ಬೆಂಬಲಿಗರು

ಮಂಗಳವಾರ, ಆಗಸ್ಟ್ 20, 2024

 

ನಿನ್ನೆಯ ದಿನ  ಅಪರಾಹ್ನ ಎರಡು ಗಂಟೆಗೆ ಪುತ್ತೂರು ನ್ಯಾಯಾಲಯ ಪರಾಶರ ಸಭಾಂಗಣದಲ್ಲಿ ಎರಡು ಚೊಕ್ಕ ಕಾರ್ಯಕ್ರಮಗಳು . ನೂತನ ನ್ಯಾಯಾಧೀಶ ದೇವರಾಜ್ ಅವರಿಗೆ ಸ್ವಾಗತ ಮತ್ತು  ವಕೀಲ ಭಾಸ್ಕರ ಕೋಡಿಂಬಾಳ ಅವರ ಲಲಿತ ಪ್ರಬಂಧಗಳ ಸಂಕಲನ "ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು " ಬಿಡುಗಡೆ . ಪುತ್ತೂರು ವಕೀಲರ ಸಂಘದ ಆಶ್ರಯದಲ್ಲಿ . ನಿವೃತ್ತ ಹೈ ಕೋರ್ಟ್ ನ್ಯಾಯಾಧೀಶ ನ್ಯಾ ಮೂ ಕೃಷ್ಣ ಭಟ್ ಅವರು ಮುಖ್ಯ ಅತಿಥಿ ಮತ್ತು ಕೃತಿ ಅನಾವರಣ ಮಾಡಿದವರು . ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರು ,ಬಾರ್ ಕೌನ್ಸಿಲ್ ಅಧ್ಯಕ್ಷರು ,ಹಿರಿಯ ನ್ಯಾಯವಾದಿ ಶ್ರೀ ರಾಮ ಮೋಹನ ರಾವು ,ಇಂತಹವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಗೌರವ ನನಗೆ .ವೇದಿಕೆಯಲ್ಲಿ ತಲೆ ಹಣ್ಣಾದವರು(ಬಿಳಿ ಅದವರು )ನಾನು ಮತ್ತು ರಾಮ ಮೋಹನ ರಾವ್ ಮಾತ್ರ . ನ್ಯಾಯಾಧೀಶರು ಮತ್ತು ನ್ಯಾಯವಾದಿ ಗಳು  ಕಕ್ಷಿದಾರರ ವಿಚಾರಗಳನ್ನು ತಲೆಗೆ ತೆಗೆದು ಕೊಂಡರೂ ಅದನ್ನು ಹಚ್ಚಿ ಕೊಳ್ಳುವುದಿಲ್ಲ ಎಂದು ತೋರುತ್ತದೆ ವೈದ್ಯರು ರೋಗಿಗಳ ಸಮಸ್ಯೆಗಳನ್ನೂ .

ವಕೀಲರು ,ಸಾಹಿತಿಗಳು ಮತ್ತು ಭಾಸ್ಕರ್ ಅವರ ಬಂಧು ಮಿತ್ರರಿಂದ ತುಂಬಿದ ಸಭಾಂಗಣ .ನ್ಯಾ ಮೂ ಕೃಷ್ಣ ಭಟ್  ಧೋತಿ ಶಾಲು ಧಾರಿಯಾಗಿ ಬಂದಿದ್ದು ವಿಶೇಷ . ಕೃತಿಯನ್ನು ಬಿಡುಗಡೆ ಗೊಳಿಸಿ ಪಾಂಡಿತ್ಯ ಪೂರ್ಣ ಭಾಷಣ ಮಾಡಿದರು ;ಕೃತಿಯನ್ನು ಬಹಳ ಮೆಚ್ಚಿ ಕೊಂಡರು. ವೃತ್ತಿಯಲ್ಲಿ ಅವರು ಎಲ್ಲರ ಪ್ರೀತಿ ಗೌರವ ಗಳಿಸಿದ್ದವರು ಎಂದು ನೆರೆದಿದ್ದ  ನ್ಯಾಯಾಧೀಶರ ಭಾಷಣಗಳಿಂದ ವೇದ್ಯ ವಾಯಿತು .ಸಂಸ್ಕೃತ ,ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಚೆನ್ನಾಗಿ ಓದಿ ಕೊಂಡವರು.ತಾವು ನ್ಯಾಯಾಧೀಶ ರಾಗಿದ್ದಾಗ  ಸಾಹಿತಿಗಳನ್ನು ಕರೆಸಿ ವಕೀಲರ ಸಂಘಗಳಲ್ಲಿ ಭಾಷಣ ಗಳನ್ನು ಏರ್ಪಡಿಸುತ್ತಿದ್ದುನನ್ನು ನೆನೆಪಿಸಿ ಕೊಂಡರು . ಹಿರಿಯ ನ್ಯಾಯವಾದಿ ರಾಮ ಮೋಹನ ರಾವು ಅವರ ಭಾಷಣ ,ನ್ಯಾಯಾಧೀಶರ ,ವಕೀಲ ಸಂಘದ ಪದಾಧಿಕಾರಿಗಳ  ಶುಭಾಂಶನೆ ,ಕೃತಿ ಕರ್ತನ ಭಾಷಣ ಎಲ್ಲವೂ ಚೆನ್ನಾಗಿ ಬಂತು .ಒಟ್ಟಿನಲ್ಲಿ ಒಂದು ಸಂಜೆ ಅರ್ಥ ಪೂರ್ಣ ವಾಗಿ ಕಳೆಯಿತು .  

ರವಿ ಕಾಣದ್ದನ್ನು ಕವಿ ಕಾಣುವ ಎಂಬ ಮಾತು ಇದೆ . ಇಲ್ಲಿ ಕವಿ ರವಿ (ಭಾಸ್ಕರ )ಒಂದು ಗೂಡಿದಾಗ ಆದ ಕೃತಿ ಈ ಹೊತ್ತಿಗೆ .

ಪುಸ್ತಕದ ಮೊದಲ ಲೇಖನ 'ಭಕ್ತರಿಲ್ಲದ ಭಗವಂತನಿಗೆ ಕೆದಿಲ್ಲಾಯ ರಿಂದ  ನಿತ್ಯ ಪೂಜೆ .ಅದರ ಎರಡು ಪಾರಾ ಹೀಗಿದೆ .

ತಿನ್ನಲು ಉಣ್ಣಲು ಬಹಳ ಕಷ್ಟದ ಕಾಲ ವೊಂದಿತ್ತು .ಆದರೆ ಅದೇ ಕಾಲದಲ್ಲಿ ನೆಮ್ಮದಿಗೇನೂ ಕೊರತೆಯಿರಲಿಲ್ಲ .ಆ ಕಾಲದಲ್ಲಿ ಕೋಡಿಂಬಾಳದ ಶ್ರೀ ಮಹಾ ವಿಷ್ಣು ದೇವರ ಬಳಿ ವರ್ಷಕ್ಕೊಮ್ಮೆ ಅಥವಾ ಎರಡು ಸಲ ಬರುತ್ತಿದ್ದ ಭಕ್ತರಲ್ಲಿ ಅನೇಕರು ಬರುವಾಗ ಕಿಸೆಯಲ್ಲಿ ಹುಡುಕುವುದು ಇದ್ದದ್ದರಲ್ಲಿ ಅತೀ ಸಣ್ಣ ಪಾವಲಿಯನ್ನು,ಭಕ್ತರ ಅಂಗಿಯ ಕಿಸೆಯಲ್ಲಿಯೋ ,ಪಂಚೆಯೊಳಗಿನ ಪಟ್ಟೆನಾಮದ ಚಡ್ಡಿಯ ಕಿಸೆಯಲ್ಲಿಯೂ ಅಡಗಿ ಕುಳಿತ ಪಾವಲಿಗೆ ಕೈ ಹಾಕಿದಾಗ ತಪ್ಪಿಸಿ ಕೊಳ್ಳಲಾರದೇ ಸಿಕ್ಕಿ ಹಾಕಿಕೊಂಡವುಗಳಲ್ಲಿ ದೊಡ್ಡದನ್ನೆಲ್ಲಾ ಪುನಃ ಕಿಸೆಗೆ ಹಾಕಿ ಉಳಿದವುಗಳಲ್ಲಿ ಅತೀ ಸಣ್ಣ ಪಾವಳಿಯನ್ನು ಆಯ್ಕೆ ಮಾಡಿ ಭಕ್ತ ತನ್ನ ಡಬ್ಬಿಗೆ ಹಾಕುತ್ತಿದ್ದ .ಇದನ್ನು ನೋಡಿದ ದೇವರು ಶತಮಾನಗಳ ಹಿಂದೆಯೇ ಮರುಕ ಪಟ್ಟಿರ ಬೇಕು .

ಆ ಸಣ್ಣ ಪಾವಲಿಯನ್ನಾದರೂ ಮನಸಾರೆ ತನ್ನ ಡಬ್ಬಿಗೆ ಹಾಕುತ್ತಾನೆಯೇ ?ಅದೂ ಇಲ್ಲ .ಆ ಪಾವಲಿಯನ್ನು ಭಕ್ತ ತನ್ನ ತಲೆಗೆ ಮೂರು ಸುತ್ತರಿಳಿಸಿ ತಾನು ಮಾಡಿದ ಪಾಪ -ತಾಪ ದೋಷಗಳನ್ನೆಲ್ಲಾ ಅದರೊಳಗೆ ಆಪೋಷಣೆ ಗೊಳಿಸಿ ಟಿಂಗ್ ಎಂದು ಡಬ್ಬಿಯೊಳಗೆ ಹಾಕುತ್ತಿದ್ದ .ಡಬ್ಬಿ ಪಾಲಾದ ಪಾವಲಿ ವ್ಯರ್ಥವಾಗದಿರಲಿ ಎಂದು ಎರಡು ಕೈ ಜೋಡಿಸಿ ಕಣ್ಮುಚ್ಚಿ ಅಲ್ಲೇ ಅಡ್ಡ ಬೀಳುತ್ತಿದ್ದ .ಎಲ್ಲವನ್ನೂ ಬಲ್ಲ ದೇವರಿಗೆ ಇದೆಲ್ಲಾ ಅರ್ಥವಾಗದಿರಲು ಸಾಧ್ಯವೇ ?ಖಂಡಿತಾ ಇಲ್ಲ .ಈ ಚಿಲ್ಲರೆ ಪ್ರತಿಫಲ ಹಣಕ್ಕೆ ಜನರು ಮಾಡಿದ ಪಾಪ ತಾನೇಕೆ ಹೊತ್ತು ಕೊಳ್ಳಬೇಕು ಎಂದು ಕೊಂಡಿರಬೇಕು .ಜನರ ಚಿಲ್ಲರೆ ಹಣವೂ ಬೇಡ ,ಆ ಚಿಲ್ಲರೆ ಹಣದಿಂದ ತಾವು ಮಾಡಿದ ಪಾಪ ನಿವಾರಣೆ ಆಯಿತು ಎಂದೂ ಬೇಡ ಎಂದು ನಮ್ಮೂರ ದೇವರು ಜನ ಸಂಚಾರ ವಿರದ ಕೋಡಿಂಬಾಳದ ನಿರ್ಜನ ಪ್ರದೇಶದಲ್ಲಿ ಹಲವು ಶತಮಾನದ ಹಿಂದೆಯೇ ನೆಲಸಿರ ಬೇಕು ."


ಪುಸ್ತಕದ ಮುಖ ಬೆಲೆ ರೂ 150 .ಪ್ರತಿಗಳು ಆದಾಯ ತೆರಿಗೆ ಕಚೇರಿ ಪಕ್ಕದ  ಭಾಸ್ಕರ ಕೋಡಿಂಬಾಳ ಅವರ ಆಫೀಸು ಮತ್ತು ಪುತ್ತೂರು ವಕೀಲರ ಸಂಘದ ಕಚೇರಿಯಲ್ಲಿ ಲಭ್ಯ ಎಂದು ಲೇಖಕರು ತಿಳಿಸಿದ್ದಾರೆ . ಮೊಬೈಲ್ 9448548226.


ಶನಿವಾರ, ಆಗಸ್ಟ್ 17, 2024

 ಆತ್ಮೀಯ  ವಕೀಲ ಮಿತ್ರ  ಶ್ರೀ ಭಾಸ್ಕರ  ಕೋಡಿ೦ಬಾಳ  ಅವರ ಲಲಿತ ಪ್ರಬಂಧ ಗಳ ಸಂಕಲನ '' ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು" ಇದೆ ಸೋಮವಾರ 19.8.2024  ಅಪರಾಹ್ನ 2 ಗಂಟೆಗೆ ಪುತ್ತೂರು ವಕೀಲರ ಸಂಘ ದ  'ಪರಾಶರ ಸಭಾ ಭವನ "ದಲ್ಲಿ ನೆರವೇರಲಿದೆ .

ಪಂಜೆ ಮಂಗೇಶ ರಾಯರ ಸಬ್ ಅಸಿಸ್ಟಂಟ್ ನ ಸುಳ್ಳು ಡೈರಿ ಯಿಂದ , ಶ್ರೀನಿವಾಸ ಮೂರ್ತಿ ಯವರ ರಂಗಣ್ಣನ ಕನಸಿನ ದಿನಗಳು ,ಬಿ ಜಿ ಎಲ್ ಸ್ವಾಮಿ ಯವರ  ಕೃತಿಗಳಂತೆ  ಗಂಭೀರ ವಿಚಾರ ಗಳನ್ನು ಮೃದು ಹಾಸ್ಯ ಲೇಪನ ದೊಡನೆ ಓದುಗರಿಗೆ ಆಪ್ಯಾಯ ಮಾನ ಆಗುವಂತೆ ಇರುವ ಲೇಖನಗಳು ಈ ಕೃತಿಯಲ್ಲಿ ಇವೆ .

ವಕೀಲರು ನ್ಯಾಯಾಧೀಶರಿಂದ ರಚಿತವಾದ ಮೌಲಿಕ ಕೃತಿಗಳು ಅನೇಕ ಇವೆ .ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ  ಆತ್ಮ ಚರಿತ್ರೆ "ಭಾವ " ಮತ್ತು ನವರತ್ನ ರಾಮ ರಾವ್ ಅವರ ಕೆಲವು ನೆನಪುಗಳು ಕೃತಿಯಲ್ಲಿ ತಾವು ನ್ಯಾಯಾಧೀಶ ರಾಗಿ ಕಾರ್ಯ ನಿರ್ವಹಿಸುವಾಗ ನಡೆದ ರೋಚಕ ಕತೆಗಳ ಉಲ್ಲೇಖ ಇದೆ . ಅದೇ ರೀತಿ ಕೆ ಪಿ ಎಸ್ ಮೇನೋನ್ ಅವರ ಆತ್ಮ ಚರಿತ್ರೆ ಮೆನಿ ವರ್ಲ್ಡ್ಸ್ ನಲ್ಲಿ . ಇವುಗಳಲ್ಲಿ ಹೆಚ್ಚಿನವು ಆತ್ಮ ಚರಿತ್ರೆಗಳು . ಪ್ರಾಥ ಸ್ಮರಣೀಯ ಎಚ್ ಆರ್  ಖನ್ನಾ ಅವರ ನೀದರ್  ರೋಸಸ್ ನೋರ್ ಥಾರ್ನ್ಸ್ ,ಎಂ ಸಿ ಛಾಗ್ಲಾ  ಅವರ ರೋಸಸ್ ಇನ್ ಡಿಸೆಂಬರ್ ., ಲೈಲಾ ಸೇಥ್ ,ಫಾಲಿ  ನಾರಿಮನ್ ,ಹಿದಾಯತುಲ್ಲಾ ,ಕೃಷ್ಣ ಐಯ್ಯರ್ ,ಎಸ ಎಸ ಸೋಧಿ ಮತ್ತು ನಮ್ಮವರೇ ಆದ  ಎಚ್ ಹನುಮಂತ ರಾಯ ,ಬಿ ವಿ ಆಚಾರ್ಯ ಮತ್ತು ಯು ಎಲ್ ಭಟ್  ಅವರ ಕೃತಿಗಳು ಸಾಹಿತ್ಯಿಕವಾಗಿಯೂ  ಹೆಸರು ಗಳಿಸಿದಂತಹವು . ವಕೀಲರಿಗೆ ತಮ್ಮ ವೃತ್ತಿ ಯಲ್ಲಿ  ಜೀವ ಮತ್ತು ಜೀವನದ ಹಲವು ಮುಖ ಮತ್ತು  ಮಗ್ಗುಲುಗಳು  ಅಯಾಚಿತವಾಗಿ ಗೋಚರವಾಗಿತ್ತವೆ . ಸಾಹಿತ್ಯ ರಚನೆಗೆ ಒಳ್ಳೆಯ ವಸ್ತು ಆಗ ಬಲ್ಲುವು . 

ವಸ್ತು ಇದ್ದರೆ  ಸಾಲದು . ಅದನ್ನು ಗ್ರಹಿಸುವ ಮನಸ್ಸು ಮತ್ತು ಅಕ್ಷರಕ್ಕೆ ಇಳಿಸುವ ಭಾಷಾ ಜ್ಞಾನ ಕೂಡ ಬೇಕಾಗುತ್ತದೆ ,ಇಂತಹ ಪ್ರತಿಭೆ ಭಾಸ್ಕರ್ ಅವರಲ್ಲಿ ಇದೆ ..ಸೂಕ್ಷ್ಮ ಗ್ರಹಣ ,ಹಾಸ್ಯ ಪ್ರಜ್ಞೆ ಮತ್ತು ವೃತ್ತಿ ಕಾರಣ  ನಗರ ವಾಸಿ ಯಾದರೂ ಜತನ ದಿಂದ ಕಾಯ್ದು ಕೊಂಡು ಬಂದ  ಮಣ್ಣಿನ ವಾಸನೆ ಇವು ಅವರ ಪ್ರಭಂದ ಗಳಲ್ಲಿ ಎದ್ದು ಕಾಣುವ ಗುಣಗಳು . 





ಗುರುವಾರ, ಜೂನ್ 6, 2024


ಪುತ್ತೂರು ಸಿಟಿ  ಆಸ್ಪತ್ರೆಯಲ್ಲಿ ಆರಂಭದಿಂದ ಅಂದರೆ ಸುದೀರ್ಘ ಹದಿನಾಲ್ಕು ವರ್ಷ ಸೇವೆ ಸಲ್ಲಿಸಿ ಅನಿವಾರ್ಯ ಕಾರಣಗಳಿಂದ ವಿದಾಯ ಹೇಳುತ್ತಿರುವ ಶ್ರೀ ಅಬ್ದುಲ್ ಜಲೀಲ್ ಅವರು .

ಜಲೀಲ್ ಅವರು ಆಸ್ಪತ್ರೆಯಲ್ಲಿ ರೇಡಿಯೊ ಗ್ರಾಫ್ ತಂತ್ರಜ್ನ ರಾಗಿ ರೋಗಿಗಳ ಎಕ್ಸ್ ರೇ ,ಸಿಟಿ ಸ್ಕ್ಯಾನ್  ತೆಗೆಯುವುದರಲ್ಲಿ ಸಿದ್ದ ಹಸ್ತರು . ತಮ್ಮ ಕೆಲಸವನ್ನು ಪ್ರಮಾಣಿಕ ವಾಗಿ ಮಾಡಿದ್ದಲ್ಲಲ್ಲದೆ ,ಅವಶ್ಯ ಬಿದ್ದಾಗ ರೋಗಿಗಳನ್ನು ಸಾಗಿಸುವುದು (ವೀಲ್ ಛೈರ್ ,ಟ್ರಾಲಿ ),ತುರ್ತು ಚಿಕಿತ್ಸಾ ವಿಭಾಗದಲ್ಲಿ ಸಿಬ್ಬಂದಿಗಳಿಗೆ ಸಹಾಯ ಮಾಡುವುದು ಇತ್ಯಾದಿ ಗಳಲ್ಲಿಯೂ ನೆರವಾಗುವರು . 

ಸ್ವಲ್ಪ ಮಟ್ಟಿನ ಅಂಗ ವೈಕಲ್ಯ ಇರುವ ಜಲೀಲ್ ಅವರು ಅದನ್ನು ತೋರ್ಪಡಿಸದೆ ಮತ್ತು ಮೀರಿ ಸಲ್ಲಿಸಿದ ಸೇವೆ 

ನಿಜಕ್ಕೂ ವಿಶೇಷ .ಅವರ ಮುಂದಿನ ಜೀವನ ಆರೋಗ್ಯ ಸುಖ ಶಾಂತಿ ಗಳಿಂದ ಇರಲಿ ಎಂಬ ಹಾರೈಕೆ

ಗುರುವಾರ, ಮೇ 16, 2024

ಪರಕ್ಕೆ ಸಂದಾಪುನೆ

 

  ಅತೀವ ಕಷ್ಟ ಬಂದಾಗಬಾಲ್ಯದಲ್ಲಿ ತಾಯಿ( ಮತ್ತು ಈಗ ಪತ್ನಿ ಬಾಯಲ್ಲಿ )ಹಲವು ಬಾರಿ ನನಗೆ ಒಟ್ರಾಸಿ 'ಪರಕ್ಕೆ ಸಂದಾಪುನೆ ' ಎಂದು ಅವರು ಹೇಳಿದ ಕೆಲಸ ನಿರೀಕ್ಷಾ ಮಟ್ಟಕ್ಕೆ ಬರದಿದ್ದಾಗ ಬೈದದ್ದು ಇದೆ . ಪರಕ್ಕೆ ಸಂದಾಪುನೆ ಅಥವಾ ಹರಕೆ ಸಲ್ಲಿಸುವುದನ್ನು ಅಷ್ಟು ತಾಪು ಮಾಡುತ್ತಾರೆ ಎಂದು ನಾನು ಹಲವು ಬಾರಿ ಯೋಚಿಸಿದ್ದಿದೆ .  ,ಜನರು ಧರ್ಮಾತೀತ ವಾಗಿ ದೇವರು ,ದೈವ ಗಳಿಗೆ ಹರಕೆ ಹೇಳುವುದು ನಡೆದು ಕೊಂಡು ಅನತಿ ಕಾಲದಿಂದ ನಡೆದು ಕೊಂಡು ಬಂದಿದೆ . ಒಂದೊಂದು ರೋಗ ಮತ್ತು ಸಂಕಟಕ್ಕೂ ಪರಿಹಾರ ಕೇಳುವ ಪ್ರತ್ಯೇಕ  ಕ್ಷೇತ್ರ ಇವೆ . ಇಲ್ಲಿ ನಂಬಿಕೆ  ಭಕ್ತರಿಗೆ ಒಂದು ಪ್ಲಾಸಿಬೊ ರೀತಿಯ ಧೈರ್ಯ ನೀಡುವುದು . ಎಲ್ಲವನ್ನೂ ವೈಜ್ನಾನಿಕ ವಾಗಿ ನೋಡಲು ಆಗುವುದಿಲ್ಲ . ಅಡ್ಡ ದಾರಿಯಲ್ಲಿ ನಡೆದು ದೇವರಿಗೆ ಹರಕೆ ರೂಪದಲ್ಲಿ ಕಪ್ಪ ಕಾಣಿಕೆ ಕೊಟ್ಟರೆ ಸರ್ವ ಜ್ನಾನಿ ಭಗವಂತ ನಿಗೆ ಗೊತ್ತಾಗದೇ? ಅವನಿಗೆ ಗೊತ್ತಾಗದು ಎಂದು ತಿಳಿದರೆ ಅವನ ಮಹಿಮೆಯನ್ನೇ ಕುಗ್ಗಿಸಿ ದಂತೆ.

              ಹರಕೆ ಹೇಳಿ ಆಯಿತು . ಇಷ್ಟಾರ್ಥ ವೂ ಈಡೇರಿತು . ಆಮೇಲೆ ಜಿಜ್ನಾಸೆ . 'ಭೂತಕ್ಕೆ ಕೋಳಿ ಕೊಡುತ್ತೇನೆ ಎಂದು ಕೋಳಿ ಕೊಳ್ಳಲು ಹೋದಾಗ ಹೇಗೂ ಹರಕೆಗೆ ತಿನ್ನಲು ಅಲ್ಲ ,ಹೆಚ್ಚು ಕ್ರಯದ್ದು ಯಾಕೆ ?  '  ಗೋದಾನ ಮಾಡುತ್ತೇನೆ ಎಂದು ಹೇಳಿಕೊಂಡು ಆಗಿದೆ . ಇನ್ನೂ ತುಂಬಾ ಹಾಲು ಕೊಡುವ ದನವೇ ಆಗ ಬೇಕು ಎಂದು ಏನು ?"ಚಿನ್ನದ ತೊಟ್ಟಿಲು ಕೊಡುತ್ತೇನೆ ಎಂದದ್ದು ಹೌದು ಇಷ್ಟು ಪವನಿಂದೆ ಎಂದು ಹೇಳಿಲ್ಲವಲ್ಲ " ಇತ್ಯಾದಿ ಲೌಕಿಕ ವಿಚಾರಗಳು ಪ್ರಮಾರ್ಥಿಕತೆಯನ್ನು ಅವರಿಸುತ್ತವೆ . ಒಟ್ಟಾರೆ ಹರಕ್ಕೆ ಹೇಳಿದ್ದಕ್ಕೆ ತೀರಿಸಿ ದೇವರ ಲೆಕ್ಕ ಚುಕ್ತಾ ಮಾಡಿದರೆ ಆಯಿತು .ಈ ಅರ್ಥದಲ್ಲಿಯೇ ನನ್ನ ತಾಯಿ ಯವರು ಹೇಳುತ್ತಿದ್ದರು ಅನ್ನಿಸುತ್ತದೆ .ಯಾವುದೇ ಕೆಲಸದಲ್ಲಿ ಆತ್ಮಾರ್ಥತೆ ಇಲ್ಲದೆ ಮಾಡ ಬಾರದು ಎಂಬ ಉದ್ದೇಶ . 

ಇನ್ನೊಂದು ನುಡಿಗಟ್ಟು ಇದೆ ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ .ಇಲ್ಲಿ ದಕ್ಷಿಣೆ ಕೊಡುವುದು ಯಾರು ,ತಕ್ಕಂತೆ ಪ್ರದಕ್ಷಿಣೆ ಹಾಕುವವವರು ಯಾರು ?ಯಾಕೆಂದರೆ ವಾಡಿಕೆಯಲ್ಲಿ ದಕ್ಷಿಣೆ ಹಾಕುವವರೂ ಪ್ರದಕ್ಷಿಣೆ ಹಾಕುವವರೂ ಒಬ್ಬರೇ ಆಗಿರುತ್ತಾರೆ . ಈಗಿನ ವಾತಾವರಣ]ದಲ್ಲಿ  ದಕ್ಷಿಣೆ ತಕ್ಕ ಪ್ರದಕ್ಷಿಣೆ ಹಾಕುವವರೂ ಅಪರೂಪ . ಮೇಲಿಂದ ಅಥವಾ ಕೆಳಗಿಂದ ಎಂದರೂ ಬಂದರೆ ಮಾತ್ರ ಎಂಬಂತಾಗಿದೆ . 

ನನ್ನ ಅಮ್ಮ ಹೇಳುತ್ತಿದ್ದ ಇನ್ನೊಂದು ಮಾತು ,ಏನು ಮಗ ಒತ್ತಾಯದ ಮೇಲೆ ಶಂಭಟ್ಟನ ರುಜು ಎಂಬ ಮಾತು . ಅವರ ಕಟ್ಟುಪಾಡಿಗೆ ಸಿಕ್ಕ್ಕಿ ಮನಸಿಲ್ಲದ ಮನಸಿನಲ್ಲಿ ಏನಾದರೂ ಮಾಡಿದರೆ ಹೇಳುತ್ತಿದ್ದರು 


ಬುಧವಾರ, ಮೇ 15, 2024

ಕೆಪ್ಪಟ್ರಾಯ

 ಕೆಪ್ಪಟ್ರಾಯ ಬೇಸಿಗೆಯಲ್ಲಿ  ಸೋಂಕು ರೋಗಗಳ ಹಾವಳಿ .ಇದೇ  ಸಮಯ ವಾರ್ಷಿಕ ಪರೀಕ್ಷೆಗಳೂ ನಡೆಯುವವು . ಈ ವರ್ಷ  ಮಕ್ಕಳಲ್ಲಿ ಮತ್ತು ಯುವಕರಲ್ಲಿ  ಹೆಚ್ಚಾಗಿ ಕಂಡು ಬಂದ ಕಾಯಿಲೆ ಕೆಪ್ಪಟರಾಯ ಅಥವಾ ಮಂಪ್ಸ್ . ಇದು ಒಂದು ವೈರಸ್ ಜನ್ಯ ಮತ್ತು ತಾನೇ ವಾಸಿ ಯಾಗುವ  ಕಾಯಿಲೆ . 

ಈ ಕಾಯಿಲೆ ಲಾಲಾರಸ  ಉತ್ಪತ್ತಿ  ಮಾಡುವ ಪ್ಯಾರೋಟಿಡ್ ಗ್ರಂಥಿಯನ್ನು ಮುಖ್ಯವಾಗಿ ಬಾಧಿಸುವುದಾದರೂ ಉಳಿದ ಲಾಲಾ ಗ್ರಂಥಿ ಗಳು  ,ವೃಷಣ ಬೀಜ ,ಅಂಡಾಶಯ ,ಮೇದೋಜೀರಕ ಗ್ರಂಥಿ  , ಅಪರೂಪಕ್ಕೆ ಮೆದುಳನ್ನೂ . ಒಂದು ಅಥವಾ ಎರಡು ಪ್ಯಾರೋಟಿಡ್  ಗ್ರಂಥಿ ಊದಿ  ಕೊಂಡು ವಿವರೀತ ನೋವು ,ಜ್ವರ ಬರುವುದು . ಕೆಲವರಲ್ಲಿ ವೃಷಣ ಬಾಧೆ ಪ್ಯಾರೋಟಿಡ್ ಊತ ಕಡಿಮೆ ಆದಮೇಲೆ ಅಥವಾ ತತ್ಸಮಯ ಬರಬಹುದು .ಅಂಡಾಶಯ ಅಥವಾ ಮೇದೋಜೀರಕ ಗ್ರಂಥಿ ಗೆ ಕಾಯಿಲೆ ಬಂದರೆ ಹೊಟ್ಟೆ ನೋವು ಉಂಟಾಗುವುದು 

ಈ ಕಾಯಿಲೆಗೆ ನೋವು ನಿವಾರಕಗಳನ್ನು ಕೊಟ್ಟು ವಿಶ್ರಾಂತಿ ಸಲಹೆ ಮಾಡುವರು . ಮಂಪ್ಸ್  ವೈರಸ್ ಗೆ ಔಷಧಿ ಇಲ್ಲ . ತಡೆಗಟ್ಟುವ  ಲಸಿಕೆ ಇದೆ . ಮಕ್ಕಳ ಲಸಿಕಾ ಕಾರ್ಯಕ್ರಮದಲ್ಲಿ ಎಂ ಎಂ ಆರ್ ನಲ್ಲಿ ಮೊದಲನೇ ಎಂ  ಮಂಪ್ಸ್ . ಲಸಿಕೆ ಕೊಂಡವರಲ್ಲಿ ಕೂಡಾ ಈ ವರ್ಷ ಸ್ವಲ್ಪ ತೀವ್ರತರ ನೋವು ಬಂದಂತೆ ಇದೆ . ವೈರಸ್ ರೂಪ ಬದಲಿಸುವುದು ಕಾರಣ ಇರ ಬಹುದು . 

ಲಾಲಾ ರಸದಲ್ಲಿ ವೈರಾಣು ಇರುವುದು ,ಜಲ ಬಿಂದು ರೂಪದಲ್ಲಿ ಗಾಳಿ ಮೂಲಕ ಹರಡುವುದು . 

ಎರಡೂ  ವೃಷಣಗಗಳ  ಬಾಧೆ ಬಂದರೂ ವೀರ್ಯಾಣುಗಳ ಕೊರತೆ ಅಪರೂಪದಲ್ಲಿ ಆಗ ಬಹುದಷ್ಟೇ . 

ಬಾಲಂಗೋಚಿ : ನನಗೆ ಬಾಲ್ಯದಲ್ಲಿ ಕೆಪ್ಪಟ್ರಾಯ  ಬಂದಿತ್ತು .ಆಗ ಅದಕ್ಕೆ ಗಾಮಟೆ  ತೊಗಟೆ  ಅರೆದು ಹಚ್ಚುತ್ತಿದ್ದು ಕಹಿ ಕಷಾಯ ಕೊಡುತ್ತಿದ್ದರು . ಒಮ್ಮೆ ಕಾಯಿಲೆ ಬಂದರೆ ನೈಸರ್ಗಿಕ ರೋಗ ಪ್ರತಿಬಂಧಕ ಶಕ್ತಿ ಬರುವುದು

ಶುಕ್ರವಾರ, ಮೇ 10, 2024

 ತೆ ಲಿಂದ  ನಿಲವು ಪಟ್ಟ ಪಗಲ್ ಪೋಲೆ ಎರಿಯುದೇ 

ಈ ಸುಡು ಬೇಸಗೆ ಮತ್ತು   ರಾಜಕೀಯ ಬೇಗೆ ಶಮನ ಗೊಳಿಸಲು ತಣ್ಣೀರು ಮತ್ತು ಸಂಗೀತ ದ ಆಶ್ರಯ ಪಡೆಯುತ್ತೇನೆ. ಮೊನ್ನೆ ಸಂಜೆ ಪ್ರಸಿದ್ಧ ತಮಿಳು ಕೀರ್ತನೆ ಅಲೈ ಪಾಯುದೇ ಕಣ್ಣಾ ಏನ್ ಮನ ಮಿಗ ಅಲೈ ಪಾಯುದೇ  ಕೇಳುತ್ತಿದ್ದೆ .  ಕೃಷ್ಣ ನ ಕುರಿತು ಗೋಪಿಕೆ ಯ  ಹಾಡು . ನಿನ್ನ ಕೊಳಲ ಸಂಗೀತ ಅಲೆ ಅಲೆಯಾಗಿ ಬರುತ್ತಿದೆ ಎಂಬುದು ಪಲ್ಲವಿ ಅರ್ಥ ಇರಬೇಕು . ಈ ಗೀತೆಯ ಒಂದು ಸಾಲು' ತೆ ಲಿಂದ  ನಿಲವು ಪಟ್ಟ ಪಗಲ್ ಪೋಲೆ ಎರಿಯುದೇ 'ಎಂದು ಆರಂಭ ವಾಗುತ್ತದೆ . ತಿಳಿ ಬೆಳದಿಂಗಳು ಕೂಡಾ ಮಟ  ಮಧ್ಯಾಹ್ನ ದಂತೆ  ಉರಿಯುತ್ತಿದೆ .(ನಿನ್ನ ಪ್ರೇಮ ತಾಪದಲ್ಲಿ ಎಂದು ಇರಬೇಕು  )ಎಂದು ಅರ್ಥ . ಇದನ್ನು ಕೇಳುತ್ತಿದ್ದ ಸಮಯ ಸಂಜೆ ಏಳು ಗಂಟೆ . ಎಂದೂ ಕಾಣದ ಸೆಖೆ . ಕೃಷ್ಣನ ಕೊಳಲ ಗಾನ ಇಲ್ಲದಿದ್ದರೂ ಪಟ್ಟ ಪಗಲ್ ಪೋಲ್ ಎರಿಯುದೇ  ಎಂದು ನನ್ನ ಮನೆಯವರಲ್ಲಿ ಹೇಳಿದೆ . 

ಇಂತಹುದೇ ಅರ್ಥ ಬರುವ ಹಳೆ ಜನಪ್ರಿಯ ಚಿತ್ರ ಗೀತೆ ಒಂದು ಇದೆ .  ನಲ್ಲ ನಲ್ಲೆಯನ್ನು ಕುರಿತು ಹಾಡುವುದು

"ಬಳಿ  ನೀನಿರಲು ಬಿಸಿಲೇ  ನೆರಳು  ಮಧುಪಾನ ಪಾತ್ರೆ  ನಿನ್ನೊಡಲು ಮಧುವಿಲ್ಲದೆ ಮದವೇರಿಪ ನಿನ್ನಂತರಂಗ ಮಧುರಂಗ " ಇಲ್ಲಿ ಸೂರ್ಯನ ತಾಪಕ್ಕೆನಲ್ಲೆಯ ಸಾನ್ನಿಧ್ಯ ತಂಪೆರೆದರೆ , ಮೇಲಿನ ಗೀತೆಯಲ್ಲಿ  ತಂಪಾದ ಬೆಳದಿಂಗಳಲ್ಲೂ ಹಗಲ  ತಾಪ . 

ಏನಿದ್ದರೂ ಇಂತಹ ಆಲಾಪಗಳಿಗೆಲ್ಲ ಈ ಉರಿ ಬೇಸಿಗೆ ಹೇಳಿದ್ದಲ್ಲ

ಭಾನುವಾರ, ಮೇ 5, 2024

ಚಿಣ್ಣರೊಂದಿಗೆ ಸ್ವಲ್ಪ ಹೊತ್ತು 



 ಯುವ  ಉದ್ಯಮ ಶೀಲ  ದಂಪತಿಗಳಾದ ಗಣೇಶ್  ಮತ್ತು  ಪ್ರಫುಲ್ಲ  ಹಲವು ವರ್ಷಗಳಿಂದ  ನನಗೆ ಪರಿಚಿತರು ;ನಮ್ಮ ಆಸ್ಪತ್ರೆಯ ಸಮೀಪ ತರಬೇತಿ ಸಂಸ್ಥೆ ಯೊಂದನ್ನು ನಡೆಸುತ್ತಿದ್ದು  ನನ್ನ ಮೇಲೆ ಅಭಿಮಾನ ಇಟ್ಟುಕೊಂಡವರು . ದಿವಸಗಳ ಹಿಂದೆ ತಮ್ಮ ಸಂಸ್ಥೆ ನಡೆಸುತ್ತಿರುವ ಮಕ್ಕಳ  ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕ್ಕೆ ಅತಿಥಿ ಗಳಾಗಿ ಬರಬೇಕು ಎಂದು ಕೇಳಿ ಕೊಂಡಾಗ ಈಗಿನ ಗೊಂದಲ ಮತ್ತು  ಬಿಸಿಲು ಎರಡರಿಂದ ಸ್ವಲ್ಪ ವಿರಾಮ ವಾಗಲಿ ಎಂದು ಒಪ್ಪಿಕೊಂಡೆನು . ನಿರಾಸೆ ಆಗಲಿಲ್ಲ 

ನಮ್ಮ ಬಾಲ್ಯದಲ್ಲಿ ಸಮ್ಮರ್ ಕ್ಯಾಂಪ್ ಅಜ್ಜನ ಮನೆಯಲ್ಲಿ . ಅಲ್ಲಿ ಅಜ್ಜಿ ,ಮಾವ ಅತ್ತೆ ,ಅವರ ಮಕ್ಕಳ ಜತೆ . ಸ್ವಂತ ಮನೆಯೇತರ ವಾತಾವರಣ ಕ್ಕೆ ಹೊಂದಿಕೊಳ್ಳುವುದು ,ತೋಟ ,ಗುಡ್ಡೆ ಅಲೆಯುವುದು ,ತನ್ಮೂಲಕ ಸಹಜ ಕಲಿಕೆಯೂ ಆಗುವುದು . ನಮ್ಮ ಭಾವಂದಿರೊಂದಿಗೆ ಅವರ ತರಗತಿಗಳಿಗೆ ಅತಿಥಿ ವಿದ್ಯಾರ್ಥಿ ಯಾಗಿ ಹೋಗಿದ್ದೂ ಇದೆ . ಕೇರಳದಲ್ಲಿ ಓಣಂ ಗೆ ಹೆಚ್ಚು ರಜೆ ಇದ್ದುದರಿಂದ ನಮ್ಮ ರಜಾ ದಿನಗಳಲ್ಲಿ ಅವರಿಗೆ ಶಾಲೆ ಇರುತ್ತಿತ್ತು . ಸ್ವಂತ ಮನೆಯ ಮಕ್ಕಳಿಗೆ ಇರುವ ಕಟ್ಟು ನಿಟ್ಟಿನ ನಿಯಮಗಳು  ಅತಿಥಿಗಳಾದ ನಮಗೆ ಕಡಿಮೆ ಅನ್ವಯ ಅಲ್ಲದೆ  ಅತಿಥಿಗಳು ಇರುವಾಗ ಮನೆ ಮಕ್ಕಳಿಗೆ ಪೆಟ್ಟು ಬೀಳುತ್ತಿದುದು ಕಡಿಮೆ . ಅಜ್ಜನ ಮನೆಯಲ್ಲಿ ಇದ್ದ ಕತೆ ಪುಸ್ತಕಗಳನ್ನು ಓದುವುದು ;ಜತೆಗೆ ನಮ್ಮ ಭಾವಂದಿರ  ಪಠ್ಯ ಪುಸ್ತಕಗಳು .. ಇಂತಹ ಸಹಜ ಶಿಬಿರಗಳು ಮಕ್ಕಳು  ಸಮಾಜ ಜೀವಿಗಳಾಗಲು ಸಹಾಯ ಎಂದು ನನ್ನ ಅನಿಸಿಕೆ . 

ಆದರೆ ಈಗ ಅಂತಹ ದೀರ್ಘ ಕಾಲದ ಅಜ್ಜಿ ಮನೆ ವಾಸ ಕಾಣೆಯಾಗಿದೆ .ಮಕ್ಕಳು ಸುಮ್ಮನೆ ಬಿಟ್ಟರೆ ಮೊಬೈಲ್ ಟಿವಿ ರಾಗುತ್ತಾರೆ .ದಿನವಿಡೀ ಆಟವಾಡಲೂ ಆಗುವುದಿಲ್ಲ . ಅದಕ್ಕೆಂದು ಬೇಸಗೆ ಶಿಬಿರಗಳನ್ನು ಏರ್ಪಡಿಸುವರು . ಇಂತಹ ಶಿಬಿರಕ್ಕೇ ಮೊನ್ನೆ ಹೋದುದು . ಈಗಿನ ಮಕ್ಕಳು ಮೇಲ್ನೋಟಕ್ಕೆ ನಾವು ಬಾಲ್ಯದಲ್ಲಿ ಇದ್ದುದಕ್ಕಿಂತ ಬಹಳ ಚೂಟಿ ಯಾಗಿರುವುದಲ್ಲದೆ  ,ಸಂಕೋಚ ,ಅತಿ ನಾಚಿಕೆ ಇಲ್ಲ . ನೀವೆಲ್ಲಾ ದೊಡ್ಡ ವರಾಗಿ ಏನು ಆಗ ಬಯಸುತ್ತೀರಿ ಎಂದುದಕ್ಕೆ ಡಾಕ್ಟರ್ ಎಂದು ಒಬ್ಬರೂ ಹೇಳಲಿಲ್ಲ . ಒಬ್ಬಳು ಹುಡುಗಿ ನನಗೆ ಆರ್ಟಿಸ್ಟ್ ಆಗಬೇಕು ಎಂದಳು