವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು.

 

ಪ್ರೋಟೀನ್: ಸ್ನಾಯುಗಳ ಭಾರವನ್ನು ಕಾಪಾಡಲು ಅಗತ್ಯ. ಕಡಿಮೆ ಕೊಬ್ಬಿನ ಮಾಂಸ, ಕೋಳಿ, ಮೊಟ್ಟೆ, ಮೀನು, ಬೀನ್ಸ್ ಮತ್ತು ಕಾಯಿ-ಬೀಜಗಳು ಉತ್ತಮ ಮೂಲಗಳು.ಅಕ್ಕಿ ಗೋಧಿ ಯಂತಹ ಏಕ ದಳ  ಧಾನ್ಯಗಳಿಗಿಂತ ಹೆಸರು ಕಡಲೆ ಉದ್ದು ಮುಂತಾದ ದ್ವಿದಳ ಧಾನ್ಯಗಳಲ್ಲಿ ಪ್ರೊಟೀನ್ ಅಥವಾ ಸಸಾರ ಜನಕ ಅಧಿಕ ಎಂಬುದನ್ನು ಗಮನಿಸ ಬೇಕು .

ಹಣ್ಣುಗಳು ಮತ್ತು ತರಕಾರಿಗಳು: ವಿವಿಧ ಬಣ್ಣಗಳ ಹಣ್ಣು ಮತ್ತು ತರಕಾರಿಗಳನ್ನು, ವಿಶೇಷವಾಗಿ ಹಸಿರು ಎಲೆ ತರಕಾರಿಗಳನ್ನು ಸೇವಿಸುವುದು ನಾರು ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಒದಗಿಸುತ್ತದೆ.

ಅಸಂಸ್ಕರಿತ ಇಡೀ ಧಾನ್ಯ ಗಳು .

ಹಾಲು ಉತ್ಪನ್ನಗಳು: ಕಡಿಮೆ ಕೊಬ್ಬಿನ ಹಾಲು, ಮೊಸರು  ಕ್ಯಾಲ್ಸಿಯಂ ಹಾಗೂ ವಿಟಮಿನ್ D ಒದಗಿಸಿ ಎಲುಬುಗಳ ಆರೋಗ್ಯವನ್ನು ಕಾಪಾಡುತ್ತವೆ.



ಆಹಾರ ಸಂಬಂಧಿತ ಸಲಹೆಗಳು ಮತ್ತು ಗಮನಿಸಬೇಕಾದ ವಿಷಯಗಳು

ನೀರಿನ ಸೇವನೆ: ವಯಸ್ಸಾದಂತೆ ದಾಹದ ಭಾವನೆ ಕಡಿಮೆಯಾಗಬಹುದು, ಆದ್ದರಿಂದ ದಿನಪೂರ್ತಿ ಸಾಕಷ್ಟು ದ್ರವಗಳನ್ನು ಕುಡಿಯಬೇಕು.

ಉಪ್ಪು ಮತ್ತು ಸಕ್ಕರೆ ಕಡಿಮೆ ಮಾಡುವುದು: ರುಚಿಗಾಗಿ ಉಪ್ಪಿನ ಬದಲು ಸೊಪ್ಪುಗಳು ಮತ್ತು ಮಸಾಲೆಗಳನ್ನು ಬಳಸಿ; ಸಕ್ಕರೆ ಮತ್ತು ಸಂಸ್ಕರಿಸಿದ  ಆಹಾರಗಳನ್ನು ತಪ್ಪಿಸಬೇಕು.ಉಪ್ಪಿನ ಕಾಯಿ ,ಉಪ್ಪಿನಲ್ಲಿ ಕಾಪಿಟ್ಟ ಹಲಸು ಮಾವು ಮೀನು  ಇತ್ಯಾದಿ ಯಲ್ಲಿ ಉಪ್ಪು ಸಾಂದ್ರೀಕೃತ ವಾಗಿರುತ್ತದೆ  ಎಂದು ಗಮನಿಸ ಬೇಕು  

ಚಿಕ್ಕ ಪ್ರಮಾಣದ, ಹೆಚ್ಚು ಬಾರಿ ಊಟ: 

 

 ಉಪವಾಸ 

 ನಿಯಮಿತವಾಗಿ  ಮಾಡುವ ಉಪವಾಸ ಆರೋಗ್ಯಕ್ಕೆ ಉತ್ತಮ ಎಂದು ಕಂಡು ಬಂದಿದೆ .ಇದು ಆಚೇ ಮನೆ ಸುಬ್ಬಮ್ಮನ ಉಪವಾಸ ದಂತೆ ಬರೀ ಅನ್ನ ಬಿಟ್ಟು ಉಳಿದನ್ನು ಸ್ವಾಹಾ ಮಾಡುವುದು ಆಗಿರ ಬಾರದು ಮತ್ತು ಉಪವಾಸ ಮುರಿದ ಮೇಲೆ ಅದನ್ನು ಹೆಚ್ಚಿನ ಆಹಾರ ಸೇವಿಸಿ ಸಮತೂಕ ಮಾಡಲು ಹೋಗ ಬಾರದು .

(ಮುಂದುವರಿಯುವುದು )

ಮಂಗಳವಾರ, ಫೆಬ್ರವರಿ 17, 2026

ಹಿರಿಯ ರ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

 ಸಮಾಜದಲ್ಲಿ ಹಿರಿಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು  ಅವರಿಗೆ  ಕೌಟಿಂಬಿಕ ಬೆಂಬಲ ಕಡಿಮೆ ಯಾಗುತ್ತಿರುವ ಈ ಕಾಲದಲ್ಲಿ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳ ಬೇಕಾದ ಜವಾಬ್ದಾರಿ ಅವರ ಮೇಲೆ ಇದೆ . 

ಇಂದಿನ ತಥಾಕಥಿತ ನಾಗರೀಕ ಸಮಾಜದ ಕಾಯಿಲೆಗಳಾದ ರಕ್ತದ ಒತ್ತಡ ,ಸಕ್ಕರೆ ಕಾಯಿಲೆ ,ಹೃದ್ರೋಗ ಗಳಲ್ಲದೆ ಹಿರಿಯ ನಾಗರಿಕರಲ್ಲಿ ಕಾಣಿಸಿ ಕೊಳ್ಳುವ ಮೂತ್ರ ಸಂಬಂದಿ  ಸಮಸ್ಯೆ ,ಬೀಳುವಿಕೆ ಮತ್ತು ಮೂಳೆ ಮುರಿತ , ಮಹಿಳೆಯರಲ್ಲಿ  ಋತುಬಂಧ ಸಮಸ್ಯೆಗಳು ಇವುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಗಾರ ವೊಂದನ್ನು  ೧.೩.೨೦೨೬ ನೇ ಭಾನುವಾರ ಪುತ್ತೂರಿನಲ್ಲಿ ಹಮ್ಮಿ ಕೊಳ್ಳಲಾಗಿದೆ . 

ಹಿರಿಯ ಮೂಳೆ ತಜ್ಞ ಡಾ ಭಾಸ್ಕರ್ ಅವರು ಹಿರಿಯರ ಮೂಳೆ ಮತ್ತು ಸಂಧಿ ವ್ಯಾಧಿಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ,ಹಿರಿಯ ಶಸ್ತ್ರ ಚಿಕಿತ್ಸಾ ವೈದ್ಯ ಡಾ ಗೋಪಿನಾಥ ಪೈ ಅವರು ಹಿರಿಯ  ಪುರುಷ ಮತ್ತು ಸ್ತ್ರೀಯರ ಮೂತ್ರ ಸಂಬಂದಿ ಸಮಸ್ಯೆಗಳ ಮೇಲೆ ಮತ್ತು ಜನಪ್ರಿಯ ಸ್ತ್ರೀ ರೋಗ ತಜ್ಞೆ ಡಾ ಶ್ರುತಿ ಅಲೆವೂರ್ ಋತುಬಂಧ(ಮುಟ್ಟು ನಿಲ್ಲುವಿಕೆ )ಸಂಬಂಧಿ ವಿಚಾರಗಳ ಬಗ್ಗೆ ಮಾತನಾಡುವರು . ಹಿರಿಯ ಫಿಸಿಯೋಥೆರಪಿಸ್ಟ್ ವಿನಯ ಪ್ರಸಾದ್ ಝಾ ಅವರು ಉಪಯುಕ್ತ ವ್ಯಾಯಾಮ ಗಳ  ಪ್ರಾತ್ಯಕ್ಷಿಕೆ ನೀಡುವರು . ಪ್ರಶ್ನೆ ಸಮಾಲೋಚನೆಗೆ ಅವಕಾಶ ಇದೆ . ಜತೆಗೆ ನಾನೂ ಇರುತ್ತೇನೆ .

ನಿಯಮಿತ  ಆಸನ ವ್ಯವಸ್ಥೆ ಇರುವುದರಿಂದ ದಯವಿಟ್ಟು ೨೬.೨.೨೦೨೬ ರ ಒಳಗೆ ನೋಂದಾಯಿಸಿ ಕೊಳ್ಳಬೇಕಾಗಿ ವಿನಂತಿ . ಇದು ಪೂರ್ಣ ಉಚಿತ . ಕಾರ್ಯಕ್ರಮ ನಂತರ ಊಟದ ವ್ಯವಸ್ಥೆ ಇದೆ .



ಬುಧವಾರ, ನವೆಂಬರ್ 5, 2025

ಈ ಪ್ರದೇಶ ಸಿಸಿ ಟಿವಿ ಕಣ್ಗಾಪಿನಲ್ಲಿದೆ

ಈ ಪ್ರದೇಶ ಸಿಸಿ ಟಿವಿ ಕಣ್ಗಾಪಿನಲ್ಲಿದೆ 

ಈಗ  ಶಾಲೆ ಕಾಲೇಜ್ ಆಸ್ಪತ್ರೆ ,ಸರಕಾರಿ ಕಚೇರಿ ಬ್ಯಾಂಕ್  ಎಲ್ಲೆಂದರಲ್ಲಿ ಕಂಡು ಬರುವ ಸೂಚನಾ ಫಲಕ . ತಮ್ಮಲ್ಲಿ ಬರುತ್ತಿರುವ ಅತಿಥಿ ,ಗ್ರಾಹಕರ ಲ್ಲಿ  ಕೆಲವರ ಮೇಲೆ ಅಪನಂಬಿಕೆ ಇರುವ ಸೂಚನೆ . ಸರ್ವಾನ್ತರ್ಯಾಮಿ  ಯಾದ ದೇವರನ್ನು ಪ್ರತಿಷ್ಠಿಸಿರುವ ದೇವಾಲಯ ಗಳಲ್ಲಿಯೂ ಇಂತಹ ಎಚ್ಚರಿಕೆ ಇರುವುದು ವಿಪರ್ಯಾಸ . ಗುರುಗಳು ಶಿಷ್ಯರಿಗೆ ತಲಾ ಒಂದು ಬಾಳೆಹಣ್ಣು ಕೊಟ್ಟು ದೇವರು ಇಲ್ಲದ ತಾಣದಲ್ಲಿ ತಿನ್ನಿರಿ ಎಂದು ಹೇಳಿದಾಗ ಎಲ್ಲರೂ ಹಣ್ಣು ಸಹಿತ ವಾಪಸು ಬಂದ ಕತೆ ಕೇಳಿದ್ದೇವೆ . 

      ಮನೆಯಲ್ಲಿ ನಿಜಕ್ಕೂ ನಾಯಿ ಇಲ್ಲದಿದ್ದರೂ ಕಚ್ಚುವ ನಾಯಿ ಇದೆ ಎಂದು ಕೆಲವರು ಬೋರ್ಡ್ ಹಾಕಿ ಕೊಂಡು ಇರುತ್ತಾರೆ .;. ಕಳ್ಳರನ್ನು ಹೆದರಿಸಲು .  ಹಾಗೆಯೇ ಸಿಸಿಟಿವಿ  ಎಚ್ಚರಿಕೆ ಯೂ  ಇರುವ ಸಾಧ್ಯತೆ ಇದೆ . 

ಪರೀಕ್ಷಾ ಕೇಂದ್ರಗಳಲ್ಲಿ ಈಗ ಸಿಸಿಟಿವಿ ಕಡ್ಡಾಯ . ಆದರೂ ಕಾಪಿ ಹೊಡೆಯುವುದು ಕಡಿಮೆ ಆಗಿದೆ ಎಂದು ಎದೆ ತಟ್ಟಿ ಹೇಳುವುದು ಕಷ್ಟ . ನೀವು ಚಾಪೆಯ ಕೆಳಗೆ ನುಗ್ಗಿದರೆ ರಂಗೋಲಿ ಕೆಳಗೇ ಅಡಗುವವರು ಇದ್ದಾರೆ  ನೆಸೆ ಸಿಟಿ ಈಸ್ ಮದರ್ ಆಫ್ ಇನ್ವೆಂಷನ್ . 

ಸರಕಾರಿ ಕಚೇರಿಗಳಲ್ಲಿ ಇದರ ಅಳವಡಿಕೆಯಿಂದ ಲಂಚದ ಹಾವಳಿ ಕಡಿಮೆ ಆಗಿದೆಯೇ ,ಸಾರ್ವಜನಿಕರೇ ಹೇಳಬೇಕು . ಲಂಚವನ್ನು ಮಧ್ಯವರ್ತಿಗಳ ಮೂಲಕ ,ಕಾಪಿ ಕುಡಿಯುವಾ ಎಂದು ಪಕ್ಕದ ಹೋಟೆಲ್ ನಲ್ಲಿ ಮತ್ತು ಕೆಲವರು ಕಚೇರಿಯ ಶೌಚಾಲಯದಲ್ಲಿ (ಅಲ್ಲಿ ಸಿಸಿಟಿವಿ ಹಾಕುವಂತಿಲ್ಲ )ವಸೂಲು ಮಾಡುವರು ಎಂದು ಕೇಳಿದ್ದೇನೆ  . 

ಸಿಸಿಟಿವಿ ಸಹಾಯದಿಂದ ಅಪರಾಧಿಗಳನ್ನು ಪತ್ತೆ ಹಚ್ಚಿದ ವಾರ್ತೆ ಓದಿದ್ದೇವೆ . ಇತ್ತೀಚೆಗೆ ಕುಟುಂಬ ಕಲಹ ,ಆತ್ಮಹತ್ಯೆ ,ಕೊಲೆ ಇತ್ಯಾದಿ ಅಧಿಕ ಆಗುತ್ತಿರುವುದರಿಂದ  ಇನ್ನು ಎಲ್ಲಾ ಮನೆಗಳ ಒಳಗೂ ಸಿಸಿಟಿವಿ ಕಡ್ಡಾಯ ಮಾಡ ಬಹುದು . 

ಕೆಲವು ಶಾಲೆಗಳಲ್ಲಿ ಸಿಸಿಟಿವಿ  ಲಿಂಕ್ ಮತ್ತು ಪಾಸ್ವರ್ಡ್ ಹೆತ್ತವರಿಗೆ ಕೊಟ್ಟು  ಶಾಲೆಯಲ್ಲಿ ಚೆನ್ನಾಗಿ ಕಲಿಸುತ್ತಾರೆಯೋ ಇಲ್ಲವೋ ,ತಮ್ಮ ಮಕ್ಕಳು ತರಗತಿಗಳಲ್ಲಿ  ಆಸಕ್ತಿಯಿಂದ  ಕಲಿಯುವರೋ ಎಂದು ತತ್ಸಮಯ ಗಮನಿಸುವ ವ್ಯವಸ್ಥೆ ಮಾಡಿರುತ್ತಾರೆ ಎಂದು ಕೇಳಿದ್ದೇನೆ . 

ಅಪರಾಧ ಗಳನ್ನು  ತಿಳಿದೂ ತಿಳಿದೂ ಮಾಡಿ ದೇವಾಲಯಗಳಿಗೆ ದೊಡ್ಡ ಕಾಣಿಕೆ ಹಾಕಿ  ಲೇವಾದೇವಿ ಮಾಡುವ ಮಂದಿಗೆ ಸರ್ವನ್ತರ್ಯಾಮಿ ಯ  ಭಯ ಇಲ್ಲದಿದ್ದರೂ ಮಾನವ ನಿರ್ಮಿತ  ಸಿಸಿಟಿವಿ ಯ  ಹೆದರಿಕೆ ಸ್ವಲ್ಪ ಇರಬಹುದು . 

ಹಿಂದೆ ಮನೆ ಕಾವಲಿಗೆ ನಾಯಿ ಸಾಕುತ್ತಿದ್ದೆವು . ಅಪರಿಚಿತರು ಬಂದರೆ ಮಾತ್ರ ಅವು ಬೊಗಳುವವು . ಕತ್ತಲೆಯಲ್ಲಿ ಮನೆಯವರು ಬಂದಾಗಲೂ ಕೆಲವೊಮ್ಮೆ ಬೊಗಳಿದಾಗ "ನಾನಲ್ಲವೇ ನಾಯಿ ,ನೀನ್ಯಾಕೆ ಬೊಗಳುವೆ "ಎನ್ನುವುದು ಸಾಮಾನ್ಯ . ಇನ್ನು ಮನೆ ಮಂದಿಯ ಮುಖ ಚರ್ಯೆ ಯನ್ನು ಸಿಸಿಟಿವಿ ಯಲ್ಲಿ ದಾಖಲಿಸಿ ಅಪರಿಚಿತರು ಬಂದಾಗ ಸೈರನ್ ಮಾಡುವ ವ್ಯವಸ್ಥೆ ಬಂದರೆ  ಕಾವಲು ನಾಯಿ ಸಾಕಣೆ ನಿಲ್ಲ ಬಹುದು  

ಮಂಗಳವಾರ, ಸೆಪ್ಟೆಂಬರ್ 9, 2025

 DR. SULEKHA VARADARAJ ...                                                                               

ಡಾ ಸುಲೇಖಾ ವರದರಾಜ್ ಪುತ್ತೂರು ಇ ಎಸ ಐ  ವೈದ್ಯಾಧಿಕಾರಿ ಯಾಗಿ ಸುಧೀರ್ಘ ಸೇವೆ ಸಲ್ಲಿಸಿ  ಕೆಲ ತಿಂಗಳುಗಳ ಹಿಂದೆ ಸ್ವಯಂ ನಿವೃತ್ತಿ  ಹೊಂದಿದರು . ತಮ್ಮ ಪ್ರಾಮಾಣಿಕ ಸೇವೆಯಿಂದ ಜನಾನುರಾಗಿದ್ದವರು . ಮಕ್ಕಳ ತಜ್ಞೆ ,ಹದಿಹರೆಯದವರ ಮಾನಸಿಕ ಸಮಸ್ಯೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಇವರು ವೈದ್ಯಕೀಯ ಸಮ್ಮೇಳನಗಳಲ್ಲಿ ಬಹು ಬೇಡಿಕೆ ಯುಳ್ಳ ವೈದ್ಯೆ . ವೈದ್ಯರಲ್ಲಿ ಸಾಹಿತ್ಯ  ಸಂಗೀತ ಲಲಿತ ಕಲೆಯಲ್ಲಿ ಆಸಕ್ತಿ ಇರುವವವರು ಕಡಿಮೆ ,ಒಂದು ವೇಳೆ ಇದ್ದರೂ ಸಮಯ ಇರುವುದಿಲ್ಲ . ಆದರೆ ಸುಲೇಖಾ ಅವರ ಆಸಕ್ತಿ ಬಹುಮುಖ .. ಸರಿಯಾಗಿ ಅವರ ಪತಿ ಕನ್ನಡ ಪ್ರಾಧ್ಯಾಪಕ ,ಸಾಹಿತಿ ಮತ್ತು ಸಂಗೀತ ಪ್ರಿಯ . ಸರಕಾರಿ ಸೇವೆಯಿಂದ ನಿವೃತ್ತಿ ಪಡೆದ ಮೇಲೆ ತಮ್ಮ ಮನಸಿಗೆ ಹತ್ತಿರವಾದ ವಿಷಯಗಳ ಮೇಲೆ ಸಮಯ ವಿನಿಯೋಗಿಸುತ್ತಿರುವರು . 

ವರದರಾಜ್ ಚಂದ್ರಗಿರಿ  ಮೊನ್ನೆ ಮೊನ್ನೆ ಸೇವಾ ನಿವೃತ್ತಿ ಹೊಂದಿರುವರು .ಬೆಟ್ಟಂಪಾಡಿ ಸರಕಾರಿ ಕಾಲೇಜು ಪ್ರಿನ್ಸಿಪಾಲ್ ಅವರ ಸೇವೆಯ ಕೊನೆಯ ಹುದ್ದೆ . ಈ ಕಾಲೇಜು ಯಾವುದೇ ಖಾಸಗಿ ಸಂಸ್ಥೆಗೆ ಕಡಿಮೆ ಇಲ್ಲದಂತೆ ಮಾಡುವಲ್ಲಿ ಇವರ ಕೊಡುಗೆ ಅಮೂಲ್ಯ . ಇವರ ನೇತೃತ್ವದಲ್ಲಿ ನಡೆದ ವಿಚಾರ ಸಂಕಿರಣಗಳು ,ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನೇಕ  .ನಾನೂ ಎರಡು ಕಾರ್ಯಕ್ರಮಗಳಿಗೆ ಹಾಜರಾಗಿ ಆನಂದ ಪಟ್ಟಿದ್ದೇನೆ . ಸ್ವಯಂ ಸಾಹಿತಿಯಾದ ಇವರು ಖ್ಯಾತ ಕತೆಗಾರ ದಿ  ವ್ಯಾಸ ಅವರ ಸಮೀಪ ಬಂಧು . ಪುತ್ತೂರು ತಾಲೂಕು  ಸಾಹಿತ್ಯ ಪರಿಷತ್ ನ ಮುಖ್ಯಸ್ಥನಾಗಿ ಹಲವು ಒಳ್ಳೆಯ ಕಾರ್ಯಕ್ರಮಗಳನ್ನು ಏರ್ಪಡಿಸಿದ ಗರಿಮೆ ಅವರದು .. ಕಾರ್ಕಳ ಕಾಲೇಜ್ ನಲ್ಲಿ ಇದ್ದಾಗ ಹಿರಿಯ ಸಂಘಟಕ ರಾಮಚಂದ್ರ ಅವರ ಜತೆಗೆ ಇವರು . ನನಗೆ ರಾಮಚಂದ್ರ ಅವರನ್ನು ಪರಿಚಯಿಸಿದವರೇ ಚಂದ್ರಗಿರಿ ಅವರು 

ಚಂದ್ರಗಿರಿ ದಂಪತಿಗಳ ಮನೆಯ ಹೆಸರು ಸಮರಸ . ಅನ್ವಯಾರ್ಥ ,ಸಾಹಿತ್ಯದಲ್ಲಿಯೂ ಬದುಕಿನಲ್ಲಿಯೂ  . ಇಬ್ಬರದೂ ಸರಳ ವ್ಯಕ್ತಿತ್ವ ,ನೇರ ನುಡಿ .  ಪುತ್ತೂರಿಗೆ ಬಂದು ನಾನು ಮತ್ತು ನನ್ನ ಕುಟುಂಬ ದ  ಸಂಪಾದನೆ ಎಂದರೆ ಇಂತಹವರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸ್ನೇಹ . ಚಂದ್ರಗಿರಿ ದಂಪತಿಗಳಿಗೆ ಇಬ್ಬರು ಮಕ್ಕಳು . ಮಗ ಉದ್ಯೋಗದಲ್ಲಿ ಇದ್ದು ,ಮಗಳು ವಿದ್ಯಾರ್ಥಿ . 

                ಸರಕಾರಿ ಸೇವೆಯಿಂದ ನಿವೃತ್ತಿ ಪಡೆದ ಈ ದಂಪತಿಗಳು  ತಮ್ಮ  ಹೃದಯಕ್ಕೆ ಹತ್ತಿರವಾದ ಚಟುವಟಿಕೆಗಳಲ್ಲಿ ಪ್ರವೃತ್ತರಾಗಲಿ . ಆಯುರಾರೋಗ್ಯ ಸೌಖ್ಯ ಅವರಿಗಿರಲಿ .  

ಕಣ್ಮರೆಯಾದ ಮೆಚ್ಚಿನ ಶ್ರೀಪತಿ ಮಾಷ್ಟ್ರು

 May be an image of 1 person and smilingಕೆಲ ದಿನಗಳ ಹಿಂದೆ ಶ್ರೀಪತಿ ಮೇಷ್ಟು ತೀರಿಕೊಂಡರು .ಆಗ ನಾನು ಪರವೂರಿನಲ್ಲಿ ಇದ್ದೆ . 

ಅವರು ನಮ್ಮ ಊರಿನ ಕಿರಿಂಚಿಮೂಲೆ ಯವರು .ಅವರ ತಂದೆ ಶ್ರೀನಿವಾಸ ರಾಯರು ಎಲಿಮೆಂಟರಿ ಶಾಲೆಯಲ್ಲಿ ನಮ್ಮ ಅಧ್ಯಾಪಕರು .ಶಿಸ್ತಿನ ಸಿಪಾಯಿ . ನಮ್ಮ ಮನೆ ಅಂಗ್ರಿಯಿಂದ ಒಂದು ಮೈಲು ಉತ್ತರಕ್ಕೆ ಗದ್ದೆ ಗಳ ನಡುವಿನ ಕಾಲುದಾರಿ ಯಲ್ಲಿ ನಡೆದರೆ ಕಳಂಜಿಮಲೆ ಗುಡ್ಡದ ತಪ್ಪಲಿನಲ್ಲಿ ಅವರ ಮನೆ . ಅಲ್ಲಿಂದ ಪಶ್ಚಿಮಕ್ಕೆ ಜಲ್ಲಿ ಮಣ್ಣಿನ ರಾಜರಸ್ತೆ , ಕಿರಿಂಚಿ ಮೂಲೆ ,ಕೇಪುಳ ಗುಡ್ಡೆ  ಪಂಜಾಜೆ ದಾಟಿ ಕನ್ಯಾನಕ್ಕೆ ಮತ್ತೊಂದು ಮೈಲಿ . ಶ್ರೀಪತಿ ಮೇಷ್ಟ್ರ ತಮ್ಮ ಸುರೇಶ ನನ್ನಿಂದ ಒಂದು ಕ್ಲಾಸ್ ಮೇಲೆ ಆದರೆ ಬಾಲಕೃಷ್ಣ ಒಂದು ವರ್ಷ ಜೂನಿಯರ್ .ಸುರೇಶ ರಾವ್ ಕೋಲ್ ಇಂಡಿಯಾ ದಲ್ಲಿ ಉನ್ನತ ಹುದ್ದೆ ಗೆ ಏರಿ ಈಗ ಮಂಗಳೂರಿನಲ್ಲಿ ನಿವೃತ್ತ ಜೇವನ  ನಡೆಸುತ್ತಿದ್ದರೆ  ಬಾಲಕೃಷ್ಣ ಅಧ್ಯಾಪಕನಾಗಿ ಬೆಟ್ಟಂಪಾಡಿ ಜೂನಿಯರ್ ಕಾಲೇಜು ಪ್ರಿನ್ಸಿಪಾಲ್ ಆಗಿ ನಿವೃತ್ತ್ತಿ ಹೊಂದಿ ಕಿರಿಂಚಿ ಮೂಲೆ ಮೂಲ ಮನೆಯಲ್ಲಿ ಇದ್ದಾರೆ . 

ಶ್ರೀಪತಿ ರಾಯರು ನಾನು ಒಂಬತ್ತನೇ ತರಗತಿಯಲ್ಲಿ ಇದ್ದಾಗ ಬಿ ಎಸ್ಸಿ  ಬಿ ಎಡ್ ಮುಗಿಸಿ ಅಧ್ಯಾಪಕರಾಗಿ ಸೇರಿದರು  . ಭೌತ ಮತ್ತು ರಸಾಯನ ಶಾಸ್ತ್ರ ಅವರದ್ದು . ಜೀವ ಶಾಸ್ತ್ರಕ್ಕೆ  ಕಿರಿಂಚಿ ಮೂಲೆ ಶ್ರೀಧರ ರಾಯರು . ಶ್ರೀಪತಿ ರಾಯರು ತರಗತಿಗೆ ಪಠ್ಯ ಪುಸ್ತಕ ತರುತ್ತಿರಲಿಲ್ಲ .. ಮೊದಲೇ ವಿಷಯ ಅಧ್ಯಯನ ಮಾಡಿ ಬಂದು  ಬೋರ್ಡಿನಲ್ಲಿ ಬಣ್ಣ ಬಣ್ಣದ ಚಿತ್ರ ಬಿಡಿಸಿ ಆಕರ್ಷಕ ಠೀವಿ ಮತ್ತು ಮಾತಿನ ಓಘ ದಿಂದ  ಪಾಠ ಆರಂಭ ಮಾಡಿದರೆ ವಿದ್ಯಾರ್ಥಿಗಳು ಮಂತ್ರ ಮುಗ್ಧ ರಾಗಿ ಕೇಳುವರು . ಅದುವರೆಗೆ ನಾವು ಪ್ರತ್ಯಕ್ಷ ಕಂಡಿರದ  ರಸಾಯನ ಶಾಸ್ತ್ರ ಪ್ರಯೋಗ ಗಳನ್ನು  ಮಾಡಿ ತೋರಿಸುತ್ತಿದ್ದರು .ಪೊಟ್ಯಾಶಿಯಂ ಕ್ಲೋರೇಟ್ ಮತ್ತು ಮ್ಯಾಂಗನೀಸ್ ಡೈ ಆಕ್ಸೈಡ್ ಪ್ರನಾಳ ದಲ್ಲಿ ಹಾಕಿ ಬಿಸಿ ಮಾಡಿ  ಉತ್ಪತ್ತಿಯಾದ ಆಮ್ಲಜನಕದಿಂದ ಕಡ್ಡಿ ಉರಿಸಿ ತೋರಿಸಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತೆ ಇದೆ  .ಇವರು ಬರುವ ವರೆಗೆ ಲ್ಯಾಬ್ ಉಪಕರಣಗಳು ಪ್ರಯೋಗಾಲಯದಲ್ಲಿ ಧೂಳು ಹಿಡಿಯುತ್ತಿದ್ದವು . ಭೌತ ಶಾಸ್ತ್ರದ ವೇಗ ವೇಗೋತ್ಕರ್ಷ ,ನ್ಯೂಟನ್ ಚಲನಾ ನಿಯಮಗಳ ಬಗ್ಗೆ ಅವರ ಮಾತುಗಳು ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ . 

ಶಾಲೆಯಲ್ಲಿ ಒಂದು ವಿಜ್ಞಾನ ಸಂಘ ಆರಂಭಿಸಿದ್ದು  ಕನ್ನಡದಲ್ಲಿ ವಿಜ್ಞಾನ ಲೋಕ ಎಂಬ ಪತ್ರಿಕೆ ನಡೆಸುತ್ತಿದ್ದ ಸುರತ್ಕಲ್  ಕೆ ಆರ್ ಈ ಸಿ ಪ್ರಾಧ್ಯಾಪಕ  ಡಾ ಪಾ ದೇವರಾವ್ ಅವರನ್ನು ಉದ್ಘಾಟಗೆ  ಕರೆಸಿದ್ದರು , .  ಶಾಲೆಯಲ್ಲಿ ಕೈಬರಹದ ಪತ್ರಿಕೆ ಹುಟ್ಟು ಹಾಕಿ ವಿದ್ಯಾರ್ಥಿಗಳಲ್ಲಿ ಬರೆಯುವ ಅಭ್ಯಾಸ ಕ್ಕೆ ಪ್ರೋತ್ಸಾಹ ಕೊಟ್ಟರು .ನಾನು ನಾಸೆರ್ ಚರಿತ ವೆಂಬ ಕಿರು ಪುರಾಣವು ಎಂಬ ಲೇಖನ ಬರೆದ ನೆನಪಿದೆ .(ಈಜಿಪ್ಟ್ ಅಧ್ಯಕ್ಷ ನಾಸೆರ್ ಮೇಲೆ ).ಈಗಲೂ ಶಾಲೆಯ ವಾಚನಾಲಯ ದಲ್ಲಿ ಪತ್ರಿಕೆ ಇದೆ ಎಂದು ಕೇಳಿದ್ದೇನೆ ,

                   ಮಾಷ್ಟ್ರ ಬಳಿ ಒಂದು ಬೈಸಿಕಲ್ ಇದ್ದು ಕೆಲವೊಮ್ಮೆ ನಮ್ಮನ್ನು ಡಬ್ಬಲ್ ರೈಡ್ ಮಾಡಿ ಕೊಂಡು ಕರೆದೊಯ್ಯುತ್ತಿದ್ದರು . ನಾನು ಹತ್ತನೇ ತರಗತಿಯಲ್ಲಿ ಇರುವಾಗ ಅವರಿಗೆ ಮುಡಿಪ್ಪು ಶಾಲೆಗೆ ವರ್ಗ ಆಗಿ ನಮ್ಮ ಶಾಲೆಗೆ ದೊಡ್ಡ ನಷ್ಟ ಆಯಿತು ಎನ್ನ ಬಹುದು .ಮುಂದೆ ಅವರು ಆರ್ಟ್ಸ್ ವಿಷಯ  ಬಾಹ್ಯ  ಎಂ ಈ ಮಾಡಿ ಜೂನಿಯರ್ ಕಾಲೇಜು ಅಧ್ಯಾಪಕ ಹುದ್ದೆ ಆಯ್ದು  ಪ್ರಿನ್ಸಿಪಾಲ್  ಆಗಿ ನಿವೃತ್ತರಾದವರು ಪುತ್ತೂರಿನಲ್ಲಿ ನೆಲೆಸಿದ್ದರು .. ಇದರಿಂದ ವಿಜ್ಞಾನ ಶಿಕ್ಷಣಕ್ಕೆ ನಷ್ಟ ಆಯಿತು ಎಂದು ನನ್ನ ಅಭಿಪ್ರಾಯ . 

 ಅಸೌಖ್ಯದ ದಿನಗಳಲ್ಲಿ  ವೈದ್ಯನಾಗಿ ನನ್ನ ಗುರುಗಳ  ಕಿಂಚಿತ್ ಸೇವೆ ಮಾಡುವ ಅವಕಾಶ ನನಗೆ ದೊರಕಿದ್ದು  ನನ್ನ ಸೌಭಾಗ್ಯ . 

ಅವರ ಮಕ್ಕಳು , ಅದರಲ್ಲು  ಮಗಳು ಸುಪ್ರೀತಾ ಮತ್ತು ಅಳಿಯ ಯಾಜಿ  ಯವರು ಶ್ರದ್ಧೆ ಯಿಂದ ಕೊನೆಗಾಲದಲ್ಲಿ ಆರೈಕೆ ಮಾಡಿದ್ದಾರೆ . ಅವರಿಗೆ  ಒಳ್ಳೆಯದಾಗಲಿ . 

ಬಾಲಂಗೋಚಿ :  ನಮ್ಮ ಕಾಲದಲ್ಲಿ ಎರಡು ವರ್ಗದ ಅಧ್ಯಾಪಕರು ಇದ್ದರು . ಮೊದಲನೆಯವರು ಯಾವುದೇ ತಯಾರಿ ಇಲ್ಲದೆ  ತರಗತಿಗೆ ಬಂದು ಪಠ್ಯ ಪುಸ್ತಕ (ಅದೂ ಮೊದಲ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಯಿಂದ )  ವಾಚನ ಮಾಡಿ ಆಗಾಗ ಯು  ಅಂಡರ್ ಸ್ಟಾಂಡ್ ?ಎನ್ನುವರು (ಅವರಿಗೇ ಅರ್ಥವಾಗಿರ ದಿದ್ದರೂ ),ವಿದ್ಯಾರ್ಥಿಗಳು ಕೋಲೆ ಬಸವನಂತೆ ಯಸ್ ಸರ್ ಎನ್ನುವರು . ಎರಡೇ ವರ್ಗ ಅಧ್ಯಯನ ಮಾಡಿ ಪಠ್ಯ ಪುಸ್ತಕ ಸಹಿತ ಅಥವಾ ರಹಿತ ಬಂದು ಪಾಠ ಮಾಡುವವರು . ಎರಡನೇ ವರ್ಗದವರ ಸಂಖ್ಯೆ ಕಡಿಮೆ ಇದ್ದುದು ನಮ್ಮ ದುರ್ದೈವ 

 

 

 

 

ಮಂಗಳವಾರ, ಮಾರ್ಚ್ 25, 2025

                                     


 

 ಹಿಂದಿನ ಮದ್ರಾಸ್ ಅಥವಾ ಈಗಿನ ಚೆನ್ನೈ ಯನ್ನು ವೈದ್ಯ ಕೀಯ  ಕ್ಷೇತ್ರದ ಕಾಶಿ ಎನ್ನ ಬಹುದು.ದಕ್ಷಿಣ ಭಾರತದಲ್ಲಿ ಬ್ರಿಟಿಷರ ಆಢಳಿತಾತ್ಮಕ ಕೇಂದ್ರ ಆಗಿದ್ದ ಕಾರಣ ಅಲ್ಲಿ ವೈದ್ಯಕೀಯ ಕಾಲೇಜು ಇತ್ಯಾದಿ ಬಹಳ ಹಿಂದೆಯೇ ಸ್ಥಾಪನೆ ಆಗಿದ್ದವು   . ಟ್ರೋಪಿಕಲ್ ಸ್ಪ್ರೂ ,ಮದ್ರಾಸ್ ಮೋಟಾರ್ ನ್ಯೂರೋನ್ ಡಿಸೀಸ್ ,ಲೀಷ್ಮೆ ನಿಯಾ  ಮುಂತಾದ ಹಲವು ಕಾಯಿಲೆಗಳ ದಾರಿ ತೋರುವ ಅಧ್ಯಯನ ಇಲ್ಲಿಯೇ ಆಗಿತ್ತು . ದಂತ ಕತೆ ಗಳಾದ ವೈದ್ಯಕೀಯ ಶಿಕ್ಷಕ ರಾದ ಡಾ ತಿರುವೆಂಗಡಂ (ಫಿಸಿಷಿಯನ್ ).ಡಾ ಏನ್ ಮದನಗೋಪಾಲನ್ (ಗ್ಯಾಸ್ಟ್ರೋ ಎಂಟೆರೊಲೊಜಿ),ಡಾ ಸೇತುರಾಮನ್ (ಹೆಮಟೊಲೊಜಿ ),ಡಾ ಎ   ಎಸ ತಂಬೈಯ್ಯ (ಡರ್ಮಟಾಲಜಿ ),ಡಾ ರಾಮ ಮೂರ್ತಿ (ನೂರೋ ಸರ್ಜರಿ ),ಡಾ ರಂಗ ಭಾಷ್ಯಮ್ (ಗ್ಯಾಸ್ಟ್ರೋ ಎಂಟೆರೋ ಸರ್ಜರಿ ) ಕೆಲವು ಹೆಸರುಗಳು . 

ಇವರಲ್ಲಿ ತಿರುವೆಂಗಡಂ ಬಿಟ್ಟರೆ ಉಳಿದವರು  ಹೊಸ ವಿಭಾಗಗಳಿಗೆ ಅಡಿಪಾಯ ಹಾಕಿ ಕಟ್ಟಿ ಬೆಳೆಸಿದವರು . ನಮ್ಮ ದೇಶದಲ್ಲಿ ಸ್ನಾತಕೋತ್ತರ ಕಲಿಕೆಗೆ ಅವಕಾಶ ಇಲ್ಲದ ವಿಷಯಗಳ ಅಧ್ಯಯನ ವನ್ನು ವಿದೇಶ (ಮುಖ್ಯವಾಗಿ ಇಂಗ್ಲೆಂಡ್ )ಮಾಡಿ ಪುನಃ ತಾಯಿ ನಾಡಿಗೆ ಬಂದು ಇಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿದವರು . 

ಡಾ ಎ  ಎಸ ತಂಬಯ್ಯ  ಇಂಗ್ಲೆಂಡ್ ದೇಶದಲ್ಲಿ ಚರ್ಮ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ  ವಿಶೇಷ ಅಧ್ಯಯನ ಮಾಡಿ ಮದ್ರಾಸ್ ಮೆಡಿಕಲ್ ಕಾಲೇಜು ವಿಭಾಗ ಆರಂಬಿಸಿದವರು . ಅವರ ಅಧ್ಯಾಪನ ರೀತಿ ಬಲು ಆಕರ್ಷಕ ವಾಗಿದ್ದು ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಗ ವಿದ್ಯಾರ್ಥಿಗಳಲ್ಲಿ ಅಷ್ಟು ಜನಪ್ರಿಯವಾಗಿ ಇಲ್ಲದಿದ್ದ ಡರ್ಮಟಾಲಜಿ ಅಧ್ಯಯನ ಕ್ಕೆ ಬರುವಂತೆ ಮಾಡಿತು .ಅವರು ಸೇವೆಯಿಂದ ನಿವೃತ್ತರಾದ ಮೇಲೂ ನಿರಂತರ ಕಲಿಕಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದು ಚೆನ್ನೈ ಯಲ್ಲಿ  ನನಗೂ ಅವರ  ಪಾಂಡಿತ್ಯ ಭರಿತ ಉಪನ್ಯಾಸ ಕೇಳುವ ಅವಕಾಶ ಸಿಕ್ಕಿತ್ತು . 

ಡಾ ತಂಬಯ್ಯ ಅವರ ದಾರಿಯಲ್ಲಿ ನಡೆದು ಬಂದ ಚರ್ಮ ರೋಗ ತಜ್ಞ ಪ್ರಾಧ್ಯಾಪಕ ಡಾ ಪ್ಯಾಟ್ರಿಕ್ ಯೇಸುದಿಯನ್ . ಮದ್ರಾಸ್ ಮೆಡಿಕಲ್ ಕಾಲೇಜು ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ  ಕಿಲ್ಪಾಕ್ ನಲ್ಲಿ  ಕ್ಲಿನಿಕ್ ನಡೆಸುತ್ತಿದ್ದು  ,ಚಿತ್ರ ನಟನಟಿಯರು ,ರಾಜಕಾರಿಣಿಗಳು ಸೇರಿ ದಂತೆ  ಬಹು ಬೇಡಿಕೆಯ ವೈದ್ಯರು. ಆರ್ ಕೆ ಲಕ್ಷ್ಮಣ್ ನ ಕಾಮನ್ ಮ್ಯಾನ್ ನ ವ್ಯಕ್ತಿತ್ವ . ವೈದ್ಯಕೀಯ ಅಲ್ಲದೆ ಇತರ ಸಾಹಿತ್ಯವನ್ನೂ ಚೆನ್ನಾಗಿ ಓದಿ ಕೊಂಡಿದ್ದ ಇವರ ಭಾಷಣಗಳಲ್ಲಿ  ಅವುಗಳಿಂದ ಆಯ್ದ ನುಡಿ ಮುತ್ತುಗಳು ಸಹಜವಾಗಿ ಪುಂಖಾನುಪುಂಖವಾಗಿ ಬಂದು ಕೇಳುಗರ ಕಿವಿ ಮತ್ತು ಮನಕ್ಕೆ ಹಿತವಾಗಿರುತ್ತಿತ್ತು . ಚರ್ಮ ರೋಗ ನಿಧಾನದಲ್ಲಿ ನೋಡುವಿಕೆಗೆ ಆದ್ಯತೆ .ಹಲವು  ಅಪರೂಪದ ಕಾಯಿಲೆಗಳೂ ಸೇರಿ ಚರ್ಮ ರೋಗಗಳ  ಛಾಯಾಚಿತ್ರ ಗಳ  ಸ್ಲೈಡ್ ಗಳ  ಅಮೂಲ್ಯ ಸಂಗ್ರಹ ಅವರ ಬಳಿ ಇತ್ತು .ಆಗಿನ್ನೂ ಪವರ್ ಪಾಯಿಂಟ್ ಬಂದಿರಲಿಲ್ಲ . ಚರ್ಮ ರೋಗ ತಜ್ಞ ಕ್ಕಿಂತ ಹೆಚ್ಚಾಗಿ ಅವರು ಒಬ್ಬ ಪರಿಣತ ಫಿಸಿಷಿಯನ್ ಆಗಿದ್ದರು . ಒಳ ರೋಗಗಳು  ಚರ್ಮದಲ್ಲಿ  ಹಲ ರೂಪದಲ್ಲಿ ಪ್ರಕಟವಾಗುವದು ಸಾಮಾನ್ಯ; ಡಾ ಪ್ಯಾಟ್ರಿಕ್ ಅವುಗಳ ಜಾಡು ಹಿಡಿಯುವುದರಲ್ಲಿ ನಿಸ್ಸೀಮರು . 

ನಾನು ಪೆರಂಬೂರು ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ ನಮ್ಮ ವಿಭಾಗ ಮುಖ್ಯಸ್ಥ ರಾಗಿದ್ದ  ಡಾ ಜಿ ಸಿ ರಾಜು ರವರು ನನ್ನ ಬಳಿ ಡಾ ಪ್ಯಾಟ್ರಿಕ್ ನಮ್ಮ ಆಸ್ಪತ್ರೆಗೆ ವಾರಕ್ಕೊಮ್ಮೆ ಕ್ಲಾಸ್ ತೆಗೆದು ಕೊಳ್ಳಲು ಬರಬಹುದೋ ಎಂದು ವಿಚಾರಿಸುವಂತೆ ಕೇಳಿದರು .ನಾನು ಅವರ ಕ್ಲಿನಿಕ್ ಗೆ ಹೋಗಿ ವಿನಂತಿಸಲು ತಮಗೆ ಪಾಠ ಮಾಡುವುದು ಇಷ್ಟ ವಾದರೂ ಸಮಯಾವಕಾಶ ಕಷ್ಟ ಎಂದು ಮೊದಲು ನಿರಾಕರಿಸಿದರೂ ನಾನು ಛಲ ಬಿಡದ ತ್ರಿವಿಕ್ರಮನಂತೆ  ಕ್ಲಿನಿಕ್ ಗೆ ಪುನಃ ಪುನಃ ಎಡತಾಕಿ ಅವರನ್ನು ಒಪ್ಪಿಸಿದೆ . ಸ್ಲೈಡ್ ಸಹಿತವಾದ ಅವರ ಕ್ಲಾಸ್ ವರ್ತ್  ಗೋಲ್ಡ್ ಅನ್ನುತ್ತಾರಲ್ಲ ಹಾಗೆ . ಪ್ಯಾಥಾಲಜಿ ,ಬಯೋ ಕೆಮಿಸ್ಟ್ರಿ ,ಮೆಡಿಸಿನ್  ಎಲ್ಲಾ ಕರತಾ ಮಲಕ  . 

ಮೊನ್ನೆ ಇಂಟರ್ನೆಟ್ ನಲ್ಲಿ ಜಾಲಾಡುವಾಗ ಅವರ ಭಾಷಣಗಳ ಸಂಗ್ರಹವೊಂದನ್ನು  "All I should say to my young friends"ಎಂಬ ಶೀರ್ಷಿಕೆಯಲ್ಲಿ ಅವರ ವಿದ್ಯಾರ್ಥಿ ಡಾ ಮುರುಗಸುಂದರಂ ಪ್ರಕಟಿಸಿದ್ದಾರೆ ಎಂದು ತಿಳಿದು ಅದನ್ನು ತರಿಸಿ ಓದುತ್ತಿದ್ದೇನೆ . ಹಿಂದೆ ಅವರ ಉಪನ್ಯಾಸಗಳನ್ನು ಕೇಳಿದ ನೆನಪು ಮತ್ತೆ ಆಯಿತು . ಅವರ ಗುರು ಪ್ರೊ ತಂಬಯ್ಯ  ಆಗಾಗ ಉದ್ಧರಿಸುತ್ತಿದ್ದ  ಫ್ರಾನ್ಸಿಸ್ ಬೇಕನ್ ನ 'Reading makes a full man,Writing an exact man ,Conversation a ready man "ಉಲ್ಲೇಖ ಮಾಡಿ ವೈದ್ಯರಿಗೆ  ಓದುಬರೆಯುವಿಕೆ ಮತ್ತು ಸಂವಹನ ದ  ಪ್ರಾಮುಖ್ಯತೆ ಒತ್ತಿ ಹೇಳಿದ್ದಾರೆ .                                ಇದರಲ್ಲಿ ನಾನು ಕಂಡಂತೆ ಇತ್ತೀಚಿನ ದಿನಗಳಲ್ಲಿ ವೈದ್ಯ ವೈದ್ಯ ರ ನಡುವೆ ನೇರ ಸಂವಹನ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ .ಒಬ್ಬ ರೋಗಿಯನ್ನು ಹಲವು ಸ್ಪೆಷಲಿಸ್ಟ್ ಗಳು ನೋಡುತ್ತಿದ್ದರೂ ಒಟ್ಟಾಗಿ ರೋಗಿಯ ಬಗ್ಗೆ ಕೂಡಿ ಚರ್ಚಿಸುವುದು ಕಡಿಮೆ ಆಗಿರುವುದು ದುರ್ದೈವ