ಬೆಂಬಲಿಗರು

ಮಂಗಳವಾರ, ನವೆಂಬರ್ 14, 2023

ಮೊನ್ನೆ ಕುತೂಹಲದಿಂದ ತರಿಸಿದ್ದ ಶ್ರೀ ಟಿ ಜಿ ಮುಡೂರು ಅವರ' ಬೊಲ್ಪಾನಗ  ಮುಗ್ತು ' ಅರೆ ಭಾಷೆಯ ನಾಟಕದ ಕನ್ನಡ ಅನುವಾದ (ಅನು; ಡಾ ಕರುಣಾಕರ ನಿಡುಂಜಿ ). ಲೇಖಕರು ಕನ್ನಡ ತುಳು ಹವ್ಯಕ ,ಅರೆ ಭಾಷೆ ಇತ್ಯಾದಿಗಳಲ್ಲಿ ಕೃತಿ ರಚನೆ ಮಾಡಿರುವ ಉಲ್ಲೇಖ ಇದೆ . ಶಿಷ್ಯ ಗಣ ಮೆಚ್ಚಿದ ಪ್ರತಿಭಾವಂತ ,ನಿಷ್ಟಾವಂತ ಶಿಕ್ಷಕರು ಎಂದು ಕೇಳಿದ್ದೇನೆ .. ನನಗೆ ತಿಳಿದಂತೆ ಅವರ ಗರಡಿಯಲ್ಲಿ ಪಳಗಿದ ಕೆಲವು ಮಿತ್ರರು ಇದ್ದಾರೆ . ಗುರುವಿನ ಗುಣ ಶಿಷ್ಯರ ಲ್ಲಿ ಕಾಣಬಹುದು . 

ಇದೊಂದು ನಗೆ ಪ್ರಹಸನ ಎಂದು ಕರೆದಿದ್ದರೂ ಆಗಿನ ಕಾಲದ ಗ್ರಾಮೀಣ ಜೀವನದ ಚಿತ್ರಣ ಚೆನ್ನಾಗಿ  ಬಂದಿದೆ .(ಮೂಲಕೃತಿ ರಚನೆ ೧೯೫೬ ರಲ್ಲಿ ). ಲೇಖಕರು ಯಕ್ಷಗಾನ ಪ್ರಿಯರು ;ಹಲವು ಪಾತ್ರಗಳು ಸಮಯೋಚಿತವಾಗಿ  ಜನಪ್ರಿಯ ಪ್ರಸಂಗ  ದ ಸಾಲುಗಳನ್ನು ಸಂಭಾಷಣೆಯಲ್ಲಿ ಬಳಸಿವೆ .  ಬೇಟೆ ,ಬೇಟ ,ಯಕ್ಷಗಾನ ಆಟ ,ಜಾತ್ರೆಯ ಕೂಟ ,ಕೋಳಿ ಕಟ್ಟ ,ತೆಂಗಿನ ಕಾಯಿ ಕುಟ್ಟುವುದು ಇತ್ಯಾದಿ ಅಂದಿನ ಗ್ರಾಮೀಣ ಜೀವನದ ಹಾಸುಹೊಕ್ಕಾಗಿದ್ದ ಅಂಶಗಳ ಚಿತ್ರಣ ಇಲ್ಲಿ ಕಾಣಬಹುದು .

ಇದರಲ್ಲಿ ಬಂದ ಒಂದು ಗಾದೆ ನನಗೆ ಇಷ್ಟ ವಾಯಿತು .ಮಗಳ ಮದುವೆಗೆ ಹುಡುಗ ಹುಡುಕುವಾಗ ''ಮುಂದಾಸಿನವ ಸಿಗಲಿಲ್ಲ ,ಮುಟ್ಟಾಳೆ ಯವನು ಇಷ್ಟವಿಲ್ಲ "-ಎಂಬ ಧೋರಣೆಯಿಂದ ಎಲ್ಲೂ ಸರಿ ಆಗಲಿಲ್ಲ ಎಂದು .ಇದು ಮೂಲತಃ ತುಳು ಗಾದೆ ಇರ ಬೇಕು "ಮುಂಡಾಸುದಾಯೆ ತಿಕ್ಕುಜ್ಯೆ ,ಮೂಟ್ಟಾಲೆ ದಾಯೆ ಆಪುಜ್ಜಿ" ಎಂದು ಇರಬೇಕು . ದೊಡ್ಡ ಮನೆತನದವರು ಸಿಗರು ,ಬಡವರು ಆಗದು ಎಂಬ ಅರ್ಥ .

ಅರೆ ಭಾಷೆಯ ಒಂದು ಕೃತಿಯನ್ನು ಕನ್ನಡಕ್ಕೆ ಹುಡುಕಿ ತಂದು ಪ್ರಕಟಿಸಿದ ಕುವೆಂಪು ಭಾಷಾ ಪ್ರಾಧಿಕಾರದ ಕಾರ್ಯ ಮೆಚ್ಚುವಂತಹುದು

ಸೋಮವಾರ, ನವೆಂಬರ್ 13, 2023


           ಮೊನ್ನೆ ಬೆಟ್ಟಂಪಾಡಿ ಕಾಲೇಜು ನಲ್ಲಿ' ಕನಕ ದಾಸ ಬಸವ ಣ್ಣ ' ಕಮ್ಮಟಕ್ಕೆ ಹೋಗಿ ದ್ದೆ .ಬಹಳ ದಿನಗಳ ನಂತರ ಒಂದು ಒಳ್ಳೆಯ ಸಾಹಿತ್ಯ ಗೋಷ್ಠಿ . ಹಿಂದೆ ಶಾಲೆಯಲ್ಲಿ ಕಲಿತು ,ಆ ಮೇಲೆ ಪುಸ್ತಕಗಳಲ್ಲಿ ಓದಿ ಮರೆತಿತಿದ್ದ ಹಲವು ವಿಚಾರಗಳನ್ನು ಮೆಲುಕು ಹಾಕುವ ಯೋಗ . ಹಳೆಯ ಸಾಲುಗಳಿಗೆ  ಹೊಸ ಹೊಳವು ಗಳು .                                                                 ಧರ್ಮ ಎಂಬ ಶಬ್ದಕ್ಕೆ ಬೇಕಾದಂತೆ ವ್ಯಾಖ್ಯೆ ಹಣಿದು ಅದರ ಹೆಸರಲ್ಲಿ ಬಡಿದಾಡುವರ ಕಂಡಾಗ  ಬಸವಣ್ಣ ಅವರ ಈ ಸರಳ ವಚನ ಎಷ್ಟು ಆಪ್ತ ವಾಗುತ್ತದೆ . 

    ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. 

ನಾನು ಶುದ್ಧ ,ಅಶುದ್ಧ ಆದವರು ಮುಟ್ಟಿ ನನ್ನ ಪವಿತ್ರ ತೆ  ನಾಶ ಮಾಡಿದರೆ ಪೂಜಿಸುಲ್ಪಡುವ ದೇವ ಮೆಚ್ಚಲಾರ ಎಂಬ ನಂಬಿಕೆ ಗೆ ಅಕ್ಕ ಮಹಾದೇವಿ ವಚನ  ಕನ್ನಡಿ  ಹಿಡಿಯುತ್ತದೆ .ನೋಡಿ ಇದರಲ್ಲಿ ತನುಕರಗದವರಲ್ಲಿ ಎಂಬ ಮಾತು ಇದೆ . ಬೆವರಿಳಿಸಿ ದುಡಿಯದವರು ಮಾಡುವ ಪೂಜೆ ದೇವನು ಮೆಚ್ಚನು . ಬಸಣ್ಣ ಕಾಯಕವೇ ಕೈಲಾಸ ಎಂದುದು ಇದೇ ಅರ್ಥದಲ್ಲಿ .ಹೇಳಿರುವುದು

 ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾನೀನು.
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾನೀನು.
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾನೀನು.
ಅರಿವುಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾನೀನು.
ಭಾವಶುದ್ಭವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾನೀನು.
ಪರಿಣಾಮಿಗಳಲ್ಲದವರಲ್ಲಿನೈವೇದ್ಯವನೊಲ್ಲೆಯಯ್ಯಾನೀನು.
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾನೀನು.
ಹೃದಯಕಮಲಅರಳದವರಲ್ಲಿ ಇರಲೊಲ್ಲೆಯಯ್ಯಾನೀನು.
ಎನ್ನಲ್ಲಿಏನುಂಟೆಂದುಕರಸ್ಥಲವನಿಂಬುಗೊಂಡೆಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ. 

ಇನ್ನು ನಿಜವಾದ ಶುದ್ದಿ ಎಂದರೆ ಏನು ?ಎಂದು ಬಸವಣ್ಣ ಸರಳವಾಗಿ ತಿಳಿಸಿರುವರು

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ
ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. 

 
ಕಮ್ಮಟದಲ್ಲಿ ಪಂಪ ಕು ವೆಂಪು ಅವರ ಪ್ರಸ್ತಾಪವೂ ಬಂತು . ಮನುಜ ಜಾತಿ ತಾನೋಂದೆ ವಲಮ್ ಎಂಬ ಪಂಪನ ಸಾಲು ಕುಲ ಕುಲ ವೆಂದು ಹೊಡೆದಡದಿರಿ ಎಂಬ ಕನಕದಾಸರ ಆಶಯಕ್ಕೆ ಇರುವ ಸಾಮ್ಯತೆ ಬಗ್ಗೆ ಹಲವರು ಎತ್ತಿ ತೋರಿದರು . ಕುವೆಂಪುಅವರ ' ಒ ನನ್ನ ಚೇತನ ಆಗು ನೀ ಅನಿಕೇತನ ಕ್ಕೂ'   ಬಸವಣ್ಣ ನವರ 'ಸ್ಥಾವರಕ್ಕಳಿವಿಲ್ಲ ಜಂಗಮಕ್ಕಳಿವುಂಟು' ವಿಗೂ  ಇದೇ ತರಹ ಇರ ಬಹುದು .

ಕನಕದಾಸರ ಈ ದೇವರನಾಮಕ್ಕೆ ಹತ್ತಿರವಾದ ಶರಣರ ವಚನಗಳು ಹಲವು ಇವೆ .

ನೀ ಮಾಯೆಯೊಳಗೊನಿನ್ನೊಳು ಮಾಯೆಯೊ
  ನೀ ದೇಹದೊಳಗೊ ನಿನ್ನೊಳು ದೇಹವೊ

ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ                                                                                                                ನಯನ ಬುದ್ಧಿಯೊಳಗೊ

ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು
ನಿನ್ನೊಳಗೊ ಹರಿಯೆ

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ

ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ
ನಿನ್ನೊಳಗೊ?

 ಮನದ ಮುಂದಿನ ಆಸೆಯೇ ಹೊರತು ಹೆಣ್ಣು ಹೊನ್ನು ಮಣ್ಣು ಅಲ್ಲ ಎಂದು ಅಲ್ಲಮ ಹೇಳಿದ್ದಾನೆ

 ಬಾಲಂಗೋಚಿ :ಮನೆ ,ಕಚೇರಿ ,ಆಸ್ಪತ್ರೆ ಎಲ್ಲಾ ಕಡೆ ಹಿರಿಯರು ಇಹ ಲೋಕ ಮರೆತು ಮಕ್ಕಳು ಮೊಬೈಲ್ ನಲ್ಲಿ ಮುಳುಗಿರುವಾಗ ನಾ ಜಂಗಮ (ಮೊಬೈಲ್ )ದೊಳಗೊ  ,ಜಂಗಮ (ಮೊಬೈಲ್ )ದೊಳು ನಾನೋ ಎಂಬ ಆಲೋಚನೆ ಬರುತ್ತದೆ . ಅಂತೆಯೇ ಶಿಶುನಾಳ ಶರೀಫರ  ಕೋಡಗ ನ ಕೋಳಿ ನುಂಗಿತ್ತಾ ಎಂಬುದು  ಈಗ ಕೊಡಗನೇ ಕೋಳಿ ನುಂಗಿದ ಹಾಗೆ ಆಗಿದೆ ಅನಿಸುತ್ತದೆ .


 

ಶನಿವಾರ, ನವೆಂಬರ್ 11, 2023

ಮಂಗ ಳೂರ ಸಮಾಚಾರ ಕ0ನಡ ಸಮಾಚಾರವು ( ಕನ್ನಡದ ಮೊದಲ ಪತ್ರಿಕೆ ಹೆರ್ಮನ್ ಮ್ಯೋಗ್ಲಿಂಗ್ ಸಂಪಾದಿತ )

                                         



ಒಂದನೇ ಪುಸ್ತಕ 1843     1ನೇ ಜೂಲೈ                      ಕ್ರಯವು 1ದುಡ್ಡು 


ಪೀಠಿಕೆ 

ಮಂಗಲೂರಿನವರು  ಮೊದಲಾದ ಯೀ ದೇಶಸ್ಥರು ಕತೆಗಳ೦ನೂ ವರ್ತಮಾನಗಳ೦ನೂ ಕೇಳುವದರಲ್ಲಿಯೂ ಹೇಳುವದರಲ್ಲಿಯೂ ಬಹಳ ಯಿಚ್ಛೆ ಯುಳ್ಳ ವರಾಗಿರುತ್ತಾರೆ .

ಬೆಳಿಗ್ಗೆ ಬಂದ್ರಂದಲ್ಲ್ಯಾ ಗಲಿ ,ಕಚೇರಿ ಹತ್ತರವಾಗಲೀ  ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ಮಾತಾಡಿದರೆ ಅದ೦ನು ಬೇರೊಬ್ಬನು ಆಶ್ಚರ್ಯದಿಂದ ಹೇಳಿ ಯಿ೦ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ವೂರೆಲ್ಲ ತುಂಬಿಸುತ್ತಾರೆ . 

ಮರುದಿನ ನಿ೦ನಿನ ವರ್ತಮಾನ ಸುಳ್ಳು ಯ೦ತಾ ಕಾಣುವಷ್ಟರೊಳಗೆ ಯೆ೦ಮೆ ಮೊಲೆಯಂತೆ ಮತ್ತೆ ಹುಟ್ಟಿ ಆಯ್ತು . 

 ಯೀ ಪ್ರಕಾರವಾಗಿ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಯಿಲ್ಲಿ ವಸ್ತಿಯಾಗಿದ್ದ ಕೆಲವರು ತಿಳು ಕೊಂಡು ಯಿದರಲ್ಲಿ ಪ್ರಯೋಜನ ಪ್ರಯೋಜನ ವಿಲ್ಲವೆಂದು ಯೀ  ಮನುಷ್ಯರ ಸಮಾಚಾರ ಆಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದ್ ದರಿಂದ ನಿಜ ಸಮಾಚಾರದ ಸಂಗ್ರಹವ೦ನು ಕೂಡಿಶಿ  ಪಕ್ಷಕ್ಕೆ ವೊಂದು ಕಾಗದವ೦ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸ ಬೇಕೆಂಬದಾಗಿ ನಿಶ್ಚಯಿಸಿ ಅಧೆ .




ಶನಿವಾರ, ಸೆಪ್ಟೆಂಬರ್ 30, 2023

ತ್ವರಿತ ಪ್ರತಿಕ್ರಿಯಾತ್ಮಕ ಸಂಕೇತ ಚಿಹ್ನೆ

                                                



 ಈಗ ಎಲ್ಲೆಡೆ ಪ್ರಚಲಿತ ಆಗಿರುವ Q R Code (Quick Response Code )ನ ಕನ್ನಡ  ರೂಪಾಂತರ ತ್ವರಿತ ಪ್ರತಿಕ್ರಿಯಾತ್ಮಕ ಸಂಕೇತ ಚಿಹ್ನೆ .  ಮಾರ್ಗದ ಬಳಿ ಇರುವ ಕಬ್ಬಿನ ಹಾಲಿನ ಅಂಗಡಿಯವನ ಬಳಿ ಕೂಡಾ ಒಂದು ಕೋಡ್ ಇಟ್ಟಿದ್ದು ಅದರ ಮೂಲಕ  ಫೋನ್ app ಪಾವತಿ  ಮಾಡ ಬಹುದಾಗಿದೆ . ಯಥಾರ್ಥದಲ್ಲಿ ಚಿಲ್ಲರೆ ಅಭಾವ ಇರುವಾಗ ಸಣ್ಣ ವ್ಯಾಪಾರಿಗಳಿಗೇ ಅದು ಹೆಚ್ಚು ಅವಶ್ಯಕ . 

ಆಮಂತ್ರಣ ಪತ್ರಿಕೆಗಳಲ್ಲಿ  ಸಮಾರಂಭದ ಸ್ಥಳ ದ ಕೋಡ್ ಕೊಟ್ಟಿದ್ದು ಅದನ್ನು   ಜಾಗತಿಕ ತಾಣ ನಿರ್ಧಾರಕ(ಜಿಪಿಎಸ್ )  ದ  ಮೂಲಕ ಸ್ಕ್ಯಾನ್ ಮಾಡಿ ಅಲ್ಲಿಗೆ  ಯಾರ ಸಹಾಯ ಇಲ್ಲದೆ ತಲುಪ ಬಹುದು . ಕಾನ್ಫರೆನ್ಸ್ ,ಪ್ರವೇಶ ದರ ಇರುವ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಒಳ ಬಿಡಲು ಮತ್ತು ಸಂಸ್ಮರಣಿಕೆ ಪಡೆಯಲು ಒಂದು ಕೋಡ್ ಕೊಡುವರು . ಇನ್ನು ಭೋಜನ ಶಾಲೆಗೆ  ಪ್ರವೇಶಿಸುವಾಗ  ಕಂಠ ಭೂಷಿತ  QR ಪಟ್ಟಿ ಸ್ಕ್ಯಾನ್ ಮಾಡಿಯೇ ಒಳ ಬಿಡುವರು . 

ಮದುವೆ ಇತ್ಯಾದಿ ಸಮಾರಂಭ ಗಳಲ್ಲಿ ಪುರೋಹಿತರಿಗೆ ದಕ್ಷಿಣೆ ಕೊಡಲೂ ಇದು ಬರಬಹುದು . ದಕ್ಷಿಣೆ ಕೊಡುವಾಗ ಎಲೆ ಅಡಿಕೆ ತೆಂಗಿನ ಕಾಯಿ ಇಡುವ ಕ್ರಮ ಇದೆ .ಅದನ್ನು ಸಾಂಕೇತಿಕ ವಾಗಿ ವಿಡಿಯೋ ಮಾಡಿ ಕೊಂಡು ಅದಕ್ಕೆ ಒಂದು ಕೋಡ್ ಕೊಟ್ಟರೆ ಆಯಿತು . ಊಟದ ದಕ್ಷಿಣೆ ಇತ್ಯಾದಿ ಗೆ  ಅತಿಥಿಗಳು ತಮ್ಮ ಖಾತೆಯ ಕೋಡ್ ಎಡದ ಕೈ ಮೂಲಕ ಎತ್ತಿ ಹಿಡಿದರೆ ಆತಿಥೇಯರು ಸಾಲಾಗಿ ಸ್ಕ್ಯಾನ್ ಮಾಡ ಬಹುದು . 

ಹಲವು ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳು ಬಡವಾಗಿದ್ದು ಕತೆ ಕವನ ಇತ್ಯಾದಿಗಳ QR ಕೋಡ್ ಕೊಟ್ಟು ಬೇಕಾದರೆ ಸ್ಕ್ಯಾನ್ ಮಾಡಿ ಓದಿಕೊಳ್ಳಿ ಎಂದು ಕೈ ತೊಳೆದು ಬಿಡುವುದರಿಂದ ನಮ್ಮಂತಹ ವೃದ್ಧರಿಗೆ ನಿರಾಸೆ

ಬುಧವಾರ, ಆಗಸ್ಟ್ 16, 2023

ಮುಂಜಾನೆ ಆಸ್ಪತ್ರೆಗೆ ಬರುವಾಗ ದಾರಿ ಬಳಿಯಲ್ಲಿ  ಅಮ್ಮಂದಿರು ,ಯೂನಿಫೋರ್ಮ್ ,ಷೂ ಹಾಕಿದ ಮಕ್ಕಳ ಜತೆ ಶಾಲಾ ಬಸ್ಸಿಗೆ ಕಾತರದಿಂದ ಕಾಯುತ್ತಿರುತ್ತಾರೆ .ಬಸ್ ಬರುವ ವರೆಗೆ ಮಕ್ಕಳಿಗೆ ಹಾಗೆ ಮಾಡು ಹೀಗೆ ಮಾಡು ಎಂದು ಉಪದೇಶ ನಡೆಯುತ್ತಿದ್ದು ಮಕ್ಕಳು ಅದನ್ನು ಲೆಕ್ಕಿಸದೆ ಮಾರ್ಗದಲ್ಲಿ ಹೋಗುವ ವಾಹನಗಳನ್ನು ನೋಡುತ್ತಾ ಇಂದು ಯಾವ ಆಟ ಆಡಬಹುದು ಎಂದು ಆಲೋಚಿಸುತ್ತಾ ಇರುತ್ತಾರೆ .ಸಂಜೆ ಶಾಲೆ ಬಸ್ ವಾಪಸು ಬರುವ ವೇಳೆ ಇದರ ರಿಟ್ರೀಟ್ ನಡೆವುದು .ಇಳಿದ ಕೂಡಲೇ ಮಗುವನ್ನು 'ಮಿಸ್ ಏನು ಹೇಳಿದರು ?ಪ್ರಶ್ನೆಗೆ ಎಲ್ಲಾ ಉತ್ತರ ಹೇಳಿದೆಯಾ(ಬರೆದೆಯಾ),ನಿನ್ನ ಫ್ರೆಂಡ್ ಗೆ ಎಷ್ಟು ಮಾರ್ಕ್?"ಇತ್ಯಾದಿ ಪ್ರಶ್ನೆಗಳು ಸಾಮಾನ್ಯ .

ನನಗೆ ನಮ್ಮ ಬಾಲ್ಯದ ನೆನಪು ಆಯಿತು .ಯೂನಿಫೋರ್ಮ್ ಷೂ ಇಲ್ಲಾ ,ಬರಿಗಾಲು ,ಶಾಲೆಗೆ ಬಿಡಲು ,ವಾಪಸು ಬಂದಾಗ ಸ್ವಾಗತಿಸಲು ಯಾರೂ ಇಲ್ಲ .ಹಟ್ಟಿಯಿಂದ ಬಿಟ್ಟ ಕರುಗಳ ಹಾಗೆ ಲಾಗ ಹಾಕುತ್ತಾ ಗುಡ್ಡ ಬಯಲ ದಾರಿಯಲ್ಲಿ ಶಾಲೆಗೆ ;ಬರುವಾಗ ಶಾಲೆಯ ಹೊರೆ (ಮಾನಸಿಕ )ಯನ್ನು ಅಲ್ಲಿಯೇ ಬಿಟ್ಟು  ಮನೆಗೆ . ಶಾಲೆಯ ಚಟುವಟಿಕೆ ಬಗ್ಗೆ ಕೇಳುವವರು ಯಾರೂ ಇಲ್ಲ

ಯಾರು ಹೆಚ್ಚು ಅದೃಷ್ಟ ವಂತರು ಎಂದು ಗೊತ್ತಿಲ್ಲ .

ಭಾನುವಾರ, ಆಗಸ್ಟ್ 6, 2023

ಓದಿ ಮೆಚ್ಚಿದ ಪುಸ್ತಕ ಕೀಟಲೆಯ ದಿನಗಳು

 ಬ್ಯಾಂಕ್ ವೃತ್ತಿಯಿಂದ ನಿವೃತ್ತರಾದ ಮೇಲೆ (೬೦ ರ ನಂತರ )ಬರೆಯಲಾರಂಬಿಸಿ ಮೌಲಿಕ ಕೃತಿಗಳನ್ನು ಕೊಟ್ಟವರು  ಶ್ರೀ ಶ್ರೀನಿವಾಸ ವೈದ್ಯರು . ಅವರ ಬರಹಗಳಲ್ಲಿ ಎದ್ದು ಕಾಣುವುದು  ಒಳ್ಳೆಯ ಹಾಸ್ಯ  ಪ್ರಜ್ಞೆ . ವೃತ್ತಿಯಲ್ಲಿ ಇದ್ದುಕೊಂಡೇ ಬರೆದು ಪ್ರಸಿದ್ದರಾದವರು ಶ್ರೀ ಡುಂಡಿರಾಜ್ . ಡುಂಡಿರಾಜ್ ಕೃಷಿ ಪದವೀಧರರು . ಹನಿಗವನ ಕೃಷಿ ಗೆ ಪ್ರಸಿದ್ದರಾದವರು . ಈಗ ನನ್ನ ಕೈಗೆ ಒಂದು ಕೃತಿ ಬಂದಿದೆ .ಅದರ ಲೇಖಕ ಶ್ರೀ ಏನ್ ಎಸ ಲಕ್ಷ್ಮೀನಾರಾಯಣ ಅವರು .ಕೃಷಿ ಪದವೀಧರ ,ಬ್ಯಾಂಕ್ ಉದ್ಯೋಗಿ . ೬೫ ವಯಸ್ಸಿನ ಮೇಲೆ ಅವರ' ಆಕಸ್ಮಿಕ ಆತ್ಮಕಥನ  ಕೀಟಲೆಯ ದಿನಗಳು 'ಪ್ರಕಟವಾಗಿದೆ . ಇವರು ರೈತ ಹೋರಾಟದಲ್ಲಿ ಕೂಡಾ ಸಕ್ರಿಯವಾಗಿ ಪಾಲುಗೊಂಡವರು . ಪುಸ್ತಕದುದ್ದಕ್ಕೂ ಅವರ ಹಾಸ್ಯ ಪ್ರಜ್ಞೆ ಎದ್ದು ಕಾಣುವುದು . 

ಪುಸ್ತಕದ ಮೊದಲ ಲೇಖನ ನಾಟಿಕೋಳಿ v /s ಕೆಂಟಕಿ ಫ್ರೈಡ್ ಚಿಕನ್ . ಊರಿಂದ ಬಂದ ಹಿರಿಯರು ಇನ್ನೇನು ಮರಳಿ  ಹೊರಡುತ್ತೇನೆ ಎಂದಾಗ ಅಮ್ಮ ಮಧ್ಯಾಹ್ನ ಕೋಳಿ ಸಾರು ಮಾಡುವೆ ಉಂಡು ಹೋಗಿ ಎಂದು ಒಪ್ಪಿಸಿ  ಭಾರತೀಯ ಕಾಲಮಾನ ಮುಂಜಾನೆ ಹತ್ತು ಗಂಟೆಗೆ ಮಕ್ಕಳ ಬಳಿ ಗೂಡಿನಿಂದ ಸಾಕಿದ  ಕೋಳಿ ತರಲು ಹೇಳಿ ಮಸಾಲೆ ಅರೆಯಲು ತೊಡಗುತ್ತಾರೆ . ಆದರೆ ಕೋಳಿ ತಪ್ಪಿಸಿ ಕೊಂಡು ಓಡಾಡಿ ಕೊನೆಗೂ ಸಿಕ್ಕು ಊಟ ಮುಗಿದಾಗ ಭಾರತೀಯ ಕಾಲಮಾನ ೧೫-೩೦ . (ಮಿತ್ರ ಭಾಸ್ಕರ ಕೊಡಿ೦ಬಾಳ ಅವರ ಹರಕೆಯ ಕೋಳಿ ಉಪ್ಪಿನಂಗಡಿ ಪೇಟೆಯಲ್ಲಿ ತಪ್ಪಿಸಿ ಕೊಂಡ ಕತೆ ನೆನಪಿಗೆ ಬಂತು .).

ಲೇಖಕ ಬರೆಯುತ್ತಾರೆ ''ಈ ಕೋಳಿ ಬೇಟೆ ಆ ಕಾಲದ ಮನೆ ಮನೆಯ ಕಥೆಯೇ ಆಗಿತ್ತು . 

ಆದರೆ ಈಗೆಲ್ಲಿದೆ ಆ ಸಂಭ್ರಮ ?

ಒಂದು ಫೋನ್ ಕರೆ ಸಾಕು .ಹಸಿ ಮಾಂಸವೂ ,ಕೋಳಿ ಮೀನುಗಳೂ .ಬಿಸಿ ಬಿಸಿ ದೇಶ -ವಿದೇಶಿ ಕಂಪನಿ ಗಳ  ತಿನಿಸು ಭಕ್ಷ್ಯಗಳೂ ,ಕೇವಲ ಮೂವತ್ತು ನಿಮಿಷದಲ್ಲಿ ನಿಮ್ಮ ಟೇಬಲ್ ಮೇಲೆ ಕಂಗೊಳಿಸುತ್ತವೆ .ಆ ದಿನಗಳ ಕೋಳಿ ಬೇಟೆಯೂ .ಅತಿಥಿಗಳ ಇರಿಸು ಮುರುಸೂ ,ಮಸಾಲೆ ಸಾಮಗ್ರಿಗಳನ್ನು ಹೊಂದಿಸುವ ಕಷ್ಟಗಳು ಯಾವುವೂ ಈಗಿಲ್ಲ .ದುಡ್ಡಿಗೂ ಬರವಿಲ್ಲ .ಬರವಿರುವುದು  ಆ ಆತ್ಮೀಯತೆಯಲ್ಲಿ ;ಅಡಿಗೆ ಮಾಡಿ ಬಡಿಸುವ ಸಂಭ್ರಮದಲ್ಲಿ .ಕೋಳಿ ಬೇಟೆಯ ಮಕ್ಕಳಾಟದಲ್ಲಿ .ಆ ಚಡಪಡಿಕೆಯಲ್ಲಿ .ಆ' ಇಲ್ಲದಿರುವಿಕೆಯ ಶ್ರೀಮಂತಿಕೆ ಯಲ್ಲಿ 'ಈಗಿನ 'ಇರುವಿಕೆಯ ಬಡತನದಲ್ಲಿ ಅಲ್ಲ .''

ಪುಸ್ತಕದುದ್ದಕ್ಕೂ ಹಾಸ್ಯ ಲೇಪಿತ  ಪನ್ ಗಳೂ ,ನುಡಿಗಟ್ಟುಗಳೂ ಇದ್ದು ನಗೆ ಉಕ್ಕಿಸಿದರೆ(ವೈ ಏನ್ ಕೆ ಬರಹ ನೆನಪಿಸುವ ) ,ಹೃದಯ ಭಾರವಾಗಿಸುವ ಆತ್ಮೀಯ ಘಟನೆಗಳ ಚಿತ್ರಣವೂ ಇದೆ .ಕೆಲ ನುಡಿಗಟ್ಟುಗಳ ಉದಾ : ಅಕುಡುಕ ,ಕುಡಿಯದ ಕೂಸು (ಕುಡಿಯದವನು ).ಎಲೆಮಾನವ (ಇಸ್ಪೀಟು ಎಲೆಗೆ ದಾಸ ),ಗುಂಡು ಮೇಜಿನ ಪರಿಷತ್ ,ಒಂದು ಹಣ್ಣೂ ಬಿಡದೆ ಕದಿ ಯುವ 'ಬೋಳುವಾರರು'ನಿತ್ಯ ಸಂಜೆ ಕ್ಲಬ್ ಗೆ ಭೇಟಿ ನೀಡುವ 'ಸಂಜೇವ 'ರರು ಇತ್ಯಾದಿ . 

ಒಟ್ಟಿನಲ್ಲಿ ಇತ್ತೀಚೆಗೆ ಖರೀದಿಸಿ ಓದಿದ ಸಂತೋಷ ಪಟ್ಟ ಪುಸ್ತಕ .  ಇವರಿಂದ ಇನ್ನೂ ಒಳ್ಳೆಯ ಕೃತಿಗಳನ್ನು ನಿರೀಕ್ಷಿಸ ಬಹುದು ಎಂದು ಖಂಡಿತವಾಗಿ ಹೇಳುತ್ತೇನೆ  . 




ಪತ್ರಿಕೆ ಓದುಗರಿಗೆ ಓಮ್ನಿ ಪೊಟೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದ  ಒಂದು ಹೆಸರು ಪ ರಾಮಕೃಷ್ಣ ಶಾಸ್ತ್ರಿ . ಶಿಷ್ಟ ಶಿಕ್ಷಣ ಹೆಚ್ಚು ಪಡೆಯದ ,ಕುಗ್ರಾಮದಿಂದ ಬಂದ  ಇವರು  ಸಾಹಿತ್ಯದ ಎಲ್ಲಾ ಪ್ರಾಕಾರ ಗಳಲ್ಲಿ ಕೈಯ್ಯಾಡಿಸಿದ್ದೇ ಅಲ್ಲದೆ ,ಯಕ್ಷಗಾನ ,ಕೃಷಿ ,ರಾಜಕೀಯ ,ಪತ್ರಿಕಾ ರಂಗ ಇತ್ಯಾದಿ ಗಳ ಒಳ ಹೊಕ್ಕ ಅನುಭವ  ಇರುವವರು   . 

ಇಂತಹ ಸಾಧಕರಿಗೆ ಎಪ್ಪತ್ತು ತುಂಬಿದ ಅವಸರದಲ್ಲಿ "ಬದುಕು ಬರಹ ಬವಣೆ "ಎಂಬ ಹೊತ್ತಿಗೆ ಹೊರ ತಂದಿದ್ದಾರೆ . ನಿರೂಪಣೆ ಅವರ ಪತ್ರಕರ್ತ ಪುತ್ರ ಲಕ್ಷ್ಮೀ ಮಚ್ಚಿನ ಅವರದ್ದು . ಈ ಹಿರಿಯರ ಬದುಕಿನ ಅನುಭವಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಚಿತ್ರಿಸಿದ್ದಾರೆ . ಲೇಖಕ ನಾಗಿ ಜೀವನ ಸಾಗಿಸ ಬಲ್ಲೆ ಎಂದು ಅರ್ಥ ಸಂಪಾದನೆ ಕೂಡಾ ಉದ್ದೇಶವಾಗಿ ಬರೆಯಲು ಆರಂಬಿಸಿ ಸಾಹಿತಿಯಾಗಿ ರೂಪು ಗೊಂಡ ಬಗೆ ,ಕೃಷಿಕನಾಗಿ ಅನುಭವ , ಎದುರಿಸಿದ ಕಾರ್ಪಣ್ಯ ಮುಜುಗರಗಳು ,ಸಂತೋಷ ಗಳ ವಿವರ ಇದೆ . 


 ,