ಬೆಂಬಲಿಗರು

ಮಂಗಳವಾರ, ಸೆಪ್ಟೆಂಬರ್ 9, 2025

 DR. SULEKHA VARADARAJ ...                                                                               

ಡಾ ಸುಲೇಖಾ ವರದರಾಜ್ ಪುತ್ತೂರು ಇ ಎಸ ಐ  ವೈದ್ಯಾಧಿಕಾರಿ ಯಾಗಿ ಸುಧೀರ್ಘ ಸೇವೆ ಸಲ್ಲಿಸಿ  ಕೆಲ ತಿಂಗಳುಗಳ ಹಿಂದೆ ಸ್ವಯಂ ನಿವೃತ್ತಿ  ಹೊಂದಿದರು . ತಮ್ಮ ಪ್ರಾಮಾಣಿಕ ಸೇವೆಯಿಂದ ಜನಾನುರಾಗಿದ್ದವರು . ಮಕ್ಕಳ ತಜ್ಞೆ ,ಹದಿಹರೆಯದವರ ಮಾನಸಿಕ ಸಮಸ್ಯೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಇವರು ವೈದ್ಯಕೀಯ ಸಮ್ಮೇಳನಗಳಲ್ಲಿ ಬಹು ಬೇಡಿಕೆ ಯುಳ್ಳ ವೈದ್ಯೆ . ವೈದ್ಯರಲ್ಲಿ ಸಾಹಿತ್ಯ  ಸಂಗೀತ ಲಲಿತ ಕಲೆಯಲ್ಲಿ ಆಸಕ್ತಿ ಇರುವವವರು ಕಡಿಮೆ ,ಒಂದು ವೇಳೆ ಇದ್ದರೂ ಸಮಯ ಇರುವುದಿಲ್ಲ . ಆದರೆ ಸುಲೇಖಾ ಅವರ ಆಸಕ್ತಿ ಬಹುಮುಖ .. ಸರಿಯಾಗಿ ಅವರ ಪತಿ ಕನ್ನಡ ಪ್ರಾಧ್ಯಾಪಕ ,ಸಾಹಿತಿ ಮತ್ತು ಸಂಗೀತ ಪ್ರಿಯ . ಸರಕಾರಿ ಸೇವೆಯಿಂದ ನಿವೃತ್ತಿ ಪಡೆದ ಮೇಲೆ ತಮ್ಮ ಮನಸಿಗೆ ಹತ್ತಿರವಾದ ವಿಷಯಗಳ ಮೇಲೆ ಸಮಯ ವಿನಿಯೋಗಿಸುತ್ತಿರುವರು . 

ವರದರಾಜ್ ಚಂದ್ರಗಿರಿ  ಮೊನ್ನೆ ಮೊನ್ನೆ ಸೇವಾ ನಿವೃತ್ತಿ ಹೊಂದಿರುವರು .ಬೆಟ್ಟಂಪಾಡಿ ಸರಕಾರಿ ಕಾಲೇಜು ಪ್ರಿನ್ಸಿಪಾಲ್ ಅವರ ಸೇವೆಯ ಕೊನೆಯ ಹುದ್ದೆ . ಈ ಕಾಲೇಜು ಯಾವುದೇ ಖಾಸಗಿ ಸಂಸ್ಥೆಗೆ ಕಡಿಮೆ ಇಲ್ಲದಂತೆ ಮಾಡುವಲ್ಲಿ ಇವರ ಕೊಡುಗೆ ಅಮೂಲ್ಯ . ಇವರ ನೇತೃತ್ವದಲ್ಲಿ ನಡೆದ ವಿಚಾರ ಸಂಕಿರಣಗಳು ,ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನೇಕ  .ನಾನೂ ಎರಡು ಕಾರ್ಯಕ್ರಮಗಳಿಗೆ ಹಾಜರಾಗಿ ಆನಂದ ಪಟ್ಟಿದ್ದೇನೆ . ಸ್ವಯಂ ಸಾಹಿತಿಯಾದ ಇವರು ಖ್ಯಾತ ಕತೆಗಾರ ದಿ  ವ್ಯಾಸ ಅವರ ಸಮೀಪ ಬಂಧು . ಪುತ್ತೂರು ತಾಲೂಕು  ಸಾಹಿತ್ಯ ಪರಿಷತ್ ನ ಮುಖ್ಯಸ್ಥನಾಗಿ ಹಲವು ಒಳ್ಳೆಯ ಕಾರ್ಯಕ್ರಮಗಳನ್ನು ಏರ್ಪಡಿಸಿದ ಗರಿಮೆ ಅವರದು .. ಕಾರ್ಕಳ ಕಾಲೇಜ್ ನಲ್ಲಿ ಇದ್ದಾಗ ಹಿರಿಯ ಸಂಘಟಕ ರಾಮಚಂದ್ರ ಅವರ ಜತೆಗೆ ಇವರು . ನನಗೆ ರಾಮಚಂದ್ರ ಅವರನ್ನು ಪರಿಚಯಿಸಿದವರೇ ಚಂದ್ರಗಿರಿ ಅವರು 

ಚಂದ್ರಗಿರಿ ದಂಪತಿಗಳ ಮನೆಯ ಹೆಸರು ಸಮರಸ . ಅನ್ವಯಾರ್ಥ ,ಸಾಹಿತ್ಯದಲ್ಲಿಯೂ ಬದುಕಿನಲ್ಲಿಯೂ  . ಇಬ್ಬರದೂ ಸರಳ ವ್ಯಕ್ತಿತ್ವ ,ನೇರ ನುಡಿ .  ಪುತ್ತೂರಿಗೆ ಬಂದು ನಾನು ಮತ್ತು ನನ್ನ ಕುಟುಂಬ ದ  ಸಂಪಾದನೆ ಎಂದರೆ ಇಂತಹವರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸ್ನೇಹ . ಚಂದ್ರಗಿರಿ ದಂಪತಿಗಳಿಗೆ ಇಬ್ಬರು ಮಕ್ಕಳು . ಮಗ ಉದ್ಯೋಗದಲ್ಲಿ ಇದ್ದು ,ಮಗಳು ವಿದ್ಯಾರ್ಥಿ . 

                ಸರಕಾರಿ ಸೇವೆಯಿಂದ ನಿವೃತ್ತಿ ಪಡೆದ ಈ ದಂಪತಿಗಳು  ತಮ್ಮ  ಹೃದಯಕ್ಕೆ ಹತ್ತಿರವಾದ ಚಟುವಟಿಕೆಗಳಲ್ಲಿ ಪ್ರವೃತ್ತರಾಗಲಿ . ಆಯುರಾರೋಗ್ಯ ಸೌಖ್ಯ ಅವರಿಗಿರಲಿ .  

ಕಣ್ಮರೆಯಾದ ಮೆಚ್ಚಿನ ಶ್ರೀಪತಿ ಮಾಷ್ಟ್ರು

 May be an image of 1 person and smilingಕೆಲ ದಿನಗಳ ಹಿಂದೆ ಶ್ರೀಪತಿ ಮೇಷ್ಟು ತೀರಿಕೊಂಡರು .ಆಗ ನಾನು ಪರವೂರಿನಲ್ಲಿ ಇದ್ದೆ . 

ಅವರು ನಮ್ಮ ಊರಿನ ಕಿರಿಂಚಿಮೂಲೆ ಯವರು .ಅವರ ತಂದೆ ಶ್ರೀನಿವಾಸ ರಾಯರು ಎಲಿಮೆಂಟರಿ ಶಾಲೆಯಲ್ಲಿ ನಮ್ಮ ಅಧ್ಯಾಪಕರು .ಶಿಸ್ತಿನ ಸಿಪಾಯಿ . ನಮ್ಮ ಮನೆ ಅಂಗ್ರಿಯಿಂದ ಒಂದು ಮೈಲು ಉತ್ತರಕ್ಕೆ ಗದ್ದೆ ಗಳ ನಡುವಿನ ಕಾಲುದಾರಿ ಯಲ್ಲಿ ನಡೆದರೆ ಕಳಂಜಿಮಲೆ ಗುಡ್ಡದ ತಪ್ಪಲಿನಲ್ಲಿ ಅವರ ಮನೆ . ಅಲ್ಲಿಂದ ಪಶ್ಚಿಮಕ್ಕೆ ಜಲ್ಲಿ ಮಣ್ಣಿನ ರಾಜರಸ್ತೆ , ಕಿರಿಂಚಿ ಮೂಲೆ ,ಕೇಪುಳ ಗುಡ್ಡೆ  ಪಂಜಾಜೆ ದಾಟಿ ಕನ್ಯಾನಕ್ಕೆ ಮತ್ತೊಂದು ಮೈಲಿ . ಶ್ರೀಪತಿ ಮೇಷ್ಟ್ರ ತಮ್ಮ ಸುರೇಶ ನನ್ನಿಂದ ಒಂದು ಕ್ಲಾಸ್ ಮೇಲೆ ಆದರೆ ಬಾಲಕೃಷ್ಣ ಒಂದು ವರ್ಷ ಜೂನಿಯರ್ .ಸುರೇಶ ರಾವ್ ಕೋಲ್ ಇಂಡಿಯಾ ದಲ್ಲಿ ಉನ್ನತ ಹುದ್ದೆ ಗೆ ಏರಿ ಈಗ ಮಂಗಳೂರಿನಲ್ಲಿ ನಿವೃತ್ತ ಜೇವನ  ನಡೆಸುತ್ತಿದ್ದರೆ  ಬಾಲಕೃಷ್ಣ ಅಧ್ಯಾಪಕನಾಗಿ ಬೆಟ್ಟಂಪಾಡಿ ಜೂನಿಯರ್ ಕಾಲೇಜು ಪ್ರಿನ್ಸಿಪಾಲ್ ಆಗಿ ನಿವೃತ್ತ್ತಿ ಹೊಂದಿ ಕಿರಿಂಚಿ ಮೂಲೆ ಮೂಲ ಮನೆಯಲ್ಲಿ ಇದ್ದಾರೆ . 

ಶ್ರೀಪತಿ ರಾಯರು ನಾನು ಒಂಬತ್ತನೇ ತರಗತಿಯಲ್ಲಿ ಇದ್ದಾಗ ಬಿ ಎಸ್ಸಿ  ಬಿ ಎಡ್ ಮುಗಿಸಿ ಅಧ್ಯಾಪಕರಾಗಿ ಸೇರಿದರು  . ಭೌತ ಮತ್ತು ರಸಾಯನ ಶಾಸ್ತ್ರ ಅವರದ್ದು . ಜೀವ ಶಾಸ್ತ್ರಕ್ಕೆ  ಕಿರಿಂಚಿ ಮೂಲೆ ಶ್ರೀಧರ ರಾಯರು . ಶ್ರೀಪತಿ ರಾಯರು ತರಗತಿಗೆ ಪಠ್ಯ ಪುಸ್ತಕ ತರುತ್ತಿರಲಿಲ್ಲ .. ಮೊದಲೇ ವಿಷಯ ಅಧ್ಯಯನ ಮಾಡಿ ಬಂದು  ಬೋರ್ಡಿನಲ್ಲಿ ಬಣ್ಣ ಬಣ್ಣದ ಚಿತ್ರ ಬಿಡಿಸಿ ಆಕರ್ಷಕ ಠೀವಿ ಮತ್ತು ಮಾತಿನ ಓಘ ದಿಂದ  ಪಾಠ ಆರಂಭ ಮಾಡಿದರೆ ವಿದ್ಯಾರ್ಥಿಗಳು ಮಂತ್ರ ಮುಗ್ಧ ರಾಗಿ ಕೇಳುವರು . ಅದುವರೆಗೆ ನಾವು ಪ್ರತ್ಯಕ್ಷ ಕಂಡಿರದ  ರಸಾಯನ ಶಾಸ್ತ್ರ ಪ್ರಯೋಗ ಗಳನ್ನು  ಮಾಡಿ ತೋರಿಸುತ್ತಿದ್ದರು .ಪೊಟ್ಯಾಶಿಯಂ ಕ್ಲೋರೇಟ್ ಮತ್ತು ಮ್ಯಾಂಗನೀಸ್ ಡೈ ಆಕ್ಸೈಡ್ ಪ್ರನಾಳ ದಲ್ಲಿ ಹಾಕಿ ಬಿಸಿ ಮಾಡಿ  ಉತ್ಪತ್ತಿಯಾದ ಆಮ್ಲಜನಕದಿಂದ ಕಡ್ಡಿ ಉರಿಸಿ ತೋರಿಸಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತೆ ಇದೆ  .ಇವರು ಬರುವ ವರೆಗೆ ಲ್ಯಾಬ್ ಉಪಕರಣಗಳು ಪ್ರಯೋಗಾಲಯದಲ್ಲಿ ಧೂಳು ಹಿಡಿಯುತ್ತಿದ್ದವು . ಭೌತ ಶಾಸ್ತ್ರದ ವೇಗ ವೇಗೋತ್ಕರ್ಷ ,ನ್ಯೂಟನ್ ಚಲನಾ ನಿಯಮಗಳ ಬಗ್ಗೆ ಅವರ ಮಾತುಗಳು ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ . 

ಶಾಲೆಯಲ್ಲಿ ಒಂದು ವಿಜ್ಞಾನ ಸಂಘ ಆರಂಭಿಸಿದ್ದು  ಕನ್ನಡದಲ್ಲಿ ವಿಜ್ಞಾನ ಲೋಕ ಎಂಬ ಪತ್ರಿಕೆ ನಡೆಸುತ್ತಿದ್ದ ಸುರತ್ಕಲ್  ಕೆ ಆರ್ ಈ ಸಿ ಪ್ರಾಧ್ಯಾಪಕ  ಡಾ ಪಾ ದೇವರಾವ್ ಅವರನ್ನು ಉದ್ಘಾಟಗೆ  ಕರೆಸಿದ್ದರು , .  ಶಾಲೆಯಲ್ಲಿ ಕೈಬರಹದ ಪತ್ರಿಕೆ ಹುಟ್ಟು ಹಾಕಿ ವಿದ್ಯಾರ್ಥಿಗಳಲ್ಲಿ ಬರೆಯುವ ಅಭ್ಯಾಸ ಕ್ಕೆ ಪ್ರೋತ್ಸಾಹ ಕೊಟ್ಟರು .ನಾನು ನಾಸೆರ್ ಚರಿತ ವೆಂಬ ಕಿರು ಪುರಾಣವು ಎಂಬ ಲೇಖನ ಬರೆದ ನೆನಪಿದೆ .(ಈಜಿಪ್ಟ್ ಅಧ್ಯಕ್ಷ ನಾಸೆರ್ ಮೇಲೆ ).ಈಗಲೂ ಶಾಲೆಯ ವಾಚನಾಲಯ ದಲ್ಲಿ ಪತ್ರಿಕೆ ಇದೆ ಎಂದು ಕೇಳಿದ್ದೇನೆ ,

                   ಮಾಷ್ಟ್ರ ಬಳಿ ಒಂದು ಬೈಸಿಕಲ್ ಇದ್ದು ಕೆಲವೊಮ್ಮೆ ನಮ್ಮನ್ನು ಡಬ್ಬಲ್ ರೈಡ್ ಮಾಡಿ ಕೊಂಡು ಕರೆದೊಯ್ಯುತ್ತಿದ್ದರು . ನಾನು ಹತ್ತನೇ ತರಗತಿಯಲ್ಲಿ ಇರುವಾಗ ಅವರಿಗೆ ಮುಡಿಪ್ಪು ಶಾಲೆಗೆ ವರ್ಗ ಆಗಿ ನಮ್ಮ ಶಾಲೆಗೆ ದೊಡ್ಡ ನಷ್ಟ ಆಯಿತು ಎನ್ನ ಬಹುದು .ಮುಂದೆ ಅವರು ಆರ್ಟ್ಸ್ ವಿಷಯ  ಬಾಹ್ಯ  ಎಂ ಈ ಮಾಡಿ ಜೂನಿಯರ್ ಕಾಲೇಜು ಅಧ್ಯಾಪಕ ಹುದ್ದೆ ಆಯ್ದು  ಪ್ರಿನ್ಸಿಪಾಲ್  ಆಗಿ ನಿವೃತ್ತರಾದವರು ಪುತ್ತೂರಿನಲ್ಲಿ ನೆಲೆಸಿದ್ದರು .. ಇದರಿಂದ ವಿಜ್ಞಾನ ಶಿಕ್ಷಣಕ್ಕೆ ನಷ್ಟ ಆಯಿತು ಎಂದು ನನ್ನ ಅಭಿಪ್ರಾಯ . 

 ಅಸೌಖ್ಯದ ದಿನಗಳಲ್ಲಿ  ವೈದ್ಯನಾಗಿ ನನ್ನ ಗುರುಗಳ  ಕಿಂಚಿತ್ ಸೇವೆ ಮಾಡುವ ಅವಕಾಶ ನನಗೆ ದೊರಕಿದ್ದು  ನನ್ನ ಸೌಭಾಗ್ಯ . 

ಅವರ ಮಕ್ಕಳು , ಅದರಲ್ಲು  ಮಗಳು ಸುಪ್ರೀತಾ ಮತ್ತು ಅಳಿಯ ಯಾಜಿ  ಯವರು ಶ್ರದ್ಧೆ ಯಿಂದ ಕೊನೆಗಾಲದಲ್ಲಿ ಆರೈಕೆ ಮಾಡಿದ್ದಾರೆ . ಅವರಿಗೆ  ಒಳ್ಳೆಯದಾಗಲಿ . 

ಬಾಲಂಗೋಚಿ :  ನಮ್ಮ ಕಾಲದಲ್ಲಿ ಎರಡು ವರ್ಗದ ಅಧ್ಯಾಪಕರು ಇದ್ದರು . ಮೊದಲನೆಯವರು ಯಾವುದೇ ತಯಾರಿ ಇಲ್ಲದೆ  ತರಗತಿಗೆ ಬಂದು ಪಠ್ಯ ಪುಸ್ತಕ (ಅದೂ ಮೊದಲ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಯಿಂದ )  ವಾಚನ ಮಾಡಿ ಆಗಾಗ ಯು  ಅಂಡರ್ ಸ್ಟಾಂಡ್ ?ಎನ್ನುವರು (ಅವರಿಗೇ ಅರ್ಥವಾಗಿರ ದಿದ್ದರೂ ),ವಿದ್ಯಾರ್ಥಿಗಳು ಕೋಲೆ ಬಸವನಂತೆ ಯಸ್ ಸರ್ ಎನ್ನುವರು . ಎರಡೇ ವರ್ಗ ಅಧ್ಯಯನ ಮಾಡಿ ಪಠ್ಯ ಪುಸ್ತಕ ಸಹಿತ ಅಥವಾ ರಹಿತ ಬಂದು ಪಾಠ ಮಾಡುವವರು . ಎರಡನೇ ವರ್ಗದವರ ಸಂಖ್ಯೆ ಕಡಿಮೆ ಇದ್ದುದು ನಮ್ಮ ದುರ್ದೈವ 

 

 

 

 

ಮಂಗಳವಾರ, ಮಾರ್ಚ್ 25, 2025

                                     


 

 ಹಿಂದಿನ ಮದ್ರಾಸ್ ಅಥವಾ ಈಗಿನ ಚೆನ್ನೈ ಯನ್ನು ವೈದ್ಯ ಕೀಯ  ಕ್ಷೇತ್ರದ ಕಾಶಿ ಎನ್ನ ಬಹುದು.ದಕ್ಷಿಣ ಭಾರತದಲ್ಲಿ ಬ್ರಿಟಿಷರ ಆಢಳಿತಾತ್ಮಕ ಕೇಂದ್ರ ಆಗಿದ್ದ ಕಾರಣ ಅಲ್ಲಿ ವೈದ್ಯಕೀಯ ಕಾಲೇಜು ಇತ್ಯಾದಿ ಬಹಳ ಹಿಂದೆಯೇ ಸ್ಥಾಪನೆ ಆಗಿದ್ದವು   . ಟ್ರೋಪಿಕಲ್ ಸ್ಪ್ರೂ ,ಮದ್ರಾಸ್ ಮೋಟಾರ್ ನ್ಯೂರೋನ್ ಡಿಸೀಸ್ ,ಲೀಷ್ಮೆ ನಿಯಾ  ಮುಂತಾದ ಹಲವು ಕಾಯಿಲೆಗಳ ದಾರಿ ತೋರುವ ಅಧ್ಯಯನ ಇಲ್ಲಿಯೇ ಆಗಿತ್ತು . ದಂತ ಕತೆ ಗಳಾದ ವೈದ್ಯಕೀಯ ಶಿಕ್ಷಕ ರಾದ ಡಾ ತಿರುವೆಂಗಡಂ (ಫಿಸಿಷಿಯನ್ ).ಡಾ ಏನ್ ಮದನಗೋಪಾಲನ್ (ಗ್ಯಾಸ್ಟ್ರೋ ಎಂಟೆರೊಲೊಜಿ),ಡಾ ಸೇತುರಾಮನ್ (ಹೆಮಟೊಲೊಜಿ ),ಡಾ ಎ   ಎಸ ತಂಬೈಯ್ಯ (ಡರ್ಮಟಾಲಜಿ ),ಡಾ ರಾಮ ಮೂರ್ತಿ (ನೂರೋ ಸರ್ಜರಿ ),ಡಾ ರಂಗ ಭಾಷ್ಯಮ್ (ಗ್ಯಾಸ್ಟ್ರೋ ಎಂಟೆರೋ ಸರ್ಜರಿ ) ಕೆಲವು ಹೆಸರುಗಳು . 

ಇವರಲ್ಲಿ ತಿರುವೆಂಗಡಂ ಬಿಟ್ಟರೆ ಉಳಿದವರು  ಹೊಸ ವಿಭಾಗಗಳಿಗೆ ಅಡಿಪಾಯ ಹಾಕಿ ಕಟ್ಟಿ ಬೆಳೆಸಿದವರು . ನಮ್ಮ ದೇಶದಲ್ಲಿ ಸ್ನಾತಕೋತ್ತರ ಕಲಿಕೆಗೆ ಅವಕಾಶ ಇಲ್ಲದ ವಿಷಯಗಳ ಅಧ್ಯಯನ ವನ್ನು ವಿದೇಶ (ಮುಖ್ಯವಾಗಿ ಇಂಗ್ಲೆಂಡ್ )ಮಾಡಿ ಪುನಃ ತಾಯಿ ನಾಡಿಗೆ ಬಂದು ಇಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿದವರು . 

ಡಾ ಎ  ಎಸ ತಂಬಯ್ಯ  ಇಂಗ್ಲೆಂಡ್ ದೇಶದಲ್ಲಿ ಚರ್ಮ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ  ವಿಶೇಷ ಅಧ್ಯಯನ ಮಾಡಿ ಮದ್ರಾಸ್ ಮೆಡಿಕಲ್ ಕಾಲೇಜು ವಿಭಾಗ ಆರಂಬಿಸಿದವರು . ಅವರ ಅಧ್ಯಾಪನ ರೀತಿ ಬಲು ಆಕರ್ಷಕ ವಾಗಿದ್ದು ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಗ ವಿದ್ಯಾರ್ಥಿಗಳಲ್ಲಿ ಅಷ್ಟು ಜನಪ್ರಿಯವಾಗಿ ಇಲ್ಲದಿದ್ದ ಡರ್ಮಟಾಲಜಿ ಅಧ್ಯಯನ ಕ್ಕೆ ಬರುವಂತೆ ಮಾಡಿತು .ಅವರು ಸೇವೆಯಿಂದ ನಿವೃತ್ತರಾದ ಮೇಲೂ ನಿರಂತರ ಕಲಿಕಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದು ಚೆನ್ನೈ ಯಲ್ಲಿ  ನನಗೂ ಅವರ  ಪಾಂಡಿತ್ಯ ಭರಿತ ಉಪನ್ಯಾಸ ಕೇಳುವ ಅವಕಾಶ ಸಿಕ್ಕಿತ್ತು . 

ಡಾ ತಂಬಯ್ಯ ಅವರ ದಾರಿಯಲ್ಲಿ ನಡೆದು ಬಂದ ಚರ್ಮ ರೋಗ ತಜ್ಞ ಪ್ರಾಧ್ಯಾಪಕ ಡಾ ಪ್ಯಾಟ್ರಿಕ್ ಯೇಸುದಿಯನ್ . ಮದ್ರಾಸ್ ಮೆಡಿಕಲ್ ಕಾಲೇಜು ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ  ಕಿಲ್ಪಾಕ್ ನಲ್ಲಿ  ಕ್ಲಿನಿಕ್ ನಡೆಸುತ್ತಿದ್ದು  ,ಚಿತ್ರ ನಟನಟಿಯರು ,ರಾಜಕಾರಿಣಿಗಳು ಸೇರಿ ದಂತೆ  ಬಹು ಬೇಡಿಕೆಯ ವೈದ್ಯರು. ಆರ್ ಕೆ ಲಕ್ಷ್ಮಣ್ ನ ಕಾಮನ್ ಮ್ಯಾನ್ ನ ವ್ಯಕ್ತಿತ್ವ . ವೈದ್ಯಕೀಯ ಅಲ್ಲದೆ ಇತರ ಸಾಹಿತ್ಯವನ್ನೂ ಚೆನ್ನಾಗಿ ಓದಿ ಕೊಂಡಿದ್ದ ಇವರ ಭಾಷಣಗಳಲ್ಲಿ  ಅವುಗಳಿಂದ ಆಯ್ದ ನುಡಿ ಮುತ್ತುಗಳು ಸಹಜವಾಗಿ ಪುಂಖಾನುಪುಂಖವಾಗಿ ಬಂದು ಕೇಳುಗರ ಕಿವಿ ಮತ್ತು ಮನಕ್ಕೆ ಹಿತವಾಗಿರುತ್ತಿತ್ತು . ಚರ್ಮ ರೋಗ ನಿಧಾನದಲ್ಲಿ ನೋಡುವಿಕೆಗೆ ಆದ್ಯತೆ .ಹಲವು  ಅಪರೂಪದ ಕಾಯಿಲೆಗಳೂ ಸೇರಿ ಚರ್ಮ ರೋಗಗಳ  ಛಾಯಾಚಿತ್ರ ಗಳ  ಸ್ಲೈಡ್ ಗಳ  ಅಮೂಲ್ಯ ಸಂಗ್ರಹ ಅವರ ಬಳಿ ಇತ್ತು .ಆಗಿನ್ನೂ ಪವರ್ ಪಾಯಿಂಟ್ ಬಂದಿರಲಿಲ್ಲ . ಚರ್ಮ ರೋಗ ತಜ್ಞ ಕ್ಕಿಂತ ಹೆಚ್ಚಾಗಿ ಅವರು ಒಬ್ಬ ಪರಿಣತ ಫಿಸಿಷಿಯನ್ ಆಗಿದ್ದರು . ಒಳ ರೋಗಗಳು  ಚರ್ಮದಲ್ಲಿ  ಹಲ ರೂಪದಲ್ಲಿ ಪ್ರಕಟವಾಗುವದು ಸಾಮಾನ್ಯ; ಡಾ ಪ್ಯಾಟ್ರಿಕ್ ಅವುಗಳ ಜಾಡು ಹಿಡಿಯುವುದರಲ್ಲಿ ನಿಸ್ಸೀಮರು . 

ನಾನು ಪೆರಂಬೂರು ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ ನಮ್ಮ ವಿಭಾಗ ಮುಖ್ಯಸ್ಥ ರಾಗಿದ್ದ  ಡಾ ಜಿ ಸಿ ರಾಜು ರವರು ನನ್ನ ಬಳಿ ಡಾ ಪ್ಯಾಟ್ರಿಕ್ ನಮ್ಮ ಆಸ್ಪತ್ರೆಗೆ ವಾರಕ್ಕೊಮ್ಮೆ ಕ್ಲಾಸ್ ತೆಗೆದು ಕೊಳ್ಳಲು ಬರಬಹುದೋ ಎಂದು ವಿಚಾರಿಸುವಂತೆ ಕೇಳಿದರು .ನಾನು ಅವರ ಕ್ಲಿನಿಕ್ ಗೆ ಹೋಗಿ ವಿನಂತಿಸಲು ತಮಗೆ ಪಾಠ ಮಾಡುವುದು ಇಷ್ಟ ವಾದರೂ ಸಮಯಾವಕಾಶ ಕಷ್ಟ ಎಂದು ಮೊದಲು ನಿರಾಕರಿಸಿದರೂ ನಾನು ಛಲ ಬಿಡದ ತ್ರಿವಿಕ್ರಮನಂತೆ  ಕ್ಲಿನಿಕ್ ಗೆ ಪುನಃ ಪುನಃ ಎಡತಾಕಿ ಅವರನ್ನು ಒಪ್ಪಿಸಿದೆ . ಸ್ಲೈಡ್ ಸಹಿತವಾದ ಅವರ ಕ್ಲಾಸ್ ವರ್ತ್  ಗೋಲ್ಡ್ ಅನ್ನುತ್ತಾರಲ್ಲ ಹಾಗೆ . ಪ್ಯಾಥಾಲಜಿ ,ಬಯೋ ಕೆಮಿಸ್ಟ್ರಿ ,ಮೆಡಿಸಿನ್  ಎಲ್ಲಾ ಕರತಾ ಮಲಕ  . 

ಮೊನ್ನೆ ಇಂಟರ್ನೆಟ್ ನಲ್ಲಿ ಜಾಲಾಡುವಾಗ ಅವರ ಭಾಷಣಗಳ ಸಂಗ್ರಹವೊಂದನ್ನು  "All I should say to my young friends"ಎಂಬ ಶೀರ್ಷಿಕೆಯಲ್ಲಿ ಅವರ ವಿದ್ಯಾರ್ಥಿ ಡಾ ಮುರುಗಸುಂದರಂ ಪ್ರಕಟಿಸಿದ್ದಾರೆ ಎಂದು ತಿಳಿದು ಅದನ್ನು ತರಿಸಿ ಓದುತ್ತಿದ್ದೇನೆ . ಹಿಂದೆ ಅವರ ಉಪನ್ಯಾಸಗಳನ್ನು ಕೇಳಿದ ನೆನಪು ಮತ್ತೆ ಆಯಿತು . ಅವರ ಗುರು ಪ್ರೊ ತಂಬಯ್ಯ  ಆಗಾಗ ಉದ್ಧರಿಸುತ್ತಿದ್ದ  ಫ್ರಾನ್ಸಿಸ್ ಬೇಕನ್ ನ 'Reading makes a full man,Writing an exact man ,Conversation a ready man "ಉಲ್ಲೇಖ ಮಾಡಿ ವೈದ್ಯರಿಗೆ  ಓದುಬರೆಯುವಿಕೆ ಮತ್ತು ಸಂವಹನ ದ  ಪ್ರಾಮುಖ್ಯತೆ ಒತ್ತಿ ಹೇಳಿದ್ದಾರೆ .                                ಇದರಲ್ಲಿ ನಾನು ಕಂಡಂತೆ ಇತ್ತೀಚಿನ ದಿನಗಳಲ್ಲಿ ವೈದ್ಯ ವೈದ್ಯ ರ ನಡುವೆ ನೇರ ಸಂವಹನ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ .ಒಬ್ಬ ರೋಗಿಯನ್ನು ಹಲವು ಸ್ಪೆಷಲಿಸ್ಟ್ ಗಳು ನೋಡುತ್ತಿದ್ದರೂ ಒಟ್ಟಾಗಿ ರೋಗಿಯ ಬಗ್ಗೆ ಕೂಡಿ ಚರ್ಚಿಸುವುದು ಕಡಿಮೆ ಆಗಿರುವುದು ದುರ್ದೈವ

ಸೋಮವಾರ, ಮಾರ್ಚ್ 24, 2025

ಅಗಲಿದ ಮಹಾ ಚೇತನ


 ಹಿರಿಯ ಚೇತನ ಬಲ್ನಾಡು ಸುಬ್ಬಣ್ಣ ಭಟ್ ಅವರು ನಿಧನರಾದ ವಾರ್ತೆ ಬಂದಿದೆ . ಸಾತ್ವಿಕ ಸಜ್ಜನ ಎಂಬ ಶಬ್ದಗಳಿಗೆ ಅನ್ವರ್ಥರಾಗಿ ಬಾಳಿ ಬದುಕಿದವರು . ಸರ್ವೇ ಜನಾ ಸುಖಿನೋಭವಂತು ಎಂದು ಸರ್ವರಿಗೂ ಉಳಿತನ್ನು ಬಯಸಿದವರು . 

ಒಳ್ಳೆಯ ಹಾಸ್ಯ ಪ್ರಜ್ಞೆ ಇವರ ವೈಶಿಷ್ಟ್ಯ . ಇಂದ್ರ ಧನುಷ್ ,ವಿನೋದ ಇತ್ಯಾದಿ ಪತ್ರಿಕೆಗಳಿಗೆ ಬರೆಯುತ್ತಿದ್ದ ಇವರ ಸುಬ್ಬಣ್ಣನ ತ್ರಿಪದಿಗಳು ಓದುಗರ ಮೆಚ್ಚುಗೆ ಪಡೆದಿದ್ದವು . ಬಹಳ ಮಂದಿಗೆ ತಿಳಿದಿರದ  ಇವರ ಇನ್ನೊಂದು ಆಸಕ್ತಿ ಸಂಖ್ಯಾ ವಿಜ್ಞಾನ .

ನನ್ನಂತಹ ಕಿರಿಯರನ್ನು ಕೂಡಾ ಗುರುತಿಸಿ ಹರಸಿದವರು . ಇವರ ನೆನಪಿಗೆ ನೂರು ನಮನ 

ಶುಕ್ರವಾರ, ಫೆಬ್ರವರಿ 28, 2025

 ಸುಧೀರ್ಘ  ಪ್ರಾಮಾಣಿಕ ಸೇವೆಯ ನಂತರ ಶ್ರೀಮತಿ ಲೀಲಾವತಿ (ಲೀಲಕ್ಕ ) ಇಂದು ಸ್ವಯಮ್ ನಿವೃತ್ತಿ ಪಡೆಯುತ್ತಿದ್ದಾರೆ . ಪುತ್ತೂರಿನ  ಮಾತೆ ಡಾ ಗೌರಿ ಪೈ ಅವರ ಗಿರಿಜಾ ಕ್ಲಿನಿಕ್ ನಲ್ಲಿ ನರ್ಸಿಂಗ್ ಸಹಾಯಕರಾಗಿ ತರಬೇತು ಗೊಂಡು ಆ ಆಸ್ಪತ್ರೆಯಲ್ಲಿ ದಶಕಗಳ ಸೇವೆ ಸಲ್ಲಿಸಿ  ನಂತರ ನಮ್ಮ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ  ನಿರ್ವಹಣೆಯಲ್ಲಿ ಸಹಾಯಕಿ ಯಾಗಿದ್ದ ಇವರು ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಅಚ್ಚು ಮೆಚ್ಚು . 

   ಸದಾ ನಗುಮುಖ ,ತಾಳ್ಮೆ ಮತ್ತು ಸಹಾನುಭೂತಿ ಇವರ ಜನಪ್ರಿಯತೆಯ ಗುಟ್ಟು . ತಮ್ಮಿಂದ ಅಥವಾ ತಮ್ಮ ಬಳಗದಿಂದ ಸಣ್ಣ ಲೋಪವಾದರೂ ಅದನ್ನು ಸಮರ್ಥಿಸ ಹೋಗದೆ  ಕ್ಷಮೆ ಕೇಳುವ ದೊಡ್ಡ ಮನಸು ಇವರದು . ರೋಗಿಗಳ ಸಂಬಂಧಿಕರು ಇವರನ್ನು ತಮ್ಮ ಆಪ್ತ ಬಳಗದವರು ಎಂದು ಪ್ರೀತಿಯಿಂದ ಗುರುತಿಸುವರು .ಗಿರಿಜಾ ಕ್ಲಿನಿಕ್ ನಲ್ಲಿ ಹುಟ್ಟಿ ಈಗ ನಮ್ಮಲ್ಲಿ ಹೆರಿಗೆಗೆ ಬರುವ ಮಹಿಳೆಯರ ಅಮ್ಮ ಅಜ್ಜಿ ಗೆ ಇವರು ಪರಿಚಿತರು . 

 ಆಸ್ಪತ್ರೆ ಸ್ವಾಗತ ಕಾರಿಣಿಯವರಲ್ಲಿ ಹಿರಿಯರಾದ ಇವರು ಮುಂಜಾನೆ ಬಂದೊಡನೆ ಕ್ರಿಕೆಟ್ ಕ್ಯಾಪ್ಟನ್ ನಂತೆ  ಓ ಪಿ ಡಿ  ಸುತ್ತ ಕಣ್ಣು ಹಾಯಿಸಿ  ಎಲ್ಲಿ ಎಲ್ಲಿ ಯಾವ ಫೀಲ್ಡರ್ ಆದೀತು ಎಂದು ಸಹೋದ್ಯೋಗಿಗಳ ಜೊತೆ ಚರ್ಚಿಸಿ ನಿರ್ಧರಿಸುವರು . ವೀಲ್ ಚೇರ್ ಇತ್ಯಾದಿ ಅವಶ್ಯ ವಿರುವವರಿಗೆ ಅದರ ವ್ಯವಸ್ಥೆ ಮಾಡುವರು . ತುರ್ತು ಇಸಿಜಿ ಇತ್ಯಾದಿ ಬೇಕಾದಲ್ಲಿ ತಾವೇ ಮಾಡಿ ತೋರಿಸುವರು . 

ಇಂತಹ ಮಾನವೀಯತೆ ಮೂರ್ತಿವೆತ್ತ ,ಪ್ರಾಮಾಣಿಕ ಲೀಲಕ್ಕ ಬಿಟ್ಟು ಹೋಗುವುದು ನಿಜಾರ್ಥದಲ್ಲಿ ತುಂಬಲಾರದ ನಷ್ಟ . ಅವರು ಮಾಡಿದ ಸೇವೆ ನಿಜಾರ್ಥದಲ್ಲಿ ದೇವರ ಸೇವೆ  ಮುಂದಿನ ದಿನಗಳು ಅರೋಗ್ಯ ಸುಖ ಶಾಂತಿಯಿಂದ ಇರಲಿ 



 








 

ಸೋಮವಾರ, ಡಿಸೆಂಬರ್ 16, 2024


ನಿನ್ನೆ ಮುಂಜಾನೆ ಪುತ್ತೂರಿನ ವಿವಿದೋದ್ಧೇಶ ತರಬೇತಿ ಸಂಸ್ಥೆ  ಐ ಅರ ಸಿ ಎಂ ಡಿ  ಯ ಆಶ್ರಯದಲ್ಲಿ ಅಬಾಕಸ್ ಸ್ಪರ್ಧೆಯಲ್ಲಿ ಬಾ ಜಯಶಾಲಿಯಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ . ಈ ಸಂಸ್ಥೆಯನ್ನು ನಡೆಸುವವರು ಉತ್ಸಾಹಿ ಯುವ ದಂಪತಿಗಳಾದ ಪ್ರಫುಲ್ಲ ಮತ್ತು ಗಣೇಶ್ . ಹೆಚ್ಚಾಗಿ ನನಗೆ ಸಂಬಂಧ ಪಡದ ಸಭೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತೇನೆ . ಆದರೆ ಈ ದಂಪತಿಗಳು ದಶಕದಿಂದ ನನ್ನ ಆತ್ಮೀಯ ವಲಯದಲ್ಲಿ ಇರುವ ಕಾರಣ ಕೇಳಿದ ಒಡನೇ ಒಪ್ಪಿಕೊಂಡೆ . 

ನಮಗೆ ಅಬಾಕಸ್ ನಂತಹ ಬೌದ್ಧಿಕ ಮೌಲ್ಯ ವರ್ಧನೋಪಾಯ ಶಿಕ್ಷಣ ಇರಲಿಲ್ಲ .ತಾಯಿ ಯವರ ಮಾರ್ಗದರ್ಶನ ದಲ್ಲಿ  ಇಪ್ಪತ್ತು ಇಪ್ಪಾತ್ಲಿ   (೨೦X ೨೦)ವರೆಗೆ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲಿನ ವರೆಗೆ ಬಾಯಿಪಾಠ ಆಗಿದ್ದು ,ಈಗ ಕೂಡಾ ಕ್ಯಾಲ್ಕುಲೇಟರ್ ಇಲ್ಲದೇ ಸಣ್ಣ ಪುಟ್ಟ ಕೂಡು ಕಳೆ ಗುಣಿಸು ಮಾಡಬಲ್ಲೆ . ಕ್ಯಾಲ್ಕುಲೇಟರ್ ಈಗ ಸುದ್ದಿ ಮಾಡುತ್ತಿರುವ ಕೃತಕ ಬುದ್ಧಿಮತ್ತೆಯ  ಪ್ರಾಚೀನ ರೂಪ . ಕೃತಕ ಬುದ್ದಿಮತ್ತೆ  ಯ  ಮೇಲೆ ಪೂರ್ಣ ಅವಲಂಬಿಸಿದರೆ ನೈಸರ್ಗಿಕ ಬುದ್ದಿ ಕುಂಠಿತ ವಾಗ ಬಹುದು . 

ನಿನ್ನೆಯ ಸಭೆಯಲ್ಲಿ ಮದ್ರಾಸ್ ಐ ಐ ಟಿ ಯ ಶ್ರೀ ಸಾಯಿ ಗಣೇಶ್ ಮತ್ತು ಬೆಂಗಳೂರು ಜಿ ಕೆ ವಿ ಕೆ ಯ ಡಾ ಅಶೋಕ್ ಕುಮಾರ್ ಅವರ ಪರಿಚಯ ಆಯಿತು . ಈ ಯುವ ಪ್ರತಿಭಾವಂತರು ಪುಟ್ಟ ಮಕ್ಕಳಿಗೆ ಸ್ವಯಂ ಆಸಕ್ತಿಯಿಂದ  ಗಣಿತ ದಂತಹ ವಿಷಯ ಹೇಳಿಕೊಡುತ್ತದ್ದರು ಎಂದು ತಿಳಿಯಿತು .ಸಣ್ಣ ಮಕ್ಕಳಿಗೆ ಕಳಿಸುವುದು ಕಷ್ಟ ಮತ್ತು ತಾಳ್ಮೆ ಬೇಕು . ತಮ್ಮ ಆತ್ಮ ತೃಪ್ತಿಗಾಗಿ  ವಿದ್ಯರ್ಥಿಗಳನ್ನು ಹುಡುಕಿ ಕಲಿಸುವುದು ಮೆಚ್ಚ ಬೇಕಾದದ್ದು . 

ಶನಿವಾರ, ಡಿಸೆಂಬರ್ 14, 2024

 Dr Dhal Singh Chandel on X ...


ನನ್ನ ತಂಗಿ ಪದ್ಮಾವತಿ ಪುತ್ತೂರು ಪಾಂಗಾಳಾಯಿ ಯಲ್ಲಿ  ಹೊಸ ಮನೆ ನಿರ್ಮಿಸಿದ್ದು ತಿಂಗಳ ಹಿಂದೆ ಸರಳವಾಗಿ ಗೃಹ ಪ್ರವೇಶ ಮಾಡಿದ್ದರು . ಅಣ್ಣನಾದ ನನಗೂ ಆಹ್ವಾನವಿರಲಿಲ್ಲ ;ಅಂತ ನನಗೇನೂ ಬೇಸರವಿಲ್ಲ . ಒಂದನೆಯದಾಗಿ ಇದು ಎರಡನೇ ಮನೆ ಒಕ್ಕಲು .ಎರಡನೆಯದು ಗೃಹ ಪ್ರವೇಶದ  ಪ್ರಯುಕ್ತ ಕುಶಲ ಸಂಘದ ವಿಶೇಷ ಅಧಿವೇಶನ ,ಉಪಹಾರ ಸಹಿತ . ಪುತ್ತೂರಿನಲ್ಲಿ ನಗೆ ಪ್ರಿಯರ ಕೂಟ ಇದ್ದು ಅದರ ಪ್ರಧಾನ ಕಚೇರಿ  ,ಸರ್ವ ಜನಹಿತ ಸಂಘಟನೆಗಳಿಗೂ ಆಶ್ರಯ ತಾಣ ವಾದ  ಅನುರಾಗ ವಠಾರ (ಪುರಂಧರ ಭಟ್ ಮಾಳಿಗೆ  ಮನೆ ).ರಾಜೇಶ್ ಪ್ರೆಸ್  ರಘುನಾಥ ರಾಯರು ,ಸುಧಾಮ ಕೆದಿಲಾಯ ,ತುಳಸೀದಾಸ್ ,ಸುಬ್ರಹ್ಮಣ್ಯ ಶರ್ಮ ,ಶಂಕರಿ ಶರ್ಮ,ದತ್ತಾತ್ರೇಯ ರಾವ್  .ಅರ್ತಿಕಜೆ ದಂಪತಿಗಳು ,ರಮೇಶ ಬಾಬು ಇತ್ಯಾದಿ ಹಿರಿಯರು ಇದರಲ್ಲಿ ಇದ್ದಾರೆ . ನಕ್ಕು ಹಗುರಾಗುವ ವೇದಿಕೆ

ಈ ತಂಗಿ ಸಣ್ಣವಳಿರುವಾಗ ಜಡೆಗೆ ಸಿಕ್ಕಿಸುವ ಒಂದು ಐಟಂ ಬಂತು . ಎರಡು ಗೋಲಿಗಳನ್ನು ಒಂದು ಬ್ಯಾಂಡಿನಲ್ಲಿ ಕಟ್ಟಿ ಅದರ ನಡುವೆ ಜಡೆ . ಆಗೆಲ್ಲಾ ಶಾಲೆಗೆ ಹುಡುಗಿಯರು ಎರಡು ಜಡೆ ಹಾಕಿಕೊಂಡು ಹೋಗುವುದು . ಈ ವಸ್ತುವಿಗೆ ಲವ್ ಇನ್ ಟೋಕಿಯೋ ಎಂದು ಕರೆಯುತ್ತಿದ್ದರು . ಆ ಹೆಸರಿನ  ಸಿನಿಮಾ ನಾಯಕಿ ಅದನ್ನು ಹಾಕಿಕೊಂಡಿದ್ದ ಕಾರಣ ಇರಬೇಕು .ನನ್ನ ಅಕ್ಕ ತಂಗಿಯರ ಬಾಯಲ್ಲಿ ಅದು ಲವಿನ್ ಟಕಿ ಅದು ಹೃಸ್ವ ವಾಯಿತು . ಒಮ್ಮೆ ತಂದೆಯವರು ವಿಟ್ಲ ಪೇಟೆಗೆ ಹೋಗುವಾಗ ತಮಗೂ ಅದನ್ನು ತಂದು ಕೊಡುವಂತೆ ದುಂಬಾಲು ಬಿದ್ದರು . ತಂದೆಯವರು  ವಿಟ್ಲ ಪುತ್ತು  ಆಚಾರ್ರ ಫ್ಯಾನ್ಸಿ ಸ್ಟೋರಿಗೆ ತಲುಪುವಾಗ ಅದರ ಹೆಸರು ಟಂಗ್  ಟಕಿ ಎಂದು ಆಯಿತು .ಆದರೂ ಬೇಕಾದ ವಸ್ತು ತೊಂದರೆಯಿಲ್ಲದೇ ಬಂತು . 

ನಮ್ಮ ತಾಯಿ ತುಂಬಾ ಕಟ್ಟು ನಿಟ್ಟು . ಜೋಕ್ ಮಾಡಿಕೊಂಡು ಜೋರಾಗಿ ನಗುತ್ತಿದ್ದರೆ ,ಕಣ್ಣು ಅರಳಿಸಿ "ಎಂತ ಹೆದರಿಕೆ ಇಲ್ಲದ ನಗೆ "ಎಂದು ಗದರಿಸುವರು .ನನ್ನ ಮೇಲಂತೂ ಅವರಿಗೆ ಯಾವಾಗಲೂ ಅಪ ಧೈರ್ಯ .ಎಲ್ಲಿಗೆ ಹೋಗುವಾಗಲೂ ಬೆಗುಡು ಬೆಗುಡು ಮಾತನಾಡ (ಅಂದರೆ ಅತಿ ಹಾಸ್ಯ ಬೇಡ )..ಅವರು ಮನಸು ತೆರೆದು ನಕ್ಕದ್ದು ನಾನು ಕಂಡಂತೆ  ಬೆಂಗಳೂರಿಗೆ ವಾಲ್ವೊ ಬಸ್ ನ  ವಿಡಿಯೋ ದಲ್ಲಿ ಕಾಮನ ಬಿಲ್ಲು ಸಿನಿಮಾ ದಲ್ಲಿ ರಾಜಕುಮಾರ್ ಅಳುತ್ತಿರುವ ಮಗುವಿಗೆ ಸೀರೆ ಉಟ್ಟು ಬಾಟ್ಲಿ ಹಾಲು ಕುಡಿಸುವ ದೃಶ್ಯ ನೋಡಿ . ಹಾಗೆ ನಮ್ಮ ಹಾಸ್ಯ ಪ್ರಜ್ಞೆ ಸುಪ್ತಾವಸ್ಥೆ ಯಲ್ಲಿ ಇದ್ದು ಈಗ ಪ್ರದರ್ಶನ ಗೊಳ್ಳುತ್ತಿವೆ . ತಾಯಿಗೆ ನಾವು ಹತ್ತು ಮಕ್ಕಳು ,ನಮ್ಮನ್ನೆಲ್ಲಾ  ಒಂದು ದಾರಿಗೆ ತರಬೇಕಾದರೆ ಅವರು ಪಟ್ಟ ಪಾಡು ಊಹಿಸಿ ಕೊಳ್ಳಿ ..ಗಂಡು ಹುಡುಗರಿಗೆ ಬೆತ್ತದ ರುಚಿ ತೋರಿಸುತ್ತಿದ್ದರೂ ಹುಡುಗಿಯರು ಮದುವೆಯಾಗಿ ಹೋಗುವವವರು ಎಂದು ವಿನಾಯತಿ ಇತ್ತು