ಬೆಂಬಲಿಗರು

ಶನಿವಾರ, ಡಿಸೆಂಬರ್ 12, 2020

ಸಕಲೇಶಪುರದಲ್ಲಿ ಒಂದು ವರುಷ

    ಸಕಲೇಶ ಪುರದಲ್ಲಿ ಒಂದು ವರುಷ 

ಮೈಸೂರಿನಿಂದ ಗಾಡಿ ಸಕಲೇಶಪುರಕ್ಕೆ ಹೊರಟಿತು ,ಸರಕಾರಿ ಸೇವೆಯೇ ಹಾಗೆ ಡಿ ವಿ ಜಿ ಯವರ ಜಟಕಾ ಬಂಡಿ ತರಹ ಮೇಲಿನವರು ಹೇಳಿದಲ್ಲಿಗೆ ಹೋಗಬೇಕು .ಒಂದು ತಹರ ಇದು ನಮಗೆ ಇಲ್ಲಿ ಯಾವುದೂ ಸ್ಥಿರವಲ್ಲ ಎಂಬ ವೇದಾಂತ ಕಲಿಸಿ ಕೊಡುವುದು .ವರ್ಗಾವಣೆ ಆದಾಗ ಜಾಯಿನಿಂಗ್ ಟೈಮ್ ಅಂತ ಪುಕ್ಕಟೆ ರಜೆ ಮತ್ತು ವರ್ಗ ಭತ್ಯೆ ಸಿಗುವುದು .ನಮ್ಮಂತಹ ಅವಿವಾಹಿತರಿಗೆ ಅದು ಒಂದು ಗಳಿಕೆಯೇ .

ಸಕಲೇಶ ಪುರ ರೈಲ್ವೇ ನಿಲ್ದಾಣ ಹೇಮಾವತಿ ನದಿ ದಂಡೆಗೆ ಸಮೀಪ ಇದೆ .ಸ್ಟೇಷನ್ ಹಿಂದು ಗಡೆ ಗುಡ್ಡ .ರೈಲ್ವೇ ನಿಲ್ದಾಣದಿಂದ ಪೇಟೆಗೆ ಹೋಗುವ ರಸ್ತೆ ಈ ಗುಡ್ಡ ಏರಿ ಹೋಗುವುದು .ಎರಡೂ ಕಡೆ ವಸತಿ ಗೃಹಗಳು .ಗುಡ್ಡದ ತುದಿಯಲ್ಲಿ ಕಛೇರಿಗಳು .ರೈಲ್ವೇ ಆರೋಗ್ಯ ಕೇಂದ್ರ ಕೂಡ ಎತ್ತರದಲ್ಲಿ ಇದೆ .ಅದೇ ದಾರಿಯಲ್ಲಿ ಮುಂದೆ ರೈಲ್ವೇ ಅಧಿಕಾರಿಗಳ ವಿಶ್ರಾಂತಿ ಗೃಹ ಇದೆ .ಇದರ ಅಂಗಳದಲ್ಲಿ ನಿಂತು ನೋಡಿದರೆ ಹೇಮಾವತಿ ನದಿ ಪೂರ್ವದಿಂದ ದಕ್ಷಿಣಕ್ಕೆ ವಯ್ಯಾರದಿಂದ ಹರಿವ  ಮನಮೋಹಕ ದೃಶ್ಯ ಕಾಣ ಬಹುದು .ಇದು ರೈಲ್ವೇ ಹಳಿಗೆ ಕೆಲ ದೂರ ಸಮಾಂತರ ಇದ್ದು ,ರೈಲು ಸ್ಟೇಷನ್ ನಿಂದ ನಿಧಾನ ಹೊರಟಾಗ ತಾ ಮುಂದು ತಾ ಮುಂದು ಎಂದು ರೈಲು ಮತ್ತು ನದಿ ಹರಿವು ಪೈಪೋಟಿ ಮಾಡಿದಂತೆ ಕಾಣುವುದು .

ನನ್ನ ವಸತಿ ಗೃಹ ಕೂಡ ಎತ್ತರದಲ್ಲಿ ಇದ್ದು ನದೀ ದರ್ಶನ ಆಗುತ್ತಿತ್ತು .ಸಕಲೇಶ ಪುರದಲ್ಲಿ ಶ್ರೀ ರೋಹಿಡೇಕರ್ ಇಂಜಿನೀರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದು ನನಗೆ ಒಳ್ಳೆಯ ಸ್ನೇಹಿತರಾದರು .ನನ್ನ ಪಕ್ಕದ ಮನೆಯಲ್ಲಿ ರಾಜಗೋಪಾಲ ಎಂಬ ಗೃಹಸ್ಥ ರು ಕುಟುಂಬ ಸಮೇತ ಇದ್ದರು .ಅವರು ಪರ್ಮನೆಂಟ್ ವೇ (ರೈಲು ಹಳಿ )ನಿರೀಕ್ಷಕರು .ನನ್ನ ಹಿತೈಷಿಗಳಾದರು .ಅರೋಗ್ಯ ಕೇಂದ್ರದಲ್ಲಿ ಆನಂದ ಮೇಲಾಡಿ ಫಾರ್ಮಾಸಿಸ್ಟ್ ಆಗಿದ್ದು  ಪ್ರಾಮಾಣಿಕರು ಮತ್ತು ನ್ಯಾಯ ನಿಷ್ಟುರರು .ಅರೋಗ್ಯ ನಿರಿಕ್ಷಕರಾಗಿ ತಮಿಳ್ನಾಡಿನ ಯುವಕ ಮುರುಗೇಶನ್ ಎಂಬವರು ಸಹಾಯಕ್ಕೆ ಇದ್ದು ಎಳೆಯ ಹುಡುಗನಾದರೂ ಕಾರ್ಯ ಕ್ಷಮತೆ ಯುಳ್ಳವರು .ಆಸ್ಪತ್ರೆಯಲ್ಲಿ ಪಾಂಡುರಂಗ ಎಂಬ ಅನುಭವಿ ಡ್ರೆಸ್ಸೆರ್ ಇದ್ದರು . 

ನನ್ನ  ಸಾಮ್ರಾಜ್ಯ ಹಾಸನದಿಂದ ನೆಟ್ಟಣ (ಸುಬ್ರಹ್ಮಣ್ಯ ರೋಡ್ )ವರೆಗೆ ಇತ್ತು .ವಾರದಲ್ಲಿ ಒಂದು ದಿನ ನೆಟ್ಟಣಕ್ಕೆ ಸವಾರಿ . ದಾರಿಯ ನಿಲ್ದಾಣದಲ್ಲಿ ನೌಕರರು ಮತ್ತು ಕುಟುಂಬ ರೈಲಿನೊಳಗೆ ಬಂದು ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧಿ ತೆಗೆದು ಕೊಳ್ಳುವರು .ನೆಟ್ಟಣದಲ್ಲಿ ಒಂದು ಸಣ್ಣ ಮೆಡಿಕಲ್ ಔಟ್ ಪೋಸ್ಟ್ ಇದೆ .ಅಲ್ಲಿಯೂ ನಮ್ಮ ಸೇವೆ ನಡೆಯುವುದು .ಈ ವಿಭಾಗ ಕಾಡಿನ ನಡುವೆ ಸೇತುವೆ  ಮತ್ತು ಸುರಂಗ ಗಳಿಂದ ಕೂಡಿ  ನಯನ ಮನೋಹರ.





 


ಸಕಲೇಶ ಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವೆ ದೋಣಿಗಲ್ ,ಎಡಕುಮೇರಿ ಮತ್ತು ಸಿರಿಬಾಗಿಲು ನಿಲ್ದಾಣಗಳು ಇವೆ .ಇವುಗಳ ಪೈಕಿ ಎಡ ಕುಮೇರಿ  ಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲ .ಇಲ್ಲಿ ನೌಕರರಿಗೆ ಏನಾದರೂ ಹಠಾತ್ ಕಾಯಿಲೆ ಆದರೆ ಟ್ರಾಲಿ ಅಥವಾಲೈಟ್  ಎಂಜಿನ್ (ಬೋಗಿಗಳಿಲ್ಲದ ಬರೀ ಎಂಜಿನ್ ಗೆ ರೈಲ್ವೆ ಭಾಷೆಯಲ್ಲಿ ಲೈಟ್ ಎಂಜಿನ್ ಎನ್ನುವರು ಅದು ಬಾರೀ  ಭಾರದ ಸಾಧನ ಆದರೂ )ಮೂಲಕ ಹೋಗುವ ವ್ಯವಸ್ಥೆ ಇದ್ದಿತು .ಈ ವಿಭಾಗದಲ್ಲಿ ಹಲವು ದುರ್ಗಮ ಸೇತುವೆಗಳು ಇದ್ದ ಕಾರಣ ಸೇತುವೆ ನಿರೀಕ್ಷಕರ ಹುದ್ದೆ ಇತ್ತು .ಕೇರಳದ ಕೋಯಾ ಎಂಬುವರು ಆ ಹುದ್ದೆಯಲ್ಲಿ ಇದ್ದು ಅವರ ಮಾಪಿಳ್ಳೆ  ಖಲಾಸಿಗಳು ಶೂರರು ಮತ್ತು ಸಾಹಸ ಕುಶಲ ಕಾರ್ಯ ಪ್ರವೀಣರು .ಅವರ ಬಳಿ ಮತ್ತು ಪರ್ಮನೆಂಟ್ ವೆ ಇನ್ಸ್ಪೆಕ್ಟರ್ ಬಳಿ ಟ್ರಾಲಿ ಗಳು ಇದ್ದವು .ಅದರಲ್ಲಿ ತಳ್ಳು ಟ್ರಾಲಿ ಮತ್ತು ಮೋಟಾರ್ ಟ್ರಾಲಿ ಎಂದು ಎರಡು ವಿಧ .ನಡೆಸಲು ಟ್ರಾಲಿ ಮೆನ್ ಎಂಬ ನೌಕರರು .ನಾನು ರೈಲ್ವೆ ಸೇವಕ ನಾದ್ದರಿಂದ ಸುಂದರ ಘಾಟಿ ಪ್ರದೇಶದಲ್ಲಿ ತೆರದ ಗಾಡಿಯಲ್ಲಿ ರೈಲು ಹಳಿಗಳ ಮೇಲೆ ಸಂಚರಿಸುವ  ಭಾಗ್ಯ ದೊರಕಿತು .ಇದರಲ್ಲಿ ಹೋಗಲು ರೈಲು ಗಳಂತೆ ಸ್ಟೇಷನ್ ಮಾಸ್ಟರ್ ರಿಂದ ಸಿಗ್ನಲ್ ಪಡೆದೇ ಹೋಗುತ್ತಿದ್ದೆವು .                                                                 

 ಮಂಗಳೂರಿನಿಂದ ಬೆಂಗಳೂರಿಗೆ ಹಾಸನ ಅರಸೀಕೆರೆ ಮೂಲಕ ಪ್ರಯಾಣಿಕ ರೈಲು ಮಧ್ಯಾಹ್ನ ಒಂದು ಗಂಟೆಗೆ ಹೊರಟು ರಾತ್ರಿ ೭ ಗಂಟೆ ಸುಮಾರಿಗೆ ಸಕಲೇಶಪುರ ತಲುಪುತ್ತಲಿತ್ತು .ಘಾಟಿ ಪ್ರದೇಶ ದಲ್ಲಿ ಸುರಕ್ಷಾ ದೃಷ್ಟಿ ಯಿಂದ ಹಗಲೇ ರೈಲು ಸಂಚರಿಸ ಬೇಕಿತ್ತು .ಮುಂದೆ ಅದನ್ನು ಬದಲಾಯಿಸಿದರೆನ್ನಿ .ಈ ಸೆಕ್ಷನ್ ಒಂದು ಪ್ರವಾಸಿ ಆಕರ್ಷಣೆಯ ಮಾರ್ಗ ಆಗಿದ್ದು ಬಹಳ ಪ್ರಯಾಣಿಕರು ಅದರ ಆನಂದ ಪಡೆಯಲೆಂದೇ ಬರುತ್ತಿದ್ದರು .ನನ್ನ ಬಂಧು ಮಿತ್ರರೂ ಹಲವರು ನನ್ನ ಇರುವಿಕೆಯ ಪ್ರಯೋಜನ ಪಡೆದರು .ಬೆಂಗಳೂರಿನಿಂದ ಮಂಗಳೂರಿಗೆ ಬರುವ ಟ್ರೈನ್ ಬೆಳಿಗ್ಗೆ ಎಡಕುಮೆರಿಯಲ್ಲಿ ತಿಂಡಿ ಕಾಫಿ ಗೆ ನಿಲ್ಲುತ್ತಿತ್ತು .ಅಲ್ಲಿ ಒಬ್ಬ ಮಲಯಾಳಿ ಕಾಂಟೀನ್ ನಡೆಸುತ್ತಿದ್ದು ಅಲ್ಲಿಯ ದೋಸೆ ಬಹಳ ಜನಪ್ರಿಯ ಆಗಿತ್ತು ..ಮಂಗಳೂರಿಂದ ಬರುವ ರೈಲು ಸಾಯಂಕಾಲ ಟೀ ,ಉಪಹಾರಕ್ಕೆ ಇಲ್ಲೇ ನಿಲ್ಲುತ್ತಿತ್ತು .ಸುಮಾರು ಇಪ್ಪತ್ತು ನಿಮಿಷದ ನಿಲುಗಡೆ ಇದ್ದು ಆರಾಮವಾಗಿ  ನಿಸರ್ಗ ಸೌದರ್ಯ ಸವಿಯುತ್ತಿದ್ದರು .ಮುಂದೆ ರಾತ್ರಿ ರೈಲು ಶುರುವಾಗಿ ಈ ನಿಲ್ದಾಣದ ಪ್ರಾಮುಖ್ಯತೆ ಕಡಿಮೆ ಆಯಿತು .

ಟ್ರಾಲಿ ಮತ್ತು ಲೈಟ್ ಎಂಜಿನ್



Track maintenance staff in SWR receive GPS units as assistance | Hubballi  News - Times of India


ಸಕಲೇಶಪುರದಿಂದ ಹಾಸನ ದಾರಿ ಬಯಲು ಪ್ರದೇಶ .ಮತ್ತು ಎಲ್ಲಾ ಕಡೆ ರಸ್ತೆ ಸಂಪರ್ಕ ಇದ್ದ ಕಾರಣ  ಜೀಪ್ ನಲ್ಲಿ ಹೋಗುತ್ತಿದ್ದೆನು .ಈ ವಾಹನ ಕೂಡ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ್ದು ನಮ್ಮ ಬಳಿ ವಾಹನ ಇರಲಿಲ್ಲ .ನನ್ನ ಸ್ವಂತ ವಾಹನವೂ ಇರಲಿಲ್ಲ .ಪೇಟೆಗೆ ಹೋಗುವಾಗ ನಡೆದೇ ಹೋಗುತ್ತಿದ್ದೆವು .. 

ಅರೋಗ್ಯ ಕೇಂದ್ರದಲ್ಲಿ ದಿನಕ್ಕೆ ಸರಾಸರಿ ಇಪ್ಪತ್ತು ರೋಗಿಗಳು ಬರುತ್ತಿದ್ದು ,ಸಮಯ ಕಳೆಯುವುದು ಕಷ್ಟ ಆಗಿತ್ತು .ಗ್ರಂಥ ಭಂಡಾರದಿಂದ ಪುಸ್ತಕ ತಂದು ಓದುತ್ತಿದ್ದೆನು ..ಹಾಸನ ಮಂಗಳೂರು ನಿರ್ಮಾಣ ಕಾಲದಲ್ಲಿ ಸಕಲೇಶಪುರ ಭಾರೀ ಚಟುವಟಿಕೆ ಯಿಂದ ಕೂಡಿದ ಕೇಂದ್ರ ಆಗಿತ್ತು .ಅವರು ಬಿಟ್ಟು ಹೋದ ವಾಚನಾಲಯದಲ್ಲಿ ಒಳ್ಳೆಯ ಪುಸ್ತಕಗಳು ಇದ್ದವು .ಅವನ್ನು ಮತ್ತು ಕೆಲವು ಒಳಾಂಗಣ ಕ್ರೀಡೆಗಳನ್ನು ಸೇರಿಸಿ ಒಂದು ಕ್ಲಬ್ ಆರಂಭಿಸಿದೆವು . 

ರೈಲ್ವೆ ನಿಲ್ದಾಣ ದಿಂದ ನಗರಕ್ಕೆ ಹೋಗುವ ರಸ್ತೆ ಬದಿ ತುಂಬಾ ಲಂಟಾನ ಬೆಳೆದು ಸರೀಸೃಪಗಳಿಗೆ ಆಶ್ರಯ ತಾಣ ಆಗಿತ್ತು .ನಮ್ಮ ಇಲಾಖೆಯ ನೌಕರರ ಸಹಾಯದಿಂದ ಅದನ್ನು ಕಿತ್ತು ಸ್ವಚ್ಛ ಮಾಡಿದೆವು ,ಈ ಕೆಲಸದಲ್ಲಿ ನಾನೂ ನನ್ನ ಅರೋಗ್ಯ ನಿರೀಕ್ಷಕರೂ ಸ್ವಯಂ ಭಾಗಿಗಳಾಗುತ್ತಿದ್ದೆವು .ನೆಟ್ಟಣ ಅರಣ್ಯ ಇಲಾಖೆಯ ನರ್ಸರಿಯಿಂದ ಉಚಿತವಾಗಿ ಸಸಿಗಳನ್ನು ನೆಟ್ಟು ಆರೈಕೆ ಮಾಡಿದೆವು .ಅವೇ ಇಂದು ಮರಗಳಾಗಿ ದಾರಿ ಹೋಕರಿಗೆ ನೆರಳು ನೀಡುತ್ತಿವೆ . 

 ಈ ಮರಗಳನ್ನು ನೋಡುವಾಗ ನಮ್ಮ ಮನ  ಸಾರ್ಥಕತೆ ಯಿಂದ ಮೆರೆಯುವುದು,. 


 

                ಒಂದು ಘಟನೆ ನೆನಪಿಗೆ ಬರುತ್ತಿದೆ .ರೈಲ್ವೆ ಹಳಿ ಕಾಯಲು ಹಗಲು ರಾತ್ರಿ ಗ್ಯಾಂಗ್ ಮೆನ್ ಹಳಿಯುದ್ದಕ್ಕೂ ನಡೆದು ಹೋಗುವರು .ಅವರ ಕೈಯಲ್ಲಿ ಒಂದು ಪೀಪಿ ,ಮತ್ತು ಬೋಲ್ಟ್ ನಟ್  ಟೈಟ್ ಮಾಡುವ ಉದ್ದದ ಸ್ಪಾನರ್ ಇರುತ್ತದೆ .ಒಂದು ಸಂಜೆ ಗೂಡ್ಸ್ ರೈಲೊಂದು ಇಂತಹ ನೌಕರನ ಮೇಲೆ ಹಾದು ಹೋಯಿತು ,ಸೇತುವೆ ಪಕ್ಕದ ಸುರಂಗ .ಅವನ ದೇಹ ಛಿದ್ರ ಛಿದ್ರ ಆಗಿ ಅಲ್ಲೇ ಮೃತ ಪಟ್ಟನು .ರಾತ್ರಿ ಮಂಗಳೂರಿನಿಂದ ಬರುವ ಪ್ರಯಾಣಿಕರ ಗಾಡಿಯನ್ನು ನೌಕರರು ನಿಲ್ಲಿಸಿದರು .ನಾವು ಕೂಡಲೇ ಲೈಟ್ ಎಂಜಿನ್ ನಲ್ಲಿ ಸ್ಥಳಕ್ಕೆ ಧಾವಿಸಿದೆವು .ನನಗೆ ಇಂತಹ ಸಂದರ್ಭ ಏನು ಮಾಡ ಬೇಕು ಎಂದು ತಿಳಿದಿರಲಿಲ್ಲ .ಮೇಲಿನವರಲ್ಲಿ ಕೇಳಲು ಫೋನ್ ಇಲ್ಲ .ರೈಲ್ವೆ ತಂತಿಗೆ ಸಿಕ್ಕಿಸಿ ಫೋನ್ ಕನೆಕ್ಟ್ ಮಾಡಿದರೂ ಸ್ಪಷ್ಟ ಇಲ್ಲ .ಕೊನೆಗೆ ನಾನೇ ಬಂಡು  ಧೈರ್ಯದಲ್ಲಿ ಮೃತ ದೇಹವನ್ನು ಗೌರವ ಪೂರ್ವಕ ಬದಿಗೆ ಸ್ಟ್ರೆಚರ್ ನಲ್ಲಿ ಇಟ್ಟು ಪ್ರಯಾಣಿಕ ರೈಲು ಹೋಗಲು ಅನುವು ಮಾಡಿದೆನು .ಬಾಡಿ ಸಕಲೇಶಪುರಕ್ಕೆ ಸಾಗಿಸಿ ಪೋಸ್ಟ್ ಮಾರ್ಟಮ್ ಮಾಡಿ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು ..ಆಮೇಲೆ ಪೋಲಿಸಿನವರು ಘಟನೆ ನಡೆದ ಸ್ಟಳ ದಕ್ಷಿಣ ಕನ್ನಡವೋ ಹಾಸನ ಜಿಲ್ಲೆಯೋ  ಎಂಬ ತಮ್ಮ ಕನ್ಫ್ಯೂಶನ್ ತೀರಿಸಲು ಕೆಲವು ಸಮಯ ತೆಗೆದು ಕೊಂಡು ನನ್ನ ಹೇಳಿಕೆ ತೆಗೆದುಕೊಂಡರು .ಸ್ಥಳ ಮಹಜರು ಮಾಡಬೇಕಿತ್ತು ಎಂದು ನನ್ನ ಲೋಪ ತೋರಿಸಿದರು .ರೈಲ್ವೆ ಯಲ್ಲಿ ಇಂತಹ ಘಟನೆ ಸಂಭವಿಸಿದಾಗ ಒಂದು ವಿಭಾಗೀಯ ತನಿಖೆ ನಡೆದು ಯಾರದ್ದಾದರೂ ತಲೆಗೆ ಜವಾಬ್ದಾರಿ ಹೊರಿಸುವುದು ಪದ್ಧತಿ ಅದೂ ನಡೆದು ನನ್ನ ಸಮಯ ಪ್ರಜ್ಞೆಗೆ ಪ್ರಶಂಸೆ ದೊರೆಯಿತು .. 

ರೈಲ್ವೆಯಲ್ಲಿ  ನಿರ್ಮಾಣ ಕಾಲದಲ್ಲಿ ಇದ್ದ ಕೆಲವು ಅಧಿಕಾರಿಗಳು ಮುಂದೆಯೂ ಅಲ್ಲಿಯೇ ಮುಂದುವರಿದಿದ್ದರು .ಹೆಚ್ಚಿನವರು ಮಲಯಾಳಿಗಳು .ಅವರ ಪೈಕಿ ಕೋಯಾ ಅವರ ಬಗ್ಗೆ ಆಗಲೇ ಸೂಚಿಸಿದ್ದೇನೆ ,ಅವರ ಬಳಿ ಕೆಲ ದಿನ ಅರೇಬಿಕ್ ಭಾಷೆ ಕಲಿತೆ .ಇನ್ನು ವಕ್ಸ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿ A ಕುಟ್ಟಿ ಮತ್ತು B ಕುಟ್ಟಿ ಎಂಬ ಇಬ್ಬರು ಇದ್ದರು .ರೈಲ್ವೆ ಕಟ್ಟಡಗಳ ನಿರ್ವಹಣೆ ಅವರ ಜವಾಬ್ದಾರಿ .ಇವರು ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಮೇಲಧಿಕಾರಿಗಳು ಇನ್ಸ್ಪೆಕ್ಷನ್ ಗೆ ಬರುವಾಗ ಅವರವರ ಭಾವಕ್ಕೆ ಅನುಗುಣವಾಗಿ ಪೂಜೆಗೆ ತುಳಸಿ ,ಹಾಲಿನಿಂದ ಹಿಡಿದು ,ರಾತ್ರಿ ಊಟಕ್ಕೆ ಬೇಕಾದ ಆಲ್ಕೋಹಾಲ್ ವರೆಗೆ ತಮ್ಮದೇ ಖರ್ಚಿನಲ್ಲಿ ಕಡಿಮೆ ಸಮಯದ ಸೂಚನೆಯಲ್ಲಿ ಏರ್ಪಾಡು ಮಾಡುತ್ತಿದ್ದರು .(Addtional Works Inspector ಗೆ ಅಪರ ಕರ್ಮ ನಿರೀಕ್ಷಕ ರೆಂದು ಕರೆಯ ಬಹುದೋ ?).A ಕುಟ್ಟಿ ಸ್ನೇಹ ಪರ ವ್ಯಕ್ತಿ ,ನನಗೆ ವಾಚನಾಲಯ ಕ್ಲಬ್ ಮಾಡಲು ತುಂಬಾ ಸಹಕರಿಸಿದರು .ಅವರ ಅಂತ್ಯ ಒಂದು ದುರಂತವಾದುದು ಖೇದಕರ

ಅರೋಗ್ಯ ಕೇಂದ್ರದಲ್ಲಿ ಅನಾರೋಗ್ಯ ಇರುವವರಿಗೆ ಚಿಕಿತ್ಸೆ ಮಾಡುವುದರೊಂದಿಗೆ ಹಲವು ನೌಕರರು ರಜೆಗೆ ಬೇಕಾಗಿ ಸಿಕ್ ಆಗಿ ಬರುತ್ತಿದ್ದ್ದವರನ್ನು ನೋಡಬೇಕು .ಅಗತ್ಯ ಕೆಲಸಗಳಿಗೆ ತಮ್ಮ ವಿಭಾಗದ ಮುಖ್ಯಸ್ಥರು ರಜೆ ನಿರಾಕರಿಸಿದರೆ ನಮ್ಮ ಬಳಿಗೆ ಬಂದು ದುಂಬಾಲು ಬೀಳುವರು .ಕೆಲವರಿಗಇದುವೇ ಚಾಳಿ .ಇನ್ನು ಕೆಲವೊಮ್ಮೆ ಮೇಲಿನ ಅಧಿಕಾರಿಗಳು ತಮ್ಮ ಜವಾಬ್ದಾರಿ ತಪ್ಪಿಸಲು ರಜೆ ಕೊಡಲು ಆಗುವುದಿಲ್ಲ ಬೇಕಾದರೆ ಸಿಕ್ ಲೀವ್ ತೆಗೊ ಎಂದು ನನ್ನಲ್ಲಿಗೆ ಮೆಮೊ ಕೊಟ್ಟು ರವಾನಿಸುವರು .ಇವರನ್ನು ಕಂಡಾಗ ನನಗೆ ನಮ್ಮ ದೇಶದಲ್ಲಿ ಖಾಯಂ ಕೆಲಸ ಇಲ್ಲದೆ ದುಡಿಯುವ ಕೋಟ್ಯಂತರ  ಪ್ರಜೆಗಳ ಚಿತ್ರ ಬರುವುದು .ಹೆಚ್ಚಾಗಿ ನಾನು ಈ ವಿಷಯದಲ್ಲಿ ಕಟ್ಟು ನಿಟ್ಟು .ಕೆಲವು ಅಸಂತುಷ್ಟ ನೌಕರರು ಯೂನಿಯನ್ ಮೊರೆ ಹೋಗಿ ನನ್ನ ಮೇಲೆ ಪ್ರಭಾವ ಬೀರುವರು . 

ರೈಲ್ವೆ ಗೆ ತನ್ನದೇ  ಆದ ದೂರವಾಣಿ ಜಾಲ ಇದೆ .ಸ್ಟೇಷನ್ ಮಾಸ್ಟರ್ ಮೈಸೂರಿನ ವಿಭಾಗೀಯ ಕಂಟ್ರೋಲ್ ರೂಮ್ ಮೂಲಕ ಸಂಪರ್ಕ ಇದೆ .ಅಲ್ಲಿಂದ ಸಂದೇಶಗಳು ಸ್ಟೇಷನ್ ಮೂಲಕ ನಮಗೆ ಬರುವವು .ಇನ್ನು ನಮ್ಮ ಅಧಿಕಾರಿಕ ಟಪ್ಪಾಲು  ಫ್ರೀ ಸರ್ವಿಸ್ (ಎಫ್ ಎಸ್ )ಮೂಲಕ  ಟ್ರೈನಿನಲ್ಲಿ ಹೋಗುವವು .ತಿಂಗಳು ತಿಂಗಳು ಹಾಜರಿ ಪಟ್ಟಿ ಮಾತ್ರ ಓರ್ವ ನೌಕರನ ಮೂಲಕ ಮೈಸೂರಿಗೆ ಹೋಗುವುದು .ಸಕಲೇಶಪುರದಿಂದ  ಮೈಸೂರಿಗೆ ನೇರ ರೈಲು ಸಂಚಾರ ಇರಲಿಲ್ಲ .ಆದ ಕಾರಣ ಬೆಂಗಳೂರಿಗೆ ಹೋಗಿ ಅಲ್ಲಿಂದ ಮೈಸೂರು ಗಾಡಿ  ಹಿಡಿಯಬೇಕು .ಇದರಿಂದ ನಮ್ಮ ಓಲೇಕಾರನಿಗೆ ಹೋಗಿ ಬರಲು ಮೂರು  ದಿನ ಬೇಕಾಗುತ್ತಿತ್ತು .ಮೂರು ದಿನದ ಕೆಲಸ ಮತ್ತು ಟಿ ಎ  ಡಿ ಎ  ಸೇರಿ ನೂರಾರು ರೂಪಾಯೀ ಖರ್ಚು .ಅದಕ್ಕೆ ನಾನು ಒಂದು ಉಪಾಯ ಮಾಡಿ ಹಾಜರಿಯನ್ನು ಸರ್ವಿಸ್ ಸ್ಟ್ಯಾಂಪ್ ಹಾಲಿ ರಿಜಿಸ್ಟರ್ಡ್ ಅಂಚೆಯಲ್ಲಿ ಕಳುಹಿಸ ತೊಡಗಿದೆನು ಇದರ ವೆಚ್ಚ ಇಪ್ಪತ್ತು ರೂಪಾಯಿ .ನಮ್ಮ ಅಧಿಕಾರ ಶಾಹಿ ಹೇಗೆ ಇದೆಯೆಂದರೆ ಸರ್ವಿಸ್ ಸ್ಟ್ಯಾಂಪ್ ಮರು ಪೂರಣಕ್ಕೆ  ಕೇಳಿದಾಗ ಇಷ್ಟು ದಿನ ಸ್ಟ್ಯಾಂಪ್ ಗೆ ಇಲ್ಲದ ಬೇಡಿಕೆ ಈಗ ಯಾಕೆ ಎಂಬ ಮೆಮೊ ಬಂತು .ಅದಕ್ಕೆ ಸಕಾರಣ ಉತ್ತರ ಕೊಟ್ಟೆ . ನಮಗೆ ಅನ್ನ ಹಾಕುವ ಸಂಸ್ಥೆ ಮತ್ತು ಅದನ್ನು ಸಾಕುವ ಜನತೆಯ ಶ್ರೇಯ ಬಯಸುವಾಗ ಪಟ್ಟ ಭದ್ರರು ಮತ್ತು ಯಥಾ ಸ್ಥಿತಿ ವಾದಿಗಳ ಕಿರಿ ಕಿರಿ ಅನುಭವಿಸ ಬೇಕಾಗುತ್ತದೆ . 

ನಮ್ಮ ವಿಭಾಗದಲ್ಲಿ ಸುಮಾರು ೧೫ -೨೦ ನೌಕರರು ಇದ್ದರು ನಾನು ಸೇರಿ ಎಲ್ಲರಿಗೂ ಸಂಬಳ ನಗದು ಆಗಿ ಕೊಡುತ್ತಿದ್ದರು ,ಸಂಬಳದ ದಿನ ಮೈಸೂರಿನಿಂದ ಕ್ಯಾಶಿಯರ್ ಬಂದು ಬಟವಾಡೆ ಮಾಡುವರು .ನಗದು ಸಿಕ್ಕಿದ ಹಣ ಖಾಲಿಯಾಗುವುದು ಬೇಗ .ಅದಕ್ಕೆ ನಾನು ನಮ್ಮ ಸಿಬ್ಬಂದಿ ಗಳಿಗೆ ಖಡ್ಡಾಯ ಪೋಸ್ಟ್ ಆಫೀಸ್ ಉಳಿತಾಯ ಖಾತೆ ತೆರೆಸಿ ಅದರಲ್ಲಿ ಸಂಬಳವನ್ನು ಹಾಕಲು ತಾಕೀತು ಮಾಡಿದೆನು .ಖಾತೆ ತೆರೆಯಲು ಬೇಕಾದ ರೂಪಾಯಿ ಹತ್ತು ನಾನೇ ಪಾವತಿ ಮಾಡಿದೆನು .ಇದು ಭಾಗಷ ಯಶಸ್ವೀ ಆಯಿತು . 

ಸಕಲೇಶ ಪುರದಲ್ಲಿ ಇರುವಾಗಲೇ ನಾನು ನನ್ನ ಸ್ಟೀಲ್ ಅಲ್ಮೇರಾ ಕೊಂಡದ್ದು .ಮುಖ್ಯವಾಗಿ ನನ್ನ ಪುಸ್ತಕಗಳನ್ನು ಇಡಲೆಂದು ಪುತ್ತೂರಿನ ಸೋಜ ರ ಅಂಗಡಿಯಿಂದ ಕೊಂಡ ಈ ಕಪಾಟು ಈಗಲೂ ಗಟ್ಟಿ ಮುಟ್ಟಾಗಿ  ಸೇವೆ ಸಲ್ಲಿಸುತ್ತಿದೆ 


ಸಕಲೇಶಪುರ ಹಳೇ  ಬಸ್ ನಿಲ್ದಾಣದ ಬಳಿ ಪುತ್ತೂರಿನ ಪ್ರಸಿದ್ಧ ವೈದ್ಯರಾಗಿದ್ದ ಡಾ ಪಿ ಎಸ ಭಟ್ ಅವರ ಮಗಳು ಡಾ ಲೀಲಾವತಿ ಮತ್ತು ಅಳಿಯ ಡಾ ಜನಾರ್ಧನ ಶ್ರೀನಿವಾಸ ನರ್ಸಿಂಗ್ ಹೋಂ ನಡೆಸುತ್ತಿದ್ದು ತೀವ್ರತರ ರೋಗಿಗಳನ್ನು ಅಲ್ಲಿಗೆ ಕಳುಹಿಸುತ್ತಿದ್ದೆನು .ಅವರ ಮಗ ಡಾ ಅಲೋಕ್ ಮುಂದೆ ಕ್ಷೇಮಾ ದಲ್ಲಿ ನನ್ನ ವಿದ್ಯಾರ್ಥಿ ಆಗಿದ್ದನು .

ಒಂದು ದಿನ ಪಕ್ಕದ ಪ್ರಸಿದ್ಧ ಹಾರ್ಲೆ ಎಸ್ಟೇಟ್ ನ ಗಣಪಯ್ಯ ನವರು ತಮ್ಮ ತೋಟದ ವಾರ್ಷಿಕೋತ್ಸವ ಇದೆ ,ನೀವು ಬರ ಬೇಕು ಎಂದು ಹೇಳಿ ಕಳುಹಿಸದರು .ಸಂಜೆ ಕಾರ್ಯಕ್ರಮ .ಹೋಗಲು ನನ್ನ ಬಳಿ ವಾಹನ ಇರಲಿಲ್ಲ .ಇಲಾಖೆ ಜೀಪ್ ಕಾರ್ಯ ನಿಮಿತ್ತ ಎಲ್ಲೋ ಹೋಗಿತ್ತು .ನನ್ನ ಕಷ್ಟ ನೋಡಿ ರಾಜಗೋಪಾಲ್ ತಮ್ಮ ಲಾರಿ ಕೊಡುಗೆ ಮಾಡಿದರು .ಹಾಗೆ ಲಾರಿಯಲ್ಲಿ ಅಲ್ಲಿ ಹೋಗಿ ಸ್ವಲ್ಪ ದೂರ ನಿಲ್ಲಿಸಿ ನಡೆದು ಹೋದೆನು .ಆ ದಿನ ಮಾಜಿ ಕೇಂದ್ರ ಸಚಿವ ಸಿ ಎಂ ಪೂಣಚ್ಚ ಮುಖ್ಯ ಅತಿಥಿಯಾಗಿ ಬಂದಿದ್ದರು .ಎಸ್ಟೇಟ್ ಡೇ ಯಲ್ಲಿ ನೌಕರರ ನಾಟಕ ಇತ್ಯಾದಿ ಮನೋರಂಜನಾ ಕಾರ್ಯಕ್ರಮ ಇದ್ದು ಅವರ ಸಂತೋಷ ಉತ್ಸಾಹ ದಲ್ಲಿ ಪಾಲುಗೊಳ್ಳುವ ಅವಕಾಶ ಸಿಕ್ಕಿತು .ಗಣಪಯ್ಯ ಮತ್ತು ಅವರ ಮಗ ನನ್ನನು ಪ್ರೀತಿಯಿಂದ ಉಪಚರಿಸಿದರು. 

   ಹೀಗೆ ವರುಷ ಕಳೆಯುವಾಗ ಇನ್ನೊಂದು ವರ್ಗಾವಣೆ ಕಾದಿತ್ತು

           

ಶುಕ್ರವಾರ, ಡಿಸೆಂಬರ್ 11, 2020

ಮೈಸೂರು ದಿನಗಳು

                                        ಮೈಸೂರು ದಿನಗಳು 

 

                             
Railway Hospital launches vaccination campaign - Star of Mysore

ರೈಲ್ವೇ ಆರೋಗ್ಯ ಸೇವೆಯಲ್ಲಿ ಅಸಿಸ್ಟೆಂಟ್ ಡಿವಿಷನಲ್ ಮೆಡಿಕಲ್ ಆಫೀಸರ್  ಆಗಿ ನಾನು 1.9.1984 ರಂದು ಚೆನ್ನೈ ದಕ್ಷಿಣ ರೈಲ್ವೇ ಮುಖ್ಯ ಕಚೇರಿಯಲ್ಲಿ ರಿಪೋರ್ಟ್ ಮಾಡಿದೆನು .ಚೆನ್ನೈ ಸೆಂಟ್ರಲ್ ರೈಲ್ವೇ ಸ್ಟೇಷನ್ ನ ಪೂರ್ವಕ್ಕೆ ಒತ್ತಿ ಕೊಂಡು ಇರುವ ರಾಜ ಗಾಂಭೀರ್ಯದ ಕಟ್ಟಡ .ಉದ್ಯಾನಗಳ ಸುಳಿವು ಇಲ್ಲದಿದ್ದರೂ ಪಾರ್ಕ್ ಟೌನ್ ಎಂಬ ಸ್ಥಳ ನಾಮ .ಎದುರು ಗಡೆ ಮದ್ರಾಸ್ ಮೆಡಿಕಲ್ ಕಾಲೇಜ್ ನ ಬೃಹತ್ ಕ್ಯಾಂಪಸ್ .ಪರ್ಸನಲ್ ಆಫೀಸರ್ ಎದುರು ಸತ್ಯ ಮತ್ತು ಗೋಪ್ಯತೆಯ ಪ್ರಮಾಣ ವಚನ ಮಾಡಿಸಿದರು .ಆ ಕಚೇರಿಯಲ್ಲಿ ಸಕ್ಕೂ ಬಾಯಿ ಎಂಬವರು ವೈದ್ಯಕೀಯ ವಿಭಾಗ ನೋಡಿಕೊಳ್ಳುತ್ತಿದ್ದು ನಗು ಮುಖ ಮತ್ತು ಮೃದು ಭಾಷಿ .ಸಹಾಯಕ್ಕೆ ಯಾವಾಗಲೂ ಸಿದ್ದ ಹಸ್ತ .ಅವರು ನನ್ನನ್ನು ಮುಖ್ಯ ವೈದ್ಯಾಧಿಕಾರಿ ಡಾ ಸರ್ಕಾರ್ ಅವರ ಕಚೇರಿಗೆ ಕೊಂಡೊಯ್ದು ಅವರ ಸಲಹೆಯಂತೆ ನನ್ನನ್ನು ಮೈಸೂರು ವಿಭಾಗದ ರೈಲ್ವೇ ಆಸ್ಪತ್ರೆಗೆ ನೇಮಕಾತಿ ಮಾಡಿದ ಆದೇಶ ಮತ್ತು ಮೈಸೂರಿಗೆ ಹೋಗಲು ಫಸ್ಟ್ ಕ್ಲಾಸ್ ರೈಲ್ವೇ ಪಾಸ್ ಕೊಡಿಸಿದರು .ಕರ್ನಾಟಕ ದಲ್ಲಿ ಅದೂ ಮೈಸೂರು ದೊರಕಿದ್ದಕ್ಕೆ ಸಂತೋಷ ಆಯಿತು .ಮೈಸೂರಿಗೆ ರೈಲ್ವೇ ಟಿಕೆಟ್ ಬುಕ್ ಮಾಡಲು ಬಂದರೆ ಎಲ್ಲಾ ಫುಲ್ ಆಗಿತ್ತು .ಪಾಸ್ ಇದ್ದವರೂ ಟಿಕೆಟ್ ಕೊಳ್ಳ ಬೇಕು ,ಹಣ ಕೊಡಲು ಇಲ್ಲ .ಎಮರ್ಜೆನ್ಸೀ ಕೋಟಾ ಬಗ್ಗೆ ನನಗೆ ಅರಿವು ಇರಲಿಲ್ಲ .ಆದ ಕಾರಣ ಮೈಸೂರಿಗೆ ಬಸ್ ನಲ್ಲಿಯೇ ಪ್ರಯಾಣ ಮಾಡಿ ಒಂದು ಸಣ್ಣ ಹೊಟೇಲ್ ನಲ್ಲಿ ರೂಂ ಮಾಡಿದೆನು .

ಮೈಸೂರಿನಲ್ಲಿ ಒಂಟಿಕೊಪ್ಪಲು ಎಂಬ ಸುಂದರ ಪ್ರಶಾಂತ ತಾಣದ ವಿಶಾಲ ಅಂಗಣದಲ್ಲಿ  ರೈಲ್ವೇ ಆಸ್ಪತ್ರೆ ಇದೆ .ಪಕ್ಕದಲ್ಲಿ ಮೈಸೂರು ಆಕಾಶವಾಣಿ ಕೇಂದ್ರ .ಹಿಂದುಗಡೆ ಜಾವಾ ಮೋಟಾರ್ ಸೈಕಲ್ ಕಾರಖಾನೆ .ರೈಲ್ವೇ ಅಧಿಕಾರಿಗಳ ವಸತಿ ಗೃಹಗಳು ಸುತ್ತ ಮುತ್ತ .ಈ ವಸತಿ ಗೃಹಗಳು ವಿಶಾಲವಾದ ಕಾಂಪೌಂಡ್ ಹೊಂದಿದ್ದು , ಹಳೇ ಕಾಲದ ದೊಡ್ಡ ಮನೆಗಳು .ಸ್ವಲ್ಪ ಹಿಂದುಗಡೆ ಹೋದರೆ ದಾಸ್ ಪ್ರಕಾಶ್ ಪ್ಯಾರಡೈಸ್ ಹೋಟೆಲ್ ,ಅದರ ಎದುರು ಗಡೆ  ಲೇಖಕ ಆರ್ ಕೆ ನಾರಾಯಣನ್ ಮನೆ 

ಆಸ್ಪತ್ರೆಯಲ್ಲಿ ಮೈಸೂರು ವಿಭಾಗದ ವೈದ್ಯಕೀಯ ಸೇವೆಯ ಮುಖ್ಯಾಧಿಕಾರಿ ಡಾ ಸೆಲಿನ್ ಲೋಬೊ ಮತ್ತು ಆಸ್ಪತ್ರೆಯ ಮುಖ್ಯಸ್ಥ ರಾಗಿ ಡಾ ಗೋಪಾಲ ಕೃಷ್ಣ ಎಂಬವರು ಇದ್ದರು.ಮೈಸೂರು ವಿಭಾಗದಲ್ಲಿ ಒಂಟಿ ಕೊಪ್ಪಲು ಆಸ್ಪತ್ರೆ ,ಮೈಸೂರು ಅಶೋಕನಗರ  ಆಸ್ಪತ್ರೆ ,ಪುತ್ತೂಆರು(ಕಬಕ ಪುತ್ತೂರ್ ),ಸಕಲೆಶಪುರ ,ಅರಸೀಕೆರೆ ಮತ್ತು  ಹರಿಹರ ಆರೋಗ್ಯ ಕೇಂದ್ರಗಳು ಇದ್ದವು .ಡಾ ಗೋಪಾಲಕೃಷ್ಣ ಹಳೆಯ ಎಲ್ ಎಂ ಪಿ ಪದವೀದರರು ,ಸಜ್ಜನರು .ನನಗೆ ಕೆಲಸ ಪರಿಚಯ ಮಾಡಿ ಕೊಡುವ ಮೊದಲೇ ನಾನು ಹೊಟೇಲ್ ನಲ್ಲಿ ತಂಗಿರುವ ವಿಚಾರ ತಿಳಿದು ಕೂಡಲೇ ಮೈಸೂರು ರೈಲ್ವೇ ನಿಲ್ದಾಣ ಮುಖ್ಯಸ್ತರಿಗೆ ಫೋನ್ ಮಾಡಿ (ರೈಲ್ವೇ ಗೆ ತನ್ನದೇ ಆದ ಫೋನ್ ನೆಟ್ವರ್ಕ್ ಇದೆ )ಅಧಿಕಾರಿಗಳ ವಿಶ್ರಾಂತಿ ಕೊನೆಯಲ್ಲಿ ತತ್ಕಾಲ ಇರುವ ವ್ಯವಷ್ಟೆ ಮಾಡಿದರು .ಮತ್ತು ಊಟಕ್ಕೆ ಮಧ್ಯಾಹ್ನ ಸಿ ಎಫ್ ಟಿ ಆರ್ ಐ ಕಾಂಟೀನ್ (ಆಸ್ಪತ್ರೆಯಿಂದ ಅನತಿ ದೂರದಲ್ಲಿ ಇದೆ )ಮತ್ತು ರಾತ್ರಿ ಮೈಸೂರು ಮೆಡಿಕಲ್ ಕಾಲೇಜ್ ಕಾಂಟೀನ್ ಅಥವಾ ಮರಿ ಮಲ್ಲಪ್ಪ ಶಾಲೆಯ ಕಾಂಟೀನ್ ಗೆ ಹೋಗುವಂತೆ ತಾಕೀತು ಮಾಡಿದರು .ಪಾಪ ಹುಡುಗ ಸ್ವಲ್ಪ ಹಣ ಉಳಿಯಲಿ ಮತ್ತು ಒಳ್ಳೆಯ ಆಹಾರ ಸಿಗಲಿ ಎಂಬ ಕಾಳಜಿ .ಈಗ ಇಂಥವರು ಸಿಗಲಾರರು .

ರೈಲ್ವೆ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸುವ ಕೇಂದ್ರ ಸರಕಾರದ ದೊಡ್ಡ ಇಲಾಖೆ .ಇದರಲ್ಲಿ ಸಾವಿರಾರು ಹುದ್ದೆಗಳು ..ಮೈಸೂರು ವಿಭಾಗ ದಕ್ಷಿಣ ರೈಲ್ವೆ ಜೋನ್ ನಲ್ಲಿ ಇತ್ತು .ಮೈಸೂರು ವಿಭಾಗಕ್ಕೆ ಡಿವಿಶನಲ್ ರೈಲ್ವೆ ಮ್ಯಾನೇಜರ್ (DRM )ಮುಖ್ಯಸ್ಥರು .ಟ್ರಾಫಿಕ್ ,ಆಪರೇಷನ್ ,ಮೆಕ್ಯಾನಿಕಲ್ ,ಎಲೆಕ್ರ್ಟಿಕಲ್ ,ಕಮರ್ಷಿಯಲ್ ,ಪರ್ಸನಲ್ ,ಸಿಗ್ನಲ್ ಅಂಡ್ ಕಮ್ಯುನಿಕೇಷನ್ ,ಅಕೌಂಟ್ಸ್ ,ಸ್ಟೋರ್ಸ್,ಪ್ರೊಟೆಕ್ಷನ್ ಫೋರ್ಸ್ ಮತ್ತು ಕೊನೆಗೆ ವೈದ್ಯಕೀಯ ವಿಭಾಗ .ಅದಕ್ಕೆಲ್ಲಾ ತುಂಡರಸು  ಮುಖ್ಯಸ್ಥರು ..ಡಿ ಆರ್  ಎಂ ಗೆ ಅತೀವ ಅಧಿಕಾರಗಳು ಇದ್ದವು .ಅತ್ಯಂತ ದೊಡ್ಡ ವಸತಿ ಗೃಹ ,ನೌಕರರು ,ಅವರಿಗೆ ರೈಲ್ವೆ ಯಲ್ಲಿ ಸಂಚರಿಸಲು ಪ್ರತ್ಯೇಕ ಸರ್ವ ಸೌಕರ್ಯ ಇರುವ ಕೋಚ್ ಸೌಕರ್ಯ .ಅವರು ಇನ್ಸ್ಪೆಕ್ಷನ್ ಗೆ ಹೋಗುವಾಗ ಹಿಂದೆ ಮುಂದೆ ಅಧಿಕಾರಿಗಳು ,ರಕ್ಷಣಾ ಸಿಬ್ಬಂದಿ .ಎಲ್ಲಾ ಸರಕಾರಿ ಇಲಾಖೆಗಳಂತೆ ಇನ್ಸ್ಪೆಕ್ಷನ್ ಪ್ರಹಸನ ಇಲ್ಲಿಯೂ ನಡೆಯುವುದು .ದೊಡ್ಡವರು ಬರುವ ದಿನ ಎಲ್ಲವೂ ಅಚ್ಚು ಕಟ್ಟು ,ಸ್ವಚ್ಛ .ಅಧೀನ ಅಧಿಕಾರಿಗಳು ಎಲ್ಲಾ ಸರಿ ಇವೆ ಎಂದು ಹೇಳಬೇಕು ..ಆದರೂ ರಾಜ್ಯ ಸರಕಾರದ ಇಲಾಖೆಗಳಿಗಿಂತ ಸ್ವಲ್ಪ ಉತ್ತಮ .ನಾನು ಸೇರಿದಾಗ ಕೋಯಿಲ್ ಪಿಳ್ಳೈ ಎಂಬ ಹಿರಿಯರು ಡಿ ಆರ್ ಎಂ ಆಗಿದ್ದರು . 

ರೈಲ್ವೆ ಅರೋಗ್ಯ ಸೇವೆ ರೈಲ್ವೆ ಸೇವೆಯಲ್ಲಿರುವ ಮತ್ತು ಸೇವಾ ನಿವೃತ್ತ ನೌಕರರು ಮತ್ತು ಅವರ ಕುಟುಂಬದವರ ಅರೋಗ್ಯ ಪಾಲನೆಗೆ ಇರುವ ಬ್ರಾಂಚ್ .ಅದಲ್ಲದೆ ಕಾಲ ಕಾಲಕ್ಕೆ ರೈಲ್ವೆ ಡ್ರೈವರ್ ಗಾರ್ಡ್ ನಂತಹ ಹುದ್ದೆಯಲ್ಲಿ ಇರುವವರ ತಪಾಸಣೆ ಮಾಡಿ ಅವರು ಸುರಕ್ಷಿತತೆಗೆ ಅಪಾಯ ಅಲ್ಲಾ ಎಂದು ನಿರ್ಧರಿಸುವುದು .ಅಫಘಾತ ಸಂಭವಿಸಿದರೆ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸುವುದು . 

                   ನನ್ನಂತಹ ಕಿರಿಯ ವೈದ್ಯರು ಓ ಪಿ ಡಿ ಯಲ್ಲಿ ರೋಗಿಗಳ ತಪಾಸಣೆ ಮತ್ತು ಸ್ಪೆಷಲಿಸ್ಟ್ ವೈದ್ಯರಿಗೆ ವಾರ್ಡ್ ನಲ್ಲಿ ಸಹಾಯ ಮಾಡುವುದು .ಇದರ ಜತೆ ಮೈಸೂರಿನ ಹೊರಗೆ ಅರೋಗ್ಯ ಕೇಂದ್ರಗಳ ವೈದ್ಯರು ರಜೆ ಹಾಕಿದರೆ ಬದಲಿ ವೈದ್ಯರಾಗಿ ಹೋಗುವುದು .ನನ್ನೊಡನೆ ಮುಖ್ಯ ವೈದ್ಯಾಧಿಕಾರಿ ಫಿಸಿಷಿಯನ್ ಜತೆ ರೌಂಡ್ಸ್ ಗೆ ಹೋಗಲೂ ತಾಕೀತು ಮಾಡಿದ್ದರು .ಡಾ (ಹೆಸರು ಬೇಡ ) ಎಂಬವರು ಫಿಸಿಷಿನ್ .ಸ್ವಲ್ಪ ಕುಳ್ಳಗೆ .ನಾನು ಸ್ವಲ್ಪ ಉದ್ದ .ರೌಂಡ್ಸ್ ನಲ್ಲಿ ರೋಗಿಗಳಿಗೆ ಅವರು ಪ್ರಶ್ನೆ ಹಾಕಿದಾಗ ಅವರು ನನ್ನನ್ನು ನೋಡಿ ಉತ್ತರಿಸುವರು .ಇದು ಅವರಿಗೆ ಕಿರಿ ಕಿರಿ ಆಗುತ್ತಿತ್ತು .ಸ್ವಲ್ಪ ಸಮಯದ ನಂತರ ನೀವು ಬರುವುದು ಬೇಡ ,ನಾನೊಬ್ಬನೇ ರೌಂಡ್ಸ್ ಮಾಡುತ್ತೇನೆ ಎಂದರು .ಒಳ್ಳೆಯ ವೈದ್ಯ .ನನಗೇನೂ ಬೇಸರ ಆಗಲಿಲ್ಲ .ಆಸ್ಪತ್ರೆಯಲ್ಲಿ ಡಾ ರಾಜಾರಾಮ ಶೆಟ್ಟಿ ಎಂಬ ಹಿರಿಯ ವೈದ್ಯರು ಇದ್ದರು ,ಇವರು ಕಾಸರಗೋಡಿನಲ್ಲಿ ಇದ್ದ ಹೆಸರಾಂತ ಡಾ  ಕ್ಯಾಪ್ಟನ್ ಶೆಟ್ಟಿ ಅವರ ಸಹೋದರ .ಇವರಂತ ಸಜ್ಜನ ,ಮೃದು ಭಾಷಿ ವೈದ್ಯರನ್ನು ನಾನು ಜೀವನದಲ್ಲಿ ಬೆರಳೆಣಿಕೆಯಲ್ಲಿ ಕಂಡಿರುವೆನು .ಅಲ್ಲಿ ಆದ ಅವರ ಪರಿಚಯ ಮತ್ತು ಸ್ನೇಹ ಅವರ ಕೊನೆಯ ವರೆಗೂ ಮುಂದುವರಿದದ್ದು ನನ್ನ ಸೌಭಾಗ್ಯ .ಅವರು ನನಗೆ ನನ್ನ ಕರ್ತವ್ಯಗಳ ಪರಿಚಯ ಮಾಡಿಕೊಟ್ಟರು .ಎಷ್ಟೋ ದಿನ ಅವರ ಮನೆಯಲ್ಲೇ ಊಟ ಉಪಹಾರ ಆಗುತ್ತಿತ್ತು .ನಾನು ಸೇರಿದ ಕೆಲವು ದಿನಗಳಲ್ಲಿ ಡಾ ಪ್ರಸನ್ನ ಕುಮಾರ್ ನನ್ನ ಹಾಗೆಯೇ ADMO  ಆಗಿ ಸೇರಿದರು .ಅವರು ಮುಂದೆ ನನ್ನೊಡನೆ ಚೆನ್ನೈ ನಲ್ಲಿ ಜತೆಯಾಗಿ ಇದ್ದು ಈಗ ದಕ್ಷಿಣ ಮಧ್ಯ ರೈಲ್ವೆ ಮುಖ್ಯ ವೈದ್ಯಾಧಿಕಾರಿ ಆಗಿ ದ್ದಾರೆ .ಈಗಲೂ ನಮ್ಮ ಸ್ನೇಹ ಗಟ್ಟಿಯಾಗಿಯೇ ಇದೆ .ಅವರ ಮನೆ ಒಂಟಿಕೊಪ್ಪಲ್ ಸಮೀಪ ಸರಸ್ವತಿ ಪುರಂ ನಲ್ಲಿ ಇತ್ತು .ಅವರ ಮನೆಗೆ ಹೋಗುವಾಗ ಕುವೆಂಪು ಮನೆ ದಾಟಿ ಹೋಗಬೇಕು .ಎಷ್ಟೋ ದಿನ ಅವರ ಮನೆಯಲ್ಲಿ ಅಮ್ಮ ನನಗೆ ಊಟ ಪ್ರೀತಿಯಿಂದ ಉಣಿಸಿದ್ದಾರೆ . 

             ಕೆಲವು ದಿನ ರೆಟೈರಿಂಗ್ ರೂಮ್ ವಾಸ  ನಂತರ ನನಗೆ ಒಂದು ವಸತಿ ಗೃಹ ಬಂಗಲೆ ಅಲೋಟ್ ಆಯಿತು .ಈಗಿನ ವಿಕ್ರಂ ಆಸ್ಪತ್ರೆ ಎದುರು .ನಾನು ಅವಿವಾಹಿತ ಒಬ್ಬನೇ ಇದ್ದು ,ಫ್ಲಾಟ್ ನಲ್ಲಿ ಕ್ವಾರ್ಟರ್ ಅಲೋಟ್ ಆದ  ಹಿರಿಯರು ನನ್ನೊಡನೆ ಅದನ್ನು ಎಕ್ಸ್ಚೇಂಜ್ ಮಾಡಿ ಕೊಂಡರು .ವಸತಿ ಗೃಹಕ್ಕೆ ಕುರ್ಚಿ ಮೇಜು ಕೊಳ್ಳಲು ಹಣ ಇಲ್ಲದ್ದರಿಂದ ಬಾಡಿಗೆ ಫರ್ನಿಚರ್ ಮೊರೆ ಹೋದೆನು .ಮಲಗಲು ಒಂದು ಮಡಿಚುವ ಟೇಪ್ ಮಂಚ ಕೊಂಡೆನು .ಅಡಿಗೆ ಮಾಡಲು ಗ್ಯಾಸ್ ಸ್ಟವ್ ಮತ್ತು ಕನೆಕ್ಷನ್ ,ಕುಕ್ಕರ್ ,ಪಾತ್ರೆಗಳು . 

ಇದರ ನಡುವೆ ಪುತ್ತೂರು ,ಸಕಲೇಶಪುರ ,ಅರಸೀಕೆರೆ ಮತ್ತು ಹರಿಹರಕ್ಕೆ  ಬದಲಿ ಕರ್ತವ್ಯ ಕ್ಕೆ ಹೋಗುವ ಅವಕಾಶ ಸಿಕ್ಕಿತು .ಹೀಗೆ  ಹೋದಾಗ ಸಾಮಾನ್ಯವಾಗಿ ನಾವು ಅಲ್ಲಿಯ ವೈದ್ಯರ ವಸತಿ ಗೃಹದಲ್ಲಿ ತಂಗುತ್ತಿದ್ದೆವು .ಅವರಿಗೂ ಕಾವಲಿಗೆ ಒಬ್ಬರು ಇದ್ದಂತೆ ಆಯಿತು ,ಸ್ಥಳೀಯ ಹೆಲ್ತ್ ಇನ್ಸ್ಪೆಕ್ಟರ್ ನಮ್ಮ ಅವಶ್ಯಕತೆ ನೋಡಿ ಕೊಳ್ಳುತ್ತಿದ್ದರು .ಅಕ್ಟೋಬರ್ ೩೦ ೧೯೮೪ ರಂದು ನಾನು ಹರಿಹರಕ್ಕೆ ಪ್ರಯಾಣಿಸುತ್ತಿದ್ದಾಗ ಡಾ ಹಾ ಮಾ ನಾಯಕ್ ಅದೇ ಕಂಪಾರ್ಟ್ಮೆಂಟ್ ನಲ್ಲಿ ಸಹಯಾತ್ರಿ .ಅವರು ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿ ಯಾಗಿ ಸ್ಥಾನ ವಹಿಸಿ ಕೊಳ್ಳಲು ಹೋಗುತ್ತಿದ್ದರು .ಅಂತಹ ಮಹಾನ್ ಸಾಹಿತಿ ಮತ್ತು ಅಧ್ಯಾಪಕರ ಜತೆ ಪಯಣಿಸುವ ಭಾಗ್ಯ ಬಯಸದೇ  ಬಂದುದು .ಅದರ ಮರು ದಿನ ಇಂದಿರಾ ಗಾಂಧಿ ಹತ್ಯೆ ನಡೆದು ದೇಶವೇ ಸ್ಥಬ್ದ ಆಗಿತ್ತು .ನಮ್ಮ ಸಿಬ್ಬಂದಿ ಮನೆಯಿಂದಲೇ ಊಟ ಉಪಹಾರ ಸರಬರಾಜು ಮಾಡಿ ನಾನು ಉಪವಾಸ ಇರದಂತೆ ನೋಡಿ ಕೊಂಡರು .ಹರಿಹರದಲ್ಲಿ ಭಾರೀ ಸೆಖೆ ,ಮೇಲೆ ಮನೆಯ ಮಾಡಿನಿಂದ ಬಿಸಿ ರೇಡಿಯೇಶನ್ ಆಗುತ್ತಿತ್ತು ,ಅದಕ್ಕೆ ನಾನು ಮಂಚದ ಕೆಳಗೇ ಮಲಗುತ್ತಿದ್ದೆ .,ಅಲ್ಲಿ ಇದ್ದ ಡಾ ಕೇಶವ್ ಪ್ರಹ್ಲಾದ ರೈಚುರ್ಕರ ಇಂದು ಮೈಸೂರಿನ ಹಿರಿಯ ರೇಡಿಯೊಲೊಜಿಸ್ಟ್ (ಖಾಸಗಿ ).ಸ್ನೇಹಮಯಿ . 

ಮೈಸೂರು ಸುಂದರ ನಗರ .ಆದರೂ ನಮ್ಮಂತೆ ಕರಾವಳಿಯಿಂದ ಬಂದವರಿಗೆ ಸ್ವಲ್ಪ ಕಾಲದಲ್ಲಿ ಇಲ್ಲಿಯ ನಿಧಾನ ಕ್ಕೆ  ಹೊಂದಿ  ಕೊಳ್ಳುವುದು ಸ್ವಲ್ಪ ಕಷ್ಟ .ಪ್ರವಾಸ ಕ್ಕೆ ಬಂದು ಕೆಲ ದಿನ ತಂಗಲು ಇದರಷ್ಟು ಒಳ್ಳೆಯ ಜಾಗ ಇಲ್ಲ .

 ಇದರ ನಡುವೆ ನನಗೆ ಬರೋಡ ದಲ್ಲಿ ರೈಲ್ವೆ ಆಫೀಸರ್ಸ್ ಟ್ರೇನಿಂಗ ಕಾಲೇಜು ನಲ್ಲಿ ಒಂದು ತಿಂಗಳ ತರಬೇತಿ ಆಯಿತು .ಮೈಸೂರಿನಂತೆ ಅದೂ ರಾಜರ ಊರು .ಮೈಸೂರಿನ ಸೌಂದರ್ಯ ಇಲ್ಲ .ನಮ್ಮ ಕಾಲೇಜು ಅಲ್ಲಿಯ ಹಳೇ  ಅರಮನೆಯಲ್ಲ್ಲೂ ವಸತಿ ಮಾಜಿ ಕುದುರೆ ಲಾಯದಲ್ಲಿಯೂ  ಇದ್ದಿತು .ಒಳ್ಳೆಯ ಊಟ ಉಪಚಾರ ಮತ್ತು ಒಳಾಂಗಣ ಆಟದ ವ್ಯವಸ್ಥೆ ಇದೆ .ಕೋರ್ಸ್ ನ ಅಂಗವಾಗಿ ಮುಂಬೈ ಪ್ರವಾಸ ಕೂಡಾ ಇತ್ತು . 

ಇಷ್ಟೆಲ್ಲಾ ಆಗುವಾಗ ಸಕಲೇಶ ಪುರದ ರೈಲ್ವೆ ವೈದ್ಯಾಧಿಕಾರಿ ,(ಇವರು ತಾತ್ಕಾಲಿಕ ಹುದ್ದೆಯಲ್ಲಿ ಇದ್ದವರು ,ನನ್ನಂತೆ ಲೋಕ ಸೇವಾ ಆಯೋಗದಿಂದ ನೇಮಕಾತಿ ಆದವರಲ್ಲ )ಯವರ ಕೋರಿಕೆ ಮೇರೆಗೆ ಅವರನ್ನು ಮೈಸೂರಿಗೆ ವರ್ಗಾಯಿಸಿ ನನ್ನನ್ನು ಅಲ್ಲಿಗೆ ಹಾಕಿದರು .ಅಲ್ಪ ಕಾಲದಲ್ಲಿಯೇ ಆದ  ವರ್ಗಾವಣೆಯಿಂದ ಸ್ವಲ್ಪ ಬೇಸರ ಹಾಗೂ ಕಸಿವಿಸಿ ಆದರೂ ಒಬ್ಬಂಟಿಗನಾಗಿದ್ದ ನನಗೆ ಹೊಸ ಊರು ನೋಡುವ ಅವಕಾಶ ಎಂದು ಕೊಂಡು ಮೈಸೂರಿಗೆ ವಿದಾಯ ಹೇಳಿದೆನು 

 

ಬುಧವಾರ, ಡಿಸೆಂಬರ್ 9, 2020

   ಮಡಿಕೇರಿ ನೆನಪುಗಳು ೧



 ಎಂ ಬಿ ಬಿ ಎಸ್ ಮಾಡಿ ಮುಂದೇನು ಮಾಡುವುದು ಎಂಬ ಆಲೋಚನೆಯಲ್ಲಿ ಇರುವಾಗ ಹಾಸನದಲ್ಲಿ ನಮ್ಮ ಊರ ವೈದ್ಯರು ತೀರಿ ಕೊಂಡು ಅವರ ಕ್ಲಿನಿಕ್ ಇದೆಯೆಂದು ನನ್ನ ಸಹೋದರ ತಿಳಿಸಲಾಗಿ ಅಲ್ಲಿ ಹೋಗಿ ಪ್ರಾಕ್ಟೀಸ್ ಶುರು ಮಾಡಿದೆನು .ಆರು ತಿಂಗಳಿನಲ್ಲಿ ಆಸ್ಪತ್ರೆ ಕೆಲಸ  ಇಲ್ಲದೆ ಹೊರ ರೋಗಿಗಳನ್ನು ಮಾತ್ರ ನೋಡುವ ಕೆಲಸ ,ಏಕತಾನತೆ ಬೇಸರ ಹುಟ್ಟಿಸಿತು .ಒಂದು ದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಮಡಿಕೇರಿ ಅಶ್ವಿನಿ ಆಸ್ಪತ್ರೆಗೆ  ಮೆಡಿಕಲ್ ಆಫೀಸರ್ ಬೇಕಾಗಿದ್ದಾರೆ ಎಂಬ ಜಾಹೀರಾತು ನೋಡಿ ಅರ್ಜಿ ಹಾಕಿದೆ .ಒಂದು ರವಿವಾರ ಸಂದರ್ಶನಕ್ಕೆ ಕರೆದರು .ಬೆಳ್ಳ ಬೆಳಗ್ಗೆ ಹಾಸನದಿಂದ ಬಸ್ ನಲ್ಲಿ ಮಡಿಕೇರಿಗೆ  ಬಂದು ಇಳಿದಾಗ ನನ್ನ ಸೀನಿಯರ್ ಒಬ್ಬರು (ಆಗಲೇ ಮಕ್ಕಳ ತಜ್ನ ಎಂ ಡಿ ಮಾಡಿದ್ದವರು )ಸಿಕ್ಕಿದರು .ಏನು ಸಾರ್ ಇಲ್ಲಿ ಎಂದು ಕೇಳಿದ್ದಕ್ಕೆ ಇಲ್ಲಾ ಒಂದು ನೆಂಟರ ಮದುವೆ ಇತ್ತು ಹಾಗೆ ಬಂದೆ ,ಬರುತ್ತೇನೆ ಎಂದವರೇ ರಿಕ್ಷಾ ಹತ್ತಿ ಹೋದರು.ನಾನೂ ಚಹಾ ಸೇವನೆ ಮಾಡಿ ಇನ್ನೊಂದು ಆಟೋ ಹತ್ತಿ ಆಸ್ಪತ್ರೆಗೆ ಹೋದರೆ  ಅದೇ ವೈದ್ಯರು ಅಲ್ಲಿಯೂ ಸಿಕ್ಕಿದರು .ಅವರೂ ಸಂದರ್ಶನ ಕ್ಕೆ ಬಂದವರು .ಎಂ ಡಿ ಅದವರು .ನನ್ನೊಡನೆ ಯಾಕೆ ಮುಚ್ಚಿಟ್ಟರು ತಿಳಿಯ ಲಿಲ್ಲ .ನನಗೆ ಕೆಲಸ ಸಿಕ್ಕಿತು ಅನ್ನಿ .ಇದು 1983 ರ ಕತೆ.ನನ್ನ ಸಂಬಳ 1100 ರೂಪಾಯಿ ಮತ್ತು ಉಚಿತ ವಸತಿ .

    ಅಶ್ವಿನಿ ಆಸ್ಪತ್ರೆ  ಟ್ರಸ್ಟ್ ನಡೆಸುತ್ತಿದ್ದ ಸಂಸ್ಥೆ .ಮಡಿಕೇರಿ ಮೈಸೂರ್ ರೋಡ್ ನಲ್ಲಿ ಬಸ್ ಸ್ಟಾಂಡ್ ನಿಂದ  ಒಂದೂವರೆ ಕಿಲೋಮೀಟರು ದೂರ  ಎಡ  ಪಾರ್ಶ್ವದಲ್ಲಿ  ಶಾಂತವಾದ  ಪ್ರದೇಶದಲ್ಲಿ ಇದೆ .ಪೂರ್ವದಲ್ಲಿ ಕೆ ಎಸ್ ಆರ್ ಟಿ ಸಿ ಡಿಪೊ ,ಅದಕ್ಕೆ ತಾಗಿ  ರಾವು ಬಹದ್ದೂರ್ ಬೋಪಯ್ಯ ಅವರ ಮನೆ ,ಇನ್ನೂ ಮುಂದೆ ಹೋದರೆ ಸುದರ್ಶನ ಸರ್ಕಲ್ .ಆಸ್ಪತ್ರೆಯ ಪಶ್ಚಿಮಕ್ಕೆ ತಾಗಿ  ಮಡಿಕೇರಿಯ ಪ್ರಸಿದ್ದ ಸಿ ವಿ ಎಸ್ ಸಹೋದರರ ಪೈಕಿ ಒಬ್ಬರಾದ ಸಿ ವಿ ಶಂಕರ್ ಅವರ ಮನೆ ,ಮುಂದೆ ಕಣಿವೆ ,ನೈರುತ್ಯ ದಲ್ಲಿ ಸ್ವಲ್ಪ ಮುಂದೆ ಹೋದರೆ ಈಸ್ಟ್ ಎಂಡ್ ಹೊಟೇಲ್ .(ಇಲ್ಲಿಯ ಮಸಾಲೆ ದೋಸೆ ಬಹಳ ಪ್ರಸಿದ್ದ ,ಈಗಲೂ ಬರೆಯುತ್ತಿರಬೇಕಾದರೆ ಬಾಯಲ್ಲಿ ನೀರು ಬರುತ್ತದೆ .)ದಕ್ಷಿಣಕ್ಕೆ  ಮಂಗಳೂರು ಮೈಸೂರು ಹೆದ್ದಾರಿ .

ಆಸ್ಪತ್ರೆಯಲ್ಲಿ ಮಹಾರಾಷ್ಟ್ರದಿಂದ ಬಂದ ಕೇಲ್ಕರ್ ದಂಪತಿ ಗಳು  ವೈದ್ಯರಾಗಿ ಇದ್ದರು.ಡಾ ಕೇಲ್ಕರ್ ಪಿಸಿಶಿಯನ್ ಮತ್ತು ಮುಖ್ಯ ವೈದ್ಯಾಧಿಕಾರಿ ,ಅವರ ಪತ್ನಿ ಸರ್ಜನ್ .ಇನ್ನು ಪ್ರಸೂತಿ ವಿಭಾಗ ಡಾ ಶಾಂತಾ ಎಂಬುವರು ನೋಡಿ ಕೊಳ್ಳುತ್ತಿದ್ದರು .ಇನ್ನೊಬ್ಬರು ಚೆನ್ನಬಸಪ್ಪ ಎಂಬ ಹಿರಿಯ ವೈದ್ಯರು ಇದ್ದರು .ಇನ್ನೊಬ್ಬ ಹಿರಿಯರು ಅರಿವಕೆ ಕೊಡಲು ಬರುತ್ತಿದ್ದರು .ಹೆಸರು ಮರೆತು ಹೋಗಿದೆ .  ಡಾ ರಮೇಶ್ ಬೋಪಯ್ಯ ಎಂಬ ಮಕ್ಕಳ ತಜ್ನರು ಗೌರವ ವೈದ್ಯರಾಗಿ ಬರುತ್ತಿದ್ದರು .ಕೇಲ್ಕರ್ ದಂಪತಿ ಕೆಲವು ತಿಂಗಳ ಹಿಂದೆ ಬಂದಿದ್ದರು.ಅವರ ವಸತಿ ಊರ ಹೊರಗೆ ಇತ್ತು . 

    ಆಸ್ಪತ್ರೆಯ  ಎದುರು ಗಡೆ ಒಂದು ಪುಟ್ಟ ದೇವಾಲಯ ,ಅಶ್ವಿನಿ ದೇವತೆಯದ್ದು ಇರಬೇಕು .ಇಲ್ಲಿ ಪೂಜೆಗೆ ಬರುತ್ತಿದ್ದ ಅಶ್ವಿನಿ ಭಟ್ಟರೆಂದೇ ಕರೆಯುತ್ತಿದ್ದರು .ಅದಕ್ಕೆ ಹೊಂದಿ ಕೊಂಡು ಪುಟ್ಟ ಕಾಂಟೀನ್ .ನಾರಾಯಣ ಭಟ್ ದಂಪತಿಗಳು ನಡೆಸುತ್ತಿದ್ದರು .ಅದಕ್ಕೂ ಮೊದಲು ಪ್ರಸಿದ್ದ ಗುಂಡು ಕುಟ್ಟಿ ಮಂಜುನಾಥಯ್ಯ ಅವರಲ್ಲಿ ಕೆಲಸ ಮಾಡುತ್ತಿದ್ದರು.ನನಗೆ ಒಂದು ವರ್ಷ ಪ್ರೀತಿ ಯಿಂದ ಅನ್ನ ಇಟ್ಟವರು.ನಾನು ಮಡಿಕೇರಿ ಬಿಟ್ಟ ಮೇಲೂ ನನ್ನೊಡನೆ ಸಂಪರ್ಕ ಇಟ್ಟುಕೊಡಿದ್ದರು ..ಅಶ್ವಿನಿ ಬಿಟ್ಟ ಮೇಲೆ ಒಂದು ಮೆಸ್ ನಡೆಸಿ ಜೀವನ ಸಾಗಿಸುತ್ತಿದ್ದರು .ಮೆಸ್ಸ್ ಆರಂಭ ಮಾಡಲು ನನ್ನಿಂದ ಹಣಕಾಸು ನೆರವು ಕೇಳಿ ಬಂದಿದ್ದರು .ದುರದೃಷ್ಟವಶಾತ್ ನನ್ನ ಬಳಿ ಆಗ ಸಾಕಷ್ಟು ದುಡ್ಡು ಇಲ್ಲದ ಕಾರಣ  ಸಹಾಯ ಮಾಡಲು ಆಗಲಿಲ್ಲ ಎಂಬ ವ್ಯಥೆ ಇದೆ 

 ಆಸ್ಪತ್ರೆಯ ಆಡಳಿತ ನಡೆಸುತ್ತಿದ್ದುದು ಟ್ರಸ್ಟ್ ಎಂದು ಹೇಳಿದನಷ್ಟೆ .ಅದರ ಮ್ಯಾನೇಜಿಂಗ್ ಟ್ರಸ್ಟಿ ಆಗಿ ಶ್ರೀ ಬಿ ಜಿ ವಸಂತ್ ಇದ್ದರು .ಇವರು ಕತೆ ಗಾರ್ತಿ  ಕೊಡಗಿನ ಗೌರಮ್ಮನ ಪುತ್ರ .ಮಡಿಕೇರಿಯಲ್ಲಿ ಆಟೋ ಸರ್ವಿಸ್ ಎಂಬ ವಾಹನ ದುರಸ್ತಿ  ಕಾರ್ಯಾಗಾರ ನಡೆಸುತ್ತಿದ್ದರು ,ಎಸ್ಟೇಟ್ ಇತ್ತು .ಮುಂದೆ ಮಾರುತಿ ಏಜನ್ಸಿ ಸಿಕ್ಕಿರ ಬೇಕು .ಅವರನ್ನು ಬೇಬಿ ಸ್ವಾಮಿ ಎಂದು ಕರೆಯುತ್ತಿದ್ದರು .ಇನ್ನೊಬ್ಬರು ಟರ್ಸ್ಟಿ ಹೆಬ್ಬಾರ್ ಎಂಬವರು ಇದ್ದರು ,ವಕೀಲರು .ಅವರ ಮಗಳು ಸೀತಾ ಬಾಲ್ಯದಲ್ಲಿಯೇ ಒಳ್ಳೆಯ ಡ್ಯಾನ್ಸರ್ .ಮುಂದೆ ಗಾಯಕ ಶಶಿಧರ್ ಕೋಟೆಯವರನ್ನು ಮದುವೆಯಾಗಿ ಸೀತಾ ಕೋಟೆ ಆದರು .ಟಿ ವಿ ಕಲಾವಿದೆ .ಆಸ್ಪತ್ರೆಯ ಆಫೀಸ್ ನಲ್ಲಿ ಪೂವಯ್ಯ ಮ್ಯಾನೇಜರ್ ಆಗಿದ್ದು ಅವರಿಗೆ ನಾರಾಯಣ ಎಂಬ ಅಸಿಸ್ಟೆಂಟ್ ಇದ್ದರು .ಲ್ಯಾಬೋರೇಟರಿ ಯಲ್ಲಿ ಸೋಮಯ್ಯ ಎಂಬ ಮಾಜಿ ಸೈನಿಕ ಮುಖ್ಯಸ್ಥ .ಲ್ಯಾಬೋರೇಟರಿ ಕಮ್ ಬ್ಲಡ್ ಬ್ಯಾಂಕ್ .ಆಗಿನ್ನೂ ಏಡ್ಸ್ ಕಾಯಿಲೆ ಮುಂಚೂಣಿಗೆ ಬರದಿದ್ದ ಕಾರಣ  ನಾವೇ ರಕ್ತ ವರ್ಗಿಕರಣ ಮಾಡಿ ರಕ್ತ ಸಂಗ್ರಹಿಸಿ ಕೊಡುತ್ತಿದ್ದೆವು . 

 ನಾನು ಸೇರಿ ಇನ್ನೇನು ಒಂದು ತಿಂಗಳು ಆಗಿಲ್ಲ ,ಮುಖ್ಯ ವೈದ್ಯಾಧಿಕಾರಿ ಮತ್ತು ಹಳೆಯ ಇಬ್ಬರು ವೈದ್ಯರ ನಡುವೆ ಏನೋ ಭಿನ್ನಾಭಿಪ್ರಾಯ ಬಂದು ,ಆ ಇಬ್ಬರು ಹಿರಿಯರನ್ನು ವಜಾ ಮಾಡಿದರು .ಇಲ್ಲಿ ಆಡಳಿತ ಮಂಡಳಿ ಮುಖ್ಯ ವೈದ್ಯಾಧಿಕಾರಿ ಯ ಪರ ವಹಿಸಿದ್ದು ಮೇಲ್ನೋಟಕ್ಕೆ ಎದ್ದು ಕಾಣುತ್ತಿತ್ತು .ನನಗೆ ಇದು ಸರಿ ಕಾಣಲಿಲ್ಲ .ಮುಂದೆ ನನಗೂ ಇದೇ  ಉಪಚಾರ ಕಾದಿದೆ ಎಂಬ ಅರಿವು ಬಂದಿತು .ಆದರೂ ತಮ್ಮ ನಡೆ ಸರಿಯಲ್ಲ ಎಂಬುದು ಅವರಿಗೆ ತಿಳಿದಿತ್ತು .ಅಲ್ಲಿಂದ ನನಗೆ ಹೆಚ್ಚು ಉಪಚಾರ ಮತ್ತು ಗಮನ ಸಿಕ್ಕಿತು . 

ಆಸ್ಪತ್ರೆಗೆ  ಮೈಸೂರು ಕಡೆ ಬೈಲಕುಪ್ಪೆಯಿಂದ ಹಿಡಿದು ಕುಶಾಲ ನಗರ ,ಶುಂಠಿ ಕೊಪ್ಪ ,ದಕ್ಷಿಣಕ್ಕೆ ಭಾಗಮಂಡಲ ,ವಿರಾಜಪೇಟೆ ,ಉತ್ತರಕ್ಕೆ ಸೋಮವಾರ ಪೇಟೆ ಮತ್ತು ಪಶ್ಚಿಮದಲ್ಲಿ ಸಂಪಾಜೆ ವರೆಗೆ ರೋಗಿಗಳು ಬರುತ್ತಿದ್ದರು .ಬೈಲಕುಪ್ಪೆಯಿಂದ ಟಿಬೆಟಿಯನ್ ಜನರು ಬರುತ್ತಿದ್ದು ಅಜಾನುಬಾಹುಗಳಾದ ಅವರಲ್ಲಿ ಕ್ಷಯ ರೋಗ ಮತ್ತು  ಥೈರಾಯಿಡ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿತ್ತು .ಹಲವು ಪ್ರತಿಷ್ಠಿತ ಕಾಫಿ ತೋಟಗಳ ಕೆಲಸ ಗಾರರಿಗೆ ಅಧಿಕೃತ   ಆಸ್ಪತ್ರೆ ಆಗಿತ್ತು .ಕೊಡವ ,ತುಳು ,ತಮಿಳು ಮತ್ತು ಮಲಯಾಳ ಭಾಷೆಯ ರೋಗಿಗಳು ಬರುತ್ತಿದ್ದರು .ಪೊಲ್ಲ್ಯಾಕ  ಜಂಡು ಚಮಚ ಬೈಟ್ ಜಂಡು ಚಮಚ (ಬೆಳಿಗ್ಗೆ ಎರಡು ಚಮಚ ಸಂಜೆ ಎರಡು ಚಮಚ ),ಚಾಯತ್ತುಳ್ಳಿ ರಾ (ಚೆನ್ನಾಗಿ ಇದ್ದೀರಾ )ಇತ್ಯಾದಿ ಕೊಡವ ಶಬ್ದಗಳನ್ನು ಕಲಿತೆನು .ಇನ್ನು ಗೌಡ ಜನಾಂಗದವರದು  ಅರೆ ಭಾಷೆ . 

ನನ್ನ ಕೆಲಸ ಸಾಮಾನ್ಯ ಹೊರ  ನಿಭಾಯಿಸುವುದು ,ಸಾಮಾನ್ಯ ಹೆರಿಗೆ ಮಾಡಿಸುವುದು ,ಮತ್ತು ಒಳರೋಗಿಗಳ ದೇಖೇ ರೇಖೆ ,ಮುಖ್ಯ ವೈದ್ಯಾಧಿಕಾರಿಗಳೊಡನೆ ರೌಂಡ್ಸ್ ಇತ್ಯಾದಿ .ಆಗ  ಇನ್ನೂ  ಗರ್ಭಿಣಿಯರು ಪ್ರಸವ ಪೂರ್ವ ತಪಾಸಣೆ  ಪ್ರವೃತ್ತಿ ಇರಲಿಲ್ಲ .ಸ್ಕ್ಯಾನ್  ಇರಲಿಲ್ಲ .ಹೆರಿಗೆ  ನೋವು ಬಂದ ಮೇಲೆ ನಮ್ಮ  ಮೇಲೆ ಆಸ್ಪತ್ರೆಗೆ ಬರುವರು .ಕೆಲವರಿಗೆ ರಕ್ತಸ್ರಾವ ಇರುವುದು .ಆದರೂ ಆಗ ಹೇಗೆ ಪರಿಸ್ಥಿತಿ ನಿಭಾಯಿಸಿದೆವು  ಆಶ್ಚರ್ಯ ಆಗುವುದು .ಒಂದು ನಾನು ಡೆಲಿವರಿ ಮಾಡಿಸಿದ ತಮಿಳು ಮಗುವಿಗೆ ನಾನೇ ರಜನೀಕಾಂತ್ ಎಂದು ನಾಮಕರಣ  ಮಾಡಿದ್ದೆನು .ಒಂದು ರಾತ್ರಿ ರಕ್ತಸ್ರಾವ ದಿಂದ ಬಳಲುತ್ತಿದ್ದ ಮಹಿಳೆಗೆ ರಾತ್ರಿಯಿಡೀ  ರಕ್ತ ಪೂರಣ  ಮಾಡಿ ಜೀವ ಉಳಿಸಿದ್ದ ನೆನಪು ಇದೆ .ಆಗ ನಾವು ರಿಸ್ಕ್ ತೆಗೆದು ಕೊಳ್ಳುತ್ತಿದ್ದೆವು .ರೋಗಿಗಳಿಗೆ ನಂಬಿಕೆ ಇತ್ತು . (ಮುಂದುವರಿಯುವುದು ).

ಮಡಿಕೇರಿ ನೆನಪುಗಳು 2

       ಮಡಿಕೇರಿ ನೆನಪುಗಳು 2

 

ಒಂದು ಘಟನೆ ನನ್ನ ಮನಸ್ಸನ್ನು ಇನ್ನೂ ಕೊರೆಯುತ್ತಿದೆ ..ಮಡಿಕೇರಿಯಲ್ಲಿ ನಾನು ಇದ್ದಷ್ಟು  ನನ್ನ ಮೇಲೆ ಪ್ರೀತಿ ವಾತ್ಸಲ್ಯ ತೋರಿಸಿದ ಕುಟುಂಬದ ಗರ್ಭಿಣಿ  ಸಹೋದರಿ ನಮ್ಮ ಆಸ್ಪತ್ರೆಯ ಮಹಿಳಾ ಸರ್ಜನ್ ಅವರಲ್ಲಿ ನಿಯಮಿತ ತಪಾಸಣೆಗೆ ಬರುತ್ತಿದ್ದರು  ಹೆರಿಗೆ ನೋವು ಬಂದಾಗ ಆ ವೈದ್ಯೆ ರಜೆಯಲ್ಲಿ ಇದ್ದು ,ನಾನು ಪರಿಶೀಲನೆ ಮಾಡಲು ಗರ್ಭಸ್ಥ  ಶಿಶು  ಸಾಮಾನ್ಯವಾಗಿ ಇರುವಂತೆ ತಲೆಯ ಭಾಗ ಕೆಳಗೆ ಇರದೇ ಪಾದ ಇತ್ತ್ತು .ಕೂಡಲೇ ಶಸ್ತ್ರ ಚಿಕಿತ್ಸೆ ಆಗ ಬೇಕು ,ನಮ್ಮ ಸರ್ಜನ್ ರಜೆ .ನಾನು ರೋಗಿ ಮತ್ತ್ತು ಸಂಬಂಧಿಗಳಿಗೆ ಧೈರ್ಯ ಹೇಳಿ  ಸರಕಾರಿ  ಆಸ್ಪತ್ರೆ ವಸತಿ ಸಮುಚ್ಚಯಕ್ಕೆ ಓಡಿ ಕೊಂಡು ಹೋದೆ .(ಆಗ ನನ್ನಲ್ಲಿ  ವಾಹನ  ಇರಲಿಲ್ಲ .ಆಸ್ಪತ್ರೆಯ ವಾಹನ ಎಲ್ಲೋ  ಹೋಗಿತ್ತು )ಏದುಸಿರು ಬಿಟ್ಟು ಬರುತ್ತಿದ್ದ  ನನ್ನನ್ನು ಸರ್ಜನ್ ಚೆನ್ನ ಬಸಪ್ಪ  ಸಮಾಧಾನ ಮಾಡಿ ಅರಿವಳಿಕೆ ವೈದ್ಯರೊಂದಿಗೆ ಕೂಡಲೇ ಬರುವುದಾಗಿ ಹೇಳಿ ಕಳಿಸಿ , ಹೇಳಿದಂತೆ ಬಂದು ಶಸ್ತ್ರ  ಮಾಡಿ ಮಗು ಹೊರ ತೆಗೆದು ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿದರೂ ಕ್ಲಿಷ್ಟವಾದ ಸರ್ಜರಿಯ  ಶಿಶುವಿನ ಕೈಯ್ಯ ನರ ಎಳೆದಂತೆ ಆಗಿ  ಒಂದು ಕೈ ಊನವಾಯಿತು .ಆದರೂ ನಾನು ಈ  ತೋರಿದ ಸಮಯ ಪ್ರಜ್ಞೆ ಗಾಗಿ  ಆ ಕುಟುಂಬದವರು ನನ್ನ ಮೇಲೆ ಈಗಲೂ ಪ್ರೀತಿ  ಇಟ್ಟಿರುವರು . 

ಸ್ವಲ್ಪ ಸಮಯದಲ್ಲಿ ಇನ್ನೂ ಇಬ್ಬರು ವೈದ್ಯರು ಸೇರಿಕೊಂಡರು .ಅವರಲ್ಲಿ ಒಬ್ಬರು ಡಾ ಸಂಪತ್ ಕುಮಾರ್ .ಕಾಲೇಜು ನಲ್ಲಿ ನನ್ನ ಸೀನಿಯರ್ . ಸ್ನೇಹ ಜೀವಿ .ಒಂದು ಸಂಜೆ ಕೆಲಸ ಮುಗಿದು ' ಮುದುಡಿದ ತಾವರೆ ಅರಳಿತು "ಚಿತ್ರ ನೋಡಲು ಚಿತ್ರ ಮಂದಿರಕ್ಕೆ ಹೋಗಿದ್ದೆವು .ಇಂಟರ್ವಲ್ ನಲ್ಲಿ ಬಾತ್ರೂಮ್ ನಲ್ಲಿ  ಜಾರಿ ಬಿದ್ದು ಮೊದಲೇ ಕೃಷಣ  ಕಾಯರಾಗಿದ್ದ ಅವರ ತೊಡೆಯ ಎಲುಬು ಮುರಿಯಿತು .ಅವರನ್ನು ನಾನೇ ಎತ್ತಿ ಹೊರ ತಂದು ಆಟೋದಲ್ಲಿ ಆಸ್ಪತ್ರೆಗೆ ತಂದು ,ಸರಕಾರೀ ಆಸ್ಪತ್ರೆಯ ಮೂಳೆ  ತಜ್ಞರಿಂದ ಚಿಕಿತ್ಸೆ ಮಾಡಿ ಹಾಸನದ ಅವರ ಮನೆಗೆ ಕಳುಹಿಸಿ ಕೊಟ್ಟೆವು . 

ಮಡಿಕೇರಿಯಲ್ಲಿ ಸಾಕಷ್ಟು ಮಂದಿ ದಕ್ಷಿಣ ಕನ್ನಡ ದವರು ಇದ್ದಾರೆ .ಕಾಫಿ ತೋಟಗಳಲ್ಲಿ ,ಪೇಟೆ ಅಂಗಡಿಗಳಲ್ಲಿ ,ಹೋಟೆಲ್ ಗಳಲ್ಲಿ ಕೆಲಸ ಮಾಡಲು ಬಂದವರು ಜಾಸ್ತಿ .ಹಿಂದೆ ಘಟ್ಟಕ್ಕೆ ಹೋಗುವುದು ಎಂಬ ರೂಢಿ  ಇತ್ತು .ಈಗ ದುಬಾಯ್ ಸೌದಿಗೆ ಹೋದ ಹಾಗೆ .ತುಳು ಸಂಸ್ಕೃತಿಯೂ ಕೆಲವು ಅವರ ಜತೆ .ಆದರೆ ಶಿವಮೊಗ್ಗ ,ಚಿಕ್ಕ ಮಗಳೂರು ಜಿಲ್ಲೆಗೆ ಬಂದಂತೆ ಯಕ್ಷಗಾನ ಮೇಳಗಳು ಬರುತ್ತಿದ್ದುದು ಕಡಿಮೆ .ಮಿತ್ತೂರು ಈಶ್ವರ ಭಟ್ ಎಂಬ ಲೆಕ್ಕ ಪರಿಶೋಧಕರು ಮಡಿಕೇರಿಯಲ್ಲಿ ಯಕ್ಷಗಾನ ಪ್ರೇಮಿಗಳ ಜತೆ ಸೇರಿ ಟೌನ್ ಹಾಲ್ ನಲ್ಲಿ  ಬಯಲಾಟ ಏರ್ಪಡಿಸುತ್ತಿದ್ದು ನಾನೂ ಹೋಗುತ್ತಿದ್ದೆ .ಉಳಿದಂತೆ ವಾಚನಾಲಯ ದಿಂದ ಪುಸ್ತಕ ತಂದು ಓದುವುದು .ಭಾಗ ಮಂಡಲ  ತಲ ಕಾವೇರಿ ,ಗಾಳಿ ಬೀಡು ಇತ್ಯಾದಿ ಸುತ್ತುವುದು .ಆಸ್ಪತ್ರೆಯಲ್ಲಿ ಅಂತೂ ನಾವು ಭೂತ ಹಿಡಿದವಂತೆ ಕೆಲಸ ಮಾಡುತ್ತಿದ್ದೆವು .ಸಮಯದ ಪರಿಧಿ ಇಲ್ಲ .ಹಗಲು ರಾತ್ರಿ ಎಂದು ಇಲ್ಲ .ಪ್ರಾಯದ ಉತ್ಸಾಹ ಮತ್ತು ಆದರ್ಶ .ನೋವು ,ಸಂಕಟ ಹೊತ್ತು ಹಳ್ಳಿ ಹಳ್ಳಿಗಳಿಂದ ಬರುವ ಜನಕ್ಕೆ ಸಾಂತ್ವನ ಕೊಡುವ ತವಕ .ಇಲ್ಲಿ ಒಂದು ಮಾತು ಹೇಳ ಬೇಕು .ನಾವು ಮೆಡಿಕಲ್ ಕಲಿತು ಹೌಸ್ ಸರ್ಜನ್ಸಿ ಮಾಡುವಾಗ ಎಲ್ಲಾ ವಿಭಾಗಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಅನುಭವ ಗಳಿಸಿರುತ್ತಿದ್ದು ಒಂದು ಆತ್ಮ ವಿಶ್ವಾಸ ಇರುತ್ತಿತ್ತು .ಈಗ ವಿದ್ಯಾರ್ಥಿಗಳು ಈ ಅವಧಿಯನ್ನು ಬಹು ಪಾಲು ಪಿ ಜಿ ಪರೀಕ್ಷೆಗೆ  ತಯಾರು ಮಾಡಲು ಉಪಯೋಗಿಸುದರಿಂದ ಇದು ಸ್ವಲ್ಪ ಕಡಿಮೆ .ಮುಂದೆ ವೈದ್ಯಕೀಯ ಕಾಲೇಜು ನಲ್ಲಿ ಅಧ್ಯಾಪನ ಮಾಡಿದ  ನಾನು ಕಂಡು ಕೊಂಡದ್ದು

ನಾನು ಅಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಲವು ಹಿರಿಯರ ಪರಿಚಯ ಆಯಿತು 

.ಫೀಲ್ಡ್ ಮಾರ್ಷಲ್ ಕರಿಯಪ್ಪ ತಮ್ಮ  ಸಹೋದರ ನಂಜಪ್ಪ ನಮ್ಮಲ್ಲಿ   ಚಿಕೆತ್ಸೆ ಪಡೆಯುತ್ತಿದ್ದಾಗ ನೋಡಲು ಬಂದಿದ್ದರು .ಬಹಳ ಶಿಸ್ತು ಬದ್ಧ  ವ್ಯಕ್ತಿತ್ವ . ಇನ್ನು ಹೈ ಕೋರ್ಟು ಮುಖ್ಯ ನ್ಯಾಯಾಧೀಶರಾಗಿದ್ದ     ಜಿ ಕೆ  ಗೋವಿಂದ ಭಟ್ ಭಟ್ ಅವರು ಒಂದು ದಿನ ಮಡಿಕೇರಿಗೆ ಬರುವಾಗ ದಾರಿಯಲ್ಲಿ ಗಾಯಗೊಂಡು ಬಿದ್ದಿದ್ದ ಓರ್ವ ವ್ಯಕ್ತಿಯನ್ನು ತಮ್ಮ ಕಾರಿನಲ್ಲಿ ತಂದು ಆಸ್ಫತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು  ಈ ಮಾನವೀಯ ನಡೆ ನನ್ನ ಬಂಧುವೂ ಆದ ಅವರ ಮೇಲಿನ ಗೌರವ ಹೆಚ್ಚುವಂತೆ ಮಾಡಿತು .ನಾನು ಮೊದಲೇ ತಿಳಿಸಿದ ಡಾ ಬೋಪಯ್ಯ ಅವರ ತಾಯಿ (ಅವರ ಪತಿ  ಕೊಡಗು ಜಿಲ್ಲಾ ಸರ್ಜನ್ ಆಗಿದ್ದವರು .ಮಾವ ಕೊಡಗು ವಿಧಾನ ಸಭಾ ಸ್ಪೀಕರ್ ಆಗಿದ್ದು ಹೆಸರಾಂತ ಮನೆತನ )ಸಾಮಾಜಿಕ ಕಾರ್ಯಕರ್ತೆ ನನ್ನನ್ನು  ಆಗಾಗ  ಕರೆದು ಊಟ ಹಾಕುವರು . 

ನಾನು ಮರೆಯಲಾಗದ ಮನೆ ಡಾ ನಂಜುಂಡೇಶ್ವರ ಅವರದು.  ನಮ್ಮ ಆಸ್ಪತ್ರೆಯಲ್ಲಿ ಅವರ ಸೇವೆ ಮಾಡುವ   ಅವಕಾಶ ಬಂದಿತ್ತು .ಆ ಮೇಲೆ ಅವರ  ಪತ್ನಿ ಮತ್ತು ಕುಟುಂಬ ನನ್ನನ್ನು ಮಗನಂತೆ   ಕಂಡರು ,ಅವರ ಮನೆಯಲ್ಲಿ ಏನು ವಿಶೇಷ ಮಾಡಿದರೂ   ನನಗೆ ಅದನ್ನು ಕಳುಹಿಸಿ ಕೊಡುವರು .ಈಗಲೂ ನನ್ನ ಮೇಲೆ  ಅದೇ ವಿಶ್ವಾಸ ಪ್ರೀತಿ ಅವರ ಮಕ್ಕಳು ಇಟ್ಟು ಕೊಂಡಿರುವರು .ಇನ್ನು ನೆನಪಿಗೆ ಬರುವುದು ಮಕ್ಕಿ ರಾಮಯ್ಯ ದಂಪತಿಗಳು ,ಜಿ ಆರ್    ರಾಘವೇಂದ್ರ  ಮತ್ತು  ,ನೀರ್ಕಜೆ  ಮಹಾಬಲೇಶ್ವರ ಭಟ್

  ನಮ್ಮ ಆಸ್ಪತ್ರೆಯಲ್ಲಿ ರವಿ  ಹೆಸರಿನ ಹುಡುಗ  ಓ ಟಿ  ಟೆಕ್ಣಿ ಷಿಯನ್ ಆಗಿ ಕೆಲಸ ಮಾಡುತ್ತಿದ್ದ.  ಸ್ಪುರ ದ್ರೂಪಿ :ಉತ್ಸಾಹಿ  ಮತ್ತು ಎಲ್ಲರ ಮೆಚ್ಚಿಗೆ ವಿಶ್ವಾಸ ಗಳಿಸಿದ್ದ  .ಒಂದು ಸಂಜೆ ಒಂದು ಕಷ್ಟಕರ ಶಸ್ತ್ರ ಚಿಕಿತ್ಸೆ ಇತ್ತು  ಅರಿವಳಿಕೆ  ಕೊಡಲು ಪುತ್ತೂರಿನಿಂದ ತಜ್ಞರು ಬಂದಿದ್ದು ಅದು  ಮುಗಿದ ಮೇಲೆ ಅವರನ್ನು ಬಸ್ ಸ್ಟಾಂಡ್  ಗೆ ಬಿಡಲು ಆಟೋ ತರ ಹೇಳಲು ಅವನನ್ನು  ಹುಡುಕಿ ಓ ಟಿ ಬಳಿ ಹೋಗಲು ಅವನ ಶವ  ಬಿದ್ದಿತ್ತು  ಪಕ್ಕದಲ್ಲಿ ಸಿರಿಂಜ್ ಮತ್ತು ಔಷಧಿ ಅಂಪ್ಯೂಲ್ .ಅವನು ನಿದ್ದೆ ಔಷಧ ಎಂದು ಕೊಂಡು  ಮಾಂಸ ಖಂಡ ನಿಶ್ಚಲ ಗೊಳಿಸುವ ಇಂಜೆಕ್ಷನ್ ಕೊಟ್ಟು ಕೊಂಡಿರಬೇಕು ಎಲ್ಲರೂ ಓರ್ವ ಬಂಧುವನ್ನು ಕಳೆದು ಕೊಂಡಂತೆ ದುಃಖಿಸಿದರು . 

ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಮತ್ತು ಇತರ ಕಚೇರಿಗಳು ಕೊಡಗಿನ ರಾಜನ ಹಳೇ  ಅರಮನೆಯಲ್ಲಿ ಇದ್ದವು .ಜಿಲ್ಲಾ ಗ್ರಂಥ  ಭಂಡಾರ ಕೂಡ ಇಲ್ಲೇ ಇತ್ತು .ಅಲ್ಲಿಗೆ ಬರುವ ತರುಣದಲ್ಲಿ ನಾನು ಮಾಸ್ತಿ ಯವರ ಚಿಕ್ಕವೀರ ರಾಜೇಂದ್ರ ಕಾದಂಬರಿ ಓದಿದ್ದರಿಂದ ಅದರ ಪಾತ್ರಗಳು ಎದುರು ಬಂದಂತೆ ಭಾಸ ವಾಗುತ್ತಿತ್ತು ..ಇನ್ನೊಂದು ಪ್ರೇಕ್ಷಣೀಯ ತಾಣ ರಾಜಾ ಸೀಟ್  .ಇಲ್ಲಿಂದ ನಿಂತು ನೋಡಿದರೆ ದೊಡ್ಡ ಕಣಿವೆ ,ತಳದಲ್ಲಿ ದೂರದಲ್ಲಿ ಮಂಗಳೂರು ರಸ್ತೆ ,ಸ್ವಲ್ಪ ಮೇಲೆ ಹಿಂದಿನ ಕಾಲು ದಾರಿ .(ಕುದುರೆ ದಾರಿ ಕೂಡ ).ಮೇಲೆ ರಾಜನು ಕುಳಿತುಕೊಳ್ಳುತ್ತಿದ್ದ ಮಂಟಪ ಇದೆ .ಇದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ (?)ಪಡಿಸಿದ್ದಾರೆ .ಪಕ್ಕದಲ್ಲಿಯೇ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಇದೆ . 

ಓಂಕಾರೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧ .ಮಡಿಕೇರಿ ಮೈಸೂರು ರಸ್ತೆಯ ಪೂರ್ವ ಅಂಚಿನಲ್ಲಿ ಸುದರ್ಶನ ವೃತ್ತ ಇದೆ .ಅಲ್ಲೇ ದೂರ ಸಂಚಾರ ನಿಗಮದ ಗೋಪುರ ಇದೆ .ಎತ್ತರದ ಆ ತಾವು ನನ್ನ ಮುಂಜಾನೆ ವಾಕಿಂಗ್ ಪ್ರಶಸ್ತ ವಾಗಿತ್ತು .ಪಕ್ಕದಲ್ಲಿಯೇ ಕಾರ್ಯಪ್ಪ ನವರ ಮನೆ ರೋಷನಾರಾ ಇತ್ತು . 

ಮಡಿಕೇರಿ ಈಸ್ಟ್ ಎಂಡ್ ಹೋಟೆಲ್ ಬಹಳ ಜನಪ್ರಿಯ ಆಗಿತ್ತು ,ಪ್ರಶಾಂತ ವಾದ ಪರಿಸರ ,ಹಳೆಯ ಕಟ್ಟಡದಲ್ಲಿ ಇತ್ತು .ಮಸಾಲೆ ದೋಸೆ ತಿನ್ನಲು ಹೋಗುತ್ತಿದ್ದೆವು .ಉಳಿದಂತೆ ಒಳ್ಳೆಯ ಸಸ್ಯಾಹಾರಿ ಹೋಟೆಲ್ ಇದ್ದಂತಿಲ್ಲ . 

ಸಂಜೆ ಹೊತ್ತು ಮಡಿಕೇರಿ ಮಂಜಿನಿಂದ ಆವೃತ್ತ ಆಗುವುದು ,ನಗರದ ಬಹು ಮಂದಿ ಬಾರ್ ಸೇರುವರು .ವ್ಯಾಪಾರ ವಹಿವಾಟು ಕಮ್ಮಿ ಆಗುವುವು .ಮಡಿಕೇರಿಯಲ್ಲಿ ಕಛೇರಿಗಳಲ್ಲಿ ಫ್ಯಾನ್ ಇರುತ್ತಿರಲಿಲ್ಲ ,ಯಾಕೆಂದರೆ ಅವಶ್ಯ ಇರಲಿಲ್ಲ .ನಮ್ಮ ಒ ಪಿ ಡಿ ಯಲ್ಲಿ  ಅಗ್ಗಿಷ್ಟಿಕೆ ಹಾಕಿ ಕೋಣೆ ಬಿಸಿ ಮಾಡುತ್ತಿದ್ದೆವು .ಅಂತಹದ್ದರಲ್ಲಿ ಈಗ ಎಲ್ಲಾ ಕಡೆ ಏ ಸಿ ಬಂದಿವೆ .ಮಡಿಕೇರಿ ಹವೆ ,ಜನ ಜೀವನ ಬದಲಾಗಿದೆ .ಸುತ್ತ ಮುತ್ತ ಮನೆಗಳು ಹೊಲಿಡೇ ಹೋಮ್ ಗಳಾಗಿ ಪರಿವರ್ತನೆ ಹೊಂದಿವೆ

ಪಕ್ಕದ ಅಬ್ಬಿ ಜಲಪಾತ ,ಗಾಳಿ ಬೀಡು ನೋಡಲು ಚಂದ . 

ಕೊಡಗರು  ಪರಾಕ್ರಮಿಗಳು ,ಸೈನಿಕ ಪರಂಪರೆಯವರು .ಕೊಡವ ತರುಣ ತರುಣಿಯರು  ಆಕರ್ಷಕ ವ್ಯಕಿತ್ವ ಹೊಂದಿದ್ದು ,ಅವರದೇ ರೀತಿಯ ಉಡುಗೆ ತೊಡುಗೆ ಇದೆ .

ಪಂಜೆ ಮಂಗೇಶ ರಾವು ,ಜಿ ಟಿ ನಾರಾಯಣ ರಾವು ,ಭಾರತಿ ಸುತ ಮುಂತಾದ ಪ್ರಸಿದ್ದ ಲೇಖಕರ ಕಾರ್ಯ ಕ್ಷೇತ್ರ .ಪಂಜೆಯವರ ಹುತ್ತರಿ ಹಾಡು ಕೊಡಗಿನ ನೆಲ ಸಂಸ್ಕೃತಿ ಮತ್ತು ಜನಪದವನ್ನು  ಸರಿಯಾಗಿ ಬಿಂಬಿಡುತ್ತದೆ


ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ?
ಅಲ್ಲಿ ಆ ಕಡೆ ನೋಡಲಾ!
ಅಲ್ಲಿ ಕೊಡಗರ ನಾಡಲಾ!
ಅಲ್ಲಿ ಕೊಡವರ ಬೀಡಲಾ!

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?
ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ?
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ?
ಅವರು ಸೋಲ್ ಸಾವರಿಯರು!
ಅವರು ಕಡುಗಲಿ ಗರಿಯರು!
ಅವರೆ ಕೊಡಗಿನ ಹಿರಿಯರು!

ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್
ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್
ಬೊಮ್ಮ ಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು
ಧರ್ಮ ದಂಡ ಕಟ್ಟು ಕಟ್ಟಳೆ, ರೀತಿ ನೀತಿಯ ಕೋಶವು!
ನಮ್ಮ ಕೊಡಗಿದು ಜಮ್ಮದು!
ಜಮ್ಮ ಕೊಡಗಿದು ನಮ್ಮದು!
ನಮ್ಮೊಡಲ್ ಬಿಡಲಮ್ಮದು!

ಇದು ಅಗಸ್ತ್ಯನ ತಪದ ಮಣೆ, ಕಾವೇರಿ ತಾಯ ತವರ್ಮನೆ
ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ!
ಇದಕೊ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು!
ಇದೊ! ಇದೋ! ಇಲ್ಲು ರುಳ್ದ ಹಾಲೇರಿಯರ ಬಲಗಿರಿ ಶೃಂಗವು!
ವಿಧಿಯ ಮಾಟದ ಕೊಡಗಿದು!
ಮೊದಲೆ ನಮ್ಮದು, ಕಡೆಗಿದು!
ಕದಲದೆಮ್ಮನು; ಬೆಡಗಿದು!

ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?
ಸುಮ್ಮನಿತ್ತರೊ ದಟ್ಟಿ ಕುಪ್ಪಸ ಹಾಡು ಹುತ್ತರಿಗೇಳಿರಿ!
ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪಡ ಹೊರ ಹೊಮ್ಮಲಿ!
ಅಮ್ಮ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
ನೆಮ್ಮದಿಯನಿದು ತಾಳಲಿ!
ಅಮ್ಮೆಯಾ ಬಲ ತೋಳಲಿ
ನಮ್ಮ ಕೊಡಗಿದು ಬಾಳಲಿ!

ಸಾಹಿತ್ಯ: ಪಂಜೆ ಮಂಗೇಶರಾಯರು

 ನಾನು ಅಶ್ವಿನಿ ಆಸ್ಪತ್ರೆಯಲ್ಲಿ   ಇರುವಾಗ  ಅರಣ್ಯ ಇಲಾಖೆಯ  ಹಿರಿಯ ಅಧಿಕಾರಿ ಮತ್ತು ಪರಿಸರ ತಜ್ನ ಯೆಲ್ಲಪ್ಪ ರೆಡ್ಡಿಯವರು ನಮ್ಮ ಆಸ್ಪತ್ರೆಯ ಸಹಯೋಗದಿಂದ ತೀರಾ ಅರಣ್ಯ ಪ್ರದೇಶಗಳಾದ ಕುಟ್ಟ ಮಾಕುಟ ಗಳಲ್ಲಿ ಕಾಡಿನ ಮೂಲ ನಿವಾಸಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸುವ ಒಳ್ಳೆಯ ಕಾರ್ಯಕ್ರಮ ಆರಂಭ ಮಾಡಿದ್ದರು .ಅಂತಹ ಒಳ್ಳೆಯ ಹಿರಿಯರನ್ನು ಭೇಟಿ ಮಾಡುವ ಸದವಕಾಶ ಬಂದುದು ಸಂತೋಷ.

ಹೀಗೆ ವರುಷ ಕಳೆದದ್ದೇ ಗೊತ್ತಾಗಲಿಲ್ಲ .ಅಷ್ಟರಲ್ಲಿಯೇ ಕೇಂದ್ರ ಲೋಕ ಸೇವಾ ಆಯೋಗದವರು ರೈಲ್ವೇ ವೈದ್ಯಕೀಯ ಸೇವೆಗೆ ನನ್ನನ್ನು ಆಯ್ಕೆ ಮಾಡಿದ ಆದೇಶ (ಭಾರತ ದೇಶದ ರಾಷ್ಟ್ರ ಪತಿಯವರು  ನಿಮ್ಮನ್ನು ನೇಮಕ ಮಾಡಲು ಸಂತೋಷ ಪಡುತ್ತಾರೆ ಎಂಬ ಒಕ್ಕಣೆ )ಬಂದು ನನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ,ಒಲ್ಲದ ಮನಸಿಂದ ಮಡಿಕೇರಿಗೆ ವಿದಾಯ ಹೇಳಿದೆ .(ಮುಗಿಯಿತು )


                           ರಾಜಾ ಸೀಟ್ ನ ವಿಹಂಗಮ ನೋಟ 

                      

 Raja's Seat | Kodagu District, Government of Karnataka | India


Raja's Seat | Sunset Point Coorg | Madikeri Sightseeing

Omkareshwara Temple | Temples at Madikeri | Coorgಓಂಕಾರೇಶ್ವರ ದೇವಸ್ಥಾನ



 


 



 

ಮರ್ಯಾದಾ ಪುರುಷೋತ್ತಮರು

ನಮ್ಮಲ್ಲಿ ಜನರಲ್ಲಿ ಒಂದು ಮನಃ ಸ್ಥಿತಿ ಬೆಳೆದು ಬಂದಿದೆ .ಕೆಲವು ವಿಚಾರಗಳು ನಮ್ಮ ಮರ್ಯಾದೆಗೆ ಅಂತಸ್ತಿಗೆ ಕಮ್ಮಿ .ಕೆಲವನ್ನು ವಿಶ್ಲೇಷಿಸೋಣ . 

ಒಂದನೆಯದು ಮತ್ತು ಆರೋಗ್ಯದ ದೃಷ್ಟಿಯಿಂದ ಬಲು ಮುಖ್ಯವಾದದ್ದು .ನಡೆಯುವುದು ನಮ್ಮ ಮರ್ಯಾದೆಗೆ ಕಮ್ಮಿ .ಎಷ್ಟು ಸಮೀಪ ಹೋಗುವುದಿದ್ದರೂ ವಾಹನ ಅದೂ ದೊಡ್ಡ ವಾಹನದಲ್ಲಿಯೇ ಹೋಗಬೇಕು .ಸ್ಥಿತಿವಂತರು  ಮಕ್ಕಳಲ್ಲೇ ಈ ಭಾವನೆ ಬಿತ್ತಿ ಬಿಡುತ್ತಾರೆ .ಸಣ್ಣ ಮಕ್ಕಳು ಮನೆಯ ಮೆಟ್ಟಲಿನಿಂದ ಶಾಲೆ ಬಾಗಿಲ ವರೆಗೆ ವಾಹನದಲ್ಲಿಯೇ ಹೋಗಬೇಕು .ನಡೆದಾಡಲು ಒಳ್ಳೆಯ ದಾರಿ ಇದ್ದರೂ .ಇದರಿಂದ ಒಂದು ಉತ್ತಮ  ಶಾರೀರಿಕ ವ್ಯಾಯಾಮ ತಪ್ಪುವುದು ಅಲ್ಲದೆ ಮಕ್ಕಳು ಒಟ್ಟಾಗಿ ತಮಾಷೆ ಮಾಡಿಕೊಂಡು ,ಪ್ರಕೃತಿಯನ್ನು ಆಸ್ವಾದಿಸಿಕೊಂಡು ನಡೆವಾಗ  ಎಳೆ ಮನಸುಗಳ ಅರೋಗ್ಯ ಅರಳುವಿಕೆ  ಇಲ್ಲದಾಗುವುದು  .ಹಳ್ಳಿಯ ಮಕ್ಕಳು ಹೊಲ ಗುಡ್ಡ ಬೆಟ್ಟಗಳಲ್ಲಿ ನಡೆದು ಹೋಗುವಾಗ ನಿಸರ್ಗವೇ ಒಂದು ಪಾಠ ಶಾಲೆಯಾಗಿ ತಮ್ಮ ಅರಿವಿಲ್ಲದೆಯೇ ಮಕ್ಕಳು ಹಲ ವಿಷಯಗಳನ್ನು ಕಲಿಯುವರು .ಶಾಲೆಯಿಂದ ಮನೆಗೆ ಬರುವಾಗ ಕಲಿಕಾ ಸಮಯದಲ್ಲಿ ಉಂಟಾದ ಉದ್ವೇಗ ಶಮನ ಆಗುವುದು .ಅಪ್ಪನಿಗೆ ಮಗನು  (ಅಥವಾ ಅಮ್ಮನಿಗೆ )ಎಲ್ಲರಂತೆ ಗೆಳೆಯರೊಡನೆ ನಡೆದೇ ಹೋಗಲಿ ಎಂದು ಇದ್ದರೂ ಅಮ್ಮ ಯಾರ್ಯಾರ (?)ಮಕ್ಕಳು ಕಾರಿನಲ್ಲಿ ಬರುತ್ತಾರೆ ಡಾಕ್ಟ್ರ ಮಗನಾಗಿ ನಮ್ಮ ಕಂದ  ಯಾಕೆ ನಡೆಯಬೇಕು ಎಂದು ಅಮ್ಮ (ಅಪ್ಪ) ಪಾಯಿಂಟ್ ತೆಗೆಯುವಳು . 

ನಾನೇ  ಪೇಟೆಯಲ್ಲಿ ಏನಾದರೂ ಕೆಲಸ ಇದ್ದರೆ  ನಡೆದು ಕೊಂಡು ಹೋಗುವಾಗ ಬಹಳಷ್ಟು ನನ್ನ ಹಿತೈಷಿಗಳು ಡಾಕ್ಟ್ರೆ  ಕಾರು ಏನಾಯಿತು ?ಎಂದು ಕೇಳೇ ಕೇಳುವರು  ಮತ್ತು ಇವರಲ್ಲಿ ಬಹಳ ಮಂದಿ "ಪಾಪ ಪ್ರಾಕ್ಟೀಸ್ ಕಮ್ಮಿ ಇರಬೇಕು ಎಂದು ಮನದೊಳಗೇ  ಕನಿಕರ ಪಡುವರು ..ಸ್ಥಿತಿವಂತರು ನಡೆದು ಕೊಂಡು ಹೋಗ ಬಾರದು .ಕೈಯಲ್ಲಿ ಕೈಚೀಲ ಕೊಂಡು ಹೋಗುವುದೂ ಮರ್ಯಾದೆಗೆ ಕಮ್ಮಿ ..ಒಂದು ವೇಳೆ ಅವರು ನಡೆಯುವುದು ಕಂಡರೆ ಕಂಜೂಸ್ ಆಸಾಮಿ ಎಂದು ಗೊಣಗುವರು . 

ಎರಡನೆಯದು ಸಭೆ ಸಮಾರಂಭಗಳಿಗೆ  ಸಮಯಕ್ಕೆ ಸರಿಯಾಗಿ ಹೋಗುವುದು .ನೀವೇ ನೋಡಿ ಮದುವೆ  ಇತ್ಯಾದಿ ಸಮಾರಂಭಗಳಿಗೆ ಊಟಕ್ಕೆ ಸರಿಯಾಗಿ ಶೇಕಡಾ ೮೦ ಅತಿಥಿ ಗಳೂ ಬರುವರು .ಘನ  ವ್ಯಕ್ತಿಗಳು ಮೊದಲೇ ಬರಲಾರರು .ಒಮ್ಮೆ ನಾನು ಬಂಧುಗಳ ಮನೆಯ ಮದುವೆ  ಎಂದು ಬೇಗನೆ ಹೋದರೆ ಎಲ್ಲರೂ ಡಾಕ್ಟ್ರೇ ಆಸ್ಪತ್ರೆಯಲ್ಲಿ ರೋಗಿಗಳು ಕಮ್ಮಿ ಎಂದು ತೋರುತ್ತದೆ ಎಂದು ಕನಿಕರ ತೋರಿಸ ತೊಡಗಿದರು .ಸಭೆಗಳೂ ಇದಕ್ಕೆ ಹೊರತಲ್ಲ .ಯಾಕೆಂದರೆ ನಾವೇ ಸೃಷ್ಟಿಸಿದ ಮರ್ಯಾದೆಯ ಅಳತೆ ಗೋಲು ಇದೆಯಲ್ಲ 

ಇನ್ನೊಂದು ಮರ್ಯಾದೆಯ ಕೊರತೆ ಬರುವುದು ಶ್ರಮ ಜೀವಕ್ಕೆ .ಮನೆ ಕೆಲಸ ಉದಾ  ಗುಡಿಸುವುದು ,ಅಂಗಳದ ಕೆಲಸ ,ಮನೆಗೆ ಸಾಮಾನು ಹೊರುವುದು ಇತ್ಯಾದಿ ನಾವೇ ಮಾಡುವುದು ಮರ್ಯಾದಸ್ತರಿಗೆ  ಹೇಳಿದ್ದಲ್ಲ .ಇದನ್ನೂ  ಎಳವೆಯಲ್ಲೇ ನಾವು ಮನಸಿಗೆ ಹೊಗ್ಗಿಸಿ ಬಿಡುತ್ತೇವೆ . 

ಮಾತೃಭಾಷೆಯಲ್ಲಿ ಮಾತನಾಡುವುದು ಅಂತಸ್ತಿಗೆ ಕಡಿಮೆ ಎಂಬ ಭಾವನೆ ವ್ಯಾಪಕವಾಗಿದೆ .ಆಸ್ಪತ್ರೆಯಲ್ಲಿ ಈಗಿನ ಯುವ ಜನಾಂಗ ದ ಬಳಿ ನಾನು ತುಳು ಅಥವಾ ಕನ್ನಡದಲ್ಲಿ ಮಾತನಾಡಿದರೆ ಉತ್ತರ ಬರುವುದು ಆಂಗ್ಲ ಭಾಷೆಯಲ್ಲಿ

ಇಂತಹ ಮರ್ಯಾದೆಗೆ ಕಮ್ಮಿ ಇರುವ ಎಷ್ಟೋ ವಿಚಾರ ನಿಮ್ಮ ಗಮನಕ್ಕೆ ಬಂದಿರ ಬಹುದು .ಉದಾ ಬಸ್ಸಿನಲ್ಲಿ ಹೋಗುವುದು ,ಹೋಟೆಲ್ ನಲ್ಲಿ ಎ ಸಿ ಕೋಣೆಯ  ಹೊರಗೆ ಕುಳಿತು ತಿನ್ನುವುದು ಇತ್ಯಾದಿ 

ಬಾಲಂಗೋಚಿ : ಮಂಗಳೂರಿನಲ್ಲಿ ಒಬ್ಬರು ಪ್ರಸಿದ್ಧ ರೇಡಿಯೊಲೊಜಿಸ್ಟ್ ವೈದ್ಯರು ಇದ್ದಾರೆ .ಸಾಕಷ್ಟು ಸ್ಥಿತಿವಂತರು .ದಾನ ಧರ್ಮ  ಮಾಡುವವವರು .ಅವರು ಬೇಕಾದರೆ ತಮ್ಮ ಮಗನಿಗೆ ಬೆಂಜ್ ಕಾರು ಕೊಡಿಸ ಬಲ್ಲರು .ಆದರೂ ಎಂ ಬಿ ಬಿ ಎಸ ಆಗುವಲ್ಲಿ ವರೆಗೆ ಅವನನ್ನು ಮನೆಯಿಂದ ಸಾಮಾನ್ಯ ಮಕ್ಕಳಂತೆ ನಡೆಸಿ ,ಕಾಲೇಜು ಬಸ್ ನಲ್ಲಿ ಕಳುಹಿಸುತ್ತಿದ್ದರು .ಆ  ಹುಡುಗ ಕೂಡ ಸರಳತೆ ಮೈಗೂಡಿಸಿ ಕೊಂಡು ಸ್ಪೆಷಲಿಸ್ಟ್ ವೈದ್ಯ ಆಗಿರುವನು .(ನನ್ನ ಶಿಷ್ಯ )

ಬುಧವಾರ, ಡಿಸೆಂಬರ್ 2, 2020

ಆಸ್ಪತ್ರೆಯಲ್ಲಿ ಆಹಾರ

  ಆಸ್ಪತ್ರೆಯಲ್ಲಿ ಅಡ್ಮಿಟ್ ಆದರೆ ತಿನ್ನಲು ಬ್ರೆಡ್ ಕೊಡಬೇಕೆಂಬ ಒಂದು ನಂಬಿಕೆ ಇದೆ .ಇದು ಯಾಕೆ ಬಂತು ?ಬ್ರೆಡ್ ನಮ್ಮ ಆಹಾರ ಅಲ್ಲ .ಬ್ರಿಟಿಷರು ಆಡಳಿತ ನಡೆಸುತ್ತಿದ್ದಾಗ ಅವರ ಮುಖ್ಯ ಆಹಾರ ಬ್ರೆಡ್ ಆಸ್ಪತ್ರೆಯ ರೋಗಿಗಳಿಗೂ ಕೊಡಲು ಆರಂಬಿಸಿರಬೇಕು .ಬಹಳ ಮಂದಿಗೆ ಬ್ರೆಡ್ ತಯಾರಿಸಿ ಹಂಚುವುದು ಸುಲಭ .ನಿಮಗೆ ತಿಳಿದಿರುವಂತೆ  ಮೈದಾ ದಿಂದ ತಯಾರಿಸಿದ ಬ್ರೆಡ್ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಮತ್ತು ನಮ್ಮವರ ಕರುಳಿಗೆ ಅದು ಒಗ್ಗ ಬೇಕೆಂದು ಇಲ್ಲ.ಬ್ರೆಡ್ ಗೆ ಇತ್ತೀಚೆಗೆ ವಿಟಮಿನ್ ಇತ್ಯಾದಿಗಳನ್ನು ಸೇರಿಸ ತೊಡಗಿರುವರು .ಆದರೆ ನಾಲ್ಕೈದು ದಿನಕ್ಕೆ ಅದನ್ನು ಕೊಟ್ಟು ಆಗುವುದು ಹೋಗುವುದು ಏನೂ ಇಲ್ಲ .ಬ್ರೆಡ್ ಸಾಮಾನ್ಯವಾಗಿ ಮೈದಾ ದಿಂದ ಮಾಡುವುದು .ಇದರಲ್ಲಿ ಸಂಸ್ಕರಿತ ಗೋಧಿ ಮಾತ್ರ ಇರುವುದು .ಅಕ್ಕಿ ಮತ್ತು ಗೋಧಿ ಏಕದಳ ಧಾನ್ಯಗಳು .ಇವುಗಳಲ್ಲಿ  ಇರುವ ಆಹಾರ ಅಂಶಗಳು ಸಾಮಾನ್ಯ ಒಂದೇ ತರಹ ಇರುತ್ತದೆ .

ಬ್ರೆಡ್ ಬದಲಿಗೆ ತಿಂಡಿ ಇಡ್ಲಿ ಕೊಡ ಬಹುದು .ಇದು ಎಲ್ಲರ ಹೊಟ್ಟೆಗೂ ಪರಿಚಿತ ಖಾದ್ಯ .ಇದನ್ನು ಆವಿಯಲ್ಲಿ ಬೇಯಿಸುವುದರಿಂದ ರೋಗಾಣು ಇರಲಾರವು .ಅಕ್ಕಿ ಯಲ್ಲಿ ಪಿಷ್ಟ ಮತ್ತು ಉದ್ದಿನಲ್ಲಿ ಸಸಾರಜನಕ ಇರುವುದರಿಂದ ಹೆಚ್ಚು ಸಮ ತೂಲ.

ಇನ್ನು ಹಣ್ಣು ಕೊಡುವಾಗ ರೋಗಿಗೆ ಹಣ್ಣು ವರ್ಜ್ಯವೋ ಎಂದು ತಿಳಿದು  ಕೊಳ್ಳ ಬೇಕು .ಮೂತ್ರ ಪಿಂಡ ವೈಫಲ್ಯ ಇರುವ ರೋಗಿಗಳಲ್ಲಿ ಕೆಲವರಿಗೆ ಕೊಡ ಬಾರದು .ಸಕ್ಕರೆ ಕಾಯಿಲೆ ಇರುವವರಿಗೆ ಮಿತ ವಾಗಿ ಕೊಡಬೇಕು .ಹಣ್ಣಿನ ರಸಕ್ಕಿಂತ ಇಡೀ ಹಣ್ಣು ಉತ್ತಮ .ಹಣ್ಣಿನ ನಾರೂ ಕರುಳಿನ ಸುಲಲಿತ ಚಲನೆಗೆ ಒಳ್ಳೆಯದು .ತಿನ್ನಲು ಕುಡಿಯಲು ಆಗದಷ್ಟು ಅಶಕ್ತಿ ಇರುವವರಿಗೆ ಮಾತ್ರ ಜೂಸ್ ಮಾಡಿ ಕೊಡುವುದು .

                ಇನ್ನು ಬಹಳ ಮಂದಿ ತುಂಬಾ ಹಣ ಕೊಟ್ಟು ಖರೀದಿ ಮಾಡಿ ಅದನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ತುಂಬಿಸಿ ಎಳನೀರು ತರುವರು .ಎಳನೀರು ನೇರ ಕುಡಿಯಲು ಶುದ್ದ ಪಾನೀಯ ನಿಜ. ಅದನ್ನುಶೇಖರಿಸುವ ಸ್ಥಳ ,ಕೆತ್ತಲು ಉಪಯೋಗಿಸುವ ಮಚ್ಚು ಎಷ್ಟು ಶುಭ್ರ ವಾಗಿ ಇವೆ ಎಂಬುದನ್ನು ಗಮನಿಸ ಬೇಕು .ಆದರೆ ಜನರು ತಿಳಿದು ಕೊಂಡಂತೆ ಅದರಲ್ಲಿ  ಅತೀ ವಿಶೇಷ ಪೋಷಕಾಂಶ ಏನೂ  ಇದ್ದಂತಿಲ್ಲ .ನೀರು ,ಸ್ವಲ್ಪ ಗ್ಲುಕೋಸ್ ,,ಲವಣಗಳು ಅದರಲ್ಲೂ ಪೋಟಸಿಯಮ್ ಇದೆ .ಇದರ ಬದಲಿಗೆ ಶುದ್ದ ನೀರಿನಲ್ಲಿ ಶರಬತ್ ಮಾಡಿ ಕೊಡ ಬಹುದು .

ಜಾಂಡಿಸ್ ಇರುವವರಿಗೆ ಕಬ್ಬಿನ ಹಾಲು ಕೊಡುವರು ,ಅದರ ಶೇಖರಣಾ ಸ್ಥಳದಲ್ಲಿ ನೈರ್ಮಲ್ಯ ಇಲ್ಲದಿದ್ದಲ್ಲಿ  ಬೇರೆ ರೋಗಕ್ಕೆ ಆಹ್ವಾನ .ಲಿವರ್ ನಮ್ಮ ಶರೀರದ ಗ್ಲುಕೋಸ್ ಫ್ಯಾಕ್ಟರೀ .ಆದುದರಿಂದ ಅದರ ಕೊರತೆ ಆಗದಿರಲಿ ಎಂದು ಇದನ್ನು ಕೊಡುವ ಕ್ರಮ ಆರಂಭ ಆಗಿರ ಬೇಕು .ಅದರ ಬದಲಿಗೆ ಸಕ್ಕರೆ ಪಾನಕ ಕೊಡ ಬಹುದು .

ಇನ್ನು  ಶೀತ ಜ್ವರ ಇರುವಾಗ ಹಣ್ಣು ಕೊಡಲು ಹೆದರುವರು .ಶೀತ ಕೆಮ್ಮು ದಮ್ಮು ಹೆಚ್ಕುವುದು ಎಂಬ ನಂಬಿಕೆ .ಇದು ಬಹಳಷ್ಟು ಸರಿಯಲ್ಲ .

ಡೆಂಗು ಜ್ವರಕ್ಕೆ ಪಪ್ಪಾಯಿ ಹಣ್ಣು ಅಥವಾ ಬಹಳ ಬೆಲೆಯಿರುವ ಕಿವಿ ಹಣ್ಣು ಆಗ ಬೇಕು ಎಂದು ಇಲ್ಲ .ಯಾವ  ಹಣ್ಣೂ  ಆಗಬಹುದು