ಬೆಂಬಲಿಗರು

ಶುಕ್ರವಾರ, ಫೆಬ್ರವರಿ 28, 2025

 ಸುಧೀರ್ಘ  ಪ್ರಾಮಾಣಿಕ ಸೇವೆಯ ನಂತರ ಶ್ರೀಮತಿ ಲೀಲಾವತಿ (ಲೀಲಕ್ಕ ) ಇಂದು ಸ್ವಯಮ್ ನಿವೃತ್ತಿ ಪಡೆಯುತ್ತಿದ್ದಾರೆ . ಪುತ್ತೂರಿನ  ಮಾತೆ ಡಾ ಗೌರಿ ಪೈ ಅವರ ಗಿರಿಜಾ ಕ್ಲಿನಿಕ್ ನಲ್ಲಿ ನರ್ಸಿಂಗ್ ಸಹಾಯಕರಾಗಿ ತರಬೇತು ಗೊಂಡು ಆ ಆಸ್ಪತ್ರೆಯಲ್ಲಿ ದಶಕಗಳ ಸೇವೆ ಸಲ್ಲಿಸಿ  ನಂತರ ನಮ್ಮ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ  ನಿರ್ವಹಣೆಯಲ್ಲಿ ಸಹಾಯಕಿ ಯಾಗಿದ್ದ ಇವರು ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಅಚ್ಚು ಮೆಚ್ಚು . 

   ಸದಾ ನಗುಮುಖ ,ತಾಳ್ಮೆ ಮತ್ತು ಸಹಾನುಭೂತಿ ಇವರ ಜನಪ್ರಿಯತೆಯ ಗುಟ್ಟು . ತಮ್ಮಿಂದ ಅಥವಾ ತಮ್ಮ ಬಳಗದಿಂದ ಸಣ್ಣ ಲೋಪವಾದರೂ ಅದನ್ನು ಸಮರ್ಥಿಸ ಹೋಗದೆ  ಕ್ಷಮೆ ಕೇಳುವ ದೊಡ್ಡ ಮನಸು ಇವರದು . ರೋಗಿಗಳ ಸಂಬಂಧಿಕರು ಇವರನ್ನು ತಮ್ಮ ಆಪ್ತ ಬಳಗದವರು ಎಂದು ಪ್ರೀತಿಯಿಂದ ಗುರುತಿಸುವರು .ಗಿರಿಜಾ ಕ್ಲಿನಿಕ್ ನಲ್ಲಿ ಹುಟ್ಟಿ ಈಗ ನಮ್ಮಲ್ಲಿ ಹೆರಿಗೆಗೆ ಬರುವ ಮಹಿಳೆಯರ ಅಮ್ಮ ಅಜ್ಜಿ ಗೆ ಇವರು ಪರಿಚಿತರು . 

 ಆಸ್ಪತ್ರೆ ಸ್ವಾಗತ ಕಾರಿಣಿಯವರಲ್ಲಿ ಹಿರಿಯರಾದ ಇವರು ಮುಂಜಾನೆ ಬಂದೊಡನೆ ಕ್ರಿಕೆಟ್ ಕ್ಯಾಪ್ಟನ್ ನಂತೆ  ಓ ಪಿ ಡಿ  ಸುತ್ತ ಕಣ್ಣು ಹಾಯಿಸಿ  ಎಲ್ಲಿ ಎಲ್ಲಿ ಯಾವ ಫೀಲ್ಡರ್ ಆದೀತು ಎಂದು ಸಹೋದ್ಯೋಗಿಗಳ ಜೊತೆ ಚರ್ಚಿಸಿ ನಿರ್ಧರಿಸುವರು . ವೀಲ್ ಚೇರ್ ಇತ್ಯಾದಿ ಅವಶ್ಯ ವಿರುವವರಿಗೆ ಅದರ ವ್ಯವಸ್ಥೆ ಮಾಡುವರು . ತುರ್ತು ಇಸಿಜಿ ಇತ್ಯಾದಿ ಬೇಕಾದಲ್ಲಿ ತಾವೇ ಮಾಡಿ ತೋರಿಸುವರು . 

ಇಂತಹ ಮಾನವೀಯತೆ ಮೂರ್ತಿವೆತ್ತ ,ಪ್ರಾಮಾಣಿಕ ಲೀಲಕ್ಕ ಬಿಟ್ಟು ಹೋಗುವುದು ನಿಜಾರ್ಥದಲ್ಲಿ ತುಂಬಲಾರದ ನಷ್ಟ . ಅವರು ಮಾಡಿದ ಸೇವೆ ನಿಜಾರ್ಥದಲ್ಲಿ ದೇವರ ಸೇವೆ  ಮುಂದಿನ ದಿನಗಳು ಅರೋಗ್ಯ ಸುಖ ಶಾಂತಿಯಿಂದ ಇರಲಿ 



 








 

ಸೋಮವಾರ, ಡಿಸೆಂಬರ್ 16, 2024


ನಿನ್ನೆ ಮುಂಜಾನೆ ಪುತ್ತೂರಿನ ವಿವಿದೋದ್ಧೇಶ ತರಬೇತಿ ಸಂಸ್ಥೆ  ಐ ಅರ ಸಿ ಎಂ ಡಿ  ಯ ಆಶ್ರಯದಲ್ಲಿ ಅಬಾಕಸ್ ಸ್ಪರ್ಧೆಯಲ್ಲಿ ಬಾ ಜಯಶಾಲಿಯಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ . ಈ ಸಂಸ್ಥೆಯನ್ನು ನಡೆಸುವವರು ಉತ್ಸಾಹಿ ಯುವ ದಂಪತಿಗಳಾದ ಪ್ರಫುಲ್ಲ ಮತ್ತು ಗಣೇಶ್ . ಹೆಚ್ಚಾಗಿ ನನಗೆ ಸಂಬಂಧ ಪಡದ ಸಭೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತೇನೆ . ಆದರೆ ಈ ದಂಪತಿಗಳು ದಶಕದಿಂದ ನನ್ನ ಆತ್ಮೀಯ ವಲಯದಲ್ಲಿ ಇರುವ ಕಾರಣ ಕೇಳಿದ ಒಡನೇ ಒಪ್ಪಿಕೊಂಡೆ . 

ನಮಗೆ ಅಬಾಕಸ್ ನಂತಹ ಬೌದ್ಧಿಕ ಮೌಲ್ಯ ವರ್ಧನೋಪಾಯ ಶಿಕ್ಷಣ ಇರಲಿಲ್ಲ .ತಾಯಿ ಯವರ ಮಾರ್ಗದರ್ಶನ ದಲ್ಲಿ  ಇಪ್ಪತ್ತು ಇಪ್ಪಾತ್ಲಿ   (೨೦X ೨೦)ವರೆಗೆ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲಿನ ವರೆಗೆ ಬಾಯಿಪಾಠ ಆಗಿದ್ದು ,ಈಗ ಕೂಡಾ ಕ್ಯಾಲ್ಕುಲೇಟರ್ ಇಲ್ಲದೇ ಸಣ್ಣ ಪುಟ್ಟ ಕೂಡು ಕಳೆ ಗುಣಿಸು ಮಾಡಬಲ್ಲೆ . ಕ್ಯಾಲ್ಕುಲೇಟರ್ ಈಗ ಸುದ್ದಿ ಮಾಡುತ್ತಿರುವ ಕೃತಕ ಬುದ್ಧಿಮತ್ತೆಯ  ಪ್ರಾಚೀನ ರೂಪ . ಕೃತಕ ಬುದ್ದಿಮತ್ತೆ  ಯ  ಮೇಲೆ ಪೂರ್ಣ ಅವಲಂಬಿಸಿದರೆ ನೈಸರ್ಗಿಕ ಬುದ್ದಿ ಕುಂಠಿತ ವಾಗ ಬಹುದು . 

ನಿನ್ನೆಯ ಸಭೆಯಲ್ಲಿ ಮದ್ರಾಸ್ ಐ ಐ ಟಿ ಯ ಶ್ರೀ ಸಾಯಿ ಗಣೇಶ್ ಮತ್ತು ಬೆಂಗಳೂರು ಜಿ ಕೆ ವಿ ಕೆ ಯ ಡಾ ಅಶೋಕ್ ಕುಮಾರ್ ಅವರ ಪರಿಚಯ ಆಯಿತು . ಈ ಯುವ ಪ್ರತಿಭಾವಂತರು ಪುಟ್ಟ ಮಕ್ಕಳಿಗೆ ಸ್ವಯಂ ಆಸಕ್ತಿಯಿಂದ  ಗಣಿತ ದಂತಹ ವಿಷಯ ಹೇಳಿಕೊಡುತ್ತದ್ದರು ಎಂದು ತಿಳಿಯಿತು .ಸಣ್ಣ ಮಕ್ಕಳಿಗೆ ಕಳಿಸುವುದು ಕಷ್ಟ ಮತ್ತು ತಾಳ್ಮೆ ಬೇಕು . ತಮ್ಮ ಆತ್ಮ ತೃಪ್ತಿಗಾಗಿ  ವಿದ್ಯರ್ಥಿಗಳನ್ನು ಹುಡುಕಿ ಕಲಿಸುವುದು ಮೆಚ್ಚ ಬೇಕಾದದ್ದು . 

ಶನಿವಾರ, ಡಿಸೆಂಬರ್ 14, 2024

 Dr Dhal Singh Chandel on X ...


ನನ್ನ ತಂಗಿ ಪದ್ಮಾವತಿ ಪುತ್ತೂರು ಪಾಂಗಾಳಾಯಿ ಯಲ್ಲಿ  ಹೊಸ ಮನೆ ನಿರ್ಮಿಸಿದ್ದು ತಿಂಗಳ ಹಿಂದೆ ಸರಳವಾಗಿ ಗೃಹ ಪ್ರವೇಶ ಮಾಡಿದ್ದರು . ಅಣ್ಣನಾದ ನನಗೂ ಆಹ್ವಾನವಿರಲಿಲ್ಲ ;ಅಂತ ನನಗೇನೂ ಬೇಸರವಿಲ್ಲ . ಒಂದನೆಯದಾಗಿ ಇದು ಎರಡನೇ ಮನೆ ಒಕ್ಕಲು .ಎರಡನೆಯದು ಗೃಹ ಪ್ರವೇಶದ  ಪ್ರಯುಕ್ತ ಕುಶಲ ಸಂಘದ ವಿಶೇಷ ಅಧಿವೇಶನ ,ಉಪಹಾರ ಸಹಿತ . ಪುತ್ತೂರಿನಲ್ಲಿ ನಗೆ ಪ್ರಿಯರ ಕೂಟ ಇದ್ದು ಅದರ ಪ್ರಧಾನ ಕಚೇರಿ  ,ಸರ್ವ ಜನಹಿತ ಸಂಘಟನೆಗಳಿಗೂ ಆಶ್ರಯ ತಾಣ ವಾದ  ಅನುರಾಗ ವಠಾರ (ಪುರಂಧರ ಭಟ್ ಮಾಳಿಗೆ  ಮನೆ ).ರಾಜೇಶ್ ಪ್ರೆಸ್  ರಘುನಾಥ ರಾಯರು ,ಸುಧಾಮ ಕೆದಿಲಾಯ ,ತುಳಸೀದಾಸ್ ,ಸುಬ್ರಹ್ಮಣ್ಯ ಶರ್ಮ ,ಶಂಕರಿ ಶರ್ಮ,ದತ್ತಾತ್ರೇಯ ರಾವ್  .ಅರ್ತಿಕಜೆ ದಂಪತಿಗಳು ,ರಮೇಶ ಬಾಬು ಇತ್ಯಾದಿ ಹಿರಿಯರು ಇದರಲ್ಲಿ ಇದ್ದಾರೆ . ನಕ್ಕು ಹಗುರಾಗುವ ವೇದಿಕೆ

ಈ ತಂಗಿ ಸಣ್ಣವಳಿರುವಾಗ ಜಡೆಗೆ ಸಿಕ್ಕಿಸುವ ಒಂದು ಐಟಂ ಬಂತು . ಎರಡು ಗೋಲಿಗಳನ್ನು ಒಂದು ಬ್ಯಾಂಡಿನಲ್ಲಿ ಕಟ್ಟಿ ಅದರ ನಡುವೆ ಜಡೆ . ಆಗೆಲ್ಲಾ ಶಾಲೆಗೆ ಹುಡುಗಿಯರು ಎರಡು ಜಡೆ ಹಾಕಿಕೊಂಡು ಹೋಗುವುದು . ಈ ವಸ್ತುವಿಗೆ ಲವ್ ಇನ್ ಟೋಕಿಯೋ ಎಂದು ಕರೆಯುತ್ತಿದ್ದರು . ಆ ಹೆಸರಿನ  ಸಿನಿಮಾ ನಾಯಕಿ ಅದನ್ನು ಹಾಕಿಕೊಂಡಿದ್ದ ಕಾರಣ ಇರಬೇಕು .ನನ್ನ ಅಕ್ಕ ತಂಗಿಯರ ಬಾಯಲ್ಲಿ ಅದು ಲವಿನ್ ಟಕಿ ಅದು ಹೃಸ್ವ ವಾಯಿತು . ಒಮ್ಮೆ ತಂದೆಯವರು ವಿಟ್ಲ ಪೇಟೆಗೆ ಹೋಗುವಾಗ ತಮಗೂ ಅದನ್ನು ತಂದು ಕೊಡುವಂತೆ ದುಂಬಾಲು ಬಿದ್ದರು . ತಂದೆಯವರು  ವಿಟ್ಲ ಪುತ್ತು  ಆಚಾರ್ರ ಫ್ಯಾನ್ಸಿ ಸ್ಟೋರಿಗೆ ತಲುಪುವಾಗ ಅದರ ಹೆಸರು ಟಂಗ್  ಟಕಿ ಎಂದು ಆಯಿತು .ಆದರೂ ಬೇಕಾದ ವಸ್ತು ತೊಂದರೆಯಿಲ್ಲದೇ ಬಂತು . 

ನಮ್ಮ ತಾಯಿ ತುಂಬಾ ಕಟ್ಟು ನಿಟ್ಟು . ಜೋಕ್ ಮಾಡಿಕೊಂಡು ಜೋರಾಗಿ ನಗುತ್ತಿದ್ದರೆ ,ಕಣ್ಣು ಅರಳಿಸಿ "ಎಂತ ಹೆದರಿಕೆ ಇಲ್ಲದ ನಗೆ "ಎಂದು ಗದರಿಸುವರು .ನನ್ನ ಮೇಲಂತೂ ಅವರಿಗೆ ಯಾವಾಗಲೂ ಅಪ ಧೈರ್ಯ .ಎಲ್ಲಿಗೆ ಹೋಗುವಾಗಲೂ ಬೆಗುಡು ಬೆಗುಡು ಮಾತನಾಡ (ಅಂದರೆ ಅತಿ ಹಾಸ್ಯ ಬೇಡ )..ಅವರು ಮನಸು ತೆರೆದು ನಕ್ಕದ್ದು ನಾನು ಕಂಡಂತೆ  ಬೆಂಗಳೂರಿಗೆ ವಾಲ್ವೊ ಬಸ್ ನ  ವಿಡಿಯೋ ದಲ್ಲಿ ಕಾಮನ ಬಿಲ್ಲು ಸಿನಿಮಾ ದಲ್ಲಿ ರಾಜಕುಮಾರ್ ಅಳುತ್ತಿರುವ ಮಗುವಿಗೆ ಸೀರೆ ಉಟ್ಟು ಬಾಟ್ಲಿ ಹಾಲು ಕುಡಿಸುವ ದೃಶ್ಯ ನೋಡಿ . ಹಾಗೆ ನಮ್ಮ ಹಾಸ್ಯ ಪ್ರಜ್ಞೆ ಸುಪ್ತಾವಸ್ಥೆ ಯಲ್ಲಿ ಇದ್ದು ಈಗ ಪ್ರದರ್ಶನ ಗೊಳ್ಳುತ್ತಿವೆ . ತಾಯಿಗೆ ನಾವು ಹತ್ತು ಮಕ್ಕಳು ,ನಮ್ಮನ್ನೆಲ್ಲಾ  ಒಂದು ದಾರಿಗೆ ತರಬೇಕಾದರೆ ಅವರು ಪಟ್ಟ ಪಾಡು ಊಹಿಸಿ ಕೊಳ್ಳಿ ..ಗಂಡು ಹುಡುಗರಿಗೆ ಬೆತ್ತದ ರುಚಿ ತೋರಿಸುತ್ತಿದ್ದರೂ ಹುಡುಗಿಯರು ಮದುವೆಯಾಗಿ ಹೋಗುವವವರು ಎಂದು ವಿನಾಯತಿ ಇತ್ತು

ಭಾನುವಾರ, ಡಿಸೆಂಬರ್ 8, 2024

  ಪಾಸ್ ಫೈಲ್ 

ನಾವು ಪ್ರಾಥಮಿಕ ವಿದ್ಯಾಭ್ಯಾಸ ಮಾಡುವ ಸಮಯ; ದೊಡ್ಡ ರಜೆ ಕಳೆದು ತರಗತಿ ಆರಂಭವಾಗುವ ದಿನ ಈಗಿನಂತೆ ವಿದ್ಯಾರ್ಥಿಗಳನ್ನು  ಸ್ವಾಗತಿಸುವ ಪರಿಪಾಡಿ ಇರಲಿಲ್ಲ . ಕ್ಲಾಸ್ ಅಧ್ಯಾಪಕರು ಹಾಜರಿ ಪಟ್ಟಿಯಿಂದ ಹೆಸರು ಕೂಗಿ ಕರೆಯುವರು .ಅವರೆಲ್ಲಾ ಪಾಸ್ .ತಮ್ಮ ಸ್ಲೇಟು ಕಡ್ಡಿ ಸರಂಜಾಮು ಹೊತ್ತುಕೊಂಡು ಮೇಲಿನ ಕ್ಲಾಸ್ ಇರುವ ಕೊಠಡಿಗೆ ಹೋಗಬೇಕು . ಹೆಸರು ಕರೆಯದೇ ಇದ್ದವರು  ಫೈಲು . ಯಾರೆಲ್ಲ ಫೈಲು ಕೊನೆಗೇ ತಿಳಿಯುವುದು .ನಮ್ಮ ಮಿತ್ರರು ಪಾಸ್ ಆಗದಿದ್ದರೆ ಅವರ ಜತೆ ತಪ್ಪುವುದು ಎಂಬ ಬೇಸರ . ಆ ದಿನ ಕ್ಲಾಸ್ ಇಲ್ಲ . ಮರಳುವ ದಾರಿಯಲ್ಲಿ ಹೊಲಗದ್ದೆಯಲ್ಲಿ ಕೆಲಸ ಮಾಡುವವರು ಎಲ್ಯಣ್ಣೇರ್ ಪಾಸಾ ಎಂದು ಕೇಳುವರು . ಪಾಸಾಗಲಿ ಫೈಲು ಅಗಲೀ ಈಗಿನ ಹಾಗೆ ಹೊಗಳಿ ಏರಿಸುವ ಅಥವಾ ಹೀಗೆಳೆಯುವ ಪದ್ಧತಿ ಇರಲಿಲ್ಲ . ಫಲಿತಾಂಶ ದಿಂದ ಹತಾಶೆ ಗೊಂಡು ಆತ್ಮ ಹತ್ಯೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇತ್ತು .ಈಗಿನ ಸರಕಾರಿ ಶಾಲೆಗಳಂತೆ ಕಡ್ಡಾಯ  ಹೋಲ್ ಸೇಲ್ ಪಾಸ್ ಮಾಡುವ ಪದ್ಧತಿ ಇರಲಿಲ್ಲ . 

ಪಾಸ್ ಆದರೆ ಮೇಲ್ತರಗತಿಯಲ್ಲಿ ಇರುವ ನಮ್ಮ ಮಿತ್ರರ ಬಳಿ ಅವರ ಉಪಯೋಗಿಸಿದ ಟೆಕ್ಸ್ಟ್ ಬುಕ್ ಅರ್ಧ ಬೆಲೆಗೆ ಖರೀದಿಸುತ್ತಿದ್ದೆವು . ನಮ್ಮ ದುರಾದೃಷ್ಟಕ್ಕೆ ಕೆಲವೊಮ್ಮೆ ಪಠ್ಯ ಪುಸ್ತಕ ಬದಲಾಗುತ್ತಿದ್ದವು . ನಾನು ನನ್ನ ಸೀನಿಯರ್  ಮುದ್ಕುಂಜ ದಿವಾಕರ ಪ್ರಭುಗಳ ಬಳಿ  ಪುಸ್ತಕ ಕೊಳ್ಳುತ್ತಿದ್ದೆ .ಅವರು ಪಠ್ಯ ಪುಸ್ತಕಗಳನ್ನು ಚೆನ್ನಾಗಿ ಇಟ್ಟು ಕೊಳ್ಳುತ್ತಿದ್ದರು

ಹೈ ಸ್ಕೂಲ್ ನಲ್ಲಿ ಕೂಡಾ ಇದೇ ರೀತಿ ಇತ್ತು . ಎಸ ಎಸ ಎಲ್ ಸಿ ಪರೀಕ್ಷೆ ಫಲಿತಾಂಶ ನವಭಾರತ ದಿನ ಪತ್ರಿಕೆಯಲ್ಲಿ ಮೊದಲು ಪ್ರಕಟವಾಗುತ್ತಿತ್ತು .ಶಾಲೆಗೆ ಆಮೇಲೆ ಬರುತ್ತಿತ್ತು ಎಂದು ನೆನಪು . ಪೇಪರ್ ನಲ್ಲಿ ಮೊದಲು ಫಸ್ಟ್ ಕ್ಲಾಸ್ ನ ಅಡಿಯಲ್ಲಿ ,ಆಮೇಲೆ ಸೆಕೆಂಡ್ ಮತ್ತು ಥರ್ಡ್ ಕ್ಲಾಸ್ ಕೆಳಗೆ ನಮ್ಮ ನಂಬರ್ ಇದೆಯೇ ಎಂದು ಹುಡುಕುತ್ತಿದ್ದೆವು .

ಶನಿವಾರ, ಡಿಸೆಂಬರ್ 7, 2024

ಯಾನ್ಲಾ ಈರ್ಲಾ ಸುಬ್ರಹ್ಮಣ್ಯದಾ ಜೋಡಿ 

ಇಂದು ಕುಕ್ಕೆ ಷಷ್ಟಿ . ಷಷ್ಟಿ ಸಮಯ ಸುಬ್ರಹ್ಮಣ್ಯದ ಬಳಿ ಕುಳ್ಕುಂದ ದಲ್ಲಿ ಜಾನುವಾರು ಸಂತೆ ನಡೆಯುತ್ತಿತ್ತು . ಘಟ್ಟದ ಮೇಲಿನಿಂದ ದನ ,ಎತ್ತು ,ಎಮ್ಮೆ ಮತ್ತು ಕೋಣಗಳನ್ನು ತಂದು ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದ್ದು ನಮ್ಮ ಜಿಲ್ಲೆಯ ರೈತರು ತಮಗೆ ಬೇಕಾದ ರಾಸುಗಳನ್ನು ಖರೀದಿಸಿ ಒಯ್ಯುತ್ತಿದ್ದರು . ಜಾತ್ರೆಗಾಗಿ ಪಶುಗಳನ್ನು ಪೋಷಿಸಿ ದಷ್ಟ ಪುಷ್ಟ ರನ್ನಾಗಿಸುತ್ತಿದ್ದಲ್ಲದೆ , ಕೊಂಬು ಕಿವಿ,ಮೂಗಿಗೆ ಅಲಂಕಾರ ಮಾಡಿರುತ್ತಿದ್ದರು. ಕೋಣಗಳ ಮೈಯ್ಯಿಂದ ಕೂದಲು ತೆಗೆದು ಎಣ್ಣೆ ಹಚ್ಚಿ ಫಳ ಫಳ ಹೊಳೆಯುವಂತೆ ಮಾಡುತ್ತಿದ್ದರು.  ಬ್ಯೂಟಿ ಪಾರ್ಲರ್ ನಿಂದ ಹೊರ ಬಂದ ಪಶುಯಗಳಂತೆ .ಉಳುಮೆಗಾಗಿ ಎತ್ತು ಮತ್ತು ಕೋಣಗಳ ಜೋಡಿಯನ್ನು ಅವರೇ ಮಾಡಿ ತರುತ್ತಿದ್ದು ಆಯ್ಕೆ ಸುಲಭ . ಸುಬ್ರಹ್ಮಣ್ಯದ ಜೋಡಿ ಬಹಳ ಪ್ರಸಿದ್ದ .ಅದಕ್ಕೇ ಒಂದು ತುಳು ಚಲ ಚಿತ್ರದಲ್ಲಿ ಯಾನುಲಾ ಈರ್ಲಾ ಸುಬ್ರಹ್ಮಣ್ಯದಾ ಜೋಡಿ ಎಂಬ ಪ್ರೇಮ ಗೀತೆ ಇದೆ . 

         ಕುಳ್ಕುಂದ ಜಾತ್ರೆಗೆ ನಾನು ಬಾಲ್ಯದಲ್ಲಿ ತಂದೆಯವರ ಜೊತೆಗೆ ಹೋದ ನೆನಪು ಇದೆ . ಅಲ್ಲಿ ಗೋಣಿ ಚೀಲ ಹಾಸಿ ಕೊಂಡು , ಚಳಿಗೆ (ಷಷ್ಟಿ ಸಮಯ ಭಾರೀ ಚಳಿ ಇರುತ್ತಿತ್ತು )ಕಂಬಳಿ ಹೊದ್ದು ಚಹಾ ಹೀರುತ್ತಿರುವ ಘಟ್ಟದ ಮೇಲಿನ ಕನ್ನಡ ಮಾತನಾಡುವ ವ್ಯಾಪಾರಿಗಳು .ಅವರೊಡನೆ  ಚೌಕಾಸಿ ಮಾಡುತ್ತಿರುವ ಗಿರಾಕಿಗಳು .ಹಿಂದೆ ಖರೀದಿಸಿದ ಜಾನುವಾರುಗಳನ್ನು ರಸ್ತೆ ಗುಂಟ ನಡೆಸಿ ಕೊಂಡೇ ಮನೆಗೆ ಬರುತ್ತಿದ್ದು ,ಕಾಲಾಂತರ ದಲ್ಲಿ ಟೆಂಪೋ ಗಳು ಬಳಕೆಗೆ ಬಂದವು

ಜಾನುವಾರು ಗಳಲ್ಲದೆ , ವಿವಿಧ ವಿನ್ಯಾಸದ ಕಂಬಳಿಗಳು , ಪಶು ಅಲಂಕಾರ ಸಾಧನಗಳು ಕೂಡಾ ಜಾತ್ರೆಯಲ್ಲಿ ಸಿಗುತ್ತಿದ್ದವು .

ನಿನ್ನೆ ಫೇಸ್ ಬುಕ್ ನಲ್ಲಿ ಸಹೋದರಿ ಒಬ್ಬರು ಜಯಂತ ಕಾಯ್ಕಿಣಿ ಯವರನ್ನು ಉಲ್ಲೇಖಿಸಿ ,"ಹೇಳಿ ಮಾಡಿಸಿದ ಜೋಡಿ ಎಂದರೆ ಚಪ್ಪಲಿ ಮಾತ್ರ ,ಬೇರೆಲ್ಲಾ ಹೋದಣಿಕೆ ಮಾತ್ರ " ಎಂಬ ಮಾತನ್ನು ಷೇರ್ ಮಾಡಿದ್ದು  ಸತ್ಯ ಎನಿಸಿತು .

ಮಂಗಳವಾರ, ಡಿಸೆಂಬರ್ 3, 2024

ಕಣ್ಣೀರ ಕತೆ

  



ಈರುಳ್ಳಿ ಅಥವಾ ನೀರುಳ್ಳಿ ಈಗ  ಹಚ್ಚದೇ ಕಣ್ಣೀರು ತರಿಸುತ್ತಿದೆ . ಎಲ್ಲಿಯೂ ಒಳ್ಳೆಯ ನೀರುಳ್ಳಿ ಸಿಗುತ್ತಿಲ್ಲ .ಸಿಕ್ಕರೂ ದರ ಕೇಳಿಯೇ ಕಣ್ಣೀರು ಬರುವಂತಿದೆ . ನಮ್ಮ ಆಸ್ಪತ್ರೆ ಇರುವ ಎ ಪಿ ಎಂ ಸಿ ರಸ್ತೆಯಲ್ಲಿ ಹಲವು ಜೀನಸು ಅಂಗಡಿಗಳು ಇದ್ದು ,ಎಲ್ಲಾ ಕಡೆ ಎಡ ತಾಕಿದೆ . ಕೆಲವು ಅಂಗಡಿಗಳು ಈ ಐಟಂ ತರಿಸುವುದೇ ನಿಲ್ಲಿಸಿವೆ . ಕಾರಣ ಬರುತ್ತ್ತಿರುವ ಮಾಲು ಕಳಪೆ ಮಟ್ಟದ್ದು .ಇನ್ನು ಕೆಲವು ಅಂಗಡಿಗಳು ಸಾಂಬಾರ್ ಈರುಳ್ಳಿ ಎಂಬ ಸಣ್ಣ ನೀರುಳ್ಳಿ ಮಾತ್ರ ಮಾರುತ್ತಿವೆ . ನಾನು ಯಾವ ವ್ಯವಹಾರಕ್ಕೂ ನಾಲಾಯಕ್ಕು ಆಗಾಗ ನನ್ನ ಮನೆಯವರು ಸೋದಾಹರಣ ಹೇಳಿ ಹೇಳಿ ನನ್ನಲ್ಲಿ ಕೀಳರಿಮೆ ಉಂಟು ಮಾಡಿರುತ್ತಾರೆ . ಅದನ್ನು ಹುಸಿ ಮಾಡಲು ಎಂದು ಪುತ್ತೂರಿನ ಸರ್ವ ಮಾಲ್ ,ಮಾರ್ಟ್ ಮತ್ತು ಅಂಗಡಿಗಳಿಗೆ ಭೇಟಿ ನೀಡಿದೆ .ಆದರೆ ವಧು ಅನ್ವೇಷಿಸುವ ಊರಿನ ಕೃಷಿಕ  ಯುವಕರ ಸ್ಥಿತಿ ಆಯಿತು .ಎಲ್ಲಿಯೂ ಒಳ್ಳೆಯ ನೀರುಳ್ಳಿ  ಪತ್ತೆ ಇಲ್ಲ . ಕೊನೆಗೆ ಮೊನ್ನೆ ಸೋಮವಾರ ಪುತ್ತೂರು ಸಂತೆ ಗೆ ಭೇಟಿ ಇತ್ತು ಎರಡು ಸುತ್ತು ಹೊಡೆದೆ . ಕೋವಿಡ್ ನಂತರ ಸಂತೆಗೆ ಭೇಟಿ ಇದುವೇ ಮೊದಲು . ಅಲ್ಲಿ ನನ್ನ ಕೆಲವು ರೋಗಿಗಳು ನನ್ನನ್ನು ನೋಡಿ ನಮಸ್ಕಾರ ಮಾಡಿ ಕನಿಕರ ಸೂಚಿಸಿದರು .'ಪಾಪ ಡಾಕ್ಸ್ರಿಗೆ ಪ್ರಾಕ್ಟೀಸ್ ಕಮ್ಮಿ ಆಗಿರ ಬೇಕು ,ಕಡಿಮೆಗೆ ತರಕಾರಿ  ಕೊಳ್ಳ್ಳುವಾ ಎಂದು ಬಂದಿರ ಬೇಕು ' ಎಂಬ ಮುಖ ಭಾವ .. 

ಕೊನೆಗೂ ಒಂದು ಮೂಲೆಯಲ್ಲಿ ಉರ್ದು ಮಾತನಾಡುವ ಸಾಹೇಬರಲ್ಲಿ ಪರವಾಗಿಲ್ಲ ಎನ್ನುವ ಮಾಲು ಕಂಡಿತು . ಕಿಲೋ ವಿಗೆ ರೂಪಾಯಿ ಅರುವತ್ತರಂತೆ ೫ ಕೆಜಿ ಕೊಂಡು ,ದಿಗ್ವಿಜಯ ಸಾದಿಸಿದವರಂತೆ ಪಕ್ಕದ ಅಂಗಡಿಯಿಂದ ಸೌತೆ ,ಬದನೆ ,ಹೀರೆ ಮತ್ತು ಮೂಲಂಗಿ ಚೀಲಕ್ಕೆ ಸೇರಿಸಿ ಕೊಂಡು ಆಸ್ಪತ್ರೆಗೆ ಹೋದೆ ದಿನವಿಡೀ ನೀರುಳ್ಳಿ ಚಿತ್ತನಾಗಿದ್ದೆ . 

ಸಂಜೆ  ಮನೆಗೆ ಸೇರಿದಾಗ ಸೈಕ್ಲೋನ್ ಮಳೆ ಆರಂಭವಾಗಿತ್ತು   ಹೆಂಡತಿಯ ಎದುರು ನೀರುಳ್ಳಿ ಇಟ್ಟು  ಮೀಸೆ ತಿರುವಾ (ನನಗೆ ಮೀಸೆ ಇಲ್ಲ ) ಎಂದು ಕರೆದರೆ ಅವಳು ಮಹಡಿಯಲ್ಲಿ ಕಿಟಿಕಿ ಬಳಿ ನೀರು ಬೀಳುವುದನ್ನು ನೋಡುತ್ತಿದ್ದಳು .ನೋಡಿ ಮಳೆಗಾಲದಲ್ಲಿ  ನೀರು ಸೋರಿ ಗೋಡೆ ಒದ್ದೆಯಾಗುವುದಕ್ಕೆ ನಾನು ನಿನ್ನೆಯಷ್ಟೇ ಹಾಕಿದ ಲೀಕ್ ಪ್ರೂಫ್ ಲೇಪ ಎಷ್ಟು ಚೆನ್ನಾಗಿ ಕೆಲಸ ಮಾಡಿದೆ . ನಾನು ನೀರುಳ್ಳಿ ನೀರುಳ್ಳಿ ಎಂದೆ ."ಎಂತದ್ದು ಮಾರಾಯರೆ ನಿಮ್ಮ ನೀರುಳ್ಳಿ . ನಾನು ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇನೆ .ಒಂದು ದಿನವಾದರೂ ನನ್ನ ಕಾರ್ಯ ನೀವು ಗುರುತಿಸಿ ಪ್ರಶಂಸೆ ಮಾಡಿದ್ದುಂಟಾ .ಇದು ಎಂತ ನೀರುಳ್ಳಿ ?ಎಲ್ಲಾ ಹುಟ್ಟಿದೆ ."ಎಂದು ನನ್ನ ಉಬ್ಬಿದ ನನ್ನ ಬಲೂನ್ ಗಾಳಿ  ತೆಗೆದಳು . 

ಈ ನೀರುಳ್ಳಿ ಸಾಮಾನ್ಯ ಎಂದು ಭಾವಿಸ ಬೇಡಿ .ದೆಹಲಿಯಲ್ಲಿ ಜನಪ್ರಿಯ ನಾಯಕಿ ದಿ ಸುಷ್ಮಾ ಸ್ವರಾಜ್ ಇದರ ಸಮಸ್ಯೆಯಿಂದ ತಮ್ಮ ಮುಖ್ಯ ಮಂತ್ರಿ ಪದವಿಯನ್ನೇ ಕಳೆದು ಕೊಂಡು ,ಇಲ್ಲಿಯ ವರೆಗೆ ಅವರ ಪಕ್ಷಕ್ಕೆ ಅಲ್ಲಿ ಅಧಿಕಾರ ಮರೀಚಿಕೆಯಾಗಿಯೇ ಉಳಿದಿದೆ 

ಮಾತಿನ ಸಂಕೀರ್ಣತೆ

                                                                  Tool Module: The Human Vocal ApparatusSpeech and Brain | direct                                                                                                                    

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ನಾಲಿಗೆ ಎಂದು ದಾಸರು ಹಾಡಿದ್ದು ವಿನಾ ಕಾರಣ   ಕೆಟ್ಟದ್ದನ್ನು ಆಡುವವರಿಗೆ . ಇಲ್ಲಿ ನಾಲಿಗೆ ಯನ್ನು ಮಾತಿನ ಮುಖ್ಯ ಅಂಗ ಎಂದು ವಾಚ್ಯವಾಗಿ ಇದ್ದರೂ ಆಡುವವನನ್ನೇ ಪೂರ್ಣ ಉದ್ದೇಶಿಸಿ ಇರುವುದು . ಸಾಮಾನ್ಯ ತಿಳುವಳಿಕೆ ಇರುವಂತೆ  ನಾಲಿಗೆ ಮಾತಿನ ಮೂಲ ಅಲ್ಲ  ಅಲ್ಲದೆ ಏಕ ಮಾತ್ರ ಅಂಗವೂ ಅಲ್ಲ . 

ವಾಚ್ಯ ಮಾತಿನ ಉಗಮ ಎಡ ಮುಮ್ಮೆದುಳಿನಲ್ಲಿ .ಇಲ್ಲಿ ಬ್ರೋಕ ನ ಕೇಂದ್ರ (ಕಂಡು ಹಿಡಿದ ಫ್ರೆಂಚ್ ವಿಜ್ಞಾನಿ ಹೆಸರು )ಎಂದು ಇದ್ದು ಇಲ್ಲಿ ಆಡುವ ಮಾತಿನ ಕ್ರಿಯಾತ್ಮಕ ಸಂದೇಶ ರಚನೆ ಆಗಿ ನರಗಳ ಮೂಲಕ ಅದು ಕೊರಳಲ್ಲಿ ಇರುವ ಧ್ವನಿ ಪೆಟ್ಟಿಗೆಯ ಮಾಂಸ ಖಂಡಗಳಿಗೆ ರವಾನೆ ಆಗುತ್ತದೆ . ಆದೇಶ ಕ್ಕನುಸಾರ ಸ್ವರ ತಂತುಗಳು ಕಂಪಿಸಿ ಸ್ವರೋತ್ಪಾದನೆ ಆಗುವುದು , ನಮ್ಮ ಆಡಿಯೋ ಸ್ಪೀಕರ್ ಗಳ ಮುಖ್ಯ ಪೆಟ್ಟಿಗೆ ಯಲ್ಲಿ ಆದಂತೆ . ಉತ್ಪಾದಿತ ಶಬ್ದಗಳ ಮೌಲ್ಯ ವರ್ಧನೆ ನಾಲಿಗೆ  ,ಬಾಯಿ ,ಹಲ್ಲುಗಳ ಮೂಲಕ ಆಗುವುದಲ್ಲದೆ ,ಮೂಗಿನ ಪಾರ್ಶ್ವಗಳಲ್ಲಿ  ಮೂಳೆಗಳಲ್ಲಿ  ಖಾಲಿ ಪೆಟ್ಟಿಗೆ ಯಂತೆ ಇರುವ ಸೈನಸ್ (ಇವು ಸೌಂಡ್ ಸಿಸ್ಟಮ್ ನ  ಸ್ಪೀಕರ್ ಪೆಟ್ಟಿಗೆ ಗಳಂತೆ ಕಾರ್ಯ ನಿರ್ವಹಿಸುತ್ತವೆ )ಗಳಲ್ಲಿ ಆಗುತ್ತದೆ . 

ಆಲಿಸಿದ ಮಾತನ್ನು ಗ್ರಹಣ ಮಾಡುವ ಮೆದುಳಿನ ಕೇಂದ್ರ ಕ್ಕೆ  ವರ್ನಿಕೆ ಕೇಂದ್ರ ಎನ್ನುವರು .ಇದು ಬ್ರೋಕನ ಜಾಗಕ್ಕಿಂತ ಸ್ವಲ್ಪ ಹಿಂದುಗಡೆ ಇದ್ದು ಕಿವಿ ಮೂಲಕ ಆಲಿಸಿದ ಮಾತಿನ ಗ್ರಹಣ ಮಾಡುತ್ತದೆ . ಇಲ್ಲಿಂದ ಬ್ರೋಕನ ಜಾಗಕ್ಕೆ ಸಂಪರ್ಕ ಇದೆ . ಮಾತನ್ನು ಉತ್ಪಾದಿಸುವ ಮತ್ತು ಗ್ರಹಿಸುವ ಎರಡು ಮುಖ್ಯ  ವಿಭಾಗ ಗಳು ಇವೆ ಎಂದು ತಿಳಿಯಿತಲ್ಲಾ . 

ಮೆದುಳಿನಲ್ಲಿ  ರಕ್ತ ಹೆಪ್ಪ್ಪು ಗಟ್ಟುವುದು ಅಥವಾ ರಕ್ತ ಸ್ರಾವ ವಾಗಿ ಬ್ರೋಕನ ಕೇಂದ್ರದ ಕೆಲಸ ವ್ಯತ್ಯಯ ಆದರೆ(ಆಡುವ ) ಮಾತು ಬಿದ್ದು ಹೋಗುವುದು . ಕೇಳಿದ್ದು ಅರ್ಥ ಆಗ ಬಹುದು . ವರ್ನಿಕೆ ಕೇಂದ್ರ ಕ್ಕೆ ಮಾತ್ರ  ತೊಂದರೆ ಆದರೆ ಆಡುವ ಮಾತು ಬೀಳದು .ಆದರೆ ಆಡಿದ ಮಾತಿಗೆ ಅರ್ಥವಿರದು . ನಮ್ಮ ಬಲ ಭಾಗದ ಅವಯವಗಳ ನಿಯಂತ್ರಣ ಎಡದ ಮೆದುಳಿನಲ್ಲಿ ಇರುವುದರಿಂದ ಸಾಮಾನ್ಯವಾಗಿ  ಬಲ ಪಾರ್ಶ್ವ ವಾತ ಆದಾಗ ಮಾತೂ ಬೀಳುವುದು . 

ಧ್ವನಿ ಪೆಟ್ಟಿಗೆ ಯ ಕ್ಯಾನ್ಸರ್ ,ಅಥವಾ ನರ ದೌರ್ಬಲ್ಯ ಆದರೆ ಮಾತಿನ ಉತ್ಪಾದನೆ ಸರಿಯಾಗಿ ಆದರೂ ಶಬ್ದ ಗಳು ಹೊರಡವು .