ಬೆಂಬಲಿಗರು

ಬುಧವಾರ, ಅಕ್ಟೋಬರ್ 16, 2024

ಕಾಡುವ ಸಾವಿನ ರೂಪಾಂತರ

 ಸಾವುಗಳು ಬಹುವಾಗಿ ಕಾಡುತ್ತಿವೆ . ಹಿರಿಯ ಯರಾದ  ಡಾ ಎನ್ ಟಿ ಭಟ್ ಅವರು ಒಂದು ಕಡೆ  ಇತ್ತೀಚಿಗೆ ಶುಭ ಸಮಾರಂಭ ಗಳೆಂದು ಕರೆಯಿಸಿ ಕೊಳ್ಳುವ   ಮದುವೆ ಮುಂಜಿ ಯಂತಹುಗಳಿಂದ  ವೈಕುಂಠ ಸಮಾರಾಧನೆ ,ಶ್ರಾದ್ಧ ಇತ್ಯಾದಿಗಳಲ್ಲಿ ಭಾಗವಹಿಸುವುದೇ ಹೆಚ್ಚಾಗಿದೆ ಎಂದು ಉಲ್ಲೇಖಿಸಿದ್ದ ನೆನಪು . ದಿವಂಗತ ರಾಗಿರುವ ಹಾಸ್ಯ ಪ್ರವೃತ್ತಿಯ ನಮ್ಮ ಪುರೋಹಿತರೊಬ್ಬರು ಮೊದಲನೇ ವರ್ಗಕ್ಕೆ ಸಿವಿಲ್ ಕೇಸ್ ಎಂದೂ ಮತ್ತೊಂದನ್ನು ಕ್ರಿಮಿನಲ್ ಕೇಸ್ ಎಂದೂ ವರ್ಗೀಕರಿಸಿ ಸೂಚ್ಯವಾಗಿ ಹೇಳುತ್ತಿದ್ದರು . 

ನನ್ನ ಅಜ್ಜ ಆಗಾಗ ಶ್ರೀಕೃಷ್ಣನನ್ನು ಉಲ್ಲೇಖಿಸಿ ಹೇಳುತ್ತಿದ್ದ ಮಾತು "ಆತ್ಮಕ್ಕೆ ಸಾವು ಇಲ್ಲ ,ದೇಹಕ್ಕೆ ಮಾತ್ರ ,ಸಾವಿಗೆ ಅಳಬಾರದು . ನಾನು ನಿರ್ದೇಶಿಸಿದಂತೆ ಪಾತ್ರ ನಿರ್ವಹಿಸಿ ರಂಗ ಮಂಚದಿಂದ ನಿರ್ಗಮಿಸು "

ನನಗೆ ಅರಿವು ಬಂದ ಮೇಲೆ ಮನೆಯಲ್ಲಿ ಸಂಭವಿಸಿದ ಮೊದಲ ಸಾವು ನನ್ನ ದೊಡ್ಡಪ್ಪ ,ಸಿನೆಮಾ ನಟ ಗಣಪತಿ ಭಟ್ ಅವರದ್ದು .ನನ್ನ ಎಸ್ ಎಸ್ ಪರೀಕ್ಷೆಗೆ ಕೆಲವು ದಿನಗಳು ಇನಮ್ಮನ್ನು ರುವಾಗ . ಅಜ್ಜ ಅಜ್ಜಿ  ಬದುಕಿದ್ದರು . ದೊಡ್ಡಪ್ಪನ ಶವ ವನ್ನು  ಮದ್ರಾಸ್ ನಿಂದ ಕಾರಿನಲ್ಲಿ ತಂದು ನಮ್ಮ ಹೊಲದಲ್ಲಿ ಅಂತ್ಯ ಸಂಸ್ಕಾರ . ಮನೆಯಲ್ಲಿ ಎಲ್ಲರೂ ಶೋಕ ತಪ್ತರು . ದೊಡ್ಡಪ್ಪ ವರ್ಷಕ್ಕೊಮ್ಮೆ ಮನೆಗೆ ಬರುತ್ತಿದ್ದರೂ ನಮಗೆಲ್ಲ ಅವರ ಮೇಲೆ ಪ್ರೀತಿ ಗೌರವ .  ಬಿಳಿ ಪೈಜಾಮ ಮತ್ತು ಷರಟು ,ನುಣುಪು ಮುಖ  . ತಮ್ಮಂದಿರ ಮಕ್ಕಳ ಮೇಲೆ ಮಮತೆ . ಓದಿ ಉಶಾರಿ ಆಗ ಬೇಕು ಎಂದು ಹಾರೈಸುತ್ತಿದ್ದರು . ನಿಧನದ ಸುದ್ದಿ ಕೇಳಿ ನೆರೆ ಕರೆಯವರು ,ಬಂಧುಗಳು ಮನೆಗೆ ಆಗಮಿಸಿ ಸಮಾಧಾನ ಹೇಳಿ ಹೋಗುವರು .ಮನೆ ಕೆಲಸದವರು ತಾವೇ ಶವ ಸಂಸ್ಕಾರಕ್ಕೆ ಮತ್ತು ಉತ್ತರ ಕ್ರಿಯೆಗೆ ಬೇಕಾದ ವ್ಯವಸ್ಥೆ ಮಾಡುವರು . ಅಳುವೂ ಹೆಚ್ಚು ,ಸಮಾಧಾನ ಮಾಡುವವರೂ ಅಷ್ಟೇ . ಎಷ್ಟು ವಯಸ್ಸಾದವರೂ ಸತ್ತರೂ ಏನೋ ಕಳಕೊಂಡ  ಮತ್ತು ಇನ್ನೂ ಸ್ವಲ್ಪ ದಿನ ಇರಬೇಕಿತ್ತು ಭಾವ. ನನ್ನ ಅಜ್ಜಿ ಮೌನವಾಗಿ ದುಃಖ ಸಹಿಸಿದರು , ಸಮಾರಂಭದಲ್ಲಿ ಮಾಡಿದ ವಿಶೇಷ ಗಳನ್ನು ತಿನ್ನಲಿಲ್ಲ . ಬಂದ ಹತ್ತಿರದ ನೆಂಟರು  ದುಃಖ ಹಂಚಿಕೊಳ್ಳಲು ಹಲವು ದಿನಗಳು ನಮ್ಮಲ್ಲಿಯೇ ಇದ್ದರು

ಇದಾದ ಮೇಲೆ ಅಜ್ಜ ,ಅಜ್ಜಿ ಇಹಲೋಕ ತ್ಯಜಿಸಿದರು . ದೊಡ್ಡಪ್ಪ ತೀರಿ ಇಪ್ಪತ್ತು ವರ್ಷಗಳ ನಂತರ ಅಪ್ಪ ತೀರಿ ಕೊಂಡರು .ಅವರು ಮೆದುಳಿನ ರಕ್ತ ಸ್ರಾವದಿಂದ ಹಠಾತ್ ಅಸ್ವಸ್ಥ ರಾಗಿ ಆಸ್ಪತ್ರೆ ಸೇರಿದಾಗ ನಾನು ಚೆನ್ನೈ ನಲ್ಲಿ ಇದ್ದು ರಾತ್ರೋ ರಾತ್ರಿ ಮಂಗಳೂರಿಗೆ ಬಂದೆ . ಮರಣೋತ್ತರ ಕಾರ್ಯಕ್ರಮ ಉಪ್ಪಿನಂಗಡಿ ದೇವಳದಲ್ಲಿ (ನಾವು ಆಗ ಆಸ್ತಿ ಮಾರಿ ಆಗಿತ್ತು ). ಬಂಧುಗಳು ಮತ್ತು ಅಂಗ್ರಿಯ ನೆರೆ ಹೊರೆಯವರು ಪ್ರೀತಿಯಿಂದ ಭಾಗವಹಿಸಿದ್ದರು . ಕೊನೆಯ ದಿನ ಪ್ರಾಜ್ಞ ರಾದ  ಶಿರಂಕಲ್ಲು ಈಶ್ವರ ಜೋಯಿಶರು ತಂದೆಯವರ ಬಗ್ಗೆ  ಮಾಡಿದ ನುಡಿ ನಮನ ಆಲಿಸಿದ  ಎಲ್ಲರ ಮಡು ಗಟ್ಟಿದ  ದುಃಖ ಕಣ್ಣಲ್ಲಿ ತುಂಬಿ ಬಂತು . ಆಗಲೂ ತಂದೆಯವರು ಇನ್ನೂ ಸ್ವಲ್ಪ ಕಾಲ ಇರಬೇಕಿತ್ತು ಎಂಬ ಭಾವನೆ . 

ಅದಾಗಿ ಇಪ್ಪತ್ತು ವರ್ಷದಲ್ಲಿ ನನ್ನ ಕಿರಿಯ ಸಹೋದರ ಶ್ರೀನಿವಾಸ ಕ್ಯಾನ್ಸರ್ ನಿಂದ ತೀರಿ ಕೊಂಡ . ನಮಗೆಲ್ಲಾ ಕಿರಿಯವನು , ಉಳಿಸಲು ಮಾಡಿದ ಪ್ರಯತ್ನ ವೆಲ್ಲಾ ವಿಫಲ ವಾಯಿತು . ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ಅವನು ತೀರಿ ಕೊಂಡ ದಿನ ದುಃಖ ತಪ್ತರಾದ ಅವನ ನೂರಾರು  ಸಹೋದ್ಯಗಿಗಳನ್ನು ಸಂಭಾಳಿಸುವುದೇ ಕಷ್ಟವಾಯಿತು . ಅವನಿಗಾಗಿ ಬಂಧು ಮಿತ್ರರು  ಐವತ್ತಕ್ಕೂ ಮೀರಿ  ಯೂನಿಟ್ ರಕ್ತ ದಾನ ಸ್ವಯಂ ಪ್ರೇರಿತ  ರಾಗಿ ಕೊಟ್ಟಿದ್ದರು .  ಎಲ್ಲರಲ್ಲೂ ದುಃಖ ದ  ಛಾಯೆ . 

ಮುಂದೆ ಐದು ವರ್ಷಗಳಲ್ಲಿ ನಮ್ಮ ಅಮ್ಮ . ಈಗ ನಮ್ಮ ದೊಡ್ಡಕ್ಕ . 

ಹಿರಿಯರ ಸಾವಿಗೆ ಪ್ರತಿಕ್ರಿಯೆ ಕೂಡಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ . ಅವರ ಅಗಲಿಕೆ ಶೋಕ ಕ್ಕಿಂತಲೂ ನಿರಾಳತೆ ಉಂಟು ಮಾಡುತ್ತಿದೆ .ಅನಾ ಯೇಸ  ಮರಣಂ ವಿನಾ ದೈನ್ಯೇನ ಜೀವಿತಂ ದೊಡ್ಡದಾಗಿ ಕೇಳಿಸುತ್ತಿದೆ  . ಉತ್ತರ ಕ್ರಿಯಾ ಕಾರ್ಯಕ್ರಮಗಳು ವೈದಿಕ ಆಚರಣೆಗೆ ಸೀಮಿತವಾಗಿ ಊಟವಾದ ಕೂಡಲೇ ಹೆಚ್ಚಿನವರು ತಮ್ಮ ತಮ್ಮ ಮನೆಗೆ . 

ಆಸ್ಪತ್ರೆಯಲ್ಲಿಯೂ ಇದರ ಪೂರ್ವ ಚಿತ್ರಣ ಕಾಣುತ್ತೇವೆ . ಗಂಭೀರ ಕಾಯಿಲೆ ಯಿಂದ ಹಲವು ದಿನಗಳು ಹಿರಿಯರು ಮಲಗಿದರೆ ನೋಡಿಕೊಳ್ಳಲು ಯಾರೂ ಇಲ್ಲ . ನೋಡಲು ಬರುವ ಬಂಧುಗಳೂ ಕಡಿಮೆ . ಕಷ್ಟದಲ್ಲಿ ಬದುಕಿದರೆ ಬಂಧುಗಳಿಗೆ ಸಂತೋಷವೋ ದುಃಖವೋ ಅರಿಯುವುದು ಕಷ್ಟ . 

ಇದರಲ್ಲಿ ಯಾರನ್ನೂ ದೂಷಿಸುವುದಕ್ಕೆ ಇಲ್ಲ . ಕೊನೆಗೆ ಭಗವಂತ ಹೇಳಿದಂತೆ ಆಪ್ತರು ಅಗಲಿದಾಗ ಶೋಕಿಸ ಬಾರದು ಎಂಬುದು ಡಿಫಾಲ್ಟ್ ಆಗಿದೆ . 

ಹಿಂದೆ ನಾನು ಹೇಳಿದಂತೆ ಬದುಕಿದ್ದಾಗ ತಂದೆ ತಾಯಿಯನ್ನು ಚೆನ್ನಾಗಿ ನೋಡಿ ಕೊಳ್ಳಲು ಆಗದಿದ್ದರೂ ವೈಕುಂಠ ಸಮಾರಾಧನೆ ಗೌಜಿಯಿಂದ ಮಾಡುತ್ತಾರೆ . ಅವರ ಆತ್ಮಕ್ಕೆ ಮತ್ತು ಲೋಕಕ್ಕೆ ಅಂಜಿ . ಮಕ್ಕಳು ಒಬ್ಬೊಬ್ಬರ ಕಡೆಯಿಂದ ಒಂದೊಂದು ಸ್ವೀಟ್ ಇರುತ್ತದೆ .ಸಕ್ಕರೆ ಕಾಯಿಲೆಯಿಂದ ಸತ್ತ ಒಬ್ಬರ ಮಗ ನಾಲ್ಕು ಸಿಹಿ ತಿಂಡಿ ಮಾಡಿಸಿದ್ದರು . ತಮ್ಮ ತಂದೆಗೆ ಎಳೆವೆಯಲ್ಲಿಯೇ ಈ ಕಾಯಿಲೆ ಬಂದು ಒಲ್ಲದ ಮನಸಿಂದ ಜೀವನವಿಡೀ ಪಥ್ಯ ಮಾಡಿದ್ದರು . ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶ

 

ಮಂಗಳವಾರ, ಅಕ್ಟೋಬರ್ 15, 2024

ಶಿಷ್ಯ ಕಣ್ಮಣಿಗಳು

 

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ
ಚಕ್ಷುರುನಿರ್ಮಿಲಿತಂ ಏನ್ ತಸ್ಮೈ ಶ್ರೀ ಗುರವೇ ನಮಃl

ಅಜ್ನಾನ ವೆಂಬ  ದೃಷ್ಟಿ (ಕಣ್ಣ )ಪೊರೆಯನ್ನು  ಜ್ನಾನ ವೆಂಬ ಅಂಜನ ಮೂಲಕ ನಿವಾರಿಸಿ  ದೃಷ್ಟಿ  ನೀಡಿದ ಗುರುವೇ ನಿಮಗೆ ನಮಸ್ಕಾರ ,
 ಇದು ವಿದ್ಯೆ ಕಲಿಸಿದ ಗುರುಗಳನ್ನು ನೆನೆಸಿ ಕೊಳ್ಳುವ ಪ್ರಸಿದ್ದ ಶ್ಲೋಕ .
 
ಕೆಲ ವರ್ಷಗಳ ಹಿಂದೆ ಒಂದು ಸಂಜೆ ಹಠಾತ್  ನನ್ನ ಎಡಗಣ್ಣಿನ ಮುಂದೆ ಮಿಂಚು ಗಳ  ಗೊಂಚಲು ,ಆಮೇಲೆ ಹುಳಗಳು ಹರಿದಾಡಿದಂತೆ  ಕಾಣಿಸ ತೊಡಗಿದವು . ಬೆಳಗಾವಿಯಲ್ಲಿ ನೆಲೆಸಿರುವ ನನ್ನ ಮಿತ್ರ ಎಮ್ ಬಿ ಬಿ ಎಸ ಸಹಪಾಠಿ  ಡಾ ವಿವೇಕ ವಾಣಿ ಅವರಿಗೆ ಫೋನಾಯಿಸಿದಾಗ ಅದು ದೊಡ್ಡ ತೊಂದರೆ ಇರಲಿಕ್ಕಿಲ್ಲ ,ಆದರೂ ಮಂಗಳೂರಿನಲ್ಲಿ ಡಾ ಶ್ರೀಪತಿ ಕಾಮತ್  ಎಂಬ ಉತ್ಸಾಹಿ ಅಕ್ಷಿಪಟ ತಜ್ಞರು ಇದ್ದಾರೆ .ಅವರನ್ನು ತುರ್ತು ಕಾಣಿರಿ ಎಂದು ಸಲಹೆ ಮಾಡಿದರು .. ಅದರಂತೆ ವೈದ್ಯರ  ಅಪ್ಪೋಯಿಂಟ್ಮೆಂಟ್ ತೆಗೆದು ಕೊಂಡು ಅವರ ಕ್ಲಿನಿಕ್  ನೇತ್ರ ಜ್ಯೋತಿ ರೆಟಿನಾ ಸೆಂಟರ್ (ಕಲೆಕ್ಟರ್ ಗೇಟ್ ಬಳಿ ) ನನ್ನ ಸರದಿ ಬಂದಾಗ ಪರೀಕ್ಷಾ ಕೋಣೆಗೆ ಕಾಲಿಟ್ಟೆ . ನನ್ನನ್ನು ನೋಡಿದೊಡನೆ ವೈದ್ಯರು "ಸಾರ್ ನಾನು ಎಂ ಬಿ ಬಿ ಎಸ್ ನಲ್ಲಿ ನಿಮ್ಮ ವಿದ್ಯಾರ್ಥಿ ಎಂದು ಸಂತೋಷ ಮತ್ತು ಗೌರವದಿಂದ ಕೂರಿಸಿ ವಿವರವಾದ ತಪಾಸಣೆ ನಡೆಸಿ ,"ಅಕ್ಷಿ ದ್ರವ ಕುಗ್ಗಿ ಅದರ ಪೊರೆ ಅಕ್ಷಿ ಪಟವನ್ನು ಎಳೆದಾಗ ಸಣ್ಣ ಗಾಯ ಆಗಿ ಬಂದ ಸಮಸ್ಯೆ . "ಎಂದು ಲೇಸರ್ ಚಿಕಿತ್ಸೆ ಮಾಡಿ ಧೈರ್ಯ ಹೇಳಿ ಕಳುಹಿಸಿದರು . ಅದರಿಂದ ನನ್ನ ತೊಂದರೆ ಉಲ್ಬಣಿಸದೆ ಶಮನ ಆಯಿ. ತು . ಕಳಿಸಿದ ಗುರುವಿಗೆ ವೈದ್ಯೋಪಚಾರ ಮಾಡಿದ ಧನ್ಯತೆ ಅವರ ಮುಖದಲ್ಲಿ ಕಂಡೆ ,
ಈಗ ಕೆಲವು ತಿಂಗಳಿನಿಂದ ನನ್ನ ಬಲದ ಕಣ್ಣು ಸ್ವಲ್ಪ ಬಲೆ ಬಲೆ ಯಂತೆ ಆಗಲು  ವೈದ್ಯ ಮಿತ್ರ ಡಾ ಹರಿ ಕೃಷ್ಣ ಕಾಮತ್ ಅವರಿಗೆ ತೋರಿಸಲು  ಕಣ್ಣ ಪೊರೆ ಆರಂಭವಾಗಿದೆ ಎಂದರು . ಹಾಗೇ ಒಂದು ದಿನ ಕಾರ್ಯಾರ್ಥ ದೇರಳ ಕಟ್ಟೆಗೆ ಹೋಗಿದ್ದವನು ಬರುವ ದಾರಿಯಲ್ಲಿ ಮೆಲ್ಕಾರಿನಲ್ಲಿ ಅಧೋಕ್ಷಜ ನೇತ್ರಾಲಯ ನಡೆಸುತ್ತಿರುವ ನನ್ನ ಮತ್ತೊಬ್ಬ ಶಿಷ್ಯ  ಡಾ ದುರ್ಗಾ ಪ್ರಸಾದ್ ನಾಯಕ್ ಅವರಲ್ಲಿ ವಿವರವಾಗಿ ಪರೀಕ್ಷೆ ಮಾಡಿಸಿಕೊಂಡು ,ಅವರ ಸಲಹೆಯಂತೆ ವಾರದ ಹಿಂದೆ ಪೊರೆ  ನಿವಾರಣಾ ಶಸ್ತ್ರ ಕ್ರಿಯೆ ಮತ್ತು ಕೃತಕ ಲೆನ್ಸ್ ಧಾರಣೆ ಮಾಡಿಸಿಕೊಂಡೆ  .ಬಹಳ ಪ್ರೀತಿ ಮತ್ತು ಗೌರವ ದಿಂದ ನನ್ನ ಚಿಕಿತ್ಸೆ ನಡೆಸಿ ಕೊಟ್ಟರು . ಡಾ ದುರ್ಗಾ ಪ್ರಸಾದ್ ಎಂ ಬಿ ಬಿ ಎಸ್ ನಲ್ಲಿ ನನ್ನ ಯೂನಿಟ್ ನಲ್ಲಿಯೇ ಇದ್ದವರು . ಪ್ರತಿಭಾವಂತ ..ಅವರ ಶ್ರೀಮತಿ ಡಾ ಪಲ್ಲವಿ ಕೂಡಾ ನನ್ನ ವಿದ್ಯಾರ್ಥಿನಿ ಮತ್ತು ಈಗ ನೇತ್ರ ತಜ್ಞೆ . ಉಪ್ಪಳದಲ್ಲಿ ಕೂಡಾ ಚಿಕಿತ್ಸಾಲಯ ತೆರೆದಿದ್ದಾರೆ .
ಇವರೆಲ್ಲಾ ನನ್ನ ಹೆಮ್ಮೆಯ ವಿದ್ಯಾರ್ಥಿಗಳು .ಗುರುವನ್ನು ಮೀರಿದ ಶಿಷ್ಯರು . ನನ್ನ ಕಣ್ಣಿನ ತಿಮಿರೆಯನ್ನು ಹೋಗಲಾಡಿಸಿ ದೃಷ್ಟಿ ಕೊಟ್ಟವರು . ಇದಕ್ಕಿಂತ ಸಂತೋಷ ಅಧ್ಯಾಪಕನಾದವನಿಗೆ ಬೇಕೇ ?
(ಉಳಿದಂತೆ ನನ್ನ ಅಕ್ಷಿ ಆರೋಗ್ಯ ವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಡಾ ಹರಿ ಕೃಷ್ಣ ಕಾಮತ್ ಅವರಿಗೆ ಋಣಿ )
                                           ಡಾ ಶ್ರೀಪತಿ ಕಾಮತ್
                                   ಡಾ ದುರ್ಗಾ ಪ್ರಸಾದ್ ನಾಯಕ್
 

ಭಾನುವಾರ, ಸೆಪ್ಟೆಂಬರ್ 15, 2024

ಮರೆಯಾದ ಅಕ್ಕ


     

ನನ್ನ ಹಿರೀ ಅಕ್ಕ ಪರಮೇಶ್ವರಿ ನಮ್ಮನ್ನು ಬಿಟ್ಟು ಇಂದು ಅಗಲಿದರು.ನಿನ್ನೆಯೇ ಸ್ವಲ್ಪ ಹೊಟ್ಟೆ ನೋವು ಎಂದು ನನ್ನ ಮನೆಯವರಲ್ಲಿ ತಿಳಿಸಿದ್ದು ಕಡಿಮೆ ಆಗದಿದ್ದರೆ ಇಂದು ಆಸ್ಪತ್ರೆಗೆ ಬರುವ ಯೋಚನೆ ಎಂದು . ರಾತ್ರಿ ನೋವು ಉಲ್ಬಣವಾದರೂ ತಮ್ಮನಿಗೆ ತೊಂದರೆ ಕೊಡುವುದು ಬೇಡ ಎಂದು ಸಹಿಸಿ ಇಂದು ಮುಂಜಾನೆ  ಆಸ್ಪತ್ರೆಗೆ ಬಂದವರೇ ಹೃದಯಾಘಾತ ದಿಂದ ಆಸು ನೀಗಿದರು . ಅದು ತಾಯಿ ಹೃದಯ ;ತಮ್ಮ ಪಾಪ ದಿನವಿಡೀ ಆಸ್ಪತ್ರೆ ಯಲ್ಲಿ ದುಡಿದು ದಣಿದು ಬಂದಿರುತ್ತಾನೆ ;ಸ್ವಲ್ಪ ವಿಶ್ರಮಿಸಲಿ ಎಂದು .

ಅಕ್ಕ  ನನಗಿಂತ ಹತ್ತು ವರ್ಷಗಳ ಹಿರಿಯಳು. ಬಾಲ್ಯದಲ್ಲಿ ಅವಳನ್ನು ನಮ್ಮ ಮನೆಯಲ್ಲಿ ಕಂಡ ನೆನಪು ಇಲ್ಲ . ಏನಿದ್ದರೂ ಅವಳ ಮದುವೆಯಾಗಿ ಹೋದ ಮೇಲೆ ಅಕ್ಕನ ಮನೆಯಲ್ಲಿಯೇ ಒಡನಾಟ . ಒಡ ಹುಟ್ಟಿದವರು ಎಂದರೆ ಪ್ರೀತಿ . ಅವಳ ಮದುವೆಯಾದ ಕಾಲದಲ್ಲಿ ಉಪ್ಪಿನಂಗಡಿ ಯಿಂದ ಆರು ಮೈಲು ನಡೆದೇ ಹೋಗ ಬೇಕು . ನಾಗರೀಕತೆ ಗಾಳಿ ಬೇಸದಿದ್ದ ಊರು ಆದುದರಿಂದ ಮಾನವೀಯತೆ ಯಥೇಷ್ಟ ಇತ್ತು . ನನ್ನ ಬಾವ ಪ್ರಾಥಮಿಕ ಶಾಲೆ ಅಧ್ಯಾಪಕರು .ಅಕ್ಕನದೇ ಕೃಷಿ ವ್ಯವಸಾಯ ಉಸ್ತುವಾರಿ . ನಾಲ್ಕು ಹೆಣ್ಣು ಮಕ್ಕಳು .ಎಲ್ಲರಿಗೂ ಯೋಗ್ಯ ವಿದ್ಯಾಭ್ಯಾಸ ಕೊಡಿಸಿ ನೆಲೆ ಮುಟ್ಟಿಸಿ ,ಬಾವ ತೀರಿ ಹೋದ ಮೇಲೂ ತಾನು  ಮನೆಯನ್ನು ಬಿಡಲು ಸಮ್ಮತಿಸದೆ  ಕೊನೆಯುಸಿರು ತನಕ ತನ್ನ ಕರ್ಮ ಭೂಮಿಯಲ್ಲಿ ನೆಲೆ ನಿಂತರು .

ಅಕ್ಕ ಸಂಗೀತ ಪ್ರೇಮಿ .ಗುತ್ತು ಗೋವಿಂದ ಭಟ್ ಮತ್ತು  ಕಾಂಚನ ಐಯ್ಯರ್ ಅವರಲ್ಲಿ ಸಂಗೀತ ಅಧ್ಯಯನ .ಮಗಳು ,ಮೊಮ್ಮಗಳೂ ಅದೇ ದಾರಿ . ಗ್ರಾಮೀಣ ಭಾಗ ಉರುವಾಲಿನಲ್ಲಿ  ಸಂಗೀತ ಶಾಲೆ  ಆರಂಬಿಸುವ ಹಿಂದೆ  ಅವರ ಪರಿಶ್ರಮ ಇತ್ತು . ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ನಮಗೂ ಸಂಗೀತ ಗಾಳಿ .

         ನಮ್ಮ ಏಳಿಗೆ ಕಂಡು ಹೆಮ್ಮೆ.    ನಾವು ಅಕ್ಕನ ಮನೆಗೆ ರಜೆಯಲ್ಲಿ ಹೋದಾಗ ಸಂಭ್ರಮ .  . ಕೋಟಿ ಚೆನ್ನಯ ಚಿತ್ರದ ಎಕ್ಕ ಸಕ್ಕ ಎಕ್ಕ ಸಕ್ಕ ಎಕ್ಕ ಸಕ್ಕಲಾ ಅಕ್ಕ ಪಂಡ್ಡು ಪಂಮೀನೆಕ್ಲು ಬತ್ತೇರಿತ್ತೆಲಾ ನೆನಪಿಸುವ ಚಿತ್ರಗಳು .

ನಮ್ಮ ತಲೆಮಾರಿನವರಿಗೆ  ಹಿರಿಯರೊಡಗಿನ ಸಂಬಂಧಗಳು ಕಿರಿಯರೊಡನೆ ಇರುವುದಕ್ಕಿಂತ  ಹೆಚ್ಚು ದಟ್ಟವಾಗಿ  ಇತ್ತು .

ಮಂಗಳವಾರ, ಆಗಸ್ಟ್ 27, 2024

  ಅಧ್ಯಾಪಕ 

ನಿರಂತರ ಅಧ್ಯಯನ ಒಳ್ಳೆಯ  ಅಧ್ಯಾಪಕನ  ಅವಶ್ಯಕತೆ .  ಬಿ ಎಡ್  ಸೇರಿ ಪದವಿ  ಸ್ನಾತಕೋತ್ತರ ಪದವಿ ಪಿ ಎಚ್ ಡಿ ಇದ್ದರೆ ಸಾಕು ಎಂಬ ನಂಬಿಕೆ ಇದೆ . ದೊಡ್ಡ ಡಿಗ್ರಿ ಇದ್ದಷ್ಟು ಅಧಿಕ  ವೇತನ ಶ್ರೇಣಿ . ಶಿಕ್ಷಣ ವಾಣಿಜ್ಯೀಕರಣ ಆಗಿರುವ ಈ ದಿನಗಳಲ್ಲಿ  ಪದವಿಗಳ ಮೌಲ್ಯಾಂಕನವೇ  ಪ್ರಶ್ನಾರ್ಹ ಆಗಿರುವಾಗ  ಪದವಿಯ ತೂಕ ನೋಡಿ ಅಧ್ಯಾಪಕನ ನಿಜ ಮೌಲ್ಯ ನಿರ್ಧರಿಸುವುದು ತಪ್ಪಾಗುತ್ತದೆ . ಒಂದು ವಿಷಯದಲ್ಲಿ ಸ್ನಾತಕ ,ಸ್ನಾತಕೋತ್ತರ ಪದವಿ ಮಾತ್ರ ಇರುವ ವ್ಯಕ್ತಿ ಪಿ ಎಚ್ ಡಿ ಉಪಾಧಿ ಇರುವವರಿಗಿಂತ ಒಳ್ಳೆಯ ಅಧ್ಯಾಪಕ ನಾಗಿ ಇರ ಬಹುದು . ಒಂದು ಪದವಿ ಗಳಿಸಿದ ಮೇಲೆ ಅಧ್ಯಯನ ಅನಾವಶ್ಯಕ ಎಂಬ ನಂಬಿಕೆ ಸಾರ್ವತ್ರಿಕ ಅಗಿದೆ. ಇನ್ನು ವೈದ್ಯಕೀಯ ರಂಗವೂ ಸೇರಿ ತಥಾ ಕಥಿತ ನಿರಂತರ ಕಲಿಕಾ ಕಾರ್ಯಕ್ರಮಗಳು ಹರಕೆ ಸಂದಾಯ ಕಾರ್ಯಕ್ರಮಗಳೂ ,ಪ್ರದರ್ಶನ ವೇದಿಕೆಗಳೂ ಆಗಿ ಮಾರ್ಪಡುತ್ತಿವೆ ಎಂಬುದು ವಿಷಾಧನೀಯ .ಅಧ್ಯಾಪಕ ವೃತ್ತಿಗೆನೈಜ ಆಸಕ್ತಿ   ಇರುವವರು ಮಾತ್ರ ಬರಬೇಕು    ಕೇವಲ ಸಂಬಳ ಸಾರಿಗೆ ಗಾಗಿ ಅಲ್ಲ .ಮತ್ತು ತನ್ನ ಅಧ್ಯಯನ ಶೀಲತೆ ಕುಂದಿದಾಗ  ಈ ವೃತ್ತಿಗೆ ವಿದಾಯ ಹೇಳ ಬೇಕು.

  ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಗಳಲ್ಲಿ ಎರಡು ವಿಧದ ಅಧ್ಯಾಪಕರು ಇದ್ದರು . ಪಾಠ ವಿಷಯವನ್ನು ಚೆನ್ನಾಗಿ ಓದಿ  ಮನನ ಮಾಡಿ ತರಗತಿಗೆ ಬರುವವರು ಒಂದು ವರ್ಗ . ಮತ್ತು ಹಾಗೆಯೇ ಕ್ಲಾಸ್ ಗೆ ಬಂದು ಪಠ್ಯ ಪುಸ್ತಕ ಓದುವವರು ಎರಡನೇ ವರ್ಗ . ಇವರು ಪಠ್ಯ ಪುಸ್ತಕ ಕೂಡಾ ಯಾವುದಾದರೂ ವಿದ್ಯಾರ್ಥಿಯ ಕೈಯ್ಯಿಂದ ತೆಗೆದು ಕೊಳ್ಳುವವರು, "ನಿನ್ನೆ ನಾವು ಎಲ್ಲಿ ಇದ್ದೆವು ?ಎಂದು ವಿದ್ಯಾರ್ಥಿಗಳನ್ನೇ ಕೇಳಿ ಅಲ್ಲಿಂದ ಮುಂದುವರಿಕೆ .ಒಂದು ವಾಕ್ಯ ಓದಿ ಅದರ ಪೂರ್ವಾರ್ಧ ಪ್ರಶ್ನಾರ್ಥಕ ವಾಗಿ ಪುನರುಕ್ತಿ . ಉದಾ  ಅಶೋಕನು ಸಾಲು ಮರಗಳನ್ನು ನೆಡಿಸಿದನು . ಎಂದು ಓದಿ ಅಶೋಕನು ಸಾಲು ಮರಗಳನ್ನು ? ಎಂಬ ಪ್ರಶ್ನೆ .ಮಕ್ಕಳು ಒಕ್ಕೊರಲಿನಿದ ನೆಡಿಸಿದನು ಎನ್ನಬೇಕು . ಪಠ್ಯ ಪುಸ್ತಕದಲ್ಲಿ ಮುದ್ರಣ ತಪ್ಪು ಇದ್ದರೂ ಅವರ ಗಮನಕ್ಕೆ ಬಾರದು .ಉದಾಹರಣೆಗೆ ನನ್ನ ಸಮಾಜ ಅಧ್ಯಾಪಕರು ಪುಸ್ತಕದಲ್ಲಿ ಇದ್ದುದನ್ನು ಓದುತ್ತಾ "ಕಾರ್ನ್ ವಾಲೀಸ ನು 1799 ನೇ ಫೆಬ್ರುವರಿ 30 ರಂದು ನಾಲ್ಕನೇ ಮೈಸೂರ್ ಯುದ್ಧದಲ್ಲಿ ಟಿಪ್ಪು ಸುಲ್ತಾನ ನನ್ನು ವಧಿಸಿದನು ' ಎಂಬುದನ್ನು ಹಾಗೆಯೇ ಓದಿ ಪುರರುಕ್ತಿ ಮಾಡಿಸುವಾಗ ಒಬ್ಬ ವಿದ್ಯಾರ್ಥಿ ಸಾರ್ ಫೆಬ್ರುವರಿ ಯಲ್ಲಿ ಮೂವತ್ತು ಇಲ್ಲವಲ್ಲಾ ಎಂದು ಹೇಳಿದಾಗ ಅವರು ತಬ್ಬಿಬ್ಬು .ಇಲ್ಲಿ ಪಠ್ಯ ವಿಷಯ ತಮಗೇ ಸರಿಯಾಗಿ ಮನನ ಆಗದಿದ್ದರೂ ಯು ಅಂಡರ್ ಸ್ಟಾಂಡ್ ?ಯು ಅಂಡರ್ ಸ್ಟಾಂಡ್ ?ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸುವರು .

ಪ್ರಸಿದ್ದ ವೈದ್ಯ ಪ್ರಾಧ್ಯಾಪಕ ಡಾ ಕೆ ವಿ ತಿರುವೆಂಗಡಮ್ ' ಕಲಿಸುವುದು ಕಲಿಕೆಯ ಉತ್ತಮ ಮಾರ್ಗ . ಯಾವತ್ತೂ ನಿನಗೆ ತಿಳಿದಿರುವ ಜ್ನಾನ ವನ್ನು ಇನ್ನೊಬ್ಬರಿಗೆ ತಿಳಿಸುತ್ತಲಿರು .ನಿನ್ನ ಜ್ನಾನವೂ ವೃದ್ದಿಸುವುದು "ಎನ್ನುತ್ತಿದ್ದರು .ಅದನ್ನು ತಮ್ಮ ಜೀವನದಲ್ಲಿ ಮಾಡಿ ತೋರಿಸಿದರು  ತಮ್ಮ ಇಳಿ ವಯಸ್ಸಿನಲ್ಲೂ ವೈದ್ಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ಲಾಸ್ ತೆಗೆದು ಕೊಳ್ಳುತ್ತಿದ್ದರು .

ಇದೆಲ್ಲಾ ಆಲೋಚನೆ ಬರಲು ಕಾರಣ ಮೊನ್ನೆ ನಿಧನರಾದ ನನ್ನ ಗುರು ಕಮ್ಮಜೆ ಸುಬ್ಬಣ್ಣ ಭಟ್ ಅವರ ನೆನಪು . ನೈಜ ಅಧ್ಯಯನ ಶೀಲ ಅಧ್ಯಾಪಕ ರನ್ನು ಮೊದಲು ನಾನು ಕಂಡುದು ಅವರಲ್ಲಿ .

ಸೋಮವಾರ, ಆಗಸ್ಟ್ 26, 2024

ಆಧಾರ ಪುರಾಣ

 

 ಸರಕಾರ ಆಧಾರ್ ಕಾರ್ಡ್ ಪದ್ದತಿ ಜಾರಿಗೆ ತಂದಾಗ ವ್ಯಕ್ತಿಯ  ಗುರುತು ಖಾತರಿ ಪಡಿಸುವ ಉದ್ದೇಶ ಮಾತ್ರ ಇತ್ತು . ಉದಾ- ಯಾವುದೇ ಸರಕಾರಿ ಯೋಜನೆಯ ಪ್ರಯೋಜನ ಪಡೆಯುವಾಗ ನಿರ್ದಿಷ್ಟ ವ್ಯಕ್ತಿಗೆ ಸಿಗುವಂತೆ  ಖಾತರಿ ಮಾಡಿಕೊಳ್ಳುವುದು . ಆಧಾರ್ ರಾಷ್ಟ್ರೀಯತೆಯನ್ನು  ಖಾತರಿ ಮಾಡುವುದಿಲ್ಲ . ಈಗ ಬ್ಯಾಂಕ್ ಖಾತೆ ,ಅಸ್ತಿ ನೋಂದಣಿ ,ಗ್ಯಾಸ್ ಕನೆಕ್ಷನ್ ,ಆಸ್ಪತ್ರೆಯಲ್ಲಿ ದಾಖಲು ಎಲ್ಲಾ ಕಡೆ ಆಧಾರ್ ಕೇಳುತ್ತಾರೆ .ದಿನಗಳ ಹಿಂದೆ ಗ್ಯಾಸ್ ಏಜನ್ಸಿ ಯವರು ಆಧಾರ್ ಬೆರಳಚ್ಚು ದೃಡೀಕರಣ ಮಾಡಲು ಸಂದೇಶ ಕಳುಸಿದರು . ನನಗೆ ಗ್ಯಾಸ್ ಸಬ್ಸಿಡಿ ಇಲ್ಲ .ಆದರೂ ದೃಢೀಕರಣ ಏಕೆ ?ಏಜನ್ಸಿ ಯವರಲ್ಲಿ ಕೂಡಾ ಉತ್ತರ ಇರಲಿಲ್ಲ .. ಕುರುಡು ಕಾನೂನುಗಳು . ಬದುಕಲು ಮತ್ತು ಸಾಯಲೂ ಆಧಾರ ಬೇಕು . 

 ನಿಮ್ಮ ಗ್ರಾಹಕರನ್ನು ಅರಿಯಿರಿ (Know your customer)  ಅಥವಾ ಸದಾ ಕಾಡುವ ಕೆ ವೈ ಸಿ  ಒಂದು ಕಾಟ ವಾಗಿ ಮಾರ್ಪಟ್ಟಿದೆ . ಅದಕ್ಕೂ ಆಧಾರ ಬೇಕು . ಬ್ಯಾಂಕ್ ,ಫೋನ್ ,ಗ್ಯಾಸ್ ,ಫಾಸ್ಟಾಗ್ ,ಆಸ್ತಿ ನೋಂದಣಿ  ,ಬಸ್ ಟಿಕೆಟ್ ಇತ್ಯಾದಿ  ಇತ್ಯಾದಿ . ಮೋಸ ಮಾಡುವವರು   ಕೆ ವೈ ಸಿ ಅಪ್ಡೇಟ್ ಎಂದು ಮೆಸೇಜ್ ಲಿಂಕ್ ಕಳುಹಿಸಿ ಪಂಗ ನಾಮ ಹಾಕುವ ಸುದ್ದಿ ಕೇಳುತ್ತಿರುತ್ತೇವೆ . ನಿಮ್ಮ ಆಧಾರ್ ನಂಬರ್ ನಲ್ಲಿ ಬುಕ್ ಮಾಡಿದ ಪಾರ್ಸೆಲ್ ನಲ್ಲಿ ನಿಷೇಧಿತ ವಸ್ತುಗಳಿವೆ ಎಂಬ ಸಂದೇಶ ಕಳುಹಿಸಿ ಬೆದರಿಸಿ ಇ -ದರೋಡೆ ಮಾಡುವವರೂ ಇದ್ದಾರೆ . ಬ್ಯಾಂಕ್ ಗಳಲ್ಲಿ ನೀವು ಕೆ ವೈ ಸಿ ಅಪ್ಡೇಟ್ ಮಾಡಿ ಸ್ವತಃ  ಹೋದರೆ ಅಲ್ಲಿ ನಿಮ್ಮನ್ನು ಗುರುತಿಸಿ ಸ್ವಾಗತಿಸುವವರು ಯಾರೂ ಇರರು .ಮುಖ ಎತ್ತಿ ನಿಮ್ಮನ್ನು ನೋಡಿದರೆ ಪುಣ್ಯ . ಇದು ನೊ  ಯುವರ್ ಕಸ್ಟಮರ್ ಮಹಿಮೆ . 

ಇನ್ನು ಸರಕಾರಿ ಕಚೇರಿಗಳಲ್ಲಿ ಲಂಚ ತೆಗದು ಕೊಳ್ಳುವಾಗ ,ಸಾಮಾನ್ಯವಾಗಿ ಹೇಳುವ ಮಾತು "ಇದು ನಮಗಲ್ಲ ಮೇಲಿನವರಿಗೂ ಪಾಲು ಹೋಗಬೇಕು " ಆದುದರಿಂದ ಅದನ್ನೂ ಆಧಾರ್ ಗೆ ಲಿಂಕ್ ಮಾಡಿದರೆ ನೈಜ ಫಲಾನುಭವಿ ಯಾರು ಎಂದು ಕೊಟ್ಟವನಿಗೆ ತಿಳಿದೀತು .. 

ಆಧಾರ್ ಕಾರ್ಡ್ ,ವೋಟರ್ ಕಾರ್ಡ್ , ಎಟಿಎಂ ಕಾರ್ಡ್ ,ರೇಷನ್ ಕಾರ್ಡ್,ಆಸ್ಪತ್ರೆ ಕಾರ್ಡ್  .ಐಡಿ ಕಾರ್ಡ್ ಇತ್ಯಾದಿ ಕಾರ್ಡ್ ಗಳೂ ಅವುಗಳ ಜೆರಾಕ್ಸ್ ಕಾಪಿಗಳೂ ಎಲ್ಲರ ಜೋಳಿಗೆಗಳಲ್ಲಿ ರಾರಾಜಿಸುವ ಈ ಕಾಲದಲ್ಲಿ  ಕೆಲವು ರೋಗಿಗಳು ರೋಗ ವಿವರ ಇರುವ ನಮ್ಮ ಚೀಟಿ ಕೇಳಿದರೆ ಎಲ್ಲವನ್ನೂ ನಮ್ಮ ಮುಂದೆ ಸುರುವಿ ಹುಡುಕ ಹೇಳುವರು. 

ಆಧಾರ್ ಇದ್ದರೆ ಸಾಲದು . ಅದಕ್ಕೆ ಜೋಡಣೆ ಆಗ ಬೇಕು . ಪಾನ್ ಕಾರ್ಡ್ ,ಬ್ಯಾಂಕ್ ಅಕೌಂಟ್ , ಡಿಮ್ಯಾಟ್ ಅಕೌಂಟ್ ,ರೇಷನ್ ಕಾರ್ಡ್  ಎಲ್ಲದಕ್ಕೂ . ವರ್ಷಗಳ ಹಿಂದೆ ಸೀತಾ ಪರಿತ್ಯಾಗ ಯಕ್ಷಗಾನದಲ್ಲಿ ಅಗಸನ ಪಾತ್ರ ಮಾಡಿದವರು ಹೆಂಡತಿಯೊಡನೆ ಕೋಪದಲ್ಲಿ ಮನೆ ಬಿಟ್ಟು ಎಂದು ಹೇಳಲು ಆಕೆ ನೀವು ಮದುವೆಯಾಗಿ ಕರೆದು ಕೊಂಡು ಬಂದಕ್ಕೆ ಆಧಾರ ಇದೆ ಎಂದು ತಾಳಿ ಯನ್ನು ತೋರಿಸಿದಾಗ ಆತ ಆಧಾರ ಇದ್ದರೆ ಸಾಲದು ಅದು ಜೋಡಣೆಯಾಗಿಯೋ ಎಂದು ಪ್ರಶ್ನಿಸುತ್ತಾನೆ . ಮುಂದೆ ಮದುವೆಯಾಗುವ ಮೊದಲು ಗಂಡು ಹೆಣ್ಣಿನ ಆಧಾರ ಜೋಡಣೆ ಯಾಗಬೇಕು ಎಂದು ಕಾನೂನು ಬಂದೀತು.

ಆದುದರಿಂದ ಆಧಾರ್ ಕಾರ್ಡ್ ಯಾವತ್ತೂ ಜೋಪಾನವಾಗಿ ಇಟ್ಟಿರಿ :ನಿರಾಧಾರ ಆಗದಿರಿ .

ಮಂಗಳವಾರ, ಆಗಸ್ಟ್ 20, 2024

 

ನಿನ್ನೆಯ ದಿನ  ಅಪರಾಹ್ನ ಎರಡು ಗಂಟೆಗೆ ಪುತ್ತೂರು ನ್ಯಾಯಾಲಯ ಪರಾಶರ ಸಭಾಂಗಣದಲ್ಲಿ ಎರಡು ಚೊಕ್ಕ ಕಾರ್ಯಕ್ರಮಗಳು . ನೂತನ ನ್ಯಾಯಾಧೀಶ ದೇವರಾಜ್ ಅವರಿಗೆ ಸ್ವಾಗತ ಮತ್ತು  ವಕೀಲ ಭಾಸ್ಕರ ಕೋಡಿಂಬಾಳ ಅವರ ಲಲಿತ ಪ್ರಬಂಧಗಳ ಸಂಕಲನ "ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು " ಬಿಡುಗಡೆ . ಪುತ್ತೂರು ವಕೀಲರ ಸಂಘದ ಆಶ್ರಯದಲ್ಲಿ . ನಿವೃತ್ತ ಹೈ ಕೋರ್ಟ್ ನ್ಯಾಯಾಧೀಶ ನ್ಯಾ ಮೂ ಕೃಷ್ಣ ಭಟ್ ಅವರು ಮುಖ್ಯ ಅತಿಥಿ ಮತ್ತು ಕೃತಿ ಅನಾವರಣ ಮಾಡಿದವರು . ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರು ,ಬಾರ್ ಕೌನ್ಸಿಲ್ ಅಧ್ಯಕ್ಷರು ,ಹಿರಿಯ ನ್ಯಾಯವಾದಿ ಶ್ರೀ ರಾಮ ಮೋಹನ ರಾವು ,ಇಂತಹವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಗೌರವ ನನಗೆ .ವೇದಿಕೆಯಲ್ಲಿ ತಲೆ ಹಣ್ಣಾದವರು(ಬಿಳಿ ಅದವರು )ನಾನು ಮತ್ತು ರಾಮ ಮೋಹನ ರಾವ್ ಮಾತ್ರ . ನ್ಯಾಯಾಧೀಶರು ಮತ್ತು ನ್ಯಾಯವಾದಿ ಗಳು  ಕಕ್ಷಿದಾರರ ವಿಚಾರಗಳನ್ನು ತಲೆಗೆ ತೆಗೆದು ಕೊಂಡರೂ ಅದನ್ನು ಹಚ್ಚಿ ಕೊಳ್ಳುವುದಿಲ್ಲ ಎಂದು ತೋರುತ್ತದೆ ವೈದ್ಯರು ರೋಗಿಗಳ ಸಮಸ್ಯೆಗಳನ್ನೂ .

ವಕೀಲರು ,ಸಾಹಿತಿಗಳು ಮತ್ತು ಭಾಸ್ಕರ್ ಅವರ ಬಂಧು ಮಿತ್ರರಿಂದ ತುಂಬಿದ ಸಭಾಂಗಣ .ನ್ಯಾ ಮೂ ಕೃಷ್ಣ ಭಟ್  ಧೋತಿ ಶಾಲು ಧಾರಿಯಾಗಿ ಬಂದಿದ್ದು ವಿಶೇಷ . ಕೃತಿಯನ್ನು ಬಿಡುಗಡೆ ಗೊಳಿಸಿ ಪಾಂಡಿತ್ಯ ಪೂರ್ಣ ಭಾಷಣ ಮಾಡಿದರು ;ಕೃತಿಯನ್ನು ಬಹಳ ಮೆಚ್ಚಿ ಕೊಂಡರು. ವೃತ್ತಿಯಲ್ಲಿ ಅವರು ಎಲ್ಲರ ಪ್ರೀತಿ ಗೌರವ ಗಳಿಸಿದ್ದವರು ಎಂದು ನೆರೆದಿದ್ದ  ನ್ಯಾಯಾಧೀಶರ ಭಾಷಣಗಳಿಂದ ವೇದ್ಯ ವಾಯಿತು .ಸಂಸ್ಕೃತ ,ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಚೆನ್ನಾಗಿ ಓದಿ ಕೊಂಡವರು.ತಾವು ನ್ಯಾಯಾಧೀಶ ರಾಗಿದ್ದಾಗ  ಸಾಹಿತಿಗಳನ್ನು ಕರೆಸಿ ವಕೀಲರ ಸಂಘಗಳಲ್ಲಿ ಭಾಷಣ ಗಳನ್ನು ಏರ್ಪಡಿಸುತ್ತಿದ್ದುನನ್ನು ನೆನೆಪಿಸಿ ಕೊಂಡರು . ಹಿರಿಯ ನ್ಯಾಯವಾದಿ ರಾಮ ಮೋಹನ ರಾವು ಅವರ ಭಾಷಣ ,ನ್ಯಾಯಾಧೀಶರ ,ವಕೀಲ ಸಂಘದ ಪದಾಧಿಕಾರಿಗಳ  ಶುಭಾಂಶನೆ ,ಕೃತಿ ಕರ್ತನ ಭಾಷಣ ಎಲ್ಲವೂ ಚೆನ್ನಾಗಿ ಬಂತು .ಒಟ್ಟಿನಲ್ಲಿ ಒಂದು ಸಂಜೆ ಅರ್ಥ ಪೂರ್ಣ ವಾಗಿ ಕಳೆಯಿತು .  

ರವಿ ಕಾಣದ್ದನ್ನು ಕವಿ ಕಾಣುವ ಎಂಬ ಮಾತು ಇದೆ . ಇಲ್ಲಿ ಕವಿ ರವಿ (ಭಾಸ್ಕರ )ಒಂದು ಗೂಡಿದಾಗ ಆದ ಕೃತಿ ಈ ಹೊತ್ತಿಗೆ .

ಪುಸ್ತಕದ ಮೊದಲ ಲೇಖನ 'ಭಕ್ತರಿಲ್ಲದ ಭಗವಂತನಿಗೆ ಕೆದಿಲ್ಲಾಯ ರಿಂದ  ನಿತ್ಯ ಪೂಜೆ .ಅದರ ಎರಡು ಪಾರಾ ಹೀಗಿದೆ .

ತಿನ್ನಲು ಉಣ್ಣಲು ಬಹಳ ಕಷ್ಟದ ಕಾಲ ವೊಂದಿತ್ತು .ಆದರೆ ಅದೇ ಕಾಲದಲ್ಲಿ ನೆಮ್ಮದಿಗೇನೂ ಕೊರತೆಯಿರಲಿಲ್ಲ .ಆ ಕಾಲದಲ್ಲಿ ಕೋಡಿಂಬಾಳದ ಶ್ರೀ ಮಹಾ ವಿಷ್ಣು ದೇವರ ಬಳಿ ವರ್ಷಕ್ಕೊಮ್ಮೆ ಅಥವಾ ಎರಡು ಸಲ ಬರುತ್ತಿದ್ದ ಭಕ್ತರಲ್ಲಿ ಅನೇಕರು ಬರುವಾಗ ಕಿಸೆಯಲ್ಲಿ ಹುಡುಕುವುದು ಇದ್ದದ್ದರಲ್ಲಿ ಅತೀ ಸಣ್ಣ ಪಾವಲಿಯನ್ನು,ಭಕ್ತರ ಅಂಗಿಯ ಕಿಸೆಯಲ್ಲಿಯೋ ,ಪಂಚೆಯೊಳಗಿನ ಪಟ್ಟೆನಾಮದ ಚಡ್ಡಿಯ ಕಿಸೆಯಲ್ಲಿಯೂ ಅಡಗಿ ಕುಳಿತ ಪಾವಲಿಗೆ ಕೈ ಹಾಕಿದಾಗ ತಪ್ಪಿಸಿ ಕೊಳ್ಳಲಾರದೇ ಸಿಕ್ಕಿ ಹಾಕಿಕೊಂಡವುಗಳಲ್ಲಿ ದೊಡ್ಡದನ್ನೆಲ್ಲಾ ಪುನಃ ಕಿಸೆಗೆ ಹಾಕಿ ಉಳಿದವುಗಳಲ್ಲಿ ಅತೀ ಸಣ್ಣ ಪಾವಳಿಯನ್ನು ಆಯ್ಕೆ ಮಾಡಿ ಭಕ್ತ ತನ್ನ ಡಬ್ಬಿಗೆ ಹಾಕುತ್ತಿದ್ದ .ಇದನ್ನು ನೋಡಿದ ದೇವರು ಶತಮಾನಗಳ ಹಿಂದೆಯೇ ಮರುಕ ಪಟ್ಟಿರ ಬೇಕು .

ಆ ಸಣ್ಣ ಪಾವಲಿಯನ್ನಾದರೂ ಮನಸಾರೆ ತನ್ನ ಡಬ್ಬಿಗೆ ಹಾಕುತ್ತಾನೆಯೇ ?ಅದೂ ಇಲ್ಲ .ಆ ಪಾವಲಿಯನ್ನು ಭಕ್ತ ತನ್ನ ತಲೆಗೆ ಮೂರು ಸುತ್ತರಿಳಿಸಿ ತಾನು ಮಾಡಿದ ಪಾಪ -ತಾಪ ದೋಷಗಳನ್ನೆಲ್ಲಾ ಅದರೊಳಗೆ ಆಪೋಷಣೆ ಗೊಳಿಸಿ ಟಿಂಗ್ ಎಂದು ಡಬ್ಬಿಯೊಳಗೆ ಹಾಕುತ್ತಿದ್ದ .ಡಬ್ಬಿ ಪಾಲಾದ ಪಾವಲಿ ವ್ಯರ್ಥವಾಗದಿರಲಿ ಎಂದು ಎರಡು ಕೈ ಜೋಡಿಸಿ ಕಣ್ಮುಚ್ಚಿ ಅಲ್ಲೇ ಅಡ್ಡ ಬೀಳುತ್ತಿದ್ದ .ಎಲ್ಲವನ್ನೂ ಬಲ್ಲ ದೇವರಿಗೆ ಇದೆಲ್ಲಾ ಅರ್ಥವಾಗದಿರಲು ಸಾಧ್ಯವೇ ?ಖಂಡಿತಾ ಇಲ್ಲ .ಈ ಚಿಲ್ಲರೆ ಪ್ರತಿಫಲ ಹಣಕ್ಕೆ ಜನರು ಮಾಡಿದ ಪಾಪ ತಾನೇಕೆ ಹೊತ್ತು ಕೊಳ್ಳಬೇಕು ಎಂದು ಕೊಂಡಿರಬೇಕು .ಜನರ ಚಿಲ್ಲರೆ ಹಣವೂ ಬೇಡ ,ಆ ಚಿಲ್ಲರೆ ಹಣದಿಂದ ತಾವು ಮಾಡಿದ ಪಾಪ ನಿವಾರಣೆ ಆಯಿತು ಎಂದೂ ಬೇಡ ಎಂದು ನಮ್ಮೂರ ದೇವರು ಜನ ಸಂಚಾರ ವಿರದ ಕೋಡಿಂಬಾಳದ ನಿರ್ಜನ ಪ್ರದೇಶದಲ್ಲಿ ಹಲವು ಶತಮಾನದ ಹಿಂದೆಯೇ ನೆಲಸಿರ ಬೇಕು ."


ಪುಸ್ತಕದ ಮುಖ ಬೆಲೆ ರೂ 150 .ಪ್ರತಿಗಳು ಆದಾಯ ತೆರಿಗೆ ಕಚೇರಿ ಪಕ್ಕದ  ಭಾಸ್ಕರ ಕೋಡಿಂಬಾಳ ಅವರ ಆಫೀಸು ಮತ್ತು ಪುತ್ತೂರು ವಕೀಲರ ಸಂಘದ ಕಚೇರಿಯಲ್ಲಿ ಲಭ್ಯ ಎಂದು ಲೇಖಕರು ತಿಳಿಸಿದ್ದಾರೆ . ಮೊಬೈಲ್ 9448548226.


ಶನಿವಾರ, ಆಗಸ್ಟ್ 17, 2024

 ಆತ್ಮೀಯ  ವಕೀಲ ಮಿತ್ರ  ಶ್ರೀ ಭಾಸ್ಕರ  ಕೋಡಿ೦ಬಾಳ  ಅವರ ಲಲಿತ ಪ್ರಬಂಧ ಗಳ ಸಂಕಲನ '' ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು" ಇದೆ ಸೋಮವಾರ 19.8.2024  ಅಪರಾಹ್ನ 2 ಗಂಟೆಗೆ ಪುತ್ತೂರು ವಕೀಲರ ಸಂಘ ದ  'ಪರಾಶರ ಸಭಾ ಭವನ "ದಲ್ಲಿ ನೆರವೇರಲಿದೆ .

ಪಂಜೆ ಮಂಗೇಶ ರಾಯರ ಸಬ್ ಅಸಿಸ್ಟಂಟ್ ನ ಸುಳ್ಳು ಡೈರಿ ಯಿಂದ , ಶ್ರೀನಿವಾಸ ಮೂರ್ತಿ ಯವರ ರಂಗಣ್ಣನ ಕನಸಿನ ದಿನಗಳು ,ಬಿ ಜಿ ಎಲ್ ಸ್ವಾಮಿ ಯವರ  ಕೃತಿಗಳಂತೆ  ಗಂಭೀರ ವಿಚಾರ ಗಳನ್ನು ಮೃದು ಹಾಸ್ಯ ಲೇಪನ ದೊಡನೆ ಓದುಗರಿಗೆ ಆಪ್ಯಾಯ ಮಾನ ಆಗುವಂತೆ ಇರುವ ಲೇಖನಗಳು ಈ ಕೃತಿಯಲ್ಲಿ ಇವೆ .

ವಕೀಲರು ನ್ಯಾಯಾಧೀಶರಿಂದ ರಚಿತವಾದ ಮೌಲಿಕ ಕೃತಿಗಳು ಅನೇಕ ಇವೆ .ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ  ಆತ್ಮ ಚರಿತ್ರೆ "ಭಾವ " ಮತ್ತು ನವರತ್ನ ರಾಮ ರಾವ್ ಅವರ ಕೆಲವು ನೆನಪುಗಳು ಕೃತಿಯಲ್ಲಿ ತಾವು ನ್ಯಾಯಾಧೀಶ ರಾಗಿ ಕಾರ್ಯ ನಿರ್ವಹಿಸುವಾಗ ನಡೆದ ರೋಚಕ ಕತೆಗಳ ಉಲ್ಲೇಖ ಇದೆ . ಅದೇ ರೀತಿ ಕೆ ಪಿ ಎಸ್ ಮೇನೋನ್ ಅವರ ಆತ್ಮ ಚರಿತ್ರೆ ಮೆನಿ ವರ್ಲ್ಡ್ಸ್ ನಲ್ಲಿ . ಇವುಗಳಲ್ಲಿ ಹೆಚ್ಚಿನವು ಆತ್ಮ ಚರಿತ್ರೆಗಳು . ಪ್ರಾಥ ಸ್ಮರಣೀಯ ಎಚ್ ಆರ್  ಖನ್ನಾ ಅವರ ನೀದರ್  ರೋಸಸ್ ನೋರ್ ಥಾರ್ನ್ಸ್ ,ಎಂ ಸಿ ಛಾಗ್ಲಾ  ಅವರ ರೋಸಸ್ ಇನ್ ಡಿಸೆಂಬರ್ ., ಲೈಲಾ ಸೇಥ್ ,ಫಾಲಿ  ನಾರಿಮನ್ ,ಹಿದಾಯತುಲ್ಲಾ ,ಕೃಷ್ಣ ಐಯ್ಯರ್ ,ಎಸ ಎಸ ಸೋಧಿ ಮತ್ತು ನಮ್ಮವರೇ ಆದ  ಎಚ್ ಹನುಮಂತ ರಾಯ ,ಬಿ ವಿ ಆಚಾರ್ಯ ಮತ್ತು ಯು ಎಲ್ ಭಟ್  ಅವರ ಕೃತಿಗಳು ಸಾಹಿತ್ಯಿಕವಾಗಿಯೂ  ಹೆಸರು ಗಳಿಸಿದಂತಹವು . ವಕೀಲರಿಗೆ ತಮ್ಮ ವೃತ್ತಿ ಯಲ್ಲಿ  ಜೀವ ಮತ್ತು ಜೀವನದ ಹಲವು ಮುಖ ಮತ್ತು  ಮಗ್ಗುಲುಗಳು  ಅಯಾಚಿತವಾಗಿ ಗೋಚರವಾಗಿತ್ತವೆ . ಸಾಹಿತ್ಯ ರಚನೆಗೆ ಒಳ್ಳೆಯ ವಸ್ತು ಆಗ ಬಲ್ಲುವು . 

ವಸ್ತು ಇದ್ದರೆ  ಸಾಲದು . ಅದನ್ನು ಗ್ರಹಿಸುವ ಮನಸ್ಸು ಮತ್ತು ಅಕ್ಷರಕ್ಕೆ ಇಳಿಸುವ ಭಾಷಾ ಜ್ಞಾನ ಕೂಡ ಬೇಕಾಗುತ್ತದೆ ,ಇಂತಹ ಪ್ರತಿಭೆ ಭಾಸ್ಕರ್ ಅವರಲ್ಲಿ ಇದೆ ..ಸೂಕ್ಷ್ಮ ಗ್ರಹಣ ,ಹಾಸ್ಯ ಪ್ರಜ್ಞೆ ಮತ್ತು ವೃತ್ತಿ ಕಾರಣ  ನಗರ ವಾಸಿ ಯಾದರೂ ಜತನ ದಿಂದ ಕಾಯ್ದು ಕೊಂಡು ಬಂದ  ಮಣ್ಣಿನ ವಾಸನೆ ಇವು ಅವರ ಪ್ರಭಂದ ಗಳಲ್ಲಿ ಎದ್ದು ಕಾಣುವ ಗುಣಗಳು .