ಬೆಂಬಲಿಗರು

ಮಂಗಳವಾರ, ಮಾರ್ಚ್ 29, 2022

ಎಮ್ಮ ಮನೆಯಂಗಳದಿ

ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು, ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು-----  ವಿ ಸೀ 

ಅಂಗಳ ಎಂದೊಡನೆ ನೆನಪಾಗುವುದು ಮೇಲಿನ ಜನಪ್ರಿಯ ಗೀತೆ . ನಮ್ಮ ಜೀವನದಲ್ಲಿ  ಮನೆಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಅಂಗಳಕ್ಕೂ ಇದೆ . ಅಂಗಳ ಒಂದು ಚಲನ ಶೀಲ ಬೆಳವಣಿಗಗಳ ತಾಣ . 

ನಮ್ಮ ಮನೆಯ ಮುಂದಿನ ಅಂಗಳ ಗದ್ದೆ ಕೊಯ್ಲು ಆದಾಗ ಭತ್ತ ಬಡಿಯಲು ,ಮಕ್ಕಳಿಗೆ ಆಟವಾಡಲು ,ಸ್ತ್ರೀ ವೇಷ ,ಆಟಿಕಳಂಜ ,ಸೋಣೆ ಜೋಗಿ ,ಮಾರ್ನಮಿ ವೇಷ ,ಘಟ್ಟದ ಮೇಲಿಂದ ಬರುವ ಬಸವಣ್ಣ , ಕೊರವಂಜಿ ಕಣಿ ನುಡಿಯುವವರು ಎಲ್ಲರಿಗೂ ಒಂದು ರಂಗ ಸ್ಥಳ . ಇವರೆಲ್ಲರಿಂದದೂ ನಾವು ಕಲಿತಿದ್ದೇವೆ . 

ಪಾರ್ಶ್ವದಲ್ಲಿ ದೊಡ್ಡ ಅಂಗಳ ಅಡಿಕೆ ಸಮಯದಲ್ಲಿ ಅಡಿಕೆ ಹಾಕಲು . ಮಳೆಗಾಲ ಸಮೀಸಿದೊಡನೆ ಅದಕ್ಕೆ ಸೋಗೆಯ ಹೊದಿಕೆ .ಮೇಲೆ ನಡೆದಾಡಲು ಅಡಿಕೆ ಮರದ ಕಾಂಡ . ತಾತ್ಕಾಲಿಕ ತರಕಾರಿ ತೋಟ ಏಳುವದು ,ಮುಳ್ಳು ಸೌತೆ ,ಪಡುವಲ ,ಹೀರೆ ಕಾಯಿಗಳನ್ನು ನೇಲಿಸಿಕೊಂಡು  ಬೀಗುವ ಚಪ್ಪರ ನೋಡಲು ಬಹು ಸೊಗಸು .ಪಕ್ಕದಲ್ಲಿ ಬೆಂಡೆ ,ಅಲಸಂದೆ ಇತ್ಯಾದಿ .ಸೌತೆ ಮತ್ತು ಬಚ್ಚಂಗಾಯಿ ಮಾತ್ರ ಬೇಸಾಯ ಮುಗಿದ ಮೇಲೆ ಗದ್ದೆಯಲ್ಲಿ . ಮನೆಗೆ ತರಕಾರಿ ಹೊರಗಡೆಯಿಂದ ತರುವುದೆಂದೇ ಇಲ್ಲ . ಏನೂ ಇಲ್ಲದಾಗ ಹಲಸು ,ಗೆಣಸು ,ಪಪ್ಪಾಯಿ ಇವೆಯಲ್ಲ . ಬೆಳೆದ ಸೌತೆ ಕಾಯಿಗಳನ್ನು ಕಂಬಕ್ಕೆ ಕಟ್ಟಿ ,ಯಾವುದಾದರೂ ಮೆತ್ತಗೆ ಆಯಿತೆಂದರೆ ಕತ್ತಿ ಹಾಕುವದು . 

 ಇಲ್ಲಿಗೆ ಮುಗಿಯಿತೇ ?ಅಡಿಕೆ ಧನಲಕ್ಷ್ಮಿ ಅಲ್ಲವೇ ? ಅದನ್ನು ಸ್ವಾಗತಿಸಲು ಅಂಗಳ ರೆಡಿ ಆಗಬೇಕು ..ಮಳೆಯಿಂದ ಅಂಗಳ ಸವೆತ ತಡೆಯಲು ಹಾಕಿದ ಸೋಗೆ ತೆಗೆದು , ಹೊಳಿ ಮಣೆಯಿಂದ ಗುದ್ದಿ (ರೋಲರ್ ಇರಲಿಲ್ಲ )ಸಮ ಮಾಡುವುದು ದೊಡ್ಡ ಕೆಲಸ . ಪಡಿಗೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ನೆಲಕ್ಕೆ ಹಾಯಿಸಿ ಭಾರದ ಮರದ ಮಣೆ(ಹೊಳಿಮಣೆ)ಯಿಂದ ಗುದ್ದಿ ಸಮತಟ್ಟು ಮಾಡುವದು . 

ನಡುವೆ ಮನೆಯಲ್ಲಿ ಮದುವೆ ಮುಂಜಿ ಸಮಾರಂಭ ಗಳು  ಬಂದರೆ ಅಂಗಳದಲ್ಲಿ ಚಪ್ಪರ ಎದ್ದು ಕಲ್ಯಾಣ ಮಂಟಪ ಆಗುವುದು . ನೆಂಟರು ಮನೆಯವರು ಚಪ್ಪರದಲ್ಲಿಯೇ  ಚಾಪೆ ತಲೆ ದಿಂಬು ಹಾಕಿ ಮಲಗುವರು . ತರಕಾರಿ ಹಚ್ಚುವುದು ,ಇಸ್ಪೇಟು ಆಡುವುದು ಇಲ್ಲಿಯೇ .

ಜ್ಯೋತ್ಸ್ನಾಕಾಮತ್ ಅವರ ಕಲ್ಕತ್ತಾ ದಿನಗಳು


 

                                                      

ಕೃಷ್ಣಾನಂದ ಕಾಮತ್ ಮತ್ತು ಜ್ಯೋತ್ಸ್ನಾ ಕಾಮತ್  ನನ್ನ ಮೆಚ್ಚಿನ ಬರಹಗಾರ ದಂಪತಿಗಳು .

1977 ರಿಂದ 1980 ರ ವರೆಗೆ ಕಲ್ಕತ್ತಾ ಆಕಾಶವಾಣಿಯಲ್ಲಿ ಇದ್ಗಾಗಿನ ಅನುಭವ ಮತ್ತು ನೆನಪುಗಳ ಹೊತ್ತಿಗೆ "ಕಲ್ಕತ್ತಾ ದಿನಗಳು :ಡಾ ಜ್ಯೋತ್ಸ್ನಾ ಕಾಮತ್ ಅವರ ಇತ್ತೀಚೆಗೆ ಬಿಡುಗಡೆ ಆದ ಕೃತಿ . ಎರಡೇ ದಿನಗಳಲ್ಲಿ ಓದಿ ಮುಗಿಸಿದೆ . ಇವರ ಪತಿ ದಿ.ಕೃಷ್ಣಾನಂದ ಕಾಮತ್ ಅವರ "ವಂಗ ದರ್ಶನ' ಓದಿ ಮೆಚ್ಚಿ ಕೊಂಡಿದ್ದೆ . ದಂಪತಿಗಳ  ಜೀವ ಕುತೂಹಲ ,ಸಾಂಸ್ಕೃತಿಕ ಪರಿಸರ ಪ್ರಜ್ನೆ ,ಇತಿಹಾಸದ ಅಧ್ಯಯನ ಮತ್ತು ನವಿರಾದ ಹಾಸ್ಯ ಪಜ್ನೆ  ಎಲ್ಲಾ ಕೃತಿಗಳಲ್ಲಿ  ಎದ್ದು ಕಾಣುತ್ತವೆ . ಕಾಮತ್ ದಂಪತಿಗಳ ಮಗ ಕಾಮತ್ ಪೌ ಪುರಿ ಎಂಬ ಬ್ಲಾಗ್ ನಡೆಸುತ್ತಿದ್ದು ಅಮೂಲ್ಯ ವಿಷಯಗಳ ಆಕರ ವಾಗಿದೆ .ಅದರಲ್ಲಿಯೇ ಅಮ್ಮಾಸ್ ಕಾಲಂ ಎಂದು ಜ್ಯೋತ್ಸ್ನಾ ಕಾಮತ್ ಕೂಡಾ ಬರೆಯುತ್ತಿದ್ದು ನಾನು ಓದಿ ಸಂತೋಷ ಪಟ್ಟಿದ್ದೇನೆ.

ಕಲ್ಕತ್ತಾ ದಿನಗಳು ಪುಸ್ತಕಕ್ಕೆ ಲೇಖಕಿ ಶ್ರೀಮತಿ ನೇಮಿಚಂದ್ರ  ಒಪ್ಪವಾದ ಮುನ್ನುಡಿ ಬರೆದಿದ್ದು ,ಈ ಪುಸ್ತಕ ಪ್ರಕಟವಾಗಲು ಅವರ ಪ್ರಚೋದನೆ ಕಾರಣ . 

ಜ್ಯೋತ್ಸ್ನಾ ಕುಟುಂಬವನ್ನು ಬಿಟ್ಟು ಒಬ್ಬರೇ ಕಲ್ಕತ್ತಾ  ಇದ್ದು ,ಈ ಅವಧಿ ಪೂರ್ಣ ಮಹಾರಾಷ್ಟ್ರ ನಿವಾಸದಲ್ಲಿ ವಾಸ .ಅಲ್ಲಿ ವಿಭಿನ್ನ ಸಂಸ್ಕೃತಿ ,ಭಾಷೆಯ ,ಅಭಿರುಚಿಯ ಸಂಗಾತಿಗಳ ಒಡನಾಟ . ಆಕಾಶವಾಣಿ ಯ ಮುಖ್ಯವಾಗಿ ಆಗಿನ ಕಮ್ಯೂನಿಸ್ಟ್ ಆಡಳಿತದ ಸಮಯದ ಕೆಲಸ ಸಂಸ್ಕೃತಿ ಯ ಪಕ್ಷಿನೋಟ ಇದೆ. ಅವರು ಅಲ್ಲಿ ಇದ್ದ ಅವಧಿಯಲ್ಲಿ ರವಿದ್ರನಾಥ ಠಾಗೋರ್ ,ರಾಮಕೃಷ್ಣ ಪರಮ ಹಂಸ ರ ಜನ್ಮ ಭೂಮಿಗಳಗೆ ಭೇಟಿ ನೀಡಿ ಸಂತೋಷ ಪಡುತ್ತಾರೆ .ಇತಿಹಾಸ ಪ್ರಸಿದ್ದ ವ್ಯಕ್ತಿಗಳ ಗೋರಿ ಸ್ಮಾರಕಗಳನ್ನು ಸಂದರ್ಶಿಸುತ್ತಾರೆ .

'ಮಹಿಳೆಯರಿಗೆ ಬಂಗಾಳದಲ್ಲಿ ಬಹಳ ಗೌರವ ಸ್ಥಾನ ಇದ್ದು ,ಅತ್ಯಂತ ಸುರಕ್ಷಿತ . ದಕ್ಷಿಣ ಭಾರತದ ಜಾತಿ ವಿಷಮತೆ ಬಂಗಾಳದಲ್ಲಿ ಇಲ್ಲ . ಬೆಂಗಾಲಿಗಳ ಪುಸ್ತಕ ಪ್ರೇಮ ಅದ್ಭುತ .' ಎಂಬುದು ಅವರಿಗೆ ಎದ್ದು ಕಾಣುವ ಅಂಶಗಳು ಕಲ್ಕತ್ತಾ ಪುಸ್ತಕ ಮೇಳದ ಅನುಭವ ಚೆನ್ನಾಗಿ ಕೊಟ್ಟಿದ್ದಾರೆ .ಸ್ಥಳೀಯ ಆಹಾರ ಪ್ರಕಾರಗಳು ,ಉಡುಗೆ ತೊಡುಗೆ ಮತ್ತು ಸಾರಿಗೆ ಬಗ್ಗೆ ಅನ್ವ್ಶೇಶಕ ಕಣ್ಣು .

ಪ್ರಸಿದ್ದ ಚರಿತ್ರಕಾರ ಆರ್ ಸಿ ಮುಜುಂದಾರ್ ಅವರನ್ನು ,ಖ್ಯಾತ ವಂಗೀಯ ಭಾಗಿನಿಯರಾದ ಲೇಡಿ ರಾಣಿ ಮುಖರ್ಜಿ ,ಮೈತ್ರೇಯಿ ದೇವಿ ಮತ್ತು ಅಶಪೂರ್ಣಾ ದೇವಿ ಅವರ ಅಮೂಲ್ಯ ಸಂದರ್ಶನ ಗಳು ಪುಸ್ತಕದ ತೂಕ ಹೆಚ್ಚಿಸಿವೆ . 

ದೇಶದ ವಿವಿದೆಡೆ ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸಿದ ಜ್ಯೋತ್ಸ್ನಾ ಅವರ ಅನುಭವದ ಜೋಳಿಗೆಯಲ್ಲಿ ಇನ್ನೂ ಅಮೂಲ್ಯ ಸಂಗ್ರಹಗಳು ಇರ ಬಹುದು . ಅವರ ಬ್ಲಾಗ್ ಕೊಂಡಿ ವಿಳಾಸ ಕೆಳಗೆ ಕೊಟ್ಟಿರುವೆನು .ವರ್ಷಗಳ ಹಿಂದೆ ಪುತ್ತೂರಿಗೆ ಅವರನ್ನು ಕರೆಯಿಸಿ ಸಂವಾದ ಕಾರ್ಯಕ್ರಮ ಏರ್ಪಡಿಸುವ ಉದ್ದೇಶದಿಂದ ಸಂಪರ್ಕಿಸಿದಾಗ ಅನಾರೋಗ್ಯ ಕಾರಣದಿಂದ  ಬರುವುದು ಕಷ್ಟ ಎಂದಿದ್ದರು .


 https://www.kamat.com/jyotsna/blog/

ಆಟಕ್ಕಿಲ್ಲದ ಫೂಟ್ ಬಾಲ್

 

 

 

 

  

 

 

 

   Foot Valve – Perfect Engine & Perfect PumpsKirloskar 5HP Diesel Engine Pump Set, Domestic, Air Cooled, | ID:  16412124355Word Duniya                                                                                               ಬಾಲ್ಯದಲ್ಲಿ ನಮ್ಮಲ್ಲಿ ತೋಟಕ್ಕೆ ಹಾಯಿಸಲು ಒಂದು ೫ ಅಶ್ವಶಕ್ತಿಯ ಡೀಸೆಲ್ ಪಂಪ್ ಇತ್ತು . ಪೆಟ್ಟರ್ ಕಂಪನಿ ಯ ಅದನ್ನು ಕಾಸರಗೋಡಿನ  ಆಟೋ ಸರ್ವಿಸ್ ಅವರ ಮೂಲಕ ಖರಿಸಿದ್ದು ,ಅದರ ಪಾಲುದಾರ ನಮ್ಮ ಕಣಿಯೂರು ಪಟೇಲರ ಮನೆತನದವರು ಇದ್ದರು . ಮೋಟಾರ್ ಅಥವಾ ಪಂಪ್ ಏನಾದರೂ ತೊಂದರೆ ಕೊಟ್ಟರೆ ಕಾಸರಗೋಡಿನಿಂದ  ಕು೦ಞರಾಮ   ಎಂಬ ಫಿಟ್ಟರ್ ಬರುತ್ತಿದ್ದು ಅವರ ಮಲಯಾಳ ಮಿಶ್ರಿತ ಕನ್ನಡ ಕೇಳಲು ತಮಾಷೆ ಎನಿಸುತ್ತಿತ್ತು .ನಿರ್ಜೀವಿಯನ್ನು ಬದುಕಿಸ ಬಲ್ಲ ಮಾಂತ್ರಿಕನಂತೆ ಅವರು ಕಾಣಿಸುತ್ತಿದ್ದರು . ಡೀಸೆಲ್ ಪಂಪ್ ಸ್ಟಾರ್ಟ್ ಮಾಡಲು ಒಂದು ಹ್ಯಾಂಡಲ್ ತಿರುಗಿಸಿ ವೇಗ ಪಡೆದೊಡನೆ ಒಂದು ಕುಟ್ಟಿ ಅದುಮಬೇಕು .ಆಗ ಅದು ಲಯಭದ್ದವಾಗಿ ವೇಗೋತ್ಪರ್ಷ ಪಡೆದು ಕೊಂಡು ತಾನೇ ನಡೆಯುವುದು . ರೈಲು ಎಂಜಿನ್ ಸ್ಟಾರ್ಟ್ ಆದಂತೆ .ಮುಂದೆ ನಿಲ್ಲಿಸುವಾಗಲೂ ಅದೇ ಲಯದಲ್ಲಿ ಹಿಂದೆ ಹೋಗುವುದು . 

ನೀರನ್ನು ಕಣಿ ಅಥವಾ ನಾಲೆಗೆ ಹಾಯಿಸಿ ಅಲ್ಲಲ್ಲಿ ಬಾಳೆ  ಎಲೆ ಚಾಂಬಾರಿನ ಕಟ್ಟ ಕಟ್ಟ ಹಾಕಿ ಶೇಖರವಾದ ನೀರನ್ನು ಅಡಿಕೆ ಹಾಳೆಯ ಚಿಳ್ಳಿಯಲ್ಲಿ ಚೇಪುವುದು . ಈಗಿನವರಿಗೆ ಗೊತ್ತಿರಲಿಕ್ಕಿಲ್ಲ ;ಅದಕ್ಕೆ ವಿವರಣೆ . 

ಪಂಪ್ ಗೆ ಪೈಪ್ ಹೊಂದಿಸಿ ಕೆರೆಯ ನೀರಿಗೆ ಇಳಿಸುವದು . ನೀರಿನ ತುದಿಯಲ್ಲಿ ಒಂದು ಪಾತ್ರೆಯಂತಹ ಸಾಧನ ಇದೆ .ಅದನ್ನು ನಾವು ಫುಟ್ ಬಾಲ್ ಎಂದು ಕರೆಯುತ್ತಿದ್ದೆವು .ವಾಸ್ತವದಲ್ಲಿ ಅದು ಫುಟ್ ವಾಲ್ವ್ ಎಂದು ತಿಳಿದದ್ದು ಈಚೆಗೆ . ಪೈಪ್ನಲ್ಲಿ ಇರುವ ನೀರಿನ ಕಾಲಂ ಹಿಂದೆ ಹೋಗದಂತೆ ತಡೆಗಟ್ಟಲು ಇರುವ ಏಕ ಮುಖ ವಾಲ್ವ್ ,. ಪೈಪ್ ನಲ್ಲಿ ನೀರು ತುಂಬಿರದಿದ್ದರೆ ಮೋಟಾರ್ ನೀರು ಎಳೆದು ಪಂಪ್ ಮಾಡದು . ನೀರು ಇದೆಯೇ ಎಂದು ನೋಡಲು ಒಂದು ಸಣ್ಣ ಟ್ಯಾಪ್ ಪಂಪ್ ನಲ್ಲಿ ಇದೆ .ನೀರು ಇಲ್ಲದಿದ್ದರೆ ಪೈಪ್ ಮೂಲಕ ನೀರು ತುಂಬಿಸುವುದು ,ಗೊರಂ ಗೊರಂ ಎಂದು ಅದು ನೀರು ಕುಡಿದು ಫುಲ್ ಆದಾಗ ಮೋಟಾರ್ ಸ್ಟಾರ್ಟ್ ಮಾಡುವದು . ಕೆಲವೊಮ್ಮೆ ಫುಟ್ ಬಾಲ್ ಗೆ ಭೇದಿ ಹಿಡಿದು ಎಷ್ಟು ನೀರು ತುಂಬಿಸಿದರೂ ಸಾಲದು .ಆಗ ಸೆಗಣಿ ನೀರಿನಲ್ಲಿ ಕರಡಿ ಪಂಪ್ ಗೆ ಇಳಿಸುತ್ತಿದ್ದು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿ ಆಗಿರುತ್ತಿತ್ತು ;ಸೆಗಣಿ ಪ್ರೋಕ್ಷಣೆ ಮಾಡಿ ಶುದ್ಧವಾದ ನೀರು ಮೇಲೆ ಬರುವುದು . 

ನಮ್ಮ ಸುತ್ತ ಮುತ್ತ ನಮ್ಮಲ್ಲಿ ಮಾತ್ರ ಮೋಟಾರ್ ಪಂಪ್ ಇದ್ದು ಇಡೀ ಬಯಲಿಗೇ ಅದರ ಸದ್ದು ಕೇಳುವುದು .ಪೆಟ್ಟರ್ ಪಂಪ್ ಗೆ ವಯಸ್ಸಾದಾಗ ಕೂಪರ್ ಪಂಪ್ ಬಂತು . ಕಂಪನಿ ಯವರು ಹೊಸಾ ಪಂಪಿನ ಪೆಟ್ಟಿಗೆಯೊಳಗೆ ಇಸ್ಪೇಟು ಎಲೆಯ ಸೆಟ್ ಗಳನ್ನು ಉಚಿತವಾಗಿ ಕೊಡುತ್ತಿದ್ದರು .ಅಡಿಕೆಯವರಿಗೆ ಇಸ್ಪೇಟು ಚಟ ಇದೆ ಎಂದುದು ಅವರಿಗೆ ತಿಳಿದಿತ್ತು . 

ನಮ್ಮ ತೋಟದ ಬದಿಯಲ್ಲಿ ನರೆಕರೆಯವರ ಗದ್ದೆಗೆ ಜೊಟ್ಟೆ (ಏತ )ದಿಂದ ನೀರು ಹಾಯಿಸುತ್ತಿದ್ದರು . ಒಂದು ಕಡೆ ನೀರ ಮರಿಗೆ ಮೊಗೆಯುವವರು ,ಇನ್ನೊಂದು ಕಡೆ ಒಂದೋ ಎರಡೋ ಮಂದಿ ಹಗ್ಗ ಹಿಡಿದು ನೇತಾಡುವವರು . ಅದು ಕೂಡಾ ಲಯಬದ್ಧವಾಗಿ ಶಬ್ದ ಮಾಡುತ್ತ್ತಿತ್ತು .ನಮಗೆ ಮಕ್ಕಳಿಗೆ ಮನಸ್ಸಿನಲ್ಲಿಯೇ ಏತ ದಲ್ಲಿ ನೇತಾಡುವ ಅಸೆ ಆಗುತ್ತಿತ್ತು . ಆಮೇಲೆ ಅದು ಮರೆಯಾಗಿ ಹಗ್ಗ ಹಾಕಿ ಎಳೆದು ಸ್ಟಾರ್ಟ್ ಮಾಡುವ ವಿಲಿಯರ್ಸ್ ಚಿಮಿಣಿ ಎಣ್ಣೆ ಪಂಪ್ ಗಳು ಬಂದವು  

(ಚಿತ್ರಗಳ ಮೂಲಗಳಿಗೆ ಆಭಾರಿ )

ಭಾನುವಾರ, ಮಾರ್ಚ್ 27, 2022

ವಿ ದ ಪೀಪುಲ್ ಆಫ್ ಇಂಡಿಯ

ಕುಂದಾಪುರದಲ್ಲಿ "ವಿ‌ ದ ಪೀಪಲ್ ಆಫ್ ಇಂಡಿಯಾ" ನಾಟಕ ಪ್ರದರ್ಶನ - Mangalorean.com 

ವಾರಗಳ ಹಿಂದೆ ನಮ್ಮ ರಾಘಣ್ಣನ "ಕಾಡು 'ವಿನಲ್ಲಿ  ಶಿವಮೊಗ್ಗ ದ ರಂಗಾಯಣ ತಂಡದವರಿಂದ "ವಿ  ದ ಪೇಪಲ್ ಆಫ್ ಇಂಡಿಯ "ನಾಟಕ ಪ್ರದರ್ಶನ ಇದ್ದು ,ನಾನು ಗೆಳೆಯರ ಜೊತೆ ಹೋಗಿದ್ದೆ . ಪ್ರಥಮವಾಗಿ  ರಾಗಣ್ಣ ಮತ್ತು ಅವರ ಕುಟುಂಬದವರು ಪ್ರತೀ ವರ್ಷ ಆಯೋಜಿಸುತ್ತಿರುವ ಮೌಲಿಕ ಕಾರ್ಯಕ್ರಮ ಗಳಿಗಾಗಿ ಅವರು ಮತ್ತು ಅವರ ಕುಟುಂಬದವರನ್ನು ಅಭಿನಂದಿಸುತ್ತೇನೆ .

ನಟ ನಟಿಯರು ನಾಟಕಕ್ಕೆ ನ್ಯಾಯ ಒದಗಿಸಿದರು ಎಂದು ಹೇಳಬಲ್ಲೆ .  ಸಂವಿಧಾನ ಸಂವಿಧಾನ ಎಂದು ಎಲ್ಲರೂ ಜಪಿಸುತ್ತಿರುತ್ತಾರೆ . ಭಾರತದ ಸಂವಿಧಾನ ಆಶಯದಂತೆ ರಾಗ ಅಥವಾ ದ್ವೇಷ ಇಲ್ಲದೆ ,ಭಯ ಅಥವಾ ಪಕ್ಷಪಾತ ಇಲ್ಲದೆ ಕರ್ತವ್ಯ  ನಿರ್ವಹಿಸುತ್ತೇನೆ ಎಂದು ಮಂತ್ರಿ ಮಾಗಧರು ಪ್ರತಿಜ್ನೆ ಮಾಡುತ್ತಾರೆ . 

ಈ ನಾಟಕದಲ್ಲಿ ಸಂವಿಧಾನ ಎಂದರೆ ಏನು ಎಂಬ ಪ್ರಶ್ನೆಯನ್ನು  ಜನ ಪ್ರತಿನಿಧಿ ಮತ್ತು  ಸಮಾಜದ ಇನ್ನಿತರ ಗಣ್ಯರಲ್ಲಿ ಕೇಳಿದಾಗ ನಿರುತ್ತರ ಅಥವಾ ತಪ್ಪು ಉತ್ತರ ಸಿಗುತ್ತದೆ .

ನಾಟಕಕ್ಕೆ ಹತ್ತಿರದ ಕಾಲೇಜ್ ನಿಂದ ವಿದ್ಯಾರ್ಥಿ ವಿದ್ಯಾರ್ಥಿಯರು ಬಂದಿದ್ದು ,ಸಂವಿಧಾನ ರಚನೆ ಪ್ರಕ್ರಿಯೆ ,ಮೂಲ ಆಶಯಗಳು ಇತ್ಯಾದಿಗಳ ಮೇಲೆ ಪಕ್ಷಿನೋಟ ಸಿಕ್ಕಿರ ಬೇಕು .

 Gorakhpur Times - #बी_एन_राव, भारतीय संविधान के जनक ! बी एन राव जिनका पूरा  नाम बेनेगल नरसिंह राव था उन्हें संविधान का पहला ड्राफ्ट बनाने का काम दिया  ...B. Shiva Rao.jpg                                                                        ನಾಟಕದಲ್ಲಿ ಅಮ್ಮು ಸ್ವಾಮಿನಾಥನ್ ಸೇರಿ ಹಲವರ ಉಲ್ಲೇಖ ಇದ್ದರೂ ಕನ್ನಡಿಗರೇ (ದಕ್ಷಿಣ ಕನ್ನಡ )ಅದ  ಬೆನಗಲ್ ನರಸಿಂಹ ರಾವ್ (-ಇವರು ಸಂವಿಧಾನ  ಕರಡು ರಚನಾ ಸಮಿತಿಯಲ್ಲಿ ಇದ್ದವರು .)ಮತ್ತು ಅವರ ಸಹೋದರ  ಶಿವ ರಾವ್( -ಇವರು ಸಂವಿಧಾನ ಸಭೆಯಲ್ಲಿ ಇದ್ದವರು )ಇವರ ಉಲ್ಲೇಖ ಇಲ್ಲದ್ದು ಮಾತ್ರವಲ್ಲ ಸಮಿತಿಯ ಸದಸ್ಯರು ಎಲ್ಲಾ ಬೇರೆ ಬೇರೆ ಕಾರಣಕ್ಕೆ ಸಿಗದೆ ಹೋದರು ಎಂಬ ಡಯಲಾಗ್ ಇದೆ . 

ಬಿ ಆರ್ ಅಂಬೇಡ್ಕರ್ ಅವರೇ  ತಮ್ಮ ಸಮಾರೋಪ ಭಾಷಣದಲ್ಲಿ ಹೇಳಿದ್ದಾರೆ "ಸಂವಿಧಾನ ರಚನೆಯ ಶ್ರೇಯ ವನ್ನು ನನಗೆ ಕೊಟ್ಟರೂ ಇದು ಭಾಗಷಃ ಮೊದಲ   ಕರಡು ಪ್ರತಿ  ರಚಿಸಿ ಅದನ್ನು ಕರಡು ಸಮಿತಿಗೆ ಒಪ್ಪಿಸಿದ ಬೆನಗಲ್ ನರಸಿಂಗ ರಾವ್ ಅವರಿಗೆ ಸೇರಬೇಕು "ಇದರ ಕರಡು ರಚಿಸಲು ಜಗತ್ತಿನ ಹಲವು ದೇಶಗಳ ಸಂವಿಧಾನದ ಕೂಲಂಕುಷ ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಬೇಕಾದಂತ ಅಂಶಗಳನ್ನು ಅಳವಡಿಸಿಕೊಂಡ ಕೀರ್ತಿ ರಾವು ಅವರಿಗೆ ಸೇರಬೇಕು . ಬರ್ಮಾ ದೇಶದ ಸಂವಿಧಾನ ರಚನೆಯಲ್ಲಿ ಕೂಡಾ ಇವರ ಸೇವೆಯನ್ನು ಬಳಸಿಕೊಂಡಿದ್ದು ನಮಗೆ ಹೆಮ್ಮೆ . ಇವರ ಇನ್ನೊಬ್ಬ ಸಹೋದರ ರಾಮ ರಾವ್ ಭಾರತ ದೇಶದ ರೆಸೆರ್ವ್ ಬ್ಯಾಂಕ್ ಗವರ್ನರ್ ಆಗಿದ್ದರು .

ಅಡಿಕೆ ಹಾಳೆ ಶಯನ

 

ಜಾನುವಾರುಗಳಿಗೆ ಅಡಿಕೆ ಹಾಳೆ ಉತ್ತಮ ಮೇವು ಯಾಕೆ?. - Krushiabhivruddiಅಮೇರಿಕದಲ್ಲಿಂದು ಅಡಿಕೆ ಹಾಳೆ ತಟ್ಟೆ |

Namma Karnataka — ಹಾಳೆ ಟೋಪಿ ತಲೆಯ ಮೇರೆ ಭಾರ ಹೊರಲು ಅಡಿಕೆ ಮರದ ಹಾಳೆಯಿಂದ...                                                                                                                            ವಿಷ್ಣುವನ್ನು ಪನ್ನಗ ಶಯನ ,ಕ್ಷೀರ ಸಾಗರ ಶಯನ ಎಂದೆಲ್ಲಾ  ವರ್ಣಿಸುತ್ತಾರೆ . ಹಾಗೆ ನೋಡಿದರೆ ನಾವೆಲ್ಲಾ ಅಡಿಕೆ ಹಾಳೆ ಶಯನ ಅಗಿದ್ದೆವು . ಹುಟ್ಟಿದ ಮಗುವಿಗೆ ಹಾಳೆಯ ಮೇಲೆ ಒಂದು ಬಿಳಿ ಬಟ್ಟೆ . ತಲೆಯ ಬದಿಗೆ ಒಂದು ಒಂದು ಬಟ್ಟೆಯ ಉರುಟಿನ ತಲೆದಿಂಬು . ಹಾಸಿದ ಬಟ್ಟೆ (ಹೆಚ್ಚಾಗಿ  ಹಳೆ ವೇಷ್ಟಿ )ಯನ್ನು ಮಗು ಒದ್ದೆ ಮಾಡಿದಂತೆ ಕೆಳಗೆ ಎಳೆದು ಉಂಡೆ ಮಾಡುವುದು .ಮಗು ಅತ್ತಾಗ ಹಾಳೆ ಯ ಕೆಲ ಬಾಗ  ವನ್ನು  ಕೈಯಲ್ಲಿ ಕರಕರ ಮಾಡಿದರೆ ಅಳು ನಿಲ್ಲಿಸುವುದು .ಈಗ ಬಗೆ ಬಗೆಯ ಪ್ಲಾಸ್ಟಿಕ್ ಹಾಸುಗಳು ಅವುಗಳ ಮೇಲೆ ಬಣ್ಣ ಬಣ್ಣದ ದಪ್ಪದ ರೆಡೀ ಮೇಡ್ ಉಡುಪುಗಳು ಬಂದಿವೆ . ನಮ್ಮ ಆಸ್ಪತ್ರೆಯಲ್ಲಿ ಒಬ್ಬರು ಮಾತ್ರ ಹಾಳೆಯಲ್ಲಿ  ಮಗುವನ್ನು ಮಲಗಿಸಿದ್ದುದನ್ನು  ಕಂಡಿದ್ದೇನೆ .

                      ಅಡಿಕೆ ಹಾಳೆ ನಮ್ಮ ಜೀವನದ ಅತ್ಯಾವಶ್ಯ ಅವಿಭಾಜ್ಯ ಅಂಗ ಆಗಿತ್ತು .ತಲೆಗೆ ಮುಟ್ಟಾಳೆ ,ತೋಟಕ್ಕೆ ನೀರು ಚೇಪುವ ಚಿಳ್ಳಿ .ಚಿಳ್ಳಿಯ ಅಣ್ಣನಿಗೆ ಪಡಿಗೆ ಎಂದು ಹೆಸರು .ಇದು ತರಕಾರಿ ಹಚ್ಚಿ ಹಾಕುವುದರಿಂದ ಹಿಡಿದು ರೋಗಿಗಳ ಬೆಡ್ ಪ್ಯಾನ್ ವರೆಗೆ ವಿವಿಧ ಕಾರ್ಯಗಳಿಗೆ ಉಪಯೋಗಿಸುತ್ತಿದ್ದರು .ಹಾಳೆ ತುಂಡು ಸೆಗಣಿ ಸಾರಿಸುವುದರಿಂದ ಹಿಡಿದು ,ಚುಟ್ಟಿ ಕಿಟ್ಟಲು ಮತ್ತು ಮಕ್ಕಳ ಕಕ್ಕ ತೆಗೆಯಲು ; ಮಳೆಗಾಲಕ್ಕೆ ಮೊದಲೇ ಹಾಳೆಯನ್ನು ಒಣಗಿಸಿ ಅಟ್ಟದಲ್ಲಿ ಹೇಮಾರಿಸುವರು . ಬಚ್ಚಲು ಮನೆಯಲ್ಲಿ ಒಳೆಗೆ ಮುಖ್ಯ ಉರುವಲು .ಬೇಗನೆ ಬೆಂಕಿ ಹಿಡಿದು ಉರಿಯುವುದು . 

ರಾಸುಗಳಿಗೆ ಇದು ಒಳ್ಳೆಯ ಆಹಾರ ಕೂಡಾ .

ಊಟ ಮಾಡಲು ಕಟ್ಟಿಪ್ಪಾಳೆ . ಇದರಲ್ಲಿ ಒಂದು ದೊಡ್ಡದು ಅನ್ನ ಹಾಕಲು ,ಪಕ್ಕದಲ್ಲಿ ಒಂದು ಮರಿ ,ಪದಾರ್ಥ ಹಾಕಲು . ಹಾಳೆಯಿಂದ ಸುರ್ ಸುರ್ ಎಂದು ಉಣ್ಣುವುದು ಒಂದು ಸುಖ

ಈಗ ಈ ಹಾಳೆಗೆ ವಾಣಿಜ್ಯ ಬೆಲೆ ಬಂದಿದೆ .ಹಾಳೆ ತಟ್ಟೆ ಮಾಡುವುದು ಉದ್ಯಮ ಆಗಿ ಬೆಳೆದು ,ನಮಗೆ ಸಾಧ್ಯವಾಗದಿದ್ದರೂ ಈ ಬರೀ ಹಾಳೆ ವಿದೇಶಕ್ಕೆ ಹೋಗಿದೆ . ಅಡಿಕೆಗೆ ಮಾತ್ರ ವಲ್ಲ ತನಗೂ ಮಾನ ಬಂದಿದೆ ಎಂದು ಅದು ಬೀಗುತ್ತಿದೆ .

ಶನಿವಾರ, ಮಾರ್ಚ್ 26, 2022

ಬೂದಿ ಮುಚ್ಚಿದ ಕೆಂಡ

ಮನೆಯೊಳಗಿಲ್ಲ ಒಲೆ, ಹೊರಗೆ ಹೊಗೆ – Namma Kinnigoli

ಸಂಜೆ ಶಾಲೆಯಿಂದ ಬಂದು ಆರಿದ ಬೆಲ್ಲದ ಕಾಪಿ ಯೊಡನೆ ಬೆಳಗಿನ ತಿಂಡಿ ಏನಾದರೂ ಉಳಿದಿದ್ದರೆ ಗಬಗಬ ತಿಂದು ಕತ್ತಲಾಗುವ ಮೊದಲು ಆಟ ಆಡುವ ಆಸೆ .ಕೆಲವೊಮ್ಮೆ ತಿಂಡಿ ಏನೂ ಇರುತ್ತಿರಲಿಲ್ಲ . ಗೆಣಸು ಅಥವಾ ನೇಂದ್ರ ಬಾಳೆ ಹಣ್ಣು ಇದ್ದರೆ ಒಲೆಯ ಕೆಂಡದಲ್ಲಿ ಮುಚ್ಚಿ ಹೋಗಿ ಮತ್ತೆ ಬಂದು ತಿನ್ನುತ್ತಿದ್ದೆವು .ಕೆಲವೊಮ್ಮೆ ಹಪ್ಪಳ ಸುಟ್ಟು ತಿನ್ನುವುದೂ ಇತ್ತು . ಒಂದು ಒಲೆಯಲ್ಲಿ ಯಾವಾಗಲೂ ಕೆಂಡ ಇರುತ್ತಿದ್ದು ಬಹಳ ಉಪಯೋಗಿ .

                    ಕೆಂಡದ ಬಿಸಿಯಲ್ಲಿಯೇ ಓಡಿನಲ್ಲಿ ಕೆಂಡದಡ್ಯೆ ಬೇಯಲು ಇಡುವುದು . ಹಲಸಿನ ಹಣ್ಣಿನ ಅಡ್ಯೆ ಕೂಡಾ ಆರಂಭದಲ್ಲಿ ಬೆಂಕಿಯಲ್ಲಿ ಉತ್ತರಾರ್ಧದಲ್ಲಿ  ಕೆಂಡದ ಬಿಸಿಯಲ್ಲಿ ಬೆಂದು ಮುಂಜಾನೆ ಗಮ ಗಮ ಪರಿಮಳ ಸೂಸುವುದು . ಹೆಸರು ಪಾಯಸವನ್ನು  ಒಂದು ಉರುಳಿಯಲ್ಲಿ ಹಾಕಿ ಕೆಂಡದ ಮೇಲೆ ಇಟ್ಟರೆ ಅದು ಗಟ್ಟಿಯಾಗಿ ಉಂಡೆ ಮಾಡಲು ಬರುವುದು ,ಮತ್ತು ತಿನ್ನಲು ರುಚಿ .ನನ್ನ ಅಜ್ಜ ಸ್ವಯಂ ಇದನ್ನು ಮಾಡುತ್ತಿದ್ದರು. ಇನ್ನು ದೀಗುಜ್ಜೆ ಮತ್ತು ಬಸಳೆ ಸಾಂಭಾರು  ಮಣ್ಣಿನ ಪಾತ್ರೆಯಲ್ಲಿ  ಕೆಂಡ ಇರುವ ಒಲೆಯ ಮೇಲೆ ಇಟ್ಟರೆ ಗಟ್ಟಿಯಾಗಿ ಉಪ್ಪು ಮೆಣಸು ಹೀರಿ ಬಹಳ ರುಚಿ ಇರುತ್ತಿತ್ತು . (ಆಯಾ ದಿನದ ಫ್ರೆಷ್ ಪದಾರ್ಥಕ್ಕಿಂತಲೂ ನಮಗೆ ಅದುವೇ ಹೆಚ್ಚು ಇಷ್ಟವಾಗುತ್ತಿತ್ತು )

ಬಲಿತ ಮಾವಿನ ಕಾಯಿ ಉಪ್ಪಿನಕಾಯಿ (ಇಡಿಕ್ಕಾಯಿ)ಯ ಗೊರಟನ್ನು ಕೆಂಡದಲ್ಲಿ ಬೇಯಿಸಿ ಒಡೆದು ಅದರ ಒಳಗಿನ ಕೋಗಿಲೆ ಸವಿಯುವುದು ಕೂಡಾ ಒಂದು ಹವ್ಯಾಸ . ಬದನೆ ಕಾಯಿ ಸುಟ್ಟು ಗೊಜ್ಜಿ ಮಾಡುತ್ತಿದ್ದರು.

ಮಳೆಗಾಲ ಒಲೆಯ ಪಕ್ಕ ಬಟ್ಟೆ ಒಣಗಲು ಹಾಕುತಿದ್ದು ಅಂತಹ ಬಟ್ಟೆಗಳು ವಿಶಿಷ್ಟವಾದ  ಪರಿಮಳ ಹೊಂದಿರುತ್ತಿದ್ದವು . 

ಸಂಜೆ ಹೊತ್ತು ಮನೆಯಲ್ಲಿ ಯಾವತ್ತೂ ಇರುತ್ತಿದ್ದ ಎಳೆ ಹಸುಳೆಗಳ ದೃಷ್ಟಿ ತೆಗೆಯಲೆಂದು ಉಪ್ಪು ಸಾಸಿವೆ ಸುತ್ತಿ ಒಲೆಗೆ ಹಾಕಿ ಚಿಟಿಚಿಟಿ ಮಾಡುತ್ತಿದ್ದರು .

ಸರಿಯಾದ ವಾತಾನುಕೂಲ ಇಲ್ಲದ ಅಡಿಗೆ ಮನೆಯಲ್ಲಿ ಹೊಗೆ ಕಾರುವ ಸೌದೆಗಳ ಎದುರು ಊದು ಓಟೆಯಲ್ಲಿ ಕಣ್ಣು ಮೂಗಿನಲ್ಲಿ  ನೀರು ಸುರಿಸಿಕೊಂಡು ಗಂಟೆ  ಕಟ್ಟಲೆ ಕುಳಿತೇ ದೋಸೆ ಹೊಯ್ಯುವುದು ,ಅಡಿಗೆ ಮಾಡುವುದು ಮಾಡುತ್ತಿದ್ದ ಅಮ್ಮಂದಿರು ಕಣ್ಣ ಮುಂದೆ ಇದ್ದಾರೆ .ಹಲವು  ದಮ್ಮು ಉಂಟುಮಾಡುವ ಶ್ವಾಸ ಕೋಶದ ಕಾಯಿಲೆಗಳಿಗೆ ಇದುವೇ ಕಾರಣ ಆಗಿತ್ತು .

ಇಂತಹ  ಒಲೆ ಗಳು ,ಹಾಲು ಮಜ್ಜಿಗೆ ಪಾತ್ರೆ ಇಡುವ ಸಿಕ್ಕ ,ಕಲಾಯಿ ಯವರು ಮುಚ್ಚಳ ಮಾಡಿಕೊಟ್ಟ ಖಾಲಿ ಎಣ್ಣೆ ಡಬ್ಬಗಳು (ಅವಲಕ್ಕಿ ಇತ್ಯಾದಿ ಶೇಖರಿಸಲು ) ಇಂದು ಅಪರೂಪ ಆಗಿವೆ .

                  

ಶುಕ್ರವಾರ, ಮಾರ್ಚ್ 25, 2022

ಹಿರಿಯರ ಆಶೀರ್ವಾದ

                


ಮೇಲಿನ ಚಿತ್ರದಲ್ಲಿ ಇರುವವರು 93 ವರ್ಷದ ಯುವಕ ಬಲ್ನಾಡು ಸುಬ್ಬಣ್ಣ ಭಟ್ ಅವರು .ಸುಬ್ಬಣ್ಣನ ತ್ರಿಪದಿಗಳು ಎಂದು ಅವರ ಚುಟುಕುಗಳು ಹಿಂದೆ ಶಿಂಗಣ್ಣ ರಾಮಕೃಷ್ಣ ಶಾಸ್ತ್ರಿಗಳ 'ಇಂದ್ರ ಧನುಸ್ ' ಮಾಸಿಕ ದಲ್ಲಿ ಓದಿದ ನೆನಪು . ಎಸ್ ಬಿ ಹೇಟ್ ಅವರ ಕಾವ್ಯ ನಾಮ . ಆದಾಗ್ಯೂ ಅವರಲ್ಲಿ ಬರೀ 24  ಕೇರೆಟ್ ಪ್ರೀತಿಯೇ ಹೊರತು ಹೇಟ್ ಹುಡುಕಿದರೂ ಸಿಗದು .ಹಿಂದೆ ಅಡಿಕೆ ಸಂಘದಲ್ಲಿ ಉದ್ಯೋಗಿಯಾಗಿದ್ದು  ಪುತ್ತೂರು ಪರ್ಲಡ್ಕ ದಲ್ಲಿ ವಾಸವಿದ್ದು ಪಕ್ಕದಲ್ಲಿಯೇ ನನ್ನ ಅಕ್ಕನ ಮನೆ ಇತ್ತು . ಸಾತ್ವಿಕರೂ ದೈವ ಭಕ್ತರೂ ಆಗಿರುವ ಇವರು ಸಮಾಜದ ಅಂಕು ಡೊಂಕುಗಳನ್ನು ನವಿರಾದ ಹಾಸ್ಯದೊಡನೆ ತಮ್ಮ  ಚುಟುಕಗಳ ಮೂಲಕ ಹೇಳಲು ಹಿಂಜರಿಯರು .ಈಗ ನರಿಮೊಗರು ಸಮೀಪ' ಪಂಚವಟಿ'ಯಲ್ಲಿ ವಾಸ. ಅವರ ಪುತ್ರ ಪ್ರಸನ್ನ  ಪುತ್ತೂರಿನ ಹೆಸರಾಂತ ಸಿವಿಲ್ ಎಂಜಿನಿಯರ್ .

ಸುಬ್ಬಣ್ಣ ಭಟ್ ಅವರ ಹಾಸ್ಯ ಪ್ರಜ್ನೆ ಪ್ರಸಿದ್ದ . ಹಲವು ಕೃತಿಗಳನ್ನು ರಚಿಸಿದ್ದಾರೆ . ಅವರ ಪತ್ನಿ ನಮ್ಮ  ಗುರುಗಳಾದ ಅಮೈ ಮನೆತನದವರು . 

ಹಿರಿಯರಿಗೆ ನನ್ನ ಕೃತಿ 'ವೈದ್ಯನ ವಗೈರೆಗಳು ' ಪ್ರತಿಯನ್ನು ಪ್ರೀತಿ ಗೌರವಗಳಿಂದ ಕಳುಹಿಸಿದ್ದೆ .

ಇಂದು ಅವರ ಆಶೀರ್ವಾದ ರೂಪದ ಪತ್ರ ತಲುಪಿದೆ .

                                               ಬಲ್ನಾಡು ಸುಬ್ಬಣ್ಣ ಭಟ್ ,'ಪಂಚವಟಿ '

ಡಾ ಎ ಪಿ ಭಟ್ ಅವರಿಗೆ ಸುಬ್ಬಣ್ಣನ ನಮಸ್ಕಾರಗಳು . ನೀವು ಪ್ರೀತಿಯಿಂದ ಕೊಟ್ಟ "ವೈದ್ಯನ ವೈಗೈರೆಗಳು 'ಓದಿ 'ಖುಷಿ ' ಯಾಯಿತು .ತಪ್ಪು ತಿಳುವಳಿಕೆಗಳ ಮೇಲೆ ಬೆಳಕು ಬೀರಿ ಸೋಂಕುಗಳ  ಮೂಲ ಪರಿಚಯ ಮಾಡಿರುವ ಪುಸ್ತಕವಿದು ಎಲ್ಲರ ಮನೆಯಲ್ಲೂ ಇರಬೇಕಾದ ಗ್ರಂಥ .

ತಿಳಿಹಾಸ್ಯದ ಲೇಪನದ ಎರಡನೆಯ ಭಾಗ ನೇಪಥ್ಯ ಸೇರಿದ್ದ ಬಾಲ್ಯದ ನೆನೆಪುಗಳನ್ನು ರಂಗಕ್ಕೆ ತಂದಿರುವುದು  ಶ್ಲಾಘನೀಯ .ದಯವಿಟ್ಟು ಪುಸ್ತಕದ  ಗೌರವ ಧನವನ್ನು ಸ್ವೀಕರಿಸಿರಿ .

ವೃದ್ದಾಪ್ಯ (93 ವರ್ಷ )ಸಹಜ ದೌರ್ಬಲ್ಯಗಳ ಹೊಂದಿ 

ಆಗಿರುವೆ ನಾನಿಂದು  ಮನೆಯೊಳಗೆ ಬಂಧಿ 

ಬಿಡುವು ದೊರೆತರೆ ನಮ್ಮ ಮನೆಗೊಮ್ಮೆ ಬನ್ನಿ 

ಬರುವಾಗ ಜತೆಗೆ 'ನಿಮ್ಮವರ 'ಕರೆತನ್ನಿ .

                             ಇತೀ

                                       ಸುಬ್ಬಣ್ಣ ಭಟ್

                                             
ಜತೆಗೆ  ಎಂಟು ಚೌಪದಿಗಳ ಮೆಚ್ಚುಗೆ ನುಡಿಗಳನ್ನು ರಚಿಸಿ ಕಳುಹಿಸಿದ್ದಾರೆ .ಅವುಗಳನ್ನು ಅಶೀರ್ವಚನ ಎಂದು ಸ್ವೀಕರಿಸಿದ್ದೇನೆ .

 

ವೈದ್ಯರ ವಗೈರೆ ಪುಸ್ತಕದ ಕೃತಿಕಾರ 

ವೈದ್ಯರೇ ನಿಮಗೆ ಸಲಿಸುವೆ ನಮಸ್ಕಾರ 

ಸುಲಿದ ಕದಳಿಯ ಹಣ್ಣಿನಂತಿಹ ವಿಚಾರ 

ತಿಳುವಳಿಕೆಗಳಿಗೆನ್ನ ಪುರಸ್ಕಾರ . ೧

 

ಜಿಜ್ಞಾಸುಗಳ ಬಗೆಗೆ ಇದು ಮಾರ್ಗದರ್ಶಿ 

ಸೋಂಕುಗಳ ಪರಿಚಯಕೆ ಕೃತಿಯೊಂದು ದರ್ಶಿ 

ತಪ್ಪು ತಿಳುವಳಿಕೆಗಳ ಮೇಲೊಂದು ಬೆಳಕು 

ಬೀರಿರುವ ಗ್ರಂಥ ವಿದರೊಳಗುಂಟು ಥಳಕು . ೨

 

ಹತ್ತೂರುಗಳ ಸುತ್ತಿ ತುಂಬಿರುವ ಬುತ್ತಿ 

ಪುತ್ತೂರಿನಲಿ ಬಿಚ್ಚಿ ಉಣಿಸಿಸಿದ ಪ್ರಸಕ್ತಿ 

ಚಿತ್ರ 'ಬಾಲಂಗೋಚಿ 'ಗಳ ಬರಹದಿಂದ 

ವರ್ಧಿಸಿದೆ ಹೊತ್ತಿಗೆಯ ಸೊಬಗು ಒಟ್ಟಿಂದ.  ೩


ಕಷ್ಟ ಸುಖ ಸಂತೋಷದನುಭವ ಪಡೆದು 

ಹುಟ್ಟೂರ ಸೇರಿರುವ ಸಾಹಸವು ಹಿರಿದು 

ಇಷ್ಟಮಿತ್ರರ ನಡುವೆ ವೃತ್ತಿಯ ನಡಿಗೆ 

ಚಿತ್ತದಲಿ ಸಂತುಷ್ಟಿ ಶಾಂತಿಗಳ ಕೊಡುಗೆ .೪


ನಾಗವಲ್ಲಿಯ ದಳಕೆ ಲೇಪಿಸುತ ಸುಣ್ಣ 

ಜಗಿದಾಗ ತುಟಿಗೆ ಬರುವಂತೆ ಕೆಂಬಣ್ಣ 

ಓದಿದನುಭವ ಮೆಲುಕಾಡಿದರೆ ಜ್ನಾನ

ಮೊಸರ ಕಡೆದರೆ ಸಿಗುವ ವರಮಾನ .೫

 

'ಅನುಭವವು ಸವಿಯಲ್ಲ ನೆನಪು ಸವಿಯು '

 ಇದು ಕಡೆಂಗೋಡ್ಲು ಶಂಕರ ಭಟ್ಟರ ಮಾತು 

ಬಾಲ್ಯದಲಿ ಕಂಡು ಸಂಭ್ರಮಿಸಿಸುವ ಮನಸು 

'ಆತ್ಮ ನಿರ್ಭರ 'ಹಳ್ಳಿ ಜೀವನದ ಸೊಗಸು .೬

 

ಆತ್ಮಕತೆಯಂತಿರುವ  ಎರಡನೆಯ ಭಾಗ 

ಜಾತ್ರೆಯಲಿ ಮಣಿಸರಕಿನಂಗಡಿಯ ಜೋಗ 

ಎಲ್ಲವೂ ಉಂಟಲ್ಲಿ ಸುಲಭದಲಿ ಲಭ್ಯ 

ಅರಸುವಡೆ ಶ್ರಮವಿಲ್ಲ ತೆರೆದ ಸೌಲಭ್ಯ .೭

 

ಸಾಹಿತ್ಯ ಕಲೆಗಳಲಿ ನಿಮಗಿರುವ ಪ್ರೀತಿ 

ವೈದ್ಯರೊಳಗಪರೂಪವೆನುವ  ಪ್ರತೀತಿ 

ಜನಹಿತದ ಗ್ರಂಥಗಳು ಬರಲಿ ನಿಮ್ಮಿಂದ 

ಬಲ್ನಾಡು ಸುಬ್ಬಣ್ಣ ಭಟ್ಟ ಹೀಗೆಂದ.೮