ಡಾ ಸುಲೇಖಾ ವರದರಾಜ್ ಪುತ್ತೂರು ಇ ಎಸ ಐ ವೈದ್ಯಾಧಿಕಾರಿ ಯಾಗಿ ಸುಧೀರ್ಘ ಸೇವೆ ಸಲ್ಲಿಸಿ ಕೆಲ ತಿಂಗಳುಗಳ ಹಿಂದೆ ಸ್ವಯಂ ನಿವೃತ್ತಿ ಹೊಂದಿದರು . ತಮ್ಮ ಪ್ರಾಮಾಣಿಕ ಸೇವೆಯಿಂದ ಜನಾನುರಾಗಿದ್ದವರು . ಮಕ್ಕಳ ತಜ್ಞೆ ,ಹದಿಹರೆಯದವರ ಮಾನಸಿಕ ಸಮಸ್ಯೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಇವರು ವೈದ್ಯಕೀಯ ಸಮ್ಮೇಳನಗಳಲ್ಲಿ ಬಹು ಬೇಡಿಕೆ ಯುಳ್ಳ ವೈದ್ಯೆ . ವೈದ್ಯರಲ್ಲಿ ಸಾಹಿತ್ಯ ಸಂಗೀತ ಲಲಿತ ಕಲೆಯಲ್ಲಿ ಆಸಕ್ತಿ ಇರುವವವರು ಕಡಿಮೆ ,ಒಂದು ವೇಳೆ ಇದ್ದರೂ ಸಮಯ ಇರುವುದಿಲ್ಲ . ಆದರೆ ಸುಲೇಖಾ ಅವರ ಆಸಕ್ತಿ ಬಹುಮುಖ .. ಸರಿಯಾಗಿ ಅವರ ಪತಿ ಕನ್ನಡ ಪ್ರಾಧ್ಯಾಪಕ ,ಸಾಹಿತಿ ಮತ್ತು ಸಂಗೀತ ಪ್ರಿಯ . ಸರಕಾರಿ ಸೇವೆಯಿಂದ ನಿವೃತ್ತಿ ಪಡೆದ ಮೇಲೆ ತಮ್ಮ ಮನಸಿಗೆ ಹತ್ತಿರವಾದ ವಿಷಯಗಳ ಮೇಲೆ ಸಮಯ ವಿನಿಯೋಗಿಸುತ್ತಿರುವರು .
ವರದರಾಜ್ ಚಂದ್ರಗಿರಿ ಮೊನ್ನೆ ಮೊನ್ನೆ ಸೇವಾ ನಿವೃತ್ತಿ ಹೊಂದಿರುವರು .ಬೆಟ್ಟಂಪಾಡಿ ಸರಕಾರಿ ಕಾಲೇಜು ಪ್ರಿನ್ಸಿಪಾಲ್ ಅವರ ಸೇವೆಯ ಕೊನೆಯ ಹುದ್ದೆ . ಈ ಕಾಲೇಜು ಯಾವುದೇ ಖಾಸಗಿ ಸಂಸ್ಥೆಗೆ ಕಡಿಮೆ ಇಲ್ಲದಂತೆ ಮಾಡುವಲ್ಲಿ ಇವರ ಕೊಡುಗೆ ಅಮೂಲ್ಯ . ಇವರ ನೇತೃತ್ವದಲ್ಲಿ ನಡೆದ ವಿಚಾರ ಸಂಕಿರಣಗಳು ,ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನೇಕ .ನಾನೂ ಎರಡು ಕಾರ್ಯಕ್ರಮಗಳಿಗೆ ಹಾಜರಾಗಿ ಆನಂದ ಪಟ್ಟಿದ್ದೇನೆ . ಸ್ವಯಂ ಸಾಹಿತಿಯಾದ ಇವರು ಖ್ಯಾತ ಕತೆಗಾರ ದಿ ವ್ಯಾಸ ಅವರ ಸಮೀಪ ಬಂಧು . ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ ನ ಮುಖ್ಯಸ್ಥನಾಗಿ ಹಲವು ಒಳ್ಳೆಯ ಕಾರ್ಯಕ್ರಮಗಳನ್ನು ಏರ್ಪಡಿಸಿದ ಗರಿಮೆ ಅವರದು .. ಕಾರ್ಕಳ ಕಾಲೇಜ್ ನಲ್ಲಿ ಇದ್ದಾಗ ಹಿರಿಯ ಸಂಘಟಕ ರಾಮಚಂದ್ರ ಅವರ ಜತೆಗೆ ಇವರು . ನನಗೆ ರಾಮಚಂದ್ರ ಅವರನ್ನು ಪರಿಚಯಿಸಿದವರೇ ಚಂದ್ರಗಿರಿ ಅವರು
ಚಂದ್ರಗಿರಿ ದಂಪತಿಗಳ ಮನೆಯ ಹೆಸರು ಸಮರಸ . ಅನ್ವಯಾರ್ಥ ,ಸಾಹಿತ್ಯದಲ್ಲಿಯೂ ಬದುಕಿನಲ್ಲಿಯೂ . ಇಬ್ಬರದೂ ಸರಳ ವ್ಯಕ್ತಿತ್ವ ,ನೇರ ನುಡಿ . ಪುತ್ತೂರಿಗೆ ಬಂದು ನಾನು ಮತ್ತು ನನ್ನ ಕುಟುಂಬ ದ ಸಂಪಾದನೆ ಎಂದರೆ ಇಂತಹವರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸ್ನೇಹ . ಚಂದ್ರಗಿರಿ ದಂಪತಿಗಳಿಗೆ ಇಬ್ಬರು ಮಕ್ಕಳು . ಮಗ ಉದ್ಯೋಗದಲ್ಲಿ ಇದ್ದು ,ಮಗಳು ವಿದ್ಯಾರ್ಥಿ .
ಸರಕಾರಿ ಸೇವೆಯಿಂದ ನಿವೃತ್ತಿ ಪಡೆದ ಈ ದಂಪತಿಗಳು ತಮ್ಮ ಹೃದಯಕ್ಕೆ ಹತ್ತಿರವಾದ ಚಟುವಟಿಕೆಗಳಲ್ಲಿ ಪ್ರವೃತ್ತರಾಗಲಿ . ಆಯುರಾರೋಗ್ಯ ಸೌಖ್ಯ ಅವರಿಗಿರಲಿ .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ